ದಾವಣಗೆರೆ, (ಮಾರ್ಚ್ 18): ರಾಜ್ಯ ರಾಜಕಾರಣದ ‘ಬೆಣ್ಣೆ ನಗರಿ’ ದಾವಣಗೆರೆಯಲ್ಲಿ ಉಪ ಚುನಾವಣಾ (Davanagere South By Election) ಕಾವು ಜೋರಾಗಿದೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ ನಿರಂತರವಾಗಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಜಿಲ್ಲೆಯ ಕಾಂಗ್ರೆಸ್ ಮುಸ್ಲಿಂ ಮುಖಂಡು ಬದಲಾವಣೆ ಬಯಸುತ್ತಿದ್ದಾರೆ. ಶಾಮನೂರು ಕುಟುಂಬದ ಹೊರತಾಗಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿ ಎಂಬುವುದು ಆಗ್ರಹವಾಗಿದೆ. ಒಂದು ವೇಳೆ ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಿದರೆ ಸೋಲಿಸುವುದಾಗಿ ಮುಸ್ಲಿಂ ಮುಖಂಡರು ಬಹಿರಂಗ ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಭಿನ್ನಮತ ಸವಾಲಾಗಿದೆ.
ನವದೆಹಲಿ, ಮಾರ್ಚ್ 18: ಒಬ್ಬ ವ್ಯಕ್ತಿಯ ಹಣಕಾಸು ಕಾರ್ಯಗಳಿಗೆ ಪ್ಯಾನ್ (PAN- Permanent Account Number) ಈಗ ಬಹಳ ಮುಖ್ಯವಾಗಿರುವ ದಾಖಲೆ ಎನಿಸಿದೆ. ಆದಾಯ ತೆರಿಗೆ ಇಲಾಖೆಯು ಈ ಪರ್ಮನೆಂಟ್ ಅಕೌಂಟ್ ನಂಬರ್ ಅನ್ನು ಒದಗಿಸುತ್ತದೆ. ವ್ಯಕ್ತಿಯ ಬಹುತೇಕ ಹಣಕಾಸು ಚಟುವಟಿಕೆಯನ್ನು ದಾಖಲಿಸಲು ಪ್ಯಾನ್ ಸಹಾಯವಾಗುತ್ತದೆ. ಹೀಗಾಗಿ, ಪ್ಯಾನ್ ನಿಯಮಗಳಲ್ಲಿ ಆಗುವ ಬದಲಾವಣೆ ಬಹಳ ಮಹತ್ವ ಎನಿಸುತ್ತದೆ. ಆದಾಯ ತೆರಿಗೆ ಇಲಾಖೆ ಏಪ್ರಿಲ್ 1ರಿಂದ ನಿಯಮ ಪರಿಷ್ಕರಣೆ ಮಾಡಿದೆ.
ಏಪ್ರಿಲ್ 1ರಿಂದ ಹೊಸ ಪ್ಯಾನ್ ಅಪ್ಲಿಕೇಶನ್ ನಿಯಮಗಳು ಜಾರಿಗೆ ಬರಲಿವೆ. ಈಗ ಜಾರಿಯಲ್ಲಿರುವ ನಿಯಮಗಳ ಪ್ರಕಾರ ನೀವು ಪ್ಯಾನ್ ಪಡೆಯಲು ಆಧಾರ್ ದಾಖಲೆ ನೀಡುವುದು ಮಾತ್ರ ಅಗತ್ಯವಾಗಿತ್ತು. ಬಹಳ ಸುಲಭವಾಗಿ ಅಪ್ಲಿಕೇಶನ್ ಸಲ್ಲಿಸಿ, ಪ್ಯಾನ್ ಪಡೆಯಬಹುದಿತ್ತು. ಮಾರ್ಚ್ 31ರ ನಂತರ ಇದರಲ್ಲಿ ಬದಲಾವಣೆ ಆಗಲಿದೆ.
ಹೊಸ ಪ್ಯಾನ್ ಕಾರ್ಡ್ಗೆ ಅರ್ಜಿ ಸಲ್ಲಿಸುವಾಗ ಆಧಾರ್ ದಾಖಲೆ ನೀಡಿದರೆ ಸಾಲದು. ಹೆಚ್ಚಿನ ದಾಖಲೆಗಳು ಬೇಕಾಗುತ್ತದೆ. ವ್ಯಕ್ತಿಯ ಜನ್ಮ ದಿನಾಂಕದ ಋಜುವಾತಿಗೆ ಆಧಾರ್ ಸಾಕಾಗುವುದಿಲ್ಲ. ಹೆಚ್ಚುವರಿ ದಾಖಲೆ ಬೇಕಾಗುತ್ತದೆ.
ಜನನ ಪ್ರಮಾಣಪತ್ರ ಅಥವಾ ಬರ್ತ್ ಸರ್ಟಿಫಿಕೇಟ್, ವೋಟರ್ ಐಡಿ, ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಮತ್ತು ಎಸ್ಸೆಸ್ಸೆಲ್ಸಿ ಪ್ರಮಾಣಪತ್ರವನ್ನು ಕೇಳಲಾಗಬಹುದು. ಅಗತ್ಯಬಿದ್ದರೆ ಅಫಿಡವಿಟ್ ಹಾಗೂ ಇತರ ಸರ್ಕಾರಿ ದಾಖಲೆಗಳನ್ನೂ ಕೇಳಬಹುದು.
ಪ್ಯಾನ್ ಮತ್ತು ಆಧಾರ್ನಲ್ಲಿ ವ್ಯಕ್ತಿಯ ಹೆಸರು ನಿಖರವಾಗಿ ಹೊಂದಿಕೆಯಾಗಬೇಕು
ಏಪ್ರಿಲ್ 1ರಿಂದ ಜಾರಿಯಾಗಲಿರುವ ಮತ್ತೊಂದು ಗಮನಾರ್ಹ ಪ್ಯಾನ್ ನಿಯಮವೆಂದರೆ ಹೆಸರಿನದ್ದು. ಆಧಾರ್ನಲ್ಲಿರುವ ವ್ಯಕ್ತಿಯ ಹೆಸರು ಮತ್ತು ಅವರ ಪ್ಯಾನ್ನಲ್ಲಿರುವ ಹೆಸರು ನಿಖರವಾಗಿ ಹೊಂದಿಕೆಯಾಗಬೇಕು. ಎಲ್ಲಾ ಇನಿಷಿಯಲ್ಗಳೂ ಒಂದೇ ಇರಬೇಕು. ಉದಾಹರಣೆಗೆ, ಆಧಾರ್ ಕಾರ್ಡ್ನಲ್ಲಿ ವ್ಯಕ್ತಿ ಹೆಸರು Subrahmanya K N ಎಂದಿದ್ದರೆ, ಪ್ಯಾನ್ನಲ್ಲಿ Subramanya K N ಎಂದಿದ್ದರೆ ಆಗ ಅದು ಹೊಂದಿಕೆ ಆಗುವುದಿಲ್ಲ. ಪ್ಯಾನ್ ಅರ್ಜಿ ರಿಜೆಕ್ಟ್ ಆಗಬಹುದು. ಆಧಾರ್ನಲ್ಲಿರುವಂತೆ ಹೆಸರನ್ನು ಹಾಗೆಯೇ ಬರೆಯಬೇಕು.
ಇಸ್ಲಮಾಬಾದ್, ಮಾರ್ಚ್ 18: ವಿಶ್ವಾದ್ಯಂತ ಉಂಟಾಗಿರುವ ಇಂಧನ ಮತ್ತು ಅನಿಲ ಬಿಕ್ಕಟ್ಟಿನಿಂದಾಗಿ ನೆರೆಯ ದೇಶ ಪಾಕಿಸ್ತಾನವೂ ಕಂಗೆಟ್ಟಿದೆ. ಇದೇ ಕಾರಣದಿಂದ ಈ ವರ್ಷ ಪಾಕಿಸ್ತಾನದಲ್ಲಿ ‘ಪಾಕಿಸ್ತಾನ ದಿನಾಚರಣೆ'(ಪಾಕಿಸ್ತಾನದ ರಿಪಬ್ಲಿಕ್ ಡೇ) ಆಚರಿಸದಿರಲು ನಿರ್ಧರಿಸಲಾಗಿದೆ. ಮಾರ್ಚ್ 23ರಂದು ಪಾಕಿಸ್ತಾನದ (Pakistan) ಗಣರಾಜ್ಯೋತ್ಸವ ಆಚರಿಸಬೇಕಾಗಿತ್ತು. ಆದರೆ, ಹಣ ಹಾಗೂ ಇಂಧನದ ಬಿಕ್ಕಟ್ಟಿನಿಂದ ಈ ಸಂಭ್ರಮಾಚರಣೆಯನ್ನು ರದ್ದುಗೊಳಿಸಲಾಗಿದೆ.
“ಸಹೋದರರೇ, ಆಹಾರ ಮತ್ತು ಪಾನೀಯಗಳನ್ನು ಸೇವಿಸಿ ಸಂಭ್ರಮಾಚರಿಸಬೇಡಿ. ಕೇಕ್ ಕತ್ತರಿಸಿ ಮನೆಗೆ ಹೋಗಿ!” ಎಂದು ಸರ್ಕಾರದಿಂದ ಪಾಕಿಸ್ತಾನದ ಜನರಿಗೆ ಸೂಚನೆ ನೀಡಲಾಗಿದೆ.
ಇರಾನ್ ಜೊತೆ ನಡೆಯುತ್ತಿರುವ ಅಮೆರಿಕ-ಇಸ್ರೇಲ್ ಯುದ್ಧವು ಪಾಕಿಸ್ತಾನವನ್ನು ಎಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ ಎಂದರೆ ಪಾಕಿಸ್ತಾನ ದಿನಾಚರಣೆಯ ಮೆರವಣಿಗೆಯನ್ನು ಕೂಡ ರದ್ದುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ದಿಟ್ಟ ಘೋಷಣೆ ಮಾಡಿದೆ. ಈ ವರ್ಷ ಯಾವುದೇ ಮಿಲಿಟರಿ ಮೆರವಣಿಗೆ ಇರುವುದಿಲ್ಲ, ಯಾವುದೇ ಅಲಂಕಾರಿಕ ಸಮಾರಂಭಗಳಿರುವುದಿಲ್ಲ ಮತ್ತು ಟ್ಯಾಂಕ್-ಕ್ಷಿಪಣಿ ಪ್ರದರ್ಶನಗಳಿರುವುದಿಲ್ಲ. ಗಲ್ಫ್ ರಾಷ್ಟ್ರಗಳ ತೈಲ ಬಿಕ್ಕಟ್ಟಿನಿಂದಾಗಿ ಪಾಕಿಸ್ತಾನ ದಿವಾಳಿಯಾಗಿದೆ.
ಪಾಕಿಸ್ತಾನ ಈಗಾಗಲೇ IMFನಿಂದ ಸಾಲ ಪಡೆದಿದೆ. ಆ ಸಾಲದ ಭಾರದ ಜೊತೆಗೆ ಇದೀಗ ತೈಲ ಬಿಕ್ಕಟ್ಟು ಕೂಡ ಉಂಟಾಗಿದೆ. ಹೀಗಾಗಿ, ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಜೆಟ್ಗಳನ್ನು ಹಾರಿಸಲು ಹಣ ಮತ್ತು ಇಂಧನವೆರಡೂ ಇಲ್ಲದೆ ಪಾಕ್ ಈ ನಿರ್ಧಾರ ಮಾಡಿದೆ. ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರ ಕಚೇರಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಪಾಕಿಸ್ತಾನ ದಿನದಂದು ಮೆರವಣಿಗೆ ಇರುವುದಿಲ್ಲ ಎಂದು ಘೋಷಿಸಿದೆ.
ಮಾರ್ಚ್ 23ರಂದು ಪ್ರಧಾನಿಯವರು ಸರಳ ಧ್ವಜಾರೋಹಣ ಸಮಾರಂಭವನ್ನು ಘೋಷಿಸಿದ್ದಾರೆ. ಸಚಿವಾಲಯಗಳು ಮತ್ತು ಇಲಾಖೆಗಳು ಸರಳ ಧ್ವಜಾರೋಹಣ ಮಾಡುವಂತೆ ಸೂಚಿಸಲಾಗಿದೆ. ಆ ದಿನ ಪ್ರಧಾನಿ ಕಚೇರಿಯಲ್ಲಿ ಧ್ವಜಾರೋಹಣ ಮಾಡಲಾಗುತ್ತದೆ. ಯಾವುದೇ ಭಾಷಣ, ಮೆರವಣಿಗೆ, ಸಮಾರಂಭಗಳು ಇರುವುದಿಲ್ಲ. ಪಾಕಿಸ್ತಾನದಲ್ಲಿ ಈಗಾಗಲೇ ಸರ್ಕಾರಿ ವಾಹನಗಳಿಗೆ ಶೇ. 50ರಷ್ಟು ಕಡಿಮೆ ಇಂಧನ, ವಾರಕ್ಕೆ 4 ದಿನಗಳ ಕಚೇರಿ ಸಮಯ, ಅರ್ಧದಷ್ಟು ಸಿಬ್ಬಂದಿ ಮನೆಯಿಂದ ಕೆಲಸ ಮಾಡುವುದು ಮತ್ತು SOE ಉದ್ಯೋಗಿಗಳಿಗೆ ಶೇ. 5ರಿಂದ ಶೇ. 30ರವರೆಗೆ ವೇತನ ಕಡಿತದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಮಾರ್ಚ್ 18: ನಿವೃತ್ತಿ ಹೊಂದುತ್ತಿರುವ ಸದಸ್ಯರಿಗೆ ರಾಜ್ಯಸಭೆಯಲ್ಲಿ ಆಯೋಜಿಸಿದ ಬೀಳ್ಕೊಡುಗೆ ಸಮಾರಂಭದ ವೇಳೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಉದ್ದೇಶಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಡಿದ್ದ ಹಾಸ್ಯಮಯ ಮಾತಿಗೆ ಅದೇ ಶೈಲಿಯಲ್ಲಿ ದೊಡ್ಡಗೌಡರೀಗ ಉತ್ತರ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಜೊತೆಗಿನ ದೇವೇಗೌಡರ ಸಂಬಂಧದ ಬಗ್ಗೆ ತಿಳಿಸಿ ಹಾಸ್ಯ ಮತ್ತು ವ್ಯಂಗ್ಯಭರಿತವಾಗಿ ಮಾತನಾಡಿದ್ದ ಖರ್ಗೆ, ನಾನು ಅವರನ್ನು 54 ವರ್ಷಗಳಿಂದ ಬಲ್ಲೆ ಮತ್ತು ಅವರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಆ ನಂತರ ಏನಾಯಿತು ಎಂಬುದು ನನಗೆ ತಿಳಿದಿಲ್ಲ. ಅವರು ನಮ್ಮನ್ನು ಪ್ರೀತಿಸಿದರು, ಆದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ವಿವಾಹವಾದರು ಎಂದಿದ್ದರು. ಇದಕ್ಕೆ ಈಗ ದೇವೇಗೌಡರು ಉತ್ತರಿಸಿದ್ದು, ನಾನು ಕಾಂಗ್ರೆಸ್ ಜೊತೆ ಬಲವಂತದ ಮದುವೆಯಲ್ಲಿದ್ದೆ. ಹೀಗಾಗಿ ವಿಚ್ಛೇದನ ಮಾಡಬೇಕಾಯಿತು ಎಂದಿದ್ದಾರೆ.
ದೇವೇಗೌಡರು ಹೇಳಿದ್ದೇನು?
My dear friend Shri. @kharge made a humorous comment in parliament today on my “love” for @INCIndia and “marriage” with @BJP4India. I was not there in the House when he spoke. Here’s my response both lighthearted and factual on why I was forced to “divorce” the Congress @PMOIndiapic.twitter.com/qPK95FUxip
ನಾನು ಕಾಂಗ್ರೆಸ್ ಜೊತೆ ಪ್ರೇಮದಲ್ಲಿದ್ದೆ. ಆದರೆ ಕೊನೆಯಲ್ಲಿ ಮೋದಿ (ಬಿಜೆಪಿ) ಅವರನ್ನು ಮದುವೆಯಾದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಸಂಸತ್ತಿನಲ್ಲಿ ಹಾಸ್ಯಮಿಶ್ರಿತವಾಗಿ ಹೇಳಿದ್ದಾರೆ. ನಾನು ಏಕೆ ಹಾಗೆ ಮಾಡಿದೆ ಎಂಬುದು ಅವರಿಗೆ ಗೊತ್ತಿಲ್ಲ ಎಂದೂ ತಿಳಿಸಿದ್ದಾರೆ. ನಾಳೆಯ ಯುಗಾದಿ ಆಚರಣೆಗಾಗಿ ಬೆಂಗಳೂರಿಗೆ ಬರಬೇಕಾಗಿದ್ದರಿಂದ ಅವರು ಮಾತನಾಡಿದಾಗ ನಾನು ಸದನದಲ್ಲಿರಲಿಲ್ಲ. ನನ್ನ ಸ್ನೇಹಿತನ ಮಾತಿಗೆ ಅದೇ ಮದುವೆ ಭಾಷೆಯಲ್ಲಿ ಉತ್ತರಿಸಬೇಕೆಂದರೆ, ನಾನು ಕಾಂಗ್ರೆಸ್ ಜೊತೆ ಬಲವಂತದ ಮದುವೆಯಲ್ಲಿದ್ದೆ. ಆದರೆ ಅದು ಹಿಂಸಾತ್ಮಕ ಸಂಬಂಧವಾಗಿದ್ದರಿಂದ ನಾನು ಅವರನ್ನು ವಿಚ್ಛೇದನ ಮಾಡಬೇಕಾಯಿತು ಎಂದು ಹೇಳಲು ಇಷ್ಟಪಡುತ್ತೇನೆ ಎಂದಿದ್ದಾರೆ.
2018ರಲ್ಲಿ ಕಾಂಗ್ರೆಸ್ ಗುಲಾಂ ನಬಿ ಆಜಾದ್ ಅವರನ್ನು ಕಳುಹಿಸಿ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಮುಂದಾಗಿದ್ದಿದ್ದು ಖರ್ಗೆ ಅವರಿಗೆ ನೆನಪಿರಬಹುದು. ನಾನು ಇದಕ್ಕೆ ಒಪ್ಪಿರಲಿಲ್ಲ. ಎಲ್ಲರ ಸಮ್ಮುಖದಲ್ಲೇ ಖರ್ಗೆ ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕು ಎಂದು ನಾನು ಹೇಳಿದ್ದೆ. ಸಿದ್ದರಾಮಯ್ಯ ಕೂಡ ಅಲ್ಲಿ ಇದ್ದರು. ಆದರೂ ಆಜಾದ್ ಅವರು ಕುಮಾರಸ್ವಾಮಿ ಅವರ ನೇತೃತ್ವವನ್ನೇ ಒತ್ತಾಯಿಸಿದರು. ಆದರೆ ಈ ಎಲ್ಲಾ ಹಾಡು-ನೃತ್ಯ ಮತ್ತು ಮದುವೆ ಬಳಿಕ 2019ರಲ್ಲಿ ಏನಾಯಿತು? ಅವರು ನಮ್ಮನ್ನು ಬಿಟ್ಟುಬಿಟ್ಟರು. ಕಾಂಗ್ರೆಸ್ನ ಎಷ್ಟು ಶಾಸಕರು ಬಿಜೆಪಿ ಕಡೆಗೆ ಹೋದರು? ಅವರನ್ನು ಯಾರು ಕಳುಹಿಸಿದರು ಎಂಬುದು ಈಗ ಎಲ್ಲರಿಗೂ ತಿಳಿದ ವಿಷಯ. ಆ ದಿನ ಪಕ್ಷತ್ಯಾಗಕ್ಕೆ ಪ್ರೇರೇಪಿಸಿದವರ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಂಡಿದ್ದರೆ, ಇಂದು ನನ್ನ ಸ್ನೇಹಿತ ಖರ್ಗೆ ಅವರು ಇನ್ನಷ್ಟು ಉತ್ತಮ ಸ್ಥಾನದಲ್ಲಿರುತ್ತಿದ್ದರು. ಹೀಗಾಗಿ ದಾಖಲೆಯನ್ನು ಸರಿಪಡಿಸಲು ಹೇಳುವುದಾದರೆ, ನಾನು ಕಾಂಗ್ರೆಸ್ ಮೈತ್ರಿಯನ್ನು ಬಿಟ್ಟದ್ದಲ್ಲ. ಅವರೇ ದೂರ ನಡೆದರು. ನನಗೆ ವಿಚ್ಛೇದನ ಮಾಡಿ, ಹೆಚ್ಚು ಸ್ಥಿರವಾದ ಮೈತ್ರಿ ಹುಡುಕುವುದನ್ನು ಹೊರತುಪಡಿಸಿ ಬೇರೆ ಆಯ್ಕೆ ಇರಲಿಲ್ಲ ಎಂದು ದೇವೇಗೌಡರು ತಿಳಿಸಿದ್ದಾರೆ.
ಬೆಂಗಳೂರು, ಮಾರ್ಚ್ 18: ಕರ್ನಾಟಕದಲ್ಲಿ ಬೇಸಿಗೆ ಮಳೆ (Rain)ಆರ್ಭಟ ಶುರುವಾಗಿದೆ. ಕಳೆದ ಕೆಲ ದಿನಗಳಿಂದ ರಾಜ್ಯದ ಹಲವೆಡೆ ಆಲಿಕಲ್ಲು ಸಹಿತ ಭಾರಿ ಮಳೆ ಆಗುತ್ತಿದ್ದು, ಇಂದು ಕೂಡ ಮಳೆ ಸುರಿದಿದೆ. ಇತ್ತ ಬೆಂಗಳೂರಿನಲ್ಲಿ ಇಂದು ಮೋಡ ಕವಿದ ವಾತಾವರಣವಿದ್ದು, ಸಂಜೆ ಆಗುತ್ತಿದ್ದಂತೆ ನಗರದ ಹಲವೆಡೆ ಆಲಿಕಲ್ಲು ಸಹಿತ ಮಳೆ ಆಗಿದೆ. ಆ ಮೂಲಕ ಸಿಲಿಕಾನ್ ಸಿಟಿ ಕೂಲ್ ಕೂಲ್ ಆಗಿದೆ. ಆಲಿಕಲ್ಲಿನ ಮಳೆ ಕಂಡು ಸಿಟಿ ಮಂದಿ ಫುಲ್ ಖುಷ್.
ಏಲೆಲ್ಲಿ ಮಳೆ
ರಣ ರಣ ಬಿಸಿಲಿನ ನಡುವೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ಆಲಿಕಲ್ಲು ಸಹಿತ ಭಾರಿ ಮಳೆ ಆಗಿದೆ. ಮೆಜೆಸ್ಟಿಕ್, ಶಾಂತಿನಗರ, ಕಾಡುಗೋಡಿ, ಮಾರ್ಕೆಟ್, ಜಯನಗರ, ಬಸವೇಶ್ವರ ನಗರ, ಶಾಂತಿನಗರ, ವಿಲ್ಸನ್ಗಾರ್ಡನ್, ರಿಚ್ಮಂಡ್ಟೌನ್ ಸುತ್ತಮುತ್ತ ಮಳೆ ಆಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಇಂದು ಮತ್ತೆ ಮಳೆ ಆಗಿದೆ. ದಾವಣಗೆರೆ ತಾಲೂಕಿನ ಗುಮ್ಮನೂರ, ಗುಡಾಳ್, ಹೆಬ್ಬಾಳ್, ಆನಗೋಡ್ ಸೇರಿದಂತೆ ಬಹುತೇಕ ಕಡೆ ಮಳೆ ಆಗಿದೆ. ಗ್ರಾಮದ ರಸ್ತೆ ತುಂಬೆಲ್ಲಾ ರಾಶಿ ರಾಶಿ ಅಲಿಕಲ್ಲು ಬಿದ್ದಿದ್ದು, ರಸ್ತೆ ಜಮ್ಮು ಕಾಶ್ಮೀರದಂತಾಗಿದೆ.
ಚಾಮರಾಜನಗರದಲ್ಲಿ ಭಾರೀ ಬಿರುಗಾಳಿ ಸಮೇತ ವರುಣನ ರುದ್ರನರ್ತನ
ಚಾಮರಾಜನಗರ ಪಟ್ಟಣ ಹಾಗೂ ಚಾಮರಾಜನಗರ ತಾಲೂಕಿನಾದ್ಯಂತ ಭಾರೀ ಬಿರುಗಾಳಿ ಸಮೇತ ವರುಣ ಆರ್ಭಟಿಸಿದ್ದಾನೆ. ಮಳೆಯ ಆರ್ಭಟಕ್ಕೆ ರಸ್ತೆ ಕಾಣದೆ ವಾಹನ ಸವಾರರು ಪರದಾಡಿದ್ದಾರೆ. ಬಿರುಗಾಳಿಯ ರಭಸಕ್ಕೆ ತೆಂಗಿನ ಗರಿಗಳು ದರಶಾಹಿ ಆಗಿದೆ. ನಿನ್ನೆ ಆಲಿಕಲ್ಲು ಸಮೇತ ಮಳೆ ಸುರಿದು ರೈತರಿಗೆ ಸಂಕಷ್ಟ ತಂದೊಡ್ಡಿತ್ತು. ಇಂದು ಮತ್ತೆ ರಣ ಚಂಡಿ ಮಳೆ ಸುರಿದಿದೆ. ಈ ಅಕಾಲಿಕ ಮಳೆಗೆ ಚಾಮರಾಜನಗರ ಜನತೆ ಮತ್ತು ರೈತರು ತಬ್ಬಿಬ್ಬಾಗಿದ್ದಾರೆ.
ಇನ್ನು ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನಾದ್ಯಂತ ಮಳೆ ಸುರಿದಿದೆ. ಕೊಂಬಾರು ಗ್ರಾಮದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಆ ಮೂಲಕ ಬಿಸಿಲ ಧಗೆಗೆ ಮಳೆರಾಯ ತಂಪೆರೆದಿದ್ದಾನೆ. ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಸುಮಾರು ಒಂದು ಗಂಟೆ ನಿರಂತರ ಮಳೆ ಆಗಿದೆ. ವರ್ಷದ ಮೊದಲ ಮಳೆಗೆ ಮೈಸೂರಿಗರ ಸಂತಸಗೊಂಡಿದ್ದಾರೆ. ಬಿಸಿಲಿನ ಬೇಗೆಯಿಂದ ಬಸವಳಿದಿದ್ದವರಿಗೆ ವರುಣ ಸಿಂಚನವಾಗಿದೆ.
‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ತೆರೆಕಾಣುತ್ತಿದೆ. ಅದಕ್ಕೂ ಮೊದಲು ಅಂದರೆ ಇಂದು (ಮಾರ್ಚ್ 18) ಸಿನಿಮಾ ಪ್ರೀಮಿಯರ್ ಆಗಿದೆ. ಪ್ರೀಮಿಯರ್ ಶೋಗಳ ಟಿಕೆಟ್ಗಳು ಭಾರೀ ಸಂಖ್ಯೆಯಲ್ಲಿ ಮಾರಾಟ ಆಗಿದೆ. ಈ ಚಿತ್ರ ‘ಧುರಂಧರ್’ ಚಿತ್ರದ ಮುಂದುವರಿದ ಭಾಗ. ಈ ಸಿನಿಮಾ ಸೇಡಿನ ಕಥೆಯನ್ನು ಹೊಂದಿದೆ. ಹಾಗಾದರೆ, ಸಿನಿಮಾದ ಮೊದಲಾರ್ಧದಲ್ಲಿ ಏನೆಲ್ಲ ಇದೆ? ಯಾವ ಭಾಗ ಹೈಲೈಟ್ ಆಗಿದೆ? ಯಾವ ವಿಷಯವನ್ನು ಆದಿತ್ಯ ಧಾರ್ ಹೈಲೈಟ್ ಮಾಡಿದ್ದಾರೆ? ಆ ಬಗ್ಗೆ ಇಲ್ಲಿದೆ ವಿವರ.
ಸಿನಿಮಾದ ಮೊದಲಾರ್ಧದ ವಿಶೇಷತೆಗಳೇನು?
* ‘ಧುರಂಧರ್’ ಸಿನಿಮಾ ರೆಹಮಾನ್ ಡಕಾಯಿತ್ ಸಾವಿನೊಂದಿಗೆ ಕೊನೆ ಆಗಿತ್ತು. ಅಲ್ಲಿಂದಲೇ ‘ಧುರಂಧರ್ 2’ ಸಿನಿಮಾ ಆರಂಭ ಆಗುತ್ತದೆ.
* ‘ಧುರಂಧರ್ 2’ ಸಿನಿಮಾ ಸೇಡಿನ ಕಥೆ ಎಂದು ಮೊದಲೇ ಹೇಳಲಾಗಿದೆ. ಅದೇ ರೀತಿ ಹಮ್ಜಾ ಅಲಿ ಮಜಾರಿ ಸೇಡು ತೀರಿಸಿಕೊಳ್ಳುತ್ತಾನೆ.
* ರೆಹಮಾನ್ ಸಾವಿನ ಬಳಿಕ ಆ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಬರುತ್ತದೆ. ಈ ಪ್ರಶ್ನೆಗೆ ಉತ್ತರವಾಗಿ ಹಮ್ಜಾ ನಿಲ್ಲುತ್ತಾನೆ.
* ‘ಧುರಂಧರ್ 2’ ಸಿನಿಮಾದಲ್ಲಿ ಹಮ್ಜಾ ಅಲಿ ಜಸ್ಕಿರತ್ ಸಿಂಗ್ ರಂಗಿ ಪಾತ್ರದ ಹಿನ್ನೆಲೆಯೂ ಬಂದು ಹೋಗುತ್ತದೆ.
* ಸಿನಿಮಾದಲ್ಲಿ ಬಿಜಿಎಂ ಹೈಲೈಟ್ ಆಗಿದೆ. ಸಿನಿಮಾದ ತೂಕವನ್ನು ಇದು ಹೆಚ್ಚಿಸುತ್ತದೆ.
* ಸಿನಿಮಾ ಉದ್ದಕ್ಕೂ ಭರ್ಜರಿ ಆ್ಯಕ್ಷನ್ ಹಾಗೂ ರಕ್ತ-ಸಿಕ್ತ ದೃಶ್ಯಗಳು ತುಂಬಿವೆ. ಇವನ್ನು ನೋಡೋಕೆ ಗಟ್ಟಿ ಗುಂಡಿಗೆ ಬೇಕು.
* ‘ಧುರಂಧರ್’ ಸಿನಿಮಾ ರೆಹಮಾನ್ ಡಕಾಯಿತ್ ಸಾವಿನೊಂದಿಗೆ ಕೊನೆ ಆಗಿತ್ತು. ಅಲ್ಲಿಂದಲೇ ‘ಧುರಂಧರ್ 2’ ಆರಂಭ ಆಗಲ್ಲ.
* ಜಸ್ಕಿರತ್ ಸಿಂಗ್, ಹಮ್ಜಾ ಆದ ಕಥೆಯಿಂದ ಸಿನಿಮಾ ಆರಂಭ ಆಗುತ್ತದೆ. ಆತನ ನೋವಿನ ಕಥೆ ಕರುಳು ಹಿಂಡುತ್ತದೆ.
* ‘ಧುರಂಧರ್ 2’ ಸಿನಿಮಾ ಸೇಡಿನ ಕಥೆ ಎಂದು ಮೊದಲೇ ಹೇಳಲಾಗಿದೆ. ಅದೇ ರೀತಿ ಹಮ್ಜಾ ಅಲಿ ಮಜಾರಿ ಸೇಡು ತೀರಿಸಿಕೊಳ್ಳುತ್ತಾನೆ.
* ರೆಹಮಾನ್ ಸಾವಿನ ಬಳಿಕ ಆ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಬರುತ್ತದೆ. ಈ ಪ್ರಶ್ನೆಗೆ ಉತ್ತರವಾಗಿ ಹಮ್ಜಾ ನಿಲ್ಲುತ್ತಾನೆ.
* ಸಿನಿಮಾದಲ್ಲಿ ಬಿಜಿಎಂ ಹೈಲೈಟ್ ಆಗಿದೆ. ಸಿನಿಮಾದ ತೂಕವನ್ನು ಇದು ಹೆಚ್ಚಿಸುತ್ತದೆ.
* ಸಿನಿಮಾ ಉದ್ದಕ್ಕೂ ಭರ್ಜರಿ ಆ್ಯಕ್ಷನ್ ಹಾಗೂ ರಕ್ತ-ಸಿಕ್ತ ದೃಶ್ಯಗಳು ತುಂಬಿವೆ. ಇವನ್ನು ನೋಡೋಕೆ ಗಟ್ಟಿ ಗುಂಡಿಗೆ ಬೇಕು.
* ಬಡಾ ಸಾಬ್ ಕೂಡ ಬರುತ್ತಾನೆ. ಆತ ಯಾರು ಅನ್ನೋದು ಸಸ್ಪೆನ್ಸ್. ಸಿನಿಮಾ ಅಲ್ಲೇ ನೋಡಬೇಕು.
* ಸಿನಿಮಾದ ಇಂಟರ್ವಲ್ ಅಲ್ಲಿ ಒಂದು ದೊಡ್ಡ ಟ್ವಿಸ್ಟ್ ಕೂಡ ಇದೆ. ಅದೇನು ಎಂದು ಸಿನಿಮಾದಲ್ಲೇ ನೋಡಬೇಕು.
ನವದೆಹಲಿ, ಮಾರ್ಚ್ 18: ಬಿಜೆಪಿ ಸಂಸದೆ ಕಂಗನಾ ರಣಾವತ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ‘ಟಪೋರಿ’ ಎಂದು ಕರೆದಿದ್ದಾರೆ. ರಾಹುಲ್ ಗಾಂಧಿ (Rahul Gandhi) ಯಾವಾಗಲೂ ಮಹಿಳೆಯರಿಗೆ ಮುಜುಗರವಾಗುವಂತೆ ವರ್ತಿಸುತ್ತಾರೆ. ಅವರು ಎದುರು ಬಂದರೆ ಸಾಕು ಮಹಿಳಾ ಸಂಸದರಿಗೆ ಅನ್ಕಂಫರ್ಟಬಲ್ ಆಗುತ್ತದೆ. ಅವರು ಟಪೋರಿ ರೀತಿ ವರ್ತಿಸುತ್ತಾರೆ. ಯಾರಾದರೂ ಇಂಟರ್ವ್ಯೂ ನೀಡುತ್ತಿದ್ದರೆ ಜೋರಾಗಿ ಕಿರುಚುತ್ತಾ ಡಿಸ್ಟರ್ಬ್ ಮಾಡುತ್ತಾರೆ ಎಂದು ಕಂಗನಾ ರಣಾವತ್ ಸಂಸತ್ತಿನ ಸಂಕೀರ್ಣದಲ್ಲಿ ಹೇಳಿದ್ದಾರೆ.
ರಾಹುಲ್ ಗಾಂಧಿಯವರು ತಮ್ಮ ಸಹೋದರಿಯಾದ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಡವಳಿಕೆಯನ್ನು ನೋಡಿ ಕಲಿಯುವುದು ಒಳ್ಳೆಯದು. ರಾಹುಲ್ ಗಾಂಧಿಯ ವರ್ತನೆ ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ಆಟಗಾರರಾದ ಜಸ್ಪ್ರೀತ್ ಬುಮ್ರಾ (Jasprit Bumrah) ಮತ್ತು ಅಕ್ಷರ್ ಪಟೇಲ್ಗೆ ( Axar Patel) ಬಿಸಿಸಿಐನಿಂದ (BCCI) ಯುಗಾದಿ ಗಿಫ್ಟ್ ಸಿಗಲಿದೆ ಎಂದು ವರದಿಯಾಗಿದೆ. ವಾಸ್ತವವಾಗಿ ಈ ಇಬ್ಬರು ಆಟಗಾರರು ಐಸಿಸಿಯ ಪ್ರತಿಯೊಂದು ಈವೆಂಟ್ಗಳಲ್ಲೂ ಟೀಂ ಇಂಡಿಯಾ ಪರ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ತಂಡವನ್ನು ಚಾಂಪಿಯನ್ ಮಾಡುವಲ್ಲಿಯೂ ಶ್ರಮಿಸಿದ್ದಾರೆ. ಹೀಗಾಗಿ ಇವರಿಬ್ಬರ ವಾರ್ಷಿಕ ವೇತನವನ್ನು ಹೆಚ್ಚಿಸಲು ಬಿಸಿಸಿಐ ಯೋಚಿಸಿದೆ ಎಂದು ಹೇಳಲಾಗುತ್ತಿದೆ. ಕೆಲವೇ ದಿನಗಳ ಹಿಂದೆ ಬಿಸಿಸಿಐ ಹೊಸ ಕೇಂದ್ರ ಒಪ್ಪಂದವನ್ನು ಪ್ರಕಟಿಸಿತ್ತು. ಆ ಪಟ್ಟಿಯಲ್ಲಿ ಎ+ ಗ್ರೇಡ್ ಅನ್ನು ತೆಗೆದುಹಾಕಿ ಉಳಿದ ಮೂರು ಗ್ರೇಡ್ಗಳನ್ನು ಮುಂದುವರೆಸಿತ್ತು. ಎ+ ಗ್ರೇಡ್ ತೆಗೆದ ಕಾರಣ ಕೆಲವು ಆಟಗಾರರ ವಾರ್ಷಿಕ ವೇತನವೂ ಕಡಿಮೆ ಆಯಿತು.
ಪ್ರಸ್ತುತ ಬಿಸಿಸಿಐನ ಕೇಂದ್ರ ಒಪ್ಪಂದ ಪ್ರಕಾರ, ಎ ಗ್ರೇಡ್ ಆಟಗಾರರಿಗೆ 5 ಕೋಟಿ ರೂ. ಬಿ ಗ್ರೇಡ್ ಆಟಗಾರರಿಗೆ 3 ಕೋಟಿ ರೂ. ಹಾಗೂ ಸಿ ಗ್ರೇಡ್ ಆಟಗಾರರಿಗೆ 1 ಕೋಟಿ ರೂ. ವೇತನ ಸಿಗಲಿದೆ. ಅದರಂತೆ ಈ ಹಿಂದೆ ಎ+ ಗ್ರೇಡ್ನಲ್ಲಿ ಸ್ಥಾನ ಪಡೆದಿದ್ದ ಜಸ್ಪ್ರೀತ್ ಬುಮ್ರಾ ವರ್ಷಕ್ಕೆ 7 ಕೋಟಿ ರೂ. ವೇತನ ಪಡೆಯುತ್ತಿದ್ದರು. ಆದರೆ ಎ+ ಗ್ರೇಡ್ ಅನ್ನು ರದ್ದುಗೊಳಿಸಿದ ಬಳಿಕ ಎ ಗ್ರೇಡ್ನಲ್ಲಿ ಸ್ಥಾನ ಪಡೆದಿರುವ ಬುಮ್ರಾಗೆ 5 ಕೋಟಿ ರೂ. ವೇತನ ಸಿಗುತ್ತಿದೆ. ಅಂದರೆ ಬುಮ್ರಾ ವರ್ಷಕ್ಕೆ 2 ಕೋಟಿ ರೂ. ವೇತನ ಕಡಿಮೆ ಪಡೆಯಲಿದ್ದಾರೆ.
ಅಕ್ಷರ್, ಬುಮ್ರಾ ವೇತನ ಹೆಚ್ಚಳ
ಹೀಗಾಗಿ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಬುಮ್ರಾಗೆ ವಾರ್ಷಿಕವಾಗಿ ನೀಡುತ್ತಿರುವ ವೇತನವನ್ನು ಹೆಚ್ಚಿಸುವ ಬಗ್ಗೆ ಬಿಸಿಸಿಐ ಪರಿಶೀಲಿಸುತ್ತಿದೆ . ಬುಮ್ರಾ ಜೊತೆಗೆ ಟಿ20 ತಂಡದ ಉಪನಾಯಕ ಅಕ್ಷರ್ ಪಟೇಲ್ಗೂ ವೇತನ ಹೆಚ್ಚಿಸುವ ಸಾಧ್ಯತೆಗಳಿವೆ. ಪ್ರಸ್ತುತ ಅಕ್ಷರ್ ಪಟೇಲ್ ಗ್ರೇಡ್ ಸಿ ವಿಭಾಗದಲ್ಲಿದ್ದು, ಕೇವಲ 1 ಕೋಟಿ ರೂಪಾಯಿ ವೇತನ ಪಡೆಯುತ್ತಾರೆ. ಎರಡು ಟಿ20 ವಿಶ್ವಕಪ್ಗಳು ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡದ ಗೆಲುವಿನಲ್ಲಿ ಪಟೇಲ್ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಅವರ ಸಂಬಳ ಕಡಿಮೆಯಾಗಿರುವ ಬಗ್ಗೆ ಅನೇಕ ಕ್ರಿಕೆಟ್ ತಜ್ಞರು ಕಳವಳ ವ್ಯಕ್ತಪಡಿಸಿದ್ದರು, ಆದರೆ ಈಗ ಬಿಸಿಸಿಐ ಅವರ ಸಂಬಳವನ್ನು ಹೆಚ್ಚಿಸಬಹುದು.
ಧ್ರುವ ಸರ್ಜಾ (Dhrva Sarja) ನಟನೆಯ ‘ಕೆಡಿ’ ಸಿನಿಮಾದ ‘ಸರ್ಸೆ ಸೆರಗ’ ಹಾಡು ವಿವಾದಕ್ಕೆ ಕಾರಣವಾಗಿದೆ. ಅದರಲ್ಲೂ ಹಾಡಿನ ಹಿಂದಿ ಆವೃತ್ತಿಯ ಬಗ್ಗೆ ತೀವ್ರ ಟೀಕೆ, ವಿರೋಧ ವ್ಯಕ್ತವಾಗಿದ್ದು, ಪ್ರೇಮ್ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಾಗಿದೆ. ಈ ಹಾಡನ್ನು ನಿಷೇಧ ಮಾಡಿರುವುದಾಗಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಹೇಳಿದ್ದಾರೆ. ಹಾಡಿನಲ್ಲಿ ಕಾಣಿಸಿಕೊಂಡಿರುವ ನೋರಾ ಫತೇಹಿ ಸ್ವತಃ ಹಾಡಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲವೂ ಮುಗಿದ ಬಳಿಕ ಇದೀಗ ಹಾಡು ಬರೆದ ಪ್ರೇಮ್ ಸಾಮಾಜಿಕ ಜಾಲತಾಣದ ಮೂಲಕ ಹಾಡಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ನಿರ್ದೇಶಕ ಪ್ರೇಮ್, ‘ಯಾರೂ ಸಹ ಬೇಕೆಂದು ಅಥವಾ ತಿಳಿದು-ತಿಳಿದು ತಪ್ಪು ಮಾಡುವುದಿಲ್ಲ. ಸಾಕಷ್ಟು ಹಾಡುಗಳನ್ನು ನಾನು ಈ ವರೆಗೆ ಬರೆದಿದ್ದೇನೆ. ತಾಯಿಯ ಬಗ್ಗೆ, ದೇವರ ಬಗ್ಗೆ, ಅಣ್ಣ-ತಮ್ಮ, ಪ್ರೀತಿ ಬಗ್ಗೆ, ಜನಪದ ಹೀಗೆ ಹಲವು ರೀತಿ ಹಾಡು ಬರೆದಿದ್ದೀನಿ. ಜನ ಸಹ ಪ್ರೇಮ್ ಸಿನಿಮಾನಲ್ಲಿ ಒಳ್ಳೆಯ ಹಾಡುಗಳು ಇರುತ್ತವೆ ಎಂದೇ ಸಿನಿಮಾಕ್ಕೆ ಬರುತ್ತಾರೆ. ಅದಕ್ಕೆ ಋಣಿಯಾಗಿ ಇರುತ್ತೇನೆ. ಈ ಹಾಡು (ಸರ್ಸೆ ಸೆರಗು) ಬರೆದಾಗ ನಾನು ಬೇರೊಂದು ದೃಷ್ಟಿಕೋನದಿಂದ ಬರೆದಿದ್ದೆ’ ಎಂದಿದ್ದಾರೆ.
‘ಆ ಹಾಡು ಬರೆಯುವಾಗ ನನ್ನ ದೃಷ್ಟಿಕೋನದಲ್ಲಿ ನಾನು ಬರೆದೆ. ಎಣ್ಣೆ ಬಾಟಲಿ, ಉಪ್ಪಿನಕಾಯಿ ಇದನ್ನು ಕಲ್ಪಿಸಿಕೊಂಡು ಹಾಡು ಬರೆದಿದ್ದೆ. ಬಾಟಲ್ನ ಮೇಲೆತ್ತಿ ಎಂದು ಬರೆಯಬೇಕಿತ್ತು ಆದರೆ ಆ ಬಾಟಲಿ ಪದವನ್ನು ನಾನು ಕೊನೆಯಲ್ಲಿ ಬಳಸಿದೆ. ಹಾಡಿನಲ್ಲಿ ಕುತೂಹಲ ಇರಲಿ ಎಂಬ ಕಾರಣಕ್ಕೆ ಹಾಗೆ ಮಾಡಿದೆ. ಆದರೆ ಜನ ಅದನ್ನು ಬೇರೆಯದ್ದೇ ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದಾರೆ. ಕೆಲವರು ನನ್ನ ವಿರುದ್ಧ ಕಾಲೆಳೆಯಲು, ಹೀಗಳೆಯಲು ಈ ಸಮಯವನ್ನು ಬಳಸಿಕೊಳ್ಳುತ್ತಿದ್ದಾರೆ. ಲೈಕು, ಕಮೆಂಟಿಗಾಗಿ ವಿಡಿಯೋ ಮಾಡುತ್ತಿದ್ದಾರೆ, ಅವರಿಗೆ ಒಳ್ಳೆಯದಾಗಲಿ’ ಎಂದಿದ್ದಾರೆ ಪ್ರೇಮ್.
‘ನಾನು ಈ ವರೆಗೆ ಕೆಟ್ಟ ಅರ್ಥದ ಹಾಡುಗಳನ್ನು ಬರೆದಿಲ್ಲ, ಅದು ನನಗೆ ಬೇಕಾಗಿಯೂ ಇಲ್ಲ. ನಾನು ಬರೆದಿದ್ದ ಅರ್ಥವೇ ಬೇರೆ ಆಗಿತ್ತು. ಇದನ್ನು ಈ ಹಿಂದೆಯೂ ನಾನು ಮೀಡಿಯಾ ಮುಂದೆ ಹೇಳಿದ್ದೇನೆ. ಆದರೆ ಹಾಡು ಕೇಳಿದ ಕೆಲವರಿಗೆ ಹರ್ಟ್ ಆಗಿರಬಹುದು, ಪ್ರೇಮ್ ಹೀಗೆ ಮಾಡಿದ್ದಾರಾ? ಪ್ರೇಮ್ ಈ ಥರಾನ? ಅನಿಸಿರಬಹುದು. ಸಾಹಿತಿ ಆದ ಮೇಲೆ ಎಲ್ಲ ರೀತಿಯಲ್ಲಿಯೂ ಬರೆಯಬೇಕಾಗುತ್ತದೆ. ಆದರೆ ನಾನು ಅಶ್ಲೀಲ ಅರ್ಥದಲ್ಲಿ ಬರೆದಿಲ್ಲ. ನನ್ನಿಂದ ಬೇಸರ ಆಗಿದ್ದರೆ ಕ್ಷಮೆ ಕೇಳುವೆ. ಹಾಡನ್ನು ರೀರೈಟ್ ಮಾಡುವೆ, ಬೇರೆ ರೀತಿ ಬರೆದು ಮತ್ತೆ ಅಪ್ಲೋಡ್ ಮಾಡುತ್ತೀವಿ, ನಿಮಗೆ ಹರ್ಟ್ ಮಾಡಲು ಇಷ್ಟವಿಲ್ಲ’ ಎಂದಿದ್ದಾರೆ ಪ್ರೇಮ್.
ಹಾಡಿನ ಹಿಂದಿ ಆವೃತ್ತಿಯ ಬಗ್ಗೆ ಗೊಂದಲ ಇತ್ತು. ಹಿಂದಿ ಪದಗಳು ಕೆಲವು ನನಗೆ ಇಷ್ಟವಾಗಲಿಲ್ಲ. ಆದರೆ ಭಾಷೆ ಸಮಸ್ಯೆಯಿಂದ ನಾನು ಪ್ರಶ್ನೆ ಮಾಡಲಿಲ್ಲ. ಆದರೆ ಹಿಂದಿ ಹಾಡು ಬರೆದಿರುವ ರತಿ ಬಾಲಮ್ ಅವರು ಎಲ್ಲ ತಪ್ಪನ್ನು ನನ್ನ ಮೇಲೆ ಹೊರಿಸಿದ್ದಾರೆ. ಅಸಲಿಗೆ ನನ್ನ ಹಿಂದಿನ ಹಿಟ್ ಹಾಡುಗಳನ್ನು ಕನ್ನಡದಿಂದ ಹಿಂದಿಗೆ ಬರೆದಿದ್ದು ಅವರೇ. ಆದರೆ ಅವರು ಸಮಜಾಯಿಷಿಕೊಳ್ಳಲಿಲ್ಲ, ಎಲ್ಲ ತಪ್ಪು ನನ್ನ ಮೇಲೆ ಹಾಕಿದರು, ಬಹುಷಃ ಭಯಪಟ್ಟು ನನ್ನ ಮೇಲೆ ಹಾಕಿದ್ದಾರೆ’ ಎಂದಿದ್ದಾರೆ ಪ್ರೇಮ್.
ಇನ್ನು ನಟಿ ನೋರಾ ಫತೇಹಿ ಸ್ಪಷ್ಟನೆ ಬಗ್ಗೆಯೂ ಮಾತನಾಡಿರುವ ಪ್ರೇಮ್, ‘ನೋರಾ ಫತೇಹಿ ಮಾತನಾಡಿರುವುದು ತಪ್ಪು. ಅವರಿಗೆ ಸಾಹಿತ್ಯ ಗೊತ್ತಿತ್ತು. ಸಾಹಿತ್ಯ ಗೊತ್ತಿಲ್ಲದೆ ಯಾವ ನಟರೂ ನಟಿಸುವುದಿಲ್ಲ, ಸಾಹಿತ್ಯ ಗೊತ್ತಿಲ್ಲದೆ ಎಕ್ಸ್ಪ್ರೆಷನ್ ಹೇಗೆ ಬರುತ್ತೆ? ಅವರು ಹಾಗೆ ಮಾತನಾಡಬಾರದಿತ್ತು. ಈಗ ಆಗಿರುವ ವಿವಾದದಿಂದ ತಪ್ಪಿಸಿಕೊಳ್ಳಲು ಹಾಗೆ ಮಾಡಿದ್ದಾರೆ. ಅನಿಸುತ್ತದೆ. ಇತ್ತೀಚೆಗೆ ನಡೆದ ಆಡಿಯೋ ಪ್ರೋಗ್ರಾಂನಲ್ಲಿ ಸಹ ಅವರು ಹಾಡಿನ ಬಗ್ಗೆ ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿದ್ದರು. ಆದರೆ ಈಗ ಹೀಗೆ ಮಾತನಾಡುತ್ತಿದ್ದಾರೆ. ಇರಲಿ ನಾನು ಹಾಡನ್ನು ರೀರೈಟ್ ಮಾಡುತ್ತೀನಿ. ಮತ್ತೆ ಅಪ್ಲೋಡ್ ಮಾಡುತ್ತೀನಿ’ ಎಂದಿದ್ದಾರೆ ಪ್ರೇಮ್.
ಮಂಗಳೂರು, (ಮಾರ್ಚ್ 18): ಮಂಗಳೂರಿನ ದೈವಸ್ಥಾನವೊಂದರಲ್ಲಿ ನಡೆದ ದೈವ ನರ್ತನ ಸೇವೆ ಇದೀಗ ದೊಡ್ಡ ವಿವಾದಕ್ಕೆ (Mangaluru Daivaradhane Row) ಕಾರಣವಾಗಿದೆ. ಪಂಬದ ಸಮಾಜದ ಸಂಶೋಧಕಿ ಡಾ. ರತಿ ಕೆಲ ದಿನಗಳ ಹಿಂದೆ ಗಂಭೀರ ಆರೋಪ ಮಾಡಿದ್ದರು. ಬಂಟ ದೈವದ ನರ್ತನ ಸೇವೆ ವೇಳೆ ಕ್ರೈಸ್ತ ಧರ್ಮದ ವ್ಯಕ್ತಿಯಿಂದ ದೈವ ನರ್ತನ ಮಾಡಿಸಲಾಗಿದೆ ಎಂದು ಅವರು ಹೇಳಿಕೆ ನೀಡಿದ್ದರು. ಶ್ರೀ ಜಾರಂದಾಯ ದೈವಕ್ಕೆ ನಿಯಮಾನುಸಾರ ಪಂಬದ ಸಮುದಾಯದವರೇ ನರ್ತನ ಮಾಡಿದ್ದರೂ, ಬಂಟ ದೈವಕ್ಕೆ ಮಾತ್ರ ಅನ್ಯಧರ್ಮದ ವ್ಯಕ್ತಿಗೆ ಅವಕಾಶ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪ ಕೇಳಿ ಬಂದ ಕೂಡಲೇ ತುಳುನಾಡಿನ ದೈವಾರಾಧನೆ ವಲಯದಲ್ಲಿ ತೀವ್ರ ಚರ್ಚೆ,ವಿರೋಧ,ಸಂಶಯಗಳ ವಾತಾವರಣ ನಿರ್ಮಾಣವಾಯಿತು. ಆದ್ರೆ ಈ ಎಲ್ಲಾ ಆರೋಪಗಳನ್ನು ಈಗ ದೈವ ನರ್ತಕರು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ದೈವಸ್ಥಾನದ ಆಡಳಿತ ಮಂಡಳಿ ದೈವ ನರ್ತಕ ಗಣೇಶ್ ಪಂಬದರಿಗೆ ನೇಮ ಕಟ್ಟುವ ಜವಾಬ್ದಾರಿ ವಹಿಸಿಕೊಟ್ಟಿದ್ದರು. ಹೀಗಾಗಿ ಅವರೇ ಸ್ಪಷ್ಟನೆ ನೀಡಿದ್ದು ಬಂಟ ದೈವಕ್ಕೆ ನರ್ತನ ಸೇವೆ ಮಾಡಿದ ಸುಶಾಂತ್ ನಮ್ಮದೇ ಪಂಬದ ಸಮುದಾಯದವನು ಎಂದು ಸ್ಪಷ್ಟಪಡಿಸಿದ್ದಾರೆ.
ಸುಶಾಂತ್ ಕ್ರೈಸ್ತನಲ್ಲ, ಅವನ ತಾಯಿ ನಮ್ಮ ಜಾತಿಗೆ ಸೇರಿದವರು. ಮದುವೆಯಾದ ಬಳಿಕ ಹಿಂದೂ ಧರ್ಮ ಪಾಲನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನೂ ಇವನು ಮೊದಲ ಬಾರಿಗೆ ನರ್ತನ ಮಾಡ್ತಿರುವವನಲ್ಲ ಹಲವು ಕ್ಷೇತ್ರಗಳಲ್ಲಿ ಸೇವೆ ಮಾಡಿದ್ದಾನೆ ಎಂದು ಹೇಳಿದ್ದಾರೆ. ಆರೋಪ ಮಾಡಿದವರ ಮೇಲೆಯೇ ಪ್ರಶ್ನೆ ಎತ್ತಿರುವ ಗಣೇಶ್ ಪಂಬದ ರತಿಯವರ ಕುಟುಂಬವೇ ಇವನ ಸಹೋದರನಿಂದ ಬೇರೆಡೆ ನರ್ತನ ಮಾಡಿಸಿಕೊಂಡಿದೆ ಆಗ ಸಮಸ್ಯೆ ಇರಲಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ. ಕ್ಷೇತ್ರಕ್ಕೆ ಯಾವುದೇ ಅಪಚಾರವಾಗಿಲ್ಲ ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.
ಇತ್ತ ಆರೋಪದ ಸಂಕಷ್ಟಕ್ಕೆ ಸಿಲುಕಿರುವ ದೈವ ನರ್ತಕ ಸುಶಾಂತ್ ಪಂಬದ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಈಗ ಯಾರಿಗೂ ಮುಖ ತೋರಿಸಲು ಆಗುತ್ತಿಲ್ಲ. ಈ ಆರೋಪ ಬಂದ ನಂತರ ಜೀವನವೇ ಬದಲಾಗಿದೆ. ಏಪ್ರಿಲ್ ತಿಂಗಳಲ್ಲಿ ಹಲವಾರು ಕಡೆ ದೈವ ನರ್ತನ ಸೇವೆಗೆ ಕರೆ ಬಂದಿದ್ದರೂ ಈಗ ಎಲ್ಲರೂ ಕರೆ ಮಾಡಿ ಏನು ಮಾಡೋದು. ತಮ್ಮ ಬಳಿ ಜಾತಿ ಪ್ರಮಾಣಪತ್ರವಿದ್ದು ತಾವು ಪಂಬದ ಸಮುದಾಯದವರೇ ಎಂದು ಸ್ಪಷ್ಟಪಡಿಸಿದ್ದಾರೆ. ನನಗೆ ನ್ಯಾಯ ಸಿಗಬೇಕು ಎಂಬುದು ಅವರ ಬೇಡಿಕೆ.
ಇನ್ನೂ ಸುಶಾಂತ್ ತಾಯಿ ಸವಿತಾ ಕೂಡ ಸ್ಪಷ್ಟನೆ ನೀಡಿ ನಾನು ಮೊದಲು ಕ್ರಿಶ್ಚಿಯನ್ ಆಗಿದ್ದರೂ ಮದುವೆಯ ಬಳಿಕ ಹಿಂದೂ ಧರ್ಮಕ್ಕೆ ಸೇರಿದ್ದೇನೆ. ನಾವು ಚರ್ಚ್ಗೆ ಹೋಗೋದಿಲ್ಲ, ಮಕ್ಕಳು ಸಹ ಹಿಂದೂ ಧರ್ಮ ಪಾಲನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ನನ್ನ ಮಗ ಕ್ರಿಶ್ಚಿಯನ್ ಎಂದು ಸಾಬೀತು ಮಾಡಿದ್ರೆ ದೈವ ನರ್ತನಕ್ಕೆ ಕಳಿಸಲ್ಲ. ಮಂಗಳೂರಿನ ಎಲ್ಲಾ ಚರ್ಚ್ಗಳಿಂದ ದಾಖಲೆ ತರಲಿ ಎಂದು ಸವಾಲು ಹಾಕಿದ್ದಾರೆ.
ಒಟ್ಟಿನಲ್ಲಿ ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡುವ ಕೆಲಸವನ್ನು ದೈವ ನರ್ತಕರು ಮಾಡಿದ್ದಾರೆ. ಆದ್ರೆ ಇದನ್ನು ದೈವರಾಧಕರು, ಭಕ್ತರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.