ನವದೆಹಲಿ, ಮಾರ್ಚ್ 24: ನಾನು ಕಾಂಗ್ರೆಸ್ಸಿಗನಾಗಿ ಹುಟ್ಟಿದ್ದೇನೆ, ಕಾಂಗ್ರೆಸ್ಸಿಗನಾಗೇ ಸಾಯುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಟಿವಿ9 ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಶೃಂಗಸಭೆಯಲ್ಲಿ ಮಾತನಾಡಿದ ಅವರು, ನಾನು ವಿದ್ಯಾರ್ಥಿಯಾಗಿದ್ದಾಗಲೇ ರಾಜಕೀಯಕ್ಕೆ ಬಂದವನು. ಎದುರಾಳಿಗಳ ಅಜೆಂಡಾ ಏನೆಂದು ನನಗೆ ಚೆನ್ನಾಗಿ ಗೊತ್ತಿದೆ. ನನ್ನ ಪರ ಯಾರೂ ಮಾತನಾಡುವ ಅಗತ್ಯವಿಲ್ಲ. ನನ್ನ ಪರವಾಗಿ 140 ಶಾಸಕರು ಇದ್ದಾರೆ. ಬೆಂಗಳೂರು, ಕರ್ನಾಟಕ ರಾಜ್ಯದಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ ಎಂದು ಹೇಳಿದ್ದಾರೆ.
ಕ್ರೆಡಿಟ್ ಕಾರ್ಡ್ನಲ್ಲಿ ಶಾಪಿಂಗ್ ಮಾಡಿ ಅಭ್ಯಾಸ ಇದ್ದವರಲ್ಲಿ ಹೆಚ್ಚಿನವರು ಇಎಂಐ ಆಯ್ಕೆಗಳನ್ನು ಬಳಸಿರುತ್ತಾರೆ, ಅಥವಾ ಅದರ ಬಗ್ಗೆ ಗೊತ್ತಿರುತ್ತದೆ. ಅಧಿಕ ಮೌಲ್ಯದ ವಸ್ತುವನ್ನು ಖರೀದಿಸಿದಾಗ ಮುಂದಿನ ಬಿಲ್ನಲ್ಲಿ ಅಷ್ಟೂ ಹಣ ಕಟ್ಟಲಾಗದಿದ್ದರೆ, ಜನರು ಸುಲಭವೆನಿಸುವ ಇಎಂಐ ಅವಕಾಶವನ್ನು ಬಳಸಿಕೊಳ್ಳುತ್ತಾರೆ. ಅದರಲ್ಲೂ ನೋ ಕಾಸ್ಟ್ ಅಥವಾ ಝೀರೋ ಕಾಸ್ಟ್ ಇಎಂಐ ತಲೆಬರಹ ನೋಡಿ ಮಾರುಹೋಗುವುದುಂಟು. ಈ ಕ್ರೆಡಿಟ್ ಕಾರ್ಡ್ ಇಎಂಐ ಮೇಲ್ನೋಟಕ್ಕೆ ಕಾಣುವಷ್ಟು ಸರಳವಿಲ್ಲ.
ನೀವು 80,000 ರೂ ಮೊತ್ತದ ವಾಷಿಂಗ್ ಮೆಷೀನ್ ಶಾಪಿಂಗ್ ಮಾಡುತ್ತೀರಿ. ಅದಕ್ಕೆ 12 ಕಂತುಗಳಲ್ಲಿ ಕಟ್ಟುವ ಆಯ್ಕೆಯನ್ನು ಅಂಗಡಿಯವರು ನಿಮಗೆ ನೀಡುತ್ತಾರೆ. 7,900 ರೂಗಳ 12 ಇಎಂಐಗಳಲ್ಲಿ ಕಟ್ಟುವ ಆಫರ್ ಇರುತ್ತದೆ. ಒಮ್ಮೆಗೆ 80,000 ರೂ ಕಟ್ಟುವುದಕ್ಕಿಂತ ತಿಂಗಳಿಗೆ 7,900 ರೂ ಕಟ್ಟುವುದು ಸುಲಭ ಎನಿಸುತ್ತದೆ. ಆದರೆ, ಯಾರೂ ಕೂಡ ಈ ಇಎಂಐಗಳ ಹಿಂದಿನ ಮರ್ಮ ತಿಳಿದಿರುವುದಿಲ್ಲ.
ಇಎಂಐ = ಸಾಲ
ನಿಮ್ಮ ಖರೀದಿಯನ್ನು ಇಎಂಐಗಳಾಗಿ ಪರಿವರ್ತಿಸಿದಾಗ ಅದು ಸಾಲ ಎನಿಸುತ್ತದೆ. ಹಣಕಾಸು ಸಂಸ್ಥೆ ಅಷ್ಟು ಮೊತ್ತದ ಸಾಲವನ್ನು ನಿಮಗೆ ಕೊಟ್ಟಿದೆ ಎಂದರ್ಥ. ಪರ್ಸನಲ್ ಲೋನ್ಗೆ ಇರುವಷ್ಟು ಬಡ್ಡಿದರ ಅನ್ವಯ ಆಗುತ್ತದೆ. ಶೇ. 12ರಿಂದ 24ರಷ್ಟು ವಾರ್ಷಿಕ ಬಡ್ಡಿದರ ಇರಬಹುದು. ಇದರ ಜೊತೆಗೆ ಪ್ರೋಸಸಿಂಗ್ ಫೀ, ಜಿಎಸ್ಟಿ ಇತ್ಯಾದಿ ಇತರೆ ಶುಲ್ಕಗಳು ಸೇರ್ಪಡೆಯಾಗುತ್ತದೆ. ನಿಮ್ಮ 80,000 ರೂ ವಾಷಿಂಗ್ ಮೆಷೀನ್ಗೆ ನೀವು ಒಂದು ವರ್ಷದ ಅಂತರದಲ್ಲಿ ಒಂದು ಲಕ್ಷ ರೂ ಆದರೂ ಪಾವತಿಸಿರಬಹುದು. ನಿಮ್ಮ ಗಮನಕ್ಕೂ ಅದು ಬಂದಿರುವುದಿಲ್ಲ.
ಜಿಎಸ್ಟಿ: ಬಡ್ಡಿಹಣ ಹಾಗೂ ಪ್ರೋಸಸಿಂಗ್ ಫೀ ಮೇಲೆ ಶೇ. 18ರಷ್ಟು ತೆರಿಗೆ
ಮುಂಗಡ ಪಾವತಿ ಶುಲ್ಕ: ಬಾಕಿ ಇರುವ ಮೊತ್ತದ ಶೇ. 1-5ರಷ್ಟು
ಕ್ಯಾಷ್ಬ್ಯಾಕ್ ನಷ್ಟ: ಇಎಂಐಗೆ ಪರಿವರ್ತಿಸಿದಾಗ ಕ್ಯಾಷ್ಬ್ಯಾಕ್ ಅಥವಾ ರಿವರ್ಡ್ ಪಾಯಿಂಟ್ಸ್ ಅನ್ವಯ ಆಗುವುದಿಲ್ಲ.
ಮರ್ಚಂಟ್ ಡಿಸ್ಕಂಟ್ ನಷ್ಟ: ವರ್ತಕರಿಂದ ಸಿಗಬಹುದಾದ ಡಿಸ್ಕೌಂಟ್ ಅಥವಾ ರಿಯಾಯಿತಿಯು ಅನ್ವಯ ಆಗುವುದಿಲ್ಲ.
ನೀವು ಒಮ್ಮೆ ಇಎಂಐ ಆಯ್ಕೆ ಆರಿಸಿಕೊಂಡರೆ, ಅಷ್ಟು ಕಂತುಗಳನ್ನು ಕಟ್ಟಬೇಕು. ಮುಂಗಡವಾಗಿ ಕೆಲ ಕಂತುಗಳನ್ನು ಕಟ್ಟುತ್ತೇನೆಂದರೆ, ಅಥವಾ ಮುಂಗಡವಾಗಿ ಪೂರ್ಣ ಹಣ ಕಟ್ಟುತ್ತೇನೆಂದರೆ ಶೇ. 5ರವರೆಗಿನ ಬಾಕಿ ಹಣವನ್ನು ದಂಡವಾಗಿ ತೆರಬೇಕು. ಕ್ರೆಡಿಟ್ ಕಾರ್ಡ್ ಮೂಲಕ ಶಾಪಿಂಗ್ ಮಾಡಿದಾಗ ರಿವಾರ್ಡ್ ಪಾಯಿಂಟ್, ಕ್ಯಾಷ್ಬ್ಯಾಕ್ ಇತ್ಯಾದಿ ಸಿಗುತ್ತವೆ. ಆದರೆ, ಇಎಂಐಗೆ ಪರಿವರ್ತಿಸಿದಾಗ ಈ ಸೌಲಭ್ಯ ಅನ್ವಯ ಆಗುವುದಿಲ್ಲ. ಇನ್ನು, ವರ್ತಕರು ತಮ್ಮ ಅಂಗಡಿಗಳಲ್ಲಿ ಡಿಸ್ಕೌಂಟ್ ಸೇಲ್ಗೆ ಇಟ್ಟಾಗ, ನೀವು ಇಎಂಐ ಆಯ್ಕೆ ಮಾಡಿಕೊಂಡಾಗ ಆ ಡಿಸ್ಕೌಂಟ್ ಸಿಗದೇ ಹೋಗಬಹುದು.
ಅಂಗಡಿಗಳಲ್ಲಿ ಕೆಲ ವಸ್ತುಗಳ ಖರೀದಿಗೆ ಝೀರೋ ಕಾಸ್ಟ್ ಇಎಂಐ ಆಫರ್ ಇರುವುದನ್ನು ನೋಡಿ, ಬಡ್ಡಿರಹಿತವಾಗಿ ಕಂತುಗಳನ್ನು ಕಟ್ಟಬಹುದು ಎಂದೇ ಬಹಳ ಜನರು ಭಾವಿಸುತ್ತಾರೆ. ಜನರಿಗೆ ತಿಳಿಯದ ಸಂಗತಿ ಎಂದರೆ, ಅಂಗಡಿಗಳು ಕೆಲ ಉತ್ಪನ್ನಗಳಿಗೆ ಡಿಸ್ಕೌಂಟ್ ಕೊಟ್ಟಿರುತ್ತವೆ. ಅದರ ಜೊತೆಗೆ ಝೀರೋ ಕಾಸ್ಟ್ ಇಎಂಐ ಆಯ್ಕೆಯನ್ನೂ ಕೊಟ್ಟಿರುತ್ತವೆ. ಜನರು ಡಿಸ್ಕೌಂಟ್ ಮತ್ತು ಬಡ್ಡಿರಹಿತ ಇಎಂಐ ಎರಡೂ ಸಿಗುತ್ತೆ ಎಂದು ತಪ್ಪಾಗಿ ಅರ್ಥೈಸಿಕೊಳ್ಳುವುದುಂಟು. ಇಲ್ಲಿ ಇಎಂಐ ಪಡೆದಾಗ ಡಿಸ್ಕೌಂಟ್ ಅನ್ವಯ ಆಗುವುದಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 24: ಹಣ ಅಂದರೆ ಹೆಣ ಕೂಡ ಬಾಯಿ ಬಿಡುತ್ತೆ ಅನ್ನೋ ಮಾತು ನೂರಕ್ಕೆ ನೂರರಷ್ಟು ಸತ್ಯ. ರೊಕ್ಕದ ಲಾಭ ಆಗುತ್ತೆ ಅಂದರೆ ಕೆಲ ಜನ ಏನು ಬೇಕಾದರು ಮಾಡುತ್ತಾರೆ. ಕೆಲವರು ಮೂರ್ಖರು ಕೂಡ ಆಗುತ್ತಾರೆ. ಈಗಿನ ಕಾಲದಲ್ಲಿ ಲಕ್ಷಕ್ಕೆ ಮೂರು ಲಕ್ಷ ರೂ ಕೊಡ್ತೀವಿ ಅಂದರೆ ಯಾರು ನಂಬ್ತಾರೆ ಹೇಳಿ. ಹೀಗೆ ಡಬಲ್, ತ್ರಿಬಲ್ ಹಣ (money doubling) ಸಿಗುತ್ತೆ ಅಂತಾ ಆಸೆ ಬಿದ್ದವರು ಲಕ್ಷ ಲಕ್ಷ ಕಳ್ಕೊಂಡಿದ್ದಾರೆ.
ಮೂವರ ಬಂಧನ
ಜಗತ್ತಿನಲ್ಲಿ ಮೋಸ ಹೋಗುವವರು ಇರೋವರೆಗೂ ಮೋಸ ಮಾಡೋರು ಇರ್ತಾರೆ ಅನ್ನೋದು ನಿಜಾನೇ ಬಿಡಿ. ಹಣದ ಮಳೆ ರೀತಿ ಸುರಿಯುತ್ತೆ ಅನ್ನೋ ಬಣ್ಣದ ಮಾತುಗಳನ್ನ ನಂಬಿ ಬೆಂಗಳೂರಿನಲ್ಲಿ ಗುತ್ತಿಗೆದಾರ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾನೆ. ಹಣ ಚೀಟ್ ಆಗಿದೆ ಅಂತ ಗೊತ್ತಾದ ಮೇಲೆ ಪೊಲೀಸ್ ಮೊರೆ ಹೋಗಿದ್ದು, ಸದ್ಯ ಪೊಲೀಸರು ಮೂವರನ್ನ ಬಂಧಿಸಿ 40 ಲಕ್ಷ ರೂ ಸೀಜ್ ಮಾಡಿದ್ದಾರೆ.
ಅಂದ್ಹಾಗೆ ಈ ಘಟನೆ ನಡೆದಿರುವುದು ಬೆಂಗಳೂರಿನ ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ. ಹಣ ಡಬ್ಲಿಂಗ್ ಮಾಡುವ ನೆಪದಲ್ಲಿ ಗುತ್ತಿಗೆದಾರ ರಮೇಶ್ ಎಂಬುವರಿಗೆ 28 ಲಕ್ಷ ರೂ. ವಂಚಿಸಲಾಗಿದೆ. ವಂಚನೆ ಮಾಡಿದ್ದ ಮಧುಗಿರಿ ಮೂಲದ ವಿಜಯ್, ಕೆರೆಗುಡ್ಡದಹಳ್ಳಿಯ ಕೃಷ್ಣ ಸಿಂಗ್ ಮತ್ತು ಚಾಲಕ ನವೀನ್ನ ಪೊಲೀಸರು ಬಂಧಿಸಿದ್ದಾರೆ. ಬಾರಿಶ್ ಹಣ ಅಂತಾ ಪುಂಗಿ ಬಿಟ್ಟಿದ್ದ ಖದೀಮರು ನಮ್ಮತ್ರ ದುಡ್ಡಿನ ಸುರಿಮಳೆಯೇ ಇದೆ. ಆದರೆ ಅದು 90 ದಿನದಲ್ಲಿ ನಾರ್ಮಲ್ ಕಾಗದ ಆಗುತ್ತೆ ಹೀಗಾಗಿ ಅದನ್ನ ಖರ್ಚು ಮಾಡಬೇಕು. ನೀವು ನಮಗೆ ಒಂದು ಲಕ್ಷ ರೂ ಕೊಟ್ಟರೆ ಮೂರು ಲಕ್ಷ ರೂ ಕೊಡ್ತೀವಿ. ತೊಂಬತ್ತು ದಿನಗಳ ಒಳಗೆ ಯಾವುದಕ್ಕಾದ್ರು ಖರ್ಚು ಮಾಡಿ ಅಂತಾ ನಂಬಿಸಿದ್ದರು.
ಹಣದ ಸಮೇತ ಖದೀಮರು ಪರಾರಿ
ಆರೋಪಿಗಳ ಮಾತನ್ನು ನಂಬಿದ್ದ ಗುತ್ತಿಗೆದಾರ ರಮೇಶ್, 28 ಲಕ್ಷ 60 ಸಾವಿರ ರೂ ಹಣವನ್ನು 8ನೇ ಮೈಲಿ ಬಳಿ ತಂದಿದ್ದರು. ಇಷ್ಟು ಕೊಟ್ಟರೆ ಆಕಡೆ ಈಕಡೆ ಒಂದು ಕೋಟಿ ರೂ ಸಿಗುತ್ತೆ ಅಂತಾ ಅತಿ ಆಸೆ ಇಟ್ಕೊಂಡಿದ್ದರು. ಹೋಟೆಲ್ ಒಂದಕ್ಕೆ ಕರೆದಿದ್ದ ಆರೋಪಿಗಳು ಹಣ ಪಡೆದು ಅದನ್ನ ಚೆಕ್ ಮಾಡ್ಕೊಂಡ್ ಬರ್ತೀವಿ ಅಂತಾ ಹಣದ ಸಮೇತ ಪರಾರಿಯಾಗಿದ್ದರು.
ಇನ್ನು ಮೋಸ ಹೋಗಿದ್ದು ಗೊತ್ತಾದಾಗಲೇ ರಮೇಶ್ಗೆ ಎಚ್ಚರವಾಗಿದೆ. ಕೂಡಲೇ ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ್ದ ಪೊಲೀಸರು ವಂಚಕರನ್ನ ಬಂಧಿಸಿ ಒಟ್ಟು 40 ಲಕ್ಷ ರೂಪಾಯಿ ಹಣವನ್ನು ರಿಕವರಿ ಮಾಡಿದ್ದಾರೆ. ಕೇವಲ ರಮೇಶ್ ಮಾತ್ರ ಅಲ್ಲ, ಇದೇ ರೀತಿಯ ವಂಚನೆಗೆ ಇನ್ನೋರ್ವ ವ್ಯಕ್ತಿ ಕೂಡ 18 ಲಕ್ಷ ರೂಪಾಯಿ ಕಳೆದುಕೊಂಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಹಾಗಾಗಿ ಯಾರಾದರೂ ಹಿಂಗೆ ಡಬಲ್ ತ್ರಿಬಲ್ ಹಣ ಕೊಡ್ತೀವಿ ಅಂದರೆ ಆಗಲೇ ಹುಷಾರಾಗಿ. ಹೆಚ್ಚಿನ ಹಣ ಸಿಗುತ್ತೆ ಅಂತಾ ಅತಿ ಆಸೆ ಪಟ್ಟರೆ ಈ ಥರ ನೀವೂ ಮೂರ್ಖರಾಗೋದು ಪಕ್ಕಾ.
ನವದೆಹಲಿ, ಮಾರ್ಚ್ 24: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ವಿಧಿಸಿರುವ ನಿರ್ಬಂಧಗಳ ನಡುವೆಯೂ ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡುವ ಮಹತ್ವದ ಕುರಿತು ಚರ್ಚಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಕರೆ ಮಾಡಿದ್ದರು. ಈ ದೂರವಾಣಿ ಕರೆಯ ಸಮಯದಲ್ಲಿ ಈ ಪ್ರದೇಶದಲ್ಲಿ ಶಾಂತಿ ಮರುಸ್ಥಾಪನೆ ಮತ್ತು ಹಾರ್ಮುಜ್ ಜಲಸಂಧಿಯನ್ನು ತೈಲ ಮತ್ತು ಇಂಧನ ವ್ಯಾಪಾರಕ್ಕೆ ಮುಕ್ತವಾಗಿಸುವುದಕ್ಕೆ ಭಾರತದ ಬೆಂಬಲವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು.
ಅಂದಹಾಗೆ, ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧ ಪ್ರಾರಂಭವಾದ ನಂತರ ಮೋದಿ ಮತ್ತು ಟ್ರಂಪ್ ಮಾತನಾಡುತ್ತಿರುವುದು ಇದೇ ಮೊದಲು.
President Donald Trump just spoke with Prime Minister Modi. They discussed the ongoing situation in the Middle East, including the importance of keeping the Strait of Hormuz open.
ಭಾರತದಲ್ಲಿರುವ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಇಬ್ಬರು ನಾಯಕರ ನಡುವಿನ ಮಾತುಕತೆಯ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಟ್ರಂಪ್ ಅವರೊಂದಿಗಿನ ಮಾತುಕತೆಯ ಬಗ್ಗೆ ತಿಳಿಸಿದ್ದು, “ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ್ದಾರೆ. ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಪರಿಸ್ಥಿತಿಯ ಕುರಿತು ಇಬ್ಬರೂ ನಾಯಕರು ಮಾತುಕತೆ ನಡೆಸಿದ್ದಾರೆ. ಭಾರತ ಶಾಂತಿಗೆ ಬೆಂಬಲವಾಗಿ ನಿಂತಿದೆ. ಭಾರತವು ಸಾಧ್ಯವಾದಷ್ಟು ಬೇಗ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಬೆಂಬಲ ನೀಡುವುದಾಗಿ ತಿಳಿಸಿದೆ. ಹಾರ್ಮುಜ್ ಜಲಸಂಧಿಯು ಮುಕ್ತ, ಸುರಕ್ಷಿತ ಸ್ಥಳವಾಗುವುದು ಇಡೀ ಜಗತ್ತಿಗೆ ಅತ್ಯಗತ್ಯ ಎಂದು ಭಾರತವೂ ಹೇಳಿದೆ” ಎಂದು ಗೋರ್ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ.
Received a call from President Trump and had a useful exchange of views on the situation in West Asia. India supports de-escalation and restoration of peace at the earliest. Ensuring that the Strait of Hormuz remains open, secure and accessible is essential for the whole world.…
ಇದಾದ ಬಳಿಕ ಪ್ರಧಾನಿ ಮೋದಿ ಕೂಡ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಅಮೆರಿಕದ ಅಧ್ಯಕ್ಷರೊಂದಿಗೆ ಉಪಯುಕ್ತ ವಿಷಯದ ವಿನಿಮಯ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. “ಜಾಗತಿಕ ಸ್ಥಿರತೆಗೆ ಹಾರ್ಮುಜ್ ಜಲಸಂಧಿಯನ್ನು ಮುಕ್ತ, ಸುರಕ್ಷಿತವಾದ ರೀತಿಯಲ್ಲಿ ಇಡುವುದು ಅತ್ಯಗತ್ಯ ಎಂದು ಒತ್ತಿ ಹೇಳಿದ್ದೇನೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಶಾಂತಿಯನ್ನು ಶೀಘ್ರವಾಗಿ ಪುನಃಸ್ಥಾಪಿಸಲು ಭಾರತ ಬೆಂಬಲಿಸುತ್ತದೆ ಎಂದು ತಿಳಿಸಿದ್ದೇನೆ” ಎಂದು ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಡಾರ್ಲಿಂಗ್ ಕೃಷ್ಣ ನಟನೆ, ನಿರ್ದೇಶನದ ‘ಲವ್ ಮಾಕ್ಟೇಲ್ 3’ (Love Mocktail 3) ಸಿನಿಮಾ ತಂಡದ ಮೇಲೆ ಕೃತಿಚೌರ್ಯದ ಆರೋಪ ಎದುರಾಗಿದೆ. ರಾಘವೇಂದ್ರ ನಾಯ್ಕ್ ಅವರು ಈ ಕಥೆ ತಮ್ಮದು ಎಂದು ಹೇಳಿದ್ದಾರೆ. ಈ ಕಥೆಯನ್ನು2023ರಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ಹೇಳಲಾಗಿತ್ತು. ಆದರೆ ಡಾರ್ಲಿಂಗ್ ಕೃಷ್ಣ (Darling Krishna) ಅವರು ಆ ಕಥೆಯನ್ನು ಒಪ್ಪಿಕೊಂಡಿರಲಿಲ್ಲ. ಆದರೆ ಈಗ ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ಅದೇ ಕಥೆ ಇರುವುದು ನೋಡಿ ರಾಘವೇಂದ್ರ ನಾಯ್ಕ್ ಅವರಿಗೆ ಶಾಕ್ ಆಗಿದೆ. ‘ಈ ಸಿನಿಮಾದ ದ್ವಿತೀಯಾರ್ಧ ಸಂಪೂರ್ಣ ನಮ್ಮದೇ ಕಥೆಗೆ ಹತ್ತಿರವಾಗಿದೆ. ಅವರ ಹಿನ್ನೆಲೆ ಮತ್ತು ಪರಿಸರ ಬೇರೆ ಇದೆ. ಆದರೆ ಮುಖ್ಯ ವಿಚಾರ ಹಾಗೆಯೇ ಇದೆ. ಅದರಿಂದ ನನಗೆ ಬೇಜಾರು ಆಯಿತು. ಅದಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡೆ. ಈಗ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದೇವೆ’ ಎಂದು ರಾಘವೇಂದ್ರ ನಾಯ್ಕ್ (Raghavendra Naik) ಅವರು ಹೇಳಿದ್ದಾರೆ.
ಈ ಸುಡು ಬೇಸಿಗೆಯಲ್ಲಿ ಆರೋಗ್ಯಕರವಾದದ್ದು ಏನಾದ್ರೂ ತಿನ್ಬೇಕು ಅಂದಾಗ ಪ್ರತಿಯೊಬ್ಬರು ಕೂಡ ಕಲ್ಲಂಗಡಿ ಹಣ್ಣನ್ನೇ (watermelon) ಆಯ್ಕೆ ಮಾಡೋದು. ಬೇಸಿಗೆಯಲ್ಲಿ ಹೇರಳವಾಗಿ ಸಿಗುವಂತಹ ಈ ಹಣ್ಣು ದೇಹವನ್ನು ತಂಪಾಗಿರಿಸುವುದಲ್ಲದೇ ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿ. ಹಾಗಾಗಿ ಹೆಚ್ಚಿನವರು ಈ ಬೇಸಿಗೆಯಲ್ಲಿ ಮಾರುಕಟ್ಟೆಯಿಂದ ನಿತ್ಯವೂ ಕಲ್ಲಂಗಡಿ ಹಣ್ಣನ್ನು ಖರೀದಿಸುತ್ತಾರೆ. ಈ ಕಲ್ಲಂಗಡಿ ಹಣ್ಣನ್ನು ತಿಂದ ಬಳಿದ ಅದರ ಸಿಪ್ಪೆಯನ್ನು ನಿಷ್ಪ್ರಯೋಜಕವೆಂದು ಬಹುತೇಕ ಎಲ್ಲರೂ ಸಹ ಕಸದ ಬುಟ್ಟಿಗೆ ಎಸೆದು ಬಿಡುತ್ತಾರೆ. ನಾವು ವೇಸ್ಟ್ ಎಂದು ಎಸೆಯುವ ಬದಲು ಈ ಕೆಲವು ಕೆಲವು ರುಚಿಕರ ರೆಸಿಪಿಗಳನ್ನು ತಯಾರಿಸಿ.
ಕಲ್ಲಂಗಡಿ ಹಣ್ಣಿನ ಸಿಪ್ಪಿಯಿಂದ ತಯಾರಿಸಿ ಬಗೆಬಗೆಯ ರೆಸಿಪಿ:
ಕಲ್ಲಂಗಡಿ ಸಿಪ್ಪೆ ಜಾಮ್: ಕಲ್ಲಂಗಡಿ ಸಿಪ್ಪೆಗಳಿಂದ ನೀವು ಸುಲಭವಾಗಿ ಜಾಮ್ ಮಾಡಬಹುದು. ಈ ಜಾಮ್ ಬ್ರೆಡ್ ನಿಂದ ಚಪಾತಿವರೆಗೆ ಎಲ್ಲದರ ಜೊತೆಗೆ ರುಚಿಕರವಾಗಿರುತ್ತದೆ. ಕಲ್ಲಂಗಡಿ ಸಿಪ್ಪೆಯಿಂದ ಜಾಮ್ ಮಾಡಲು, ಮೊದಲು ಸಿಪ್ಪೆಯ ಹಸಿರು ಬಣ್ಣದ ಪದರವನ್ನು ಸುಳಿದು ಬಳಿಕ ಉಳಿದ ಸಿಪ್ಪೆಯನ್ನುಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಕತ್ತರಿಸಿದ ಕಲ್ಲಂಗಡಿ ಸಿಪ್ಪೆಗೆ, ಎರಡು ಕಪ್ ಸಕ್ಕರೆ, ನಿಂಬೆ ರಸ ಮತ್ತು 1 ಟೀಚಮಚ ವೆನಿಲ್ಲಾ ಎಸೆನ್ಸ್ ಸೇರಿಸಿ. ಇದೆಲ್ಲವನ್ನೂ ಜೆಲ್ಲಿ ಹದಕ್ಕೆ ಬರುವವರೆಗೆ ಬಿಸಿ ಮಾಡಿಕೊಳ್ಳಿ. ನೀವು ಸುವಾಸನೆಗಾಗಿ ದಾಲ್ಚಿನ್ನಿ ಕೂಡ ಸೇರಿಸಬಹುದು.
ಕಲ್ಲಂಗಡಿ ಸಿಪ್ಪೆಯ ಉಪ್ಪಿನಕಾಯಿ: ಮಾವಿನ ಕಾಯಿ, ನಿಂಬೆ, ನೆಲ್ಲಿಕಾಯಿ, ಕ್ಯಾರೆಟ್ ಸೇರಿದಂತೆ ಬಗೆ ಬಗೆಯ ಉಪ್ಪಿನಕಾಯಿಗಳನ್ನು ತಯಾರಿಸುತ್ತಾರೆ. ಅದೇ ರೀತಿ ಕಲ್ಲಂಗಡಿ ಸಿಪ್ಪೆಯಿಂದಲೂ ಉಪ್ಪಿನಕಾಯಿ ತಯಾರಿಸಬಹುದು. ಈ ಉಪ್ಪಿನಕಾಯಿ ಮಾಡಲು, ನೀವು ಕಲ್ಲಂಗಡಿ ಸಿಪ್ಪೆಯ ಹಸಿರು ಸಿಪ್ಪೆಯನ್ನು ತೆಗೆದು ಉಳಿದ ಭಾಗವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮಾವಿನಕಾವಿ ಉಪ್ಪಿನಕಾಯಿಯಂತೇ ಇದನ್ನೂ ತಯಾರಿಸಿ.
ಕಲ್ಲಂಗಡಿ ಸಿಪ್ಪೆ ಚಟ್ನಿ: ಕಲ್ಲಂಗಡಿ ಸಿಪ್ಪೆಯಿಂದ ರುಚಿಕರ ಚಟ್ನಿಯನ್ನು ತಯಾರಿಸಬಹುದು. ಈ ಚಟ್ನಿ ಮಾಡಲು, ಮೊದಲು 3 ರಿಂದ 4 ಕಪ್ ಕಲ್ಲಂಗಡಿ ಸಿಪ್ಪೆಯನ್ನು ತೆಗೆದುಕೊಳ್ಳಿ, ಆದರ ಹಸಿರು ಪದರವನ್ನು ತೆಗೆದುಹಾಕಿ. ಸಿಪ್ಪೆಯನ್ನು ಸಣ್ಣಗೆ ಕಟ್ ಮಾಡಿ ಅದಕ್ಕೆ ಒಂದು ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿಕಾಯಿ, ಸ್ವಲ್ಪ ಸಣ್ಣಗೆ ಹೆಚ್ಚಿದ ಶುಂಠಿ ಜೊತೆಗೆ ನಿಮಗೆ ಬೇಕಾಗಿರುವ ಮಸಾಲೆಗಳನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಂಡರೆ ಕಲ್ಲಂಗಡಿ ಸಿಪ್ಪೆ ಚಟ್ನಿ ಸಿದ್ಧ.
ಇದಲ್ಲದೆ ಕಲ್ಲಂಗಡಿ ಹಣ್ಣಿನ ಸಿಪ್ಪೆಯಿಂದ ಪಲ್ಯ, ಹಲ್ವಾ, ಟುಟ್ಟಿ ಫ್ರೂಟಿಯನ್ನು ತಯಾರಿಸಬಹುದು.
ಅನೇಕಲ್, ಮಾ.24: ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಸಾವಿನ ಕುರಿತು ಕರ್ನಾಟಕ ಪಶುವೈದ್ಯಕ ಸಂಘವು ಗಂಭೀರ ಆರೋಪಗಳನ್ನು ಮಾಡಿದೆ. ಸಂಘದ ಅಧ್ಯಕ್ಷ ಡಾ. ಶಿವಶರಣಪ್ಪ ಎಲ್ಗೊಡ್ ಮಾತನಾಡಿ, ಡಾ. ಸಮೀಕ್ಷಾ ರೆಡ್ಡಿ ಅವರ ಸಾವಿಗೆ ಡಿಸಿಎಫ್ ಅವರ ಸಂಪೂರ್ಣ ತಪ್ಪಿದೆ ಎಂದು ಹೇಳಿದ್ದಾರೆ. ಮಧ್ಯರಾತ್ರಿಯಲ್ಲಿ ಯಾವುದೇ ರಕ್ಷಣೆ ಇಲ್ಲದೆ ವನ್ಯಜೀವಿ ಚಿಕಿತ್ಸೆಗೆ ಕಳುಹಿಸಿದ್ದು ದೊಡ್ಡ ತಪ್ಪು. ಈ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಡಿಸಿಎಫ್ ಅವರನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಸಂಘ ಆಗ್ರಹಿಸಿದೆ. ಅಲ್ಲದೆ, ಪಶುವೈದ್ಯರನ್ನು ಕಡಿಮೆ ಸಂಬಳಕ್ಕೆ ಬ್ಲಾಕ್ಮೇಲ್ ಮಾಡಿ ಅಪಾಯಕಾರಿ ಕಾರ್ಯಗಳಿಗೆ ಕಳುಹಿಸಲಾಗುತ್ತಿದೆ. ಇದನ್ನು ತಡೆಯಲು ಅರಣ್ಯ ಇಲಾಖೆಯಲ್ಲಿ ಪ್ರತ್ಯೇಕ ಪಶುವೈದ್ಯಕೀಯ ವಿಭಾಗ ಸ್ಥಾಪಿಸಬೇಕು, ಅವರಿಗೆ ಸೂಕ್ತ ತರಬೇತಿ ಮತ್ತು ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಸಮೀಕ್ಷಾ ರೆಡ್ಡಿ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರದ ಬೇಡಿಕೆಯನ್ನೂ ಇಡಲಾಗಿದೆ. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ದೊಡ್ಡ ಹೋರಾಟ ನಡೆಸುವುದಾಗಿ ಸಂಘ ಎಚ್ಚರಿಕೆ ನೀಡಿದೆ.
ಬೆಂಗಳೂರು, ಮಾರ್ಚ್ 24: ಕರ್ನಾಟಕದಲ್ಲಿ ಮುಂದಿನ 3 ಗಂಟೆಯಲ್ಲಿ ಮಳೆಯಾಗುವ (rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆ ಮೂಲಕ ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆ ನೀಡಿದೆ. ಜೊತೆಗೆ ಕಲಬುರಗಿ, ಯಾದಗಿರಿ, ರಾಯಚೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಯಲ್ಲೋ ಹಾಗೂ ಚಿಕ್ಕಮಗಳೂರು, ಬೆಳಗಾವಿ, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಇತ್ತ ಬೆಂಗಳೂರಿನಲ್ಲಿ ಭಾರೀ ಮಳೆಯ ನಿರೀಕ್ಷೆ ಇಲ್ಲದಿದ್ದರೂ, ಹೆಚ್ಚುತ್ತಿರುವ ಬಿಸಿಗಾಳಿಯಿಂದ ತಾತ್ಕಾಲಿಕ ಪರಿಹಾರ ಸಿಗಲಿದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಉಷ್ಣತೆ ಹೆಚ್ಚಳಗೊಳ್ಳುತ್ತಿರುವುದು ಕಂಡುಬರುತ್ತಿದೆ. ಜೊತೆಗೆ ನಗರದಲ ಕೆಲವೆಡೆ ಮೋಡ ಕವಿದ ವಾತಾವರಣ ಕಾಣಬಹುದು.
ಬಿರುಗಾಳಿ ಸಹಿತ ಮಳೆ: ಮನೆಗಳಿಗೆ ನುಗ್ಗಿದ ನೀರು
ಇನ್ನು ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯ ಅಬ್ಬರ ಜೋರಾಗಿದೆ. ಇತ್ತ ಬೆಳಗಾವಿಯಲ್ಲಿ ಬಿರುಗಾಳಿ ಸಹಿತ ಮಳೆಗೆ ರಸ್ತೆಗಳು ನದಿಯಂತಾಗಿದ್ದು, ಬೇಸ್ಮೆಂಟ್ನಲ್ಲಿ ನಿಲ್ಲಿಸಿದ್ದ ಕಾರುಗಳು, ಬೈಕ್ಗಳು ಮುಳುಗಡೆ ಆಗಿವೆ. ಸದಾಶಿವನಗರ, ನೆಹರುನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಬಹುತೇಕ ರಸ್ತೆಗಳ ಮೇಲೆ ಚರಂಡಿ ನೀರು ಉಕ್ಕಿಹರಿದಿದೆ.
ರಸ್ತೆಯಲ್ಲಿ ಉಕ್ಕಿ ಹರಿಯುತ್ತಿರುವ ನೀರಿನಲ್ಲೇ ಸವಾರರು ವಾಹನ ಸಂಚಾರ ಮಾಡುತ್ತಿದ್ದಾರೆ. ಸದ್ಯ ಜೆಸಿಬಿ ಮೂಲಕ ನೀರು ಹೋಗಲು ಸ್ಥಳೀಯರಿಂದ ವ್ಯವಸ್ಥೆ ಮಾಡಲಾಗಿದೆ. ಸೂಕ್ತ ಚರಂಡಿ ವ್ಯವಸ್ಥೆ ಮಾಡದ ಪಾಲಿಕೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಬೆಳಗಾವಿ ಜನತೆ ಹಿಡಿಶಾಪ ಹಾಕಿದ್ದಾರೆ.
ಬಿರುಗಾಳಿ ಸಮೇತ ಮಳೆ: ಕೊಚ್ಚಿಹೋದ ತರಕಾರಿ
ಹಾವೇರಿ ಜಿಲ್ಲೆಯ ಹಲವೆಡೆಗಳಲ್ಲಿ ಬಿರುಗಾಳಿ ಸಮೇತ ಮಳೆ ಸುರಿದಿದೆ. ಧಾರಕಾರ ಮಳೆಗೆ ಸಂತೆಯಲ್ಲಿದ್ದ ತರಕಾರಿ ಕೊಚ್ಚಿಕೊಂಡು ಹೋಗಿದೆ. ಬದನೆಕಾಯಿ, ಟೊಮ್ಯಾಟೊ, ಆಲೂಗಡ್ಡೆ ಸೇರಿದಂತೆ ಹಲವು ತರಕಾರಿ ನೀರಿನಲ್ಲಿ ಜಲಾವೃತವಾಗಿವೆ. ಇನ್ನು ಸಂತೆಗೆ ಬಂದ ಜನರು ಮನೆಗೆ ಹೋಗಲು ಪರದಾಡಿದ್ದಾರೆ. ಅಕಾಲಿಕ ಮಳೆಗೆ ಜಿಲ್ಲೆಯ ಜನರು ಹೈರಾಣಾಗಿದ್ದಾರೆ.
ದಾವಣಗೆರೆ, ಮಾ.24: ದಾವಣಗೆರೆ ದಕ್ಷಿಣ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರ ಕುಟುಂಬದವರು ಪ್ರಚಾರ ನಡೆಸುತ್ತಿದ್ದಾರೆ. ಮತ ಯಾಚಿಸಲು ತೆರಳಿದಾಗ ಮುಸ್ಲಿಂ ಸಮುದಾಯದವರು ಅಭ್ಯರ್ಥಿ ಪತ್ನಿಯನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಸಾಂಪ್ರದಾಯಿಕವಾಗಿ ಉಡಿ ತುಂಬುವ ಮೂಲಕ ತಮ್ಮ ಬೆಂಬಲ ಸೂಚಿಸಿದರು. ಪ್ರಚಾರದ ವೇಳೆ ಮಾತನಾಡಿದ ಅಭ್ಯರ್ಥಿಯ ಪ್ರತಿನಿಧಿಗಳು, ಶ್ರೀನಿವಾಸ್ ದಾಸಕರಿಯಪ್ಪ ಅವರನ್ನು ನಿಮ್ಮ ಮನೆಯ ಮಗ ಎಂದು ಪರಿಚಯಿಸಿದರು. ನೀರಿನ ವ್ಯವಸ್ಥೆ, ಚರಂಡಿ, ಮನೆ ಇಲ್ಲದವರಿಗೆ ಸೂರಿನ ವ್ಯವಸ್ಥೆ ಮತ್ತು ಆಸ್ಪತ್ರೆಗಳ ನಿರ್ಮಾಣ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ ಎಂದು ಭರವಸೆ ನೀಡಿದರು. ಅಧಿಕಾರ ಸಿಕ್ಕರೆ ಈ ಕೆಲಸಗಳನ್ನು ನೆರವೇರಿಸುವುದಾಗಿ ಹೇಳಿದರು. ಈ ಬಾರಿಯ ಉಪಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸಿ, ಅಭಿವೃದ್ಧಿಗೆ ಅವಕಾಶ ನೀಡುವಂತೆ ಸಮುದಾಯದವರಲ್ಲಿ ಮನವಿ ಮಾಡಿಕೊಂಡರು.
ನವದೆಹಲಿ, ಮಾರ್ಚ್ 24: ಟಿವಿ9 ನೆಟ್ವರ್ಕ್ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ 2026’ (WITT Summit 2026)ಯಲ್ಲಿ ಮಾತನಾಡಿದ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ. ಕಿಶನ್ ರೆಡ್ಡಿ, ಮುಂದಿನ ತಿಂಗಳು 5 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿವೆ. ಬಂಗಾಳದಲ್ಲಿ ಮತ್ತೆ ಟಿಎಂಸಿ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಅಲ್ಲಿನ ಜನರು ಬೇಸತ್ತಿದ್ದಾರೆ. ಕೊಲೆಗಳು ಬಹಿರಂಗವಾಗಿ ನಡೆಯುತ್ತಿವೆ. ಬಂಗಾಳವು ಪ್ರತಿಯೊಂದು ಕ್ಷೇತ್ರದಲ್ಲೂ ಹಿಂದುಳಿದಿದೆ. ಅಲ್ಲಿನ ಜನರು ಡಬಲ್ ಎಂಜಿನ್ ಸರ್ಕಾರವನ್ನು ಬಯಸುತ್ತಿದ್ದಾರೆ. ಅಲ್ಲಿ ಈ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ತಮಿಳುನಾಡಿನಲ್ಲೂ ಇದೇ ಪರಿಸ್ಥಿತಿ ಇದೆ. ಪ್ರತಿ ಐದು ವರ್ಷಗಳಿಗೊಮ್ಮೆ ಅಲ್ಲಿ ಸರ್ಕಾರ ಬದಲಾಗುತ್ತದೆ. ಡಿಎಂಕೆ ಸರ್ಕಾರ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿದೆ. ಅಲ್ಲಿ ಸ್ವಜನಪಕ್ಷಪಾತವಿದೆ. ಅಲ್ಲಿಯೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಕೇರಳದಲ್ಲಿ ನಾವು ನಮ್ಮ ಸ್ಥಾನವನ್ನು ಸುಧಾರಿಸುತ್ತೇವೆ. ಪುದುಚೇರಿ ಮತ್ತು ಅಸ್ಸಾಂನಲ್ಲಿಯೂ ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಕಿಶನ್ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಭಾರತದ ಇಂಧನ ವಲಯವು ಪ್ರಸ್ತುತ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ಎಲ್ಲಾ ವಲಯಗಳಲ್ಲಿ ಸ್ವಾವಲಂಬನೆ ಸಾಧಿಸಲು ಪ್ರಯತ್ನಗಳು ನಡೆಯುತ್ತಿವೆ. 2014ಕ್ಕಿಂತ ಮೊದಲು ಕಲ್ಲಿದ್ದಲಿನ ಪೂರೈಕೆಯಲ್ಲಿ ಸಮಸ್ಯೆಗಳಿದ್ದವು. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಕಲ್ಲಿದ್ದಲು ಹಂಚಿಕೆಯ ಬಗ್ಗೆ ಯಾವುದೇ ಆರೋಪಗಳಿಲ್ಲ ಎಂದು ಹೇಳಿದರು.
ಭಾರತದಲ್ಲಿ ಈದ್ ಆಚರಿಸಲು ಸ್ವಾತಂತ್ರ್ಯವಿಲ್ಲ ಎಂಬ ಓವೈಸಿ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಚಿವ ಕಿಶನ್ ರೆಡ್ಡಿ, “ಇದು ಸಂಪೂರ್ಣವಾಗಿ ತಪ್ಪು. ಸ್ವಾತಂತ್ರ್ಯವಿಲ್ಲದೆ ಇರುವುದಕ್ಕೆ ಇದು ಪಾಕಿಸ್ತಾನವೇ? ಭಾರತದಲ್ಲಿ ಎಲ್ಲರೂ ಸ್ವತಂತ್ರರು. ಇಲ್ಲಿ ಯಾವುದೇ ಧರ್ಮದ ಸಮಸ್ಯೆ ಇಲ್ಲ. ಓವೈಸಿ ಇದನ್ನು ಅರ್ಥ ಮಾಡಿಕೊಳ್ಳಬೇಕು. ಆದರೆ ಈ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂಬುದನ್ನು ಕೂಡ ಅರ್ಥ ಮಾಡಿಕೊಳ್ಳಬೇಕು” ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ