ಬೆಂಗಳೂರು, (ಜೂನ್ 10): ಬೆಂಗಳೂರಿನ ಕಸದ ಟೆಂಡರ್ನಲ್ಲಿ ಅಕ್ರಮವೆಸಗಲಾಗಿದೆ ಎಂದು ಆರೋಪಿಸಿ ಕರ್ನಾಟಕ ಬಿಜೆಪಿ ಆರೋಪ ಮಾಡಿದೆ. ಈ ಸಂಬಂಧ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಈಗಾಗಲೇ ರಾಜ್ಯಪಾಲರಿಗೆ ದೂರು ನೀಡಿದ್ದು, ಸಿಬಿಐ ತನಿಗೆ ಮನವಿ ಮಾಡಿದೆ. ಇದರ ಬೆನ್ನಲ್ಲೇ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಬಿಜೆಪಿ, ರಾಜ್ಯ ಸರ್ಕಾರದ ವಿರುದ್ಧ ಲೋಕಾಯುಕ್ತಕ್ಕೂ ದೂರು ನೀಡಿದೆ. 36 ಸಾವಿರ ಕೋಟಿ ರೂಪಾಯಿಯ ಬೆಂಗಳೂರು ಕಸದ ಟೆಂಡರ್ ನಲ್ಲಿ ಬರೋಬ್ಬರಿ 10 ಸಾವಿರ ಕೋಟಿ ರೂ. ಕಿಕ್ಬ್ಯಾಕ್ ಪಡೆಯಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಶಾಸಕ ಧೀರಜ್ ಮುನಿರಾಜು ದೂರು ನೀಡಿದ್ದು,ಅಕ್ರಮದ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ಪವನ್ ಕಲ್ಯಾಣ್ (Pawan Kalyan), ಸ್ಟಾರ್ ನಟರಾಗಿರುವ ಜೊತೆಗೆ ಆಂಧ್ರ ಪ್ರದೇಶ ಸರ್ಕಾರದ ಉಪ ಮುಖ್ಯಮಂತ್ರಿ ಸಹ ಹೌದು. ಹಲವು ಪ್ರಮುಖ ಖಾತೆಗಳನ್ನು ಅವರು ನಿಭಾಯಿಸುತ್ತಿದ್ದಾರೆ. ಇತ್ತೀಚೆಗೆ ನೆರೆ ತೆಲುಗು ರಾಜ್ಯವಾದ ತೆಲಂಗಾಣ ಸರ್ಕಾರ ಹಾಗೂ ಪವನ್ ಕಲ್ಯಾಣ್ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳು ಏರ್ಪಟ್ಟಿವೆ. ಇದೀಗ ಡಿಸಿಎಂ ಆದ ಬಳಿಕ ಪವನ್ ಕಲ್ಯಾಣ್ ಅವರು ಮೊದಲ ಬಾರಿಗೆ ಪಾಡ್ಕಾಸ್ಟ್ ಒಂದರಲ್ಲಿ ಭಾಗಿ ಆಗಿದ್ದಾರೆ. ಎಎನ್ಐ ನಡೆಸಿದ ಪಾಡ್ಕಾಸ್ಟ್ನಲ್ಲಿ ಭಾಗವಹಿಸಿದ್ದ ಪವನ್ ಕಲ್ಯಾಣ್, ತಮ್ಮಿಷ್ಟದ ಎರಡು ಹಿಂದಿ ಸಿನಿಮಾಗಳನ್ನು ಹೆಸರಿಸಿದ್ದಾರೆ.
ಪವನ್ ಕಲ್ಯಾಣ್ ಅವರು ಎಎನ್ಐ ಪಾಡ್ಕಾಸ್ಟ್ನಲ್ಲಿ ರಾಜಕೀಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದು, ಪಾಡ್ಕಾಸ್ಟ್ನ ಪ್ರೋಮೊ ಮಾತ್ರವೇ ಇದೀಗ ಬಿಡುಗಡೆ ಆಗಿದೆ. ಪಾಡ್ಕಾಸ್ಟ್ನ ಪ್ರೋಮೊನಲ್ಲಿ ತೋರಿಸಿರುವಂತೆ ಸಂದರ್ಶಕಿ, ಪವನ್ ಕಲ್ಯಾಣ್ ಅವರಿಗೆ ಇಷ್ಟದ ಸಿನಿಮಾಗಳ ಬಗ್ಗೆ ಪ್ರಶ್ನಿಸಿದ್ದಾರೆ. ವಿಶೇಷವಾಗಿ ಇತ್ತೀಚೆಗೆ ಇಷ್ಟವಾದ ಹಿಂದಿ ಸಿನಿಮಾಗಳು ಯಾವುವು ಎಂದು ಪ್ರಶ್ನೆ ಕೇಳಿದ್ದಾರೆ.
ಅದಕ್ಕೆ ಪವನ್ ಕಲ್ಯಾಣ್, ‘ನನಗೆ ‘ಧುರಂಧರ್’ ಸಿನಿಮಾ ಬಹಳ ಇಷ್ಟವಾಯ್ತು ಎಂದಿದ್ದಾರೆ. ಜೊತೆಗೆ ‘ಬಾರಾಮುಲ್ಲ’ ಹೆಸರಿನ ಹಿಂದಿ ಸಿನಿಮಾ ಸಹ ಬಹಳ ಇಷ್ಟವಾಯ್ತು ಎಂದಿದ್ದಾರೆ. ‘ಧುರಂಧರ್’ ಸಹಜವಾಗಿಯೇ ಬಹುತೇಕರಿಗೆ ಇಷ್ಟವಾದ ಸಿನಿಮಾ, ಖುದ್ದು ಪ್ರಧಾನಿ ಮೋದಿ ಅವರು ಸಹ ‘ಧುರಂಧರ್’ ಸಿನಿಮಾದ ಬಗ್ಗೆ ಪ್ರಶಂಸಿಸಿ ಮಾತನಾಡಿದ್ದರು. ಪವನ್ ಕಲ್ಯಾಣ್ ಅವರಿಗೂ ಆ ಸಿನಿಮಾ ಇಷ್ಟವಾಗಿದೆ.
‘ಬಾರಾಮುಲ್ಲ’ ಸಿನಿಮಾ ದೊಡ್ಡ ಹಿಟ್ ಸಿನಿಮಾ ಅಲ್ಲದಿದ್ದರೂ ಭಿನ್ನವಾದ ಹಾರರ್ ಸಿನಿಮಾ. ಹೆಸರೇ ಸೂಚಿಸುತ್ತಿರುವಂತೆ ಕಾಶ್ಮೀರದಲ್ಲಿ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಹಾರರ್ ಕತೆ ಹೊಂದಿರುವ ಜೊತೆಗೆ ಕಾಶ್ಮೀರದ ರಾಜಕೀಯ, ವಸ್ತುಸ್ಥಿತಿಯ ಮೇಲೆಯೂ ಬೆಳಕು ಚೆಲ್ಲುತ್ತದೆ. ವಿಶೇಷವೆಂದರೆ ಈ ಸಿನಿಮಾಕ್ಕೆ ಚಿತ್ರಕತೆ ಬರೆದಿರುವವರು ‘ಧುರಂಧರ್’ ನಿರ್ದೇಶಕ ಆದಿತ್ಯ ಧರ್. ಸಿನಿಮಾ ನಿರ್ದೇಶಿಸಿರುವುದು ಆದಿತ್ಯ ಸುಹಾಸ್.
ಇದೇ ಪಾಡ್ಕಾಸ್ಟ್ನಲ್ಲಿ ಪವನ್ ಕಲ್ಯಾಣ್ ಅವರು ತಾವು ಕಾಶ್ಮೀರದಲ್ಲಿ ಸಿನಿಮಾಗಳನ್ನು ಚಿತ್ರೀಕರಿಸುವಾಗ ಎದುರಿಸುತ್ತಿದ್ದ ಸಮಸ್ಯೆ, ಸ್ಥಳೀಯರಿಂದ ಎದುರಾಗುತ್ತಿದ್ದ ದೌರ್ಜನ್ಯಗಳನ್ನು ನೆನಪು ಮಾಡಿಕೊಂಡಿದ್ದಾರೆ. ಪಾಡ್ಕಾಸ್ಟ್ನಲ್ಲಿ ಅವರು ತಾವು ನಕ್ಸಲೈಟ್ ಆಗಬೇಕೆಂದು ಹೊರಟಿದ್ದಾಗಿಯೂ ಹೇಳಿಕೊಂಡಿದ್ದಾರೆ.
ಉಡುಪಿ, ಜೂನ್ 10: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಜೂನ್ 12 (ಶುಕ್ರವಾರ) ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕೆ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಕ್ಷೇತ್ರಕ್ಕೆ ಇದು ಅವರ ಮೊದಲ ಭೇಟಿಯಾಗಿದೆ. ಶುಕ್ರವಾರ ಮಧ್ಯಾಹ್ನ ಉಡುಪಿಗೆ ಆಗಮಿಸಲಿರುವ ವಿಜಯ್ ಅವರು, ಮಧ್ಯಾಹ್ನ 3 ಗಂಟೆಗೆ ಬೈಂದೂರು ತಾಲೂಕಿನಲ್ಲಿರುವ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ತಲುಪಲಿದ್ದಾರೆ. ದೇವಿಯ ದರ್ಶನ ಮತ್ತು ಪೂಜಾ ಕೈಂಕರ್ಯಗಳನ್ನು ಪೂರೈಸಿದ ನಂತರ, ಅಂದೇ ಸಂಜೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೆನ್ನೈಗೆ ವಾಪಸಾಗಲಿದ್ದಾರೆ.
ನವದೆಹಲಿ, ಜೂನ್ 10: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕರ ನಡುವಿನ ಬಂಡಾಯದಿಂದ ಮಮತಾ ಬ್ಯಾನರ್ಜಿ (Mamata Banerjee) ಪಕ್ಷವನ್ನು ಉಳಿಸಿಕೊಳ್ಳುವುದು ಹೇಗೆಂಬ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಧಿಕಾರದಿಂದ ದೂರ ಸರಿದಾಯಿತು, ಇದೀಗ ಪಕ್ಷವೂ ಕೈ ತಪ್ಪಿಹೋಗುತ್ತದೆಯೇ? ಎಂಬ ಆತಂಕದಲ್ಲಿ ದೀದಿ ಇದ್ದಾರೆ. ಇದರ ನಡುವೆ ದೆಹಲಿಯಲ್ಲಿ ‘ಕೈ’ ನಾಯಕರ ಜೊತೆ ಟಿಎಂಸಿ ನಾಯಕರ ಚರ್ಚೆ ನಡೆದಿದ್ದು, ನಿನ್ನೆ ಸೋನಿಯಾ ಗಾಂಧಿಯನ್ನು ಮಮತಾ ಬ್ಯಾನರ್ಜಿ ಭೇಟಿಯಾಗಿದ್ದರು. ಇಂದು ರಾಹುಲ್ ಗಾಂಧಿಯನ್ನು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಭೇಟಿಯಾಗಿದ್ದಾರೆ. ಈ ವೇಳೆ ಮಮತಾ ಬ್ಯಾನರ್ಜಿಗೆ ಎಐಸಿಸಿ ಉಪಾಧ್ಯಕ್ಷರ ಸ್ಥಾನದ ಆಫರ್ ನೀಡಲಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದಕ್ಕೆ ದೀದಿ ಒಪ್ಪಿದರೆ ಕಾಂಗ್ರೆಸ್ ಜೊತೆ ಟಿಎಂಸಿ ವಿಲೀನವಾಗಲಿದೆ.
ತೃಣಮೂಲ ಕಾಂಗ್ರೆಸ್ (TMC) ಪಕ್ಷದೊಳಗಿನ ತೀವ್ರ ಆಂತರಿಕ ಬಂಡಾಯ ಮತ್ತು ಸರಣಿ ರಾಜೀನಾಮೆಗಳ ಬೆನ್ನಲ್ಲೇ ದೇಶದ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಬಲ್ಲ ಅತ್ಯಂತ ಮಹತ್ವದ ಬೆಳವಣಿಗೆಯೊಂದು ವರದಿಯಾಗಿದೆ. ಕಾಂಗ್ರೆಸ್ನ ಉನ್ನತ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ನಡೆದ ರಹಸ್ಯ ಮಾತುಕತೆಯ ನಂತರ, ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಅತ್ಯುನ್ನತ ಹುದ್ದೆಗಳನ್ನು ಆಫರ್ ಮಾಡಲಾಗಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಶಾಸಕರು ಮತ್ತು ಸಂಸದರ ಸರಣಿ ಬಂಡಾಯದಿಂದಾಗಿ ಮಮತಾ ಬ್ಯಾನರ್ಜಿ ಅವರ ಹಿಡಿತ ಸಡಿಲಗೊಳ್ಳುತ್ತಿರುವ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ ಅನ್ನು ಮತ್ತೆ ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಳಿಸುವ ಅಥವಾ ಮೈತ್ರಿಯನ್ನು ಸಂಪೂರ್ಣವಾಗಿ ಪುನರ್ರಚಿಸುವ ನಿಟ್ಟಿನಲ್ಲಿ ತೆರೆಮರೆಯ ರಾಜಕೀಯ ಕಸರತ್ತುಗಳು ಆರಂಭವಾಗಿವೆ. ಕಾಂಗ್ರೆಸ್ ಉನ್ನತ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಸಳ ಹಾಗೂ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಟಿಎಂಸಿಯಲ್ಲಿ ಉಂಟಾಗಿರುವ ಬಿರುಕನ್ನು ಬಳಸಿಕೊಂಡು ಬಂಗಾಳದಲ್ಲಿ ಬಿಜೆಪಿಯ ಪ್ರಭಾವವನ್ನು ತಡೆಯಲು ಕಾಂಗ್ರೆಸ್ ಹೈಕಮಾಂಡ್ ಈ ಮಾಸ್ಟರ್ ಪ್ಲಾನ್ ರೂಪಿಸಿದೆ. ಮಾತುಕತೆಯ ವೇಳೆ ಕಾಂಗ್ರೆಸ್ ನಾಯಕರು ಕೆಲವು ಪ್ರಮುಖ ಪ್ರಸ್ತಾಪಗಳನ್ನು ಮಮತಾ ಬ್ಯಾನರ್ಜಿಯ ಮುಂದೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಮತಾ ಬ್ಯಾನರ್ಜಿ ಅವರನ್ನು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮೈತ್ರಿಕೂಟದ ಅಧ್ಯಕ್ಷರನ್ನಾಗಿ ಅಥವಾ ಎಐಸಿಸಿ (AICC) ಉನ್ನತ ನೀತಿ ನಿರೂಪಣಾ ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಲು ಆಫರ್ ನೀಡಲಾಗಿದೆ.
ಅಭಿಷೇಕ್ ಬ್ಯಾನರ್ಜಿ ಅವರಿಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯಲ್ಲಿ (AICC) ಅತ್ಯಂತ ಪ್ರಭಾವಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಅಥವಾ ಲೋಕಸಭೆಯಲ್ಲಿ ಪಕ್ಷದ ಪ್ರಮುಖ ಜವಾಬ್ದಾರಿಯನ್ನು ನೀಡುವ ಭರವಸೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ. ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ 58 ಶಾಸಕರು ಬಂಡಾಯ ಎದ್ದು ರಿತಬ್ರತ ಬ್ಯಾನರ್ಜಿ ಅವರನ್ನು ಬೆಂಬಲಿಸಿದ್ದು, ಸಂಸತ್ತಿನಲ್ಲಿ ಸುಖೇಂದು ಶೇಖರ್ ರಾಯ್ ಮತ್ತು ಸುಶ್ಮಿತಾ ದೇವ್ ಅವರಂತಹ ಹಿರಿಯ ನಾಯಕರು ರಾಜ್ಯಸಭೆಗೆ ರಾಜೀನಾಮೆ ನೀಡಿರುವುದು ಮಮತಾ ಬ್ಯಾನರ್ಜಿ ಅವರಿಗೆ ಶಾಕ್ ನೀಡಿದೆ.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಭ್ರಷ್ಟಾಚಾರದ ವಿರುದ್ಧ ಜನಾಭಿಪ್ರಾಯ ರೂಪಿಸಿ ಬಿಜೆಪಿ ಭಾರಿ ಯಶಸ್ಸು ಗಳಿಸುತ್ತಿರುವುದರಿಂದ, ಒಂಟಿಯಾಗಿ ಹೋರಾಡುವ ಬದಲು ಕಾಂಗ್ರೆಸ್ ಜೊತೆ ಶಕ್ತಿ ಮರುಸಂಗ್ರಹಿಸುವುದು ಮಮತಾ ಬ್ಯಾನರ್ಜಿಗೂ ಅನಿವಾರ್ಯ ಎನಿಸಿದೆ ಎನ್ನಲಾಗಿದೆ. ಮಮತಾ ಬ್ಯಾನರ್ಜಿ 1998ರಲ್ಲಿ ಕಾಂಗ್ರೆಸ್ ತೊರೆದು ಟಿಎಂಸಿ ಸ್ಥಾಪಿಸಿದ್ದರು. ಇದೀಗ ಸುಮಾರು 3 ದಶಕಗಳ ನಂತರ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಕಾಂಗ್ರೆಸ್ ಜೊತೆ ಕೈಜೋಡಿಸುವ ಸಾಧ್ಯತೆಯಿದೆ.
ಮೂಲಗಳ ಪ್ರಕಾರ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಈ ಬಂಪರ್ ಆಫರ್ ಕುರಿತು ಮಮತಾ ಬ್ಯಾನರ್ಜಿ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ತಮ್ಮ ಪಾಳಯದಲ್ಲಿ ಉಳಿದುಕೊಂಡಿರುವ ನಿಷ್ಠಾವಂತ ನಾಯಕರು ಹಾಗೂ ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿ, ಶೀಘ್ರದಲ್ಲೇ ಅವರು ತಮ್ಮ ಮುಂದಿನ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎಂದು ಟಿಎಂಸಿ ಆಪ್ತ ಮೂಲಗಳು ಸೂಚಿಸಿವೆ. ಒಂದು ವೇಳೆ ಈ ವಿಲೀನ ಅಥವಾ ಮೈತ್ರಿ ಯಶಸ್ವಿಯಾದರೆ, ಅದು ದೇಶದ ರಾಜಕಾರಣದ ದಿಕ್ಕನ್ನೇ ಬದಲಿಸಬಲ್ಲ ದಿಕ್ಸೂಚಿಯಾಗಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಜೂ.10: ರಾಜ್ಯದ ಆರೋಗ್ಯ ಸಚಿವ ಯುಟಿ ಖಾದರ್ ಅವರು ಚುರುಕಿನ ಕಾರ್ಯಕ್ಕೆ ಮುಂದಾಗಿದ್ದಾರೆ. ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ದೊಡ್ಡ ಬದಲಾವಣೆಗಳನ್ನು ತರಲು ಮುಂದಾಗಿದ್ದಾರೆ. ಸಾಮಾನ್ಯ ಜನರು ಕಷ್ಟಕ್ಕೆ ತಕ್ಷಣವೇ ಸ್ಪಂದನೆ ಸಿಗಬೇಕು ಹಾಗೂ ಯಾವುದೇ ವೈದ್ಯಕೀಯ ಕೊರತೆ ಬರಬಾರದು ಎಂದು ಅಧಿಕಾರ ವಹಿಸಿದ ಮರುದಿನವೇ ಕೆಲಸದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ದೀರ್ಘಕಾಲದಿಂದ ಕಾಡುತ್ತಿದ್ದ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಸಮಸ್ಯೆಗೆ ಮುಕ್ತಿ ಹಾಡಲು ಆರೋಗ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸತತ 5 ಗಂಟೆಗಳ ಸುದೀರ್ಘ ಮೊದಲ ಪರಾಮರ್ಶನಾ ಸಭೆಯಲ್ಲಿ ಇಲಾಖೆಯನ್ನು ತಳಮಟ್ಟದಿಂದ ಬಲಪಡಿಸಲು ದೊಡ್ಡ ಮಟ್ಟದ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ರಾಜ್ಯದಲ್ಲಿ ಸದ್ಯ ಒಟ್ಟು 1,280 ಎಂಬಿಬಿಎಸ್ ವೈದ್ಯರು, 924 ತಜ್ಞ ವೈದ್ಯರುಹಾಗೂ 892 ನರ್ಸ್ಗಳ ಕೊರತೆಯಿದೆ. ಈ ಪೈಕಿ 200 ವೈದ್ಯರನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷೆ ಮೂಲಕ ನೇರ ಹಾಗೂ ಖಾಯಂ ಆಗಿ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, ಇದಕ್ಕೆ ಈಗಾಗಲೇ ಆರ್ಥಿಕ ಇಲಾಖೆಯಿಂದ ಅನುಮೋದನೆ ಸಿಕ್ಕಿದೆ. ಪರೀಕ್ಷೆ ಮುಗಿದ ಕೇವಲ ಒಂದು ವಾರದೊಳಗೆ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದರೊಂದಿಗೆ ಕೆಇಎ ಮೂಲಕವೇ 400 ನರ್ಸ್ಗಳು, 400 ಫಾರ್ಮಸಿಸ್ಟ್ಗಳು ಹಾಗೂ 400 ಲ್ಯಾಬ್ ಟೆಕ್ನಿಷಿಯನ್ಗಳನ್ನು ಖಾಯಂ ಆಗಿ ಭರ್ತಿ ಮಾಡಿಕೊಳ್ಳಲಾಗುವುದು ಎಂದುನ ಹೇಳಿದ್ದಾರೆ.
1,000 ವೈದ್ಯರ ‘ವಾಕ್-ಇನ್ ಇಂಟರ್ವ್ಯೂ’ ಗುತ್ತಿಗೆ ನೇಮಕ:
ಉಳಿದ 1,000 ವೈದ್ಯರ ಹುದ್ದೆಗಳನ್ನು ತುಂಬಲು ತಕ್ಷಣವೇ ಜಿಲ್ಲಾ ಆರೋಗ್ಯಾಧಿಕಾರಿಗಳ (DHO) ಮಟ್ಟದಲ್ಲಿ ‘ವಾಕ್-ಇನ್ ಇಂಟರ್ವ್ಯೂ’ ನಡೆಸಲಾಗುವುದು. ಆಸಕ್ತರು ನೇರವಾಗಿ ಡಿಎಚ್ಒಗಳಿಗೆ ಅರ್ಜಿ ಸಲ್ಲಿಸಿ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಬಹುದು. ಇವರಿಗೆ ಪ್ರತಿ ತಿಂಗಳು 1,10,000 ರೂಪಾಯಿ ಗೌರವಧನ ನೀಡಲಾಗುವುದು. ಗುತ್ತಿಗೆ ಆಧಾರದಲ್ಲಿ ಕನಿಷ್ಠ 5 ವರ್ಷಗಳ ಕಾಲ ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಉತ್ತಮ ಸೇವೆ ಸಲ್ಲಿಸುವ ವೈದ್ಯರ ಸಾಧನೆಯನ್ನು ಪರಿಗಣಿಸಿ, ಮುಂದೆ ಅವರನ್ನು ಖಾಯಂ ಮಾಡಿಕೊಳ್ಳುವ ಭರವಸೆಯನ್ನು ಸಚಿವರು ನೀಡಿದ್ದಾರೆ. ಜೊತೆಗೆ ಇವರಿಗೆ ಉನ್ನತ ಶಿಕ್ಷಣದಲ್ಲಿ ವಿಶೇಷ ಅವಕಾಶ ಕಲ್ಪಿಸಿಕೊಡಲಾಗುವುದು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಯು.ಟಿ. ಖಾದರ್, “ನಗರ ಪ್ರದೇಶಗಳಲ್ಲಿ ವೈದ್ಯರಿದ್ದರೂ ಗ್ರಾಮೀಣ ಭಾಗದಲ್ಲಿ ತೀವ್ರ ಕೊರತೆಯಿದೆ. ಇವತ್ತಿನ ನಮ್ಮ ಇಲಾಖೆಯ ಶ್ರಮದಿಂದ ಶೇ. 80 ರಷ್ಟು ಆರೋಗ್ಯ ಸೇವೆಗಳು ಜನರಿಗೆ ಲಭ್ಯವಾಗುತ್ತಿವೆ. ಇನ್ನು ದೇಶದಲ್ಲಿ ಔಷಧಿಗಳ ದರ ಹೆಚ್ಚಳವಾಗುತ್ತಿರುವ ವಿಚಾರವಾಗಿ ನಾನು ವೈಯಕ್ತಿಕವಾಗಿ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ಸಾರ್ವಜನಿಕರ ಹಿತದೃಷ್ಟಿಯಿಂದ ದರ ಹೆಚ್ಚಿಸದಂತೆ ಮನವಿ ಮಾಡಲಿದ್ದೇನೆ” ಎಂದರು.
ಔಷಧಿಗಳ ಮರುಪರಿಶೀಲನೆ ಹಾಗೂ ಹೊಸ ಟೆಂಡರ್:
ಸರ್ಕಾರಿ ಉಗ್ರಾಣಗಳಿಗೆ (Warehouse) ಬರುವ ಔಷಧಿಗಳ ಗುಣಮಟ್ಟವನ್ನು ಮತ್ತೊಮ್ಮೆ ಕಡ್ಡಾಯವಾಗಿ ಮರುಪರಿಶೀಲನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈಗಾಗಲೇ 81 ಅತ್ಯಗತ್ಯ ಔಷಧಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ‘ಆರೋಗ್ಯ ಸುರಕ್ಷಾ ಸಮಿತಿ’ಯ ಮೂಲಕ ನೇರವಾಗಿ ಔಷಧಿಗಳನ್ನು ಖರೀದಿಸಲು ಇಲಾಖೆ ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ.
ಬೆಂಗಳೂರು, (ಜೂನ್ 10): ಕರ್ನಾಟಕದಲ್ಲಿ ಮುಂಗಾರು ಮಳೆಯ (Karnataka Monson Rain) ಅಬ್ಬರ ಜೋರಾಗಿದ್ದು, ಮುಂದಿನ ಐದು ದಿನಗಳ ಕಾಲ ವರಣು ಅಬ್ಬರ ಮುಂದುವರೆಯಲಿದೆ. ಇಂದಿನಿಂದ ಅಂದರೆ ಜೂನ್ 10ರಿಂದ ಜೂನ್ 14 ರವರೆಗೆ ರಾಜ್ಯಾದ್ಯಂತ ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾದಾರಣ ಹಾಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಲ್ಲೂ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮುಖ್ಯಾಂಶಗಳು
ಕರ್ನಾಟಕದಲ್ಲಿ ಚುರುಕುಕೊಂಡ ಮುಂಗಾರು ಮಳೆ
ಮುಂದಿನ ಐದು ದಿನಗಳ ಕಾಲ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಮಳೆ
ಕರಾವಳಿ, ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲೂ ಮಳೆ
ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ನೀಡಿದ ಹವಾಮಾನ ಇಲಾಖೆ
5 ದಿನಗಳ ಕಾಲ ರಾಜ್ಯಾದ್ಯಂತ ಜೋರು ಮಳೆ
ಕರ್ನಾಟಕದಲ್ಲಿ ಮುಂದಿನ ಐದು ದಿನಗಳ ಕಾಲ ರಾಜ್ಯಾದ್ಯಂತ ಜೋರು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದ್ದು, ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಸಾಧಾರಣದಿಂದ ಭಾರೀ ಮಳೆಯಾಗಲಿದೆ ಎಂದು ತಿಳಿಸಿದ್ದು, ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ವಿಶೇಷವಾಗಿ, ಕಲಬುರಗಿ, ಬೀದರ್, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಮಳೆ ಅಬ್ಬರ ಹೆಚ್ಚಿರಲಿದ್ದು, ಈ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಗಾಳಿಯು ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬೀಸುವ ಸಾಧ್ಯತೆಯಿದೆ.
— Karnataka State Natural Disaster Monitoring Centre (@KarnatakaSNDMC) June 10, 2026
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ತಂಪಾದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ., 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಗರಿಷ್ಠ ತಾಪಮಾನವು ಸುಮಾರು 30 ಹಾಗೂ ಕನಿಷ್ಠ 21 ಡಿಗ್ರಿ ಆಸುಪಾಸಿನಲ್ಲಿ ಇರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಚರ್ಚೆಗೆ ಗ್ರಾಸವಾದ ಬಿಎಂಟಿಸಿ ನಿರ್ವಾಹಕನ ನಡೆImage Credit source: Bengaluru Civic X Account
ಬೆಂಗಳೂರು, ಜೂನ್ 10: ಶಕ್ತಿ ಯೋಜನೆ ಮತ್ತು ಯುಪಿಐ ಆಧಾರಿತ ಟಿಕೆಟ್ ದುರ್ಬಳಕೆ ಆರೋಪಗಳು ಕೇಳಿಬರುತ್ತಿರುವ ನಡುವೆಯೇ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ನಿರ್ವಾಹಕರೊಬ್ಬರು ಟಿಕೆಟ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಶಂಕೆ ಮೂಡಿಸುತ್ತಿರುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೊದಲ್ಲಿ ಬಿಎಂಟಿಸಿ ನಿರ್ವಾಹಕರು ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರದಿಂದ ಮೇಲಿಂದ ಮೇಲೆ ಟಿಕೆಟ್ಗಳನ್ನು ಮುದ್ರಿಸುತ್ತಿರುವುದು ಕಂಡುಬಂದಿದೆ. ಆದರೆ ಅವುಗಳನ್ನು ಯಾವುದೇ ಪ್ರಯಾಣಿಕರಿಗೆ ಅವರು ನೀಡುತ್ತಿಲ್ಲ ಎಂಬುದನ್ನೂ ಸ್ಪಷ್ಟವಾಗಿ ಗಮನಿಸಬಹುದಾಗಿದೆ.
ಚರ್ಚೆಗೆ ಗ್ರಾಸವಾದ ನಿರ್ವಾಹಕನ ನಡೆ
I observed this suspicious behaviour of generating random tickets by conductor today… @BMTC_BENGALURU should take close look into this matter, this happen near near Kamakya at 10.01am. It happens in almost all buses. This is 410FG.If the bus skipped dedicated starting point.1/2 pic.twitter.com/Jl0BP4jCd6
ಬೆಂಗಳೂರು ಸಿವಿಕ್ ಎಂಬ ಹೆಸರಿನ ಬಳಕೆದಾರರು ಎಕ್ಸ್ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಈ ವಿಚಾರವನ್ನು ಬಿಎಂಟಿಸಿ ಗಂಭೀರವಾಗಿ ಪರಿಶೀಲಿಸಬೇಕು ಎಂದು ಬರೆದುಕೊಂಡಿದ್ದಾರೆ. ಅವರ ಪ್ರಕಾರ, ಈ ಘಟನೆ ದಕ್ಷಿಣ ಬೆಂಗಳೂರಿನ ಕಾಮಾಕ್ಯ ಸಮೀಪ ನಡೆದಿದೆ. ಇದೇ ರೀತಿ ಬಹುತೇಕ ಎಲ್ಲಾ ಬಸ್ಗಳಲ್ಲೂ ನಡೆಯುತ್ತದೆ ಎಂದೂ ಅವರು ಆರೋಪಿಸಿದ್ದಾರೆ.
ಜೂನ್ 9ರಂದು ಮತ್ತೊಂದು ಪೋಸ್ಟ್ನಲ್ಲಿ ಅವರು, ನಾಗರಭಾವಿಯಿಂದ ಕತ್ರಿಗುಪ್ಪೆಯವರೆಗೆ ಶಕ್ತಿ ಯೋಜನೆಯಡಿ ಐದು ಟಿಕೆಟ್ಗಳನ್ನು ಸೃಷ್ಟಿಸಲಾಗಿದೆ. ಅಂದರೆ ಸುಮಾರು 90 ಮೌಲ್ಯದ ಟಿಕೆಟ್ಗಳು. ಇದೇ ರೀತಿ ಬೇರೆ ನಿಲ್ದಾಣಗಳಲ್ಲಿಯೂ ಟಿಕೆಟ್ಗಳನ್ನು ಮುದ್ರಿಸಲಾಗುತ್ತಿತ್ತು. ನಾನು ವಿಡಿಯೊ ಸೆರೆಹಿಡಿದಾಗ ಬಸ್ ಖಾಲಿಯಾಗಿತ್ತು ಎಂದು ವಿವರಿಸಿದ್ದಾರೆ. ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ ಬಿಎಂಟಿಸಿ, ಅಗತ್ಯ ಕ್ರಮಕ್ಕಾಗಿ ಟಿಕೆಟ್ ಅಥವಾ ವಾಹನದ ವಿವರಗಳ ಜೊತೆಗೆ ಘಟನೆ ನಡೆದ ದಿನಾಂಕ ಮತ್ತು ಸಮಯವನ್ನು ಹಂಚಿಕೊಳ್ಳುವಂತೆ ಬಳಕೆದಾರರನ್ನು ಕೋರಿದೆ. ಇದಕ್ಕೆ ಪ್ರತಿಯಾಗಿ ಬಳಕೆದಾರರು ಕತ್ರಿಗುಪ್ಪೆಯಿಂದ ಬನಶಂಕರಿವರೆಗೆ ಪ್ರಯಾಣಿಸಿದ್ದ ತಮ್ಮ ಟಿಕೆಟ್ ಪ್ರತಿಯನ್ನು ಹಂಚಿಕೊಂಡಿದ್ದಾರೆ.
ಪರ-ವಿರೋಧ ಚರ್ಚೆ
ಈ ಪೋಸ್ಟ್ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ಶುರುವಾಗಿದೆ. ಕೆಲವರು ನಿರ್ವಾಹಕರ ಪರವಾಗಿ ವಾದಿಸಿ, ವಿಡಿಯೋದಲ್ಲಿನ ಚಟುವಟಿಕೆಗೆ ಬೇರೆ ಕಾರಣಗಳಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ನಿರ್ವಾಹಕರಿಗೆ ಏನು ಲಾಭ? ಅಂತಿಮ ಲೆಕ್ಕದಲ್ಲಿ ಹಣ ಹೊಂದಿಕೆಯಾಗದಿದ್ದರೆ ಅವರೇ ತಮ್ಮ ಜೇಬಿನಿಂದ ಪಾವತಿಸಬೇಕಾಗುತ್ತದೆ ಎಂದು ಒಬ್ಬರು ತಿಳಿಸಿದ್ದಾರೆ. ಇನ್ನೊಬ್ಬ ಬಳಕೆದಾರ, ಈ ಹೆಚ್ಚುವರಿ ಟಿಕೆಟ್ ಆದಾಯ ಬಿಎಂಟಿಸಿ ಖಾತೆಗೆ ಹೋಗುತ್ತದೆ, ನಿರ್ವಾಹಕರಿಗೆ ಅಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇದರಲ್ಲಿ ವಂಚನೆ ಏನು ಎನ್ನುವುದು ಅರ್ಥವಾಗುತ್ತಿಲ್ಲ. ಅಂತಿಮ ಲೆಕ್ಕದಲ್ಲಿ ನಷ್ಟವಾದರೆ ನಿರ್ವಾಹಕರೇ ಭರಿಸಬೇಕಾಗುತ್ತದೆ. ಇದು ಅತಿರಂಜಿತ ಆರೋಪದಂತೆ ಕಾಣುತ್ತದೆ ಎಂದು ಅಭಿಪ್ರಾಯಪಟ್ಟಿರೋದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ದಕ್ಷಿಣ ಭಾರತ ಹಾಗೂ ಬಾಲಿವುಡ್ನಲ್ಲಿ ಖ್ಯಾತಿ ಹೊಂದಿರುವ ನಟ ನಟ ಆರ್. ಮಾಧವನ್ (R Madhavan) ಅವರು ಇತ್ತೀಚಿನ ಸ್ಪೈ ಥ್ರಿಲ್ಲರ್ ‘ಧುರಂಧರ್’ ಚಿತ್ರದ ಭರ್ಜರಿ ಯಶಸ್ಸಿನ ಅಲೆಯಲ್ಲಿದ್ದಾರೆ. ಆದರೆ, ಚಾಕೊಲೇಟ್ ಬಾಯ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಾಧವನ್ ಅವರ ಸ್ಟಾರ್ಡಮ್ ಜರ್ನಿ ಅಷ್ಟು ಸುಲಭವಾಗಿರಲಿಲ್ಲ. ತಮ್ಮ ಆರಂಭಿಕ ದಿನಗಳಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರನ್ನು ನಕಲು ಮಾಡಲು ಹೋಗಿ ಅನುಭವಿಸಿದ ಕಹಿ ನೆನಪೊಂದನ್ನು ಅವರು ಈಗ ಹಂಚಿಕೊಂಡಿದ್ದಾರೆ.
ಮಣಿ ರತ್ನಂ ನಿರ್ದೇಶನದ ‘ಅಲೈ ಪಾಯುತೇ’ ಸಿನಿಮಾ ಸೂಪರ್ ಹಿಟ್ ಆದ ನಂತರ, ಚಿತ್ರರಂಗದ ಕೆಲವರು ಮಾಧವನ್ ಅವರಿಗೆ ಒಂದು ಸಲಹೆ ನೀಡಿದ್ದರು. ‘ನೀನು ಕೇವಲ ಸಿಟಿ ಪ್ರೇಕ್ಷಕರಿಗೆ ಮಾತ್ರ ನಟನಾದರೆ ಸಾಲದು. ರಜನಿಕಾಂತ್ ಅವರಂತೆ ಸೂಪರ್ ಸ್ಟಾರ್ ಆಗಬೇಕೆಂದರೆ ಬಿ ಮತ್ತು ಸಿ ಸೆಂಟರ್ (ಹಳ್ಳಿ ಮತ್ತು ಸಣ್ಣ ಪಟ್ಟಣಗಳ) ಪ್ರೇಕ್ಷಕರನ್ನು ತಲುಪಬೇಕು. ಹಳ್ಳಿಯ ಜನ ನಿನ್ನನ್ನು ಥಲೈವಾ ಎಂದು ಕರೆಯುವಂತಹ ಸಿನಿಮಾಗಳನ್ನು ಮಾಡು’ ಎಂದು ಸಲಹೆ ನೀಡಿದ್ದರು.
ಈ ಸಲಹೆಯಿಂದ ಪ್ರಭಾವಿತರಾದ ಮಾಧವನ್, ಹಳ್ಳಿ ಜನರಿಗೆ ಕನೆಕ್ಟ್ ಆಗುವಂತಹ ಕಥೆಯೊಂದನ್ನು ಒಪ್ಪಿಕೊಂಡರು. ಆ ಸಿನಿಮಾದಲ್ಲಿ ಅವರು ಊಟಕ್ಕೂ ಕಷ್ಟಪಡುವ, ಓದದೆ ಇರುವ, ಆದರೆ ಕ್ರಿಕೆಟರ್ ಆಗಬೇಕೆಂಬ ಕನಸು ಕಾಣುವ ಬಡ ಯುವಕನ ಪಾತ್ರ ಮಾಡಿದ್ದರು. ಆದರೆ ಆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಎಷ್ಟು ಭೀಕರವಾಗಿ ಸೋತಿತು ಎಂದರೆ, ಆ ಚಿತ್ರವನ್ನು ನಿರ್ಮಿಸಿದ ಇಡೀ ಸ್ಟುಡಿಯೋವೇ ಆರ್ಥಿಕ ನಷ್ಟದಿಂದಾಗಿ ಮುಚ್ಚಿಹೋಯಿತು!
ಈ ಸೋಲಿನ ಬಗ್ಗೆ ಮಾತನಾಡಿದ ಮಾಧವನ್, ‘ಆಗ ನನಗೆ ಒಂದು ದೊಡ್ಡ ಪಾಠ ಕಲಿತಂತಾಯಿತು. ಬೇರೆಯವರು ನೀಡುವ ಸಲಹೆಯನ್ನು ನಾವು ಕುರುಡಾಗಿ ನಂಬಬಾರದು. ಎಲ್ಲರ ಬಳಿಯೂ ಮಾಹಿತಿ ಇರುತ್ತದೆ, ಆದರೆ ಅದನ್ನು ನಾವು ಹೇಗೆ ಅರ್ಥೈಸಿಕೊಳ್ಳುತ್ತೇವೆ ಮತ್ತು ನಮ್ಮ ಸ್ವಂತ ವಿವೇಚನೆಗೆ ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ’ ಎಂದಿದ್ದಾರೆ.
‘ಅವರು ನೀಡಿದ ಸಲಹೆ ತಪ್ಪಾಗಿರಲಿಲ್ಲ, ಆದರೆ ನಾನು ಅದನ್ನು ಅರ್ಥ ಮಾಡಿಕೊಂಡ ರೀತಿ ತಪ್ಪಾಗಿತ್ತು. ರಜನಿಕಾಂತ್ ಅವರ ಸೂತ್ರವನ್ನು ಹಾಗೆಯೇ ಕಾಪಿ ಮಾಡುವ ಬದಲು, ನನ್ನದೇ ಆದ ಶೈಲಿಯಲ್ಲಿ ಬಿ ಮತ್ತು ಸಿ ಸೆಂಟರ್ ಪ್ರೇಕ್ಷಕರನ್ನು ತಲುಪಬೇಕಿತ್ತು. ಆ ಚಿತ್ರ ನನ್ನ ಪಾಲಿಗೆ ದೊಡ್ಡ ಮುಖಭಂಗದಂತಾಗಿತ್ತು. ಆದರೆ ಮುಂದಿನ ಹಾದಿಗೆ ಒಳ್ಳೆಯ ಪಾಠ ಕಲಿಸಿತು’ ಎಂದು ಮಾಧವನ್ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ನಟಿ ಆಲಿಯಾ ಭಟ್ ಅವರು ಸ್ಟಾರ್ ಕಿಡ್ ಆಗಿರಬಹುದು, ಆದರೆ, ತಮ್ಮನ್ನು ತಾವು ಸ್ಟಾರ್ ಕಿಡ್ ರೀತಿ ತೋರಿಸಿಕೊಂಡಿಲ್ಲ. ಅವರು ಕೇವಲ ಪಕ್ಕದ ಮನೆ ಹುಡುಗಿ ಪಾತ್ರ ಮಾಡದೆ, ಆ್ಯಕ್ಷನ್ ಸಿನಿಮಾಗಳ ಮೂಲಕವೂ ಮಿಂಚುತ್ತಾರೆ. ಸಾಕಷ್ಟು ಶ್ರಮ ಹಾಕಿ ಈ ಹಂತಕ್ಕೆ ಬಂದಿದ್ದಾರೆ. ಈಗ ಇದಕ್ಕೆ ಹೊಸ ಸೇರ್ಪಡೆ ‘ಆಲ್ಫಾ’. ಈ ಮಹಿಳಾ ಪ್ರಧಾನ ಸಿನಿಮಾದ ಟೀಸರ್ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ.
ಯಶ್ ರಾಜ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಸ್ಪೈ ಯೂನಿವರ್ಸ್ ರಚನೆ ಮಾಡಿದೆ. ಇದರ ಅಡಿಯಲ್ಲಿ‘ವಾರ್ 2’ ಸಿನಿಮಾ ರಿಲೀಸ್ ಆಗಿತ್ತು. ಈ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ‘ಆಲ್ಫಾ’ ಸಿನಿಮಾ ಬರಲಿದೆ ಎಂಬ ಸೂಚನೆ ನೀಡಲಾಗಿತ್ತು. ಈಗ ಟೀಸರ್ ಅನಾವರಣ ಮಾಡುವ ಮೂಲಕ ಆಲಿಯಾ ಭಟ್ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಲಾಗಿದೆ.
ಬಾಬಿ ಡಿಯೋಲ್ ಹಾಗೂ ಆಲಿಯಾ ಭಟ್ ತಂದೆ-ಮಗಳ ಪಾತ್ರ ಮಾಡಿದ್ದಾರೆ. ಆಲಿಯಾ 18ನೇ ವಯಸ್ಸಿಗೆ ಕಾಲಿಡುತ್ತಿದ್ದಂತೆ ಬಾಬಿ ಡಿಯೋಲ್ ಪಾರ್ಟಿ ನೀಡುತ್ತಾರೆ. ಇಷ್ಟು ವರ್ಷ ನಡೆಸಿದ ಸಿದ್ಧತೆಯ ಕಾರಣ ಏನು ಎಂಬುದು ಅಲ್ಲಿ ರಿವೀಲ್ ಆಗುತ್ತದೆ. ಮಿಷನ್ ಒಂದಕ್ಕಾಗಿ ಆಲಿಯಾ ಅವರನ್ನ ಬಾಬಿ ಈ ರೀತಿ ಸಿದ್ಧ ಮಾಡಿರುತ್ತಾರೆ.
‘ಈ ಜಗತ್ತಲ್ಲಿ ಕುರಿ ಹಾಗೂ ನರಿ ಎರಡೇ ರೀತಿಯ ಜನ ಇರುತ್ತಾರೆ. ನಾನು ನರಿ. ನಿನ್ನದು ಯಾವ ವರ್ಗ’ ಎಂದು ಆಲಿಯಾಗೆ ಬಾಬಿ ಕೇಳುತ್ತಾರೆ. ಇದಕ್ಕೆ ನೇರವಾಗಿ ಉತ್ತರಿಸೋ ಆಲಿಯಾ, ‘ನರಿಯ ಮಗಳು ನರಿಯೇ ಆಗಿರುತ್ತಾಳೆ’ ಎನ್ನುತ್ತಾರೆ.
ಟೀಸರ್ ಉದ್ದಕ್ಕೂ ಆಲಿಯಾ ಆ್ಯಕ್ಷನ್ ಮೆರೆದಿದ್ದಾರೆ. ಆಲ್ಫಾ ಅನ್ನೋದು ಸೀಕ್ರೇಟ್ ಮಿಷನ್ ಎಂಬ ರೀತಿಯಲ್ಲಿ ಟೀಸರ್ ತೋರಿಸಲಾಗಿದೆ. ವಿಶೇಷ ಎಂದರೆ ಜುಲೈ 3ರಂದು ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ. ಶಿವ್ ರವೈಲ್ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ಉಂಡ ಮನೆಗೇ ಕನ್ನ ಹಾಕಿದ್ದ ದಂಪತಿ ಬಂಧನImage Credit source: The Times Of India
ಬೆಂಗಳೂರು, ಜೂನ್ 10: ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದ ಮನೆಗೇ ಕನ್ನ ಹಾಕಿದ್ದ ನೇಪಾಳಿ ದಂಪತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಬಂಧಿತರನ್ನು ಭುವನ್ ಬಿಸ್ತಾ ಅಲಿಯಾಸ್ ಪವನ್ ಬಿಸ್ತಾ (35) ಹಾಗೂ ಅವರ ಪತ್ನಿ ಸೀತಾ ಬಿಸ್ತಾ (33) ಎಂದು ಗುರುತಿಸಲಾಗಿದೆ. ಗುತ್ತಿಗೆದಾರರೊಬ್ಬರ ಮನೆಯಲ್ಲಿ ಗೃಹ ಸಹಾಯಕರು ಹಾಗೂ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಈ ದಂಪತಿ 25 ಲಕ್ಷ ನಗದು ಕದ್ದು ಪರಾರಿಯಾಗಿದ್ದರು. ಪ್ರಕರಣದ ಬೆನ್ನುಬಿದ್ದ ಪೊಲೀಸರು ಕೇವಲ ಒಂದೇ ದಿನದಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ್ದು, ಕಳುವಾಗಿದ್ದ ಸಂಪೂರ್ಣ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಹಣ ಕದ್ದು ಎಸ್ಕೇಪ್ ಆಗಿದ್ದ ಆರೋಪಿಗಳು
ಅರ್ಕಾವತಿ ಲೇಔಟ್ ನಿವಾಸಿ ಹಾಗೂ ಗುತ್ತಿಗೆದಾರ ಸಿ.ಎಚ್. ಸುಬ್ಬಾರೆಡ್ಡಿ ಅವರು ಕಾರ್ಮಿಕರಿಗೆ ವೇತನ ಪಾವತಿಸಲು ಇತ್ತೀಚೆಗೆ ಬ್ಯಾಂಕಿನಿಂದ ತಂದ 25 ಲಕ್ಷ ಹಣವನ್ನು ಮನೆಯ ಕಪಾಟಿನಲ್ಲಿ ಇಟ್ಟು ಬೀಗ ಹಾಕಿದ್ದರು. ಬಳಿಕ ಕಪಾಟಿನ ಕೀಲಿಯನ್ನು ಮತ್ತೊಂದು ಕಪಾಟಿನಲ್ಲಿದ್ದ ಬಟ್ಟೆಗಳ ಕೆಳಗೆ ಅಡಗಿಸಿಟ್ಟಿದ್ದರು. ಈ ನಡುವೆ ಮೇ 27ರಂದು ಸುಬ್ಬಾರೆಡ್ಡಿ ಅವರು ವೈಯಕ್ತಿಕ ಕೆಲಸಕ್ಕಾಗಿ ಹೊರಗೆ ಹೋಗಿದ್ದರೆ, ಅವರ ಪತ್ನಿ ಮನೆಯಲ್ಲಿದ್ದರು. ಸಂಜೆ ಮನೆಗೆ ಮರಳಿದಾಗ ಕೆಲಸಕ್ಕಿದ್ದ ದಂಪತಿ ಕಾಣೆಯಾಗಿದ್ದು, ಅವರಿಗೆ ನೀಡಲಾಗಿದ್ದ ಕೊಠಡಿ ತೆರೆದ ಸ್ಥಿತಿಯಲ್ಲಿರುವುದು ಗಮನಕ್ಕೆ ಬಂದಿತ್ತು. ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಮೊಬೈಲ್ ಫೋನ್ಗಳು ಸ್ವಿಚ್ ಆಫ್ ಆಗಿದ್ದವು. ಇದರಿಂದ ಅನುಮಾನಗೊಂಡ ಅವರು ಕಪಾಟು ಪರಿಶೀಲಿಸಿದಾಗ 25 ಲಕ್ಷ ನಗದು ಕಳುವಾಗಿರುವುದು ಬೆಳಕಿಗೆ ಬಂದಿತ್ತು.
ಈ ಸಂಬಂಧ ಮೇ 28ರಂದು ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದ ಸಿ.ಎಚ್. ಸುಬ್ಬಾರೆಡ್ಡಿ ಅವರು, ಕಳೆದ ಒಂದು ತಿಂಗಳಿಂದ ನೇಪಾಳ ಮೂಲದ ದಂಪತಿ ತಮ್ಮ ಮನೆಯಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಗೃಹ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು ಎಂಬುದನ್ನು ಉಲ್ಲೇಖಿಸಿದ್ದರು. ಕೂಡಲೇ ಪ್ರಕರಣ ದಾಖಲಿಸಿಕೊಂಡ ಅಮೃತಹಳ್ಳಿ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಇನ್ಸ್ಪೆಕ್ಟರ್ ಬಾಲಾಜಿ ವಿ ನೇತೃತ್ವದ ತಂಡಕ್ಕೆ ದೊರೆತ ಖಚಿತ ಮಾಹಿತಿಯ ಮೇರೆಗೆ ಮೇ 28ರಂದು ಕೆಂಗೇರಿ ಸ್ಯಾಟಲೈಟ್ ಟೌನ್ನ ಶಿರ್ಕೆ ಲೇಔಟ್ನಲ್ಲಿರುವ ಆರೋಪಿಗಳ ಸಂಬಂಧಿಕರ ಮನೆಯಲ್ಲಿ ದಾಳಿ ನಡೆಸಿ ದಂಪತಿಯನ್ನು ಬಂಧಿಸಲಾಗಿದೆ. ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಕಳ್ಳತನ ಎಸಗಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ದಂಪತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.