All posts by nagaraj11081993

ಪತ್ನಿ ಜತೆ ಜಗಳವಾಡಿ ಆಕೆಯ ಮೂಗು, ಕೆನ್ನೆ ಕಚ್ಚಿ ಮಾಂಸವನ್ನೇ ಕಿತ್ತ ಗಂಡ, ಮುಖಕ್ಕೆ 10 ಹೊಲಿಗೆ

ಪತ್ನಿ ಜತೆ ಜಗಳವಾಡಿ ಆಕೆಯ ಮೂಗು, ಕೆನ್ನೆ ಕಚ್ಚಿ ಮಾಂಸವನ್ನೇ ಕಿತ್ತ ಗಂಡ, ಮುಖಕ್ಕೆ 10 ಹೊಲಿಗೆ

ಹಮೀರ್​ಪುರ, ಏಪ್ರಿಲ್ 03: ಪತ್ನಿ(Wife) ಜತೆ ಜಗಳವಾಡಿ ಕೋಪದ ಭರದಲ್ಲಿ ಆಕೆಯ ಮೂಗು, ಕೆನ್ನೆ ಕಚ್ಚಿರುವ ಘಟನೆ ಉತ್ತರ ಪ್ರದೇಶದ ಹಮೀರ್​ಪುರದಲ್ಲಿ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುಖಕ್ಕೆ 10 ಹೊಲಿಗೆಗಳನ್ನು ಹಾಕಲಾಗಿದೆ. ಈ ದಾಳಿಯಲ್ಲಿ ಮೂಗಿನ ಮಾಂಸವೆಲ್ಲಾ ಕಿತ್ತು ಬಂದಿದೆ, ಕೆನ್ನೆಗಳ ಮೇಲೂ ಕೂಡ ಆಳವಾದ ಗಾಯಗಳಾಗಿವೆ.

ಆರಂಭದಲ್ಲಿ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಆಕೆಯ ಮುಖದ ಮೇಲೆ ಹತ್ತು ಗಾಯಗಳನ್ನು ಹೊಲಿಗೆ ಹಾಕಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಝಾನ್ಸಿಯ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಪನಾ, ಫೂಲ್ ಅವರನ್ನು ಮದುವೆಯಾಗಿ ಹಲವು ವರ್ಷಗಳಾಗಿವೆ.

ಆಕೆಯ ಸಹೋದರನ ಪ್ರಕಾರ, ದಂಪತಿ ಆಗಾಗ ಜಗಳವಾಡುತ್ತಿದ್ದರು ಮತ್ತು ಘಟನೆಯ ರಾತ್ರಿ, ಅಂತಹ ಒಂದು ವಿವಾದವು ಕ್ರೂರ ಹಲ್ಲೆಗೆ ಕಾರಣವಾಯಿತು. ಆಕೆಯ ಮೂಗಿಗೆ ಆಗಿರುವ ಗಾಯದ ಪ್ರಮಾಣವನ್ನು ಪರಿಗಣಿಸಿ, ವೈದ್ಯರು ಆಕೆಯ ಮುಖ ಮೊದಲಿನಂತಾಗಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಮತ್ತಷ್ಟು ಓದಿ: ಹಣಕಾಸಿನ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ: ಪತಿಯಿಂದಲೇ ದಾರುಣವಾಗಿ ಪತ್ನಿಯ ಹತ್ಯೆ

ಸಂತ್ರಸ್ತೆಯ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪತಿ ಪ್ರಸ್ತುತ ಪರಾರಿಯಾಗಿದ್ದು, ಆತನನ್ನು ಪತ್ತೆಹಚ್ಚಿ ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಗಳ ನಿಖರ ಅನುಕ್ರಮ ಮತ್ತು ಕೌಟುಂಬಿಕ ಹಿಂಸಾಚಾರದ ಯಾವುದೇ ಹಿಂದಿನ ಇತಿಹಾಸವನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ, ವೈದ್ಯರು ಆಕೆಯ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ರಾಮಾಯಣ’ ಟೀಸರ್​ನಲ್ಲಿ ದೊಡ್ಡ ತಪ್ಪು; AI ಅಲ್ಲಿ ಮಾಡಿದ್ದು ಎಂದು ಕಂಡು ಹಿಡಿದ ಫ್ಯಾನ್ಸ್

ಬಹುನಿರೀಕ್ಷಿತ ‘ರಾಮಾಯಣ’ ಟೀಸರ್ (Ramayana Teaser) ಹನುಮ ಜಯಂತಿ ಪ್ರಯುಕ್ತ ಏಪ್ರಿಲ್ 2ರಂದು ರಿಲೀಸ್ ಆಯಿತು. ಸಿನಿಮಾದ ಬಜೆಟ್ 2 ಸಾವಿರ ಕೋಟಿ ರೂಪಾಯಿ, 4 ಸಾವಿರ ಕೋಟಿ ರೂಪಾಯಿ ಎಂದೆಲ್ಲ ಹೇಳಲಾಗಿದೆ. ಈ ಕಾರಣದಿಂದಲೇ ಸಿನಮಾದ ಟೀಸರ್ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಜನರು ಸಿನಿಮಾದಿಂದ ದೊಡ್ಡದನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಆದರೆ, ಟೀಸರ್ ನೋಡಿದ ಬಳಿಕ ಸಾಕಷ್ಟು ಟೀಕೆ ಎದುರಾಗಿದೆ. ಟೀಸರ್​​​ನಲ್ಲಿರುವ ಎರಡು ದೊಡ್ಡ ತಪ್ಪನ್ನು ನೆಟ್ಟಿಗರು ಕಂಡು ಹಿಡಿದಿದ್ದಾರೆ.

ದೊಡ್ಡ ಬಜೆಟ್ ಸಿನಿಮಾ ಮಾಡಬೇಕು ಎಂದಾಗ ಅದಕ್ಕೆ ಅಷ್ಟೇ ಸಿದ್ಧತೆ ಬೇಕಾಗುತ್ತದೆ. ನಿರ್ದೇಶಕರು ಸಾಕಷ್ಟು ಮುಂದಾಲೋಚನೆ ಹೊಂದಿರಬೇಕಾಗುತ್ತದೆ. ಸಣ್ಣ ಸಣ್ಣ ವಿಷಯಗಳನ್ನು ಗಮನಿಸಬೇಕಾಗುತ್ತದೆ. ಇಲ್ಲವಾದಲ್ಲಿ ಅಲ್ಲಿಯೂ ಜನರು ತಪ್ಪು ಕಂಡು ಹಿಡಿಯುತ್ತಾರೆ. ಆದಿತ್ಯ ಧಾರ್ ಅವರ ‘ಧುರಂಧರ್ 2’ ಚಿತ್ರವನ್ನು ಜನರು ಹೊಗಳಿದ್ದರು. ಆದಿತ್ಯ ಧಾರ್ ಅವರ ಪೀಕ್ ಡೀಟೇಲಿಂಗ್ ಎಂದು ಬೆನ್ನು ತಟ್ಟಿದ್ದರು. ಆದರೆ, ಸಿನಿಮಾದಲ್ಲಿರುವ ತಪ್ಪುಗಳನ್ನು ಕೆಲವರು ಎತ್ತಿ ತೋರಿಸಿದ್ದರು. ಈಗ ‘ರಾಮಾಯಣ’ ಟೀಸರ್​ ಅಲ್ಲೇ ಕೆಲವು ತಪ್ಪು ಕಂಡು ಹಿಡಿದಿದ್ದು, ಇದಕ್ಕೆ ನಿರ್ದೇಶಕ ನಿತೇಶ್ ತಿವಾರಿ ಅವರು ಸಾಕಷ್ಟು ಟೀಕೆ ಎದುರಿಸಿದ್ದಾರೆ.
ಇದನ್ನೂ ಓದಿ: ರಾಮಾಯಣ ಟೀಸರ್: ‘ಇದಕ್ಕಿಂತ ಆದಿಪುರುಷ್ ಎಷ್ಟೋ ಚೆನ್ನಾಗಿತ್ತು’ ಎಂದ ನೆಟ್ಟಿಗರು

ರಾಮ ಜನರ ಮಧ್ಯೆ ನಡೆದುಕೊಂಡು ಬರುವ ದೃಶ್ಯವಿದೆ. ಆಗ ಬಾಲಕನೋರ್ವ ನಮಸ್ಕರಿಸುತ್ತಾನೆ. ರಾಮ ಸ್ವಲ್ಪ ಮುಂದೆ ಹೋದರೆ ಇದೇ ಬಾಲಕ ರಾಮನಿಗೆ ಹೂವನ್ನು ಹಾಕುತ್ತಾ ಇರುತ್ತಾನೆ. ಇದು ದೊಡ್ಡ ತಪ್ಪುಗಳಲ್ಲಿ ಒಂದು. ಇದನ್ನು ಎಐ ಅಲ್ಲಿ ಮಾಡಿರಬಹುದು ಅಥವಾ ಆ ಬಾಲಕನ್ನನ್ನೇ ಮತ್ತೆ ಬಳಸಿಕೊಂಡಿರಬಹುದು ಎಂದು ಊಹಿಸಲಾಗಿದೆ.

ಇನ್ನು, ಮತ್ತೂ ಒಂದು ತಪ್ಪನ್ನು ಎತ್ತಿ ತೋರಿಸಲಾಗಿದೆ. ರಾಮ ಯುದ್ಧಕ್ಕೆ ಸಿದ್ಧನಾಗಿ ನಿಂತಿರುತ್ತಾನೆ. ಎದುರಿನವರ ಮೇಲೆ ಬಾಣ ಹೂಡಲು ರೆಡಿ ಆಗಿರುತ್ತಾನೆ. ಆದರೆ, ಆತನ ಸೈನಿಕರು ಮಾತ್ರ ಇನ್ಯಾವುದೋ ಕಡೆ ನೋಡುತ್ತಾ ನಿಂತಿದ್ದಾರೆ. ಇದು ಎಐನಿಂದ ಮಾಡಿದ ಫೋಟೋ ಎಂಬುದು ನೆಟ್ಟಿಗರಿಗೆ ಸ್ಪಷ್ಟವಾಗಿ ಕಾಣಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉಪಚುನಾವಣೆ ಪ್ರಚಾರ ಅಬ್ಬರ: ದಾವಣಗೆರೆಯಲ್ಲಿ ಮಳೆಯಲ್ಲೇ ‘ಕೈ’ ನಾಯಕರ ಘರ್ಜನೆ; ಬಾಗಲಕೋಟೆಯಲ್ಲಿ ಚರಂತಿಮಠ ಪರ ಯತ್ನಾಳ್ ಮತಬೇಟೆ!

ದಾವಣಗೆರೆ/ಬಾಗಲಕೋಟೆ, ಏಪ್ರಿಲ್ 3: ಕರ್ನಾಟಕದ ಎರಡು ಪ್ರಮುಖ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ (Karnataka By-Election 2026) ಪ್ರಚಾರ ಅಂತಿಮ ಘಟ್ಟಕ್ಕೆ ತಲುಪಿದ್ದು, ಅಡಳಿತಾರೂಢ ಕಾಂಗ್ರೆಸ್ (Congress) ಮತ್ತು ಪ್ರತಿಪಕ್ಷ ಬಿಜೆಪಿ (BJP) ನಡುವೆ ಬಿರುಸಿನ ಪೈಪೋಟಿ ಏರ್ಪಟ್ಟಿದೆ. ದಾವಣಗೆರೆ ದಕ್ಷಿಣದ ಪ್ರಚಾರ ಕಣದಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅಬ್ಬರಿಸಿದರೆ, ಬಾಗಲಕೋಟೆಯಲ್ಲಿ ಬಿಜೆಪಿಯಿಂದ ಉಚ್ಚಾಟಿತರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಕೇಸರಿ ಅಭ್ಯರ್ಥಿ ಪರ ಬ್ಯಾಟಿಂಗ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ದಾವಣಗೆರೆ ದಕ್ಷಿಣ: ಮಳೆಯಲ್ಲೂ ಧೃತಿಗೆಡದ ನಾಯಕರು

ದಾವಣಗೆರೆ ದಕ್ಷಿಣ ಕ್ಷೇತ್ರವು ಕಾಂಗ್ರೆಸ್‌ಗೆ ಪ್ರತಿಷ್ಠೆಯ ಕಣವಾಗಿದೆ. ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರವಾಗಿ ಗುರುವಾರ ಅಕ್ತರ್ ರಾಜಾ ಸರ್ಕಲ್‌ನಲ್ಲಿ ಬೃಹತ್ ಸಮಾವೇಶ ನಡೆಯಿತು. ಸಮಾವೇಶದ ವೇಳೆ ಭಾರಿ ಮಳೆ ಸುರಿದರೂ ಲೆಕ್ಕಿಸದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರು ಅಬ್ಬರದ ಭಾಷಣ ಮಾಡಿದರು. ಈ ವೇಳೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಪುತ್ರ ಸಮರ್ಥ್ ಶಾಮನೂರು ಅವರು ಡಿಸಿಎಂಗೆ ಕೊಡೆ ಹಿಡಿದು ನಿಂತಿದ್ದು ಎಲ್ಲರ ಗಮನ ಸೆಳೆಯಿತು.

ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಾಗಿದ್ದು ಯಾವುದೇ ಕಾರಣಕ್ಕೂ ಗೆಲ್ಲಬಾರದು ಎಂದು ಕರೆ ನೀಡಿದರು. ಅಸಮಾಧಾನಗೊಂಡಿದ್ದ ಮುಸ್ಲಿಂ ಮುಖಂಡರಾದ ದಾದುಸೇಟ್ ಸೇರಿದಂತೆ ಹಲವರ ಮನೆಗಳಿಗೆ ಸಿಎಂ ಖುದ್ದಾಗಿ ಭೇಟಿ ನೀಡಿ ಮನವೊಲಿಸುವಲ್ಲಿ ಯಶಸ್ವಿಯಾದರು. ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಕೂಡ ಸಮರ್ಥ್ ಪರವಾಗಿ ‘ನಿಮ್ಮ ಮನೆಯ ಮಗ’ ಎಂದು ಭಾವುಕವಾಗಿ ಮತಯಾಚಿಸಿದರು.

ಬಾಗಲಕೋಟೆ: ಯತ್ನಾಳ್‌ ನಡೆ ಕುತೂಹಲ

ಇನ್ನೊಂದೆಡೆ, ಬಾಗಲಕೋಟೆಯಲ್ಲಿ ರಾಜಕೀಯ ಚಿತ್ರಣ ಬದಲಾಗಿದೆ. ಬಿಜೆಪಿಯಿಂದ ಉಚ್ಚಾಟಿತರಾಗಿದ್ದರೂ ಹಿಂದೂ ಫೈರ್ ಬ್ರ್ಯಾಂಡ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಅಖಾಡಕ್ಕಿಳಿದಿದ್ದಾರೆ. ಹೈಕಮಾಂಡ್ ಮೇಲೆ ಮುನಿಸು ಹೊಂದಿದ್ದರೂ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ‘ಬಾಗಲಕೋಟೆಯಲ್ಲಿ ಬಿಜೆಪಿ ಗೆಲುವು ಈಗಾಗಲೇ ಖಚಿತವಾಗಿದೆ, ಯತ್ನಾಳ್ ಪ್ರಚಾರದಿಂದ ಅಂತರ ಹೆಚ್ಚಾದರೆ ಸಂತೋಷ’ ಎಂದು ಮಾರ್ಮಿಕವಾಗಿ ನುಡಿದರು.

ಇದನ್ನೂ ಓದಿ: ಬೈ ಎಲೆಕ್ಷನ್​​: BJP ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬರ್ತಾರಾ ಹೆಚ್​​.ಡಿ. ಕುಮಾರಸ್ವಾಮಿ?

ಏಪ್ರಿಲ್ 9 ರಂದು ಮತದಾನ ನಡೆಯಲಿದ್ದು, ಯತ್ನಾಳ್ ನಡೆ ಬಿಜೆಪಿಯತ್ತ ಮತ್ತೆ ವಾಲಿದೆಯೇ ಅಥವಾ ಇದು ಕೇವಲ ಸ್ಥಳೀಯ ಹೊಂದಾಣಿಕೆಯೇ ಎನ್ನುವುದಕ್ಕೆ ಚುನಾವಣಾ ಫಲಿತಾಂಶವೇ ಉತ್ತರ ನೀಡಬೇಕಿದೆ.

ಮಾಹಿತಿ: ದಾವಣಗೆರೆಯಿಂದ ಬಸವರಾಜ್ ದೊಡ್ಮನಿ ಹಾಗೂ ಬಾಗಲಕೋಟೆಯಿಂದ ರವಿ ಹೆಚ್ ಮೂಕಿ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today: ಇಂದು ಈ ರಾಶಿಯವರ ಉದ್ಯೋಗದಲ್ಲಿ ಪ್ರಗತಿ

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 3, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಪಾಡ್ಯ ತಿಥಿಯಾಗಿದೆ. ಇಂದು ಡಾ. ಬಸವರಾಜ ಗುರೂಜಿಯವರು ಪ್ರತಿ ರಾಶಿಯವರಿಗೂ ಆರೋಗ್ಯ, ಆರ್ಥಿಕ ಸ್ಥಿತಿ, ಉದ್ಯೋಗ, ವ್ಯಾಪಾರ, ಕುಟುಂಬ ಮತ್ತು ವೈಯಕ್ತಿಕ ಸಂಬಂಧಗಳ ಕುರಿತು ವಿವರವಾದ ಸಲಹೆಗಳನ್ನು ನೀಡಿದ್ದಾರೆ. ರವಿ ಮೀನ ರಾಶಿಯಲ್ಲಿ ಮತ್ತು ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸಲಿದ್ದಾನೆ ಎಂಬುದನ್ನು ಅವರು ವಿವರಿಸಿದ್ದಾರೆ.

 

Source link

Daily Devotional: ಮನೆ ಕಟ್ಟಬೇಕು ಎಂದುಕೊಂಡಿದ್ದೀರಾ? ಯಾವಾಗ ಅಡಿಪಾಯ ಹಾಕಿದರೆ ಉತ್ತಮ?

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮನೆ ಕಟ್ಟುವಾಗ ಅಡಿಪಾಯ ಯಾವ ದಿನ ಕಾಕಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಹಿಂದೂ ಸನಾತನ ಸಂಸ್ಕೃತಿಯ ಪ್ರಕಾರ, ಮನೆಯ ನಿರ್ಮಾಣ ಕಾರ್ಯವನ್ನು (ಗೃಹಾರಂಭ) ಪ್ರಾರಂಭಿಸುವ ಸಮಯ ಬಹಳ ಮಹತ್ವಪೂರ್ಣವಾಗಿದೆ. ಸರಿಯಾದ ಮಾಸದಲ್ಲಿ ಗೃಹಾರಂಭ ಮಾಡಿದರೆ ಅದು ನಿರ್ವಿಘ್ನವಾಗಿ ಪೂರ್ಣಗೊಂಡು ಮನೆ ನಿವಾಸಿಗಳಿಗೆ ಶುಭ ಫಲ ನೀಡುತ್ತದೆ. ವೈಶಾಖ, ಫಾಲ್ಗುಣ, ಶ್ರಾವಣ ಮತ್ತು ಮಾಘ ಮಾಸಗಳು ಗೃಹಾರಂಭಕ್ಕೆ ಅತ್ಯಂತ ಶುಭಕರ ಎಂದು ಬಾದರಾಯಣರು ತಮ್ಮ ಗ್ರಂಥಗಳಲ್ಲಿ ಹೇಳಿದ್ದಾರೆ. ನಾರದ ಮಹರ್ಷಿಗಳು ಪುಷ್ಯ ಮಾಸವನ್ನೂ ಶುಭ ಎಂದು ಪರಿಗಣಿಸಿದ್ದಾರೆ ಎಂದು ಗುರೂಜಿ ಹೇಳಿದ್ದಾರೆ.

 

 

 

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಉದ್ಯಮದ ಒತ್ತಡದಿಂದ ಅಲ್ಪ ವಿರಾಮ

ಮೇಷ ರಾಶಿ :
ನಿರಂತರ ಅಭ್ಯಾಸಗಳ ಬಗ್ಗೆ ಎಚ್ಚರಿಕೆ ಇರಲಿ. ಕೆಲವು ದೌರ್ಬಲ್ಯವನ್ನು ಪ್ರಯತ್ನಪೂರ್ವಕವಾಗಿ ಬಿಡಬೇಕಾಗಬಹುದು. ನಿಮ್ಮ ಸಾಧ್ಯವಾದುದನ್ನು ಮಾತ್ರ ಒಪ್ಪಿಕೊಳ್ಳಿ. ನಿಮಗೆ ಆಪ್ತರ ಜೊತೆ ಮಾತನಾಡದೇ ನೆಮ್ಮದಿಯು ಸಿಗದೇಹೋದೀತು. ಸಂಗಾತಿಯ ಜೊತೆ ಆರ್ಥಿಕತೆಯ ಬಗ್ಗೆ ವಾಗ್ವಾದ ಮಾಡುವಿರಿ. ತನ್ನವರ ಬಗ್ಗೆ ನಂಬಿಕೆ ಇರದು. ಮಾತನ್ನು ಕಡಿಮೆ ಮಾಡಿ ಏಕಾಂಗಿಯಾಗಿ ಇರುವಿರಿ. ನಿಮಗೆ ಹಲವು ದಿನಗಳಿಂದ ಬಯಸಿದ್ದು ಸಿಗದೆ ಬೇಸರವಾದೀತು. ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಬರಲಿವೆ.

ವೃಷಭ ರಾಶಿ :
ಇಂದು ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ತೋರಿಸಬಹುದು. ಅಪನಂಬಿಕೆಗಳು ದೂರಾಗಬೇಕಿದೆ.‌ ಸಾಮಾಜಿಕ ಕಾರ್ಯಗಳನ್ನು ಮಾಡಲು ನಿಮಗೆ ಇಂದು ಉತ್ಸಾಹ ಇರಲಿದೆ. ಸಜ್ಜನರ ಸಹವಾಸವು ಅನಿರೀಕ್ಷಿತವಾಗಿ ಸಿಗುವುದು. ಅನಪೇಕ್ಷಿತ ಸಹಕಾರದಿಂದ ಆರ್ಥಿಕ ಚಿಂತೆ.‌ ಸ್ವತಃ ಉದ್ಯೋಗವನ್ನು ಮಾಡುವ ಆಲೋಚನೆಯು ಬರಬಹುದು. ಅಪರಿಚಿತರ ಜೊತೆ ಸಲುಗೆಯಿಂದ ಇರುವಿರಿ. ಅಧಿಕ ಬೆಲೆ ಉತ್ತಮ‌ ವಸ್ತುಗಳ ಖರೀದಿ ಮಾಡುವಿರಿ. ಸಂತೋಷದಿಂದ ನೀವು ಹೆಚ್ಚು ದಿನವನ್ನು ಕಳೆಯುವಿರಿ.

ಮಿಥುನ ರಾಶಿ :
ನಿಮ್ಮ ವೃತ್ತಿಪರ ಜೀವನದಲ್ಲಿ ದೊಡ್ಡ ಬದಲಾವಣೆಗಳು ಬರಲಿವೆ. ಸ್ತ್ರೀಯರಿಗೆ ಮನೆಯ ಕೆಲಸವು ಸಾಕೆನಿಸಿ ಹೊರಗೆ ಹೋಗಬೇಕು ಎನಿಸಬಹುದು. ನಿಮ್ಮ ಪ್ರೀತಿಗೆ ಅಡ್ಡಿ ಆತಂಕಗಳು ಬರಬಹುದು. ಇಂದಿನ ಕಾರ್ಯವನ್ನು ಸರಿಯಾಗಿ ಯೋಜಿಸಿಕೊಂಡು.‌ ಮಾತಿನ ಅಸ್ಪಷ್ಟತೆಯು ಕೇಳುಗರಿಗೆ ಕಷ್ಟವಾದೀತು. ಯಶಸ್ಸಿನ ಗುಟ್ಟನ್ನು ಬಯಲುಮಾಡುಬಿರಿ. ನಿಮ್ಮ ಅಭಿಪ್ರಾಯವನ್ನು ತಿಳಿಸಬೇಕಾದಲ್ಲಿ ತಿಳಿಸಿ. ಕಲಾವಿದರು ಹೆಚ್ಚು ಶ್ರಮ ಹಾಕಿದರೆ ತಮ್ಮ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಿಯಾರು.

ಕರ್ಕಾಟಕ ರಾಶಿ :
ಅದೃಷ್ಟವು ನಿಮ್ಮ ದಾರಿಯಲ್ಲಿ ಬರುತ್ತಿದೆ ಮತ್ತು ನಿಮ್ಮ ಕನಸುಗಳನ್ನು ನೀವು ನಂಬಿದರೆ, ನಿಮ್ಮ ಗುರಿಯಲ್ಲಿ ನಿರತರಾಗಿದ್ದರೆ, ನಿಮಗೆ ಯಶಸ್ಸು ಖಚಿತ. ಮಕ್ಕಳಿಗೆ ಶಿಸ್ತನ್ನು ಕಲಿಸಲು ನಿಮಗೆ ಆಗದೇ ಹೋದೀತು. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಸಂಗಾತಿಯಿಂದ ಪ್ರಚೋದಿತರಾಗುವಿರಿ. ಉದ್ಯೋಗದಲ್ಲಿ ನಿಮಗೆ ಬೆಂಬಲಿಸುವವರು ಹೆಚ್ಚಿರಬಹುದು. ಕೃಷಿಯು ಕಡೆಗೆ ಗಮನ ಹೆಚ್ಚಾಗಿ ನೀಡುವಿರಿ. ಸಂಗಾತಿಯು ನಿಮ್ಮ ಬಗ್ಗೆ ಸರಿಯಾಗಿ‌ ತಿಳಿದುಕೊಳ್ಳದೇ ಹೋಗಬಹುದು. ನಿಮಗೆ ಕೆಲವು ವಿಚಾರದಲ್ಲಿ ಕಾನೂನಿನ ತೊಂದರೆ ಕಾಡಬಹುದು.

ಸಿಂಹ ರಾಶಿ :
ನಿಮಗೆ ಸಿಗುವ ಜನರ ಪ್ರೀತಿಗೆ ಪ್ರತಿಯಾಗಿ ಸಮಯವನ್ನಾದರೂ ಕೊಡಿ. ಮುಕ್ತವಾಗಿ ಸಂವಾದ ಮಾಡಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ. ಅತಿಯಾದ ಚಿಂತೆಯಿಂದ ಆರೋಗ್ಯವನ್ನು ಹಾಳು ಮಾಡಿಕೊಳ್ಳುವಿರಿ. ಬೇಕಾದಷ್ಟು ಸಂಪತ್ತಿದ್ದರೂ ನಿಮಗೆ ಸರಿಯಾದ ನೆಮ್ಮದಿಯ ಸಿಗದು. ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಕಾರ್ಯದಲ್ಲಿ ಸಕ್ರಿಯರಾಗಿ. ಸಂಗಾತಿಯೂ ನಿಮಗೆ ಮಾನಸಿಕವಾಗಿ ಘಾಸಿ ಮಾಡಬಹುದು. ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ, ಇನ್ನೊಬ್ಬರಿಗೆ ಸಹಾಯ ಮಾಡುವಿರಿ. ಮನಸ್ಸಿನ ತಾದಾತ್ಮ್ಯದಿಂದ ನಿಮಗೆ ಕಷ್ಟದ ಪೂರ್ಣ ಪ್ರಭಾವವು ನಿಮ್ಮ‌ ಮೇಲೆ ಆಗದು.

ಕನ್ಯಾ ರಾಶಿ :
ಇಂದು ನಿಮ್ಮನ್ನು ನೀವು ಧನಾತ್ಮಕವಾಗಿ ಪ್ರಸ್ತುತಪಡಿಸುವತ್ತ ಗಮನಹರಿಸಿ. ಋಣಶೇಣವನ್ನು ಉಳಿಸಿಕೊಳ್ಳದೇ ತೀರಿಸಿಕೊಂಡು ಮುಂದಿನ ಯೋಜನೆಗೆ ಸಿದ್ಧತೆ ನಡೆಸುವಿರಿ. ಅಂತಸ್ಸಾಕ್ಷಿಯನ್ನು ಬಿಟ್ಟು ನೀವು ದೂರಾಗಬಹುದು. ನಿಮಗೆ ಇನ್ನೊಬ್ಬರ ಬಗ್ಗೆಯೇ ಅಧಿಕ ಆಲೋಚನೆ ಇರುವುದು. ಅಪರಾಧಿ ಪ್ರಜ್ಞೆ ನಿಮ್ಮನ್ನು ಕಾಡುವುದು. ಕಾಲಾತ್ಮಕ ಕೆಲಸದಲ್ಲಿ ಆಸಕ್ತಿ ಹೆಚ್ಚಾಗುವುದು. ಇಂದಿನ ದೂರಪ್ರಯಾಣವು ನಿರಾಶಾದಾಯಕವಾಗಿದ್ದು ಎಲ್ಲರನ್ನೂ ಹೀಗಳೆಯುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಗೊಂದಲವು ನಿವಾರಣೆಯಾಗುವುದು.

ತುಲಾ ರಾಶಿ :
ಇಂದು ದೀರ್ಘಕಾಲದ ನಿಮ್ಮ ಸಂಬಂಧಕ್ಕೆ ವಿರಾಮ‌ವು ಸಿಗಬಹುದು. ಪಡೆದುಕೊಳ್ಳಬೇಕಾದ ಸ್ಥಿರಾಸ್ತಿ ನಿಮಗೆ ಬರುವುದು. ವಿದ್ಯಾಭ್ಯಾಸಕ್ಕೆ ಉಂಟಾದ ತೊಂದರೆಯನ್ನು ನೀವು ಬಗೆಹರಿಸಿಕೊಳ್ಳುವಿರಿ. ನಿಮ್ಮ ಸಹಜ ವರ್ತನೆಯೂ ನಿಮ್ಮರಿಗೆ ಸಿಟ್ಟನ್ನು ಉಂಟುಮಾಡೀತು. ನಿಮಗೆ ಕಛೇರಿಯಲ್ಲಿ ಪ್ರಶಂಸೆಯು ಸಿಗಬಹುದು. ಕೆಲವರು ನಿಮ್ಮ ಬಗ್ಗೆ ಆಡಿಕೊಳ್ಳಬಹುದು. ವಿಶ್ವಾಸಕ್ಕೆ ಯೋಗ್ಯವಾದ ಕೆಲಸವನ್ನು ಮಾಡುವಿರಿ. ಭೂಮಿಯ ವ್ಯವಹಾರವು ಸಾಕೆನಿಸಬಹುದು. ನಿಮ್ಮ ಶಿಸ್ತಿನ ಜೀವನವನ್ನು ಯಾರೂ ಕೇಳರು.

ವೃಶ್ಚಿಕ ರಾಶಿ :
ಕೆಲಸದಲ್ಲಿ ಹೊಸತನ ಬಹಳ ಮುಖ್ಯವಾಗುತ್ತದೆ. ಮಕ್ಕಳ ವಿವಾಹಕ್ಕಾಗಿ ಓಡಾಟ, ಮಾತುಕತೆಗಳನ್ನು ಮಾಡಬೇಕಾದೀತು. ಮಕ್ಕಳನ್ನು ಪಡೆಯಬೇಕು ಎಂಬ ಆಸೆ ಬರುವುದು. ನಿಮ್ಮ ಸಂಬಂಧಿಕರೊಂದಿಗೆ ಸಮಯ ಕಳೆಯಬಹುದು. ವಿದ್ಯಾರ್ಥಿಗಳ ಅಭ್ಯಾಸ ಉನ್ನತ ಅಧ್ಯಯನಕ್ಕೆ ಸಹಕಾರಿ. ಯಾವುದೇ ಆಸ್ತಿಯಲ್ಲಿ ಹೂಡಿಕೆ ಮಾಡುವುದು ಬೇಡ.‌ ಮಕ್ಕಳಿಗೆ ಮನೆಯ ಜವಾಬ್ದಾರಿಯನ್ನು ಕೊಟ್ಟು ನಿಶ್ಚಿಂತರಾಗಲು ಇಷ್ಟಪಡುವಿರಿ. ವೃತ್ತಿಯಲ್ಲಿ ಕಾರ್ಯವು ಸರಿಯಾಗದೇ ಸಂಕಷ್ಟಕ್ಕೆ ಬೀಳುವಿರಿ. ಅಧಿಕಾರಿಗಳಿಂದ ನಿಮಗೆ ಅಪಮಾನವೂ ಆದೀತು.

ಧನು ರಾಶಿ :
ಹಿತಶತ್ರುಗಳನ್ನು ಇಂದು ಅವರಾಡುವ ಮಾತುಗಳಿಂದ ಗುರುತಿಸುವಿರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿಲ್ಲ. ಖರ್ಚಿನ ವಿಚಾರದಲ್ಲಿ ಔದಾರ್ಯ ಬೇಡ. ವಾಸಸ್ಥಳ ಬದಲಾವಣೆಯಿಂದ ಹೆಚ್ಚು ಸಂತೋಷ ಇರುವುದು. ನಿಮ್ಮವರ ಮೇಲಿರುವ ಅನುಮಾನ ನಿವಾರಣೆ ಮಾಡಿಕೊಳ್ಳುವಿರಿ.‌ ಚಂಚಲ ಮನಃಸ್ಥಿತಿಯು ನಿಮ್ಮ ಕಛೇರಿಯ ಕಾರ್ಯವನ್ನು ಮಾಡಲು ಬಿಡದು. ಸಹನೆ ನಿಮ್ಮ ಜೊತೆ ದಿನಪೂರ್ತಿ ಇರಲಿ. ನಿಮ್ಮ ಅಂದಾಜಿನ ಆದಾಯವನ್ನು ತಲುಪುವಿರಿ. ಸಂಗಾತಿಯ ಮನೋಭಾವವನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾದೀತು.

ಮಕರ ರಾಶಿ :
ಯಾರಿಂದಲಾದರೂ ಹಣವನ್ನು ಎರವಲು ಪಡೆದ ಜನರಿಗೆ ಯಾವುದೇ ಪರಿಸ್ಥಿತಿಯಲ್ಲಿ ಸಾಲವನ್ನು ಮರುಪಾವತಿ ಮಾಡಬೇಕಾಗಬಹುದು. ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಉತ್ಸಾಹವನ್ನು ನೀವು ನಿಯಂತ್ರಿಸಬೇಕು. ದೂರವಾಣಿ ಕರೆಗಳಿಂದ ನಿಮಗೆ ತೊಂದರೆ. ಓಡಾಟದಲ್ಲಿ ಕೆಲವು ಅಡೆತಡೆಗಳ ಬರಬಹುದು. ನಿಮ್ಮ ದೌರ್ಬಲ್ಯಗಳಿಂದ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ. ವ್ಯಕ್ತಿತ್ವದಲ್ಲಿ ಬದಲಾದಂತೆ ಕಾಣುವಿರಿ. ಆರ್ಥಿಕತೆಯ ಬೆಳವಣಿಗೆಯು ನಿಮಗೆ ಸಂತೋಷವನ್ನು ಕೊಡುವುದು.‌

ಕುಂಭ ರಾಶಿ :
ಇಂದು ಹೊಸ ಸಂಪರ್ಕದಿಂದ ಕಾರ್ಯ ಸಾಧನೆ. ವೃತ್ತಿಜೀವನದ ಕೌಶಲ್ಯಗಳನ್ನು ಹೆಚ್ಚಿಸಲು ಸಮಯವನ್ನು ಬಳಸಿಕೊಳ್ಳುವಿರಿ. ಹೂಡಿಕೆ ಮಾಡಲು ಹೊಸ ಮಾರ್ಗಗಳನ್ನು ತೆರೆಯಬಹುದು. ಹಾಸ್ಯಯುಕ್ತವಾದ ಮಾತಿನಿಂದ ಗೌರವವನ್ನು ಕಳೆದುಕೊಳ್ಳುವಿರಿ. ಹಲವರ ಅಭಿಪ್ರಾಯದಿಂದ ನಿಮಗೆ ಗೊಂದಲವಾಗುವುದು. ಇಂದು ಹಳೆಯ ತಪ್ಪಿಗೆ ನೀವು ಪಶ್ಚಾತ್ತಾಪ ಪಡಪಡುವಿರಿ. ಇಂದಿನ ನಿಮ್ಮ ಖರ್ಚು ಹೆಚ್ಚಾದಂತೆ ಅನ್ನಿಸೀತು. ನಿಮ್ಮ ನಿರ್ಮಾಣದ ಕಾರ್ಯಗಳು ನಿಧಾನವಾಗುವುದು. ನಿಮ್ಮ‌ ಮನೋಬಲವನ್ನು ಕುಗ್ಗಿಸುವ ಪ್ರಯತ್ನವನ್ನು ಜೊತೆಗಾರರು ಮಾಡುವರು.

ಮೀನ ರಾಶಿ :
ಆರ್ಥಿಕತೆಯ ಬಗ್ಗೆ ನೀವು ಸರಿಯಾಗಿ ತಿಳಿದುಕೊಳ್ಳಬೇಕಾಗಬಹುದು. ಇಂದು ಬದಲಾವಣೆಯ ದಿನವಾಗಿದ್ದರೂ, ಆಶ್ಚರ್ಯವು ಕಾಣಿಸಿಕೊಳ್ಳಬಹುದು. ನಿಮ್ಮನ್ನು ಯಾರಾದರೂ ಆರ್ಥಿಕ ತೊಂದರೆಗೆ ಸಿಲುಕಿಸಬಹುದು. ಒಡೆದ ಬಾಂಧವ್ಯ ಮತ್ತೆ ಕೂಡಲಿದೆ. ಇಂದು ನೀವು ನಿಮ್ಮ ಕುಟುಂಬದವರ ಜೊತೆ ಅಧಿಕ‌ ಕಾಲವನ್ನು ಕಳೆಯುವಿರಿ. ಸ್ಥಿರಾಸ್ತಿಯನ್ನು ಉಳಿಸಿಕೊಳ್ಳಲು ಶತಪ್ರಯತ್ನ ಮಾಡಬೇಕಾದೀತು. ಮನೆಯಲ್ಲಿ ಬಹಳ ಕಾರ್ಯಗಳಿದ್ದು ಅದರಲ್ಲಿ ತನ್ಮಯರಾಗುವಿರಿ. ನಿಮ್ಮ ವಸ್ತುಗಳನ್ನು ಜೋಪಾನವಾಗಿ ಇಡಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಉತ್ತರಾಭಾದ್ರ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಚಿತ್ರಾ, ಯೋಗ : ಧ್ರುವ, ಕರಣ : ವಣಿಜ, ಸೂರ್ಯೋದಯ – 06 – 20 am, ಸೂರ್ಯಾಸ್ತ – 06 – 35 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:56 – 12:28, ಯಮಗಂಡ ಕಾಲ 15:32 – 17:04, ಗುಳಿಕ ಕಾಲ 07:52 – 09:24

-ಲೋಹಿತ ಹೆಬ್ಬಾರ್-8762924271 (what’s app only)

Source link

KKR vs SRH: ಕೆಕೆಆರ್​ಗೆ ಸತತ ಎರಡನೇ ಸೋಲು; ಗೆಲುವಿನ ಖಾತೆ ತೆರೆದ ಸನ್‌ರೈಸರ್ಸ್

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯವನ್ನು ಗೆಲ್ಲು ಮೂಲಕ ಸನ್ ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ 2026 ರಲ್ಲಿ ತನ್ನ ಗೆಲುವಿನ ಖಾತೆಯನ್ನು ತೆರೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 226 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್ ಉತ್ತಮ ಆರಂಭದ ಹೊರತಾಗಿಯೂ 65 ರನ್​​ಗಳ ಹೀನಾಯ ಸೋಲುಂಡು ಲೀಗ್​ನಲ್ಲಿ ಸತತ ಎರಡನೇ ಸೋಲನ್ನು ಅನುಭವಿಸಿತು.

226 ರನ್ ಕಲೆಹಾಕಿದ ಎಸ್​ಆರ್​ಎಚ್

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಭರ್ಜರಿ ಆರಂಭ ನೀಡಿದರು. ಅಭಿಷೇಕ್ ಶರ್ಮಾ 21 ಎಸೆತಗಳಲ್ಲಿ 48 ರನ್ ಗಳಿಸಿದರೆ, ಟ್ರಾವಿಸ್ ಹೆಡ್ 21 ಎಸೆತಗಳಲ್ಲಿ 46 ರನ್ ಗಳಿಸಿದರು. ಇಬ್ಬರೂ 34 ಎಸೆತಗಳಲ್ಲಿ 82 ರನ್‌ಗಳ ಸ್ಫೋಟಕ ಜೊತೆಯಾಟವನ್ನು ಹಂಚಿಕೊಂಡರು. ನಂತರ ಹೆನ್ರಿಕ್ ಕ್ಲಾಸೆನ್ 52 ರನ್‌ಗಳೊಂದಿಗೆ ಗಮನಾರ್ಹ ಕೊಡುಗೆ ನೀಡಿದರು. ಈ ಮಧ್ಯೆ ನಿತೀಶ್ ಕುಮಾರ್ ರೆಡ್ಡಿ 39 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು 226 ರನ್​ಗಳ ಬೃಹತ್ ಮೊತ್ತಕ್ಕೆ ಕೊಂಡೊಯ್ದರು.

ಮತ್ತೊಂದೆಡೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬೌಲಿಂಗ್ ಮತ್ತೊಮ್ಮೆ ದುಬಾರಿಯಾಯಿತು. ಆದರೆ ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಅದ್ಭುತ ಪ್ರದರ್ಶನ ನೀಡಿ 4 ಓವರ್‌ಗಳಲ್ಲಿ 41 ರನ್‌ ನೀಡಿ 4 ವಿಕೆಟ್‌ಗಳನ್ನು ಪಡೆದರು. ಇದರಲ್ಲಿ ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಹೆನ್ರಿಕ್ ಕ್ಲಾಸೆನ್ ಮತ್ತು ಶಿವಾಂಗ್ ಕುಮಾರ್ ಅವರ ವಿಕೆಟ್​​ಗಳು ಸೇರಿದ್ದವು.

ಕೆಕೆಆರ್ ಬ್ಯಾಟಿಂಗ್ ವೈಫಲ್ಯ

227 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ ಉತ್ತಮ ಆರಂಭವನ್ನು ಪಡೆದುಕೊಂಡಿತು. ಆದರೆ ವಿಕೆಟ್‌ಗಳು ನಿರಂತರವಾಗಿ ಬಿದ್ದ ಕಾರಣ ತಂಡದ ಮೇಲೆ ಒತ್ತಡ ಹೆಚ್ಚಾಯಿತು. ತಂಡದ ಪರ ಯುವ ಬ್ಯಾಟರ್ ಅಂಗ್‌ಕ್ರಿಶ್ ರಘುವಂಶಿ 52 ರನ್‌ಗಳಿಸಿ ರನೌಟ್ ಆದರೆ, ರಿಂಕು ಸಿಂಗ್ ಕೂಡ 35 ರನ್‌ಗಳಿಗೆ ಸುಸ್ತಾದರು. ಇದಕ್ಕೂ ಮೊದಲು, ಫಿನ್ ಅಲೆನ್ 7 ಎಸೆತಗಳಲ್ಲಿ 28 ರನ್‌ಗಳನ್ನು ಗಳಿಸಿ ಸ್ಫೋಟಕ ಆರಂಭ ಒದಗಿಸಿಕೊಟ್ಟರು. ಆದರೆ ಎಸ್‌ಆರ್‌ಹೆಚ್‌ನ ಬೌಲರ್‌ಗಳು ಬಿಗಿಯಾಗಿ ಬೌಲಿಂಗ್ ಮಾಡಿದ ಕೆಕೆಆರ್ ತಂಡವನ್ನು 161 ರನ್‌ಗಳಿಗೆ ಆಲೌಟ್ ಮಾಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇದು ದರ್ಶನ್ ಕಥೆ ಅಲ್ಲ: ‘ಬಾಸ್’ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಬಳಿಕ ನಿರ್ದೇಶಕರ ಸ್ಪಷ್ಟನೆ

ಸತ್ಯ ಘಟನೆಗಳನ್ನು ಆಧರಿಸಿ ‘ಬಾಸ್’ ಸಿನಿಮಾ (Boss Movie) ನಿರ್ಮಾಣ ಆಗಿದೆ. ಈ ಚಿತ್ರಕ್ಕೆ ಲವ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಕಥೆಗೂ ನಟ ದರ್ಶನ್ (Darshan) ಅವರ ಜೀವನದ ಘಟನೆಗಳಿಗೂ ಸಾಮ್ಯತೆ ಕಾಣಿಸಿದೆ ಎಂಬ ಆರೋಪ ಇದೆ. ಆ ಬಗ್ಗೆ ನಿರ್ದೇಶಕರು ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ‘ನಮ್ಮ ಸಿನಿಮಾಗೆ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿದೆ. ಯಾರ ಪ್ರಭಾವಕ್ಕೂ ಒಳಗಾಗದೇ ಕಾನೂನಿನ ಪ್ರಕಾರ ಯು/ಎ ಪ್ರಮಾಣಪತ್ರ ನೀಡಲಾಗಿದೆ. ಸ್ಪಷ್ಟವಾಗಿ ನಾನು ಹೇಳುತ್ತೇನೆ.. ಇದು ಪ್ರತಿ ದಿನ ಸಮಾಜದಲ್ಲಿ ನಡೆಯುವ ಸತ್ಯ ಘಟನೆಗಳನ್ನು ಆಧರಿಸಿ ಮಾಡಿದ ಸಿನಿಮಾ. ಈ ಚಿತ್ರಕ್ಕೂ ದರ್ಶನ್ ಅವರಿಗೂ ಸಂಬಂಧ ಇಲ್ಲ. ಅವರ ಕಥೆಯನ್ನು ಇಟ್ಟುಕೊಂಡು ನಾವು ಸಿನಿಮಾ ಮಾಡಿಲ್ಲ’ ಎಂದು ಲವ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ಸರ್ಕಾರಕ್ಕೆ ‘EV’ ಅಂದ್ರ ಅಲರ್ಜಿ: ಎಲೆಕ್ಟ್ರಿಕ್ ವಾಹನಗಳ ಮೇಲಿನ ತೆರಿಗೆಗೆ ಜೋಶಿ ಕಿಡಿ

ನವದೆಹಲಿ, (ಏಪ್ರಿಲ್ 02): ಕರ್ನಾಟಕ ಸರ್ಕಾರ (Karnataka Government) EVM ಬದಲು ಬ್ಯಾಲೆಟ್ ಪೇಪರ್ ಬಳಸಿ ತಂತ್ರಜ್ಞಾನದಿಂದ ದೂರ ಸರಿದ ಬೆನ್ನಲ್ಲೇ ಇದೀಗ “EVಗಳ ಮೇಲಿನ ತೆರಿಗೆ ವಿನಾಯಿತಿ ಹಿಂಪಡೆದು ಲೈಫ್‌ಟೈಮ್ ರಸ್ತೆ ತೆರಿಗೆ ವಿಧಿಸುತ್ತಿರುವುದು ಸುಧಾರಣೆಯಿಂದ ಮತ್ತೊಂದು ಹೆಜ್ಜೆ ಹಿಂದೆ ಹೋದಂತಿದೆ” ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ (Union Minister pralhad joshi)  ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸರ್ಕಾರ ಈ ಮೂಲಕ EV ನೀತಿಗೆ ಭಾರೀ ಯು-ಟರ್ನ್ ಹೊಡೆಯುತ್ತಿದೆ. ಶುದ್ಧ ಇಂಧನಕ್ಕಾಗಿ ಇಡೀ ಜಗತ್ತೇ ಇಂದು ಭಾರತ ದೇಶದ ಜತೆ ಮುಂದಡಿ ಇಟ್ಟಿದೆ. ಅಂಥದ್ದರಲ್ಲಿ ಕರ್ನಾಟಕ ಏಕೆ ಹೀಗೆ ರಿವರ್ಸ್ ಗೇರ್ ಹಾಕುತ್ತಿದೆ? ಎಂದು ಸಚಿವರು ಪ್ರಶ್ನಿಸಿದ್ದಾರೆ.

ಇದನ್ನು ಓದಿ: ಎಲೆಕ್ಟ್ರಿಕ್ ಕಾರು ಪ್ರಿಯರಿಗೆ ಶಾಕ್: ಇನ್ಮುಂದೆ ಕರ್ನಾಟಕದಲ್ಲಿ ಇವಿ ವಾಹನಗಳೂ ದುಬಾರಿ! ಕಾರಣ ಇಲ್ಲಿದೆ

ಕರ್ನಾಟಕ ಸರ್ಕಾರ ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳ (EV) ಮೇಲೆ ವಿಧಿಸಿದ್ದ ತೆರಿಗೆ ವಿನಾಯಿತಿಯನ್ನು ಹಿಂಪಡೆದು, ಈಗ ಲೈಫ್‌ಟೈಮ್ ರಸ್ತೆ ತೆರಿಗೆ ವಿಧಿಸುವ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ಮಧ್ಯಮ ವರ್ಗದವರ ಮೇಲೆ ಹೆಚ್ಚುವರಿ ಭಾರ ಹಾಕುತ್ತಿದೆ ಎಂದು ಜೋಶಿ ಕಿಡಿ ಕಾರಿದ್ದಾರೆ.

ದೇಶದಲ್ಲಿನ ಇತರೆ ರಾಜ್ಯಗಳು EV ಬಳಕೆಯನ್ನು ಉತ್ತೇಜಿಸುತ್ತಿವೆ. ವಾಸ್ತವ ಹೀಗಿರುವಾಗ ಕರ್ನಾಟಕ ಮಾತ್ರ ಹಸಿರು ಇಂಧನ ಆಯ್ಕೆಯನ್ನು ಪ್ರೋತ್ಸಾಹಿಸುವಲ್ಲಿ ನಿರುತ್ಸಾಹ ತೋರುತ್ತಿದೆ. ಸ್ವಚ್ಛ ಸಾರಿಗೆಗೆ ಮಾದರಿಯಾಗಿದ್ದ ಕರ್ನಾಟಕವನ್ನು ಸುಧಾರಣೆಯಿಂದ ಹಿಂದಡಿ ಇಡುವಂತೆ ಮಾಡಿದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಜನಸಾಮಾನ್ಯರು EV ಖರೀದಿಸುವಾಗ ಹೆಚ್ಚುವರಿ ವೆಚ್ಚ ಭರಿಸುವಂತೆ ಆಗಿದೆ. ಮಧ್ಯಮ ವರ್ಗದವರಿಗೆ EV ತೆಗೆದುಕೊಳ್ಳುವುದು ಬಲು ದುಬಾರಿಯಾಗಿ ಪರಿಣಮಿಸುತ್ತಿದೆ ಎಂದು ಸಚಿವ ಜೋಶಿ ಕಳವಳ ವ್ಯಕ್ತಪಡಿಸಿದ್ದಾರೆ.

ಇತರ ರಾಜ್ಯಗಳಲ್ಲಿ EVಗಳಿಗೆ ತೆರಿಗೆ ವಿನಾಯಿತಿ, ಮತ್ತು ಕಡಿಮೆ ತೆರಿಗೆ ವಿಧಿಸಲಾಗುತ್ತಿದೆ. ಅಲ್ಲದೇ, ಹಸಿರು ಇಂಧನವನ್ನು ಉತ್ತೇಜಿಸುವ ನೀತಿಗಳು ಮುಂದುವರಿದಿವೆ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಜನವಿರೋಧಿ, ಆವಿಷ್ಕಾರ, ತಂತ್ರಜ್ಞಾನ ನೀತಿಗಳಿಂದಾಗಿ ರಾಜ್ಯವನ್ನು ಹಿಮ್ಮುಖವಾಗಿ ಕೊಂಡೊಯ್ಯುತ್ತಿದೆ. ರಾಜ್ಯ ಸರ್ಕಾರದ ಈ ನಡೆ EV ಬಳಕೆಯನ್ನು ಉತ್ತೇಜಿಸುವ ಬದಲು, ಕಡಿಮೆ ಮಾಡುವ ಸಾಧ್ಯತೆ ಇದೆ ಆತಂಕ ಪಟ್ಟಿರುವ ಸಚಿವರು, ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಗೆಹರಿಸದಿದ್ರೆ ಕುಟುಂಬ ಸಮೇತ ಆತ್ಮಹತ್ಯೆ: ಸಚಿವರ ಮುಂದೆ ವಿಷದ ಬಾಟ್ಲು ಹಿಡಿದು ನಿಂತ ವ್ಯಕ್ತಿ

ದೇವನಹಳ್ಳಿ, ಏಪ್ರಿಲ್​ 02: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಜಿಲ್ಲಾಡಳಿತ ಭವನದಲ್ಲಿ ಸಚಿವ ಕೆ.ಹೆಚ್ ಮುನಿಯಪ್ಪ ನೇತೃತ್ವದಲ್ಲಿ ನಡೆದ ಡಾ. ಬಿಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತಿನ ಜಟಾಪಟಿಯೇ ನಡೆಯಿತು. ಇದೇ ವೇಳೆ ಸಚಿವರ ಎದುರೇ ವಿಷ ಕುಡಿಯುವುದಾಗಿ ರೈತರೊಬ್ಬರು ಹೇಳಿದ್ದಾರೆ. ದೇವನಹಳ್ಳಿಯ ಮುದಗುರ್ಕಿ ಗ್ರಾಮದ ನಿವಾಸಿ ಆಂಜಿನಪ್ಪ ಸಭೆಗೆ ವಿಷದ ಬಾಟಲ್ ತಂದಿದ್ದರು. 20 ಗುಂಟೆ ಜಮೀನು ವ್ಯಾಜ್ಯ ವಿಚಾರಕ್ಕೆ ಅಧಿಕಾರಿಗಳು ಕಿರುಕುಳ ನೀಡುತ್ತಿರುವ ಆರೋಪ ಮಾಡಿದ್ದಾರೆ. ಅಂಬೇಡ್ಕರ್ ಜಯಂತಿ ಒಳಗಾಗಿ ವ್ಯಾಜ್ಯ ಬಗೆ ಹರಿಸದಿದ್ದರೆ ಕುಟುಂಬ ಸಮೇತ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಪೊಲೀಸರು ವಿಷದ ಬಾಟಲ್ ಕಿತ್ತುಕೊಂಡು ಬುದ್ದಿವಾದ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link