ಐಪಿಎಲ್ 2026 ರ ಎಲಿಮಿನೇಟರ್ ಪಂದ್ಯ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಸೋತ ತಂಡ ಐಪಿಎಲ್ನಿಂದ ಹೊರಬೀಳುವುದರಿಂದ ಉಭಯ ತಂಡಗಳು ಗೆಲುವಿಗಾಗಿ ಭರ್ಜರಿ ತಯಾರಿ ಮಾಡಿಕೊಂಡು ಅಖಾಡಕ್ಕಿಳಿದಿದ್ದವು. ಆದಾಗ್ಯೂ 15 ವರ್ಷದ ವೈಭವ್ ಸೂರ್ಯವಂಶಿಯ ಬ್ಯಾಟಿಂಗ್ ಪ್ರವಾಹಕ್ಕೆ ಕೊಚ್ಚಿ ಹೋದ ಸನ್ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ 47 ರನ್ಗಳಿಂದ ಸೋತು ಫೈನಲ್ ರೇಸ್ನಿಂದ ಹೊರಬಿದ್ದಿತು. ಇತ್ತ ಸನ್ರೈಸರ್ಸ್ ವಿರುದ್ಧ ಗೆದ್ದ ರಾಜಸ್ಥಾನ್, ಮೇ 29 ರಂದು ನಡೆಯಲಿರುವ ಕ್ವಾಲಿಫೈಯರ್ 2 ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 245 ರನ್ಗಳ ಬೃಹತ್ ಗುರಿ ದಾಖಲಿಸಿತು. ಗುರಿ ಬೆನ್ನಟ್ಟಿದ ಸನ್ರೈಸರ್ಸ್ ತಂಡ ಬ್ಯಾಟಿಂಗ್ ವಿಭಾಗದ ವೈಫಲ್ಯದಿಂದ ಹೀನಾಯವಾಗಿ ಸೋಲನುಭವಿಸಿತು.
ಕಾಜಿರಂಗ, ಮೇ 27: ಸಾಮಾನ್ಯವಾಗಿ ಕಂದು ಬಣ್ಣದಲ್ಲಿ ಕಂಡುಬರುವ ‘ಹಾಗ್ ಜಿಂಕೆ’ ಅಸ್ಸಾಂನ ವಿಶ್ವಪ್ರಸಿದ್ಧ ಕಾಜಿರಂಗ (kaziranga) ರಾಷ್ಟ್ರೀಯ ಉದ್ಯಾನವನದಲ್ಲಿ ಹಾಲಿನ ಬಿಳಿ ಬಣ್ಣದಲ್ಲಿ ತಿರುಗಾಡುತ್ತಿರುವುದು ಕಂಡುಬಂದಿದೆ. ಈ ಅತ್ಯಂತ ಅಪರೂಪದ ದೃಶ್ಯದ ವಿಡಿಯೋವನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರೇ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. “ಇಂತಹ ಅಪರೂಪದ ಜಿಂಕೆಯನ್ನು ನೋಡುವುದು ಸಂತಸದ ಸಂಗತಿ. ಕಾಜಿರಂಗದಲ್ಲಿ ಈ ‘ಅಲ್ಬಿನೋ ಹಾಗ್ ಜಿಂಕೆ’ಯನ್ನು ನೋಡುವುದು ನಮ್ಮ ವನ್ಯಜೀವಿಗಳ ಶ್ರೀಮಂತಿಕೆಯ ಸಂಕೇತವಾಗಿದೆ. ಅಸ್ಸಾಂನ ಕಾಡುಗಳು ಅಪರೂಪದ ಪ್ರಭೇದಗಳಿಗೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂಬುದಕ್ಕೆ ಇದು ಪುರಾವೆಯಾಗಿದೆ” ಎಂದು ಅವರು ಬರೆದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮೇ 27: ಇಂಧನ ದರ ಏರಿಕೆಯ ಬಿಸಿ ಇದೀಗ ಲೆದರ್ (Leather)ವಸ್ತುಗಳಿಗೂ ತಟ್ಟಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ನಿರಂತರ ಏರಿಕೆ ಬೆನ್ನಲ್ಲೇ ಸರಕು ಸಾಗಣೆ ವೆಚ್ಚ ಹೆಚ್ಚಾಗುತ್ತಿದೆ. ಹೀಗಾಗಿ ಲೆದರ್ ಶೂ, ಬೆಲ್ಟ್ ಹಾಗೂ ಶಾಲಾ ಬ್ಯಾಗ್ ಬೆಲೆ ಕೂಡ ಏರಿಕೆ ಆಗಿದೆ. ಶಾಲೆ ಆರಂಭದ ಹೊತ್ತಲ್ಲೇ ಹೀಗೆ ಏರಿಕೆ ಆಗುತ್ತಿರುವುದು ಸದ್ಯ ಪೋಷಕರಿಗೆ ಶಾಕ್ ಎದುರಾಗಿದ್ದು, ಮಧ್ಯಮ ವರ್ಗದ ಜನರಿಗೆ ಇದು ಮತ್ತೆ ಹೊರೆಯಾಗುವ ಸಾಧ್ಯತೆ ಇದೆ.
ಮುಖ್ಯಾಂಶಗಳು
ಇನ್ನು ಮುಂದೆ ಲೆದರ್ ವಸ್ತುಗಳೂ ದುಬಾರಿ
ಸಾರಿಗೆ ವೆಚ್ಚ ಹೆಚ್ಚಳ ಬೆನ್ನಲ್ಲೇ ಲೆದರ್ ಶೂ, ಬೆಲ್ಟ್, ಶಾಲಾ ಬ್ಯಾಗ್ ದರ ಶೇ. 15ರಷ್ಟು ಏರಿಕೆ
ಈಗಾಗಲೇ ಕಚ್ಚಾ ವಸ್ತುಗಳ ಬೆಲೆ ಏರಿಕೆ, ಉತ್ಪಾದನಾ ವೆಚ್ಚ ಹೆಚ್ಚಳ ಮತ್ತು ಕಾರ್ಮಿಕರ ವೆಚ್ಚ ಹೆಚ್ಚಳದಿಂದ ತತ್ತರಿಸಿರುವ ವ್ಯಾಪಾರಿಗಳಿಗೆ ಇಂಧನ ದರ ಏರಿಕೆ ಮತ್ತೊಂದು ದೊಡ್ಡ ಹೊಡೆತ ನೀಡಿದೆ. ರಾಜ್ಯದ ವಿವಿಧ ಭಾಗಗಳು ಹಾಗೂ ಹೊರ ರಾಜ್ಯಗಳ ಕಾರ್ಖಾನೆಗಳಲ್ಲಿ ತಯಾರಾಗುವ ಲೆದರ್ ವಸ್ತುಗಳು ಬೆಂಗಳೂರಿನಂತಹ ನಗರಗಳಿಗೆ ರವಾನಿಸಲು ಲಾರಿಗಳು ಹಾಗೂ ಸರಕು ಸಾಗಣೆ ವಾಹನಗಳನ್ನೇ ಬಳಸುವುದು ಅನಿವಾರ್ಯವಾಗಿದೆ. ಆದರೆ ಡೀಸೆಲ್ ದರ ಏರಿಕೆಯಿಂದ ಸಾರಿಗೆ ವೆಚ್ಚವೂ ಹೆಚ್ಚಾಗಿದ್ದು, ಉತ್ಪನ್ನಗಳ ಅಂತಿಮ ಬೆಲೆ ಮೇಲೆ ನೇರ ಪರಿಣಾಮ ಬೀರುತ್ತಿದೆ.
ಲೆದರ್ ಶೂ, ಬೆಲ್ಟ್, ಶಾಲಾ ಬ್ಯಾಗ್ ದರ ಶೇ. 15ರಷ್ಟು ಏರಿಕೆ
ವ್ಯಾಪಾರಿಗಳ ಪ್ರಕಾರ, ಕಳೆದ ಕೆಲವು ತಿಂಗಳುಗಳಿಂದಲೇ ಸಾರಿಗೆ ವೆಚ್ಚ ನಿರಂತರವಾಗಿ ಏರಿಕೆಯಾಗುತ್ತಿದೆ. ಹೀಗಾಗಿ ಹಳೆಯ ದರದಲ್ಲೇ ಬ್ಯಾಗ್ ಮತ್ತು ಶೂಗಳನ್ನು ಮಾರಾಟ ಮಾಡುವುದು ಕಷ್ಟ. ಹೊಸ ಸ್ಟಾಕ್ಗಳಿಗೆ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದಿದ್ದಾರೆ.
ಶಾಲೆ ಆರಂಭದ ಹೊತ್ತಲ್ಲೇ ಪೋಷಕರಿಗೆ ಶಾಕ್!
ಕೆಲವು ಮಾದರಿಯ ಲೆದರ್ ಐಟಮ್ಸ್ಗಳಿಗೆ 5 ರಿಂದ 15 ಶೇಕಡ ಹಾಗೂ ಶೂಗಳಿಗೆ 10 ರಿಂದ 15 ಶೇಕಡ ತನಕ ಬೆಲೆ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ಇಂಧನ ದರ ಸ್ಥಿರವಾಗದಿದ್ದರೆ ಇನ್ನಷ್ಟು ವಸ್ತುಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
ಶಾಲೆಗಳು ಆರಂಭವಾಗುವ ಹೊತ್ತಿನಲ್ಲಿ ಪೋಷಕರು ಈಗಾಗಲೇ ಪುಸ್ತಕ, ಯೂನಿಫಾರ್ಮ್, ಶುಲ್ಕ ಸೇರಿದಂತೆ ಹಲವು ಖರ್ಚುಗಳು ಮಾಡಿದ್ದಾರೆ. ಈ ನಡುವೆ ಬ್ಯಾಗ್ ಮತ್ತು ಶೂಗಳ ಬೆಲೆ ಏರಿಕೆ ಆದರೆ ಮಧ್ಯಮ ವರ್ಗ ಹಾಗೂ ಬಡ ಕುಟುಂಬಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ತಂದೊಡ್ಡಿದೆ.
ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ್ದ ಸೂಪರ್ಸ್ಟಾರ್ ರಜನಿಕಾಂತ್ (Rajinikanth) ಅಭಿನಯದ ‘ಜೈಲರ್’ ಚಿತ್ರದ ಸೀಕ್ವೆಲ್ ‘ಜೈಲರ್ 2’ (Jailer 2) ಸದ್ಯದಲ್ಲೇ ತೆರೆಗೆ ಬರಲು ಸಜ್ಜಾಗುತ್ತಿದೆ. ಸಿನಿಮಾ ಬಿಡುಗಡೆಯ ದಿನಗಳು ಹತ್ತಿರವಾಗುತ್ತಿದ್ದಂತೆ ಚಿತ್ರದ ಬಗ್ಗೆ ದಿನಕ್ಕೊಂದು ರೋಚಕ ಸುದ್ದಿಗಳು ಹೊರಬೀಳುತ್ತಿವೆ. ಸದ್ಯ ಕಾಲಿವುಡ್ ಅಂಗಳದಿಂದ ಕೇಳಿಬರುತ್ತಿರುವ ಬಿಸಿಬಿಸಿ ಸುದ್ದಿಯೆಂದರೆ, ಈ ಬಿಗ್ ಬಜೆಟ್ ಚಿತ್ರದ ಒಂದು ಅತಿಥಿ ಪಾತ್ರಕ್ಕಾಗಿ ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್ (Hrithik Roshan) ಅವರೊಂದಿಗೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ‘ಜೈಲರ್ 2’ ಚಿತ್ರತಂಡವು ಹೃತಿಕ್ ರೋಷನ್ ಅವರನ್ನು ವಿಶೇಷ ಪಾತ್ರವೊಂದಕ್ಕಾಗಿ ಸಂಪರ್ಕಿಸಿದೆ. ಆದರೆ ಚಿತ್ರತಂಡವು ಮೊದಲಿಗೆ ಈ ಪಾತ್ರಕ್ಕಾಗಿ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಸಂಪರ್ಕಿಸಿತ್ತು ಎಂಬ ಮಾಹಿತಿ ಇದೆ. ಆದರೆ, ಶಾರುಖ್ ಖಾನ್ ಅವರು ಬಹುನಿರೀಕ್ಷಿತ ‘ಕಿಂಗ್’ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿ ಆಗಿರುವುದರಿಂದ ‘ಜೈಲರ್ 2’ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಲಿಲ್ಲ.
ಶಾರುಖ್ ಖಾನ್ ಅವರ ಅಲಭ್ಯತೆಯಿಂದಾಗಿ, ನಿರ್ದೇಶಕ ನೆಲ್ಸನ್ ದಿಲೀಪ್ಕುಮಾರ್ ಈಗ ಈ ಪವರ್ಫುಲ್ ಪಾತ್ರಕ್ಕೆ ಹೃತಿಕ್ ರೋಷನ್ ಅವರನ್ನು ಕರೆತರಲು ಮಾತುಕತೆ ನಡೆಸುತ್ತಿದ್ದಾರೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಒಂದು ವೇಳೆ ಹೃತಿಕ್ ರೋಷನ್ ಅವರು ಒಪ್ಪಿಕೊಂಡರೆ ‘ಜೈಲರ್ 2’ ಸಿನಿಮಾದ ಸ್ಟಾರ್ ಮೆರುಗು ಹೆಚ್ಚಲಿದೆ.
ರಜನಿಕಾಂತ್ ಅವರು ‘ಜೈಲರ್ 2’ ಚಿತ್ರದಲ್ಲಿ ಮತ್ತೊಮ್ಮೆ ಮುತ್ತುವೇಲ್ ಪಾಂಡಿಯನ್ ಆಗಿ ಅಬ್ಬರಿಸಲಿದ್ದಾರೆ. ಮೊದಲ ಭಾಗದಲ್ಲಿದ್ದಂತೆ ಮಲಯಾಳಂ ಸೂಪರ್ಸ್ಟಾರ್ ಮೋಹನ್ಲಾಲ್ ಮತ್ತು ಕನ್ನಡದ ‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ ಈ ಸೀಕ್ವೆಲ್ನಲ್ಲೂ ತಮ್ಮ ಪಾತ್ರಗಳನ್ನು ಮುಂದುವರಿಸಲಿದ್ದಾರೆ ಎಂಬ ನಿರೀಕ್ಷೆ ಇದೆ. ಇದರೊಂದಿಗೆ ಈ ಬಾರಿ ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್, ಎಸ್.ಜೆ. ಸೂರ್ಯ ಮತ್ತು ಸೂರಜ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
‘ಜೈಲರ್ 2’ ಚಿತ್ರದ ಅಧಿಕೃತ ಬಿಡುಗಡೆಯ ದಿನಾಂಕ ಇನ್ನೂ ಪ್ರಕಟವಾಗಿಲ್ಲವಾದರೂ, ಚಿತ್ರವು ಇದೇ ವರ್ಷ ಸೆಪ್ಟೆಂಬರ್ 11ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ಹೃತಿಕ ರೋಷನ್ ಈ ಪ್ರಾಜೆಕ್ಟ್ಗೆ ಗ್ರೀನ್ ಸಿಗ್ನಲ್ ನೀಡಿದರೆ, ಚಿತ್ರದ ಹೈಪ್ ಮತ್ತೊಂದು ಹಂತಕ್ಕೆ ತಲುಪುವುದು ಖಚಿತ.
ನವದೆಹಲಿ, ಮೇ 27: ತಮಿಳುನಾಡು ಮುಖ್ಯಮಂತ್ರಿ ವಿಜಯ್ (CM Vijay) ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಇತ್ತೀಚೆಗೆ ತಮಿಳುನಾಡಿನಲ್ಲಿ ಭಾರಿ ವಿವಾದ ಸೃಷ್ಟಿಸಿರುವ ‘ವಂದೇ ಮಾತರಂ’ ವಿವಾದದ ಕುರಿತು ಪ್ರಧಾನಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ತಮಿಳುನಾಡು ಮುಖ್ಯಮಂತ್ರಿಯಾದ ಬಳಿಕ ವಿಜಯ್ ಮತ್ತು ಪ್ರಧಾನಿ ಮೋದಿ (PM Modi) ನಡುವಿನ ಮೊದಲ ಭೇಟಿ ಇದಾಗಿದೆ. ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡ ವಿಜಯ್ ಅವರಿಗೆ ಪ್ರಧಾನಿ ಮೋದಿ ಅವರು ಕೂಡ ಅಭಿನಂದನೆ ಸಲ್ಲಿಸಿ, ತಮಿಳುನಾಡಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಂಪೂರ್ಣ ಸಹಕಾರದ ಭರವಸೆ ನೀಡಿದರು.
ಪ್ರಧಾನಿ ಮೋದಿ ಜೊತೆಗಿನ ಮಾತುಕತೆಯ ವೇಳೆ ತಮಿಳುನಾಡು ಸಿಎಂ ವಿಜಯ್ ಅವರು ರಾಜ್ಯದಲ್ಲಿ ಇತ್ತೀಚೆಗೆ ನಡೆದ ‘ವಂದೇ ಮಾತರಂ’ ಗೀತೆ ಉಲ್ಲೇಖಕ್ಕೆ ಸಂಬಂಧಿಸಿದ ವಿವಾದವನ್ನು ಪ್ರಧಾನಿ ಗಮನಕ್ಕೆ ತಂದಿದ್ದಾರೆ. ತಮಿಳುನಾಡಿನ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಅಥವಾ ಶೈಕ್ಷಣಿಕ ಸಂಸ್ಥೆಯೊಂದರಲ್ಲಿ ‘ವಂದೇ ಮಾತರಂ’ ಗೀತೆಯನ್ನು ಕಡ್ಡಾಯಗೊಳಿಸುವ ಅಥವಾ ಅದಕ್ಕೆ ಗೌರವ ನೀಡುವ ವಿಷಯದಲ್ಲಿ ವಿರೋಧ ಪಕ್ಷಗಳು ಮತ್ತು ಪ್ರಾದೇಶಿಕ ಸಂಘಟನೆಗಳ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಭಾಷಾ ಮತ್ತು ಸಾಂಸ್ಕೃತಿಕ ಹಿತಾಸಕ್ತಿಗಳ ನಡುವೆ ಈ ವಿಷಯವು ರಾಜ್ಯದಲ್ಲಿ ದೊಡ್ಡ ರಾಜಕೀಯ ವಿವಾದವಾಗಿ ರೂಪಾಂತರಗೊಂಡಿತ್ತು.
ಹಾಗೇ, ಈ ಭೇಟಿ ವೇಳೆ ತಮಿಳುನಾಡಿಗೆ ಕೇಂದ್ರ ಸರ್ಕಾರದಿಂದ ಬರಬೇಕಾದ ವಿವಿಧ ಯೋಜನೆಗಳ ಅನುದಾನ ಹಾಗೂ ಜಿಎಸ್ಟಿ (GST) ಬಾಕಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ವಿಜಯ್ ಪ್ರಧಾನಿಗಳಿಗೆ ಮನವಿ ಮಾಡಿದರು ಎನ್ನಲಾಗಿದೆ. ಹಾಗೇ, ತಮಿಳುನಾಡಿನಲ್ಲಿ ಪ್ರಗತಿಯಲ್ಲಿರುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು, ಮೆಟ್ರೋ ರೈಲು ಯೋಜನೆಗಳ ವಿಸ್ತರಣೆ ಮತ್ತು ಬಂದರುಗಳ ಅಭಿವೃದ್ಧಿಗೆ ಹೆಚ್ಚಿನ ಬೆಂಬಲ ನೀಡುವಂತೆಯೂ ಕೋರಿದ್ದಾರೆ.
Tamil Nadu CM Vijay received a Guard of Honour in Delhi during his maiden official visit to the capital after TVK’s historic election victory
Vijay is set to meet PM Modi, HM Amit Shah and FM Nirmala Sitharaman, with discussions expected around financial assistance,… pic.twitter.com/08smX2RJmh
ಶ್ರೀಲಂಕಾ ನೌಕಾಪಡೆಯಿಂದ ಪದೇ ಪದೇ ಬಂಧನಕ್ಕೊಳಗಾಗುತ್ತಿರುವ ತಮಿಳುನಾಡು ಮೀನುಗಾರರ ರಕ್ಷಣೆ ಮತ್ತು ಅವರ ಹಿತಾಸಕ್ತಿ ಕಾಯುವಂತೆ ಕೇಂದ್ರ ಸರ್ಕಾರಕ್ಕೆ ವಿನಂತಿಸಿಕೊಂಡರು. ತಮಿಳುನಾಡಿನ ಹಿಂದಿನ ಸರ್ಕಾರಗಳು ಕೇಂದ್ರದೊಂದಿಗೆ ಸಂಘರ್ಷದ ಹಾದಿ ತುಳಿದಿದ್ದವು. ಆದರೆ, ವಿಜಯ್ ಅವರು ಆರಂಭದಲ್ಲೇ ಪ್ರಧಾನಿ ಮೋದಿಯವರನ್ನು ಭೇಟಿಯಾಗುವ ಮೂಲಕ ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಕಾಯ್ದುಕೊಳ್ಳುವ ಮುನ್ಸೂಚನೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ವಿಜಯ್ ಅವರೊಂದಿಗಿನ ಭೇಟಿಯ ಫೋಟೋಗಳನ್ನು ಹಂಚಿಕೊಂಡಿದ್ದು, “ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರೊಂದಿಗೆ ಉತ್ತಮ ಭೇಟಿ ನಡೆಸಲಾಯಿತು. ರಾಜ್ಯದ ಪ್ರಗತಿಗಾಗಿ ಕೇಂದ್ರ ಸರ್ಕಾರ ಸದಾ ಬದ್ಧವಾಗಿದೆ” ಎಂದು ಬರೆದುಕೊಂಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಐಪಿಎಲ್ 2026 ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 97 ರನ್ ಬಾರಿಸಿದರು. ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 334.48 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ವೈಭವ್ ತಮ್ಮ ಇನ್ನಿಂಗ್ಸ್ನಲ್ಲಿ 12 ಸಿಕ್ಸರ್ಗಳು ಮತ್ತು 5 ಬೌಂಡರಿಗಳನ್ನು ಹೊಡೆದರು. ವೈಭವ್ ಕೇವಲ 3 ರನ್ಗಳಿಂದ ದಾಖಲೆಯ ಶತಕದಿಂದ ವಂಚಿತರಾದರೂ ಹಲವು ದಾಖಲೆಗಳನ್ನು ಸೃಷ್ಟಿಸಿದರು (PC- PTI).
ಈ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ 15 ಪಂದ್ಯಗಳಲ್ಲಿ 680 ರನ್ ಕಲೆಹಾಕಿದ್ದು, ಈ ಮೂಲಕ ಆರೆಂಜ್ ಕ್ಯಾಪ್ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಅಷ್ಟೇ ಅಲ್ಲ, ವೈಭವ್ ಸೂರ್ಯವಂಶಿ ಐಪಿಎಲ್ನ ಒಂದೇ ಆವೃತ್ತಿಯಲ್ಲಿ 600 ಕ್ಕೂ ಹೆಚ್ಚು ರನ್ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಸೃಷ್ಟಿಸಿದರು. ಇದಕ್ಕೂ ಮೊದಲು, ಈ ದಾಖಲೆ 2018 ರಲ್ಲಿ ರಿಷಭ್ ಪಂತ್ ಹೆಸರಿನಲ್ಲಿತ್ತು (PC- PTI).
ಐಪಿಎಲ್ನ ಒಂದೇ ಸೀಸನ್ನಲ್ಲಿ 65 ಸಿಕ್ಸರ್ಗಳನ್ನು ಬಾರಿಸುವ ಮೂಲಕ ವೈಭವ್, ಕ್ರಿಸ್ ಗೇಲ್ ಅವರ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ್ದ ದಾಖಲೆಯನ್ನು ಮುರಿದಿದ್ದಾರೆ. ಇದಕ್ಕೂ ಮೊದಲು, ಕ್ರಿಸ್ ಗೇಲ್ 2012 ರಲ್ಲಿ 59 ಸಿಕ್ಸರ್ಗಳನ್ನು ಬಾರಿಸಿದ್ದರು. ಈಗ ಆ ದಾಖಲೆ ವೈಭವ್ ಸೂರ್ಯವಂಶಿ ಪಾಲಾಗಿದೆ (PC- PTI).
ಐಪಿಎಲ್ ಟೂರ್ನಿಯ ನಾಕೌಟ್ ಹಂತಗಳಲ್ಲಿ ಅತ್ಯಂತ ವೇಗದ ಅರ್ಧಶತಕ ಗಳಿಸಿದ ದಾಖಲೆಯನ್ನು ವೈಭವ್ ಸೂರ್ಯವಂಶಿ ಸರಿಗಟ್ಟಿದ್ದಾರೆ. ಇದಕ್ಕೂ ಮೊದಲು 2014 ರಲ್ಲಿ, ಸುರೇಶ್ ರೈನಾ ಪಂಜಾಬ್ ಕಿಂಗ್ಸ್ ವಿರುದ್ಧ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಈಗ ವೈಭವ್ ಸೂರ್ಯವಂಶಿ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದಾರೆ (PC- PTI).
ಪವರ್ಪ್ಲೇಯಲ್ಲಿ ವೈಭವ್ ಸೂರ್ಯವಂಶಿ ಬಾರಿಸಿದ ಐದನೇ ಅರ್ಧಶತಕ ಇದಾಗಿದೆ. ಈ ಮೂಲಕ ಪವರ್ಪ್ಲೇನಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡೇವಿಡ್ ವಾರ್ನರ್ 6 ಬಾರಿ ಈ ಸಾಧನೆ ಮಾಡಿದ್ದಾರೆ (PC- PTI).
ಪವರ್ ಪ್ಲೇನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ದಾಖಲೆಯನ್ನು ವೈಭವ್ ಸೂರ್ಯವಂಶಿ ಮುರಿದಿದ್ದಾರೆ. ವೈಭವ್ ಆರು ಓವರ್ಗಳಲ್ಲಿ 8 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಈ ಮೂಲಕ ಅವರು ಸನತ್ ಜಯಸೂರ್ಯ, ಜೋಸ್ ಬಟ್ಲರ್, ಜಾನಿ ಬೈರ್ಸ್ಟೋವ್, ಅಭಿಷೇಕ್ ಶರ್ಮಾ ಮತ್ತು ಅವರ ಹೆಸರಿನಲ್ಲಿದ್ದ 7 ಸಿಕ್ಸರ್ಗಳ ದಾಖಲೆಯನ್ನು ಮುರಿದಿದ್ದಾರೆ (PC- PTI).
ಪವರ್ಪ್ಲೇನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ವೈಭವ್ ಸೂರ್ಯವಂಶಿ ನಿರ್ಮಿಸಿದ್ದಾರೆ. 2016 ರಲ್ಲಿ ಡೇವಿಡ್ ವಾರ್ನರ್ 467 ರನ್ ಗಳಿಸಿದ್ದರು. ಈಗ ವೈಭವ್ ಸೂರ್ಯವಂಶಿ ಈ ಟೂರ್ನಿಯಲ್ಲಿ 490 ರನ್ ಗಳಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ (PC- PTI).
ನವೀನ್ ಕುಮಾರ್ ಟಿ ಎಂಬ ನಾನು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ನಮ್ಮ ಹೆಮ್ಮೆಯ ಟಿವಿನೈನ್ ನ ದೇವನಹಳ್ಳಿ ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ನಾನು ಪದವಿ ಮುಗಿಯುತ್ತಿದ್ದಂತೆ ಟಿವಿನೈನ್ ನಲ್ಲಿ ವರದಿಗಾರನಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಉದ್ದೇಯನ್ನ ಪಡೆದು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡ್ತಿದ್ದೀನಿ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಾ ಬಂದಿದ್ದೇನೆ.
ಬೆಂಗಳೂರು, ಮೇ 27: ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ಬಕ್ರೀದ್ಗೆ (Bakrid) ಕ್ಷಣಗಣನೆ ಶುರುವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಕುರಿ ಮತ್ತು ಮೇಕೆಗಳ ವ್ಯಾಪಾರ ವಹಿವಾಟು ಭರ್ಜರಿಯಾಗಿ ಕಳೆಗಟ್ಟಿದೆ. ಬೆಂಗಳೂರಿನ (bangaluru)ಐತಿಹಾಸಿಕ ಚಾಮರಾಜಪೇಟೆ ಈದ್ಗಾ ಮೈದಾನದ ಮುಖ್ಯರಸ್ತೆಗಳು ಇದೀಗ ಸಂಪೂರ್ಣವಾಗಿ ಕುರಿ ಸಂತೆಯಾಗಿ ಬದಲಾಗಿದೆ. ಹಬ್ಬಕ್ಕೆ ಇನ್ನು ಕೇವಲ ಒಂದು ದಿನ ಮಾತ್ರ ಬಾಕಿ ಇರುವುದರಿಂದ, ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕುರಿ ಮತ್ತು ಮೇಕೆಗಳನ್ನು ಮಾರಾಟಕ್ಕೆ ತರಲಾಗಿದೆ. ವಿಶೇಷವಾಗಿ ಈ ಬಾರಿ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಅಮೀನಗಡ ತಳಿಯ ಟಗರುಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿದ್ದು, ಪ್ರಮುಖ ಆಕರ್ಷಣೆಯಾಗಿವೆ.
ಮುಖ್ಯಾಂಶಗಳು
ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ಬಕ್ರೀದ್ಗೆ ಕ್ಷಣಗಣನೆ; ರಾಜಧಾನಿಯಲ್ಲಿ ಭರ್ಜರಿ ಸಿದ್ಧತೆ
ಚಾಮರಾಜಪೇಟೆ ಈದ್ಗಾ ಮೈದಾನ ರಸ್ತೆಯಲ್ಲಿ ಕುರಿ, ಮೇಕೆಗಳ ವ್ಯಾಪಾರ ವಹಿವಾಟು ಜೋರು
ಅಮೀನಗಡದ ಟಗರುಗಳದ್ದೇ ಹವಾ; ಬರೋಬ್ಬರಿ 1.5 ಲಕ್ಷ ರೂ.ವರೆಗೆ ಮಾರಾಟ!
ಇಲ್ಲಿನ ಮುಖ್ಯರಸ್ತೆಯಲ್ಲಿ ವ್ಯಾಪಾರಿಗಳು ಕಳೆದ ಒಂದು ವಾರದಿಂದ ಬೀಡುಬಿಟ್ಟಿದ್ದಾರೆ. ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಇಲ್ಲಿ ವಹಿವಾಟು ಜೋರಾಗಿರುತ್ತೆ. ಅಮೀನಗಡದ ಟಗರುಗಳಿಗೆ ಭಾರೀ ಬೇಡಿಕೆ ಇದೆ. ಬರೋಬ್ಬರಿ ಒಂದೂವರೆ ಲಕ್ಷ ರೂಪಾಯಿವರೆಗೆ ಮಾರಾಟವಾಗುತ್ತಿವೆ.
ಯಾವ ಕುರಿಗೆ ಎಷ್ಟು ಬೆಲೆ?
ಬಂಡೂರ್ ಟಗರು- 1 ಲಕ್ಷ ರೂ
ಕಿಲಾರಿ ಕುರಿ- 80 ಸಾವಿರ ರೂ
ನಾಟಿ ಕುರಿ- 60 ಸಾವಿರ ರೂ
ಕರಿ ಕುರಿ-40 ಸಾವಿರ ರೂ
ಬಾಗೇವಾಡಿ ಕುರಿ- 1.5 ಲಕ್ಷ ರೂ
ಅಮೀನ್ಗಡ ಕುರಿ- 60 ಸಾವಿರ ರೂ
ಮೈಲಾರಿ ಟಗರು- 70 ಸಾವಿರ ರೂ
ಸಂತೆಯಲ್ಲಿ ಬಂಡೂರು, ಶಿರೋಹಿ, ಮೌಳಿ, ಗೆಣಸಿ ಹಾಗೂ ಶಿರಾ ತಳಿಯ ಕುರಿಗಳು ಕೂಡ ಲಭ್ಯವಿವೆ. ಗಾತ್ರ ಮತ್ತು ತೂಕದ ಆಧಾರದ ಮೇಲೆ ಬೆಲೆ ನಿರ್ಧರಿಸಲಾಗುತ್ತದೆ. ಕಳೆದ ಬಾರಿಗಿಂತ ಈ ಬಾರಿ ಕುರಿಗಳಿಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಮೂಡಿದೆ.
ಒಟ್ಟಿನಲ್ಲಿ ಪವಿತ್ರ ತ್ಯಾಗದ ಹಬ್ಬದ ಅಂಗವಾಗಿ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ಹಣದ ಹೊಳೆ ಹರಿಯುತ್ತಿದ್ದು, ತಮಗೆ ಇಷ್ಟವಾದ, ಕೊಬ್ಬಿದ ಕುರಿಗಳನ್ನು ಖರೀದಿಸಲು ಮುಸ್ಲಿಂ ಬಾಂಧವರು ಮುಗಿಬೀಳುತ್ತಿದ್ದಾರೆ.
ನವದೆಹಲಿ, ಮೇ 27: ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದ ಸಿದ್ಧತೆ ಹಾಗೂ ಪ್ರತಿಕ್ರಿಯಾ ಕ್ರಮಗಳ ಕುರಿತು ಚರ್ಚಿಸಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ನೇತೃತ್ವದ ಸಚಿವರ ಸಮಿತಿಯು ನವದೆಹಲಿಯ ಕರ್ತವ್ಯ ಭವನದಲ್ಲಿ ಇಂದು ಸಭೆ ನಡೆಸಿತು. ಈ ಸಭೆಯಲ್ಲಿ ಜೆ.ಪಿ. ನಡ್ಡಾ, ಹರ್ದೀಪ್ ಸಿಂಗ್ ಪುರಿ, ಅಶ್ವಿನಿ ವೈಷ್ಣವ್ ಸೇರಿದಂತೆ ಹಲವು ಕೇಂದ್ರ ಸಚಿವರು ಭಾಗವಹಿಸಿದ್ದರು. ಈ ವೇಳೆ ದೇಶದಲ್ಲಿ ಸದ್ಯಕ್ಕೆ ಇಂಧನ ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆ ಸ್ಥಿತಿ ಉತ್ತಮವಾಗಿದೆ. ಜನರು ಆತಂಕದಿಂದ ಹೆಚ್ಚುವರಿ ಇಂಧನ ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳುವ ಅಗತ್ಯವಿಲ್ಲ. ದೇಶದಲ್ಲಿ ಬೇಕಾದಷ್ಟು ಇಂಧನದ ಸಂಗ್ರಹವಿದೆ ಎಂದು ಸಚಿವರು ತಿಳಿಸಿದ್ದಾರೆ.
ದೇಶದಲ್ಲಿ ಇಂಧನ ಕೊರತೆ ಇಲ್ಲ:
ಭಾರತವು ವಿಶ್ವದ ನಾಲ್ಕನೇ ಅತಿ ದೊಡ್ಡ ತೈಲ ಶುದ್ಧೀಕರಣ ದೇಶವಾಗಿದ್ದು, ವಾರ್ಷಿಕ 258.1 ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ದೇಶದ ಬಳಕೆಗಿಂತಲೂ ನಮ್ಮ ಸಾಮರ್ಥ್ಯ ಹೆಚ್ಚಾಗಿದ್ದು, ವಾರ್ಷಿಕ 61.5 ಮೆಟ್ರಿಕ್ ಟನ್ ತೈಲ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಸಭೆಯ ಬಳಿಕ ತಿಳಿಸಲಾಗಿದೆ.
ರಾಜನಾಥ್ ಸಿಂಗ್ ಅವರ ಪೋಸ್ಟ್ ಇಲ್ಲಿದೆ:
The 6th meeting of IGoM was held to review the availability of essential commodities and the resilience of our supply chains, keeping the West Asia situation in mind.
ಜಾಗತಿಕವಾಗಿ ತೈಲ ಬೆಲೆ ಹೆಚ್ಚಾಗಿದ್ದರೂ, ಅದರ ಭಾರ ಸಾಮಾನ್ಯ ಗ್ರಾಹಕರ ಮೇಲೆ ಬೀಳದಂತೆ ತಡೆಯಲು ಸಾರ್ವಜನಿಕ ವಲಯದ ತೈಲ ಕಂಪನಿಗಳು ದಿನಕ್ಕೆ ಸುಮಾರು 550 ಕೋಟಿ ರೂ.ಗಳ ನಷ್ಟವನ್ನು ತಾವೇ ಭರಿಸುತ್ತಿವೆ. ಆದರೆ, ಕೈಗಾರಿಕೆಗಳು ಮತ್ತು ವಾಣಿಜ್ಯ ಬಳಕೆಯ ಡೀಸೆಲ್ ಬೆಲೆಗಳು ಜಾಗತಿಕ ಮಾರುಕಟ್ಟೆಗೆ ತಕ್ಕಂತೆ ಇರಲಿವೆ. ಕೆಲವರು ವಾಣಿಜ್ಯ ಬಳಕೆಗೆ ಚಿಲ್ಲರೆ ಮಾರಾಟದ ಅಗ್ಗದ ಡೀಸೆಲ್ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಮತ್ತು ಕಾಳಸಂತೆಯಲ್ಲಿ ಮಾರುತ್ತಿರುವುದು ಕಂಡುಬಂದಿದ್ದು, ಇಂತಹ ವಂಚನೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಮುಂಬರುವ ಮುಂಗಾರು (ಖಾರಿಫ್ 2026) ಹಂಗಾಮಿಗೆ ದೇಶದಲ್ಲಿ ರಸಗೊಬ್ಬರ ದಾಸ್ತಾನು ಅತ್ಯಂತ ತೃಪ್ತಿದಾಯಕವಾಗಿದೆ. ಒಟ್ಟು ಅಗತ್ಯವಿರುವ 390.54 ಲಕ್ಷ ಮೆಟ್ರಿಕ್ ಟನ್ (LMT) ರಸಗೊಬ್ಬರದಲ್ಲಿ ಈಗಾಗಲೇ ಶೇ. 51ಕ್ಕಿಂತ ಹೆಚ್ಚು (ಅಂದರೆ 200.47 ಲಕ್ಷ ಮೆಟ್ರಿಕ್ ಟನ್) ದಾಸ್ತಾನು ಲಭ್ಯವಿದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಕೇವಲ ಶೇ. 33ರಷ್ಟು ದಾಸ್ತಾನು ಇರುತ್ತಿತ್ತು. ಬಿಕ್ಕಟ್ಟಿನ ನಂತರ ಒಟ್ಟು 122.4 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ಪೂರೈಕೆಗೆ ಸೇರಿಸಲಾಗಿದೆ. ಮೇ ಮತ್ತು ಜೂನ್ ತಿಂಗಳಲ್ಲಿ ಭಾರತದ ಬಂದರುಗಳಿಗೆ ಮತ್ತಷ್ಟು ರಸಗೊಬ್ಬರ ಬರಲಿದ್ದು, ರೈತರಿಗೆ ಯಾವುದೇ ಕೊರತೆಯಾಗದಂತೆ ಮತ್ತು ಆಹಾರ ಪದಾರ್ಥಗಳ ಬೆಲೆ ಸ್ಥಿರವಾಗಿರುವಂತೆ ನೋಡಿಕೊಳ್ಳಲು ರಕ್ಷಣಾ ಸಚಿವರು ಸೂಚಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಗರ್ಭಾವಸ್ಥೆ ಮಹಿಳೆಯ ಜೀವನದ ಅತ್ಯಂತ ವಿಶೇಷ ಹಂತವಾಗಿದ್ದರೂ, ಈ ಸಮಯದಲ್ಲಿ ದೇಹದಲ್ಲಿ ಹಲವು ಬದಲಾವಣೆಗಳು ಸಂಭವಿಸುತ್ತವೆ. ಅವುಗಳಲ್ಲಿ ಯೂರಿನರಿ ಟ್ರ್ಯಾಕ್ಟ್ ಇನ್ಫೆಕ್ಷನ್ (UTI) ಕೂಡ ಒಂದು. ತಜ್ಞರ ಪ್ರಕಾರ, ಗರ್ಭಿಣಿಯರಲ್ಲಿ ಯೂರಿನ್ ಇನ್ಫೆಕ್ಷನ್ ಕಾಣಿಸಿಕೊಳ್ಳುವುದು ಸಾಮಾನ್ಯವಾದರೂ ಅದನ್ನು ನಿರ್ಲಕ್ಷಿಸುವುದು ಅಪಾಯಕಾರಿಯಾಗಿದೆ. ಸರ್ ಗಂಗಾರಾಮ್ ಆಸ್ಪತ್ರೆಯ ತಜ್ಞೆ ಡಾ. ಆಭಾ ಮಜುಂದಾರ್ ಅವರು ಹೇಳುವ ಪ್ರಕಾರ, ಗರ್ಭಧಾರಣೆಯ ಸಮಯದಲ್ಲಿ ದೇಹದಲ್ಲಿ ಪ್ರೊಜೆಸ್ಟೆರೋನ್ ಹಾರ್ಮೋನ್ ಪ್ರಮಾಣ ಹೆಚ್ಚಾಗುತ್ತದೆ. ಇದು ಗರ್ಭಾಶಯದ ಜೊತೆಗೆ ಯೂರಿನರಿ ಸಿಸ್ಟಂನನ್ನೂ ಸಡಿಲಗೊಳಿಸುತ್ತದೆ. ಪರಿಣಾಮವಾಗಿ ಮೂತ್ರವು ಮೂತ್ರಾಶಯದಲ್ಲಿ ಹೆಚ್ಚು ಸಮಯ ಉಳಿಯಬಹುದು ಮತ್ತು ಸಂಪೂರ್ಣವಾಗಿ ಹೊರಬರದೇ ಇರುವ ಸಾಧ್ಯತೆ ಇರುತ್ತದೆ.
ಇದರ ಜೊತೆಗೆ ಗರ್ಭಾಶಯದ ಗಾತ್ರ ಹೆಚ್ಚಾದಂತೆ ಯೂರಿನರಿ ಮಾರ್ಗದ ಮೇಲೆ ಒತ್ತಡ ಹೆಚ್ಚಾಗಿ ಮೂತ್ರದ ಹರಿವು ನಿಧಾನಗೊಳ್ಳುತ್ತದೆ. ಗರ್ಭಿಣಿಯರ ಮೂತ್ರದಲ್ಲಿ ಸಕ್ಕರೆ ಮತ್ತು ಅಮಿನೋ ಆಮ್ಲಗಳ ಪ್ರಮಾಣವೂ ಸ್ವಲ್ಪ ಹೆಚ್ಚಾಗುವುದರಿಂದ ಬ್ಯಾಕ್ಟೀರಿಯಾ ಬೆಳೆಯಲು ಅನುಕೂಲವಾಗುತ್ತದೆ. ಇದರಿಂದ ಯೂರಿನ್ ಇನ್ಫೆಕ್ಷನ್ ಅಪಾಯ ಹೆಚ್ಚುತ್ತದೆ.