All posts by nagaraj11081993

ಕೊನೆಗೂ ದಾವಣಗೆರೆ ಬಂಡಾಯ ಶಮನ: ಅಧಿಕೃತವಾಗಿ ತಮ್ಮ ನಿಲುವು ಘೋಷಿಸಿದ ಪೈಲ್ವಾನ್

ಕೊನೆಗೂ ದಾವಣಗೆರೆ ಬಂಡಾಯ ಶಮನ: ಅಧಿಕೃತವಾಗಿ ತಮ್ಮ ನಿಲುವು ಘೋಷಿಸಿದ ಪೈಲ್ವಾನ್

ಬೆಂಗಳೂರು/ದಾವಣಗೆರೆ, ಮಾರ್ಚ್ 27): ದಾವಣಗೆರೆ ಉಪ ಚುನಾವಣೆಯಲ್ಲಿ (Davanagere South By Election) ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಹಿರಿಯ ನಾಯಕರ ಸಂಧಾನದ ಬಳಿಕ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಸಕ್ಸಸ್ ಆಗಿದ್ದು, ಯಾವುದೇ ಷರತ್ತುಗಳಿಲ್ಲದೆ ಪಕ್ಷದ ಅಧಿಕೃತ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಪೈಲ್ವಾನ್ ಘೋಷಿಸಿದ್ದಾರೆ.

ಸಾಧಿಕ್ ಪೈಲ್ವಾನ್ ಅವರು ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹಮ್ಮದ್ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಿ ಚರ್ಚಿಸಿದ್ದು, ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ನಂತರ ನೇರವಾಗಿ ಡಿಕೆ ಶಿವಕುಮಾರ್ ಜೊತೆ ಕೆಪಿಸಿಸಿ ಕಚೇರಿ ತೆರಳಿ ಸುದ್ದಿಗೋಷ್ಠಿಯಲ್ಲಿ ಬಂಡಾಯ ಸ್ಪರ್ಧೆಯಿಂದ ನಾನು ನಿವೃತ್ತಿ ಆಗಿದ್ದೇನೆ ಎಂದು ಘೋಷಣೆ ಮಾಡಿದರು. ಈ ಮೂಲಕ ಕಾಂಗ್ರೆಸ್​​ಗೆ ಕಂಟಕವಾಗಿದ್ದ ಬಂಡಾಯ ಶಮನವಾದಂತಾಗಿದೆ. ಹಾಗಾದ್ರೆ, ಪೈಲ್ವಾನ್ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ಕೇಳಿ.

ಇದನ್ನೂ ನೋಡಿ: ಸಿಎಂ ಸಿದ್ದರಾಮಯ್ಯ ಸಂಧಾನ ಸಕ್ಸಸ್: ಪಲ್ಟಿ ಹೊಡೆದ ಪೈಲ್ವಾನ್

Source link

‘ಉಚಿತ ಆನ್‌ಲೈನ್ ಬೈಬಲ್ ಕೋರ್ಸ್’: ಬೆಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಧರ್ಮ ಪ್ರಚಾರ ಮಾಡುವುದು ಎಷ್ಟು ಸರಿ?

ಬೆಂಗಳೂರು, ಮಾ.27: ನಗರದ ಜಯಮಹಲ್ ಬಡಾವಣೆಯ ರಸ್ತೆಬದಿಗಳಲ್ಲಿರುವ ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್‌ಫಾರ್ಮರ್‌ಗಳ ಮೇಲೆ ‘ಉಚಿತ ಆನ್‌ಲೈನ್ ಬೈಬಲ್ ಕೋರ್ಸ್’ ಎಂಬ ಪೋಸ್ಟರ್‌ಗಳನ್ನು ಅಂಟಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ಥಳೀಯ ವ್ಯಕ್ತಿಯೊಬ್ಬರು ವಿಡಿಯೋ ಮಾಡುವ ಮೂಲಕ ತಮ್ಮ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜಯಮಹಲ್ ಎಕ್ಸ್‌ಟೆನ್ಷನ್‌ನ 1ನೇ ಮುಖ್ಯರಸ್ತೆಯ ಸುತ್ತಮುತ್ತಲಿನ ಸಾರ್ವಜನಿಕ ಆಸ್ತಿಗಳ ಮೇಲೆ ಸಾಲು ಸಾಲಾಗಿ ಧಾರ್ಮಿಕ ಪ್ರಚಾರದ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಇವುಗಳಲ್ಲಿ ಕ್ಯೂಆರ್ ಕೋಡ್ (QR Code) ಮತ್ತು ಸಂಪರ್ಕ ಸಂಖ್ಯೆಗಳನ್ನು ನೀಡಲಾಗಿದೆ. ವಿಡಿಯೋ ಮಾಡಿರುವ ವ್ಯಕ್ತಿ, “ಸಾರ್ವಜನಿಕ ಜಾಗಗಳಲ್ಲಿ ಇಂತಹ ಧಾರ್ಮಿಕ ಪ್ರಚಾರ ಮಾಡುವುದು ತಪ್ಪು. ಇದು ಯಾವುದೇ ಧರ್ಮವಿರಲಿ, ಪ್ರಚಾರವನ್ನ ದೇವಸ್ಥಾನ, ಚರ್ಚ್ ಅಥವಾ ಮಸೀದಿಗಳ ಒಳಗೆ ಮಾಡಿಕೊಳ್ಳಲಿ. ಬೀದಿ ಬದಿಗಳಲ್ಲಿ ಇಂತಹ ಪೋಸ್ಟರ್‌ಗಳನ್ನು ಹಾಕುವುದರಿಂದ ಕೋಮು ಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಕನ್ನಡಿಗ ದೇವರಾಜ್ ಎಂಬ ಎಕ್ಸ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಧರ್ಮ ಎಂಬುದು ಮನೆಯ ಒಳಗಿರಲಿ, ಅದನ್ನು ಬೀದಿಗೆ ತಂದು ಪ್ರಚಾರ ಮಾಡುವುದು ಸರಿಯಲ್ಲ. ಈ ರೀತಿ ಎಲ್ಲೆಂದರಲ್ಲಿ ಪೋಸ್ಟರ್ ಅಂಟಿಸುವುದರಿಂದ ನಗರದ ಅಂದವೂ ಹಾಳಾಗುತ್ತದೆ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ಱಸಷದ

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯಪುರದಲ್ಲೊಂದು ಮನಕಲಕುವ ಘಟನೆ : ಪುಟ್ಟ ಪುಟ್ಟ 3 ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ವಿಜಯಪುರ, (ಮಾರ್ಚ್ 27): ಪುಟ್ಟ ಪುಟ್ಟ ಮೂರು ಮಕ್ಕಳೊಂದಿಗೆ ತಾಯಿ (Mother) ಆತ್ಮಹತ್ಯೆ ಮಾಡಿಕೊಂಡಿರುವ ಘನಘೋರ ಘಟನೆ ವಿಜಯಪುರ (Vijayapura) ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ ನಡೆದಿದೆ. ಗುರುವಾರ ಸಂಜೆ ರಾಜಶ್ರೀ ಶಂಕ್ರಪ್ಪ ಹಳ್ಳೂರ (28) ಎನ್ನುವ ಮಹಿಳೆ ತನ್ನ ಮೂವರು ಅಪ್ರಾಪ್ತ ಮಕ್ಕಳಾದ ಅನುಶ್ರೀ (6), ತನು (3) ಮತ್ತು ಸಂತೋಷನನ್ನು (1) ಬಾವಿಗೆ ತಳ್ಳಿ ಬಳಿಕ ತಾನೂ ಸಹ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಖಾಸಗಿ ಬಸ್ ಚಾಲಕನಾಗಿರುವ ಪತಿ ಶಂಕರಪ್ಪ ಕೆಲಸಕ್ಕೆ ಹೋಗಿದ್ದಾಗ ಪತ್ನಿ ರಾಜಶ್ರೀ ತನ್ನ ಮೂವರು ಮಕ್ಕಳೊಂದಿಗೆ ಸಾವಿನ ಮನೆ ಸೇರಿದ್ದಾಳೆ. ಆದ್ರೆ, ಘಟನೆ ಕಾರಣ ಮಾತ್ರ ನಿಗೂಢವಾಗಿದೆ.

ಘಟನೆಯ ವೇಳೆ ರಾಜಶ್ರೀಯ ಪತಿ ಶಂಕ್ರಪ್ಪ ಊರಲ್ಲಿ ಇರಲಿಲ್ಲ. ಖಾಸಗಿ ಬಸ್ ಚಾಲಕನಾಗಿರುವ ಶಂಕ್ರೆಪ್ಪ ಘಟನೆ ಕುರಿತು ಮಾಹಿತಿ ತಿಳಿದ ಬಳಿಕ ತಮ್ಮೂರಿಗೆ ಆಗಮಿಸಿದ್ದ. ಇನ್ನು ರಾಜಶ್ರೀಯ ತವರಿನವರು ಸಹ ಸ್ಥಳಕ್ಕೆ ಆಗಮಿಸಿದ್ದರು. ನಂತರ ಪೊಲೀಸರು ಬಾವಿಯಿಂದ ನಾಲ್ವರ ಮೃತದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಇಂಡಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಿದ್ದು, ಇಂದು (ಮಾರ್ಚ್ 27) ಬೆಳಿಗ್ಗೆ ಮರಣೋತ್ತರ ಪರೀಕ್ಷೆ ಮಾಡಿ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಇದನ್ನೂ ನೋಡಿ: ಅಮ್ಮನ ಲವ್‌ ಮಾಡ್ತಿದ್ದ ವ್ಯಕ್ತಿಯ ಪತ್ನಿ, ತಮ್ಮನನ್ನ ಕೊಂದ ಬಾಲಕ!

ತಮ್ಮ ಮಕ್ಕಳ ಸಾವಿಗೆ ಪತ್ನಿ ರಾಜಶ್ರೀಯೇ ಕಾರಣವೆಂದು ಪತಿ ಶಂಕ್ರಪ್ಪ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ರಾಜಶ್ರೀಯ ತವರು ಮನೆಯವರು ಸಹ ಇದು ಆತ್ಮಹತ್ಯೆ ಪ್ರಕರಣವೆಂದು ದೂರು ನೀಡಿದ್ದಾರೆ. ಮೇಲ್ನೋಟಕ್ಕೆ ಆಸ್ತಿ ವಿಚಾರವೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂಬ ಚರ್ಚೆ ಗ್ರಾಮದಲ್ಲಿ ನಡೆದಿದೆಯಾರೂ ನಿಖರ ಕಾರಣ ತಿಳಿದುಬಂದಿಲ್ಲ. ಹೀಗಾಗಿ ಇಂಡಿ ಗ್ರಾಮೀಣ ಪೊಲೀಸರ ತನಿಖೆಯಿಂದ ಘಟನೆಗೆ ಅಸಲಿ ಕಾರಣ ತಿಳಿದು ಬರಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೋಲಾರದಲ್ಲಿ ಕಲಬೆರಕೆ ಹಾಲು: ವರದಿಯಲ್ಲಿ ಆಘಾತಕಾರಿ ಅಂಶ; ಬೆಚ್ಚಿಬಿದ್ದ ಜನ

ಕೋಲಾರ, ಮಾರ್ಚ್​ 27: ಕಲಬೆರಕೆ ಹಾಲಿನ (Fake Milk Production) ವಿರುದ್ಧ ಸಮರ ಸಾರಿದ್ದ ಜಿಲ್ಲಾಡಳಿತ ಹಲವು ಹಳ್ಳಿಗಳಲ್ಲಿ ದಾಳಿ ನಡೆಸಿ ಹಾಲು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಸದ್ಯ ವರದಿ ಜಿಲ್ಲಾಡಳಿತ ಕೈ ಸೇರಿದ್ದು, 18 ಕಡೆ ಸಂಗ್ರಹಿಸಿದ್ದ ಹಾಲು ಕಲಬೆರಕೆ ಎನ್ನುವ ಆಘಾತಕಾರಿ ವರದಿ ಬಹಿರಂಗವಾಗಿದೆ. ಸದ್ಯ ಈ ವಿಚಾರ ಕೋಲಾರ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

ರಾಜ್ಯದಲ್ಲಿ ಕ್ಷೀರಕಾಂತ್ರಿ ಮೂಲಕ ಬಯಲು ಸೀಮೆಯಲ್ಲಿ ಹಾಲಿನ ಹೊಳೆ ಹರಿಸಿದ ಕೀರ್ತಿ ಕೋಲಾರ ಜಿಲ್ಲೆಯ ಹಾಲು ಉತ್ಪಾದಕರಿಗೆ ಸಲ್ಲುತ್ತದೆ. ಉಪ ಕಸುಬಾಗಿದ್ದ ಹೈನುಗಾರಿಕೆಯನ್ನು ಹೈನೋದ್ಯಮವನ್ನಾಗಿ ಪರಿವರ್ತಿಸುವ ಮೂಲಕ ಜಿಲ್ಲೆಯಲ್ಲಿ ಹಾಲು ಉದ್ಯಮವನ್ನಾಗಿ ಮಾಡಿದ ಕೀರ್ತಿ ಸಹ ಕೋಲಾರ ಜಿಲ್ಲೆಯ ಗೋಪಾಲಕರಿಗೆ ಸಲ್ಲುತ್ತದೆ. ಇಂಥ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಹಾಲಿಗೆ ವಿಷ ಬೆರೆಸುವ ಕಲಬೆರಕೆ ಪ್ರಕರಣಗಳು ಕೇಳಿ ಬಂದ ಹಿನ್ನೆಲೆ ಫೆಬ್ರವರಿ 5 ರಂದು ಕೋಲಾರ ಜಿಲ್ಲಾಡಳಿತ ಕಲಬೆರಕೆ ಹಾಲಿನ ವಿರುದ್ದ ಸಮರ ಸಾರಿತ್ತು.

ಇದನ್ನೂ ಓದಿ: ಕೋಲಾರದಲ್ಲಿ ಹಾಲು ಕಲಬೆರೆಕೆ ಅಡ್ಡೆಗಳ ಮೇಲೆ ದಾಳಿ: 8 ಜನರ ಬಂಧನ

ಜಿಲ್ಲೆಯಲ್ಲಿ ಕಲಬೆರಕೆ ಹಾಲು ತಯಾರು ಮಾಡುತ್ತಿದ್ದವರ ಮೇಲೆ ದಾಳಿ ಮಾಡಿ ಸುಮಾರು 48 ಕಡೆಗಳಲ್ಲಿ ಕಲಬೆರಕೆ ಹಾಲಿನ ಮಾದರಿಯನ್ನು ಸಂಗ್ರಹಿಸಿದ್ದರು. ಹೀಗೆ ಸಂಗ್ರಹಿಸಿದ್ದ ಹಾಲಿನ ಮಾದರಿಗಳನ್ನು ಸರ್ಕಾರದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಪ್ರಯೋಗಾಲಯ ವರದಿ ಬಂದಿದ್ದು, ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಮಕ್ಕಳು, ವೃದ್ದರು, ಮಹಿಳೆಯರು, ರೋಗಿಗಳು ಹೀಗೆ ಎಲ್ಲರೂ ಕುಡಿಯುವ ಹಾಲಿನಲ್ಲಿ ಕಲಬೆರಕೆ ವಿಷಕಾರಿ ಅಂಶ ಇರುವುದು ಖಚಿವಾಗಿದೆ. 48 ಹಾಲಿನ ಮಾದರಿಗಳ ಪೈಕಿ ಸುಮಾರು 18 ಮಾದರಿಗಳು ಕಳಪೆ ಹಾಗೂ ಕಲಬೆರಕೆ ಹಾಲು ಅನ್ನೋದು ತಿಳಿದು ಬಂದಿದೆ.

ಪ್ರಕರಣ ದಾಖಲು

ಸದ್ಯ ಈ ನಿಟ್ಟಿನಲ್ಲಿ ಕೋಲಾರ ಜಿಲ್ಲಾಡಳಿತ ಕಲಬೆರಕೆ ಹಾಲು ತಯಾರು ಮಾಡುತ್ತಿದ್ದ, ಹಾಲು ಸಂಗ್ರಹ ಕೇಂದ್ರಗಳ ಮೇಲೆ FSSAI act 51 ಅಡಿಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದೆ. ಅಲ್ಲದೆ ಅನುಮತಿ ಪಡೆಯದ ಖಾಸಗಿ ಹಾಲು ಸಂಗ್ರಹ  ಕೇಂದ್ರಗಳನ್ನು ಮುಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದಾಗಿದೆ.

ಇನ್ನು ಕೋಲಾರ ಜಿಲ್ಲೆಯ ಗಡಿಗೆ ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳು ಹೊಂದಿಕೊಂಡಿವೆ. ಈ ಕಾರಣದಿಂದ ಆಂಧ್ರ ಮತ್ತು ತಮಿಳುನಾಡಿನ ಖಾಸಗಿ ಡೈರಿಗಳಾದ ಕಾಂತರಾಜ ಸರ್ಕಲ್​ನಲ್ಲಿರುವ ತಿರುಮಲ ಡೈರಿ, ಲಿಂಗಾಪುರದ ಸಂತೃಷ್ಠಿ ಡೈರಿ, ತಲಗುಂದ ಕ್ರಾಸ್​ನಲ್ಲಿನ ಹಟ್ ಸನ್ ಡೈರಿ, ಪೀಲವಾರ ಗ್ರಾಮದ ಬಳಿಯ ದೊಡ್ಲ ಡೈರಿ, ತಿಮ್ಮರಾವುತ್ತನಹಳ್ಳಿ ಗ್ರಾಮದ ಬಳಿಯ ಅಮುಲ್ ಡೈರಿ, ಕೊಂಡಿಹಳ್ಳಿ ಬಳಿಯ ಶ್ರೀಜ ಡೈರಿ, ಗುಮ್ಮಕಲ್​ ಗ್ರಾಮದ ಪರಾಗ್ ಮಿಲ್ಕ್ ಡೈರಿಗಳಲ್ಲಿ ಸಂಗ್ರಹಿಸಿದ್ದ ಹಾಲಿನಲ್ಲಿ ಕಲಬೆರಕೆ ಹಾಗೂ ಕಳಪೆ ಗುಣಮಟ್ಟ ಇರುವುದು ಕಂಡು ಬಂದಿದೆ.

ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳಿದ್ದಿಷ್ಟು 

ಸದ್ಯ ಈ ಎಲ್ಲಾ ಖಾಸಗಿ ಡೈರಿಗಳ ಮೇಲೆ ಪ್ರಕರಣ ದಾಖಲು ಮಾಡಿ ಕ್ರಮಕೈಗೊಳ್ಳಲು ತೀರ್ಮಾನಿಸಲಾಗಿದೆ. ಅಲ್ಲದೆ ಜಿಲ್ಲೆಯ ಸುಮಾರು 29 ಶುದ್ಧ ಕುಡಿಯುವ ನೀರಿನ ಘಟಕಗಳು ಕೂಡ ಅಕ್ರಮವಾಗಿದ್ದು, ಅವುಗಳನ್ನು ಅಮಾನತಿನಲ್ಲಿಡಲು ಜಿಲ್ಲಾಡಳಿತ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಇನ್ನು ಈ ಸಂಬಂಧ ಕೋಲಾರ ಹಾಲು ಒಕ್ಕೂಟ ಜಿಲ್ಲಾಡಳಿತ ಕ್ರಮವನ್ನು ಸ್ವಾಗತಿಸಿದ್ದು ಇನ್ನು ಮುಂದೆ ಕೋಲಾರ ಹಾಲು ಒಕ್ಕೂಟದಿಂದಲೂ ಪ್ರತ್ಯೇಕ ತಂಡ ಮಾಡಿ ಕಲಬೆರಕೆ ಹಾಲು ಪತ್ತೆ ಹಚ್ಚಲು ನಿರ್ಧಾರ ಮಾಡಲಾಗಿದೆ ಎನ್ನುವುದು ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡರ ಮಾತು.

ಇದನ್ನೂ ಓದಿ: ನಂದಿನಿ ಸೇರಿ ಹಲವು ಕಂಪನಿಗಳ ನಕಲಿ ಹಾಲು ತಯಾರಿಕಾ ಜಾಲ ಪತ್ತೆ

ಒಟ್ಟಾರೆ ಕೋಲಾರ ಜಿಲ್ಲೆಯಲ್ಲಿ ನೀರು ಇಲ್ಲದಿದ್ದರೂ ಸಹ ಹಾಲಿನ ಹೊಳೆ ಹರಿಯುತ್ತಿತ್ತು. ಸದ್ಯ ಹಾಲಿನಲ್ಲೂ ಕಲಬೆರೆಕೆ ಮಾಡಿ ಜಿಲ್ಲೆಯ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡಲು ಮುಂದಾಗಿದ್ದ ಕಲಬೆರೆಕೆ ಹಾಲು ತಯಾರಿಕಾ ಅಡ್ಡೆಗಳ ಹೆಡಮುರಿ ಕಟ್ಟಿದ್ದು ಮುಂದೆ ಅವುಗಳನ್ನು ಶಾಶ್ವತವಾಗಿ ಜಿಲ್ಲೆಯಿಂದ ಹೊರಹಾಕುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದಾವಣಗೆರೆ ದಕ್ಷಿಣ ಬೈಎಲೆಕ್ಷನ್​​: ಸಾದಿಕ್ ಪೈಲ್ವಾನ್ ಮನವೊಲಿಸಿದರೂ ಕಾಂಗ್ರೆಸ್​​ಗೆ ತಪ್ಪಲ್ವಾ ಬಂಡಾಯದ ಬಿಸಿ?

ದಾವಣಗೆರೆ, ಮಾರ್ಚ್​​ 27: ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಮುಸ್ಲಿಂ ಸಮುದಾಯಕ್ಕೆ ಸಿಗದೇ ಇರುವುದು ಆ ಸಮಾಜದ ಕಾರ್ಯಕರ್ತರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಕಣಕ್ಕೆ ಇಳಿಯೋದಾಗಿ ಈ ಹಿಂದೆ ಸಾದಿಕ್ ಪೈಲ್ವಾನ್ ಘೋಷಿಸಿದ್ದ ಕಾರಣ ಅವರಿಗೆ ಸಮುದಾಯದ ಬೆಂಬಲ ವ್ಯಕ್ತವಾಗಿತ್ತು. ಆದರೀಗ ಅವರು ಆ ನಿರ್ಧಾರದಿಂದ ಹಿಂದೆ ಸರಿಯುತ್ತಿರುವ ಕಾರಣ, ಅವರಿಗೆ ಬೆಂಬಲ ಘೋಷಿಸಿದ್ದ ನಾಯಕರು ಯಾವುದೇ ಕಾರಣಕ್ಕೂ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಲ್ಲ ಎಂದು ಹೇಳುತ್ತಿರೋದು ಕಾಂಗ್ರೆಸ್​​ಗೆ ಹೊಸ ತಲೆನೋವಾಗುವ ಸಾಧ್ಯತೆ ಇದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Vasthu Tips: ಪೂಜಾ ಕೋಣೆಯಲ್ಲಿ ತಪ್ಪಿಯೂ ಈ ಒಂದು ವಸ್ತು ಇಡಲೇಬೇಡಿ; ಅಪಾಯ ತಪ್ಪಿದ್ದಲ್ಲ!

ಹಿಂದೂ ಸಂಪ್ರದಾಯದಲ್ಲಿ ಮನೆಯ ಪೂಜಾ ಕೋಣೆಯನ್ನು ಅತ್ಯಂತ ಪವಿತ್ರ ಮತ್ತು ಆಧ್ಯಾತ್ಮಿಕ ಶಕ್ತಿಯ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಇದು ಕೇವಲ ಪ್ರಾರ್ಥನೆ ಮಾಡುವ ಸ್ಥಳವಲ್ಲ, ಬದಲಾಗಿ ಮನೆಯ ಸಕಾರಾತ್ಮಕ ಶಕ್ತಿಯ ಮೂಲವಾಗಿದೆ. ಈ ಕಾರಣಕ್ಕಾಗಿಯೇ ಅನೇಕರು ಪೂಜಾ ಕೋಣೆಯ ವಿನ್ಯಾಸ ಮತ್ತು ಅಲ್ಲಿನ ವಸ್ತುಗಳ ಜೋಡಣೆಯಲ್ಲಿ ವಾಸ್ತು ಶಾಸ್ತ್ರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಆದರೆ, ನಾವು ದೈನಂದಿನ ಪೂಜೆಯಲ್ಲಿ ಮಾಡುವ ಒಂದು ಸಣ್ಣ ತಪ್ಪು ಮನೆಯ ವಾಸ್ತು ಸಮತೋಲನವನ್ನೇ ಏರುಪೇರು ಮಾಡಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.

ಬೆಂಕಿಕಡ್ಡಿ ಪೆಟ್ಟಿಗೆ ಮತ್ತು ವಾಸ್ತು ದೋಷ:

ದೀಪ ಮತ್ತು ಧೂಪದ್ರವ್ಯಗಳನ್ನು ಹಚ್ಚಲು ಬೆಂಕಿಕಡ್ಡಿಗಳು ಅತ್ಯಗತ್ಯ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಪೂಜಾ ಕೋಣೆಯಲ್ಲಿ ಬೆಂಕಿಕಡ್ಡಿ ಪೆಟ್ಟಿಗೆಯನ್ನು ಇಡುವುದು ಶುಭವಲ್ಲ. ಬೆಂಕಿಕಡ್ಡಿಗಳು ‘ದಹನ’ ಅಥವಾ ಸುಡುವಿಕೆಯನ್ನು ಸಂಕೇತಿಸುತ್ತವೆ, ಆದರೆ ಪೂಜಾ ಕೋಣೆಯು ಶಾಂತಿ ಮತ್ತು ಶುದ್ಧತೆಯ ಸಂಕೇತವಾಗಿದೆ. ಇಂತಹ ಪವಿತ್ರ ಸ್ಥಳದಲ್ಲಿ ಸುಡುವ ವಸ್ತುಗಳನ್ನು ಇಡುವುದರಿಂದ ‘ವಾಸ್ತು ದೋಷ’ ಉಂಟಾಗುತ್ತದೆ ಎಂಬ ನಂಬಿಕೆಯಿದೆ. ಇದು ಮನೆಯಲ್ಲಿರುವ ಸಕಾರಾತ್ಮಕ ಶಕ್ತಿಯನ್ನು ಕುಂದಿಸಿ, ಪೂಜೆಯ ಪೂರ್ಣ ಫಲ ಸಿಗದಂತೆ ಮಾಡಬಹುದು ಎಂದು ಜ್ಯೋತಿಷ್ಯ ಶಾಸ್ತ್ರದ ತಜ್ಞರು ಎಚ್ಚರಿಸುತ್ತಾರೆ.

ಆಧ್ಯಾತ್ಮಿಕ ಸಮತೋಲನ ಮತ್ತು ಅದರ ಪರಿಣಾಮಗಳು:

ಪೂಜಾ ಕೋಣೆಯಲ್ಲಿ ಅಗ್ನಿ ಅಂಶ (ಬೆಂಕಿಕಡ್ಡಿ) ಮತ್ತು ದೈವಿಕ ಅಂಶಗಳು ಮುಖಾಮುಖಿಯಾದಾಗ ಆಧ್ಯಾತ್ಮಿಕ ಸಮತೋಲನಕ್ಕೆ ಧಕ್ಕೆಯುಂಟಾಗುತ್ತದೆ. ಈ ಎರಡು ವಿರುದ್ಧ ಶಕ್ತಿಗಳ ಸಂಘರ್ಷದಿಂದ ಮನೆಯಲ್ಲಿ ಆರ್ಥಿಕ ಮುಗ್ಗಟ್ಟು, ಮಾನಸಿಕ ಅಶಾಂತಿ ಅಥವಾ ಅನಗತ್ಯ ಆತಂಕಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಪೂಜಾ ಕೋಣೆಯಷ್ಟೇ ಅಲ್ಲದೆ, ಮಲಗುವ ಕೋಣೆಯಲ್ಲಿಯೂ ಉರಿಯುವ ವಸ್ತುಗಳನ್ನು ಇಡುವುದು ವಾಸ್ತು ಪ್ರಕಾರ ನಿಷಿದ್ಧ. ಇದು ದಂಪತಿಗಳ ನಡುವೆ ಘರ್ಷಣೆಗೆ ಕಾರಣವಾಗಬಹುದು ಮತ್ತು ಮನೆಯಲ್ಲಿ ನಕಾರಾತ್ಮಕ ಕಂಪನಗಳನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಪರಿಹಾರೋಪಾಯಗಳು ಮತ್ತು ಮುನ್ನೆಚ್ಚರಿಕೆ:

ಇಂತಹ ವಾಸ್ತು ದೋಷಗಳನ್ನು ತಡೆಯಲು ಕೆಲವು ಸರಳ ಕ್ರಮಗಳನ್ನು ಅನುಸರಿಸಬಹುದು. ಬೆಂಕಿಕಡ್ಡಿಗಳನ್ನು ಪೂಜಾ ಕೋಣೆಯ ಹೊರಗೆ ಅಥವಾ ಕಣ್ಣಿಗೆ ಕಾಣದಂತೆ ಮುಚ್ಚಿದ ಡ್ರಾಯರ್ ಅಥವಾ ಕಪಾಟಿನಲ್ಲಿ ಇಡುವುದು ಸೂಕ್ತ. ಒಂದು ವೇಳೆ ಪೂಜಾ ಕೋಣೆಯಲ್ಲೇ ಇಡುವುದು ಅನಿವಾರ್ಯವಾದರೆ, ಅದನ್ನು ಒಂದು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ಇಡುವುದರಿಂದ ಅದರ ನಕಾರಾತ್ಮಕ ಪರಿಣಾಮವನ್ನು ಕಡಿಮೆ ಮಾಡಬಹುದು ಎಂದು ಸೂಚಿಸಲಾಗಿದೆ. ಪೂಜಾ ಸ್ಥಳವನ್ನು ಯಾವಾಗಲೂ ಅಚ್ಚುಕಟ್ಟಾಗಿ ಮತ್ತು ಶಿಸ್ತಿನಿಂದ ಇಟ್ಟುಕೊಳ್ಳುವುದು ಮನೆಯ ಅಭಿವೃದ್ಧಿಗೆ ಪೂರಕವಾಗಿರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಏಪ್ರಿಲ್​​​ನಲ್ಲಿ ಈ ರಾಶಿಯವರ ಆಹಾರ ವಿಷವಾಗಬಹುದು, ಆರೋಗ್ಯದಲ್ಲಿ ಎಚ್ಚರ ಇರಲಿ

ಏಪ್ರಿಲ್ 2026 ರಲ್ಲಿ ಮೇಷ ರಾಶಿಯಲ್ಲಿ ಉಚ್ಚನಾದ ಸೂರ್ಯ, ಬುಧ, ಸ್ವಸ್ಥಾನವಾದ ವೃಷಭದಲ್ಲಿ ಶುಕ್ರ, ಮಿತ್ರನ‌ ಸ್ಥಾನವಾದ ಮೀನದಲ್ಲಿ ಕುಜ ಈ ಮೂರೂ ಗ್ರಹರೂ ಉತ್ತಮಸ್ಥಾನದಲ್ಲಿಯೇ ಇರುವರು. ಹಾಗಾಗಿ ಶುಭ ಫಲವನ್ನು ಪಡೆಯುವ ಅವಕಾಶ ಈ ತಿಂಗಳು ಅಧಿಕವಾಗಿದೆ. ಅವಕಾಶಗಳನ್ನು ವಂಚಿಸಿಕೊಂಡು ದುಃಖಿಸುವ ಕಾರ್ಯ ಬೇಡ.

ಮೇಷ:

ಈ ತಿಂಗಳು ನಿಮಗೆ ಮಿಶ್ರಫಲ ನೀಡಲಿದೆ. ರಾಶಿಯಲ್ಲಿ ರವಿಯ ಸಂಚಾರವಿರುವುದರಿಂದ ಕಾರ್ಯಕ್ಷೇತ್ರದಲ್ಲಿ ಅಧಿಕಾರ ಮತ್ತು ಗೌರವ ಹೆಚ್ಚಾಗಲಿದೆ. ಆದರೆ, ಕುಜನ ಪ್ರಭಾವದಿಂದ ಕೋಪದ ಮೇಲೆ ನಿಯಂತ್ರಣವಿರಲಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಕುಟುಂಬದಲ್ಲಿ ಸೌಹಾರ್ದತೆ ಕಾಪಾಡಿಕೊಳ್ಳಿ.

​ವೃಷಭ:

ಆರ್ಥಿಕವಾಗಿ ಈ ತಿಂಗಳು ಉತ್ತಮ ಪ್ರಗತಿ ಕಾಣುವಿರಿ. ಸ್ಥಿರ ಆಸ್ತಿಯಲ್ಲಿ ಹೂಡಿಕೆ ಮಾಡಲು ಸಕಾಲ. ಶುಕ್ರನ ಶುಭ ದೃಷ್ಟಿಯಿಂದ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ದೂರದ ಪ್ರಯಾಣದ ಸಾಧ್ಯತೆಗಳಿವೆ. ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ಹೊಸ ಉದ್ಯೋಗದ ಅವಕಾಶಗಳು ಹುಡುಕಿಕೊಂಡು ಬರುವ ಸಾಧ್ಯತೆಯಿದೆ.

​ಮಿಥುನ:

ಬುಧನ ಸಂಚಾರವು ನಿಮ್ಮ ಸಂವಹನ ಕಲೆಗೆ ಬಲ ನೀಡಲಿದೆ. ವೃತ್ತಿಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಾಗಲಿದೆ. ಪ್ರೇಮ ಜೀವನದಲ್ಲಿ ಕೆಲವು ಗೊಂದಲಗಳು ಉಂಟಾಗಬಹುದು, ತಾಳ್ಮೆಯಿಂದ ವರ್ತಿಸಿ. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಂಭವವಿದೆ.

​ಕರ್ಕಟಕ:

ವೃತ್ತಿರಂಗದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಮಾನಸಿಕವಾಗಿ ಸ್ವಲ್ಪ ಒತ್ತಡ ಅನುಭವಿಸಿದರೂ, ಕಾರ್ಯಜಯ ಲಭಿಸಲಿದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆಯಿದೆ. ಶಿವನ ಆರಾಧನೆಯು ನಿಮಗೆ ಹೆಚ್ಚಿನ ಶಾಂತಿ ನೀಡಲಿದೆ. ಮಕ್ಕಳ ಪ್ರಗತಿಯು ಮನಸ್ಸಿಗೆ ಸಂತೋಷ ತರಲಿದೆ.

​ಸಿಂಹ:

ಭಾಗ್ಯಸ್ಥಾನದಲ್ಲಿ ರವಿಯ ಸಂಚಾರವಿರುವುದರಿಂದ ಅದೃಷ್ಟ ನಿಮ್ಮ ಕಡೆ ಇರಲಿದೆ. ಸ್ಥಗಿತಗೊಂಡ ಕೆಲಸಗಳು ಪುನರಾರಂಭಗೊಳ್ಳಲಿವೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ತಂದೆಯ ಕಡೆಯಿಂದ ಆಸ್ತಿ ಅಥವಾ ಸಹಾಯ ದೊರೆಯಬಹುದು. ಉದ್ಯೋಗದಲ್ಲಿ ಬಡ್ತಿಯ ಯೋಗವಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.

​ಕನ್ಯಾ:

ಈ ತಿಂಗಳು ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾದ ಸಮಯ. ಆರೋಗ್ಯದಲ್ಲಿ ಏರುಪೇರಾಗಬಹುದು, ಆಹಾರ ಕ್ರಮದ ಬಗ್ಗೆ ಗಮನವಿರಲಿ. ಕೆಲಸದಲ್ಲಿ ಅಡೆತಡೆಗಳು ಎದುರಾಗಬಹುದು, ಆದರೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಸಾಲ ನೀಡುವ ಮುನ್ನ ಯೋಚಿಸಿ. ಸಂಗಾತಿಯ ಬೆಂಬಲ ನಿಮಗೆ ದೊಡ್ಡ ಶಕ್ತಿಯಾಗಲಿದೆ.

​ತುಲಾ:

ವೈವಾಹಿಕ ಜೀವನದಲ್ಲಿ ಮತ್ತು ಪಾಲುದಾರಿಕೆ ವ್ಯವಹಾರದಲ್ಲಿ ಸುಧಾರಣೆ ಕಂಡುಬರಲಿದೆ. ಶುಕ್ರನ ಅನುಗ್ರಹದಿಂದ ಭೋಗ ಜೀವನದತ್ತ ಆಸಕ್ತಿ ಹೆಚ್ಚಾಗಲಿದೆ. ಹೊಸ ಪರಿಚಯಗಳು ವ್ಯವಹಾರದಲ್ಲಿ ಲಾಭ ತರಲಿವೆ. ಹಣಕಾಸಿನ ಹರಿವು ಸಾಧಾರಣವಾಗಿರಲಿದೆ. ಕಾನೂನು ವಿಚಾರಗಳಲ್ಲಿ ಜಯ ಸಿಗುವ ಸಾಧ್ಯತೆಯಿದೆ.

​ವೃಶ್ಚಿಕ:

ಶತ್ರುಗಳ ಮೇಲೆ ವಿಜಯ ಸಾಧಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಉತ್ತಮ ಫಲಿತಾಂಶ ಸಿಗಲಿದೆ. ಆರೋಗ್ಯದ ಸಮಸ್ಯೆಗಳು ಹತೋಟಿಗೆ ಬರಲಿವೆ. ಕೆಲಸದ ಸ್ಥಳದಲ್ಲಿ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಲಿವೆ. ಸಾಲದ ಹೊರೆ ಇಳಿಸಲು ಇದು ಸೂಕ್ತ ಸಮಯ. ಮಾತು ಮಿತವಾಗಿರಲಿ.

​ಧನು:

ಸಂತಾನ ಭಾಗ್ಯದ ನಿರೀಕ್ಷೆಯಲ್ಲಿರುವವರಿಗೆ ಶುಭ ವಾರ್ತೆ ಸಿಗಲಿದೆ. ಸೃಜನಾತ್ಮಕ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಹಳೆಯ ಹೂಡಿಕೆಗಳಿಂದ ಲಾಭ ಸಿಗುವ ಸಾಧ್ಯತೆಯಿದೆ. ಧಾರ್ಮಿಕ ಪ್ರವಾಸ ಮಾಡುವ ಯೋಗವಿದೆ. ಗುರು ಬಲವಿರುವುದರಿಂದ ಕಠಿಣ ಕೆಲಸಗಳೂ ಸುಲಭವಾಗಿ ಪೂರ್ಣಗೊಳ್ಳಲಿವೆ.

​ಮಕರ:

ಶನಿ ಮತ್ತು ಕುಜನ ಪ್ರಭಾವದಿಂದ ಸ್ವಲ್ಪ ಅಸ್ಥಿರತೆ ಇರಬಹುದು. ಮನೆಯಲ್ಲಿ ಸಣ್ಣಪುಟ್ಟ ಕಲಹಗಳು ಉಂಟಾಗಬಹುದು, ಶಾಂತಿಯಿಂದಿರಿ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವಾಹನ ಚಾಲನೆಯಲ್ಲಿ ಜಾಗರೂಕತೆ ಇರಲಿ. ಜಮೀನು ಅಥವಾ ಮನೆ ಖರೀದಿಯ ವಿಚಾರದಲ್ಲಿ ಪ್ರಗತಿ ಕಂಡುಬರಲಿದೆ.

​ಕುಂಭ:

ನಿಮ್ಮ ಪರಾಕ್ರಮ ಮತ್ತು ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಹೋದರ ಸಹೋದರಿಯರಿಂದ ಬೆಂಬಲ ದೊರೆಯಲಿದೆ. ಚಿಕ್ಕ ಪ್ರವಾಸಗಳು ಲಾಭದಾಯಕವಾಗಿರಲಿವೆ. ಉದ್ಯೋಗದಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರುವಿರಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಹತ್ತಿರದ ಸಂಬಂಧಿಗಳೊಂದಿಗೆ ಸಂಬಂಧ ವೃದ್ಧಿಯಾಗಲಿದೆ.

​ಮೀನ:

ಧನ ದಾಯದಲ್ಲಿ ಹೆಚ್ಚಳ ಕಂಡುಬರಲಿದೆ. ಕುಟುಂಬದವರೊಂದಿಗೆ ಸಮಯ ಕಳೆಯಲು ಅವಕಾಶ ಸಿಗಲಿದೆ. ಮಾತಿನ ಪ್ರಭಾವದಿಂದ ಕಠಿಣ ಕೆಲಸಗಳನ್ನು ಸಾಧಿಸುವಿರಿ. ಉಳಿತಾಯದ ಕಡೆ ಗಮನ ನೀಡುವುದು ಉತ್ತಮ. ಕಣ್ಣಿನ ಅಥವಾ ಹಲ್ಲಿನ ಸಮಸ್ಯೆ ಕಾಣಿಸಿಕೊಳ್ಳಬಹುದು. ಸಾತ್ವಿಕ ಆಹಾರ ಸೇವನೆಗೆ ಒತ್ತು ನೀಡಿ.

– ಲೋಹಿತ ಹೆಬ್ಬಾರ್

Source link

SSLC ಹಿಂದಿ ಪರೀಕ್ಷೆ ಕೇಂದ್ರಗಳಿಗೆ ಕನ್ನಡ ಸಂಘಟನೆಗಳಿಂದ ಮುತ್ತಿಗೆ ಎಚ್ಚರಿಕೆ: ಪೊಲೀಸ್ ಮೊರೆ ಹೋದ ಶಿಕ್ಷಣ ಇಲಾಖೆ

ಬೆಂಗಳೂರು, ಮಾರ್ಚ್ 27: ಕರ್ನಾಟಕದಲ್ಲಿ ಮಾರ್ಚ್ 30ರಂದು ನಡೆಯಬೇಕಿದ್ದ ಎಸ್​​ಎಸ್​ಎಲ್​ಸಿ (SSLC) ತೃತೀಯ ಭಾಷೆ ಹಿಂದಿ ಪರೀಕ್ಷೆಯನ್ನು ಮಾರ್ಚ್​​ 31ಕ್ಕೆ ಮುಂದೂಡಲಾಗಿದೆ. ಮಹಾವೀರ ಜಯಂತಿ ಹಿನ್ನೆಲೆ ಪರೀಕ್ಷಾ ದಿನಾಂಕದಲ್ಲಿ ಬದಲಾವಣೆ ಮಾಡಿ ಶಿಕ್ಷಣ ಇಲಾಖೆ ನಿನ್ನೆ ಆದೇಶಿಸಿದೆ. ಇನ್ನೊಂದೆಡೆ ಹಿಂದಿ ಪರೀಕ್ಷಾ ವಿಚಾರವಾಗಿ ಕನ್ನಡ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ವಿದ್ಯಾರ್ಥಿಗಳು ಹಿಂದಿ ಪರೀಕ್ಷೆ ಬರೆಯದೇ ಇದ್ದರೂ ಪಾಸ್ ಮಾಡಬೇಕು ಎಂಬ ಬೇಡಿಕೆ ಮುಂದಿಟ್ಟಿವೆ. ಒಂದು ವೇಳೆ ಹಿಂದಿ ಪರೀಕ್ಷೆ ನಡೆಸಿದರೆ ಕೇಂದ್ರಗಳಿಗೆ ಮುತ್ತಿಗೆ ಹಾಕುವುದಾಗಿದೆ ಎಚ್ಚರಿಕೆ ನೀಡಲಾಗಿದೆ.

ಮಹಾವೀರ ಜಯಂತಿಯ ಪ್ರಯುಕ್ತ, ಮಾರ್ಚ್ 30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆಯನ್ನು ಮಾರ್ಚ್ 31ಕ್ಕೆ ಮುಂದೂಡಲಾಗಿದೆ. ಆದರೆ ಈ ಮಧ್ಯೆ ತ್ರಿಭಾಷಾ ಸೂತ್ರವನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸಿದ್ದು, ಜೊತೆಗೆ ಹಿಂದಿ ಪರೀಕ್ಷೆ ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ. ಸದ್ಯ ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: SSLC ಒಟ್ಟು ಮಾರ್ಕ್ಸ್​​ 625ದಿಂದ 525ಕ್ಕೆ ಇಳಿಕೆ: ಹಿಂದಿ ಅಂಕಕ್ಕೆ ಕೋಕ್

ಇನ್ನು ಈ ವಿಚಾರವಾಗಿ ಸಾರಾ ಗೋವಿಂದು, ಶಿವರಾಮೇಗೌಡ, ಮಂಜು ಸೇರಿ ಕನ್ನಡ ಸಂಘಟನೆಗಳ ಒಕ್ಕೂಟದಿಂದ ಸಚಿವ ಮಧು ಬಂಗಾರಪ್ಪರನ್ನು ಭೇಟಿ ಮಾಡಲಾಗಿದ್ದು, ಹಿಂದಿ ಪರೀಕ್ಷೆ ಬರೆಯದಿದ್ದರೂ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು. ಪಾಸ್ ವಿತೌಟ್ ಹಿಂದಿ ಎಂಬ ನಿಯಮ‌ ಜಾರಿ ಮಾಡಿ. ಹಿಂದಿ ಪರೀಕ್ಷೆ ರದ್ದು ಮಾಡಿ, ಹಿಂದಿ ಹೇರಿಕೆ ಮಾಡಬೇಡಿ. ಹಿಂದಿ ಪರೀಕ್ಷೆ ನಡೆಸಿದರೆ ಕೇಂದ್ರಗಳಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕನ್ನಡ ಸಂಘಟನೆಗಳ ಎಚ್ಚರಿಕೆ ಬೆನ್ನಲ್ಲೇ ಶಿಕ್ಷಣ ಇಲಾಖೆ ಅಲರ್ಟ್

ಕನ್ನಡ ಸಂಘಟನೆಗಳ ಎಚ್ಚರಿಕೆ ಹಿನ್ನೆಲೆ ಶಿಕ್ಷಣ ಇಲಾಖೆ ಅಲರ್ಟ್ ಆಗಿದ್ದು, ಪರೀಕ್ಷೆ ದಿನ ಪೊಲೀಸ್ ಭದ್ರತೆ ಪಡೆಯಲು ಮುಂದಾಗಿದೆ. ಪರೀಕ್ಷೆ ಸಮಯದಲ್ಲಿ ತೊಂದರೆಯಾಗದಂತೆ ಭದ್ರತೆ ಒದಗಿಸುವಂತೆ ಕರ್ನಾಟಕ ಶಾಲಾ‌ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಪೊಲೀಸ್ ಭದ್ರತೆಗೆ ಮನವಿ ಮಾಡಲಾಗಿದೆ.

ಸಾರಾ ಗೋವಿಂದು ಹೇಳಿದ್ದಿಷ್ಟು 

ಕನ್ನಡಪರ ಹೋರಾಟಗಾರ ಸಾರಾ ಗೋವಿಂದು ಮಾತನಾಡಿದ್ದು, ಸಿಎಂ, ಡಿಸಿಎಂ ಮತ್ತು ಶಿಕ್ಷಣ ಸಚಿವರಿಗೆ ಮೊದಲು ಧನ್ಯವಾದಗಳನ್ನು ತಿಳಿಸುತ್ತೇವೆ. ಹಲವು ವರ್ಷದಿಂದ ನಾವು ಹಿಂದಿ ಹೇರಿಕೆ ಖಂಡಿಸಿ ಹೋರಾಟ ಮಾಡುತ್ತಿದ್ದೇವೆ. ಕಳೆದ ವರ್ಷ ಒಂದೂವರೆ ಲಕ್ಷ ವಿದ್ಯಾರ್ಥಿಗಳು ಹಿಂದಿಯಲ್ಲಿ ಫೇಲ್ ಆಗಿದ್ದಾರೆ. ಅದಕ್ಕೂ ಮುಂಚೆಯೇ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಿಂದಿಯಲ್ಲಿ ಫೇಲ್ ಆಗಿದ್ದರು. ಇದೇ ವಿಚಾರವನ್ನಿಟ್ಟು ಸಿಎಂಗೂ ಮನವಿ ಮಾಡಲಾಗಿತ್ತು. ಸಿಎಂ ಸಿದ್ದರಾಮಯ್ಯ ಸಹ ದ್ವಿಭಾಷಾ ನೀತಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇಂದು ಅದು ನೆರವೇರಿದೆ ಎಂದರು.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮದುವೆಯಾದ ಪುರುಷ ಲಿವ್-ಇನ್ ಸಂಬಂಧ ಇಟ್ಟುಕೊಳ್ಳುವುದು ಅಪರಾಧವಲ್ಲ; ಹೈಕೋರ್ಟ್ ತೀರ್ಪು

ಅಲಹಾಬಾದ್, ಮಾರ್ಚ್ 27: ವಿವಾಹಿತ ಪುರುಷ ಮಹಿಳೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿರುವುದು ಕಾನೂನಿನ ಅಡಿಯಲ್ಲಿ ಅಪರಾಧವಲ್ಲ ಎಂದು ಅಲಹಾಬಾದ್ ಹೈಕೋರ್ಟ್ (Allahabad High Court) ಹೇಳಿದೆ. ಆತನಿಗೆ ಮದುವೆಯಾಗಿದೆ ಎಂಬ ವಿಷಯ ತಿಳಿದಿದ್ದರೂ ಮಹಿಳೆ ಆತನೊಂದಿಗೆ ಲಿವ್-ಇನ್ ರಿಲೇಷನ್​ಶಿಪ್​ನಲ್ಲಿದ್ದರೆ ಅದು ತಪ್ಪಲ್ಲ ಎಂದು ಕೋರ್ಟ್ ಹೇಳಿದೆ. ಆ ಮಹಿಳೆಯ ಕುಟುಂಬದಿಂದಲೇ ಬೆದರಿಕೆ ಎದುರಿಸುತ್ತಿರುವ ಲಿವ್-ಇನ್ ದಂಪತಿಗೆ ರಕ್ಷಣೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಪ್ರಕರಣವನ್ನು ಆಲಿಸಿದ ನ್ಯಾಯಾಲಯ ವಿವಾಹಿತ ಪುರುಷನು ಪರಸ್ಪರ ಒಪ್ಪಿಗೆಯ ಮೂಲಕ ವಯಸ್ಕ ಮಹಿಳೆಯ ಜೊತೆ ಒಟ್ಟಿಗೆ ವಾಸಿಸುವುದು ಯಾವುದೇ ಅಪರಾಧವಲ್ಲ ಎಂದು ಹೇಳಿದೆ.

“ವಿವಾಹಿತ ಪುರುಷನು ಮಹಿಳೆಯ ಒಪ್ಪಿಗೆಯ ಮೂಲಕ ಲಿವ್-ಇನ್ ಸಂಬಂಧದಲ್ಲಿ ವಾಸಿಸುವುದು ಮೊಕದ್ದಮೆ ಹೂಡಬಹುದಾದ ಯಾವುದೇ ಅಪರಾಧವಲ್ಲ. ನೈತಿಕತೆ ಮತ್ತು ಕಾನೂನನ್ನು ದೂರವಿಡಬೇಕು. ಹಾಗಂತ ಕಾನೂನಿನಡಿ ಅದು ಅಪರಾಧವಲ್ಲ ಎಂಬ ಮಾತ್ರಕ್ಕೆ ಸಾಮಾಜಿಕವಾಗಿಯೂ ಅದು ಸರಿ ಎಂದು ಹೇಳಲಾಗದು” ಎಂದು ನ್ಯಾಯಪೀಠ ಹೇಳಿದೆ.

ಇದನ್ನೂ ಓದಿ: ನಾಲ್ಕನೇ ಪತ್ನಿಗೆ 30,000 ರೂ. ಜೀವನಾಂಶ ನೀಡುವಂತೆ ಎಸ್‌ಪಿ ಸಂಸದ ನದ್ವಿಗೆ ಅಲಹಾಬಾದ್ ಹೈಕೋರ್ಟ್ ಆದೇಶ

ನ್ಯಾಯಾಲಯವು ‘ನೈತಿಕತೆ’ ಮತ್ತು ಕಾನೂನನ್ನು ಬೇರ್ಪಡಿಸಿ ನೋಡಬೇಕೆಂದು ಹೇಳಿದೆ. ಲಿವ್-ಇನ್ ರಿಲೇಷನ್​​ಶಿಪ್​ನಲ್ಲಿರುವ ವಿವಾಹಿತ ವ್ಯಕ್ತಿ ಯಾವುದೇ ಅಪರಾಧವನ್ನು ಮಾಡಿಲ್ಲ. ವಯಸ್ಕ ಮಹಿಳೆಯೊಂದಿಗಿನ ಅವರ ಲಿವ್-ಇನ್ ಸಂಬಂಧವು ಸಮ್ಮತಿಯಂತೆ ಕಾಣುತ್ತದೆ ಎಂದು ಕೋರ್ಟ್ ಹೇಳಿದೆ.

ಹಾಗೇ, ನ್ಯಾಯಾಲಯವು ಪೊಲೀಸರಿಗೆ ಅರ್ಜಿದಾರ ದಂಪತಿಯನ್ನು ಬಂಧಿಸದಂತೆ ನಿರ್ದೇಶಿಸಿತು. ಮಹಿಳಾ ಅರ್ಜಿದಾರರ ಕುಟುಂಬದ ಎಲ್ಲಾ ಸದಸ್ಯರು ದಂಪತಿಗೆ ಯಾವುದೇ ಹಾನಿ ಮಾಡದಂತೆ ಸೂಚಿಸಿತು. ಹಾಗೇ, ಅವರಿಬ್ಬರ ಕುಟುಂಬದ ಸದಸ್ಯರು ಅವರಿಬ್ಬರೂ ವಾಸಿಸುವ ಮನೆಗೆ ಪ್ರವೇಶಿಸುವಂತಿಲ್ಲ ಅಥವಾ ಅವರನ್ನು ನೇರವಾಗಿ, ಮೊಬೈಲ್ ಮೂಲಕ ಅಥವಾ ಮೂರನೇ ವ್ಯಕ್ತಿಯ ಮೂಲಕ ಸಂಪರ್ಕಿಸಲು ಪ್ರಯತ್ನಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅರ್ಜಿದಾರರ ಸುರಕ್ಷತೆ ಮತ್ತು ಭದ್ರತೆಗೆ ಸ್ಥಳೀಯ ಪೊಲೀಸ್ ಮುಖ್ಯಸ್ಥರು ವೈಯಕ್ತಿಕವಾಗಿ ಜವಾಬ್ದಾರರಾಗಿರಬೇಕು ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: ಲಿವ್-ಇನ್ ರಿಲೇಶನ್​ಶಿಪ್ ಭಾರತೀಯ ಮಧ್ಯಮ ವರ್ಗದ ಮೌಲ್ಯಗಳಿಗೆ ವಿರುದ್ಧವಾಗಿದೆ: ಅಲಹಾಬಾದ್ ಹೈಕೋರ್ಟ್

ಏನಿದು ಘಟನೆ?:

ಈಗಾಗಲೇ ಮದುವೆಯಾಗಿರುವ ನೇತ್ರಪಾಲ್ ಎಂಬ ವ್ಯಕ್ತಿ ಅನಾಮಿಕಾ ಜೊತೆ ಲಿವ್-ಇನ್ ಸಂಬಂಧದಲ್ಲಿದ್ದರು. ಜನವರಿ 8ರಂದು ಅನಾಮಿಕಾ ಅವರ ತಾಯಿ ಕಾಂತಿ ಶಹಜಹಾನ್‌ಪುರದ ಜೈತಿಪುರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪ್ರಕರಣವನ್ನು ದಾಖಲಿಸಿದ್ದರು. ನೇತ್ರಪಾಲ್ ನಮಗೆ ನಮ್ಮ ಮಗಳನ್ನು ಬಿಡುತ್ತಿಲ್ಲ. ಮದುವೆಯಾಗಿದ್ದರೂ ಆಕೆಯನ್ನು ಮರುಳು ಮಾಡಿ ಆಕೆಯೊಂದಿಗೆ ವಾಸವಾಗಿದ್ದಾನೆ ಎಂದು ಅವರು ಆರೋಪಿಸಿದ್ದರು. ಅನಾಮಿಕಾ ಕೇವಲ 18 ವರ್ಷದವಳಾಗಿದ್ದು, ಆಕೆ ವಿವಾಹಿತನೊಂದಿಗೆ ಸಂಬಂಧದಲ್ಲಿರುವುದು ತಮಗೆ ಇಷ್ಟವಿಲ್ಲ ಎಂದು ಆಕೆಯ ತಾಯಿ ದೂರಿನಲ್ಲಿ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಅನಾಮಿಕಾ ಮತ್ತು ನೇತ್ರಪಾಲ್ ಅಲಹಾಬಾದ್ ಹೈಕೋರ್ಟ್‌ನಲ್ಲಿ ಆ ಪ್ರಕರಣವನ್ನು ಪ್ರಶ್ನಿಸಿ, ಅದನ್ನು ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯದಿಂದ ರಕ್ಷಣೆ ಕೋರಿದ್ದರು. ನನಗೆ 18ಕ್ಕಿಂತ ಜಾಸ್ತಿ ವಯಸ್ಸಾಗಿದೆ. ನಮ್ಮ ಕುಟುಂಬದಿಂದ ಮರ್ಯಾದಾ ಹತ್ಯೆಯ ಭಯ ಎದುರಾಗಿದೆ. ಅವರಿಂದ ನಮಗೆ ರಕ್ಷಣೆ ಬೇಕೆಂದು ಅನಾಮಿಕಾ ಕೋರಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಏಪ್ರಿಲ್​ನಲ್ಲಿ ಗುಡ್​ಫ್ರೈಡೆ, ಬಸವಜಯಂತಿ, ಅಂಬೇಡ್ಕರ್ ಜಯಂತಿ; ಬ್ಯಾಂಕುಗಳಿಗೆ ಒಟ್ಟು 11 ದಿನ ರಜೆ

ಬೆಂಗಳೂರು, ಮಾರ್ಚ್ 27: ಆರ್​ಬಿಐ ಕ್ಯಾಲೆಂಡರ್ ಪ್ರಕಾರ 2026ರ ಏಪ್ರಿಲ್ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 11 ದಿನ ರಜೆ (Bank Holidays) ಇದೆ. ಕೆಲ ರಜೆಗಳು ಪ್ರಾದೇಶಿಕವಾಗಿದ್ದು, ಆಯಾ ಪ್ರದೇಶಕ್ಕೆ ಸೀಮಿತವಾಗಿರುತ್ತದೆ. ಮಾರ್ಚ್ ತಿಂಗಳಿಗೆ ಹೋಲಿಸಿದರೆ ಏಪ್ರಿಲ್​ನಲ್ಲಿ ಹಬ್ಬ ಹರಿದಿನಗಳು ಕಡಿಮೆ. ಕ್ರೈಸ್ತರ ಗುಡ್ ಫ್ರೈಡೆ, ಈಸ್ಟರ್ ಹಬ್ಬಗಳು ಎಪ್ರಿಲ್​ನಲ್ಲಿ ಇವೆ. ಈಸ್ಟರ್ ಹಬ್ಬ ಭಾನುವಾರ ಬಂದಿರುವುದರಿಂದ ಬ್ಯಾಂಕ್ ಉದ್ಯೋಗಿಗಳಿಗೆ ಹೆಚ್ಚುವರಿ ರಜೆ ಸಿಗುವುದಿಲ್ಲ. ಅಂಬೇಡ್ಕರ್ ಜಯಂತಿ, ಬಸವ ಜಯಂತಿ ಕೂಡ ಏಪ್ರಿಲ್​ನಲ್ಲೇ ಇವೆ. ನಾಲ್ಕು ಭಾನುವಾರ ಮತ್ತು ಎರಡು ಶನಿವಾರಗಳ ರಜೆಗಳೂ ಏಪ್ರಿಲ್ ತಿಂಗಳಲ್ಲಿವೆ.

ಏಪ್ರಿಲ್ 2026 ತಿಂಗಳಲ್ಲಿ ಬ್ಯಾಂಕ್ ರಜಾದಿನಗಳು

  • ಏಪ್ರಿಲ್ 1, ಬುಧವಾರ: ಆ್ಯನುಯಲ್ ಅಕೌಂಟ್ ಕ್ಲೋಸಿಂಗ್ ಪ್ರಯುಕ್ತ ರಜೆ
  • ಏಪ್ರಿಲ್ 3, ಶುಕ್ರವಾರ: ಗುಡ್ ಫ್ರೈಡೇ ಪ್ರಯುಕ್ತ ಹೆಚ್ಚಿನ ಕಡೆ ರಜೆ
  • ಏಪ್ರಿಲ್ 5: ಭಾನುವಾರದ ರಜೆ
  • ಏಪ್ರಿಲ್ 11: ಎರಡನೇ ಶನಿವಾರದ ರಜೆ
  • ಏಪ್ರಿಲ್ 12: ಭಾನುವಾರದ ರಜೆ
  • ಏಪ್ರಿಲ್ 14, ಮಂಗಳವಾರ: ವೈಶಾಖಿ / ಬೋಹಾಗ್ ಬಿಹು / ವಿಶು / ತಮಿಳು ಹೊಸ ವರ್ಷ / ಅಂಬೇಡ್ಕರ್ ಜಯಂತಿ (ಹಲವು ರಾಜ್ಯಗಳಲ್ಲಿ ರಜೆ)
  • ಏಪ್ರಿಲ್ 15, ಬುಧವಾರ: ಬೋಹಗ್ ಬಿಹು / ಹಿಮಾಚಲ ದಿನ / ಬಂಗಾಳ ದಿನ (ಅರುಣಾಚಲ, ಹಿಮಾಚಲ, ಬಂಗಾಳ ಮುಂತಾದೆಡೆ ರಜೆ)
  • ಏಪ್ರಿಲ್ 19: ಭಾನುವಾರದ ರಜೆ
  • ಏಪ್ರಿಲ್ 20, ಸೋಮವಾರ: ಬಸವ ಜಯಂತಿ
  • ಏಪ್ರಿಲ್ 25: ನಾಲ್ಕನೇ ಶನಿವಾರದ ರಜೆ
  • ಏಪ್ರಿಲ್ 26: ಭಾನುವಾರದ ರಜೆ

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಆಪರೇಷನ್ ಊರ್ಜಾ ಸುರಕ್ಷಾ; ಏನಿದು ವಿಶೇಷ ಕಾರ್ಯಾಚರಣೆ?

ಕರ್ನಾಟಕದಲ್ಲಿ ಗುಡ್ ಫ್ರೈಡೆಗೆ ರಜೆ ಇರುತ್ತದೆ. ಅಂಬೇಡ್ಕರ್ ಜಯಂತಿ ಮತ್ತು ಬಸವ ಜಯಂತಿಗೂ ರಾಜ್ಯದಲ್ಲಿ ಬ್ಯಾಂಕುಗಳು ಬಂದ್ ಆಗಿರುತ್ತವೆ. ಶನಿವಾರ ಮತ್ತು ಭಾನುವಾರದ ರಜೆಗಳನ್ನು ಒಳಗೊಂಡರೆ ಏಪ್ರಿಲ್​ನಲ್ಲಿ ಒಟ್ಟು 10 ದಿನ ಬ್ಯಾಂಕುಗಳು ರಾಜ್ಯದಲ್ಲಿ ಬಾಗಿಲು ಮುಚ್ಚಿರುತ್ತವೆ.

ಕರ್ನಾಟಕದಲ್ಲಿ ಏಪ್ರಿಲ್​ನಲ್ಲಿ ಬ್ಯಾಂಕ್ ರಜಾದಿನಗಳು

  • ಏಪ್ರಿಲ್ 1, ಬುಧವಾರ: ಆ್ಯನುಯಲ್ ಅಕೌಂಟ್ ಕ್ಲೋಸಿಂಗ್
  • ಏಪ್ರಿಲ್ 3, ಶುಕ್ರವಾರ: ಗುಡ್ ಫ್ರೈಡೇ ಪ್ರಯುಕ್ತ ರಜೆ
  • ಏಪ್ರಿಲ್ 5: ಭಾನುವಾರದ ರಜೆ
  • ಏಪ್ರಿಲ್ 11: ಎರಡನೇ ಶನಿವಾರದ ರಜೆ
  • ಏಪ್ರಿಲ್ 12: ಭಾನುವಾರದ ರಜೆ
  • ಏಪ್ರಿಲ್ 14, ಮಂಗಳವಾರ: ಅಂಬೇಡ್ಕರ್ ಜಯಂತಿ
  • ಏಪ್ರಿಲ್ 19: ಭಾನುವಾರದ ರಜೆ
  • ಏಪ್ರಿಲ್ 20, ಸೋಮವಾರ: ಬಸವ ಜಯಂತಿ
  • ಏಪ್ರಿಲ್ 25: ನಾಲ್ಕನೇ ಶನಿವಾರದ ರಜೆ
  • ಏಪ್ರಿಲ್ 26: ಭಾನುವಾರದ ರಜೆ

ಇದನ್ನೂ ಓದಿ: ಅಬಕಾರಿ ಸುಂಕ ಕಡಿಮೆಗೊಂಡರೂ ಪೆಟ್ರೋಲ್, ಡೀಸಲ್ ಬೆಲೆಯಲ್ಲಿ ಆಗಲ್ಲ ಇಳಿಕೆ; ಏನು ಕಾರಣ?

ಬ್ಯಾಂಕ್ ಕಚೇರಿಗಳಿಗೆ ರಜೆ ಇದ್ದರೂ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳು ಆನ್​ಲೈನ್​ನಲ್ಲಿ ಅವಿಘ್ನವಾಗಿ ನಡೆಯುತ್ತಿರುತ್ತವೆ. ಎಟಿಎಂಗಳು ದಿನದ 24 ಗಂಟೆಯೂ ತೆರೆದಿರುತ್ತವೆ. ಆನ್​ಲೈನ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ ಚಾಲನೆಯಲ್ಲಿರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link