ನವದೆಹಲಿ, ಮಾರ್ಚ್ 15: ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಚುನಾವಣಾ ದಿನಾಂಕಗಳನ್ನು ಪ್ರಕಟಿಸಲಾಗಿದೆ. ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಮ್ ಮತ್ತು ಪುದುಚೇರಿಯಲ್ಲಿ ಏಪ್ರಿಲ್ 9ರಿಂದ 29ರವರೆಗೂ ಮತದಾನ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಉಳಿದ ನಾಲ್ಕು ಕಡೆ ಒಂದೇ ಹಂತದಲ್ಲಿ ಮತದಾನವಾಗಲಿದೆ. ಚುನಾವಣೆ ನಡೆಯಲಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ದಿನಾಂಕಗಳನ್ನು ಪ್ರಕಟಿಸಿದರು. ಇದರೊಂದಿಗೆ ಚುನಾವಣಾ ನೀತಿ ಸಂಹಿತೆ ಇಂದಿನಿಂದಲೇ ಜಾರಿಗೆ ಬರುತ್ತದೆ.
ಅಸ್ಸಾಮ್, ಕೇರಳ ಮತ್ತು ಪುದುಚೆರಿಯಲ್ಲಿ ಏಪ್ರಿಲ್ 9ರಂದು ಒಂದೇ ಹಂತದಲ್ಲಿ ಮತದಾನವಾಗಲಿದೆ.
ಐದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು 824 ಕ್ಷೇತ್ರಗಳಲ್ಲಿ 17.4 ಕೋಟಿ ಮತದಾರರಿದ್ದಾರೆ. 2.19 ಲಕ್ಷ ಪೋಲಿಂಗ್ ಸ್ಟೇಷನ್ಗಳಿವೆ. 25 ಲಕ್ಷ ಮತದಾನ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ.
ಹುಬ್ಬಳ್ಳಿ, ಮಾರ್ಚ್ 15: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದರೂ ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ಕಿಮ್ಸ್ ಸಿಬ್ಬಂದಿ ಬೇಜವಾಬ್ದಾರಿ ತೋರಿರುವ ಕಾರಣ ಆತ ಬ್ರೈನ್ ಡೆಡ್ ಆಗಿ ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಧಾರವಾಡದ ತಾಲೂಕಿನ ಮೊರಬ ಗ್ರಾಮದ ನಿವಾಸಿ ಪ್ರಕಾಶ್ (25) ಮೃತರಾಗಿದ್ದು, ಜೆಸಿಬಿ ಚಾಲಕನಾಗಿ ಇವರು ಕೆಲಸಮಾಡಿಕೊಂಡಿದ್ದರು. ಮಾರ್ಚ್ 13ರಂದು ಕೆಲಸ ಮುಗಿಸಿ ಬೈಕ್ನಲ್ಲಿ ತಮ್ಮೂರಿಗೆ ಹೋಗುತ್ತಿದ್ದ ವೇಳೆ ಯಾವುದೋ ಅಪರಿಚಿತವಾಹನ ಡಿಕ್ಕಿಯಾಗಿ ಪ್ರಕಾಶ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಆ್ಯಂಬುಲೆನ್ಸ್ ಮೂಲಕ ಕೂಡಲೇ ಅವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಅಲ್ಲಿನ ವೈದ್ಯರು ಹುಬ್ಬಳ್ಳಿ ಕಿಮ್ಸ್ಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಹೀಗಾಗಿ ರಾತ್ರಿಯೇ ಪ್ರಕಾಶ್ರನ್ನು ಕಿಮ್ಸ್ಗೆ ಕರೆತರಲಾಗಿತ್ತು. ಆದರೆ ಇಲ್ಲಿನ ಸಿಬ್ಬಂದಿ ಮಾತ್ರ ಅರ್ಧ ಗಂಟೆಗೂ ಹೆಚ್ಚು ಕಾಲ ಕಳೆದರೂ ಕನಿಷ್ಠ ಚಿಕಿತ್ಸೆಯನ್ನೂ ನೀಡಿಲ್ಲ. ಬೆಡ್ ಇಲ್ಲವೆಂಬ ಕಾರಣ ಹೇಳಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಕುಟುಂಬಸ್ಥರ ಆರೋಪ.
ಆ್ಯಂಬುಲೆನ್ಸ್ನಿಂದ ಗಾಯಾಳುವನ್ನು ಕೆಳಗಿಳಿಸಲೂ ಸಿಬ್ಬಂದಿ ಬಾರದ ಕಾರಣ, ಅರ್ಧಗಂಟೆಗೂ ಹೆಚ್ಚು ಕಾದು ಬಳಿಕ ಅನಿವಾರ್ಯವಾಗಿ ಪ್ರಕಾಶ್ರನ್ನು ಮತ್ತೆ ಧಾರವಾಡದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ಅಷ್ಟರೊಳಗಾಗಿ ಅವರ ಬ್ರೈನ್ ಡೆಡ್ ಆಗಿದೆ. ಹೀಗಾಗಿ ಮರಳಿ ಮತ್ತೆ ಕಿಮ್ಸ್ಗೆ ಕರೆತರಲಾಗಿತ್ತಾದರೂ ಗಾಯಾಳು ಮಾತ್ರ ಬದುಕುಳಿಯಲಿಲ್ಲ. ಧಾರವಾಡ ಜಿಲ್ಲಾ ಆಸ್ಪತ್ರೆಯಿದ ಹುಬ್ಬಳ್ಳಿ ಕಿಮ್ಸ್, ಹುಬ್ಬಳ್ಳಿ ಕಿಮ್ಸ್ನಿಂದ ಧಾರವಾಡ ಖಾಸಗಿ ಆಸ್ಪತ್ರೆ ಓಡಾಟದಲ್ಲಿಯೇ ಎರಡು ಗಂಟೆಗೂ ಹೆಚ್ಚು ಸಮಯ ಹೋಗಿದ್ದರಿಂದ ಸೂಕ್ತ ಚಿಕಿತ್ಸೆ ಸಿಗದ ಕಾರಣ ಪ್ರಕಾಶ್ ಬಾರದ ಲೋಕಕ್ಕೆ ಹೋಗಿದ್ದಾರೆ. ಹುಬ್ಬಳ್ಳಿ ಕಿಮ್ಸ್ನಲ್ಲಿಯೇ ಸಕಾಲಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ಪ್ರಕಾಶ್ ಬದುಕುಳಿಯುತ್ತಿದ್ದರು. ಇಲ್ಲಿನ ಸಿಬ್ಬಂದಿ ಆತನನ್ನು ಬಲಿ ಪಡೆದಿದ್ದಾರೆ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಹುಬ್ಬಳ್ಳಿಯ ಕಿಮ್ಸ್ನಲ್ಲಿ ಇತ್ತೀಚೆಗೆ ಕೆಲ ಡಿ ಗ್ರೂಪ್ ಸಿಬ್ಬಂದಿ ಹಾಗೂ ವೈದ್ಯರು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇಂತವರ ವಿರುದ್ದ ಮೇಲಾಧಿಕಾರಿಗಳು ಕಠೀಣ ಕ್ರಮ ಕೈಗೊಳ್ಳಬೇಕಿದ್ದು, ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡಿ ಜೀವ ಉಳಿಸುವ ಕೆಲಸ ಮಾಡಬೇಕಿದೆ. ಜನರು ಕಿಮ್ಸ್ನ ಬಡವರ ಸಂಜೀವಿನಿ ಎಂದೇ ನಂಬಿರುವ ಕಾರಣ, ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ವಿಜಯಪುರ, ಮಾರ್ಚ್ 15: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಪುತ್ರ ರಾಮನಗೌಡ ಅವರ ಅದ್ದೂರಿ ವಿವಾಹ ಆರತಕ್ಷತೆ ಕಾರ್ಯಕ್ರಮವು ವಿಜಯಪುರದ ಬಿಎಲ್ಡಿಇ ಸಂಸ್ಥೆಯ ಆವರಣದಲ್ಲಿ ವಿಜೃಂಭಣೆಯಿಂದ ಜರುಗಿತು. ರಾಮನಗೌಡ ಹಾಗೂ ಅಬೋಲಿ ಅವರ ವಿವಾಹೋತ್ಸವದ ಆರತಕ್ಷತೆಯಲ್ಲಿ ಅಪಾರ ಸಂಖ್ಯೆಯ ಜನರು ಪಾಲ್ಗೊಂಡಿದ್ದರು. ನಾಡಿನ ವಿವಿಧ ಮಠಾಧೀಶರು, ರಾಜಕಾರಣಿಗಳು ಹಾಗೂ ಅನೇಕ ಗಣ್ಯ ವ್ಯಕ್ತಿಗಳು ಆಗಮಿಸಿ ನೂತನ ದಂಪತಿಗಳನ್ನು ಶುಭ ಹಾರೈಸಿದ್ದಾರೆ. ಮಂತ್ರ-ಘೋಷಗಳ ಮಧ್ಯೆ ವಧು-ವರರು ಪರಸ್ಪರ ಹಾರ ಬದಲಾಯಿಸಿಕೊಂಡಿದ್ದು, ಕಾರ್ಯಕ್ರಮದಲ್ಲಿ ಶಾಸಕ ಯತ್ನಾಳ್ ಅವರ ನೃತ್ಯ ವಿಶೇಷವಾಗಿತ್ತು.
ಈ ಸುಡು ಬೇಸಿಗೆಯಲ್ಲಿ (summer) ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ಬಿಸಿಲಿನ ತಾಪಕ್ಕೆ ಆಯಾಸ, ಸುಸ್ತು, ನಿರ್ಜಲೀಕರಣದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಈ ಸಮಯದಲ್ಲಿ ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯ. ಇದಕ್ಕಾಗಿ ಸಾಕಷ್ಟು ನೀರು ಕುಡಿದರೆ ಸಾಕು ಎಂದು ಹಲವರು ಭಾವಿಸುತ್ತಾರೆ. ಆದರೆ ಸಾಕಷ್ಟು ಪ್ರಮಾಣದ ನೀರನ್ನು ಕುಡಿದರೂ ಬಿರು ಬೇಸಿಗೆಯಲ್ಲಿ ದೇಹ ಹೆಚ್ಚು ಬೆವರುವ ಕಾರಣ ನಿರ್ಜಲೀಕರಣ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಾಗಾಗಿ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುವುದರ ಜೊತೆಗೆ ನಿರ್ಜಲೀಕರಣವನ್ನು ತಡೆಗಟ್ಟಲು ಈ ಕೆಲವು ಆಹಾರಗಳನ್ನು ಕೂಡ ತಪ್ಪದೆ ಸೇವನೆ ಮಾಡಬೇಕು.
ನಿರ್ಜಲೀಕರಣವನ್ನು ತಡೆಗಟ್ಟಲು ಸೇವಿಸಬೇಕಾದ ಆಹಾರಗಳು:
ನೀರನ್ನು ಮಾತ್ರ ಅವಲಂಬಿಸುವುದು ಅಪಾಯಕಾರಿ.
ಹಗುರವಾದ ಆಹಾರವನ್ನು ಸೇವಿಸಿ: ಬೇಸಿಗೆಯಲ್ಲಿ ಹುರಿದ ಮತ್ತು ಮಸಾಲೆಯುಕ್ತ ಆಹಾರವನ್ನು ತಪ್ಪಿಸಿ. ಇವು ದೇಹದ ಉಷ್ಣತೆ ಮತ್ತು ಆಮ್ಲೀಯತೆಯನ್ನು ಹೆಚ್ಚಿಸುತ್ತವೆ, ಇದರಿಂದಾಗಿ ಬೆವರು ಹೆಚ್ಚಾಗುತ್ತದೆ. ದೇಹವು ಬೇಗನೆ ನಿರ್ಜಲೀಕರಣಗೊಳ್ಳುತ್ತದೆ. ಹಸಿರು ತರಕಾರಿಗಳು, ಬೇಳೆಕಾಳುಗಳು, ಮಜ್ಜಿಗೆ ಮತ್ತು ಮೊಸರು ಇತ್ಯಾದಿ ಹಗುರ ಆಹಾರಗಳನ್ನು ಸೇವಿಸಿ.
ನಿಂಬೆ ನೀರು ಮತ್ತು ಎಳನೀರು: ನಿಂಬೆ ನೀರು ಮತ್ತು ಎಳ ನೀರು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವುದಲ್ಲದೆ, ದೇಹದಲ್ಲಿ ಎಲೆಕ್ಟ್ರೋಲೈಟ್ಗಳನ್ನು ಪುನಃ ತುಂಬಿಸುತ್ತದೆ. ಅವುಗಳ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಇತರ ಖನಿಜಗಳು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ. ಆದ್ದರಿಂದ ದಿನಕ್ಕೆ ಒಂದು ಅಥವಾ ಎರಡು ಬಾರಿ ನಿಂಬೆ ನೀರು ಅಥವಾ ಎಳನೀರನ್ನು ಸೇವನೆ ಮಾಡಿ.
ಮೊಸರು: ಬಿಸಿ ವಾತಾವರಣದಲ್ಲಿ ದೇಹವನ್ನು ತಂಪಾಗಿಸಲು ಮತ್ತು ನಿರ್ಜಲೀಕರಣವನ್ನು ತಪ್ಪಿಸಲು ನೀವು ಮೊಸರನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಅಲ್ಲದೆ ಬೇಸಿಗೆಯಲ್ಲಿ ಮಜ್ಜಿಗೆ ಅಥವಾ ಲಸ್ಸಿ ಸೇವಿಸುವುದರಿಂದಲೂ ದೇಹವು ತಂಪಾಗಿರುತ್ತದೆ ಮತ್ತು ಆಯಾಸ ಕಡಿಮೆಯಾಗುತ್ತದೆ.
ಹಣ್ಣುಗಳನ್ನು ಸೇವಿಸಿ: ಕಲ್ಲಂಗಡಿ, ಸೌತೆಕಾಯಿ, ಕಿತ್ತಳೆ ಮತ್ತು ಅನಾನಸ್ನಂತಹ ಹಣ್ಣುಗಳಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ. ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ತಾಜಾ ಹಣ್ಣಿನ ರಸವು ದೇಹವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಶಕ್ತಿಯನ್ನು ಒದಗಿಸುತ್ತದೆ.
ಪುದೀನ: ಪುದೀನವು ತನ್ನ ತ್ವರಿತ ತಂಪಾಗಿಸುವ ಪರಿಣಾಮಕ್ಕೆ ಹೆಸರುವಾಸಿಯಾಗಿದೆ. ಪುದೀನ ಜ್ಯೂಸ್, ಚಟ್ನಿ ಅಥವಾ ಡಿಟಾಕ್ಸ್ ಪಾನೀಯಗಳು ಬೇಸಿಗೆಯಲ್ಲಿ ಬಹಳ ಪ್ರಯೋಜನಕಾರಿ. ಅವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ದೇಹವನ್ನು ರಿಫ್ರೆಶ್ ಮಾಡುತ್ತದೆ.
ಕೆಫೀನ್ ಮತ್ತು ಆಲ್ಕೋಹಾಲ್ ಸೇವಿಸಬೇಡಿ: ಚಹಾ, ಕಾಫಿ ಮತ್ತು ಆಲ್ಕೋಹಾಲ್ ದೇಹದ ನೀರಿನ ಅಂಶವನ್ನು ಕಡಿಮೆ ಮಾಡುತ್ತದೆ. ಇವುಗಳ ಅತಿಯಾದ ಸೇವನೆಯು ನಿರ್ಜಲೀಕರಣಕ್ಕೆ ಕಾರಣವಾಗಬಹುದು.
ನವದೆಹಲಿ, ಮಾರ್ಚ್ 15: ಏಳನೇ ವೇತನ ಆಯೋಗದ ಅವಧಿ 2025ರ ಡಿಸೆಂಬರ್ 31ಕ್ಕೆ ಮುಗಿದಿದೆ. ಎಂಟನೇ ವೇತನ ಆಯೋಗ ಜಾರಿಗೆ ಬರುತ್ತಿದೆ. ಎಂಟನೇ ವೇತನ ಆಯೋಗವು ಕೋಟ್ಯಂತರ ಸರ್ಕಾರಿ ನೌಕರರು ಮತ್ತು ನಿವೃತ್ತರಿಗೆ ಸಂಬಳ, ಪಿಂಚಣಿ, ಭತ್ಯೆಗಳನ್ನು ಪರಿಷ್ಕರಿಸುವ ಕೆಲಸ ಮಾಡುತ್ತಿದೆ. ಅಧಿಸೂಚನೆಯಾಗಿ 18 ತಿಂಗಳೊಳಗೆ ಆಯೋಗವು ತನ್ನ ಈ ಜವಾಬ್ದಾರಿಯನ್ನು ಮುಗಿಸಬೇಕಿದೆ. ವೇತನ, ಪಿಂಚಣಿ ಮತ್ತು ಭತ್ಯೆ ಪರಿಷ್ಕರಣೆ ಕುರಿದಂತೆ ಉದ್ಯೋಗಿಗಳು, ಪಿಂಚಣಿದಾರು, ಉದ್ಯೋಗಿಗಳ ಒಕ್ಕೂಟಗಳು ಮತ್ತಿತರ ಭಾಗೀದಾರರಿಂದ ಸಲಹೆ ಸೂಚನೆಗಳನ್ನು ಆಹ್ವಾನಿಸಲಾಗಿದೆ. 2026ರ ಏಪ್ರಿಲ್ 30ರವರೆಗೂ ಆನ್ಲೈನ್ ಪೋರ್ಟಲ್ನಲ್ಲಿ ಈ ಸಲಹೆಗಳನ್ನು ಕಳುಹಿಸುವ ಅವಕಾಶ ಇರುತ್ತದೆ.
ಎಂಟನೇ ವೇತನ ಆಯೋಗದ ಕಾರ್ಯಾಚರಣೆ ನಿಯಮ ಅಥವಾ ಟರ್ಮ್ಸ್ ಆಫ್ ರೆಫರೆನ್ಸ್ಗೆ 2025ರ ನವೆಂಬರ್ 3ರಂದು ಅಧಿಸೂಚನೆ ಕೊಡಲಾಗಿದೆ. ಇದಾಗಿ 18 ತಿಂಗಳು ಎಂದರೆ 2027ರ ಏಪ್ರಿಲ್-ಮೇ ತಿಂಗಳೊಳಗೆ ಆಯೋಗವು ವೇತನ ನಿಗದಿಗೆ ಅಂತಿಮ ಸೂತ್ರಗಳನ್ನು ಶಿಫಾರಸು ಮಾಡಬೇಕಾಗುತ್ತದೆ.
ದೇಶದಲ್ಲಿ ಸದ್ಯ ಸಕ್ರಿಯವಾಗಿರುವ 50 ಲಕ್ಷ ಕೇಂದ್ರ ಸರ್ಕಾರಿ ಉದ್ಯೋಗಿಗಳಿದ್ದಾರೆ. 69 ಲಕ್ಷ ಪಿಂಚಣಿದಾರರಿದ್ದಾರೆ. ಫಲಾನುಭವಿಗಳ ಸಂಖ್ಯೆ ಒಟ್ಟು 1.2 ಕೋಟಿಯಷ್ಟು ಆಗಬಹುದು.
ಎಂಟನೇ ವೇತನ ಆಯೋಗವು ಎಷ್ಟು ವೇತನ ಹೆಚ್ಚಳಕ್ಕೆ ಶಿಫಾರಸು ಮಾಡಬಹುದು?
ಎಂಟನೇ ವೇತನ ಆಯೋಗವು ಕೇಂದ್ರ ಸರ್ಕಾರಿ ನೌಕರರಿಗೆ ಮಾಡಬಹುದಾದ ವೇತನ ಏರಿಕೆ ಶೇ. 20-35ರಷ್ಟು ಇರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ವೇತನ ಪರಿಷ್ಕರಣೆಯಲ್ಲಿ ಮುಖ್ಯ ಭಾಗವಾಗಿರುವುದು ಫಿಟ್ಮೆಂಟ್ ಫ್ಯಾಕ್ಟರ್. ಇದು 2.4ರಿಂದ 3.0 ಶ್ರೇಣಿಯಲ್ಲಿ ಇರಬಹುದು. ಮೂಲವೇತನ ಪರಿಷ್ಕರಣೆಗೆ ಆಧಾರವಾಗುವ ಈ ಫಿಟ್ಮೆಂಟ್ ಫ್ಯಾಕ್ಟರ್ ಹಲವು ಆರ್ಥಿಕ ಅಂಶಗಳನ್ನು ಆಧರಿಸಿರುತ್ತದೆ.
ಮುಂದಿನ 12-18 ತಿಂಗಳಲ್ಲಿ ಹಣದುಬ್ಬರ ಎಷ್ಟಿರಬಹುದು ಎಂಬಿತ್ಯಾದಿ ಆರ್ಥಿಕ ಅಂಶಗಳು ಎಂಟನೇ ವೇತನ ಆಯೋಗದ ಶಿಫಾರಸಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಈ ಬಾರಿ ಒಟ್ಟಾರೆ ವೇತನ ಹೆಚ್ಚಳ ಸುಮಾರು ಶೇ. 20-35ರಷ್ಟಿರಬಹುದು. 7ನೇ ವೇತನ ಆಯೋಗದಿಂದ ಶೇ. 23-25ರಷ್ಟು ಸಂಬಳ ಹೆಚ್ಚಳ ಆಗಿತ್ತು. ಅದಕ್ಕೂ ಹಿಂದಿನ 6ನೇ ವೇತನ ಆಯೋಗವು ಶೇ. 40ರಷ್ಟು ವೇತನ ಏರಿಕೆಗೆ ಶಿಫರಸು ಮಾಡಿತ್ತು.
ಹೆತ್ತವರಿಗೆ (parents) ಮಕ್ಕಳೇ ಪ್ರಪಂಚ. ಹೀಗಾಗಿ ಮಕ್ಕಳ ಸಂತೋಷಕ್ಕಾಗಿ ತಂದೆ ತಾಯಿ ಏನನ್ನೂ ಬೇಕಾದರೂ ಮಾಡಲು ಸಿದ್ಧವಿರುತ್ತಾರೆ. ಇತ್ತ ಮಕ್ಕಳಿಗೂ ಕೂಡ ತಮ್ಮ ಹೆತ್ತವರ ಮೊಗದಲ್ಲಿನ ಖುಷಿ, ಸಂತೋಷ ಕಂಡು ಖುಷಿ ಪಡುತ್ತಾರೆ. ಇಲ್ಲೊಬ್ಬಳು ಮಗಳು ತನ್ನ ತಾಯಿಯ (mother) ಖುಷಿಯನ್ನು ಕಣ್ತುಂಬಿಸಿಕೊಂಡಿದ್ದಾಳೆ. ಮಹಿಳೆಯೊಬ್ಬಳು ಮೊದಲ ಬಾರಿಗೆ ಆನ್ಲೈನ್ ಪೇಮೆಂಟ್ ಮಾಡಿದ್ದು, ಆಕೆಯ ಖುಷಿಗೆ ಪಾರಾವೇ ಇಲ್ಲದಂತಾಗಿದೆ. ಮಗಳ ಮುಂದೆ ತನ್ನ ಖುಷಿಯನ್ನು ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗಿದೆ. ಈ ಹೃದಯಸ್ಪರ್ಶಿ ದೃಶ್ಯ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
@venus_mathur ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಮಗಳು ವೀನಸ್ ಮಾಥುರ್, ನನಗೆ ಎಲ್ಲವನ್ನೂ ಕಲಿಸಿದ ಮಹಿಳೆ. ಇಂದು, ನನ್ನಿಂದ ಹೊಸದನ್ನು ಕಲಿತಳು. ಅವಳ ಮೊದಲ ಆನ್ಲೈನ್ ಪಾವತಿ ಎಂಬ ಶೀರ್ಷಿಕೆ ನೀಡಿದ್ದಾಳೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಮಗಳ ಬಳಿ, ತಾನು ಮೊದಲ ಬಾರಿಗೆ ಡಿಜಿಟಲ್ ಮೂಲಕ ಹಣವನ್ನು ಹೇಗೆ ಕಳುಹಿಸುವಲ್ಲಿ ಯಶಸ್ವಿಯಾದೆ. ತನ್ನನ್ನುಆ ಕ್ಷಣವೂ ಹೇಗೆ ಹೆಮ್ಮೆ ಪಡಿಸುವಂತೆ ಮಾಡಿತು ಎಂದು ವಿವರಿಸುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
ತಾನು ನಂಬರ್ ನಮೂದಿಸಿ ಯಶಸ್ವಿಯಾಗಿ ಪಾವತಿ ಮಾಡಿದ್ದೇನೆ ಎನ್ನುತ್ತಿದ್ದಂತೆ ಆ ಕ್ಷಣವನ್ನು ರೆಕಾರ್ಡ್ ಮಾಡುತ್ತಿರುವ ಆಕೆಯ ಮಗಳು ಆಶ್ಚರ್ಯದಿಂದ ಪ್ರತಿಕ್ರಿಯಿಸುತ್ತಾ, “ಅರೆ ವಾಹ್” ಎಂದು ಹೇಳುತ್ತಾಳೆ. ಮೊದಲ ಬಾರಿಗೆ ಆನ್ಲೈನ್ ಪೇಮೆಂಟ್ ಮಾಡಿದ್ದು, ನನಗೆ ತುಂಬಾ ಆತ್ಮವಿಶ್ವಾಸವನ್ನು ನೀಡಿತು ಎಂದು ತಾಯಿ ಹೇಳುತ್ತಿದ್ದಂತೆ, ಇದಕ್ಕೆ ಪ್ರತಿಕ್ರಿಯೆ ನೀಡಿದ ಮಗಳು ವಾವ್ ಸೂಪರ್ ಅಮ್ಮ ಎನ್ನುತ್ತಾಳೆ. ಇತ್ತೀಚಿನ ದಿನಗಳಲ್ಲಿ ತಾನು ಹೊಸ ಅನುಭವಗಳನ್ನು ಆನಂದಿಸಲು ಪ್ರಾರಂಭಿಸಿದ್ದೇನೆ. ಹೊಸದನ್ನು ಕಲಿಯುವುದರ ಬಗ್ಗೆ ತನಗೆ ಎಷ್ಟು ಹೆಮ್ಮೆ ಇದೆ ಎಂಬುದನ್ನು ಮಹಿಳೆ ಹೇಳುವುದನ್ನು ಕಾಣಬಹುದು.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನಿಮ್ಮ ತಾಯಿ ಸ್ವತಂತ್ರರಾಗುವುದನ್ನು ನೋಡುವುದು ಅದೆಂತಹ ಅನುಭವ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಅವಳ ಮುಖದಲ್ಲಿರುವ ಸಂತೋಷವನ್ನು ನೋಡಿ ಎಂದಿದ್ದಾರೆ. ಮತ್ತೊಬ್ಬರು, ಏನೋ ಸಾಧಿಸಿದೆ ಎನ್ನುವ ಭಾವ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ವೆಂಕಟೇಶ್ವರನ ದರ್ಶನಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನಂ (TTD) ಮತ್ತೊಂದು ಸಂತಸದ ಸುದ್ದಿ ನೀಡಿದೆ. ತಿರುಮಲದಲ್ಲಿ ಈಗಾಗಲೇ ಇರುವ ಅನ್ನಪ್ರಸಾದ ಕೇಂದ್ರಗಳ ಜೊತೆಗೆ, ಶೀಘ್ರದಲ್ಲೇ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಮತ್ತೊಂದು ಬೃಹತ್ ಊಟದ ಹಾಲ್ ಮತ್ತು ಅಡುಗೆಮನೆ ಭಕ್ತರ ಸೇವೆಗೆ ಲಭ್ಯವಾಗಲಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಆಶಯದಂತೆ, ಅನ್ನಪ್ರಸಾದ ವಿತರಣೆಯಲ್ಲಿ ಸಂಪೂರ್ಣ ಯಾಂತ್ರೀಕರಣ ಮತ್ತು ಆಧುನಿಕತೆಯನ್ನು ತರಲು ಟಿಟಿಡಿ ಮುಂದಾಗಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಗೆ ಭಾರತದ ಪ್ರತಿಷ್ಠಿತ ರಿಲಯನ್ಸ್ ಸಂಸ್ಥೆಯು ಸುಮಾರು 120 ಕೋಟಿ ರೂಪಾಯಿಗಳ ಬೃಹತ್ ದೇಣಿಗೆಯನ್ನು ಘೋಷಿಸಿದ್ದು, ಈ ಮೂಲಕ ತಿರುಮಲದ ಅನ್ನದಾನ ಸೇವೆ ಹೊಸ ರೂಪ ಪಡೆಯಲಿದೆ.
ಕಳೆದ ವರ್ಷ ತಿರುಮಲಕ್ಕೆ ಭೇಟಿ ನೀಡಿದ್ದ ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಭಕ್ತರ ಅನುಕೂಲಕ್ಕಾಗಿ ಈ ದೇಣಿಗೆಯನ್ನು ನೀಡುವ ಭರವಸೆ ನೀಡಿದ್ದರು. ಅದರಂತೆ ಈಗ 120 ಕೋಟಿ ವೆಚ್ಚದಲ್ಲಿ ತಂತ್ರಜ್ಞಾನ ಆಧಾರಿತ ‘ಮೆಡ್ರಾನ್’ ಅಡುಗೆಮನೆ ಮತ್ತು ಅನ್ನಪ್ರಸಾದ ಕೇಂದ್ರದ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಗಲಿದೆ. ಪ್ರಸ್ತುತ ಕಾರ್ಯಾಚರಿಸುತ್ತಿರುವ ತಾರಿಗೊಂಡ ವೆಂಕಮಾಂಬ ಅನ್ನಪ್ರಸಾದ ಕೇಂದ್ರವನ್ನು ಕೂಡ ಆಧುನೀಕರಿಸಲಾಗುತ್ತಿದ್ದು, ಏಕಕಾಲದಲ್ಲಿ 4 ಸಾವಿರ ಭಕ್ತರಿಗೆ ಆಸನ ವ್ಯವಸ್ಥೆ ಕಲ್ಪಿಸಲು ಟಿಟಿಡಿ ಸಿದ್ಧತೆ ನಡೆಸುತ್ತಿದೆ. ಆಧುನಿಕ ಅಡುಗೆಮನೆಯು ಆಹಾರ ತಯಾರಿಕೆಯಲ್ಲಿ ಗರಿಷ್ಠ ಶುಚಿತ್ವ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಲಿದೆ.
ಇತ್ತೀಚೆಗೆ ನಡೆದ ಟಿಟಿಡಿ ಟ್ರಸ್ಟಿಗಳ ಮಂಡಳಿ ಸಭೆಯಲ್ಲಿ ಈ ಯೋಜನೆಗೆ ಅಧಿಕೃತ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಈ ಹೊಸ ಕೇಂದ್ರದ ಸ್ಥಾಪನೆಯಿಂದಾಗಿ ತಿರುಮಲಕ್ಕೆ ಬರುವ ಭಕ್ತರು ಸಾಲಿನಲ್ಲಿ ಹೆಚ್ಚು ಹೊತ್ತು ಕಾಯುವ ಅಗತ್ಯವಿಲ್ಲದೆ, ಅತ್ಯಂತ ಸುಸಜ್ಜಿತ ಪರಿಸರದಲ್ಲಿ ಪ್ರಸಾದವನ್ನು ಸ್ವೀಕರಿಸಬಹುದಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 15: ಅವರದ್ದು ಕರ್ನಾಟಕದ ಗಡಿ ಭಾಗ. ಪಾವಗಡ ಮೂಲದ ಯುವತಿಗೆ ಅದೇ ಊರಿನ ಯುವಕನೊಂದಿಗೆ ಮದುವೆ ಮಾಡಿದ್ದರು. ಇನ್ನೇನು ಚೆನ್ನಾಗಿ ಇರ್ತಾರೆ ಎನ್ನುವಷ್ಟರಲ್ಲೇ ವಿವಾಹಿತ ಮಹಿಳೆ ಹೆಣವಾಗಿದ್ದಾಳೆ (death). ವರಿಸಿದವನೇ ಕೊಂದಿದ್ದಾನೆ ಎನ್ನವು ಆರೋಪ ಕೇಳಿಬರ್ತಿದೆ. ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದದ್ದೇನು?
ಬೆಂಗಳೂರಿನ ಯಲಹಂಕ ನ್ಯೂಟೌನ್ನ ಬೃಂದಾವನ ಲೇಔಟ್ನಲ್ಲಿ ವಾಸವಿದ್ದ 24 ವರ್ಷದ ಶೃತಿ ಇಂದು ಹೆಣವಾಗಿ ಬಿದ್ದಿದ್ದಾಳೆ. ಕಳೆದ 2024ರ ಡಿಸೆಂಬರ್ನಲ್ಲಿ ಪವನ್ ಕಲ್ಯಾಣ್ ಎಂಬಾತನ ಜೊತೆ ಶೃತಿ ವಿವಾಹವಾಗಿತ್ತು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಸಂಸಾರದಲ್ಲಿ ಬಿರುಗಾಳಿ ಎದ್ದಿತ್ತು. ಆರೋಪಿ ಪವನ್ ಕಲ್ಯಾಣ್ ಮತ್ತು ಆತನ ಕುಟುಂಬದವರು ವರದಕ್ಷಿಣೆಗಾಗಿ ಶೃತಿಗೆ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂಬ ಆರೋಪಿಸಲಾಗಿತ್ತು. ಈ ವಿಚಾರಕ್ಕೆ ಜಗಳವೂ ಆಗಿದೆ. ಈ ಹಿಂದೆ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಮಾಡಲಾಗಿತ್ತು. ಆದರೂ ಕಿರುಕುಳ ನಿಂತಿರಲಿಲ್ಲ. ಇದೀಗ ನೇಣು ಬಿಗಿದ ಸ್ಥಿತಿಯಲ್ಲಿ ಶೃತಿಯ ಶವ ಪತ್ತೆಯಾಗಿದೆ.
ಅಳಿಯನ ವಿರುದ್ಧ ಶೃತಿ ಪೋಷಕರು ಆಕ್ರೋಶ
ಇದು ಆತ್ಮಹತ್ಯೆಯಲ್ಲ, ಪತಿಯೇ ಕುತ್ತಿಗೆ ಬಿಗಿದು ಕೊಲೆ ಮಾಡಿ, ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ನೇಣು ಹಾಕಿದ್ದಾನೆ ಅನ್ನೊದು ಶೃತಿ ಪೋಷಕರ ಆಕ್ರೋಶ. ಸದ್ಯ ಯಲಹಂಕ ನ್ಯೂಟೌನ್ ಪೊಲೀಸರು ಮೃತಳ ಕುಟುಂಬ ನೀಡಿದ ದೂರಿನ ಅನ್ವಯ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ಪತಿ ಪವನ್ ಕಲ್ಯಾಣ್ನನ್ನು ಬಂಧಿಸಿದ್ದಾರೆ.
ಇದೆಲ್ಲಾ ನಡೆದ ಬಳಿಕ ಇಂದು ಆಸ್ಪತ್ರೆಯ ಮುಂಭಾಗದಲ್ಲಿ ಶೃತಿ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ರಸ್ತೆಯ ಮೇಲೆ ಬಿದ್ದು ಹೊರಳಾಡುತ್ತಾ, “ನಮ್ಮ ಮಗಳನ್ನು ಕೊಂದವರಿಗೆ ಶಿಕ್ಷೆಯಾಗಲಿ, ನಮಗೆ ನ್ಯಾಯ ಬೇಕು” ಎಂದು ಗೋಳಾಡಿದ್ದಾರೆ. ಹೆತ್ತವರ ಆಕ್ರಂದನ ಎಂತವರಿಗೂ ಕಣ್ಣೀರು ತರಿಸುತ್ತದೆ. ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನಷ್ಟು ಸ್ಪಷ್ಟವಾಗಲಿದೆ. ಆದರೆ ವರದಕ್ಷಿಣೆ ಎಂಬ ಪಿಡುಗಿಗೆ ಮತ್ತೊಂದು ಜೀವವನ್ನು ಬಲಿ ಪಡೆದಿರುವುದು ಮಾತ್ರ ದುರದೃಷ್ಟಕರ.
ಮದುವೆ ಮಾಡಿಕೊಂಡಿರುವವರು ಒಟ್ಟಿಗೆ ಬದುಕಿ, ಇಲ್ಲವಾದರೆ ಬೇರೆಯಾಗಿ ಬದುಕಿ. ಇಲ್ಲಿ ಮುಖ್ಯವಾಗಿರುವುದು ಬದುಕುವುದೇ ವಿನಃ ಕೊಲ್ಲುವುದಲ್ಲ. ಜೊತೆಗೆ ಸಾಯುವುದು ಅಲ್ಲ. ಸದ್ಯ ಶೃತಿ ಕೇಸ್ನಲ್ಲಿ ಪತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದು ತನಿಖೆ ಮುಂದುವರೆಸಿದ್ದಾರೆ.
‘ಧುರಂಧರ್’ (Dhurandhar) ಬಾಕ್ಸ್ ಆಫೀಸ್ ಅನ್ನು ಧೂಳಿಪಟ ಮಾಡಿದ ಸಿನಿಮಾ. 2025ರಲ್ಲಿ ಬಿಡುಗಡೆ ಆದ ಈ ಸಿನಿಮಾ ನಿರ್ದೇಶಿಸಿದ್ದು ಆದಿತ್ಯ ಧರ್. ‘ಧುರಂಧರ್’ ಅಂಥಹಾ ಬ್ಲಾಕ್ ಬಸ್ಟರ್ ಸಿನಿಮಾ ನಿರ್ದೇಶಿಸುವುದಕ್ಕೆ ಮುಂಚೆ ಆದಿತ್ಯ ನಿರ್ದೇಶಿಸಿದ್ದು ಕೇವಲ ಒಂದೇ ಒಂದು ಸಿನಿಮಾ, ಅದೂ ಸಹ ಬ್ಲಾಕ್ ಬಸ್ಟರ್ ಆಗಿತ್ತು. ಅದುವೇ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’. ಆದರೆ ಎರಡು ಸೂಪರ್ ಹಿಟ್ ಸಿನಿಮಾ ನೀಡಿ, ಇದೀಗ ‘ಧುರಂಧರ್ 2’ ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ನೀಡಲು ಸಜ್ಜಾಗಿರುವ ಆದಿತ್ಯ ಧರ್, ಚಿತ್ರರಂಗಕ್ಕೆ ಬಂದಿದ್ದೇ ಆಕಸ್ಮಿಕ. ಅಸಲಿಗೆ ಅವರ ಕನಸು ಕ್ರಿಕೆಟರ್ ಆಗಬೇಕು ಎಂದಾಗಿತ್ತು.
ಆದಿತ್ಯ ಧರ್, ಮೂಲತಃ ಕಶ್ಮೀರಿ ಪಂಡಿತ್. ಎಳವೆಯಲ್ಲಿ ಡಿಸ್ಲೆಕ್ಸಿಯಾದಿಂದ ಬಳಲುತ್ತಿದ್ದ ಆದಿತ್ಯಗೆ ವಿದ್ಯೆ ಸುಲಭವಾಗಿ ತಲೆಗೆ ಹತ್ತುತ್ತಿರಲಿಲ್ಲ. ಆದರೆ ಬಳಿಕ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಆದಿತ್ಯ, ಕ್ರಿಕೆಟರ್ ಆಗಬೇಕೆಂಬ ಕನಸು ಕಂಡಿದ್ದರು. ಆದಿತ್ಯ ಅವರು ಕ್ರಿಕೆಟ್ ಕೋಚಿಂಗ್ ಸಹ ಪಡೆದುಕೊಂಡಿದ್ದರು. ಭಾರತದ ಪರವಾಗಿ ಕ್ರಿಕೆಟ್ ಆಡಬೇಕು ಎಂಬ ಕನಸು ಹೊತ್ತು ಅಂಡರ್ 19ಗೆ ಟ್ರಯಲ್ಸ್ ಸಹ ನೀಡಿದ್ದರು. ಆದರೆ ಅವರೇ ಹೇಳಿಕೊಂಡಿರುವ ಪ್ರಕಾರ, ಕೆಲ ರಾಜಕೀಯದ ಕಾರಣಕ್ಕೆ ಅವರಿಗೆ ಭಾರತದ ಅಂಡರ್ 19 ತಂಡದಲ್ಲಿ ಸ್ಥಾನ ಸಿಗಲಿಲ್ಲವಂತೆ. ಅದೇ ಬೇಸರದಲ್ಲಿ ಅವರು ಕ್ರಿಕೆಟಿನಿಂದಲೇ ದೂರಾಗಿಬಿಟ್ಟರು.
ಆದರೆ ಆದಿತ್ಯ ಅವರ ಜೀವನ ಬದಲಾಗಿದ್ದು 1993 ರಲ್ಲಿ ಬಿಡುಗಡೆ ಆದ ‘ಗರ್ದಿಶ್’ ಸಿನಿಮಾ ಮೂಲಕ. ಜಾಕಿ ಶ್ರಾಫ್ ನಟಿಸಿ ಪ್ರಿಯದರ್ಶನ್ ನಿರ್ದೇಶನ ಮಾಡಿದ್ದ ‘ಗರ್ದಿಶ್’ ಸಿನಿಮಾ ನೋಡಿ ಬಹಳ ಪ್ರಭಾವಕ್ಕೆ ಒಳಗಾದ ಆದಿತ್ಯ ಧರ್, ತಾನು ಆದರೆ ಸಿನಿಮಾ ನಿರ್ದೇಶಕನೇ ಆಗಬೇಕು, ಎಂದು ನಿರ್ಣಯಿಸಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಿರ್ದೇಶಕ ಪ್ರಿಯದರ್ಶನ್ ಅವರ ಬಳಿ ಸಹಾಯಕ ನಿರದೇಶಕನಾಗಿ ಸೇರಿಕೊಂಡರು. ಆರಂಭದಲ್ಲಿ ಕೆಲವು ಕತೆಗಳನ್ನು ಸಹ ಬರೆದರು ಆದರೆ ಅಲ್ಲಿಯೂ ಅವರು ಕೆಲವು ಅನ್ಯಾಯಗಳನ್ನು ಎದುರಿಸಬೇಕಾಯ್ತು. ನಿರ್ದೇಶಕ ಪ್ರಿಯದರ್ಶನ್ ಹೇಳಿರುವಂತೆ ಆರಂಭದಲ್ಲಿ ಅವರ ಕತೆಗಳನ್ನು ಬೇರೆಯವರು ಕದ್ದು ಬಿಟ್ಟರಂತೆ. ಅವರು ಮಾಡಿದ ಕೆಲಸಕ್ಕೆ ಅವರಿಗೆ ಗುರುತು ಸಹ ನೀಡುತ್ತಿರಲಿಲ್ಲವಂತೆ.
ಆದರೆ ಪ್ರಿಯದರ್ಶನ್ ಅವರ ಬಳಿ ಮಾಡಿದ ಕೆಲಸದಿಂದ ಅವರಿಗೆ ಗುರುತು ಸಿಕ್ಕಿತು. ಪ್ರಿಯದರ್ಶನ್ ಅವರ ಸಿನಿಮಾಗಳಿಗೆ ಸಂಭಾಷಣೆಗಳನ್ನು ಬರೆದರು. ಪ್ರಿಯದರ್ಶನ್ ಅವರೇ ಸಂದರ್ಶನದಲ್ಲಿ ಹೇಳಿರುವಂತೆ ಆದಿತ್ಯ ಬಹಳ ಒಳ್ಳೆಯ ಬರಹಗಾರ ಆಗಿದ್ದರು, ನನ್ನ ಸಿನಿಮಾಗಳಿಗೆ ಒಳ್ಳೆಯ ಸಂಭಾಷಣೆಗಳನ್ನು ಬರೆದುಕೊಡುತ್ತಿದ್ದರು ಎಂದಿದ್ದಾರೆ.
ಆದಿತ್ಯ ಧರ್ ಅವರು ಮೊದಲು ನಿರ್ದೇಶಕನಾಗಲು ಬೆಂಬಲ ನೀಡಿದ್ದು ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್. ಆದಿತ್ಯ ಧರ್ ‘ರಾತ್ ಬಾಕಿ’ ಹೆಸರಿನ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದರು. ಅದಕ್ಕೆ ನಿರ್ಮಾಪಕ ಆಗಿದ್ದು ಕರಣ್ ಜೋಹರ್. ಸಿನಿಮಾನಲ್ಲಿ ಕತ್ರಿನಾ ಕೈಫ್ ನಾಯಕಿ, ಪಾಕಿಸ್ತಾನಿ ನಟ ಫಹಾದ್ ಖಾನ್ ನಾಯಕ. ಆದರೆ ಅದೇ ಸಮಯದಲ್ಲಿ ಉರಿ ದಾಳಿ ನಡೆಯಿತು. ಪಾಕಿಸ್ತಾನಿ ನಟರನ್ನು ಕೈಬಿಡಬೇಕೆಂಬ ಒತ್ತಾಯ ಕರಣ್ ಮೇಲೆ ಬಂತು. ಇದೇ ಆದಿತ್ಯ ನಿರ್ದೇಶಿಸಬೇಖಿದ್ದ ‘ರಾತ್ ಬಾಕಿ’ ಸಿನಿಮಾ ನಿಂತೇ ಹೋಯ್ತು.
ಆದರೆ ಇದರಿಂದ ಎದೆಗುಂದದೆ ಸ್ಪೂರ್ತಿಯನ್ನೇ ಪಡೆದ ಆದಿತ್ಯ ಧರ್, ‘ಉರಿ’ ದಾಳಿ ಹಾಗೂ ಅದರ ಬಳಿಕ ಭಾರತೀಯ ಸೇನೆ ಮಾಡಿದ ಸರ್ಜಿಕಲ್ ಸ್ಟ್ರೈಕ್ ಅನ್ನೇ ವಸ್ತುವಾಗಿ ಇರಿಸಿಕೊಂಡು ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ಮಾಡಿದರು. ‘ಉರಿ’ ಸಿನಿಮಾಕ್ಕೆ ವಿಕ್ಕಿ ಕೌಶಲ್ ಅನ್ನು ನಾಯಕನಾಗಿ ಆಯ್ಕೆ ಮಾಡಿಕೊಂಡಾಗಲೂ ಆದಿತ್ಯ ಅವರನ್ನು ಟೀಕಿಸಿದವರೇ ಹೆಚ್ಚು. ಏಕೆಂದರೆ ಆಗ ವಿಕ್ಕಿ ಕೌಶಲ್ ಕಮರ್ಶಿಯಲ್ ನಾಯಕ ಎನಿಸಿಕೊಂಡಿರಲಿಲ್ಲ. ಆದರೆ ಆದಿತ್ಯಗೆ ವಿಕ್ಕಿ ಮೇಲೆ ನಂಬಿಕೆ ಇಟ್ಟು ಪಾತ್ರ ಕೊಟ್ಟರು, ಆ ಪಾತ್ರಕ್ಕೆ ವಿಕ್ಕಿ ಜೀವ ತುಂಬಿದರು. ನಂತರದ್ದು ಇತಿಹಾಸ.
‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಆದರೆ ಅದಾದ ಬಳಿಕ ಕೆಲವು ಸಿನಿಮಾಗಳಿಗೆ ಕತೆ ಬರೆದು ಸಿನಿಮಾ ಸಹ ನಿರ್ಮಾಣ ಮಾಡಿದ ಆದಿತ್ಯ, ಆರು ವರ್ಷಗಳ ಬಳಿಕ ‘ಧುರಂಧರ್’ ಸಿನಿಮಾ ಮಾಡಿದರು. ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಇದೀಗ ಅದೇ ಸಿನಿಮಾದ ಸೀಕ್ವೆಲ್ ‘ಧುರಂಧರ್ 2’ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾ ಇದೇ ಮಾರ್ಚ್ 19ರಂದು ಬಿಡುಗಡೆ ಆಗಲಿದ್ದು, ಬಾಕ್ಸ್ ಆಫೀಸ್ ಚಿಂದಿ ಆಗುವುದು ಪಕ್ಕಾ ಎನ್ನಲಾಗುತ್ತಿದೆ.
ಕೊಲ್ಲಂ, ಮಾರ್ಚ್ 15: ಕೇರಳದ ಕೊಲ್ಲಂ ಜಿಲ್ಲೆಯ ಕರುಣಗಪ್ಪಲ್ಲಿ ಪ್ರದೇಶದಲ್ಲಿ ಹಾಡಹಗಲೇ ಗ್ಯಾಂಗ್ಸ್ಟರ್ ಅಲುವಾ ಅತುಲ್ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಈ ಪ್ರದೇಶದಲ್ಲಿ ಗ್ಯಾಂಗ್ ವಾರ್ ನಡೆಯುವ ಸಾಧ್ಯತೆಯ ಬಗ್ಗೆ ಹೊಸ ಕಳವಳ ವ್ಯಕ್ತವಾಗಿದೆ.2025 ರಲ್ಲಿ ನಡೆದ ಗ್ಯಾಂಗ್ ಲೀಡರ್ ಜಿಮ್ ಸಂತೋಷ್ ಹತ್ಯೆಯಲ್ಲಿ ಪ್ರಮುಖ ಆರೋಪಿಯಾಗಿದ್ದ ಅಲುವಾ ಅತುಲ್ ಇತ್ತೀಚೆಗೆ ಜಾಮೀನು ಪಡೆದಿದ್ದ.ಅತುಲ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಐದು ಜನರ ಗುಂಪು ಉದ್ದೇಶಪೂರ್ವಕವಾಗಿ ಆತನ ವಾಹನಕ್ಕೆ ತಮ್ಮ ವಾಹನ ಡಿಕ್ಕಿ ಹೊಡೆಸಿ, ಅಪಘಾತ ಮಾಡಿದಿ, ಬಳಿಕ ಕಾರನ್ನು ಸುತ್ತುವರೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.