All posts by nagaraj11081993

‘ಕೃಷ್ಣ ಮೊದಲು ಹೀಗಿರಲಿಲ್ಲ, ಸಕ್ಸಸ್ ಸಿಕ್ಕಮೇಲೆ ಬದಲಾಗಿದ್ದಾರೆ’; ಗುರು ದೇಶಪಾಂಡೆ

‘ಕೃಷ್ಣ ಮೊದಲು ಹೀಗಿರಲಿಲ್ಲ, ಸಕ್ಸಸ್ ಸಿಕ್ಕಮೇಲೆ ಬದಲಾಗಿದ್ದಾರೆ’; ಗುರು ದೇಶಪಾಂಡೆ

‘ಲವ್ ಮಾಕ್ಟೇಲ್ 3’ ಚಿತ್ರದ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಡಾರ್ಲಿಂಗ್ ಕೃಷ್ಣ ಕಥೆ ಕದ್ದಿದ್ದಾರೆ ಎಂದು ನಿರ್ದೇಶಕ ರಾಘವೇಂದ್ರ ನಾಯ್ಕ್ ಹಾಗೂ ನಿರ್ಮಾಪಕ, ನಿರ್ದೇಶಕ ಗುರು ದೇಶಪಾಂಡೆ ಆರೋಪಿಸಿದ್ದಾರೆ. ಆದರೆ, ಈ ಆರೋಪ ಸುಳ್ಳು ಎಂದು ಡಾರ್ಲಿಂಗ್ ಕೃಷ್ಣ ಸ್ಪಷ್ಟನೆ ನೀಡಿದ್ದರು. ರಾಘವೇಂದ್ರ ಹಾಗೂ ಗುರು ಅವರನ್ನು ಟೀಕಿಸಿದ್ದರು. ಇದು ಗುರು ದೇಶಪಾಂಡೆಗೆ ನೋವು ತಂದಿದೆ. ‘ಕೃಷ್ಣ ಮೊದಲು ಹೀಗಿರಲಿಲ್ಲ. ದಿನಕ್ಕೆ ಅವರು ಒಂದು ಗಂಟೆ ಕರೆಮಾಡಿ ಮಾತನಾಡುತ್ತಿದ್ದರು. ಲವ್ ಮಾಕ್ಟೇಲ್ ಸಕ್ಸಸ್ ಸಿಕ್ಕಮೇಲೆ ಅವರು ಬದಲಾದರು’ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚಿನ್ನದ ದರ ಹಾವು-ಏಣಿ ಆಟದ ಮಧ್ಯೆ ಬೆಂಗಳೂರಿನಲ್ಲಿ ಅಕ್ಷಯ ತೃತೀಯಕ್ಕೆ ಈಗಲೇ ಗೋಲ್ಡ್ ಬುಕ್ಕಿಂಗ್ ಜೋರು! ಜ್ಯುವೆಲ್ಲರಿಗಳ ಕ್ಯೂ

ಬೆಂಗಳೂರು, ಮಾರ್ಚ್ 26: ಚಿನ್ನದ ದರದಲ್ಲಿ (Gold Price) ಏರಿಳಿತ ಮುಂದುವರಿದಿರುವ ನಡುವೆಯೇ ಬೆಂಗಳೂರು (Bangalore) ನಗರದಲ್ಲಿ ಬಂಗಾರ ಖರೀದಿ ಮತ್ತು ಬುಕ್ಕಿಂಗ್ ಜೋರಾಗಿದೆ. ಕೆಲ ತಿಂಗಳುಗಳ ಹಿಂದೆ ಗಗನಕ್ಕೇರಿದ್ದ ಚಿನ್ನದ ಬೆಲೆ ಜನಸಾಮಾನ್ಯರ ಕೈಗೆಟುಕದಂತೆ ಮಾಡಿತ್ತು. ನಂತರ ಏಕಾಏಕಿ ದರ ಕುಸಿತವಾಗಿತ್ತು. ಇದೀಗ ಮತ್ತೆ ತುಸು ಏರಿಕೆಯಾಗಿದ್ದರೂ, ಇತ್ತೀಚಿನ ದರ ಇಳಿಕೆ ಆಭರಣ ಪ್ರಿಯರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಅಲ್ಲದೆ, ಮತ್ತೆ ಚಿನ್ನದ ದರ ಅಕ್ಷಯ ತೃತೀಯದ ವೇಳೆಗೆ ಅತಿಯಾದ ಏರಿಕೆ ಕಂಡರೆ ಸಮಸ್ಯೆ ಆಗದಿರಲಿ ಎಂದು ಈಗಿನ ದರಕ್ಕೆ ಚಿನ್ನ ಬುಕ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈಗಿನ ದರಕ್ಕೆ ಕಾಯ್ದಿರಿಸಿ ಅಕ್ಷಯ ತೃತೀಯದಂದು (Akshaya Tritiya 2026) ಖರೀದಿ ಮಾಡುವುದು ಗ್ರಾಹಕರ ಪ್ಲಾನ್.

ಕಳೆದ ಕೆಲವು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಹಾವು-ಏಣಿ ಆಟ ನಡೆಯುತ್ತಿದ್ದು, ಗ್ರಾಹಕರಲ್ಲಿ ಗೊಂದಲವೂ ಮೂಡಿಸಿದೆ. ದರ ಇಳಿದಿದೆ ಎನ್ನುವ ನಿರೀಕ್ಷೆಯ ನಡುವೆ ಮತ್ತೆ ಏರಿಕೆಯಾಗುತ್ತಿರುವುದು ಖರೀದಿದಾರರಿಗೆ ತಲೆನೋವಾಗಿದ್ದರೂ, ‘ಇದೀಗ ಕಡಿಮೆ ಇದೆ, ಮುಂದೆ ಮತ್ತಷ್ಟು ಏರಬಹುದು’ ಎಂಬ ಭಾವನೆಯಿಂದ ಅನೇಕರು ಅಂಗಡಿಗಳತ್ತ ಮುಖ ಮಾಡುತ್ತಿದ್ದಾರೆ.

ಮಾರ್ಚ್ 25ರಂದು ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. 22 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ ಸುಮಾರು 345 ರೂ. ಏರಿಕೆಯಾಗಿದ್ದು, ಬೆಳ್ಳಿಯ ದರದಲ್ಲೂ ಪ್ರತಿ ಗ್ರಾಂಗೆ 20 ರೂ.ನಷ್ಟು ಹೆಚ್ಚಳವಾಗಿದೆ. ಕಳೆದ ಮೂರು ದಿನಗಳ ದರಗಳನ್ನು ಗಮನಿಸಿದರೆ, ಚಿನ್ನ ಮತ್ತು ಬೆಳ್ಳಿಯಲ್ಲಿ ನಿರಂತರ ಏರಿಳಿತ ಕಂಡುಬಂದಿದೆ.

ಕಳೆದ ಮೂರು ದಿನಗಳಲ್ಲಿ ಚಿನ್ನ ದರ ಏರಿಳಿಕೆ ವಿವರ

  • ಮಾರ್ಚ್ 23: ಚಿನ್ನ 12,635 ರೂ. (ಗ್ರಾಂಗೆ), ಸಂಜೆ 13,135 ರೂ., ಬೆಳ್ಳಿ 223 ರೂ.ನಿಂದ 231 ರೂ.
  • ಮಾರ್ಚ್ 24: ಚಿನ್ನ 12,865 ರೂ., ಸಂಜೆ 13,100 ರೂ., ಬೆಳ್ಳಿ 226 ರೂ.
  • ಮಾರ್ಚ್ 25: ಚಿನ್ನ 13,445 ರೂ., ಬೆಳ್ಳಿ 246 ರೂ.

ದರಗಳಲ್ಲಿ ಈ ರೀತಿಯ ಅಸ್ಥಿರತೆ ಇದ್ದರೂ, ಅಕ್ಷಯ ತೃತೀಯ ಹಬ್ಬದ ಹಿನ್ನೆಲೆಯಲ್ಲಿ ಈಗಲೇ ಚಿನ್ನ ಬುಕ್ಕಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇಂದಿನ ದರಕ್ಕೆ ಬಂಗಾರವನ್ನು ಬುಕ್ ಮಾಡಿಕೊಂಡು, ಹಬ್ಬದ ದಿನ ಖರೀದಿಸಲು ಗ್ರಾಹಕರು ಮುಂದಾಗುತ್ತಿದ್ದಾರೆ.

ಜ್ಯುವೆಲ್ಲರಿಗಳಲ್ಲಿ ಗ್ರಾಹಕರ ಸಂಖ್ಯೆ ಶೇ 50 ರಷ್ಟು ಹೆಚ್ಚಳ

ಜ್ಯುವೆಲ್ಲರಿ ಅಂಗಡಿಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ಗ್ರಾಹಕರ ಸಂಖ್ಯೆ ಶೇ 50ರಷ್ಟು ಹೆಚ್ಚಳವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಹಲವರು ಪೂರ್ಣ ಹಣ ಪಾವತಿಸಿ ಈಗಲೇ ಚಿನ್ನ ಕಾಯ್ದಿರಿಸುತ್ತಿದ್ದು, ಆರ್ಡರ್‌ಗಳೂ ಹೆಚ್ಚುತ್ತಿರುವುದಾಗಿ ಹೇಳಲಾಗುತ್ತಿದೆ.

ಇದನ್ನೂ ಓದಿ: Gold Rates: ಇಳಿಕೆಯ ಹಾದಿ ಬಿಟ್ಟ ಚಿನ್ನದ ಬೆಲೆ; ಇಲ್ಲಿದೆ ಇವತ್ತಿನ ದರಪಟ್ಟಿ

ಒಟ್ಟಾರೆ, ಚಿನ್ನದ ದರದ ಏರಿಳಿತ ನಡುವೆಯೇ ‘ಇದೀಗ ಇರುವ ದರವೇ ಸೂಕ್ತ’ ಎಂದು ಭಾವಿಸಿರುವ ಗ್ರಾಹಕರು ಖರೀದಿಗೆ ಮುಗಿಬಿದ್ದಿದ್ದಾರೆ. ಮುಂದಿನ ದಿನಗಳಲ್ಲಿ ದರ ಇಳಿಕೆಯಾಗುತ್ತದೆಯೋ ಅಥವಾ ಮತ್ತೆ ಏರಿಕೆಯಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಂಗ್ಲಾದೇಶದಲ್ಲಿ ನದಿಗೆ ಬಸ್ ಉರುಳಿ 23 ಜನ ಸಾವು; ತನಿಖೆಗೆ ಪ್ರಧಾನಿ ಆದೇಶ

ಢಾಕಾ, ಮಾರ್ಚ್ 26: ಬಾಂಗ್ಲಾದೇಶದಲ್ಲಿ ಸಾರಿಗೆ ದೋಣಿಯ ಮೇಲೆ ಹತ್ತಲು ಪ್ರಯತ್ನಿಸುತ್ತಿದ್ದ ಬಸ್ ಆಕಸ್ಮಿಕವಾಗಿ ನದಿಗೆ ಉರುಳಿ ಬಿದ್ದಿದೆ. ಇದರ ಪರಿಣಾಮವಾಗಿ 23 ಜನರು ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ. ನಿನ್ನೆ ಸಂಜೆ (ಬುಧವಾರ) ಬಾಂಗ್ಲಾದೇಶದ (Bangladesh) ನೈಋತ್ಯ ಜಿಲ್ಲೆಯ ರಾಜ್ಬರಿಯಲ್ಲಿ ದೌಲಾಡಿಯಾ ಟರ್ಮಿನಲ್‌ನಲ್ಲಿ ಈ ಅಪಘಾತ (Bus Accident) ಸಂಭವಿಸಿದೆ. ಬಸ್ ಆಯತಪ್ಪಿ ಪದ್ಮಾ ನದಿಗೆ ಉರುಳಿದೆ.

ಬುಧವಾರ ಸುಮಾರು 50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ರಾಜ್ಬರಿಯಿಂದ ಢಾಕಾದಿಂದ 128 ಕಿಲೋಮೀಟರ್ ದೂರದಲ್ಲಿರುವ ಢಾಕಾಗೆ ಪ್ರಯಾಣಿಸುತ್ತಿತ್ತು. ಬಸ್ ಸಾರಿಗೆ ದೋಣಿಯ ಮೇಲೆ ಹತ್ತುವಾಗ ಈ ಅಪಘಾತ ಸಂಭವಿಸಿದೆ. ಇದರಿಂದ ಬಸ್​​ನಲ್ಲಿದ್ದ ಪ್ರಯಾಣಿಕರು ನೀರಿಗೆ ಬಿದ್ದಿದ್ದಾರೆ. ತಕ್ಷಣ ಅಗ್ನಿಶಾಮಕ ಸೇವೆ ಮತ್ತು ಡೈವರ್‌ಗಳ ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಿ ಹಲವರನ್ನು ರಕ್ಷಿಸಿವೆ.

ಇದನ್ನೂ ಓದಿ: Video: ಡಬಲ್ ಡೆಕ್ಕರ್ ಬಸ್ ಪಲ್ಟಿ, ಇಬ್ಬರು ಸಾವು

ಬಸ್​​ ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನ 50 ಜನರನ್ನು ತುಂಬಿಸಿಕೊಂಡಿತ್ತು. ವಿಪರೀತ ಭಾರವಾಗಿ ಬಸ್​ ಆಯತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ರಕ್ಷಣಾ ಹಡಗು ಹಮ್ಜಾ ಈ ಘಟನೆ ನಡೆದ 6 ಗಂಟೆಗಳ ನಂತರ ನದಿಯಿಂದ ಬಸ್ ಅನ್ನು ಹೊರತೆಗೆದಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. ಹಡಗಿನ ಕ್ರೇನ್ ಬಳಸಿ ಇಡೀ ಬಸ್ ಅನ್ನು ಮೇಲಕ್ಕೆತ್ತಲಾಯಿತು.

ಈ ಘಟನೆಯ ಬಗ್ಗೆ ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ತನಿಖೆಗೆ ಆದೇಶಿಸಿದ್ದಾರೆ. ನದಿಗೆ ಬಿದ್ದ ಸುಮಾರು 11 ಪ್ರಯಾಣಿಕರು ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಹೆಚ್ಚಿನವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪ್ರತ್ಯಕ್ಷದರ್ಶಿಗಳು ಮತ್ತು ಅಧಿಕಾರಿಗಳ ಪ್ರಕಾರ, ಆ ಬಸ್​​ನಲ್ಲಿದ್ದ ಅನೇಕ ಪ್ರಯಾಣಿಕರು ಒಂದೇ ಕುಟುಂಬದ ಸದಸ್ಯರಾಗಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ಧುರಂಧರ್ 2’ ಚಿತ್ರದಲ್ಲಿ ಹೇಳಿದ್ದು ತಪ್ಪೆನಿಸಿದರೆ, ಅದರ ವಿರುದ್ಧ ನೀವು ಸಿನಿಮಾ ಮಾಡಿ’; ಆರ್​​ಜಿವಿ

ಆದಿತ್ಯ ಧಾರ್ ‘ಧುರಂಧರ್’ ಚಿತ್ರವನ್ನು ಬಿಡುಗಡೆ ಮಾಡಿದಾಗಿನಿಂದ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ಚಿತ್ರದ ಬಗ್ಗೆ ನಿರಂತರವಾಗಿ ಮಾತನಾಡುತ್ತಿದ್ದಾರೆ. ಆದಿತ್ಯ ಧಾರ್ ಅವರ ಕೆಲಸದಿಂದ ಅವರು ತುಂಬಾ ಪ್ರಭಾವಿತರಾಗಿದ್ದಾರೆ. ರಾಮ್ ಗೋಪಾಲ್ ವರ್ಮಾ (RGV) ಎಂದಿಗೂ ಧುರಂಧರ್ ಅನ್ನು ಹೊಗಳುವುದರಲ್ಲಿ ಆಯಾಸಗೊಂಡಿಲ್ಲ. ಧುರಂಧರ್ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಬದಲಾವಣೆಯನ್ನು ತರುತ್ತದೆ ಎಂದು ಅವರು ಹೇಳುತ್ತಿದ್ದಾರೆ. ‘ಧುರಂಧರ್ ದಿ ರಿವೆಂಜ್’ ಚಿತ್ರದ ವಿಮರ್ಶೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಚಲನಚಿತ್ರೋದ್ಯಮದಲ್ಲಿ ರಾಮ್ ಗೋಪಾಲ್ ವರ್ಮಾ ಮೊದಲಿಗರು. ಅವರ ಪ್ರಕಾರ, ಈ ಚಿತ್ರವು ಶೋಲೆಗಿಂತ ಹಲವು ಪಟ್ಟು ಉತ್ತಮವಾಗಿದೆ. ಈಗ ಚಿತ್ರವನ್ನು ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆಗಳು ಬರುತ್ತಿವೆ. ಅರ್ಧಕ್ಕಿಂತ ಹೆಚ್ಚು ಜನರು ಈ ಚಿತ್ರವನ್ನು ಅತ್ಯುತ್ತಮವೆಂದು ಕಂಡುಕೊಂಡಿದ್ದಾರೆ. ಇತರರು ಈ ಚಿತ್ರವನ್ನು ಪ್ರೊಪಗಾಂಡ ಚಿತ್ರವೆಂದು ಪರಿಗಣಿಸಿದ್ದಾರೆ.

‘ಧುರಂಧರ್ ದಿ ರಿವೆಂಜ್’ ಚಿತ್ರದಲ್ಲಿ ಮೋದಿ ಸರ್ಕಾರದ ನೋಟು ಅಮಾನ್ಯೀಕರಣದಿಂದ ಹಿಡಿದು ಭಯೋತ್ಪಾದನೆಯವರೆಗಿನ ಅನೇಕ ಘಟನೆಗಳನ್ನು ಉಲ್ಲೇಖಿಸಲಾಗಿದೆ. ಈ ಕಾರಣದಿಂದಾಗಿ, ಕೆಲವರು ಈ ಚಿತ್ರವನ್ನು ಪ್ರಚಾರದ ಸಿನಿಮಾ ಎಂದು ಕರೆಯುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಈಗ ರಾಮ್ ಗೋಪಾಲ್ ವರ್ಮಾ ಧುರಂಧರ್ 2 ಚಿತ್ರವನ್ನು ಪ್ರಚಾರ ಚಿತ್ರ ಎಂದು ಕರೆದಿದ್ದಕ್ಕೆ ಪ್ರತಿಕ್ರಿಯಿಸಿದ್ದಾರೆ.

‘ಪ್ರಚಾರದ ಸಿನಿಮಾ ಎಂಬ ಅರ್ಥ ನನಗೆ ಅರ್ಥವಾಗುತ್ತಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಅವರದ್ದೇ ಆದ ದೃಷ್ಟಿಕೋನವಿರುತ್ತದೆ. ಯಾರ ಮೇಲಾದರೂ ಆರೋಪ ಬಂದರೆ, ಸಮರ್ಥನೆ ನೀಡುವ ವ್ಯಕ್ತಿ ತಮ್ಮ ಪಕ್ಷದ ಪರವಾಗಿ ಮಾತನಾಡಲು ಪ್ರಯತ್ನಿಸುತ್ತಾನೆ’ ಎಂದು ರಾಮ್ ಗೋಪಾಲ್ ವರ್ಮಾ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡುತ್ತಾ ಹೇಳಿದರು.

‘ಪ್ರತಿಯೊಬ್ಬರೂ ತಮ್ಮದೇ ಆದ ಪಕ್ಷದ ಪರ ಮಾತನಾಡುತ್ತಾರೆ. ಆದಿತ್ಯ ಚಿತ್ರದ ಮೂಲಕ ತಮ್ಮ ದೃಷ್ಟಿಕೋನವನ್ನು ಮಂಡಿಸಿದ್ದಾರೆ. ಆದಿತ್ಯ ಹೇಳಿರುವುದನ್ನು ನೀವು ಒಪ್ಪದಿದ್ದರೆ, ಅದು ಸುಳ್ಳು ಎಂದು ನೀವು ಭಾವಿಸಿದರೆ, ನೀವು ಅದರ ವಿರುದ್ಧವೂ ಸಿನಿಮಾ ಮಾಡಿ’ ಎಂದು ರಾಮ್ ಗೋಪಾಲ್ ವರ್ಮಾ ಸ್ಪಷ್ಟವಾಗಿ ಹೇಳಿದರು.

ಇದನ್ನೂ ಓದಿ: ಚಿರಂಜೀವಿಗೆ ಕ್ಷಮಾಪಣೆ ಕೇಳಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

ರಾಮ್ ಗೋಪಾಲ್ ವರ್ಮಾ ಆದಿತ್ಯ ಧರ್ ಅವರಿಗೆ ಧನ್ಯವಾದ ಅರ್ಪಿಸಿದರು. ‘ಆದಿತ್ಯ ಧರ್ ಭಾರತೀಯ ಚಿತ್ರರಂಗಕ್ಕೆ ದಾರಿ ತೋರಿಸಿದ್ದಾರೆ. ಅವರ ಪ್ರಕಾರ, ಧುರಂಧರ್ ಅವರನ್ನು ಕೇವಲ ಒಂದು ಚಿತ್ರ ಎಂದು ಕರೆಯುವುದು ತಪ್ಪು. ಕಳೆದ 20-30 ವರ್ಷಗಳಲ್ಲಿ, ಈ ರೀತಿಯ ಯಾವುದೇ ಚಿತ್ರ ಬಂದಿಲ್ಲ. ಈ ಚಿತ್ರದ ಮೇಕಿಂಗ್ ಅದ್ಭುತವಾಗಿದೆ’ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇಂದಿನ ಹವಾಮಾನ: ಕರಾವಳಿಯಲ್ಲಿ ವರುಣನ ಅಬ್ಬರ, ಉತ್ತರ ಒಳನಾಡಲ್ಲಿ ಸುಡು ಬಿಸಿಲು

ಬೆಂಗಳೂರು, ಮಾರ್ಚ್​​ 26: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇಂದು ಬಿಸಿಲಿನ ವಾತಾವರಣ ಕಂಡುಬಂದರೂ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆ  ಅಂದಾಜಿಸಲಾಗಿದೆ. ಸಾಧಾರಾಣ ಅಥವಾ ಮಧ್ಯಮ ಮಟ್ಟದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಕೆಲವೆಡೆ ಗುಡುಗು-ಮಿಂಚಿನ ಆರ್ಭಟವೂ ಇರಲಿದೆ. ಒಳನಾಡು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಎಲ್ಲೆಲ್ಲಿ ಮಳೆ?

ಹವಾಮಾನ ಮುನ್ಸೂಚನೆ ಪ್ರಕಾರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇದರಿಂದ ತಾತ್ಕಾಲಿಕವಾಗಿ ಬಿಸಿಲಿನಿಂದ ನಿರಾಳತೆ ಸಿಗಲಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಭಾಗಗಳಲ್ಲಿ ಕೂಡ ಗುಡುಗು-ಮಿಂಚಿನೊಂದಿಗೆ ಗಾಳಿ ಜೋರಾಗಿ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ಕೆಲ ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರಿಯುವ ಮುನ್ಸೂಚನೆಯನ್ನೂ ನೀಡಲಾಗಿದೆ.

ಇದನ್ನೂ ಓದಿ:  ಬೆಳಗಾವಿ, ಹಾವೇರಿಯಲ್ಲಿ ಧಾರಾಕಾರ ಮಳೆ; ನದಿಯಂತಾದ ರಸ್ತೆಗಳು, ಬೈಕ್​ಗಳು ಮುಳುಗಡೆ

ಉತ್ತರ ಮತ್ತು ಒಳನಾಡಲ್ಲಿ ಬಿಸಿಲಿನ ತಾಪ

ಉತ್ತರ ಒಳನಾಡು ಭಾಗದಲ್ಲಿ ಬಿಸಿಲಿನ ತಾಪ ಮುಂದುವರಿಯಲಿದೆ. ದಿನದ ತಾಪಮಾನವು ಸುಮಾರು 32°C ರಿಂದ 36°C ನಡುವೆ ದಾಖಲಾಗಲಿದೆ. ಬೆಂಗಳೂರು ನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ ತಾಪಮಾನವು 32–33°C ರವರೆಗೆ ಏರಬಹುದು. ತೇವಾಂಶ ಮಟ್ಟವು ಮಧ್ಯಮ ಮಟ್ಟದಲ್ಲೇ ಇರಲಿದೆ.

ಹವಾಮಾನ ತಜ್ಞರ ಪ್ರಕಾರ, ಸ್ಥಳೀಯ ಹವಾಮಾನ ವ್ಯವಸ್ಥೆಗಳು ಮತ್ತು ಋತು ಬದಲಾವಣೆಯ ಪರಿಣಾಮವಾಗಿ ಈ ರೀತಿಯ ಮಿಶ್ರ ಹವಾಮಾನ ಕಂಡುಬರುತ್ತಿದೆ. ಕೆಲ ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಾಗುತ್ತಿದ್ದರೆ, ಇತರ ಕಡೆಗಳಲ್ಲಿ ಬಿಸಿಲು ತೀವ್ರವಾಗಿದೆ. ದೇಶದ ವಿವಿಧ ಭಾಗಗಳಲ್ಲಿಯೂ ಇದೇ ರೀತಿಯ ಗಾಳಿ-ಮಳೆಯ ಅಸ್ಥಿರತೆ ಕಾಣಿಸಿಕೊಳ್ಳುತ್ತಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಸ್ಟೇಜ್​ ಮೇಲೆ ನಿಲ್ಲಿಸಿ, ನನ್ನ ಕೈಗೆ ಮೈಕ್ ಕೊಡೋದು ನಿಜಕ್ಕೂ ಡೇಂಜರಸ್’; ರಣವೀರ್ ಸಿಂಗ್

ರಣವೀರ್ ಸಿಂಗ್ ಅವರು (Ranveer Singh) ಇತ್ತೀಚೆಗೆ ಸುದ್ದಿ ಆಗಿದ್ದಾರೆ. ಅದಕ್ಕೆ ಕಾರಣ ಆಗಿರೋದು ಅವರು ನಡೆದುಕೊಂಡ ರೀತಿ. ರಣವೀರ್ ಸಿಂಗ್ ಅವರು ಗೋವಾ ಫಿಲ್ಮ್ ಫೆಸ್ಟಿವಲ್​​ನಲ್ಲಿ ಬಾಯಿಗೆ ಬಂದಂತೆ ಮಾತನಾಡಿದ್ದು, ನಡೆದುಕೊಂಡಿದ್ದು ಗೊತ್ತೇ ಇದೆ. ಈ ವಿಷಯ ಚರ್ಚೆ ಹುಟ್ಟುಹಾಕಿತ್ತು. ದೈವ ಅನುಕರಿಸಿ ಟೀಕೆಗೆ ಒಳಗಾದರು. ಈ ವಿಡಿಯೋ ಈಗಲೂ ವೈರಲ್ ಆಗುತ್ತದೆ ಮತ್ತು ಪ್ರಕರಣ ಇನ್ನೂ ಜಾರಿಯಲ್ಲಿದೆ. ಹೀಗಿರುವಾಗಲೇ ಅವರ ಹಳೆಯ ವಿಡಿಯೋ ವೈರಲ್ ಆಗಿದ್ದು, ಟೀಕೆ ಎದುರಿಸಿದ್ದಾರೆ.

ರಣವೀರ್ ಸಿಂಗ್ ಅವರು ಈ ಮೊದಲು ವೇದಿಕೆ ಮೇಲೆ ಮಾತನಾಡಿದ್ದರು. ಈ ವೇದಿಕೆ ಮೇಲೆ ಮಾತನಾಡುವಾಗ ಅವರು ಒಂದು ವಿಷಯವನ್ನು ಹೇಳಿದ್ದರು. ಅನಿರುದ್ಧ್ ಅವರು ಅದ್ಭುತ ಮ್ಯೂಸಿಕ್ ನೀಡುತ್ತಾರೆ. ಈ ವಿಷಯವಾಗಿ ಮಾತನಾಡುವಾಗ, ‘ನನ್ನ ಸಿನಿಮಾಗೆ ಅನಿರುದ್ಧ್ ಸಂಗೀತ ಸಂಯೋಜನೆ ಮಾಡೋದು ಯಾವಾಗ’ ಎಂದು ಕೇಳಿದ್ದರು. ಚೆನ್ನೈಗೆ ಬರುತ್ತೇನೆ ರ್ಯಾಪ್ ಸಾಂಗ್ ಮಾಡೋಣ ಎಂದು ಕೂಡ ಹೇಳಿದ್ದರು.

ಆ ಮೇಲೆ ಅವರು ನಿರಂತರವಾಗಿ ಮಾತನಾಡಲು ಆರಂಭಿಸಿದರು. ಆ ಬಳಿಕ ಅವರಿಗೆ ಏನನ್ನಿಸಿತೋ ಏನೋ, ‘ವೇದಿಕೆ ಮೇಲೆ ನಿಲ್ಲಿಸಿ, ನನ್ನ ಕೈಗೆ ಮೈಕ್ ಕೊಡೋದು ಅತ್ಯಂತ ಡೇಂಜರಸ್ ಕೆಲಸ’ ಎಂದು ರಣವೀರ್ ಸಿಂಗ್ ಈ ಮೊದಲೇ ಹೇಳಿದ್ದರು. ಅದು ನಿಜವಾಗಿ ಹೋಗಿದೆ ಎಂದೇ ಹೇಳಬಹುದು.

ಇದನ್ನೂ ಓದಿ: ಚಾವುಂಡಿ ದೇವಾಲಯದಲ್ಲಿ ರಣವೀರ್ ಸಿಂಗ್ ಕ್ಷಮೆ ಕೇಳಬೇಕು: ದೂರುದಾರರ ಒತ್ತಾಯ

ಗೋವಾ ಫಿಲ್ಮ್​ ಫೆಸ್ಟಿವಲ್​​​ನಲ್ಲಿ ರಣವೀರ್ ಸಿಂಗ್ ಅವರು ಮಾತನಾಡುವಾಗ ಅವರೇ ತೊಂದರೆ ಮಾಡಿಕೊಂಡಿದ್ದರು. ದೈವದ ಬಗ್ಗೆ ಕೀಳಾಗಿ ಮಾತನಾಡಿ ಟೀಕೆ ಎದುರಿಸಿದ್ದರು. ಇದು ನಿರಂತರವಾಗಿ ನಡೆದೇ ಇದೆ. ಈ ವಿಷಯದಲ್ಲಿ ಅವರು ಸಾಕಷ್ಟು ಟೀಕೆ ಎದುರಿಸಬೇಕಾಯಿತು. ರಣವೀರ್ ಸಿಂಗ್ ಅವರ ಮೇಲೆ ಈಗಲೂ ಕೇಸ್ ನಡೆಯುತ್ತಿದೆ. ಈ ಕೇಸ್​​ನಿಂದ ಅವರು ಯಾವಾಗ ಮುಕ್ತಿ ಪಡೆಯುತ್ತಾರೋ ಗೊತ್ತಿಲ್ಲ. ಅವರ ನಟನೆಯ ‘ಧುರಂದರ್ 2’ ಸಿನಿಮಾ ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡಿ ದೊಡ್ಡ ಯಶಸ್ಸು ಕಂಡಿದೆ. ಈ ಚಿತ್ರ ಎಷ್ಟು ಗಳಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರೆಸ್​ಕಾನ್ಫರೆನ್ಸ್ ನಡೆಯುವಾಗಲೇ ಹೂಸು ಬಿಟ್ಟ ರಿಜ್ವಾನ್; ಸಿಟ್ಟಾದ ವಾರ್ನರ್​ ಹೇಳಿದ್ದೇನು?

ಪಾಕಿಸ್ತಾನ್ ಸೂಪರ್ ಲೀಗ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದಿನಿಂದ (ಮಾರ್ಚ್ 26) ಪಂದ್ಯಗಳು ಆರಂಭ ಆಗಲಿವೆ. ಅದಕ್ಕೂ ಮೊದಲು ಪಂದ್ಯದ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ನಡೆಸಿಲಾಯಿತು. ಈ ವೇಳೆ ಡೇವಿಡ್ ವಾರ್ನರ್​ ಮೊದಲಾದವರು ಇದ್ದರು. ಆಗ ರಿಜ್ವಾನ್ ಜೋರಾಗಿಯೇ ಹೂಸು ಬಿಟ್ಟಿದ್ದಾರೆ. ಇದನ್ನು ನೋಡಿ ಅಲ್ಲಿದ್ದವರು ನಕ್ಕಿದ್ದಾರೆ. ಇದಕ್ಕೆ ಡೇವಿಡ್ ವಾರ್ನರ್ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಪಾಕಿಸ್ತಾನ ಸೂಪರ್ ಲೀಗ್ಸ್​ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ಕರೆಯಲಾಗಿತ್ತು. ಪತ್ರಕರ್ತರು ಪ್ರಶ್ನೆ ಕೇಳುವಾಗಲೇ ಉಳಿದ ತಂಡದ ಕ್ಯಾಪ್ಟನ್ಸ್ ತಮ್ಮ ಪಾಡಿಗೆ ತಾವು ಚರ್ಚೆ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ರಿಜ್ವಾನ್ (ವಿಡಿಯೋದಲ್ಲಿ 33-34 ಸೆಕೆಂಡ್​​) ಹೂಸು ಬಿಟ್ಟಿದ್ದಾರೆ. ಆಗ ಉಳಿದವರು ನಕ್ಕಿದ್ದಾರೆ. ಡೇವಿಡ್ ವಾರ್ನರ್ ತಮ್ಮ ಪಾಡಿಗೆ ತಾವು ಕೂಲ್ ಆಗಿ ಸುದ್ದಿಗೋಷ್ಠಿಯಲ್ಲಿ ಎಲ್ಲವನ್ನೂ ವಿವರಿಸುತ್ತಿದ್ದರು. ಆದರೆ, ಉಳಿದವರು ನಗುತ್ತಾ ಡಿಸ್ಟರ್ಬ್ ಮಾಡಿದ್ದು ಡೇವಿಡ್ ವಾರ್ನರ್​​ಗೆ ಇಷ್ಟ ಆಗಿಲ್ಲ.

ಇದನ್ನೂ ಓದಿ: ನೀನು ಬ್ಯಾಟಿಂಗ್ ಮಾಡಿದ್ದು ಸಾಕು ಬಾ; ಮೊಹಮ್ಮದ್ ರಿಜ್ವಾನ್​ಗೆ ಲೈವ್ ಪಂದ್ಯದಲ್ಲೇ ಅವಮಾನ

ಈ ವಿಷಯವಾಗಿ ಡೇವಿಡ್ ವಾರ್ನರ್ ತಿರುಗೇಟು ಕೊಟ್ಟರು. ‘ಏನಾಯ್ತು ಜಂಟಲಮೆನ್ಸ್? ಕ್ಷಮಿಸಿ, ಇಲ್ಲಿ ಕೆಲವು ಶಾಲಾ ಮಕ್ಕಳಿದ್ದಾರೆ’ ಎಂದು ವಾರ್ನರ್ ಹೇಳಿದರು. ವಾರ್ನರ್ ಹಲವು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದವರು. ಎಲ್ಲಿ ಹೇಗೆ ಇರಬೇಕು ಎಂಬುದು ಸರಿಯಾಗಿ ತಿಳಿದಿದೆ. ಫೀಲ್ಡ್​​ನಲ್ಲಿ ಅವರು ಫನ್ ಮಾಡುತ್ತಾರೆ ನಿಜ. ಆದರೆ, ಸುದ್ದಿಗೋಷ್ಠಿಗಳಲ್ಲಿ ಅವರಿಗೆ ಹೇಗೆ ಇರಬೇಕು ಎನ್ನುವ ವಿಷಯ ಗೊತ್ತಿದೆ. ಹೀಗಾಗಿ, ಅವರು ಸುದ್ದಿಗೋಷ್ಠಿಯಲ್ಲಿ ಗಂಭಿರವಾಗಿ ನಡೆದುಕೊಂಡಿದ್ದಾರೆ.

ಇನ್ನು, ರಿಜ್ವಾನ್ ಹೂಸು ಕೊಟ್ಟ ವಿಷಯ ಸಾಕಷ್ಟು ಟ್ರೋಲ್ ಆಗುತ್ತಿದೆ. ಅವರನ್ನು ಎಲ್ಲರೂ ಟೀಕೆ ಮಾಡುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲೂ ಅದನ್ನು ತಡೆದುಕೊಳ್ಳಲು ಸಾಧ್ಯವಾಗಿಲ್ಲವೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಡೇವಿಡ್ ವಾರ್ನರ್ ಅವರು ಕರಾಚಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ವಾರ್ನರ್ ಕಳೆದ ಸೀಸನ್​ ಅಲ್ಲಿ 368 ರನ್ ಪೇರಿಸಲು ಮಾತ್ರ ಶಕ್ಯವಾಗಿದ್ದರು.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹುಬ್ಬಳ್ಳಿಯಲ್ಲಿ ಯುದ್ಧ ವಿಮಾನಗಳ ಭೀಕರ ಘರ್ಜನೆ! ಬೆಚ್ಚಿಬಿದ್ದ ಜನರಿಗೆ ಕೊನೆಗೂ ಸಿಕ್ಕಿತು ಅಸಲಿ ಉತ್ತರ: ವಿಡಿಯೋ ನೋಡಿ

ಹುಬ್ಬಳ್ಳಿ, ಮಾರ್ಚ್​ 26: ಹುಬ್ಬಳ್ಳಿ ನಗರದಲ್ಲಿ ಬುಧವಾರ ಅಚಾನಕ್ಕಾಗಿ ಕಾಣಿಸಿಕೊಂಡ ಮೂರು ಯುದ್ಧ ವಿಮಾನಗಳು ಕೆಲಕಾಲ ಜನರಲ್ಲಿ ಆತಂಕ ಸೃಷ್ಟಿಸಿದವು. ಮಾರ್ಚ್ 25 ರ ಸಂಜೆ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿದ ಈ ವಿಮಾನಗಳನ್ನು ನೋಡಿದ ಜನರು, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆ ಗಾಬರಿಗೊಂಡರು. ಕೆಲ ಹೊತ್ತು ಹುಬ್ಬಳ್ಳಿ ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದರೂ, ನಂತರ ಇದು ಕೇವಲ ಪ್ರಾಯೋಗಿಕ ಹಾರಾಟ (training sortie) ಎಂಬುದು ಸ್ಪಷ್ಟವಾಗಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶ್ ಕುಮಾರ್ ಅವರು ನೀಡಿದ ಮಾಹಿತಿಯಂತೆ, ಈ ಮೂರು ಯುದ್ಧ ವಿಮಾನಗಳು ಗೋವಾ ವಿಮಾನ ನಿಲ್ದಾಣದಿಂದ ಟೇಕ್‌ಆಫ್ ಆಗಿ, ನಿಯಮಿತವಾಗಿ ನಡೆಯುವ ತರಬೇತಿ ಹಾರಾಟದ ಭಾಗವಾಗಿ ಹುಬ್ಬಳ್ಳಿ ಆಕಾಶದಲ್ಲಿ ಸಂಚರಿಸಿದ್ದವು. ಇಂತಹ ಪ್ರಾಯೋಗಿಕ ಹಾರಾಟಗಳು ಸಾಮಾನ್ಯವಾಗಿ ಎರಡು ತಿಂಗಳಿಗೆ ಒಮ್ಮೆ ನಡೆಯುತ್ತವೆ. ಜನರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ವಾರಕ್ಕೆ ‘ಧುರಂಧರ್ 2’ ಸಾವಿರ ಕೋಟಿ ಕಲೆಕ್ಷನ್; ಆದರೂ ಮುರಿಯೋಕೆ ಆಗಿಲ್ಲ ಒಂದು ದಾಖಲೆ

ಒಂದು ವಾರಕ್ಕೆ ನೂರು ಕೋಟಿ ರೂಪಾಯಿ ಗಳಿಕೆ ಆದರೆ ದೊಡ್ಡದು ಎನ್ನುವ ಪರಿಸ್ಥಿತಿ ಈಗ ಇದೆ. ಯಾರೂ ಸಿನಿಮಾ ನೋಡಲು ಥಿಯೇಟರ್​​ಗೆ ಬರುತ್ತಿಲ್ಲ ಎಂಬ ಆರೋಪ ಜೋರಾಗಿರುವ ಈ ಸಂದರ್ಭದಲ್ಲಿ ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ (Dhurandhar 2) ಒಂದೇ ವಾರಕ್ಕೆ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆದರೂ ಅತಿ ವೇಗದಲ್ಲಿ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿದ ಸಿನಿಮಾ ಎಂಬ ದಾಖಲೆಯನ್ನು ಮುರಿಯೋಕೆ ಸಾಧ್ಯವಾಗಿಲ್ಲ.

‘ಧುರಂಧರ್ 2’ ಚಿತ್ರ ಅಬ್ಬರಿಸುತ್ತಿದೆ. ಮೊದಲ ವಾರದಲ್ಲಿ ಈ ಚಿತ್ರ ಎಲ್ಲ ಕಡೆಗಳಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಹಿಂದಿ ಮಾತ್ರವಲ್ಲದೆ, ತೆಲುಗು ಭಾಷೆಯಲ್ಲೂ ಚಿತ್ರ ಉತ್ತಮ ರೀತಿಯಲ್ಲಿ ಗಳಿಕೆ ಮಾಡುತ್ತಿದೆ. ಇದರಿಂದ ಸಿನಿಮಾ ಒಂದು ವಾರಕ್ಕೆ 1,006 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಅತಿ ವೇಗದಲ್ಲಿ ಗಳಿಕೆ ಮಾಡಿದ ಎರಡನೇ ಸಿನಿಮಾ ಆಗಿ ಇದು ಹೊರಹೊಮ್ಮಿದೆ.

ಅತಿ ವೇಗದಲ್ಲಿ ಸಾವಿರ ಕ್ಲಬ್ ಸೇರಿದ ದಾಖಲೆ ‘ಪುಷ್ಪ 2’ ಬಳಿ ಇದೆ. ಈ ಚಿತ್ರ ಏಳು ದಿನಗಳಲ್ಲಿ ಬರೋಬ್ಬರಿ 1067 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಅಲ್ಲು ಅರ್ಜುನ್ ಸಿನಿಮಾ ಮಾಡಿದ ದಾಖಲೆಯನ್ನು ಮುರಿಯಲು ‘ಪುಷ್ಪ 2’ ಬಳಿ ಇನ್ನೂ ಸಾಧ್ಯವಾಗಿಲ್ಲ. ಒಟ್ಟಾರೆ ಗಳಿಕೆ ವಿಷಯದಲ್ಲಿ ‘ಧುರಂಧರ್ 2’ ಚಿತ್ರವು ‘ಪುಷ್ಪ 2’ ಚಿತ್ರದ ದಾಖಲೆಯನ್ನು ಮುರಿಯುತ್ತದೆಯೇ ಎಂಬುದು ಸದ್ಯದ ಕುತೂಹಲ.

ಇದನ್ನೂ ಓದಿ: ‘ಧುರಂಧರ್ 2’ ಅಬ್ಬರಕ್ಕೆ ಹೆದರಿದ ಅಕ್ಷಯ್ ಕುಮಾರ್? ‘ಭೂತ್ ಬಂಗ್ಲ’ ಬಿಡುಗಡೆ ಮುಂದೂಡಿಕೆ ಸಾಧ್ಯತೆ

‘ಧುರಂಧರ್ 2’ ಸಿನಿಮಾ ಬುಧವಾರ (ಮಾರ್ಚ್ 25) 47 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಚಿತ್ರದ ಹೆಚ್ಚುಗಾರಿಕೆ. ವಾರದ ದಿನವೂ ಸಿನಿಮಾ ಅಬ್ಬರಿಸುತ್ತಿರುವುದು ವಿಶೇಷ. ಈ ವಾರಾಂತ್ಯದಲ್ಲಿ ಸಿನಿಮಾ ಪ್ರತಿ ದಿನ 100 ಕೋಟಿ ರೂಪಾಯಿ ಗಳಿಕೆ ಮಾಡುವ ನಿರೀಕ್ಷೆ ಇದೆ. ವೀಕೆಂಡ್ ಶೋಗಳು ಈಗಲೇ ಹೌಸ್​​​ಪುಲ್ ಪ್ರದರ್ಶನ ಕಾಣುತ್ತಾ ಇವೆ. ರಣವೀರ್ ಸಿಂಗ್ ಅವರು ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

7 ವರ್ಷಗಳ ಬಳಿಕ ಇರಾನ್​ನಿಂದ ಭಾರತ ಗ್ಯಾಸ್ ಖರೀದಿ: ಮಂಗಳೂರಿಗೆ ಬರಲಿದೆ LPG ಹೊತ್ತ ಹಡಗು!

ನವದೆಹಲಿ/ಬೆಂಗಳೂರು, ಮಾರ್ಚ್ 26: ಏಳು ವರ್ಷಗಳ ಸುದೀರ್ಘ ಅಂತರದ ನಂತರ ಭಾರತವು ಇರಾನ್‌ನಿಂದ ಎಲ್​ಪಿಜಿ ಅನಿಲವನ್ನು ಖರೀದಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಭಾರತ 2019ರಲ್ಲಿ ಕೊನೆಯ ಬಾರಿಗೆ ಇರಾನ್‌ನಿಂದ ಅನಿಲ ಖರೀದಿಸಿತ್ತು. ಇದೀಗ ಅಮೆರಿಕದ ನಿರ್ಬಂಧಗಳ ತಾತ್ಕಾಲಿಕ ತೆರವು ಹಿನ್ನೆಲೆಯಲ್ಲಿ ಎಲ್​​ಪಿಜಿ ಖರೀದಿ ನಿರ್ಧಾರಕ್ಕೆ ಬಂದಿದೆ. ದೇಶದಲ್ಲಿ ಎದುರಾಗಿರುವ LPG ಗ್ಯಾಸ್ ಸಮಸ್ಯೆ ಮತ್ತು ಕಚ್ಚಾ ತೈಲ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಭಾರತವು ಹಗಲಿರುಳು ಪ್ರಯತ್ನಗಳನ್ನು ನಡೆಸುತ್ತಿದೆ. ಇದರ ಭಾಗವಾಗಿ, ಇರಾನ್‌ನ ವಿದೇಶಾಂಗ ಇಲಾಖೆ ಮತ್ತು ಅಲ್ಲಿನ ಮುಖ್ಯಸ್ಥರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಭಾರತ ಸರ್ಕಾರವು ಇರಾನ್ ಸರ್ಕಾರದೊಂದಿಗೆ ಈ ಕುರಿತು ನಿರಂತರ ಮಾತುಕತೆ ನಡೆಸುತ್ತಿದ್ದು, ಏಳು ವರ್ಷಗಳ ನಂತರ ಇರಾನ್‌ನಿಂದ LPG ಗ್ಯಾಸ್ ಖರೀದಿ ಮಾಡಿಕೊಳ್ಳಲು ಸಿದ್ಧತೆಗಳು ನಡೆಯುತ್ತಿವೆ. ಮತ್ತೊಂದು ಮೂಲಗಳ ಪ್ರಕಾರ, ಇರಾನ್​ನಿಂದ ಎಲ್​​ಪಿಜಿ ತುಂಬಿಕೊಂಡ ಹಡಗು ಈಗಾಗಲೇ ಹೊರಟಿದ್ದು, ಶೀಘ್ರದಲ್ಲೇ ಮಂಗಳೂರು ಬಂದರು ತಲುಪಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link