ಸಂಬಲ್ಪುರ, ಮಾರ್ಚ್ 15: ಇಬ್ಬರು ಅಪ್ರಾಪ್ತ ಮಕ್ಕಳನ್ನು ಬಾವಿಗೆ ತಳ್ಳಿ ಮಹಿಳೆ ತಾನೂ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟಮೆ ಒಡಿಶಾದ ಸಂಬಲ್ಪುರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಜಿಲ್ಲೆಯ ಬಮ್ರಾ ಬ್ಲಾಕ್ನ ಮಹುಲಿಪಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಗಿದಿಹಿ ಗ್ರಾಮದ ನಿವಾಸಿ ಸಂಜು ಮಡ್ಕಿ ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಸಂಜು ಮಡ್ಕಿ ಶುಕ್ರವಾರ ತನ್ನ ಇಬ್ಬರು ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳನ್ನು ಬಾವಿಗೆ ಎಸೆದು ಕೊಂದಿದ್ದಾಳೆ ಎನ್ನಲಾಗಿದೆ. ನಂತರ ಪೊಲೀಸರು ಈ ಅಪರಾಧವನ್ನು ಮಕ್ಕಳ ತಾಯಿಯೇ ಮಾಡಿದ್ದಾರೆ ದೃಢಪಡಿಸಿದ್ದಾರೆ.
ಘಟನೆಯ ನಂತರ, ಮಹಿಳೆ ಗ್ರಾಮದಿಂದ ಪರಾರಿಯಾಗಿದ್ದಾಳೆಂದು ವರದಿಯಾಗಿದೆ, ಇದರಿಂದಾಗಿ ಪೊಲೀಸರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಮಹಿಳೆಯ ಪತಿ ಮಹುಲಿಪಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ತನಿಖೆ ಪ್ರಾರಂಭವಾಯಿತು.
ಘಟನೆಯ ಕುರಿತು ಮಾತನಾಡಿದ ಕುಚಿಂಡಾದ ಎಸ್ಡಿಪಿಒ ಪ್ರದೀಪ್ ಕುಮಾರ್ ದಾಶ್, ದೂರು ದಾಖಲಾದ ಕೂಡಲೇ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದರು ಎಂದು ಹೇಳಿದರು. ಶನಿವಾರ ಬೆಳಗ್ಗೆ, ಸಂಜು ಮಡ್ಕಿ ಮತ್ತೊಂದು ಹಳ್ಳಿಯ ಒಂದು ನುಲ್ಲಾ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಪೊಲೀಸರು ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ತಲುಪಿ, ಶವವನ್ನು ವಶಪಡಿಸಿಕೊಂಡರು ಮತ್ತು ದುರಂತ ಘಟನೆಗೆ ಕಾರಣವಾದ ನಿಖರವಾದ ಸಂದರ್ಭಗಳನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಬೆಂಗಳೂರು, ಮಾರ್ಚ್ 15: ನಗರದ ರೆಸಾರ್ಟ್ನಲ್ಲಿ ತಂಗಿರುವ ಒಡಿಶಾ ಶಾಸಕರನ್ನು ಅಪರಿಚಿತ ವ್ಯಕ್ತಿಗಳು ಖರೀದಿಸಲು ಪ್ರಯತ್ನಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಮಾಹಿತಿ ನೀಡಿದ್ದಾರೆ. ರಾಜ್ಯಸಭಾ ಚುನಾವಣೆಗೆ ಮುನ್ನ ನಡೆದ ಈ ಘಟನೆಯಲ್ಲಿ ಶಾಸಕರಿಗೆ ಐದು ಕೋಟಿ ರೂಪಾಯಿ ಮತ್ತು ಖಾಲಿ ಚೆಕ್ಗಳ ಆಮಿಷ ಒಡ್ಡಲಾಗಿತ್ತು. ಬೈತರಾಯನಪುರದ ಸುರೇಶ್ ಎಂಬುವರ ಸಹಾಯದಿಂದ ಆನ್ಲೈನ್ನಲ್ಲಿ ರೆಸಾರ್ಟ್ನಲ್ಲಿ ಕೊಠಡಿ ಕಾಯ್ದಿರಿಸಿ ಈ ವ್ಯಕ್ತಿಗಳು ಶಾಸಕರನ್ನು ಭೇಟಿ ಮಾಡಿದ್ದರು. ಶಾಸಕರು ಈ ಪ್ರಸ್ತಾಪವನ್ನು ತಿರಸ್ಕರಿಸಿ ಪಕ್ಷಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಕಾಂಗ್ರೆಸ್ ಮುಖಂಡರು ನಾಲ್ವರಲ್ಲಿ ಇಬ್ಬರನ್ನು ಹಿಡಿದಿದ್ದು, ಉಳಿದ ಇಬ್ಬರು ಪರಾರಿಯಾಗಿದ್ದಾರೆ. ಸಿಕ್ಕಿಬಿದ್ದ ವ್ಯಕ್ತಿಗಳು ತಮ್ಮ ಉದ್ದೇಶವನ್ನು ಒಪ್ಪಿಕೊಂಡಿದ್ದು, ಅವರ ವಿರುದ್ಧ ಕಾನೂನು ಕ್ರಮಕ್ಕೆ ದೂರು ದಾಖಲಿಸಲಾಗಿದೆ ಎಂದು ಡಿಕೆಶಿ ತಿಳಿಸಿದ್ದಾರೆ.
ದಾವಣಗೆರೆ, ಮಾರ್ಚ್ 15: ದಾವಣಗೆರೆಯಲ್ಲಿ ನಡೆದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ವಿಚ್ಛೇದನಕ್ಕಾಗಿ ಬಂದಿದ್ದ 37 ದಂಪತಿಗಳು ಪರಸ್ಪರ ಹಾರ ಬದಲಿಸಿಕೊಂಡು ಮತ್ತೆ ಒಂದಾಗಿ ಬಾಳಲು ನಿರ್ಧಾರ ಮಾಡಿದ್ದಾರೆ. ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ ಆಯೋಜಿಸಲಾದ ಈ ಮಹತ್ವದ ವಿದ್ಯಮಾನಕ್ಕೆ ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಡಿ.ಕೆ.ವೇಲಾ ಅವರು ಶುಭ ಹಾರೈಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನ್ಯಾಯಾಂಗ ಅಧಿಕಾರಿಯೊಬ್ಬರು, ಈ ಜಿಲ್ಲೆಯಲ್ಲಿ ನಡೆದಿರುವ ಎಲ್ಲಾ ರಾಷ್ಟ್ರೀಯ ಲೋಕ ಅದಾಲತ್ಗಳ ಜವಾಬ್ದಾರಿಯನ್ನು ನಿಭಾಯಿಸಿ, ಅಂದಾಜು 500 ವ್ಯಾಜ್ಯಪೂರ್ವ ಪ್ರಕರಣಗಳನ್ನು ಬಗೆಹರಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ನವದೆಹಲಿ, ಮಾರ್ಚ್ 15: ಎಲ್ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆಗೆ ಅಭಾವ ಆಗಿದೆಯೋ ಇಲ್ಲವೋ ಬೇರೆ ವಿಚಾರ, ಜನಸಾಮಾನ್ಯರಲ್ಲಿ ಎಲ್ಪಿಜಿಗೆ (LPG) ಹಾಹಾಕಾರ ಮಾಡುತ್ತಿರುವಂತಹ ಪರಿಸ್ಥಿತಿ ಇದೆ. ಗ್ಯಾಸ್ ಬುಕಿಂಗ್ಗೆ ಜನರು ಮುಗಿಬಿದ್ದಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ, ಪ್ಲೇಸ್ಟೋರ್ನಲ್ಲಿ ಇಂಡಿಯನ್ ಆಯಿಲ್ನ ಒನ್ ಆ್ಯಪ್ (Indian Oil’s One) ನಂಬರ್ ಒನ್ ಎನಿಸಿದೆ. ಚ್ಯಾಟ್ಜಿಪಿಟಿ ಇತ್ಯಾದಿ ಸ್ಟಾರ್ ಆ್ಯಪ್ಗಳನ್ನು ಇದು ಹಿಂದಿಕ್ಕಿದೆ.
ಒನ್ ಆ್ಯಪ್ನಲ್ಲಿ ಇಂಡೇನ್ ಗ್ರಾಹಕರು ಎಲ್ಪಿಜಿ ಬುಕಿಂಗ್ ಸೇರಿದಂತೆ ಹಲವಾರು ಕಾರ್ಯಗಳನ್ನು ಮಾಡಬಹುದು. ಹೊಸ ಎಲ್ಪಿಜಿ ಕನೆಕ್ಷನ್, ಏಜೆನ್ಸಿ ಬದಲಾವಣೆ, ಗ್ಯಾಸ್ ಬುಕಿಂಗ್ ಇತ್ಯಾದಿ ಕೆಲಸಗಳನ್ನು ಈ ಒನ್ ಆ್ಯಪ್ನಲ್ಲಿ ಮಾಡಲು ಅವಕಾಶ ಇರುತ್ತದೆ.
ಎಕ್ಸ್ ಬಳಕೆದಾರರೊಬ್ಬರು ಇಂಡಿಯನ್ ಆಯಿಲ್ನ ಈ ಒನ್ ಆ್ಯಪ್ ಟಾಪ್ ಚಾರ್ಟ್ಸ್ನಲ್ಲಿ ನಂಬರ್ ಒನ್ ಆಗಿರುವುದನ್ನು ತಮ್ಮ ಟ್ವೀಟ್ವೊಂದರಲ್ಲಿ ಎತ್ತಿತೋರಿಸಿದ್ದಾರೆ. ನೀವು ಈ ಆ್ಯಪ್ ಈಗ ಡೌನ್ಲೋಡ್ ಮಾಡಿ ಓಪನ್ ಮಾಡಿದಾಗ ಕೆಲ ಫೀಚರ್ಗಳು ಕೆಲಸ ಮಾಡುವುದಿಲ್ಲ. ಹೊಸದಾಗಿ ರಿಜಿಸ್ಟರ್ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಿಢೀರನೇ ಈ ಆ್ಯಪ್ ಗಣನೀಯ ಸಂಖ್ಯೆಯಲ್ಲಿ ಡೌನ್ಲೋಡ್ ಆಗಿರುವುದು ಇದಕ್ಕೆ ಕಾರಣ.
ಎಕ್ಸ್ ಪೋಸ್ಟ್
imagine being on the tech team at indian oil today.
ಚ್ಯಾಟ್ಜಿಪಿ, ಸ್ಟೋರಿ ಟಿವಿ, ಫ್ರೀರೀಲ್ಸ್, ಮೀಶೋ, ಫ್ಲಿಪ್ಕಾರ್ಟ್, ಜಿಯೋಹಾಟ್ಸ್ಟಾರ್ ಇತ್ಯಾದಿ ಆ್ಯಪ್ಗಳನ್ನು ಮೀರಿಸಿ, ಇಂಡಿಯನ್ ಆಯಿಲ್ ಒನ್ ಆ್ಯಪ್ ಅತಿಹೆಚ್ಚು ಡೌನ್ಲೋಡ್ ಆದ ಆ್ಯಪ್ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.
ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬುಕಿಂಗ್ ಮಾಡಲು ಒನ್ ಆ್ಯಪ್ ಬಳಸುವುದು ಅನಿವಾರ್ಯವೇನಲ್ಲ. ನಿಮ್ಮ ಗ್ಯಾಸ್ ಏಜೆನ್ಸಿಯ ಗ್ಯಾಸ್ ಬುಕಿಂಗ್ ನಂಬರ್ ಮೂಲಕವೇ ಸಿಲಿಂಡರ್ ಬುಕಿಂಗ್ ಮಾಡಬಹುದು. ಮೊದಲೆಲ್ಲಾ 1-3 ದಿನದೊಳಗೆ ಸಿಲಿಂಡರ್ ಸಿಗುತ್ತಿತ್ತು. ಈಗ ಸ್ವಲ್ಪ ವಿಳಂಬವಾಗಬಹುದು.
ಇಂಡೇನ್ ಬಳಕೆದಾರರು ವಾಟ್ಸಾಪ್ ಮೂಲಕವೂ ಗ್ಯಾಸ್ ಬುಕಿಂಗ್ ಮಾಡಬಹುದು. 7588888824 ನಂಬರ್ ಅನ್ನು ಮೊದಲು ತಮ್ಮ ಫೋನ್ಗೆ ಸೇವ್ ಮಾಡಿಕೊಳ್ಳಬೇಕು. ಇಂಡೇನ್ ಕನೆಕ್ಷನ್ ಹೊಂದಿರುವ ನೊಂದಾಯಿತ ಮೊಬೈಲ್ ನಂಬರ್ನಲ್ಲಿ ವಾಟ್ಸಾಪ್ ಓಪನ್ ಮಾಡಿ ಮೇಲಿನ ನಂಬರ್ಗೆ REFILL ಎನ್ನುವ ಮೆಸೇಜ್ ಕಳುಹಿಸಬೇಕು. ನಿಮ್ಮ ನೊಂದಾಯಿತ ಮೊಬೈಲ್ ನಂಬರ್ನ ವಿವರಗಳನ್ನು ಪರಿಶೀಲಿಸಲಾಗುತ್ತದೆ. ಅದು ಖಚಿತಗೊಂಡ ಬಳಿಕ ಎಲ್ಪಿಜಿ ಬುಕಿಂಗ್ ಮನವಿ ಸ್ವೀಕರಿಸಲಾಗುತ್ತದೆ.
ಗೂರ್ಖಾ, ಮಾರ್ಚ್ 15: ನೇಪಾಳ(Nepal)ದಲ್ಲಿ ಮನಕಾಮನಾ ದೇವಸ್ಥಾನದಿಂದ ಹಿಂದಿರುಗುವಾಗ ಭಾರತೀಯರಿದ್ದ ಬಸ್ ರಸ್ತೆಯಿಂದ ಇಳಿಜಾರಿನ ಪ್ರದೇಶಕ್ಕೆ ಉರುಳಿಬಿದ್ದ ಪರಿಣಾಮ 7 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ನೇಪಾಳದಗೂರ್ಖಾದ ಶಾಹಿದ್ ಲಖನ್ ಗ್ರಾಮೀಣ ಪುರಸಭೆ -3 ರ ಕಾಂಟಾರ್ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಮನಕಾಮನಾದಿಂದ ಮಜುವಾ ಕಡೆಗೆ ಬರುತ್ತಿದ್ದ ಮೈಕ್ರೋಬಸ್ (ಬಾಗ್ಮತಿ ಪ್ರಾಂತ್ಯ 006 ಖಾ 8430) ರಸ್ತೆಯಿಂದ ಸುಮಾರು 200 ಮೀಟರ್ ದೂರಕ್ಕೆ ಉರುಳಿಬಿದ್ದಿದೆ. ಬಸ್ಸಿನಲ್ಲಿ 16 ಜನರಿದ್ದರು.
ಮನಕಾಮನಾ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದ ಎಲೆಕ್ಟ್ರಿಕ್ (ಇವಿ) ಮೈಕ್ರೋಬಸ್ ಅಪಘಾತಕ್ಕೀಡಾದ ಪರಿಣಾಮ ಏಳು ಜನರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಭಾರತೀಯರು ಎನ್ನುವ ಮಾಹಿತಿ ಲಭ್ಯವಾಗಿದೆ.
ಪೊಲೀಸರ ಪ್ರಕಾರ, 7 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತು ಉಳಿದ 7 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಕ್ಷಿಸಿ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿದೆ. ಚಾಲಕ ಮತ್ತು ಸಹ-ಚಾಲಕನನ್ನು ಹೊರತುಪಡಿಸಿ, ಎಲ್ಲಾ ಪ್ರಯಾಣಿಕರು ಭಾರತೀಯ ನಾಗರಿಕರಾಗಿದ್ದರು, ಅವರು ಮನಕಾಮನಾ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದರು.
ಪೊಲೀಸರು, ಸ್ಥಳೀಯರು ಮತ್ತು ರಕ್ಷಣಾ ತಂಡಗಳ ಸಹಾಯದಿಂದ ಗಾಯಾಳುಗಳು ಮತ್ತು ಶವಗಳನ್ನು ಹೊರತೆಗೆಯಲಾಗಿದೆ. ಅಪಘಾತದ ಕಾರಣ ತನಿಖೆಯಲ್ಲಿದೆ. ಈ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರ ವಾಹನಗಳು ಇರುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ಒತ್ತಾಯಿಸಿದ್ದಾರೆ.
16 ಭಕ್ತರನ್ನು ಹೊತ್ತೊಯ್ಯುತ್ತಿದ್ದ ಎಲೆಕ್ಟ್ರಿಕ್ ಮೈಕ್ರೋಬಸ್, ಮನಕಾಮನಾ ದೇವಸ್ಥಾನದಿಂದ ಹಿಂತಿರುಗುತ್ತಿದ್ದಾಗ ರಸ್ತೆಯಿಂದ ಹೊರಟು ಸುಮಾರು 200 ಮೀಟರ್ ಇಳಿಜಾರಿನಲ್ಲಿ ಉರುಳಿ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭರತ್ ಬಹದ್ದೂರ್ ಬಿಕೆ ಪ್ರಕಾರ, ಬಲಿಯಾದವರನ್ನು ಮುತ್ತುಕುಮಾರ್ (58), ಅನಾಮಾಲಿಕ್ (58), ಮೀನಾಕ್ಷಿ (59), ಶಿವಗಾಮಿ (53), ವಿಜಯಲ್ (57), ಮೀನಾ (58) ಮತ್ತು ತಮಿಳರಸಿ (60) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಎಲೆಕ್ಟ್ರಿಕ್ ಬಸ್ಸಿನ ಚಾಲಕ ಯಾವುದೇ ಹಾನಿಯಾಗದಂತೆ ಪಾರಾಗಿದ್ದು, ಅವರ ಸಹಾಯಕ ಗಾಯಗೊಂಡಿದ್ದಾರೆ ಎಂದು ದಿ ಹಿಮಾಲಯನ್ ಟೈಮ್ಸ್ ವರದಿ ಮಾಡಿದೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜೋಗಿ ಪ್ರೇಮ್ (Jogi Prem) ನಿರ್ದೇಶನ ಮಾಡಿರುವ ‘ಕೆಡಿ’ ಚಿತ್ರದಿಂದ ಹೊಸ ಹಾಡನ್ನು ರಿಲೀಸ್ ಮಾಡಲಾಗಿದೆ. ಈ ಕಾರ್ಯಕ್ರಮದ ನಿರೂಪಣೆಯನ್ನು ಅನುಶ್ರೀ ಮಾಡಿದ್ದಾರೆ. ಈ ವೇಳೆ ವೇದಿಕೆಗೆ ಬಂದ ಪ್ರೇಮ್ ಅವರು ಅನುಶ್ರೀ ಬಳಿ ಕೈ ಮುಗಿದು ಕ್ಷಮೆ ಕೇಳಿದರು. ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ತಿಳಿಸಿದರು. ‘ಅನುಶ್ರೀ ಅವರ ಮದುವೆಗೆ ನಾನು ಹೋಗಿರಲಿಲ್ಲ. ಅದಕ್ಕೆ ಇಲ್ಲಿಯೇ ಕ್ಷಮೆ ಕೇಳುತ್ತೇನೆ. ದಯವಿಟ್ಟು ಕ್ಷಮೆ ಇರಲಿ’ ಎಂದು ಪ್ರೇಮ್ ಹೇಳಿದರು. ಆ ಮಾತಿಗೆ ಅನುಶ್ರೀ (Anushree) ನಕ್ಕರು. ಅನುಶ್ರೀ ಮತ್ತು ಪ್ರೇಮ್ ಅವರ ನಡುವೆ ಹಲವು ವರ್ಷಗಳಿಂದ ಒಡನಾಟ ಇದೆ. ಆದರೂ ಕೂಡ ಮದುವೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಸದ್ಯ ‘ಕೆಡಿ’ ಸಿನಿಮಾದ ಪ್ರಚಾರ ಕಾರ್ಯಕ್ಕೆ ಚುರುಕು ಮುಟ್ಟಿಸಲಾಗಿದೆ. ಧ್ರುವ ಸರ್ಜಾ, ಸಂಜಯ್ ದತ್, ಶಿಲ್ಪಾ ಶೆಟ್ಟಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಬೆಂಗಳೂರು, ಮಾರ್ಚ್ 15: ಬೆಂಗಳೂರಿನಲ್ಲಿ (Bangalore) ಜೀವನ ನಿರ್ವಹಣೆ ವೆಚ್ಚ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂಬುದನ್ನು ತೋರಿಸುವ ಒಂದು ಸಾಮಾಜಿಕ ಮಾಧ್ಯಮ ಪೋಸ್ಟ್ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ತಿಂಗಳಿಗೆ 1.5 ಲಕ್ಷ ರೂ. ಸಂಬಳ ಪಡೆದರೂ ತಿಂಗಳ ಕೊನೆಯಲ್ಲಿ ಕೇವಲ 15 ರಿಂದ 20 ಸಾವಿರ ರೂ. ಮಾತ್ರ ಉಳಿಯುತ್ತದೆ ಎಂಬ ಟೆಕ್ಕಿಯೊಬ್ಬರ ಅನುಭವವನ್ನು ಅವರ ಸೋದರ ಸಂಬಂಧಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ನೆಟ್ಟಿಗರ ಗಮನ ಸೆಳೆದಿದೆ.
@AlfinCodes ಎಂಬ ಎಕ್ಸ್ ಖಾತೆಯಲ್ಲಿ ವ್ಯಕ್ತಿಯೊಬ್ಬರು ಸೋದರಸಂಬಂಧಿಯ ಅನುಭವವನ್ನು ವಿವರಿಸಿದ್ದಾರೆ. ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿರುವ ಆತ ಸಾಫ್ಟ್ವೇರ್ ಡೆವಲಪರ್ ಆಗಿ ಉತ್ತಮ ಅವಕಾಶ ದೊರೆತು ತಿಂಗಳಿಗೆ 1.5 ಲಕ್ಷ ಸಂಬಳದ ಕೆಲಸಕ್ಕೆ ಬೆಂಗಳೂರಿಗೆ ತೆರಳಿದ್ದಾನೆ. ಆರಂಭದಲ್ಲಿ ಕುಟುಂಬದವರು ದೊಡ್ಡ ನಗರ, ದೊಡ್ಡ ಸಂಬಳ ಎಂಬ ನಿರೀಕ್ಷೆಯೊಂದಿಗೆ ಅವನು ಯಶಸ್ಸು ಸಾಧಿಸಿದ್ದಾನೆ ಎಂದು ಭಾವಿಸಿದ್ದರು. ಆದರೆ, ಬೆಂಗಳೂರಿನ ನೈಜ ಪರಿಸ್ಥಿತಿ ಬೇಗನೆ ಗೊತ್ತಾಯಿತು ಎಂದು ಪೋಸ್ಟ್ನಲ್ಲಿ ವಿವರಿಸಲಾಗಿದೆ.
ಕಚೇರಿಯ ಸಮೀಪದ ಸಣ್ಣ ಅಪಾರ್ಟ್ಮೆಂಟ್ನ ಬಾಡಿಗೆಗೆ ತಿಂಗಳಿಗೆ ಸುಮಾರು 36 ಸಾವಿರ ರೂ. ಖರ್ಚಾಗುತ್ತಿತ್ತು. ಆಹಾರ ಮತ್ತು ದಿನಸಿ ವೆಚ್ಚಗಳಿಗೆ 13 ಸಾವಿರದಿಂದ 15 ಸಾವಿರ ರೂ.ವರೆಗೆ ಹೋಗುತ್ತಿತ್ತು. ನಗರದಲ್ಲಿನ ಭಾರೀ ಟ್ರಾಫಿಕ್ ಕಾರಣದಿಂದ ಕ್ಯಾಬ್ ಮತ್ತು ಆಟೋ ಪ್ರಯಾಣಕ್ಕೆ ತಿಂಗಳಿಗೆ 6 ಸಾವಿರದಿಂದ 8 ಸಾವಿರ ರೂ.ವರೆಗೆ ಖರ್ಚಾಗುತ್ತಿತ್ತು.
ಇದಕ್ಕೂ ಮೇಲಾಗಿ ಸ್ವಿಗ್ಗಿ ಆರ್ಡರ್, ಕಾಫಿ ಹಾಗೂ ವಾರಾಂತ್ಯದ ಖರ್ಚುಗಳಿಗೆ ಸುಮಾರು 10 ಸಾವಿರದಿಂದ 12 ಸಾವಿರ ರೂ.ವರೆಗೆ ವೆಚ್ಚವಾಗುತ್ತಿತ್ತು. ಇದಲ್ಲದೆ ಚಂದಾದಾರಿಕೆಗಳು, ವೈದ್ಯಕೀಯ ವೆಚ್ಚಗಳು, ಅನಿರೀಕ್ಷಿತ ಬಿಲ್ಗಳು ಹಾಗೂ ಮನೆಗೆ ಹಣ ಕಳುಹಿಸುವುದು ಸೇರಿದಂತೆ ಹಲವಾರು ಖರ್ಚುಗಳು ಕೂಡ ಸೇರಿಕೊಳ್ಳುತ್ತವೆ ಎಂದು ಎಕ್ಸ್ ಪೋಸ್ಟ್ನಲ್ಲಿ ಹೇಳಲಾಗಿದೆ. ಈ ಎಲ್ಲ ಖರ್ಚುಗಳ ಬಳಿಕ ತಿಂಗಳ ಕೊನೆಯಲ್ಲಿ ಆತನ ಬಳಿ ಉಳಿಯುತ್ತಿದ್ದದ್ದು ಕೇವಲ 15 ಸಾವಿರದಿಂದ 20 ಸಾವಿರ ರೂ. ಮಾತ್ರ ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದೆ.
ವೈರಲ್ ಆಗಿರುವ ಎಕ್ಸ್ ಪೋಸ್ಟ್
My cousin moved to Bangalore for a ₹1.5L/month tech job.
Six months later, he realised something no one tells freshers.
Computer Science graduate
First software developer job
Moved to Bengaluru for better opportunities
Salary: ₹1.5L per month
ಈ ಅನುಭವದಿಂದ ದೊಡ್ಡ ನಗರಗಳಲ್ಲಿ ಸಂಬಳದ ಅರ್ಥವೇ ಬೇರೆ ಎಂದು ಅವನಿಗೆ ತಿಳಿಯಿತು ಎಂದು ಎಕ್ಸ್ ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದೆ. ನಮ್ಮ ಊರಿನಲ್ಲಿ 1 ಲಕ್ಷ ರೂ.ಗಿಂತ ಹೆಚ್ಚು ಸಂಬಳ ಎಂದರೆ ತುಂಬಾ ದೊಡ್ಡದಾಗಿ ಕಾಣುತ್ತದೆ. ಆದರೆ ಬೆಂಗಳೂರಿನಂತಹ ನಗರದಲ್ಲಿ ಅದು ನೀವು ಜೀವನವನ್ನು ಆರಂಭಿಸುತ್ತಿದ್ದೀರಿ ಅಷ್ಟೇ ಎಂದರ್ಥ. ದೊಡ್ಡ ಸಂಬಳ, ಆದರೆ ಸಣ್ಣ ಉಳಿತಾಯ ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಬೆಂಗಳೂರಿನಲ್ಲಿ ಜೀವನ ವೆಚ್ಚ ನಿಜವಾಗಿಯೂ ದುಬಾರಿ ಎಂದು ಒಪ್ಪಿಕೊಂಡರೆ, ಇನ್ನೂ ಕೆಲವರು ಮೆಟ್ರೋ ಮಾರ್ಗದ ಬಳಿ ಅಥವಾ ಕಚೇರಿಯಿಂದ ಸ್ವಲ್ಪ ದೂರದ ಪ್ರದೇಶಗಳಲ್ಲಿ ಮನೆ ತೆಗೆದುಕೊಂಡರೆ ಬಾಡಿಗೆ ವೆಚ್ಚವನ್ನು ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದ್ದಾರೆ.
ವೈಟ್ ಬಾಲ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ ಪಾರುಪತ್ಯ ಮುಂದುವರೆದಿದೆ. ಅದು ಸಹ ಗೌತಮ್ ಗಂಭೀರ್ ಕೋಚಿಂಗ್ನಲ್ಲಿ. 2025ರಲ್ಲಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿ ಗೆದ್ದಿದ್ದ ಟೀಮ್ ಇಂಡಿಯಾ ಇದೀಗ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಈ ಎರಡು ಸಾಧನೆಗಳ ಹೊರತಾಗಿಯೂ ಗೌತಮ್ ಗಂಭೀರ್ ಅವರ ಕೋಚಿಂಗ್ ಸ್ಥಾನದ ಮೇಲೆ ತೂಗುಗತ್ತಿ ಇರುವುದು ಖಚಿತವಾಗಿದೆ. ಅಂದರೆ ಭಾರತ ಟೆಸ್ಟ್ ತಂಡದ ಕೋಚ್ ಬದಲಾಗುವ ಸಾಧ್ಯತೆಯಿದೆ.
ಜೂನ್ 2024 ರಲ್ಲಿ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅಧಿಕಾರ ವಹಿಸಿಕೊಂಡಾಗಿನಿಂದ, ಟೆಸ್ಟ್ ಕ್ರಿಕೆಟ್ನಲ್ಲಿ ಅವರ ಪ್ರದರ್ಶನವು ತೀವ್ರ ವಿಮರ್ಶೆಗೆ ಒಳಗಾಗಿದೆ. ಏಕೆಂದರೆ ವೈಟ್ ಬಾಲ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡಿದರೂ ರೆಡ್ ಬಾಲ್ನಲ್ಲಿ ಭಾರತ ತಂಡದ ಪ್ರದರ್ಶನ ಭಾರೀ ಕುಸಿತಕ್ಕೊಳಗಾಗಿದೆ. ಹೀಗಾಗಿಯೇ ಗಂಭೀರ್ ಅವರ ಟೆಸ್ಟ್ ಕೋಚಿಂಗ್ ವಿಮರ್ಶೆಗೆ ಒಳಗಾಗಿದೆ.
ನ್ಯೂಝಿಲೆಂಡ್ ವಿರುದ್ಧದ ಐತಿಹಾಸಿಕ ಸೋಲು: ಗಂಭೀರ್ ಅವರ ಅವಧಿಯಲ್ಲಿ ಭಾರತ ತಂಡವು ತವರಿನಲ್ಲಿ ನ್ಯೂಝಿಲೆಂಡ್ ವಿರುದ್ಧ 0-3 ಅಂತರದಿಂದ ಟೆಸ್ಟ್ ಸರಣಿಯನ್ನು ಸೋತಿದೆ. ಇದು ಕಳೆದ 12 ವರ್ಷಗಳಲ್ಲಿ ಭಾರತವು ತವರಿನಲ್ಲಿ ಅನುಭವಿಸಿದ ಮೊದಲ ಸರಣಿ ಸೋಲು ಮತ್ತು ಮೊದಲ ಬಾರಿಗೆ 3 ಪಂದ್ಯಗಳ ಸರಣಿಯಲ್ಲಿ ವೈಟ್ವಾಶ್ (ಸಂಪೂರ್ಣ ಸೋಲು) ಅನುಭವಿಸಿದ ಅವಮಾನಕರ ದಾಖಲೆಯಾಗಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿ (ಆಸ್ಟ್ರೇಲಿಯಾ ಪ್ರವಾಸ): 2024-25ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡವು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲವಾಗಿದೆ. ಗಂಭೀರ್ ಅವರ ಆಕ್ರಮಣಕಾರಿ ಶೈಲಿಯು ಆಸ್ಟ್ರೇಲಿಯಾದ ವೇಗದ ಪಿಚ್ಗಳಲ್ಲಿ ಕೆಲಸ ಮಾಡಲಿಲ್ಲ ಎಂಬ ಟೀಕೆಗಳು ಕೇಳಿಬಂದವು.
ತಂತ್ರಗಾರಿಕೆಯ ಕೊರತೆ: ಸ್ಪಿನ್ ಸ್ನೇಹಿ ಪಿಚ್ಗಳನ್ನು ಸಿದ್ಧಪಡಿಸುವ ಗಂಭೀರ್ ಅವರ ತಂತ್ರವು ನ್ಯೂಝಿಲೆಂಡ್ ಸರಣಿಯಲ್ಲಿ ತಿರುಗೇಟು ನೀಡಿತು. ಭಾರತೀಯ ಬ್ಯಾಟರ್ಗಳೇ ಸ್ಪಿನ್ ಎದುರಿಸಲು ಪರದಾಡಿದ್ದು ಕೋಚ್ ಮತ್ತು ಮ್ಯಾನೇಜ್ಮೆಂಟ್ನ ವೈಫಲ್ಯ ಎಂದು ವಿಶ್ಲೇಷಿಸಲಾಗಿದೆ.
ಹಿರಿಯ ಆಟಗಾರರ ಅನುಪಸ್ಥಿತಿ: ಗಂಭೀರ್ ಕೋಚ್ ಆದ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವಿಚಂದ್ರನ್ ಅಶ್ವಿನ್ ಏಕಾಏಕಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ. ಇದು ಭಾರತ ತಂಡದಲ್ಲಿನ ಅನುಭವದ ಕೊರತೆಯನ್ನು ಎತ್ತಿ ತೋರಿಸುತ್ತಿದೆ.
ಬಿಸಿಸಿಐ ಪ್ಲ್ಯಾನ್:
ಸುದೀರ್ಘ ಸಭೆ: ನ್ಯೂಝಿಲೆಂಡ್ ಸರಣಿಯ ಸೋಲಿನ ನಂತರ, ಬಿಸಿಸಿಐ ಗಂಭೀರ್ ಅವರೊಂದಿಗೆ ಸುಮಾರು 6 ಗಂಟೆಗಳ ಕಾಲ ಸುದೀರ್ಘ ಸಭೆ ನಡೆಸಿತ್ತು. ಇದರಲ್ಲಿ ತಂಡದ ಆಯ್ಕೆ ಮತ್ತು ಪಿಚ್ ತಯಾರಿಕೆಯ ಬಗ್ಗೆ ವಿವರಣೆ ಕೇಳಲಾಗಿತ್ತು.
ಸ್ಪ್ಲಿಟ್ ಕೋಚಿಂಗ್: ಟೆಸ್ಟ್ ಕ್ರಿಕೆಟ್ನಲ್ಲಿ ಸತತ ಹಿನ್ನಡೆಯಾಗುತ್ತಿರುವುದರಿಂದ, ಟೆಸ್ಟ್ ಪಂದ್ಯಗಳಿಗೆ ಪ್ರತ್ಯೇಕ ಕೋಚ್ ಮತ್ತು ಸೀಮಿತ ಓವರ್ಗಳ ಕ್ರಿಕೆಟ್ಗೆ (ODI & T20) ಗಂಭೀರ್ ಅವರನ್ನು ಮುಂದುವರಿಸುವ ‘ಸ್ಪ್ಲಿಟ್ ಕೋಚಿಂಗ್’ ಪದ್ಧತಿಯನ್ನು ಜಾರಿಗೆ ತರುವ ಬಗ್ಗೆ ಬಿಸಿಸಿಐ ಗಂಭೀರವಾಗಿ ಆಲೋಚಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಲಕ್ಷ್ಮಣ್ ಅವರ ಹೆಸರು: ಒಂದು ವೇಳೆ ಟೆಸ್ಟ್ ಕೋಚ್ ಬದಲಾವಣೆಯಾದರೆ, ವಿವಿಎಸ್ ಲಕ್ಷ್ಮಣ್ ಅವರಿಗೆ ಆ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.
ಅಂದರೆ ಬಿಸಿಸಿಐ ಸ್ಪಿಟ್ಲ್ ಕೋಚಿಂಗ್ ಬಗ್ಗೆ ಈಗಲೂ ಆಸಕ್ತಿ ಹೊಂದಿದೆ. ಅಂದರೆ ಗಂಭೀರ್ ಅವರನ್ನು ಏಕದಿನ ಹಾಗೂ ಟಿ20 ಕ್ರಿಕೆಟ್ಗೆ ಸೀಮಿತಗೊಳಿಸಿ, ಟೆಸ್ಟ್ ಕ್ರಿಕೆಟ್ಗೆ ಮತ್ತೋರ್ವ ಕೋಚ್ ಅನ್ನು ಪರಿಚಯಿಸಲು ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.
ಏಕೆಂದರೆ ಮುಂಬರುವ ನ್ಯೂಝಿಲೆಂಡ್ ಪ್ರವಾಸ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಫೈನಲ್ ಹಂತದವರೆಗಿನ ಪ್ರದರ್ಶನವು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದು.
ಹೀಗಾಗಿ ಅಫ್ಗಾನಿಸ್ತಾನ್ ಹಾಗೂ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗಳು ಗೌತಮ್ ಗಂಭೀರ್ ಅವರ ಟೆಸ್ಟ್ ಕೋಚಿಂಗ್ ಭವಿಷ್ಯವನ್ನು ನಿರ್ಧರಿಸಲಿದೆ. ಒಂದು ವೇಳೆ ಈ ಸರಣಿಯಲ್ಲಿ ಟೀಮ್ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡದಿದ್ದರೆ ನ್ಯೂಝಿಲೆಂಡ್ ವಿರುದ್ಧದ ಸರಣಿಗೂ ಮುನ್ನ ಭಾರತ ಟೆಸ್ಟ್ ತಂಡಕ್ಕೆ ಹೊಸ ಕೋಚ್ ನೇಮಕವಾಗಲಿದ್ದಾರೆ.
ಹೈದರಾಬಾದ್,ಮಾರ್ಚ್ 15: ಎಚ್ಐವಿ ಇದೆ ಎಂದು ತಿಳಿದ ಬಳಿಕ ಮದುವೆ(Marriage) ರದ್ದುಗೊಳಿಸಿದ್ದಕ್ಕೆ ಕೋಪಗೊಂಡು ವ್ಯಕ್ತಿ ಯುವತಿಗೆ ತನ್ನ ರಕ್ತವಿರುವ ಇಂಜೆಕ್ಷನ್ ಚುಚ್ಚಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ. 22 ವರ್ಷದ ಯುವತಿಗೆ ಆತ ಎಚ್ಐವಿ ರಕ್ತವನ್ನು ಬಲವಂತವಾಗಿ ಚುಚ್ಚಿದ್ದಾನೆ.ಮಾರ್ಚ್ 11 ರಂದು ಈ ಘಟನೆ ನಡೆದಿದ್ದು, ಆರೋಪಿಯು ಸಂತ್ರಸ್ತೆಯ ಮನೆಯಲ್ಲಿ ಬಲವಂತವಾಗಿ ಎಚ್ಐವಿ ಸೋಂಕಿತ ರಕ್ತವನ್ನು ಚುಚ್ಚಿದ್ದಾನೆ.
ಪೊಲೀಸರ ಪ್ರಕಾರ ಆರೋಪಿ ಹಾಗೂ ಸಂತ್ರಸ್ತೆ ಸಂಬಂಧಿಕರು, ಆಕೆಯ ಪೋಷಕರು ಆರಂಭದಲ್ಲಿ ತಮ್ಮ ಮಗಳ ಮದುವೆಯನ್ನು ಅವನೊಂದಿಗೆ ಮಾಡಬೇಕೆಂದುಕೊಂಡಿದ್ದರು. ಆತನ ಪೋಷಕರು ಈಗಾಗಲೇ ಎಚ್ಐವಿ ಪೀಡಿತರಾಗಿದ್ದರಿಂದ, ಮಹಿಳೆಯ ಪೋಷಕರು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಆ ವ್ಯಕ್ತಿಗೆ ವೈರಸ್ ಪರೀಕ್ಷೆ ಮಾಡಿಸಿದ್ದರು.
ತಪಾಸಣೆಯ ಸಮಯದಲ್ಲಿ ಆ ವ್ಯಕ್ತಿಗೆ ಎಚ್ಐವಿ ಪಾಸಿಟಿವ್ ಇರುವುದು ಕಂಡುಬಂದಿದ್ದರಿಂದ, ಯುವತಿಯ ತಂದೆ ತನ್ನ ಮಗಳ ಮದುವೆಯನ್ನು ರದ್ದುಗೊಳಿಸಿದ್ದರು. ಆರೋಪಿಯು ಯುವತಿ ತನ್ನನ್ನು ಮದುವೆಯಾಗುತ್ತಾಳೆ ಮತ್ತು ಶಾಶ್ವತವಾಗಿ ತನ್ನೊಂದಿಗೆ ಇರುತ್ತಾಳೆ ಎಂದು ಭಾವಿಸಿ ಈ ಕೃತ್ಯ ಎಸಗಿದ್ದಾನೆ ಎಂದು ಅವರು ಹೇಳಿದರು.
ಮಹಿಳೆಯ ತಂದೆಯ ದೂರಿನ ಆಧಾರದ ಮೇಲೆ, ಪೋಚಾರಂ ಐಟಿ ಕಾರಿಡಾರ್ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಕೊಲೆ ಯತ್ನದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಆಮಿರ್ ಖಾನ್ ನಟನೆಯ ‘ಲಗಾನ್’ (Lagaan) ಸಿನಿಮಾ ತೆರೆಕಂಡು 25 ವರ್ಷಗಳು ಕಳೆದಿವೆ. 2001ರಲ್ಲಿ ತೆರೆಕಂಡ ಈ ಇತಿಹಾಸ ನಿರ್ಮಿಸಿತ್ತು. 25 ವರ್ಷಗಳ ಪೂರೈಸಿದ ಪ್ರಯುಕ್ತ ರೆಡ್ ಲಾರಿ ಫಿಲ್ಮ್ ಫೆಸ್ಟಿವಲ್ನಲ್ಲಿ ಈ ಚಿತ್ರದ ಪ್ರದರ್ಶನ ಮಾಡಲಾಗಿದೆ. ಈ ವೇಳೆ ಆಮಿರ್ ಖಾನ್ (Aamir Khan) ಕೂಡ ಹಾಜರಿ ಹಾಕಿ, ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ‘ಲಗಾನ್’ ಚಿತ್ರದ ಶೂಟಿಂಗ್ ಸಮಯದಲ್ಲಿ, ಇಡೀ ತಂಡ ಪ್ರತಿದಿನ ಗಾಯತ್ರಿ ಮಂತ್ರ (Gayatri Mantra) ಕೇಳುತ್ತಿತ್ತು ಎಂಬುದನ್ನು ಆಮಿರ್ ಖಾನ್ ಮೆಲುಕು ಹಾಕಿದ್ದಾರೆ.
‘ಲಗಾನ್’ ಸಿನಿಮಾದಲ್ಲಿ ನಟಿಸಿದ್ದ ಅಖಿಲೇಂದ್ರ ಮಿಶ್ರಾ ಅವರು ಬಸ್ಸಿನಲ್ಲಿ ಪ್ರಯಾಣಿಸುವಾಗ ಗಾಯತ್ರಿ ಮಂತ್ರವನ್ನು ಹಾಕುತ್ತಿದ್ದರು. ಈ ಬಗ್ಗೆ ಮಾತನಾಡಿದ ಆಮಿರ್, ‘ಕೆಲವರು ಇಂಗ್ಲಿಷ್ ಹಾಡುಗಳನ್ನು ಕೇಳಲು ಬಯಸುತ್ತಿದ್ದರು. ಆದರೆ ನಾನೇ ಪಟ್ಟು ಹಿಡಿದು ಗಾಯತ್ರಿ ಮಂತ್ರ ಹಾಕಿಸುತ್ತಿದ್ದೆ. ಸತತ ಆರು ತಿಂಗಳ ಕಾಲ ನಾವು ಶೂಟಿಂಗ್ ಜಾಗವನ್ನು ತಲುಪುವ ಮೊದಲು ಪ್ರತಿ ದಿನ ಈ ಮಂತ್ರವನ್ನು ಕೇಳುತ್ತಿದ್ದೆವು’ ಎಂದು ನೆನಪಿಸಿಕೊಂಡಿದ್ದಾರೆ.
ಬಸ್ಸಿನಲ್ಲಿ ಗಾಯತ್ರಿ ಮಂತ್ರ ಕೇಳುವುದರ ಹಿಂದಿನ ಉದ್ದೇಶವನ್ನು ವಿವರಿಸಿದ ಆಮಿರ್, ‘ನಾವು ಸೂರ್ಯೋದಯಕ್ಕೂ ಮುನ್ನವೇ ಶೂಟಿಂಗ್ಗೆ ಹೊರಡುತ್ತಿದ್ದೆವು. ಕತ್ತಲಲ್ಲಿ ಬಸ್ಸಿನಲ್ಲಿ ಪ್ರಯಾಣಿಸುವಾಗ ಈ ಮಂತ್ರವನ್ನು ಕೇಳುವುದು ನಮಗೆ ಧ್ಯಾನಸ್ಥ ಸ್ಥಿತಿಗೆ ತಲುಪಲು ಸಹಾಯ ಮಾಡುತ್ತಿತ್ತು. ಕೆಲಸದ ಮೇಲೆ ಏಕಾಗ್ರತೆ ಬೆಳೆಸಲು ಇದು ಉಪಯುಕ್ತವಾಗಿತ್ತು’ ಎಂದಿದ್ದಾರೆ. ಚಿತ್ರದ ಕೊನೆಯ 10 ನಿಮಿಷಗಳನ್ನು ನೋಡಿದಾಗ ಇಂದಿಗೂ ತಮಗೆ ಭಾವುಕತೆ ಉಂಟಾಗುತ್ತದೆ ಎಂದು ಅವರು ಹೇಳಿದ್ದಾರೆ.
ಅಶುತೋಷ್ ಗೋವಾರಿಕರ್ ನಿರ್ದೇಶನದ ‘ಲಗಾನ್’ ಸಿನಿಮಾದಲ್ಲಿ ಬ್ರಿಟಿಷರ ಕಾಲದ ಕಥೆ ಇದೆ. ಕ್ರಿಕೆಟ್ ಪಂದ್ಯ ಗೆದ್ದು ಮೂರು ಪಟ್ಟು ತೆರಿಗೆಯಿಂದ ಗ್ರಾಮಸ್ಥರನ್ನು ರಕ್ಷಿಸುವ ಕಥೆಯನ್ನು ಚಿತ್ರದಲ್ಲಿ ತೋರಿಸಲಾಯಿತು. ಆರಂಭದಲ್ಲಿ ಈ ಕಥೆಯನ್ನು ಆಮಿರ್ ತಿರಸ್ಕರಿಸಿದ್ದರು! ಆದರೆ ಅವರ ತಂದೆ ತಾಹಿರ್ ಹುಸೇನ್ ಸಲಹೆಯ ಮೇರೆಗೆ ಒಪ್ಪಿಕೊಂಡಿದ್ದರು.
ಆಸ್ಕರ್ನ ‘ಅತ್ಯುತ್ತಮ ವಿದೇಶಿ ಭಾಷಾ ಚಿತ್ರ’ ವಿಭಾಗಕ್ಕೆ ‘ಲಗಾನ್’ ನಾಮಿನೇಟ್ ಆಗಿತ್ತು. ಆದರೆ ಅಂತಿಮ ಹಂತಕ್ಕೆ ಆಯ್ಕೆ ಆಗಲಿಲ್ಲ. ಆಮಿರ್ ಖಾನ್ ಅವರ ಎವರ್ಗ್ರೀನ್ ಸಿನಿಮಾಗಳಲ್ಲಿ ಈ ಚಿತ್ರಕ್ಕೆ ಪ್ರಮುಖ ಸ್ಥಾನವಿದೆ. 25 ವರ್ಷಗಳು ಕಳೆದರೂ ‘ಲಗಾನ್’ ಬಗ್ಗೆ ಜನರು ಮಾತನಾಡುತ್ತಲೇ ಇದ್ದಾರೆ.