All posts by nagaraj11081993

WTC ಅಂಕ ಪಟ್ಟಿಯಲ್ಲಿ ಮೇಲೇರಿದ ನ್ಯೂಝಿಲೆಂಡ್ – Kannada News | WTC 2025 Standings: New Zealand climb to second spot

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸರಣಿಯಲ್ಲಿ ನ್ಯೂಝಿಲೆಂಡ್ ಶುಭಾರಂಭ ಮಾಡಿದೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಕಿವೀಸ್ ಪಡೆ 2-0 ಅಂತರದಿಂದ ಗೆದ್ದುಕೊಂಡಿದೆ. ಈ ಗೆಲುವಿನ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ನೂತನ ಅಂಕ ಪಟ್ಟಿ ಕೂಡ ಬಿಡುಗಡೆಯಾಗಿದೆ. 

ನೂತನ ಅಂಕ ಪಟ್ಟಿಯಲ್ಲೂ ಆಸ್ಟ್ರೇಲಿಯಾ ತಂಡ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಆಸೀಸ್ ಪಡೆ ಈವರೆಗೆ 6 ಪಂದ್ಯಗಳನ್ನು ಆಡಿದ್ದು, ಎಲ್ಲಾ ಮ್ಯಾಚ್​ಗಳಲ್ಲೂ ಜಯ ಸಾಧಿಸಿದೆ. ಈ ಮೂಲಕ 100 ಶೇಕಡಾವಾರಿನೊಂದಿಗೆ ಮೊದಲ ಸ್ಥಾನವನ್ನು ಅಲಂಕರಿಸಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಗೆಲುವಿನೊಂದಿಗೆ ನ್ಯೂಝಿಲೆಂಡ್ ತಂಡ ದ್ವಿತೀಯ ಸ್ಥಾನಕ್ಕೇರಿದೆ. ಕಿವೀಸ್ ಪಡೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸರಣಿಯಲ್ಲಿ ಆಡಿದ 3 ಮ್ಯಾಚ್​ಗಳಲ್ಲಿ ಎರಡು ಗೆಲುವು ಹಾಗೂ ಒಂದು ಡ್ರಾನೊಂದಿಗೆ 77.780 ಶೇಕಡಾವಾರು ಹೊಂದಿದೆ. ಈ ಮೂಲಕ WTC ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಟೀಮ್ ಇಂಡಿಯಾವನ್ನು 2-0 ಅಂತರದಿಂದ ಸೋಲಿಸಿರುವ  ಸೌತ್ ಆಫ್ರಿಕಾ ತಂಡ ಮೂರನೇ ಸ್ಥಾನದಲ್ಲಿದೆ. ಆಫ್ರಿಕಾ ಪಡೆ ಈವರೆಗೆ 4 ಟೆಸ್ಟ್ ಪಂದ್ಯಗಳನ್ನಾಡಿದ್ದು, ಈ ನಾಲ್ಕು ಮ್ಯಾಚ್​ಗಳಲ್ಲಿ 3 ಜಯ ಸಾಧಿಸಿದೆ. ಈ ಮೂಲಕ 75 ಶೇಕಡಾವಾರಿನೊಂದಿಗೆ ಸೌತ್ ಆಫ್ರಿಕಾ ತಂಡ ತೃತೀಯ ಸ್ಥಾನವನ್ನು ಅಲಂಕರಿಸಿದೆ.

ಹಾಗೆಯೇ ಶ್ರೀಲಂಕಾ ತಂಡ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಲಂಕಾ ಪಡೆ ಕೂಡ ಈವರೆಗೆ 2 ಪಂದ್ಯಗಳನ್ನು ಮಾತ್ರ ಆಡಿದ್ದು, ಈ ಮ್ಯಾಚ್​ಗಳಲ್ಲಿ ಒಂದು ಜಯ ಹಾಗೂ ಒಂದು ಡ್ರಾನೊಂದಿಗೆ 66.67 ಶೇಕಡಾವಾರು ಅಂಕಗಳನ್ನು ಪಡೆದುಕೊಂಡಿದೆ.

ಐದನೇ ಸ್ಥಾನದಲ್ಲಿ ಈ ಬಾರಿ ಪಾಕಿಸ್ತಾನ್ ತಂಡ ಕಾಣಿಸಿಕೊಂಡಿದೆ. ಪಾಕ್ ಪಡೆ ಆಡಿರುವ 2 ಮ್ಯಾಚ್​ಗಳಲ್ಲಿ ಒಂದು ಜಯ ಹಾಗೂ ಒಂದು ಸೋಲಿನೊಂದಿಗೆ 50 ಶೇಕಡಾವಾರು ಪಡೆದುಕೊಂಡಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸರಣಿಯ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ.

ಇನ್ನು ಟೀಮ್ ಇಂಡಿಯಾ ಈವರೆಗೆ 9 ಪಂದ್ಯಗಳಲ್ಲಿ 4 ಗೆಲುವು ಮತ್ತು ಒಂದು ಡ್ರಾ ಸಾಧಿಸಿದೆ. ಇನ್ನುಳಿದ 4 ಮ್ಯಾಚ್​ಗಳಲ್ಲೂ ಹೀನಾಯ ಸೋಲನುಭವಿಸಿದೆ. ಈ ಸೋಲು-ಗೆಲುವುಗಳೊಂದಿಗೆ  48.150 ಶೇಕಡಾವಾರು ಅಂಕ ಪಡೆದಿರುವ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸರಣಿಯ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ.

ಆ್ಯಶಸ್ ಸರಣಿ ಸೋತಿರುವ ಇಂಗ್ಲೆಂಡ್ ತಂಡವು 27.080 ಶೇಕಡಾವಾರು ಅಂಕಗಳೊಂದಿಗೆ 7ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಬಾಂಗ್ಲಾದೇಶ್ ತಂಡವು 16.67 ಶೇಕಡಾವಾರು ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದ್ದರೆ, 7 ಪಂದ್ಯಗಳನ್ನಾಡಿದ 7 ಸೋಲನುಭವಿಸಿರುವ ವೆಸ್ಟ್ ಇಂಡೀಸ್ ತಂಡ 4.170 ಶೇಕಡಾವಾರು ಅಂಕಗಳೊಂದಿಗೆ 9ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

Published On – 1:58 pm, Mon, 22 December 25

Source link

ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ಮಗಳು ಬೇರೆ ಜಾತಿ ಮದುವೆಯಾಗಿದ್ದು ತಪ್ಪಾಯ್ತಾ: ಯುವಕ ಪ್ರಶ್ನೆ – Kannada News | Dharwad Pregnant Woman Honour Killing Case, Caste Conflict: Her Father loved Muslim girl says Vivekananda

ಹುಬ್ಬಳ್ಳಿ, ಡಿಸೆಂಬರ್ 22: ಹುಬ್ಬಳ್ಳಿಯಲ್ಲಿ ನಡೆದ ಹೃದಯ ವಿದ್ರಾವಕ ಮರ್ಯಾದಾ ಹತ್ಯೆ ಪ್ರಕರಣದಲ್ಲಿ, ಏಳು ತಿಂಗಳ ಗರ್ಭಿಣಿಯಾಗಿದ್ದ ಮಾನ್ಯಾಳ ಪತಿ ವಿವೇಕಾನಂದ ತೀವ್ರ ದುಃಖದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ತಮ್ಮ ಪತ್ನಿಯನ್ನು ಆಕೆಯ ತಂದೆಯೇ ಕೊಲೆ ಮಾಡಿದ್ದು, ಆತನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ. ಮಾನ್ಯಾ ಮತ್ತು ವಿವೇಕ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು.

ಮಾನ್ಯಾಳ ತಂದೆ ಹಿಂದೆ ಹಿಂದೆ ಮುಸ್ಲಿಂ ಹುಡುಗಿಯೊಬ್ಬರನ್ನು ಪ್ರೀತಿಸಿದ್ದರು. ಆವಾಗ ಅವರಿಗೆ ಜಾತಿ ಮುಖ್ಯವಾಗಿರಲಿಲ್ಲ. ಆದರೆ, ಈಗ ತಮ್ಮ ಮಗಳು ಬೇರೆ ಜಾತಿಯ ಹುಡುಗನನ್ನು ಮದುವೆಯಾಗಿದ್ದು ತಪ್ಪಾಯ್ತಾ ಎಂದು ವಿವೇಕಾನಂದ ಪ್ರಶ್ನಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಹಲವು ಬಾರಿ ಮಧ್ಯಪ್ರವೇಶಿಸಿ, ಎಚ್ಚರಿಕೆ ನೀಡಿದ್ದರೂ ಕೊಲೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಸದ್ಯ, ಮಾನ್ಯಾ ಶವವನ್ನು ಹುಬ್ಬಳ್ಳಿ ಕಿಮ್ಸ್ ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು, ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಪ್ರಕರಣದ ಸಂಪೂರ್ಣ ವಿವರಗಳಿಗೆ ಓದಿ: ದಲಿತ ಯುವಕನ ಪ್ರೀತಿಸಿ ಮದುವೆಯಾಗಿದ್ದಕ್ಕೆ ಗರ್ಭಿಣಿ ಮಗಳ ಕ್ರೂರವಾಗಿ ಹತ್ಯೆಗೈದ ತಂದೆ: ಪೈಶಾಚಿಕ ಕೃತ್ಯಕ್ಕೆ ಬೆಚ್ಚಿಬಿದ್ದ ಧಾರವಾಡ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಸಿದ್ದರಾಮಯ್ಯ ಮೈಸೂರು ಭೇಟಿ ವೇಳೆಯೇ ತಾಲೂಕು ಕಚೇರಿಗೆ RDX ಬಾಂಬ್ ಬೆದರಿಕೆ – Kannada News | Mysuru Bomb Threat: Saraguru Office Receives RDX Email Amid CM Siddaramaiah Visit

ಸಿಎಂ ಸಿದ್ದರಾಮಯ್ಯ ಮೈಸೂರು ಭೇಟಿಯ ವೇಳೆಯೇ ತಾಲೂಕು ಕಚೇರಿಗೆ RDX ಬಾಂಬ್ ಬೆದರಿಕೆ

ಮೈಸೂರು, ಡಿಸೆಂಬರ್ 22: ಇತ್ತೀಚಿಗೆ ಮಂಗಳೂರು, ಭಟ್ಕಳ ಸೇರಿದಂತೆ ರಾಜ್ಯದಲ್ಲಿ ಹುಸಿ ಬಾಂಬ್ ಬೆದರಿಕೆ (Bomb Threat) ಇ-ಮೇಲ್​ಗಳು ಹೆಚ್ಚಿದ್ದು, ಇದೀಗ ಸಿಎಂ ಮೈಸೂರು ಭೇಟಿಯ ನಡುವೆಯೇ ಸರಗೂರು ತಾಲೂಕು ಕಚೇರಿಗೂ ಇದೇ ರೀತಿಯ ಇ-ಮೇಲ್ ಬಂದಿರುವುದು ಆತಂಕ ಸೃಷ್ಟಿಸಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಇ-ಮೇಲ್​ನಲ್ಲಿ ನಟ ಅಜಿತ್ ಕುಮಾರ್ ಹೆಸರು ಉಲ್ಲೇಖ

ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಆಗಮಿಸಿರುವ ವೇಳೆಯಲ್ಲಿಯೇ ಮೈಸೂರಿನ ಸರಗೂರು ತಾಲ್ಲೂಕು ಕಚೇರಿಗೆ ಆರ್‌ಡಿಎಕ್ಸ್ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಬಂದಿದೆ. ಮಧ್ಯಾಹ್ನ 1 ಗಂಟೆಗೆ ಸ್ಫೋಟಗೊಳ್ಳುವ ಎಚ್ಚರಿಕೆ ನೀಡಲಾಗಿದ್ದು, ಅಧಿಕಾರಿಗಳು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ನಟ ಅಜಿತ್ ಕುಮಾರ್ ಹೆಸರನ್ನೂ ಸಹ ಮೇಲ್​ನಲ್ಲಿ ಉಲ್ಲೇಖಿಸಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದ್ದಾರೆ.

ಇದೇ ಮೊದಲೇನಲ್ಲ ಹುಸಿ ಬೆದರಿಕೆ

ಡಿ.12ರಂದು ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಬಂದ ಬಾಂಬ್ ಬೆದರಿಕೆ ಇಮೇಲ್ ಕೆಲಕಾಲ ಆತಂಕ ಸೃಷ್ಟಿಸಿತ್ತು. ಜಿಲ್ಲಾಡಳಿತ ಹಾಗೂ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಶೋಧ ನಡೆಸಿದ್ದು, ತಮಿಳುನಾಡಿನ 13 ವರ್ಷದ ಬಾಲಕಿಯಿಂದ ಬಂದ ಹುಸಿ ಬೆದರಿಕೆ ಎಂದು ತಿಳಿದುಬಂದಿತ್ತು. ಡಿ.15ರಂದು ಗದಗ ಜಿಲ್ಲಾಡಳಿತ ಭವನ ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಡಿಸಿ ಕಚೇರಿಗೆ ಬಾಂಬ್​​ ಬೆದರಿಕೆ ಹಾಕಲಾಗಿದ್ದು, ಪಾಕ್​ನ ಐಎಸ್​​ಐ ಮತ್ತು ಎಲ್​​​ಟಿಟಿಇ ಕಾರ್ಯಕರ್ತರ ಜೊತೆ ಸೇರಿ 5 ಬಾಂಬ್​ಗಳಿಂದ ಜಿಲ್ಲಾಡಳಿತ ಭವನ ಸ್ಫೋಟಿಸುವುದಾಗಿ ಕಿಡಿಗೇಡಿಗಳು ಧಮ್ಕಿ ಹಾಕಿದ್ದರು.

ಇದನ್ನೂ ಓದಿ ಗದಗ, ಮಂಗಳೂರು ಆಯ್ತು ಈಗ ಭಟ್ಕಳದ ತಹಶೀಲ್ದಾರ್ ಕಚೇರಿಗೂ ಬಾಂಬ್ ಬೆದರಿಕೆ!

ಇದಷ್ಟೇ ಅಲ್ಲದೇ ಉತ್ತರ ಕನ್ನಡದ ಭಟ್ಕಳ ಮತ್ತು ತುಮಕೂರಿನ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರ ಅಧಿಕೃತ ಇ-ಮೇಲ್ ಐಡಿಗೂ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ತಕ್ಷಣ ಪೊಲೀಸರು ಡಿಸಿ ಕಚೇರಿಗೆ ಧಾವಿಸಿ ಒಳಭಾಗದಲ್ಲಿ ತೀವ್ರ ತಪಾಸಣೆ ನಡೆಸಿದ್ದರು. ಈ ಎಲ್ಲಾ ಇ-ಮೇಲ್​ಗಳೂ ಹುಸಿ ಬೆದರಿಕೆಗಳೆಂದು ತಿಳಿದುಬಂದಿದ್ದವು. ಇದೀಗ ಮತ್ತೊಮ್ಮೆ ಮೈಸೂರಿನಲ್ಲಿಯೂ ಬೆದರಿಕೆ ಇ-ಮೇಲ್ ಬಂದಿದ್ದು, ಗೊಂದಲ ಸೃಷ್ಟಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Patanjali: ಷೇರುಪೆಟೆಯಲ್ಲಿ ಪತಂಜಲಿ ಫುಡ್ಸ್; ಹೂಡಿಕೆದಾರರಿಗೆ 3,900 ಕೋಟಿ ರೂ ಗಳಿಕೆ – Kannada News | Patanjali Foods shares successful run this week, investors gain Rs 3,900 crore

ಮುಂಬೈ, ಡಿಸೆಂಬರ್ 22: ಪತಂಜಲಿ ಫುಡ್ಸ್ (Patanjali Foods) ಫುಡ್ಸ್ ಷೇರು ಬೆಲೆ ಇಂದು ಸೋಮವಾರ ಅಲ್ಪ ಹಿನ್ನಡೆ ಪಡೆದರೂ ಕಳೆದ ವಾರದಿಂದ ಒಟ್ಟಾರೆಯಾಗಿ ಪಾಸಿಟಿವ್ ದೆಸೆಯಲ್ಲಿದೆ. ಡಿಸೆಂಬರ್ 15 ರಿಂದ, ಕಂಪನಿಯ ಷೇರುಗಳು ಸುಮಾರು 7% ರಷ್ಟು ಗಳಿಸಿದ್ದು, ಹೂಡಿಕೆದಾರರಿಗೆ ಸುಮಾರು ₹3,900 ಕೋಟಿ ಲಾಭವನ್ನು ತಂದುಕೊಟ್ಟಿವೆ. ಇದರಿಂದ ಮತ್ತೊಮ್ಮೆ ಕಂಪನಿಯ ವ್ಯಾಲ್ಯುಯೇಶನ್ ₹61,000 ಕೋಟಿ ರೂ ದಾಟಿಸಿದೆ. ಕಳೆದ ವಾರದ ಕೊನೆಯ ಟ್ರೇಡಿಂಗ್ ದಿನವಾದ ಶುಕ್ರವಾರ (ಡಿ. 19) ಪತಂಜಲಿ ಫುಡ್ಸ್ ಷೇರುಗಳ ಬೆಲೆ ಒಂದು ಹಂತದಲ್ಲಿ 2.75% ವರೆಗೆ ಏರಿಕೆ ಕಂಡಿತ್ತು. ಇಂದು ಸೋಮವಾರ ಬೆಳಗಿನ ವಹಿವಾಟಿನಲ್ಲಿ ಅದರ ಷೇರು ಬೆಲೆ ತುಸು ಇಳಿಕೆ ಕಂಡಿದೆ.

ಪತಂಜಲಿ ಷೇರು ಬೆಲೆ ಏರಿಕೆ

ವಾರದ ಕೊನೆಯ ಟ್ರೇಡಿಂಗ್ ದಿನದಂದು ಪತಂಜಲಿ ಷೇರುಗಳು ಗಮನಾರ್ಹ ಏರಿಕೆ ಕಂಡಿತು. ಟ್ರೇಡಿಂಗ್ ಅವಧಿ ಮುಗಿದಾಗ ಅದರ ಷೇರುಬೆಲೆ 560.65 ರೂನಲ್ಲಿ ಅಂತ್ಯಗೊಂಡಿತು. ಒಟ್ಟಾರೆ ಆ ದಿನ ಶೇ. 1.88ರಷ್ಟು ಏರಿತು. ಒಂದು ಹಂತದಲ್ಲಿ ಅದರ ಬೆಲೆ 566.85 ರೂಗೆ ಏರಿತ್ತು. ಶೇ. 2.75ರಷ್ಟು ಹೆಚ್ಚಳಗೊಂಡು ಗಮನ ಸೆಳೆಯಿತು. 52 ವಾರಗಳ ಕನಿಷ್ಠ ಮಟ್ಟವಾದ 521 ರೂಗೆ ಹೋಲಿಸಿದರೆ ಪತಂಜಲಿ ಷೇರುಬೆಲೆ ಗಮನಾರ್ಹವಾಗಿ ಹೆಚ್ಚಾಗಿದೆ.

ಪತಂಜಲಿ ಷೇರುಬೆಲೆ ಸತತ 4 ದಿನಗಳು ಏರಿಕೆ

ಕಂಪನಿಯ ಷೇರುಗಳು ಸತತ ನಾಲ್ಕು ದಿನ ಏರಿಕೆ ಕಂಡಿರುವುದು ವಿಶೇಷ. ಈ ವಾರಾದ್ಯಂತ ಅದರ ಬೆಲೆ ಸತತವಾಗಿ ಏರುತ್ತಿದೆ. ಬಿಎಸ್‌ಇ ದತ್ತಾಂಶದ ಪ್ರಕಾರ, ಕಂಪನಿಯ ಷೇರುಗಳು ಡಿಸೆಂಬರ್ 15 ರಂದು ₹531.20 ರೂ ಬೆಲೆ ಪಡೆದಿದ್ದವು. ಡಿಸೆಂಬರ್ 19 ರಂದು ₹560 ಕ್ಕೆ ಏರಿದೆ. ಇದರರ್ಥ ಕಂಪನಿಯ ಷೇರುಗಳು ಸುಮಾರು 6 ಪ್ರತಿಶತದಷ್ಟು ಗಳಿಸಿವೆ. ಆದಾಗ್ಯೂ, ಒಂದು ತಿಂಗಳಲ್ಲಿ, ಕಂಪನಿಯ ಷೇರುಗಳು ಶೇಕಡಾ 4 ಕ್ಕಿಂತ ಹೆಚ್ಚು ಕುಸಿದಿವೆ. ಕಳೆದ ಆರು ತಿಂಗಳಲ್ಲಿ, ಕಂಪನಿಯ ಷೇರುಗಳು ಶೇಕಡಾ 2 ಕ್ಕಿಂತ ಹೆಚ್ಚು ಗಳಿಸಿವೆ. ಕಳೆದ ಐದು ವರ್ಷಗಳಲ್ಲಿ, ಕಂಪನಿಯು ಹೂಡಿಕೆದಾರರಿಗೆ ಸುಮಾರು ಶೇ. 61 ರಷ್ಟು ರಿಟರ್ನ್ ಕೊಟ್ಟಿದೆ.

ಇದನ್ನೂ ಓದಿ: ಡೇಂಜರ್ ಮಾಲಿನ್ಯ, ಎಲ್ಲೆಲ್ಲೂ ಶೀತ, ಉಸಿರಾಟದ ತೊಂದರೆ; ಇಗೋ ಇಲ್ಲಿದೆ ಆಯುರ್ವೇದ ಪರಿಹಾರ

ಪತಂಜಲಿ ಹೂಡಿಕೆದಾರರಿಗೆ ಈ ವಾರ 3,900 ಕೋಟಿ ರೂ ಗಳಿಕೆ

ಸತತ ನಾಲ್ಕು ದಿನಗಳ ಲಾಭದಿಂದಾಗಿ ಕಂಪನಿಯ ವ್ಯಾಲ್ಯುಯೇಶನ್ ಗಮನಾರ್ಹ ಏರಿಕೆ ಕಂಡಿದೆ. ಡಿಸೆಂಬರ್ 15 ರಂದು ಕಂಪನಿಯ ವ್ಯಾಲ್ಯುಯೇಶನ್ ₹57,785.44 ಕೋಟಿ ಇತ್ತು. ಈಗ ಅದು ₹61,663.54 ಕೋಟಿ ರೂ ತಲುಪಿದೆ ಎಂದು ಡೇಟಾ ತೋರಿಸುತ್ತದೆ. ಇದರರ್ಥ ಈ ಅವಧಿಯಲ್ಲಿ ಕಂಪನಿಯ ವ್ಯಾಲ್ಯೂಯೇಶನ್ ಅಥವಾ ಹೂಡಿಕೆದಾರರ ಲಾಭವು ₹3,878.1 ಕೋಟಿಗಳಷ್ಟು ಹೆಚ್ಚಾಗಿದೆ. ಕಂಪನಿಯು ಸ್ಥಿರವಾಗಿ ಬೆಳೆಯುತ್ತಿದೆ. ಮುಂಬರುವ ದಿನಗಳಲ್ಲಿ ಕಂಪನಿಯ ಷೇರುಗಳು ಮತ್ತಷ್ಟು ಲಾಭವನ್ನು ಪಡೆಯಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ

ಚೈತ್ರಾ ಅವರು ಬಿಗ್ ಬಾಸ್​ನಿಂದ ಹೊರ ಬಂದಿದ್ದಾರೆ. ಈ ವೇಳೆ ಅವರು ಟಿವಿ9 ಕನ್ನಡಕ್ಕೆ ಸಂದರ್ಶನ ನೀಡಿದರು. ಈ ವೇಳೆ ಬಿಗ್ ಬಾಸ್ ಯಾರು ಗೆಲ್ಲುತ್ತಾರೆ ಎಂದು ಕೇಳಲಾಯಿತು. ಇದಕ್ಕೆ ಅವರು ಉತ್ತರಿಸಿದ್ದಾರೆ. ‘ಯಾರು ಗೆಲ್ಲುತ್ತಾರೆ, ಯಾರು ಗೆಲ್ಲಬೇಕು ಎಂದು ನಾನು ಹೇಳೋದು ಸರಿ ಆಗೋದಿಲ್ಲ. ಎಲ್ಲರೂ ಚೆನ್ನಾಗಿ ಆಡುತ್ತಿದ್ದಾರೆ. ಫ್ಯಾಮಿಲಿ ವೀಕ್ ಆದ ಬಳಿಕ ಸ್ಪರ್ಧಿಗಳಲ್ಲಿ ಒಂದಷ್ಟು ಬದಲಾವಣೆ ಆಗಬಹುದು’ ಎಂದು ಚೈತ್ರಾ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಮುದ್ರದೊಳಗೆ ಭರತನಾಟ್ಯ ಮಾಡಿದ 14 ವರ್ಷದ ಬಾಲಕಿ, ವಿಡಿಯೋ ವೈರಲ್ – Kannada News | Ashwin Balalu: 14 Yr Old Performs Bharatanatyam 20ft Deep for Marine Pollution Message

ಪುದುಚೇರಿ, ಡಿ.22: ಪುದುಚೇರಿಯ 14 ವರ್ಷದ ಬಾಲಕಿಯೊಬ್ಬಳು ಸಮುದ್ರದ ಒಳಗೆ ಭರತನಾಟ್ಯ ಮಾಡಿದ್ದಾಳೆ. ಇದೀಗ ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​​ ಆಗಿದೆ. 20 ಅಡಿ ನೀರಿನ ಒಳಗೆ ಭರತನಾಟ್ಯ ಮಾಡಿರುವ ವಿಡಿಯೋ ವೈರಲ್​​ ಆಗಿದೆ.  ಭರತನಾಟ್ಯ ಭಾರತೀಯ ಪ್ರಮುಖ ಕಲೆಯಾಗಿದ್ದು, ಗಡಿ, ಭಾಷೆಗಳನ್ನು ಮೀರಿ ನಿಂತಿದೆ. ಇದೀಗ ನೀರಿನ ಒಳಗೆ ಭರತಮಾಟ್ಯ ಮಾಡುವ ಮೂಲಕ ಹೊಸ ದಾಖಲೆಯನ್ನು ಈ ಹುಡುಗಿ ಮಾಡಿದ್ದಾಳೆ. ಅಶ್ವಿನ್ ಬಾಲಾಳು ಎಂಬು ಹುಡುಗಿ ಈ ನೃತ್ಯ ಪ್ರದರ್ಶನ ನೀಡಿದ್ದು, ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದಾಳೆ. ಇಂಟರ್ನ್ಯಾಷನಲ್ ಡಾನ್ಸ್ ಡೇಯಂದು ಈ ಪ್ರದರ್ಶನ ನೀಡಿದ್ದು, ಸಮುದ್ರಕ್ಕೆ ಫ್ಲಾಸ್ಟಿಕ್ ಎಸೆಯಬೇಡಿ ಎಂಬ ಜಾಗೃತಿಯನ್ನು ಮೂಡಿಸಲು ಈ ಸಾಹಸವನ್ನು ಮಾಡಿದ್ದಾಳೆ. ಈ ಮೂಲಕ ಪ್ರಪಂಚಕ್ಕೆ ಸಮುದ್ರವನ್ನು ಮಾಲಿನ್ಯ ಮಾಡುವುದನ್ನು ತಡೆಗಟ್ಟಲು ಸಂದೇಶ ನೀಡಿದ್ದಾಳೆ. 2025 ಏಪ್ರಿಲ್‌ನಲ್ಲಿ ನಡೆದ ಈ ಪ್ರದರ್ಶನಕ್ಕೆ ಸಂಬಂಧಿಸಿದ 51 ವೀಡಿಯೊ ಕ್ಲಿಪ್ ಡಿಸೆಂಬರ್ 19 ರಂದು ರಿಪೋಸ್ಟ್ ಆಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವಿಡಿಯೋ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಮಹಿಳಾ ಬೋಗಿಗೆ ನುಗ್ಗಿ ವಿದ್ಯಾರ್ಥಿನಿಯನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಿದ ವ್ಯಕ್ತಿ – Kannada News | Mumbai Local Incident: Teen Injured After Being Pushed From Train

ಮುಂಬೈ, ಡಿಸೆಂಬರ್ 22: ವ್ಯಕ್ತಿಯೊಬ್ಬ ರೈಲಿನ ಮಹಿಳಾ ಬೋಗಿಗೆ ನುಗ್ಗಿದ್ದಷ್ಟೇ ಅಲ್ಲದೆ ವಿದ್ಯಾರ್ಥಿನಿಯನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈ ಸ್ಥಳೀಯ ರೈಲಿನ ಮಹಿಳಾ ಕೋಚ್ ಹತ್ತಿದ ನಂತರ 50 ವರ್ಷದ ವ್ಯಕ್ತಿಯೊಬ್ಬ 18 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಚಲಿಸುವ ರೈಲಿನಿಂದ ತಳ್ಳಿದ್ದಾನೆ ಎಂದು ಆರೋಪಿಸಲಾಗಿದೆ. ಮಹಿಳಾ ಬೋಗಿಗೆ ಹತ್ತಿದ್ದಕ್ಕೆ ವ್ಯಕ್ತಿಯನ್ನು ಯುವತಿ ಪ್ರಶ್ನಿಸಿದ್ದಳು, ಅದಕ್ಕೆ ಕೋಪಗೊಂಡ ವ್ಯಕ್ತಿ ಆಕೆಯನ್ನು ರೈಲಿನಿಂದ ಕೆಳಗೆ ತಳ್ಳಿದ್ದಾನೆ.

ಆಕೆ ತನ್ನ ಸ್ನೇಹಿತೆಯೊಂದಿಗೆ ಖಾರ್ಘರ್‌ನಲ್ಲಿರುವ ಕಾಲೇಜಿಗೆ ಪ್ರಯಾಣಿಸುತ್ತಿದ್ದಾಗ ಪನ್ವೇಲ್ ಮತ್ತು ಖಂಡೇಶ್ವರ ರೈಲು ನಿಲ್ದಾಣಗಳ ನಡುವೆ ಈ ಘಟನೆ ವರದಿಯಾಗಿದೆ.ಪನ್ವೇಲ್ ನಿಲ್ದಾಣದಿಂದ ಸುಮಾರು 1.5 ಕಿ.ಮೀ ದೂರದಲ್ಲಿ ವಿದ್ಯಾರ್ಥಿನಿ ಬಿದ್ದಿದ್ದಾಳೆ ಎಂದು ತಿಳಿದುಬಂದಿದೆ. ಆಕೆಯ ತಲೆ, ಸೊಂಟ ಮತ್ತು ಕೈಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಈಗ ಆಕೆಯ ಸ್ಥಿತಿ ಸ್ಥಿರವಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಡಿಕೆಶಿ ಪರ ಹಿಂದುಳಿದ ಮಠಾಧೀಶರಿಂದ ಬ್ಯಾಟಿಂಗ್; ಹೈಕಮಾಂಡ್​ಗೆ ಪತ್ರ ಬರೆದು ಪೋಸ್ಟ್ – Kannada News | Kalaburagi backward community Seers Push DK Shivakumar for Karnataka CM Post

ಕಲಬುರಗಿ, ಡಿಸೆಂಬರ್ 22: ಕರ್ನಾಟಕ ಕಾಂಗ್ರೆಸ್ ರಾಜಕೀಯದಲ್ಲಿ  ಆಡಳಿತ ಹಂಚಿಕೆ ಸಂಬಂಧಿಸಿದ ಚರ್ಚೆ ಮತ್ತೊಮ್ಮೆ ಜೋರಾಗಿದೆ. ಇಲ್ಲಿಯವರೆಗೂ ಸಿಎಂ ಸಿದ್ದರಾಮಯ್ಯಗೆ ಹಿಂದುಳಿದ ವರ್ಗಗಳು ಸಾಥ್ ಕೊಡುತ್ತಲೇ ಬಂದಿವೆ. ಆದರೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಒತ್ತಾಯದೊಂದಿಗೆ ಹಿಂದುಳಿದ ಸಮುದಾಯದ ಮಠಾಧೀಶರು ಮುನ್ನಡೆಸಿರುವ ಮಹತ್ವದ ಚಳವಳಿ ಕಲಬುರಗಿಯಲ್ಲಿ ಆರಂಭವಾಗಿದೆ. ಬ್ರಹ್ಮ ಶ್ರೀ ನಾರಾಯಣ ಗುರುಶಕ್ತಿಪೀಠದ ರಾಜ್ಯಾಧ್ಯಕ್ಷರಾದ ಪ್ರಣವಾನಂದ ಶ್ರೀಗಳ ನೇತೃತ್ವದಲ್ಲಿ ಹಿಂದುಳಿದ ಮಠಾಧೀಶರ ಮಹಾಸಭೆ ಡಿಕೆಶಿ ಪರ ಬಹಿರಂಗ ಬೆಂಬಲ ವ್ಯಕ್ತಪಡಿಸಿದೆ.

ಈ ಸಂಬಂಧ ಹತ್ತರಿಂದ ಹದಿನೈದು ಮಂದಿ ಮಠಾಧೀಶರು ದೆಹಲಿಗೆ ತೆರಳಿ ಕಾಂಗ್ರೆಸ್ ಹೈಕಮಾಂಡ್‌ ನಾಯಕರಾದ ರಾಹುಲ್ ಗಾಂಧಿ ಹಾಗೂ ಕೆ.ಸಿ. ವೇಣುಗೋಪಾಲ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡದೇ ಹೋದರೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದು ಪ್ರಣವಾನಂದ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ. ಡಿಕೆಶಿಗೆ ಅವಕಾಶ ನೀಡದಿದ್ದರೆ ಪಕ್ಷ ಸರ್ವನಾಶದ ಹಾದಿಗೆ ಹೋಗುವ ಸಾಧ್ಯತೆ ಇದೆ ಎಂದೂ ಅವರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನ್ಯೂಜಿಲೆಂಡ್ ಜೊತೆಗೂ ಟ್ರೇಡ್ ಡೀಲ್ ಮುಗಿಸಿದ ಭಾರತ; ಈ ವರ್ಷದಲ್ಲೇ ಭಾರತಕ್ಕಿದು 3ನೇ ಎಫ್​ಟಿಎ – Kannada News | India and New Zealand finalize the FTA, expected to boost the trade between them

2025ರ ಮಾರ್ಚ್​ನಲ್ಲಿ ನ್ಯೂಜಿಲೆಂಡ್ ಪ್ರಧಾನಿಯ ಭಾರತ ಭೇಟಿ ಸಂದರ್ಭದ ಫೋಟೋ

ನವದೆಹಲಿ, ಡಿಸೆಂಬರ್ 22: ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವೆ ಮುಕ್ತ ವ್ಯಾಪಾರ ಒಪ್ಪಂದ (India New Zealand Trade Deal) ಅಂತಿಮಗೊಂಡಿದೆ. ಇದೇ ಮಾರ್ಚ್ ತಿಂಗಳಿಂದ ಎರಡೂ ಕಡೆಗಳಿಂದ ನಡೆದ ಮಾತುಕತೆಗಳು ಫಲಪ್ರದ ಎನಿಸಿವೆ. ಎರಡೂ ದೇಶಗಳ ಮಧ್ಯೆ ಮುಂದಿನ ದಿನಗಳಲ್ಲಿ ವ್ಯಾಪಾರ ವಹಿವಾಟು ಬಹುತೇಕ ಮುಕ್ತವಾಗಿರಲಿವೆ. ಭಾರತ ಸರ್ಕಾರ ವಿವಿಧ ದೇಶಗಳೊಂದಿಗೆ ವ್ಯಾಪಾರ ಒಪ್ಪಂದ ಕುದುರಿಸಲು ಕ್ಷಿಪ್ರವಾಗಿ ಹೆಜ್ಜೆಗಳನ್ನು ಇಡುತ್ತಿದೆ. ಈ ವರ್ಷದಲ್ಲೇ ನ್ಯೂಜಿಲೆಂಡ್​ನದ್ದೂ ಸೇರಿ ಮೂರು ಟ್ರೇಡ್ ಡೀಲ್​ಗಳು ಅಂತಿಮಗೊಂಡಿವೆ. ಬ್ರಿಟನ್ ಮತ್ತು ಓಮನ್ ದೇಶಗಳೊಂದಿಗೂ ಭಾರತ ಈ ವರ್ಷ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ.

ಇತ್ತೀಚಿನ ವರ್ಷಗಳಲ್ಲಿ ಭಾರತ ಮಾಡಿಕೊಂಡ ಏಳನೇ ಎಫ್​ಟಿಎ ಕೂಡ ಇದಾಗಿದೆ. ಆಸ್ಟ್ರೇಲಿಯಾ, ಯುಎಇ, ಮಾರಿಷಸ್, ಇಎಫ್​ಟಿಎ ಜೊತೆಗೂ ಭಾರತವು ವ್ಯಾಪಾರ ಒಪ್ಪಂದಗಳನ್ನು ಕುದುರಿಸಿದೆ. ಅಮೆರಿಕ, ಯೂರೋಪ್ ಜೊತೆಗೂ ಟ್ರೇಡ್ ಡೀಲ್ ಮಾಡಿಕೊಳ್ಳಲು ಭಾರತ ಸತತವಾಗಿ ಮಾತುಕತೆಗಳನ್ನು ನಡೆಸುತ್ತಿದೆ.

ಇದನ್ನೂ ಓದಿ: ಬೆಂಗಳೂರಿನ ಐಫೋನ್ ಫ್ಯಾಕ್ಟರಿಯಲ್ಲಿ ಕ್ಷಿಪ್ರವೇಗದಲ್ಲಿ 30,000 ಉದ್ಯೋಗಿಗಳ ನೇಮಕ; ಭಾರತದಲ್ಲಿ ಸಿಕ್ಕಾಪಟ್ಟೆ ಆಗುತ್ತಿದೆ ಐಟಿ ಹೈರಿಂಗ್

ನ್ಯೂಜಿಲ್ಯಾಂಡ್​ಗೆ ಸಖತ್ ಡೀಲ್; ಭಾರತಕ್ಕೇನು ಲಾಭ?

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲುಕ್ಸನ್ ಅವರು ಜಂಟಿಯಾಗಿ ಈ ಟ್ರೇಡ್ ಡೀಲ್ ಅಂತಿಮಗೊಂಡಿರುವುದನ್ನು ಘೋಷಿಸಿದ್ದಾರೆ. ಇದಕ್ಕೂ ಮುನ್ನ ಇಬ್ಬರೂ ಕೂಡ ದೂರವಾಣಿ ಮೂಲಕ ಮಾತನಾಡಿದ್ದರು. ಲುಕ್ಸನ್ ಅವರು 2025ರ ಮಾರ್ಚ್​ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ ಟ್ರೇಡ್ ಡೀಲ್ ಸಂಬಂಧ ಮಾತುಕತೆಗೆ ಚಾಲನೆ ಸಿಕ್ಕಿತ್ತು. ಕೆಲವೇ ತಿಂಗಳಲ್ಲಿ ಒಪ್ಪಂದ ಸಾಕಾರಗೊಂಡಿರುವುದು ಗಮನಾರ್ಹ ಸಂಗತಿ.

ನ್ಯೂಜಿಲ್ಯಾಂಡ್ ಪ್ರಧಾನಿ ಲುಕ್ಸನ್ ಅವರು ಎಕ್ಸ್​ನಲ್ಲಿ ಈ ಟ್ರೇಡ್ ಡೀಲ್ ಅಂತಿಮಗೊಂಡಿರುವ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಭಾರತಕ್ಕೆ ನ್ಯೂಜಿಲ್ಯಾಂಡ್​ನ ರಫ್ತು ವರ್ಷಕ್ಕೆ 1.1-1.3 ಬಿಲಿಯನ್ ಡಾಲರ್ ದಾಟುವ ನಿರೀಕ್ಷೆ ಇದೆ ಎಂದಿದ್ದಾರೆ.

ನ್ಯೂಜಿಲೆಂಡ್ ಪ್ರಧಾನಿಗಳ ಎಕ್ಸ್ ಪೋಸ್ಟ್

ಇದನ್ನೂ ಓದಿ: ಡಾವೋಸ್ ಸಭೆಗೆ ಭಾರತದಿಂದ ಪ್ರಬಲ ತಂಡ; 100ಕ್ಕೂ ಹೆಚ್ಚು ಉದ್ಯಮಿಗಳು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ನಿಯೋಗದಲ್ಲಿ

ಒಪ್ಪಂದದ ಪ್ರಕಾರ, ನ್ಯೂಜಿಲ್ಯಾಂಡ್​ನ ಶೇ. 95ರಷ್ಟು ಉತ್ಪನ್ನಗಳಿಗೆ ಭಾರತದ ಟ್ಯಾರಿಫ್ ನಿರ್ಮೂಲನೆ ಆಗಲಿದೆ ಅಥವಾ ತಗ್ಗಲಿದೆ ಎಂದು ಹೇಳಲಾಗಿದೆ. ಭಾರತದ ಬಹಳ ಡೊಡ್ಡ ಮಾರುಕಟ್ಟೆಯ ಪ್ರವೇಶವು ನ್ಯೂಜಿಲ್ಯಾಂಡ್​ಗೆ ಮುಕ್ತವಾಗಿ ಸಿಗುತ್ತದೆ. ಅಲ್ಲಿಯ ಹಣ್ಣು, ಕಬ್ಬಿಣ, ಉಕ್ಕು, ಮರ, ಕಲ್ಲಿದ್ದಲು, ಉಣ್ಣೆ, ಡೈರಿ ಉತ್ಪನ್ನಗಳು ಭಾರತಕ್ಕೆ ಹೆಚ್ಚಾಗಿ ರಫ್ತಾಗುವುದು.

ಭಾರತದಿಂದ ನ್ಯೂಜಿಲ್ಯಾಂಡ್​ಗೆ ಔಷಧೋತ್ಪನ್ನಗಳು, ಪೆಟ್ರೋಲಿಯಂ, ಕಾಟನ್ ಬಟ್ಟೆ, ಮೋಟಾರು ವಾಹನ, ರೆಡಿಮೇಡ್ ಬಟ್ಟೆ ಇತ್ಯಾದಿಗಳು ರಫ್ತಾಗುತ್ತವೆ. ನ್ಯೂಜಿಲ್ಯಾಂಡ್​ನಿಂದ ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ 20 ಬಿಲಿಯನ್ ಡಾಲರ್ ಹೂಡಿಕೆಯಾಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅನೈತಿಕ ಸಂಬಂಧಕ್ಕೆ ಗುಡ್ ಬೈ ಹೇಳಿದ ಯುವಕನ ಮೇಲೆ ಮಹಿಳೆಯಿಂದಲೇ ಮಾರಣಾಂತಿಕ ಹಲ್ಲೆ! – Kannada News | Devanahalli affair: Woman Gang Attacks Lover over breakup in Doddaballapur, got arrested

ಅನೈತಿಕ ಸಂಬಂಧಕ್ಕೆ ಗುಡ್ ಬೈ ಹೇಳಿದ ಯುವಕನ ಮೇಲೆ ಮಹಿಳೆಯಿಂದಲೇ ಮಾರಣಾಂತಿಕ ಹಲ್ಲೆ!

ದೇವನಹಳ್ಳಿ, ಡಿಸೆಂಬರ್ 22: ಅನೈತಿಕ ಸಂಬಂಧ ಇಟ್ಟುಕೊಂಡು ಸಂಗಾತಿ ಕೈಲಿ ಸಿಕ್ಕಿಬಿದ್ದು ಒದೆ ತಿಂದಿರುವ ಸಾಕಷ್ಟು ಘಟನೆಗಳು ಬೆಳಕಿಗೆ ಬಂದಿವೆ. ಆದರೆ ಅನೈತಿಕ ಸಂಬಂಧ ಮುಂದುವರೆಸುವುದು ಬೇಡವೆಂದ ಯುವಕನ ಮೇಲೆ ಮಹಿಳೆಯೇ ಗ್ಯಾಂಗ್‌ ಕಟ್ಟಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಯ್ಯನ ಅಗ್ರಹಾರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಗ್ಯಾಂಗ್ ಕಟ್ಟಿ ದಾಳಿ ಮಾಡಿಸಿದ ಮಹಿಳೆ

ಕಾರ್ತಿಕ್ ಎಂಬ ಯುವಕ ದೀಪಾ ಎಂಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಮನೆಯವರ ಬುದ್ದಿವಾದದ ಬಳಿಕ ಆಕೆಯ ಸಹವಾಸವನ್ನೇ ಮಾಡಬಾರದೆಂದು ನಿರ್ಧಾರ ಮಾಡಿ, ಆಕೆಯ ಸಹವಾಸವನ್ನು ಸಂಪೂರ್ಣವಾಗಿ ತೊರೆದಿದ್ದ. ಇದರಿಂದ ಆಕ್ರೋಶಗೊಂಡ ದೀಪಾ, ಆತನ ಮೇಲೆ ಅಟ್ಯಾಕ್ ಮಾಡಿಸಲು ಮುಂದಾಗಿದ್ದಳು. ಡಿಸೆಂಬರ್ 13ರ ಮುಸ್ಸಂಜೆ, ಕಾರ್ತಿಕ್ ಅಂಗಡಿಯೊಂದರಲ್ಲಿದ್ದಾಗ ಕಾರಿನಲ್ಲಿ ಗ್ಯಾಂಗ್ ಕಟ್ಟಿಕೊಂಡು ಬಂದ ದೀಪಾ, ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿಸಿದ್ದಾಳೆ.

ಮಹಿಳೆ ಸೇರಿ ಇಬ್ಬರನ್ನು ಬಂಧಿಸಿದ ಪೊಲೀಸರು

ಘಟನೆ ವೇಳೆ ದೀಪಾ ಕಾರಿನಲ್ಲೇ ಕುಳಿತಿದ್ದರೆ, ಆಕೆಯೊಂದಿಗೆ ಬಂದಿದ್ದ ಆರೋಪಿಗಳು ಅಂಗಡಿಯ ಬಳಿ ಇದ್ದ ಕಾರ್ತಿಕ್ ಮೇಲೆ ಲಾಂಗ್‌ ಹಾಗೂ ಮಚ್ಚುಗಳಿಂದ ದಾಳಿ ನಡೆಸಿದ್ದರು. ಯುವಕನ ಅದೃಷ್ಟವೆಂಬಂತೆ ದಾಳಿಯ ವೇಳೆ ಸಾರ್ವಜನಿಕರು ಗ್ಯಾಂಗ್ ವಿರುದ್ಧ ತಿರುಗಿ ಬಿದ್ದಿದ್ದರು. ಇದರಿಂದ ಭಯಗೊಂಡ ದೀಪಾ ಆ್ಯಂಡ್ ಗ್ಯಾಂಗ್, ಸ್ಥಳದಿಂದ ಪರಾರಿಯಾಗಿದ್ದರು. ಘಟನೆಯ ಕುರಿತು ದೂರು ದಾಖಲಾಗುತ್ತಿದ್ದಂತೆ ದೊಡ್ಡಬೆಳವಂಗಲ ಪೊಲೀಸರು ತನಿಖೆ ಆರಂಭಿಸಿದ್ದು, ಇದೀಗ ಹಲ್ಲೆಗೆ ಸಂಚು ರೂಪಿಸಿ ಎಸ್ಕೇಪ್ ಆಗಿದ್ದ ದೀಪಾ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳ ಪಾತ್ರವಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link