All posts by nagaraj11081993

LSG vs DC: ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರಿಷಭ್ ಪಂತ್; ವಿಡಿಯೋ

LSG vs DC: ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರಿಷಭ್ ಪಂತ್; ವಿಡಿಯೋ

ಐಪಿಎಲ್ 2026 ರ ಐದನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತ ಲಕ್ನೋ ಮೊದಲು ಬ್ಯಾಟಿಂಗ್‌ ಮಾಡುತ್ತಿದೆ. ಅದರಂತೆ ಆರಂಭಿಕರಾಗಿ ನಾಯಕ ರಿಷಭ್ ಪಂತ್ ಹಾಗೂ ಮಿಚೆಲ್ ಮಾರ್ಷ್​ ಕಣಕ್ಕಿಳಿದಿದ್ದರು. ಇಬ್ಬರು ಮೊದಲ ಮೂರು ಓವರ್​ಗಳಲ್ಲಿ ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶಿಸಿ 19 ರನ್ ಕೂಡ ಕಲೆಹಾಕಿದರು. ಆದರೆ ಮುಖೇಶ್ ಕುಮಾರ್ ಬೌಲ್ ಮಾಡಿದ ಮೂರನೇ ಓವರ್​ನ ಕೊನೆಯ ಎಸೆತದಲ್ಲಿ ರಿಷಭ್ ಪಂತ್ ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾಗಬೇಕಾಯಿತು.

ಈ ಪಂದ್ಯದಲ್ಲಿ ಬೌಂಡರಿ ಬಾರಿಸುವ ಮೂಲಕ ತಮ್ಮ ಖಾತೆ ತೆರೆದಿದ್ದ ರಿಷಭ್ ಪಂತ್, ಆರಂಭದಲ್ಲೇ ಅಬ್ಬರಿಸುವ ಸುಳಿವು ನೀಡಿದ್ದರು. ಆದರೆ ಮೂರನೇ ಓವರ್​ನಲ್ಲಿ ರಿಷಭ್ ಪಂತ್ ಅನಿರೀಕ್ಷಿತವಾಗಿ ಔಟಾಗಬೇಕಾಯಿತು. ಮುಖೇಶ್ ಕುಮಾರ್ ಎಸೆದ ಈ ಓವರ್​ನ ಕೊನೆಯ ಎಸೆತವನ್ನು ಮಿಚೆಲ್ ಮಾರ್ಷ್​ ನೇರವಾಗಿ ಬೌಲರ್​ ಕಡೆಗೆ ಆಡಿದರು. ಇತ್ತ ಬೌಲರ್ ಮುಖೇಶ್ ಆ ಚೆಂಡನ್ನು ಹಿಡಿಯಲು ಯತ್ನಿಸಿದರು. ಒಂದು ವೇಳೆ ಮುಖೇಶ್ ಆ ಚೆಂಡನ್ನು ಹಿಡಿದಿದ್ದರೆ, ಮಾರ್ಷ್​ ಕ್ಯಾಚ್ ಔಟ್ ಆಗುತ್ತಿದ್ದರು. ಆದರೆ ಮುಖೇಶ್ ಆ ಚೆಂಡನ್ನು ಹಿಡಿಯಲಿಲ್ಲ.

ಆದಾಗ್ಯೂ ಅದೃಷ್ಟ ಮುಖೇಶ್ ಅವರ ಕೈಹಿಡಿಯಿತು. ಮಾರ್ಷ್​ ಆಡಿದ ಚೆಂಡು ಮುಖೇಶ್ ಅವರ ಕೈಗೆ ತಾಗಿ ನಾನ್ ಸ್ಟ್ರೈಕ್​ ವಿಕೆಟ್​ಗಳಿಗೆ ಬಡಿಯಿತು. ಇತ್ತ ನಾನ್ ಸ್ಟ್ರೈಕ್​ನಲ್ಲಿದ್ದ ಪಂತ್, ಕ್ರೀಸ್​ ಬಿಟ್ಟಿದ್ದ ಕಾರಣ ಅವರು ರನೌಟ್ ಆಗಬೇಕಾಯಿತು. ಹೀಗಾಗಿ ಪಂತ್ ತಮ್ಮ ಇನ್ನಿಂಗ್ಸ್​ನಲ್ಲಿ 9 ಎಸೆತಗಳನ್ನು ಎದುರಿಸಿ 1 ಬೌಂಡರಿ ಸಹಿತ 7 ರನ್ ಬಾರಿಸಿ ಔಟಾಗಬೇಕಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾರ್ಚ್​ನಲ್ಲಿ ನಿವ್ವಳ ಜಿಎಸ್​ಟಿ 1.78 ಲಕ್ಷ ಕೋಟಿ ರೂ; ಇಡೀ ವರ್ಷ 19.34 ಲಕ್ಷ ಕೋಟಿ ರೂ ಸಂಗ್ರಹ

ನವದೆಹಲಿ, ಏಪ್ರಿಲ್ 1: ಭಾರತದಲ್ಲಿ ಮಾರ್ಚ್ ತಿಂಗಳಲ್ಲಿ ನಿವ್ವಳ ಜಿಎಸ್​ಟಿ ಸಂಗ್ರಹ (GST collections) 1.78 ಲಕ್ಷ ಕೋಟಿ ರೂ ದಾಖಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಜಿಎಸ್​ಟಿ ಸಂಗ್ರಹ ಶೇ. 8.2ರಷ್ಟು ಹೆಚ್ಚಿದೆ. ರೀಫಂಡ್ ಮಾಡಿರುವುದನ್ನೂ ಒಳಗೊಂಡರೆ ಒಟ್ಟೂ ಜಿಎಸ್​ಟಿ ಸಂಗ್ರಹ ಮಾರ್ಚ್​ನಲ್ಲಿ 2 ಲಕ್ಷ ಕೋಟಿ ರೂ ದಾಟಿದೆ. ಇದರಲ್ಲೂ ಕೂಡ ಹಿಂದಿನ ವರ್ಷದಕ್ಕಿಂತ ಶೇ. 8.8ರಷ್ಟು ಹೆಚ್ಚಿದೆ.

ರೀಫಂಡ್ ಪ್ರಮಾಣ ಮಾರ್ಚ್​ನಲ್ಲಿ ಶೇ. 13.8ರಷ್ಟು ಹೆಚ್ಚಿದೆ. ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಮಾರ್ಚ್​ನಲ್ಲಿ ಜಿಎಸ್​ಟಿ ರೀಫಂಡ್ ಮಾಡಲಾಗಿರುವ ಪ್ರಮಾಣ 22,000 ಕೋಟಿ ರೂ ಎನ್ನಲಾಗಿದೆ.

ಇದನ್ನೂ ಓದಿ: ವಿವಿಧ ಹಣಕಾಸು ಕಾರ್ಯಗಳಿಗೆ ಪ್ಯಾನ್ ನಿಯಮಗಳಲ್ಲಿ ಬದಲಾವಣೆಗಳಿವೆ, ಗಮನಿಸಿ

ಇಡೀ ವರ್ಷಕ್ಕೆ 22 ಲಕ್ಷ ಕೋಟಿ ರೂ ಜಿಎಸ್​ಟಿ

2025-26ರ ಹಣಕಾಸು ವರ್ಷದಲ್ಲಿ 22.27 ಲಕ್ಷ ಕೋಟಿ ರೂನಷ್ಟು ಒಟ್ಟು ಜಿಎಸ್​ಟಿ ಸಂಗ್ರಹ ಆಗಿದೆ. ಹಿಂದಿನ ಹಣಕಾಸು ವರ್ಷದಕ್ಕಿಂತ ಶೇ. 8.3ರಷ್ಟು ಜಿಎಸ್​ಟಿ ಹೆಚ್ಚಿದೆ. ರೀಫಂಡ್ ಕಳೆದು ಬಂದಿರುವ ನಿವ್ವಳ ಜಿಎಸ್​ಟಿ ಸಂಗ್ರಹ 19.34 ಲಕ್ಷ ಕೋಟಿ ರೂ ಇದೆ. ಇದರಲ್ಲಿ ಹೆಚ್ಚಳ ಆಗಿರುವುದು ಶೇ. 7.1ರಷ್ಟು.

ರಾಜ್ಯವಾರು ಜಿಎಸ್​ಟಿ ಸಂಗ್ರಹದ ಲೆಕ್ಕ ತೆಗೆದರೆ ಮಹಾರಾಷ್ಟ್ರ ಯಥಾಪ್ರಕಾರ ಅಗ್ರಸ್ಥಾನಕ್ಕೆ ಬರುತ್ತದೆ. ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳು ಅತಿಹೆಚ್ಚು ಜಿಎಸ್​ಟಿ ಸಂಗ್ರಹದಲ್ಲಿ ಟಾಪ್-3ನಲ್ಲಿ ಬರುತ್ತವೆ.

ಇದನ್ನೂ ಓದಿ: April 2026 Rules Changes: ಡಿಜಿಟಲ್ ಪಾವತಿ, ಪ್ಯಾನ್ ಇತ್ಯಾದಿ ನಿಯಮಗಳಲ್ಲಿ ಬದಲಾವಣೆ; ಆರ್‌ಬಿಐಯಿಂದ ಹೊಸ ಗೈಡ್‌ಲೈನ್ಸ್ ತಿಳಿದಿರಿ

ಎಸ್​ಜಿಎಸ್​ಟಿ ಹಂಚಿಕೆ ಬಳಿಕ ಕರ್ನಾಟಕ, ಹಿಮಾಚಲಪ್ರದೇಶ, ಪಂಜಾಬ್, ಉತ್ತರಾಖಂಡ್, ಹರ್ಯಾಣ, ರಾಜಸ್ಥಾನ್, ಉತ್ತರಪ್ರದೇಶ, ಬಿಹಾರ್, ಗುಜರಾತ್, ಮಹಾರಾಷ್ಟ್ರ ಮೊದಲಾದ ರಾಜ್ಯಗಳು ಪಾಸಿಟಿವ್ ಬೆಳವಣಿಗೆ ತೋರಿವೆ.

ಜಮ್ಮು ಕಾಶ್ಮೀರ, ಚಂಡೀಗಡ, ದೆಹಲಿ, ಅರುಣಾಚಲ, ಮೇಘಾಲಯ ಮೊದಲಾದ ರಾಜ್ಯಗಳು ನೆಗಟಿವ್ ಗ್ರೋತ್ ತೋರಿವೆ. ಅಂದರೆ ಹಿಂದಿನ ವರ್ಷದಕ್ಕಿಂತ ಈ ವರ್ಷ ಈ ರಾಜ್ಯಗಳು ಜಿಎಸ್​ಟಿ ಸಂಗ್ರಹದಲ್ಲಿ ಹಿಂದುಳಿದಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದಾವಣಗೆರೆ ಬೈ ಎಲೆಕ್ಷನ್: ಮುಸ್ಲಿಂ ಮತಗಳ ಆತಂಕ, ಪಕ್ಷೇತರ ಅಭ್ಯರ್ಥಿಗಳ ಬಗ್ಗೆ ಸಿಎಂ ಮಹತ್ವದ ಸಂದೇಶ

ದಾವಣಗೆರೆ, ಏಪ್ರಿಲ್​ 01: ದಾವಣಗೆರೆ ದಕ್ಷಿಣ ಚುನಾವಣೆಗೆ (Davanagere South By Election) ಸಿಎಂ, ಡಿಸಿಎಂ, ಮಾಜಿ ಸಿಎಂಗಳು ಎಂಟ್ರಿಯಿಂದಾಗಿ ಭಾರೀ ರಂಗು ಪಡೆಯುತ್ತಿದೆ. ಬಿರುಬಿಸಿಲಿನಲ್ಲೂ ಮತಬೇಟೆಗೆ ಇಳಿದಿದ್ದು ಗೆಲುವಿಗಾಗಿ ಭರ್ಜರಿ ಭಾಷಣ ಮಾಡುತ್ತಿದ್ದಾರೆ. ನಮ್ಮದು ಹಿಂದುಳಿದವರ, ಬಡವರ ಹಾಗೂ ಮುಸ್ಲಿಂ ಪರವಾದ ಪಕ್ಷ. ಪಕ್ಷೇತರರಿಗೆ ಮತ ನೀಡಬೇಡಿ ಬಿಜೆಪಿ ಗೆಲ್ಲುತ್ತದೆ ಎಂಬ ಸಿಎಂ ಸಂದೇಶ ನೀಡಿದ್ದು, ಅಲ್ಪ ಸಂಖ್ಯಾತರ ಬಗ್ಗೆ ಕಾಂಗ್ರೆಸ್​ಗೆ ಆತಂಕ ಶುರುವಾಗಿದೆ.

ಸಮರ್ಥ್ ಗೆಲ್ಲಿಸುವಂತೆ ಕರೆ ನೀಡಿದ ಸಿಎಂ ಸಿದ್ದರಾಮಯ್ಯ 

ದಾವಣಗೆರೆ ಬೈ ಎಲೆಕ್ಷನ್ ಮುಂದಿನ ಚುನಾವಣೆಗೆ ದಿಕ್ಸೂಚಿ ಅಂತಲೇ ಕರೆಯಲಾಗುತ್ತಿದ್ದು, ಭಾರೀ ಪ್ರಚಾರ ನಡೆಯುತ್ತಿದೆ. ಚುನಾವಣೆಗೆ ಕೆಲವೇ ದಿನ ಉಳಿದಿದೆ. ಈ ಹಿನ್ನಲೆ ದಕ್ಷಿಣದಲ್ಲಿ ಘಟಾನುಘಟಿಗಳ ದಂಡು ಬಿಡುಬಿಟ್ಟಿದೆ. ಮಂಗಳವಾರ ಡಿಸಿಎಂ ಡಿಕೆ ಶಿವಕುಮಾರ್​ ಗೇಮ್ ಪ್ಲಾನ್ ಮಾಡಿದರೆ, ಇಂದು ಸಿಎಂ ಸಿದ್ದರಾಮಯ್ಯ, ಸಮರ್ಥ್ ಪರ ಗ್ರೌಂಡ್​ಗೆ ಇಳಿದು ಹೋದಲೆಲ್ಲಾ ಬೆಂಕಿ‌ ಭಾಷಣ ಮಾಡಿದ್ದಾರೆ. ನಾಗನೂರು, ಶಿರಮಗೊಂಡನಹಳ್ಳಿ, ತುರ್ಚಗಟ್ಟದಲ್ಲಿ ರೋಡ್ ಶೋ ನಡೆಸಿದ್ದರು. ಸಿಎಂಗೆ ಮಹಿಳೆಯರು ಆರತಿ ಬೆಳಗಿದರು. ಕಂಬಳಿ‌ ಹೊದಿಸಿ ಸನ್ಮಾನಿಸಿದರು. ಬಳಿಕ ಹದಡಿ ಗ್ರಾಮದಲ್ಲಿ ಸಾರ್ವಜನಿಕ ಸಭೆ ನಡೆಸಿ ಸಮರ್ಥ್ ಗೆಲ್ಲಿಸುವಂತೆ ಕರೆ ನೀಡಿದರು.

ಬಿಜೆಪಿ ವಿರುದ್ಧ ಸಿಎಂ ಕೆಂಡ

ಇನ್ನು ಬಿಜೆಪಿ ವಿರುದ್ಧ ಕೆಂಡಕಾರಿದ ಸಿಎಂ, ನಾನು‌ ಅನ್ನರಾಮಯ್ಯ, ನಾನು ಕೊಟ್ಟ ಬಜೆಟ್ ಕೇಂದ್ರ ಬಜೆಟ್ ಗಿಂತ ಚೆನ್ನಾಗಿದೆ. ಬಜೆಟ್ ಅಧಿವೇಶನದ ಚರ್ಚೆಯಲ್ಲಿ ಎಲ್ಲವನ್ನು ಹೇಳಿದ್ದೇನೆ. ಜಮೀರ್ ಅಹ್ಮದ್ ಏಪ್ರಿಲ್​ 5ರಂದರು ಪ್ರಚಾರಕ್ಕೆ ಬರ್ತಾರೆ ಅಂದ್ದರು. ನಮ್ಮದು ದಲಿತ ಹಿಂದುಳಿದವರ ಹಾಗೂ ಮುಸ್ಲಿಂರ ಪರ ಇರುವ ಪಕ್ಷ. ಪಕ್ಷೇತರರಿಗೆ ಮತ ಹಾಕಬೇಡಿ, ಬಿಜೆಪಿ ಗೆದ್ದು ಬಿಡುತ್ತದೆ ಎಂದಿದ್ದಾರೆ. ಸಿಎಂರ ಈ ಮಾತು ಸದ್ಯ ಹತ್ತಾರು ಪ್ರಶ್ನೆಗಳನ್ನ ಹುಟ್ಟುಹಾಕಿದೆ.

ಸರ್ಕಾರದ ವಿರುದ್ಧ ಯಡಿಯೂರಪ್ಪ ವಾಗ್ದಾಳಿ

ಇತ್ತ ಬಿಜೆಪಿಯೂ ಸಂಘಟನಾತ್ಮವಾಗಿ ಹೆಜ್ಜೆ ಇಡುತ್ತಿದೆ. ಎಲ್ಲಾ ನಾಯಕರು ಒಗ್ಗಟ್ಟಿನ ಮೂಲಕ ಚುನಾವಣೆ ಎದುರಿಸುತ್ತಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಶ್ರೀನಿವಾಸ್ ಪರ ಆರ್ಯ ವೈಶ್ಯ ಸಮಾಜದ ಸಭೆ ನಡೆಸಿ ಮತಬೇಟೆ ನಡೆಸಿದರು. ಬಳಿಕ‌ ಬಸವರಾಜ್ ಬೊಮ್ಮಾಯಿ ಪೇಟೆಯಲ್ಲಿ ತೆರೆದ ವಾಹನದಲ್ಲಿ ಪ್ರಚಾರ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ರಾಜ್ಯ ಸರ್ಕಾರಕ್ಕೆ ದಾವಣಗೆರೆ ದಕ್ಷಿಣದ ಜನ ಪಾಠ ಕಲಿಸುತ್ತಾರೆ ಎಂಬ ಸಂದೇಶ ರವಾನಿಸಿದರು.

ಇದನ್ನೂ ಓದಿ: ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ

ಒಟ್ಟಾರೆ ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ ಸಮೀಪಿಸುತ್ತಿದ್ದಂತೆ ಸಿಎಂ, ಡಿಸಿಎಂ, ಮಾಜಿ ಸಿಎಂ ಆದಿಯಾಗಿ ಘಟಾನುಘಟಿ ನಾಯಕರು ದಾವಣಗೆರೆಯಲ್ಲಿ ಬಿಡುಬಿಟ್ಟು ಗೆಲುವಿಗಾಗಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇತ್ತ ಸಚಿವ ಜಮೀರ್ ಅಹ್ಮದ್ ಪ್ರಚಾರಕ್ಕೆ ಬರುತ್ತಾರೆ ಇಲ್ವಾ ಎನ್ನುವ ಚರ್ಚೆ ಕೂಡ ಶುರುವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಾಧವನ್ ಹೊರತು ಇನ್ಯಾರೂ ‘ಧುರಂಧರ್’ನಲ್ಲಿ ನಟಿಸಲು ಒಪ್ಪಿರಲಿಲ್ಲ

ಆದಿತ್ಯ ಧರ್ ನಿರ್ದೇಶಿಸಿ, ರಣ್ವೀರ್ ಸಿಂಗ್ ನಟಿಸಿರುವ ‘ಧುರಂಧರ್ 2’ (Dhurandhar 2) ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ದೇಶ, ವಿದೇಶಗಳಲ್ಲಿ ಸಿನಿಮಾ ದೊಡ್ಡ ಬ್ಲಾಕ್ ಬಸ್ಟರ್ ಆಗಿದೆ. ಈ ಚಿತ್ರದಲ್ಲಿ ಬಾಲಿವುಡ್‌ನ ಘಟಾನುಘಟಿ ನಟರಾದ ಸಂಜಯ್ ದತ್, ಆರ್ ಮಾಧವನ್, ಅಕ್ಷಯ್ ಖನ್ನಾ ಮತ್ತು ಅರ್ಜುನ್ ರಾಂಪಾಲ್ ಅವರುಗಳು ನಟಿಸಿದ್ದು, ನಾಯಕನಷ್ಟೆ ಮಹತ್ವದ ಪಾತ್ರಗಳು ಇವರದ್ದಾಗಿವೆ. ಆದರೆ, ಮಾಧವನ್ ಅವರ ಹೊರತಾಗಿ ಮೂರೂ ಮಂದಿ ಪ್ರಮುಖ ನಟರುಗಳು ಸಹ ‘ಧುರಂಧರ್’ ಸಿನಿಮಾನಲ್ಲಿ ನಟಿಸಲು ಒಪ್ಪಿರಲಿಲ್ಲವಂತೆ. ಈ ಬಗ್ಗೆ ಸಿನಿಮಾದ ಕಾಸ್ಟಿಂಗ್ ನಿರ್ದೇಶಕ ಸಂದರ್ಶನದಲ್ಲಿ ಹೇಳಿದ್ದಾರೆ.

‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಕ್ಕೆ ನಟರನ್ನು ಆಯ್ಕೆ ಮಾಡಿರುವುದು ಬಾಲಿವುಡ್​​ನ ಖ್ಯಾತ ಕಾಸ್ಟಿಂಗ್ ನಿರ್ದೇಶಕ ಮುಕೇಶ್ ಛಾಬ್ರಾ. ಸಂದರ್ಶನದಲ್ಲಿ ಮಾತನಾಡಿರುವ ಅವರು, ಈ ಚಿತ್ರಕಥೆಯನ್ನು ಕೇಳಿದ ಕೂಡಲೇ ಯಾವುದೇ ಮುಲಾಜಿಲ್ಲದೆ ನಟಿಸಲು ಒಪ್ಪಿಕೊಂಡ ಏಕೈಕ ನಟ ಆರ್ ಮಾಧವನ್, ‘ನಾವು ಕಥೆ ಹೇಳಿದ ತಕ್ಷಣ ಮಾಧವನ್ ಗ್ರೀನ್ ಸಿಗ್ನಲ್ ನೀಡಿದರು. ಆದರೆ ಸಂಜಯ್ ದತ್, ಅಕ್ಷಯ್ ಖನ್ನಾ ಮತ್ತು ಅರ್ಜುನ್ ರಾಂಪಾಲ್ ಅವರು ಆರಂಭದಲ್ಲಿ ಈ ಚಿತ್ರದಲ್ಲಿ ನಟಿಸಲು ಕೊಂಚ ಹಿಂದೇಟು ಹಾಕಿದ್ದರು ಅಥವಾ ಗೊಂದಲದಲ್ಲಿದ್ದರು’ ಎಂದು ಮುಕೇಶ್ ತಿಳಿಸಿದ್ದಾರೆ.

ಈ ದೊಡ್ಡ ತಾರಾಗಣವನ್ನು ಒಟ್ಟುಗೂಡಿಸುವಲ್ಲಿ ಮುಕೇಶ್ ಛಾಬ್ರಾ ಅವರ ಪಾತ್ರ ದೊಡ್ಡದಿದೆ. ಆರಂಭದಲ್ಲಿ ನಿರ್ದೇಶಕ ಆದಿತ್ಯ ಧರ್ ಮತ್ತು ಮುಕೇಶ್ ಅವರು ಬೇರೆ ರೀತಿಯ ನಟರನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದರು. ಆದರೆ ಕಥೆಯ ವ್ಯಾಪ್ತಿ ದೊಡ್ಡದಾಗಿದ್ದರಿಂದ, ದೊಡ್ಡ ತಾರೆಯರನ್ನೇ ಸಿನಿಮಾಕ್ಕೆ ಕರೆತರಬೇಕು ಎಂದು ಮುಕೇಶ್ ಅವರು ಆದಿತ್ಯ ಧರ್ ಅವರಿಗೆ ಧೈರ್ಯ ತುಂಬಿದರಂತೆ. ಹಾಗೂ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಲು ಸಹ ತಾವೇ ಧೈರ್ಯ ನೀಡಿದ್ದಾಗಿಯೂ ಸಹ ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:‘ಧುರಂಧರ್ 2’ ಬಳಿಕ ಬರ್ತಿದೆ ಏಳೂವರೆ ಗಂಟೆ ಸಿನಿಮಾ; ಎರಡು ಇಂಟರ್​​ವಲ್

ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್ ಮತ್ತು ಸಂಜಯ್ ದತ್ ಅವರು ಒಪ್ಪಿಕೊಳ್ಳದೇ ಇರಲು ಹಾಗೂ ಮಾಧವನ್ ಬೇಗನೆ ಒಪ್ಪಿಕೊಳ್ಳಲು ಕಾರಣವೂ ಇದೆ. ಅಕ್ಷಯ್, ಅರ್ಜುನ್ ರಾಂಪಾಲ್ ಮತ್ತು ಸಂಜಯ್ ದತ್ ಅವರದ್ದು ಪಾಕಿಸ್ತಾನಿಗಳ ಪಾತ್ರ, ಅದರಲ್ಲೂ ಅಕ್ಷಯ್ ಕುಮಾರ್ ಮತ್ತು ಅರ್ಜುನ್ ರಾಂಪಾಲ್ ಅವರದ್ದಂತೂ ಉಗ್ರವಾದಿ ನಾಯಕರ ಪಾತ್ರ. ಸಹಜವಾಗಿಯೇ ಅವರು ಆರಂಭದಲ್ಲಿ ಒಲ್ಲೆ ಎಂದಿದ್ದಾರೆ. ಆದರೆ ಮಾಧವನ್ ಅವರದ್ದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪಾತ್ರ, ಗೌರವ ಹೊಂದಿರುವ, ಹೀರೋಗಿರಿ ಉಳ್ಳ ಪಾತ್ರ ಹಾಗಾಗಿ ಅವರು ಸುಲಭವಾಗಿ ಸಿನಿಮಾನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

ಸಿನಿಮಾನಲ್ಲಿ ಎಲ್ಲ ಪಾತ್ರಗಳಿಗೂ ಪ್ರಾಮುಖ್ಯತೆ ಸಿನಿಮಾದಲ್ಲಿದೆ. ಇದೇ ಕಾರಣಕ್ಕೆ ಉಗ್ರರ ಪಾತ್ರವಾದರೂ ಸಹ ಪ್ರೇಕ್ಷಕರು ಅಕ್ಷಯ್ ಖನ್ನಾ ಪಾತ್ರವನ್ನೂ ಸಹ ಸೆಲೆಬ್ರೇಟ್ ಮಾಡಿದ್ದಾರೆ, ಮೆಚ್ಚಿಕೊಂಡಿದ್ದಾರೆ. ಕಾಸ್ಟಿಂಗ್ ನಿರ್ದೇಶಕ ಮುಕೇಶ್ ಹೇಳಿರುವಂತೆ, ‘ಧುರಂಧರ್’ ಒಂದು ನಿಖರವಾದ ಕಾಸ್ಟಿಂಗ್ ಆಗಿರುವ ಸಿನಿಮಾ ಅಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸೌರವ್ ಗಂಗೂಲಿ ಬಯೋಪಿಕ್: ‘ದಾದಾ’ ಸಿನಿಮಾ ಶೂಟಿಂಗ್ ಆರಂಭಿಸಿದ ರಾಜ್‌ಕುಮಾರ್ ರಾವ್

ಭಾರತೀಯ ಕ್ರಿಕೆಟ್ ಕಂಡ ಯಶಸ್ವಿ ಕ್ಯಾಪ್ಟನ್ ಸೌರವ್ ಗಂಗೂಲಿ ಅವರ ಜೀವನದ ಕಥೆ ಬೆಳ್ಳಿತೆರೆಯ ಮೇಲೆ ಬರಲು ಸಿದ್ಧವಾಗುತ್ತಿದೆ. ಸೌರವ್ ಗಂಗೂಲಿ ಬಯೋಪಿಕ್ (Sourav Ganguly Biopic) ಬಗ್ಗೆ ಮೊದಲಿನಿಂದಲೂ ಸುದ್ದಿಗಳು ಕೇಳಿಬರುತ್ತಲೇ ಇತ್ತು. ಈಗ ಆ ಸಿನಿಮಾಗೆ ಶೀರ್ಷಿಕೆ ಏನೆಂಬುದು ಬಹಿರಂಗ ಆಗಿದೆ. ಈ ಚಿತ್ರಕ್ಕೆ ‘ದಾದಾ’ (Dada) ಎಂದು ಶೀರ್ಷಿಕೆ ಇಡಲಾಗಿದೆ. ಇದು ಬಹುನಿರೀಕ್ಷಿತ ಬಯೋಪಿಕ್. ಬುಧವಾರ (ಏಪ್ರಿಲ್ 1) ಈ ಸಿನಿಮಾದ ಚಿತ್ರೀಕರಣ ಆರಂಭ ಆಗಿದೆ. ನಟ ರಾಜ್​ಕುಮಾರ್ ರಾವ್ (Rajkummar Rao) ಅವರು ಈ ಚಿತ್ರದಲ್ಲಿ ಸೌರವ್ ಗಂಗೂಲಿ ಪಾತ್ರ ಮಾಡುತ್ತಿದ್ದಾರೆ.

ಶೂಟಿಂಗ್ ಆರಂಭ ಆಗಿರುವ ಬಗ್ಗೆ ಮತ್ತು ಶೀರ್ಷಿಕೆ ಬಗ್ಗೆ ರಾಜ್​ಕುಮಾರ್ ರಾವ್ ಅವರು ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ. ‘ಇದೀಗ ಆರಂಭ ಆಗಿದೆ. ಒನ್ ಆ್ಯಂಡ್ ಓನ್ಲಿ ದಾದಾ’ ಎಂದು ಪೋಸ್ಟ್ ಮಾಡಿರುವ ಅವರು ಸಿನಿಮಾದ ಕ್ಲ್ಯಾಪ್ ಬೋರ್ಡ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನು ಕಂಡು ಅಭಿಮಾನಿಗಳಿಗೆ ಖುಷಿ ಆಗಿದೆ.

2025ರಲ್ಲಿ ಗಂಗೂಲಿ ಅವರೇ ಈ ಸಿನಿಮಾದ ಬಗ್ಗೆ ಸುಳಿವು ನೀಡಿದ ನಂತರ, ರಾಜ್‌ಕುಮಾರ್ ರಾವ್ ಅಧಿಕೃತವಾಗಿ ತಾವು ಈ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಘೋಷಿಸಿದ್ದರು. ಈ ಬಗ್ಗೆ ಈ ಹಿಂದೆ ಮಾತನಾಡಿದ್ದ ಅವರು, ‘ದಾದಾ ಅವರೇ ಇದನ್ನು ಈಗಾಗಲೇ ಹೇಳಿದ್ದಾರೆ. ಹಾಗಾಗಿ ನಾನು ಅಧಿಕೃತವಾಗಿ ಖಚಿತಪಡಿಸುತ್ತಿದ್ದೇನೆ. ಗಂಗೂಲಿ ಪಾತ್ರವನ್ನು ನಿರ್ವಹಿಸುವುದು ಒಂದು ದೊಡ್ಡ ಜವಾಬ್ದಾರಿ. ನನಗೆ ಸ್ವಲ್ಪ ಆತಂಕವಿದ್ದರೂ, ಈ ಪಯಣವು ಬಹಳ ಮಜವಾಗಿರಲಿದೆ’ ಎಂದು ತಿಳಿಸಿದ್ದರು.

ಪಾತ್ರಕ್ಕಾಗಿ ಪರಕಾಯ ಪ್ರವೇಶ ಮಾಡುವಲ್ಲಿ ರಾಜ್‌ಕುಮಾರ್ ರಾವ್ ಸದಾ ಸಿದ್ಧ. ಫೆಬ್ರವರಿ ತಿಂಗಳಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಜ್‌ಕುಮಾರ್ ರಾವ್ ಅವರ ಹೇರ್ ಸ್ಟೈಲ್ ಮತ್ತು ದೇಹದ ತೂಕ ಹೆಚ್ಚಿದ್ದು ಕಂಡು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಇವೆಲ್ಲವೂ ಸೌರವ್ ಗಂಗೂಲಿ ಪಾತ್ರದ ಸಿದ್ಧತೆಗಾಗಿ ಎಂದು ಈಗ ಬಹಿರಂಗವಾಗಿದೆ.

ಇದನ್ನೂ ಓದಿ: ಹೊಸ ಇನ್ನಿಂಗ್ಸ್ ಆರಂಭಿಸಿದ ದಾದಾ; ಸೌರವ್ ಗಂಗೂಲಿಗೆ ಮುಖ್ಯ ಕೋಚ್ ಹುದ್ದೆ

ತಮ್ಮ ದೈಹಿಕ ಬದಲಾವಣೆಯ ಬಗ್ಗೆ ವಿವರಿಸಿದ ರಾಜ್‌ಕುಮಾರ್ ರಾವ್, ‘ನನ್ನ ಹಿಂದಿನ ಸಿನಿಮಾ ‘ನಿಕಮ್’ ಸಲುವಾಗಿನಾನು ಸುಮಾರು 9-10 ಕೆಜಿ ತೂಕ ಹೆಚ್ಚಿಸಿಕೊಳ್ಳಬೇಕಿತ್ತು. ಇದಕ್ಕಾಗಿ ಎರಡು ಪಿಜ್ಜಾ, ಸಾಕಷ್ಟು ಸಿಹಿತಿಂಡಿ, ಆಲೂ ಪರೋಟ ಮತ್ತು ಬಿರಿಯಾನಿ ಸೇವಿಸುತ್ತಿದ್ದೆ. ಈಗ ತಕ್ಷಣವೇ ಗಂಗೂಲಿ ಆಗಿ ಬದಲಾಗುತ್ತಿದ್ದೇನೆ. ಸಿನಿಮಾ ತೆರೆಕಂಡಾಗ ಈ ಕಠಿಣ ಶ್ರಮ ನಿಮಗೆ ತಿಳಿಯಲಿದೆ’ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇರಾನ್ ಕದನವಿರಾಮಕ್ಕೆ ಮನವಿ ಮಾಡಿದೆ; ಡೊನಾಲ್ಡ್ ಟ್ರಂಪ್ ಸ್ಫೋಟಕ ಹೇಳಿಕೆ

ವಾಷಿಂಗ್ಟನ್, ಏಪ್ರಿಲ್, 1: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಂದು ತಮ್ಮ ಟ್ರೂತ್ ಸೋಷಿಯಲ್​ನ ಪೋಸ್ಟ್‌ನಲ್ಲಿ ಇರಾನ್ ಅಮೆರಿಕದ ಬಳಿ ಕದನ ವಿರಾಮಕ್ಕೆ ಮನವಿ ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ಎಲ್ಲ ದೇಶಗಳಿಗೆ ಮುಕ್ತಗೊಳಿಸಿದ ನಂತರ ಅಮೆರಿಕ ಕದನವಿರಾಮದ ಪ್ರಸ್ತಾಪವನ್ನು ಪರಿಗಣಿಸುತ್ತದೆ ಎಂದು ಅವರು ಹೇಳಿರುವುದಾಗಿ ತಿಳಿಸಿದ್ದಾರೆ.

“ಇರಾನ್‌ನ ಹೊಸ ಆಡಳಿತದ ಅಧ್ಯಕ್ಷರು ಈ ಹಿಂದಿನ ಅಧ್ಯಕ್ಷರಿಗಿಂತ ಹೆಚ್ಚು ಬುದ್ಧಿವಂತರು. ಅಮೆರಿಕದ ಬಳಿ ಅವರು ಕದನವಿರಾಮಕ್ಕೆ ಮನವಿ ಮಾಡಿದ್ದಾರೆ! ಹಾರ್ಮುಜ್ ಜಲಸಂಧಿ ಯಾವಾಗ ಮುಕ್ತಗೊಳಿಸಿ ಮತ್ತೆ ತೆರೆಯುತ್ತೀರೋ ಆಗ ಈ ಬಗ್ಗೆ ನಾವು ಯೋಚಿಸುತ್ತೇವೆ” ಎಂದು ಹೇಳಿರುವುದಾಗಿ ಟ್ರಂಪ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಇರಾನ್​ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ರಷ್ಯಾದಲ್ಲಿದ್ದಾರಾ? ರಾಯಭಾರಿ ಹೇಳಿದ್ದೇನು?

ಆದರೆ, ಇರಾನ್ ಈ ಬಗ್ಗೆ ಯಾವುದೇ ಹೇಳಿಕೆಯನ್ನಾಗಲಿ, ಸ್ಪಷ್ಟನೆಯನ್ನಾಗಲಿ ನೀಡಿಲ್ಲ. ನಿನ್ನೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅಲ್ ಜಜೀರಾಗೆ ನೀಡಿದ ಸಂದರ್ಶನದಲ್ಲಿ ಇರಾನ್ ಇಸ್ರೇಲ್ ಮತ್ತು ಅಮೆರಿಕದ ವಿರುದ್ಧದ ಹೋರಾಟವನ್ನು ಮುಂದುವರಿಸಲು ಉದ್ದೇಶಿಸಿದೆ ಎಂದು ಹೇಳಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಲಿವರ್ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ನೀವು ಈ ಮೂರು ಆಹಾರಗಳಿಂದ ದೂರವಿರಲೇಬೇಕು!

ಇತ್ತೀಚಿನ ದಿನಗಳಲ್ಲಿ ಲಿವರ್ (Liver) ಸಂಬಂಧಿತ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿರುವುದನ್ನು ನೀವು ಗಮನಿಸಿರಬಹುದು. ಇದಕ್ಕೆ ಪ್ರಮುಖ ಕಾರಣಗಳು ಅಸ್ವಸ್ಥ ಜೀವನಶೈಲಿ, ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು ಮತ್ತು ಹೆಚ್ಚುತ್ತಿರುವ ಜಂಕ್ ಫುಡ್ ಸೇವನೆಯಾಗಿದೆ. ಲಿವರ್ ನಮ್ಮ ದೇಹದ ಪ್ರಮುಖ ಅಂಗವಾಗಿದ್ದು, ದೇಹವನ್ನು ಡಿಟಾಕ್ಸ್ ಮಾಡುವುದು, ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಮತ್ತು ಅಗತ್ಯ ಪೋಷಕಾಂಶಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತದೆ. ಹಾಗಾಗಿ ಲಿವರ್ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಫ್ಯಾಟಿ ಲಿವರ್, ಹೆಪಟೈಟಿಸ್ ಮತ್ತು ಲಿವರ್ ಹಾನಿ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಆಹಾರ ಮತ್ತು ಉತ್ತಮ ಜೀವನಶೈಲಿ ಅಗತ್ಯವಾಗಿದೆ. ಆಹಾರದಲ್ಲಿ ಅಲಕ್ಷ್ಯ ತೋರಿದರೆ ಲಿವರ್ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ, ಅದರ ಕಾರ್ಯಕ್ಷಮತೆ ನಿಧಾನವಾಗಿ ಕುಂದುತ್ತದೆ. ಹೀಗಾಗಿ ದೈನಂದಿನ ಜೀವನದಲ್ಲಿ ಸಮತೋಲನಯುತ ಆಹಾರವನ್ನು ಸೇರಿಸಿಕೊಳ್ಳುವುದು ಮತ್ತು ಹಾನಿಕಾರಕ ಆಹಾರಗಳಿಂದ ದೂರವಿರುವುದು ಮುಖ್ಯ. ಹಾಗಾದರೆ ಲಿವರ್ ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿಯ ಆಹಾರ ಸೇವನೆ ಮಾಡಬಾರದು ಮತ್ತು ಯಾವ ಆಹಾರಗಳ ಸೇವನೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ. ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಲಿವರ್ ಆರೋಗ್ಯವಾಗಿರಲು ಯಾವ ಆಹಾರಗಳ ಸೇವನೆ ಮಾಡಬಾರದು?

ಲೆಡಿ ಹಾರ್ಡಿಂಗ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ನಿರ್ದೇಶಕ ಹಾಗೂ ಎಚ್‌ಒಡಿ ಡಾ. ಎಲ್. ಎಚ್. ಘೋಟೇಕರ್ ಅವರ ಪ್ರಕಾರ, ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಮೂರು ವಿಧದ ಆಹಾರಗಳಿಂದ ದೂರವಿರಬೇಕು:

ಹೆಚ್ಚು ಎಣ್ಣೆಯಲ್ಲಿ ತಯಾರಿಸಿದ ಹಾಗೂ ಕರಿದ ಆಹಾರಗಳು: ಇವು ದೇಹದಲ್ಲಿ ಕೊಬ್ಬು ಸಂಗ್ರಹವಾಗಲು ಕಾರಣವಾಗುತ್ತವೆ ಮತ್ತು ಫ್ಯಾಟಿ ಲಿವರ್ ಸಮಸ್ಯೆಯನ್ನು ಹೆಚ್ಚಿಸಬಹುದು.

ಅತಿಯಾದ ಸಕ್ಕರೆ ಇರುವ ಆಹಾರಗಳು: ಹೆಚ್ಚು ಸಿಹಿ ಪದಾರ್ಥಗಳು ಲಿವರ್‌ನಲ್ಲಿ ಕೊಬ್ಬನ್ನು ಹೆಚ್ಚಿಸಿ ಇನ್ಸುಲಿನ್ ಪ್ರತಿರೋಧದ ಸಮಸ್ಯೆಗೆ ಕಾರಣವಾಗಬಹುದು.

ಪ್ರೊಸೆಸ್ಡ್ ಮತ್ತು ಪ್ಯಾಕೇಜ್ಡ್ ಫುಡ್‌ಗಳು: ಇವುಗಳಲ್ಲಿ ಪ್ರಿಸರ್ವೇಟಿವ್‌ಗಳು ಮತ್ತು ಹಾನಿಕಾರಕ ರಾಸಾಯನಿಕಗಳು ಇರುವುದರಿಂದ ಲಿವರ್ ಮೇಲೆ ದುಷ್ಪರಿಣಾಮ ಬೀರುತ್ತವೆ.

ಇದನ್ನೂ ಓದಿ: ಫ್ಯಾಟಿ ಲಿವರ್ ಯಾವಾಗ ಅಪಾಯಕಾರಿಯಾಗಬಹುದು? ಲಕ್ಷಣಗಳು ಹೇಗಿರುತ್ತವೆ ತಿಳಿದುಕೊಳ್ಳಿ

ಲಿವರ್ ಆರೋಗ್ಯಕ್ಕಾಗಿ ಯಾವ ಆಹಾರಗಳ ಸೇವನೆ ಮಾಡಬೇಕು?

ಸಾಮಾನ್ಯವಾಗಿ ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಸಿರು ತರಕಾರಿ, ಹಣ್ಣು ಮತ್ತು ಫೈಬರ್‌ ಸಮೃದ್ಧ ಆಹಾರಗಳನ್ನು ಸೇವಿಸಬೇಕು. ವಿಶೇಷವಾಗಿ ಪಾಲಕ್, ಬ್ರೋಕೋಲಿ, ಕ್ಯಾರೆಟ್ ಮತ್ತು ಬೀಟ್‌ರೂಟ್ ಲಿವರ್‌ಗೆ ಬಹಳ ಉಪಯುಕ್ತ. ಇದರ ಜೊತೆಗೆ ಬೆಳ್ಳುಳ್ಳಿ ಮತ್ತು ಅರಿಶಿನ ಲಿವರ್ ಡಿಟಾಕ್ಸ್ ಮಾಡಲು ಸಹಾಯ ಮಾಡುತ್ತವೆ. ಸಾಕಷ್ಟು ನೀರು ಕುಡಿಯುವುದು ಕೂಡ ಅಗತ್ಯ, ಇದರಿಂದ ದೇಹದಲ್ಲಿನ ವಿಷಪದಾರ್ಥಗಳು ಹೊರಹೋಗುತ್ತವೆ. ಸಮತೋಲನಯುತ ಮತ್ತು ಪೌಷ್ಟಿಕ ಆಹಾರ ಲಿವರ್ ಅನ್ನು ಬಲವಾಗಿಡಲು ನೆರವಾಗುತ್ತದೆ. ಆಹಾರ ಮಾತ್ರವಲ್ಲ, ಜೀವನಶೈಲಿಯೂ ಮುಖ್ಯವಾಗುತ್ತದೆ. ಪ್ರತಿದಿನ ವ್ಯಾಯಾಮ ಮಾಡುವುದು, ತೂಕವನ್ನು ನಿಯಂತ್ರಣದಲ್ಲಿಡುವುದು ಮತ್ತು ಮದ್ಯಪಾನದಿಂದ ದೂರವಿರುವುದು ಅಗತ್ಯ. ಜೊತೆಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಲಿವರ್ ಸಂಬಂಧಿತ ಸಮಸ್ಯೆಗಳನ್ನು ಸಮಯಕ್ಕೆ ಮುನ್ನ ಗುರುತಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯುದ್ಧದ ಎಫೆಕ್ಟ್: ಗ್ಯಾಸ್ ಅಭಾವದ ಬೆನ್ನಲ್ಲೇ ರೋಗಿಗಳಿಗೂ ಶಾಕ್, ಈ ವಾರದಿಂದಲೇ ಔಷಧ ಬೆಲೆ ಏರಿಕೆ

ಬೆಂಗಳೂರು, ಏಪ್ರಿಲ್ 1: ಅಮೆರಿಕಾ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮ ಜಾಗತಿಕ ಪೂರೈಕೆ ಸರಪಳಿಯ (Supply Chain) ಮೇಲೆ ತೀವ್ರ ಪರಿಣಾಮ ಬೀರಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಮೂರು ವಾರಗಳಿಂದ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ (Commercial LPG) ತೀವ್ರ ಕೊರತೆ ಎದುರಾಗಿದೆ. ಇದರ ನೇರ ಪರಿಣಾಮ ಹೋಟೆಲ್ ಉದ್ಯಮದ ಮೇಲೆ ಬಿದ್ದಿದ್ದು, ಹೋಟೆಲ್‌ಗಳು ಪರದಾಡುವಂತಾಗಿದೆ. ಈ ಸಂಕಷ್ಟದ ನಡುವೆಯೇ ಈಗ ಔಷಧಗಳ ಬೆಲೆಯೂ ಏರಿಕೆಯಾಗುವ ಲಕ್ಷಣಗಳು ಕಾಣಿಸುತ್ತಿದ್ದು, ಸಾಮಾನ್ಯ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಔಷಧಗಳ ಮೇಲೆ ಯುದ್ಧದ ಕರಿನೆರಳು

ಕಚ್ಚಾ ತೈಲ ಮತ್ತು ಪೆಟ್ರೋಕೆಮಿಕಲ್ಸ್‌ ಬೆಲೆ ಏರಿಕೆಯಾಗಿರುವುದರಿಂದ ಮಾತ್ರೆಗಳ ಪ್ಯಾಕೇಜಿಂಗ್‌ಗೆ ಬಳಸುವ ಫಾಯಿಲ್ಸ್ ತಯಾರಿಕೆ ವೆಚ್ಚ ಹೆಚ್ಚಾಗಿದೆ. ಈ ಕಾರಣದಿಂದಾಗಿ ಏಪ್ರಿಲ್ ಮೊದಲ ವಾರದಿಂದ ಔಷಧಗಳ ದರ ಶೇ 15 ರಿಂದ 20 ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಯಾವೆಲ್ಲ ಔಷಧಗಳ ಬೆಲೆ ಏರಿಕೆ?

ಪ್ಯಾರಸಿಟಮಾಲ್, ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ಗ್ಯಾಸ್ಟ್ರಿಕ್ ಮಾತ್ರೆಗಳು ಹಾಗೂ ಕೆಮ್ಮಿನ ಸಿರಪ್ ಸೇರಿದಂತೆ ಸುಮಾರು 600ಕ್ಕೂ ಹೆಚ್ಚು ಅಗತ್ಯ ಔಷಧಗಳ ಬೆಲೆ ಏರಿಕೆಯಾಗಲಿದೆ. ಇದರೊಂದಿಗೆ ಸೌಂದರ್ಯವರ್ಧಕಗಳು (Cosmetics) ಮತ್ತು ಮಕ್ಕಳ ಉತ್ಪನ್ನಗಳ ಬೆಲೆಯೂ ಹೆಚ್ಚಾಗಲಿದೆ ಎಂದು ಬೆಂಗಳೂರು ನಗರ ಡ್ರಗ್ಸ್ ಅಂಡ್ ಕೆಮಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಮಾಯಣ್ಣ ತಿಳಿಸಿದ್ದಾರೆ.

ಔಷಧ ಬೆಲೆ ಏರಿಕೆ ಬಗ್ಗೆ ಆರೋಗ್ಯ ಸಚಿವರು ಹೇಳಿದ್ದೇನು?

ಔಷಧ ದರ ಏರಿಕೆ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಔಷಧ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರದ ಪಾಲಿಸಿಯ ಮೇಲೆ ಅವಲಂಬಿತವಾಗಿದೆ. ಯುದ್ಧದ ಎಫೆಕ್ಟ್‌ನಿಂದ ದರ ಏರಿಕೆಯಾದರೆ ಅದು ನಮ್ಮ ಕೈಯಲ್ಲಿ ಇಲ್ಲ. ಆದರೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಔಷಧದ ಕೊರತೆಯಾಗದಂತೆ ನಾವು ಕ್ರಮ ಕೈಗೊಳ್ಳುತ್ತೇವೆ. ಹೆಚ್ಚಿನ ದರ ನೀಡಿಯಾದರೂ ಔಷಧ ಖರೀದಿ ಮಾಡಿ ಜನರಿಗೆ ತಲುಪಿಸುತ್ತೇವೆ’ ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಪೆಟ್ರೋಲ್, ಎಲ್​ಪಿಜಿ, ನ್ಯಾಚುರಲ್ ಗ್ಯಾಸ್ ಪೂರೈಕೆ ಹೇಗಿದೆ? ಸರ್ಕಾರದಿಂದ ಮಾಹಿತಿ

ಒಟ್ಟಿನಲ್ಲಿ ವಾಣಿಜ್ಯ ಗ್ಯಾಸ್ ಕೊರತೆ ಬಳಿಕ ಈಗ ಔಷಧಗಳ ಬೆಲೆ ಏರಿಕೆ ಬಿಸಿ ಜನರಿಗೆ ತಟ್ಟಲಿದ್ದು, ಮುಂದಿನ ದಿನಗಳಲ್ಲಿ ಏನೆಲ್ಲ ಸಮಸ್ಯೆಯಾಗಲಿದೆ ಎಂದು ಕಾದು ನೋಡಬೇಕಿದೆ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿವಿಧ ಹಣಕಾಸು ಕಾರ್ಯಗಳಿಗೆ ಪ್ಯಾನ್ ನಿಯಮಗಳಲ್ಲಿ ಬದಲಾವಣೆಗಳಿವೆ, ಗಮನಿಸಿ

ನವದೆಹಲಿ, ಏಪ್ರಿಲ್ 1: ಆದಾಯ ತೆರಿಗೆ ಕಾಯ್ದೆ ಅಡಿ ರೂಪಿಸಲಾಗಿರುವ ಹೊಸ ಐಟಿ ನಿಯಮಾವಳಿಯಲ್ಲಿ (Income tax framework) ಕೆಲ ಮಹತ್ವದ ಬದಲಾವಣೆ ಇದೆ. ಹೊಸ ಪ್ಯಾನ್ ಪಡೆಯಲು ಬೇಕಾದ ಪ್ರಕ್ರಿಯೆ, ಕೆಲ ನಿರ್ದಿಷ್ಟ ಹಣಕಾಸು ವಹಿವಾಟಿಗೆ ಪ್ಯಾನ್ ಅಗತ್ಯ ಇರುವುದು ಇತ್ಯಾದಿ ಕೆಲ ಗಮನಾರ್ಹ ಬದಲಾವಣೆಗಳಿವೆ. 10 ಲಕ್ಷಕ್ಕೂ ಅಧಿಕ ಮೊತ್ತದ ಕ್ಯಾಷ್ ಡೆಪಾಸಿಟ್ ಇತ್ಯಾದಿ ಅಧಿಕ ಮೌಲ್ಯದ ಟ್ರಾನ್ಸಾಕ್ಷನ್​ಗಳಿಗೆ ಪ್ಯಾನ್ ನಂಬರ್ ನೀಡುವುದು ಕಡ್ಡಾಯ ಮಾಡಲಾಗಿದೆ. ಹಾಗೆಯೇ, ವಿವಿಧ ಪ್ರಾಕಾರದ ತೆರಿಗೆ ಪಾವತಿದಾರರಿಗೆ ಬೇರೆ ಬೇರೆ ನಮೂನೆಯ ಅರ್ಜಿಗಳನ್ನು ನೀಡಲಾಗುತ್ತದೆ.

ಹೊಸ ಪ್ಯಾನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು…

ಹಳೆಯ ವ್ಯವಸ್ಥೆ ಅಡಿ ಹೊಸ ಪ್ಯಾನ್ ಕಾರ್ಡ್​ಗೆ ಅರ್ಜಿ ಸಲ್ಲಿಸಲು ಫಾರ್ಮ್ 49ಎ ಅಥವಾ 49ಎಎ ನೀಡಲಾಗುತ್ತಿತ್ತು. ಭಾರತೀಯ ನಾಗರಿಕರು ಮತ್ತು ಕಂಪನಿಗಳಿಗೆ ಫಾರ್ಮ್ 49ಎ ಮತ್ತು ವಿದೇಶೀ ಪ್ರಜೆಗಳು ಮತ್ತು ಸಂಸ್ಥೆಗಳಿಗೆ ಫಾರ್ಮ್ 49ಎಎ ನೀಡಲಾಗುತ್ತಿತ್ತು.

ಹೊಸ ನಿಯಮ ಅಡಿ ಫಾರ್ಮ್ 93, 94, 95, 96 ಅನ್ನು ನೀಡಲಾಗುತ್ತಿದೆ. ಭಾರತೀ ಪ್ರಜೆಗಳು ಫಾರ್ಮ್ 93 ಅನ್ನು ಭರ್ತಿ ಮಾಡಬೇಕು. ಭಾರತೀಯ ಕಂಪನಿಗಳು ಫಾರ್ಮ್ 94, ಭಾರತೀಯ ಪ್ರಜೆಗಳಲ್ಲದವರು ಫಾರ್ಮ್ 95, ಹಾಗೂ ಭಾರತದ ಹೊರಗಿನ ಕಂಪನಿಗಳು ಫಾರ್ಮ್ 96 ಅನ್ನು ಪಡೆದು ಭರ್ತಿ ಮಾಡಬೇಕು.

ಇದನ್ನೂ ಓದಿ: April 2026 Rules Changes: ಡಿಜಿಟಲ್ ಪಾವತಿ, ಪ್ಯಾನ್ ಇತ್ಯಾದಿ ನಿಯಮಗಳಲ್ಲಿ ಬದಲಾವಣೆ; ಆರ್‌ಬಿಐಯಿಂದ ಹೊಸ ಗೈಡ್‌ಲೈನ್ಸ್ ತಿಳಿದಿರಿ

ಮುಂಚೆ ಇದ್ದ ನಿಯಮ ಪ್ರಕಾರ ಹೊಸ ಪ್ಯಾನ್ ಕಾರ್ಡ್​ಗೆ ಅರ್ಜಿ ಸಲ್ಲಿಸಲು ಆಧಾರ್ ಅನ್ನು ಕಡ್ಡಾಯವಾಗಿ ನೀಡಬೇಕಿತ್ತು. ಈಗ ಆಧಾರ್ ಜೊತೆಗೆ ಹೆಚ್ಚುವರಿ ದಾಖಲೆಗಳನ್ನೂ ನೀಡಬೇಕಾಗುತ್ತದೆ. ಜನನ ಪ್ರಮಾಣಪತ್ರ, ವೋಟರ್ ಐಡಿ, ಪಾಸ್​ಪೋರ್ಟ್, ಡಿಎಲ್, ಎಸ್ಸೆಸ್ಸೆಲ್ ಸರ್ಟಿಫಿಕೇಟ್ ಮತ್ತು ಇತರ ಸರ್ಕಾರಿ ದಾಖಲೆಗಳಿದ್ದರೆ ಅದನ್ನು ನೀಡಬಹುದು.

ಈ ಕಾರ್ಯಗಳಿಗೆ ಪ್ಯಾನ್ ನೀಡುವುದು ಅಗತ್ಯ

ಬ್ಯಾಂಕ್​ನಲ್ಲಿ ಒಂದು ದಿನದಲ್ಲಿ 50,000 ರೂಗಿಂತ ಹೆಚ್ಚು ಕ್ಯಾಷ್ ಡೆಪಾಸಿಟ್ ಮಾಡಿದರೆ ಮಾಡಿದರೆ ಪ್ಯಾನ್ ನಮೂದಿಸಬೇಕಿತ್ತು. ಈಗ ಹೊಸ ನಿಯಮದ ಪ್ರಕಾರ ಒಂದು ವರ್ಷದಲ್ಲಿ 10 ಲಕ್ಷ ರೂಗಿಂತ ಕಡಿಮೆ ಕ್ಯಾಷ್ ಡೆಪಾಸಿಟ್ ಅಥವಾ ವಿತ್​ಡ್ರಾಯಲ್​ಗೆ ಪ್ಯಾನ್ ಕಡ್ಡಾಯವಲ್ಲ. ಹಾಗೆಯೇ ಈ ಕೆಳಗಿನ ಕಾರ್ಯಗಳಿಗೆ ಪ್ಯಾನ್ ಕಡ್ಡಾಯ ಇರುತ್ತದೆ, ಗಮನಿಸಿ:

ಇದನ್ನೂ ಓದಿ: ವಿವಿಧ ಪೋಸ್ಟ್ ಆಫೀಸ್ ಸ್ಕೀಮ್ಸ್; ಏಪ್ರಿಲ್-ಜೂನ್ ಕ್ವಾರ್ಟರ್​ಗೆ ಬಡ್ಡಿದರ ಘೋಷಣೆ; ಇಲ್ಲಿದೆ ಪಟ್ಟಿ

  • ಐದು ಲಕ್ಷ ರೂಗಿಂತ ಹೆಚ್ಚಿನ ಮೌಲ್ಯದ ವಾಹನ ಖರೀದಿಸುತ್ತಿದ್ದರೆ ಪ್ಯಾನ್ ನೀಡಬೇಕು.
  • ಹೋಟೆಲ್ ಅಥವಾ ರೆಸ್ಟೋರೆಂಟ್, ಇವೆಂಟ್​ಗಳಿಗೆ ಒಂದು ಲಕ್ಷ ರೂಗಿಂತ ಹೆಚ್ಚಿನ ಪೇಮೆಂಟ್ ಮಾಡುವುದಾದರೆ ಪ್ಯಾನ್ ನೀಡಬೇಕು.
  • ಚಿರಾಸ್ತಿಯ ಖರೀದಿ ಮತ್ತು ಮಾರಾಟ ಮಾಡುವಾಗ, ಅದರ ಮೌಲ್ಯ 20 ಲಕ್ಷ ರೂಗಿಂತ ಹೆಚ್ಚಿದ್ದರೆ ಪ್ಯಾನ್ ಕಡ್ಡಾಯ.
  • ಜೀವ ವಿಮೆ ಪಾಲಿಸಿಗೆ ಪ್ಯಾನ್ ಕಡ್ಡಾಯ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

LSG vs DC Playing XI: ಟಾಸ್ ಗೆದ್ದ ಡೆಲ್ಲಿ; ಬಲಿಷ್ಠ ಪಡೆ ಕಣಕ್ಕಿಳಿಸಿದ ಉಭಯ ತಂಡಗಳು

ಐಪಿಎಲ್ 19 (IPL 2026) ನೇ ಸೀಸನ್​ನ ಮೊದಲ ಹಂತದ ಐದನೇ ಮತ್ತು ಕೊನೆಯ ಪಂದ್ಯ ಇಂದು ಬುಧವಾರ, ಏಪ್ರಿಲ್ 1 ರಂದು ನಡೆಯಲಿದೆ. ಈ ಸೀಸನ್​ನ ಐದನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು (LSG vs DC) ಎದುರಿಸುತ್ತಿದೆ. ಎರಡೂ ತಂಡಗಳಿಗೆ ಇದು ಈ ಸೀಸನ್​ನ ಮೊದಲ ಪಂದ್ಯವಾಗಿದೆ. ಆದ್ದರಿಂದ, ಎರಡೂ ತಂಡಗಳು ಪಂದ್ಯವನ್ನು ಗೆದ್ದು ಸೀಸನ್ ಅನ್ನು ಗೆಲುವಿನೊಂದಿಗೆ ಆರಂಭಿಸಲು ಪ್ರಯತ್ನಿಸುತ್ತವೆ. ಇದರಲ್ಲಿ ಯಾವ ತಂಡ ಯಶಸ್ವಿಯಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಟಾಸ್ ಗೆದ್ದ ಡೆಲ್ಲಿ

ಟಾಸ್ ಗೆದ್ದ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಲಕ್ನೋ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಟಾಸ್ ಜೊತೆಗೆ ಎರಡು ತಂಡಗಳ ಆಡುವ ಹನ್ನೊಂದರ ಬಳಗವೂ ಪ್ರಕಟವಾಗಿದೆ. ಡೆಲ್ಲಿ ತಂಡದ ಆರಂಭಿಕರು ಬದಲಾಗಿದ್ದು, ಕನ್ನಡಿಗ ಕೆಎಲ್ ರಾಹುಲ್ ಜೊತೆಗೆ ಪಾತುಮ್ ನಿಸ್ಸಾಂಕ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಹೆಡ್ ಟು ಹೆಡ್ ದಾಖಲೆ

ಐಪಿಎಲ್ ಇತಿಹಾಸದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇದುವರೆಗೆ ಏಳು ಪಂದ್ಯಗಳನ್ನು ಆಡಿವೆ. ಇವುಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕು ಪಂದ್ಯಗಳನ್ನು ಗೆದ್ದಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ ಮೂರು ಪಂದ್ಯಗಳನ್ನು ಗೆದ್ದಿದೆ. ಅಂದರೆ ಎರಡೂ ತಂಡಗಳು ಸಮಬಲದ ಹೋರಾಟದ ನೀಡಿವೆ. ಕಳೆದ ಸೀಸನ್‌ನಲ್ಲಿ ಎರಡು ಪಂದ್ಯಗಳನ್ನು ಆಡಲಾಗಿದ್ದು, ಡೆಲ್ಲಿ ಎರಡೂ ಪಂದ್ಯಗಳನ್ನು ಗೆದ್ದಿದೆ. 2024 ರ ಸೀಸನ್‌ನಲ್ಲಿಯೂ ಡೆಲ್ಲಿ ಕ್ಯಾಪಿಟಲ್ಸ್ ಎರಡೂ ಪಂದ್ಯಗಳನ್ನು ಗೆದ್ದಿತ್ತು. ಅಂದರೆ, ಲಕ್ನೋ ಸೂಪರ್ ಜೈಂಟ್ಸ್ ಕೊನೆಯದಾಗಿ 2023 ರ ಐಪಿಎಲ್​ನಲ್ಲಿ ಡೆಲ್ಲಿ ವಿರುದ್ಧ ಗೆದ್ದಿತ್ತು.

ಉಭಯ ತಂಡಗಳ ಪ್ಲೇಯಿಂಗ್ 11

ಡೆಲ್ಲಿ ಕ್ಯಾಪಿಟಲ್ಸ್: ಕೆಎಲ್ ರಾಹುಲ್ (ವಿಕೆಟ್ ಕೀಪರ್), ಪಾತುಮ್ ನಿಸ್ಸಾಂಕ, ನಿತೀಶ್ ರಾಣಾ, ವಿಪ್ರಜ್ ನಿಗಮ್, ಅಕ್ಸರ್ ಪಟೇಲ್ (ನಾಯಕ), ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಲುಂಗಿ ಎನ್‌ಗಿಡಿ, ಕುಲ್ದೀಪ್ ಯಾದವ್, ಟಿ.ನಟರಾಜನ್ ಮತ್ತು ಮುಖೇಶ್ ಕುಮಾರ್.

ಲಕ್ನೋ ಸೂಪರ್ ಜೈಂಟ್ಸ್: ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ರಿಷಭ್ ಪಂತ್(ನಾಯಕ ಮತ್ತು ವಿಕೆಟ್ ಕೀಪರ್), ಆಯುಷ್ ಬಡೋನಿ, ನಿಕೋಲಸ್ ಪೂರನ್, ಅಬ್ದುಲ್ ಸಮದ್, ಮುಕುಲ್ ಚೌಧರಿ, ಮೊಹ್ಸಿನ್ ಖಾನ್, ಮೊಹಮ್ಮದ್ ಶಮಿ, ಅನ್ರಿಚ್ ನೋಕಿಯಾ ಮತ್ತು ಪ್ರಿನ್ಸ್ ಯಾದವ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link