ಹಿಂದಿ ಚಿತ್ರರಂಗದ ಖ್ಯಾತ ನಟ ರಾಜ್ಪಾಲ್ ಯಾದವ್ (Rajpal Yadav) ಅವರು ತಿಹಾರ್ ಜೈಲು ಸೇರಿದ್ದರು. 9 ಕೋಟಿ ರೂಪಾಯಿ ಸಾಲ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ಅವರನ್ನು ಜೈಲಿಗೆ ಕಳಿಸಲಾಗಿತ್ತು. ಈಗ ಅವರು ಜಾಮೀನು ಪಡೆದುಕೊಂಡಿದ್ದಾರೆ. ಇಂದು (ಫೆಬ್ರವರಿ 16) ರಾಜ್ಪಾಲ್ ಯಾದವ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು (Bail) ನೀಡಿದೆ. ಮಧ್ಯಾಹ್ನ 3 ಗಂಟೆ ಒಳಗೆ 1.3 ಕೋಟಿ ರೂಪಾಯಿ ಹಣವನ್ನು ಪಾವತಿ ಮಾಡುವಂತೆ ಸೂಚಿಸಲಾಗಿತ್ತು. ಹಣ ಹೊಂದಿಸಿದ ಬಳಿಕ ಅವರಿಗೆ ಜಾಮೀನು ನೀಡಲಾಯಿತು.
ಸಂಬಂಧಿಕರ ಮದುವೆ ಇದೆ ಎಂಬ ಕಾರಣವನ್ನು ನೀಡಿ ರಾಜ್ಪಾಲ್ ಯಾದವ್ ಅವರು ಜಾಮೀನು ಅರ್ಜಿ ಸಲ್ಲಿಸಿದ್ದರು. ಸೋಮವಾರಕ್ಕೆ (ಫೆ.16) ಅವರ ಅರ್ಜಿ ವಿಚಾರಣೆ ಮುಂದೂಡಿಕೆ ಆಗಿತ್ತು. ಇಂದು (ಫೆ.16) ವಿಚಾರಣೆ ನಡೆಸಿದ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಇದರಿಂದಾಗಿ ರಾಜ್ಪಾಲ್ ಯಾದವ್ ಮತ್ತು ಅವರ ಕುಟುಂಬದವರು ನಿಟ್ಟುಸಿರು ಬಿಟ್ಟಿದ್ದಾರೆ.
ಮಾರ್ಚ್ 18ರ ತನಕ ರಾಜ್ಪಾಲ್ ಯಾದವ್ ಅವರು ಜೈಲಿನಿಂದ ಹೊರಗೆ ಇರಲಿದ್ದಾರೆ. ಅಂದು ಮತ್ತೆ ಈ ಪ್ರಕರಣದ ವಿಚಾರಣೆ ನಡೆಯಲಿದೆ. ಸಿನಿಮಾ ನಿರ್ಮಾಣ ಮಾಡುವ ಸಲುವಾಗಿ ಅವರು ಹಲವು ವರ್ಷಗಳ ಹಿಂದೆ ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದರು. ಸಿನಿಮಾ ಸೋತ ಬಳಿಕ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಅಲ್ಲದೇ, ಹಲವು ಬಾರಿ ಚೆಕ್ ಬೌನ್ಸ್ ಆಗಿದ್ದರಿಂದ ಪ್ರಕರಣ ದಾಖಲಿಸಲಾಗಿತ್ತು.
ರಾಜ್ಪಾಲ್ ಯಾದವ್ ಅವರಿಗೆ ಈ ಮೊದಲು ಅನೇಕ ಬಾರಿ ಕಾಲಾವಕಾಶ ನೀಡಲಾಗಿತ್ತು. ಆದರೆ ಪ್ರತಿ ಬಾರಿಯೂ ಅವರು ಹಣ ಹಿಂದಿರುಗಿಸಲು ಹಿಂದೇಟು ಹಾಕುತ್ತಿದ್ದರು. ಅದರಿಂದಾಗಿ ಕೆಲವೇ ದಿನಗಳ ಹಿಂದೆ ಅವರಿಗೆ ಜೈಲು ಶಿಕ್ಷೆ ನೀಡಲಾಯಿತು. ಆ ಬಳಿಕ ರಾಜ್ಪಾಲ್ ಯಾದವ್ ಅವರು ತಿಹಾರ್ ಜೈಲು ಅಧಿಕಾರಿಗಳಿಗೆ ಶರಣಾಗಿದ್ದರು.
ಇದನ್ನೂ ಓದಿ: ಇಂದಿನ ಹಲವು ಸ್ಟಾರ್ಗಳಿಗೆ ಅಂದು ಊಟ ಹಾಕಿ ಸಾಕಿದ್ದರು ರಾಜ್ಪಾಲ್ ಯಾದವ್: ಈಗ ನೆರವಿಗೆ ಯಾರೂ ಇಲ್ಲ?
ರಾಜ್ಪಾಲ್ ಯಾದವ್ ಅವರು ಬಹುಬೇಡಿಕೆಯ ಹಾಸ್ಯ ನಟ. ‘ಚುಪ್ ಚುಪ್ ಕೆ’, ‘ಭೂಲ್ ಭುಲಯ್ಯ’ ಮುಂತಾದ ಸಿನಿಮಾಗಳ ಮೂಲಕ ಅವರು ಜನರನ್ನು ನಗಿಸಿದ್ದಾರೆ. ಸಾಲದ ಸುಳಿಯಿಂದಾಗಿ ಅವರು ಜೈಲುವಾಸ ಅನುಭವಿಸುವಂತಾಯಿತು. ಅವರು ಜೈಲು ಸೇರಿದ ಬಳಿಕ ಸೋನು ಸೂದ್ ಸೇರಿದಂತೆ ಹಲವರು ಅವರ ನೆರವಿಗೆ ಧಾವಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
