ಹುಬ್ಬಳ್ಳಿ, (ಏಪ್ರಿಲ್ 03): ಛೋಟಾ ಬಾಂಬೆ ಎಂದೇ ಹೆಸರುವಾಸಿಯಾರುವ ಹುಬ್ಬಳ್ಳಿಯಲ್ಲಿ (Hubbli) ಮತ್ತೊಂದು ಲವ್ ಜಿಹಾದ್ (Love Jihad) ಆರೋಪ ಕೇಳಿಬಂದಿದೆ. ಹುಬ್ಬಳಿಯ ವಿಜಯನಗರದ ನಿವಾಸಿ ಸಮೀರ್, ಹಿಂದೂ ಯುವತಿಯನ್ನು ಪರಿಚಯಿಸಿಕೊಂಡು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿದ್ದಾನೆಂದು ಹಿಂದೂ ಸಂಘಟನೆಗಳು ಆರೋಪಿಸಿದ್ದು, ಈ ಸಂಬಂಧ ಹಿಂದು ಕಾರ್ಯಕರ್ತರು ಸಮೀರ್ ನನ್ನು ಹಿಡಿದು ಹಳೇ ಹುಬ್ಬಳ್ಳಿ ಠಾಣೆಗೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಹುಬ್ಬಳ್ಳಿ ನಗರದ ವಿಕಾಸ ನಗರದ ಯುವತಿಯನ್ನು ಸಮೀರ್ ಜಿಮ್ ನಲ್ಲಿ ಪರಿಚಯಿಸಿಕೊಂಡಿದ್ದು, ಬಳಿಕ ಲವ್ ಜಿಹಾದ್ ಮಾಡುತ್ತಿದ್ದಾನೆಂದು ಆರೋಪಿಸಲಾಗಿದೆ. ಈ ಬಗ್ಗೆ ಹಳೇ ಹುಬ್ಬಳ್ಳಿ ಪೊಲೀಸರು ತನಿಖೆ ನಡೆಸಿದ್ದಾರೆ.
ಕುವೈತ್, ಏಪ್ರಿಲ್ 3: ಇರಾನ್ನ ವಿದ್ಯುತ್ ಸ್ಥಾವರಗಳನ್ನು ಧ್ವಂಸಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಎಚ್ಚರಿಕೆ ನೀಡಿದ ಬೆನ್ನಲ್ಲೇ ಕುವೈತ್ನ ಪ್ರಮುಖ ತೈಲ ಸಂಸ್ಕರಣಾಗಾರವಾದ ಮಿನಾ ಅಲ್-ಅಹ್ಮದಿ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದೆ. ಡ್ರೋನ್ ದಾಳಿಯ ನಂತರ ಕುವೈತ್ನ ರಾಷ್ಟ್ರೀಯ ತೈಲ ಕಂಪನಿ ಮಿನಾ ಅಲ್-ಅಹ್ಮದಿ ಘಟಕಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಕುವೈತ್ ಪೆಟ್ರೋಲಿಯಂ ಕಾರ್ಪೊರೇಷನ್ (KPC) ಮಿನಾ ಅಲ್-ಅಹ್ಮದಿ ಸಂಸ್ಕರಣಾಗಾರವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಲಾಗಿದ್ದು, ಇದರ ಪರಿಣಾಮವಾಗಿ ಹಲವಾರು ಘಟಕಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕುವೈತ್ನ ಅಧಿಕೃತ ಸುದ್ದಿ ಸಂಸ್ಥೆ KUNA ವರದಿ ಮಾಡಿದೆ. ಸದ್ಯಕ್ಕೆ ಯಾವುದೇ ಗಾಯಗಳು ವರದಿಯಾಗಿಲ್ಲ. ಕಾರ್ಮಿಕರ ಸುರಕ್ಷತೆ ಮತ್ತು ಸೌಲಭ್ಯವನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ದೃಢಪಡಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನಟಿ ಸೋನಂ ಕಪೂರ್ ಹಾಗೂ ಆನಂದ್ ಅಹೂಜ ಇತ್ತೀಚೆಗೆ ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದರು. ಈ ದಂಪತಿಗೆ ಗಂಡು ಮಗು ಜನಿಸಿದೆ. ಹೀಗಿರುವಾಗಲೇ ಅವರು ಮಗುವಿನ ಫೋಟೋ ಹಂಚಿಕೊಂಡಿದ್ದಾರೆ.
ಸೋನಂ ಕಪೂರ್ ಅವರು ಮಾರ್ಚ್ 29ರಂದು ಗಂಡುಮಗುವಿಗೆ ಜನ್ಮನೀಡಿದರು. ಈಗ ಮಗುವಿನ ಜೊತೆ ಇರುವ ಮುದ್ದಾದ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಮಗುವನ್ನು ಬಿಗಿದಪ್ಪಿದ್ದಾರೆ.
ಮತ್ತೊಂದು ಫೋಟೋದಲ್ಲಿ ಅವರು ಆಹಾರ ಸೇವನೆ ಮಾಡುತ್ತಿರುವ ಫೋಟೋ ಇದೆ. ಈ ಫೋಟೋದಲ್ಲಿ ಅವರ ಕೈಗೆ ಬ್ಯಾಂಡೇಜ್ ಮಾದರಿಯ ವಸ್ತುವನ್ನು ಹಾಕಲಾಗಿದೆ. ಅವರು ಆಹಾರ ಸೇವನೆ ಮಾಡುತ್ತಿದ್ದಾರೆ.
ಸೋನಂ ಕಪೂರ್ ಅವರ ಮಗು ಜನಿಸಿದ್ದು ಎಚ್ಎನ್ ರಿಲೈನ್ಸ್ ಆಸ್ಪತ್ರೆಯಲ್ಲಿ. ಇದನ್ನು ನಿರ್ಮಾಣ ಮಾಡಿದ್ದು ಅಂಬಾನಿ ಕುಟುಂಬದವರು. ಹೀಗಾಗಿ, ನೀತಾ ಅಂಬಾನಿಗೆ ಸೋನಂ ಕಪೂರ್ ಧನ್ಯವಾದ ಹೇಳಿದ್ದಾರೆ.
ಸೋನಂ ಕಪೂರ್ ಅವರು 2018ರಲ್ಲಿ ಆನಂದ್ ಜೊತೆ ಸೋನಂ ಕಪೂರ್ ಮದುವೆ ಆದರು. ಆನಂದ್ ಅವರು ಲಂಡನ್ನಲ್ಲಿ ದೊಡ್ಡ ಬಿಸ್ನೆಸ್ಮೆನ್. ಈ ದಂಪತಿಗೆ 2022ರಲ್ಲಿ ಗಂಡು ಮಗು ಜನಿಸಿತು. ಮಗನಿಗೆ ವಾಯು ಎಂದು ಹೆಸರು ಇಟ್ಟಿದ್ದಾರೆ.
ಶಿವಮೊಗ್ಗ, ಏಪ್ರಿಲ್ 03: ಆತ್ಮಹತ್ಯೆಗೆ ಯತ್ನಿಸಿದ್ದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಡಬಟ್ಟೆ ಗ್ರಾಮದ 4 ತಿಂಗಳ ಗರ್ಭಿಣಿ ಚಿಕಿತ್ಸೆ ಫಲಿಸದೆ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶ್ವೇತಾ(30) ಮೃತಳಾಗಿದ್ದು, ಮಾ.29ರಂದು ಹೊಡಬಟ್ಟೆಯಲ್ಲಿ ಇವರು ಆತ್ಮಹತ್ಯೆಗೆ ಯತ್ನಿಸಿದ್ದರು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆ ಪೋಷಕರು ಮಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರೀಗ ಮೃತಪಟ್ಟಿದ್ದಾರೆ.
ಪ್ರಕರಣ ಸಂಬಂಧ ನಾಲ್ವರ ಬಂಧನ
ಸ್ಟಾಫ್ ನರ್ಸ್ ಆಗಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದ ಶ್ವೇತಾ ಅತ್ತೆ ಮತ್ತು ಮಾವನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಪೋಷಕರು ಗಂಭೀರ ಆರೋಪ ಮಾಡಿದ್ದು, ಘಟನೆ ಸಂಬಂಧ ಸೊರಬ ಠಾಣೆಗೆ ದೂರು ಕೂಡ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಶ್ವೇತಾ ಮಾವ ಸಣ್ಣಪ್ಪ, ಅತ್ತೆ ಜಾನಕಿ, ಹೇಮಂತ್, ದಿವ್ಯಾ ಬಂಧಿತ ಆರೋಪಿಗಳಾಗಿದ್ದಾರೆ. ಮಗಳ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಶ್ವೇತಾ ಪೋಷಕರ ಆಗ್ರಹಿಸಿದ್ದು ತನಿಖೆ ಮುಂದುವರಿದಿದೆ.
ಇನ್ನು ಮಗಳ ಸಾವಿಗೆ ಶ್ವೇತಾ ಪೋಷಕರು ಮತ್ತು ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ. ನಮ್ಮ ಮಗಳು ಸಾಯುವಂತಹ ಹೇಡಿಯಲ್ಲ. ಮನೆಯ ಜಾಗದ ವಿಚಾರಕ್ಕೆ ಆಕೆಗೆ ಕಿರುಕುಳ ನೀಡುತ್ತಿದ್ದರು. ಹಿರಿಯ ಮಗ ಹೇಮಂತ್ ಮತ್ತು ಸೊಸೆ ದಿವ್ಯಾ ಮೇಲಿನ ಪ್ರೀತಿಗೆ ಹೀಗೆ ಮಾಡಿದ್ದಾರೆ. ಆಕೆಯ ಜೊತೆ ಜಗಳವಾಡಿ ಮನೆಬಿಟ್ಟು ಹೋಗುವಂತೆ ಚಿತ್ರಹಿಂಸೆ ನೀಡಿದ್ದರು. ಈಗ ಅವರೇ ಮಗಳಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಶ್ವೇತಾ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಮಗಳ ಶವದ ಮುಂದೆ ಆಕ್ರಂದನ ವ್ಯಕ್ತಪಡಿಸಿರುವ ಪೋಷಕರು ಗರ್ಭಿಣಿ ಮಗಳ ಸಾವಿಗೆ ನ್ಯಾಯಕೊಡಿಸುವಂತೆ ಆಗ್ರಹಿಸಿದ್ದಾರೆ.
ಚೆನ್ನೈ, ಏಪ್ರಿಲ್ 03: ತಮಿಳುನಾಡು ವಿಧಾನಸಭಾ ಚುನಾವಣೆ(Tamil Nadu Assembly election)ಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೇಂದ್ರ ಚುನಾವಣಾ ಸಮಿತಿಯು 27 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಈ ಪಟ್ಟಿಯಲ್ಲಿ ಹಲವಾರು ಅನುಭವಿ ನಾಯಕರು ಮತ್ತು ಸ್ಥಳೀಯ ಪ್ರಭಾವ ಹೊಂದಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಪಟ್ಟಿಯಲ್ಲಿ ಕೇಂದ್ರ ಸಚಿವರಿಂದ ಹಿಡಿದು ಮಾಜಿ ರಾಜ್ಯಪಾಲರವರೆಗೆ ಪ್ರಮುಖ ನಾಯಕರ ಹೆಸರಿದೆ, ಆದರೆ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರ ಹೆಸರೇ ಇಲ್ಲ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಮಿಳು ರಾಜಕೀಯದಲ್ಲಿ ಬಿಜೆಪಿಯ ರಾಜಕೀಯ ಭರವಸೆಯನ್ನು ಹೆಚ್ಚಿಸಿದ ಅಣ್ಣಾಮಲೈ ಅವರನ್ನು ಚುನಾವಣಾ ಕ್ಷೇತ್ರದಿಂದ ದೂರವಿಡುವ ನಿರ್ಧಾರವು ಆಶ್ಚರ್ಯಕರವಾಗಿದೆ.
ಪಕ್ಷವು ಕೆಲವು ಸ್ಥಾನಗಳಲ್ಲಿ ಮತ್ತು ಪರಿಶಿಷ್ಟ ಜಾತಿ (SC) ಮೀಸಲು ಸ್ಥಾನಗಳಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.ತಮಿಳುನಾಡು ವಿಧಾನಸಭಾ ಚುನಾವಣೆಗಳು ಏಪ್ರಿಲ್ 23, 2026 ರಂದು ನಡೆಯಲಿವೆ. ಭಾರತೀಯ ಜನತಾ ಪಕ್ಷವು ಈ ಚುನಾವಣೆಗಳಿಗೆ ತನ್ನ ಸಿದ್ಧತೆಗಳನ್ನು ಚುರುಕುಗೊಳಿಸಿದೆ. ಎನ್ಡಿಎ ಮೈತ್ರಿಕೂಟದ ಭಾಗವಾಗಿ ಪಕ್ಷವು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಎಐಎಡಿಎಂಕೆ ನೇತೃತ್ವದ ಎನ್ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ಒಟ್ಟು 27 ಸ್ಥಾನಗಳನ್ನು ಗೆದ್ದಿದೆ. ತಮಿಳುನಾಡಿನಾದ್ಯಂತ 234 ವಿಧಾನಸಭಾ ಸ್ಥಾನಗಳಿವೆ. ಬಿಜೆಪಿ ತನ್ನ ಹಂಚಿಕೆಯಾದ 27 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉಳಿದ ಸ್ಥಾನಗಳಲ್ಲಿ ಇತರ ಮೈತ್ರಿ ಪಕ್ಷಗಳು ಸ್ಪರ್ಧಿಸಲಿವೆ.
ತಮಿಳುನಾಡು ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 6, 2026. ಬಿಜೆಪಿ ಈಗ ತನ್ನ ಅಭ್ಯರ್ಥಿಗಳೊಂದಿಗೆ ಬಿರುಸಿನ ಪ್ರಚಾರವನ್ನು ಪ್ರಾರಂಭಿಸಲು ಸಜ್ಜಾಗಿದೆ. ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಉತ್ತಮ ಪ್ರದರ್ಶನ ನೀಡುವ ಗುರಿಯನ್ನು ಪಕ್ಷ ಹೊಂದಿದೆ.
ಅಭ್ಯರ್ಥಿಗಳ ಪಟ್ಟಿ
BJP releases list of 27 candidates for Tamil Nadu Assembly elections; Dr Tamilisai Soundararajan to contest from Mylapore, Vanathi Srinivasan to contest from Coimbatore (North), Dr. L. Murugan from Avanashi (SC) pic.twitter.com/4c2uRhy6Gp
ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇಂದ್ರ ಸಚಿವ ಎಲ್. ಮುರುಗನ್ ರಿಂದ ಮಾಜಿ ರಾಜ್ಯಪಾಲ ಸುಂದರರಾಜನ್ ವರೆಗೆ ಹಲವು ಹೆಸರುಗಳಿವೆ. ದಲಿತ ಸಮುದಾಯಕ್ಕೆ ಮೀಸಲಾಗಿರುವ ಅವಿನಾಶಿ ವಿಧಾನಸಭಾ ಸ್ಥಾನದಿಂದ ಪಕ್ಷವು ಎಲ್. ಮುರುಗನ್ ಅವರನ್ನು ನಾಮನಿರ್ದೇಶನ ಮಾಡಿದೆ. ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳ್ ಇಸಾಯಿ ಸುಂದರ್ ರಾಜನ್, ಮೈಲಾಪುರ ವಿಧಾನಸಭಾ ಸ್ಥಾನಕ್ಕೆ ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸಲಿದ್ದಾರೆ.
2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಘೋಷಿಸಲಾದ ಎಲ್ಲಾ ಅಭ್ಯರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು ಭ್ರಷ್ಟಾಚಾರ, ನಿರ್ಲಕ್ಷ್ಯ ಮತ್ತು ಡಿಎಂಕೆ ಪಕ್ಷದ ದ್ರೋಹದಿಂದ ಬೇಸತ್ತಿರುವ ತಮಿಳುನಾಡಿನ ಪ್ರತಿಯೊಬ್ಬ ಸಹೋದರ ಸಹೋದರಿಯರ ಬೆಂಬಲ ಇವರೊಂದಿಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ಶಕ್ತಿ, ವ್ಯಾಪ್ತಿ ಮತ್ತು ಉದ್ದೇಶದೊಂದಿಗೆ ಮುಂದುವರೆದಿದೆ
ದೇಶ ಮುಂದುವರಿಯುತ್ತಿರುವಾಗ, ವಿಫಲ, ಅಹಂಕಾರಿ ಮತ್ತು ಸ್ವಾರ್ಥಪರ ಡಿಎಂಕೆ ಸರ್ಕಾರದಿಂದ ತಮಿಳುನಾಡು ಹಿಂದುಳಿದಿದೆ. ನಾನು ಒಬ್ಬ ಕಾರ್ಯಕರ್ತನಾಗಿ ನಮ್ಮ ಎಲ್ಲಾ ಬಿಜೆಪಿ ಮತ್ತು ಇತರ ಎನ್ ಡಿಎ ಅಭ್ಯರ್ಥಿಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತು ಪ್ರಚಾರ ಮಾಡುತ್ತೇನೆ, ಚುನಾವಣೆಯಲ್ಲಿ ಎನ್ ಡಿಎ 210 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದ್ದೇವೆ ಎಂದು ಅಣ್ಣಾಮಲೈ ಪೋಸ್ಟ್ ಮಾಡಿದ್ದಾರೆ.
ಪಕ್ಷವು ಕೊಯಮತ್ತೂರು (ಉತ್ತರ) ಸ್ಥಾನದಿಂದ ವಿ. ಶ್ರೀನಿವಾಸನ್ ಅವರನ್ನು ನಾಮನಿರ್ದೇಶನ ಮಾಡಿದೆ. ಬಿಜೆಪಿಯು ಸತ್ತೂರಿನಿಂದ ನೈನಾರ್ ನಾಗೇಂದ್ರನ್ ಮತ್ತು ತಿರುಪ್ಪೂರು (ದಕ್ಷಿಣ) ದಿಂದ ಎಸ್. ತಂಗರಾಜ್ ಅವರನ್ನು ಕಣಕ್ಕಿಳಿಸಿದೆ.ತಮಿಳುನಾಡಿನಲ್ಲಿ 234 ವಿಧಾನಸಭಾ ಸ್ಥಾನಗಳಿವೆ. ರಾಜ್ಯದ ಎಲ್ಲಾ ವಿಧಾನಸಭಾ ಸ್ಥಾನಗಳಿಗೆ ಏಪ್ರಿಲ್ 23 ರಂದು ಮತದಾನ ನಿಗದಿಯಾಗಿದೆ.
ಬೆಂಗಳೂರು, ಏಪ್ರಿಲ್ 03: ಇನ್ಫೋಸಿಸ್ (Infosys) ಸಂಸ್ಥೆಯ ಹಿರಿಯ ಅಧಿಕಾರಿಗಳಂತೆ ನಟನೆ ಮಾಡಿ 6.3 ಕೋಟಿ ರೂ. ವಂಚನೆ ನಡೆಸಿದ ಆರೋಪ ಕೇಳಿ ಬಂದಿದ್ದು, ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮೈಸೂರು ಮರ್ಕಂಟೈಲ್ ಕಂಪನಿ ನೀಡಿದ ದೂರಿನ ಪ್ರಕಾರ, ಗಗನ್ ಎಂಬಾತ ಇನ್ಫೋಸಿಸ್ ಸಂಸ್ಥೆಯ CSR ಪ್ರಾದೇಶಿಕ ಮುಖ್ಯಸ್ಥನಾಗಿ ತಾನು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದ ಎಂದು ಆರೋಪಿಸಲಾಗಿದೆ.
ನಂಬಿಕೆ ಗಳಿಸಲು ನಕಲಿ ತಂಡ ರಚಿಸಿ ಪರಿಶೀಲನೆ!
ತಾನು ಹಿರಿಯ ಅಧಿಕಾರಿಗಳಾದ ನಿಲಾದ್ರಿ ಪ್ರಸಾದ್ ಮಿಶ್ರಾ ಹಾಗೂ ಹರ್ಷ್ ಜೆ ಅವರಿಗೆ ನೇರವಾಗಿ ವರದಿ ಮಾಡುತ್ತೇನೆ ಎಂದು ನಂಬಿಕೆ ಮೂಡಿಸಿದ್ದ ಆರೋಪಿ, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ಗೆ ಭಾರೀ ಅನುದಾನ ನೀಡುವುದಾಗಿ ಹೇಳಿ ವಿಶ್ವಾಸ ಗಳಿಸಿದ್ದ.
ಈ ನಂಬಿಕೆಯನ್ನು ಮತ್ತಷ್ಟು ಬಲಪಡಿಸಲು ಆರೋಪಿಗಳು ಉಡುಪಿ ಮತ್ತು ಮಂಗಳೂರು ಭಾಗಗಳಿಗೆ ನಕಲಿ ಪರಿಶೀಲನಾ ತಂಡವನ್ನು ಕಳುಹಿಸಿ, ಟ್ರಸ್ಟ್ ಚಟುವಟಿಕೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಬಳಿಕ ಅನುದಾನ ಬಿಡುಗಡೆಗಿಂತ ಮೊದಲು ಅರ್ನೆಸ್ಟ್ ಮನಿ ಡೆಪಾಸಿಟ್ (EMD) ಪಾವತಿಸಬೇಕೆಂದು ಒತ್ತಾಯಿಸಿದ್ದಾರೆ.
ಒಟ್ಟೂ 6 ಕೋಟಿ ವಂಚನೆ
ಇದನ್ನು ನಂಬಿದ ಕಂಪನಿ 1.75 ಕೋಟಿ ರೂ. ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಅನಿತಾ ವೆಂಚರ್ಸ್ಗೆ, 3.75 ಕೋಟಿ ರೂ. ANS ಎಂಜಿನಿಯರಿಂಗ್ಸ್ಗೆ ಪಾವತಿಸಿದೆ. ಅಲ್ಲದೆ ದೇವನಹಳ್ಳಿಯ ನಂದಿ ಉಪಚಾರ ಹೋಟೆಲ್ ಸಮೀಪ ಆರೋಪಿಯ ಚಾಲಕನಿಗೆ 30 ಲಕ್ಷ ರೂ ನಗದನ್ನೂ ನೀಡಲಾಗಿದೆ. ಇನ್ನೂ 50 ಲಕ್ಷ ರೂ. ಹಣವನ್ನು ಬ್ಯಾಂಕ್ ಮುಖಾಂತರ ವರ್ಗಾವಣೆ ಮಾಡಲಾಗಿದೆ.
ವಂಚನೆಯನ್ನು ಮುಂದುವರೆಸಲು ಆರೋಪಿಗಳು ಕಳೆದ ಅಕ್ಟೋಬರ್ 21ರಂದು ಇನ್ಫೋಸಿಸ್ ಹಿರಿಯ ಉಪಾಧ್ಯಕ್ಷರ ಸಹಿಯನ್ನು ಹೊಂದಿರುವ ನಕಲಿ ಮಂಜೂರಾತಿ ಪತ್ರವನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಕರ್ನಾಟಕದಾದ್ಯಂತ ವಸತಿ ಯೋಜನೆಗಳಿಗೆ 179 ಕೋಟಿ ರೂ. ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 178 ಕೋಟಿ ರೂ. ನೀಡುವ ಭರವಸೆ ನೀಡಿದ್ದರು. ಆದರೆ ಅನುದಾನ ಹಣ ಬರದೇ ಹೋದಾಗ ಹಾಗೂ ಗಗನ್ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ವಂಚನೆ ಬೆಳಕಿಗೆ ಬಂದಿದೆ. ನಂತರ ಕಂಪನಿ ಪೊಲೀಸರಿಗೆ ದೂರು ನೀಡಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆ ಹಾಗೂ ಹಣದ ಹರಿವು ಕುರಿತು ತನಿಖೆ ಮುಂದುವರೆಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳುವುದು ಬಹಳ ಕಷ್ಟ, ಅದಕ್ಕೆ ಆಹಾರ ಪದ್ಧತಿಯಲ್ಲಿ ಬದಲಾವಣೆ, ವ್ಯಾಯಾಮ ಇನ್ನು ಅನೇಕ ಕಸರತ್ತುಗಳನ್ನು ಮಾಡಬೇಕು, ಸಾಮಾನ್ಯವಾಗಿ ಜನ ಡಯಟ್ ಮಾಡುತ್ತಾರೆ. ಈ ಕ್ರಮವು ಅನೇಕರಿಗೆ ಒಳ್ಳೆಯ ಫಲಿತಾಂಶವನ್ನು ನೀಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ತಕ್ಷಣಕ್ಕೆ ತೂಕ ಇಳಿಸಿಕೊಳ್ಳಲು ಔಷಧಿಗಳ ಕಡೆ ಹೋಗುತ್ತಿದ್ದಾರೆ. ಇಂಜೆಕ್ಷನ್ಗಳನ್ನು ತೆಗೆದುಕೊಂಡು ತೂಕ ಇಳಿಸಿಕೊಳ್ಳುತ್ತಾರೆ. ಅದರಲ್ಲೂ ಇದೀಗ ಮದುವೆ ಆಗುತ್ತಿರುವ ನೂತನ ಜೋಡಿಗಳು ಕೂಡ ಹಾದಿಯಲ್ಲೇ ಸಾಗುತ್ತಿದ್ದಾರೆ. ಈ ಬಗ್ಗೆ ಇಲ್ಲೊಂದು ವರದಿಯನ್ನು ನೀಡಲಾಗಿದೆ.
ಮದುವೆ ಕಡಿಮೆ ಸಮಯ ಇರುವಾಗ ಈ ಯೋಜನೆಗಳನ್ನು ಅಥವಾ ಚಿಕಿತ್ಸೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ನವದೆಹಲಿಯ ಕ್ಷೇಮ ಚಿಕಿತ್ಸಾಲಯವಾದ ಕ್ಲಾರಿಟಿ ಸ್ಕಿನ್ ಕ್ಲಿನಿಕ್ “ಮೌಂಜಾರೋ ವಧು” ಈ ಬಗ್ಗೆ ಒಂದು ಮಾಹಿತಿಯನ್ನು ನೀಡಿದೆ. ಆದರೆ ಇತರ ಚಿಕಿತ್ಸಾಲಯಗಳು ತೂಕ ಇಳಿಸುವ ಇಂಜೆಕ್ಷನ್ಗಳನ್ನು “ವಿವಾಹಪೂರ್ವ” ರೂಪಾಂತರ ಪ್ಯಾಕೇಜ್ಗಳಾಗಿ ಹೆಣೆದಿದ್ದು, ಇದು ಸಾಮಾನ್ಯವಾಗಿ ಚರ್ಮದ ಚಿಕಿತ್ಸೆಗಳು ಮತ್ತು ಕೇಶವಿನ್ಯಾಸದ ಮೇಕ್ ಓವರ್ಗಳ ಮೇಲೆ ಕೇಂದ್ರೀಕರಿಸುತ್ತವೆ.
ಭಾರತೀಯ ವಿವಾಹ ಮಾರುಕಟ್ಟೆಯಲ್ಲಿ ಈಗ ‘ತೂಕ ಇಳಿಸುವ ಔಷಧಿಗಳ’ (Weight-loss drugs) ಹವಾ ಶುರುವಾಗಿದೆ. ಮದುವೆಯ ದಿನ ಅಂದವಾಗಿ ಕಾಣಿಸಿಕೊಳ್ಳಬೇಕೆಂಬ ಸಾಮಾಜಿಕ ಒತ್ತಡದಿಂದಾಗಿ ಅನೇಕ ವಧುಗಳು ಮತ್ತು ವರರು ದುಬಾರಿ ಇಂಜೆಕ್ಷನ್ಗಳ ಮೊರೆ ಹೋಗುತ್ತಿದ್ದಾರೆ ಎಂದು ಎನ್ಡಿ ಟಿವಿಯೂ ಈ ವರದಿಯನ್ನು ಮಾಡಿದೆ. ಈ ಔಷಧಿಗಳ ಒಂದು ಡೋಸ್ ಬೆಲೆ ಸುಮಾರು 13,000 ರೂ. ನಿಂದ 25,000 ರೂ. ವರೆಗೆ ಇದೆ. ಪ್ರಮುಖವಾಗಿ ‘ಮೌಂಜಾರೊ’ (Mounjaro) ಮತ್ತು ‘ವೆಗೋವಿ’ (Wegovy) ಎಂಬ ಔಷಧಿಗಳಿಗೆ ಭಾರಿ ಬೇಡಿಕೆ ಬಂದಿದೆ.
ಚರ್ಮದ ಆರೈಕೆ ಮತ್ತು ಹೇರ್ ಸ್ಟೈಲ್ ಪ್ಯಾಕೇಜ್ಗಳ ಜೊತೆಗೆ ಈಗ ಕ್ಲಿನಿಕ್ಗಳು “ಮೌಂಜಾರೊ ಬ್ರೈಡ್” (Mounjaro Bride) ಎಂಬ ವಿಶೇಷ ಪ್ಯಾಕೇಜ್ಗಳನ್ನು ನೀಡುತ್ತಿವೆ. ಈ ಔಷಧಿಗಳು ಕೇವಲ ವೈದ್ಯಕೀಯವಾಗಿ ಅರ್ಹರಾದವರಿಗೆ ಮಾತ್ರವೇ ಹೊರತು ಎಲ್ಲರಿಗೂ ಅಲ್ಲ ಎಂದು ವೈದ್ಯರು ಎಚ್ಚರಿಸಿದ್ದಾರೆ. ಕೇವಲ ಮದುವೆಗಾಗಿ ಇವುಗಳನ್ನು ಬಳಸುವುದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಭಾರತದಲ್ಲಿ ಈ ಔಷಧಿಗಳ ಮಾರುಕಟ್ಟೆಯು 2030ರ ವೇಳೆಗೆ 8,000 ಕೋಟಿ ರೂಪಾಯಿಗಳಿಗೂ ಹೆಚ್ಚು ಬೆಳೆಯುವ ಅಂದಾಜಿದೆ.
ಬೆಂಗಳೂರು, ಏಪ್ರಿಲ್ 3: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಆಟೋ ಎಲ್ಪಿಜಿ ಗ್ಯಾಸ್ ಅಭಾವ (Auto LPG Crisis) ವಿಕೋಪಕ್ಕೆ ತಲುಪಿದ್ದು, ಆಟೋ ಚಾಲಕರ ಬದುಕು ಬೀದಿಗೆ ಬಂದಿದೆ. ಗ್ಯಾಸ್ ಕೊರತೆ ಮತ್ತು ಅನಿಯಂತ್ರಿತ ದರ ಏರಿಕೆಯಿಂದ ಚಾಲಕರು ಕಂಗಾಲಾಗಿದ್ದಾರೆ. ಏತನ್ಮಧ್ಯೆ, ಸೋಮವಾರದೊಳಗೆ ಸಮಸ್ಯೆ ಬಗೆಹರಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ‘ಪೀಸ್ ಆಟೋ’ ಸಂಘಟನೆ ಗಡುವು ನೀಡಿದೆ. ಇಲ್ಲದಿದ್ದರೆ ಸಚಿವರ ಮನೆಗೆ ಆಟೋ ಸಮೇತ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆಯನ್ನೂ ನೀಡಿದೆ.
ಮಧ್ಯರಾತ್ರಿಯಿಂದಲೇ ಕಿಲೋಮೀಟರ್ಗಟ್ಟಲೆ ಕ್ಯೂ
ನಗರದ ಉತ್ತರ ಭಾಗದ ನಾಗೇನಹಳ್ಳಿ ಮತ್ತು ಯಲಹಂಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗ್ಯಾಸ್ಗಾಗಿ ಆಟೋಗಳ ಬೃಹತ್ ಸರದಿ ಸಾಲು ಕಂಡುಬರುತ್ತಿದೆ. ಪ್ರೊಪೆಲ್ ಆಟೋ ಗ್ಯಾಸ್ ಬಂಕ್ ಬಳಿ ಸುಮಾರು 2 ಕಿಲೋಮೀಟರ್ವರೆಗೂ ಆಟೋಗಳು ಸಾಲುಗಟ್ಟಿ ನಿಂತಿವೆ.
ಚಾಲಕರು ರಾತ್ರಿ 11 ಗಂಟೆಯಿಂದಲೇ ತಿಂಡಿ-ತೀರ್ಥವಿಲ್ಲದೆ ಗ್ಯಾಸ್ಗಾಗಿ ಕಾಯುತ್ತಿದ್ದಾರೆ. ದಿನವಿಡೀ ಕ್ಯೂ ನಿಂತರೆ ದುಡಿಯುವುದು ಯಾವಾಗ? ಮಕ್ಕಳ ಶಾಲಾ ಫೀಸು, ಸಾಲದ ಕಂತು ಕಟ್ಟುವುದು ಹೇಗೆ? ಎಂದು ಚಾಲಕರು ಕಣ್ಣೀರಿಡುತ್ತಿದ್ದಾರೆ.
ಕಾಳಸಂತೆಯಲ್ಲಿ ಗ್ಯಾಸ್ ಮಾರಾಟ ಆರೋಪ
ಪೀಸ್ ಆಟೋ ಸಂಘಟನೆಯ ಅಧ್ಯಕ್ಷ ರಘು ಮಾತನಾಡಿ, ‘ಹಿಂದೆ 55 ರೂ. ಇದ್ದ ಗ್ಯಾಸ್ ದರ ಈಗ ಕಾಳಸಂತೆಯಲ್ಲಿ 135 ರೂ. ವರೆಗೆ ಏರಿಕೆಯಾಗಿದೆ. ಸರ್ಕಾರ ಹೋಟೆಲ್ಗಳಿಗೆ ಸಬ್ಸಿಡಿ ಹೆಚ್ಚಿಸಿ, ಆಟೋ ಚಾಲಕರ ಹೊಟ್ಟೆಗೆ ಹೊಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಚಾಲಕರು 10-20 ರೂಪಾಯಿ ಹೆಚ್ಚುವರಿ ಬಾಡಿಗೆ ಕೇಳಿದರೆ, ಗ್ರಾಹಕರು ಟ್ವಿಟರ್ನಲ್ಲಿ ದೂರು ನೀಡುತ್ತಾರೆ. ಇದರಿಂದ ಬೆಂಗಳೂರು ಪೊಲೀಸ್ ಆಯುಕ್ತರು ಚಾಲಕರ ಬಂಧನಕ್ಕೆ ಆದೇಶ ನೀಡುತ್ತಾರೆ. ಈ ಕಾರಣದಿಂದ ಚಾಲಕರು ಹೆಚ್ಚುವರಿ ದರ ಕೇಳಲು ಹಿಂಜರಿಯುತ್ತಾರೆ, ಇದು ಅವರ ನಷ್ಟವನ್ನು ಹೆಚ್ಚಿಸುತ್ತಿದೆ ಎಂದು ರಘು ಆಕ್ರೋಶ ಹೊರಹಾಕಿದ್ದಾರೆ.
ಬಂಕ್ ವ್ಯವಸ್ಥಾಪಕರ ಪ್ರಕಾರ, ಗ್ಯಾಸ್ ಪೂರೈಕೆ ಅನಿಶ್ಚಿತವಾಗಿದ್ದು, ಸ್ಟಾಕ್ ಬಂದ ಕೂಡಲೇ ಖಾಲಿಯಾಗುತ್ತಿದೆ. ಮುಂದಿನ ಲೋಡ್ ಯಾವಾಗ ಬರುತ್ತದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲದಿರುವುದು ಚಾಲಕರ ಆತಂಕವನ್ನು ಇಮ್ಮಡಿಗೊಳಿಸಿದೆ. ಸೋಮವಾರದೊಳಗೆ ಸರ್ಕಾರ ಶಾಶ್ವತ ಪರಿಹಾರ ನೀಡದಿದ್ದರೆ ವಿಧಾನಸೌಧದ ಬದಲು ನೇರವಾಗಿ ಸಚಿವರ ನಿವಾಸವೇ ನಮ್ಮ ಹೋರಾಟದ ಕೇಂದ್ರವಾಗಲಿದೆ ಎಂದು ಚಾಲಕರು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಚಿತ್ರರಂಗದಲ್ಲಿ (Movie Industry) ಕೆಲಸ ಮಾಡಬೇಕು, ನಟಿಯಾಗ ಬೇಕು ಎಂಬುದು ಹಲವು ಯುವತಿಯರ ಆಸೆ. ಆದರೆ ಕಾಸ್ಟಿಂಗ್ ಕೌಚ್ ಎಂಬ ಪೆಡಂಭೂತ ಇಂಥಹಾ ಹಲವು ಪ್ರತಿಭಾವಂತ ಯುವತಿಯರನ್ನು ತಡೆಯುತ್ತಿದೆ. ಕಾಸ್ಟಿಂಗ್ ಕೌಚ್ ವಿರುದ್ಧ ಹೋರಾಟಗಳು ನಡೆಯುತ್ತಲೇ ಇವೆ, ಕಾನೂನು ಕಟ್ಟಳೆಗಳನ್ನು ಸಹ ಮಾಡಲಾಗಿದೆ. ಅದರೂ ಸಹ ಇದು ಸಂಪೂರ್ಣ ನಿಂತಿಲ್ಲ. ಇದೀಗ ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ಯುವತಿಯೊಬ್ಬರು ತಮಗೆ ಟಾಲಿವುಡ್ನಲ್ಲಿ ಆದ ಕೆಟ್ಟ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ‘ಪೀಕು ನೆಮಿಲಿ’ ಹೆಸರಿನಲ್ಲಿ ಯುವತಿಯೊಬ್ಬರು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ನಟಿ ಇದೀಗ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ತೆಲುಗು ಚಿತ್ರರಂಗದಲ್ಲಿ ತಮಗೆ ಎದುರಾದ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಖುದ್ದು ಹೇಳಿಕೊಂಡಿದ್ದಾರೆ. ಅಲ್ಲದೆ, ಇಂಥಹಾ ಅಸುರಕ್ಷಿತ ಮತ್ತು ಭಯದ ವಾತಾವರಣ ಇರುವ ಕಾರಣಕ್ಕೆ ಎಷ್ಟೋ ಮಂದಿ ಯುವತಿಯರು ಚಿತ್ರರಂಗಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ.
ತಮಗೆ ಇತರೆ ಕೆಲವು ಗೆಳೆಯರಿಂದ ಕೆಲವು ಸಹಾಯಕ ನಿರ್ದೇಶಕರ ನಂಬರ್ ಸಿಕ್ಕಿತು, ನಾನು ಒಬ್ಬರೊಟ್ಟಿಗೆ ಮಾತನಾಡಿದಾಗ ನಿಮ್ಮ ‘ಪೋರ್ಟ್ ಫೋಲಿಯೊ’ ಕಳಿಸಿ ಎಂದರು. ಅದರಂತೆ ನಾನು ನನ್ನ ಚಿತ್ರಗಳನ್ನು ತೆಗೆಸಿಕೊಂಡು ಅವರಿಗೆ ಕಳಿಸಿದೆ. ಬಳಿಕ ಆ ವ್ಯಕ್ತಿ ಕರೆ ಮಾಡಿ, ‘ನೀವು ‘ಕಮಿಟ್ಮೆಂಟ್’ ಕೊಡುತ್ತೀರ ಎಂದು ಕೇಳಿದ, ಅದಕ್ಕೆ ನಾನು ನಟನೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದುಕೊಂಡು, ‘ಹೌದು ನಾನು ಬಹಳ ಕಮಿಟ್ಮೆಂಟ್ ಇರುವ ಯುವತಿ, ನಾನು ಪಾತ್ರಕ್ಕಾಗಿ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುತ್ತೇನೆ’ ಎಂದೆಲ್ಲ ಹೇಳಿದೆ ಎಂದಿದ್ದಾರೆ ಯುವತಿ.
ಬಳಿಕ ಆ ವ್ಯಕ್ತಿ ಮತ್ತೆ ಕರೆ ಮಾಡಿ, ಒಬ್ಬ ಜನಪ್ರಿಯ ನಿರ್ಮಾಪಕ ನಿಮ್ಮನ್ನು ಭೇಟಿ ಮಾಡಲು ರೆಡಿ ಆಗಿದ್ದಾರೆ, ರೆಸಾರ್ಟ್ ಒಂದರಲ್ಲಿ ನಿಮ್ಮ ಮೀಟಿಂಗ್ ಫಿಕ್ಸ್ ಮಾಡಿದ್ದೇನೆ, ನೀವು ಫ್ಲೈಟ್ ಹತ್ತಿ ಬಂದುಬಿಡಿ ಎಂದನಂತೆ. ಅಲ್ಲದೆ, ಪರೋಕ್ಷವಾಗಿ ನಿರ್ಮಾಪಕನ ಜೊತೆಗೆ ಸಮಯ ಕಳೆಯಬೇಕು ಎಂದು ಸಹ ಹೇಳಿದ್ದಾಗಿ ಯುವತಿ ಹೇಳಿಕೊಂಡಿದ್ದಾರೆ.ಯುವತಿಗೆ ಆತನ ಉದ್ಧೇಶ ಅರ್ಥ ಆಗುತ್ತಿದ್ದಂತೆ ಕಾಲ್ ಕಟ್ ಮಾಡಿ, ಆ ವ್ಯಕ್ತಿಯನ್ನು ಬ್ಲಾಕ್ ಮಾಡಿದರಂತೆ. ಬೇರೆ ಬೇರೆ ಸಂಖ್ಯೆಗಳಿಂದ ಆ ವ್ಯಕ್ತಿ ಮತ್ತೆ ಕರೆ ಮಾಡಿದಾಗಲೂ ಸಹ ಯುವತಿ ಬ್ಲಾಕ್ ಮಾಡಿದ್ದಾರೆ.
ಇದೀಗ ಯುವತಿಯ ವಿಡಿಯೋ ವೈರಲ್ ಆಗಿದೆ. ತೆಲುಗು ಚಿತ್ರರಂಗದ ನಟಿ ಜಾನ್ಸಿ ಸಹ ವಿಡಿಯೋಕ್ಕೆ ಕಮೆಂಟ್ ಮಾಡಿದ್ದು, ತೆಲುಗು ಚಿತ್ರರಂಗದ ಲೈಂಗಿಕ ದೌರ್ಜನ್ಯ ತಡೆ ಸಮಿತಿಗೆ ದೂರು ದಾಖಲಿಸುವಂತೆ ಸಲಹೆ ನೀಡಿದ್ದಾರೆ. ಜಾನ್ಹವಿ ಸಹ ಈ ಸಮಿತಿಯ ಸದಸ್ಯೆ ಆಗಿದ್ದು, ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಭರವಸೆಯನ್ನು ಯುವತಿಗೆ ನೀಡಿದ್ದಾರೆ. ಆದರೆ ಯುವತಿ ಯಾವುದೇ ದೂರು ನೀಡಿದ್ದು ವರದಿ ಆಗಿಲ್ಲ.
ಬೀದರ್, ಏಪ್ರಿಲ್ 03: ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಪೊಲೀಸ್ ಕಾನ್ಸ್ಟೇಬಲ್ ಕಾರು ಹರಿದಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ನಡೆದಿದೆ. ಅಪಘಾತದಲ್ಲಿ ಭಾಲ್ಕಿ ಪಟ್ಟಣದ ನಿವಾಸಿ ಜ್ಞಾನಬಾಯಿ(45) ಸ್ಥಿತಿ ಗಂಭೀರವಾಗಿದ್ದು, ಪಟ್ಟಣದ ರಸ್ತೆಯಲ್ಲಿ ಕಸ ಗುಡಿಸುತ್ತಿದ್ದ ವೇಳೆ ವೇಗವಾಗಿ ಬಂದ ಮೇಹಕರ್ ಪೊಲೀಸ್ ಠಾಣೆಯ ಪಿಸಿ ಉಮಾಕಾಂತ್ ಕಾರು ಮಹಿಳೆ ಮೇಲೆ ಹರಿದಿದೆ. ಗಂಭೀರ ಗಾಯಗೊಂಡ ಜ್ಞಾನಬಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಭಾಲ್ಕಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ಮತ್ತು ಸ್ಥಳದಲ್ಲಿದ್ದ ಬಾಲಕನ ಆಕ್ರಂದನದ ಕರುಳು ಹಿಂಡುವಂತಿರುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.