All posts by nagaraj11081993

Video: ಇದು ದೇಸಿ ಕ್ರೀಡೆಯ ಕರಾಮತ್ತು; ಸೀರೆಯುಟ್ಟ ನಾರಿಮಣಿಗಳ ಕಬಡ್ಡಿ ಆಟ ಹೇಗಿದೆ ನೋಡಿ – Kannada News

ಹಳ್ಳಿ ಬದುಕು (Village life) ನಿಜಕ್ಕೂ ಸುಂದರ. ನೆಮ್ಮದಿಯ ನಿದ್ರೆಗಾಗಿ ಒಂದು ಪುಟ್ಟ ಮನೆ. ಬದುಕಿಗಾಗಿ ಕೃಷಿ ಕಾಯಕ. ಬೀಜ ಬಿತ್ತಿ ಪೈರು ಬರುತ್ತಿದ್ದಂತೆ, ಕಟಾವು, ಹೀಗೆ ಬಿಡುವಿಲ್ಲದ ಕೃಷಿ ಕೆಲಸಗಳು. ವಿರಾಮದ ಸಮಯದಲ್ಲಿ ಊರ ಮಂದಿ ಜತೆಗೆ ಹರಟೆ, ಹೀಗೆ ಹಳ್ಳಿ ಜನರು ಪ್ರತಿಯೊಂದು ಕ್ಷಣವನ್ನು ಆನಂದಿಸುತ್ತಾರೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಇದೀಗ ಕೆಲಸದ ಒತ್ತಡವನ್ನು ಬದಿಗಿರಿಸಿ ಕಬಡ್ಡಿ (kabaddi) ಆಡೋದ್ರಲ್ಲಿ ಬ್ಯುಸಿಯಾಗಿರುವ ಹಳ್ಳಿಯ ಮಹಿಳಾಮಣಿಗಳ ವಿಡಿಯೋ ವೈರಲ್ ಆಗಿದೆ. ದೇಸಿ ಕ್ರೀಡೆಯನ್ನು ಎಂಜಾಯ್ ಮಾಡುತ್ತಿರುವ ಮಹಿಳಾಮಣಿಗಳಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಲೋಕ ಪಯಣ (loka payana) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಳ್ಳಿ ಬದುಕಿನ ಖುಷಿಯ ಕ್ಷಣವನ್ನು ತೆರೆದಿಟ್ಟಿದ್ದಾರೆ. ಹಳ್ಳಿಯ ನಾರಿಮಣಿಗಳು ತಮ್ಮ ಕೆಲಸದ ಒತ್ತಡಕ್ಕೆ ಬ್ರೇಕ್ ಹಾಕಿ ಕಬಡ್ಡಿ ಆಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಒಬ್ಬರಿಗೊಬ್ಬರು ಪೈಪೋಟಿ ನೀಡುವಂತೆ ಆಟವನ್ನು ಆಡುತ್ತಿರುವ ದೃಶ್ಯವನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತನ್ನನ್ನು ಕಾಳಜಿ ಮಾಡುವ ಜೀವಕೆ ಮುತ್ತು ನೀಡಿದ ಕರು; ಹೃದಯಸ್ಪರ್ಶಿ ದೃಶ್ಯ ವೈರಲ್‌

ಈ ವಿಡಿಯೋ ಅರವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಮ್ಮ ಹಳ್ಳಿಯ ಸೂಪರ್ ಪ್ರತಿಭೆಗಳು ಇವರು ಎಂದಿದ್ದಾರೆ. ಇನ್ನೊಬ್ಬರು, ಇವರಲ್ಲಿರೊ ನೆಮ್ಮದಿ ಸಂತೋಷ ಎಷ್ಟು ಶ್ರೀಮಂತನಿಗೂ ಸಿಗಲ್ಲ ಹಣ ಆಸ್ತಿ ಇದ್ದರೆ ಏನು ಮನಸಿಗೆ ನೆಮ್ಮದಿ ಸಂತೋಷ ಮುಖ್ಯ ಈ ವಿಡಿಯೋ ನನಗೆ ತುಂಬಾ ಇಷ್ಟ ಆಯ್ತು ಎಂದು ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರ, ನಾವೇನು ಯಾರಿಗೂ ಕಮ್ಮಿ ಇಲ್ಲ, ಸ್ಫೂರ್ತಿದಾಯಕ ವಿಡಿಯೋ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Shigella Infection: ಏನಿದು ಶಿಗೆಲ್ಲೋಸಿಸ್ ಸೋಂಕು? ಕೇರಳದಲ್ಲಿ ಹೊಸ ವೈರಲ್ ಸೋಂಕಿಗೆ ಜನ ಹೆದರುತ್ತಿರುವುದಕ್ಕೆ ಕಾರಣವೇನು? – Kannada News

ಕೇರಳದಲ್ಲಿ ಶಿಗೆಲ್ಲೋಸಿಸ್ (Shigellosis) ಎಂಬ ಅತಿಸಾರ ಸಂಬಂಧಿತ ಬ್ಯಾಕ್ಟೀರಿಯಾ ಸೋಂಕಿನ ಪ್ರಕರಣಗಳ ಜೊತೆಗೆ ವೆಸ್ಟ್ ನೈಲ್ ಜ್ವರ ಕೂಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹೆಚ್ಚಿನ ಎಚ್ಚರಿಕೆ ವಹಿಸಿದೆ. ಈ ಎರಡೂ ಕಾಯಿಲೆಗಳಿಗೆ ಪರಸ್ಪರ ಸಂಬಂಧವಿಲ್ಲವಾದರೂ ಜನರು ಜಾಗರೂಕರಾಗಿರಬೇಕು ಎಂದು ತಜ್ಞರು ಹೇಳಿದ್ದಾರೆ. ಅದರಲ್ಲಿಯೂ ಶಿಗೆಲ್ಲಾ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕು ಅತ್ಯಂತ ವೇಗವಾಗಿ ಹರಡುವ ಗುಣ ಹೊಂದಿದ್ದು ಕಲುಷಿತ ಆಹಾರ, ನೀರು ಹಾಗೂ ಅಸ್ವಚ್ಛತೆಯ ಮೂಲಕ ಸೋಂಕು ಹರಡಬಹುದಾಗಿದೆ. ಹಾಗಾಗಿ ಹೆಚ್ಚಿನ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ. ದಿ ಹಿಂದೂ ವರದಿ ಮಾಡಿರುವ ಪ್ರಕಾರ ಕೇರಳದಲ್ಲಿ ಜೂನ್ 7ರ ವರೆಗೆ 85 ಶಿಗೆಲ್ಲೋಸಿಸ್ ಪ್ರಕರಣಗಳು ದೃಢಪಟ್ಟಿದ್ದು 70ಕ್ಕೂ ಹೆಚ್ಚು ಶಂಕಿತ ಪ್ರಕರಣಗಳು ದಾಖಲಾಗಿವೆ. ವಯನಾಡು ಕೋಝಿಕ್ಕೋಡ್ ಅಲಪ್ಪುಝಾ, ಮಲಪ್ಪುರಂ ಜಿಲ್ಲೆಗಳಲ್ಲಿ ಸೋಂಕು ಹೆಚ್ಚು ಕಂಡುಬರುತ್ತಿದೆ. ವಯನಾಡಿನ ಮಾರ್ಬಾಸೆಲಿಯೋಸ್ ಶಾಲೆಯಲ್ಲಿ ಇಬ್ಬರು ಮಕ್ಕಳಲ್ಲಿ ಸೋಂಕು ದೃಢಪಟ್ಟಿದ್ದು, ಇನ್ನೂ ಕೆಲವರಿಗೆ ಸೋಂಕು ಇರುವ ಶಂಕೆ ವ್ಯಕ್ತವಾಗಿದೆ.

ಮಕ್ಕಳಿಗೆ ಹೆಚ್ಚಿನ ಅಪಾಯ:

ಆರೋಗ್ಯಕರ ವಯಸ್ಕರಲ್ಲಿ ಈ ಸೋಂಕು ಸಾಮಾನ್ಯವಾಗಿ ಸ್ವಯಂ ನಿಯಂತ್ರಿತವಾಗಿದ್ದರೂ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇದು ಅಪಾಯಕಾರಿಯಾಗಬಹುದು. ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೂ ಹೆಚ್ಚಿನ ಅಪಾಯವಿದೆ. ಈ ವರ್ಷ ಈಗಾಗಲೇ ಇಬ್ಬರು ಮಕ್ಕಳ ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಶಿಗೆಲ್ಲೋಸಿಸ್ ಲಕ್ಷಣಗಳು ಯಾವುವು?

ಸೋಂಕು ತಗುಲಿದ ಒಂದು ಅಥವಾ ಎರಡು ದಿನಗಳೊಳಗೆ ಲಕ್ಷಣಗಳು ಕಾಣಿಸಬಹುದು. ಮುಖ್ಯ ಲಕ್ಷಣಗಳು:

  • ಜ್ವರ
  • ಅತಿಸಾರ
  • ವಾಂತಿ
  • ವಾಕರಿಕೆ
  • ಮಲದಲ್ಲಿ ರಕ್ತ
  • ಹೊಟ್ಟೆನೋವು
  • ಪದೇ ಪದೇ ಶೌಚಕ್ಕೆ ಹೋಗಬೇಕು ಎನಿಸುವುದು

ತಡೆಗಟ್ಟಲು ಏನು ಮಾಡಬೇಕು?

ಆರೋಗ್ಯ ಇಲಾಖೆ ಕೈಗಳನ್ನು ಸಾಬೂನಿನಿಂದ ಕನಿಷ್ಠ 20 ಸೆಕೆಂಡುಗಳ ಕಾಲ ತೊಳೆಯುವುದು ಅತ್ಯಂತ ಮುಖ್ಯ ಎಂದು ತಿಳಿಸಿದೆ. ವಿಶೇಷವಾಗಿ ಊಟ ಮಾಡುವ ಮೊದಲು ಹಾಗೂ ಶೌಚಾಲಯ ಬಳಕೆ ನಂತರ ಸ್ವಚ್ಛತೆ ಕಾಪಾಡಬೇಕು. ಸೋಂಕಿತ ವ್ಯಕ್ತಿಗಳ ಬಟ್ಟೆ, ಪಾತ್ರೆ ಮತ್ತು ಹಾಸಿಗೆಗಳನ್ನು ಪ್ರತ್ಯೇಕವಾಗಿ ಬಳಸಬೇಕು. ಲಕ್ಷಣಗಳು ಕಡಿಮೆಯಾದ ಬಳಿಕವೂ ಕನಿಷ್ಠ ಎರಡು ವಾರಗಳ ಕಾಲ ಸಾರ್ವಜನಿಕ ಆಹಾರ ವಿತರಣೆ ಅಥವಾ ಹೋಟೆಲ್ ಆಹಾರವನ್ನು ತಪ್ಪಿಸುವುದು ಒಳಿತು. ಕುಡಿಯುವ ನೀರನ್ನು ಕಡ್ಡಾಯವಾಗಿ ಕುದಿಸಿ ಬಳಸಬೇಕು. ಬೇಯಿಸದ ಆಹಾರ ಮತ್ತು ನಿನ್ನೆ, ಮೊನ್ನೆ ಮಾಡಿಟ್ಟ ಆಹಾರ ಸೇವನೆ ಮಾಡುವುದನ್ನು ತಪ್ಪಿಸಬೇಕು, ಮನೆಯಲ್ಲೇ ತಯಾರಿಸಿದ ಆಹಾರ ಸೇವಿಸುವುದು ಉತ್ತಮ. ಮಳೆಗಾಲದಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಸಾರ್ವಜನಿಕರು ಹೆಚ್ಚಿನ ಜಾಗರೂಕತೆ ವಹಿಸಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನೆಯಲ್ಲೇ ಪ್ಯಾಕಿಂಗ್ ಕೆಲಸ ಅಂತ ನಂಬಿಸಿ 10 ಕೋಟಿ ರೂ. ಎಗರಿಸಿದ್ರು: ಹಾವೇರಿಯ ‘SLV ಮಹಿಳಾ ಮಾರ್ಟ್’ ಮಾಲೀಕರ ಮಹಾಮೋಸ – Kannada News

ಹಾವೇರಿ, ಜೂ.10: “ಮನೆಯಲ್ಲೇ ಕುಳಿತು ಕೈತುಂಬಾ ಸಂಪಾದಿಸಿ” ಎಂಬ ಆಕರ್ಷಕ ಜಾಹೀರಾತುಗಳನ್ನು ನಂಬಿದ ನೂರಾರು ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ಭಾರಿ ವಂಚನೆಯಾಗಿರುವ ಆಘಾತಕಾರಿ ಘಟನೆ ಹಾವೇರಿಯಲ್ಲಿ ಬೆಳಕಿಗೆ ಬಂದಿದೆ. ಹಾವೇರಿಯ ಅಶ್ವಿನಿ ನಗರದಲ್ಲಿರುವ ‘SLV ಮಹಿಳಾ ಮಾರ್ಟ್’ ಎಂಬ ಹೆಸರಿನ ಕಂಪನಿಯು ಸ್ವಯಂ ಉದ್ಯೋಗ ನೀಡುವ ಆಸೆ ತೋರಿಸಿ, ರಾಜ್ಯದ ಮೂಲೆ ಮೂಲೆಗಳಿಂದ ಬಂದ ಜನರಿಂದ ಬರೋಬ್ಬರಿ 5 ರಿಂದ 10 ಕೋಟಿ ರೂಪಾಯಿ ಹಣವನ್ನು ದೋಚಿ ರಾತ್ರೋರಾತ್ರಿ ಪರಾರಿಯಾಗಿದೆ.

ವಿನಾಯಕ ಆನ್ವೇರಿ ಹಾಗೂ ರಮ್ಯ ಎಂಬುವವರು ಈ SLV ಮಹಿಳಾ ಮಾರ್ಟ್ ಕಂಪನಿಯ ಮಾಲೀಕರಾಗಿದ್ದು, “ಮನೆಯಲ್ಲೇ ಕುಳಿತು ಅಗರಬತ್ತಿ, ಕಸಬರಗಿ (ರೊಟ್ಟಿ ಕಸಬರಗಿ) ಹಾಗೂ ಮೇಣದಬತ್ತಿಗಳನ್ನು ಪ್ಯಾಕ್ ಮಾಡುವ ಗೃಹ ಕೆಲಸ ನೀಡುತ್ತೇವೆ. ಇದಕ್ಕೆ ಲಕ್ಷ ಲಕ್ಷ ಬಂಡವಾಳ ಹೂಡಿಕೆ ಮಾಡಬೇಕು” ಎಂದು ಈ ವಂಚಕರು ನಂಬಿಸಿದ್ದರು. ಆರಂಭದ ಒಂದೆರಡು ತಿಂಗಳು ಹೂಡಿಕೆ ಮಾಡಿದವರಿಗೆ ಸರಿಯಾಗಿ ಹಣ ಹಾಗೂ ಕಮಿಷನ್ ನೀಡುವ ನಾಟಕವಾಡಿ ಸಾರ್ವಜನಿಕರಲ್ಲಿ ನಂಬಿಕೆ ಹುಟ್ಟಿಸಿದ್ದರು.

ಕಂಪನಿಯ ನಂಬಿಕೆ ಹೆಚ್ಚಾಗುತ್ತಿದ್ದಂತೆ ಹಾವೇರಿ ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದಲೂ ನೂರಾರು ಮಹಿಳೆಯರು ಲಕ್ಷಾಂತರ ರೂಪಾಯಿ ಹಣವನ್ನು ತಂದು ಹೂಡಿಕೆ ಮಾಡಿದ್ದಾರೆ. ಹೀಗೆ ಒಟ್ಟಾರೆ ಅಂದಾಜು 5 ರಿಂದ 10 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹವಾಗುತ್ತಿದ್ದಂತೆಯೇ ಮಾಲೀಕರಾದ ವಿನಾಯಕ ಮತ್ತು ರಮ್ಯ ಕಂಪನಿಗೆ ಬೀಗ ಜಡಿದು ರಾತ್ರೋರಾತ್ರಿ ನಾಪತ್ತೆಯಾಗಿದ್ದಾರೆ. ಇತ್ತ ತಾವು ಕಷ್ಟಪಟ್ಟು ಹೂಡಿಕೆ ಮಾಡಿದ ಅಸಲು ಹಣವೂ ಸಿಗದೆ, ಇತ್ತ ಕೆಲಸ ಮಾಡಿದ ಕೂಲಿಯೂ ಸಿಗದೆ ನೂರಾರು ಮಹಿಳೆಯರು ಬೀದಿಗೆ ಬಿದ್ದಿದ್ದಾರೆ.

ಇದನ್ನೂ ಓದಿ: ಐಶಾರಾಮಿ ಜೀವನಕ್ಕಾಗಿ ಉಂಡ ಮನೆಗೇ ಕನ್ನ: 25 ಲಕ್ಷ ಹಣ ಕದ್ದು ಜೈಲುಪಾಲಾದ ನೇಪಾಳಿ ದಂಪತಿ

ಹಣ ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ನೂರಾರು ಮಹಿಳೆಯರು ಹಾವೇರಿ ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ವಂಚಕ ಕಂಪನಿ ಹಾಗೂ ಅದರ ಮಾಲೀಕರ ವಿರುದ್ಧ ಅಧಿಕೃತ ದೂರು ದಾಖಲಿಸಿದ್ದಾರೆ. ಕಣ್ಣೀರು ಹಾಕುತ್ತಲೇ SLV ಮಹಿಳಾ ಮಾರ್ಟ್ ಕಂಪನಿಗೆ ಹಿಡಿಶಾಪ ಹಾಕುತ್ತಿರುವ ನೊಂದ ಮಹಿಳೆಯರು, “ನಮ್ಮ ಜೀವಮಾನದ ಉಳಿತಾಯದ ಹಣವನ್ನು ನಂಬಿಸಿ ದೋಚಿದ್ದಾರೆ. ಪೊಲೀಸರು ತಕ್ಷಣವೇ ಆ ಮೋಸಗಾರರನ್ನು ಬಂಧಿಸಿ ನಮಗೆ ನ್ಯಾಯ ಒದಗಿಸಬೇಕು ಮತ್ತು ನಮ್ಮ ಹಣವನ್ನು ವಾಪಸ್ ಕೊಡಿಸಬೇಕು” ಎಂದು ಒತ್ತಾಯಿಸಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ತಂಡ ರಚಿಸಿದ್ದಾರೆ.

ವರದಿ: ಅಣ್ಣಪ್ಪ ಬರ್ಕಿ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:54 pm, Wed, 10 June 26

Source link

ಮಮತಾ ಬ್ಯಾನರ್ಜಿಗೆ ಮತ್ತೊಂದು ಆಘಾತ; ಟಿಎಂಸಿ ಸಂಸದೆ ಸುಶ್ಮಿತಾ ದೇವ್ ರಾಜೀನಾಮೆ – Kannada News

ನವದೆಹಲಿ, ಜೂನ್ 9: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆದ ಬಳಿಕ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಒಳಗಿನ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಸಾಲು ಸಾಲು ಸಂಸದರು, ಶಾಸಕರು ಟಿಎಂಸಿಗೆ ರಾಜೀನಾಮೆ ನೀಡುತ್ತಿದ್ದಾರೆ. ಇದು 15 ವರ್ಷಗಳ ಕಾಲ ಬಂಗಾಳವನ್ನು ಆಳಿದ ಮಮತಾ ಬ್ಯಾನರ್ಜಿಗೆ (Mamata Banerjee) ದೊಡ್ಡ ಹೊಡೆತ ನೀಡಿದೆ. ಇದೀಗ ಟಿಎಂಸಿಯ ಆಂತರಿಕ ಬಂಡಾಯದ ನಡುವೆಯೇ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಭಾರಿ ಆಘಾತ ಎದುರಾಗಿದೆ. ಟಿಎಂಸಿ ಹಿರಿಯ ನಾಯಕಿ ಸುಶ್ಮಿತಾ ದೇವ್ ಇಂದು ತಮ್ಮ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಪತ್ರದ ಮೂಲಕ ಸುಶ್ಮಿತಾ ದೇವ್ ರಾಜೀನಾಮೆ ಸಲ್ಲಿಸಿದ್ದು, ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಅವರ ರಾಜಕೀಯ ಭವಿಷ್ಯದ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಸುಶ್ಮಿತಾ ದೇವ್ ದೆಹಲಿಯ ನಿವಾಸದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರೊಂದಿಗೆ ಮುಗುಳ್ನಗುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಗಳಿಗೆ ರೆಕ್ಕೆಪುಕ್ಕ ಬಂದಿದೆ.

ಇದನ್ನೂ ಓದಿ: ಟಿಎಂಸಿಯಲ್ಲೇ ಇದ್ದಿದ್ದರೆ ನನ್ನ ಕೊಲ್ಲುತ್ತಿದ್ದರು; ಮಮತಾ ಬ್ಯಾನರ್ಜಿ ವಿರುದ್ಧ ಸುಖೇಂದು ಶೇಖರ್ ರಾಯ್ ಗಂಭೀರ ಆರೋಪ

“ನಾನು ಟಿಎಂಸಿ ರಾಜ್ಯಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ, ದಯವಿಟ್ಟು ಇದನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಬೇಕು. ರಾಜ್ಯಸಭಾ ಸದಸ್ಯೆಯಾಗಿ ನನ್ನ ಅಧಿಕಾರಾವಧಿಯಲ್ಲಿ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರವನ್ನು ನೀಡಿದ ಉಪರಾಷ್ಟ್ರಪತಿಗಳು, ಗೌರವಾನ್ವಿತ ಉಪಸಭಾಪತಿಗಳು ಮತ್ತು ರಾಜ್ಯಸಭಾ ಸಚಿವಾಲಯದ ಎಲ್ಲಾ ಪದಾಧಿಕಾರಿಗಳಿಗೆ ನಾನು ನನ್ನ ಪ್ರಾಮಾಣಿಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ” ಎಂದು ಸುಶ್ಮಿತಾ ದೇವ್ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರೊಂದಿಗಿನ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಶ್ಮಿತಾ ದೇವ್, ರಾಜೀನಾಮೆ ನೀಡುವ ನಿರ್ಧಾರ ಸಂಪೂರ್ಣವಾಗಿ ನನ್ನದೇ ಆಗಿದ್ದು, ಇದಕ್ಕೆ ಯಾರ ಪ್ರಭಾವವೂ ಇಲ್ಲ ಎಂದು ತಿಳಿಸಿದ್ದಾರೆ. ತಮ್ಮ ಈ ಹೆಜ್ಜೆಯ ಹಿಂದೆ ಹಲವು ಕಾರಣಗಳಿವೆಯಾದರೂ, ಅವುಗಳನ್ನೆಲ್ಲಾ ಸಾರ್ವಜನಿಕವಾಗಿ ಬಹಿರಂಗಪಡಿಸುವ ಅಗತ್ಯವಿಲ್ಲ. ಅದೊಂದು ದೊಡ್ಡ ಕತೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಟಿಎಂಸಿ ಬಿಕ್ಕಟ್ಟಿನ ನಡುವೆ ಸೋನಿಯಾ ಗಾಂಧಿಯನ್ನು ಭೇಟಿಯಾದ ಮಮತಾ ಬ್ಯಾನರ್ಜಿ

ಈ ರಾಜೀನಾಮೆಯು ತೃಣಮೂಲ ಕಾಂಗ್ರೆಸ್‌ಗೆ ಒಂದೇ ವಾರದಲ್ಲಿ ಎದುರಾಗಿರುವ ಎರಡನೇ ರಾಜ್ಯಸಭಾ ಹಿನ್ನಡೆಯಾಗಿದೆ. ಕಳೆದ 13 ವರ್ಷಗಳಿಂದ ಮೇಲ್ಮನೆಯಲ್ಲಿ ಪಕ್ಷದ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸುತ್ತಿದ್ದ ಸುಖೇಂದು ಶೇಖರ್ ರಾಯ್ ಅವರು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿಗೆ ಪತ್ರ ಬರೆದು ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದಾದ ಬಳಿಕ ಸುಶ್ಮಿತಾ ದೇವ್ ಕೂಡ ರಾಜೀನಾಮೆ ನೀಡಿದ್ದಾರೆ. ಇದು ಪಕ್ಷಕ್ಕೆ ದೊಡ್ಡ ಆಘಾತವಾಗಿದೆ.

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಭುಗಿಲೆದ್ದ ಬಂಡಾಯದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ವಿಧಾನಸಭೆಯಲ್ಲಿ ಟಿಎಂಸಿಯ 58 ಶಾಸಕರು ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿ ಅವರನ್ನು ಬೆಂಬಲಿಸಿದ್ದಾರೆ ಎಂದು ವರದಿಯಾಗಿದೆ. ಅಸ್ಸಾಂನ ಸಿಲ್ಚಾರ್ ಲೋಕಸಭಾ ಕ್ಷೇತ್ರದ ಮಾಜಿ ಕಾಂಗ್ರೆಸ್ ಸಂಸದರಾಗಿದ್ದ ಸುಶ್ಮಿತಾ ದೇವ್ ಅವರು, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋತ ನಂತರ 2021ರಲ್ಲಿ ತೃಣಮೂಲ ಕಾಂಗ್ರೆಸ್ ಸೇರಿದ್ದರು. ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಸೇವೆ ಸಲ್ಲಿಸುತ್ತಾ, ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ICC Test Rankings: ಟಾಪ್ 10 ರೊಳಗೆ ಇಬ್ಬರು ಭಾರತೀಯರು; ಅಗ್ರಸ್ಥಾನದಲ್ಲಿ ಉಳಿದ ಬುಮ್ರಾ

Source link

ಬಿಸಿಎಂ ಹಾಸ್ಟೆಲ್​​​​​ನಲ್ಲಿ ಹುಡುಗ-ಹುಡುಗಿಯರಿಂದ ಬಿಂದಾಸ್ ಎಣ್ಣೆ ಪಾರ್ಟಿ, ವಿಡಿಯೋ ವೈರಲ್

ಕಲಬುರಗಿ, (ಜೂನ್ 10): ಗ್ರಾಮೀಣ ಭಾಗದ ಬಡ ಮಕ್ಕಳಿಗಾಗಿ ಅನೂಕೂಲವಾಗಲೆಂದು ಸರ್ಕಾರಗಳು ವಸತಿ ನಿಲಯಗಳನ್ನು (ಹಾಸ್ಟೆಲ್​) ನಿರ್ಮಿಸುತ್ತಿವೆ. ಆದ್ರೆ, ಕಲಬುರಗಿಯಲ್ಲಿ (Kalaburagi) ಬಿಸಿಎಂ ಮಹಿಳಾ ಹಾಸ್ಟೆಲ್ ನಲ್ಲಿ ಬಿಂದಾಸ್ ಆಗಿ ಮಧ್ಯ ಸೇವೆನೆ ಮಾಡಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ. ಹೌದು… ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕಡಗಂಚಿ ಹಾಸ್ಟೆಲ್ ನದ್ದು ಎನ್ನಲಾಗುತ್ತಿರೋ ಈ ವಿಡಿಯೋ ಭಾರೀ ವೈರಲ್ ಆಗಿದೆ. ಇನ್ನು ವಿದ್ಯಾರ್ಥಿನಿ ಬೀಯರ್ ಕುಡಿಯುತ್ತಿರೋ ದೃಶ್ಯ ವೈರಲ್ ಬೆನ್ನಲ್ಲೇ ಇದನ್ನೇ ವಾರ್ಡನ್ ಬಂಡವಾಳ ಮಾಡಿಕೊಂಡಿಕೊಂಡಿದ್ದು, ಪ್ರಕರಣ ಮುಚ್ಚಿಹಾಕಲು ಹಣ ವಸೂಲಿಳಿದಿದ್ದಾರೆ. ಅಲ್ಲದೇ ಮೂರ್ನಾಲ್ಕು ವಾರ್ಡನ್​​ಗಳು ವಿದ್ಯಾರ್ಥಿನಿಯರನ್ನು ದುರ್ಬಳಿಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಸಹ ಕೇಳಿಬಂದಿದೆ. ಇನ್ನು ವಾರ್ಡನ್ ಹಾಗೂ ವಿದ್ಯಾರ್ಥಿನಿಯ ಆಡಿಯೋ ಕೂಡಾ ವೈರಲ್ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಟಿಸಿಎಸ್​ನಲ್ಲಿ 3 ವರ್ಷದಲ್ಲಿ ಎಐ ಏಜೆಂಟ್​ಗಳು ಉದ್ಯೋಗಿಗಳ ಸಮಕ್ಕೆ ಬರಲಿವೆಯಂತೆ – Kannada News

ಟಾಟಾ ಸನ್ಸ್ ಚೇರ್ಮನ್ ಎನ್ ಚಂದ್ರಶೇಖರನ್Image Credit source: Tata Group

ನವದೆಹಲಿ, ಜೂನ್ 10: ಭಾರತದ ಐಟಿ ಕಂಪನಿಗಳು ಎಐ ಅಬ್ಬರಕ್ಕೆ ಬೇಗ ಹೊಂದಿಕೊಳ್ಳುತ್ತಿರುವಂತಿವೆ. ಭಾರತದ ಅತಿದೊಡ್ಡ ಐಟಿ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್​ನಲ್ಲಿ (TCS- Tata Consultancy Services) ಮುಂದಿನ ವರ್ಷದಲ್ಲಿ ಇರುವ ಒಟ್ಟು ಉದ್ಯೋಗಿಗಳ ಸಂಖ್ಯೆಗೆ ಸಮವಾಗಿ ಎಐ ಏಜೆಂಟ್​ಗಳ ಸಂಖ್ಯೆ ಇರುತ್ತದಂತೆ. ಹಾಗಂತ, ಸಂಸ್ಥೆಯ ಛೇರ್ಮನ್ ಅವರೇ ಖುದ್ದಾಗಿ ಈ ಮಾಹಿತಿ ನೀಡಿದ್ದಾರೆ. ಟಿಸಿಎಸ್​ನ ವಾರ್ಷಿಕ ಮಹಾಸಭೆಯಲ್ಲಿ (AGM) ಚೇರ್ಮನ್ ಎನ್. ಚಂದ್ರಶೇಖರನ್ ಅವರು ಎಐ ಏಜೆಂಟ್​ಗಳ ನಿಯುಕ್ತಿ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಸದ್ಯ ಟಿಸಿಎಸ್‌ನಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಮುಂದಿನ 3 ವರ್ಷಗಳಲ್ಲಿ ಕಂಪನಿಯು ಅಷ್ಟೇ ಸಂಖ್ಯೆಯ, ಅಂದರೆ 5 ಲಕ್ಷ ಎಐ ಏಜೆಂಟ್‌ಗಳನ್ನು ಹೊಂದಿರಲಿದೆ. “ಆ ದಿನ ತೀರಾ ದೂರವಿಲ್ಲ. ಟಿಸಿಎಸ್‌ನಲ್ಲಿ ಭೌತಿಕ ಕಾರ್ಮಿಕರಷ್ಟೇ ಎಐ ಕಾರ್ಮಿಕರೂ ಇರಲಿದ್ದಾರೆ. ಭವಿಷ್ಯದಲ್ಲಿ ಇಬ್ಬರೂ ಜೊತೆಯಾಗಿ ಕೆಲಸ ಮಾಡಲಿದ್ದಾರೆ,” ಎಂದು ಚಂದ್ರಶೇಖರನ್ ಷೇರುದಾರರಿಗೆ ತಿಳಿಸಿದ್ದಾರೆ.

ಉದ್ಯೋಗ ನೇಮಕಾತಿಯಲ್ಲಿ ಕುಸಿತ

ಟಿಸಿಎಸ್ ಎಂದರೆ ನೇಮಕಾತಿಗಳಿಗೆ ಹೆಸರುವಾಸಿ. ಅತಿಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಐಟಿ ಸಂಸ್ಥೆಯದು. ಭಾರತದಲ್ಲಿ ಅತಿಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳ ಪೈಕಿ ಒಂದು. ಆದರೆ, ಈಗ ಎಐ ಏಜೆಂಟ್‌ಗಳ ಆಗಮನದಿಂದಾಗಿ ಕಂಪನಿಯು ಈ ಹಿಂದೆ ಮಾಡಿಕೊಳ್ಳುತ್ತಿದ್ದ ಬೃಹತ್ ಪ್ರಮಾಣದ ಉದ್ಯೋಗ ನೇಮಕಾತಿಯನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.

ಇದನ್ನೂ ಓದಿ: ವಿಶ್ವದಾಖಲೆ ಸನಿಹದಲ್ಲಿ 23 ವರ್ಷದ ಆದಿತ್ ಪಲಿಚಾ; ಲಿಸ್ಟೆಡ್ ಕಂಪನಿಯ ಅತಿ ಕಿರಿಯ ಸಿಇಒ ಎನಿಸಲಿದ್ದಾರೆ ಝೆಪ್ಟೋ ಸಂಸ್ಥಾಪಕ

ಎಚ್‌ಆರ್ ಮೆಟ್ರಿಕ್ ಬದಲಾವಣೆ: “ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಎಚ್‌ಆರ್ (HR) ವಿಭಾಗದ ಹಳೆಯ ಪದ್ಧತಿ ಇನ್ಮುಂದೆ ಇರುವುದಿಲ್ಲ” ಎಂದು ಎನ್ ಚಂದ್ರಶೇಖರನ್ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ಸಂಪೂರ್ಣವಾಗಿ ನೇಮಕಾತಿ ನಿಲ್ಲುವುದಿಲ್ಲ; ಎಐ ತಂತ್ರಜ್ಞಾನಕ್ಕೆ ತಕ್ಕಂತೆ ಹೊಂದಿಕೊಳ್ಳಬಲ್ಲ ನುರಿತ ಪ್ರತಿಭೆಗಳ ಹುಡುಕಾಟ ಮುಂದುವರಿಯಲಿದೆಯಂತೆ.

ಲೇ-ಆಫ್ ಇಲ್ಲ, ಆದರೆ ಕೌಶಲ್ಯ ಅತ್ಯಗತ್ಯ

ಎಐ ಬಳಕೆಯಿಂದಾಗಿ ಈಗಿರುವ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ (Downsizing) ಯಾವುದೇ ಉದ್ದೇಶ ಕಂಪನಿಗೆ ಇಲ್ಲ. ಭವಿಷ್ಯದಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಉಳಿಯಬೇಕಾದರೆ ಉದ್ಯೋಗಿಗಳು ಕಡ್ಡಾಯವಾಗಿ ಎಐ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಎಐ ವ್ಯವಸ್ಥೆಗಳೊಂದಿಗೆ ಒಟ್ಟಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವವರಿಗೆ ಹೆಚ್ಚಿನ ಆದ್ಯತೆ ಸಿಗಲಿದೆ.

ಎಐ ಮೂಲಕ ಹೆಚ್ಚುತ್ತಿರುವ ಆದಾಯ

ಟಿಸಿಎಸ್ ಸಂಸ್ಥೆಯು ಎಐ ತಂತ್ರಜ್ಞಾನದಿಂದ ಭಾರೀ ಆದಾಯ ಗಳಿಸುತ್ತಿದೆ. ಕಳೆದ ಆರ್ಥಿಕ ವರ್ಷದ (FY26) ಕೊನೆಯ ತ್ರೈಮಾಸಿಕದಲ್ಲಿ ಕಂಪನಿಯ ವಾರ್ಷಿಕ ಎಐ ಆದಾಯವು ಸುಮಾರು 2.5 ಬಿಲಿಯನ್ ಡಾಲರ್ (ಅಂದಾಜು ₹20,000 ಕೋಟಿಗೂ ಅಧಿಕ) ತಲುಪಿದೆ. ಇದು ಪ್ರತಿ ತ್ರೈಮಾಸಿಕದಲ್ಲಿ ಶೇ. 22 ಕ್ಕಿಂತಲೂ ಹೆಚ್ಚು ಪ್ರಗತಿ ಕಾಣುತ್ತಿದೆ.

2028 ರಿಂದ 2030ರ ವೇಳೆಗೆ ಕಂಪನಿಯ ಶೇಕಡಾ 100ರಷ್ಟು ಆದಾಯವು ಯಾವುದಾದರೂ ಒಂದು ರೂಪದಲ್ಲಿ ಎಐ ತಂತ್ರಜ್ಞಾನದ ಅಂಶವನ್ನು ಒಳಗೊಂಡಿರುತ್ತದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಆನ್​ಲೈನ್​ನಲ್ಲಿ ಶಾಪಿಂಗ್ ಮಾಡುವ ಹೆಚ್ಚಿನವರಿಗೆ ಟೊಪ್ಪಿಹಾಕುತ್ತಿವೆ ಡಾರ್ಕ್ ಪ್ಯಾಟರ್ನ್ಸ್; ಬೆಚ್ಚಿಬೀಳಿಸುತ್ತಿದೆ ಈ ವರದಿ

ಚಂದ್ರಶೇಖರನ್ ಅವರು ಗುರುತಿಸಿದ 5 ಪ್ರಮುಖ ಎಐ ಅವಕಾಶಗಳು

ಐಟಿ ವಲಯಕ್ಕೆ ಎಐ ಕೇವಲ ಒಂದು ಸವಾಲಲ್ಲ, ಬದಲಾಗಿ ಅದೊಂದು ಬಹುದೊಡ್ಡ ವ್ಯವಹಾರಿಕ ಅವಕಾಶ ಎಂದು ಚಂದ್ರಶೇಖರನ್ ವಾದಿಸಿದ್ದಾರೆ. ಅವರು ಪ್ರಮುಖವಾಗಿ 5 ಕ್ಷೇತ್ರಗಳನ್ನು ಪಟ್ಟಿ ಮಾಡಿದ್ದಾರೆ:

  1. ಲೆಗಸಿ ಸಿಸ್ಟಮ್ಸ್ ಆಧುನೀಕರಣ: ಹಳೆಯ ಐಟಿ ಮೂಲಸೌಕರ್ಯ ಮತ್ತು ಚದುರಿಹೋಗಿರುವ ಡೇಟಾ ವ್ಯವಸ್ಥೆಗಳನ್ನು ಎಐ ಮೂಲಕ ಆಧುನೀಕರಿಸುವುದು.
  2. ಬಿಸಿನೆಸ್ ಪ್ರೊಸೆಸ್ ಮರುವಿನ್ಯಾಸ: ಕಂಪನಿಗಳ ಸಪ್ಲೈ ಚೈನ್ ಮತ್ತು ಗ್ರಾಹಕರ ಸಂಪರ್ಕ ಪ್ರಕ್ರಿಯೆಗಳನ್ನು ಎಐ ತಂತ್ರಜ್ಞಾನದ ಮೂಲಕ ಸುಧಾರಿಸುವುದು.
  3. ಎಐ ಗವರ್ನೆನ್ಸ್ ಮತ್ತು ಮ್ಯಾನೇಜ್‌ಮೆಂಟ್: ಎಐ ಏಜೆಂಟ್‌ಗಳ ಸುರಕ್ಷತೆ, ವೆಚ್ಚ ಮತ್ತು ನಿಯಮಾವಳಿಗಳ ಉಸ್ತುವಾರಿ ವಹಿಸುವುದು.
  4. ಸೊವರೀನ್ ಎಐ (Sovereign AI): ಸರ್ಕಾರಗಳು ಮತ್ತು ಕಟ್ಟುನಿಟ್ಟಾದ ನಿಯಂತ್ರಣ ಹೊಂದಿರುವ ಸಂಸ್ಥೆಗಳಿಗಾಗಿ ಡೇಟಾ ಭದ್ರತೆಯುಳ್ಳ ಪ್ರತ್ಯೇಕ ಎಐ ಮೂಲಸೌಕರ್ಯ ನಿರ್ಮಿಸುವುದು. ಟಿಸಿಎಸ್ ಈಗಾಗಲೇ ಭಾರತ ಮತ್ತು ಯುರೋಪ್‌ನಲ್ಲಿ ಇಂತಹ ಯೋಜನೆಗಳನ್ನು ಆರಂಭಿಸಿದೆ.
  5. ಫಿಸಿಕಲ್ ಎಐ (Physical AI): ಕಾರ್ಖಾನೆಗಳು, ಗೋದಾಮುಗಳು ಮತ್ತು ವಾಹನಗಳಲ್ಲಿ ರೋಬೋಟಿಕ್ಸ್ ಹಾಗೂ ಎಐ ತಂತ್ರಜ್ಞಾನವನ್ನು ಸಮಿಶ್ರಗೊಳಿಸುವುದು.

ಟಿಸಿಎಸ್ ಸಿಇಒ ಕೆ. ಕೃತಿವಾಸನ್ ಅವರ ಪ್ರಕಾರ, ಕಂಪನಿಯು ಜಗತ್ತಿನ ಅತಿ ದೊಡ್ಡ ‘ಎಐ ಆಧಾರಿತ ತಂತ್ರಜ್ಞಾನ ಸೇವಾ ಸಂಸ್ಥೆ’ಯಾಗುವ ಗುರಿ ಹೊಂದಿದೆ. ಐಟಿ ಉದ್ಯಮದಲ್ಲಿ ಮಾನವ ಶ್ರಮ ಮತ್ತು ಕೃತಕ ಬುದ್ಧಿಮತ್ತೆ (AI) ಒಟ್ಟಾಗಿ ಸಾಗುವ ಹೊಸ ಯುಗಕ್ಕೆ ಟಿಸಿಎಸ್ ಮುನ್ನುಡಿ ಬರೆಯುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವೈದ್ಯನ ಪಾತ್ರದಲ್ಲಿ ರಜನೀಕಾಂತ್, ಈ ಬಾರಿ ಮಾಸ್ ಅಲ್ಲ ಕ್ಲಾಸ್? – Kannada News

ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಸದ್ಯಕ್ಕೆ ತಮ್ಮ ಬಹುನಿರೀಕ್ಷಿತ ಚಿತ್ರ ‘ತಲೈವರ್ 173’ ಗಾಗಿ ಸಜ್ಜಾಗುತ್ತಿದ್ದಾರೆ. ಯುವ ನಿರ್ದೇಶಕ ಅಶ್ವತ್ಥ್ ಮಾರಿಮುತ್ತು ಅವರು ರಜನೀಕಾಂತ್ ಅವರು ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೆ ಹೊರ ಬಿದ್ದಿದೆ. ಅಶ್ವತ್ಥ್ ಮಾರಿಮುತ್ತು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ವಿಡಿಯೋ ಹಂಚಿಕೊಳ್ಳುವ ಮೂಲಕ ನಿರ್ಮಾಣ ಸಂಸ್ಥೆಯು ಅವರೇ ಈ ಚಿತ್ರದ ನಿರ್ದೇಶಕರು ಎಂಬುದನ್ನು ಅಧಿಕೃತವಾಗಿ ಖಚಿತಪಡಿಸಲಾಗಿದೆ. ಈಗ ಬಂದಿರುವ ಹೊಸ ವರದಿಗಳ ಪ್ರಕಾರ, ಈ ಚಿತ್ರದಲ್ಲಿ ಸೂಪರ್‌ಸ್ಟಾರ್ ಮಾಡಲಿರುವ ಪಾತ್ರದ ಬಗ್ಗೆ ಒಂದು ಆಸಕ್ತಿದಾಯಕ ಅಪ್‌ಡೇಟ್ ಹೊರಬಿದ್ದಿದೆ.

ರಜನೀಕಾಂತ್ ತಮ್ಮ ಮುಂದಿನ ಸಿನಿಮಾನಲ್ಲಿ ಹಿರಿಯ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮಾಸ್ ಪಾತ್ರಗಳಿಂದ ಅಭಿಮಾನಿಗಳ ಮನಗೆದ್ದಿರುವ ರಜನೀಕಾಂತ್ ಇದೀಗ ಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅವರ 173ನೇ ಸಿನಿಮಾ ಕಮರ್ಶಿಯಲ್ ಮಾಸ್ ಸಿನಿಮಾ ಆಗಿರುವುದಿಲ್ಲ ಬದಲಿಗೆ ಫ್ಯಾಮಿಲಿ ಡ್ರಾಮಾ ಜೊತೆಗೆ ಹಾಸ್ಯ ಪ್ರಧಾನವೂ ಆಗಿರಲಿದೆ ಎನ್ನಲಾಗುತ್ತಿದೆ. ಒಂದರ ಹಿಂದೊಂದು ಕಮರ್ಶಿಯಲ್, ಮಾಸ್ ಸಿನಿಮಾಗಳನ್ನೇ ಮಾಡಿಕೊಂಡು ಬರುತ್ತಿದ್ದ ರಜನೀಕಾಂತ್ ಖುದ್ದು ಹೊಸ ರೀತಿಯ ಪಾತ್ರಗಳನ್ನು ಒಪ್ಪಿಕೊಂಡಿದ್ದಾರೆ.

‘ಓ ಮೈ ಕಡವುಲೆ’ ಮತ್ತು ‘ಡ್ರಾಗನ್’ ಸಿನಿಮಾಗಳನ್ನು ನಿರ್ದೇಶಿಸಿರುವ ಅಶ್ವತ್ ಮಾರಿಮುತ್ತು ಸಿದ್ಧಪಡಿಸಿರುವ ಈ ಚಿತ್ರಕಥೆಯು, ಲಘು ಹಾಸ್ಯಭರಿತ ಕಮರ್ಷಿಯಲ್ ಎಂಟರ್‌ಟೈನ್‌ಮೆಂಟ್ ಜೊತೆಗೆ ಬಲವಾದ ಭಾವನಾತ್ಮಕ ಕಥಾಹಂದರವನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಕತೆ ಕೇಳಿದ ಬಳಿಕ ಸೂಪರ್‌ಸ್ಟಾರ್ ರಜನೀಕಾಂತ್​​ ಅವರಿಗೆ ಕತೆ ಬಹಳ ಇಷ್ಟವಾಗಿದ್ದು ಸಂಪೂರ್ಣವಾಗಿ ಮಾರುಹೋಗಿದ್ದರು ಮತ್ತು ಮುಖ್ಯವಾಗಿ ಚಿತ್ರದ ವಿಲನ್ ಪಾತ್ರವನ್ನು ವಿನ್ಯಾಸಗೊಳಿಸಿದ ರೀತಿಗೆ ಅಪಾರ ಪ್ರಶಂಸೆ ವ್ಯಕ್ತಪಡಿಸಿದ್ದರು ಎಂದು ನಿರ್ದೇಶಕರು ತಿಳಿಸಿದ್ದಾರೆ. ಅಶ್ವತ್ ಅವರು ಈ ಹಿರಿಯ ನಟನನ್ನು ಸಂಪೂರ್ಣ ಹೊಸ ರೂಪದಲ್ಲಿ ಹೇಗೆ ತೋರಿಸಲಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳು ಈಗಾಗಲೇ ತೀವ್ರ ಉತ್ಸುಕರಾಗಿದ್ದಾರೆ.

ಇದನ್ನೂ ಓದಿ:ಜೈಲರ್ 2: ರಜನಿಕಾಂತ್ ಸಿನಿಮಾದಲ್ಲಿ ಶಾರುಖ್ ಖಾನ್ ಬದಲು ಹೃತಿಕ್ ರೋಷನ್ ನಟನೆ?

‘ತಲೈವರ್ 173’ ಚಿತ್ರವನ್ನು ಕಮಲ್ ಹಾಸನ್ ಅವರ ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ ಸಂಸ್ಥೆಯು ನಿರ್ಮಾಣ ಮಾಡುತ್ತಿದೆ. ಇದೇ ಪ್ರಾಜೆಕ್ಟ್​​ಗೆ ಈ ಹಿಂದೆ ಇಬ್ಬರು ನಿರ್ದೇಶಕರು ಬದಲಾಗಿದ್ದು, ಅಶ್ವತ್ಥ್ ಅವರು ಅಂತಿಮಗೊಂದಿದ್ದಾರೆ. ಇದಕ್ಕೂ ಮೊದಲು ನಿರ್ದೇಶಕರಾದ ಸುಂದರ್ ಸಿ ಮತ್ತು ಸಿಬಿ ಚಕ್ರವರ್ತಿ ಈ ಚಿತ್ರವನ್ನು ನಿರ್ದೇಶಿಸಬೇಕಿತ್ತಾದರೂ, ಬೇರೆ ಬೇರೆ ಕಾರಣಕ್ಕೆ ಈ ನಿರ್ದೇಶಕರು ಬದಲಾದರು. ಸದ್ಯಕ್ಕೆ, ಅಶ್ವತ್ ಅವರು ಚಿತ್ರಕಥೆಯ ಸಂಪೂರ್ಣ ಡ್ರಾಫ್ಟ್ ಮುಗಿಯುವವರೆಗೂ ಯಾವುದೇ ದೊಡ್ಡ ಅಧಿಕೃತ ಪ್ರಕಟಣೆಗಳನ್ನು ಮಾಡದಂತೆ ನಿರ್ಮಾಪಕರಲ್ಲಿ ವಿನಂತಿಸಿದ್ದಾರೆ ಎನ್ನಲಾಗುತ್ತಿದೆ.

‘ತಲೈವರ್ 173’ ಮಾತ್ರವೇ ಅಲ್ಲದೆ ರಜನಿಕಾಂತ್ ಅವರು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್ 2’ ಸಿನಿಮಾ ಚಿತ್ರೀಕರಣ ಮುಗಿಸಿದ್ದು ಬಿಡುಗಡೆಗೆ ಸಿದ್ದವಾಗಿದೆ. ಸಿನಿಮಾ ಇದೇ ವರ್ಷದ ಅಂತ್ಯದ ವೇಳೆಗೆ ತೆರೆಗೆ ಬರಲು ಸಜ್ಜಾಗಿದೆ. ಇದರ ಜೊತೆಗೆ ಕಮಲ್ ಹಾಸನ್ ಜೊತೆಗೆ ರಜನೀಕಾಂತ್ ಅವರು ಸಿನಿಮಾ ಒಂದರಲ್ಲಿ ನಟಿಸಲಿದ್ದು, ಆ ಸಿನಿಮಾವನ್ನು ಸಹ ನೆಲ್ಸನ್ ಅವರೇ ನಿರ್ದೇಶನ ಮಾಡಲಿದ್ದಾರೆ. ‘ತಲೈವರ್ 173’ ಸಿನಿಮಾದ ಬಳಿಕ ಆ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Jagannath Rath Yatra: ಪುರಿ ಜಗನ್ನಾಥ ರಥಯಾತ್ರೆಗೆ ಹೋಗುವ ಮುನ್ನ ತಿಳಿಯಲೇಬೇಕಾದ ನಿಯಮ ಮತ್ತು ರಹಸ್ಯ! – Kannada News

ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಒಡಿಶಾದ ಪುರಿಯಲ್ಲಿ ಕ್ಷಣಗಣನೆ ಆರಂಭವಾಗಿದೆ. ಪುರಿ ದೇವಾಲಯದ ಪವಿತ್ರ ಸಂಪ್ರದಾಯ ಮತ್ತು ಪಂಚಾಂಗದ ಪ್ರಕಾರ, ಈ ವರ್ಷದ ರಥಯಾತ್ರೆಯು ಜುಲೈ 16 ರಂದು ಪ್ರಾರಂಭವಾಗಿ ಜುಲೈ 27 ರವರೆಗೆ ಅತ್ಯಂತ ವೈಭವದಿಂದ ಜರುಗಲಿದೆ.

ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ರಥಯಾತ್ರೆಯಲ್ಲಿ ಪೂರ್ಣ ಹೃದಯದಿಂದ ಭಾಗವಹಿಸುವ ಮತ್ತು ಭಗವಂತನ ರಥದ ಹಗ್ಗವನ್ನು ಎಳೆಯುವ ಭಕ್ತರು ಶಾಶ್ವತ ಪುಣ್ಯವನ್ನು ಪಡೆಯುವುದಲ್ಲದೆ, ತಮ್ಮ ಅನೇಕ ಜನ್ಮಗಳ ಪಾಪಗಳನ್ನು ತೊಡೆದುಹಾಕಿಕೊಂಡು ಮೋಕ್ಷಕ್ಕೆ ದಾರಿ ಮಾಡಿಕೊಳ್ಳುತ್ತಾರೆ. ಆದಾಗ್ಯೂ, ಇದು ಅತ್ಯಂತ ಶುಭ ಹಾಗೂ ಶಿಸ್ತಿನ ಹಬ್ಬವಾಗಿರುವುದರಿಂದ, ಇದರಲ್ಲಿ ಭಾಗವಹಿಸುವ ಭಕ್ತರಿಗೆ ಕೆಲವು ಕಠಿಣ ನಿಯಮಗಳು ಮತ್ತು ನಿಷೇಧಗಳಿವೆ. ನೀವು ಈ ಪವಿತ್ರ ಯಾತ್ರೆಯ ಭಾಗವಾಗಲು ಪುರಿಗೆ ಹೋಗುತ್ತಿದ್ದರೆ, ಈ ಕೆಳಗಿನ ವಿಷಯಗಳನ್ನು ತಪ್ಪದೇ ನೆನಪಿನಲ್ಲಿಡಿ.

ಮಹಾಪ್ರಸಾದವನ್ನು ಅಗೌರವಿಸುವುದು ಮಹಾಪಾಪ:

ಜಗನ್ನಾಥ ದೇವಾಲಯದ ಪ್ರಸಿದ್ಧ ಮತ್ತು ಭವ್ಯವಾದ ಒಲೆಯಲ್ಲಿ ತಯಾರಿಸಲಾದ ‘ಮಹಾ ಪ್ರಸಾದ’ವು ಸಾಕ್ಷಾತ್ ಬ್ರಹ್ಮನ ಸ್ವರೂಪವಾಗಿದೆ. ಈ ಪ್ರಸಾದವನ್ನು ಲಕ್ಷ್ಮಿ ದೇವಿಯ ನೇರ ಮೇಲ್ವಿಚಾರಣೆಯಲ್ಲಿ ತಯಾರಿಸಲಾಗುತ್ತದೆ ಎಂಬ ಅಚಲ ನಂಬಿಕೆಯಿದೆ. ನಿಮ್ಮ ಪ್ರಯಾಣದ ಸಮಯದಲ್ಲಿ ಅಥವಾ ದೇವಾಲಯದ ಆವರಣದಲ್ಲಿ ಯಾರಾದರೂ ನಿಮಗೆ ಈ ಪ್ರಸಾದವನ್ನು ಅರ್ಪಿಸಿದರೆ, ಅದನ್ನು ಎಂದಿಗೂ ನಿರಾಕರಿಸಬೇಡಿ. ಮಹಾ ಪ್ರಸಾದವನ್ನು ನೆಲದ ಮೇಲೆ ಬೀಳಿಸುವುದು, ಅದನ್ನು ತುಳಿಯುವುದು ಅಥವಾ ತಿಂದ ನಂತರ ತಟ್ಟೆಯಲ್ಲಿ ಎಂಜಲು ಇಡುವುದು ಭಗವಂತನಿಗೆ ಮಾಡುವ ಘೋರ ಅವಮಾನವೆಂದು ಪರಿಗಣಿಸಲಾಗುತ್ತದೆ. ಯಾವಾಗಲೂ ಅತ್ಯಂತ ಗೌರವದಿಂದ ತಲೆಬಾಗಿ ಪ್ರಸಾದವನ್ನು ಸ್ವೀಕರಿಸಿ.

ರಥ ಎಳೆಯುವಾಗ ದುರಹಂಕಾರ ಮತ್ತು ಜಗಳ ಸಲ್ಲದು:

ಪುರಿ ರಥಯಾತ್ರೆಯು ಸಾಮಾಜಿಕ ಸಾಮರಸ್ಯ ಮತ್ತು ಸಮಾನತೆಯ ಶ್ರೇಷ್ಠ ಸಂಕೇತವಾಗಿದೆ. ಭಗವಂತನ ಆಸ್ಥಾ
ನದಲ್ಲಿ ದೊಡ್ಡವರು-ಸಣ್ಣವರು, ರಾಜ-ಬಡವ ಎಂಬ ಯಾವುದೇ ಭೇದಭಾವವಿಲ್ಲ. ರಥದ ಹಗ್ಗವನ್ನು ಮುಟ್ಟುವುದರಿಂದಲೇ ಜನ್ಮ ಪಾವನವಾಗುತ್ತದೆ ಎಂದು ನಂಬಲಾಗಿದೆ. ಆದಾಗ್ಯೂ, ಈ ಹಗ್ಗವನ್ನು ಹಿಡಿಯುವ ಅಥವಾ ಎಳೆಯುವ ಗಡಿಬಿಡಿಯಲ್ಲಿ ಇತರ ಭಕ್ತರನ್ನು ನೋಯಿಸುವುದು, ಅವರನ್ನು ಬಲವಂತವಾಗಿ ತಳ್ಳುವುದು ಅಥವಾ ನಿಂದಿಸುವುದು ನೀವು ಗಳಿಸಿದ ಪುಣ್ಯವನ್ನು ತಕ್ಷಣವೇ ನಾಶಪಡಿಸುತ್ತದೆ. ಪ್ರತಿಯೊಬ್ಬರೂ ಭಗವಂತನ ರಥವನ್ನು ಅತ್ಯಂತ ನಮ್ರತೆ, ತಾಳ್ಮೆ ಮತ್ತು ಸೇವಾ ಮನೋಭಾವದಿಂದ ಎಳೆಯಬೇಕು.

ಚರ್ಮದ ವಸ್ತುಗಳು ಮತ್ತು ತಾಮಸಿಕ ಆಹಾರದಿಂದ ದೂರವಿರಿ:

ನೀವು ದರ್ಶನಕ್ಕಾಗಿ ಮುಖ್ಯ ರಥಗಳನ್ನು ಸಮೀಪಿಸುವಾಗ ಅಥವಾ ಹಗ್ಗ ಎಳೆಯುವಾಗ ಚರ್ಮದ ಬೆಲ್ಟ್‌ಗಳು, ಪರ್ಸ್‌ಗಳು, ಬೂಟುಗಳು ಅಥವಾ ಸ್ಯಾಂಡಲ್‌ಗಳಂತಹ ಅಶುದ್ಧ ವಸ್ತುಗಳನ್ನು ಒಯ್ಯುವುದನ್ನು ಸಂಪೂರ್ಣವಾಗಿ ತಪ್ಪಿಸಿ. ಇದರೊಂದಿಗೆ ದೈಹಿಕ ಮತ್ತು ಮಾನಸಿಕ ಶುದ್ಧತೆಯೂ ಅಷ್ಟೇ ಮುಖ್ಯವಾಗಿರುತ್ತದೆ. ಯಾತ್ರೆಯಲ್ಲಿ ಭಾಗವಹಿಸುವ ಮುನ್ನ ಮಾಂಸ, ಮದ್ಯ ಅಥವಾ ಯಾವುದೇ ಇತರ ತಾಮಸಿಕ ಮತ್ತು ಮಾದಕ ವಸ್ತುಗಳನ್ನು ಸೇವಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಯಾತ್ರೆಯ ಸಮಯದಲ್ಲಿ ನಿರಂತರ ನಾಮಜಪ ಮತ್ತು ಸೇವೆ:

ರಥಯಾತ್ರೆಯ ಉದ್ದಕ್ಕೂ ನಿಮ್ಮ ಮನಸ್ಸು ಮತ್ತು ಮಾತನ್ನು ಪವಿತ್ರವಾಗಿಡುವುದು ಅವಶ್ಯಕ. ಮೆರವಣಿಗೆಯಲ್ಲಿ ಸಾಗುವಾಗ ಮನಸ್ಸಿನಲ್ಲೇ ಸದಾ “ಜೈ ಜಗನ್ನಾಥ” ಅಥವಾ “ಹರೇ ಕೃಷ್ಣ ಮಹಾಮಂತ್ರ”ವನ್ನು ಜಪಿಸುತ್ತಿರಿ. ಇದರೊಂದಿಗೆ, ದೂರದ ಊರುಗಳಿಂದ ಬರುವ ಭಕ್ತರಿಗೆ, ಮುಖ್ಯವಾಗಿ ವೃದ್ಧರಿಗೆ, ಮಹಿಳೆಯರಿಗೆ, ಅಂಗವಿಕಲರಿಗೆ ಅಥವಾ ಅನಾರೋಗ್ಯ ಪೀಡಿತರಿಗೆ ದಾರಿ ಮಾಡಿಕೊಡಿ ಮತ್ತು ಅಗತ್ಯವಿದ್ದಲ್ಲಿ ಅವರಿಗೆ ಸಹಾಯ ಹಸ್ತ ಚಾಚಿ. ಜಗನ್ನಾಥನು ತನ್ನ ಚಿಕ್ಕಮ್ಮನ ಮನೆಯಾದ ಗುಂಡಿಚಾ ದೇವಸ್ಥಾನಕ್ಕೆ ಬಂದಾಗ, ದೇವಾಲಯದ ಆಡಳಿತಾಧಿಕಾರಿಗಳು ಮತ್ತು ಸೇವಾಧಾರಿಗಳು ವಿಧಿಸಿರುವ ಸಾಂಪ್ರದಾಯಿಕ ದರ್ಶನ ನಿಯಮಗಳು ಹಾಗೂ ಶಿಷ್ಟಾಚಾರಗಳನ್ನು ಸಂಪೂರ್ಣವಾಗಿ ಗೌರವಿಸಿ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ

ಜಗನ್ನಾಥ ರಥಯಾತ್ರೆಯನ್ನು ಏಕೆ ನಡೆಸಲಾಗುತ್ತದೆ?

ದಂತಕಥೆಗಳ ಪ್ರಕಾರ, ವರ್ಷಕ್ಕೊಮ್ಮೆ ಜಗನ್ನಾಥ ಸ್ವಾಮಿಯು ಶ್ರೀಮಂದಿರದ ಗರ್ಭಗುಡಿಯಿಂದ ಹೊರಬಂದು ತನ್ನ ಭಕ್ತರಿಗೆ ಭೌತಿಕವಾಗಿ ದರ್ಶನ ನೀಡಿ ಅವರ ಕಷ್ಟಗಳನ್ನು ನಿವಾರಿಸುತ್ತಾನೆ. ಭಕ್ತನೊಬ್ಬನಿಗೆ ದೇವಾಲಯವನ್ನು ತಲುಪಲು ಸಾಧ್ಯವಾಗದಿದ್ದಾಗ, ಭಗವಂತನೇ ಬೀದಿಗಿಳಿದು ತನ್ನ ಭಕ್ತರನ್ನು ಭೇಟಿಯಾಗುತ್ತಾನೆ ಎಂಬುದಕ್ಕೆ ರಥಯಾತ್ರೆಯು ಜೀವಂತ ಸಾಕ್ಷಿಯಾಗಿದೆ. ಇದು ಭಗವಂತ ಮತ್ತು ಆತನ ಭಕ್ತರ ನಡುವಿನ ಅನನ್ಯ ಪ್ರೀತಿಯ ಸಂಕೇತವಾಗಿದೆ. ಈ ಯಾತ್ರೆಯ ಮತ್ತೊಂದು ಮುಖ್ಯ ಉದ್ದೇಶವೆಂದರೆ, ಭಗವಂತನು ತನ್ನ ಅಣ್ಣ ಬಲಭದ್ರ ಮತ್ತು ತಂಗಿ ಸುಭದ್ರೆಯ ಜೊತೆಗೆ ತನ್ನ ಅತ್ತೆಯ ಮನೆಗೆ (ಗುಂಡಿಚಾ ದೇವಸ್ಥಾನ) ಹೋಗಿ ಸುಮಾರು ಒಂಬತ್ತು ದಿನಗಳ ಕಾಲ ಅಲ್ಲಿ ವಿಶ್ರಾಂತಿ ಪಡೆಯುತ್ತಾನೆ. ಅದಾದ ನಂತರ, ಆತ “ಬಹುಧಾ ಯಾತ್ರೆ” (ಮರಳಿ ಬರುವ ಪ್ರಯಾಣ) ಮೂಲಕ ತನ್ನ ಮುಖ್ಯ ದೇವಾಲಯಕ್ಕೆ ಹಿಂತಿರುಗುತ್ತಾನೆ.

ಸನಾತನ ಧರ್ಮದ ಭವ್ಯ ಸಾಂಸ್ಕೃತಿಕ ಸಂಗಮ:

ಜಗನ್ನಾಥ ರಥಯಾತ್ರೆ ಕೇವಲ ಒಂದು ಧಾರ್ಮಿಕ ಉತ್ಸವವಲ್ಲ, ಇದು ಭಾರತದ ಅದ್ಭುತ ಸಾಂಸ್ಕೃತಿಕ ವೈವಿಧ್ಯತೆ, ಅಚಲ ನಂಬಿಕೆ ಮತ್ತು ಸಾಮಾಜಿಕ ಏಕತೆಯ ಭವ್ಯ ಸಂಗಮವಾಗಿದೆ. ಜುಲೈ 16 ರಂದು ಪ್ರಾರಂಭವಾಗುವ ಈ ಒಂಬತ್ತು ದಿನಗಳ ದಿವ್ಯ ಉತ್ಸವವು ಲಕ್ಷಾಂತರ ಭಕ್ತರಿಗೆ ಆಧ್ಯಾತ್ಮಿಕ ಜಾಗೃತಿಯನ್ನು ತರಲಿದೆ. ನೀವು ಸಹ ಈ ದೈವಿಕ ಆಚರಣೆಯ ಭಾಗವಾಗಲಿದ್ದರೆ, ನಿಯಮಗಳನ್ನು ಶ್ರದ್ಧೆಯಿಂದ ಪಾಲಿಸಿ, ಮಹಾಪ್ರಭುಗಳ ಭಕ್ತಿಯಲ್ಲಿ ಲೀನವಾಗಿ ನಿಮ್ಮ ಜೀವನವನ್ನು ಪಾವನಗೊಳಿಸಿಕೊಳ್ಳಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತನ್ನ ಅಭ್ಯರ್ಥಿಯ ನಾಮಪತ್ರ ರದ್ದಾಗಲೆಂದೇ ಕಾಂಗ್ರೆಸ್ ಫಾರ್ಮ್ ತುಂಬಿತ್ತಾ? ಬಿಜೆಪಿ ಲೇವಡಿ – Kannada News

ನವದೆಹಲಿ, ಜೂನ್ 10: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ನ ರಾಜ್ಯಸಭಾ ಅಭ್ಯರ್ಥಿ ಮೀನಾಕ್ಷಿ ನಟರಾಜನ್ (Meenakshi Natarajan) ಅವರ ನಾಮಪತ್ರ ತಿರಸ್ಕೃತಗೊಂಡಿರುವ ವಿಷಯದ ಕುರಿತು ಬಿಜೆಪಿ ಸಂಸದ ಹಾಗೂ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಮಧ್ಯಪ್ರದೇಶದಲ್ಲಿ ತನ್ನ ರಾಜ್ಯಸಭಾ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡ ನಂತರ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ರಾಜಕಾರಣವು ಆ ಪಕ್ಷದ ನಿಜವಾದ ಉದ್ದೇಶಗಳನ್ನು ಮತ್ತು ಅದರ ಆಂತರಿಕ ಪರಿಸ್ಥಿತಿಯನ್ನು ದೇಶದ ಮುಂದೆ ಸಂಪೂರ್ಣವಾಗಿ ಬಯಲು ಮಾಡಿದೆ. ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ವಿರುದ್ಧ ತೆಲಂಗಾಣದ ನ್ಯಾಯಾಲಯದಲ್ಲಿ ಪ್ರಕರಣವೊಂದು ಬಾಕಿ ಇತ್ತು ಎಂಬುದು ತೀರಾ ಸ್ಪಷ್ಟವಾದ ವಿಷಯ” ಎಂದು ಸುಧಾಂಶು ತ್ರಿವೇದಿ ಹೇಳಿದ್ದಾರೆ.

ಈ ಪ್ರಕರಣದ ಹಿನ್ನೆಲೆಯನ್ನು ವಿವರವಾಗಿ ಪ್ರಸ್ತಾಪಿಸಿದ ಸುಧಾಂಶು ತ್ರಿವೇದಿ, “ಅದು ತೆಲಂಗಾಣದ ಒಬ್ಬ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯೇ ತನ್ನದೇ ರಾಜ್ಯದ ಮತ್ತೊಬ್ಬ ಕಾಂಗ್ರೆಸ್ ನಾಯಕನ ವಿರುದ್ಧ ಲೈಂಗಿಕ ಶೋಷಣೆ ಮತ್ತು ಅನುಚಿತ ವರ್ತನೆಯ ಆರೋಪ ಹೊರಿಸಿ ದಾಖಲಿಸಿದ್ದ ಪ್ರಕರಣವಾಗಿತ್ತು. ಆಕೆ ನೀಡಿದ್ದ ದೂರಿನಲ್ಲಿ ಆ ಸಮಯದಲ್ಲಿ ಉಸ್ತುವಾರಿಯಾಗಿದ್ದ ಮೀನಾಕ್ಷಿ ನಟರಾಜನ್ ಹೆಸರನ್ನೂ ಈ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿಸಿದ್ದರು. ಕಾಂಗ್ರೆಸ್ ತನ್ನದೇ ಪಕ್ಷದ ಕಾರ್ಯಕರ್ತೆಯ ಮೇಲಾದ ದೌರ್ಜನ್ಯವನ್ನು ಮುಚ್ಚಿಟ್ಟಿತ್ತು” ಎಂದು ಟೀಕಿಸಿದ್ದಾರೆ.

“ಕಾನೂನಿನ ದೃಷ್ಟಿಯಿಂದ ನೋಡುವುದಾದರೆ, ಪ್ರತಿಯೊಬ್ಬ ಅಭ್ಯರ್ಥಿಯೂ ತಮ್ಮ ವಿರುದ್ಧ ಬಾಕಿ ಇರುವ ಯಾವುದೇ ಪ್ರಕರಣದ ಮಾಹಿತಿಯನ್ನು ಅಫಿಡವಿಟ್‌ನಲ್ಲಿ ಕಡ್ಡಾಯವಾಗಿ ಬಹಿರಂಗಪಡಿಸಬೇಕಾಗುತ್ತದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದೆ, ಹಾಗಿದ್ದಾಗ ಈ ಪ್ರಕರಣವನ್ನು ಮುಚ್ಚಲಾಗಿದೆ ಎಂದು ಅವರು ಲಿಖಿತ ಹೇಳಿಕೆಯನ್ನು ಏಕೆ ನೀಡಲಿಲ್ಲ? ತಮಗೆ ಈ ಚುನಾವಣೆಯಲ್ಲಿ ಸೋಲು ಖಚಿತ ಎಂಬುದನ್ನು ಮೊದಲೇ ಅರಿತಿದ್ದ ಕಾಂಗ್ರೆಸ್, ಉದ್ದೇಶಪೂರ್ವಕವಾಗಿಯೇ ತನ್ನ ಅಭ್ಯರ್ಥಿಯ ನಾಮಪತ್ರ ರದ್ದಾಗುವ ರೀತಿಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿತ್ತೇ?” ಎಂದು ಪ್ರಶ್ನಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link