All posts by nagaraj11081993

ಇತಿಹಾಸಕ್ಕೆ ಮರುಜೀವ ನೀಡಿದ ಪಾಕ್: ವಿಭಜನೆ ಪೂರ್ವದ ಹಿಂದೂ-ಸಿಖ್ ಹೆಸರುಗಳು ಲಾಹೋರ್ ಬೀದಿಗಳಿಗೆ ವಾಪಸ್, ಇಸ್ಲಾಂಪುರ ಈಗ ಕೃಷ್ಣ ನಗರ – Kannada News | Lahore Revives Several Pre Partition Street Names in Heritage Move

ಲಾಹೋರ್, ಮೇ 19: ಭಾರತ ಮತ್ತು ಪಾಕಿಸ್ತಾನ(Pakistan) ವಿಭಜನೆಯಾಗಿ 79 ವರ್ಷಗಳ ನಂತರ, ಪಾಕಿಸ್ತಾನ ಸರ್ಕಾರವು ಲಾಹೋರ್​ನ ಇತಿಹಾಸವನ್ನು ಪುನಃ ಬರೆಯುವ ಮಹತ್ವದ ಸಾಹಸಕ್ಕೆ ಕೈಹಾಕಿದೆ. ದಶಕಗಳ ಹಿಂದೆ ಇಸ್ಲಾಮೀಕರಣದ ಭಾಗವಾಗಿ ಬದಲಾಗಿದ್ದ ರಸ್ತೆಗಳು, ಚೌಕಗಳು ಮತ್ತು ಐತಿಹಾಸಿಕ ಸ್ಥಳಗಳ ಹೆಸರುಗಳನ್ನು ತೆಗೆದುಹಾಕಿ, ಅವುಗಳ ಮೂಲ ಹಿಂದೂ, ಸಿಖ್ ಮತ್ತು ಬ್ರಿಟಿಷ್ ಯುಗದ ಹೆಸರುಗಳ ಸೈನ್ ಬೋರ್ಡ್​ ಮರುಸ್ಥಾಪಿಸುತ್ತಿದೆ. ಕೇವಲ ಎರಡು ತಿಂಗಳ ಅವಧಿಯಲ್ಲಿ ಲಾಹೋರ್‌ನ ಪ್ರಮುಖ ಒಂಬತ್ತು ಸ್ಥಳಗಳು ತಮ್ಮ ಮೂಲ ಗುರುತನ್ನು ಮರಳಿ ಪಡೆದಿವೆ.

ಈ ಐತಿಹಾಸಿಕ ಪುನಃಸ್ಥಾಪನೆ ಕಾರ್ಯದ ಹಿಂದೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಅವರ ಪುತ್ರಿ, ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರ ದೊಡ್ಡ ಲೆಕ್ಕಾಚಾರವಿದೆ. 2025 ರಲ್ಲಿ ಮರ್ಯಮ್ ನವಾಜ್ ನೇತೃತ್ವದಲ್ಲಿ ಆರಂಭವಾದ ‘ಲಾಹೋರ್ ಅಥಾರಿಟಿ ಫಾರ್ ಹೆರಿಟೇಜ್ ರಿವೈವಲ್’ (LAHR) ಸಂಸ್ಥೆಯು ಸುಮಾರು 50 ಬಿಲಿಯನ್ ಪಾಕಿಸ್ತಾನಿ ರೂಪಾಯಿಗಳ ಬಜೆಟ್‌ನಲ್ಲಿ ಈ ನಗರ ಸಂರಕ್ಷಣಾ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಯುರೋಪಿಯನ್ ದೇಶಗಳು ತಮ್ಮ ಐತಿಹಾಸಿಕ ಹೆಸರುಗಳನ್ನು ಎಂದಿಗೂ ಬದಲಾಯಿಸುವುದಿಲ್ಲ, ಅವುಗಳನ್ನು ಉಳಿಸಿಕೊಳ್ಳುತ್ತವೆ.

ಲಾಹೋರ್‌ನ ಪ್ರಾಚೀನ ಹೆಸರುಗಳು ನಮ್ಮ ಇತಿಹಾಸದ ಭಾಗವಾಗಿದ್ದು, ಅವುಗಳನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ ಎಂದು ಉನ್ನತ ಮಟ್ಟದ ಸಭೆಯಲ್ಲಿ ನವಾಜ್ ಷರೀಫ್ ಪ್ರತಿಪಾದಿಸಿದ್ದಾರೆ. ಶತಮಾನಗಳಿಂದ ಸ್ಥಳೀಯ ಜನ ಸಾಮಾನ್ಯರ ನೆನಪಿನಲ್ಲಿ ಸದ್ದಿಲ್ಲದೆ ಉಳಿದುಕೊಂಡಿದ್ದ ಹಳೆಯ ಹೆಸರುಗಳು ಈಗ ಅಧಿಕೃತವಾಗಿ ಸೈನ್‌ಬೋರ್ಡ್‌ಗಳ ಮೇಲೆ ರಾರಾಜಿಸುತ್ತಿವೆ.

ಮತ್ತಷ್ಟು ಓದಿ: ಭಯೋತ್ಪಾದನೆ ನಿಲ್ಲಿಸದಿದ್ದರೆ ಇತಿಹಾಸ, ಭೂಪಟದಿಂದ ಪಾಕಿಸ್ತಾನ ಮರೆಯಾಗಲಿದೆ: ಭಾರತೀಯ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!

ಇಸ್ಲಾಂಪುರ-ಕೃಷ್ಣ ನಗರವಾಗಿ, ಸುನ್ನತ್ ನಗರ-ಸಂತನಗರವಾಗಿ, ಮೌಲಾನಾ ಜಾಫರ್ ಅಲಿ ಖಾನ್ ಚೌಕ-ಲಕ್ಷ್ಮಿ ಚೌಕವಾಗಿ, ಬಾಬರಿ ಮಸೀದಿ ಚೌಕ-ಜೈನ ಮಂದಿರ ಚೌಕವಾಗಿ, ಮುಸ್ತಫಾಬಾದ್-ಧರ್ಮಪುರವಾಗಿ, ಸರ್ ಆಗಾ ಖಾನ್ ಚೌಕ-ಡೇವಿಸ್ ರಸ್ತೆಯಾಗಿ, ಅಲ್ಲಾಮ ಇಕ್ಬಾಲ್ ರಸ್ತೆ-ಜೈಲ್ ರಸ್ತೆಯಾಗಿ, ಫಾತಿಮಾ ಜಿನ್ನಾ ರಸ್ತೆ-ಕ್ವೀನ್ಸ್​ ರಸ್ತೆಯಾಗಿ, ಬಾಗ್-ಎ-ಜಿನ್ನಾ-ಲಾರೆನ್ಸ್ ಗಾರ್ಡನ್ಸ್ ಆಗಿ ಹಳೆಯ ಹೆಸರುಗಳನ್ನು ಪಡೆಯಲಿವೆ.

ಇವುಗಳಲ್ಲಿ ಜೈನ ಮಂದಿರ ಚೌಕ ಇತಿಹಾಸ ರೋಚಕವಾಗಿದೆ. 1990 ರ ದಶಕದಲ್ಲಿ ಭಾರತದಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಸೃಷ್ಟಿಯಾಗಿದ್ದ ಧಾರ್ಮಿಕ ಉದ್ವಿಗ್ನತೆಯ ಸಂದರ್ಭದಲ್ಲಿ ಈ ಚೌಕಕ್ಕೆ ‘ಬಾಬರಿ ಮಸೀದಿ ಚೌಕ’ ಎಂದು ಹೆಸರಿಡಲಾಗಿತ್ತು. ಈಗ 79 ವರ್ಷಗಳ ನಂತರ ಅದು ಮತ್ತೆ ಜೈನ ಮಂದಿರ ಚೌಕ ಆಗಿದೆ.

ದಶಕಗಳಿಂದ ತೀವ್ರ ಸೈದ್ಧಾಂತಿಕ ಇಸ್ಲಾಮೀಕರಣಕ್ಕೆ ಒಗ್ಗಿಕೊಂಡಿರುವ ಪಾಕಿಸ್ತಾನದಲ್ಲಿ, ಈ ಹಿಂದೂ-ಸಿಖ್ ಹೆಸರುಗಳ ಪುನಃಸ್ಥಾಪನೆಗೆ ಯಾವುದೇ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗದೇ ಇರುವುದು ಜಾಗತಿಕ ರಾಜತಾಂತ್ರಿಕರನ್ನು ಅಚ್ಚರಿಗೊಳಿಸಿದೆ. ಲಾಹೋರ್‌ನ ಈ ಯಶಸ್ಸಿನ ಬೆನ್ನಲ್ಲೇ, ಯೋಜನೆಯ ಎರಡನೇ ಹಂತದಲ್ಲಿ ಸಿಂಧ್ ಮತ್ತು ಖೈಬರ್ ಪಖ್ತುಂಖ್ವಾದ ಕೆಲವು ಭಾಗಗಳಲ್ಲೂ ಹಳೆಯ ಐತಿಹಾಸಿಕ ಹೆಸರುಗಳನ್ನು ಮರುಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ.

ಭಾರತದ ಅಮೃತಸರದಿಂದ ಕೇವಲ 50 ಕಿಲೋಮೀಟರ್ ದೂರದಲ್ಲಿರುವ ಲಾಹೋರ್, ಧರ್ಮದ ಹೆಸರಿನಲ್ಲಿ ಕತ್ತರಿಸಿ ಹೋಗಿದ್ದ ತನ್ನ ವೈವಿಧ್ಯಮಯ ಇತಿಹಾಸದ ಬೇರುಗಳೊಂದಿಗೆ ಮತ್ತೆ ಸಂಪರ್ಕ ಸಾಧಿಸುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆಯಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಾಡಿದ್ದುಣ್ಣೋ ಮಹಾರಾಯ, ಬೆಕ್ಕಿಗೆ ಒದ್ದ ಮಹಿಳೆಗೆ ಏನಾಯ್ತು ನೋಡಿ

ಭದ್ರತೆ ದೃಷ್ಟಿಯಿಂದ ಬಹುತೇಕ ಎಲ್ಲಾ ಅಪಾರ್ಟ್​ಮೆಂಟ್​ಗಳಲ್ಲಿ ಈಗ ಸಿಸಿಟಿವಿ ಇರುವುದು ಸಾಮಾನ್ಯ, ಈ ಕ್ಯಾಮರಾಗಳ ಕಣ್ಣಲ್ಲಿ ಕೆಲವೊಂದು ಹಾಸ್ಯಮಯ ಸನ್ನಿವೇಶಗಳು ಕೂಡ ಸೆರೆಯಾಗುತ್ತವೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಕಟ್ಟಡದ ಮೆಟ್ಟಿಲು ಹತ್ತುವಾಗ ಅಲ್ಲೇ ಮಲಗಿದ್ದ ಬೆಕ್ಕಿಗೆ ಒದೆಯುತ್ತಾರೆ. ಇನ್ನೇನು ಮೆಟ್ಟಿಲು ಹತ್ತಲು ಶುರು ಮಾಡುವಾಗ ಎಡವಿ ಬೀಳುತ್ತಾರೆ. ನಾವು ಬೇರೆಯವರಿಗೆ ಏನು ಮಾಡುತ್ತೀವೋ ವಿಧಿಯೂ ನಮಗೆ ಅದನ್ನೇ ಮಾಡುತ್ತದೆ ಎಂಬುದಕ್ಕೆ ಇದು ಸಾಕ್ಷಿ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Horoscope Today: ಇಂದು ಈ ರಾಶಿಯವರ ವಿವಾಹ ವಿಷಯದಲ್ಲಿ ಮನ್ನಣೆ!

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 19, ಮಂಗಳವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಈ ಶುಭ ದಿನವು ಪರಾಭವನಾ ಸಂವತ್ಸರ, ಉತ್ತರಾಯಣ, ಅಧಿಕ ಜ್ಯೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ, ತದಿಗೆ ತಿಥಿ, ಮೃಗಶಿರಾ ನಕ್ಷತ್ರ, ಧೃತಿ ಯೋಗ ಮತ್ತು ತೈತುಲ ಕರಣದಿಂದ ಕೂಡಿದೆ. ರವಿ ಮತ್ತು ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುತ್ತಿದ್ದು, ಇದು ಗ್ರಹಗತಿಗಳ ಮೇಲೆ ಪ್ರಮುಖ ಪರಿಣಾಮ ಬೀರಲಿದೆ.

ರಾಹುಕಾಲವು ಮಧ್ಯಾಹ್ನ 3:25 ರಿಂದ ಸಂಜೆ 5:00 ರವರೆಗೆ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಮತ್ತು ಶುಭಕಾಲವು ಬೆಳಗ್ಗೆ 10:40 ರಿಂದ ಮಧ್ಯಾಹ್ನ 12:16 ರವರೆಗೆ ಇರುತ್ತದೆ. ಮಂಗಳವಾರವು ಸುಬ್ರಹ್ಮಣ್ಯನ ಆರಾಧನೆಗೆ ಪ್ರಶಸ್ತವಾದ ದಿನವಾಗಿದೆ ಎಂದು ಗುರೂಜಿ ತಿಳಿಸಿದ್ದಾರೆ.

 

Source link

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು, ಮೇ 19: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪತ್ನಿ ಸಮೇತ ಮಂಗಳವಾರ ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು. ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 3 ವರ್ಷಗಳಾದ ದಿನವೇ ಡಿಸಿಎಂ ದೇವರ ದರ್ಶನ ಪಡೆದರು. ಡಿಕೆಶಿ ಆಪ್ತ, ಕುಣಿಗಲ್ ಶಾಸಕ ರಂಗನಾಥ್ ಕೂಡ ಜತೆಗಿದ್ದರು. ಏತನ್ಮಧ್ಯೆ, ತುಮಕೂರಿನಲ್ಲಿ ಇಂದು ಇಂದು ರಾಜ್ಯ ಸರ್ಕಾರದ ಸಾಧನಾ ಸಮಾವೇಶ ನಡೆಯುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Tulasi Puja: ಮನೆಯಲ್ಲಿ ತುಳಸಿ ಪೂಜೆ ಮಾಡಿದ್ರೂ ನೆಮ್ಮದಿ ಇಲ್ವಾ? ಹಾಗಾದ್ರೆ ನೀವು ತಿಳಿಯದೇ ಮಾಡ್ತಿರೋ ಈ ತಪ್ಪುಗಳೇ ಕಾರಣ! – Kannada News | Tulasi Puja Mistakes: Avoid These for Home Peace and Prosperity!

ಸನಾತನ ಧರ್ಮದಲ್ಲಿ ತುಳಸಿ ಗಿಡಕ್ಕೆ ಅತ್ಯಂತ ಪವಿತ್ರ ಹಾಗೂ ದೈವಿಕ ಸ್ಥಾನವಿದೆ. ಪ್ರತಿ ಮನೆಯ ಅಂಗಳದಲ್ಲಿರುವ ತುಳಸಿಗೆ, ಬೆಳಿಗ್ಗೆ ಮತ್ತು ಸಂಜೆ ದೀಪ ಹಚ್ಚಿ ಪೂಜಿಸುವುದು ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಶ್ರೇಷ್ಠ ಸಂಪ್ರದಾಯವಾಗಿದೆ. ತುಳಸಿ ಇರುವ ಮನೆಯಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ದೇವಿ ನೆಲೆಸುತ್ತಾಳೆ ಮತ್ತು ಆ ಮನೆ ಯಾವಾಗಲೂ ಸುಖ-ಸಂಪತ್ತಿನಿಂದ ತುಂಬಿರುತ್ತದೆ ಎಂಬುದು ಹಿರಿಯರ ನಂಬಿಕೆ.

ಆದಾಗ್ಯೂ, ಕೆಲವು ಮನೆಗಳಲ್ಲಿ ತುಳಸಿ ಗಿಡವನ್ನು ಎಷ್ಟೇ ಭಕ್ತಿಯಿಂದ ಪೂಜಿಸಿದರೂ, ಎಷ್ಟೇ ಸುಂದರವಾಗಿ ಬೆಳೆಸಿದರೂ ಶಾಂತಿ ಇರುವುದಿಲ್ಲ. ನಿರಂತರ ಜಗಳಗಳು, ಮಕ್ಕಳಲ್ಲಿ ಏಕಾಗ್ರತೆಯ ಕೊರತೆ ಮತ್ತು ಮನಸ್ಸಿನಲ್ಲಿ ಸದಾ ಏನೋ ಒಂದು ಅಕಾರಣ ಚಿಂತೆ ಕಾಡುತ್ತಿರುತ್ತದೆ. ಇಷ್ಟೆಲ್ಲಾ ಪೂಜೆ ಮಾಡಿದ ನಂತರವೂ ಮನೆಯಲ್ಲಿ ತೃಪ್ತಿ ಸಿಗದಿದ್ದರೆ, ಅದಕ್ಕೆ ನಾವು ತಿಳಿಯದೇ ತುಳಸಿ ಕಟ್ಟೆಯ ಬಳಿ ಮಾಡುವ ಕೆಲವು ಸಣ್ಣ ತಪ್ಪುಗಳೇ ಕಾರಣವಾಗಿರಬಹುದು. ಶುದ್ಧತೆಯ ಜಾಗದಲ್ಲಿ ಅಶುದ್ಧತೆ ಪ್ರವೇಶಿಸಿದರೆ ದೇವರ ಕೃಪೆ ಕಡಿಮೆಯಾಗುತ್ತದೆ ಎಂದು ಧರ್ಮಶಾಸ್ತ್ರಗಳು ಎಚ್ಚರಿಸುತ್ತವೆ. ಹಾಗಾದರೆ, ತುಳಸಿ ಗಿಡದ ಬಳಿ ನಾವು ಯಾವ ತಪ್ಪುಗಳನ್ನು ಮಾಡಬಾರದು? ಇಲ್ಲಿದೆ ಸಂಪೂರ್ಣ ಮಾಹಿತಿ.

ತುಳಸಿ ಕಟ್ಟೆಯ ಸುತ್ತ ಕಸ, ತ್ಯಾಜ್ಯ ಇಡಬೇಡಿ:

ಇತ್ತೀಚಿನ ದಿನಗಳಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಅಥವಾ ನಿರ್ಲಕ್ಷ್ಯದಿಂದಾಗಿ ಅನೇಕರು ತುಳಸಿಯ ಪಕ್ಕದಲ್ಲೇ ತಾತ್ಕಾಲಿಕವಾಗಿ ಕಸದ ತೊಟ್ಟಿಗಳು, ಹಳೆಯ ವಸ್ತುಗಳು ಅಥವಾ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಇಡುತ್ತಾರೆ. ಇದು ಅತಿ ದೊಡ್ಡ ತಪ್ಪು. ತುಳಸಿ ಕೇವಲ ಸಸ್ಯವಲ್ಲ, ಆಕೆ ಭಗವಾನ್ ವಿಷ್ಣುವಿನ ಪ್ರೀತಿಯ ಪವಿತ್ರ ರೂಪ. ತುಳಸಿಯ ಸುತ್ತಮುತ್ತ ಚಪ್ಪಲಿಗಳು, ಹಳೆಯ ಬಟ್ಟೆಗಳು ಅಥವಾ ಮುರಿದ ವಸ್ತುಗಳನ್ನು ಇಡುವುದರಿಂದ ಆ ಜಾಗದ ಪಾವಿತ್ರ್ಯತೆ ಕೆಡುತ್ತದೆ ಮತ್ತು ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

ಗಿಡ ಒಣಗದಂತೆ ನೋಡಿಕೊಳ್ಳಿ:

ತುಳಸಿ ಗಿಡವು ಯಾವಾಗಲೂ ಹಸಿರಾಗಿರುವಂತೆ ನೋಡಿಕೊಳ್ಳುವುದು ಮನೆಯ ಯಜಮಾನನ ಜವಾಬ್ದಾರಿ. ನಮ್ಮ ನಿರ್ಲಕ್ಷ್ಯದಿಂದಾಗಿ ತುಳಸಿ ಗಿಡ ಒಣಗಿ ಹೋದರೆ, ಅದು ಮನೆಯಲ್ಲಿನ ಆಧ್ಯಾತ್ಮಿಕ ಶಕ್ತಿ ಕ್ಷೀಣಿಸುತ್ತಿದೆ ಎಂಬುದರ ಸಂಕೇತವಾಗಿದೆ. ಆದ್ದರಿಂದ ಪ್ರತಿದಿನ ನಿಯಮಿತವಾಗಿ ನೀರು ಹಾಕಿ ಗಿಡವನ್ನು ಹಸನ್ಮುಖಿಯಾಗಿ ಇಡಬೇಕು.

ಸೂರ್ಯಾಸ್ತದ ನಂತರ ಎಲೆ ಕತ್ತರಿಸಬೇಡಿ:

ಸೂರ್ಯ ಮುಳುಗಿದ ನಂತರ ಅಥವಾ ರಾತ್ರಿಯ ಸಮಯದಲ್ಲಿ ತುಳಸಿ ಎಲೆಗಳನ್ನು ಕತ್ತರಿಸುವುದು ಅಥವಾ ಗಿಡವನ್ನು ಮುಟ್ಟುವುದು ಅತ್ಯಂತ ಅಶುದ್ಧ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಆ ಸಮಯದಲ್ಲಿ ದೈವಿಕ ಶಕ್ತಿಗಳು ವಿಶ್ರಾಂತಿ ಪಡೆಯುತ್ತವೆ ಎಂಬ ನಂಬಿಕೆಯಿದೆ.

ತುಳಸಿ ಬಳಿ ಕುಳಿತು ಅಳಬೇಡಿ, ವಾದ ಮಾಡಬೇಡಿ:

ತುಳಸಿ ಗಿಡದ ಬಳಿ ಕುಳಿತು ಅಳಬಾರದು, ದುಃಖಿಸಬಾರದು ಅಥವಾ ಕೋಪದಿಂದ ಇತರರನ್ನು ಶಪಿಸಬಾರದು. ಇತ್ತೀಚಿನ ದಿನಗಳಲ್ಲಿ ಅನೇಕರು ಫೋನ್‌ಗಳಲ್ಲಿ ಜಗಳ ಆಡುತ್ತಾ, ವಾದ ಮಾಡುತ್ತಾ ತುಳಸಿ ಕೋಟೆಯ ಸುತ್ತ ತಿರುಗಾಡುತ್ತಾರೆ. ತುಳಸಿಯು ಸಕಾರಾತ್ಮಕ ಶಕ್ತಿಯನ್ನು (Positive Energy) ಆಕರ್ಷಿಸುವ ಕೇಂದ್ರವಾಗಿದೆ. ನಾವು ಅಲ್ಲಿ ನಕಾರಾತ್ಮಕ ಭಾವನೆಗಳನ್ನು ವ್ಯಕ್ತಪಡಿಸಿದರೆ, ಮನೆಯಲ್ಲಿ ಆತಂಕ ಮತ್ತು ಅಶಾಂತಿ ಮತ್ತಷ್ಟು ಹೆಚ್ಚಾಗುತ್ತದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಪ್ರಾರ್ಥನೆ ಮಾಡುವ ಸರಿಯಾದ ಕ್ರಮ ಯಾವುದು?

ದೇವರೆದುರು ಪ್ರಾರ್ಥಿಸುವಾಗ, “ನನಗೆ ಈ ತೊಂದರೆಗಳನ್ನು ಏಕೆ ನೀಡಿದೆ?” ಎಂದು ಹತಾಶೆಯಿಂದ ಕೇಳಬಾರದು. ಬದಲಾಗಿ, ಪೂರ್ಣ ನಂಬಿಕೆಯಿಂದ “ಎಂತಹ ಕಷ್ಟ ಬಂದರೂ ಎದುರಿಸುವ ಧೈರ್ಯವನ್ನು ದೇವರು ನನಗೆ ನೀಡುತ್ತಾನೆ” ಎಂದು ಧನಾತ್ಮಕವಾಗಿ ಕೇಳಿಕೊಳ್ಳಬೇಕು.

ನೆಮ್ಮದಿಗಾಗಿ ಪ್ರತಿ ಶುಕ್ರವಾರ ಹೀಗೆ ಮಾಡಿ:

  • ಪ್ರತಿ ಶುಕ್ರವಾರ ಸಂಜೆ ತುಳಸಿ ಕಟ್ಟೆಯ ಸುತ್ತಮುತ್ತಲಿನ ಜಾಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ.
  • ಮನೆಯಲ್ಲಿ ಲಕ್ಷ್ಮಿ ಅಷ್ಟೋತ್ತರ ಅಥವಾ ಸ್ತೋತ್ರಗಳನ್ನು ಹಾಕಿ, ತುಳಸಿ ದೇವಿಗೆ ಸಣ್ಣ ತುಪ್ಪದ ದೀಪವನ್ನು ಬೆಳಗಿಸಿ.
  • ದೀಪ ಹಚ್ಚುವ ಸಮಯದಲ್ಲಿ ಮನೆಯಲ್ಲಿರುವ ಸದಸ್ಯರೆಲ್ಲರೂ ಯಾವುದೇ ಜಗಳವಿಲ್ಲದೆ ಶಾಂತಿಯುತವಾಗಿ, ಪ್ರೀತಿಯಿಂದ ಒಟ್ಟಿಗೆ ಮಾತನಾಡಬೇಕು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧೋನಿ ಸ್ಟೈಲ್​​ನಲ್ಲಿ ಸ್ಟಂಪಿಂಗ್; ಸಂಜು-ಕ್ಲಾಸನ್ ಮಧ್ಯೆ ಫುಲ್ ಕಿರಿಕ್

ಹೈದರಾಬಾದ್ ಹಾಗೂ ಚೆನ್ನೈ ನಡುವಿನ ಪಂದ್ಯದಲ್ಲಿ ಒಂದು ಡ್ರಾಮಾ ನಡೆಯಿತು. ಹೈದರಾಬಾದ್ ತಂಡದ ಬ್ಯಾಟಿಂಗ್ ವೇಳೆ, 15ನೇ ಓವರ್‌ನ ಮೂರನೇ ಎಸೆತದಲ್ಲಿ ಒಂದು ಘಟನೆ ನಡೆಯಿತು. ನೂರ್ ಅಹ್ಮದ್ ಅವರ ಗೂಗ್ಲಿ ಎಸೆತವನ್ನು ಸಿಕ್ಸರ್ ಬಾರಿಸಲು ಕ್ಲಾಸನ್ ಮುಂದಾದರು. ಆದರೆ ಬಾಲ್ ಬ್ಯಾಟ್‌ಗೆ ಸಿಗದೆ ವಿಕೆಟ್‌ಕೀಪರ್ ಕೈ ಸೇರಿತು. ಈ ವೇಳೆ ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್, ಮಾಜಿ ನಾಯಕ ಎಂ.ಎಸ್. ಧೋನಿ ಶೈಲಿಯಲ್ಲಿ ಅತಿ ವೇಗವಾಗಿ ಸ್ಟಂಪಿಂಗ್ ಮಾಡಿದರು. ಈ ಮೂಲಕ 47 ರನ್ ಗಳಿಸಿ ಅಪಾಯಕಾರಿಯಾಗಿದ್ದ ಕ್ಲಾಸನ್ ವಿಕೆಟ್ ಒಪ್ಪಿಸಬೇಕಾಯಿತು.

ಕ್ಲಾಸನ್ ಔಟ್ ಆದ ಬಳಿಕ ಸಂಜು ಸ್ಯಾಮ್ಸನ್ ತೀವ್ರ ಆಕ್ರೋಶ ಮತ್ತು ರೋಷದಿಂದ ಸಂಭ್ರಮ ಆಚರಿಸಿ, ಕ್ಲಾಸನ್ ಅವರತ್ತ ತೀಕ್ಷ್ಣವಾಗಿ ದಿಟ್ಟಿಸಿ ನೋಡಿದರು. ಇದು ಹೆನ್ರಿಚ್ ಕ್ಲಾಸನ್ ಅವರನ್ನು ಕೆರಳಿಸಿತು. ಪೆವಿಲಿಯನ್‌ ಕಡೆಗೆ ಹೆಜ್ಜೆ ಇಡುತ್ತಿದ್ದ ಕ್ಲಾಸನ್, ಸಂಜು ಅವರ ಸಂಭ್ರಮದ ಶೈಲಿಯನ್ನು ಕಂಡು ತಿರುಗಿ ನಿಂತು ಮೈದಾನದಲ್ಲೇ ತೀವ್ರ ವಾಗ್ವಾದಕ್ಕಿಳಿದರು. ಇಬ್ಬರ ನಡುವೆ ಕಾವೇರಿದ ಮಾತಿನ ಚಕಮಕಿ ನಡೆಯಿತು. ಡಗೌಟ್‌ಗೆ ಮರಳುವಾಗಲೂ ಕ್ಲಾಸನ್ ತಮ್ಮ ಸಿಟ್ಟನ್ನು ಹೊರಹಾಕುತ್ತಲೇ ಸಾಗಿದರು.

ಇನ್ನಷ್ಟು  ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ವಿಸಿಲ್ ಹೊಡೆದು ಮನೆಗೆ ಹೋಗಿ’; ವೈಲ್ಡ್ ಸೆಲೆಬ್ರೇಷನ್ ಮಾಡಿದ ಇಶಾನ್ ಕಿಶನ್ – Kannada News | Ishan Kishan Mocks CSK After Win; SRH Qualifies for IPL Playoffs

ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರ (ಮೇ 18) ನಡೆದ ಪ್ರಮುಖ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಸೋಲಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಆಫ್ ಹಾದಿ ಬಹುತೇಕ ಮುಚ್ಚಲ್ಪಟ್ಟಿದ್ದು, ಟೂರ್ನಿಯಿಂದ ಹೊರಬೀಳುವುದು ಖಚಿತವಾಗಿದೆ. ಮತ್ತೊಂದೆಡೆ ಎಸ್‌ಆರ್‌ಎಚ್ ತಂಡವು ಅಧಿಕೃತವಾಗಿ ಪ್ಲೇಆಫ್‌ಗೆ ಲಗ್ಗೆ ಇಟ್ಟಿದೆ.

ಚೆಪಾಕ್‌ನ ನಿಧಾನಗತಿಯ ಪಿಚ್‌ನಲ್ಲಿ ಸಿಎಸ್‌ಕೆ ನೀಡಿದ್ದ 181 ರನ್‌ಗಳ ಸವಾಲನ್ನು ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ಇಶಾನ್ ಕಿಶನ್ ಆಸರೆಯಾದರು. ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಕಿಶನ್ 47 ಎಸೆತಗಳಲ್ಲಿ 70 ರನ್ ಚಚ್ಚಿದರು. ಹೆನ್ರಿಚ್ ಕ್ಲಾಸೆನ್ ಅವರೊಂದಿಗೆ ಮೂರನೇ ವಿಕೆಟ್‌ಗೆ 75 ರನ್‌ಗಳ ಮಹತ್ವದ ಜೊತೆಯಾಟವಾಡಿದ ಇಶಾನ್, ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದರು. ಹೈದರಾಬಾದ್ ಇನ್ನೊಂದು ಓವರ್ ಬಾಕಿ ಇರುವಂತೆಯೇ ಗುರಿ ತಲುಪಿತು.

ಪಂದ್ಯ ಮುಗಿದ ಬಳಿಕ ಇಶಾನ್ ಕಿಶನ್ ಮಾಡಿದ ಸೆಲೆಬ್ರೇಷನ್ ಸದ್ಯ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿಕೃತ ಘೋಷವಾಕ್ಯ ‘ವಿಸಿಲ್ ಪೋಡು’ನ ಅನುಕರಿಸಿದರು. ಇಶಾನ್ ಕಿಶನ್ ಮೈದಾನದಲ್ಲೇ ನಿಂತು ಚೆಪಾಕ್ ಪ್ರೇಕ್ಷಕರನ್ನು ನೋಡಿ ಬಾಯಿಗೆ ಕೈಯಿಟ್ಟು ಸೀಟಿ ಊದುವಂತೆ ಸನ್ನೆ ಮಾಡಿದರು. ಅಷ್ಟೇ ಅಲ್ಲದೆ, ಮನೆಯನ್ನು ತೋರಿಸಿದರು. ನೀವು ಮನೆಗೆ ಹೋದಿರಿ ಎಂಬಂತೆ ಇತ್ತು. ಸಿಎಸ್‌ಕೆ ತಂಡವನ್ನು ಅವರದೇ ತವರು ಮೈದಾನದಲ್ಲಿ ಮಣಿಸಿದ ಜೋಶ್‌ನಲ್ಲಿ ಇಶಾನ್ ಕಿಶನ್ ಈ ರೀತಿ ಸಂಭ್ರಮಿಸಿದ್ದು, ಚೆನ್ನೈ ಅಭಿಮಾನಿಗಳಿಗೆ ಕೊಂಚ ಸಿಟ್ಟು ತರಿಸಿದೆ.

ಇದನ್ನೂ ಓದಿ: ಸಿಎಸ್​ಕೆ ಪ್ಲೇಆಫ್‌ ಕನಸಿಗೆ ಕೊಳ್ಳಿ ಇಟ್ಟ ಸನ್‌ರೈಸರ್ಸ್ ಹೈದರಾಬಾದ್

ಈ ಗೆಲುವಿನೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ 16 ಅಂಕಗಳೊಂದಿಗೆ ಪ್ಲೇಆಫ್ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಇದರ ಜೊತೆಗೆ ಗುಜರಾತ್ ಟೈಟನ್ಸ್ ಹಾಗೂ ಈಗಾಗಲೇ 18 ಅಂಕ ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಅಧಿಕೃತವಾಗಿ ನಾಕೌಟ್ ಹಂತ ತಲುಪಿವೆ. 13 ಪಂದ್ಯಗಳಿಂದ ಕೇವಲ 12 ಅಂಕ ಗಳಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಆಫ್ ಕನಸು ಸದ್ಯ ತಾಂತ್ರಿಕವಾಗಿ ಮಾತ್ರ ಜೀವಂತವಾಗಿದ್ದು, ಈ ಸೀಸನ್‌ನಿಂದ ಹೊರಬೀಳುವುದು ಬಹುತೇಕ ಖಚಿತವಾಗಿದೆ.

ಇನ್ನಷ್ಟು  ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಮಳೆ ಹೊಡೆತಕ್ಕೆ ಮಾಲಿನ್ಯ ಗಾಯಬ್, ಸಿಲಿಕಾನ್ ಸಿಟಿಯಲ್ಲಿ ಶುದ್ಧ ಗಾಳಿ! – Kannada News | Bengaluru AQI Today: Air Quality Remains Satisfactory After Heavy Rains

ಮಳೆ ಹೊಡೆತಕ್ಕೆ ಮಾಲಿನ್ಯ ಗಾಯಬ್, ಸಿಲಿಕಾನ್ ಸಿಟಿಯಲ್ಲಿ ಶುದ್ಧ ಗಾಳಿ!

ಬೆಂಗಳೂರು, ಮೇ 18: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು ಗಾಳಿಯ ಗುಣಮಟ್ಟ ಸೂಚ್ಯಂಕ (AQI) ಒಟ್ಟಾರೆಯಾಗಿ ‘ಉತ್ತಮ’ ಹಾಗೂ ‘ಸಾಧಾರಣ’ ಮಟ್ಟದಲ್ಲಿದೆ. ಇತ್ತೀಚೆಗೆ ನಗರದಲ್ಲಿ ಸುರಿದ ಭಾರೀ ಮಳೆಯು ವಾಯುಮಾಲಿನ್ಯವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ತಜ್ಞರು ತಿಳಿಸಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಇಂದಿನ ಗಾಳಿಯ ಗುಣಮಟ್ಟ ಸೂಚ್ಯಂಕ ಸಾಧಾರಣ ಮಟ್ಟದಲ್ಲಿದೆ.
  • ಇತ್ತೀಚಿನ ಭಾರೀ ಮಳೆಯಿಂದಾಗಿ ವಾಯುಮಾಲಿನ್ಯ ಗಣನೀಯವಾಗಿ ನಿಯಂತ್ರಣಕ್ಕೆ ಬಂದಿದೆ.
  • ರಾಜ್ಯದ ಇತರ ನಗರಗಳಲ್ಲೂ ಗಾಳಿಯ ಗುಣಮಟ್ಟ ಅತ್ಯಂತ ಉತ್ತಮವಾಗಿದೆ.

ಬೆಂಗಳೂರಿನ ಇಂದಿನ AQI ಸ್ಥಿತಿ

ಬೆಂಗಳೂರಿನ ಸರಾಸರಿ AQI ಇಂದು 55 ರಿಂದ 65ರ ಆಸುಪಾಸಿನಲ್ಲಿದ್ದು, ಇದನ್ನು ‘ಸಾಧಾರಣ’ (Satisfactory) ವಲಯ ಎಂದು ಪರಿಗಣಿಸಲಾಗುತ್ತದೆ. ನಗರದ ಪ್ರಮುಖ ಐಟಿ ಹಬ್‌ಗಳಾದ ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್ ಮತ್ತು ಬಿಟಿಎಂ ಲೇಔಟ್ ಭಾಗಗಳಲ್ಲಿ AQI 60 ರ ಆಸುಪಾಸಿನಲ್ಲಿದೆ. ಇನ್ನು ಲಾಲ್‌ಬಾಗ್, ಜಯನಗರ ಮತ್ತು ಕಬ್ಬನ್ ಪಾರ್ಕ್‌ನಂತಹ ಹಸಿರು ವಲಯಗಳಲ್ಲಿ ವಾಯು ಗುಣಮಟ್ಟವು 45 ಕ್ಕಿಂತ ಕಡಿಮೆ(Good) ದಾಖಲಾಗಿದ್ದು, ಅತ್ಯಂತ ಶುದ್ಧವಾದ ಗಾಳಿ ಇದೆ.

ರಾಜ್ಯದ ಇತರ ನಗರಗಳ ಸ್ಥಿತಿ

ಕರ್ನಾಟಕದ ಇತರ ಪ್ರಮುಖ ನಗರಗಳಾದ ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡಗಳಲ್ಲೂ ವಾಯು ಗುಣಮಟ್ಟವು ಉತ್ತಮ ಸ್ಥಿತಿಯಲ್ಲಿದೆ. ಕರಾವಳಿ ನಗರಿ ಮಂಗಳೂರಿನಲ್ಲಿ ಸಮುದ್ರದ ಗಾಳಿ ಮತ್ತು ಮಳೆಯ ಕಾರಣದಿಂದ AQI 35ರಷ್ಟಿದ್ದು ಅತ್ಯಂತ ಆರೋಗ್ಯಕರವಾಗಿದೆ.

ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಗಾಳಿಯ ಗುಣಮಟ್ಟವು ಇದೇ ರೀತಿ ಉತ್ತಮ ಮಟ್ಟದಲ್ಲಿ ಮುಂದುವರಿಯುವ ಸಾಧ್ಯತೆಯಿದೆ. ಉಸಿರಾಟದ ತೊಂದರೆ ಇರುವವರು ಮತ್ತು ಹಿರಿಯ ನಾಗರಿಕರು ಮುಂಜಾನೆ ಮುಕ್ತವಾಗಿ ವಾಸಿಮಾಡಲು ಇಂದಿನ ಹವಾಮಾನವು ಅತ್ಯಂತ ಸೂಕ್ತವಾಗಿದೆ.

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ, ಧೂಳಿನ ಕಣಗಳು ನೆಲಕಚ್ಚಲಿವೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಇಡೀ ರಾಜ್ಯದ ವಾಯು ಗುಣಮಟ್ಟವು ಮತ್ತಷ್ಟು ಸುಧಾರಿಸುವ ಸಾಧ್ಯತೆಯಿದೆ ಎಂದು ಪರಿಸರ ನಿಯಂತ್ರಣ ಮಂಡಳಿ ಮೂಲಗಳು ತಿಳಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Adhika Jyeshtha Masa 2026: 3 ವರ್ಷಕ್ಕೊಮ್ಮೆ ಬರುವ ‘ಅಧಿಕ ಜ್ಯೇಷ್ಠ ಮಾಸ’ ರಹಸ್ಯವೇನು? ಈ ಸಮಯದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು? – Kannada News | Adhika Jyeshtha Masa 2026: Dates, Significance and Rituals for Spiritual Growth

ಹಿಂದೂ ಪಂಚಾಂಗದಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಬರುವ ‘ಅಧಿಕ ಮಾಸ’ಕ್ಕೆ ಅತ್ಯಂತ ವಿಶಿಷ್ಟವಾದ ಸ್ಥಾನವಿದೆ. ಈ ಬಾರಿ 2026ರಲ್ಲಿ ಜ್ಯೇಷ್ಠ ತಿಂಗಳಿನಲ್ಲಿ ಈ ಹೆಚ್ಚುವರಿ ಮಾಸ ಬಂದಿರುವುದರಿಂದ, ಇದನ್ನು ‘ಅಧಿಕ ಜ್ಯೇಷ್ಠ ಮಾಸ’ ಎಂದು ಕರೆಯಲಾಗುತ್ತದೆ. ಭಗವಾನ್ ವಿಷ್ಣುವಿನ ಕೃಪೆಗೆ ಪಾತ್ರರಾಗಲು ಪ್ರಕೃತಿ ನಮಗೆ ಕರುಣಿಸಿರುವ ಈ ಪವಿತ್ರ ಮಾಸದ ಹಿನ್ನೆಲೆ, ಮಹತ್ವ ಮತ್ತು ಈ ವರ್ಷದ ನಿಖರ ದಿನಾಂಕಗಳ ವಿವರ ಇಲ್ಲಿದೆ.

ಅಧಿಕ ಮಾಸ ಎಂದರೇನು? ಇದು ಹೇಗೆ ಸಂಭವಿಸುತ್ತದೆ?

ಸಂಪ್ರದಾಯದಲ್ಲಿ ಸೌರಮಾನ (ಸೂರ್ಯನ ಚಲನೆ) ಮತ್ತು ಚಾಂದ್ರಮಾನ (ಚಂದ್ರನ ಚಲನೆ) ಎಂಬ ಎರಡು ಪ್ರಮುಖ ಕ್ಯಾಲೆಂಡರ್‌ಗಳಿವೆ. ಚಾಂದ್ರಮಾನ ವರ್ಷದಲ್ಲಿ 354 ದಿನಗಳಿದ್ದರೆ, ಸೌರಮಾನ ವರ್ಷದಲ್ಲಿ 365 ದಿನಗಳಿರುತ್ತವೆ. ಇವೆರಡರ ನಡುವೆ ಪ್ರತಿ ವರ್ಷ ಸುಮಾರು 11 ದಿನಗಳ ವ್ಯತ್ಯಾಸ ಉಂಟಾಗುತ್ತದೆ.

ಈ ವ್ಯತ್ಯಾಸವು ಮೂರು ವರ್ಷಗಳಲ್ಲಿ ಅಂದಾಜು ಒಂದು ತಿಂಗಳಾಗುತ್ತದೆ (33 ದಿನಗಳು). ಈ ಕಾಲಗಣನೆಯನ್ನು ಸರಿದೂಗಿಸಲು ಪಂಚಾಂಗದಲ್ಲಿ ಪ್ರತಿ 32 ತಿಂಗಳು, 16 ದಿನಗಳಿಗೊಮ್ಮೆ ಒಂದು ಹೆಚ್ಚುವರಿ ತಿಂಗಳನ್ನು ಸೇರಿಸಲಾಗುತ್ತದೆ. ಇದನ್ನೇ ‘ಅಧಿಕ ಮಾಸ’ ಎನ್ನಲಾಗುತ್ತದೆ.

‘ಪುರುಷೋತ್ತಮ ಮಾಸ’ ಎಂಬ ಹೆಸರು ಬಂದಿದ್ದು ಹೇಗೆ?

ಪುರಾಣಗಳ ಪ್ರಕಾರ, ಪ್ರತಿಯೊಂದು ತಿಂಗಳಿಗೂ ಒಬ್ಬೊಬ್ಬ ದೇವತೆಗಳು ಅಧಿಪತಿಯಾಗಿರುತ್ತಾರೆ. ಆದರೆ ಅಧಿಕ ಮಾಸಕ್ಕೆ ಯಾವುದೇ ಅಧಿಪತಿ ಇರಲಿಲ್ಲ. ಇದರಿಂದ ನೊಂದ ಈ ಮಾಸವು ತನ್ನನ್ನು ಎಲ್ಲರೂ ‘ಮಲ ಮಾಸ’ (ಶುದ್ಧವಲ್ಲದ ತಿಂಗಳು) ಎಂದು ಕರೆಯುತ್ತಾರೆಂದು ವಿಷ್ಣುವಿನ ಬಳಿ ಮೊರೆ ಇಟ್ಟಿತು. ಆಗ ಭಗವಾನ್ ವಿಷ್ಣುವು ತಾನೇ ಈ ತಿಂಗಳ ಅಧಿಪತಿಯಾಗುವುದಾಗಿ ಅನುಗ್ರಹಿಸಿ, ತನ್ನದೇ ಆದ ‘ಪುರುಷೋತ್ತಮ’ ಎಂಬ ಶ್ರೇಷ್ಠ ಹೆಸರನ್ನು ಈ ಮಾಸಕ್ಕೆ ನೀಡಿದನು. ಅಂದಿನಿಂದ ಇದು ‘ಪುರುಷೋತ್ತಮ ಮಾಸ’ ಎಂದೇ ಪ್ರಸಿದ್ಧಿಯಾಯಿತು.

2026ರ ಅಧಿಕ ಜ್ಯೇಷ್ಠ ಮಾಸದ ನಿಖರ ದಿನಾಂಕಗಳು:

  • 2026ರ ಸಾಲಿನಲ್ಲಿ ಒಟ್ಟು ಎರಡು ಜ್ಯೇಷ್ಠ ಮಾಸಗಳು ಬರುತ್ತಿದ್ದು, ಜ್ಯೇಷ್ಠದ ಅವಧಿಯು ಒಟ್ಟು 60 ದಿನಗಳಿರುತ್ತದೆ.
  • ಅಧಿಕ ಜ್ಯೇಷ್ಠ ಮಾಸ (ಹೆಚ್ಚುವರಿ ತಿಂಗಳು): 2026ರ ಮೇ 17 (ಭಾನುವಾರ) ರಿಂದ ಜೂನ್ 15 (ಸೋಮವಾರ).
  • ನಿಜ ಜ್ಯೇಷ್ಠ ಮಾಸ (ಸಾಮಾನ್ಯ ತಿಂಗಳು): 2026ರ ಜೂನ್ 16 ರಿಂದ ಜುಲೈ 13.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಈ ಅವಧಿಯಲ್ಲಿ ಏನು ಮಾಡಬೇಕು?

ಅಧಿಕ ಮಾಸವು ಭಗವದ್ಚಿಂತನೆ ಮತ್ತು ಪಾಪ ಪರಿಹಾರಕ್ಕೆ ಮೀಸಲಾದ ಸಮಯ. ಈ ತಿಂಗಳಲ್ಲಿ ಮಾಡುವ ಸತ್ಕರ್ಮಗಳಿಗೆ ಅಕ್ಷಯ ಪುಣ್ಯ ಲಭಿಸುತ್ತದೆ. ಬ್ರಾಹ್ಮಣರಿಗೆ ಅಥವಾ ಬಡವರಿಗೆ ಅನ್ನದಾನ, ದೀಪ ದಾನ ಮತ್ತು 33 ರಸಗೊಲ್ಲೆ ಅಥವಾ ಅಪೂಪಗಳನ್ನು (ಅನಪತ್ಯ/ಬಾಗಿನ) ದಾನ ಮಾಡುವುದು ವಿಶೇಷ. ‘ಓಂ ನಮೋ ಭಗವತೇ ವಾಸುದೇವಾಯ’ ಮಂತ್ರದ ಜಪ, ವಿಷ್ಣು ಸಹಸ್ರನಾಮ ಪಠಣ ಹಾಗೂ ಶ್ರೀಮದ್ಭಾಗವತ ಪುರಾಣದ ಶ್ರವಣ ಅತ್ಯಂತ ಮಂಗಳಕರ. ಈ 30 ದಿನಗಳ ಕಾಲ ಸಾಧ್ಯವಾದರೆ ಉಪವಾಸ ವ್ರತ ಮಾಡುವುದು ಅಥವಾ ದಿನಕ್ಕೆ ಒಂದು ಹೊತ್ತು ಮಾತ್ರ ಸಾತ್ವಿಕ ಆಹಾರ ಸೇವಿಸಿ ಬ್ರಹ್ಮಚರ್ಯ ಪಾಲಿಸುವುದು ಶ್ರೇಷ್ಠ.

ಏನು ಮಾಡಬಾರದು?

ಅಧಿಕ ಮಾಸದಲ್ಲಿ ಲೌಕಿಕ ಸುಖಕ್ಕೆ ಸಂಬಂಧಿಸಿದ ಕರ್ಮಗಳು ಹಾಗೂ ಹೊಸ ಆರಂಭಗಳನ್ನು ನಿಷೇಧಿಸಲಾಗಿದೆ. ಹಾಗಾಗಿ ಈ ಕೆಳಗಿನ ಕಾರ್ಯಗಳಿಗೆ ಮುಹೂರ್ತ ಇರುವುದಿಲ್ಲ:

  • ವಿವಾಹ (ಮದುವೆ) ಮಹೋತ್ಸವಗಳು
  • ಉಪನಯನ (ಮುಂಜಿ)
  • ಗೃಹಪ್ರವೇಶ ಮತ್ತು ಭೂಮಿ ಪೂಜೆ
  • ಹೊಸ ವ್ಯಾಪಾರ, ಉದ್ಯೋಗ ಅಥವಾ ಉದ್ಯಮದ ಆರಂಭ
  • ನಾಮಕರಣ ಮುಂತಾದ ಶುಭ ಸಮಾರಂಭಗಳು

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಮದುವೆಗೆ ಹೋಗುವಾಗ ಬರಿಗೈಯಲ್ಲಿ ಹೋಗಬಾರದು ಯಾಕೆ? ಆಧ್ಯಾತ್ಮಿಕ ಕಾರಣ ಇಲ್ಲಿದೆ – Kannada News | Wedding Assistance: Understanding the Merits and Spiritual Rewards

ಮದುವೆಗೆ ಬರಿಗೈಯಲ್ಲಿ ಹೋಗಬಾರದು ಯಾಕೆ?Image Credit source: Pinterest

ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ವಿವಾಹಕ್ಕೆ ಸಹಾಯ ಮಾಡುವುದು ಒಂದು ಮಹತ್ವದ ಮತ್ತು ಪುಣ್ಯದ ಕಾರ್ಯವೆಂದು ಪರಿಗಣಿಸಲಾಗಿದೆ. ದಾನಂ ದಹತಿ ಪಾಪಂ ಎಂಬಂತೆ, ಮದುವೆಗೆ ನೀಡುವ ಯಾವುದೇ ರೀತಿಯ ಸಹಾಯವು ಅನೇಕ ಶುಭ ಫಲಗಳನ್ನು ತರುತ್ತದೆ ಎಂಬ ನಂಬಿಕೆ ಇದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಹಿಂದಿನ ಕಾಲದಲ್ಲಿ, ಕೃತಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗದ ಆರಂಭದ ದಿನಗಳಲ್ಲಿ, ಒಂದು ಮನೆಯಲ್ಲಿ ಮದುವೆಯಾದರೆ, ಶತ್ರುಗಳಿದ್ದರೂ ಸಹ ಸುತ್ತಮುತ್ತಲಿನ ಜನರು ಬಂದು ನೆರವಾಗುತ್ತಿದ್ದರು. ಬಂಧುಗಳಿಗೆ ಸ್ಥಳಾವಕಾಶ, ಊಟೋಪಚಾರ, ಹಣಕಾಸು, ದವಸಧಾನ್ಯ, ಬಟ್ಟೆ, ವಾಹನ ಮುಂತಾದ ಅನೇಕ ರೀತಿಯ ಸಹಾಯಗಳನ್ನು ನೀಡುತ್ತಿದ್ದರು. ಮನೆಯ ಮುಂದೆ ಚಪ್ಪರ ಹಾಕುವುದರಿಂದ ಹಿಡಿದು, ಅದಕ್ಕೆ ಬೇಕಾದ ಕಟ್ಟಿಗೆ, ತೆಂಗಿನ ಗರಿ, ದಾರ, ಗುದ್ದಲಿ ಇವೆಲ್ಲವನ್ನೂ ತಂದುಕೊಡಲು ಎಲ್ಲರೂ ಸಹಕರಿಸುತ್ತಿದ್ದರು. ಇದು ಕೇವಲ ಮಾನವೀಯತೆಯಾಗಿರದೆ, ತಮ್ಮ ಕುಟುಂಬಕ್ಕೆ ಒಳಿತಾಗುತ್ತದೆ ಎಂಬ ನಂಬಿಕೆಯಿಂದಲೂ ಕೂಡ ಇತ್ತು.

ವಿವಾಹಕ್ಕೆ ಸಹಾಯ ಮಾಡುವುದಕ್ಕೆ ಹಲವಾರು ಆಧ್ಯಾತ್ಮಿಕ ಕಾರಣಗಳನ್ನು ನೀಡಲಾಗುತ್ತದೆ. ಮದುವೆಯ ಸಂದರ್ಭದಲ್ಲಿ ಸರ್ವ ದೇವತೆಗಳ ಉಪಸ್ಥಿತಿ ಇರುತ್ತದೆ. ವರನು ವಿಷ್ಣುವಿನ ರೂಪವಾಗಿದ್ದರೆ, ವಧು ಮಹಾಲಕ್ಷ್ಮಿಯ ರೂಪವಾಗಿರುತ್ತಾಳೆ. ಆದ್ದರಿಂದ, ಮದುವೆಗೆ ಸಹಾಯ ಮಾಡುವುದು ವಿಷ್ಣು ಮತ್ತು ಲಕ್ಷ್ಮಿಯ ವಿವಾಹಕ್ಕೆ ನೆರವಾದಂತೆ ಎಂಬ ಭಾವನೆಯನ್ನು ಹಿಂದಿನವರು ಹೊಂದಿದ್ದರು. ಇದು ಹೋಮ, ಯಜ್ಞ, ಯಾಗಾದಿಗಳನ್ನು ಮಾಡಿದ ಫಲಕ್ಕೆ ಸಮನಾದ ಪುಣ್ಯವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ವಿವಾಹಕ್ಕೆ ಸಹಾಯ ಮಾಡಿದವರಿಗೆ ಪಿತೃ ದೋಷಗಳು ನಿವಾರಣೆಯಾಗುತ್ತವೆ, ಸರ್ಪ ದೋಷಗಳು ಹೊರಟುಹೋಗುತ್ತವೆ. ಅಕಾಲಿಕ ಮರಣದ ಭೀತಿಯು ದೂರವಾಗುತ್ತದೆ. ಅಲ್ಲದೆ, ಗುರು ಗ್ರಹ ಮತ್ತು ಶುಕ್ರ ಗ್ರಹಗಳ ಬಲ ಹೆಚ್ಚುತ್ತದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಸಹಾಯದ ವಿವಿಧ ರೂಪಗಳು ಮತ್ತು ಅವುಗಳ ಫಲಗಳನ್ನು ಸಹ ವಿವರಿಸಲಾಗಿದೆ. ತಾಳಿಯನ್ನು ಕೊಡಿಸಿದರೆ ಕುಟುಂಬದಲ್ಲಿ ವಿವಾಹಗಳು ಸುಗಮವಾಗಿ ನಡೆಯುತ್ತವೆ. ವಸ್ತ್ರ ದಾನ ಮಾಡಿದರೆ ರೋಗ ರುಜಿನಗಳು ದೂರವಾಗಿ ಶಾಶ್ವತ ಆರೋಗ್ಯ ಲಭಿಸುತ್ತದೆ. ಅಕ್ಕಿ ದಾನ ಮಾಡಿದರೆ ಜೀವನ ಪರ್ಯಂತ ಆಹಾರದ ಕೊರತೆ ಇರುವುದಿಲ್ಲ. ನೀರಿನ ದಾನವು ಲವಲವಿಕೆಯನ್ನು ಹೆಚ್ಚಿಸುತ್ತದೆ, ಹಾಲಿನ ದಾನವು ಕಂಟಕಗಳನ್ನು ನಿವಾರಿಸುತ್ತದೆ. ತರಕಾರಿ ದಾನವು (ಬುಧ ಗ್ರಹದ ಪ್ರತೀಕ) ಕುಟುಂಬದಲ್ಲಿ ಯಾವುದೇ ವ್ಯಾಜ್ಯಗಳು ಕೋರ್ಟ್ ಮೆಟ್ಟಿಲು ಹತ್ತದಂತೆ ನೋಡಿಕೊಳ್ಳುತ್ತದೆ.

ಇಂತಹ ನಿಸ್ವಾರ್ಥ ಸೇವೆಯಿಂದ ಪುಣ್ಯವು ವಾಪಸು ಬಂದೇ ಬರುತ್ತದೆ. ಈ ಫಲಗಳು ತಕ್ಷಣವೇ ಗೋಚರಿಸದಿರಬಹುದು, ಆದರೆ ಕಾಲಾನಂತರದಲ್ಲಿ ಅವು ಪ್ರಕಟವಾಗುತ್ತವೆ ಎಂದು ಹೇಳಲಾಗುತ್ತದೆ. ಆದ್ದರಿಂದ, ವಿವಾಹಕ್ಕೆ ಕೈಲಾದಷ್ಟು ಸಹಾಯ ಮಾಡಿ ಪುಣ್ಯವನ್ನು ಕಟ್ಟಿಕೊಳ್ಳುವುದು ಎಲ್ಲರಿಗೂ ಶುಭವನ್ನು ತರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:18 am, Tue, 19 May 26

Source link