All posts by nagaraj11081993

ಬೀಚ್ ಪಕ್ಕ ದುಬಾರಿ ಮನೆ ಖರೀದಿಸಿದ ‘ದಂಗಲ್’ ಸಿನಿಮಾ ನಟಿ ಸಾನ್ಯಾ ಮಲ್ಹೋತ್ರ

ಬೀಚ್ ಪಕ್ಕ ದುಬಾರಿ ಮನೆ ಖರೀದಿಸಿದ ‘ದಂಗಲ್’ ಸಿನಿಮಾ ನಟಿ ಸಾನ್ಯಾ ಮಲ್ಹೋತ್ರ

ಆಮಿರ್ ಖಾನ್ ನಟನೆಯ ‘ದಂಗಲ್’ ಸಿನಿಮಾ ವಿಶಿಷ್ಟ ದಾಖಲೆಗಳನ್ನು ಮಾಡಿದ್ದು ಗೊತ್ತೇ ಇದೆ. ಈ ಸಿನಿಮಾ ಮೂಲಕ ವಿಶಿಷ್ಟ ದಾಖಲೆ ಬರೆದರು. ‘ದಂಗಲ್’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಅವರು, ಅಲ್ಪಾವಧಿಯಲ್ಲಿಯೇ ತಮ್ಮ ಸಹಜ ನಟನೆಗಾಗಿ ಮೆಚ್ಚುಗೆಯನ್ನು ಪಡೆದರು. ಹಲವು ವರ್ಷಗಳ ಕಠಿಣ ಪರಿಶ್ರಮದಿಂದ ಅವರು ಮುಂಬೈನಲ್ಲಿ ಭವ್ಯವಾದ ಮನೆಯನ್ನು ಖರೀದಿಸಿದ್ದಾರೆ.

ಸಾನ್ಯಾ ಈ ಅಪಾರ್ಟ್‌ಮೆಂಟ್ ಅನ್ನು ಸುಮಾರು 14.3 ಕೋಟಿ ರೂಪಾಯಿ ನೀಡಿ ಖರೀದಿಸಿದ್ದಾರೆ. ಇದಕ್ಕಾಗಿ ಅವರು ಕೇವಲ 71.5 ಲಕ್ಷ ರೂ. ಸ್ಟಾಂಪ್ ಡ್ಯೂಟಿಯಲ್ಲಿ ಪಾವತಿಸಿದ್ದಾರೆ . ಮುಂಬೈನಲ್ಲಿ ಇದು ಅವರ ಎರಡನೇ ಮನೆ. ಅವರು 2018 ರಲ್ಲಿ ಫ್ಲಾಟ್ ಖರೀದಿಸಿದ್ದರು. ಆ ಫ್ಲ್ಯಾಟ್ ಚಿಕ್ಕದಾಗಿತ್ತು. ತಮ್ಮ ಕುಟುಂಬ ಸದಸ್ಯರು ದೆಹಲಿಯಿಂದ ಬಂದಾಗ ಆರಾಮವಾಗಿರಬೇಕೆಂಬ ಉದ್ದೇಶದಿಂದ ಈ ದೊಡ್ಡ ಮನೆಯನ್ನು ಖರೀದಿಸಿರುವುದಾಗಿ ಹೇಳಿದ್ದಾರೆ. ಈ ಮನೆ ವಿಶಾಲವಾಗಿದೆ.

ಇದನ್ನೂ ಓದಿ: ಹೊಸ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಸಾನ್ಯಾ ಐಯ್ಯರ್ ಮಸ್ತ್ ಶೂಟ್

ಈ ಮನೆ ಸಮುದ್ರಕ್ಕೆ ಮುಖ ಮಾಡಿಕೊಂಡಿದೆ. ಹೀಗಾಗಿ, ಮನೆಯಲ್ಲೇ ಕುಳಿತು ಸಮುದ್ರ ತೀರದಲ್ಲಿ ನಡೆಯುವ ದೃಶ್ಯಗಳನ್ನು ಅವರು ಕಣ್ತುಂಬಿಕೊಳ್ಳಬಹುದು. ಸಮುದ್ರವನ್ನು ನೋಡುತ್ತಾ ಮತ್ತು ಸೂರ್ಯಾಸ್ತವನ್ನು ಆನಂದಿಸುವ ವಿಶಾಲವಾದ ಬಾಲ್ಕನಿಗಳಿವೆ.

ಆರಂಭದಲ್ಲಿ, ಆರ್ಥಿಕ ಸಮಸ್ಯೆಗಳಿಂದಾಗಿ ಸನ್ಯಾ ಮನೆ ಖರೀದಿಸಲು ಹಿಂಜರಿಯುತ್ತಿದ್ದರು. ಆದರೆ, ಬಾಡಿಗೆಗೆ ಪಡೆಯುವುದಕ್ಕಿಂತ ಸ್ವಂತ ಮನೆ ಹೊಂದಿರುವುದು ಉತ್ತಮ ಎಂದು ಅವರ ತಂದೆ ಈ ನಿರ್ಧಾರ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿದರು.ಈಗ ಅವರ ಆಸೆ ಈಡೇರಿರುವುದರಿಂದ, ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಅವರಿಗೆ ಶುಭ ಹಾರೈಸುತ್ತಿದ್ದಾರೆ. ಸಾನ್ಯಾ ಅವರು ಬಾಲಿವುಡ್​​ನಲ್ಲಿ ಹೆಸರು ಮಾಡಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಅವರು ನಟಿಸಿ ಗಮನ ಸೆಳೆದಿದ್ದಾರೆ. ‘ದಂಗಲ್’ ಅವರ ಮೊದಲ ಸಿನಿಮಾ. ಈ ಚಿತ್ರ ಅವರಿಗೆ ಸಾಕಷ್ಟು ಜನಪ್ರಿಯತೆಯನ್ನು ನೀಡಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಅಗಲೀಕರಣಗೊಂಡ ರಸ್ತೆಯ ಮಧ್ಯದಲ್ಲೊಂದು ಹ್ಯಾಂಡ್ ಪಂಪ್

ಮಿರ್ಜಾಪುರ, ಮಾರ್ಚ್​ 19: ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ವಿಂಧ್ಯಾಚಲ ಪ್ರದೇಶದಲ್ಲಿ ಹೊಸದಾಗಿ ಅಗಲೀಕರಣಗೊಂಡ ರಸ್ತೆಯ ಮಧ್ಯದಲ್ಲಿ ಹ್ಯಾಂಡ್ ಪಂಪ್ ಇರುವುದು ತೀವ್ರ ಆಕ್ರೋಶವನ್ನು ಹುಟ್ಟುಹಾಕಿತ್ತು. ವಿಂಧ್ಯವಾಸಿನಿ ದೇವಸ್ಥಾನಕ್ಕೆ ಹೋಗುವ ಪ್ರಮುಖ ಮಾರ್ಗವಾದ ದೂಧ್‌ನಾಥ್ ತಿರಹಾದಿಂದ ವಿಂಧ್ಯಚಲದವರೆಗೆ ರಸ್ತೆಯನ್ನು ಅಗಲೀಕರಣ ಮಾಡಲಾಗುತ್ತಿದೆ. ರಸ್ತೆಬದಿಯಲ್ಲಿರುವ ಹ್ಯಾಂಡ್ ಪಂಪ್ ಅನ್ನು ತೆಗೆದುಹಾಕುವ ಬದಲು, ಅಧಿಕಾರಿಗಳು ಅದರ ಸುತ್ತ ರಸ್ತೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ.ವಿಸ್ತರಣೆಯ ನಂತರ ಅದನ್ನು ಮಧ್ಯದಲ್ಲಿಯೇ ಬಿಟ್ಟಿದ್ದರು.

ಕೈ ಪಂಪ್ ಮೊದಲು ಬದಿಯಲ್ಲಿತ್ತು, ಆದರೆ ಅಗಲಗೊಳಿಸಿದ ನಂತರ ಅದು ಮಧ್ಯದಲ್ಲಿ ಬಂದಿತ್ತು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಆದರೆ ಈಗ ವಾಹನ ಓಡಾಡುವಾಗ ಮಧ್ಯದಲ್ಲಿ ಹ್ಯಾಂಡ್​ ಪಂಪ್​ ಇದ್ದರೆ ಅಲ್ಲಿ ಹೋಗಿ ನೀರು ತೆಗೆದುಕೊಳ್ಳಲು ಕೂಡ ನಿವಾಸಿಗಳಿಗೆ ತೊಂದರೆಯಾಗುತ್ತದೆ ಎಂಬುದು ಜನರ ವಾದ. ಕೊನೆಗೂ ಈಗ ಆ ಹ್ಯಾಂಡ್​ಪಂಪನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

Vasthu Tips: ಅಡುಗೆಮನೆಯೊಳಗೆ ಚಪ್ಪಲಿ ಧರಿಸಬಾರದೇ? ವಾಸ್ತು ತಜ್ಞರು ಹೇಳುವುದೇನು?

ಭಾರತೀಯ ಸಂಸ್ಕೃತಿಯಲ್ಲಿ ಅಡುಗೆಮನೆಯನ್ನು ಕೇವಲ ಆಹಾರ ತಯಾರಿಸುವ ಸ್ಥಳವೆಂದು ಪರಿಗಣಿಸದೆ, ಅದನ್ನು ‘ಲಕ್ಷ್ಮಿಯ ನಿವಾಸ’ ಮತ್ತು ‘ಅನ್ನಪೂರ್ಣೇಶ್ವರಿಯ ಸನ್ನಿಧಿ’ ಎಂದು ಪೂಜಿಸಲಾಗುತ್ತದೆ. ಆದರೆ ಆಧುನಿಕ ಜೀವನಶೈಲಿಯ ಧಾವಂತದಲ್ಲಿ, ನಾವು ತಿಳಿಯದೆಯೇ ಹೊರಗಿನ ಧೂಳು ತುಂಬಿದ ಪಾದರಕ್ಷೆಗಳನ್ನು ಅಥವಾ ಮನೆಯೊಳಗಿನ ಚಪ್ಪಲಿಗಳನ್ನು ಧರಿಸಿ ಅಡುಗೆಮನೆ ಪ್ರವೇಶಿಸುತ್ತೇವೆ. ವಾಸ್ತು ಶಾಸ್ತ್ರ ಮತ್ತು ವಿಜ್ಞಾನದ ಪ್ರಕಾರ, ಈ ಒಂದು ಸಣ್ಣ ಅಭ್ಯಾಸವು ನಿಮ್ಮ ಮನೆಯ ನೆಮ್ಮದಿಯನ್ನೇ ಕಸಿದುಕೊಳ್ಳಬಲ್ಲದು.

ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯು ಧನಾತ್ಮಕ ಶಕ್ತಿಯ ಕೇಂದ್ರ. ಚಪ್ಪಲಿಗಳು ಹೊರಗಿನ ನಕಾರಾತ್ಮಕ ಶಕ್ತಿಯನ್ನು ಹೊತ್ತು ತರುತ್ತವೆ. ಅಶುದ್ಧ ಸ್ಥಿತಿಯಲ್ಲಿ ಅಡುಗೆಮನೆಯನ್ನು ಪ್ರವೇಶಿಸುವುದು ಅನ್ನಪೂರ್ಣ ದೇವಿ ಮತ್ತು ಲಕ್ಷ್ಮಿ ದೇವಿಯ ಕೋಪಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಇದರ ಪರಿಣಾಮಗಳು ಅನಗತ್ಯ ಖರ್ಚುಗಳು ಹೆಚ್ಚಾಗುವುದು ಮತ್ತು ಬಂದ ಹಣ ಕೈಯಲ್ಲಿ ನಿಲ್ಲದೆ ಇರಬಹುದು. ಇದಲ್ಲದೇ ಸಣ್ಣ ವಿಷಯಗಳಿಗೂ ದಂಪತಿಗಳ ನಡುವೆ ಕಹಿ ಉಂಟಾಗುವುದು ಮತ್ತು ಮನೆಯಲ್ಲಿ ಅಶಾಂತಿ ಮನೆಮಾಡುವುದು. ಉತ್ತಮ ಅವಕಾಶಗಳು ಕೈತಪ್ಪುವುದು ಮತ್ತು ಕುಟುಂಬದ ಸದಸ್ಯರ ಯಶಸ್ಸಿಗೆ ಅಡೆತಡೆಗಳು ಎದುರಾಗಬಹುದು.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ವೈಜ್ಞಾನಿಕ ಸತ್ಯ:

ಇದು ಕೇವಲ ಧಾರ್ಮಿಕ ನಂಬಿಕೆಯಲ್ಲ, ಇದರ ಹಿಂದೆ ಬಲವಾದ ವೈಜ್ಞಾನಿಕ ಕಾರಣವೂ ಇದೆ. ನಾವು ಧರಿಸುವ ಶೂ ಅಥವಾ ಚಪ್ಪಲಿಗಳಲ್ಲಿ ಕೋಟ್ಯಂತರ ಹಾನಿಕಾರಕ ಬ್ಯಾಕ್ಟೀರಿಯಾಗಳು ಮತ್ತು ಸೂಕ್ಷ್ಮಜೀವಿಗಳಿರುತ್ತವೆ. ಅಡುಗೆಮನೆಯ ಬೆಚ್ಚಗಿನ ವಾತಾವರಣವು ಈ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಪೂರಕವಾಗಿದೆ. ನೆಲದ ಮೇಲೆ ಚೆಲ್ಲುವ ಆಹಾರದ ಮೂಲಕ ಈ ಸೂಕ್ಷ್ಮಜೀವಿಗಳು ಸುಲಭವಾಗಿ ಹರಡುತ್ತವೆ. ಇದರಿಂದಾಗಿ ಟೈಫಾಯಿಡ್, ಅತಿಸಾರ ಮತ್ತು ಗಂಭೀರ ಹೊಟ್ಟೆಯ ಸೋಂಕುಗಳು ಉಂಟಾಗುವ ಅಪಾಯವಿರುತ್ತದೆ. ವಿಶೇಷವಾಗಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು ಮತ್ತು ವೃದ್ಧರ ಆರೋಗ್ಯದ ಮೇಲೆ ಇದು ಗಂಭೀರ ಪರಿಣಾಮ ಬೀರಬಹುದು.

ಕುಟುಂಬದ ಆರೋಗ್ಯ, ಆರ್ಥಿಕ ಸಮೃದ್ಧಿ ಮತ್ತು ಮಾನಸಿಕ ಶಾಂತಿಗಾಗಿ ಅಡುಗೆಮನೆಯನ್ನು ಪವಿತ್ರವಾಗಿಡುವುದು ಅತ್ಯಗತ್ಯ. ಇಂದಿನಿಂದಲೇ ಅಡುಗೆಮನೆಯೊಳಗೆ ಪಾದರಕ್ಷೆಗಳನ್ನು ಧರಿಸುವ ಅಭ್ಯಾಸವನ್ನು ಬಿಟ್ಟುಬಿಡಿ. ಸ್ವಚ್ಛವಾದ ಅಡುಗೆಮನೆಯೇ ಸುಖೀ ಕುಟುಂಬದ ಅಡಿಪಾಯ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಅಬ್ಬರ: ಕಾಶ್ಮೀರದಂತಾದ ಮಲೆನಾಡು; ರೈತರಿಗೆ ತಪ್ಪದ ಬೆಳೆ ಹಾನಿ ಸಂಕಷ್ಟ!

ಬೆಂಗಳೂರು, ಮಾ.19: ರಾಜ್ಯದಲ್ಲಿ ಸುಡುತ್ತಿದ್ದ ಬಿಸಿಲ ಬೇಗೆಯ ನಡುವೆಯೇ ವರುಣದೇವ ಅನಿರೀಕ್ಷಿತ ಎಂಟ್ರಿ ಕೊಟ್ಟಿದ್ದಾನೆ. ನೆನ್ನೆ (ಮಾ.18) ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ ಸುರಿದಿದ್ದು, ಭೂಮಿ ತಂಪಾಗಿದೆಯಾದರೂ ರೈತರ ಬದುಕು ಮಾತ್ರ ಬೀದಿಗೆ ಬಿದ್ದಿದೆ. ನಗರದ ಕೆ.ಆರ್. ಪುರಂ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 3 ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ 20ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದು, ಬೇರೆಡೆಗೆ ಡೈವರ್ಟ್ ಮಾಡಲಾಗಿದೆ.

ಧಾರಾಕಾರ ಮಳೆಗೆ ನೆಲಮಂಗಲದ ಬಸವನಹಳ್ಳಿ ಕ್ರಾಸ್ ಬಳಿ ಬೃಹತ್ ನೇಮ್ ಬೋರ್ಡ್ ಪಿಲ್ಲರ್ ಉರುಳಿಬಿದ್ದಿದೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ಚಾಮರಾಜನಗರದ ಕಡುವಿನಕಟ್ಟೆಹುಂಡಿಯಲ್ಲಿ ಕಟಾವಿಗೆ ಬಂದಿದ್ದ ಬಾಳೆ ಬೆಳೆ ನೆಲಕಚ್ಚಿದೆ. ಕೋಲಾರದಲ್ಲಿ ಮಾವಿನ ಹೂವು ಮತ್ತು ಕಾಯಿಗಳು ಉದುರಿದ್ದು, ದ್ರಾಕ್ಷಿ ಬೆಳೆಗಾರರು ರೋಗಭೀತಿಯ ಆತಂಕದಲ್ಲಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಗುಡುಗು ಸಹಿತ ಮಳೆ: ಈ ಜಿಲ್ಲೆಗಳಿಗೆ ಅಲರ್ಟ್!

ಚಿಕ್ಕಮಗಳೂರಿನಲ್ಲಿ ಆಲಿಕಲ್ಲು ಮಳೆಯಿಂದಾಗಿ ರಸ್ತೆಗಳೆಲ್ಲಾ ಬಿಳಿ ಮಂಜಿನಿಂದ ಆವೃತವಾಗಿದ್ದು, ಕಾಶ್ಮೀರದಂತಹ ದೃಶ್ಯ ಕಂಡುಬಂದಿದೆ. ಶಿವಮೊಗ್ಗದಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಮೈಸೂರಿನ ಹುಣಸೂರು ತಾಲೂಕಿನ ದಾಸನಪುರದಲ್ಲಿ ಶಾಲೆಯ ಮೇಲ್ಚಾವಣಿ ಹಾರಿಹೋಗಿದೆ. ಶಿಕ್ಷಕರ ಸಮಯಪ್ರಜ್ಞೆಯಿಂದಾಗಿ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನ ಕಡಬ, ದಾವಣಗೆರೆಯ ಗುಡಾಳ್ ಗ್ರಾಮ ಮತ್ತು ಬಾಗಲಕೋಟೆಯಲ್ಲಿಯೂ ಮಳೆಯಾಗಿದ್ದು, ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನರಿಗೆ ತುಸು ನೆಮ್ಮದಿ ಸಿಕ್ಕಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಬ್ಬಬ್ಬಾ, ಪೇಯ್ಡ್​ ಪ್ರೀಮೀಯರ್​ನಿಂದ ‘ಧುರಂಧರ್ 2’ ಸಿನಿಮಾ ಗಳಿಸಿದ್ದು ಇಷ್ಟೊಂದಾ?

‘ಧುರಂಧರ್ 2’ ಸಿನಿಮಾ (Dhurandha 2) ಮಾರ್ಚ್ 19ರಂದು ರಿಲೀಸ್ ಆಗಲಿದೆ. ಅದಕ್ಕೂ ಒಂದು ದಿನ ಮೊದಲ ಎಲ್ಲ ಕಡೆಗಳಲ್ಲಿ ಪೇಯ್ಡ್ ಪ್ರೀಮಿಯರ್​​ಗಳನ್ನು ಆಯೋಜನೆ ಮಾಡಲಾಗಿತ್ತು. ಹೀಗಾಗಿ, ಒಂದು ದಿನ ಮೊದಲೇ ಅನೇಕರು ಸಿನಿಮಾನ ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಚಿತ್ರ ನೋಡಿದ ಅನೇಕರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈ ಚಿತ್ರ ಪೇಯ್ಡ್ ಪ್ರೀಮಿಯರ್​ನಿಂದಲೇ ಸಿನಿಮಾಗೆ ಭರ್ಜರಿ ಗಳಿಕೆ ಮಾಡಿದೆ. ಇದು ನಿರ್ಮಾಪಕರ ಖುಷಿ ಹೆಚ್ಚಿಸಿದೆ.

‘ಧುರಂಧರ್ 2’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಲು ಕಾರಣ ಮೊದಲ ಭಾಗ. ‘ಧುರಂಧರ್’ ಸಿನಿಮಾ ಹಿಟ್ ಆದ ಬಳಿಕ ‘ಧುರಂಧರ್ 2’ ಸಿನಿಮಾ ರಿಲೀಸ್ ಆಯಿತು. ವಿಶೇಷ ಎಂದರೆ, ‘ಧುರಂಧರ್’ ಸಿನಿಮಾ ಇನ್ನೂ ಥಿಯೇಟರ್​​ನಲ್ಲಿ ಪ್ರದರ್ಶನ ಕಾಣುತ್ತಿದೆ.ಹಾಗಿರುವಾಗಲೇ ‘ಧುರಂಧರ್ 2’ ತೆರೆಗೆ ಅಪ್ಪಳಿಸಿದೆ. ಈ ಚಿತ್ರವನ್ನು ನೋಡಿದ ವೀಕ್ಷರು ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

‘ಧುರಂಧರ್ 2’ ಸಿನಿಮಾ ಪೇಯ್ಡ್​ ಪ್ರೀಮಿಯರ್​​ಗಿಂದಲೇ 50 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ. ಈ ಮೊದಲು ಪವನ್ ಕಲ್ಯಾಣ್ ನಟನೆಯ ‘ಒಜಿ’ ಸಿನಿಮಾ ಪ್ರೀಮಿಯರ್ ಶೋಗಳಿಂದ 25 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ಮಾಡಿತ್ತು. ಆ ದಾಖಲೆಗಳನ್ನು ‘ಧುರಂಧರ್ 2’ ಮುರಿದು ಹಾಕಿದೆ. ಪ್ರೀಮಿಯರ್ ಶೋಗಳಿಂದ ‘ಓಜಿ’ ಚಿತ್ರ ಮಾಡಿದ ಗಳಿಕೆಗಿಂತ ದುಪ್ಪಟ್ಟು ಗಳಿಕೆಯನ್ನು ‘ಧುರಂಧರ್ 2’ ಸಿನಿಮಾ ಮಾಡಿದೆ.

ಇಂದು ಯುಗಾದಿ ಪ್ರಯುಕ್ತ ರಜಾ ಇದೆ. ಇದು ‘ಧುರಂಧರ್ 2’ ಸಿನಿಮಾಗೆ ಸಹಕಾರಿ ಆಗಲಿದೆ. ಈ ಚಿತ್ರದ ಬುಕಿಂಗ್ ಜೋರಾಗಿಯೇ ನಡೆಯುತ್ತಿದೆ. ಹೀಗಾಗಿ, ಮೊದಲ ದಿನ ಸಿನಿಮಾದ ಕಲೆಕ್ಷನ್ 200-300 ಕೋಟಿ ರೂಪಾಯಿ ಆಗಬಹುದು ಎಂದು ಊಹಿಸಲಾಗಿದೆ. ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ. ಈ ಕಾರಣದಿಂದಲೂ ಚಿತ್ರ ಹೆಚ್ಚು ಗಳಿಕೆ ಮಾಡಬಹುದು.

ಇದನ್ನೂ ಓದಿ: ಆ ವ್ಯಕ್ತಿ ಇಲ್ಲದೆ ಸಿನಿಮಾ ಅಪೂರ್ಣ; ‘ಧುರಂಧರ್ 2’ ಬಗ್ಗೆ ವೀಕ್ಷಕರ ಅಸಮಾಧಾನ ಏನು?

ರಣವೀರ್ ಸಿಂಗ್, ಸಾರಾ ಅರ್ಜುನ್, ಅರ್ಜುನ್ ರಾಮ್​​ಪಾಲ್, ಸಂಜಯ್ ದತ್ ಮೊದಲಾದವರು ‘ಧುರಂಧರ್ 2’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಆದಿತ್ಯ ಧಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಕತಾರ್​​ನಲ್ಲಿ ಭಾರತಕ್ಕೆ ಅನಿಲ ಸರಬರಾಜು ಮಾಡುವ ರಾಸ್ ಲಫಾನ್ ಘಟಕದ ಮೇಲೆ ಇರಾನ್ ಕ್ಷಿಪಣಿ ದಾಳಿ

ಕತಾರ್, ಮಾರ್ಚ್​ 19: ಇರಾನ್(Iran) ನಡೆಸುತ್ತಿರುವ ದಾಳಿಯು ಭಾರತಕ್ಕೆ ನೇರವಾಗಿ ಪರಿಣಾಮ ಬೀರದಿದ್ದರೂ ಕೂಡ ಪರೋಕ್ಷವಾಗಿ ಅದರ ಪರಿಣಾಮವನ್ನು ಅನುಭವಿಸುತ್ತಿದೆ. ಪಶ್ಚಿಮ ಏಷ್ಯಾ ಅಥವಾ ಮಧ್ಯಪ್ರಾಚ್ಯವು ಪೂರ್ಣ ಪ್ರಮಾಣದ ಯುದ್ಧಭೂಮಿಯಾಗಿದೆ. ಯುದ್ಧವು ಇರಾನ್ ಮತ್ತು ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ನೇರವಾಗಿ ನಡೆದರೂ, ಅದರ ಪರಿಣಾಮವು ಇಡೀ ವಿಶ್ವ ಅನುಭವಿಸುತ್ತಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ.

ಇರಾನ್ ಕೊಲ್ಲಿಯಲ್ಲಿರುವ ಯುಎಸ್ ವಾಯುನೆಲೆಗಳು ಮತ್ತು ಮಿಲಿಟರಿ ನೆಲೆಗಳನ್ನು ಮಾತ್ರ ಗುರಿಯಾಗಿಸಿಕೊಂಡಿತ್ತು. ಈಗ, ಇರಾನ್ ಒಂದು ಹೆಜ್ಜೆ ಮುಂದೆ ಹೋಗಿದೆ. ಅದು ಪಶ್ಚಿಮ ಏಷ್ಯಾದಲ್ಲಿ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಲು ಪ್ರಾರಂಭಿಸಿದೆ. ಇಡೀ ಜಗತ್ತನ್ನು ಕಾಡುತ್ತಿರುವ ಭಯ ಈಗ ವಾಸ್ತವವಾಗುತ್ತಿದೆ.

ಇರಾನ್ ಕತಾರ್‌ನಲ್ಲಿರುವ ಇಂಧನ ಸೌಲಭ್ಯಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿತ್ತು, ಆದರೆ ಈಗ ಅದನ್ನು ಪ್ರಾರಂಭಿಸಿದೆ.ಕತಾರಿ ಅನಿಲ ಸೌಲಭ್ಯದ ಮೇಲಿನ ದಾಳಿ ಈಗಾಗಲೇ ಪ್ರಾರಂಭವಾಗಿದೆ. ಇದರರ್ಥ ಅನಿಲ ಬೆಲೆಗಳು ಗಗನಕ್ಕೇರಲಿವೆ.

ಇರಾನ್ ಈಗ ಅದು ಗಾಯಗೊಂಡ ಸಿಂಹದಂತಾಗಿದೆ. ಅದು ಸೇಡಿನ ಬೆಂಕಿಯಿಂದ ಉರಿಯುತ್ತಿದೆ. ಇರಾನ್ ಈಗ ತನ್ನ ಅನಿಲ ಘಟಕಗಳ ಮೇಲಿನ ಇಸ್ರೇಲ್ ದಾಳಿಗೆ ಸೇಡು ತೀರಿಸಿಕೊಳ್ಳಲು ಪ್ರಾರಂಭಿಸಿದೆ. ತನ್ನ ಅನಿಲ ಘಟಕಗಳ ಮೇಲಿನ ದಾಳಿಯ ನಂತರ, ಇರಾನ್ ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿರುವ ತೈಲ ಮತ್ತು ಅನಿಲ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದೆ.

ಮತ್ತಷ್ಟು ಓದಿ: ಇರಾನ್​ಗೆ ಮೆಡಿಕಲ್ ಕಿಟ್ ಕಳುಹಿಸಿ ಮಾನವೀಯತೆ ಮೆರೆದ ಭಾರತ

ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ನಡೆಯುತ್ತಿರುವ ಯುದ್ಧದ ಸಮಯದಲ್ಲಿ ಇರಾನ್ ಈ ಹಿಂದೆಯೂ ಇದೇ ರೀತಿಯ ಬೆದರಿಕೆಗಳನ್ನು ಹಾಕಿದೆ. ಆದರೆ ಈಗ ಇರಾನ್ ತನ್ನ ಬೆದರಿಕೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಾರಂಭಿಸಿದೆ. ಬುಧವಾರ ಪರ್ಷಿಯನ್ ಕೊಲ್ಲಿಯಲ್ಲಿರುವ ಇರಾನ್‌ನ ಸೌತ್ ಪಾರ್ಸ್ ಅನಿಲ ಘಟಕ ಮತ್ತು ಅದರ ಸಂಬಂಧಿತ ಮೂಲಸೌಕರ್ಯಗಳ ಮೇಲೆ ದಾಳಿಯ ನಂತರ ಇರಾನ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇಸ್ರೇಲ್ ಈ ದಾಳಿಯನ್ನು ನಡೆಸಿತು. ಈಗ ಅದು ಅಮೆರಿಕ ಮತ್ತು ಇಸ್ರೇಲಿ ಮಿತ್ರರಾಷ್ಟ್ರಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ.

ಪ್ರಮುಖ ಇಂಧನ ಮೂಲಸೌಕರ್ಯಗಳ ಮೇಲೆ ಕ್ಷಿಪಣಿ ದಾಳಿ ನಡೆದ ನಂತರ ಇರಾನ್-ಇಸ್ರೇಲ್-ಯುಎಸ್ ಸಂಘರ್ಷವು ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇರಾನ್ ಕತಾರ್‌ನ ರಾಸ್ ಲಫಾನ್ ಕೈಗಾರಿಕಾ ನಗರದ ಮೇಲೆ ಕ್ಷಿಪಣಿ ದಾಳಿ ನಡೆಸಿತು. ಈ ದಾಳಿಯಲ್ಲಿ ಕತಾರ್ ಗಮನಾರ್ಹ ಹಾನಿಯನ್ನು ಅನುಭವಿಸಿದೆ .

ಗಲ್ಫ್ ದೇಶಗಳಲ್ಲಿನ ಇಂಧನ ಮೂಲಸೌಕರ್ಯದ ಮೇಲೆ ಈ ದಾಳಿಯ ಪರಿಣಾಮವು ಅನಿಲ ಮತ್ತು ತೈಲ ಬೆಲೆಗಳಲ್ಲಿ ಏರಿಕೆಗೆ ಕಾರಣವಾಗಬಹುದು. ರಾಸ್ ಲಫಾನ್ ಸಂಕೀರ್ಣದ ಮೇಲಿನ ಕ್ಷಿಪಣಿ ದಾಳಿಯು ಮಧ್ಯಪ್ರಾಚ್ಯ ಮತ್ತು ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ಆಘಾತದ ಅಲೆಗಳನ್ನು ಹುಟ್ಟುಹಾಕಿದೆ.

ಈ ದಾಳಿಯು ಇರಾನ್ ಮತ್ತು ಯುಎಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಅಪಾಯಕಾರಿ ತಿರುವು ಎಂದೇ ಹೇಳಬಹುದು. ಕತಾರ್ ಭಾರತದ ಅತಿದೊಡ್ಡ ಅನಿಲ ಪೂರೈಕೆದಾರ. ಭಾರತವು ಕತಾರ್‌ನಿಂದ ಅತಿ ಹೆಚ್ಚು ಅನಿಲವನ್ನು ಆಮದು ಮಾಡಿಕೊಳ್ಳುತ್ತದೆ.

ಭಾರತವು ವಾರ್ಷಿಕವಾಗಿ ಸುಮಾರು 27 ಮಿಲಿಯನ್ ಟನ್ ಎಲ್‌ಎನ್‌ಜಿಯನ್ನು ಆಮದು ಮಾಡಿಕೊಳ್ಳುತ್ತದೆ, ಇದರಲ್ಲಿ ಕತಾರ್ 47% ಅಥವಾ ವಾರ್ಷಿಕವಾಗಿ ಸರಿಸುಮಾರು 12-13 ಮಿಲಿಯನ್ ಟನ್‌ಗಳನ್ನು ಹೊಂದಿದೆ. ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿರುವುದರಿಂದ ಅನೇಕ ಭಾರತೀಯ ಅನಿಲ ಹಡಗುಗಳು ಇನ್ನೂ ಸಮುದ್ರದಲ್ಲಿ ಸಿಲುಕಿಕೊಂಡಿವೆ.

ಭಾರತವು ಇರಾನ್‌ನೊಂದಿಗೆ ನಿರಂತರವಾಗಿ ಮಾತುಕತೆ ನಡೆಸುತ್ತಿದೆ ಮತ್ತು ತನ್ನ ಹಡಗುಗಳನ್ನು ಒಂದೊಂದಾಗಿ ಸ್ವದೇಶಕ್ಕೆ ಹಿಂದಿರುಗಿಸುತ್ತಿದೆ.ರಾಸ್ ಲಫಾನ್ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡರೆ, ಭಾರತವು ಇತರ ಮೂಲಗಳಿಂದ ದುಬಾರಿ ಅನಿಲ ಖರೀದಿಸಬೇಕಾಗುತ್ತದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹಬ್ಬಕ್ಕೆ ಊರಿಗೆ ಹೊರಟ ಜನ: ಬೆಂಗಳೂರಿನಲ್ಲಿ ರಾತ್ರಿಯೆಲ್ಲ ಟ್ರಾಫಿಕ್ ಜಾಮ್, ಮೆಜೆಸ್ಟಿಕ್​ನಲ್ಲಿ ಜನವೋ ಜನ

ಬೆಂಗಳೂರು, ಮಾರ್ಚ್ 19: ಯುಗಾದಿ, ರಂಜಾನ್ ಹಬ್ಬ ಮತ್ತು ಸುದೀರ್ಘ ವಾರಾಂತ್ಯ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಊರಿನತ್ತ ತೆರಳುವ ಪ್ರಯಾಣಿಕರಿಂದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬುಧವಾರ ರಾತ್ರಿ ಭಾರಿ ಜನಸಂದಣಿ ಕಂಡುಬಂದಿದೆ. ಬಸ್ಸುಗಳು ಕೂಡ ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುವುದು ಕಂಡುಬಂದಿದೆ. ಸೀಟು ಸಿಗದೆ ಪರದಾಡುತ್ತಿರುವ ಜನರು, ಲಗೇಜ್ ಸಮೇತವಾಗಿ ರಾತ್ರಿಯಿಡೀ ನಿಲ್ದಾಣದಲ್ಲೇ ಜಾಗರಣೆ ಮಾಡುವಂತಾಯಿತು.

ಜನರು ಊರಿಗೆ ಹೋಗಲು ಮೆಜೆಸ್ಟಿಕ್​ನತ್ತ ಧಾವಿಸಿದ್ದರಿಂದ ಕಾರ್ಪೊರೇಷನ್ ರಸ್ತೆ, ಮೈಸೂರು ಬ್ಯಾಂಕ್ ರಸ್ತೆ ಮತ್ತು ಕೆ.ಆರ್. ಮಾರ್ಕೆಟ್ ರಸ್ತೆ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಯಿತು. ಹೆಚ್ಚುವರಿ ವಾಹನಗಳು ರಸ್ತೆಗಿಳಿದಿದ್ದರ ನಡುವೆ ಸಂಜೆ ಸುರಿದ ಮಳೆಯೂ ಟ್ರಾಫಿಕ್ ಸಮಸ್ಯೆ ಹೆಚ್ಚಿಸಿತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಥ್ಯಾಂಕ್ ಯು ಮಳೆರಾಯ: ನಿನ್ನ ಕೃಪೆಯಿಂದ ಬೆಂಗಳೂರಿನಲ್ಲಿ ಗಾಳಿಯ ಮಟ್ಟ ಉತ್ತಮ

ಬೆಂಗಳೂರು, ಮಾ.19: ಕರ್ನಾಟಕದ ರಾಜಧಾನಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟವು ಇಂದು ‘ಉತ್ತಮ’ (Good) ಹಾಗೂ ‘ತೃಪ್ತಿದಾಯಕ’ (Satisfactory) ಮಟ್ಟದಲ್ಲಿದೆ. ಸತತವಾಗಿ ಸುರಿಯುತ್ತಿರುವ ಬೇಸಿಗೆ ಮಳೆಯು ಧೂಳಿನ ಕಣಗಳನ್ನು ಕಡಿಮೆ ಮಾಡಿದ್ದು, ಜನರಿಗೆ ನಿರಾಳ ತಂದಿದೆ. ಬೆಂಗಳೂರಿನ ಗಾಂಧಿ ಬಜಾರ್ ಮತ್ತು ಬೊಮ್ಮನಹಳ್ಳಿ ಭಾಗದಲ್ಲಿ AQI ಪ್ರಮಾಣ 40ರ ಆಸುಪಾಸಿನಲ್ಲಿದ್ದು, ಅತ್ಯುತ್ತಮ ಹಂತದಲ್ಲಿದೆ. ಮಳೆಯಿಂದಾಗಿ ವಾತಾವರಣವು ತಿಳಿಯಾಗಿದೆ.

ಇಂದಿನ ವಾಯು ಗುಣಮಟ್ಟವು ಎಲ್ಲಾ ವಯಸ್ಸಿನವರಿಗೂ ಸುರಕ್ಷಿತವಾಗಿದೆ. ದೈಹಿಕ ವ್ಯಾಯಾಮ ಮತ್ತು ಹೊರಾಂಗಣ ಚಟುವಟಿಕೆಗಳಿಗೆ ಇದು ಸೂಕ್ತ ಸಮಯ. ಪೀಣ್ಯ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದ ಮಾಲಿನ್ಯವಿದ್ದರೂ ಅದು ‘ತೃಪ್ತಿದಾಯಕ’ ಮಟ್ಟದಲ್ಲಿಯೇ ಇದೆ. ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ವಾಯು ಮಾಲಿನ್ಯದ ಮಟ್ಟವು ಪ್ರಸ್ತುತ ನಿಯಂತ್ರಣದಲ್ಲಿದೆ. ಪ್ರವಾಸೋದ್ಯಮ ಮತ್ತು ಆರೋಗ್ಯದ ದೃಷ್ಟಿಯಿಂದ ಈ ಜಿಲ್ಲೆಗಳಲ್ಲಿನ ಇಂದಿನ ಗಾಳಿಯ ಮಟ್ಟದಲ್ಲಿ ಬದಲಾವಣೆ ಕಂಡಿದೆ.

ಪ್ರಮುಖ ನಗರಗಳ ಇಂದಿನ AQI ವಿವರ

ನಗರ AQI ಮಟ್ಟ ವರ್ಗ (Category) ಪ್ರಮುಖ ಮಾಲಿನ್ಯಕಾರಕ
ಬೆಂಗಳೂರು 38 – 52 ಉತ್ತಮ / ತೃಪ್ತಿದಾಯಕ PM10 & PM2.5
ಮೈಸೂರು 42 – 55 ತೃಪ್ತಿದಾಯಕ PM2.5
ಹುಬ್ಬಳ್ಳಿ-ಧಾರವಾಡ 45 – 60 ತೃಪ್ತಿದಾಯಕ PM10
ಮಂಗಳೂರು 35 – 48 ಉತ್ತಮ PM2.5
ಬೆಳಗಾವಿ 50 – 65 ತೃಪ್ತಿದಾಯಕ PM10

ಮಂಗಳೂರಿನಲ್ಲಿ ಇಂದಿನ ಗಾಳಿಯ ಮಟ್ಟ ಉತ್ತಮ ಹಾಗೂ ತೃಪ್ತಿದಾಯಕವಾಗಿದೆ. ಸಮುದ್ರ ತೀರದ ಗಾಳಿ ಶುದ್ಧವಾಗಿದೆ. ಉಡುಪಿಯಲ್ಲಿ ತೃಪ್ತಿದಾಯಕ ಗಾಳಿಯ ಮಟ್ಟವನ್ನು ಹೊಂದಿದೆ. ಹಬ್ಬದ ಖರೀದಿಯಿಂದಾಗಿ ಧೂಳಿನ ಪ್ರಮಾಣ ತುಸು ಹೆಚ್ಚಿದೆ.ಮೈಸೂರಿನಲ್ಲಿ ತೃಪ್ತಿದಾಯಕ ಮತ್ತು ಸಾಧಾರಣ ಗಾಳಿಯ ಮಟ್ಟವನ್ನು ಹೊಂದಿದ್ದು, ನಗರ ಪ್ರದೇಶಗಳಲ್ಲಿ ವಾಹನ ಸಂಚಾರದಿಂದ ಅಲ್ಪ ಏರಿಕೆ. ಕೊಡಗಿನಲ್ಲಿ ಅತ್ಯುತ್ತಮವಾಗಿದೆ. ಮಲೆನಾಡಿನ ಹಸಿರು ಮತ್ತು ಮಳೆಯಿಂದಾಗಿ ಅತ್ಯಂತ ಶುದ್ಧ ಗಾಳಿ.

ರಾಜ್ಯದ ಅತ್ಯಂತ ಶುದ್ಧ ಗಾಳಿ ಹೊಂದಿರುವ ಜಿಲ್ಲೆಯಾಗಿ ಕೊಡಗು ಮುಂದುವರಿದಿದೆ. ಇಲ್ಲಿನ ಗಾಳಿಯ ಗುಣಮಟ್ಟವು ಆರೋಗ್ಯಕ್ಕೆ ಅತ್ಯಂತ ಪೂರಕವಾಗಿದೆ. ಕರಾವಳಿ ಭಾಗದಲ್ಲಿ ತೇವಾಂಶ ಹೆಚ್ಚಿರುವುದರಿಂದ ಮತ್ತು ಸಣ್ಣ ಪ್ರಮಾಣದ ಮಳೆಯ ಮುನ್ಸೂಚನೆ ಇರುವುದರಿಂದ ಮಾಲಿನ್ಯಕಾರಕ ಕಣಗಳು ನೆಲಕ್ಕೆ ಸೇರುತ್ತಿವೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಬ್ಬದ ಸಡಗರದಿಂದಾಗಿ ಮಾರುಕಟ್ಟೆ ಪ್ರದೇಶಗಳಲ್ಲಿ ವಾಯು ಗುಣಮಟ್ಟವು 100ರ ಆಸುಪಾಸಿನಲ್ಲಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಗುಡುಗು ಸಹಿತ ಮಳೆ: ಈ ಜಿಲ್ಲೆಗಳಿಗೆ ಅಲರ್ಟ್!

ಉತ್ತರ ಕರ್ನಾಟಕದಲ್ಲೂ ಗಾಳಿ ಮಟ್ಟದಲ್ಲಿ ದೊಡ್ಡ ಬದಲಾವಣೆಗಳು ಕಂಡಿದೆ. ಹುಬ್ಬಳ್ಳಿಯ ಕೆಲವು ಭಾಗಗಳಲ್ಲಿ AQI 35ರ ಆಸುಪಾಸಿನಲ್ಲಿದ್ದು, ಇದು ಅತ್ಯಂತ ಶುದ್ಧ ಗಾಳಿಯ ಸಂಕೇತವಾಗಿದೆ. ಬಿಸಿಲು ಹೆಚ್ಚಿದ್ದರೂ, ಗಾಳಿಯಲ್ಲಿನ ತೇವಾಂಶ ಮತ್ತು ಸಣ್ಣ ಮಳೆಯ ಮುನ್ಸೂಚನೆಯು ಮಾಲಿನ್ಯವನ್ನು ನಿಯಂತ್ರಣದಲ್ಲಿಟ್ಟಿದೆ. ಈ ಮಟ್ಟದ AQI ಆರೋಗ್ಯವಂತ ಜನರಿಗೆ ಸುರಕ್ಷಿತವಾಗಿದೆ. ಆದರೆ ಅಸ್ತಮಾ ಅಥವಾ ಉಸಿರಾಟದ ಸಮಸ್ಯೆ ಇರುವವರು ಸಂಜೆ ವೇಳೆ ಹೊರಗೆ ಹೋಗುವಾಗ ಜಾಗರೂಕರಾಗಿರಿ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Source link

ಆ ವ್ಯಕ್ತಿ ಇಲ್ಲದೆ ಸಿನಿಮಾ ಅಪೂರ್ಣ; ‘ಧುರಂಧರ್ 2’ ಬಗ್ಗೆ ವೀಕ್ಷಕರ ಅಸಮಾಧಾನ ಏನು?

‘ಧುರಂಧರ್ 2’ ಸಿನಿಮಾ (Dhurandhar 2 Review) ವಿಶ್ವಾದ್ಯಂತ ತೆರೆಗೆ ಬಂದಿದೆ. ಮಾರ್ಚ್ 19ರಂದು ಸಿನಿಮಾ ರಿಲೀಸ್ ಆದರೂ, ಮಾರ್ಚ್ 18ರಂದು ಚಿತ್ರಕ್ಕೆ ಪ್ರೀಮಿಯರ್ ಶೋಗಳನ್ನು ಇಡಲಾಗಿತ್ತು. ಈ ಸಿನಿಮಾ ಅಬ್ಬರಿಸಿದೆ. ಈ ಚಿತ್ರವನ್ನು ನೋಡಿದ ಅನೇಕರು ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಈ ಚಿತ್ರದಲ್ಲಿ ಓರ್ವ ಪ್ರಮುಖ ವ್ಯಕ್ತಿ ಕಾಣಿಸಿಕೊಳ್ಳೋದಿಲ್ಲ. ಇದಕ್ಕೆ ವೀಕ್ಷಕರು ಸಾಕಷ್ಟು ಅಸಮಾಧನ ಹೊರಹಾಕಿದ್ದಾರೆ. ಉಳಿದಂತೆ ಸಿನಿಮಾದ ಆ್ಯಕ್ಷನ್ ವಿಷಯ ವೀಕ್ಷಕರಿಗೆ ಇಷ್ಟ ಆಗಿದೆ.

‘ಧುರಂಧರ್ 2’ ಸಿನಿಮಾ ವಿಶ್ವ ಮಟ್ಟದಲ್ಲಿ ಏಕ ಕಾಲಕ್ಕೆ ರಿಲೀಸ್ ಆಗಿದೆ. ಆದರೆ, ಕನ್ನಡ, ತೆಲುಗು, ತಮಿಳು ಮೊದಲಾದ ಭಾಷೆಗಳಲ್ಲಿ ಸಿನಿಮಾದ ಪ್ರೀಮಿಯರ್ ಆಗಿಲ್ಲ. ಹಿಂದಿ ವರ್ಷನ್ ನೋಡಿದ ಜನರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ರಣವೀರ್ ಸಿಂಗ್ ಅವರನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಅವರ ಆ್ಯಕ್ಷನ್ ದೃಶ್ಯಗಳು ಗಮನ ಸೆಳೆದಿವೆ.

‘ಧುರಂಧರ್’ ಸಿನಿಮಾದಲ್ಲಿ ಅಕ್ಷಯ್ ಖನ್ನಾ ನಟಿಸಿದ್ದರು. ಎರಡನೇ ಭಾಗದಲ್ಲಿ ಅವರು ಫ್ಲ್ಯಾಶ್​​ಬ್ಯಾಕ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ, ಅವರು ಒಂದೇ ಒಂದು ದೃಶ್ಯದಲ್ಲೂ ಕಾಣಿಸಿಕೊಳ್ಳುವುದಿಲ್ಲ. ಕೇವಲ ಪೋಸ್ಟರ್​​ಗೆ ಮಾತ್ರ ಸೀಮಿತ ಆಗಿದ್ದಾರೆ. ಇದು ಅಭಿಮಾನಿಗಳಿಗೆ ಬೇಸರ ತರಿಸುತ್ತದೆ. ಅವರು ಇರಬೇಕಿತ್ತು ಎಂದು ಅನೇಕರು ಹೇಳಿದ್ದಾರೆ. ಇನ್ನೂ ಕೆಲವರಿಗೆ ಅಕ್ಷಯ್ ಖನ್ನಾ ಅವರ ಸ್ಥಾನವನ್ನು ಅರ್ಜುನ್ ರಾಮ್​​ಪಾಲ್ ತುಂಬಿದ್ದಾರೆ ಎಂದು ಅನಿಸಿದೆ.

ಇದನ್ನೂ ಓದಿ: ಒಂದು ಸೇಡಿನ ಕಥೆ; ‘ಧುರಂಧರ್ 2’ ಸಿನಿಮಾ ವಿಮರ್ಶೆ

ರಣವೀರ್ ಸಿಂಗ್ ಅವರ ಆ್ಯಕ್ಷನ್ ಇಷಟ ಆಗಿದೆ. ಹಿಂಸಾತ್ಮಕ ದೃಶ್ಯವನ್ನು ಸಾಕಷ್ಟು ರಾ ಆಗಿ ತೋರಿಸಲಾಗಿದೆ ಎಂದು ಕೆಲವರಿಗೆ ಹೇಳಿದ್ದಾರೆ. ಆ್ಯಕ್ಷನ್ ದೃಶ್ಯಗಳನ್ನು ಇಷ್ಟಪಡೋರಿಗೆ ಸಿನಿಮಾ ಹೆಚ್ಚು ಇಷ್ಟ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಒಮಾನ್‌ ಗಲ್ಫ್‌ನತ್ತ ಭಾರತದ 6ಕ್ಕೂ ಹೆಚ್ಚು ಯುದ್ಧನೌಕೆ ರವಾನೆ: ಕೇಂದ್ರದ ದಿಢೀರ್ ನಿರ್ಧಾರಕ್ಕೆ ಇಲ್ಲಿದೆ ಕಾರಣ

ನವದೆಹಲಿ, ಬೆಂಗಳೂರು, ಮಾರ್ಚ್ 19: ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಸೇನಾ ಸಂಘರ್ಷ (Iran-Israel Conflict) ಆರಂಭವಾಗಿ 20 ದಿನಗಳಾದರೂ ಉದ್ವಿಗ್ನತೆ ತಗ್ಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಯುದ್ಧದ ಪರಿಣಾಮ ಜಾಗತಿಕ ತೈಲ ಹಾಗೂ ಅನಿಲ ಸರಬರಾಜಿನ ಮೇಲೆ ಬೀರಿದ್ದು, ಅದರ ಪರಿಣಾಮವಾಗಿ ಕರ್ನಾಟಕದಲ್ಲೂ ಕಮರ್ಷಿಯಲ್ ಎಲ್‌ಪಿಜಿ (LPG) ಕೊರತೆ ಉಂಟಾಗಿ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಹೊರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ನೂರಾರು ತೈಲ ಹಾಗೂ ಅನಿಲ ಹಡಗುಗಳು ಅಲ್ಲಿ ಸಿಲುಕಿಕೊಂಡಿವೆ. ಭಾರತದ 22ಕ್ಕೂ ಹೆಚ್ಚು ಹಡಗುಗಳು ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಸಿಲುಕಿರುವುದಾಗಿ ಕೇಂದ್ರ ಸರ್ಕಾರದ ಶಿಪ್ಪಿಂಗ್ ಸಚಿವಾಲಯ ಮಾಹಿತಿ ನೀಡಿದೆ.

ಅವುಗಳಲ್ಲಿ 6 ಎಲ್‌ಪಿಜಿ ಹಡಗುಗಳು, 4 ಕಚ್ಚಾ ತೈಲ ಹಡಗುಗಳು, 3 ಕಂಟೇನರ್ ಹಡಗುಗಳು, 2 ಕಚ್ಚಾ ವಸ್ತು ಸಾಗಣೆ ಹಡಗುಗಳು, 1 ಎಲ್‌ಎನ್‌ಜಿ ಹಡಗು ಹಾಗೂ 1 ರಾಸಾಯನಿಕ ವಸ್ತು ಸಾಗಣೆ ಹಡಗು ಸೇರಿವೆ.

ಹೊರ್ಮುಜ್‌ನಲ್ಲಿ ಭಾರತದ ಹಡಗುಗಳು!

  • ಪರ್ಷಿಯನ್‌ ಗಲ್ಫ್‌ನಲ್ಲಿ – 22 ಹಡಗು
  • LPG ತುಂಬಿದ ಹಡಗುಗಳು – 6 ಹಡಗು
  • ಕಚ್ಚಾ ತೈಲ ತುಂಬಿದ ಹಡಗು – 4 ಹಡಗು
  • ಕಂಟೇನರ್‌ ಹಡಗುಗಳು – 3 ಹಡಗು
  • ಕಚ್ಚಾ ವಸ್ತುಗಳ ಸಾಗಿಸುವ ಹಡಗು – ಹಡಗು
  • LNG ತುಂಬಿದ ಹಡಗುಗಳು – 1 ಹಡಗು
  • ರಾಸಾಯನಿಕ ವಸ್ತುಗಳ ಹಡಗು – 1 ಹಡಗು

ಇದಕ್ಕೂ ನಡುವೆ, ಭಾರತಕ್ಕೆ ಅಗತ್ಯವಾದ ಅನಿಲ ಸರಬರಾಜು ಮುಂದುವರಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ‘ಶಿವಾಲಿಕ್’ ಮತ್ತು ‘ನಂದಾದೇವಿ’ ಹಡಗುಗಳು ಸೇರಿ ಸುಮಾರು 92 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಭಾರತಕ್ಕೆ ತಲುಪಿಸಿವೆ. ‘ಜಗ್ ಲಾಡ್ಕಿ’ ಸೇರಿದಂತೆ ಇನ್ನೂ ಕೆಲವು ಹಡಗುಗಳು ಕಚ್ಚಾ ತೈಲವನ್ನು ಹೊತ್ತು ದೇಶ ತಲುಪಿವೆ.

ಮತ್ತಷ್ಟು ಹಡಗುಗಳನ್ನು ಸುರಕ್ಷಿತವಾಗಿ ಕರೆತರಲು ಭಾರತೀಯ ನೌಕಾಪಡೆ ಒಮಾನ್ ಗಲ್ಫ್ ಭಾಗದತ್ತ ಯುದ್ಧನೌಕೆಗಳನ್ನು ರವಾನಿಸಿದೆ ಎಂದು ವರದಿಯಾಗಿವೆ. ತೈಲ ಹಡಗುಗಳಿಗೆ ಎಸ್ಕಾರ್ಟ್ ನೀಡಲು 6ಕ್ಕೂ ಹೆಚ್ಚು ಯುದ್ಧನೌಕೆಗಳನ್ನು ನಿಯೋಜಿಸಲಾಗಿದೆ ಎಂದು ‘ಬ್ಲೂಮ್​ಬರ್ಗ್’ ಹಾಗೂ ಇತರೆ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಕುರಿತು ಕೇಂದ್ರ ಸರ್ಕಾರ ಅಧಿಕೃತ ದೃಢೀಕರಣ ನೀಡಿಲ್ಲ.

ಸಂಪೂರ್ಣ ಬಂದಾಗಿಲ್ಲ ಹೊರ್ಮುಜ್ ಜಲಸಂಧಿ!

ಏತನ್ಮಧ್ಯೆ, ಹೊರ್ಮುಜ್ ಜಲಸಂಧಿ ಸಂಪೂರ್ಣವಾಗಿ ಬಂದ್ ಆಗಿಲ್ಲ ಎಂದು ಹೇಳಲಾಗುತ್ತಿದೆ. ಇರಾನ್ ಪ್ರತಿ ಹಡಗಿನ ದಾಖಲೆಗಳನ್ನು ಪರಿಶೀಲಿಸಿ ಬಳಿಕವೇ ಸಾಗಲು ಅನುಮತಿ ನೀಡುತ್ತಿದೆ. ಅಮೆರಿಕಕ್ಕೆ ಸಂಬಂಧಿಸಿದ ಹಡಗುಗಳನ್ನು ಮಾತ್ರ ತಡೆಯಲಾಗುತ್ತಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಭಾರತ ಸೇರಿದಂತೆ ಹಲವು ದೇಶಗಳ ಹಡಗುಗಳನ್ನು ಪರಿಶೀಲನೆ ಬಳಿಕ ಬಿಡುಗಡೆ ಮಾಡಲಾಗಿದೆ.

ಗ್ಯಾಸ್ ಕೊರತೆ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ

ಇತ್ತ ದೇಶದಲ್ಲಿ ಗ್ಯಾಸ್ ಕೊರತೆ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಎಲ್‌ಪಿಜಿ ಉತ್ಪಾದನೆಯನ್ನು ಶೇಕಡಾ 40ರಷ್ಟು ಹೆಚ್ಚಿಸಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ. ಈಗಾಗಲೇ 15 ರಾಜ್ಯಗಳಲ್ಲಿ ಕಮರ್ಷಿಯಲ್ ಎಲ್‌ಪಿಜಿ ವಿತರಣೆ ಆರಂಭಗೊಂಡಿದ್ದು, ಸುಮಾರು 7,200 ಟನ್ ಅನಿಲವನ್ನು ಹೆಚ್ಚುವರಿಯಾಗಿ ಪೂರೈಸಲಾಗಿದೆ ಎಂದು ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಹೇಳಿದ್ದಾರೆ.

ಕರ್ನಾಟಕದಲ್ಲಿ ಗ್ಯಾಸ್ ಬಿಕ್ಕಟ್ಟು: ಪರಿಸ್ಥಿತಿ ಇನ್ನೂ ಗಂಭೀರ

ಆದರೆ ಕರ್ನಾಟಕದಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಕಳೆದ ಒಂದು ವಾರದಿಂದ ಕಮರ್ಷಿಯಲ್ ಗ್ಯಾಸ್ ಕೊರತೆಯಿಂದ ಅನೇಕ ಹೋಟೆಲ್‌ಗಳು ಬಾಗಿಲು ಮುಚ್ಚಿವೆ. ಬೆಂಗಳೂರಿನಲ್ಲಿಯೂ ಹಲವು ಪ್ರಸಿದ್ಧ ಹೋಟೆಲ್‌ಗಳು ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿವೆ. ಶೇಷಾದ್ರಿಪುರ, ವಿಜಯನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹೋಟೆಲ್‌ಗಳು ಬಂದ್ ಆಗಿರುವುದು ಗಮನಾರ್ಹ.

ರಾಜ್ಯ ವಿಧಾನಸಭೆಯಲ್ಲಿಯೂ ಈ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ‘ಒಂದು ವಾರ ತಾಳ್ಮೆಯಿಂದ ಇರಬೇಕು’ ಎಂದು ಮನವಿ ಮಾಡಿದ್ದಾರೆ. ಸಿಲಿಂಡರ್ ಪೂರೈಕೆ ಸೀಮಿತವಾಗಿರುವುದರಿಂದ ಹೋಟೆಲ್ ಮಾಲೀಕರು ಸಂಕಷ್ಟದಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇನ್ನೊಂದೆಡೆ, ಬೆಂಗಳೂರಿನ ಶಾಸಕರ ಭವನದಲ್ಲಿಯೂ ಗ್ಯಾಸ್ ಸಮಸ್ಯೆ ತಟ್ಟಿದ್ದು, ಶಾಸಕರಿಗೆ ಆಹಾರ ಸಿಗದ ಸ್ಥಿತಿ ನಿರ್ಮಾಣವಾಗಿದೆ ಎಂಬ ಅಳಲು ಕೇಳಿಬಂದಿದೆ. ಶಿವಾಜಿನಗರ ಬಸ್ ನಿಲ್ದಾಣದ ಬಳಿ ಸಿಲಿಂಡರ್‌ಗಾಗಿ ನೂಕುನುಗ್ಗಲು ಉಂಟಾದ ಘಟನೆ ಕೂಡ ವರದಿಯಾಗಿದೆ.

ಇದನ್ನೂ ಓದಿ: LPG ಸಿಲಿಂಡರ್ ಬಿಕ್ಕಟ್ಟು: ಕಾಳಸಂತೆಯಲ್ಲಿ ಏಜೆನ್ಸಿಗಳು, ದಂಧೆಕೋರರ ಕಳ್ಳಾಟ, 15 ಸಾವಿರ ಸಿಲಿಂಡರ್ ಜಪ್ತಿ

ಒಟ್ಟಿನಲ್ಲಿ, ಮಧ್ಯಪ್ರಾಚ್ಯದ ಯುದ್ಧದ ಪರಿಣಾಮ ಕೇವಲ ಜಾಗತಿಕ ಮಟ್ಟದಲ್ಲೇ ಅಲ್ಲದೆ, ಕರ್ನಾಟಕದ ಸಾಮಾನ್ಯ ಜನಜೀವನ ಮತ್ತು ಹೋಟೆಲ್ ಉದ್ಯಮದ ಮೇಲೂ ಗಂಭೀರ ಪರಿಣಾಮ ಬೀರುತ್ತಿರುವುದು ಸ್ಪಷ್ಟವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link