All posts by nagaraj11081993

ಕರ್ನಾಟಕದ ಜನಗಳೇ ಗ್ಯಾಸ್ ಸಿಲಿಂಡರ್ ಚಿಂತೆ ಬಿಡಿ: ಆಹಾರ ಇಲಾಖೆ ಆಯುಕ್ತರ ಸ್ಪಷ್ಟನೆ ಕೇಳಿ

ಕರ್ನಾಟಕದ ಜನಗಳೇ ಗ್ಯಾಸ್ ಸಿಲಿಂಡರ್ ಚಿಂತೆ ಬಿಡಿ: ಆಹಾರ ಇಲಾಖೆ ಆಯುಕ್ತರ ಸ್ಪಷ್ಟನೆ ಕೇಳಿ

​ಬೆಂಗಳೂರು, (ಮಾರ್ಚ್ 12): ಕರ್ನಾಟಕದಲ್ಲಿ (Karnataka) ಇತ್ತೀಚಿನ ದಿನಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ (gas cylinder) ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಸ್ಪಷ್ಟನೆಯನ್ನು ನೀಡಿದೆ. ರಾಜ್ಯದಲ್ಲಿ ಎಲ್‌ಪಿಜಿ (LPG) ಸಿಲಿಂಡರ್‌ಗಳ ಸುಗಮ ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯ ಬಗ್ಗೆ ಹರಡುತ್ತಿರುವ ಯಾವುದೇ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಸಾಕಷ್ಟು ದಾಸ್ತಾನು ಲಭ್ಯತೆ

ರಾಜ್ಯ ಸರ್ಕಾರವು ಪ್ರಮುಖ ತೈಲ ಕಂಪನಿಗಳಾದ IOC, BPC ಮತ್ತು HPC ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆಯನ್ನು ನಡೆಸಿದೆ. ರಾಜ್ಯದಾದ್ಯಂತ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ ಮತ್ತು ಮುಂಬರುವ ದಿನಗಳಿಗೂ ಸರಿಹೊಂದುವಷ್ಟು ಸಾಕಷ್ಟು ದಾಸ್ತಾನು ಲಭ್ಯವಿದೆ ಎಂದು ತೈಲ ಕಂಪನಿಗಳು ದೃಢಪಡಿಸಿವೆ ಅಂತ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಸಿಹಿಸುದ್ದಿ: ಗ್ಯಾಸ್ ಬಗ್ಗೆ ಜಿಲ್ಲಾಧಿಕಾರಿ ಮಹತ್ವದ ಸ್ಪಷ್ಟನೆ, ಹೋಟೆಲ್​ಗಳು ಬಂದ್ ಆಗಲ್ಲ

​ಸಾರ್ವಜನಿಕರಿಗೆ ಮನವಿ

ಆತಂಕ ಬೇಡ: ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯ ಬಗ್ಗೆ ಹರಡುತ್ತಿರುವ ಯಾವುದೇ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಅನಗತ್ಯ ಬುಕಿಂಗ್ ಬೇಡ: ಸಿಲಿಂಡರ್‌ಗಳ ಕೊರತೆಯಾಗಬಹುದು ಎಂಬ ಆತಂಕದಿಂದ ಸಾರ್ವಜನಿಕರು ಅನಗತ್ಯವಾಗಿ ಸಿಲಿಂಡರ್‌ಗಳನ್ನು ಮುಂಗಡವಾಗಿ ಬುಕ್ ಮಾಡುವುದು ಅಥವಾ ಸಂಗ್ರಹಿಸಿಡುವುದನ್ನು ಮಾಡಬಾರದು. ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗದಂತೆ ಸಹಕರಿಸಲು ಕೋರಲಾಗಿದೆ.

ಆದ್ಯತಾ ವಲಯಗಳಿಗೆ ಪೂರೈಕೆ

​ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಅಗತ್ಯ ಸೇವೆಗಳಾದ ಸರ್ಕಾರಿ ಆಸ್ಪತ್ರೆಗಳು ಮತ್ತು ಖಾಸಗಿ ಆರೋಗ್ಯ ಕೇಂದ್ರಗಳು, ವಿದ್ಯಾರ್ಥಿನಿಲಯಗಳು ಮತ್ತು ಅಂಗನವಾಡಿ ಕೇಂದ್ರಗಳು, ಶಾಲೆಗಳು ಮತ್ತು ಕಾಲೇಜುಗಳ ಬಿಸಿಯೂಟ ಯೋಜನೆಗಳು ಮತ್ತು ಕಾರಾಗೃಹಗಳು ಮತ್ತು ಇತರ ಸರ್ಕಾರಿ ಸಂಸ್ಥೆಗಳಿಗೆ , ಎಲ್‌ಪಿಜಿ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗದಂತೆ ಹಾಗೂ ವ್ಯತ್ಯಯವಾಗದಂತೆ ಕ್ರಮ ವಹಿಸಲು ತೈಲ ಕಂಪನಿಗಳಿಗೆ ಸೂಚಿಸಿದೆ.

ಕಾನೂನು ಕ್ರಮದ ಎಚ್ಚರಿಕೆ

ಅನಧಿಕೃತವಾಗಿ ಗ್ಯಾಸ್ ಸಿಲಿಂಡರ್‌ಗಳನ್ನು ಸಂಗ್ರಹಿಸಿಡುವುದು, ಕಾಳಸಂತೆಯಲ್ಲಿ ಮಾರಾಟ ಮಾಡುವುದು ಅಥವಾ ರೀಫಿಲ್ಲಿಂಗ್ (Refilling) ದಂಧೆಯಲ್ಲಿ ತೊಡಗುವುದು ಕಂಡುಬಂದಲ್ಲಿ Essential Commodities Act 1955 (ಅಗತ್ಯ ವಸ್ತುಗಳ ಕಾಯ್ದೆ), LPG Control Order 2000 ಮತ್ತು​ Petroleum Products Order 1999 ರ ಕಾಯ್ದೆಗಳ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಡಳಿತಕ್ಕೆ ಸೂಚನೆ

ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಎಲ್‌ಪಿಜಿ ವಿತರಣಾ ಕೇಂದ್ರಗಳ ಮೇಲೆ ನಿಗಾ ಇಡಲು ಮತ್ತು ಸುಗಮ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನ ನೀಡಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ

ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಆದರೆ ಅವರು ಆಹಾರಪ್ರಿಯೆ ಕೂಡ ಹೌದು. ದೆಹಲಿಗೆ ತೆರಳಿದ ಅವರು ಡಯೆಟ್ ಮರೆತು ತಮ್ಮ ಇಷ್ಟದ ತಿಂಡಿ ಸೇವಿಸಿದ್ದಾರೆ. ತಟ್ಟೆ ತುಂಬ ಊಟ ಹಾಕಿಸಿಕೊಂಡಿರುವ ಈ ವಿಡಿಯೋವನ್ನು ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದೆಹಲಿಯಲ್ಲಿ ಮೇಘಾಲಯದ ಮೋಮೋಸ್ (Meghalaya Momos) ತಿಂದು ಅವರು ಎಂಜಾಯ್ ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷೆ ಸಿನಿಮಾಗಳಲ್ಲಿ ಕೂಡ ರಾಗಿಣಿ ದ್ವಿವೇದಿ ಅವರು ಬ್ಯುಸಿ ಆಗಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆಯಲ್ಲಿ ಅವರು ಸಕ್ರಿಯರಾಗಿದ್ದಾರೆ. ಈ ರೀತಿಯ ಅನೇಕ ವಿಡಿಯೋಗಳನ್ನು ಅವರು ಅಭಿಮಾನಿಗಳಿಗಾಗಿ ಪೋಸ್ಟ್ ಮಾಡುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೌಲಾನಾ ಆಜಾದ್ ಆಂಗ್ಲ ಶಾಲೆ ಉನ್ನತೀಕರಣ: ಮಂಡ್ಯ ಮೈಶುಗರ್ ಕಾರ್ಖಾನೆ ದುರಸ್ತಿಗೆ ಸಚಿವ ಸಂಪುಟ ಅಸ್ತು

ಬೆಂಗಳೂರು, ಮಾರ್ಚ್​ 12: ವಿಧಾನಸೌಧದಲ್ಲಿ ಇಂದು ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಈ ಸಂಪುಟ ಸಭೆಯಲ್ಲಿ ಒಟ್ಟು 28 ವಿಷಯಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಮಂಡ್ಯದ ಮೈಶುಗರ್ ಕಾರ್ಖಾನೆ ದುರಸ್ತಿ ಸೇರಿದಂತೆ 76 ಮೌಲಾನಾ ಆಜಾದ್ ಆಂಗ್ಲ ಮಾದರಿ ಶಾಲೆಗಳನ್ನ ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಣಗೊಳಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

813 ಕೋಟಿ ರೂ. ವೆಚ್ಚದಲ್ಲಿ ಅಂತಾಷ್ಟ್ರೀಯ ಮಟ್ಟದ ಕ್ರೀಡಾಂಗಣ

ಕೆಎಚ್‌ಬಿ ಸೂರ್ಯಸಿಟಿಯಲ್ಲಿ ಅಂತಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮಹತ್ವದ ಅನುಮೋದನೆ ನೀಡಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಸೂರ್ಯನಗರದಲ್ಲಿ ಸುಮಾರು 75 ಎಕರೆ ಜಮೀನಿನಲ್ಲಿ ಸುಮಾರು 813 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ಹಾಲು ಉತ್ಪಾದಕರಿಗೆ ಯುಗಾದಿ ಗಿಫ್ಟ್​​: ಲೀಟರ್ ಹಾಲಿಗೆ ಪ್ರೋತ್ಸಾಹ ಧನ ಘೋಷಿಸಿದ ಬಮೂಲ್

ಕ್ರೀಡಾಂಗಣದ ಸುತ್ತಮುತ್ತ ವಾಣಿಜ್ಯ ಮಳಿಗೆಗಳು ಹಾಗೂ ಇತರೆ ಕಟ್ಟಡಗಳನ್ನು ನಿರ್ಮಿಸುವ ಯೋಜನೆಯೂ ರೂಪಿಸಲಾಗಿದೆ. ಈ ಕಟ್ಟಡ ಕಾಮಗಾರಿಗಳ ಪರಿಷ್ಕೃತ ವೆಚ್ಚದ ವಿವರಗಳನ್ನು ಸಿದ್ಧಪಡಿಸಿ ಮುಂದಿನ ಸಚಿವ ಸಂಪುಟ ಸಭೆಗೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಕ್ರೀಡಾ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಮಹತ್ವದ ಹೆಜ್ಜೆಯಾಗಲಿದೆ.

682 ಕೋಟಿ ರೂ ವೆಚ್ಚದಲ್ಲಿ ಶಾಲೆಗಳ ಉನ್ನತೀಕರಣ

76 ಮೌಲಾನಾ ಆಜಾದ್ ಆಂಗ್ಲ ಮಾದರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಣಗೊಳಿಸಲು ನಿರ್ಧರಿಸಲಾಗಿದೆ. 41 ಉರ್ದು ಮಾಧ್ಯಮ ಶಾಲೆ ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ 682 ಕೋಟಿ ರೂ ವೆಚ್ಚದಲ್ಲಿ ಉನ್ನತೀಕರಿಸಲು ಸಂಪುಟ ಸಮ್ಮತಿಸಿದೆ.

ಇದನ್ನೂ ಓದಿ: ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾರಿ ಹೈಡ್ರಾಮಾ: ಶಾಸಕರ ಕಿತ್ತಾಟ, ಸಚಿವರ ನಡೆಗೆ ಅಸಮಾಧಾನ!

ಇನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ನಾಲೆ ಅಭಿವೃದ್ಧಿಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಮಂಡ್ಯ ಕ್ಷೇತ್ರದ ಕಾವೇರಿ ಶಾಖಾ ನಾಲೆ, ಕೆರೆಗೋಡು ಶಾಖಾ ನಾಲೆ, ಶಿಂಷಾ ಶಾಖಾ ನಾಲೆ ಸೇರಿದಂತೆ ನಾಲ್ಕು ಕಾವೇರಿ ವಿತರಣಾ ನಾಲೆಗಳು ಮತ್ತು ಪಿಕಪ್ ನಾಲೆಗಳ ಆಧುನೀಕರಣಕ್ಕೆ 100 ಕೋಟಿ ರೂ ಅನುದಾನ ನೀಡಲು ಸಚಿವ ಸಂಪುಟ ಅಸ್ತು ಎಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹಾರ್ಮುಜ್ ಜಲಸಂಧಿ ಮುಚ್ಚಿರುತ್ತದೆ; ಮುಯ್ಯಿ ತೀರಿಸಲು ಮರೆಯಲ್ಲ: ಇರಾನ್ ಮುಖ್ಯಸ್ಥ

ನವದೆಹಲಿ, ಮಾರ್ಚ್ 12: ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಿಗೆ ಇಂಧನ ಪೂರೈಕೆಗೆ ಆಯಕಟ್ಟಿನ ಸ್ಥಳವಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲು ಇರಾನ್​ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೆನೈ ಅವರು ಕರೆ ನೀಡಿದ್ದಾರೆ. ಹಾಗೆಯೇ, ಅಮೆರಿಕದ ಎಲ್ಲಾ ಮಿಲಿಟರಿ ನೆಲೆಗಳನ್ನು ತತ್​ಕ್ಷಣವೇ ಮುಚ್ಚಬೇಕೆಂದೂ ಗಲ್ಫ್ ದೇಶಗಳಿಗೆ ಅವರು ಅಪ್ಪಣೆ ಮಾಡಿದ್ದಾರೆ. ‘ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಕ್ರಮ ಮುಂದುವರಿಯುತ್ತದೆ’ ಎಂದು ಮೊಜ್ತಬಾ ಹೇಳಿದ್ದಾರೆ.

ವೈರಿಗಳಿಗೆ ಹೊಸ ಶಾಕ್ ಕೊಡಲು ಇರಾನ್ ಅಣಿ…

ಇದೇ ವೇಳೆ, ಇರಾನ್ ಮುಖ್ಯಸ್ಥರು ಅಮೆರಿಕ ಮತ್ತು ಇಸ್ರೇಲ್ ದೇಶಗಳಿಗೆ ಹಾಗೂ ಗಲ್ಫ್ ರಾಷ್ಟ್ರಗಳಿಗೆ ಹೊಸ ಶಾಕ್​ನ ಸುಳಿವು ಕೊಟ್ಟಿದ್ದಾರೆ. ‘ವೈರಿಗೆ ಕಡಿಮೆ ಅನುಭವ ಇರುವಂತಹ ಮತ್ತು ಬಹಳ ದುರ್ಬಲ ಇರುವಂತಹ ಇತರ ಫ್ರಂಟ್​​ಗಳನ್ನು ತೆರೆಯುವ ಬಗ್ಗೆ ಯೋಜಿಸುತ್ತಿದ್ದೇವೆ. ಈ ಯುದ್ಧ ಸ್ಥಿತಿ ಮುಂದುವರಿದರೆ ಅವುಗಳನ್ನು ಸಕ್ರಿಯಗೊಳಿಸಲಾಗುವುದು’ ಎಂದು ಖಮನೈ ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಹೊಸ ಟ್ಯಾರಿಫ್​ಗೆ ನೆಪಗಳ ಹುಡುಕಾಟ; ಭಾರತ ಸೇರಿ 16 ಟ್ರೇಡಿಂಗ್ ಪಾರ್ಟ್ನರ್ಸ್ ಮೇಲೆ ಅಮೆರಿಕ ತನಿಖೆ

ಹುತಾತ್ಮರ ರಕ್ತದ ಮುಯ್ಯಿ ಮರೆಯೋದಿಲ್ಲ…

ಇರಾನ್​ನ ಹುತಾತ್ಮರ ರಕ್ತಕ್ಕೆ ಮುಯ್ಯಿ ತೀರಿಸಿಕೊಳ್ಳಲು ಈ ದೇಶ ಮರೆಯದು ಎಂದೂ ಮೊಜ್ತಬಾ ಹೇಳಿದ್ದಾರೆ. ನೆರೆಯ ದೇಶಗಳೊಂದಿಗೆ ಇರಾನ್ ಸ್ನೇಹ ಬಯಸುತ್ತದಾದರೂ ಅವಲ್ಲಿರುವ ಅಮೆರಿಕನ್ ನೆಲೆಗಳ ಮೇಲೆ ದಾಳಿ ಮುಂದುವರಿಯುವುದು ಎಂದೂ ಸ್ಪಷ್ಟಪಡಿಸಿದ್ದಾರೆ.

‘ನಮ್ಮ ಪ್ರೀತಿಯ ತಾಯ್ನಾಡಿನ ಮೇಲೆ ದಾಳಿ ಮಾಡಿ ನಮ್ಮ ಜನರನ್ನು ಕೊಂದವರ ವಿಚಾರದಲ್ಲಿ ಈ ದೇಶಗಳು (ಗಲ್ಫ್) ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಶಾಂತಿ ಮತ್ತು ಭದ್ರತೆ ಒದಗಿಸುವ ಅಮೆರಿಕದ ಭರವಸೆ ಬರೀ ಸುಳ್ಳು ಎಂಬುದು ಈ ದೇಶಗಳಿಗೆ ಈಗಾಗಲೇ ಗೊತ್ತಾಗಿದೆ. ಆ ಅಮೆರಿಕನ್ ನೆಲೆಗಳನ್ನು ಕೂಡಲೇ ಮುಚ್ಚಬೇಕು’ ಎಂದು ಇರಾನ್ ಸರ್ವೋಚ್ಚ ನಾಯಕ ಒತ್ತಾಯಿಸಿದ್ದಾರೆ.

ಯುದ್ಧ ನಿಲ್ಲಿಸಲು ಇರಾನ್ ಮೂರು ಷರತ್ತುಗಳನ್ನು ಮುಂದಿಟ್ಟಿದೆ. ಅಮೆರಿಕ ಮತ್ತು ಇಸ್ರೇಲ್ ತತ್​ಕ್ಷಣವೇ ದಾಳಿ ನಿಲ್ಲಿಸಬೇಕು. ಭವಿಷ್ಯದಲ್ಲಿ ಇರಾನ್ ಮೇಲೆ ದಾಳಿಯಾಗುವುದಿಲ್ಲ ಎಂದು ಖಾತ್ರಿಪಡಿಸಬೇಕು. ದಾಳಿಯಿಂದ ಈಗಾಗಲೇ ಇರಾನ್​ಗೆ ಆಗಿರುವ ನಷ್ಟವನ್ನು ಭರಿಸಿಕೊಡಬೇಕು ಎಂಬುದು ಆ ಮೂರು ಷರತ್ತುಗಳು.

ಇದನ್ನೂ ಓದಿ: ಪೆಟ್ರೋಲ್, ಎಲ್​ಪಿಜಿ ಕೊರತೆ ಇಲ್ಲ: ಸಂಸತ್​ನಲ್ಲಿ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ

‘ಒಂದು ವಿಚಾರ ಒತ್ತಿಹೇಳಲು ಇಷ್ಟಪಡುತ್ತೇನೆ. ಶತ್ರುವಿನಿಂದ ನಾವು ಪರಿಹಾರ ಪಡೆದೇ ಪಡೆಯುತ್ತೇವೆ. ಪರಿಹಾರಕ್ಕೆ ಅವರು ಒಪ್ಪಲಿಲ್ಲವೆಂದರೆ ಅವರ ಆಸ್ತಿಗಳಿಂದಲೇ ನಮಗೆ ಬೇಕಾದ್ದನ್ನು ಪಡೆಯುತ್ತೇವೆ. ಅದು ಸಾಧ್ಯವಾಗದಿದ್ದಲ್ಲಿ ಅವರ ಆಸ್ತಿಗಳನ್ನು ತಕ್ಕ ಪ್ರಮಾಣದಲ್ಲಿ ನಾಶ ಮಾಡುತ್ತೇವೆ’ ಎಂದು ಮೊಜ್ತಬಾ ಖಮೇನಿ ತಿಳಿಸಿದ್ದಾರೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮೊನಾಲಿಸಾ ಭೋಸ್ಲೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗ್ತಾರಾ? ಪತಿ ಫರ್ಮಾನ್ ಖಾನ್ ಸ್ಪಷ್ಟನೆ

ಪ್ರಯಾಗ್‌ರಾಜ್ ಕುಂಭಮೇಳದ ಸಂದರ್ಭದಲ್ಲಿ ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆಗಿ ಹೊರಹೊಮ್ಮಿದ್ದ 18 ವರ್ಷದ ಮೊನಾಲಿಸಾ ಭೋಸ್ಲೆ (Monalisa Bhosle) ತಮ್ಮ ಪ್ರಿಯಕರ ಫರ್ಮಾನ್ ಖಾನ್ ಅವರೊಂದಿಗೆ ಕೇರಳದಲ್ಲಿ ವಿವಾಹವಾಗಿದ್ದಾರೆ. ಕೇರಳದ ಪೂವಾರ್ ಸಮೀಪದ ಅರುಮನೂರಿನ ನಯನಾರ್ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಈ ಜೋಡಿ ಮದುವೆಯಾಗಿದೆ. ಈ ಮದುವೆ ಬಳಿಕ ಮೊನಾಲಿಸಾ ಬೋಸ್ಲೆ ಅವರು ಇಸ್ಲಾಂ (Islam) ಧರ್ಮಕ್ಕೆ ಮತಾಂತರ ಆಗುತ್ತಾರಾ ಎಂಬ ಪ್ರಶ್ನೆಗೆ ಕೆಲವರಿಗೆ ಮೂಡಿದೆ. ಅದಕ್ಕೆ ಈ ಜೋಡಿ ಉತ್ತರ ನೀಡಿದೆ.

ಮದುವೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೊನಾಲಿಸಾ, ‘ನಾವು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದೇವೆ. ನಾನು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿಲ್ಲ. ಹಾಗಾಗಿ ಇದು ಲವ್ ಜಿಹಾದ್ ಅಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಹಣೆಯ ಮೇಲೆ ಸಿಂಧೂರ ಧರಿಸಿದ್ದ ಅವರು, ‘ಫರ್ಮಾನ್ ಈ ಮದುವೆಗೆ ಮೊದಲು ಒಪ್ಪಿರಲಿಲ್ಲ. ನಾನೇ ಒತ್ತಾಯ ಮಾಡಿ ಮದುವೆ ಆಗುವಂತೆ ಮಾಡಿದೆ’ ಎಂದು ಹೇಳಿಕೆ ನೀಡಿದ್ದಾರೆ.

ಈ ವೇಳೆ ಫರ್ಮಾನ್ ಖಾನ್ ಮಾತನಾಡಿ, ‘ನಾವಿಬ್ಬರೂ ಕಲಾವಿದರು. ನಾವು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ. ಪ್ರೀತಿಯಲ್ಲಿ ಧರ್ಮ ಬದಲಾಯಿಸುವ ಅಗತ್ಯವಿಲ್ಲ’ ಎಂದಿದ್ದಾರೆ. ಆ ಮೂಲಕ ತಮ್ಮ ಪತ್ನಿ ಮೊನಾಲಿಸಾ ಭೋಸ್ಲೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವುದಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಈ ಜೋಡಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ಆಗುತ್ತಿದೆ.

ಮೊನಾಲಿಸಾ ಅವರು ಕೇರಳದಲ್ಲಿ ಚಿತ್ರೀಕರಣಕ್ಕಾಗಿ ಬಂದಿದ್ದ ಸಂದರ್ಭದಲ್ಲಿ ರಕ್ಷಣೆ ಕೋರಿ ತಿರುವನಂತಪುರಂ ಪೊಲೀಸರನ್ನು ಸಂಪರ್ಕಿಸಿದ್ದರು. ತಂದೆ ತನ್ನನ್ನು ಬಲವಂತವಾಗಿ ಊರಿಗೆ ಕರೆದೊಯ್ದು, ಸೋದರ ಸಂಬಂಧಿಯೊಂದಿಗೆ ಮದುವೆ ಮಾಡಲು ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದ್ದರು. ‘ನನಗೆ ನನ್ನ ಸೋದರ ಸಂಬಂಧಿಯನ್ನು ಮದುವೆಯಾಗಲು ಇಷ್ಟವಿಲ್ಲ, ಅದಕ್ಕಾಗಿಯೇ ನಾನು ಪ್ರೀತಿಸಿದವನ ಜೊತೆ ಮದುವೆಯಾಗಿದ್ದೇನೆ’ ಎಂದು ಅವರು ಪೊಲೀಸರ ಬಳಿ ಹೇಳಿಕೊಂಡಿದ್ದರು.

ಇದನ್ನೂ ಓದಿ: ಮೊನಾಲಿಸಾ ಮದುವೆ ಆದ ಫರ್ಮಾನ್ ಯಾರು? ಲವ್ ಆಗಿದ್ದು ಹೇಗೆ?

ಮೊನಾಲಿಸಾ ವಯಸ್ಕಳಾ ಅಥವಾ ಅಪ್ರಾಪ್ತಳಾ ಎಂಬ ಗೊಂದಲವಿತ್ತು. ಆದರೆ ಸುದ್ದಿಗೋಷ್ಠಿಯಲ್ಲಿ ತಮ್ಮ ಜನ್ಮ ದಾಖಲೆಗಳನ್ನು ಪ್ರದರ್ಶಿಸಿದ ಅವರು, ತಮಗೆ ಈಗಷ್ಟೇ 18 ವರ್ಷ ತುಂಬಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ‘ಅವರು ವಯಸ್ಕರಾಗಿರುವುದರಿಂದ ತಮ್ಮ ಆಯ್ಕೆಯಂತೆ ಬದುಕುವ ಹಕ್ಕಿದೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸನ್ನಡತೆ ಆಧಾರದ ಮೇಲೆ ಜೀವಾವಧಿ ಶಿಕ್ಷಿತರ ಬಿಡುಗಡೆ: ಹೊಸ ಬದುಕಿನತ್ತ 31 ಕೈದಿಗಳು

ಬೆಂಗಳೂರು, (ಮಾರ್ಚ್ 12): ಜೀವಾವಧಿ ಶಿಕ್ಷೆಗೆ ಗುರಿಯಾಗಿ ಕರ್ನಾಟಕದ (Karnataka) ವಿವಿಧ ಜೈಲಿನಲ್ಲಿರುವ ಒಟ್ಟು 31 ಕೈದಿಗಳ (Prisoners) ಬಿಡುಗಡೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಕೈದಿಗಳನ್ನು ಅವರ ‘ಸನ್ನಡತೆ’ಯ ಆಧಾರದ ಮೇಲೆ ಅವಧಿಪೂರ್ವವಾಗಿ ಬಿಡುಗಡೆಗೊಳಿಸಿ ಇಂದು (ಮಾರ್ಚ್ 12) ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಜೈಲಿನಲ್ಲಿ ಉತ್ತಮ ನಡವಳಿಕೆ ತೋರಿದ ಕೈದಿಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದು, ಅವರಿಗೆ ಹೊಸ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವ ಮಾನವೀಯ ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ನಾಳೆ (ಮಾರ್ಚ್ 13) 31 ಕೈದಿಗಳು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಮಹಾನಿರ್ದೇಶಕರು ಸಲ್ಲಿಸಿದ ಪ್ರಸ್ತಾವನೆಯನ್ನು ಆಧರಿಸಿ, ಒಳಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಒಟ್ಟು 54 ಜೀವಾವಧಿ ಶಿಕ್ಷೆ ಕೈದಿಗಳ ಪ್ರಕರಣಗಳನ್ನು ಕೂಲಂಕಷವಾಗಿ ಚರ್ಚಿಸಲಾಗಿದ್ದು, ಸಮಿತಿಯು ಪರಿಶೀಲಿಸಿದ 54 ಪ್ರಕರಣಗಳ ಪೈಕಿ ಬಿಡುಗಡೆಗೆ 31 ಮಂದಿಯನ್ನು ಶಿಫಾರಸ್ಸು ಮಾಡಲಾಗಿತ್ತು. ಇನ್ನುಳಿದಂತೆ 21 ಕೈದಿಗಳ ಬಿಡುಗಡೆ ಅರ್ಜಿಯನ್ನು ತಿರಸ್ಕರಿಸಲಾಗಿದೆ. 2 ಪ್ರಕರಣಗಳು ಕೇಂದ್ರ ಗೃಹ ಸಚಿವಾಲಯದ ಅನುಮೋದನೆಗಾಗಿ ಬಾಕಿ ಉಳಿದಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಜೈಲುಗಳಲ್ಲಿ ಅಕ್ರಮ ಚಟುವಟಿಕೆ ತಡೆಗೆ ಅಲೋಕ್ ಕುಮಾರ್ ದಿಟ್ಟ ಕ್ರಮ: ಕೈದಿಗಳ ಭೇಟಿಗೆ ಹೊಸ ರೂಲ್ಸ್

ಸಂವಿಧಾನವು ರಾಜ್ಯಪಾಲರಿಗೆ ಶಿಕ್ಷೆಗೊಳಗಾದ ಕೈದಿಗಳ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವ ಅಥವಾ ಕ್ಷಮಾದಾನ ನೀಡುವ ವಿಶೇಷ ಅಧಿಕಾರವನ್ನು ನೀಡಿದೆ. ದೀರ್ಘಕಾಲ ಜೈಲುವಾಸ ಅನುಭವಿಸಿ, ಪಶ್ಚಾತ್ತಾಪದೊಂದಿಗೆ ಉತ್ತಮ ನಡವಳಿಕೆ ರೂಢಿಸಿಕೊಂಡ ಕೈದಿಗಳನ್ನು ಸಮಾಜಕ್ಕೆ ಮರಳಿಸುವುದು ಹಾಗೂ ಅವರ ಕುಟುಂಬದ ಪುನರ್ವಸತಿಗೆ ಅವಕಾಶ ಕಲ್ಪಿಸುವುದು ಸರ್ಕಾರದ ಪ್ರಮುಖ ನೀತಿಗಳಲ್ಲಿ ಒಂದಾಗಿದೆ. ಈ ಆಶಯದಡಿಯೇ ಬಿಡುಗಡೆ ಮಾಡಲಾಗುತ್ತಿದೆ.

ಯಾವ ಕಾರಾಗೃಹದಿಂದ ಎಷ್ಟು ಕೈದಿಗಳ ಬಿಡುಗಡೆ?

  • ಬೆಂಗಳೂರು ಕೇಂದ್ರ ಕಾರಾಗೃಹ: 14 ಕೈದಿಗಳು
  • ವಿಜಯಪುರ: 5 ಕೈದಿಗಳು
  • ಬಳ್ಳಾರಿ: 3 ಕೈದಿಗಳು
  • ಮೈಸೂರು: 2 ಕೈದಿಗಳು
  • ಬೆಳಗಾವಿ: 2 ಕೈದಿಗಳು
  • ಕಲಬುರಗಿ: 2 ಕೈದಿಗಳು
  • ಶಿವಮೊಗ್ಗ (ಪುರುಷ ಮತ್ತು ಮಹಿಳಾ ವಿಭಾಗ): 2 ಕೈದಿಗಳು
  • ಧಾರವಾಡ: 1 ಕೈದಿ

ಅವಧಿ ಪೂರ್ವ ಬಿಡುಗಡೆಯಾಗುತ್ತಿರುವ ಕೈದಿಗಳು

ಶ್ರೀನಿವಾಸ್ ಅಲಿಯಾಸ್ ಡ್ರೈವರ್ ಶ್ರೀನಿವಾಸ್, ಬಾಲರಾಜು, ವೆಂಕಟೇಶ್, ರಂಜಿತ್ @ ಬಟ್ಟ, ಭುವನೇಶ್ವರ ಟಿಪಿ, ಛತ್ರಪತಿ ನಾಯಕ್, ಲಿಂಗರಾಜು, ಶ್ರೀನಿವಾಸ್ ಮೂರ್ತಿ, ಯಮನಪ್ಪ, ನಿಲಕಂಠಾಚಾರ್ @ ಶಂಕರ್, ಬಾಬು, ರಾಜಾಚಾರಿ, ನಾರಾಯಣಗೌಡ, ವೆಂಕಟೇಶ್, ಚಂದ್ರಮ್ಮ, ತುಕಾರಾಮ್, ಜಯಮ್ಮ, ಸುಭಾಷ್, ತಿಮ್ಮಪ್ಪ, ಅಶೋಕ್, ಶಿವಪ್ಪ, ಆನಂದ, ಪ್ರಕಾಶ್, ಸುರೇಶ್, ಹೆಚ್‌ಕೆ ರವಿಕುಮಾರ್, ಜಿ.ಎಲ್ ಮೋಹನ್ ಕುಮಾರ್, ಮಂಜೆ ನಾಯ್ಕ್, ಲಕ್ಷ್ಮಿ ಕಾಂತ್, ಸರಸ್ವತಿ ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯದ ಪ್ರತಿಷ್ಠಿತ ಮಠದಲ್ಲಿ ಲೆಕ್ಕ ಪತ್ರ ವಿಚಾರಕ್ಕೆ ಗಲಾಟೆ: ಕೋಟ್ಯಂತರ ರೂ ಅವ್ಯವಹಾರ ಆರೋಪ

ದಾವಣಗೆರೆ, ಮಾರ್ಚ್​​ 12: ಹರಿಹರದ ಪಂಚಮಸಾಲಿ ಮಠ (harihara panchamasali peetha) ರಾಜ್ಯದ ಪ್ರತಿಷ್ಠಿತ ಮಠ. ಈ ಮಠಕ್ಕೆ ಕೋಟ್ಯಂತರ ಭಕ್ತರಿದ್ದಾರೆ. ನಿತ್ಯ ದಾಸೋಹ ಕೂಡ ಶುರುವಾಗಿದೆ. ರಾಜ್ಯದ ಬಹುತೇಕ ಕಡೆ ಈ ಮಠದ ಆಸ್ತಿ ಇದೆ. ಇಂತಹ ಮಠದಲ್ಲಿ ಇದೀಗ ಲೆಕ್ಕ ಪತ್ರ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಕೋಟ್ಯಂತರ ರೂ ಅವ್ಯವಹಾರ ನಡೆದಿದೆ. ಮಾತಿನ ಚಕಮಕಿ ವೇಳೆ ನೂಕಾಟ ತಳ್ಳಾಟ ಕೂಡ ನಡೆದಿದೆ. ಮೇಲಾಗಿ ಸರ್ಕಾರದಿಂದ ಬಂದ ಹಣವಾದರೂ ಎಲ್ಲಿ ಎಂಬ ಹತ್ತು ಹಲವಾರು ಪ್ರಶ್ನೆಗೆ ಉತ್ತರಿಸಿದೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದೆ.

ರಾಜ್ಯದ ಪ್ರತಿಷ್ಠಿತ ಹರಿಹರದ ಪಂಚಮಸಾಲಿ ಮಠದಲ್ಲಿ ಘಟನೆ ನಡೆದಿದೆ. ಇದರಲ್ಲಿ ಆರೋಪಿ ಸ್ಧಾನದಲ್ಲಿ ಇರುವರು ದಾವಣಗೆರೆಯ ಬಿ.ಎಸ್ ಚನ್ನಬಸಪ್ಪ ಆ್ಯಂಡ್ ಸನ್ಸ್ ಮಾಲೀಕ ಹಾಗೂ ಮಠದ ಪ್ರಧಾನ ಧರ್ಮದರ್ಶಿ ಬಿಸಿ ಉಮಾಪತಿ, ಬಿಜೆಪಿ ಮುಖಂಡ ಚಂದ್ರಶೇಖರ ಪೂಜಾರ ಹಾಗೂ ಕಾರ್ಯದರ್ಶಿ ಕೆಎಂ ಜ್ಯೋತಿ ಪ್ರಕಾಶ್.

ಇದನ್ನೂ ಓದಿ: 20 ವರ್ಷದ ಹಿಂದೆಯೇ 16,700 ರೂ ಕಟ್ಟಿದ್ರೂ ಇದುವರೆಗೂ ಎ ಖಾತಾ ಸಿಕ್ಕಿಲ್ಲ, ಇದು ಅಧಿಕಾರಿಗಳ ಕಾರ್ಯವೈಖರಿ

ಮಾರ್ಚ್​​ 10ರಂದು ರಾತ್ರಿ 7ರಿಂದ9 ಗಂಟೆ ವೇಳೆಗೆ ಗಲಾಟೆ ನಡೆದಿದೆ. ಈ ವೇಳೆ ಮಠದ ದಾಸೋಹದ ಉಸ್ತುವಾರಿ ಅಶೋಕ ಎಂಬುವವರ ಮೇಲೆ ಹಲ್ಲೆ ಮಾಡಲಾಗಿದೆ. ಸಿಸಿ ಕ್ಯಾಮೆರಾ, ಹಾರ್ಡ್ ಡಿಸ್ಕ್ ಕಿತ್ತುಕೊಂಡು ಹೋಗುವುದನ್ನ ತಡೆಯಲು ಹೋದ ವೇಳೆ ಹಲ್ಲೆ ಮಾಡಲಾಗಿದೆ. ಇದಕ್ಕೆ ಮೂಲ ಕಾರಣ ಲೆಕ್ಕ ಪತ್ರದದ ಕಿತಾಪತಿ. 2008ರಲ್ಲಿ ಹರಿಹರ ಪಂಚಮಸಾಲಿ ಗುರುಪೀಠ ಆರಂಭವಾಗಿದೆ. ಬರೋಬ್ಬರಿ 100 ಕೋಟಿ ರೂ ಹಣ ಬಂದಿದೆ. ಲೆಕ್ಕಾ ಕೊಡಿ ಅಂದರೆ ಹೀಗೆ ಹಲ್ಲೆ, ಜಗಳ ಮಾಡುವುದು, ಡಿವಿಆರ್ ಕಿತ್ತುಕೊಂಡು ಹೋಗುವುದು ಮಾಡುತ್ತಿದ್ದಾರೆ. ಚಂದ್ರಶೇಖರ ಪೂಜಾರ ಬೆಂಬಲಿಗರಿಂದ ಇಂತಹ ಕೃತ್ಯ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಸುದ್ದಿಗೋಷ್ಠಿಯಲ್ಲೂ ಗಲಾಟೆ

ಇಂದು ಮಠದ ಆಡಳಿತಾಧಿಕಾರಿ ಡಾ. ರಾಜಕುಮಾರ ಅವರು ಸುದ್ದಿಗೋಷ್ಠಿ ಮಾಡಿದ್ದು, ಆ ವೇಳೆ ಕೂಡ ಹೊನ್ನಾಳಿಯ ಕೆಲವರು ಗಲಾಟೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸೋಮಣ್ಣ ಬೇವಿನಮರದ, ರಾಣೆಬೊನ್ನೂರು ಮಾಜಿ ಶಾಸಕ ಅರುಣಕುಮಾರ ಸೇರಿದಂತೆ ಪ್ರಮುಖರು ಹಾಜರಾಗಿದ್ದರು. ರಾಜಕುಮಾರ ಅವರು ಆಡಳಿತಾಧಿಕಾರಿ ಆಗಿ ಎರಡು ವರ್ಷವಾಗಿದೆ. ಅವರಿಗೆ ಚೆಕ್ ಬುಕ್ ಕೊಟ್ಟಿಲ್ಲ. ಮಠದ ದಾಖಲೆ ಕೊಟ್ಟಿಲ್ಲ. ಮೇಲಾಗಿ ಮಠದ ಆಸ್ತಿ ವಿಚಾರ ಕೇಳಿದರೂ ಸಹ ಹೇಳುತ್ತಿಲ್ಲ.

7ರಿಂದ 8 ಕೋಟಿ ರೂ ಅವ್ಯವಹಾರ ಆರೋಪ

ಸರ್ಕಾರದಿಂದ ಮಠಕ್ಕೆ 11 ಕೋಟಿ ರೂ ಬಂದಿದೆ. ಇದರಲ್ಲಿ ಸಹ ಹಣ ಗೋಲ್​ ಮಾಲ್​​ ಮಾಡಲಾಗಿದೆ. ಇತ್ತೀಚೆಗೆ ನಡೆದ ಮಠದ ಸಭೆಯಲ್ಲಿ ಬಾವಿ ಬೆಟ್ಟಪ್ಪ ಅವರು ಹೇಳಿದಂತೆ 7ರಿಂದ 8 ಕೋಟಿ ರೂ ಅವ್ಯವಹಾರ ನಡೆದಿದೆ. ಮೇಲಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಶಿಗ್ಗಾವಿಯಲ್ಲಿ ಎರಡು ಎಕರೆ ಹಾಗೂ ಬಸವರಾಜ್ ಬೊಮ್ಮಾಯಿ ನೀಡಿದ ಒಟ್ಟು ನಾಲ್ಕು ಎಕರೆ ಭೂಮಿ ಇದೆ. ಆದರೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಭೂಮಿ ಎಲ್ಲಿದೆ ಎಂಬ ಮಾಹಿತಿ ನೀಡುತ್ತಿಲ್ಲ. ಹೀಗೆ ಹತ್ತಾರು ಅವ್ಯವಹಾರ ಮಾಡಿ ಈಗ ಸ್ವಾಮೀಜಿಗಳ ಬಗ್ಗೆ ಮಾತಾಡುತ್ತಿದ್ದಾರೆ. ಸ್ವಾಮೀಜಿಗೆ ಚೆಕ್​ ಸಹಿ ಅಧಿಕಾರವಿಲ್ಲ. ಮಠದಿಂದ ಒಂದು ರೂ ಪಡೆದಿಲ್ಲ. ಇವರ ಬಗ್ಗೆ ಮಾತಾದಿದರೆ ಪ್ರತಿಭಟನೆ ಮಾಡಲು ಸಮಾಜ ಮುಖಂಡರು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಗದಗದಲ್ಲಿ ನಕಲಿ ಲಾಟರಿ ಜಾಲ ಸಕ್ರಿಯ: ಕೇರಳ ಸರ್ಕಾರದ ಚಿಹ್ನೆ ದುರ್ಬಳಕೆ ಮಾಡಿ ವಂಚನೆ ಆರೋಪ

ತಿಂಗಳಿಗೆ ಮಠದ ಖರ್ಚು 4 ಲಕ್ಷ ರೂ. ಬಾಕಿ 20 ತಿಂಗಳ ಹಣ ಪಡೆಯಲಾಗಿದೆ. ಮಠದಕ್ಕೆ ಸಂಬಂಧಿಸಿದ 14 ಖಾತೆಗಳು ಬ್ಯಾಂಕ್​ನಲ್ಲಿವೆ. ಇವುಗಳಲ್ಲಿ ಕೇವಲ 17 ಲಕ್ಷ ರೂ ಇದೆ. ಈಗ ಹೊಸ ಆಡಳಿತಾಧಿಕಾರಿ ಬಂದ ಬಳಿಕ ಒಂದುವರೆ ಕೋಟಿ ರೂ ಹಣ ಠೇವಣಿ ಇಡಲಾಗಿದೆ. ಬಂದ ಬಡ್ಡಿಯಲ್ಲಿ ದಾಸೋಹ ಮಾಡಲಾಗುತ್ತಿದೆ. ಆದರೆ ಈ ಹಿಂದೆ ಯಾರ ಯಾರ ಕಡೆ ಹಣ ತೆಗೆದುಕೊಂಡಿದ್ದೀರಿ ಪಟ್ಟಿ ಕೊಡಿ ಅಂದರೆ ಕೊಡುತ್ತಿಲ್ಲ. ಒಟ್ಟಾರೆ ಪಂಚಮಸಾಲಿ ಮಠದದಲ್ಲಿ ಕೆಲ ಪ್ರಭಾವಿಗಳು ಸೇರಿ ಕೋಟ್ಯಂತರ ರೂ ಗೋಲ್ ಮಾಲ್ ಮಾಡಿದ ಆರೋಪ ಕೇಳಿ ಬರುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Chanakya Niti: ಜೀವನದಲ್ಲಿ ಹಣ, ಶ್ರೀಮಂತಿಕೆ ಗಳಿಸಲು ಚಾಣಕ್ಯರ ಈ ಮಾತುಗಳನ್ನು ಪಾಲಿಸಿ

ಶ್ರೀಮಂತರಾಗಬೇಕು, ಜೀವನದಲ್ಲಿ ದುಡ್ಡು ಗಳಿಸಬೇಕು ಎಂಬ ಬಯಕೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಅದಕ್ಕಾಗಿ ಪ್ರತಿಯೊಬ್ಬರೂ ಕಠಿಣ ಪರಿಶ್ರಮ ಪಡುತ್ತಾರೆ. ಹಣ ಗಳಿಸಲು ಕಠಿಣ ಪರಿಶ್ರಮ ಒಂದೇ ಸಾಲಲ್ಲ, ಈ ಕೆಲವೊಂದು ಸಲಹೆಗಳನ್ನೂ ಪಾಲಿಸಬೇಕು ಎಂದು ಆಚಾರ್ಯ ಚಾಣಕ್ಯರು (Acharya Chanakya) ಹೇಳಿದ್ದಾರೆ. ಹಾಗಿದ್ರೆ ಆಚರ್ಯ ಚಾಣಕ್ಯರು ಹೇಳಿರುವಂತೆ  ಜೀವನದಲ್ಲಿ ಆರ್ಥಿಕ ಸ್ಥಿರತೆ ಮತ್ತು ಸಮೃದ್ಧಿ ಲಭಿಸಲು ಯಾವ ವಿಷಯಗಳಿಗೆ ಗಮನ ಕೊಡಬೇಕು ಎಂಬುದನ್ನು ನೋಡೋಣ ಬನ್ನಿ.

ಹಣ, ಶ್ರೀಮಂತಿಕೆ ಗಳಿಸಲು ಏನು ಮಾಡಬೇಕು?

ದುಂದುವೆಚ್ಚವನ್ನು ತಪ್ಪಿಸಿ: ಹಣವು ನಿಮ್ಮ ಉತ್ತಮ ಸ್ನೇಹಿತನಾಗಿದ್ದು, ಅದು ಕಷ್ಟದ ಸಮಯದಲ್ಲಿ ನಿಮಗೆ ಸಾಕಷ್ಟು ಸಹಾಯಕ್ಕೆ ಬುರುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಆದ್ದರಿಂದ ಹಣವನ್ನು ನೀರಿನಂತೆ ಖರ್ಚು ಮಾಡಬಾರದು, ಅನಗತ್ಯ ವಿಷಯಗಳಿಗೆ ಹಣ ಖರ್ಚು ಮಾಡುವವನು ಎಂದಿಗೂ ಶ್ರೀಮಂತನಾಗಲು ಸಾಧ್ಯವಿಲ್ಲ. ಹಾಗಾಗಿ ಒಂದೊಂದು ರೂಪಾಯಿಯನ್ನೂ ಬುದ್ಧಿವಂತಿಕೆಯಿಂದ ಖರ್ಚು ಮಾಡಬೇಕು. ಆದಾಯದ ಸ್ವಲ್ಪ ಭಾಗವನ್ನು ಉಳಿಸಬೇಕು. ಆಗ ಮಾತ್ರ ಸಾಕಷ್ಟು ದುಡ್ಡು ಮಾಡಲು ಸಾಧ್ಯ.

 ಉತ್ತಮ ರೀತಿಯಲ್ಲಿ ಹೂಡಿಕೆ ಮಾಡಿ: ಚಾಣಕ್ಯ ನೀತಿಯ ಪ್ರಕಾರ, ಗಳಿಸಿದ ಹಣವನ್ನು ಪೆಟ್ಟಿಗೆಯಲ್ಲಿ ಸಂಗ್ರಹಿಸಿಡುವ ಬದಲು ಅದನ್ನು ನೀರಿನಂತೆ ಹರಿಯಲು ಬಿಡಬೇಕು. ಅಂದರೆ ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡಬೇಕು. ಹೀಗೆ ಸರಿಯಾದ ಸ್ಥಳದಲ್ಲಿ ನೀವು ಹೂಡಿಕೆ ಮಾಡುವುದರಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ.  ಅದೇ ತಪ್ಪು ವಿಧಾನಗಳ ಮೂಲಕ ಅಥವಾ ಯಾರನ್ನಾದರೂ ಮೋಸ ಮಾಡಿ ಗಳಿಸಿದ ಹಣವು ಹೆಚ್ಚು ಕಾಲ ಉಳಿಯುವುದಿಲ್ಲ. ಈ ರೀತಿ ಗಳಿಸಿದ ಹಣವು ವಿನಾಶಕ್ಕೆ ಕಾರಣವಾಗುತ್ತದೆ, ಆದ್ದರಿಂದ  ಯಾವಾಗಲೂ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಹಣವನ್ನು ಗಳಿಸಬೇಕು ಎಂದು ಹೇಳುತ್ತಾರೆ ಚಾಣಕ್ಯ.

ಇದನ್ನೂ ಓದಿ: ನೀವು ಮಾನಸಿಕವಾಗಿ ಸದೃಢರಾಗಬೇಕಂದ್ರೆ ಚಾಣಕ್ಯರ ಕಿವಿಮಾತುಗಳನ್ನು ಪಾಲಿಸಿ

ಅದೃಷ್ಟವನ್ನು ಅವಲಂಬಿಸಬೇಡಿ, ಕಷ್ಟಪಟ್ಟು ಕೆಲಸ ಮಾಡಿ: ಸೋಮಾರಿತನ ಮನುಷ್ಯನ ದೊಡ್ಡ ಶತ್ರು ಎಂದು ಚಾಣಕ್ಯ ಸ್ಪಷ್ಟವಾಗಿ ಹೇಳಿದ್ದಾರೆ. ಅದೃಷ್ಟವನ್ನು ಮಾತ್ರ ಅವಲಂಬಿಸಿ ಕೆಲಸ ಮಾಡದವರು ಶ್ರೀಮಂತಿಕೆಯನ್ನು ಗಳಿಸಲು ಸಾಧ್ಯವೇ ಇಲ್ಲ. ಕಷ್ಟಪಟ್ಟು ದುಡಿಯುವವರು ಮಾತ್ರ ಯಶಸ್ಸನ್ನು ಗಳಿಸಲು ಸಾಧ್ಯ. ಹಾಗಾಗಿ  ಅದೃಷ್ಟವನ್ನು ಅವಲಂಬಿಸುವ ಬದಲು ಕಷ್ಟಪಟ್ಟು ದುಡಿಯಿರಿ.

ಒಳ್ಳೆಯ ವ್ಯಕ್ತಿಗಳ ಸಹವಾಸ: ಭವಿಷ್ಯದಲ್ಲಿ ನೀವು ಎಷ್ಟು ಯಶಸ್ವಿಯಾಗುತ್ತೀರಿ ಎಂಬುದನ್ನು ನಿಮ್ಮ ಸಹವಾಸ ನಿರ್ಧರಿಸುತ್ತದೆ. ನಿಮ್ಮ ಸ್ನೇಹಿತರು ಅಥವಾ ನಿಮ್ಮ ಸಂಘ ಕೆಟ್ಟದಾಗಿದ್ದರೆ, ನೀವು ಎಂದಿಗೂ ಪ್ರಗತಿ ಹೊಂದಲು ಸಾಧ್ಯವಿಲ್ಲ. ತಮ್ಮ ಗುರಿಗಳನ್ನು ಸಾಧಿಸಲು ದೃಢನಿಶ್ಚಯ ಹೊಂದಿರುವ ಮತ್ತು ಯಾವಾಗಲೂ ಪ್ರಗತಿಯ ಬಗ್ಗೆ ಯೋಚಿಸುವ ಜನರ ಸಹವಾಸದಲ್ಲಿರಿ, ಇದು ನಿಮ್ಮ ಆಲೋಚನಾ ವಿಧಾನವನ್ನು ಬದಲಾಯಿಸುತ್ತದೆ.  ಅದೇ ಕೆಟ್ಟ ಚಟಗಳನ್ನು ಹೊಂದಿರುವವ ಸಹವಾಸದಲ್ಲಿದ್ದರೆ ನಿಮ್ಮ ಜೀವನವೇ ಹಾಳಾಗುತ್ತದೆ. ಹಾಗಾಗಿ ಉತ್ತಮ ಜನರ ಸಹವಾಸವನ್ನು ಬೆಳೆಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ಟ್ಯಾರಿಫ್​ಗೆ ನೆಪಗಳ ಹುಡುಕಾಟ; ಭಾರತ ಸೇರಿ 16 ಟ್ರೇಡಿಂಗ್ ಪಾರ್ಟ್ನರ್ಸ್ ಮೇಲೆ ಅಮೆರಿಕ ತನಿಖೆ

ನವದೆಹಲಿ, ಮಾರ್ಚ್ 12: ಹೆಚ್ಚು ಕೈಗಾರಿಕಾ ಸಾಮರ್ಥ್ಯ ಹೊಂದಲಾಗಿರುವ ಕುರಿತಂತೆ ವಿವಿಧ ದೇಶಗಳ ಮೇಲೆ ಅಮೆರಿಕ ತನಿಖೆ ಆರಂಭಿಸಿದೆ. ಅಮೆರಿಕದ ಕಾನೂನಿನ ಸೆಕ್ಷನ್ 301 ಅಡಿಯಲ್ಲಿ ಅನ್ಯಾಯದ ವ್ಯಾಪಾರ ಕ್ರಮಗಳನ್ನು ನಡೆಸಲಾಗುತ್ತಿರುವ ಆರೋಪದ ಮೇಲೆ ತನಿಖೆ ನಡೆಸಲಾಗುತ್ತದೆ. ಭಾರತವೂ ಒಳಗೊಂಡಂತೆ ಅಮೆರಿಕದ 16 ಟ್ರೇಡಿಂಗ್ ಪಾರ್ಟ್ನರ್ ದೇಶಗಳ ಕೈಗಾರಿಕಾ ನೀತಿಗಳನ್ನು ಅಮೆರಿಕ ಅವಲೋಕಿಸಲಿದೆ.

ಟ್ರಂಪ್ ಸರ್ಕಾರದ ಟ್ಯಾರಿಫ್ ಕ್ರಮವನ್ನು ಅಮೆರಿಕದ ಸರ್ವೋಚ್ಚ ನ್ಯಾಯಾಲಯ ಇತ್ತೀಚೆಗೆ ಅನೂರ್ಜಿತಗೊಳಿಸಿ, ಶೇ. 10ರ ಬೇಸ್​ಲೈನ್ ಟ್ಯಾರಿಫ್ ನಿಗದಿ ಮಾಡಿತ್ತು. ಕೋರ್ಟ್​ನ ಈ ತೀರ್ಪಿನ ವಿರುದ್ಧ ನಿಂತಿರುವ ಟ್ರಂಪ್ ಸರ್ಕಾರ ಪದೇ ಪದೇ ತನ್ನ ಟ್ಯಾರಿಫ್ ನೀತಿಯನ್ನು ಸಮರ್ಥಿಸಿಕೊಳ್ಳುತ್ತಲೇ ಇದೆ. ಈ ನಿಟ್ಟಿನಲ್ಲಿ ಅನ್​ಫೇರ್ ಟ್ರೇಡ್ ಪ್ರಾಕ್ಟಿಸಸ್ ಶಂಕೆಯ ಮೇಲೆ 16 ದೇಶಗಳಿಗೆ ಅಮೆರಿಕದ ತನಿಖೆಯ ಬಿಸಿ ಶುರುವಾಗಿದೆ.

ಇದನ್ನೂ ಓದಿ: ಫೆಬ್ರುವರಿ 2026ರಲ್ಲಿ ರೀಟೇಲ್ ಹಣದುಬ್ಬರ ಶೇ. 3.21ಕ್ಕೆ ಏರಿಕೆ; ಆರ್​ಬಿಐ ಮಿತಿಯಲ್ಲಿ ಬೆಲೆ ಏರಿಕೆ

ಭಾರತ ಅಲ್ಲದೇ, ಚೀನಾ, ಐರೋಪ್ಯ ಒಕ್ಕೂಟ, ಜಪಾನ್, ಸೌತ್ ಕೊರಿಯಾ, ಮೆಕ್ಸಿಕೋ, ತೈವಾನ್, ವಿಯೆಟ್ನಾಂ, ಥಾಯ್ಲೆಂಡ್, ಮಲೇಷ್ಯಾ, ಕಾಂಬೋಡಿಯಾ, ಸಿಂಗಾಪುರ್, ಇಂಡೋನೇಷ್ಯಾ, ಬಾಂಗ್ಲಾದೇಶ, ಸ್ವಿಟ್ಜರ್​ಲ್ಯಾಂಡ್ ಮತ್ತು ನಾರ್ವೆ ದೇಶಗಳು ಈ ತನಿಖೆಗೆ ಒಳಪಡುತ್ತಿವೆ. ಈ 16 ದೇಶಗಳು ಅಮೆರಿಕದ ಪ್ರಮುಖ ಟ್ರೇಡಿಂಗ್ ಪಾರ್ಟ್ನರ್​ಗಳ ಪೈಕಿ ಇವೆ. ಅಮೆರಿಕದ ಎರಡನೇ ಅತಿದೊಡ್ಡ ಟ್ರೇಡಿಂಗ್ ಪಾರ್ಟ್ನರ್ ಆದ ಕೆನಡಾವನ್ನು ಈ ತನಿಖೆಯಿಂದ ಹೊರತುಪಡಿಸಲಾಗಿದೆ.

ಯಾವ ಅಂಶಗಳ ಮೇಲೆ ನಡೆಯುತ್ತೆ ತನಿಖೆ?

ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್​ಗಳಲ್ಲಿ ಹೆಚ್ಚಿನ ಉತ್ಪಾದನೆ ಮತ್ತು ಸಾಮರ್ಥ್ಯ ಇರುವುದು, ಸರ್ಕಾರದ ಸಬ್ಸಿಡಿಗಳು, ಕಡಿಮೆ ವೇತನ, ಸರ್ಕಾರಿ ಉದ್ದಿಮೆಗಳ ವಾಣಿಜ್ಯೇತರ ಚಟುವಟಿಕೆ, ಅಸಮರ್ಪಕ ಪರಿಸರ ಮತ್ತು ಕಾರ್ಮಿಕ ವ್ಯವಸ್ಥೆಯ ಗುಣಮಟ್ಟ, ಸಬ್ಸಿಡಿಯಲ್ಲಿ ಸಾಲ ಇತ್ಯಾದಿ ಅಂಶಗಳನ್ನು ಅವಲೋಕಿಸಲಾಗುತ್ತದೆ.

ಇದನ್ನೂ ಓದಿ: ಪೆಟ್ರೋಲ್, ಎಲ್​ಪಿಜಿ ಕೊರತೆ ಇಲ್ಲ: ಸಂಸತ್​ನಲ್ಲಿ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ

ಒಟ್ಟಾರೆ, ಸರ್ಕಾರದ ಸಬ್ಸಿಡಿ ಇತ್ಯಾದಿ ಉತ್ತೇಜನಕಾರಿ ಸವಲತ್ತುಗಳ ನೆರವಿನಿಂದ ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳು ಕಡಿಮೆ ಬೆಲೆಗೆ ಸರಕುಗಳನ್ನು ತಯಾರಿಸಿ ರಫ್ತು ಮಾಡುತ್ತಿವೆಯಾ ಎಂಬುದನ್ನು ಅಮೆರಿಕ ತನಿಖೆಯಲ್ಲಿ ಪತ್ತೆ ಮಾಡಲು ಹೊರಟಿದೆ. ಈ ರೀತಿ ಸವಲತ್ತು ಪಡೆದು ಕಡಿಮೆ ಬೆಲೆ ಸರಕುಗಳನ್ನು ತಯಾರಿಸಿ ಮಾರುತ್ತಿದ್ದರೆ ಅದು ಅಮೆರಿಕನ್ ಕಾನೂನು ಪ್ರಕಾರ ಅನ್​ಫೇರ್ ಟ್ರೇಡ್ ಪ್ರಾಕ್ಟಿಸಸ್ ಆಗುತ್ತದೆ. ತನಿಖೆಯಲ್ಲಿ ಇದು ಋಜುವಾತಾದರೆ, ಅಂಥ ದೇಶಗಳು ಮತ್ತು ಕಂಪನಿಗಳು, ಹಾಗು ಸರಕುಗಳ ಮೇಲೆ ಅಮೆರಿಕ ಹೆಚ್ಚಿನ ಟ್ಯಾರಿಫ್ ವಿಧಿಸಲು ಯೋಜಿಸುತ್ತಿದ್ದಂತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಭೂತ್ ಬಂಗ್ಲ’ ಸಿನಿಮಾದ ಟೀಸರ್ ನೋಡಿದ್ರಾ? ಹಾರರ್ ಜೊತೆ ಭರ್ಜರಿ ಕಾಮಿಡಿ

ಬಾಲಿವುಡ್‌ನ ಎವರ್‌ಗ್ರೀನ್ ಹಿಟ್ ಜೋಡಿ ಅಕ್ಷಯ್ ಕುಮಾರ್ (Akshay Kumar) ಮತ್ತು ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಸುಮಾರು 14 ವರ್ಷಗಳ ಸುದೀರ್ಘ ಗ್ಯಾಪ್ ನಂತರ ಮತ್ತೆ ಒಂದಾಗಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಹಾರರ್-ಕಾಮಿಡಿ ಸಿನಿಮಾ ‘ಭೂತ್ ಬಂಗ್ಲ’ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಈಗ ಈ ಸಿನಿಮಾದ ಟೀಸರ್ (Bhooth Bangla Teaser) ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಈ ಸಿನಿಮಾದ ಪ್ರಚಾರದಲ್ಲಿ ಅಕ್ಷಯ್ ಕುಮಾರ್ ಅವರು ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.

‘ಹೇರಾ ಫೇರಿ’, ‘ಭೂಲ್ ಭುಲಯ್ಯ’, ‘ಗರಂ ಮಸಾಲಾ’ ರೀತಿಯ ಕ್ಲಾಸಿಕ್ ಕಾಮಿಡಿ ಚಿತ್ರಗಳನ್ನು ನೀಡಿದ ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಜೋಡಿ, 2026ರ ಅತ್ಯಂತ ನಿರೀಕ್ಷಿತ ಸಿನಿಮಾದ ಮೂಲಕ ಮರಳುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಸಿನಿಮಾದ ಟೀಸರ್‌ನಲ್ಲಿ ಹಾರರ್ ಮತ್ತು ಕಾಮಿಡಿಯ ಮಿಶ್ರಣವಿದ್ದು, ನೋಡುಗರಿಗೆ ನಗುವಿನ ಜೊತೆಗೆ ಭಯವನ್ನೂ ಹುಟ್ಟಿಸುವ ಸನ್ನಿವೇಶಗಳ ಸುಳಿವು ನೀಡಲಾಗಿದೆ.

ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಹಿರಿಯ ಹಾಸ್ಯ ನಟರ ದಂಡೇ ಇಲ್ಲಿದೆ. ಟೀಸರ್‌ನಲ್ಲಿ ಕಾಣಿಸಿಕೊಂಡಿರುವ ಪರೇಶ್ ರಾವಲ್, ರಾಜ್‌ಪಾಲ್ ಯಾದವ್ ಮತ್ತು ಅಸ್ರಾನಿ ಅವರು ಹಳೆಯ ಹಿಟ್ ಚಿತ್ರಗಳ ನೆನಪನ್ನು ಮರುಕಳಿಸುವಂತೆ ಮಾಡಿದ್ದಾರೆ. ಅಕ್ಷಯ್ ಕುಮಾರ್ ಅವರೊಂದಿಗೆ ಟಬು ಮತ್ತು ವಾಮಿಕಾ ಗಬ್ಬಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಾರು ಎರಡು ದಶಕಗಳ ನಂತರ ಅಕ್ಷಯ್ ಮತ್ತು ಟಬು ತೆರೆ ಹಂಚಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಡಬಲ್ ಧಮಾಕಾ ನೀಡಿದಂತಾಗಿದೆ.

‘ಭೂತ್ ಬಂಗ್ಲ’ ಸಿನಿಮಾ ಟೀಸರ್‌:

‘ಬಾಲಾಜಿ ಮೋಷನ್ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಏಕ್ತಾ ಕಪೂರ್ ಮತ್ತು ಶೋಭಾ ಕಪೂರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ‘ಕೇಪ್ ಆಫ್ ಗುಡ್ ಫಿಲ್ಮ್ಸ್’ ಸಹಯೋಗದಲ್ಲಿ ಮೂಡಿಬರುತ್ತಿರುವ ಈ ಸಿನಿಮಾವು ಏಪ್ರಿಲ್ 10ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಹಾರರ್-ಕಾಮಿಡಿ ಶೈಲಿಯ ಈ ಚಿತ್ರವು ಬಾಲಿವುಡ್‌ನಲ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆಯಿದೆ.

ಇದನ್ನೂ ಓದಿ: ರುಂಡ ಇಲ್ಲದ ವ್ಯಕ್ತಿ ಜೊತೆ ಅಕ್ಷಯ್ ಕುಮಾರ್

ಚಿತ್ರರಂಗದಲ್ಲಿ ನಿರ್ದೇಶಕ ಪ್ರಿಯದರ್ಶನ್ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಜೊತೆ ಅಕ್ಷಯ್ ಕುಮಾರ್ ಕೈ ಜೋಡಿಸಿದರೆ ಅಭಿಮಾನಿಗಳಿಗೆ ಡಬಲ್ ಮನರಂಜನೆ ಗ್ಯಾರಂಟಿ. ಆ ಕಾರಣದಿಂದ ‘ಭೂತ್ ಬಂಗ್ಲ’ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಟೀಸರ್ ನೋಡಿದ ಸಿನಿಪ್ರಿಯರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link