All posts by nagaraj11081993

ಬಿಸಿಸಿಐಗೆ ಇಲ್ಲ ಆರ್‌ಟಿಐ ಬಿಸಿ! – Kannada News | BCCI Exempt From RTI: Landmark CIC Verdict

ಭಾರತದ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆಯಾದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಾಹಿತಿ ಹಕ್ಕು ಕಾಯ್ದೆಯ (RTI) ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಂದ್ರ ಮಾಹಿತಿ ಆಯೋಗ (CIC) ಸೋಮವಾರ ಮಹತ್ವದ ತೀರ್ಪು ನೀಡಿದೆ. ನವ ದೆಹಲಿಯಲ್ಲಿರುವ ಕೇಂದ್ರ ಮಾಹಿತಿ ಆಯೋಗದ ಪ್ರಧಾನ ಕಚೇರಿಯಲ್ಲಿ ಇನ್​​ಫಾರ್ಮೇಷನ್ ಕಮಿಷನರ್ ಪಿ.ಆರ್. ರಮೇಶ್ ಅವರ ನೇತೃತ್ವದ ಪೀಠವು ಈ ಆದೇಶವನ್ನು ಹೊರಡಿಸಿದ್ದು, ಬಿಸಿಸಿಐ ಆರ್‌ಟಿಐ ಕಾಯ್ದೆಯ ಸೆಕ್ಷನ್ 2(h) ಅಡಿಯಲ್ಲಿ ಬರುವ ‘ಸಾರ್ವಜನಿಕ ಪ್ರಾಧಿಕಾರ’ (Public Authority) ಅಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಕಳೆದ ಹಲವು ವರ್ಷಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟ ಮತ್ತು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಈ ತೀರ್ಪಿನ ಹಿನ್ನೆಲೆಯೇನು?

2018 ರಲ್ಲಿ ಸಾರ್ವಜನಿಕರೊಬ್ಬರು ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಆರ್‌ಟಿಐ (RTI) ಅರ್ಜಿ ಸಲ್ಲಿಸಿ ಬಿಸಿಸಿಐಗೆ ಸಂಬಂಧಿಸಿದ ಮಾಹಿತಿ ಕೇಳಿದ್ದರು. ಸಚಿವಾಲಯವು ಆ ಮಾಹಿತಿ ತನ್ನ ಬಳಿ ಇಲ್ಲ ಎಂದು ಹೇಳಿದಾಗ, ಈ ಪ್ರಕರಣ ಕೇಂದ್ರ ಮಾಹಿತಿ ಆಯೋಗದ (CIC) ಮೆಟ್ಟಿಲೇರಿತು. 2018ರಲ್ಲಿ ಸಿಐಸಿ, “ಬಿಸಿಸಿಐ ಆರ್‌ಟಿಐ ವ್ಯಾಪ್ತಿಗೆ ಬರುತ್ತದೆ” ಎಂದು ಆದೇಶ ನೀಡಿದ್ದರು.

ಕೇಂದ್ರ ಮಾಹಿತಿ ಆಯೋಗ ನೀಡಿದ ಆ ಆದೇಶವನ್ನು ವಿರೋಧಿಸಿ, ಬಿಸಿಸಿಐ ಮದ್ರಾಸ್ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ದಾಖಲಿಸಿದ್ದರು. “ನಾವು ಸರ್ಕಾರದ ಧನಸಹಾಯ ಪಡೆಯದ ಸ್ವಾಯತ್ತ ಖಾಸಗಿ ಸಂಸ್ಥೆ, ಹಾಗಾಗಿ ನಮಗೆ ಇದು ಅನ್ವಯಿಸುವುದಿಲ್ಲ” ಎಂದು ಬಿಸಿಸಿಐ ವಾದಿಸಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪುಗಳ ಅನ್ವಯ ಈ ವಿಷಯವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಪ್ರಕರಣವನ್ನು ಮರಳಿ ಸಿಐಸಿಗೆ ಕಳುಹಿಸಿಕೊಟ್ಟಿತು.

ಅದರಂತೆ ಇದೀಗ ಮದ್ರಾಸ್ ಹೈಕೋರ್ಟ್ ನೀಡಿದ ನಿರ್ದೇಶನದ ಮೇರೆಗೆ ಕೇಂದ್ರ ಮಾಹಿತಿ ಆಯೋಗವು ಸುಪ್ರೀಂ ಕೋರ್ಟ್‌ನ ಹಳೆಯ ತೀರ್ಪುಗಳು ಮತ್ತು ಪ್ರಸ್ತುತ ನಿಯಮಗಳನ್ನು ಆಧರಿಸಿ  ಹೊಸ ತೀರ್ಪನ್ನು ನೀಡಿದೆ.

ವಿನಾಯಿತಿ ನೀಡಲು ಕಾರಣಗಳೇನು?

  • ಖಾಸಗಿ ಸಂಸ್ಥೆ: ಬಿಸಿಸಿಐ ತಮಿಳುನಾಡು ಸೊಸೈಟಿಗಳ ನೋಂದಣಿ ಕಾಯ್ದೆಯಡಿ ನೋಂದಾಯಿಸಲ್ಪಟ್ಟ ಒಂದು ಸ್ವಾಯತ್ತ ಖಾಸಗಿ ಸಂಸ್ಥೆಯಾಗಿದೆ. ಇದನ್ನು ಸಂವಿಧಾನದ ಮೂಲಕವಾಗಲಿ ಅಥವಾ ಸಂಸತ್ತಿನ ಯಾವುದೇ ವಿಶೇಷ ಕಾನೂನಿನ ಮೂಲಕವಾಗಲಿ ಸ್ಥಾಪಿಸಲಾಗಿಲ್ಲ ಎಂದು ಬಿಸಿಸಿಐ ವಕೀಲರು ವಾದ ಮಂಡಿಸಿದ್ದಾರೆ.
  •  ಸರ್ಕಾರದ ನಿಯಂತ್ರಣವಿಲ್ಲ: ಭಾರತೀಯ ಕ್ರಿಕೆಟ್ ಮಂಡಳಿಯ ಆಡಳಿತ, ಪದಾಧಿಕಾರಿಗಳ ಆಯ್ಕೆ ಅಥವಾ ಆಂತರಿಕ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಯಾವುದೇ ರೀತಿಯ ನೇರ ಅಥವಾ ಪರೋಕ್ಷ ನಿಯಂತ್ರಣವನ್ನು ಹೊಂದಿಲ್ಲ ಎಂದು ಬಿಸಿಸಿಐ ಸ್ಪಷ್ಟ ಪಡಿಸಿದೆ.
  • ಆರ್ಥಿಕ ಸ್ವಾವಲಂಬನೆ: ಬಿಸಿಸಿಐ ತನ್ನ ಆದಾಯವನ್ನು ಪ್ರಸಾರ ಹಕ್ಕುಗಳು (Media Rights), ಕಾರ್ಪೊರೇಟ್ ಪ್ರಾಯೋಜಕತ್ವಗಳು ಮತ್ತು ಟಿಕೆಟ್ ಮಾರಾಟದ ಮೂಲಕ ತಾನೇ ಗಳಿಸುತ್ತದೆ. ಇದು ಸರ್ಕಾರದ ಯಾವುದೇ ಅನುದಾನವನ್ನು ಅವಲಂಬಿಸಿಲ್ಲ ಎಂದು ತಿಳಿಸಲಾಗಿದೆ.
  • ತೆರಿಗೆ ವಿನಾಯಿತಿ ಧನಸಹಾಯವಲ್ಲ: ಸರ್ಕಾರ ನೀಡುವ ಸಾಮಾನ್ಯ ಕರ ವಿನಾಯಿತಿಗಳು ಅಥವಾ ಕಾನೂನುಬದ್ಧ ಸೌಲತ್ತುಗಳನ್ನು ಆರ್‌ಟಿಐ ಕಾಯ್ದೆಯಡಿ ‘ಸರ್ಕಾರದ ಗಣನೀಯ ಧನಸಹಾಯ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.

ಕ್ರೀಡಾ ಆಡಳಿತ ಮಸೂದೆ:

ಈ ತೀರ್ಪು ಭಾರತದ ಹೊಸ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯ ನಿಯಮಗಳಿಗೆ ಪೂರಕವಾಗಿದೆ. ಸರ್ಕಾರದ ನೇರ ಹಣಕಾಸು ನೆರವು ಪಡೆಯದ ಕ್ರೀಡಾ ಸಂಸ್ಥೆಗಳಿಗೆ ಆರ್‌ಟಿಐನಿಂದ ವಿನಾಯಿತಿ ನೀಡಲು ಈ ಮಸೂದೆಯಲ್ಲಿ ಅವಕಾಶವಿದೆ. ಆದಾಗ್ಯೂ, ಬಿಸಿಸಿಐ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಾಗಿ (NSF) ನೋಂದಾಯಿಸಿಕೊಳ್ಳಬೇಕಾಗುತ್ತದೆ ಮತ್ತು ಸುರಕ್ಷಿತ ಕ್ರೀಡಾ ನೀತಿಗಳು ಹಾಗೂ ಆಂತರಿಕ ನೈತಿಕ ಸಮಿತಿಗಳ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆದರೆ ಅದರ ಆಂತರಿಕ ಹಣಕಾಸು ದಾಖಲೆಗಳು ಮತ್ತು ಪತ್ರವ್ಯವಹಾರಗಳನ್ನು ಸಾರ್ವಜನಿಕರು ಆರ್‌ಟಿಐ ಮೂಲಕ ಪಡೆಯಲು ಸಾಧ್ಯವಿರುವುದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ಕೇಂದ್ರ ಮಾಹಿತಿ ಆಯೋಗದ (CIC) ನೀಡಿರುವ ತೀರ್ಪು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ಕಾನೂನಾತ್ಮಕವಾಗಿ ಅತಿ ದೊಡ್ಡ ಸಮಾಧಾನ ತಂದಿದೆ. ತಾನು ಸರ್ಕಾರದ ಧನಸಹಾಯ ಪಡೆಯದ ಸ್ವಾಯತ್ತ ಖಾಸಗಿ ಸಂಸ್ಥೆ ಎಂದು ಮದ್ರಾಸ್ ಹೈಕೋರ್ಟ್‌ನಲ್ಲಿ ಬಿಸಿಸಿಐ ನಡೆಸಿದ ಸುದೀರ್ಘ ಕಾನೂನು ಹೋರಾಟಕ್ಕೆ ಈಗ ಜಯ ಸಿಕ್ಕಂತಾಗಿದೆ.

ಇದನ್ನೂ ಓದಿ: SRH ತಂಡ ಗೆದ್ದರೆ ಎರಡು ತಂಡಗಳು ಪ್ಲೇಆಫ್​ಗೆ ಎಂಟ್ರಿ..!

ಈ ಆದೇಶದಿಂದಾಗಿ ಬಿಸಿಸಿಐ ತನ್ನ ಆಂತರಿಕ ಹಣಕಾಸು ವ್ಯವಹಾರಗಳು ಮತ್ತು ಆಡಳಿತಾತ್ಮಕ ನಿರ್ಧಾರಗಳನ್ನು ಸಾರ್ವಜನಿಕರ ಆರ್‌ಟಿಐ ಕಣ್ಣಿನಿಂದ ದೂರ ಇಡಲು ಯಶಸ್ವಿಯಾಗಿದೆ. ಆದರೆ, ಕ್ರೀಡಾಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ ಬಯಸುವ ಕ್ರೀಡಾ ಪ್ರೇಮಿಗಳು ಮತ್ತು ಆರ್‌ಟಿಐ ಕಾರ್ಯಕರ್ತರಿಗೆ ಇದು ತೀವ್ರ ನಿರಾಶೆ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಈ ಹೋರಾಟ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಎಲ್ಲಾ ಸಾಧ್ಯತೆಗಳಿವೆ.

Source link

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮಹಾ ಕ್ರಾಂತಿ: ಇನ್ನು ಐದು ಗಂಟೆಗಳ ಐವಿ ಡ್ರಿಪ್ ಬೇಕಿಲ್ಲ, ಭಾರತದಲ್ಲಿ ಬಿಡುಗಡೆಯಾಯ್ತು ಹೊಸ ಇಂಜೆಕ್ಷನ್ – Kannada News | New Rapid Cancer Injection Introduced in India, Treatment Takes Just Minutes

ಕ್ಯಾನ್ಸರ್ ಇಂಜೆಕ್ಷನ್ Image Credit source: Cancer treatment Centre of America

ನವದೆಹಲಿ, ಮೇ 18: ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಂತ ಕ್ರಾಂತಿಕಾರಿ ಹಾಗೂ ಆಶಾದಾಯಕ ಬೆಳವಣಿಗೆಯೊಂದು ನಡೆದಿದೆ. ಶ್ವಾಸಕೋಶದ ಕ್ಯಾನ್ಸರ್(Cancer) ರೋಗಿಗಳಿಗೆ ವರದಾನವಾಗಬಲ್ಲ ಅತ್ಯಾಧುನಿಕ ಚುಚ್ಚುಮದ್ದನ್ನು ದೇಶದಲ್ಲಿ ಪರಿಚಯಿಸಲಾಗಿದೆ. ಈ ಕುರಿತಾದ ಪೂರ್ಣ ವರದಿ ಇಲ್ಲಿದೆ. ಭಾರತದಲ್ಲಿ ಶ್ವಾಸಕೋಶದ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ವಿಧಾನದಲ್ಲಿ ಅತ್ಯಂತ ಮಹತ್ವದ ಹಾಗೂ ಕ್ರಾಂತಿಕಾರಿ ಬದಲಾವಣೆ ಗಾಳಿ ಬೀಸಿದೆ.

ಗಂಟೆಗಟ್ಟಲೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಪಡೆಯಬೇಕಿದ್ದ ಸಾಂಪ್ರದಾಯಿಕ ಇಂಟ್ರಾವೆನಸ್ (IV) ಚಿಕಿತ್ಸೆಗೆ ಪರ್ಯಾಯವಾಗಿ, ಕೇವಲ ಏಳು ನಿಮಿಷಗಳಲ್ಲಿ ನೀಡಬಹುದಾದ ಹೊಸ ಕ್ಯಾನ್ಸರ್ ಇಂಜೆಕ್ಷನ್ ಅನ್ನು ಭಾರತದಲ್ಲಿ ಲಾಂಚ್ ಮಾಡಲಾಗಿದೆ. ‘ಟೆಸೆಂಟ್ರಿಕ್’ (Tecentriq) ಹೆಸರಿನ ಈ  ಇಮ್ಯುನೊಥೆರಪಿ ಔಷಧವನ್ನು ರಾಶ್ ಫಾರ್ಮಾ ಇಂಡಿಯಾ (Roche Pharma India) ಸಂಸ್ಥೆ ಮಾರುಕಟ್ಟೆಗೆ ಪರಿಚಯಿಸಿದೆ.

ಗಂಟೆಗಳ ಕಾಯುವಿಕೆಗೆ ಸಿಕ್ಕಿತು ಮುಕ್ತಿ

ಇಲ್ಲಿಯವರೆಗೆ ಕ್ಯಾನ್ಸರ್ ರೋಗಿಗಳು ಆಸ್ಪತ್ರೆ ಅಥವಾ ಕ್ಲಿನಿಕ್‌ಗಳಲ್ಲಿ ಸೂಜಿ ಚುಚ್ಚಿಸಿಕೊಂಡು ಹಲವಾರು ಗಂಟೆಗಳ ಕಾಲ ಇನ್ಫ್ಯೂಷನ್ ಮೂಲಕ ಔಷಧ ಪಡೆಯಬೇಕಿತ್ತು. ಇದು ರೋಗಿಗಳಿಗೆ ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ಉಂಟುಮಾಡುತ್ತಿತ್ತು. ಆದರೆ, ಈ ಹೊಸ ‘ಸಬ್ಕ್ಯುಟೇನಿಯಸ್ ಇಂಜೆಕ್ಷನ್’ ಅನ್ನು ಅತ್ಯಂತ ಸುಲಭವಾಗಿ ಚರ್ಮದ ಅಡಿಯಲ್ಲಿ (ಸಾಮಾನ್ಯವಾಗಿ ತೊಡೆಯ ಭಾಗದಲ್ಲಿ) ಕೇವಲ 7 ನಿಮಿಷಗಳಲ್ಲಿ ನೀಡಬಹುದು. ಇದು ಆಸ್ಪತ್ರೆಗಳ ಮೇಲಿನ ಹೊರೆಯನ್ನು ತಗ್ಗಿಸುವುದಲ್ಲದೆ, ವಯಸ್ಸಾದ ರೋಗಿಗಳಿಗೆ ಮತ್ತು ದೂರದ ಊರುಗಳಿಂದ ಬರುವವರಿಗೆ ಭಾರಿ ಅನುಕೂಲ ಕಲ್ಪಿಸಲಿದೆ.

ಔಷಧ ಕೆಲಸ ಮಾಡುವುದು ಹೇಗೆ?
ಈ ಇಂಜೆಕ್ಷನ್‌ನಲ್ಲಿ ಅಟೆಜೋಲಿಜುಮಾಬ್ (Atezolizumab) ಎಂಬ ಪ್ರಮುಖ ಔಷಧವನ್ನು ಬಳಸಲಾಗಿದೆ. ಕ್ಯಾನ್ಸರ್ ಕೋಶಗಳು ನಮ್ಮ ದೇಹದ ರೋಗನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳಲು PD-L1 ಎಂಬ ಪ್ರೋಟೀನ್ ಅನ್ನು ಕವಚದಂತೆ ಬಳಸುತ್ತವೆ.

ಈ ಹೊಸ ಇಂಜೆಕ್ಷನ್ ಆ ಪ್ರೋಟೀನ್ ಕವಚವನ್ನು ನಿರ್ಬಂಧಿಸುತ್ತದೆ . ಒಮ್ಮೆ ಪ್ರೋಟಿನ್ ಬ್ಲಾಕ್ ಆದ ತಕ್ಷಣ, ದೇಹದ ರೋಗನಿರೋಧಕ ಕೋಶಗಳು ಕ್ಯಾನ್ಸರ್ ಕೋಶಗಳನ್ನು ಸುಲಭವಾಗಿ ಗುರುತಿಸಿ, ಅವುಗಳ ಮೇಲೆ ತೀವ್ರವಾಗಿ ದಾಳಿ ಮಾಡಿ ಧ್ವಂಸಗೊಳಿಸುತ್ತವೆ. ಇದು ಆರೋಗ್ಯಕರ ಕೋಶಗಳಿಗೂ ಹಾನಿ ಮಾಡುವ ಕೀಮೋಥೆರಪಿಗಿಂತ ಭಿನ್ನವಾಗಿದ್ದು, ಅತ್ಯಂತ ಕಡಿಮೆ ಅಡ್ಡಪರಿಣಾಮಗಳನ್ನು ಹೊಂದಿದೆ.

ಮತ್ತಷ್ಟು ಓದಿ: ಮಹಿಳೆಯರಲ್ಲಿ ಕ್ಯಾನ್ಸರ್​​ ಹೆಚ್ಚಳ: ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಆಂಕಾಲಜಿಸ್ಟ್‌ಗಳು

ಯಾರಿಗೆ ಇದು ಸಹಕಾರಿ
ಭಾರತದಲ್ಲಿ ಅತಿ ಸಾಮಾನ್ಯ ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿರುವ ರೋಗಿಗಳಿಗೆ ಈ ಚಿಕಿತ್ಸೆ ನೀಡಲಾಗುತ್ತದೆ. ರೋಗಿಯಗೆಡ್ಡೆಯಲ್ಲಿ ಹೆಚ್ಚಿನ ಮಟ್ಟದ PD-L1 ಪ್ರೋಟಿನ್ ಇದೆಯೇ ಎಂಬುದನ್ನು ವೈದ್ಯರು ಮೊದಲು ಪರೀಕ್ಷಿಸುತ್ತಾರೆ. ತಜ್ಞರ ಪ್ರಕಾರ, ಸುಮಾರು ಅರ್ಧದಷ್ಟು ಶ್ವಾಸಕೋಶದ ಕ್ಯಾನ್ಸರ್ ರೋಗಿಗಳು ಈ ಚಿಕಿತ್ಸೆಗೆ ಅರ್ಹರಾಗಿರುತ್ತಾರೆ.

ಪ್ರತಿ ಡೋಸ್‌ಗೆ 3.7 ಲಕ್ಷ ರೂ. ಆಗಿದ್ದು, ಇದು ರೋಗಿಗಳ ಕುಟುಂಬವನ್ನು ಆತಂಕಕ್ಕೆ ತಳ್ಳಿದೆ. ಚಿಕಿತ್ಸೆಯ ಸಂಪೂರ್ಣ ಅವಧಿಯಲ್ಲಿ ಒಬ್ಬ ರೋಗಿಗೆ ಕನಿಷ್ಠ 6 ಡೋಸ್‌ಗಳು ಬೇಕಾಗುತ್ತವೆ. ಅಂದರೆ ಒಟ್ಟು ವೆಚ್ಚ ಸುಮಾರು 22 ಲಕ್ಷ ರೂ. ದಾಟಲಿದೆ. ಮುಂದುವರೆದ ತಂತ್ರಜ್ಞಾನ ಮತ್ತು ಸುದೀರ್ಘ ಸಂಶೋಧನೆಯ ಕಾರಣದಿಂದಾಗಿ ಈ ಇಮ್ಯುನೊಥೆರಪಿ ಔಷಧಗಳು ದುಬಾರಿಯಾಗಿವೆ ಎನ್ನಲಾಗಿದೆ.

ರೋಗಿಗಳಿಗೆ ಸಿಗಲಿದೆಯೇ ಸಹಾಯ?
ಈ ಭಾರಿ ಆರ್ಥಿಕ ಹೊರೆಯನ್ನು ತಗ್ಗಿಸಲು ರೋಚೆ ಸಂಸ್ಥೆಯು “ಬ್ಲೂ ಟ್ರೀ” ಎಂಬ ವಿಶೇಷ ರೋಗಿ ಸಹಾಯ ಯೋಜನೆಯನ್ನು ತಂದಿದೆ. ಇದರ ಜೊತೆಗೆ, ಈ ಔಷಧವನ್ನು ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (CGHS) ಅಡಿಯಲ್ಲಿ ಸೇರಿಸಲಾಗಿದ್ದು, ಅರ್ಹ ರೋಗಿಗಳಿಗೆ ಹಣ ಮರುಪಾವತಿ (Reimbursement) ಸೌಲಭ್ಯ ಸಿಗಲಿದೆ. ಆದಾಗ್ಯೂ, ಸಾಮಾನ್ಯ ಜನರಿಗೂ ಈ ಚಿಕಿತ್ಸೆ ಸುಲಭವಾಗಿ ಸಿಗುವಂತಾಗಲು ಸರ್ಕಾರದ ಹಸ್ತಕ್ಷೇಪದ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೈಗೆಟುಕುವ ಬೆಲೆಯ ಸವಾಲುಗಳಿದ್ದರೂ, ಕ್ಯಾನ್ಸರ್ ರೋಗಿಗಳ ಜೀವಿತಾವಧಿ ಹೆಚ್ಚಿಸುವಲ್ಲಿ ಮತ್ತು ಅವರ ಜೀವನದ ಗುಣಮಟ್ಟವನ್ನು ಉತ್ತಮಗೊಳಿಸುವಲ್ಲಿ ಈ 7 ನಿಮಿಷದ ಇಂಜೆಕ್ಷನ್ ಭಾರತೀಯ ವೈದ್ಯಕೀಯ ಇತಿಹಾಸದಲ್ಲೇ ಒಂದು ಮೈಲಿಗಲ್ಲು ಎನ್ನಬಹುದು.

ಡಿಸ್​ಕ್ಲೈಮರ್: ವೈದ್ಯಕೀಯ ಸಲಹೆಯನ್ನು ಒಳಗೊಂಡ ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ತಜ್ಞರ ಅಭಿಪ್ರಾಯಕ್ಕೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ವೈದ್ಯರನ್ನು ಅಥವಾ ನಿಮ್ಮ  ಕುಟುಂಬ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಗೆ ಟಿವಿ9 ಕನ್ನಡ ಸಂಸ್ಥೆ ಜವಾಬ್ದಾರರಾಗಿರುವುದಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:16 am, Mon, 18 May 26

Source link

SRH ತಂಡ ಗೆದ್ದರೆ ಎರಡು ತಂಡಗಳು ಪ್ಲೇಆಫ್​ಗೆ ಎಂಟ್ರಿ..!

Source link

ಏನೇನೋ ಹೇಳ್ಬೇಡ್ರಯ್ಯ; ತಿಲಕ್ ವರ್ಮಾ-ಶ್ರೀಲೀಲಾ ಡೇಟಿಂಗ್ ವದಂತಿಗೆ ಬ್ರೇಕ್ – Kannada News | Sreeleela Denies Tilak Varma Dating Rumors: Mother Swarnalatha Clarifies Truth

ಸೆಲೆಬ್ರಿಟಿಗಳು ಸಣ್ಣ ಸಣ್ಣ ವಿಷಯಕ್ಕೂ ಸುದ್ದಿ ಆಗುತ್ತಾರೆ. ಅವರು ಏನೇ ಮಾಡಿದರೂ ಚರ್ಚೆ ಆಗುತ್ತದೆ. ಸಣ್ಣ ಸಣ್ಣ ಕಾಕತಾಳೀಯಗಳೂ ಸಹ ದೊಡ್ಡ ಮಟ್ಟದ ಗಾಸಿಪ್‌ಗಳಾಗಿ ಮಾರ್ಪಡುತ್ತವೆ. ಒಂದೇ ಜಾಗದಲ್ಲಿ ಕಾಣಿಸಿಕೊಂಡರೆ ಸಾಕು, ಅವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಕಥೆ ಕಟ್ಟುವುದು ನೆಟ್ಟಿಗರಿಗೆ ಅಭ್ಯಾಸವಾಗಿಬಿಟ್ಟಿದೆ. ಈಗ ಇಂತಹದ್ದೇ ಒಂದು ಸುಳ್ಳು ವದಂತಿಗೆ ಸ್ಟಾರ್ ನಟಿ ಶ್ರೀಲೀಲಾ (Sreeleela) ಸಂತ್ರಸ್ತೆ ಆಗಿದ್ದಾರೆ. ಈಗ ಈ ವಿಷಯವಾಗಿ ಶ್ರೀಲೀಲಾ ತಾಯಿ ಸ್ವರ್ಣಲತಾ ಸ್ಪಷ್ಟನೆ ನೀಡಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಯುವ ಆಟಗಾರ ತಿಲಕ್ ವರ್ಮ ಹಾಗೂ ಶ್ರೀಲೀಲಾ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿತ್ತು. ಆದರೆ, ಈಗ ಈ ಎಲ್ಲಾ ಸುದ್ದಿಗಳಿಗೆ ಶ್ರೀಲೀಲಾ ಅವರ ತಾಯಿ ಡಾ. ಸ್ವರ್ಣಲತಾ ಅವರು ಅಧಿಕೃತವಾಗಿ ತೆರೆ ಎಳೆದಿದ್ದಾರೆ.

ವೈಕುಂಠ ಏಕಾದಶಿಯ ಸಂದರ್ಭದಲ್ಲಿ ಶ್ರೀಲೀಲಾ ಮತ್ತು ತಿಲಕ್ ವರ್ಮ ಇಬ್ಬರೂ ಪ್ರತ್ಯೇಕವಾಗಿ ತಿರುಮಲಕ್ಕೆ ಭೇಟಿ ನೀಡಿದ್ದರು. ಇದಾದ ಬಳಿಕ ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ಶ್ರೀಲೀಲಾ ಅವರ ತಾಯಿ ವಿಐಪಿ ಸ್ಟ್ಯಾಂಡ್‌ನಲ್ಲಿ ಕಾಣಿಸಿಕೊಂಡಿದ್ದರು. ಇಷ್ಟೇ ಅಲ್ಲದೆ ಶ್ರೀಲೀಲಾ ತಂಡದ ಸದಸ್ಯರೊಬ್ಬರು ತಿಲಕ್ ಹೆಸರಿನ ಜರ್ಸಿ ಧರಿಸಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ಈ ಸಣ್ಣ ವಿಷಯಗಳನ್ನೇ ಇಟ್ಟುಕೊಂಡು ನೆಟ್ಟಿಗರು ಇವರಿಬ್ಬರ ನಡುವೆ ಪ್ರೀತಿ ಬೆಳೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಥೆ ಹೆಣೆಯಲು ಶುರು ಮಾಡಿದ್ದರು.

ಈ ಬೇಡದ ಗಾಸಿಪ್‌ಗಳ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಶ್ರೀಲೀಲಾ ತಾಯಿ ಡಾ. ಸ್ವರ್ಣಲತಾ, ‘ಈ ಎಲ್ಲಾ ಸುದ್ದಿಗಳು ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತ. ಇದರಲ್ಲಿ ಒಂದು ಚೂರೂ ಸತ್ಯಾಂಶವಿಲ್ಲ. ಶ್ರೀಲೀಲಾ ಮತ್ತು ತಿಲಕ್ ವರ್ಮ ಇದುವರೆಗೆ ಭೇಟಿಯೂ ಆಗಿಲ್ಲ, ಮಾತನಾಡಿಯೂ ಇಲ್ಲ. ಜನರು ಸಣ್ಣ ಸಣ್ಣ ವಿಷಯಗಳನ್ನು ಇಟ್ಟುಕೊಂಡು ತಮಗೆ ಬೇಕಾದ ಹಾಗೆ ಊಹಾಪೋಹಗಳನ್ನು ಸೃಷ್ಟಿಸುತ್ತಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಶ್ರೀಲೀಲಾ ಸದ್ಯಕ್ಕೆ ಸಿನಿಮಾ ಮತ್ತು ವಿದ್ಯಾಭ್ಯಾಸ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾಳೆ. ಜೂನ್‌ನಲ್ಲಿ ನಡೆಯಲಿರುವ ನೀಟ್ ಪಿಜಿ ಪರೀಕ್ಷೆಗೆ ಅವಳು ತಯಾರಿ ನಡೆಸುತ್ತಿದ್ದಾಳೆ. ಅವಳಿಗೆ ವೈಯಕ್ತಿಕ ಜೀವನ, ಮದುವೆ ಅಂತೆಲ್ಲಾ ಯೋಚಿಸಲು ಇನ್ನೂ 5-6 ವರ್ಷಗಳ ಸಮಯವಿದೆ. ಸದ್ಯಕ್ಕಂತೂ ಅವಳ ಗಮನ ಪೂರ್ತಿ ಓದು ಮತ್ತು ಸಿನಿಮಾಗಳ ಮೇಲಷ್ಟೇ ಇದೆ’ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕ್ರಿಕೆಟಿಗನ ಜೊತೆಗೆ ಶ್ರೀಲೀಲಾ ಡೇಟಿಂಗ್: ಸತ್ಯಾಂಶವೇನು?

ಶ್ರೀಲೀಲಾ ಇಂತಹ ವದಂತಿಗಳನ್ನು ಎದುರಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆಯೂ ಇವರ ಹೆಸರು ಕೇಳಿಬಂದಿತ್ತು. ‘ತು ಮೇರಿ ಜಿಂದಗಿ ಹೈ’ ಚಿತ್ರದಲ್ಲಿ ಇವರು ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

SSLC-2 ಪರೀಕ್ಷೆ: ಹಿಜಾಬ್ ಧರಿಸಿ ಬಂದವರಿಗಿಲ್ಲ ಅವಕಾಶ! ಈ ಹೊತ್ತಿನ ಪ್ರಮುಖ 4 ಸುದ್ದಿಗಳು ಇಲ್ಲಿವೆ – Kannada News | Today’s Top 4 News: No Hijab in Karnataka SSLC 2 Exam, HD Deve Gowda’s 94th Birthday, VD Satheesan Sworn in, KSRTC BMTC Strike Updates

ಸಾಂದರ್ಭಿಕ ಚಿತ್ರ (ಎಐ)Image Credit source: Google Gemini

ಬೆಂಗಳೂರು, ಮೇ 18: ಬೆಂಗಳೂರು (Bengaluru) ಸೇರಿದಂತೆ ಕರ್ನಾಟಕದಾದ್ಯಂತ ಎಸ್​ಎಸ್​ಎಲ್​​ಸಿ 2ನೇ (SSLC 2 Exam) ಪರೀಕ್ಷೆ ಇಂದಿನಿಂದ (ಮೇ 18) ಆರಂಭವಾಗಿದೆ. ಸರ್ಕಾರ ಇತ್ತೀಚೆಗೆ ಧಾರ್ಮಿಕ ಸಂಕೇತಗಳನ್ನು ಧರಿಸಿ ಪರೀಕ್ಷೆ ಬರೆಯುವ ಬಗ್ಗೆ ಹೊಸ ಆದೇಶ ಹೊರಡಿಸಿದೆ. ಅದರಂತೆ, ಜನಿವಾರ, ಶಿವ ದಾರ, ಲಿಂಗ, ರುದ್ರಾಕ್ಷಿ, ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿದೆ. ಆದಾಗ್ಯೂ, ಎಸ್​ಎಸ್​ಎಲ್​​ಸಿ 2ನೇ ಪರೀಕ್ಷೆಯಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿಲ್ಲ.

ಎಸ್​ಎಸ್​​ಎಲ್​ಸಿ ಒಂದನೇ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಬಿಟ್ಟಿಲ್ಲ. ಅದರಂತೆಯೇ ಈಗ 2ನೇ ಪರೀಕ್ಷೆಯನ್ನೂ ನಡೆಸಲಾಗುತ್ತಿದೆ. ಸರ್ಕಾರದಿಂದ ವಸ್ತ್ರಸಂಹಿತೆ ಬಗ್ಗೆ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ ಕಳೆದ ಬಾರಿಯಂತೆ ಈಗ ಪರೀಕ್ಷೆ ನಡೆಸುತ್ತಿದ್ದೇವೆ. ಹಿಜಾಬ್ ಧರಿಸಿ ಬಂದ್ ವಿದ್ಯಾರ್ಥಿಗಳಿಗೆ ಹಿಜಾಬ್ ತೆಗಸಿ ಪರೀಕ್ಷೆಗೆ ಅವಕಾಶ ನೀಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದಿನಿಂದ ಮೇ 25 ರವರೆಗೆ SSLC -2 ಪರೀಕ್ಷೆ ನಡೆಯಲಿದೆ. ಈ ವರ್ಷ ಎರಡನೇ ಪರೀಕ್ಷೆಗೆ 1,15,112 ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದಾರೆ. ಈ ಪೈಕ 7658 ವಿದ್ಯಾರ್ಥಿಗಳು ಅಂಕ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ.

ಹೆಚ್​ಡಿ ದೇವೇಗೌಡರಿಗೆ 94ನೇ ಹುಟ್ಟುಹಬ್ಬದ ಸಂಭ್ರಮ

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್​​ಡಿ ದೇವೇಗೌಡರಿಗೆ ಇಂದು 94ನೇ ಜನ್ಮದಿನದ ಸಂಭ್ರಮ. ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ದೇವೇಗೌಡರು ವಿಶೇಷ ಪೂಜೆ ಸಲ್ಲಿಸಿದರು. ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಹಾಸನದ ನೀಲವಾಗಿಲು ಆಂಜನೇಯ ಸ್ವಾಮಿ ದೇವಾಲಯದಲ್ಲಿ ಜೆಡಿಎಸ್ ನಾಯಕರು ವಿಶೇಷ ಪೂಜೆ ಸಲ್ಲಿಸಿ ಹಿರಿಯ ನಾಯಕನಿಗೆ ಆಯುರಾರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದರು.

ಕೇರಳ ಸಿಎಂ ಸತೀಶನ್ ಪ್ರಮಾಣವಚನ ಸ್ವೀಕಾರ

ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿಡಿ ಸತೀಶನ್ ಪ್ರಮಾಣವಚನ ಸ್ವೀಕರಿಸಿದರು. ನೂತನ ಯುಡಿಎಫ್​ ಸರ್ಕಾರದ ಸಚಿವರಾಗಿ ವಿಡಿ ಸತೀಶನ್ ಜತೆ 20 ಮಂದಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಇತ್ತೀಚೆಗೆ ನಡೆದ ಕೇರಳಂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​​ ನೇತೃತ್ವದ ಯುಡಿಎಫ್ ಭರ್ಜರಿ ಗೆಲುವು ಸಾಧಿಸಿದ್ದು, ದಶಕದ ನಂತರ ಮರಳಿ ಅಧಿಕಾರಕ್ಕೇರಿದೆ.

ಇದನ್ನೂ ಓದಿ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸತೀಶನ್

ಸಾರಿಗೆ ಮುಷ್ಕರ ಬಹುತೇಕ ಫಿಕ್ಸ್

ವೇತನ ಪರಿಷ್ಕರಣೆ ಮತ್ತು ಬಾಕಿ ಹಣ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿರಿಸಿ ಕರ್ನಾಟಕ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ನೀಡಿದೆ. ಹೀಗಾಗಿ ಮೇ 20 ರಿಂದ ಕರ್ನಾಟಕದಾದ್ಯಂತ BMTC ಮತ್ತು KSRTC ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ.

ಇದನ್ನೂ ಓದಿ: ಬುಧವಾರದಿಂದ ಸಿಗಲ್ಲ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್! ಸಾರಿಗೆ ಮುಷ್ಕರ ಬಹುತೇಕ ಫಿಕ್ಸ್

ಮುಷ್ಕರ ತಪ್ಪಿಸುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಸಭೆ ನಿಗದಿಯಾಗಿದ್ದು, ಇದು ಫಲಪ್ರದವಾದರೆ ಮುಷ್ಕರ ಹಿಂಪಡೆಯುವ ಸಾಧ್ಯತೆಯೂ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೇಟಿಎಂನಲ್ಲಿ ಹೊಸ ಫೀಚರ್; ಪೋಷಕರಿಂದ ಮಕ್ಕಳು ಪಡೆಯಬಹುದು ಆನ್​ಲೈನ್ ಪಾಕೆಟ್ ಮನಿ – Kannada News | Paytm ‘Pocket Money’ UPI Feature for children, with certain spending limit

ನವದೆಹಲಿ, ಮೇ 18: ಯುಪಿಐ ಬಳಸಬೇಕೆಂದರೆ ಬ್ಯಾಂಕ್ ಖಾತೆ ಹೊಂದಿರಬೇಕು. ಅಪ್ರಾಪ್ತ ವಯಸ್ಸಿನ ಮಕ್ಕಳು ಮತ್ತು ವಿದ್ಯಾರ್ಥಿಗಳು ಆನ್ಲೈನ್ ಪೇಮೆಂಟ್ ಮಾಡಲು ಪೋಷಕರನ್ನು ಅವಲಂಬಿಸಬೇಕು. ಪೇಟಿಎಂ (Paytm) ಇದಕ್ಕೊಂದು ಪರಿಹಾರ ಹುಡುಕಿದೆ. ಪಾಕೆಟ್ ಮನಿ (Pocket Money) ಎನ್ನುವ ಹೊಸ ಫೀಚರ್ ಜಾರಿಗೆ ತಂದಿದೆ. ಬ್ಯಾಂಕ್ ಖಾತೆ ಹೊಂದಿಲ್ಲದ ಅಪ್ರಾಪ್ತ ವಯಸ್ಕರು ಮತ್ತು ವಿದ್ಯಾರ್ಥಿಗಳು ಸಹ ತಮ್ಮ ಮೊಬೈಲ್ ಮೂಲಕವೇ ಸ್ವತಂತ್ರವಾಗಿ ಯುಪಿಐ (UPI) ಪಾವತಿ ಮಾಡಲು ಈ ಪೇಟಿಎಂ ಪಾಕೆಟ್ ಮನಿ ಅನುಕೂಲ ಮಾಡಿಕೊಡುತ್ತದೆ.

ಈ ಸುದ್ದಿಯ ಮುಖ್ಯಾಂಶಗಳು

  • ಪಾಕೆಟ್ ಮನಿ ಫೀಚರ್ ಮೂಲಕ ಹದಿಹರೆಯದವರು ತಮ್ಮದೇ ಆದ ಬ್ಯಾಂಕ್ ಖಾತೆ ಇಲ್ಲದಿದ್ದರೂ ಸ್ವತಂತ್ರವಾಗಿ ಯುಪಿಐ ಪಾವತಿ ಮಾಡಬಹುದು.
  • ಪೋಷಕರು ತಮ್ಮ ಪೇಟಿಎಂ ಆ್ಯಪ್ ಮೂಲಕ ಮಕ್ಕಳ ಖಾತೆಗೆ ಗರಿಷ್ಠ 15,000 ರೂವರೆಗೆ ಮಾಸಿಕ ಮಿತಿಯನ್ನು ನಿಗದಿಪಡಿಸಬಹುದು.
  • ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿರುವ ‘ಯುಪಿಐ ಸರ್ಕಲ್’ (UPI Circle) ಆಧಾರದ ಮೇಲೆ ಈ ಸೇವೆ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: ಜನಸಾಮಾನ್ಯರಿಗೆ ಕಾದಿದೆಯಾ ವಿದ್ಯುತ್ ಆಘಾತ; ನಿಗದಿತ ಶುಲ್ಕ ಏರಿಸಲು ಪ್ರಸ್ತಾಪ

ಪಾಕೆಟ್ ಮನಿ ಹೇಗೆ ಕೆಲಸ ಮಾಡುತ್ತದೆ?

ಈ ವೈಶಿಷ್ಟ್ಯದ ಅಡಿಯಲ್ಲಿ ಪೋಷಕರು ತಮ್ಮ ಬ್ಯಾಂಕ್ ಖಾತೆಗೆ ಮಕ್ಕಳ ಪೇಟಿಎಂ ಆ್ಯಪ್ ಅನ್ನು ಲಿಂಕ್ ಮಾಡಬಹುದು. ಒಮ್ಮೆ ಲಿಂಕ್ ಮಾಡಿದ ನಂತರ, ಮಕ್ಕಳು ತಮ್ಮ ಶಾಲಾ-ಕಾಲೇಜು ಕ್ಯಾಂಟೀನ್, ಮೆಟ್ರೋ ಪ್ರಯಾಣ, ಕ್ಯಾಬ್ ಬುಕಿಂಗ್, ಮೊಬೈಲ್ ರೀಚಾರ್ಜ್ ಹಾಗೂ ಶಾಪಿಂಗ್‌ಗಾಗಿ ಸ್ವತಂತ್ರವಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದು. ಪ್ರತಿ ಬಾರಿ ಪಾವತಿ ಮಾಡುವಾಗಲೂ ಪೋಷಕರಿಂದ ಒಟಿಪಿ (OTP) ಪಡೆಯುವ ಅಥವಾ ಪೋಷಕರ ಮೊಬೈಲ್ ಬಳಸುವ ಅಗತ್ಯ ಇರುವುದಿಲ್ಲ.

ಪೋಷಕರ ನಿಯಂತ್ರಣ ಮತ್ತು ಸುರಕ್ಷತೆ

ಮಕ್ಕಳು ಹಣವನ್ನು ದುರುಪಯೋಗಪಡಿಸಿಕೊಳ್ಳದಂತೆ ತಡೆಯಲು ಪೇಟಿಎಂ ಹಲವು ಸುರಕ್ಷತಾ ಕ್ರಮಗಳನ್ನು ಒದಗಿಸಿದೆ. ಒಂದು ಬಾರಿ ಮಾಡುವ ಪಾವತಿಗೆ ಗರಿಷ್ಠ 5,000 ರೂ ಮಿತಿ ಇರಲಿದ್ದು, ಇಡೀ ತಿಂಗಳಿಗೆ ಒಟ್ಟು 15,000 ರೂ ಮಿತಿಯನ್ನು ನಿಗದಿಪಡಿಸಲಾಗಿದೆ. ವಿಶೇಷವೆಂದರೆ, ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದ ಮೊದಲ 30 ನಿಮಿಷಗಳಲ್ಲಿ ಕೇವಲ 500 ರೂ ಹಾಗೂ ಮೊದಲ 24 ಗಂಟೆಗಳಲ್ಲಿ 5,000 ರೂವರೆಗೆ ಮಾತ್ರ ಪಾವತಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: ಡಾಲರ್ ಎದುರು 96 ದಾಟಿ ಸಾರ್ವಕಾಲಿಕ ಕೆಳಮಟ್ಟಕ್ಕೆ ಕುಸಿದ ರೂಪಾಯಿ; ಭಾರತೀಯ ಕರೆನ್ಸಿಯ ಐತಿಹಾಸಿಕ ಕಳಪೆ ಸಾಧನೆ

ಮಕ್ಕಳು ಎಲ್ಲೆಲ್ಲಿ ಹಣ ಖರ್ಚು ಮಾಡುತ್ತಿದ್ದಾರೆ ಎಂಬುದನ್ನು ಪೋಷಕರು ತಮ್ಮ ಮೊಬೈಲ್‌ನಲ್ಲಿ ‘ರಿಯಲ್-ಟೈಮ್’ (ತಕ್ಷಣವೇ) ಆಗಿ ಟ್ರ್ಯಾಕ್ ಮಾಡಬಹುದು. ಪೇಟಿಎಂನ ‘ಸ್ಪೆಂಡ್ ಸಮ್ಮರಿ’ (Spend Summary) ಮೂಲಕ ವೆಚ್ಚಗಳನ್ನು ವಿವಿಧ ವಿಭಾಗಗಳಾಗಿ ವರ್ಗೀಕರಿಸಿ ನೋಡಲು ಸಾಧ್ಯವಿದ್ದು, ಪೋಷಕರು ಯಾವಾಗ ಬೇಕಾದರೂ ತಮ್ಮ ಯುಪಿಐ ಪಿನ್ (UPI PIN) ಬಳಸಿ ಮಕ್ಕಳ ಖಾತೆಯ ಮಿತಿಯನ್ನು ಬದಲಾಯಿಸಬಹುದು ಅಥವಾ ಸೇವೆಯನ್ನು ಸ್ಥಗಿತಗೊಳಿಸಬಹುದು. ಈ ಫೀಚರ್ ಬಳಸಿ ಅಂತರರಾಷ್ಟ್ರೀಯ ಪಾವತಿಯಾಗಲೀ ಮತ್ತು ಎಟಿಎಂನಿಂದ ಹಣ ವಿತ್​ಡ್ರಾ ಮಾಡಲಾಗಲೀ ಅವಕಾಶವಿರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಲಬುರ್ಗಿಯಲ್ಲಿ ಮೃಗಾಲಯ ಉದ್ಘಾಟಿಸಿದ ಸಚಿವ ಈಶ್ವರ ಖಂಡ್ರೆ! – Kannada News | Madabula Zoo Inaugurated: Ministers Khandre and Kharge Open 43 Acre Facility in Chittapur

ಕಲಬುರ್ಗಿ, ಮೇ 18: ಜಿಲ್ಲೆಯ ಚಿತ್ತಾಪುರ ತಾಲೂಕಿನ ಮಾಡಬೂಳ ಗ್ರಾಮದಲ್ಲಿ ನೂತನ ಮೃಗಾಲಯವನ್ನು ತೆರೆಯಲಾಗಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ ಕ್ಷೇತ್ರದಲ್ಲಿ 43 ಎಕರೆ ವಿಶಾಲ ಪ್ರದೇಶದಲ್ಲಿ ಈ ಮೃಗಾಲಯವನ್ನು ನಿರ್ಮಿಸಲಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಸಚಿವರು ಹುಲಿ, ಚಿರತೆ ಸೇರಿದಂತೆ ವಿವಿಧ ವನ್ಯಜೀವಿಗಳು ಮತ್ತು ವಿದೇಶಿ ಪಕ್ಷಿಗಳನ್ನು ವೀಕ್ಷಿಸಿದರು. ಈ ಮೃಗಾಲಯವು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಪರಿಸರ ಶಿಕ್ಷಣ ಮತ್ತು ವನ್ಯಜೀವಿ ಸಂರಕ್ಷಣೆಗೆ ಈ ಕೇಂದ್ರವು ಕೊಡುಗೆ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬರದಲ್ಲೂ ಬತ್ತಿಲ್ಲ ಈ ದೇಗುಲದ ಕೆರೆ: ಬಾಗಲಕೋಟೆಯ ಬಾದಾಮಿಯಲ್ಲೊಂದು ಅಚ್ಚರಿ!

ಬಾಗಲಕೋಟೆ, ಮೇ 18: ಜಿಲ್ಲೆಯಾದ್ಯಂತ ಬಿಸಿಲಿನ ತಾಪ ಹೆಚ್ಚಾಗಿದ್ದು, ನದಿ, ಕೆರೆ-ಕಟ್ಟೆಗಳು ಬತ್ತಿ ಬರಗಾಲದ ಛಾಯೆ ಆವರಿಸಿದೆ. ಇಂತಹ ಸಂದರ್ಭದಲ್ಲಿ ಬಾದಾಮಿ ತಾಲ್ಲೂಕಿನ ಮಹಾಕೂಟದಲ್ಲಿರುವ ಮಹಾಕೂಟೇಶ್ವರ ದೇವಸ್ಥಾನದ ಆವರಣದಲ್ಲಿರುವ ಪುಷ್ಕರಣಿ ಎಂದಿಗೂ ಬತ್ತದೆ ಭಕ್ತರಿಗೆ ಆಕರ್ಷಣೀಯ ಕೇಂದ್ರವಾಗಿದೆ. ದಕ್ಷಿಣ ಕಾಶಿ ಎಂದೇ ಖ್ಯಾತವಾಗಿರುವ ಈ ಐತಿಹಾಸಿಕ ಸ್ಥಳದಲ್ಲಿರುವ ಪುಷ್ಕರಣಿಯು ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡಿದ್ದು, ಸುಮಾರು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ವಿಶೇಷವೆಂದರೆ, ಇಲ್ಲಿಯವರೆಗೂ ಈ ಪುಷ್ಕರಣಿ ಒಮ್ಮೆಯೂ ಬತ್ತಿದ ಉದಾಹರಣೆ ಇಲ್ಲ. ನಿರಂತರವಾಗಿ ನೀರಿನಿಂದ ಕೂಡಿರುವ ಈ ಪವಿತ್ರ ಹೊಂಡದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಪುಣ್ಯಸ್ನಾನ ಮಾಡುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

KSRTC, BMTC Strike: ಬುಧವಾರದಿಂದ ಸಿಗಲ್ಲ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್! ಸಾರಿಗೆ ಮುಷ್ಕರ ಬಹುತೇಕ ಫಿಕ್ಸ್ – Kannada News | KSRTC BMTC Strike: Karnataka Bus Services May Stop From Wednesday As Transport Unions Rigid On Wage Hikes

ಬೆಂಗಳೂರು, ಮೇ 18: ಬುಧವಾರದಿಂದ BMTC ಮತ್ತು KSRTC ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಸೇವೆ ಸ್ಥಗಿತಗೊಳ್ಳಲಿದೆ. ವೇತನ ಪರಿಷ್ಕರಣೆ ಮತ್ತು ಬಾಕಿ ಹಣಕ್ಕಾಗಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ನೀಡಿರುವುದೇ ಇದಕ್ಕೆ ಕಾರಣ. ನೌಕರರು ಶೇ 25 ರ ವೇತನ ಪರಿಷ್ಕರಣೆಗೆ ಪಟ್ಟು ಹಿಡಿದಿದ್ದು, 38 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ ಸದ್ಯಕ್ಕೆ ಶೇ 12.5 ವೇತನ ಪರಿಷ್ಕರಣೆಗೆ ಒಪ್ಪಿದೆ. ಅಲ್ಲದೆ, 26 ತಿಂಗಳ ವೇತನ ಹಿಂಬಾಕಿಯ ಮೊದಲ ಕಂತಾಗಿ 450 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ನೌಕರರು ಸರ್ಕಾರದ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮ ಬೇಡಿಕೆಗಳು ಈಡೇರದ ಹೊರತು ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಷ್ಕರ ತಪ್ಪಿಸುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಸಭೆ ನಿಗದಿಯಾಗಿದೆ. ಈ ಸಭೆಯಲ್ಲಿ ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದು, ಸಂಧಾನದ ಮೂಲಕ ಸಮಸ್ಯೆ ಇತ್ಯರ್ಥಪಡಿಸಲು ಪ್ರಯತ್ನಿಸಲಿದ್ದಾರೆ. ಸಭೆಯ ಫಲಿತಾಂಶದ ಮೇಲೆ ಬುಧವಾರದ ಮುಷ್ಕರದ ಭವಿಷ್ಯ ನಿರ್ಧಾರವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಹಾರ: ಸಹೋದರನ ಕುಟುಂಬದ ನಾಲ್ವರನ್ನು ಕೊಂದು, ಶವಗಳ ಕತ್ತರಿಸಿ ಸೂಟ್‌ಕೇಸ್‌ಗಳಲ್ಲಿ ತುಂಬಿ ಎಸೆದ ವ್ಯಕ್ತಿ – Kannada News | Family of Four Found Dead in Shocking Case in Bihar

ಪಾಟ್ನಾ, ಮೇ 18: ಹಣದ ವ್ಯಾಮೋಹ ಮತ್ತು ಕೌಟುಂಬಿಕ ಕಲಹಕ್ಕೆ ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಅತ್ಯಂತ ಅಮಾನುಷವಾಗಿ ಹತ್ಯೆ(Murder) ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕಿರಿಯ ಸಹೋದರನೇ ತನ್ನ ಅಣ್ಣ, ಅತ್ತಿಗೆ ಹಾಗೂ ಅವರ ಇಬ್ಬರು ಮುಗ್ಧ ಮಕ್ಕಳನ್ನು ಉಸಿರುಗಟ್ಟಿಸಿ, ಚಾಕುವಿನಿಂದ ಇರಿದು ಕೊಂದಿದ್ದಾನೆ. ಅಷ್ಟಕ್ಕೇ ನಿಲ್ಲದ ಈತನ ಕ್ರೌರ್ಯ, ಸಾಕ್ಷ್ಯ ನಾಶಪಡಿಸಲು ನಾಲ್ವರ ಶವಗಳನ್ನು ತುಂಡು ತುಂಡಾಗಿ ಕತ್ತರಿಸಿ ಸೂಟ್‌ಕೇಸ್‌ ಹಾಗೂ ಚೀಲಗಳಲ್ಲಿ ತುಂಬಿ ವಿವಿಧ ನದಿ, ಕಾಲುವೆಗಳಿಗೆ ಎಸೆದಿದ್ದಾನೆ.

ರಹಸ್ಯ ಬಯಲಾಗಿದ್ದು ಹೇಗೆ?
ಮೇ 10 ರಂದು ಕೈಮೂರ್ ಜಿಲ್ಲೆಯ ನದಿಯೊಂದರ ಕೆಳಗೆ ಎರಡು ಶಂಕಾಸ್ಪದ ಸೂಟ್‌ಕೇಸ್‌ಗಳು ತೇಲುತ್ತಿದ್ದವು. ಪೊಲೀಸರು ಇವುಗಳನ್ನು ವಶಕ್ಕೆ ಪಡೆದು ತೆರೆದಾಗ, ಅದರಲ್ಲಿ ಕತ್ತರಿಸಿದ ಮಾನವ ದೇಹದ ಭಾಗಗಳು ಪತ್ತೆಯಾಗಿದ್ದವು. ಆರಂಭದಲ್ಲಿ ಇವು 3 ರಿಂದ 4 ಜನರ ಶವದ ಅವಶೇಷಗಳಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ನಂತರ ಮೇ 12 ರಂದು ರಾಮಗಢದ ಕಾಲುವೆಯ ಬಳಿ ಇನ್ನು ಎರಡು ಚೀಲಗಳಲ್ಲಿ ಹೆಚ್ಚಿನ ಭಾಗಗಳು ಪತ್ತೆಯಾಗಿದ್ದವು. ತನಿಖೆ ಆರಂಭಿಸಿದ ವಿಶೇಷ ತನಿಖಾ ತಂಡ (SIT), ಇವು ದಹರಕ್ ಗ್ರಾಮದ ಕೃಷ್ಣ ಮುರಾರಿ ಗುಪ್ತಾ ಅವರ ಕುಟುಂಬದ ಅವಶೇಷಗಳು ಎಂಬುದನ್ನು ಪತ್ತೆಹಚ್ಚಿತ್ತು.

ಪೊಲೀಸರು ಕೃಷ್ಣ ಮುರಾರಿ ಅವರ ಮನೆಗೆ ಹೋದಾಗ ಮನೆಗೆ ಬೀಗ ಹಾಕಲಾಗಿತ್ತು. ತಾಂತ್ರಿಕ ಸಾಕ್ಷ್ಯ ಹಾಗೂ ಮೊಬೈಲ್ ಲೊಕೇಶನ್ ಆಧಾರದ ಮೇಲೆ ಕೃಷ್ಣ ಮುರಾರಿ ಅವರ ಕಿರಿಯ ಸಹೋದರ ವಿಕಾಸ್ ಗುಪ್ತಾ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಹೊರಬಂದಿದೆ. ವಿಕಾಸ್ ತನ್ನ ಇನ್ನೊಬ್ಬ ತಮ್ಮ ರಾಹುಲ್ ಮತ್ತು ಮಹಾರಾಷ್ಟ್ರದ ಗೆಳೆಯ ದೀಪಕ್ ಕುಮಾರ್ ರಜಪೂತ್ ಜೊತೆ ಸೇರಿ ಈ ಭೀಕರ ಹತ್ಯೆ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ.

ಷೇರು ಮಾರುಕಟ್ಟೆ ಹೂಡಿಕೆ ಹಾಗೂ ಕೌಟುಂಬಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿಕಾಸ್ ಈ ಕೊಲೆಗೆ ಸಂಚು ರೂಪಿಸಿದ್ದ. ಮೇ 7 ರಂದು ಪ್ಲಾನ್ ಮುಂಚಿತವಾಗಿಯೇ ಸಿದ್ಧವಾಗಿತ್ತು. ಅಂದು ಬೆಳಗ್ಗೆ ಕೋಣೆಯೊಂದರಲ್ಲಿ ಷೇರು ಮಾರುಕಟ್ಟೆಯ ಚರ್ಚೆ ನೆಪದಲ್ಲಿ ಅಣ್ಣ ಕೃಷ್ಣ ಮುರಾರಿಯನ್ನು ಕರೆಸಿಕೊಂಡ ವಿಕಾಸ್ ಮತ್ತು ಆತನ ಸಹಚರರು, ಏಕಾಏಕಿ ಆತನ ಮೇಲೆ ಮುಗಿಬಿದ್ದು ಚಾಕುವಿನಿಂದ ಇರಿದು ಕೊಂದರು. ಗದ್ದಲ ಕೇಳಿ ಓಡಿಬಂದ ಅತ್ತಿಗೆ ದುರ್ಗೇಶ್ ಕುಮಾರಿ ಪ್ರಾಣಭಯದಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಆಕೆಯನ್ನೂ ಹಿಡಿದು ಉಸಿರುಗಟ್ಟಿಸಿ ಕೊಲ್ಲಲಾಯಿತು.

ಮತ್ತಷ್ಟು ಓದಿ: ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಚನ್ನಗಿರಿ ಪೊಲೀಸರು

ಮಧ್ಯಾಹ್ನ ಶಾಲೆಯಿಂದ ಮನೆಗೆ ಮರಳಿದ ದಂಪತಿಯ ಇಬ್ಬರು ಮುಗ್ಧ ಮಕ್ಕಳಿಗೆ ಹೆತ್ತವರ ಹೆಣ ಕಾಣಿಸಬಾರದೆಂದು, ಆ ಕಟುಕರು ಮಕ್ಕಳನ್ನೂ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ.ಹತ್ಯೆಯ ನಂತರ ಕೋಣೆಯೊಳಗೆ ಶವಗಳನ್ನು ಕೈ, ಕಾಲು, ತಲೆ ಎಂದು ಪ್ರತ್ಯೇಕವಾಗಿ ಕತ್ತರಿಸಲಾಯಿತು.

ಬಂಧಿತ ವಿಕಾಸ್ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಹತ್ಯೆಗೆ ಬಳಸಿದ ಚಾಕು, ಪಿಸ್ತೂಲ್, ಜೀವಂತ ಗುಂಡುಗಳು, ಕಬ್ಬಿಣದ ರಾಡ್ ಮತ್ತು ಸ್ಕೂಟರ್ ವಶಪಡಿಸಿಕೊಂಡಿದ್ದಾರೆ. ನದಿಗೆ ಎಸೆಯಲಾಗಿರುವ ಎರಡು ಕತ್ತರಿಸಿದ ತಲೆಗಳನ್ನು ಪತ್ತೆಹಚ್ಚಲು ನದಿಯಲ್ಲಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಕೊಲೆಗೆ ಒಂದು ದಿನ ಮುಂಚಿತವಾಗಿಯೇ ಮನೆಯ ಇತರ ಮಹಿಳೆಯರನ್ನು ತಾಯಿಯ ಮನೆಗೆ ಕಳುಹಿಸಿ ಈ ಪ್ಲಾನ್ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ತಲೆಮರೆಸಿಕೊಂಡಿರುವ ಉಳಿದ ಹಂತಕರ ಬಂಧನಕ್ಕೆ ತೀವ್ರ ಜಾಲ ಬೀಸಲಾಗಿದ್ದು, ಈ ಕೃತ್ಯ ಎಸಗಿದ ಆರೋಪಿಗಳಿಗೆ ನ್ಯಾಯಾಲಯದ ಮೂಲಕ ಕಠಿಣಾತಿ ಕಠಿಣ ಮರಣದಂಡನೆ ಶಿಕ್ಷೆ ಕೊಡಿಸಲು ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೊರೆ ಹೋಗುವುದಾಗಿ ಕೈಮೂರ್ ಎಸ್ಪಿ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link