All posts by nagaraj11081993

ಮಧ್ಯಪ್ರಾಚ್ಯದ ವಾರ್​​ ಎಫೆಕ್ಟ್​​: ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ; ಪಾತಾಳಕ್ಕಿಳಿದ ಬೆಲೆ

ಮಧ್ಯಪ್ರಾಚ್ಯದ ವಾರ್​​ ಎಫೆಕ್ಟ್​​: ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ; ಪಾತಾಳಕ್ಕಿಳಿದ ಬೆಲೆ

ಬೀದರ್​​, ಮಾರ್ಚ್​​ 27: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ದೇಶ ಸೇರಿದಂತೆ ರಾಜ್ಯದ ಹಲವು ಉದ್ಯಮಗಳು ಈಗಾಗಲೇ ತತ್ತರಿಸಿ ಹೋಗಿವೆ. ಈ ನಡುವೆ ವಾರ್​​ ಎಫೆಕ್ಟ್​​ ಅನ್ನದಾತರ ಕೈಸುಡಲೂ ಆರಂಭಿಸಿದ್ದು, ಬೀದರ್​​ನಲ್ಲಿ ರೈತರು ಬೆಳೆದಿದ್ದ ಈರುಳ್ಳಿ ಬೆಳೆ ಅವರ ಕಣ್ಣಲ್ಲೇ ಈಗ ನೀರು ತರಿಸುತ್ತಿದೆ. ಯುದ್ಧದ ಹಿನ್ನೆಲೆ ಗಲ್ಫ್​​ ರಾಷ್ಟ್ರಗಳಿಗೆ ರಫ್ತಾಗುತ್ತಿದ್ದ ಈರುಳ್ಳಿ ರಫ್ತು ನಿಂತಿರುವ ಕಾರಣ ಬೆಲೆ ಪಾತಾಳಕ್ಕೆ ಕುಸಿದಿದೆ. ಪ್ರತಿ ಕೆ.ಜಿ. ಈರುಳ್ಳಿ 4ರಿಂದ 6 ರೂಪಾಯಿವರೆಗೆ ಮಾರಾಟವಾಗುತ್ತಿರುವ ಕಾರಣ ಬೆಳೆಗಾರರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ.

ಭಾಲ್ಕಿ ತಾಲೂಕಿನ ಹಾಲಹಿಪ್ಪಾರ್ಗಾ ಗ್ರಾಮದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯುವ ರೈತರಿದ್ದು, ಒಂದೇ ಗ್ರಾಮದಲ್ಲಿ 300 ಎಕರೆಗೂ ಅಧಿಕ ಜಾಗದಲ್ಲಿ ಬೆಳೆ ಬೆಳೆಯಲಾಗುತ್ತೆ. ಪ್ರತಿವರ್ಷ 3 ಸಾವಿರಕ್ಕೂ ಅಧಿಕ ಕ್ವಿಂಟಾಲ್​​ ಈರುಳ್ಳಿ ಹೈದ್ರಾಬಾದ್​​​ ಮೂಲಕ ವಿದೇಶಗಳಿಗೆ ರಫ್ತಾಗುತ್ತಿತ್ತು. ಆದರೆ ಈಗ ಯುದ್ಧ ಇದರ ಮೇಲೆ ಪರಿಣಾಮ ಬೀರಿದ್ದು, ಲಾಭ ಹಾಗಿರಲಿ ಕಟಾವು ಮಾಡಿದ ಕರ್ಚೂ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಕೂಲಿ ಕಾರ್ಮಿಕರು ಕೂಡ ಸಿಕ್ಕಾಪಟ್ಟೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಈರುಳ್ಳಿ ಕೀಳೋದಕ್ಕೆ ಹಾಗೂ ಇನ್ನಿತರ ಕೆಲಸಗಳಿಗೆ ಬರಬೇಕೆಂದರೆ ಅವರಿಗೆ ಕೈ ತುಂಬ ಹಣ ನೀಡಲೇ ಬೇಕು. ಆದರೆ ಬೆಲೆ ಇಲ್ಲದ ಕಾರಣ ಕೆಲ ರೈತರು ಬೆಳೆಯನ್ನು ಮಾರುಕಟ್ಟೆಗೂ ಕೊಂಡೊಯ್ಯದೆ ಹಳ್ಳಿಗಳಲ್ಲಿ ವಿತರಣೆ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ಕೇಳೋರಿಲ್ಲ ಬೀದರ್​​ ರೈತರ ಗೋಳು; ಬೆಳೆ ವಿಮೆ ಹೆಸರಲ್ಲಿ ಭಾರೀ ಮೋಸ

ಚುನಾವಣೆಯ ಸಮಯದಲ್ಲಿ ಮನೆ ಮನೆಗೆ ಮತ ಕೇಳಲು ಬರುವ ರಾಜಕಾರಣಿಗಳಿಗೆ ರೈತರ ಸಂಕಷ್ಟ ಕೇಳಿಸುತ್ತಿಲ್ಲ. ನಮ್ಮ ಗ್ರಾಮದಲ್ಲಿ ಬಹುತೇಕ ರೈತರು ಈರುಳ್ಳಿ ಬೆಳೇಯನ್ನೇ ನಂಬಿ ಬದುಕಿದ್ದೇವೆ. ಬೆಲೆ ಏರಬಹುದೆಂಬ ನಿರೀಕ್ಷೆಯಲ್ಲಿ ಹಲವು ರೈತರು ಬೆಳೆಯನ್ನು ಹಾಗೆಯೇ ಇಟ್ಟುಕೊಂಡಿದ್ದು, ಮುಂದೇನು ಎಂಬುದು ತಿಳಿಯದಂತಾಗಿದೆ. ಒಂದು ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆಯಬೇಕಾದರೆ 50 ರಿಂದ 55 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್​​ಗೆ 400-600 ರೂಪಾಯಿಗೆ ಈರುಳ್ಳಿಯನ್ನು ಖರೀದಿಸುತ್ತಿದ್ದಾರೆ. ಮೂರುವರೆ ತಿಂಗಳುಗಳ ಕಾಲ ಹಗಲು-ರಾತ್ರಿ ಎನ್ನದೆ ದುಡಿದು ಎಕರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ ಎಂಬುದು ರೈತರ ಅಳಲು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Source link

‘ರಾಮರಸ’ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್; ಭಿನ್ನ ಪಾತ್ರದಲ್ಲಿ ನಟ

ಕನ್ನಡದ ನಟ ಪ್ರಜ್ವಲ್ ದೇವರಾಜ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿದವರು. ಅವರು ಈಗ ಕಾರ್ತಿಕ್ ಮಹೇಶ್ ನಟನೆಯ ‘ರಾಮರಸ’ ಸಿನಿಮಾದ ಭಾಗ ಆಗುತ್ತಿದ್ದಾರೆ. ಸಾಕಷ್ಟು ಭಿನ್ನ ಶೈಲಿಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಪ್ರಜ್ವಲ್ ಅವರು ಗುರುಸಿದ್ಧನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಪೋಸ್ಟರ್ ಗಮನ ಸೆಳೆದಿದೆ.

ರಾಮನವಮಿ ಪ್ರಯುಕ್ತ ‘ರಾಮರಸ’ ಚಿತ್ರದಲ್ಲಿನ ಪ್ರಜ್ವಲ್ ದೇವರಾಜ್ ಲುಕ್ ಅನಾವರಣಗೊಂಡಿದೆ. ವಿನಯ್ ಗುರೂಜಿ ಅವರು ಈ ಲುಕ್ ಅನಾವರಣ ಮಾಡಿದರು. ಪೋಸ್ಟರ್​ ಅಲ್ಲಿ ಉದ್ದನೆಯ ಕೂದಲು ಬಿಟ್ಟು, ಕತ್ತಲ್ಲಿ ರುದ್ರಾಕ್ಷಿ ಮಾಲೆ ಧರಿಸಿದ್ದಾರೆ ಪ್ರಜ್ವಲ್. ಮುಖದಲ್ಲಿ ಕೋಪ ಮನೆ ಮಾಡಿದೆ. ಹಿಂಭಾಗದಲ್ಲಿ ನಾನಾ ರೀತಿಯ ಕಟ್ಟಡಗಳನ್ನು ಕಾಣಬಹುದು. ಅವರ ಪಾತ್ರದ ಪೋಸ್ಟರ್​​ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. ಸಿನಿಮಾದಲ್ಲಿ ಈ ಪಾತ್ರ ತುಂಬಾನೇ ಪ್ರಾಮುಖ್ಯತೆ ಪಡೆಯಲಿದೆಯಂತೆ.

‘ದೈವಿಕ ಕಥೆಗೆ ಅದ್ಭುತ ಸೇರ್ಪಡೆ. ಸಿನಿಪಯಣದ ಈ ಅದ್ಧೂರಿ ಪಥದಲ್ಲಿ, ಈಗ ಪ್ರಜ್ವಲ್ ದೇವರಾಜ್ ಅವರ ಸಾಟಿಯಿಲ್ಲದ ಪ್ರತಿಭೆ ನಮಗೆ ಜೊತೆಯಾಗಿದೆ. ರಾಮರಸದ ಈ ಮಹಾನ್ ಕಥಾ ಲೋಕಕ್ಕೆ ಗುರು ಸಿದ್ಧರಿಗೆ ಆತ್ಮೀಯ ಸ್ವಾಗತ. ಇದು ಬರೀ ಸಿನಿಮಾ ಅಲ್ಲ, ಒಂದು ಅದ್ಭುತ ಅನುಭವ’ ಎಂದು ಪೋಸ್ಟರ್ ಕ್ಯಾಪ್ಶನ್ ಅಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: ‘ರಾಮರಸ’ ಚಿತ್ರದಲ್ಲಿ ಮಿಂಚಲು ಬಂದ ‘ಅಧ್ಯಕ್ಷ’ ಸುಂದರಿ ಹೆಬಾ ಪಟೇಲ್

‘ರಾಮರಸ’ ಸಿನಿಮಾದಲ್ಲಿ ಮಾಟ ಮಂತ್ರದ ವಿಷಯಗಳು ಹೈಲೈಟ್ ಆಗಿವೆ. ಕಾರ್ತಿಕ್ ಮಹೇಶ್, ಪ್ರಜ್ವಲ್ ದೇವರಾಜ್ ಜೊತೆಗೆ ಶರಣ್ ಕೂಡ ನಟಿಸಿದ್ದಾರೆ. ಇನ್ನೂ ಅನೇಕ ಕಲಾವಿದರು ಸಿನಿಮಾದ ಭಾಗ ಆಗಲಿದ್ದು, ಅದನ್ನು ಗುಟ್ಟಾಗಿಯೇ ಇಡಲಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ರಿವೀಲ್ ಮಾಡುವ ಸಾಧ್ಯತೆ ಇದೆ.

ಎಂಬಿ ಗಿರಿರಾಜ್ ಅವರು ‘ರಾಮರಸ’ ಚಿತ್ರಕ್ಕೆ ಕಥೆ ಬರೆದು, ನಿರ್ದೇಶನ ಮಾಡಿದ್ದಾರೆ. ಗುರು ದೇಶಪಾಂಡೆ ಅವರು ಕ್ರಿಯೇಟಿವ್ ಹೆಡ್ ಆಗಿದ್ದಾರೆ. ಗುರು ದೇಶಪಾಂಡೆ ಹಾಗೂ ವಿಕ್ರಂ ಆರ್ಯ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸುಗುಣ ಜಯಪಾಲ್ ಚಿತ್ರದ ಸಹ ನಿರ್ಮಾಪಕರು. ಈ ಸಿನಿಮಾದಲ್ಲಿ ಕಾರ್ತಿಕ್ ಮಹೇಶ್ ಪಾತ್ರ ಕೂಡ ಗಮನ ಸೆಳೆಯುವ ರೀತಿಯಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಆರ್​ಸಿಬಿ- ಎಸ್‌ಆರ್‌ಎಚ್ ಮುಖಾಮುಖಿ ದಾಖಲೆ ಹೇಗಿದೆ? ಕಳೆದ 5 ಪಂದ್ಯಗಳ ಫಲಿತಾಂಶವೇನು?

ಇಂಡಿಯನ್ ಪ್ರೀಮಿಯರ್ ಲೀಗ್​ನ 19 ನೇ ಸೀಸನ್​ನ (IPL 2026)  ಮೊದಲ ಪಂದ್ಯ ಮಾರ್ಚ್ 28 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs SRH) ನಡುವೆ ನಡೆಯಲಿದೆ. ಒಂದೆಡೆ ಆರ್​ಸಿಬಿ ಹಾಲಿ ಚಾಂಪಿಯನ್ ಆಗಿದ್ದರೆ, ಮತ್ತೊಂದೆಡೆ ಸನ್‌ರೈಸರ್ಸ್ ಹೈದರಾಬಾದ್‌ ಕಳೆದ ಆವೃತ್ತಿಯಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಡೆದುಕೊಂಡಿತ್ತು. ಆದಾಗ್ಯೂ ಬಲಿಷ್ಠ ಬ್ಯಾಟಿಂಗ್‌ ವಿಭಾಗವನ್ನು ಹೊಂದಿರುವ ಎಸ್‌ಆರ್‌ಎಚ್ ತಂಡವನ್ನು ಕಡಿಮೆ ಅಂದಾಜು ಮಾಡುವಂತಿಲ್ಲ. ಇತ್ತ ಬ್ಯಾಟಿಂಗ್‌ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿ ಸಮತೋಲನದಿಂದ ಕೂಡಿರುವ ಆರ್​ಸಿಬಿ ಮೈಮರೆಯುವಂತಿಲ್ಲ. ಇನ್ನು ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳ ಮುಖಾಮುಖಿ ದಾಖಲೆಯನ್ನು ನೋಡುವುದಾದರೆ..

ಹೆಡ್ ಟು ಹೆಡ್ ದಾಖಲೆ

ಅಂಕಿಅಂಶಗಳ ಪ್ರಕಾರ ಸನ್‌ರೈಸರ್ಸ್ ಹೈದರಾಬಾದ್, ಆರ್‌ಸಿಬಿ ವಿರುದ್ಧ ಮೇಲುಗೈ ಸಾಧಿಸಿರುವುದನ್ನು ಗಮಿನಸಬಹುದು. ಐಪಿಎಲ್ ಇತಿಹಾಸದಲ್ಲಿ ಈ ಎರಡೂ ತಂಡಗಳ ನಡುವೆ ಒಟ್ಟು 26 ಪಂದ್ಯಗಳು ನಡೆದಿವೆ. ಇದರಲ್ಲಿ ಸನ್‌ರೈಸರ್ಸ್ ಹೈದರಾಬಾದ್ 13 ಪಂದ್ಯಗಳನ್ನು ಗೆದ್ದಿದ್ದರೆ, ಆರ್‌ಸಿಬಿ 11 ಪಂದ್ಯಗಳನ್ನು ಗೆದ್ದಿದೆ. ಎರಡು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ಇನ್ನು ಕಳೆದ ಆವೃತ್ತಿಯಲ್ಲಿ ರಜತ್ ಪಾಟಿದಾರ್ ನಾಯಕತ್ವದಲ್ಲಿ, ಆರ್‌ಸಿಬಿ ಅದ್ಭುತ ಪ್ರದರ್ಶನ ನೀಡಿತ್ತಾದರೂ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತಿತ್ತು. ಇದರ ಹೊರತಾಗಿಯೂ, ಆರ್‌ಸಿಬಿ ಐಪಿಎಲ್ 2025 ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಕಳೆದ 5 ಪಂದ್ಯಗಳ ಫಲಿತಾಂಶ

ಇನ್ನು ಆರ್‌ಸಿಬಿ ಹಾಗೂ ಎಸ್‌ಆರ್‌ಹೆಚ್‌ ನಡುವಿನ ಕಳೆದ ಐದು ಪಂದ್ಯಗಳ ಮುಖಾಮುಖಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎರಡು ಪಂದ್ಯಗಳನ್ನು ಗೆದ್ದಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರರಲ್ಲಿ ಗೆದ್ದಿದೆ . ಇತ್ತೀಚಿನ ದಿನಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಉತ್ತಮ ದಾಖಲೆಯನ್ನು ಹೊಂದಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಆದಾಗ್ಯೂ, ಹೊಸ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿರುತ್ತದೆ.

IPL 2026: ಯಾವ ಚಾನೆಲ್‌ನಲ್ಲಿ ಐಪಿಎಲ್ ನೇರಪ್ರಸಾರ? ಮೊಬೈಲ್​ನಲ್ಲಿ ಉಚಿತವಾಗಿ ವೀಕ್ಷಿಸುವುದು ಹೇಗೆ?

ಉಭಯ ತಂಡಗಳು

ಆರ್​ಸಿಬಿ ಪೂರ್ಣ ತಂಡ: ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ದೇವದತ್ತ್ ಪಡಿಕ್ಕಲ್, ರಜತ್ ಪಾಟಿದಾರ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋರ್ಡಾನ್ ಕಾಕ್ಸ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ವೆಂಕಟೇಶ್ ಅಯ್ಯರ್, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ವಿಕ್ಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾಣ್, ಜೋಶ್ ಹೇಜಲ್​ವುಡ್, ರಸಿಖ್ ದಾರ್, ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಅಭಿನಂದನ್ ಸಿಂಗ್, ಜಾಕೋಬ್ ಡಫಿ, ಯಶ್ ದಯಾಲ್

ಎಸ್‌ಆರ್‌ಎಚ್ ಪೂರ್ಣ ತಂಡ: ಪ್ಯಾಟ್ ಕಮ್ಮಿನ್ಸ್, ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಲಿಯಾಮ್ ಲಿವಿಂಗ್‌ಸ್ಟೋನ್, ಹರ್ಷಲ್ ಪಟೇಲ್, ಕಮಿಂದು ಮೆಂಡಿಸ್, ಬ್ರೈಡನ್ ಕಾರ್ಸೆ, ಹರ್ಷ್ ದುಬೆ, ಅನಿಕೇತ್ ವರ್ಮಾ, ಸ್ಮರಣ್ ರವಿಚಂದ್ರನ್, ಸಲಿಲ್ ಅರೋರಾ, ಜಯ್‌ದೇವ್ ಉನದ್ಕತ್, ಶಿವಂ ಮಾವಿ, ಜೀಶನ್ ಅನ್ಸಾರಿ, ಎಶಾನ್ ಮಾಲಿಂಗ, ಸಾಕಿಬ್ ಹುಸೇನ್ ಮತ್ತು ಡೇವಿಡ್ ಪೇನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ತಿಂಗಳಿಗೆ 75,000 ರೂ ಸಂಪಾದಿಸುವ ಮುಂಬೈ ಆಟೋ ಚಾಲಕ

ಮುಂಬೈ, ಮಾರ್ಚ್ 27: ಈಗಿನ ಕಾಲದಲ್ಲಿ ಓದಿಕೊಂಡವರು ಕಾರ್ಪೊರೇಟ್ ಉದ್ಯೋಗಗಳತ್ತ (Corporate job) ಆಸಕ್ತಿ ತೋರಿಸುತ್ತಾರೆ. ಸ್ವ ಉದ್ಯೋಗಕ್ಕೆ ಕೈ ಹಾಕುವುದು ಕಡಿಮೆಯೇ. ಆದರೆ, ಸ್ವಂತ ದುಡಿಮೆಯಿಂದಲೂ ಲಕ್ಷಾನುಗಟ್ಟಲೆ ದುಡಿಯಬಹುದು ಅನೇಕರಿಗೆ ತಿಳಿದೇ ಇಲ್ಲ. ಆದರೆ ಮುಂಬೈ (Mumbai) ಆಟೋಚಾಲಕರೊಬ್ಬರ ದಿನದ ಸಂಪಾದನೆ ಕೇಳಿದ್ರೆ ನೀವು ಶಾಕ್ ಆಗ್ತೀರಾ. ದಿನಕ್ಕೆ 2500 ರೂ ಸಂಪಾದಿಸುವ ಈ ಆಟೋಚಾಲಕ ತಿಂಗಳಿಗೆ 75,000 ರೂ ಸಂಪಾದನೆ ಮಾಡ್ತಾರಂತೆ. ಈ ವಿಡಿಯೋ ಕಾರ್ಪೊರೇಟ್ ಸಂಬಳದ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ.

@uvichar_ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮುಂಬೈ ಹೇಗೆ ದುಬಾರಿ ನಗರ ಎಂಬುದರ ಬಗ್ಗೆ ಚಾಲಕನೊಂದಿಗೆ ಮಾತನಾಡುತ್ತಿದ್ದೇನೆ ಎಂದು ವರ್ಮಾ ಹೇಳುವುದರೊಂದಿಗೆ  ಈ ವೀಡಿಯೊ ಪ್ರಾರಂಭವಾಗುತ್ತದೆ. ಮಾತಿಗಿಳಿದ ಈ ಆಟೋ ಚಾಲಕ, ಸಾಕಷ್ಟು ಹಣವನ್ನು ಗಳಿಸಬೇಕು. ಆದರೆ ಸರಿಯಾದ ಅವಕಾಶವನ್ನು ಕಂಡುಹಿಡಿಯುವುದು ಒಂದೇ ಸವಾಲು. ದೈನಂದಿನ ಗಳಿಕೆಯು ಖರ್ಚು ವೆಚ್ಚಗಳನ್ನು ಕಳೆದು ಸುಮಾರು 2,500 ರೂ ಆಗುತ್ತದೆ ಎಂದು ಹೇಳುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ವರ್ಮಾರವರು ದಿನದ ಗಳಿಕೆಯ ಆಧಾರದ ಮೇಲೆ ಮಾಸಿಕ ಆದಾಯವು ಸರಿಸುಮಾರು 75,000 ರೂ ಆಗುತ್ತದೆ ಎನ್ನುವುದನ್ನು ಗಮನಿಸಿದ್ದಾರೆ. ಈ ಮುಂಬೈನಲ್ಲಿ ಆಟೋ ಓಡಿಸುವುದರಿಂದ ದೈನಂದಿನ ಸಂವಹನ ಮತ್ತು ನೆಟ್‌ವರ್ಕಿಂಗ್ ಅವಕಾಶಗಳ ಜೊತೆಗೆ ಉತ್ತಮ ಆದಾಯದ ಗಳಿಸಬಹುದು ಎಂದು ಸೂಚಿಸುತ್ತಾರೆ. ತಿಂಗಳಿಗೆ ಸರಾಸರಿ 75,000. ನೀವು ಸ್ವಲ್ಪ ಕಷ್ಟಪಟ್ಟು ಕೆಲಸ ಮಾಡಿದರೆ, ನೀವು ಸುಮಾರು 1 ಲಕ್ಷ ರೂ ಗಳಿಸಬಹುದು. ಕನಿಷ್ಠ 60,000 ರೂ ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗೆ ಹೋಗಲು ಇಷ್ಟವಿಲ್ಲ; 34 ಲಕ್ಷ ರೂ ಸಂಬಳದ ಜಾಬ್ ಆಫರ್ ತಿರಸ್ಕರಿಸಿದ ಯುವಕ

ಈ ವಿಡಿಯೋ ಅಧಿಕ ವೀಕ್ಷಣೆಗಳೊಂದಿಗೆ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರ ಯಾವುದೇ ದುಡಿಮೆ ಹೇಳುವಷ್ಟು ಸುಲಭವಲ್ಲ, ಕಷ್ಟ ಪಟ್ಟು ದುಡಿದರೆ ಮಾತ್ರ ಹಣ ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ಸಂಬಳದೊಂದಿಗೆ ನೀವು ಹೊಸಬರ ಸಂಬಳವನ್ನು ಹೇಗೆ ಹೋಲಿಸಬಹುದು?. ನೀವು ಆರಂಭಿಕ ವರ್ಷಗಳಲ್ಲಿ ಸಾಕಷ್ಟು ಕೆಲಸ ಮಾಡಿದರೆ 2 ವರ್ಷಗಳ ನಂತರ ನಿಮಗೆ ಸುಲಭವಾಗಿ ಹೆಚ್ಚಳ ಸಿಗುತ್ತದೆ. ನೀವು ಗಳಿಸುವ ಈಗಿನಕ್ಕಿಂತ ಕನಿಷ್ಠ ಎರಡು ಅಥವಾ ಮೂರು ಪಟ್ಟು ಹೆಚ್ಚಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಆಟೋ ತಿಂಗಳಿಗೆ ಹೆಚ್ಚು ಸಂಬಳ ಗಳಿಸಬಹುದು. ದಿನವಿಡೀ ಬಿಸಿಲಿನಲ್ಲಿ ಸಂಚಾರ, ಅನಿಶ್ಚಿತತೆ, ನಿಗದಿತ ಸಮಯವಿಲ್ಲದೆ ಇರುತ್ತಾನೆ. 20–30 ಸಾವಿರ ಸಂಬಳದ ಕೆಲಸವು ಸಾಮಾನ್ಯವಾಗಿ ಸ್ಥಿರತೆ, ದಿನಚರಿ ಮತ್ತು ಸ್ವಲ್ಪ ಹೆಚ್ಚು ಸೌಕರ್ಯದೊಂದಿಗೆ ಬರುತ್ತದೆ. ವಿಭಿನ್ನ ಜೀವನ, ವಿಭಿನ್ನ ವಿನಿಮಯಗಳು ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ನಮಗೆ ರಸ್ತೆ ಇಲ್ಲ, 500 ಕೋಟಿ ರೂ. ಕೊಡಿ: ‘ಧುರಂಧರ್ 2’ ತಂಡಕ್ಕೆ ಪಾಕಿಸ್ತಾನಿಗಳ ಮನವಿ

ಆದಿತ್ಯ ಧರ್ (Aditya Dhar) ನಿರ್ದೇಶನ ಮಾಡಿರುವ ‘ಧುರಂಧರ್ 2’ ಸಿನಿಮಾ ಸೂಪರ್ ಹಿಟ್ ಆಗಿದೆ. ಮೊದಲ ಭಾಗದ ರೀತಿಯೇ ಈ ಸೀಕ್ವೆಲ್ ಕೂಡ ಧೂಳೆಬ್ಬಿಸುತ್ತಿದೆ. ವಿಶ್ವಾದ್ಯಂತ ಬಾಕ್ಸ್ ಆಫೀಸ್​​ನಲ್ಲಿ ಈ ಸಿನಿಮಾ ಈಗಾಗಲೇ ಸಾವಿರ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಪಾಕಿಸ್ತಾನದಲ್ಲಿ ‘ಧುರಂಧರ್ 2’ (Dhurandhar 2) ಸಿನಿಮಾ ಬಿಡುಗಡೆ ಆಗಿಲ್ಲ. ಹಾಗಿದ್ದರೂ ಕೂಡ ಅಲ್ಲಿನ ಜನರು ಈ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಯಾಕೆಂದರೆ, ಈ ಚಿತ್ರದ ಕಥೆ ನಡೆಯುವುದೇ ಪಾಕಿಸ್ತಾನದಲ್ಲಿ. ಈಗ ಪಾಕ್ (Pakistan) ಮಂದಿ ಒಂದು ಬೇಡಿಕೆ ಇಟ್ಟಿದ್ದಾರೆ. ಸಿನಿಮಾದ ಕಲೆಕ್ಷನ್​ನಲ್ಲಿ ಪಾಲು ಕೇಳುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಪಾಕಿಸ್ತಾನದ ಲಿಯಾರಿ ನಗರದ ಕೆಲವು ಯುವಕರು ಮಾಧ್ಯಮವೊಂದಕ್ಕೆ ಈ ರೀತಿ ಹೇಳಿಕೆ ನೀಡಿದ್ದಾರೆ. ‘ಲಿಯಾರಿಗೆ 2 ಅಥವಾ 3 ಕೋಟಿ ರೂಪಾಯಿ ಸಿಗಬೇಕು. ಇಲ್ಲಿನ ರಸ್ತೆ ಸರಿ ಮಾಡಲು ಹಣ ಬೇಕು’ ಎಂದು ಯುವಕನೊಬ್ಬ ಹೇಳಿದ್ದಾನೆ. ಆದರೆ ಇನ್ನೊಬ್ಬ ಯುವಕ 500 ಕೋಟಿ ರೂಪಾಯಿ ಬೇಕು ಎಂದಿದ್ದಾನೆ.

‘ಧುರಂಧರ್ 2 ಸಿನಿಮಾಗೆ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದರೆ ಲಿಯಾರಿ ಜನರಿಗೆ 500 ಕೋಟಿ ರೂಪಾಯಿ ನೀಡಿ. ಅರ್ಧ ಕಲೆಕ್ಷನ್ ಆದಿತ್ಯ ಧರ್ ಇಟ್ಟುಕೊಳ್ಳಲಿ. ಅವರು ನಮಗೆ ಕೊಡುವ ಹಣದಲ್ಲಿ ನಮ್ಮ ರಸ್ತೆ ನಿರ್ಮಾಣ ಆಗಲಿ’ ಎಂದು ಲಿಯಾರಿ ಯುವಕ ಹೇಳಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ.

ರಣವೀರ್ ಸಿಂಗ್, ಸಾರಾ ಅರ್ಜುನ್, ಸಂಜಯ್ ದತ್, ಅರ್ಜುನ್ ರಾಮ್​ಪಾಲ್, ರಾಕೇಶ್ ಬೇಡಿ, ಆರ್. ಮಾಧವನ್ ಮುಂತಾದವರು ‘ಧುರಂಧರ್ 2’ ಸಿನಿಮಾದಲ್ಲಿ ನಟಿಸಿದ್ದಾರೆ. ಲಿಯಾರಿ ಪಟ್ಟಣದಲ್ಲಿ ಇದ್ದ ಮಾಫಿಯಾ ಮತ್ತು ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗಿದೆ. ಹಾಗಾಗಿ ಪಾಕಿಸ್ತಾನದ ಮಂದಿ ಈ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ.

ಇದನ್ನೂ ಓದಿ: ‘ಧುರಂಧರ್ 2’ ನೋಡದಿದ್ದರೂ ಚಿತ್ರತಂಡದ ಸಾಧನೆಗೆ ಭೇಷ್ ಎಂದ ಆಮಿರ್ ಖಾನ್

ಪಾಕಿಸ್ತಾನ ಹಾಗೂ ಮಧ್ಯಪ್ರಾಚ್ಯ ದೇಶಗಳಲ್ಲಿ ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗಿಲ್ಲ. ಇನ್ನುಳಿದ ಕಡೆಗಳಲ್ಲಿ ಈ ಸಿನಿಮಾ ತೆರೆಕಂಡು ಭರ್ಜರಿ ಕಮಾಯಿ ಮಾಡುತ್ತಿದೆ. ಭಾರತದ ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾ ಒಟ್ಟು 1500 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಎರಡನೇ ವೀಕೆಂಡ್​ನಲ್ಲಿ ಈ ಸಿನಿಮಾದ ಗಳಿಕೆ ಸಖತ್ ಹೆಚ್ಚಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೊಂಬಾಳೆ ಬಳಿಕ ರಾಜ್ ಬಿ ಶೆಟ್ಟಿಯಿಂದಲೂ ದೂರಾದರೇ ರಿಷಬ್?

ರಿಷಬ್ ಶೆಟ್ಟಿ (Rishab Shetty), ಕರ್ನಾಟಕದ ಪ್ಯಾನ್ ಇಂಡಿಯಾ ಸ್ಟಾರ್ ನಟ. ‘ಕಾಂತಾರ’ ಮತ್ತು ‘ಕಾಂತಾರ ಚಾಪ್ಟರ್ 1’ ಸಿನಿಮಾದ ಬಳಿಕ ರಿಷಬ್​​ರ ಖ್ಯಾತಿ ದೇಶದೆಲ್ಲೆಡೆ ಹರಡಿದೆ. ‘ಕಾಂತಾರ ಚಾಪ್ಟರ್ 1’ ಬಳಿಕ ಅವರಿಗೆ ತೆಲುಗು, ಬಾಲಿವುಡ್​​ನಿಂದಲೂ ಆಫರ್​​ಗಳು ಬರುತ್ತಿದ್ದು, ಇದೀಗ ರಿಷಬ್ ಅವರು ತೆಲುಗಿನ ‘ಜೈ ಹನುಮಾನ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಹೊಸ ಸಿನಿಮಾದ ತಯಾರಿಯಲ್ಲಿ ತೊಡಗಿರುವ ಸುಳಿವನ್ನೂ ಸಹ ಸಾಮಾಜಿಕ ಜಾಲತಾಣದ ಮೂಲಕ ನೀಡಿದ್ದಾರೆ.

‘ಕಾಂತಾರ: ಚಾಪ್ಟರ್ 2’ ಸಿನಿಮಾದ ಬಳಿಕ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ನಡುವೆ ವೈಮನಸ್ಯ ಮೂಡಿತೇ ಎಂಬ ಅನುಮಾನ ಶುರುವಾಗಿತ್ತು. ಅದಕ್ಕೆ ಮುಖ್ಯ ಕಾರಣವಾಗಿದ್ದು, ರಿಷಬ್ ಅವರು ಕೆಲ ವಾರದ ಹಿಂದಷ್ಟೆ ಹೊಂಬಾಳೆ ಫಿಲಮ್ಸ್​​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಅನ್​​ಫಾಲೋ ಮಾಡಿದ್ದರು. ಇದು ದೊಡ್ಡ ಸುದ್ದಿಯೇ ಆಯ್ತು. ಇದೀಗ ರಿಷಬ್ ಶೆಟ್ಟಿ, ತಮ್ಮ ಗೆಳೆಯ ರಾಜ್ ಬಿ ಶೆಟ್ಟಿ ಮತ್ತು ‘ಕಾಂತಾರ’ ನಾಯಕಿ ರುಕ್ಮಿಣಿ ವಸಂತ್ ಅವರನ್ನೂ ಅನ್​​ಫಾಲೋ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇನ್​​ಸ್ಟಾಗ್ರಾಂನಲ್ಲಿ ರಿಷಬ್ ಶೆಟ್ಟಿ ಅವರು 140ಕ್ಕೂ ಹೆಚ್ಚು ಮಂದಿ ಸಿನಿಮಾ ಸೆಲೆಬ್ರಿಟಿಗಳು, ಕೆಲವು ರಾಜಕಾರಣಿಗಳನ್ನು ಫಾಲೋ ಮಾಡುತ್ತಾರೆ. ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಜೆಪಿ ತುಮ್ಮಿನಾಡ್ ಇನ್ನೂ ಹಲವರನ್ನು ರಿಷಬ್ ಶೆಟ್ಟಿ ಫಾಲೋ ಮಾಡುತ್ತಾರೆ. ಆದರೆ ಅವರು ಫಾಲೋ ಮಾಡುವವರ ಪಟ್ಟಿಯಲ್ಲಿ ರಾಜ್ ಬಿ ಶೆಟ್ಟಿ ಅವರ ಹೆಸರಿಲ್ಲ. ರಿಷಬ್ ಶೆಟ್ಟಿ ಅವರು ರಾಜ್ ಬಿ ಶೆಟ್ಟಿ ಅವರನ್ನು ಅನ್​ಫಾಲೋ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಂತೆಯೇ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ನಾಯಕಿ ರುಕ್ಮಿಣಿ ವಸಂತ್ ಅವರನ್ನೂ ಫಾಲೋ ಮಾಡುತ್ತಿಲ್ಲ ಅಥವಾ ರಿಷಬ್ ಅವರು ರುಕ್ಮಿಣಿ ವಸಂತ್ ಅವರನ್ನು ಅನ್​ಫಾಲೋ ಮಾಡಿದ್ದಾರೆ.

ಇದನ್ನೂ ಓದಿ:ಮುದ್ದು ಮಗಳ ಹುಟ್ಟುಹಬ್ಬಕ್ಕೆ ಮುದ್ದಾದ ವಿಡಿಯೋ ಹಂಚಿಕೊಂಡ ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ಅವರ ಸಿನಿಮಾ ಇನ್ನಿತರೆ ವಿಷಯಗಳಲ್ಲಿ ಜೊತೆಯಾಗಿಯೇ ಇರುವ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯವಾಗಿರುವ ಪ್ರಗತಿ ಶೆಟ್ಟಿ ಅವರೂ ಸಹ ರಾಜ್ ಬಿ ಶೆಟ್ಟಿ ಅವರನ್ನು ಅನ್​ಫಾಲೋ ಮಾಡಿದಂತಿದೆ. ಆದರೆ ಪ್ರಗತಿ ಶೆಟ್ಟಿ ಅವರು ಈಗಲೂ ರುಕ್ಮಿಣಿ ವಸಂತ್ ಅವರನ್ನು ಇನ್​​ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿದ್ದಾರೆ. ಪ್ರಗತಿ ಶೆಟ್ಟಿ ಅವರೂ ಸಹ ಹೊಂಬಾಳೆಯನ್ನು ಅನ್​​ಫಾಲೋ ಮಾಡಿದ್ದಾರೆ.

ರಾಜ್ ಬಿ ಶೆಟ್ಟಿ ಅವರು ‘ಕಾಂತಾರ ಚಾಪ್ಟರ್ 1’ ಸಿನಿಮಾದ ಯಾವೊಂದು ಅಪ್​​​ಡೇಟ್ ಅನ್ನು ಹಂಚಿಕೊಂಡಿರಲಿಲ್ಲ. ಅಲ್ಲದೆ, ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೂ ತಮಗೆ ಸಂಬಂಧವಿಲ್ಲ, ನನಗೆ ಆ ಸಿನಿಮಾಕ್ಕೆ ಕೆಲಸ ಮಾಡುವ ಮನಸ್ಸಿಲ್ಲ’ ಎಂದು ಹಿಂದೆ ಸಂದರ್ಶನದಲ್ಲಿ ಹೇಳಿದ್ದರು. ಆದರೆ ಅವರು ‘ಕಾಂತಾರ’ ಸಿನಿಮಾದ ಕೆಲ ಭಾಗಗಳ ನಿರ್ದೇಶನ ಮಾಡಿದ್ದರು. ಮೊದಲ ‘ಕಾಂತಾರ’ ಸಿನಿಮಾ ಬಿಡುಗಡೆ ಆದ ಬಳಿಕ ಇಬ್ಬರ ನಡುವೆ ಮನಸ್ಥಾಪ ಶುರುವಾಗಿತ್ತು ಎನ್ನಲಾಗಿತ್ತು. ಇದೀಗ ಅದಕ್ಕೆ ಮತ್ತೊಂದು ಸಾಕ್ಷ್ಯ ದೊರೆಕಿದಂತಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಿತೀಶ್ ಕುಮಾರ್ ಮಾರ್ಚ್​ 30ರಂದು ಬಿಹಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ

ಪಾಟ್ನಾ, ಮಾರ್ಚ್​ 27: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar) ಮಾರ್ಚ್​ 30ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಮಾರ್ಚ್ 16 ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಗೆಲುವು ಸಾಧಿಸಿದ್ದರು.ಒಬ್ಬ ವ್ಯಕ್ತಿಯು ಏಕಕಾಲದಲ್ಲಿ ಎರಡು ಸದನಗಳ ಸದಸ್ಯತ್ವವನ್ನು ಹೊಂದಲು ಸಾಧ್ಯವಿಲ್ಲ, ಇದು 14 ದಿನಗಳಲ್ಲಿ ಒಂದು ಸ್ಥಾನವನ್ನು ತ್ಯಜಿಸುವುದು ಕಡ್ಡಾಯ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ, ಆದರೆ ಅವರು ತಮ್ಮ ಸ್ಥಾನವನ್ನು ತ್ಯಜಿಸಿಲ್ಲ. ಎರಡು ದಶಕಗಳ ಕಾಲ ಅಧಿಕಾರದ ಚುಕ್ಕಾಣಿ ಹಿಡಿದಿರುವ ನಿತೀಶ್, ಕೇಂದ್ರ ರಾಜಕೀಯಕ್ಕೆ ಮರಳಲು ನಿರ್ಧರಿಸಿದ್ದಾರೆ. ರಾಜ್ಯಸಭೆಗೆ ಹೋಗುತ್ತಿರುವಾಗ, ಬಿಹಾರದಲ್ಲಿ ತಮ್ಮ ರಾಜಕೀಯ ಹಿಡಿತವನ್ನು ದುರ್ಬಲಗೊಳಿಸಲು ಅವರು ಬಯಸುವುದಿಲ್ಲ.

ಪರಿಣಾಮವಾಗಿ, ನಿತೀಶ್ ಬಿಹಾರದ ವಿವಿಧ ಜಿಲ್ಲೆಗಳಿಗೆ ಪ್ರಯಾಣಿಸುತ್ತಿದ್ದಾರೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಉದ್ಘಾಟಿಸುತ್ತಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ನೀಡಿದ ನಂತರ, ಬಿಹಾರದಲ್ಲಿ ಬಿಜೆಪಿ ನೇತೃತ್ವದ ಹೊಸ ಸರ್ಕಾರ ರಚನೆಯಾಗಲಿದೆ .

ನಿತೀಶ್ ಕುಮಾರ್ ತಮ್ಮ ರಾಜಕೀಯ ಪ್ರಯಾಣದಲ್ಲಿ ಹೊಸ ಅಧ್ಯಾಯ ಆರಂಭಿಸಲಿದ್ದಾರೆ. 21 ವರ್ಷಗಳ ಹಿಂದೆ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವಾಗ ಅವರು ಬಿಹಾರದ ಮುಖ್ಯಮಂತ್ರಿಯಾದರು ಮತ್ತು ಈಗ ರಾಜ್ಯಸಭೆಗಾಗಿ ತಮ್ಮ ಸ್ಥಾನವನ್ನು ತ್ಯಜಿಸುತ್ತಿದ್ದಾರೆ.ತಮ್ಮ ಮಗ ನಿಶಾಂತ್ ಅವರ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸುವುದರ ಜೊತೆಗೆ, ನಿತೀಶ್ ಕುಮಾರ್ ಬಿಹಾರದ ವಿವಿಧ ಪ್ರದೇಶಗಳಲ್ಲಿ ವ್ಯಾಪಕವಾಗಿ ಪ್ರವಾಸ ಮಾಡುತ್ತಿದ್ದಾರೆ.

ಮತ್ತಷ್ಟು ಓದಿ: ಸಿಎಂ ನಿತೀಶ್ ಕುಮಾರ್​ ಹೆಲಿಕಾಪ್ಟರ್ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ದಿಕ್ಕಾಪಾಲಾಗಿ ಓಡಿದ ಪೊಲೀಸರು

ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಸಭೆಗೆ ಪ್ರವೇಶಿಸಲು ನಿರ್ಧರಿಸಿದ್ದಾರೆ ಮತ್ತು ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅವರು ಬಿಹಾರದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಾ ಮುಖ್ಯಮಂತ್ರಿ ಸ್ಥಾನದಲ್ಲಿಯೇ ಇನ್ನೂ ಉಳಿದಿದ್ದಾರೆ. ಬಿಜೆಪಿ ಬಿಹಾರದ ಮುಖ್ಯಮಂತ್ರಿಯಾದರೆ, ಜೆಡಿಯು ಉಪಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IPL ಪಂದ್ಯದ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಅಶೋಕ್​​ ಎಚ್ಚರಿಕೆ: ವಿಪಕ್ಷ ನಾಯಕ ಹೇಳಿದ್ದೇನು?

ಬೆಂಗಳೂರು, ಮಾರ್ಚ್​​ 27: ಐಪಿಎಲ್ ಪಂದ್ಯಗಳ ಸುರಕ್ಷತೆ ಮತ್ತು ಟಿಕೆಟ್ ವಿತರಣೆ ಕುರಿತು ರಾಜ್ಯ ಸರ್ಕಾರಕ್ಕೆ ವಿಧಾನಸೌಧದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ. ಹಿಂದಿನ ಐಪಿಎಲ್ ಪಂದ್ಯದ ಸಂದರ್ಭ ಸಂಭವಿಸಿದ ಕಾಲ್ತುಳಿತದಲ್ಲಿ 11 ಅಮಾಯಕರು ಮೃತಪಟ್ಟಿದ್ದನ್ನು ಉಲ್ಲೇಖಿಸಿದ ಅವರು, ರಾಜ್ಯ ಸರ್ಕಾರದ ಬೇಜವಾಬ್ದಾರಿ ಹಾಗೂ ಅಧಿಕಾರಿಗಳ ನಡೆ ಈ ದುರಂತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೆ ಮುಂಬರುವ ಐಪಿಎಲ್ ಪಂದ್ಯಗಳು ಸುಗಮವಾಗಿ ನಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ ರಾಜ್ಯ ಸರ್ಕಾರವೇ ನೇರ ಹೊಣೆಗಾರರಾಗಲಿದೆ ಎಂಬ ಎಚ್ಚರಿಕೆಯನ್ನೂ ಇದೇ ವೇಳೆ ನೀಡಿದ್ದಾರೆ. ಐಪಿಎಲ್ ಟಿಕೆಟ್ ಹಂಚಿಕೆ ಕುರಿತೂ ಮಾತನಾಡಿದ ಅಶೋಕ್, ತಮಗೆ ಬರುವ ಟಿಕೆಟ್‌ಗಳನ್ನು ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಸ್ಥಳೀಯ ಕ್ರಿಕೆಟ್ ಕ್ಲಬ್‌ಗಳು ಮತ್ತು ಸಾಮಾನ್ಯ ಜನರಿಗೆ ಟಿಕೆಟ್‌ಗಳು ಲಭ್ಯವಾಗುವಂತೆ ಮಾಡುವ ದೃಷ್ಟಿಯಿಂದ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳ ಶಾಸಕರು ಕನಿಷ್ಠ ಮೂರ್ನಾಲ್ಕು ಟಿಕೆಟ್‌ಗಳನ್ನು ಪಡೆಯುವ ವ್ಯವಸ್ಥೆಯಾಗಬೇಕೆಂದು ಒತ್ತಾಯಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

5 ವರ್ಷ ಹಿಂದಿನ ಕೊಲೆ ಪ್ರಕರಣದಲ್ಲಿ 7 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಸಂಬಲ್ಪುರ, ಮಾರ್ಚ್ 27: ಒಡಿಶಾದ ಕತರ್ಬಗಾ ಪೊಲೀಸ್ ವ್ಯಾಪ್ತಿಯ ಪದನ್ಪಲಿಯಲ್ಲಿ 2021 ರಲ್ಲಿ ನಡೆದ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಲ್ಪುರದ ಸೆಷನ್ಸ್ ನ್ಯಾಯಾಲಯವು ಗುರುವಾರ 7 ಜನರಿಗೆ ಜೀವಾವಧಿ ಶಿಕ್ಷೆ (life imprisonment) ವಿಧಿಸಿದೆ ಮತ್ತು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಒಬ್ಬ ಆರೋಪಿಯನ್ನು ಖುಲಾಸೆಗೊಳಿಸಿದೆ. ನ್ಯಾಯಾಲಯದ ಆದೇಶಗಳ ಪ್ರಕಾರ ಶಿಕ್ಷೆಗಳನ್ನು ಏಕಕಾಲದಲ್ಲಿ ಜಾರಿಗೊಳಿಸಲು ನಿರ್ದೇಶಿಸಲಾಗಿದೆ.

ಕತರ್ಬಗಾ ಪೊಲೀಸ್ ವ್ಯಾಪ್ತಿಯ ಗುಲಾಮಾಲ್ ಗ್ರಾಮದಲ್ಲಿ 2021ರಲ್ಲಿ ನಡೆದ ಪ್ರಕಾಶ್ ಪ್ರಧಾನ್ ಅವರ ಸಂಚಲನ ಮೂಡಿಸಿದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಲ್ಪುರದ ಜಿಲ್ಲಾ ನ್ಯಾಯಾಲಯವು 7 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಪ್ರಗ್ಯಾನ್ ಪಾಣಿಗ್ರಾಹಿ 23 ಸಾಕ್ಷಿಗಳ ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ ತೀರ್ಪು ನೀಡಿದ್ದಾರೆ. ನ್ಯಾಯಾಲಯವು 7 ಆರೋಪಿಗಳಾದ ರುಕ್ಮಾನ್ ಪ್ರಧಾನ್ (52), ಭೋಜರಾಜ್ ಪ್ರಧಾನ್ (55), ಗಜರಾಜ್ ಪ್ರಧಾನ್ (50), ಅಶೋಕ್ ಪ್ರಧಾನ್ (52), ದುಷ್ಮಂತ ಭೋಯಿ (50), ಭೀಷ್ಮಜಿತ್ ಭೋಯಿ (50), ಮತ್ತು ಭೀಷ್ಮದೇವ್ ಪ್ರಧಾನ್ (41) ಅವರನ್ನು ಅಪರಾಧಿಗಳೆಂದು ಘೋಷಿಸಿದೆ.

ಇದನ್ನೂ ಓದಿ: ಕಾಂಗ್ರೆಸ್ ಮುಖಂಡನ ಕೊಲೆಗೆ ಯತ್ನ: ತನಿಖೆ ಚುರುಕು, ನಾಲ್ವರ ಬಂಧನ

ಆದರೆ, ಮತ್ತೊಬ್ಬ ಆರೋಪಿ ಬಿರಾಂಚಿ ಬಿಸ್ವಾಲ್ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಯಿತು.

ಈ ಘಟನೆ ಸೆಪ್ಟೆಂಬರ್ 16, 2021ರ ರಾತ್ರಿ 8 ಗಂಟೆ ಸುಮಾರಿಗೆ ಪ್ರಧಾನ್‌ಪಾಲಿ-ಗುಲಾಮಲ್ ಪ್ರದೇಶದಲ್ಲಿ ಸಂಭವಿಸಿದೆ. ಮೃತ ಪ್ರಕಾಶ್ ಪ್ರಧಾನ್ ಮತ್ತು ಅವರ ಸ್ನೇಹಿತ ಅಜಯ್ ಬಾರಿಕ್ ವಿಶ್ವಕರ್ಮ ಪೂಜೆಗೆ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗಿದ್ದರು. ಅವರು ಹಿಂತಿರುಗುತ್ತಿದ್ದಾಗ ಕಬ್ಬಿಣದ ರಾಡ್, ಹರಿತವಾದ ಆಯುಧಗಳು ಮತ್ತು ಕೊಡಲಿಗಳನ್ನು ಬಳಸಿ ದಾಳಿ ನಡೆಸಲಾಗಿತ್ತು.

ಇದನ್ನೂ ಓದಿ: ಗೂಗಲ್ ಮ್ಯಾಪ್ ತಂದ ಆಪತ್ತು! ಕಬ್ಬಿಣದ ಸರಳುಗಳಿಂದ ತುಂಬಿದ್ದ ಲಾರಿ ಅಪಘಾತ, ಕ್ಯಾಬ್ ಚಾಲಕ ಸಾವು

ಈ ದಾಳಿಯಲ್ಲಿ ಪ್ರಕಾಶ್ ಪ್ರಧಾನ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಧನಂಜಯ ಬೆಹೆರಾ ಮತ್ತು ಅಜಯ್ ಬಾರಿಕ್ ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆಯ ನಂತರ ಮೃತರ ಕುಟುಂಬವು ಕತರ್ಬಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ನಂತರ ಆರೋಪಿಗಳನ್ನು ಬಂಧಿಸಿ ಆರೋಪಪಟ್ಟಿ ಸಲ್ಲಿಸಿದರು. ದೀರ್ಘ ವಿಚಾರಣೆಯ ನಂತರ ನ್ಯಾಯಾಲಯ ಗುರುವಾರ ತೀರ್ಪು ಪ್ರಕಟಿಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

SSLC ಒಟ್ಟು ಮಾರ್ಕ್ಸ್​​ 625ದಿಂದ 525ಕ್ಕೆ ಇಳಿಕೆ: ಹಿಂದಿ ಅಂಕಕ್ಕೆ ಕೋಕ್

ಬೆಂಗಳೂರು, ಮಾರ್ಚ್​ 27: ಎಸ್​​ಎಸ್​ಎಲ್​​ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಬಾರದು ಮತ್ತು ಅಂಕ ಪಟ್ಟಿಯಿಂದ ಹೊರಗಿಡುವಂತೆ ಇತ್ತೀಚೆಗೆ ವಿವಿಧ ಕನ್ನಡ ಪರ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸಿದ್ದವು. ಇದರ ಬೆನ್ನಲ್ಲೇ ಎಸ್​​ಎಸ್​​ಎಲ್​ಸಿ ಪರೀಕ್ಷೆಗೆ 525 ಅಂಕಗಳು ನಿಗದಿ ಮಾಡಲಾಗಿದೆ. ತೃತೀಯ ಭಾಷೆಯ ಅಂಕಕ್ಕೆ ಕೊಕ್​ ನೀಡಲಾಗಿದೆ. ಆ ಮೂಲಕ ಕರ್ನಾಟಕದ ಎಸ್​​ಎಸ್​ಎಲ್​​ಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಮಹತ್ವದ ಸುದ್ದಿ ನೀಡಿದೆ.

ರಾಜ್ಯದಲ್ಲಿ ಎಸ್​​ಎಸ್​ಎಲ್​​ಸಿ ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಶಿಕ್ಷಣ ಇಲಾಖೆ ಎಸ್​​ಎಸ್​ಎಲ್​​ಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆಗೆ ಮುಂದಾಗಿದೆ. ಇನ್ನು ಮುಂದೆ ತೃತೀಯ ಭಾಷೆಯ (ಹಿಂದಿ, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಮತ್ತು ಮರಾಠಿ) ಅಂಕಗಳನ್ನು ಒಟ್ಟು ಅಂಕಗಳಿಗೆ ಪರಿಗಣಿಸಲಾಗುವುದಿಲ್ಲ. ಬದಲಿಗೆ ತೃತೀಯ ಭಾಷೆ ಪರೀಕ್ಷೆಯ ಅಂಕವನ್ನು ಗ್ರೇಡ್ ಮೂಲಕ ನೀಡಲಾಗುತ್ತದೆ. ಇದರಿಂದ ಒಟ್ಟು ಅಂಕಗಳು 625ರಿಂದ 525 ಇಳಿಕೆ ಆಗಲಿದೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಿಷ್ಟು 

ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯ ಕೆಆರ್. ವೃತ್ತದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಈ ನಿಯಮವು ಹೊಸ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ. ಉಳಿದ ತರಗತಿಗಳ ಕುರಿತು ಮುಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆ ತೀರ್ಮಾನಿಸಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಕ್ಕಳ ಬಾಳಲ್ಲಿ ಶಾಲಾ ಆಡಳಿತ ಮಂಡಳಿ ಚೆಲ್ಲಾಟ: ಪರೀಕ್ಷೆಯಿಂದ ವಂಚಿತರಾದ SSLC ವಿದ್ಯಾರ್ಥಿಗಳು

SSLC ಪರೀಕ್ಷೆ ಒಟ್ಟು 625 ಅಂಕಗಳಿಗೆ ನಡೆಯುತ್ತಿತ್ತು. ಆದರೆ, ಇನ್ನು ಮುಂದೆ ಹಿಂದಿ ವಿಷಯದ 100 ಅಂಕಗಳನ್ನು ಫಲಿತಾಂಶದಲ್ಲಿ ಹೊರಗಿಟ್ಟಿರಲಿದ್ದು, ಇವುಗಳನ್ನು ಪರೀಕ್ಷೆ ಅಂಕಗಳಲ್ಲಿ ಒಳಪಡಿಸಲಾಗುವುದಿಲ್ಲ. ವಿದ್ಯಾರ್ಥಿಗಳ ಫಲಿತಾಂಶವನ್ನು ಕೇವಲ 525 ಅಂಕಗಳ ಮೇಲೆ ಮಾತ್ರ ಪರಿಗಣಿಸಲಾಗುವುದು. ಈ ಬದಲಾವಣೆಗಳಿಂದ ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ.

ಹಿಂದಿ ಪರೀಕ್ಷೆ ಮುಂದೂಡಿಕೆ

2025-26ನೇ ಸಾಲಿನ ಎಸ್​​ಎಸ್​​ಎಲ್​ಸಿ ಪರೀಕ್ಷೆ ಮಾರ್ಚ್​​ 18ರಿಂದ ಆರಂಭವಾಗಿವೆ. ಮಾ.30ರಂದು ನಡೆಯಬೇಕಿದ್ದ ಹಿಂದಿ ಪರೀಕ್ಷೆಯನ್ನು ಮಹಾವೀರ ಜಯಂತಿ ಹಿನ್ನೆಲೆ ಮಾ. 31ಕ್ಕೆ ಪರೀಕ್ಷೆ ಮುಂದೂಡಲಾಗಿದೆ. ಇನ್ನು ಇದೆಲ್ಲದರ ಮಧ್ಯೆ ಇದೀಗ ಶಿಕ್ಷಣ ಇಲಾಖೆ ಎಸ್​​ಎಸ್​​ಎಲ್​ಸಿ ಪರೀಕ್ಷೆಗೆ 525 ಅಂಕಗಳನ್ನು ನಿಗದಿ ಮಾಡಿದೆ. ಆ ಮೂಲಕ ತೃತೀಯ ಭಾಷೆಯ ಅಂಕವನ್ನು ಕೈಬಿಡಲಾಗಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link