All posts by nagaraj11081993

ಬುಧವಾರವೂ ಜಾರ್ಜ್‌ಕುಟ್ಟಿ ಕಮಾಲ್; 7 ದಿನಕ್ಕೆ ‘ದೃಶ್ಯಂ 3’ ಗಳಿಕೆ ಎಷ್ಟು?

ಮಲಯಾಳಂ ನಟ ಮೋಹನ್‌ಲಾಲ್ ಮತ್ತು ನಿರ್ದೇಶಕ ಜೀತು ಜೋಸೆಫ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರ ‘ದೃಶ್ಯಂ 3’, ಬಾಕ್ಸ್ ಆಫೀಸ್‌ನಲ್ಲಿ ನಾಗಾಲೋಟ ಮುಂದುವರಿಸಿದೆ. ಮೇ 21ರಂದು ರಿಲೀಸ್ ಆದ ಈ ಫ್ಯಾಮಿಲಿ ಕ್ರೈಮ್ ಥ್ರಿಲ್ಲರ್ ಸಿನಿಮಾ, ಮೊದಲ ವಾರಾಂತ್ಯದಲ್ಲಿ ಭರ್ಜರಿ ಕಮಾಯಿ ಮಾಡಿತ್ತು. ವಾರದ ದಿನಗಳಲ್ಲಿ ಸಹಜವಾಗಿಯೇ ಕಲೆಕ್ಷನ್ ಕೊಂಚ ಕುಸಿದಿತ್ತಾದರೂ, ಬುಧವಾರ (ಮೇ 27) ಚಿತ್ರದ ಗಳಿಕೆಯಲ್ಲಿ ಅನಿರೀಕ್ಷಿತ ಪ್ರಗತಿ ಕಂಡುಬಂದಿದೆ. ಇದರೊಂದಿಗೆ ಬಿಡುಗಡೆಯಾದ ಕೇವಲ 7 ದಿನಗಳಲ್ಲೇ ಸಿನಿಮಾ ಭಾರತದಾದ್ಯಂತ 75 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ಬರೆದಿದೆ.

ಬಾಕ್ಸ್ ಆಫೀಸ್ ಟ್ರ್ಯಾಕರ್ ‘ಸ್ಯಾಕ್ನಿಲ್ಕ್’ ಅಂಕಿ-ಅಂಶಗಳ ಪ್ರಕಾರ, 7ನೇ ದಿನ ಈ ಚಿತ್ರ ಭಾರತದಲ್ಲಿ ಬರೋಬ್ಬರಿ 6.65 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿಶೇಷವೆಂದರೆ, ಮಂಗಳವಾರ ಈ ಚಿತ್ರ 6.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇಂದು (ಮೇ 28) ಬಕ್ರೀದ್ ಪ್ರಯುಕ್ತ ಸರ್ಕಾರಿ ರಜೆ ಇದ್ದು, ಚಿತ್ರ ಮತ್ತಷ್ಟು ಗಳಿಸಬಹುದು.
ಭಾರತದಲ್ಲಿ ಚಿತ್ರದ 7 ದಿನಗಳ ಒಟ್ಟು ನೆಟ್ ಕಲೆಕ್ಷನ್ 75.30 ಕೋಟಿ ರೂಪಾಯಿಗೆ ತಲುಪಿದ್ದು, ಗ್ರಾಸ್ ಕಲೆಕ್ಷನ್ 87.38 ಕೋಟಿ ರೂಪಾಯಿ ಮುಟ್ಟಿದೆ. ಭಾರತದಷ್ಟೇ ವಿದೇಶದಲ್ಲೂ ಈ ಚಿತ್ರಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. 7ನೇ ದಿನ ವಿದೇಶಿ ಮಾರುಕಟ್ಟೆಯಿಂದಲೇ ಚಿತ್ರಕ್ಕೆ 5 ಕೋಟಿ ರೂಪಾಯಿ ಹರಿದುಬಂದಿದೆ. ಇದರೊಂದಿಗೆ ವಿದೇಶದ ಒಟ್ಟು ಗ್ರಾಸ್ ಗಳಿಕೆ ಬರೋಬ್ಬರಿ 95.70 ಕೋಟಿ ರೂಪಾಯಿಗೆ ತಲುಪಿದೆ.

ಭಾರತ ಹಾಗೂ ವಿದೇಶಿ ಕಲೆಕ್ಷನ್ ಎರಡನ್ನೂ ಒಟ್ಟುಗೂಡಿಸಿದರೆ, ‘ದೃಶ್ಯಂ 3’ ಚಿತ್ರದ ವಿಶ್ವಾದ್ಯಂತ ಒಟ್ಟು ಜಾಗತಿಕ ಗ್ರಾಸ್ ಕಲೆಕ್ಷನ್ ಸದ್ಯ 183.08 ಕೋಟಿ ರೂಪಾಯಿ ತಲುಪಿದೆ. ಇನ್ನು ಕೇವಲ ಎರಡು ದಿನಗಳಲ್ಲಿ ಸಿನಿಮಾ ಸುಲಭವಾಗಿ 200 ಕೋಟಿ ಕ್ಲಬ್ ಸೇರುವುದು ಖಚಿತವಾಗಿದೆ.

ಇದನ್ನೂ ಓದಿ:  ಭಾರತಕ್ಕಿಂತ ವಿದೇಶದಲ್ಲಿ ಹೆಚ್ಚು ಕಲೆಕ್ಷನ್ ಮಾಡಿದ ‘ದೃಶ್ಯಂ 3’; ಒಟ್ಟೂ ಗಳಿಕೆ ಎಷ್ಟು?

ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಪ್ರೇಕ್ಷಕರು ಮಾತ್ರ ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಮೋಹನ್‌ಲಾಲ್ ಜೊತೆಗೆ ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್, ಸಿದ್ದಿಕ್ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಸಿಲಿಕಾನ್ ಸಿಟಿಯಲ್ಲಿ ಇವತ್ತು ಉಸಿರಾಡಲು ಯೋಗ್ಯವಾದ ಗಾಳಿ!

ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ವಾಯು ಗುಣಮಟ್ಟದಲ್ಲಿ ಸುಧಾರಣೆ!

ಬೆಂಗಳೂರು, ಮೇ 28: ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) ಹೆಚ್ಚಾಗಿ ‘ಸಾಧಾರಣ’ (Moderate) ಹಾಗೂ ಕೆಲವು ಜಿಲ್ಲೆಗಳಲ್ಲಿ ‘ಉತ್ತಮ’ (Good) ಮಟ್ಟದಲ್ಲಿದೆ. ಇತ್ತೀಚೆಗೆ ರಾಜ್ಯದ ಹಲವೆಡೆ ಬಿದ್ದ ಮಳೆ ಮತ್ತು ಬಿರುಗಾಳಿಯ ಕಾರಣದಿಂದಾಗಿ ವಾತಾವರಣದಲ್ಲಿನ ಧೂಳಿನ ಕಣಗಳು ನಿಯಂತ್ರಣಕ್ಕೆ ಬಂದಿದ್ದು, ವಾಯು ಮಾಲಿನ್ಯದ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.

ಮುಖ್ಯಾಂಶಗಳು

  • ಇತ್ತೀಚಿನ ಮಳೆಯಿಂದಾಗಿ ಬೆಂಗಳೂರಿನಲ್ಲಿ ಇಂದಿನ ವಾಯು ಗುಣಮಟ್ಟ ಸಾಧಾರಣ ಮಟ್ಟದಲ್ಲಿದೆ.
  • ಧಾರವಾಡದಲ್ಲಿ ವಾಯು ಮಾಲಿನ್ಯದ ಪ್ರಮಾಣ ಸೂಕ್ಷ್ಮ ಆರೋಗ್ಯದವರಿಗೆ ಹಾನಿಕಾರಕವಾಗಿದೆ.
  • ಗದಗ ಜಿಲ್ಲೆಯಲ್ಲಿ ಇಂದು ರಾಜ್ಯದಲ್ಲೇ ಅತ್ಯಂತ ಶುದ್ಧವಾದ ಗಾಳಿ ದಾಖಲಾಗಿದೆ.

ಬೆಂಗಳೂರಿನ ಇಂದಿನ ವಾಯು ಗುಣಮಟ್ಟ ಹೇಗಿದೆ?

ಬೆಂಗಳೂರು ನಗರದಲ್ಲಿ ಇಂದು ಸರಾಸರಿ AQI 92 ರಿಂದ 94ರಷ್ಟಿದ್ದು, ಇದು ‘ಸಾಧಾರಣ’ ವಲಯಕ್ಕೆ ಸೇರುತ್ತದೆ.

ಹೆಬ್ಬಾಳ: 69 AQI (ಸಾಧಾರಣ)
ಕುಂದಲಹಳ್ಳಿ: 97 AQI (ಸಾಧಾರಣ)
ಬಿಟಿಎಂ ಲೇಔಟ್: 88 AQI (ಸಾಧಾರಣ)
ಬಸವನಗುಡಿ: 84 AQI (ಸಾಧಾರಣ)

ಬೆಂಗಳೂರಿನಲ್ಲಿ ಸದ್ಯಕ್ಕೆ PM2.5 ಕಣಗಳ ಪ್ರಮಾಣ ಹೆಚ್ಚಾಗಿದ್ದು, ಸೂಕ್ಷ್ಮ ಆರೋಗ್ಯ ಸಮಸ್ಯೆ ಇರುವವರು (ಅಸ್ತಮಾ ಅಥವಾ ಶ್ವಾಸಕೋಶದ ತೊಂದರೆ ಇರುವವರು) ದೀರ್ಘಕಾಲದವರೆಗೆ ಹೊರಾಂಗಣದಲ್ಲಿ ಕಳೆಯುವಾಗ ಸ್ವಲ್ಪ ಎಚ್ಚರಿಕೆ ವಹಿಸುವುದು ಒಳ್ಳೆಯದು. ಸಾಮಾನ್ಯ ಜನರಿಗೆ ಈ ವಾತಾವರಣದಿಂದ ಯಾವುದೇ ತೊಂದರೆಯಿಲ್ಲ.

ಕರ್ನಾಟಕದ ಇತರೆ ನಗರಗಳ ವಾಯು ಮಾಲಿನ್ಯದ ಸ್ಥಿತಿ

  • ಧಾರವಾಡ: 118 AQI (ಇದು ಸೂಕ್ಷ್ಮ ಆರೋಗ್ಯ ಹೊಂದಿರುವವರಿಗೆ ಹಾನಿಕಾರಕ ಮಟ್ಟದಲ್ಲಿದೆ).
  • ಮೈಸೂರು: 63 AQI (ಸಾಧಾರಣ ಹಾಗೂ ಆರೋಗ್ಯಕರ).
  • ಶಿವಮೊಗ್ಗ ಮತ್ತು ಚಿಕ್ಕಮಗಳೂರು: 32 AQI (ಉತ್ತಮ ಮತ್ತು ಅತ್ಯಂತ ಶುದ್ಧ ಗಾಳಿ).
  • ಗದಗ: 17 AQI (ರಾಜ್ಯದಲ್ಲೇ ಇವತ್ತು ಅತ್ಯಂತ ಶುದ್ಧವಾದ ಗಾಳಿ ಹೊಂದಿರುವ ನಗರ).
  • ಬಾಗಲಕೋಟೆ ಮತ್ತು ರಾಮನಗರ: 73 AQI (ಸಾಧಾರಣ).

ಒಟ್ಟಾರೆಯಾಗಿ ಹೇಳುವುದಾದರೆ, ಕರ್ನಾಟಕದ ಬಹುತೇಕ ಭಾಗಗಳಲ್ಲಿ ವಾಯು ಮಾಲಿನ್ಯ ಸದ್ಯಕ್ಕೆ ನಿಯಂತ್ರಣದಲ್ಲಿದೆ. ಕೈಗಾರಿಕಾ ಪ್ರದೇಶಗಳು ಮತ್ತು ವಾಹನ ದಟ್ಟಣೆ ಹೆಚ್ಚಿರುವ ಧಾರವಾಡ ಹಾಗೂ ಬೆಂಗಳೂರಿನ ಕೆಲವು ವಾಣಿಜ್ಯ ವಲಯಗಳನ್ನು ಹೊರತುಪಡಿಸಿದರೆ, ಉಳಿದ ಜಿಲ್ಲೆಗಳಲ್ಲಿ ಜನರು ನೆಮ್ಮದಿಯಾಗಿ ನಿಟ್ಟುಸಿರು ಬಿಡಬಹುದಾದ ವಾತಾವರಣವಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚೀನಾದಿಂದ ತಪ್ಪಿಸಿಕೊಂಡು ಸಮುದ್ರದಲ್ಲಿ ರಬ್ಬರ್ ದೋಣಿಯಲ್ಲಿ 30 ಗಂಟೆಗಳ ಕಾಲ ಪ್ರಯಾಣಿಸಿ ದಕ್ಷಿಣ ಕೊರಿಯಾ ತಲುಪಿದ ಮಾಜಿ ಪೊಲೀಸ್

ಸೋಲ್, ಮೇ 28: ಚೀನಾ(China)ದಿಂದ ತಪ್ಪಿಸಿಕೊಂಡು ದಕ್ಷಿಣ ಕೊರಿಯಾಗೆ ಬಂದಿದ್ದ ಮಾಜಿ ಪೊಲೀಸ್ ಅಧಿಕಾರಿಯನ್ನು ದಕ್ಷಿಣ ಕೊರಿಯಾ ಪೊಲೀಸರು ಬಂಧಿಸಿದ್ದಾರೆ. ಆದರೆ ಅವರು ದಕ್ಷಿಣ ಕೊರಿಯಾಗೆ ಬರಲು ಮಾಡಿರುವ ಪ್ರಯತ್ನ ಸಣ್ಣ ಪುಟ್ಟದಲ್ಲ. ಮಾಜಿ ಪೊಲೀಸ್ ಅಧಿಕಾರಿ ಡಾಂಗ್ ಗುವಾಂಗ್​ಪಿಂಗ್​ ಸಣ್ಣ ರಬ್ಬರ್ ದೋಣಿಯಲ್ಲಿ 30 ಗಂಟೆಗಳ ಕಾಲ ಸಮುದ್ರದಲ್ಲಿ ಪ್ರಯಾಣಿಸಿ ಬಳಿಕ ದಕ್ಷಿಣ ಕೊರಿಯಾ ತಲುಪಿದ್ದಾರೆ. ಚೀನಾದಿಂದ ಹೇಗಾದರೂ ಮಾಡಿ ತಪ್ಪಿಸಿಕೊಂಡು, ಕೆನಡಾದಲ್ಲಿ ಆಶ್ರಯ ಪಡೆದಿರುವ ತನ್ನ ಪತ್ನಿ ಮತ್ತು ಮಗಳನ್ನು ಸೇರಲು ಅವರು ಈ ಅಪಾಯಕಾರಿ ಸಾಹಸ ಮಾಡಿದ್ದಾರೆ.

ದಡ ಸೇರುವ ಮುನ್ನ ಕೆಟ್ಟುಹೋದ ದೋಣಿ
ವರದಿಗಳ ಪ್ರಕಾರ, ಡಾಂಗ್ ಅವರು ಚೀನಾದ ಶಾಂಡೊಂಗ್ ಪ್ರಾಂತ್ಯದ ವೈಹೈನಿಂದ ದೋಣಿಯಲ್ಲಿ ಪ್ರಯಾಣ ಬೆಳೆಸಿದ್ದರು. ಪಶ್ಚಿಮ ದಕ್ಷಿಣ ಕೊರಿಯಾದ ಟೇನ್ ಕೌಂಟಿಯನ್ನು ಸಮೀಪಿಸುತ್ತಿದ್ದಂತೆ ಅವರ ದೋಣಿಯ ಎಂಜಿನ್ ಕೆಟ್ಟುಹೋಗಿತ್ತು. ಎರಡು ದಿನಗಳಿಂದ ನಿದ್ರೆಯಿಲ್ಲದೆ ಕುಸಿದು ಬೀಳುವ ಹಂತದಲ್ಲಿದ್ದ ಡಾಂಗ್ ಅವರ ದೋಣಿಯನ್ನು ಸ್ಥಳೀಯ ಮೀನುಗಾರರು ಗುರುತಿಸಿದರು. ತಕ್ಷಣವೇ ದಕ್ಷಿಣ ಕೊರಿಯಾದ ಕರಾವಳಿ ಕಾವಲು ಪಡೆ (Coast Guard) ಧಾವಿಸಿ ಅವರನ್ನು ರಕ್ಷಿಸಿದೆ. ವಲಸೆ ನಿಯಮಗಳ ಉಲ್ಲಂಘನೆಯ ಶಂಕೆಯ ಮೇಲೆ ಸದ್ಯ ಅವರನ್ನು ಬಂಧನದಲ್ಲಿಡಲಾಗಿದೆ.

ಕೆನಡಾದಲ್ಲಿ ಆಶ್ರಯ ಪಡೆದಿರುವ ಡಾಂಗ್, ಈ ಹಿಂದೆ ಕನಿಷ್ಠ ಮೂರು ಬಾರಿ ಚೀನಾದಿಂದ ತಪ್ಪಿಸಿಕೊಂಡಿದ್ದರು, ಆದರೆ ಪ್ರತಿ ಬಾರಿಯೂ ವಾಪಸ್ ಕಳುಹಿಸಲ್ಪಟ್ಟಿದ್ದರು. ಅವರು ಥೈಲ್ಯಾಂಡ್ ಮತ್ತು ನಂತರ ವಿಯೆಟ್ನಾಂಗೆ ಪಲಾಯನ ಮಾಡಿದ್ದರು, ಆದರೆ ಆ ದೇಶಗಳಲ್ಲಿನ ಅಧಿಕಾರಿಗಳು ಅವರನ್ನು ಬಂಧಿಸಿ ಚೀನಾಗೆ ಕಳುಹಿಸಿದ್ದರು.

ಮತ್ತಷ್ಟು ಓದಿ: ಜಮ್ಮು ಕಾಶ್ಮೀರ, ಲಡಾಖ್ ಭಾರತದ ಅವಿಭಾಜ್ಯ ಅಂಗ; ಪಾಕಿಸ್ತಾನ-ಚೀನಾಗೆ ವಿದೇಶಾಂಗ ಸಚಿವಾಲಯ ಚಾಟಿ

ದೇಶವಿರೋಧಿ ಕೆಲಸದಲ್ಲಿ ಅವರು ತೊಡಗಿಕೊಂಡಿದ್ದಕ್ಕೆ ಅವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು.
2015 ರಲ್ಲಿ ಥೈಲ್ಯಾಂಡ್‌ಗೆ ಪಲಾಯನ ಮಾಡಿದ್ದರೂ ಇವರನ್ನು ಮತ್ತೆ ಚೀನಾಕ್ಕೆ ಗಡೀಪಾರು ಮಾಡಲಾಯಿತು. ನಂತರ ತೈವಾನ್ ದ್ವೀಪಕ್ಕೆ ಈಜಲು ಯತ್ನಿಸಿ ಸೋತಿದ್ದರು. 2020 ರಲ್ಲಿ ವಿಯೆಟ್ನಾಂಗೆ ಅಕ್ರಮವಾಗಿ ಪ್ರವೇಶಿಸಿದಾಗಲೂ ಅಲ್ಲಿನ ಸರ್ಕಾರ ಇವರನ್ನು ಬಂಧಿಸಿ ಚೀನಾಕ್ಕೆ ಒಪ್ಪಿಸಿತ್ತು.

ಚೀನಾ-ಕೆನಡಾ ಕಾರ್ಯಕರ್ತೆ ಶೆಂಗ್ ಕ್ಸು ಸೇರಿದಂತೆ ಹಲವು ಹಕ್ಕುಗಳ ಗುಂಪುಗಳು ಡಾಂಗ್ ಅವರನ್ನು ಯಾವುದೇ ಕಾರಣಕ್ಕೂ ಮತ್ತೆ ಚೀನಾಕ್ಕೆ ವಾಪಸ್ ಕಳುಹಿಸಬಾರದು ಎಂದು ದಕ್ಷಿಣ ಕೊರಿಯಾ ಸರ್ಕಾರವನ್ನು ಒತ್ತಾಯಿಸುತ್ತಿವೆ. ಒಂದು ವೇಳೆ ಅವರನ್ನು ಚೀನಾಕ್ಕೆ ಗಡೀಪಾರು ಮಾಡಿದರೆ ಅವರಿಗೆ ಜೈಲು ಶಿಕ್ಷೆ, ಚಿತ್ರಹಿಂಸೆ ಅಥವಾ ಸಾವು ಸಂಭವಿಸುವ ಭೀತಿ ಇದೆ ಎಂದು ಕೆನಡಾ ಅಧಿಕಾರಿಗಳಿಗೂ ಪತ್ರ ಬರೆಯಲಾಗಿದೆ. ಪ್ರಸ್ತುತ ಚೀನಾದೊಂದಿಗೆ ಸಂಬಂಧ ಸುಧಾರಿಸಲು ಯತ್ನಿಸುತ್ತಿರುವ ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಅವರಿಗೆ ಈ ಪ್ರಕರಣ ರಾಜಕೀಯವಾಗಿ ಅತ್ಯಂತ ಸೂಕ್ಷ್ಮ ಸವಾಲಾಗಿ ಪರಿಣಮಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಿಎಂ ಬದಲಾದರೇ ಇಡೀ ಸಂಪುಟವೇ ಬದಲು! ಮಹತ್ವದ ಬದಲಾವಣೆಗೆ ಸಿದ್ಧವಾಗಿದೆ ಪ್ಲಾನ್

ಮುಖ್ಯಮಂತ್ರಿ ಬದಲಾದರೇ ಇಡೀ ತಂಡವೇ ಬದಲು!Image Credit source: tv9

ಬೆಂಗಳೂರು, ಮೇ 28: ಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ರಾಜೀನಾಮೆ ಪ್ರಕ್ರಿಯೆ ಬೆನ್ನಲ್ಲೇ, ರಾಜ್ಯ ಸಚಿವ ಸಂಪುಟದಲ್ಲಿ ಅತ್ಯಂತ ಪ್ರಮುಖ ಹಾಗೂ ಮಹತ್ವದ ಬದಲಾವಣೆಗಳಿಗೆ ಹೈಕಮಾಂಡ್ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ ಎಂಬುದು ತಿಳಿದುಬಂದಿದೆ. ಸಾಂವಿಧಾನಿಕ ನಿಯಮಗಳ ಪ್ರಕಾರ, ಮುಖ್ಯಮಂತ್ರಿಯೊಬ್ಬರು ರಾಜೀನಾಮೆ ನೀಡಿದ ತಕ್ಷಣ ಅವರ ಇಡೀ ಸಚಿವ ಸಂಪುಟವು ಸ್ವಯಂಚಾಲಿತವಾಗಿ ರದ್ದಾಗುತ್ತದೆ ಮತ್ತು ಸಚಿವರು ತಮ್ಮ ಸ್ಥಾನಗಳನ್ನು ಕಳೆದುಕೊಳ್ಳುತ್ತಾರೆ. ಹೊಸ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಂಡ ನಂತರವೇ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಬೇಕಾಗುತ್ತದೆ. ಈ ತಾಂತ್ರಿಕ ಪ್ರಕ್ರಿಯೆಯನ್ನೇ ಬಳಸಿಕೊಂಡು ಕಾಂಗ್ರೆಸ್ ಹೈಕಮಾಂಡ್ ಇಡೀ ತಂಡವನ್ನೇ ಬದಲಾಯಿಸಲು ಮುಂದಾಗಿದ್ದು, ಜಿದ್ದಾಜಿದ್ದಿಗೆ ಬಿದ್ದಿರುವ ಬಣಗಳನ್ನು ಶಾಂತಗೊಳಿಸಲು ಭಾರಿ ಜಾತಿ ಸಮೀಕರಣದ ಹೊಸ ಸೂತ್ರವನ್ನು ಸಿದ್ಧಪಡಿಸಿದೆ ಎನ್ನಲಾಗಿದೆ.

ಮುಖ್ಯಾಂಶಗಳು

  • ಮುಖ್ಯಮಂತ್ರಿ ರಾಜೀನಾಮೆಯಿಂದ ಇಡೀ ಸಚಿವ ಸಂಪುಟ ರದ್ದು.
  • ನೂತನ ಸಿಎಂ ನೇತೃತ್ವದಲ್ಲಿ ಹೊಸ ಟೀಮ್ ರಚನೆಗೆ ಕಸರತ್ತು.
  • ಸಿಎಂ ಪುತ್ರ ಡಾ. ಯತೀಂದ್ರಗೆ ಡಿಸಿಎಂ ಪಟ್ಟ ನೀಡಲು ಹೈಕಮಾಂಡ್ ಒಲವು.

4 ಡಿಸಿಎಂ ಹುದ್ದೆಗಳ ಭಾರಿ ಲೆಕ್ಕಾಚಾರ

ಸಿದ್ದರಾಮಯ್ಯ ರಾಜಕೀಯ ಹಿರಿತನ ಹಾಗೂ ಗೌರವಕ್ಕೆ ಯಾವುದೇ ಧಕ್ಕೆ ಬಾರದಂತೆ ನೋಡಿಕೊಳ್ಳಲು ಹೈಕಮಾಂಡ್ ಹಲವು ಪ್ರಮುಖ ಭರವಸೆಗಳನ್ನು ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೊಸದಾಗಿ ಸೃಷ್ಟಿಸಲು ಉದ್ದೇಶಿಸಿರುವ 4 ಡಿಸಿಎಂ ಹುದ್ದೆಗಳಲ್ಲಿ, ಒಬಿಸಿ (OBC) ಕೋಟಾದ ಅಡಿಯಲ್ಲಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸ್ಥಾನ ನೀಡಲು ಗಂಭೀರ ಚಿಂತನೆ ನಡೆದಿದೆ. ಇನ್ನುಳಿದಂತೆ ದಲಿತ ಕೋಟಾದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅಥವಾ ಡಾ. ಜಿ. ಪರಮೇಶ್ವರ್, ಮುಸ್ಲಿಂ ಕೋಟಾದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅಥವಾ ಸ್ಪೀಕರ್ ಯು.ಟಿ. ಖಾದರ್, ಲಿಂಗಾಯತ ಕೋಟಾದಡಿ ಸಚಿವರಾದ ಈಶ್ವರ ಖಂಡ್ರೆ ಅಥವಾ ಎಂ.ಬಿ. ಪಾಟೀಲ್ ಹಾಗೂ ಅಲ್ಪಸಂಖ್ಯಾತ ಕೋಟಾದಲ್ಲಿ ಕೆ.ಜೆ. ಜಾರ್ಜ್ ಅವರ ಹೆಸರುಗಳು ರೇಸ್‌ನಲ್ಲಿವೆ ಎಂದು ಹೇಳಲಾಗುತ್ತಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಹೊಸ ಸಂಪುಟ ಕಸರತ್ತು

ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ನಿಶ್ಚಿತವಾಗಿರುವುದರಿಂದ, ಅವರು ಸದ್ಯ ಹೊಂದಿರುವ ಕೆಪಿಸಿಸಿ (KPCC) ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ನೇಮಿಸಬೇಕಾಗುತ್ತದೆ. ಮೊದಲಿನಿಂದಲೂ ಈ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಪಟ್ಟವೂ ಸಿಗುವ ದಟ್ಟ ಸಾಧ್ಯತೆಗಳಿವೆ. ಈ ನಡುವೆ ಶಾಸಕ ವಿಶ್ವಾಸ್ ವಸಂತ್ ವೈದ್ಯ ಅವರು ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದ್ದು, ಅವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಪಕ್ಷ ಸಂಘಟನೆಗೆ ಮತ್ತಷ್ಟು ಅನುಕೂಲವಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಮತ್ತೊಂದೆಡೆ, ಸಚಿವರಾದ ಜಮೀರ್ ಅಹ್ಮದ್ ಮತ್ತು ಸತೀಶ್ ಜಾರಕಿಹೊಳಿ ಈಗಾಗಲೇ ಪ್ರತ್ಯೇಕವಾಗಿ ಸಭೆ ನಡೆಸಿರುವುದು ಕುತೂಹಲ ಮೂಡಿಸಿದೆ. ಒಟ್ಟಾರೆ ಹೊಸ ಸಂಪುಟದಲ್ಲಿ ಹಾಲಿ ಕಾರ್ಯಾಧ್ಯಕ್ಷರಿಗೆ ಹಾಗೂ ಹೊಸ ಶಾಸಕರಿಗೆ ಸಚಿವ ಸ್ಥಾನ ಮತ್ತು ನಿಗಮ ಮಂಡಳಿಗಳಲ್ಲಿ ಹೆಚ್ಚಿನ ಅವಕಾಶ ನೀಡಲು ಹೈಕಮಾಂಡ್ ಮುಂದಾಗಿದ್ದು, ಇಂದಿನ ರಾಜಕೀಯ ಬೆಳವಣಿಗೆಗಳ ಮೇಲೆ ಎಲ್ಲವೂ ನಿರ್ಧಾರವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Weather Forecast: ಮುಂದಿನ ಕೆಲವು ದಿನಗಳಲ್ಲಿ ರಾಜ್ಯಾದ್ಯಂತ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ಮುಂದಿನ ಕೆಲವು ದಿನಗಳಲ್ಲಿ ರಾಜ್ಯಾದ್ಯಂತ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ಬೆಂಗಳೂರು, ಮೇ 28: ರಾಜ್ಯದಾದ್ಯಂತ ವರುಣನ ಅಬ್ಬರ ಮುಂದುವರಿದಿದ್ದು, ರಾಜ್ಯದ ಕರಾವಳಿ ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ (Weather) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಲಾಖೆಯು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.

ಮುಖ್ಯಾಂಶಗಳು

  • ಕರಾವಳಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
  • ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಗಾಳಿಯೊಂದಿಗೆ ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ.
  • ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ನಿರೀಕ್ಷೆಯಿದೆ.

ಎಲ್ಲೆಲ್ಲಿ ಮಳೆ?

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.ಉತ್ತರ ಒಳನಾಡಿನ ಬೀದರ್, ಕಲ್ಬುರ್ಗಿ, ವಿಜಯಾಪುರ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಸಾಧಾರಣ ಮಳೆಯಾಗಲಿದೆ. ಇನ್ನು ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ್ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ.

ಇನ್ನು ದಕ್ಷಿಣ ಒಳನಾಡಿನ ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಭಾರಿ ಗಾಳಿ (ಗಂಟೆಗೆ 50-60 ಕಿ.ಮೀ) ಸಹಿತ ಮಳೆಯಾಗಲಿದೆ. ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದ ಗಾಳಿಯೊಂದಿಗೆ ಮಳೆ ಮುನ್ಸೂಚನೆ ಇದೆ.

ಅಲ್ಲದೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಜಿಟಿಜಿಟಿ ಅಥವಾ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸಾರ್ವಜನಿಕರು ಮತ್ತು ರೈತರು ಮುನ್ನೆಚ್ಚರಿಕೆ ವಹಿಸಲು ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಿಷಭ್ ಪಂತ್ ಸೇರಿ 3 ಸ್ಟಾರ್ ಆಟಗಾರರಿಗೆ ಸಂಜೀವ್ ಗೋಯೆಂಕಾ ಕೋಕ್?

ಐಪಿಎಲ್ 2026ರ ಸೀಸನ್ ಲಕ್ನೋ ಸೂಪರ್ ಜೈಂಟ್ಸ್ (LSG) ಪಾಲಿಗೆ ಸಂಪೂರ್ಣ ನಿರಾಸೆ ಮೂಡಿಸಿದೆ. ಟೂರ್ನಿಯುದ್ದಕ್ಕೂ ತಡಕಾಡಿದ ಲಕ್ನೋ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಡಬೇಕಾಗಿ ಬಂತು. ಇಡೀ ಸೀಸನ್‌ನಲ್ಲಿ ಆಡಿದ 14 ಪಂದ್ಯಗಳ ಪೈಕಿ ಕೇವಲ 4ರಲ್ಲಿ ಮಾತ್ರ ಜಯಗಳಿಸಿದರೆ, ಬರೋಬ್ಬರಿ 10 ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿತು. ಆರಂಭದಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದರೂ, ಆ ನಂತರ ಸತತ 6 ಪಂದ್ಯಗಳಲ್ಲಿ ಸೋತಿದ್ದು ತಂಡದ ಪತನಕ್ಕೆ ಕಾರಣವಾಯಿತು. ಈ ಕಳಪೆ ಪ್ರದರ್ಶನದ ಬೆನ್ನಲ್ಲೇ ತಂಡದ ಮ್ಯಾನೇಜ್‌ಮೆಂಟ್ ಮುಂದಿನ ಸೀಸನ್‌ಗಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದು, ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನ ಮೂವರು ಪ್ರಮುಖ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಆ ಮೂವರು ಆಟಗಾರರ ವಿವರ ಇಲ್ಲಿದೆ:

ರಿಷಭ್ ಪಂತ್

ಲಕ್ನೋ ತಂಡದ ನಾಯಕ ರಿಷಭ್ ಪಂತ್ ಅವರನ್ನು ತಂಡದಿಂದ ಬಿಡುಗಡೆ ಮಾಡಿ, ಹರಾಜಿನಲ್ಲಿ ಕಡಿಮೆ ಮೊತ್ತಕ್ಕೆ ಮರಳಿ ಖರೀದಿಸಲು ಫ್ರಾಂಚೈಸಿ ಯೋಚಿಸುತ್ತಿದೆ. ಲಕ್ನೋ ತಂಡ ಸೇರಿದಾಗಿನಿಂದ ಪಂತ್ ನಾಯಕತ್ವ ಹಾಗೂ ಬ್ಯಾಟಿಂಗ್ ಎರಡರಲ್ಲೂ ಸಂಪೂರ್ಣ ವೈಫಲ್ಯ ಕಂಡಿದ್ದಾರೆ. 2025ರ ಸೀಸನ್‌ನಲ್ಲಿ 13 ಇನ್ನಿಂಗ್ಸ್‌ಗಳಿಂದ ಕೇವಲ 269 ರನ್ ಗಳಿಸಿದ್ದ ಪಂತ್, ತಂಡ ಟೂರ್ನಿಯಿಂದ ಹೊರಬಿದ್ದ ನಂತರವಷ್ಟೇ ಶತಕ ಬಾರಿಸಿದ್ದರು.

2026ರ ಸೀಸನ್‌ನಲ್ಲೂ ಇವರ ಫಾರ್ಮ್ ಸುಧಾರಿಸಲಿಲ್ಲ. ಇಡೀ ಟೂರ್ನಿಯಲ್ಲಿ ಗಳಿಸಿದ್ದು ಕೇವಲ 312 ರನ್ ಮಾತ್ರ. ಐಪಿಎಲ್‌ನಲ್ಲಿನ ಈ ಕಳಪೆ ಪ್ರದರ್ಶನದಿಂದಾಗಿ ಪಂತ್ ಭಾರತ ಏಕದಿನ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಲ್ಲದೆ, ಟೆಸ್ಟ್ ತಂಡದ ಉಪನಾಯಕತ್ವವನ್ನೂ ಕಿತ್ತುಕೊಳ್ಳಲಾಗಿದೆ. ಹೀಗಾಗಿ ಇವರನ್ನು ನಾಯಕತ್ವದಿಂದ ಕೆಳಗಿಳಿಸಿ ಬಿಡುಗಡೆ ಮಾಡಲು ಲಕ್ನೋ ಚಿಂತಿಸುತ್ತಿದೆ.

ನಿಕೋಲಸ್ ಪೂರನ್

2025ರ ಮೆಗಾ ಹರಾಜಿಗೂ ಮುನ್ನ ಲಕ್ನೋ ಫ್ರಾಂಚೈಸಿ ಬರೋಬ್ಬರಿ 21 ಕೋಟಿ ರೂಪಾಯಿ ನೀಡಿ ನಿಕೋಲಸ್ ಪೂರನ್ ಅವರನ್ನು ರಿಟೇನ್ ಮಾಡಿಕೊಂಡಿತ್ತು. ಆದರೆ ಈ ವೆಸ್ಟ್‌ಇಂಡೀಸ್ ಆಟಗಾರನ ಮೇಲೆ ಇಟ್ಟಿದ್ದ ನಂಬಿಕೆ ಹುಸಿಯಾಗಿದೆ. ಲಕ್ನೋ ತಂಡದ ಉಪನಾಯಕನೂ ಆಗಿರುವ ಪೂರನ್, 2026ರ ಸೀಸನ್‌ನಲ್ಲಿ ಆಡಿದ 14 ಇನ್ನಿಂಗ್ಸ್‌ಗಳಲ್ಲಿ ಗಳಿಸಿದ್ದು ಕೇವಲ 234 ರನ್‌ಗಳನ್ನು ಮಾತ್ರ. ಮಧ್ಯಮ ಕ್ರಮಾಂಕದಲ್ಲಿ ಪೂರನ್ ಸತತವಾಗಿ ಫ್ಲಾಪ್ ಆಗಿದ್ದು ಕೂಡ ಲಕ್ನೋ ತಂಡ ಕೊನೆಯ ಸ್ಥಾನಕ್ಕೆ ಕುಸಿಯಲು ಪ್ರಮುಖ ಕಾರಣವಾಯಿತು.

ಇದನ್ನೂ ಓದಿ: ರಿಷಭ್ ಪಂತ್​ಗೆ ಗೇಟ್ ಪಾಸ್​? ಟಾಮ್ ಮೂಡಿ ಬಿಚ್ಚಿಟ್ಟ ಸತ್ಯ!

ಮಯಾಂಕ್ ಯಾದವ್

ಭಾರತದ ಯುವ ವೇಗಿ ಮಯಾಂಕ್ ಯಾದವ್ ಅವರನ್ನು 11 ಕೋಟಿ ರೂಪಾಯಿ ನೀಡಿ ಲಕ್ನೋ ತಂಡ ಉಳಿಸಿಕೊಂಡಿತ್ತು. ಆದರೆ ಇವರ ಫಿಟ್‌ನೆಸ್ ಸಮಸ್ಯೆ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. 2025ರ ಐಪಿಎಲ್‌ನಲ್ಲಿ ಕೇವಲ ಎರಡು ಪಂದ್ಯಗಳನ್ನಾಡಿ ಗಾಯದ ಸಮಸ್ಯೆಯಿಂದ ಹೊರಬಿದ್ದಿದ್ದ ಮಯಾಂಕ್, 2026ರ ಸೀಸನ್‌ನಲ್ಲಿ ಕಂಬ್ಯಾಕ್ ಮಾಡಿದರೂ ಕೇವಲ 4 ಪಂದ್ಯಗಳನ್ನಷ್ಟೇ ಆಡಲು ಸಾಧ್ಯವಾಯಿತು. ಅಷ್ಟೇ ಅಲ್ಲದೆ, ಬೌಲ್ ಮಾಡಿದ 16 ಓವರ್‌ಗಳಲ್ಲಿ ಒಂದೂ ವಿಕೆಟ್ ಪಡೆಯಲು ಇವರಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಇಷ್ಟೊಂದು ಭಾರಿ ಮೊತ್ತ ನೀಡಿ ಇವರನ್ನು ತಂಡದಲ್ಲಿ ಇಟ್ಟುಕೊಳ್ಳುವ ಬದಲು, ರಿಲೀಸ್ ಮಾಡಿ ನಂತರ ಕಡಿಮೆ ಬೆಲೆಗೆ ಆರ್ಟಿಎಂ ಮೂಲಕ ಖರೀದಿಸುವುದು ಲಕ್ನೋ ಪ್ಲಾನ್ ಆಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಿದ್ದರಾಮಯ್ಯ ರಾಜೀನಾಮೆಗೆ ಎದುರಾಗುತ್ತಾ ಬಿಗ್ ಟ್ವಿಸ್ಟ್? ರಾತ್ರೋರಾತ್ರಿ ಬೆಂಗಳೂರು ತೊರೆದು ಮುಂಬೈಗೆ ರಾಜ್ಯಪಾಲ ಗೆಹ್ಲೋಟ್!

ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಬೆಂಗಳೂರು, ಮೇ 28: ಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಭಾರಿ ಮಹತ್ವದ ಹಾಗೂ ನಾಟಕೀಯ ಬೆಳವಣಿಗೆಗಳು ಜರುಗುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು (ಮೇ 28) ಬೆಳಗ್ಗೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿರುವ ಬೆನ್ನಲ್ಲೇ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬುಧವಾರ ಮಧ್ಯರಾತ್ರಿ ದಿಢೀರನೆ ಮುಂಬೈಗೆ ಪ್ರಯಾಣ ಬೆಳೆಸಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಹಾಗೂ ಸಂಚಲನ ಮೂಡಿಸಿದೆ. ಸಂಬಂಧಿಕರ ಅನಾರೋಗ್ಯದ ಕಾರಣ ನೀಡಿ ರಾಜ್ಯಪಾಲರು ರಾತ್ರಿ 11.45ಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ತೆರಳಿದ್ದಾರೆ. ರಾತ್ರಿ ಮುಂಬೈನಲ್ಲಿ ತಂಗಿರುವ ಅವರು, ಬೆಳಗ್ಗೆ ಇಂದೋರ್‌ಗೆ ಪ್ರಯಾಣಿಸುತ್ತಿದ್ದಾರೆ ಎನ್ನಲಾಗಿದೆ. ಸಿಎಂ ರಾಜೀನಾಮೆ ಸಲ್ಲಿಕೆಯ ಸಮಯದಲ್ಲೇ ರಾಜ್ಯಪಾಲರ ಈ ದಿಢೀರ್ ಪ್ರವಾಸ ಹೊಸ ರಾಜಕೀಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ.

ಮುಖ್ಯಾಂಶಗಳು

  • ಸಿಎಂ ಸಿದ್ದರಾಮಯ್ಯ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ್ದರೂ ಬೆಂಗಳೂರು ತೊರೆದ ರಾಜ್ಯಪಾಲರು.
  • ಮಧ್ಯರಾತ್ರಿ 11.45ಕ್ಕೆ ಮುಂಬೈಗೆ ತೆರಳಿದ ಗವರ್ನರ್ ಥಾವರ್ ಚಂದ್ ಗೆಹ್ಲೋಟ್.
  • ವಿಧಾನಸೌಧದಲ್ಲಿ ಭಾವನಾತ್ಮಕ ವಿದಾಯ ಪಡೆದ ಮುಖ್ಯಮಂತ್ರಿ.

ವಿಧಾನಸೌಧದಲ್ಲಿ ಭಾವುಕ ವಿದಾಯ – ಕಣ್ಣೀರಿಟ್ಟ ಸಿಬ್ಬಂದಿ

ಮತ್ತೊಂದೆಡೆ, ಸಿದ್ದರಾಮಯ್ಯ ಅವರ ಅಧಿಕಾರದ ಕೊನೆಯ ದಿನಗಳು ಹತ್ತಿರವಾಗುತ್ತಿದ್ದಂತೆ ವಿಧಾನಸೌಧದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 323ರ ಸಿಎಂ ಕಚೇರಿಯಲ್ಲಿ ಭಾವುಕ ಸನ್ನಿವೇಶ ಸೃಷ್ಟಿಯಾಯಿತು. ಮೂರು ವರ್ಷಗಳ ಹಿಂದೆ (ಮೇ 20, 2023) ಪೂಜೆ ನೆರವೇರಿಸಿ ಸಂಭ್ರಮದಿಂದ ಸಿದ್ದರಾಮಯ್ಯ ಅವರ ನಾಮಫಲಕ ಹೊತ್ತು ಸಜ್ಜಾಗಿದ್ದ ಸಿಎಂ ಕಚೇರಿ ಈಗ ಬಹುತೇಕ ಖಾಲಿಯಾಗಿದೆ. ನಿನ್ನೆ ಸಿಎಂ ಕಚೇರಿಯಿಂದ ಸಿದ್ದರಾಮಯ್ಯ ಹೊರನಡೆಯುತ್ತಿದ್ದಾಗ ಸಚಿವಾಲಯದ ನೂರಾರು ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ. ಸಿಬ್ಬಂದಿಗೆ ಸಮಾಧಾನಪಡಿಸುತ್ತಾ ಸಿದ್ದರಾಮಯ್ಯ ಅವರು ಕೈಮುಗಿದು ಹೆಜ್ಜೆ ಹಾಕುತ್ತಿದ್ದಾಗ, ‘ಸಿದ್ದರಾಮಯ್ಯ ಸಾಹೇಬ್ರಿಗೆ ಜೈ, ಹುಲಿಗೆ ಜೈ’ ಎಂಬ ಘೋಷಣೆಗಳು ಮೊಳಗಿದವು.

ಈ ಭಾವುಕ ಕ್ಷಣಗಳ ನಡುವೆಯೇ ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಅವರಿಂದ ಬಹುನಿರೀಕ್ಷಿತ ‘ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿಗಣತಿ)’ ವರದಿಯನ್ನು ಅಧಿಕೃತವಾಗಿ ಸ್ವೀಕರಿಸಿ ಕೊನೆಯ ಅವಧಿಯಲ್ಲೂ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ.

ರಾಜ್ಯಾದ್ಯಂತ ಭುಗಿಲೆದ್ದ ಅಹಿಂದ ಆಕ್ರೋಶ

ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ರಾಜ್ಯಾದ್ಯಂತ ಅವರ ಅಭಿಮಾನಿಗಳು ಹಾಗೂ ಅಹಿಂದ ಸಂಘಟನೆಗಳ ಆಕ್ರೋಶದ ಜ್ವಾಲಾಮುಖಿ ಸ್ಫೋಟಿಸಿದೆ. ಬೆಂಗಳೂರಿನ ಕಾವೇರಿ ನಿವಾಸದ ಮುಂದೆ ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಅಭಿಮಾನಿಗಳು ಜಮಾಯಿಸಿ ಆಕ್ರೋಶ ಹೊರಹಾಕಿದ್ದಾರೆ. ‘ಸಿದ್ದರಾಮಯ್ಯರನ್ನು ಕೆಳಗಿಳಿಸಿದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಅಲ್ಲಗಳೆದ ಸುರ್ಜೇವಾಲ: ಊಹಾಪೋಹಗಳಿಗೆ ಕಿವಿಗೊಡದಂತೆ ಮನವಿ

ರಾಜ್ಯ ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಹಾಗೂ ಅಹಿಂದ ಮುಖಂಡ ಸಿದ್ದಣ್ಣ ತೇಜಿ ಅವರು ರಾಜ್ಯಾದ್ಯಂತ ಭಾರಿ ಹೋರಾಟಕ್ಕೆ ಕರೆ ನೀಡಿದ್ದಾರೆ. ಇತ್ತ ಮಂಡ್ಯದಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಪಂಜಿನ ಮೆರವಣಿಗೆ ನಡೆಸಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟಿಸಿದರೆ, ಕಲಬುರಗಿಯಲ್ಲಿ ಎಸ್​ವಿಪಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಒಟ್ಟಿನಲ್ಲಿ, ಸಿಎಂ ಸ್ಥಾನದಿಂದ ‘ಟಗರು’ ಕೆಳಗಿಳಿಯುತ್ತಿದ್ದಾರೆ ಎನ್ನುವುದು ಅಹಿಂದ ವರ್ಗಕ್ಕೆ ಬರಸಿಡಿಲು ಬಡಿದಂತಾಗಿದೆ. ಇದರ ಮಧ್ಯೆ, ರಾಜ್ಯಪಾಲರು ಬೆಂಗಳೂರು ತೊರೆದಿರುವುದು ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today: ಇಂದು ಈ ರಾಶಿಯವರಿಗೆ ಕೆಲಸದಲ್ಲಿ ಯಶಸ್ಸು

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 28, ಗುರುವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಈ ದಿನದಂದು ಪರಾಭವನಾಮ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ, ದ್ವಾದಶಿ, ಚಿತ್ತಾ ನಕ್ಷತ್ರ, ವರಿಯನ್ ಯೋಗ, ಬಾಲವಕರಣ ಇರುತ್ತದೆ.

ರವಿ ವೃಷಭ ರಾಶಿಯಲ್ಲಿ ಮತ್ತು ಚಂದ್ರ ತುಲಾ ರಾಶಿಯಲ್ಲಿ ಸಂಚಾರ ಮಾಡಲಿದ್ದು, ಈ ದಿನದ ರಾಹುಕಾಲ ಮಧ್ಯಾಹ್ನ 1:51 ರಿಂದ 3:27 ರವರೆಗೆ ಇರುತ್ತದೆ. ಸರ್ವಸಿದ್ಧಿ ಸಂಕಲ್ಪ ಶುಭಕಾಲವು ಮಧ್ಯಾಹ್ನ 12:16 ರಿಂದ 1:51 ರವರೆಗೆ ಇರುತ್ತದೆ. ಇಂದು ಗುರುಗಳಿಗೆ ದರ್ಶನ ಅಥವಾ ಸ್ಮರಣೆ ಮಾಡುವುದರಿಂದ ಧನಾತ್ಮಕ ಶಕ್ತಿಗಳು ದೊರೆಯುತ್ತವೆ ಎಂದು ಗುರೂಜಿ ಹೇಳಿದ್ದಾರೆ.

 

 

 

Source link

‘ಮದುವೆಯಾಗಿ ನೀವೇನು ಸಾಧಿಸಿದ್ದೀರಾ?’: ಮದುವೆ ವಿಷಯದಲ್ಲಿ ಟ್ರೋಲ್ ಮಾಡಿದವರಿಗೆ ಶಮಿತಾ ಶೆಟ್ಟಿ ಖಡಕ್ ಉತ್ತರ

ಬಾಲಿವುಡ್ ನಟಿ ಶಮಿತಾ ಶೆಟ್ಟಿ ಅವರಿಗೆ ಈಗ 47 ವಯಸ್ಸು. ಅವರ ಅಕ್ಕ, ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಈಗಾಗಲೇ 14 ವರ್ಷದ ಮಗನಿದ್ದರೂ, ಶಮಿತಾ ಮಾತ್ರ ಮದುವೆಯಾಗಲು ಯಾವುದೇ ಗಡಿಬಿಡಿ ಮಾಡಿಕೊಂಡಿಲ್ಲ. ಸಮಾಜ ಹೇಳುತ್ತದೆ ಎಂಬ ಕಾರಣಕ್ಕೆ ತಮಗೆ ಮದುವೆ ಆಗಲು ಇಷ್ಟವಿಲ್ಲ ಎಂಬುದನ್ನು ಅವರು ಮೊದಲಿನಿಂದಲೂ ಹೇಳುತ್ತಾ ಬಂದಿದ್ದಾರೆ. ಆದರೆ, ಇದನ್ನೇ ನೆಪವಾಗಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಟ್ರೋಲ್ ಮಾಡಲಾಗಿದೆ. ಟ್ರೋಲರ್‌ಗಳಿಗೆ ಶಮಿತಾ ಈಗ ತಕ್ಕ ಶಾಸ್ತಿ ಮಾಡಿದ್ದಾರೆ.

ಟ್ರೋಲರ್‌ಗಳ ಬಾಯಿ ಮುಚ್ಚಿಸಿದ ನಟಿ

ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕಾಮೆಂಟ್ ಒಂದರ ಸ್ಕ್ರೀನ್‌ಶಾಟ್ ಹಂಚಿಕೊಂಡಿರುವ ಶಮಿತಾ, ಟ್ರೋಲ್ ಮಾಡಿದ ವ್ಯಕ್ತಿಗೆ ಸುದೀರ್ಘವಾದ ಮತ್ತು ಖಡಕ್ ಆದ ಸಂದೇಶವೊಂದನ್ನು ಬರೆದಿದ್ದಾರೆ. ‘ನಿಮ್ಮ ಅದ್ಭುತವಾದ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಲು ನಾನು ಈ ಉತ್ತಮ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇನೆ. ನಿಮಗೆ ವಯಸ್ಸಾಗಿದೆ, ಹಳೇ ಕಳೆ ಈಗ ಉಳಿದಿಲ್ಲ ಎಂದು ನೀವು ಬರೆದಿದ್ದೀರಿ. ಹೌದು, ವಯಸ್ಸಾದಂತೆ ನಾನು ವಿಭಿನ್ನವಾಗಿ ಕಾಣುತ್ತಿರುವುದು ನಿಜ. ಸಮಯದೊಂದಿಗೆ ಎಲ್ಲವೂ ಬದಲಾಗುತ್ತದೆ. ಇದು ಪ್ರಕೃತಿಯ ನಿಯಮ. ದೈಹಿಕ ರೂಪ ಸೇರಿದಂತೆ ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಆದರೆ ಈ ವಯಸ್ಸಿನಲ್ಲೂ ನಾನು ಆರೋಗ್ಯವಾಗಿದ್ದೇನೆ, ಫಿಟ್ ಆಗಿದ್ದೇನೆ ಮತ್ತು ಭಗವಂತ ನನಗೆ ನೀಡಿರುವ ಎಲ್ಲದಕ್ಕೂ ಕೃತಜ್ಞತೆಯಿಂದ ಸಂತೋಷವಾಗಿದ್ದೇನೆ. ನನಗೆ ಅಷ್ಟೇ ಸಾಕು,’ ಎಂದು ಶಮಿತಾ ಬರೆದಿದ್ದಾರೆ.

‘ಮದುವೆಯಾಗಿ ನೀವೇನು ಕಿತ್ತಾಕಿದ್ದೀರಾ?’

‘ಸಮಯಕ್ಕೆ ಸರಿಯಾಗಿ ಮದುವೆಯಾಗಿದ್ದರೆ ನಿಮ್ಮ ಮಕ್ಕಳು ಇಷ್ಟೊತ್ತಿಗೆ ದೊಡ್ಡವರಾಗುತ್ತಿದ್ದರು’ ಎಂಬ ಕಾಮೆಂಟ್‌ಗೆ ಉತ್ತರಿಸಿದ ಅವರು, ‘ಅದಕ್ಕೀಗೇನು? ನೀವು ಎಲ್ಲರಿಗೂ ಗೊತ್ತಿರುವ ವಿಷಯವನ್ನೇ ಹೇಳಿದ್ದೀರಿ. ಆದರೆ ಮದುವೆಯಾಗಿ ನೀವೇನು ಸಾಧಿಸಿದ್ದೀರಾ? ಎಲ್ಲದಕ್ಕಿಂತ ಮುಖ್ಯವಾಗಿ, ಒಂಟಿ ಮಹಿಳೆಯರನ್ನು ಈ ರೀತಿ ವಯಸ್ಸಿನ ಹೆಸರಿನಲ್ಲಿ ಅವಮಾನಿಸಲು ಮತ್ತು ನಿಮ್ಮ ಪಿತೃಪ್ರಧಾನ, ಹಳಸಲು ಆಲೋಚನೆಗಳನ್ನು ನಮ್ಮ ಮೇಲೆ ಹೇರಲು ನೀವು ನಮ್ಮನ್ನು ಏಕೆ ಫಾಲೋ ಮಾಡುತ್ತೀರಿ? ದಯವಿಟ್ಟು ನನಗೊಂದು ಉಪಕಾರ ಮಾಡಿ, ತಕ್ಷಣ ನನ್ನನ್ನು ಅನ್‌ಫಾಲೋ ಮಾಡಿ’ ಎಂದು ಆಕ್ರೋಶ ಹೊರಹಾಕಿದ್ದಾರೆ.

ಚಿತ್ರರಂಗದಿಂದ ರಿಯಾಲಿಟಿ ಶೋಗಳವರೆಗೆ…

2000ನೇ ಇಸವಿಯಲ್ಲಿ ಆದಿತ್ಯ ಚೋಪ್ರಾ ಅವರ ಬ್ಲಾಕ್‌ಬಸ್ಟರ್ ಸಿನಿಮಾ ‘ಮೊಹಬ್ಬತೇನ್’ ಮೂಲಕ ಶಮಿತಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ತದನಂತರ ‘ಜೆಹರ್’, ‘ಫರೇಬ್’ ಮತ್ತು ‘ಕ್ಯಾಶ್’ ನಂತಹ ಸಿನಿಮಾಗಳಲ್ಲಿ ನಟಿಸಿದರು. ಆ ಬಳಿಕ ಚಿತ್ರರಂಗದಿಂದ ಬ್ರೇಕ್ ಪಡೆದು ಇಂಟೀರಿಯರ್ ಡಿಸೈನಿಂಗ್ ಕಡೆ ಗಮನ ಹರಿಸಿದ್ದ ಶಮಿತಾ, ನಂತರದ ದಿನಗಳಲ್ಲಿ ರಿಯಾಲಿಟಿ ಶೋಗಳ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದರು.

ಇದನ್ನೂ ಓದಿ: ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಬಾಳಲ್ಲಿ ಬ್ರೇಕಪ್​; ರಾಕೇಶ್​ ಬಾಪಟ್​ ಜತೆಗಿನ ಸಂಬಂಧ ಅಂತ್ಯ

‘ಝಲಕ್ ದಿಖ್ಲಾ ಜಾ 8’, ‘ಖತ್ರೋನ್ ಕೆ ಕಿಲಾಡಿ 9’, ‘ಬಿಗ್ ಬಾಸ್ ಒಟಿಟಿ’ ಮತ್ತು ‘ಬಿಗ್ ಬಾಸ್ 15’ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಭಾರಿ ಜನಪ್ರಿಯತೆ ಗಳಿಸಿದರು. ‘ಬಿಗ್ ಬಾಸ್’ ಮನೆಯಲ್ಲಿದ್ದಾಗ ಸಹ-ಸ್ಪರ್ಧಿ ರಾಕೇಶ್ ಬಾಪಟ್ ಜೊತೆಗಿನ ಇವರ ಪ್ರೇಮಕಥೆ ಭಾರಿ ಸದ್ದು ಮಾಡಿತ್ತಾದರೂ, 2022ರಲ್ಲಿ ತಾವಿಬ್ಬರು ಪರಸ್ಪರ ಒಪ್ಪಿಗೆಯಿಂದ ದೂರಾಗಿರುವುದಾಗಿ ಶಮಿತಾ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಹಳೇ ಬಟ್ಟೆಗಳನ್ನು ಮನೆ ಒರೆಸಲು ಉಪಯೋಗಿಸುವವರೇ ಹುಷಾರ್!

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ನಾವು ಬಳಸಿದ ಹಳೆಯ ಬಟ್ಟೆಗಳನ್ನು ಯಾಕೆ ಮನೆ ಒರೆಸಲು ಬಳಸಬಾರದು ಎಂದು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ.ಮನೆ ಶುಚಿತ್ವವು ಶ್ರೇಯಸ್ಸು, ಸಮೃದ್ಧಿ ಮತ್ತು ನೆಮ್ಮದಿಗೆ ಕಾರಣವಾಗುತ್ತದೆ. ಆದಾಗ್ಯೂ, ಮನೆಯನ್ನು ಶುಚಿಗೊಳಿಸುವಾಗ, ವಿಶೇಷವಾಗಿ ಒರೆಸುವಾಗ ಬಳಸುವ ಸಾಧನಗಳ ಬಗ್ಗೆ ಎಚ್ಚರಿಕೆ ವಹಿಸಬೇಕು.

ಇಂದಿನ ಕಾಲದಲ್ಲಿ ಮನೆಯನ್ನು ಒರೆಸಲು ವಿವಿಧ ಮಾಫ್‌ಗಳನ್ನು ಬಳಸಲಾಗುತ್ತದೆ. ಆದರೆ, ಅನೇಕರು ಹಳೆಯ, ಬಳಸಿದ ಮತ್ತು ಹರಿದ ಬಟ್ಟೆಗಳನ್ನು ಮನೆ ಸ್ವಚ್ಛತೆಗೆ ಉಪಯೋಗಿಸುತ್ತಾರೆ. ಜ್ಯೋತಿಷ್ಯದ ಪ್ರಕಾರ, ಹಳೆಯ ಬಟ್ಟೆಗಳನ್ನು ಮನೆ ಒರೆಸಲು ಬಳಸುವುದರಿಂದ ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶಿಸಬಹುದು. ಚಂದ್ರ, ಶುಕ್ರ ಮತ್ತು ರವಿ ಗ್ರಹಗಳು ಮನೆಯ ಶುಚಿಗೆ ಕಾರಕತ್ವವಾಗಿವೆ. ಹಳೆಯ ಬಟ್ಟೆಗಳ ಬಳಕೆಯು ಈ ಗ್ರಹಗಳ ಪ್ರಭಾವವನ್ನು ದುರ್ಬಲಗೊಳಿಸಿ, ಭಾವನೆಗಳಿಗೆ ಧಕ್ಕೆ, ಕುಟುಂಬದಲ್ಲಿ ಕಲಹಗಳು, ಆರೋಗ್ಯ ಸಮಸ್ಯೆಗಳು ಮತ್ತು ವ್ಯಕ್ತಿಗಳ ಮುಖದ ತೇಜಸ್ಸು ಕಡಿಮೆಯಾಗಲು ಕಾರಣವಾಗುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ.

 

Source link