All posts by nagaraj11081993

ಪಶ್ಚಿಮ ಏಷ್ಯಾ ಯುದ್ಧದ ಹಿನ್ನೆಲೆಯಲ್ಲಿ ರಾಜ್ಯಗಳ ಸಿದ್ಧತೆ ಪರಿಶೀಲಿಸಲು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಸಭೆ

ಪಶ್ಚಿಮ ಏಷ್ಯಾ ಯುದ್ಧದ ಹಿನ್ನೆಲೆಯಲ್ಲಿ ರಾಜ್ಯಗಳ ಸಿದ್ಧತೆ ಪರಿಶೀಲಿಸಲು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಸಭೆ

ನವದೆಹಲಿ, ಮಾರ್ಚ್ 27: ಇರಾನ್ ಜೊತೆಗಿನ ಇಸ್ರೇಲ್ ಮತ್ತು ಅಮೆರಿಕದ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ನಿರ್ಬಂಧದಿಂದ ಉಂಟಾದ ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಇಂಧನ ಪೂರೈಕೆಯ ಕುರಿತಾದ ಸಿದ್ಧತೆಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ (PM Modi) ಅವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ವರ್ಚುವಲ್ ಆಗಿ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಮಧ್ಯೆ ಅವರ ಸನ್ನದ್ಧತೆ ಮತ್ತು ಯೋಜನೆಗಳನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಪ್ರಸ್ತುತ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತುಕತೆ ನಡೆಸಿದ್ದಾರೆ.

ಈ ಸಭೆಯ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿದಾಗ ಪ್ರಾರಂಭವಾದ ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಪ್ರಧಾನಿ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದು ಇದೇ ಮೊದಲು. ಅಂದಿನಿಂದ ಇರಾನ್ ಇಸ್ರೇಲ್ ಮತ್ತು ಹಲವಾರು ಕೊಲ್ಲಿ ರಾಷ್ಟ್ರಗಳ ಮೇಲೆ ದಾಳಿ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ.

ಇದನ್ನೂ ಓದಿ: ರಾಮನವಮಿ, ಅಯೋಧ್ಯೆಯಲ್ಲಿ ಬಾಲರಾಮನ ಹಣೆಗೆ ಸೂರ್ಯ ತಿಲಕ, ಕಣ್ತುಂಬಿಕೊಂಡ ಪ್ರಧಾನಿ ಮೋದಿ

ಇಂದಿನ ವಿಡಿಯೋ ಸಭೆಯಲ್ಲಿ ಬಹುತೇಕ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು. ಆದರೆ, ಮಾದರಿ ನೀತಿ ಸಂಹಿತೆಯಿಂದಾಗಿ ಮುಂಬರುವ ಚುನಾವಣೆಗಳಿರುವ ರಾಜ್ಯಗಳ ಮುಖ್ಯಮಂತ್ರಿಗಳು ಇಂದಿನ ಸಭೆಯಲ್ಲಿ ಭಾಗವಹಿಸಿಲ್ಲ.

 

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬಿಕ್ಕಟ್ಟು ಭಾರತಕ್ಕೆ ದೀರ್ಘಕಾಲೀನ ಪರಿಣಾಮಗಳನ್ನು ಬೀರಬಹುದು ಎಂದು ನರೇಂದ್ರ ಮೋದಿ ಎಚ್ಚರಿಸಿದ ಕೆಲವು ದಿನಗಳ ನಂತರ ಈ ಸಭೆ ನಡೆದಿದೆ. 6 ವರ್ಷಗಳ ಹಿಂದಿನ COVID-19 ಸಾಂಕ್ರಾಮಿಕ ರೋಗವನ್ನು ಸಭೆಯಲ್ಲಿ ಉಲ್ಲೇಖಿಸಿದ ಪ್ರಧಾನಿ ಮೋದಿ, ಕೇಂದ್ರ ಮತ್ತು ರಾಜ್ಯಗಳು ಆ ಅವಧಿಯಲ್ಲಿ ಮಾಡಿದಂತೆ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL: ಅಪ್ಪಿತಪ್ಪಿಯೂ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬರ್ಬೇಡಿ; ಸೆಕ್ಯುರಿಟಿ ಬಗ್ಗೆ ಕಮಿಷನರ್​ ಹೇಳಿದ್ದಿಷ್ಟು

ಬೆಂಗಳೂರು, ಮಾರ್ಚ್​ 27: ಕ್ರಿಕೆಟ್ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಚಿನ್ನಸ್ವಾಮಿ ಮೈದಾನದಲ್ಲಿ ನಾಳೆ IPL ಉದ್ಘಾಟನಾ ಪಂದ್ಯ ನಡೆಯಲಿದೆ. ಸಕಲ ಭದ್ರತೆ ಕೂಡ ಕೈಗೊಳ್ಳಲಾಗಿದೆ. ಈ ಬಗ್ಗೆ ಬೆಂಗಳೂರು ಕಮಿಷನರ್​ ಸೀಮಂತ್ ಕುಮಾರ್​ ಪ್ರತಿಕ್ರಿಯಿಸಿದ್ದು, ಚಿನ್ನಸ್ವಾಮಿ ಸ್ಟೇಡಿಯಂ ಬಳಿ 3 ಹಂತದ ಸೆಕ್ಯುರಿಟಿ ಇರಲಿದೆ. ಆರ್​ಎಎಫ್​​ ಮತ್ತು ಗರುಡ ಟೀಂ, ಪಿಕಪ್ ಸ್ಕ್ವಾಡ್ ಇದೆ. ಭದ್ರತೆಗೆ 2,500 ಪೊಲೀಸ್​ ಸಿಬ್ಬಂದಿ ನಿಯೋಜಿಸಲಾಗಿದೆ. ಆಫ್​ಲೈನ್ ಟಿಕೆಟ್ ಸಿಗುತ್ತೆ ಎಂದು ಯಾರು ಬರಬಾರದು. ಮೈದಾನ ಬಳಿ ರಸ್ತೆಗೆ ಬಂದು ನಿಲ್ಲುವವರಿಗೆ ಅವಕಾಶ ನೀಡಲ್ಲ. ಟಿಕೆಟ್ ಇಲ್ಲದಿದ್ದರೆ ಮನೆಯಲ್ಲಿ ಕುಳಿತು ಪಂದ್ಯವನ್ನ ನೋಡಿ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ದುರ್ಮರಣ

ರಾಯಚೂರು, ಮಾರ್ಚ್​ 27: ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ದುರ್ಮರಣ (death) ಹೊಂದಿರುವಂತಹ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ಬಳಿ ನಡೆದಿದೆ. ಉಮಾವತಿ(35), ರತ್ನ(24), ಮಹೇಶ್(28) ಮತ್ತು ಶಿವಾನಂದ(24) ಮೃತ ದುರ್ದೈವಿಗಳು. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಕೋಸಗಿ ಆಸ್ಪತ್ರೆಗೆ ಶವಗಳ ಸ್ಥಳಾಂತರ ಮಾಡಲಾಗಿದೆ.

ನಡೆದಿದ್ದೇನು?

ಒಂದೇ ಕುಟುಂಬದವರು ಆಂಧ್ರಪ್ರದೇಶದ ಕೋಸಗಿ ತಾಲೂಕಿನ ರಾಜಲಬಂಡ ಅಣೆಕಟ್ಟಿನ ಕೊನೆ ಭಾಗದಲ್ಲಿರುವ ಸಾತುನೂರು ಗ್ರಾಮದ ಬಳಿಯ ತುಂಗಭದ್ರಾ ನದಿಗೆ ಮಧ್ಯಾಹ್ನ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ತಗ್ಗು ಪ್ರದೇಶದಲ್ಲಿ ಸಿಲುಕಿ ನಾಲ್ವರ ಸಾವನ್ನಪ್ಪಿದ್ದಾರೆ. ಮೃತರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ಕೋಸಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಿಡಿಲು ಬಡಿದು ಮಹಿಳೆ ಸಾವು

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿರಗುಡಿ ಎಂಬಲ್ಲಿ ಸಿಡಿಲು ಬಡೆದು ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿರುವಂತಹ ಘಟನೆ ನಡೆದಿದೆ. ಸುನಂದಾ (42) ಮೃತ ಮಹಿಳೆ. ತಡರಾತ್ರಿ ಗುಡುಗು ಸಹಿತ ಮಳೆ ಸುರಿದಿದೆ. ಈ ವೇಳೆ ಹೊಲದಲ್ಲಿ ಕಟಾವು ಮಾಡಿ ಬರುವ ವೇಳೆ ಏಕಾಏಕಿ ಸಿಡಿಲು ಅಪ್ಪಳಿಸಿದ್ದು, ಸುನಂದಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹತ್ತಿರದಲ್ಲಿದ್ದ ಇನ್ನಿಬ್ಬರು ಅದೃಷ್ಟವಶಾತ್​ ಪಾರಾಗಿದ್ದಾರೆ.

ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ದ್ವಿಚಕ್ರವಾಹನ ಡಿಕ್ಕಿ: ಸವಾರ ಸಾವು

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತೂಪಲ್ಲಿ ಗ್ರಾಮದ ಬಳಿಯ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ನಡೆದಿದೆ.

ಇದನ್ನೂ ಓದಿ: ವಿಜಯಪುರದಲ್ಲೊಂದು ಮನಕಲಕುವ ಘಟನೆ : ಪುಟ್ಟ ಪುಟ್ಟ 3 ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಆಂಧ್ರಪ್ರದೇಶದ ಮದನಪಲ್ಲಿ ನಿವಾಸಿ ಶಾಮೀರ್(22) ಮೃತ ದುರ್ದೈವಿ. ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಐಟಿ ಸೇವೆ, ಸ್ಟಾರ್ಟ್​​ ಅಪ್​​ ಹೂಡಿಕೆಯಲ್ಲಿ ಬೆಂಗಳೂರು ನಂ.1, ಎರಡನೇ ಸ್ಥಾನ ಯಾವ ಸಿಟಿಗೆ?

ಬೆಂಗಳೂರು, ಮಾರ್ಚ್​​ 27: ಭಾರತದ ಪ್ರಮುಖ ಆರ್ಥಿಕ ಶಕ್ತಿ ಕೇಂದ್ರಗಳಾದ ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಟೆಕ್ ಪ್ರಾಬಲ್ಯಕ್ಕಾಗಿ ತೀವ್ರ ಚರ್ಚೆ ನಡೆಯುತ್ತಿದೆ. ಸದ್ಯದ ಅಂಕಿಅಂಶಗಳ ಪ್ರಕಾರ, ಬೆಂಗಳೂರು ಐಟಿ ಸೇವೆ, ಸ್ಟಾರ್ಟ್‌ಅಪ್ ಹೂಡಿಕೆ ಮತ್ತು ಕೃತಕ ಬುದ್ಧಿಮತ್ತೆ (AI) ವಲಯಗಳಲ್ಲಿ ಹೈದರಾಬಾದ್‌ಗಿಂತ ಸ್ಪಷ್ಟವಾಗಿ ಮುಂದಿದೆ. ಜಾಗತಿಕ ಟಾಪ್ 10 ಟೆಕ್ ಹಬ್‌ಗಳಲ್ಲಿ ಬೆಂಗಳೂರು ಆರನೇ ಸ್ಥಾನದಲ್ಲಿದ್ದರೆ, ಹೈದರಾಬಾದ್ 26ನೇ ಸ್ಥಾನದಲ್ಲಿದೆ. 2020ರಿಂದ 2024ರ ಅವಧಿಯಲ್ಲಿ ಬೆಂಗಳೂರಿನ ಸ್ಟಾರ್ಟ್‌ಅಪ್‌ಗಳು 42.3 ಬಿಲಿಯನ್ ಡಾಲರ್​​ ಹೂಡಿಕೆಯನ್ನು ಆಕರ್ಷಿಸಿದ್ದರೆ, ಹೈದರಾಬಾದ್ ಸ್ಟಾರ್ಟ್‌ಅಪ್‌ಗಳು ಕೇವಲ 1.3 ಬಿಲಿಯನ್ ಡಾಲರ್​​ ಫಂಡಿಂಗ್ ಪಡೆದಿವೆ. ಎಐ ಸ್ಟಾರ್ಟ್‌ಅಪ್‌ಗಳ ಸ್ಥಾಪನೆ ಮತ್ತು ಹೂಡಿಕೆಯಲ್ಲೂ ಬೆಂಗಳೂರು ಗಮನಾರ್ಹ ಮುನ್ನಡೆ ಸಾಧಿಸಿದೆ. ಬೆಂಗಳೂರಿನಲ್ಲಿ 370 ಐಟಿ ಸೇವಾ ಕಂಪನಿಗಳು ಮತ್ತು 3,200 ಟೆಕ್ ಸ್ಟಾರ್ಟ್‌ಅಪ್‌ಗಳಿದ್ದರೆ, ಹೈದರಾಬಾದ್‌ನಲ್ಲಿ ಕ್ರಮವಾಗಿ 270 ಮತ್ತು 940 ಇವೆ. ಮೂಲಸೌಕರ್ಯದಂತಹ ಕೆಲವು ಕ್ಷೇತ್ರಗಳಲ್ಲಿ ಹೈದರಾಬಾದ್ ಉತ್ತಮ ಅಂಕ ಗಳಿಸಿದ್ದರೂ , ಒಟ್ಟಾರೆ ಕೌಶಲ್ಯ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಬೆಂಗಳೂರು ಮೇಲುಗೈ ಸಾಧಿಸಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಲಾಕ್​ಡೌನ್ ಪರಿಸ್ಥಿತಿ ಇರುವುದು ಭಾರತದಲ್ಲಲ್ಲ ಪಾಕಿಸ್ತಾನದಲ್ಲಿ; ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

ನವದೆಹಲಿ, ಮಾರ್ಚ್ 27: ಭಾರತದಲ್ಲಿ ಲಾಕ್‌ಡೌನ್ (Lockdown) ಆಗಲಿದೆ ಎಂಬ ವದಂತಿಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ತಳ್ಳಿಹಾಕಿದ್ದಾರೆ. ಆ ವದಂತಿಗಳು “ಆಧಾರರಹಿತ” ಎಂದು ಕರೆದಿದ್ದಾರೆ. ರಾಜಕಾರಣಿಗಳು ಮತ್ತು ಸಾರ್ವಜನಿಕರು ವಿನಾಕಾರಣ ಭಯವನ್ನು ಹರಡದಂತೆ ಅವರು ಒತ್ತಾಯಿಸಿದ್ದಾರೆ. “ಲಾಕ್​ಡೌನ್ ಪರಿಸ್ಥಿತಿ ಪಾಕಿಸ್ತಾನದಲ್ಲಿ ಉಂಟಾಗಿದೆಯೇ ವಿನಃ ಭಾರತದಲ್ಲಿ ಅಲ್ಲ” ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

ರಾಜ್ಯಸಭೆಯಲ್ಲಿ 2026ರ ಹಣಕಾಸು ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, “ದೇಶಾದ್ಯಂತ ಆಧಾರರಹಿತ ವದಂತಿಗಳನ್ನು ಹರಡಲಾಗುತ್ತಿದೆ. ಜನರ ಮನಸ್ಸಿನಲ್ಲಿ ಭಯ ಹುಟ್ಟಿಸಲು ಏನೇನೋ ಹೇಳಲಾಗುತ್ತಿದೆ. ಈ ಲಾಕ್‌ಡೌನ್ ಎಲ್ಲಿ ನಡೆಯುತ್ತಿದೆ? ಪಾಕಿಸ್ತಾನದಲ್ಲಿ ಲಾಕ್​ಡೌನ್ ನಡೆಯುತ್ತಿದೆಯೇ ವಿನಃ ಭಾರತದಲ್ಲಿ ಅಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ನದಿಗೆ ಬಸ್ ಉರುಳಿ 23 ಜನ ಸಾವು; ತನಿಖೆಗೆ ಪ್ರಧಾನಿ ಆದೇಶ

“ಬಾಂಗ್ಲಾದೇಶದ ಪರಿಸ್ಥಿತಿಯನ್ನು ನೋಡಿ. ಅವರು ಸಂಕಷ್ಟದಲ್ಲಿ ಬಳಲುತ್ತಿದ್ದಾರೆ ಎಂದು ಸೂಚಿಸಲು ನಾನು ಈ ಮಾತನ್ನು ಹೇಳುತ್ತಿಲ್ಲ. ವಾಸ್ತವಿಕತೆಯ ಹೋಲಿಕೆಯಾಗಿ ಮಾತ್ರ ಇದನ್ನು ಉಲ್ಲೇಖಿಸುತ್ತಿದ್ದೇನೆ. ಉತ್ತಮ ನೆರೆಯವರಾಗಿ, ನಮ್ಮ ಕಡೆಯಿಂದ ಸಾಧ್ಯವಾಗುವ ಯಾವುದೇ ಸಹಾಯವನ್ನು ನಾವು ನೀಡಲು ಸಿದ್ಧರಿದ್ದೇವೆ. ನಾವು ಉತ್ತಮ ನೆರೆಹೊರೆಯ ಸಂಬಂಧಗಳನ್ನು ಕಾಪಾಡಿಕೊಳ್ಳುತ್ತಿದ್ದೇವೆ ಮತ್ತು ಅಗತ್ಯವಿರುವಲ್ಲಿ ಸಹಾಯವನ್ನು ಒದಗಿಸುತ್ತಿದ್ದೇವೆ. ನಮ್ಮ ದೇಶದಲ್ಲಿ ಯಾವ ಸಮಸ್ಯೆಯೂ ಇಲ್ಲ” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್’ ನಟಿ ಸಾರಾ ಅರ್ಜುನ್ ಜತೆ ಇಶಾನ್ ಖಟ್ಟರ್ ಫೋಟೋ ವೈರಲ್: ಅಸಲಿ ವಿಷಯ ಬಹಿರಂಗ

ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟು, ಈಗ ಸ್ಟಾರ್ ನಾಯಕಿಯಾಗಿ ಬೆಳೆಯುತ್ತಿರುವ ಸಾರಾ ಅರ್ಜುನ್ (Sara Arjun) ಸದ್ಯ ತಮ್ಮ ವೃತ್ತಿಜೀವನದ ಸುವರ್ಣ ಕಾಲದಲ್ಲಿದ್ದಾರೆ. ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಚಿತ್ರದ ಯಶಸ್ಸು ಸಾರಾ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿದೆ. ಅದರಲ್ಲೂ ಸದ್ಯ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿ ಮಾಡುತ್ತಿರುವ ‘ಧುರಂಧರ್: ದಿ ರಿವೆಂಜ್’ (Dhurandhar 2) ಚಿತ್ರದ ಅಬ್ಬರದ ನಡುವೆಯೇ ಸಾರಾ ಅವರ ಹೊಸ ಸಿನಿಮಾ ಬಗ್ಗೆ ದೊಡ್ಡ ಸುದ್ದಿಯೊಂದು ಹರಿದಾಡುತ್ತಿದೆ.

ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಾರಾ ಅರ್ಜುನ್ ಮತ್ತು ‘ಹೋಮ್‌ಬೌಂಡ್’ ಖ್ಯಾತಿಯ ನಟ ಇಶಾನ್ ಖಟ್ಟರ್ ಒಟ್ಟಿಗೆ ಇರುವ ವಿಡಿಯೋಗಳು ಮತ್ತು ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಖ್ಯಾತ ನಿರ್ದೇಶಕಿ ಜೋಯಾ ಅಖ್ತರ್ ಅವರ ‘ಟೈಗರ್ ಬೇಬಿ’ ಬ್ಯಾನರ್ ಅಡಿಯಲ್ಲಿ ಇವರಿಬ್ಬರು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಜೋಡಿಯ ಕೆಮಿಸ್ಟ್ರಿ ನೋಡಿ ಅಭಿಮಾನಿಗಳು ಕೂಡ ಹೊಸ ಸಿನಿಮಾ ಘೋಷಣೆಯಾಗಲಿದೆ ಎಂದು ಕಾತರದಿಂದ ಕಾಯುತ್ತಿದ್ದರು.

ಆದರೆ ಅಭಿಮಾನಿಗಳ ನಿರೀಕ್ಷೆಗೆ ತಣ್ಣೀರು ಎರಚಿದಂತಾಗಿದೆ. ಇದು ಸಿನಿಮಾ ಅಲ್ಲ ಎಂಬ ಸತ್ಯ ಗೊತ್ತಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಸುದ್ದಿಗೆ ಈಗ ಸ್ವತಃ ಸಾರಾ ಅರ್ಜುನ್ ಅವರೇ ಬ್ರೇಕ್ ಹಾಕಿದ್ದಾರೆ. ಇಶಾನ್ ಖಟ್ಟರ್ ಜೊತೆಗಿನ ಆ ಫೋಟೋಗಳು ಸಿನಿಮಾದ್ದಲ್ಲ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಇದು ಯಾವುದೋ ಹೊಸ ಸಿನಿಮಾದ ಶೂಟಿಂಗ್ ಅಲ್ಲ, ಬದಲಿಗೆ ಇದೊಂದು ಜಾಹೀರಾತು ಚಿತ್ರೀಕರಣ!

ವೈರಲ್ ಆಗಿರುವ ವಿಡಿಯೋಗಳ ಬಗ್ಗೆ ಸ್ಪಷ್ಟನೆ ನೀಡಿರುವ ಸಾರಾ ಅರ್ಜುನ್, ‘ಇದು ಗೂಗಲ್ ಎಐ ಸಲುವಾಗಿ ಮಾಡಲಾದ ಜಾಹೀರಾತು. ಈ ಅಭಿಯಾನದ ಬಗ್ಗೆ ಕುತೂಹಲ ಮೂಡಿಸಲು ಗೂಗಲ್ ಪ್ರಯತ್ನಿಸುತ್ತಿದೆ’ ಎಂದು ಹೇಳಿದ್ದಾರೆ. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿನ ಹೊಸ ತಂತ್ರಜ್ಞಾನಗಳನ್ನು ಉತ್ತೇಜಿಸಲು ಈ ವಿಶೇಷ ಪ್ರಚಾರವನ್ನು ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ: ‘ಧುರಂಧರ್’ ಸಿನಿಮಾದಲ್ಲಿನ ಹಲವು ತಪ್ಪುಗಳ ಪಟ್ಟಿ ನೀಡಿದ ಪಾಕಿಸ್ತಾನಿ ಪ್ರೇಕ್ಷಕರು

ಹೀಗಾಗಿ, ಸಾರಾ ಮತ್ತು ಇಶಾನ್ ಅವರನ್ನು ಬೆಳ್ಳಿತೆರೆಯ ಮೇಲೆ ಒಟ್ಟಿಗೆ ನೋಡಬಯಸಿದ್ದ ಅಭಿಮಾನಿಗಳಿಗೆ ಸದ್ಯಕ್ಕೆ ನಿರಾಸೆಯಾಗಿದ್ದರೂ, ಗೂಗಲ್‌ನ ಈ ಹೊಸ ಎಐ ಪ್ರಚಾರದಲ್ಲಿ ಅವರ ಅಭಿನಯ ಹೇಗಿರಲಿದೆ ಎಂಬ ಕುತೂಹಲ ಮಾತ್ರ ಹಾಗೆಯೇ ಉಳಿದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇನ್​​ಸ್ಟಾಗ್ರಾಂ ವಿಡಿಯೋ ನೋಡಿ ಸಿನಿಮಾನಲ್ಲಿ ಅವಕಾಶ ಕೊಟ್ಟ ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ (Vijay Deverakonda) ಈಗ ಟಾಲಿವುಡ್​​ನ ಸ್ಟಾರ್ ನಟರಲ್ಲಿ ಒಬ್ಬರು. ಯಾವುದೇ ಗಾಡ್​ಫಾದರ್​​ಗಳಿಲ್ಲದೆ ತೀರ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಒಂದೊಂದೇ ಮೆಟ್ಟಿಲು ಏರಿ ಈಗ ಸ್ಟಾರ್ ಆದವರು. ಸ್ಟಾರ್ ಆದ ಬಳಿಕ ತನ್ನಂತೆ ಪ್ರತಿಭೆ ಇರುವ ಆದರೆ ಗಾಡ್ ಫಾದರ್​​ಗಳಿಲ್ಲದ ಯುವಕರಿಗೆ ಸಹಾಯ ಮಾಡುತ್ತಾ ಬರುತ್ತಿದ್ದಾರೆ. ಇದೀಗ ಇನ್​​ಸ್ಟಾಗ್ರಾಂನಲ್ಲಿ ವಿಡಿಯೋ ಮಾಡುತ್ತಾ ಸಿನಿಮಾ ಅವಕಾಶಕ್ಕಾಗಿ ಹುಡುಕಾಡುತ್ತಿದ್ದ ಯುವಕನೊಬ್ಬನಿಗೆ ವಿಜಯ್ ದೇವರಕೊಂಡ ಸಿನಿಮಾನಲ್ಲಿ ಅವಕಾಶ ಕೊಟ್ಟು, ಆತನ ಕನಸು ನನಸು ಮಾಡಿದ್ದಾರೆ.

ಜೀವನ್ ಹೆಸರಿನ ಯುವಕನೊಬ್ಬ ನಟನಾಗುವ ಕನಸು ಹೊಂದಿ, ಇನ್​​ಸ್ಟಾಗ್ರಾಂನಲ್ಲಿ ತನ್ನ ವಿಡಿಯೋಗಳನ್ನು ಅಪ್​ಲೋಡ್ ಮಾಡುತ್ತಿದ್ದ. ಯಾವುದೇ ಆಡಿಷನ್ ಪ್ರಕಟಣೆ ಬಂದರೂ ಅದಕ್ಕೆ ಸೀನ್ ಬರೆದು, ನಟಿಸಿ ಆ ವಿಡಿಯೋವನ್ನು ಇನ್​​ಸ್ಟಾಗ್ರಾಂನಲ್ಲಿ ಹಾಕಿಕೊಳ್ಳುತ್ತಿದ್ದ. ಇತ್ತೀಚೆಗೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ನಟನೆಯ ಹೊಸ ಸಿನಿಮಾ ‘ರಣಬಲಿ’ಗೆ ಹೊಸ ನಟರು ಬೇಕಾಗಿದ್ದಾರೆಂಬ ಆಡಿಷನ್ ಪ್ರಕಟಣೆ ಹೊರಡಿಸಲಾಗಿತ್ತು. ಅದಕ್ಕೆ ಯುವಕ ಜೀವನ್ ವಿಡಿಯೋ ಒಂದನ್ನು ಕಳಿಸಿದ್ದ.

ಆಡಿಷನ್ ವಿಡಿಯೋಗೆ ತಾನೇ ಚಿತ್ರಕತೆ ಬರೆದು, ತಾನೇ ಕಾಸ್ಟ್ಯೂಮ ರೆಡಿ ಮಾಡಿ, ರಕ್ತ ಇನ್ನಿತರೆಗಳನ್ನು ತಾನೇ ಮನೆಯಲ್ಲೇ ತಯಾರು ಮಾಡಿಕೊಂಡು, ಮೊಬೈಲ್​​ನಲ್ಲಿ ಶೂಟ್ ಮಾಡಿ ವಿಡಿಯೋ ಮಾಡಿದ್ದ ಜೀವನ್ ಆ ವಿಡಿಯೋವನ್ನು ‘ರಣಬಲಿ’ ಸಿನಿಮಾ ತಂಡಕ್ಕೆ ಕಳಿಸುವ ಜೊತೆಗೆ ಇನ್​​ಸ್ಟಾಗ್ರಾಂನಲ್ಲಿಯೂ ಹಂಚಿಕೊಂಡಿದ್ದ. ವಿಡಿಯೋ ಗಮನಿಸಿದ ವಿಜಯ್ ದೇವರಕೊಂಡ ಖುದ್ದಾಗಿ ವಿಡಿಯೋಕ್ಕೆ ಮೆಸೇಜ್ ಮಾಡಿದ್ದಾರೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಹಳದಿ ಶಾಸ್ತ್ರದ ಕಲರ್​ಫುಲ್ ಫೋಟೋ ಗ್ಯಾಲರಿ

‘ಅದ್ಭುತವಾದ ಪ್ರತಿಭೆ, ಈಗಲೇ ನಿನ್ನನ್ನು ಕಾಸ್ಟ್ ಮಾಡೋಣ, ನಮ್ಮ ಜೊತೆ ಸಂಪರ್ಕದಲ್ಲಿರು’ ಎಂದು ವಿಜಯ್ ದೇವರಕೊಂಡ ಕಮೆಂಟ್ ಮಾಡಿದ್ದಾರೆ. ಕಮೆಂಟ್ ಮಾಡಿದ್ದು ಮಾತ್ರವೇ ಅಲ್ಲದೆ, ತಮ್ಮ ‘ರಣಬಲಿ’ ತಂಡಕ್ಕೆ ಹೇಳಿ ಜೀವನ್ ಅವರನ್ನು ಸಂಪರ್ಕಿಸುವಂತೆ ಸಹ ಸೂಚಿಸಿದ್ದರಂತೆ. ಅದರಂತೆ ‘ರಣಬಲಿ’ ತಂಡದವರು ಜೀವನ್ ಅನ್ನು ಇನ್​​ಸ್ಟಾಗ್ರಾಂ ಮೂಲಕ ಸಂಪರ್ಕ ಮಾಡಿ, ಆತನ ನಂಬರ್ ಪಡೆದುಕೊಂಡಿದ್ದಾರೆ.

ಈ ಕುರಿತು ಪ್ರತ್ಯೇಕ ವಿಡಿಯೋನಲ್ಲಿ ಹೇಳಿಕೊಂಡಿರುವ ಯುವಕ ಜೀವನ, ವಿಜಯ್ ದೇವರಕೊಂಡ ಅವರಿಗೆ ಧನ್ಯವಾದ ಹೇಳಿದ್ದಾನೆ. ಆ ಯುವಕ ಜೀವನ್, ಹಲವಾರು ವಿಡಿಯೋಗಳನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ತಾನೊಬ್ಬ ನಟನಾಗಬೇಕು ಎಂಬುದೇ ಆತನ ಕನಸಾಗಿತ್ತು. ಇದೀಗ ವಿಜಯ್ ದೇವರಕೊಂಡ ಅವರಿಂದ ಆ ಕನಸು ನನಸಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗೌತಮ್ ಗಂಭೀರ್ ನಂತರ ದಿನೇಶ್ ಕಾರ್ತಿಕ್ ಟೀಂ ಇಂಡಿಯಾದ ಹೆಡ್ ಕೋಚ್

ಪ್ರಸ್ತುತ ಟೀಂ ಇಂಡಿಯಾದ (Team India) ಎಲ್ಲಾ ಆಟಗಾರರು 2026 ರ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (IPL 2026) ಭಾಗವಹಿಸಲಿದ್ದಾರೆ. ಈ ಪಂದ್ಯಾವಳಿಯ ಮೊದಲ ಪಂದ್ಯ ಆರ್​ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ (RCB vs SRH) ನಡುವೆ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ, ಆರ್​ಸಿಬಿ ತಂಡದಲ್ಲಿ ವಿಕೆಟ್ ಕೀಪರ್ ಜವಾಬ್ದಾರಿ ನಿಭಾಯಿಸುತ್ತಿರುವ ಜಿತೇಶ್ ಶರ್ಮಾ ಪಾಡ್‌ಕ್ಯಾಸ್ಟ್‌ವೊಂದರಲ್ಲಿ ಗೌತಮ್ ಗಂಭೀರ್ ನಂತರ ದಿನೇಶ್ ಕಾರ್ತಿಕ್ (Dinesh Karthik) ಟೀಂ ಇಂಡಿಯಾದ ಮುಂದಿನ ಮುಖ್ಯ ಕೋಚ್ ಆಗಬಹುದು ಎಂದಿದ್ದಾರೆ. ಒಂದು ವೇಳೆ ದಿನೇಶ್ ಕಾರ್ತಿಕ್ ಅವರಿಗೆ ಟೀಂ ಇಂಡಿಯಾದ ಕೋಚ್ ಆಗುವ ಅವಕಾಶ ಸಿಗದಿದ್ದರೂ ಖಂಡಿತವಾಗಿಯೂ ಅವರು ಬೇರೊಂದು ದೇಶದ ತಂಡದ ಮುಖ್ಯ ಕೋಚ್ ಆಗುತ್ತಾರೆ. ಏಕೆಂದರೆ ಅವರು ಅಪಾರ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಜಿತೇಶ್ ಶರ್ಮಾ ಹೇಳಿದ್ದಾರೆ.

ದಿನೇಶ್ ಕಾರ್ತಿಕ್ ಮುಖ್ಯ ಕೋಚ್?

ರಣವೀರ್ ಅಲಹಾಬಾದ್ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿರುವ ಜಿತೇಶ್ ಶರ್ಮಾ, ‘ಭವಿಷ್ಯದಲ್ಲಿ ದಿನೇಶ್ ಕಾರ್ತಿಕ್ ಭಾರತೀಯ ಕ್ರಿಕೆಟ್ ತಂಡದ ತರಬೇತುದಾರರಾಗುತ್ತಾರೆಯೇ?” ಎಂದು ರಣವೀರ್ ಜಿತೇಶ್ ಶರ್ಮಾ ಅವರನ್ನು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಜಿತೇಶ್, ‘ಅವರು ಖಂಡಿತಾ ಆಗಬಹುದು. ದಿನೇಶ್ ಕಾರ್ತಿಕ್ ಭಾರತವಲ್ಲದಿದ್ದರೆ, ಇನ್ನೊಂದು ಪ್ರಮುಖ ದೇಶದ ತರಬೇತುದಾರರಾಗುವ ಸಾಮರ್ಥ್ಯ ಹೊಂದಿದ್ದಾರೆ. ಭಾರತ ಅವರನ್ನು ಕೋಚ್ ಆಗಿ ನೇಮಿಸದಿದ್ದರೆ, ಬೇರೆ ಯಾವುದಾದರೂ ದೇಶ ಮಾಡುತ್ತದೆ ಎಂದು ನಾನು ನಂಬುತ್ತೇನೆ’ ಎಂದು ಜಿತೇಶ್ ಶರ್ಮಾ ಉತ್ತರಿಸಿದ್ದಾರೆ.

ದಿನೇಶ್ ಕಾರ್ತಿಕ್ ಯೋಗ್ಯ ಅಭ್ಯರ್ಥಿ

ಜಿತೇಶ್ ಹೇಳಿದಂತೆ, ದಿನೇಶ್ ಕಾರ್ತಿಕ್ ಅವರ ಅನುಭವ ಮತ್ತು ಕ್ರಿಕೆಟ್ ಜ್ಞಾನ ಅವರನ್ನು ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಯೋಗ್ಯ ಅಭ್ಯರ್ಥಿಯನ್ನಾಗಿ ಮಾಡಿದೆ. ದಿನೇಶ್ ಕಾರ್ತಿಕ್ ಅವರ ಯಶಸ್ಸಿಗೆ ದೊಡ್ಡ ಸಾಕ್ಷಿಯೆಂದರೆ ಆರ್‌ಸಿಬಿಯ ಐಪಿಎಲ್ ಗೆಲುವು. 2025 ರಲ್ಲಿ, ದಿನೇಶ್ ಕಾರ್ತಿಕ್ ಬಲಿಷ್ಠ ತಂಡವನ್ನು ಕಟ್ಟಿ ತಂಡವನ್ನು ಚಾಂಪಿಯನ್ ಮಾಡಿದ್ದರು. ದಿನೇಶ್ ಕಾರ್ತಿಕ್ ದಿ ಹಂಡ್ರೆಡ್‌ನಲ್ಲಿ ಲಂಡನ್ ಸ್ಪಿರಿಟ್‌ನ ಬ್ಯಾಟಿಂಗ್ ಕೋಚ್ ಮತ್ತು ಮಾರ್ಗದರ್ಶಕರೂ ಆಗಿದ್ದಾರೆ. ಹೀಗಾಗಿ ಮುಂದೊಂದು ದಿನ ದಿನೇಶ್ ಕಾರ್ತಿಕ್ ಭಾರತ ತಂಡದ ಹೆಡ್ ಕೋಚ್ ಆಗುವ ಸಾಧ್ಯತೆಗಳಿವೆ.

IPL 2026: ಆರ್​ಸಿಬಿಗೆ ಆರಂಭಿಕ ಆಘಾತ; ಮೊದಲ ಪಂದ್ಯದಲ್ಲಿ ಅಡಲ್ಲ ಸ್ಟಾರ್ ಪ್ಲೇಯರ್

ದಿನೇಶ್ ಕಾರ್ತಿಕ್ ವೃತ್ತಿಜೀವನ

ದಿನೇಶ್ ಕಾರ್ತಿಕ್ ತಮ್ಮ ವೃತ್ತಿಜೀವನದಲ್ಲಿ ಭಾರತ ಪರ 26 ಟೆಸ್ಟ್, 94 ಏಕದಿನ ಮತ್ತು 60 ಟಿ20 ಪಂದ್ಯಗಳನ್ನು ಆಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 28 ಶತಕಗಳು ಸೇರಿದಂತೆ ಅವರು ಒಟ್ಟು 9,620 ರನ್ ಗಳಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ 12 ಶತಕಗಳು ಸೇರಿದಂತೆ 7,603 ರನ್ ಗಳಿಸಿರುವ ಕಾರ್ತಿಕ್ 415 ಟಿ20 ಪಂದ್ಯಗಳನ್ನು ಆಡಿದ್ದು, 7,557 ರನ್ ಗಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಹಾಲು ಉತ್ಪಾದಕರ ಮಹಿಳಾ ಸಂಘದ ಕಾರ್ಯದರ್ಶಿ

ಚಿಕ್ಕಮಗಳೂರು, ಮಾರ್ಚ್​​ 27: ಹಾಲು ಉತ್ಪಾದಕರ ಸಂಘದಲ್ಲಿ ಹಣ ದುರ್ಬಳಕೆ ಆರೋಪ ಸಂಬಂಧ ಮನನೊಂದು ಮಹಿಳಾ ಸಂಘದ ಕಾರ್ಯದರ್ಶಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಮಗಳೂರಿನ ತರೀಕೆರೆಯ ಹೆಚ್​​. ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಉಷಾ (45) ಮೃತ ಮಹಿಳೆಯಾಗಿದ್ದು, ಕಿರುಕುಳ ತಡೆಯಲು ನನ್ನಿಂದ ಆಗುತ್ತಿಲ್ಲ ಎಂದು ಹೇಳಿರುವ ವಿಡಿಯೋ ರೆಕಾರ್ಡ್​​ ಮಾಡಿ ನೇಣಿಗೆ ಶರಣಾಗಿದ್ದಾರೆ. ಲೆಕ್ಕಪತ್ರ ಪುಸ್ತಕ ಕಳೆದುಹೋಗಿರೋದು ತನ್ನಿಂದಾದ ತಪ್ಪು ಎಂದು ವಿಡಿಯೋದಲ್ಲವರು ಅಲವತ್ತುಕೊಂಡಿದ್ದಾರೆ.

ಕಳೆದ 10 ವರ್ಷಗಳಿಂದ ಹಣ ದುರುಪಯೋಗ ಎಂದು ಗ್ರಾಮಸ್ಥರು ಆರೋಪಿಸಿದ್ದು, ಈ ಸಂಬಂಧ ನಡೆದಿದ್ದ ಪಂಚಾಯತಿಯಲ್ಲೂ ಲೆಕ್ಕಪತ್ರ ಮಿಸ್ಸಿಂಗ್​​ ಆಗಿರೋದು ನಿಜ ಎಂದು ಉಷಾ ಒಪ್ಪಿಕೊಂಡಿದ್ದರು. 2010ರಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಆರಂಭವಾಗಿತ್ತು. ಅಲ್ಲಿಂದಲೂ ಉಷಾ ಸಂಘದ ಕಾರ್ಯದರ್ಶಿಯಾಗಿದ್ದರು. ಈ ನಡುವೆ 2025ರಲ್ಲಿ ಸಂಘಕ್ಕೆ ಹೊಸ ಸದಸ್ಯರು ಸೇರ್ಪಡೆಗೊಂಡ ಬಳಿಕ ಎಲ್ಲಾ ಲೆಕ್ಕಪತ್ರ ಕೇಳಲು ಅವರು ಪ್ರಾರಂಭಿಸಿದ್ದರು. ಆ ವೇಳೆ ಉಷಾ ವಿರುದ್ಧ ಹಣ ದುರ್ಬಳಕೆ ಆರೋಪ ಮಾಡಲಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: ವಿಜಯಪುರದಲ್ಲೊಂದು ಮನಕಲಕುವ ಘಟನೆ; ಪುಟ್ಟ ಪುಟ್ಟ 3 ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ದೂರು ದಾಖಲು

ಘಟನೆ ಬಗ್ಗೆ ಮೃತ ಉಷಾ ಅವರ ಪತಿ ಪೊಲೀಸರಿಗೆ ದೂರು ನೀಡಿದ್ದು, ಪತ್ನಿ ಸಾವಿಗೆ ಕೆಲವರ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾರೆ. ಜೊತೆಗೆ ಆಕೆ ಎಲ್ಲ ಲೆಕ್ಕಪತ್ರವನ್ನೂ ನೀಡಿದ್ದಳು. ಹೀಗಿದ್ದರೂ ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿತ್ತು. ಎಚ್. ಎನ್. ಜಗದೀಶ್ (ದೊಡ್ಡೆರಿ), ದಕ್ಷಿಣ ಮೂರ್ತಿ, ಎಚ್. ಎಂ. ಯತೀಶ, ಲವಕುಮಾರ, ಕುಮಾರಸ್ವಾಮಿ, ವಿನಯ್ ಕುಮಾರ, ದರ್ಶನ್‌ ಕುಮಾರ್ ಎಚ್. ಆರ್., ಮಂಜುನಾಥ, ರಾಜೇಶ್ ಬಿನ್ ಪಾಲಾಕ್ಷಿ ಇವರೇ ತನ್ನ ಪತ್ನಿಯ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಉಷಾ ವಿಡಿಯೋದಲ್ಲಿ 10 ಜನರ ಹೆಸರು ಉಲ್ಲೇಖಿಸಿರುವ ಹಿನ್ನೆಲೆ ಹೆಚ್​​. ಮಲ್ಲೇನಹಳ್ಳಿ ಗ್ರಾಮದ 10 ಜನರ ಮೇಲೆ ತರೀಕೆರೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಬಕಾರಿ ಸುಂಕ ಕಡಿತದಿಂದ ಸರ್ಕಾರಕ್ಕೆ ಎರಡೇ ವಾರದಲ್ಲಿ 7,000 ಕೋಟಿ ರೂ ಆದಾಯನಷ್ಟದ ಅಂದಾಜು

ನವದೆಹಲಿ, ಮಾರ್ಚ್ 27: ಜನರಿಗೆ ತೈಲ ಬೆಲೆ ಏರಿಕೆಯ ಬಿಸಿ ತಾಗದಿರಲೆಂದು ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು (Excise Duty) ಕಡಿಮೆಗೊಳಿಸಿದೆ. ಪೆಟ್ರೋಲ್ ಮತ್ತು ಡೀಸಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು 10 ರೂ ಇಳಿಸಿದೆ. ಇದರಿಂದ ತೈಲ ಮಾರುಕಟ್ಟೆ ಕಂಪನಿಗಳಿಗೆ ಆಗಬಹುದಾಗಿದ್ದ ನಷ್ಟದ ಹೊರೆ ಕಡಿಮೆ ಆಗಲಿದೆ. ಜನಸಾಮಾನ್ಯರಿಗೆ ಪೆಟ್ರೋಲ್, ಡೀಸಲ್ ಬೆಲೆ (Petrol Price) ಏರಿಕೆಯ ಭಾರವೂ ತಪ್ಪಿದಂತಾಗುತ್ತದೆ.

ಅಬಕಾರಿ ಸುಂಕ ಇಳಿಕೆಯಿಂದ ಸರಕಾರದ ಆದಾಯಕ್ಕೆ ಸಾಕಷ್ಟು ನಷ್ಟ ಆಗಲಿದೆ. ಕೇಂದ್ರೀಯ ನೇರ ತೆರಿಗೆ ಮತ್ತು ಸುಂಕ ಮಂಡಳಿ ಛೇರ್ಮನ್ ವಿವೇಕ್ ಚತುರ್ವೇದಿ ಪ್ರಕಾರ, ಕೇವಲ 15 ದಿನದಲ್ಲಿ ಸರ್ಕಾರಕ್ಕೆ ಆಗುವ ಆದಾಯ ನಷ್ಟ ಬರೋಬ್ಬರಿ 7,000 ಕೋಟಿ ರೂ.

ಇದನ್ನೂ ಓದಿ: ರಷ್ಯನ್ ಎಲ್​ಎನ್​ಜಿಯನ್ನು ಖರೀದಿಸಲಿರುವ ಭಾರತ; ಎಲ್​ಪಿಜಿ, ಪಿಎನ್​ಜಿ, ಎಲ್​ಎನ್​ಜಿಗಿರುವ ವ್ಯತ್ಯಾಸಗಳೇನು?

ಆದರೆ, ತೈಲ ಮಾರುಕಟ್ಟೆ ಸಂಸ್ಥೆಗಳು ವಿಪರೀತ ನಷ್ಟ ಎದುರಿಸುವುದನ್ನು ತಪ್ಪಿಸಲು ಸರ್ಕಾರ ಅಬಕಾರಿ ಸುಂಕ ಇಳಿಸುವುದು ಅನಿವಾರ್ಯವಾಗಿತ್ತು. ಇಲ್ಲದಿದ್ದರೆ ಪೆಟ್ರೋಲ್, ಡೀಸಲ್ ಬೆಲೆಗಳನ್ನು ಏರಿಸಲು ಅವಕಾಶ ಕೊಡುವ ಒಂದು ಮಾರ್ಗ ಇತ್ತಾದರೂ ಅದರಿಂದ ಜನಸಾಮಾನ್ಯರಿಗೆ ನೇರವಾಗಿ ಬಿಸಿ ತಗುಲುತ್ತಿತ್ತು. ಹೀಗಾಗಿ, ಅಬಕಾರಿ ಸುಂಕವನ್ನು ಇಳಿಸಲು ಸರ್ಕಾರ ನಿರ್ಧರಿಸಿದೆ.

ಜಾಗತಿಕ ಕಚ್ಛಾ ತೈಲ ಬೆಲೆ ಇರಾನ್ ಯುದ್ಧಕ್ಕೆ ಮುನ್ನ ಒಂದು ಬ್ಯಾರಲ್​ಗೆ ಸುಮಾರು 60 ಡಾಲರ್ ಇತ್ತು. ಈಗ ಅದು 100 ಡಾಲರ್ ದಾಟಿ ಹೋಗಿದೆ. ಒಂದು ಹಂತದಲ್ಲಿ ಅದು 120 ಡಾಲರ್ ಗಡಿ ಮುಟ್ಟಿತ್ತು. ತೈಲ ಬೆಲೆ ಹೆಚ್ಚಿದಷ್ಟೂ ಒಎಂಸಿಗಳಿಗೆ ನಷ್ಟದ ಹೊರೆ ಹೆಚ್ಚುತ್ತಾ ಹೋಗುತ್ತದೆ. ಸರ್ಕಾರ ಪ್ರತೀ 15 ದಿನಗಳಿಗೊಮ್ಮೆ ಅಬಕಾರಿ ಸುಂಕಗಳನ್ನು ಪರಿಷ್ಕರಿಸಲೂ ನಿರ್ಧರಿಸಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಆಪರೇಷನ್ ಊರ್ಜಾ ಸುರಕ್ಷಾ; ಏನಿದು ವಿಶೇಷ ಕಾರ್ಯಾಚರಣೆ?

ಕೆಲ ದಿನಗಳ ಹಿಂದೆ ಖಾಸಗಿ ಪೆಟ್ರೋಲಿಯಂ ರೀಟೇಲ್ ಮಾರಾಟ ಸಂಸ್ಥೆಯಾದ ನಯಾರಾ ಎನರ್ಜಿ ತನ್ನ ಪೆಟ್ರೋಲ್ ಮತ್ತು ಡೀಸಲ್ ದರಗಳನ್ನು ಹೆಚ್ಚಿಸಿದೆ. ಪೆಟ್ರೋಲ್ ಬೆಲೆ ಲೀಟರ್​ಗೆ 5 ರೂ ಹೆಚ್ಚಿದರೆ, ಡೀಸಲ್ ಬೆಲೆ 3 ರೂ ಹೆಚ್ಚಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link