All posts by nagaraj11081993

IPL 2026: ಧೋನಿ ಇಲ್ಲದ ಸಿಎಸ್​ಕೆ ಪ್ಲೇಯಿಂಗ್ 11 ಪ್ರಕಟ

IPL 2026: ಧೋನಿ ಇಲ್ಲದ ಸಿಎಸ್​ಕೆ ಪ್ಲೇಯಿಂಗ್ 11 ಪ್ರಕಟ

ಐಪಿಎಲ್​ನ (IPL) ಮೊದಲ ಸೀಸನ್‌ನಿಂದ ಆಡುತ್ತಿರುವ ಮಹೇಂದ್ರ ಸಿಂಗ್ ಧೋನಿ (MS Dhoni) ಈ ಬಾರಿಯೂ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡುವುದನ್ನು ಕಾಣಬಹುದು. ಆದಾಗ್ಯೂ ಧೋನಿ ಈ ಆವೃತ್ತಿಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುತ್ತಾರಾ? ಅಥವಾ ಇಡೀ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬುದು ಖಚಿತವಾಗಿಲ್ಲ. ಇದೆಲ್ಲದರ ಹೊರತಾಗಿ ಧೋನಿ ಸಿಎಸ್​ಕೆ ತಂಡದಲ್ಲಿ ಆಡುವುದು ಖಚಿತ. ಇದೆಲ್ಲದರ ನಡುವೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಚೆನ್ನೈ ಸೂಪರ್ ಕಿಂಗ್ಸ್‌ನ ಪ್ಲೇಯಿಂಗ್ 11 ಪ್ರಕಟಿಸಿದ್ದು, ಅಚ್ಚರಿಯ ಸಂಗತಿಯೆಂದರೆ ಪಠಾಣ್ ಅವರ ಆಡುವ ಹನ್ನೊಂದರ ಬಳಗದಲ್ಲಿ ಧೋನಿಗೆ ಸ್ಥಾನ ನೀಡಿಲ್ಲ. ಇಂಪ್ಯಾಕ್ಟ್ ಪ್ಲೇಯರ್ ಆಗಿಯೂ ಪಠಾಣ್, ಧೋನಿ ಹೆಸರನ್ನು ತೆಗೆದುಕೊಂಡಿಲ್ಲ.

ಪಠಾಣ್ ಆಯ್ಕೆ ಮಾಡಿರುವ ತಂಡ

ಈ ಬಾರಿಯ ಐಪಿಎಲ್​ಗಾಗಿ ಚೆನ್ನೈ ಸೂಪರ್ ಕಿಂಗ್ಸ್‌ನ ಅತ್ಯುತ್ತಮ 12 ಆಟಗಾರರ ಬಳಗವನ್ನು ಇರ್ಫಾನ್ ಪಠಾಣ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಆಯ್ಕೆ ಮಾಡಿದ್ದಾರೆ. ಈ ತಂಡದಲ್ಲಿ ಇರ್ಫಾನ್ ಪಠಾಣ್ ಸಂಜು ಸ್ಯಾಮ್ಸನ್ ಮತ್ತು ಆಯುಷ್ ಮ್ಹಾತ್ರೆ ಅವರನ್ನು ಆರಂಭಿಕ ಆಟಗಾರರನ್ನಾಗಿ ಆಯ್ಕೆ ಮಾಡಿದ್ದಾರೆ. ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನು ಮೂರನೇ ಸ್ಥಾನಕ್ಕೆ ಕಳುಹಿಸಲು ಅವರು ನಿರ್ಧರಿಸಿದ್ದಾರೆ. ಶಿವಂ ದುಬೆ ಅವರನ್ನು ನಾಲ್ಕನೇ ಸ್ಥಾನಕ್ಕೆ ಮತ್ತು ಡೆವೋಲ್ಡ್ ಬ್ರೆವಿಸ್ ಅವರನ್ನು ಐದನೇ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

ಇರ್ಫಾನ್ ಪಠಾಣ್ ಆರನೇ ಸ್ಥಾನಕ್ಕೆ ಸರ್ಫರಾಜ್ ಖಾನ್ ಅವರಿಗೆ ಆದ್ಯತೆ ನೀಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಬದಲಿಗೆ ಸರ್ಫರಾಜ್ ಖಾನ್ ಈ ಸ್ಥಾನಕ್ಕೆ ಸೂಕ್ತ ಎಂದು ಅವರು ಹೇಳಿದ್ದಾರೆ. ಏಕೆಂದರೆ ಕಳೆದ ಎರಡು ಸೀಸನ್‌ಗಳಲ್ಲಿ ಧೋನಿ ಕೊನೆಯ ಎರಡು ಓವರ್‌ಗಳಿಗೆ ಮಾತ್ರ ಬ್ಯಾಟಿಂಗ್ ಮಾಡಲು ಬಂದಿದ್ದರು. ಅಭಿಮಾನಿಗಳ ಉತ್ಸಾಹ ಹೆಚ್ಚಿಸಲು ಇದು ಒಳ್ಳೆಯದು. ಆದರೆ ಫ್ರಾಂಚೈಸಿಯ ದೃಷ್ಟಿಕೋನದಿಂದ ಇದು ಸರಿಯಲ್ಲ.

ಧೋನಿ ಬಗ್ಗೆ ಪಠಾಣ್ ಅಭಿಪ್ರಾಯ

ಇರ್ಫಾನ್ ಪಠಾಣ್ ಅವರ ಪ್ರಕಾರ, ಧೋನಿ ಕನಿಷ್ಠ ನಾಲ್ಕು ಓವರ್‌ಗಳಾದರೂ ಬ್ಯಾಟಿಂಗ್ ಮಾಡಬೇಕು. ಧೋನಿ ತಂಡದಲ್ಲಿ ಪೂರ್ಣ ಪ್ರಮಾಣದ ಆಟಗಾರನಾಗಿ ಆಡಿದರೆ ಅದು ಫ್ರಾಂಚೈಸಿಯಗೆ ಉತ್ತಮ. ಆದರೆ ಅದು ಸಂಭವಿಸದಿದ್ದರೆ, ಒಂದು ಪ್ರಶ್ನಾರ್ಥಕ ಚಿಹ್ನೆ ಉದ್ಭವಿಸುತ್ತದೆ. ಪ್ರತಿಯೊಬ್ಬ ಶ್ರೇಷ್ಠ ಆಟಗಾರನಿಗೂ, ಅವನು ಆಟವನ್ನು ಬಿಡಬೇಕಾದ ಸಮಯ ಬರುತ್ತದೆ. ಧೋನಿ ಈಗ ಸಿಎಸ್‌ಕೆ ತಂಡವನ್ನು ನಿರ್ಮಿಸುವತ್ತ ಗಮನಹರಿಸಬೇಕು. ಇದರಿಂದ ಹೆಚ್ಚಿನ ಬ್ಯಾಟ್ಸ್‌ಮನ್‌ಗಳಿಗೆ ಅವಕಾಶ ನೀಡುತ್ತದೆ. ಆದರೆ ಧೋನಿ ಆಡಲು ನಿರ್ಧರಿಸಿದರೆ, ಸರ್ಫರಾಜ್ ಖಾನ್ ಸಿಎಸ್‌ಕೆ ಪರ ತಮ್ಮ ಚೊಚ್ಚಲ ಐಪಿಎಲ್ ಪಂದ್ಯಕ್ಕಾಗಿ ಸ್ವಲ್ಪ ಸಮಯ ಕಾಯಬೇಕಾಗುತ್ತದೆ ಎಂದಿದ್ದಾರೆ.

ಕೆಳಕ್ರಮಾಂಕದಲ್ಲಿ ಯಾರು?

ಉಳಿದಂತೆ ಇರ್ಫಾನ್ ಪಠಾಣ್ ತಂಡದಲ್ಲಿ, ಕಾರ್ತಿಕ್ ಶರ್ಮಾ ಏಳನೇ ಕ್ರಮಾಂದಲ್ಲಿ, ಪ್ರಶಾಂತ್ ವೀರ್ ಎಂಟನೇ ಕ್ರಮಾಂದಲ್ಲಿ ಆಡಲಿದ್ದಾರೆ. ಸ್ಪಿನ್ ಬೌಲಿಂಗ್ ಜವಾಬ್ದಾರಿಯನ್ನು ಅಕೀಲ್ ಹುಸೇನ್ ಮತ್ತು ನೂರ್ ಅಹ್ಮದ್ ಅವರ ಹೆಗಲ ಮೇಲೆ ಹಾಕಿರುವ ಪಠಾಣ್, ವೇಗದ ಬೌಲರ್​ಗಳಾಗಿ ಮ್ಯಾಟ್ ಹೆನ್ರಿ ಮತ್ತು ಖಲೀಲ್ ಅಹ್ಮದ್ (ಇಂಪ್ಯಾಕ್ಟ್ ಪ್ಲೇಯರ್) ಅವರಿಗೆ ಅವಕಾಶ ನೀಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುನಿಸಿಕೊಂಡ ಬಾಲಕಿಯನ್ನು ಮನೆಗೆ ಕರೆಸಿ ಊಟ ಬಡಿಸಿದ ರಶ್ಮಿಕಾ ಮಂದಣ್ಣ, ವಿಜಯ್

ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ದಂಪತಿಯು ತಮ್ಮ ಪುಟ್ಟ ಅಭಿಮಾನಿಯೊಬ್ಬಳ ಆಸೆಯನ್ನು ಈಡೇರಿಸುವ ಮೂಲಕ ಫ್ಯಾನ್ಸ್ ಮನ ಗೆದ್ದಿದ್ದಾರೆ. ತನ್ನನ್ನು ಮದುವೆಗೆ ಆಹ್ವಾನಿಸಿಲ್ಲ ಎಂದು ಮುನಿಸಿಕೊಂಡಿದ್ದ ಬಾಲಕಿಯನ್ನು ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸಕ್ಕೆ ಕರೆಸಿಕೊಂಡು ಪ್ರೀತಿಯಿಂದ ಆತಿಥ್ಯ ನೀಡಿದ್ದಾರೆ. ಈ ವಿಡಿಯೋವನ್ನು ಬಾಲಕಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಫೆಬ್ರವರಿ 28ರಂದು ರಶ್ಮಿಕಾ ಮತ್ತು ವಿಜಯ್ ಅದ್ದೂರಿಯಾಗಿ ವಿವಾಹವಾಗಿದ್ದರು. ಈ ಸಂದರ್ಭದಲ್ಲಿ ಪುಟ್ಟ ಬಾಲಕಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಳು. ‘ನಾನೂ ನಿಮ್ಮ ಅಭಿಮಾನಿ ಅಲ್ವಾ? ನನ್ನನ್ನೇಕೆ ಮದುವೆಗೆ ಕರೆದಿಲ್ಲ? ಎಲ್ಲರಿಗೂ ಲಡ್ಡು ಕೊಡುತ್ತಿದ್ದೀರಿ, ಅನ್ನದಾನ ಮಾಡುತ್ತಿದ್ದೀರಿ, ನನಗೆ ಮಾತ್ರ ಇಲ್ಲವೇ?’ ಎಂದು ಮುಗ್ಧವಾಗಿ ಪ್ರಶ್ನಿಸಿದ್ದಳು. ಈ ವಿಡಿಯೋ ಕಂಡು ಮನಸೋತಿದ್ದ ವಿಜಯ್ ದೇವರಕೊಂಡ, ‘ನಿನ್ನನ್ನು ಮನೆಗೆ ಊಟಕ್ಕೆ ಕರೆಯುತ್ತೇನೆ’ ಎಂದು ಭರವಸೆ ನೀಡಿದ್ದರು.

ತಮ್ಮ ಮಾತಿನಂತೆ ಈ ದಂಪತಿ ಇತ್ತೀಚೆಗೆ ಆ ಬಾಲಕಿ ಮತ್ತು ಆಕೆಯ ಕುಟುಂಬವನ್ನು ಮನೆಗೆ ಆಹ್ವಾನಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ವಿಜಯ್ ಆ ಪುಟ್ಟ ಬಾಲಕಿಯನ್ನು ಎತ್ತಿಕೊಂಡು ಮುದ್ದಾಡುತ್ತಿದ್ದರೆ, ರಶ್ಮಿಕಾ ಮಂದಣ್ಣ ಆಕೆಯ ತಟ್ಟೆಗೆ ಲಡ್ಡುಗಳನ್ನು ಬಡಿಸಿ ಪ್ರೀತಿಯಿಂದ ಮುತ್ತು ನೀಡಿದ್ದಾರೆ. ವಿಜಯ್ ಕೂಡ ಆಕೆಗೆ ಪ್ರೀತಿಯಿಂದ ಊಟ ಬಡಿಸಿದ್ದಾರೆ. ‘ನಾವಿಬ್ಬರು ಫ್ರೆಂಡ್ಸ್ ಅಲ್ವಾ’ ಎಂದು ಬಾಲಕಿ ಕೇಳಿದಾಗ ವಿಜಯ್ ಮತ್ತು ರಶ್ಮಿಕಾ ನಗುತ್ತಾ ‘ಹೌದು’ ಎಂದಿದ್ದಾರೆ.

ವೈರಲ್ ವಿಡಿಯೋ:

ಈ ಭೇಟಿಯ ಬಗ್ಗೆ ಬರೆದುಕೊಂಡಿರುವ ಬಾಲಕಿಯ ಕುಟುಂಬ, ‘ರೀಲ್ ಟು ರಿಯಲ್… ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿದ್ದು ಅದ್ಭುತ ಅನುಭವ. ಅವರು ನಮ್ಮನ್ನು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡರು. ಇಬ್ಬರೂ ತುಂಬಾ ಸರಳ ವ್ಯಕ್ತಿತ್ವದವರು’ ಎಂದು ಸಂತಸ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಹಳದಿ ಶಾಸ್ತ್ರದ ಕಲರ್​ಫುಲ್ ಫೋಟೋ ಗ್ಯಾಲರಿ

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಈ ಜೋಡಿಯ ಸರಳತೆಗೆ ಮತ್ತು ಅಭಿಮಾನಿಯ ಮೇಲಿರುವ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವೃತ್ತಿಜೀವನದ ವಿಚಾರಕ್ಕೆ ಬಂದರೆ, ರಶ್ಮಿಕಾ ಮತ್ತು ವಿಜಯ್ ಶೀಘ್ರದಲ್ಲೇ ‘ರಣಬಾಲಿ’ ಚಿತ್ರದಲ್ಲಿ ಒಂದಾಗಿ ನಟಿಸಲಿದ್ದಾರೆ. ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳ ಬಳಿಕ ಅವರು ಒಂದಾಗಿ ನಟಿಸಲಿರುವ ಸಿನಿಮಾ ಇದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

WITT Summit: ಜಗತ್ತಿನ ಅನಿಶ್ಚಿತತೆಯ ನಡುವೆಯೂ ಜಾಗತಿಕ ದಿಕ್ಕನ್ನು ರೂಪಿಸಲು ಭಾರತ ಸಜ್ಜಾಗಿದೆ; ಟಿವಿ9 ಎಂಡಿ ಮತ್ತು ಸಿಇಒ ಬರುಣ್ ದಾಸ್

ನವದೆಹಲಿ, ಮಾರ್ಚ್ 20: ಟಿವಿ9 ನೆಟ್‌ವರ್ಕ್‌ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ 2026’ (WITT) ಮಾರ್ಚ್ 23-24 ರಂದು ದೆಹಲಿಯಲ್ಲಿ ನಡೆಯಲಿದೆ. ಈ ಶೃಂಗಸಭೆಗೂ ಮುನ್ನ ಮಾತನಾಡಿದ ಟಿವಿ9 ನೆಟ್‌ವರ್ಕ್ ಎಂಡಿ ಮತ್ತು ಸಿಇಒ ಬರುಣ್ ದಾಸ್, “ಜಾಗತಿಕ ಅನಿಶ್ಚಿತತೆ ಮತ್ತು ಭೌಗೋಳಿಕ ರಾಜಕೀಯ ಸಂಘರ್ಷಗಳ ಹೊರತಾಗಿಯೂ ಭಾರತವು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದೆ. ಭಾರತವು ಇತಿಹಾಸದಲ್ಲಿ ಒಂದು ವಿಶಿಷ್ಟ ಘಟ್ಟದಲ್ಲಿ ನಿಂತಿದೆ” ಎಂದು ಹೇಳಿದ್ದಾರೆ.

“ಕಳೆದ ವರ್ಷ ಜಾಗತೀಕರಣವು ತೀವ್ರ ಹೊಡೆತ ನೀಡಿದೆ. ಸುಂಕಗಳನ್ನು ಆಯುಧಗಳಾಗಿ ಬಳಸುವುದು ಮತ್ತು ಈಗ ನಡೆಯುತ್ತಿರುವ ವಿವಿಧ ಯುದ್ಧಗಳ ಭಯವು ಜಗತ್ತನ್ನು ಆರ್ಥಿಕ ಅಸ್ಥಿರತೆಯ ಸ್ಥಿತಿಗೆ ತಳ್ಳಿದೆ ಎಂದು ಹೇಳಿದರು. ಈ ಯುದ್ಧವು ಭಾರತದ ಮೇಲೆ ನೇರವಾಗಿ ಪರಿಣಾಮ ಬೀರದಿದ್ದರೂ, ಅದರ ಪರಿಣಾಮವನ್ನು ಪ್ರಪಂಚದಾದ್ಯಂತ ಜನರು ಅನುಭವಿಸುತ್ತಿದ್ದಾರೆ” ಎಂದು ಬರುಣ್ ದಾಸ್ ಹೇಳಿದ್ದಾರೆ.

ಇದನ್ನೂ ಓದಿ: WITT Summit 2026: WITT ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯಿಂದ ಭಾರತದ ಅಭಿವೃದ್ಧಿಯ ದಿಕ್ಕಿನ ಕುರಿತು ಮಹತ್ವದ ಚರ್ಚೆ

“ಈ ಸಂಘರ್ಷವು ನೇರವಾಗಿ ಭಾರತದ ಮನೆ ಬಾಗಿಲಿಗೆ ಬರದಿದ್ದರೂ ಅದರ ಆರ್ಥಿಕ ಪರಿಣಾಮ ಜಾಗತಿಕವಾಗಿ ಕಂಡುಬರುತ್ತಿದೆ. ನವದೆಹಲಿಯಿಂದ ನ್ಯೂಜೆರ್ಸಿಯವರೆಗೆ ಇದು ಪರಿಣಾಮ ಬೀರುತ್ತಿದೆ” ಎಂದು ಟಿವಿ9 ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಬರುಣ್ ದಾಸ್ ಹೇಳಿದ್ದಾರೆ. ಇದೇ ವೇಳೆ ಇಂಧನ ಸುರಕ್ಷತೆಯ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಇಂಧನದ ಬಿಕ್ಕಟ್ಟು ಜಾಗತಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶವಾಗಿದೆ ಎಂದು ಅವರು ಹೇಳಿದ್ದಾರೆ.

“ಭಾರತವು ಇತಿಹಾಸದಲ್ಲಿ ಒಂದು ವಿಶಿಷ್ಟ ಘಟ್ಟದಲ್ಲಿ ನಿಂತಿದೆ. ಯುದ್ಧ, ಅಸಮಾನತೆ ಮತ್ತು ಹಿಂಸಾಚಾರದ ಸುಳಿಯಿಂದ ಹೊರಬರಲು ಜಗತ್ತು ಹೆಣಗಾಡುತ್ತಿರುವಾಗ, ಇದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ. ಭಾರತವು ತಂತ್ರಜ್ಞಾನ, ಸಂಸ್ಕೃತಿ ಮತ್ತು ಸಮಾಜದ ಪರಾಕ್ರಮವನ್ನು ಹೊಂದಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: WITT Summit: 2025ರ ಅಂತ್ಯದೊಳಗೆ ಸ್ವದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ; WITT ಶೃಂಗಸಭೆಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಈ ಬಾರಿಯ ಶೃಂಗಸಭೆಯ ವಿಷಯವೆಂದರೆ “ಭಾರತ ಮತ್ತು ವಿಶ್ವ”. ಇದರಲ್ಲಿ ಪ್ರಮುಖ ಚಿಂತಕರು, ವ್ಯಾಪಾರ ಮುಖಂಡರು ಮತ್ತು ನಾಗರಿಕ ಸಮಾಜದ ನಾಯಕರು ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿಯವರ ಮುಖ್ಯ ಭಾಷಣದ ಜೊತೆಗೆ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅಶ್ವಿನಿ ವೈಷ್ಣವ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ, ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ಭಾಗವಹಿಸಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಡವರ ಹತ್ತಿರ ಹಣ ಸುಲಿಗೆ ಮಾಡಿದ್ರೆ ಕೈ-ಕಾಲು ಮುರಿಯುತ್ತೇನೆ: ವೈದ್ಯರಿಗೆ ಚಳಿ ಬಿಡಿಸಿದ ಶಾಸಕ ದೇಶಪಾಂಡೆ

ಕಾರವಾರ, ಮಾರ್ಚ್​ 20: ಹೆರಿಗೆ ಆಸ್ಪತ್ರೆಯಲ್ಲಿ ಬಡವರ ಹತ್ತಿರ ಹಣ ಸುಲಿಗೆ ಮಾಡಿದರೆ ಕೈಕಾಲು ಮುರಿಯುತ್ತೇನೆ. ನನ್ಮೇಲೆ ಕ್ರಿಮಿನಲ್ ಕೇಸ್​ ಆದರೂ ಪರವಾಗಿಲ್ಲ ಎಂದು ಶಾಸಕ ಆರ್​​ವಿ ದೇಶಪಾಂಡೆ (R. V. Deshpande) ವೈದ್ಯರಿಗೆ ಖಡಕ್​​ ಎಚ್ಚರಿಕೆ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದ ತಾಲೂಕು ಆರೋಗ್ಯ ರಕ್ಷ ಸಮಿತಿ ಸಭೆಯಲ್ಲಿ ವೈದ್ಯರಾದ ಡಾ.ಅಖಿಲ್ ಕಿತ್ತೂರು​​ ಮತ್ತು ಡಾ.ಕೀರ್ತಿಗೆ ತರಾಟೆ ತೆಗೆದುಕೊಂಡಿದ್ದಾರೆ.

ವೈದ್ಯರ ಚಳಿ ಬಿಡಿಸಿದ ಶಾಸಕ ಆರ್​​ವಿ ದೇಶಪಾಂಡೆ

ಹೆರಿಗೆ ಮಾಡಿದರೆ ಯಾಕೆ ಹಣ ಪಡೆಯುತ್ತೀರಿ ಎಂದು ಸಭೆಯಲ್ಲಿ ಶಾಸಕ ಆರ್​​ವಿ ದೇಶಪಾಂಡೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಉತ್ತರಿಸಿದ ವೈದರು ನಾವು ಯಾರಿಂದಲೂ ಕೇಳಿ ಪಡೆಯುತ್ತಿಲ್ಲ. ಅವರೇ ಖುಷಿಯಿಂದ ಕೊಟ್ಟರಷ್ಟೇ ತಗೋತೇವೆ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಹಳೇ ವಾಹನ ನಿಲ್ಲಿಸಿದ್ರೆ ಕಠಿಣ ಕ್ರಮ: ಡಿಸಿಎಂ ಡಿಕೆ ಶಿವಕುಮಾರ್​​ ಎಚ್ಚರಿಕೆ

ವೈದ್ಯರ ಮಾತಿಗೆ ಕೆಂಡಾಮಂಡಲರಾದ ಶಾಸಕ ದೇಶಪಾಂಡೆ, ಏನು ನಿಮ್ಮ ಮಾತಿನ ಅರ್ಥ. ಯಾರ ಬಳಿ ಕೇಳಲ್ಲ, ಕೊಟ್ಟಷ್ಟು ತಗೋತೀವಿ ಅಂದರೆ ಏನರ್ಥ. ಮಾನ ಮರ್ಯಾದೆ ಇಲ್ವಾ ನಿಮಗೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಇದುವರೆಗೆ ಪಡೆದ ಹಣದ ಮಾಹಿತಿ ಪಡೆಯುವಂತೆ ತಹಶೀಲ್ದಾರ್​​ಗೆ ನಿರ್ದೇಶಿಸಿದ್ದಾರೆ.

ನಾನೇನು ಮಂತ್ರಿ ಸ್ಥಾನಕ್ಕೆ ಅಪೇಕ್ಷೆ ಇಟ್ಟಿಲ್ಲ ಎಂದ ಶಾಸಕ ಆರ್​​ವಿ ದೇಶಪಾಂಡೆ 

ಮಂತ್ರಿ ಸ್ಥಾನದ ವಿಚಾರವಾಗಿ ಮಾತನಾಡಿದ ಅವರು, ಹೊಸ ಶಾಸಕರು ಮಂತ್ರಿ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಎಲ್ಲರಿಗೂ ಮಂತ್ರಿ ಆಗಬೇಕೆಂಬ ಆಸೆ ಇರುವುದು ಸಹಜ. ಮಂತ್ರಿ ಆಗಬೇಕಂತ ನನಗೆ ಅತಿ ಆಸೆ ಇಲ್ಲ. ಅವರಿಗೆ ಬೇಕಾದರೆ ನನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿ. 9 ಬಾರಿ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ. ಏಳೆಂಟು ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದೇನೆ. ಮಂತ್ರಿ ಮಾಡಿ ಅಂತ ನಾನ್ಯಾರಿಗೂ ಕೇಳಲ್ಲ ಎಂದಿದ್ದಾರೆ.

ಇದನ್ನೂ ಓದಿ: ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್​​: ಟಿಕೆಟ್​​ ಘೋಷಣೆಗೂ ಮುನ್ನವೇ ನಾಮಪತ್ರ ಸಲ್ಲಿಕೆಗೆ ಮುಂದಾದ ಸಚಿವರ ಪುತ್ರ!

ಸಿಎಂ ಸಿದ್ದರಾಮಯ್ಯ ನನಗಿಂತ ವಯಸ್ಸಿನಲ್ಲಿ ಚಿಕ್ಕವರು. ಅವರು ನನ್ನ ತಮ್ಮನಿದ್ದಂತೆ. ಸಚಿವರು ಹಾಗೂ ಅಧಿಕಾರಿಗಳು ಗೌರವದಿಂದ ಕಾಣುತ್ತಾರೆ. ನನ್ನ ಕ್ಷೇತ್ರಕ್ಕೆ ಬೇಕಾಗಿರುವ ಎಲ್ಲ ಕೆಲಸಗಳು ಆಗುತ್ತಿವೆ. ಹೀಗಾಗಿ ನಾನೇನು ಮಂತ್ರಿ ಸ್ಥಾನಕ್ಕೆ ಅಪೇಕ್ಷೆ ಇಟ್ಟಿಲ್ಲ ಎಂದು ಶಾಸಕ ಆರ್​​ವಿ ದೇಶಪಾಂಡೆ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕೈಗಾರಿಕಾ ಡೀಸಲ್ ಬೆಲೆಯಲ್ಲಿ ಶೇ. 25ರಷ್ಟು ಏರಿಕೆ; ಯಾರ ಮೇಲಾಗಲಿದೆ ಇದರ ಪರಿಣಾಮ?

ನವದೆಹಲಿ, ಮಾರ್ಚ್ 20: ಸರ್ಕಾರಿ ಸ್ವಾಮ್ಯದ ಮೂರು ತೈಲ ಮಾರುಕಟ್ಟೆ ಕಂಪನಿಗಳು ತಮ್ಮ ಪ್ರೀಮಿಯಮ್ ಪೆಟ್ರೋಲ್ ದರಗಳನ್ನು ಏರಿಸಿರುವ ಬೆನ್ನಲ್ಲೇ ಇಂಡಿಯನ್ ಆಯಿಲ್ ಸಂಸ್ಥೆಯು ಕೈಗಾರಿಕಾ ಡೀಸಲ್ ಬೆಲೆಯನ್ನು (Industrial Diesel prices) ಹೆಚ್ಚಿಸಿದೆ. ಒಂದು ಲೀಟರ್​ಗೆ 87.57 ರೂ ಇದ್ದ ಡೀಸಲ್ ಬೆಲೆ 109.59 ರೂಗೆ ಏರಿಸಲಾಗಿದೆ. ಬೆಲೆಯಲ್ಲಿ ಬರೋಬ್ಬರಿ ಶೇ. 25ರಷ್ಟು ಹೆಚ್ಚಳ ಆಗಿದೆ.

ಇರಾನ್ ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಮತ್ತು ಅನಿಲಗಳ ಹಡಗುಗಳ ಸಾಗಣೆಗೆ ನಿರ್ಬಂಧ ಇರುವುದರಿಂದ ಜಾಗತಿಕವಾಗಿ ಇವುಗಳ ಸರಬರಾಜು ಕುಂಠಿತಗೊಂಡಿದೆ. ಭಾರತಕ್ಕೂ ಇವುಗಳ ಕೊರತೆ ಕಾಡುತ್ತಿದೆ. ಜನಸಾಮಾನ್ಯರಿಗೆ ಬಾಧೆಯಾಗುವುದನ್ನು ತಪ್ಪಿಸಲು ಸರ್ಕಾರ ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಮಾಡದಂತೆ ಎಚ್ಚರ ವಹಿಸುತ್ತಿದೆ.

ಇದನ್ನೂ ಓದಿ: ಜೊಮಾಟೊದಲ್ಲಿ ಫುಡ್ ಆರ್ಡರ್ ಮತ್ತಷ್ಟು ದುಬಾರಿ; ಪ್ಲಾಟ್​ಫಾರ್ಮ್ ಶುಲ್ಕ ಶೇ 19ರಷ್ಟು ಏರಿಕೆ

ಈಗ ಇರಾನ್ ಯುದ್ಧದ ಅವಧಿ ನಿರೀಕ್ಷೆಮೀರಿ ಹಿಗ್ಗುತ್ತಿರುವುದರಿಂದ ತೈಲ ಪೂರೈಕೆ ಮತ್ತಷ್ಟು ಕಠಿಣಗೊಂಡಿದೆ. ಈ ಕಾರಣಕ್ಕೆ ಸರ್ಕಾರಕ್ಕೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಬಹುದು. ಹೀಗಾಗಿ, ಪ್ರೀಮಿಯಮ್ ಪೆಟ್ರೋಲ್, ಔದ್ಯಮಿಕ ಡೀಸಲ್ ಬೆಲೆಗಳನ್ನು ಸದ್ಯಕ್ಕೆ ಹೆಚ್ಚಿಸಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮಾಮೂಲಿಯ ಪೆಟ್ರೋಲ್, ಡೀಸಲ್ ದರಗಳನ್ನು ಹೆಚ್ಚಿಸುವ ಸಾಧ್ಯತೆ ಇದ್ದೇ ಇದೆ.

ಈಗ ಕೈಗಾರಿಕಾ ಡೀಸಲ್ ಅನ್ನು ವಿವಿಧ ಕೈಗಾರಿಕೆಗಳು ಬಳಸುತ್ತವೆ. ವಿದ್ಯುತ್ ಉತ್ಪಾದನೆ, ಮ್ಯಾನುಫ್ಯಾಕ್ಚರಿಂಗ್ ಇತ್ಯಾದಿ ಕ್ಷೇತ್ರದ ಕಂಪನಿಗಳು ಈ ಡೀಸಲ್ ಅನ್ನು ಬಳಸುತ್ತವೆ. ಈಗ ಭಾರೀ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಿರುವುದರಿಂದ ಕೈಗಾರಿಕಾ ಉತ್ಪಾದನಾ ವೆಚ್ಚ ಮತ್ತು ಸಾರಿಗೆ ವೆಚ್ಚ ಹೆಚ್ಚಲಿದೆ.

ಇದನ್ನೂ ಓದಿ: ಪ್ರೀಮಿಯಮ್ ಪೆಟ್ರೋಲ್ ಬೆಲೆ 2 ರೂ ಹೆಚ್ಚಳ; ಮಾಮೂಲಿ ಪೆಟ್ರೋಲ್ ದರದಲ್ಲಿ ಇಲ್ಲ ಬದಲಾವಣೆ

ಪ್ರೀಮಿಯಮ್ ಪೆಟ್ರೋಲ್ ಬೆಲೆ ಏರಿಕೆ

ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳ ಪ್ರೀಮಿಯಮ್ ಪೆಟ್ರೋಲ್ ಬೆಲೆ ಲೀಟರ್​ಗೆ 2.05 ರೂನಿಂದ 2.30 ರೂವರೆಗೆ ಏರಿಕೆ ಮಾಡಲಾಗಿದೆ. ಆದರೆ, ಮಾಮೂಲಿಯ ಪೆಟ್ರೋಲ್ ಮತ್ತು ಡೀಸಲ್ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಐಪಿಎಲ್​ನಲ್ಲಿ ಕನ್ನಡಿಗರ ಕಾರುಬಾರು; ಯಾರು ಯಾವ ತಂಡದ ಪರ ಆಡುತ್ತಾರೆ?

Source link

ನಿಮ್ಮ ಮಕ್ಕಳು ಕೂಡ ಎಸಿ ಕೊಠಡಿಯಲ್ಲಿ ಮಲಗುತ್ತಾರಾ? ಹಾಗಿದ್ರೆ ಈ ಸ್ಟೋರಿ ನಿಮಗಾಗಿ

ಹವಾಮಾನ ಬದಲಾಗುತ್ತಿರುವುದರಿಂದ ಮನೆಗಳಲ್ಲಿ ಎಸಿ (AC) ಬಳಕೆ ಆರಂಭ ಹೆಚ್ಚಾಗಿದೆ. ಆದರೆ ಮನೆಯಲ್ಲಿ ಮಕ್ಕಳಿದ್ದಾಗ, ಎಸಿ ಬಳಸುವಾಗ ವಿಶೇಷ ಜಾಗ್ರತೆ ಅಗತ್ಯವಾಗಿದೆ. ಸರಿಯಾದ ರೀತಿಯಲ್ಲಿ ಬಳಸದೇ ಇದ್ದರೆ, ಇದು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ವೈದ್ಯರ ಪ್ರಕಾರ, ಅನೇಕ ಬಾರಿ ಪಾಲಕರು ಅರಿವಿಲ್ಲದೆ ಕೆಲವು ತಪ್ಪುಗಳನ್ನು ಮಾಡುತ್ತಾರೆ, ಇದು ಮಕ್ಕಳ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಹಾಗಾಗಿ, ಎಸಿ ಬಳಸುವಾಗ ಯಾವ ವಿಷಯಗಳನ್ನು ಗಮನಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ಮಕ್ಕಳ ಕೋಣೆಯಲ್ಲಿ ತಾಪಮಾನ ಎಷ್ಟಿರಬೇಕು?

ತಜ್ಞರ ಪ್ರಕಾರ, ಮಗು ಮಲಗುವ ಕೊಠಡಿಯಲ್ಲಿ ಎಸಿ ತಾಪಮಾನ 23ರಿಂದ 27 ಡಿಗ್ರಿ ಸೆಲ್ಸಿಯಸ್ ನಡುವೆ ಇಡಬೇಕು. ಇದಕ್ಕಿಂತ ಕಡಿಮೆ ತಾಪಮಾನ ಇದ್ದಲ್ಲಿ, ಅದು ಯಾವುದೇ ಋತುವಾಗಿರಲಿ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬಿರುತ್ತದೆ. ತಂಪಾದ ವಾತಾವರಣದಿಂದ ಮಕ್ಕಳಿಗೆ ಕೆಮ್ಮು, ಶೀತ ಅಥವಾ ಅಲರ್ಜಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅದರಲ್ಲಿಯೂ ಎಸಿ ಗಾಳಿಯು ನೇರವಾಗಿ ಮಗುವಿನ ಮೇಲೆ ಬೀಳದಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯ. ನೇರ ಗಾಳಿಯ ಪರಿಣಾಮವಾಗಿ ಮಗುವಿನ ಚರ್ಮದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ. ಜೊತೆಗೆ ಎಸಿ ಇರುವ ಕೊಠಡಿಯಲ್ಲಿ ಮಲಗುವ ಮಗುವಿಗೆ ಸರಿಯಾದ ಬಟ್ಟೆಗಳನ್ನು ಹಾಕಬೇಕು. ಬಟ್ಟೆಗಳು ಮಗುವಿನ ದೇಹವನ್ನು ಸಂಪೂರ್ಣವಾಗಿ ಮುಚ್ಚುವಂತಿರಬೇಕು. ಆದರೆ, ಅಗತ್ಯಕ್ಕಿಂತ ಹೆಚ್ಚು ಬಟ್ಟೆ ಹಾಕಬಾರದು, ಏಕೆಂದರೆ ಇದರಿಂದ ದೇಹದ ತಾಪಮಾನ ಹೆಚ್ಚಾಗಿ ಹೊರಗಿನ ತಣ್ಣನೆಯ ವಾತಾವರಣದೊಂದಿಗೆ ವ್ಯತ್ಯಾಸ ಉಂಟಾಗಿ ಆರೋಗ್ಯ ಸಮಸ್ಯೆಗಳು ಬರಬಹುದು. ಹಾಗಾಗಿ ಹಗುರವಾಗಿರುವ ಮತ್ತು ಆರಾಮದಾಯಕವಾಗಿರುವ ಬಟ್ಟೆಗಳನ್ನು ಆಯ್ಕೆ ಮಾಡುವುದು ಬಹಳ ಉತ್ತಮ.

ಇದನ್ನೂ ಓದಿ: ಎಸಿಯಲ್ಲಿ ಗಂಟೆಗಟ್ಟಲೆ ಸಮಯ ಕಳೆಯುವವರಿಗೆ ಈ ಸಮಸ್ಯೆ ತಪ್ಪಿದ್ದಲ್ಲ

ಆದರೆ ನೆನೆಪಿರಲಿ, ಎಸಿಯನ್ನು ನಿರಂತರವಾಗಿ ಬಳಸುವುದು ಸರಿಯಲ್ಲ. ಪ್ರತಿ 3ರಿಂದ 4 ಗಂಟೆಗೆ ಒಂದು ಬಾರಿ ಎಸಿಯನ್ನು ಸ್ವಲ್ಪ ಸಮಯ ಆಫ್ ಮಾಡಿ, ಸುಮಾರು ಅರ್ಧ ಗಂಟೆಯ ನಂತರ ಮತ್ತೆ ಆನ್ ಮಾಡುವುದು ಉತ್ತಮ. ಇದರಿಂದ ಕೊಠಡಿಯ ವಾತಾವರಣ ಸಮತೋಲನದಲ್ಲಿರುತ್ತದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಎಸಿ ಬಳಕೆ ಮಾಡುವಾಗ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಸರಿಯಾದ ತಾಪಮಾನ, ಗಾಳಿಯ ನಿಯಂತ್ರಣ ಮತ್ತು ಬಟ್ಟೆಗಳ ಆಯ್ಕೆ ಮೂಲಕ ಮಕ್ಕಳು ಆರೋಗ್ಯವಾಗಿರುವಂತೆ ನೋಡಿಕೊಳ್ಳಬಹುದು.

ಎಸಿ ಯಾವ ರೀತಿಯ ಮಕ್ಕಳಿಗೆ ಒಳ್ಳೆಯದಲ್ಲ?

  • ಅಸ್ತಮಾ ಇರುವವರು
  • ಉಸಿರಾಟ ಸಂಬಂಧಿತ ಸಮಸ್ಯೆಗಳಿರುವವರು
  • ತೀವ್ರ ಚರ್ಮದ ರೋಗ ಅಥವಾ ಅಲರ್ಜಿ ಇರುವವರು
  • ಸೋಂಕಿಗೆ ಒಳಗಾದವರು ಬಳಸುವುದು ಒಳ್ಳೆಯದಲ್ಲ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಯಾಂಕಿ ಕೆರೆ ಮುಂದೆ 800 ಕೆಜಿ ತೂಕದ ಪುನೀತ್ ಕಂಚಿನ ಪ್ರತಿಮೆ ಲೋಕಾರ್ಪಣೆ ಮಾಡಿದ ಅಶ್ವಿನಿ

ಬೆಂಗಳೂರಿನ ಸ್ಯಾಂಕಿ ಕೆರೆ (Sankey Tank) ಮುಂದೆ ಪುನೀತ್ ರಾಜ್​ಕುಮಾರ್ ಅವರ ಕಂಚಿನ ಪ್ರತಿಮೆ ಲೋಕಾರ್ಪಣೆ ಮಾಡಲಾಗಿದೆ. ಅಶ್ವಿನಿ ಪುನೀತ್ ರಾಜ್​ಕುಮಾರ್ (Ashwini Puneeth Rajkumar) ಅವರು 800 ಕೆಜಿ ತೂಕದ ಪ್ರತಿಮೆಯನ್ನು ಅನಾವರಣ ಮಾಡಿದರು. ಈ ವೇಳೆ ಮಲ್ಲೇಶ್ವರದ ಶಾಸಕ ಡಾ. ಅಶ್ವತ್ಥ್​​ ನಾರಾಯಣ ಮತ್ತು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್​ ಬಾಬು ಅವರು ಭಾಗಿ ಆಗಿದ್ದರು. ‘ಪ್ರತಿಮೆ ಚೆನ್ನಾಗಿದೆ. ಅಭಿಮಾನಿಗಳಿಗೆ ಮತ್ತು ಅಶ್ವತ್ಥ್ ನಾರಾಯಣ ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದರು ಅಶ್ವಿನಿ ಪುನೀತ್ ರಾಜ್​ಕುಮಾರ್. ‘ನಮ್ಮ‌ನೆಚ್ಚಿನ ನಟ ಪುನೀತ್ ರಾಜ್‍ಕುಮಾರ್ (Puneeth Rajkumar). ಅವರ ಮೆಚ್ಚಿನ ಸ್ಥಳ ಸದಾಶಿವ ನಗರ. ಇಲ್ಲಿ ಅವರ ಪ್ರತಿಮೆ ಆಗಬೇಕು ಎಂಬ ಬೇಡಿಕೆ ಇತ್ತು. ಇದಕ್ಕೆ ಸ್ಫೂರ್ತಿಯ ಪ್ರತಿಮೆ ಎಂದು ಹೆಸರಿಡಲಾಗಿದೆ. ಎಲ್ಲರ ಸಲಹೆ ಪಡೆದು ಪ್ರತಿಮೆ ಮಾಡಲಾಗಿದೆ. ಯುಗಾದಿ ಹಬ್ಬದ ಸಂಧರ್ಭದಲ್ಲಿ ಉದ್ಘಾಟನೆ ಮಾಡಲಾಗಿದೆ. ರಾಜ್ಯ ಸರ್ಕಾರಕ್ಕೆ, ಅಭಿಮಾನಿಗಳಿಗೆ, ಪುನೀತ್ ಕುಟುಂಬಕ್ಕೆ ಧನ್ಯವಾದಗಳು’ ಎಂದು ಅಶ್ವತ್ಥ್​​ ನಾರಾಯಣ ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜೊಮಾಟೊದಲ್ಲಿ ಫುಡ್ ಆರ್ಡರ್ ಮತ್ತಷ್ಟು ದುಬಾರಿ; ಪ್ಲಾಟ್​ಫಾರ್ಮ್ ಶುಲ್ಕ ಶೇ 19ರಷ್ಟು ಏರಿಕೆ

ನವದೆಹಲಿ, ಮಾರ್ಚ್ 20: ಫುಡ್ ಡೆಲಿವರಿ ಕಂಪನಿಯಾದ ಜೊಮಾಟೊ ತನ್ನ ಪ್ಲಾಟ್​​ಫಾರ್ಮ್ ಶುಲ್ಕವನ್ನು (Zomato platform fee) ಏರಿಸಿದೆ. 12.50 ರೂ ಇದ್ದ ಜೊಮಾಟೊ ಪ್ಲಾಟ್​ಫಾರ್ಮ್ ಫೀ ಅನ್ನು 14.90 ರೂಗೆ ಏರಿಸಲಾಗಿದೆ. ಒಬ್ಬ ಗ್ರಾಹಕ ನೀಡುವ ಪ್ರತೀ ಆರ್ಡರ್​ಗೆ ಪ್ಲಾಟ್​ಫಾರ್ಮ್ ಫೀ ಅನ್ವಯ ಆಗುತ್ತದೆ. ಇದರಲ್ಲಿ 2.40 ರೂ ಅಥವಾ ಶೇ. 19.2ರಷ್ಟು ಶುಲ್ಕ ಏರಿಕೆ ಆಗಿದೆ.

ಒಂದು ವರ್ಷದೊಳಗೆ ಜೊಮಾಟೊ ಎರಡನೇ ಬಾರಿ ತನ್ನ ಪ್ಲಾಟ್​ಫಾರ್ಮ್ ಫೀ ಏರಿಸಿರುವುದು. 2025ರ ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚಳ ಮಾಡಲಾಗಿತ್ತು. ಈ ಪ್ಲಾಟ್​ಫಾರ್ಮ್ ಫೀ ಮೇಲೆ ಜಿಎಸ್​ಟಿ ಕೂಡ ಅನ್ವಯ ಆಗುತ್ತದೆ. ಎಲ್​ಪಿಜಿ ಬೆಲೆ ಏರಿಕೆಯ ಬಿಸಿಯಲ್ಲಿರುವ ಗ್ರಾಹಕರಿಗೆ ಈಗ ಫುಡ್ ಡೆಲಿವರಿ ಪ್ಲಾಟ್​ಫಾರ್ಮ್​ನಲ್ಲೂ ದರ ಏರಿಕೆಯ ಶಾಕ್ ಸಿಗಲಿದೆ.

ಇದನ್ನೂ ಓದಿ: ಆಫೀಸ್ ಕಾರ್ಡ್ ಬಳಕೆ, ಪ್ಯಾನ್ ಕಡ್ಡಾಯ, ಅಡ್ರೆಸ್ ಪ್ರೂಫ್ ಇತ್ಯಾದಿ ಗಮನಿಸಬೇಕಾದ ಹೊಸ ಕ್ರೆಡಿಟ್ ಕಾರ್ಡ್ ನಿಯಮಗಳು

ಎರಡನೇ ಅತಿದೊಡ್ಡ ಫುಡ್ ಡೆಲಿವರಿ ಆ್ಯಪ್ ಆಗಿರುವ ಸ್ವಿಗ್ಗಿಯಲ್ಲಿ ಪ್ಲಾಟ್​ಫಾರ್ಮ್ ಫೀ 14.99 ರೂ ಇದೆ. ಮೂರನೇ ಅತಿದೊಡ್ಡ ಫುಡ್ ಡೆಲಿವರಿ ಆ್ಯಪ್ ಆದ ಮ್ಯಾಜಿಕ್​ಪಿನ್​ನ ಪ್ಲಾಟ್​ಫಾರ್ಮ್ ಫೀ 14.20 ರೂ ಇದೆ. ಸ್ವಿಗ್ಗಿ ಮತ್ತು ಜೊಮಾಟೊ ಬಹುತೇಕ ಸಮಾನ ಪ್ಲಾಟ್​ಫಾರ್ಮ್ ಫೀ ಹೊಂದಿವೆ. ಮ್ಯಾಜಿಕ್​ಪಿನ್ ಸ್ವಲ್ಪ ಕಡಿಮೆ ಶುಲ್ಕವನ್ನು ವಿಧಿಸುತ್ತಿದೆ.

ಫುಡ್ ಡೆಲಿವರಿ ಪ್ಲಾಟ್​ಫಾರ್ಮ್​ಗಳು ಗ್ರಾಹಕರಿಗೆ ಯಾವೆಲ್ಲಾ ಶುಲ್ಕ ವಿಧಿಸುತ್ತವೆ?

  • ಪ್ಲಾಟ್​ಫಾರ್ಮ್ ಫೀ
  • ಡೆಲಿವರಿ ಪಾರ್ಟ್ನರ್ ಫೀ
  • ಜಿಎಸ್​ಟಿ
  • ರೆಸ್ಟೋರೆಂಟ್ ಪ್ಯಾಕಿಂಗ್ ಚಾರ್ಜಸ್

ಕೆಲ ಪ್ಲಾಟ್​ಫಾರ್ಮ್​ಗಳು ಬೇರೆ ಶುಲ್ಕ ಹಾಕಬಹುದು. ಉದಾಹರಣೆಗೆ, ಜೊಮಾಟೊ ಸಂಸ್ಥೆ ಫೀಡಿಂಗ್ ಇಂಡಿಯಾ ಸ್ಕೀಮ್​ಗೆ ಡೊನೇಶನ್ ಆಗಿ ಪ್ರತೀ ಆರ್ಡರ್​ಗೆ 4 ರೂ ಸಂಗ್ರಹಿಸುತ್ತದೆ. ಹಾಗೆಯೇ, ಸರ್ಜಿಂಗ್ ಪ್ರೈಸ್ ಅನ್ನೂ ವಿಧಿಸುತ್ತವೆ. ಮೇಲೆ ತಿಳಿಸಿದ ನಾಲ್ಕು ಶುಲ್ಕಗಳಲ್ಲಿ ಜಿಎಸ್​ಟಿಯು ಸರ್ಕಾರಕ್ಕೆ ಹೋಗುತ್ತದೆ. ರೆಸ್ಟೋರೆಂಟ್ ಪ್ಯಾಕಿಂಗ್ ಶುಲ್ಕವು ಆಯಾ ರೆಸ್ಟೋರೆಂಟ್​ಗೆ ಸಂದಾಯವಾಗುತ್ತದೆ.

ಇದನ್ನೂ ಓದಿ: ಪ್ರೀಮಿಯಮ್ ಪೆಟ್ರೋಲ್ ಬೆಲೆ 2 ರೂ ಹೆಚ್ಚಳ; ಮಾಮೂಲಿ ಪೆಟ್ರೋಲ್ ದರದಲ್ಲಿ ಇಲ್ಲ ಬದಲಾವಣೆ

ಇದರ ಜೊತೆಗೆ ಫುಡ್ ಡೆಲಿವರಿ ಆ್ಯಪ್​ಗಳು ತಮ್ಮ ರೆಸ್ಟೋರೆಂಟ್ ಪಾರ್ಟ್ನರ್​ಗಳಿಂದ ಕಮಿಷನ್ ಫೀಸ್ ಕೂಡ ಸಂಗ್ರಹಿಸುತ್ತವೆ. ಶೇ. 30ಕ್ಕಿಂತಲೂ ಹೆಚ್ಚಿನ ಕಮಿಷನ್ ಅನ್ನು ರೆಸ್ಟೋರೆಂಟ್​ಗಳು ನೀಡುತ್ತವೆ. ರೆಸ್ಟೋರೆಂಟ್​ಗೆ ಹೋಗಿ ನೀವು 250 ರೂ ಮೊತ್ತದ ತಿಂಡಿಯನ್ನು ಪ್ಯಾಕ್ ಮಾಡಿ ತರಲು ಆಗುವ ವೆಚ್ಚಕ್ಕೆ ಹೋಲಿಸಿದರೆ ಅದೇ ತಿಂಡಿಯನ್ನು ಆ್ಯಪ್ ಮೂಲಕ ತರಿಸಿಕೊಂಡರೆ 350 ರೂಗಿಂತಲೂ ಹೆಚ್ಚು ವೆಚ್ಚವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಕ್ಕರೆ ಕಡಿಮೆ ತಿನ್ನಿ, ದಿನವೂ ಯೋಗ ಮಾಡಿ; ಭಾರತೀಯರಿಗೆ ಆರೋಗ್ಯದ ರಹಸ್ಯ ಹೇಳಿದ ಪ್ರಧಾನಿ ಮೋದಿ

ನವದೆಹಲಿ, ಮಾರ್ಚ್ 20: ಪ್ರಧಾನಿ ನರೇಂದ್ರ ಮೋದಿ (PM Narendra Modi) ಯೋಗ, ಫಿಟ್​ನೆಸ್​, ಉತ್ತಮ ಆಹಾರ ಸೇವನೆಗೆ ಸದಾ ಆದ್ಯತೆ ನೀಡುತ್ತಾರೆ. ಅವರು ಯಾವ ರಾಜ್ಯ, ಯಾವ ದೇಶಕ್ಕೇ ಪ್ರಯಾಣಿಸಲಿ ತಮ್ಮ ಯೋಗ ದಿನಚರಿ, ತಾವು ಸೇವಿಸುವ ಆಹಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಪ್ರತಿದಿನ ಯೋಗಾಭ್ಯಾಸ, ಧ್ಯಾನ ಮಾಡುವ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೂ ದಿನವೂ ಯೋಗ ಮಾಡಲು ಸಲಹೆ ನೀಡಿದ್ದಾರೆ.

ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “ಆರೋಗ್ಯವಾಗಿರಿ, ಸಂತೋಷವಾಗಿರಿ. ಚೆನ್ನಾಗಿ ತಿನ್ನಿ, ಆರೋಗ್ಯವಾದುದನ್ನೇ ತಿನ್ನಿ. ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ. ಯೋಗವನ್ನು ದೈನಂದಿನ ಜೀವನದ ಭಾಗವಾಗಿಸಿಕೊಳ್ಳಿ” ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಮಕ್ಕಳಲ್ಲಿ ಪ್ರೋಟೀನ್ ಕೊರತೆಯನ್ನು ಪತ್ತೆ ಹಚ್ಚುವುದು ಹೇಗೆ? ಯಾವ ರೀತಿಯ ಲಕ್ಷಣ ಕಂಡುಬರುತ್ತವೆ?

ಅತಿಯಾದ ಸಕ್ಕರೆ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಎಲ್ಲರೂ ಚೆನ್ನಾಗಿ ತಿನ್ನಿರಿ ಮತ್ತು ಆರೋಗ್ಯವಾಗಿರಿ ಎಂದು ಸಲಹೆ ನೀಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್‌ಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ಜನರು ತಮ್ಮ ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ ಎಂದು ಒತ್ತಾಯಿಸಿದ್ದಾರೆ.

PM Modi Instagram Story

ಅತಿಯಾದ ಸಕ್ಕರೆಯ ದುಷ್ಪರಿಣಾಮಗಳನ್ನು ಎತ್ತಿ ತೋರಿಸುತ್ತಾ, ಇದು ಹಲವಾರು ರೋಗಗಳನ್ನು ಆಹ್ವಾನಿಸುತ್ತದೆ. ಇದರಿಂದ ಸಹಜವಾಗಿಯೇ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ. ಹಾಗೇ, ಯೋಗವನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಳ್ಳುವಂತೆ ಅವರು ಜನರಿಗೆ ಸಲಹೆ ನೀಡಿದ್ದಾರೆ. ಇದು ನೀವು ಫಿಟ್ ಮತ್ತು ಆ್ಯಕ್ಟಿವ್ ಆಗಿರಲು ಉತ್ತಮ ಮಾರ್ಗವಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸರಿಯಾಗೇ ಮಾಡುತ್ತಿದೆ; ಮೋದಿ ಸರ್ಕಾರವನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ!

ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್ ಯುವರಾಜ್ ದುವಾ ಅವರ ರೀಲ್‌ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ. ಅವರು ತಮ್ಮ ತಂದೆಗೆ ಸಕ್ಕರೆ ಸೇವನೆಯನ್ನು ಕಡಿಮೆ ಮಾಡಲು ಸಲಹೆ ನೀಡಿ ಎಂದು ಇನ್​ಸ್ಟಾಗ್ರಾಂನಲ್ಲಿ ತಮಾಷೆಯಾಗಿ ಪ್ರಧಾನಿ ಮೋದಿಗೆ ಮನವಿ ಮಾಡಿದ್ದರು. “ಯುವರಾಜ್ ಅವರ ಕೋರಿಕೆಯ ಮೇರೆಗೆ ನಾನು ಅವರ ತಂದೆಗೆ ಮತ್ತು ಎಲ್ಲರಿಗೂ ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವಂತೆ ಒತ್ತಾಯಿಸುತ್ತೇನೆ. ಆರೋಗ್ಯವಾಗಿರಿ, ಸಂತೋಷವಾಗಿರಿ!” ಎಂದು ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link