All posts by nagaraj11081993

Vasthu Tips: ಮನೆ ಕಟ್ಟುವಾಗ ಕಿಟಕಿ ನಿರ್ಮಾಣದ ದಿಕ್ಕುಗಳ ಬಗ್ಗೆ ಇರಲಿ ಎಚ್ಚರ; ವಾಸ್ತು ಸಲಹೆ ಇಲ್ಲಿದೆ – Kannada News | Vastu Shastra Guide: Maximize Home Positive Energy with Right Window Placement

ಕಿಟಕಿ ನಿರ್ಮಾಣದ ದಿಕ್ಕುImage Credit source: Pinterest

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ಬಾಗಿಲಿನಷ್ಟೇ ಕಿಟಕಿಗಳಿಗೂ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಕಿಟಕಿಗಳನ್ನು ಕೇವಲ ಗಾಳಿ-ಬೆಳಕು ಬರುವ ದಾರಿಯನ್ನಾಗಿ ಅಷ್ಟೇ ಅಲ್ಲದೆ, ಮನೆಯಲ್ಲಿ ಧನಾತ್ಮಕ ಶಕ್ತಿ (Positive Energy), ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ತಪ್ಪು ದಿಕ್ಕಿನಲ್ಲಿ ಅಥವಾ ತಪ್ಪು ಸಂಖ್ಯೆಯಲ್ಲಿ ಕಿಟಕಿಗಳನ್ನು ಅಳವಡಿಸುವುದರಿಂದ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗಬಹುದು. ಆದ್ದರಿಂದ ಮನೆ ಕಟ್ಟುವಾಗ ಕಿಟಕಿಗಳ ವಿಷಯದಲ್ಲಿ ವಾಸ್ತು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ.

ಕಿಟಕಿಗಳು ತೆರೆಯುವ ದಿಕ್ಕು ಹೀಗಿರಲಿ:

ವಾಸ್ತು ಶಾಸ್ತ್ರದಲ್ಲಿ ಕಿಟಕಿ ಮತ್ತು ಬಾಗಿಲುಗಳು ಯಾವ ಕಡೆಗೆ ತೆರೆದುಕೊಳ್ಳುತ್ತವೆ ಎಂಬುದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಮನೆಯ ಕಿಟಕಿಗಳಾಗಲಿ ಅಥವಾ ಬಾಗಿಲುಗಳಾಗಲಿ ಯಾವಾಗಲೂ ಒಳಮುಖವಾಗಿ (ಒಳಗಡೆಗೆ) ತೆರೆಯಬೇಕು. ಹೊರಮುಖವಾಗಿ ತೆರೆಯುವ ಕಿಟಕಿಗಳನ್ನು ವಾಸ್ತು ಪ್ರಕಾರ ಅಶುಭವೆಂದು ಪರಿಗಣಿಸಲಾಗುತ್ತದೆ. ಹೀಗೆ ಹೊರಗೆ ತೆರೆಯುವ ಕಿಟಕಿಗಳಿಂದ ಮನೆಯಲ್ಲಿನ ಧನಲಕ್ಷ್ಮಿ ಮತ್ತು ಧನಾತ್ಮಕ ಶಕ್ತಿ ಹೊರಗೆ ಹೋಗುತ್ತದೆ ಎಂಬ ನಂಬಿಕೆಯಿದೆ.

ದಕ್ಷಿಣ ದಿಕ್ಕಿನ ಕಿಟಕಿಗಳಿದ್ದರೆ ಎಚ್ಚರ:

ವಾಸ್ತು ಶಾಸ್ತ್ರದ ಪ್ರಕಾರ, ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎಂದು ಪರಿಗಣಿಸಲಾಗುವುದರಿಂದ ಈ ದಿಕ್ಕಿನಲ್ಲಿ ಕಿಟಕಿಗಳನ್ನು ನಿರ್ಮಿಸುವುದು ಅಶುಭ. ಒಂದು ವೇಳೆ ನಿಮ್ಮ ಮನೆಯಲ್ಲಿ ಈಗಾಗಲೇ ದಕ್ಷಿಣ ದಿಕ್ಕಿಗೆ ಕಿಟಕಿಗಳಿದ್ದರೆ, ಅವುಗಳನ್ನು ಆದಷ್ಟು ಕಡಿಮೆ ಸಮಯದವರೆಗೆ ಮಾತ್ರ ತೆರೆದಿಡಬೇಕು. ಈ ದಿಕ್ಕಿನಿಂದ ಬರುವ ನಕಾರಾತ್ಮಕ ಗಾಳಿಯು ಮನೆಯ ಸದಸ್ಯರ ಆರೋಗ್ಯ ಮತ್ತು ನೆಮ್ಮದಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಉತ್ತರ ದಿಕ್ಕು ಕುಬೇರನ ಆಶೀರ್ವಾದ:

ಮನೆಯ ಉತ್ತರ ದಿಕ್ಕಿನಲ್ಲಿ ಕಿಟಕಿಗಳನ್ನು ಹೊಂದಿರುವುದನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಉತ್ತರ ದಿಕ್ಕು ಸಂಪತ್ತಿನ ಅಧಿದೇವತೆಯಾದ ಕುಬೇರನಿಗೆ ಸೇರಿದ್ದಾಗಿದೆ. ಈ ದಿಕ್ಕಿನಲ್ಲಿ ಕಿಟಕಿಗಳನ್ನು ನಿರ್ಮಿಸುವುದರಿಂದ ಮನೆಯಲ್ಲಿ ಆರ್ಥಿಕ ಪ್ರಗತಿ ಕಂಡುಬರುತ್ತದೆ ಮತ್ತು ಸಂಪತ್ತು ವೃದ್ಧಿಯಾಗುತ್ತದೆ. ಈ ಕಿಟಕಿಗಳನ್ನು ಪ್ರತಿದಿನ ನಿಯಮಿತವಾಗಿ ತೆರೆಯುವುದರಿಂದ ಮನೆಯೊಳಗೆ ಸದಾ ಲಕ್ಷ್ಮಿಯ ಕೃಪೆ ಇರುತ್ತದೆ.

ಇದನ್ನೂ ಓದಿ: ನಿಮ್ಮ ಜನ್ಮ ದಿನಾಂಕದಲ್ಲೇ ಅಡಗಿದೆ ಮದುವೆಯ ರಹಸ್ಯ; ನಿಮಗಾಗುವುದು ಪ್ರೇಮ ವಿವಾಹವೋ ಅಥವಾ ಅರೇಂಜ್ ಮ್ಯಾರೇಜ್?

ಪೂರ್ವ ದಿಕ್ಕು ಸಕಾರಾತ್ಮಕತೆಯ ಸಂಕೇತ:

ಪೂರ್ವಕ್ಕೆ ಮುಖ ಮಾಡಿರುವ ಕಿಟಕಿಗಳನ್ನು ಹೊಂದಿರುವುದು ಕೂಡ ವಾಸ್ತು ಪ್ರಕಾರ ಅತ್ಯಂತ ಶ್ರೇಷ್ಠ. ಪೂರ್ವ ದಿಕ್ಕಿನಿಂದ ಬರುವ ಸೂರ್ಯನ ಮೊದಲ ಕಿರಣಗಳು ಮನೆಯೊಳಗೆ ಪ್ರವೇಶಿಸಿದಾಗ, ಅದು ಇಡೀ ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ನಾಶಪಡಿಸಿ, ಅಪಾರ ಸಕಾರಾತ್ಮಕತೆಯನ್ನು ತರುತ್ತದೆ. ಇದು ಮನೆಯಲ್ಲಿರುವವರ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ.

ಕಿಟಕಿಗಳ ಸಂಖ್ಯೆ ಸಮವಾಗಿರಲಿ:

ಮನೆ ನಿರ್ಮಾಣ ಮಾಡುವಾಗ ಕಿಟಕಿಗಳ ಒಟ್ಟು ಸಂಖ್ಯೆಯ ಕಡೆಗೂ ಗಮನ ಹರಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಒಟ್ಟು ಕಿಟಕಿಗಳ ಸಂಖ್ಯೆಯು ಯಾವಾಗಲೂ ಸಮ ಸಂಖ್ಯೆಯಲ್ಲಿರಬೇಕು (ಉದಾಹರಣೆಗೆ 2, 4, 6, 8, 10 ಇತ್ಯಾದಿ). ಯಾವುದೇ ಕಾರಣಕ್ಕೂ ಬೆಸ ಸಂಖ್ಯೆಯಲ್ಲಿ (Odd Numbers) ಕಿಟಕಿಗಳು ಇರಬಾರದು. ಬೆಸ ಸಂಖ್ಯೆಯ ಕಿಟಕಿಗಳು ಮನೆಯಲ್ಲಿ ವಾಸ್ತು ದೋಷಗಳಿಗೆ ಕಾರಣವಾಗಿ, ಅನಗತ್ಯ ಖರ್ಚು ಹಾಗೂ ಕೌಟುಂಬಿಕ ಕಲಹಗಳನ್ನು ಉಂಟುಮಾಡಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೆಟ್ರೋಲ್-ಡೀಸೆಲ್ ದರ ಹೆಚ್ಚಳ ಬೆನ್ನಲ್ಲೇ ಬೆಂಗಳೂರಿಗರಿಗೆ ಮತ್ತೊಂದು ದರ ಏರಿಕೆ ಬಿಸಿ! – Kannada News | Bengaluru Ola And Uber Drivers demand Hike fare Over petrol and diesel price Hiked

ಬೆಂಗಳೂರು, (ಮೇ 17): ಪೆಟ್ರೋಲ್, ಡೀಸೆಲ್ (petrol and diesel price Hiked) ಹಾಗೂ ಸಿಎನ್​​ಜಿ ದರ ಏರಿಕೆ ಹಿನ್ನೆಲೆಯಲ್ಲಿ ಕ್ಯಾಬ್, ಟ್ಯಾಕ್ಸಿ (Ola And Uber) ದರವನ್ನು ಏರಿಸಲು ಸಂಘಟನೆಗಳು ಮುಂದಾಗಿವೆ. 1 ಕಿಲೋಮೀಟರ್​​ ಗೆ 5 ರಿಂದ 10 ರೂಪಾಯಿ ಹೆಚ್ಚಿಸುವಂತೆ ಓಲಾ, ಉಬರ್ ಚಾಲಕರು ಅಗ್ರಿಗೇಟರ್ ಕಂಪನಿ ಹಾಗೂ ಸಾರಿಗೆ ಇಲಾಖೆ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಒಂದು ವೇಳೆ ಸಾರಿಗೆ ಇಲಾಖೆ ಇದಕ್ಕೆ ಒಪ್ಪಿದರೆ ಬೆಂಗಳೂರಿಗರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟುವುದಂತೂ ಗ್ಯಾರಂಟಿ.

ಬೆಂಗಳೂರಲ್ಲಿ RTO ನಿಗದಿ ಪಡಿಸಿರುವ ದರಗಳು ಹೀಗಿವೆ

  • 10 ಲಕ್ಷಕ್ಕಿಂತ ಕಡಿಮೆ ವಾಹನಗಳು: ಕನಿಷ್ಠ 100 ರೂಪಾಯಿ (ನಾಲ್ಕು ಕಿ.ಮೀಟರ್), ಪ್ರತಿ ಕಿ.ಮೀಟರ್ ಗೆ 24 ರೂಪಾಯಿ.
  • 10-15 ಲಕ್ಷ ರೂಪಾಯಿ ವಾಹನ: ಕನಿಷ್ಠ 115 ರೂಪಾಯಿ, ಪ್ರತಿ ಕಿ.ಮೀಟರ್ ಗೆ 28 ರೂಪಾಯಿ.
  • 15 ಲಕ್ಷಕ್ಕಿಂತ ಹೆಚ್ಚು ಬೆಲೆಯ ವಾಹನ: ಕನಿಷ್ಠ 130 ರೂಪಾಯಿ, ಪ್ರತಿ ಕಿ.ಮೀಟರ್ ಗೆ 32 ರೂಪಾಯಿ ನಿಗದಿಪಡಿಸಲಾಗಿದೆ.

ಆದರೆ, ಒಲಾ, ಉಬರ್, ಅಗ್ರಿಗೇಟರ್ ಗಳು ಪ್ರತಿ ಕಿ.ಮೀಟರ್ ಗೆ ವಾಹನ ಮಾಲೀಕರಿಗೆ 10ರಿಂದ 12 ರುಪಾಯಿ, ಪೀಕ್ ಅವರ್ ನಲ್ಲಿ 20 ರುಪಾಯಿ ಮಾತ್ರ ನೀಡುತ್ತಿವೆ. ಇದಕ್ಕೆ ಕ್ಯಾಬ್ ಚಾಲಕ ಸಂಘಟನೆಗಳ ಅಸಮಾಧಾನ ಹೊರಹಾಕಿದ್ದು, ಡಿಸೇಲ್ ದರ ಏರಿಕೆ ಆಗಿರುವುದರಿಂದ ಕಿಮೀ ಮೇಲೆ 5 ರಿಂದ 10 ರುಪಾಯಿ ಏರಿಕೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಬೆಲೆ ಏರಿಕೆ ಅಬ್ಬರದ ನಡುವೆ ಗ್ರಾಹಕರಿಗೆ ಮತ್ತೊಂದು ಶಾಕ್​​: ಖಾಸಗಿ ಬಸ್​​ಗಳ ಟಿಕೆಟ್​​ ದರವೂ ಹೆಚ್ಚಳ

ಖಾಸಗಿ ಬಸ್ , ಖಾಸಗಿ ಶಾಲಾ ವಾಹನ ಆಯ್ತು, ಈಗ ಓಲಾ, ಉಬರ್ ಟ್ಯಾಕ್ಸಿಗಳ ಸರದಿ. ಹೀಗಾಗಿ ಕ್ಯಾಬ್, ಟ್ಯಾಕ್ಸಿ ಚಾಲಕರು, ಸಿಲಿಕಾನ್ ಸಿಟಿ ಜನರಿಗೆ ಶಾಕ್ ಕೊಡುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ,

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಪ್ರಾಪ್ತೆ ಕಿಡ್ನಾಪ್ ವೇಳೆ ಅಡ್ಡ ಬಂದ ವ್ಯಕ್ತಿಯ ಕೊಲೆ: ಕೊನೆಗೂ ಸಿಕ್ಕಿಬಿದ್ದ ಲವ್ ಬರ್ಡ್ಸ್ ಹಾಗೂ ಹಂತಕರು! – Kannada News | Raichur: Kidnapping and Murder Case Cracked: Police Arrest lovers and Killers

ರಾಯಚೂರು, ಮೇ 17: ಜಿಲ್ಲೆಯ ಯಾಪಲದಿನ್ನಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದ ಭೀಕರ ಕೊಲೆ (kill) ಹಾಗೂ ಅಪ್ರಾಪ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ. ಅನ್ಯಧರ್ಮದ ಯುವಕನೊಬ್ಬ ಹಿಂದೂ ಧರ್ಮದ ಅಪ್ರಾಪ್ತ ಬಾಲಕಿಯನ್ನು ಓಡಿಸಿಕೊಂಡು ಹೋಗಿದ್ದನ್ನು ಪ್ರಶ್ನಿಸಿದಕ್ಕೆ ಗ್ರಾಮಸ್ಥನನ್ನೇ ಕೊಲೆ ಮಾಡಿದ್ದ ಆರೋಪಿಗಳು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮಹಾರಾಷ್ಟ್ರದ ಸೋಲಾಪುರದಲ್ಲಿ ತಲೆಮರೆಸಿಕೊಂಡಿದ್ದ ಲವ್ ಬರ್ಡ್ಸ್ (Lovebirds)
​​​ ಮತ್ತು ಆತನ ಗ್ಯಾಂಗ್ ಅನ್ನು ಯಾಪಲದಿನ್ನಿ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

ಮುಖ್ಯಾಂಶಗಳು

  • ಅಪ್ರಾಪ್ತೆಯನ್ನು ಕರೆದೊಯ್ಯುವಾಗ ಅಡ್ಡಿಪಡಿಸಿದ್ದ ವ್ಯಕ್ತಿಯ ಕೊಲೆ
  • ಮಹಾರಾಷ್ಟ್ರದ ಸೋಲಾಪುರದಲ್ಲಿ ಆರೋಪಿಗಳು ಲಾಕ್​​
  • ಆರೋಪಿಗಳು ಕಂಬಿ ಹಿಂದೆ; ಅಪ್ರಾಪ್ತೆ ಬಾಲ‌ಮಂದಿರಕ್ಕೆ ಶಿಫ್ಟ್

ಏನಿದು ಘಟನೆ?

ಮೇ 5ರಂದು ರಾಯಚೂರು ತಾಲೂಕಿನ ಯಾಪಲದಿನ್ನಿ ಗ್ರಾಮದ 14 ವರ್ಷದ ಅಪ್ರಾಪ್ತ ಬಾಲಕಿಯನ್ನು ಆಸ್ಲಂ ಎಂಬಾತ ಕರೆದೊಯ್ಯುತ್ತಿದ್ದ. ರಾತ್ರಿ 2 ಗಂಟೆ ಸಮಯ. ಯಾಪಲದಿನ್ನಿ ಗ್ರಾಮದ ಜನ ಗಾಢ ನಿದ್ರೆಯಲ್ಲಿದ್ದರು.  ಅದರಲ್ಲೂ ಸೆಕೆ ಹಿನ್ನಲೆ ಜನರು ಮನೆ ಮಾಳಿಗೆ ಮೇಲೆ ಮಲಗುತ್ತಾರೆ. ಅದೇ ರೀತಿ ಈಶಪ್ಪ ತಮ್ಮ ಮನೆ ಮೇಲೆ ಮಲಗಿದ್ದರು. ತಡ ರಾತ್ರಿ ಮನೆ ಹಿಂಭಾಗದಲ್ಲಿ ಯಾರೋ ಓಡಾಡುವುದು, ಗುಸುಗುಸು ಮಾತನಾಡುವುದು ಕೇಳಿಸಿದೆ. ಹೀಗಾಗಿ ಕೆಳಕ್ಕೆ ಓಡಿ ಬಂದಿದ್ದ ಈಶಪ್ಪ ಅಲ್ಲಿದ್ದವರನ್ನ ಪ್ರಶ್ನಿಸಿದ್ದಾರೆ. ಆಗ ಅಲ್ಲಿದ್ದ ಪ್ರಿಯಕರ ಆಸ್ಲಂ ಹಾಗೂ ಆತನ ಸ್ನೇಹಿತ ಹುಸೇನ್ ಸೇರಿ ಈಶಪ್ಪನ ಕತ್ತಿಗೆ ಹಗ್ಗ ಬಿಗಿದು, ಉಸಿರುಗಟ್ಟಿಸಿ ಭೀಕರವಾಗಿ ಕೊಲೆ ಮಾಡಿದ್ದರು.

ಮೂರು ರಾಜ್ಯ ಸುತ್ತಿದ ಹಂತಕರು

ಕೊಲೆಗೃತ್ಯದ ಬಳಿಕ ಜಮೀರ್ ಹಾಗೂ ಬಡೇಸಾಬ್ ಎಂಬ ಇನ್ನಿಬ್ಬರು ಆರೋಪಿಗಳ ಸಹಾಯದಿಂದ ಅಪ್ರಾಪ್ತೆಯನ್ನು ಕರೆದುಕೊಂಡು ಪ್ರಿಯಕರ ಎಸ್ಕೇಪ್ ಆಗಿದ್ದ. ಯಾಪಲದಿನ್ನಿಯಿಂದ ತೆಲಂಗಾಣದ ಗದ್ವಾಲ್, ಅಲ್ಲಿಂದ ಆಂಧ್ರಪ್ರದೇಶದ ಕರ್ನೂಲ್ ಹಾಗೂ ಹೈದರಾಬಾದ್ ಮೂಲಕ ಮಹಾರಾಷ್ಟ್ರದ ಸೋಲಾಪುರ ತಲುಪಿ ತಲೆಮರೆಸಿಕೊಂಡಿದ್ದರು.

ಇದನ್ನೂ ಓದಿ: ಮದುವೆಯಾಗುತ್ತೇನೆಂದು ನಂಬಿಸಿ ಕೈಕೊಟ್ಟ ಇಂಜಿನಿಯರ್; ಫೋಟೋ, ವೀಡಿಯೋ ಸಮೇತ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ!

ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದ ಯಾಪಲದಿನ್ನಿ ಪೊಲೀಸರು ಸದ್ಯ ಸೋಲಾಪುರದಲ್ಲಿ ಅಡಗಿದ್ದ ಮುಖ್ಯ ಆರೋಪಿ ಆಸ್ಲಂ, ಹುಸೇನ್, ಜಮೀರ್ ಹಾಗೂ ಬಡೇಸಾಬ್‌ನನ್ನು ಅರೆಸ್ಟ್​ ಮಾಡಿ ಜೈಲಿಗಟ್ಟಿದ್ದಾರೆ. ಸದ್ಯ ಯಾಪಲದಿನ್ನಿ ಠಾಣೆಯಲ್ಲಿ ಕೊಲೆ, ಕಿಡ್ನಾಪ್ ಹಾಗೂ ಪೋಕ್ಸೋ ಕಾಯ್ದೆಯಡಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಇನ್ನು ಅಪ್ರಾಪ್ತೆಯನ್ನು ಬಾಲಮಂದಿರಕ್ಕೆ ಶಿಫ್ಟ್ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Karthyayani Amma: 90ನೇ ವಯಸ್ಸಿನಲ್ಲಿ ಅಕ್ಷರ ಕಲಿತು, ಪರೀಕ್ಷೆಯಲ್ಲಿ 100 ಕ್ಕೆ 98 ಅಂಕ ಪಡೆದ ಕೇರಳದ ಮಾದರಿ ಮಹಿಳೆ – Kannada News | Karthyayani Amma: Kerala’s 90 Year Old Literacy Icon Inspires Millions to Learn

ಅಪ್ರತಿಮ ಸಾಧಕಿ ಕಾರ್ತ್ಯಾಯಿನಿ ಅಮ್ಮ

ತಿರುವನಂತಪುರಂ: “ಕಲಿಯುವುದಕ್ಕೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ, ಮನಸ್ಸಿದ್ದರೆ ಮಾರ್ಗ” ಎಂಬುದನ್ನು ಇಡೀ ದೇಶಕ್ಕೆ ಸಾಬೀತುಪಡಿಸಿದ ಅಪ್ರತಿಮ ಸಾಧಕಿ ಕಾರ್ತ್ಯಾಯಿನಿ ಅಮ್ಮ. ಬಾಲ್ಯದಿಂದಲೂ ಓದಬೇಕೆಂಬ ತೀವ್ರ ಹಂಬಲವಿದ್ದರೂ, ಬಡತನದ ಕಾರಣದಿಂದಾಗಿ ಬರೋಬ್ಬರಿ 90 ವರ್ಷಗಳ ಕಾಲ ಅಕ್ಷರ ಲೋಕದಿಂದ ವಂಚಿತರಾಗಿದ್ದ ಈ ಅಜ್ಜಿ, ತಮ್ಮ ಇಳಿ ವಯಸ್ಸಿನಲ್ಲಿ ಇತಿಹಾಸ ಸೃಷ್ಟಿಸಿ ಇಂದಿನ ಯುವ ಪೀಳಿಗೆಗೆ ರೋಲ್ ಮಾಡೆಲ್ ಆಗಿದ್ದಾರೆ.

ಬಾಲ್ಯದ ಕಣ್ಣೀರು ಮತ್ತು 90 ವರ್ಷಗಳ ಅನಕ್ಷರತೆ:

ಕೇರಳದ ಬಡ ಕುಟುಂಬವೊಂದರಲ್ಲಿ ಜನಿಸಿದ ಕಾರ್ತ್ಯಾಯಿನಿ ಅವರಿಗೆ ಚಿಕ್ಕಂದಿನಲ್ಲೇ ತಂದೆಯ ನೆರಳು ದೂರವಾಯಿತು. ತಂದೆಯ ಮರಣದ ನಂತರ ಕುಟುಂಬ ಭೀಕರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತು. ಒಂದು ಹೊತ್ತಿನ ಗಂಜಿಗೂ ಪರದಾಡುವಂತಿದ್ದ ಪರಿಸ್ಥಿತಿಯಲ್ಲಿ, ಶಾಲೆಗೆ ಹೋಗುವುದು ಕೇವಲ ಕನಸಾಗಿಯೇ ಉಳಿಯಿತು. ಬದುಕಿನ ಬಂಡಿ ಸಾಗಿಸಲು ಹಗಲಿರುಳು ಕಷ್ಟಪಟ್ಟ ಕಾರ್ತ್ಯಾಯಿನಿ ಅಮ್ಮ, ಕಷ್ಟಗಳ ಸುಳಿಯಲ್ಲೇ ಸಿಲುಕಿ 90 ವರ್ಷ ವಯಸ್ಸಾಗುವವರೆಗೂ ಅನಕ್ಷರಸ್ಥರಾಗಿಯೇ ಉಳಿದುಬಿಟ್ಟರು.

ಬದುಕಿಗೆ ತಿರುವು ನೀಡಿದ ‘ಸಾಕ್ಷರತಾ ಮಿಷನ್’:

ತೊಂಬತ್ತರ ಹರೆಯದಲ್ಲಿದ್ದ ಕಾರ್ತ್ಯಾಯಿನಿ ಅಮ್ಮ ಅವರ ಬದುಕಿನಲ್ಲಿ ಮಹತ್ತರ ತಿರುವು ಸಿಕ್ಕಿದ್ದೇ ಕೇರಳ ಸರ್ಕಾರ ಜಾರಿಗೆ ತಂದ ‘ವಯಸ್ಕ ಸಾಕ್ಷರತಾ ಮಿಷನ್’ ಮೂಲಕ. ಅಜ್ಜಿಯ ಅದಮ್ಯ ಉತ್ಸಾಹವನ್ನು ಕಂಡ ಸಾಕ್ಷರತಾ ಮಿಷನ್‌ನ ಸ್ವಯಂಸೇವಕರು ಮತ್ತು ಶಿಕ್ಷಕರು, ಅವರ ಮನೆಗೇ ಬಂದು ಪಾಠ ಮಾಡಲು ಆರಂಭಿಸಿದರು. ಹರಿಪಾಡ್‌ನಲ್ಲಿರುವ ತಮ್ಮ ಪುಟ್ಟ ಮನೆಯಲ್ಲಿ ಕೂತು ಕಾರ್ತ್ಯಾಯಿನಿ ಅಮ್ಮ ದಿನವೂ ಶ್ರದ್ಧೆಯಿಂದ ಓದುವುದು, ಬರೆಯುವುದು ಮತ್ತು ಗಣಿತದ ಲೆಕ್ಕಗಳನ್ನು ಕಲಿಯುವುದರಲ್ಲಿ ಮುಳುಗಿಹೋಗುತ್ತಿದ್ದರು. 90 ದಾಟಿದ ಅಜ್ಜಿಯ ಈ ಶ್ರದ್ಧೆಯನ್ನು ಕಂಡು ಅವರ ಸಂಬಂಧಿಕರೇ ಮೂಗಿನ ಮೇಲೆ ಬೆರಳಿಟ್ಟಿದ್ದರು. ತರಗತಿಗಳಿಗೆ ಒಂದೂ ದಿನ ರಜೆ ಹಾಕದ ಅವರ ಶಿಸ್ತು, 19 ವರ್ಷದ ಕಾಲೇಜು ವಿದ್ಯಾರ್ಥಿಯನ್ನೂ ನಾಚಿಸುವಂತಿತ್ತು!

ಪರೀಕ್ಷೆಯಲ್ಲಿ 100 ಕ್ಕೆ 98 ಅಂಕ: ದೇಶಾದ್ಯಂತ ಹರಿದ ಪ್ರಶಂಸೆಯ ಮಹಾಪೂರ!

ಕಾರ್ತ್ಯಾಯಿನಿ ಅಮ್ಮ ಅವರ ಸಾಧನೆ ಕೇವಲ ಓದು ಬರಹ ಕಲಿಯುವುದಕ್ಕಷ್ಟೇ ಸೀಮಿತವಾಗಲಿಲ್ಲ. ಕೇರಳ ರಾಜ್ಯ ಸಾಕ್ಷರತಾ ಮಿಷನ್ ನಡೆಸಿದ ಅಂತಿಮ ಪರೀಕ್ಷೆಯಲ್ಲಿ ಅವರು 100 ಕ್ಕೆ 98 ಅಂಕಗಳನ್ನು ಗಳಿಸುವ ಮೂಲಕ ದೇಶಾದ್ಯಂತ ಹೊಸ ದಾಖಲೆ ಬರೆದರು. ಈ ವಿಸ್ಮಯಕಾರಿ ಫಲಿತಾಂಶ ಹೊರಬೀಳುತ್ತಿದ್ದಂತೆ ದೇಶದ ರಾಜಕಾರಣಿಗಳು, ಶಿಕ್ಷಣ ತಜ್ಞರು ಮತ್ತು ಗಣ್ಯರಿಂದ ಪ್ರಶಂಸೆಯ ಮಹಾಪೂರವೇ ಹರಿದುಬಂದಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಾರ್ತ್ಯಾಯಿನಿ ಅಮ್ಮ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಅಭಿನಂದಿಸಿದರಲ್ಲದೆ, “ಇಂದಿನ ಇಡೀ ಸಮಾಜಕ್ಕೆ ಇವರೇ ನಿಜವಾದ ಸ್ಫೂರ್ತಿ” ಎಂದು ಕೊಂಡಾಡಿದರು.

ಇದನ್ನೂ ಓದಿ: ನಟ ವಿಜಯ್ ಪುತ್ರಿ ದಿವ್ಯಾ ಸಾಶಾ ಬಗ್ಗೆ ನಿಮಗೆಷ್ಟು ಗೊತ್ತು? ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಇಲ್ಲಿದೆ ಮಾಹಿತಿ

ರಾಷ್ಟ್ರಪತಿಗಳಿಂದ ಸಿಕ್ಕಿತ್ತು ‘ನಾರಿ ಶಕ್ತಿ ಪುರಸ್ಕಾರ’:

ಅಜ್ಜಿಯ ಓದಿನ ಆಸಕ್ತಿಯನ್ನು ಗಮನಿಸಿದ ಸಾಕ್ಷರತಾ ಮಿಷನ್ ಅಧಿಕಾರಿಗಳು ಅವರಿಗೆ ವಿಶೇಷ ಕಾಳಜಿಯಿಂದ ಪುಸ್ತಕಗಳು ಮತ್ತು ದಿನಪತ್ರಿಕೆಗಳನ್ನು ಓದಲು ಪ್ರೋತ್ಸಾಹಿಸಿದರು. ಇವರ ಈ ಅದ್ವಿತೀಯ ಸಾಧನೆಗಾಗಿ ಭಾರತ ಸರ್ಕಾರದ ಅತ್ಯುನ್ನತ ‘ನಾರಿ ಶಕ್ತಿ ಪುರಸ್ಕಾರ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪಠ್ಯಪುಸ್ತಕದಲ್ಲಿ ಸೇರಿದ ‘ಅಕ್ಷರ ಯೋಗಿ’ಯ ಪಾಠ:

ತಮ್ಮ ಜೀವಿತಾವಧಿಯ ಕೊನೆಯ ಕ್ಷಣದವರೆಗೂ ಕಲಿಯುವ ಆಸಕ್ತಿ ಹೊಂದಿದ್ದ ಕಾರ್ತ್ಯಾಯಿನಿ ಅಮ್ಮ ಅವರು 2023 ರಲ್ಲಿ, ತಮ್ಮ 107ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಅವರು ಇಂದು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಜೀವನದ ಈ ರೋಚಕ ಯಶೋಗಾಥೆಯನ್ನು ಕೇರಳದ ವಯಸ್ಕ ಸಾಕ್ಷರತಾ ಮಿಷನ್ ಕಾರ್ಯಕ್ರಮಗಳಲ್ಲಿ ಇಂದು ಒಂದು ವಿಶೇಷ ಪಾಠವಾಗಿ ಅಳವಡಿಸಲಾಗಿದೆ. ಯಾವುದೇ ಸೌಕರ್ಯಗಳಿಲ್ಲದಿದ್ದರೂ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಕಾರ್ತ್ಯಾಯಿನಿ ಅಮ್ಮ ಅವರ ಜೀವನವೇ ಒಂದು ದಿವ್ಯ ದೀವಿಗೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ನಿಯಂತ್ರಣ ತಪ್ಪಿ ಏಕಾಏಕಿ ರೆಸ್ಟೋರೆಂಟ್ ಒಳಗೆ ನುಗ್ಗಿದ ಕಾರು; ಸಿಸಿಟಿವಿಯಲ್ಲಿ ಸೆರೆ

ಇಂಡೋನೇಷ್ಯಾ: ‘ಕನ್ಶಾ ಗಾಡಿಂಗ್ ಸರ್ಪಾಂಗ್’ (Kansha Gading Serpong) ರೆಸ್ಟೋರೆಂಟ್ ಒಳಗೆ ನಿಯಂತ್ರಣ ತಪ್ಪಿದ ಕಾರೊಂದು ಏಕಾಏಕಿ ನುಗ್ಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯಾವಳಿ ರೆಸ್ಟೋರೆಂಟ್ ಒಳಗಡೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ.

 

ಇದನ್ನೂ ಓದಿ: ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜಿಟಿ ದೇವೇಗೌಡಗೆ ಬಿಗ್ ಶಾಕ್: ಸ್ವಪಕ್ಷದ ಶಾಸಕರನ್ನ ದೂರವಿಟ್ಟು ಜೆಡಿಎಸ್​​ ಸಮಾವೇಶ – Kannada News | Mysuru: Big Shock for GT Deve Gowda: JDS Convention keeps away MLAs from own party

ಮೈಸೂರು, ಮೇ 17: ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಜಿ.ಟಿ.ದೇವೇಗೌಡರ ತವರು ಅಂಗಳದಲ್ಲೇ ಇದೀಗ ದಳಪತಿಗಳು ಜನತಾದಳ ಸಮಾವೇಶ ಆಯೋಜಿಸಿದ್ದಾರೆ. ವಿಶೇಷವೆಂದರೆ, ಸಮಾವೇಶದಲ್ಲಿ ಶಾಸಕ ಜಿ.ಟಿ. ದೇವೇಗೌಡ ದೂರು ಉಳಿದಿದ್ದರೆ ಅವರ ಪುತ್ರ ಜಿ.ಟಿ. ಹರೀಶ್ ಗೌಡ ಮುಂದಾಳತ್ವದಲ್ಲಿ ಕಾರ್ಯಕ್ರಮ ನಡೆದಿದೆ. ಇನ್ನು ಸಮಾವೇಶದ ಬ್ಯಾನರ್‌ಗಳು ಮತ್ತು ಕಟೌಟ್‌ಗಳಲ್ಲಿ ಜಿ.ಟಿ. ದೇವೇಗೌಡ ಫೋಟೋಗೆ ಕೊಕ್​ ನೀಡಲಾಗಿದೆ. ಪಕ್ಷದಿಂದ ದೂರವಿದ್ದರೂ ಇತ್ತೀಚೆಗಷ್ಟೇ ಜಿ.ಟಿ.ದೇವೇಗೌಡ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ್ದರು. ಆದರೆ, ಇದೀಗ ಅವರದ್ದೇ ಕ್ಷೇತ್ರದಲ್ಲಿ ಅಪ್ಪನನ್ನು ಸೈಡ್‌ಲೈನ್ ಮಾಡಿ, ಮಗನ ನೇತೃತ್ವದಲ್ಲೇ ಬೃಹತ್ ಸಮಾವೇಶ ಹಮ್ಮಿಕೊಂಡಿರುವುದು ಸದ್ಯ ತೀವ್ರ ಕುತೂಹಲ ಮೂಡಿಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಕಲಬುರಗಿಯಲ್ಲಿ ಮಾಜಿ ಸೈನಿಕನ ಬರ್ಬರ ಹತ್ಯೆ: ಆಗಿದ್ದೇನು?

ಕಲಬುರಗಿ, (ಮೇ 17): ನಿವೃತ್ತ ಸೈನಿಕನ (retired BSF soldier) ತಲೆಗೆ ಕಬ್ಬಿಣ್ಣದ ರಾಡ್​ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕಲಬುರಗಿಯ (Kalaburagi) ರಾಮಮಂದಿರ ಬಳಿ ನಡೆದಿದೆ. 4 ವರ್ಷದ ಹಿಂದೆ ಬಿಎಸ್ಎಫ್​ನಿಂದ ನಿವೃತ್ತಿಯಾಗಿದ್ದ ರವಿಚಂದ್ರ ಖೇಡ್(45) ಕೊಲೆಯಾದ ಮಾಜಿ ಸೈನಿಕ. ಇಂಡಿಯನ್ ಆಯಿಲ್ ಡಿಪೋದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಹಡಲಗಿ ಗ್ರಾಮದ ನಿವಾಸಿ ರವಿಚಂದ್ರ ಖೇಡ್ ನನ್ನು ವಿವಾದಿತ ಜಾಗದ ಸಂಬಂಧ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ವಿವಾದಿತ ಜಾಗದಲ್ಲಿ ಕಳೆದ ತಿಂಗಳು ಟಿನ್​ಶೆಡ್ ನಿರ್ಮಿಸಲಾಗಿತ್ತು. ಅದನ್ನು ವಿರೋಧಿ ರಾತ್ರೋರಾತ್ರಿ ಜೆಸಿಬಿಯಿಂದ ಕೆಡವಲಾಗಿತ್ತು. ಇದೇ ವಿಚಾರಕ್ಕೆ ವಿವಾದಿತ ಖಾಸಗಿ ಜಾಗದಲ್ಲೇ ರವಿಚಂದ್ರ ಖೇಡ್ ನನ್ನು ಹತ್ಯೆ ಮಾಡಲಾಗಿದೆ. ಈ ಬಗ್ಗೆ ಹತ್ಯೆಯಾದ ರವಿಚಂದ್ರ ಖೇಡ್ ಪತ್ನಿ ಕಣ್ಣೀರಿನೊಂದಿಗೆ ಘಟನೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

Source link

ಕ್ರಿಕೆಟರ್ ಜೊತೆಗೆ ಶ್ರೀಲೀಲಾ ಹೆಸರು ಥಳುಕು: ಯಾರದು ಯುವಕ? – Kannada News | Sreeleela name linked with Cricketer Tilak Varma is the dating story true

ಕನ್ನಡದ ನಟಿ ಶ್ರೀಲೀಲಾ (Sreeleela) ಇದೀಗ ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಮಲಯಾಳಂ ಹೊರತುಪಡಿಸಿ ಭಾರತದ ಇನ್ನುಳಿದ ಪ್ರಮುಖ ಸಿನಿಮಾ ರಂಗಗಳಲ್ಲಿ ಈಗಾಗಲೇ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಬಾಲಿವುಡ್​​ಗೆ ಕಾಲಿಟ್ಟಿರುವ ಶ್ರೀಲೀಲಾಗೆ ಅಲ್ಲಿಯೂ ಸಹ ಭರ್ಜರಿ ಬೇಡಿಕೆ ಶುರುವಾಗಿದೆ. ಅದ್ಭುತ ಸೌಂದರ್ಯ, ನೃತ್ಯ ಮತ್ತು ನಟನಾ ಪ್ರತಿಭೆ ಇರುವ ಶ್ರೀಲೀಲಾ ಜೊತೆಗೆ ಕೆಲಸ ಮಾಡಲು ನಿರ್ದೇಶಕರು, ನಟರು ಕಾಯುತ್ತಿದ್ದಾರೆ. ಅಂದಹಾಗೆ ಇದೀಗ ಶ್ರೀಲೀಲಾ ಹೆಸರು ಗಾಸಿಪ್​​ ಕಾಲಂನಲ್ಲಿ ಕೇಳಿ ಬಂದಿದೆ. ಕ್ರಿಕೆಟರ್ ಒಬ್ಬರ ಜೊತೆಗೆ ಶ್ರೀಲೀಲಾ ಹೆಸರು ಥಳುಕು ಹಾಕಿಕೊಂಡಿದೆ.

ತೆಲುಗು ಚಿತ್ರರಂಗದ ಜನಪ್ರಿಯ ನಟಿ ಆಗಿರುವ ಶ್ರೀಲೀಲಾ ಹೆಸರು ಇದೀಗ ತೆಲುಗಿನ ಕ್ರಿಕೆಟರ್ ಒಬ್ಬರೊಟ್ಟಿಗೆ ಕೇಳಿ ಬರುತ್ತಿದೆ. ಪ್ರಸ್ತುತ ಮುಂಬೈ ಇಂಡಿಯನ್ಸ್ ಪರ ಅದ್ಧೂರಿ ಪ್ರದರ್ಶನ ತೋರುತ್ತಿರುವ ಕ್ರಿಕೆಟಿಗ ತಿಲಕ್ ವರ್ಮಾ ಜೊತೆಗೆ ಶ್ರೀಲೀಲಾ ಹೆಸರು ಕೇಳಿ ಬರುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಏನೇನೋ ಥಿಯರಿಗಳು ಹರಿದಾಡುತ್ತಿವೆ. ಅಂದಹಾಗೆ ಈ ಸುದ್ದಿ ಶುರುವಾಗಲು ಕಾರಣವಾಗಿರುವುದು ಮುಂಬೈ ಇಂಡಿಯನ್ಸ್​​ನ ಮ್ಯಾಚೊಂದು.

ಮುಂಬೈ ಇಂಡಿಯನ್ಸ್​​ನ ಮ್ಯಾಚ್ ಒಂದರಲ್ಲಿ ಶ್ರೀಲೀಲಾ ಅವರ ತಾಯಿ, ಪ್ಲೇಯರ್​​ಗಳ ಕುಟುಂಬದವರು ಕೂರುವ ಫ್ಯಾಮಿಲಿ ಬಾಕ್ಸ್​​ನಲ್ಲಿ ಕಾಣಿಸಿಕೊಂಡರು. ಅಲ್ಲಿಂದ ಈ ಸುದ್ದಿಗಳ ವರಾತ ಶುರುವಾಯ್ತು. ಅಸಲಿಗೆ ಶ್ರೀಲೀಲಾ ಮತ್ತು ತಿಲಕ್ ವರ್ಮಾ ಒಟ್ಟಿಗೆ ಎಲ್ಲಿಯೂ ಕಾಣಿಸಿಕೊಂಡಿದ್ದೇ ಇಲ್ಲ. ಇಬ್ಬರಿಗೂ ಗೆಳೆತನ ಇದೆಯೆಂಬ ಬಗ್ಗೆ ಯಾವ ಸುಳಿವು ಸಹ ಇರಲಿಲ್ಲ. ಆದರೆ ಶ್ರೀಲೀಲಾರ ತಾಯಿ ಮುಂಬೈ ಫ್ಯಾಮಿಲಿ ಬಾಕ್ಸ್​​ನಲ್ಲಿ ಕಾಣಿಸಿಕೊಂಡ ಬಳಿಕ ಈ ಸುದ್ದಿ ಶುರುವಾಗಿದೆ.

ಇದನ್ನೂ ಓದಿ:ಪ್ರಕೃತಿ ಸೌಂದರ್ಯದ ನಡುವೆ ಕಳೆದು ಹೋದ ನಟಿ ಶ್ರೀಲೀಲಾ

ಅಂದಹಾಗೆ ಶ್ರೀಲೀಲಾ ತಮ್ಮ ವೃತ್ತಿಯ ಬಗ್ಗೆ ಬಹಳ ಗಂಭೀರವಾಗಿದ್ದು, ಯಾವುದೇ ಅನವಶ್ಯಕ ವಿವಾದಗಳಿಗೆ ಬೀಳದೆ ತಮ್ಮ ಪಾಡಿಗೆ ತಾವು ಸಿನಿಮಾಗಳಲ್ಲಿ ನಟಿಸುತ್ತಾ, ವಿದೇಶ ಪ್ರವಾಸಗಳನ್ನು ಮಾಡುತ್ತಾ ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ. ಆದರೆ ಕೆಲವರು ಶ್ರೀಲೀಲಾ ಬಗ್ಗೆ ಇದೀಗ ಇಲ್ಲ-ಸಲ್ಲದ ಸುದ್ದಿಗಳನ್ನು ಹರಿಯ ಬಿಡುತ್ತಿದ್ದಾರೆ.

ಕೆಲ ತಿಂಗಳ ಹಿಂದೆ ಶ್ರೀಲೀಲಾ ಹೆಸರು ಬಾಲಿವುಡ್ ಯುವ ನಟ ಕಾರ್ತಿಕ್ ಆರ್ಯನ್ ಜೊತೆಗೆ ಕೆಲವರು ಥಳುಕು ಹಾಕಿದ್ದರು. ಕಾರ್ತಿಕ್ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಲೀಲಾ ಭಾಗಿ ಆಗಿದ್ದರು. ಅದಾದ ಬಳಿಕ ಖಾಸಗಿ ಟಿವಿ ಚಾನೆಲ್ ಕಾರ್ಯಕ್ರಮದಲ್ಲಿ ಕಾರ್ತಿಕ್ ಆರ್ಯನ್ ತಾಯಿ, ‘ನಮಗೆ ಡಾಕ್ಟರ್ ಸೊಸೆ ಬೇಕು’ ಎಂದು ಹೇಳಿದ್ದರು. ಹಾಗಾಗಿ ಈ ಇಬ್ಬರ ನಡುವೆ ಪ್ರೀತಿ ಇದೆ ಎಂಬ ಗಾಸಿಪ್ ಹರಿದಾಡಿತ್ತು. ಬಳಿಕ ಅದು ಸುಳ್ಳಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೇರಳ ಯುಡಿಎಫ್ ಸರ್ಕಾರದ ಮೊದಲ ಸಂಪುಟ; ಕಾಂಗ್ರೆಸ್​ಗೆ 12, ಮುಸ್ಲಿಂ ಲೀಗ್​ಗೆ 5 ಸ್ಥಾನಗಳಾ? – Kannada News | UDF Ministry Formation Kerala: Satheesan CM Swearing in, Alliance Partners Seek Cabinet Berths

ವಿ.ಡಿ. ಸತೀಶನ್Image Credit source: PTI

ತಿರುವನಂತಪುರಂ, ಮೇ 17: ಕೇರಳ ವಿಧಾನಸಭಾ ಚುನಾವಣೆಯಲ್ಲಿ (Kerala Assembly Elections) ಭರ್ಜರಿ ವಿಜಯ ಸಾಧಿಸಿದ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟವು ಮುಖ್ಯಮಂತ್ರಿಯನ್ನು ಮಾತ್ರವನ್ನು ಸಂಪುಟ ಸದಸ್ಯರ ಆಯ್ಕೆಯನ್ನೂ ಅಂತಿಮಗೊಳಿಸುವ ಹಾದಿಯಲ್ಲಿದೆ. ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ (V.D. Satheesan) ಅವರು ನಾಳೆ ಮೇ 18 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿ ಪ್ರಮಾಣವಚನಕ್ಕೆ ಮುನ್ನ, 21 ಸದಸ್ಯರ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ (Cabinet Berths) ಮತ್ತು ಖಾತೆಗಳ ಹಂಚಿಕೆಗಾಗಿ ಯುಡಿಎಫ್ ಮೈತ್ರಿಕೂಟದ ಪಕ್ಷಗಳ ನಡುವೆ ತೀವ್ರ ರಾಜಕೀಯ ಕಸರತ್ತುಗಳು ನಡೆಯುತ್ತಿವೆ. ಮಾಧ್ಯಮ ವರದಿಗಳ ಪ್ರಕಾರ ಮೈತ್ರಿಕೂಟದಲ್ಲಿ ಅತಿದೊಡ್ಡ ಪಕ್ಷವಾಗಿರುವ ಕಾಂಗ್ರೆಸ್​ಗೆ ಸಂಪುಟದಲ್ಲಿ ಸಿಂಹಪಾಲು ಸಿಗಬಹುದು. 12 ಸ್ಥಾನಗಳು ಕಾಂಗ್ರೆಸ್​ಗೆ ಹೋಗಬಹುದು, ಮುಸ್ಲಿಂ ಲೀಗ್​ಗೆ (ಐಯುಎಂಎಲ್) 5 ಸ್ಥಾನಗಳು ಸಿಗಬಹುದು ಎನ್ನಲಾಗಿದೆ.

ರಮೇಶ್ ಚೆನ್ನಿತ್ತಲ ಸಚಿವ ಸಂಪುಟಕ್ಕೆ ಸೇರ್ಪಡೆ: ಅಸಮಾಧಾನ ಶಮನ?

ಮುಖ್ಯಮಂತ್ರಿ ರೇಸ್‌ನಲ್ಲಿದ್ದ ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಅವರು ಆರಂಭದಲ್ಲಿ ಸಚಿವ ಸ್ಥಾನ ಸ್ವೀಕರಿಸಲು ಹಿಂಜರಿದಿದ್ದರು. ಆದರೆ, ಸಿಎಂ ಆಗಲಿರುವ ವಿ.ಡಿ. ಸತೀಶನ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ನಡೆಸಿದ ಸಂಧಾನ ಮಾತುಕತೆ ಯಶಸ್ವಿಯಾಗಿದೆ. ಚೆನ್ನಿತ್ತಲ ಅವರಿಗೆ ಅತ್ಯಂತ ಪ್ರಮುಖವಾದ ಗೃಹ ಇಲಾಖೆ (Home Portfolio) ನೀಡಲು ಸತೀಶನ್ ಸಮ್ಮತಿಸಿದ್ದು, ಚೆನ್ನಿತ್ತಲ ಅವರು ಸಂಪುಟ ಸೇರಲು ಒಪ್ಪಿದ್ದಾರೆ.

ಮೈತ್ರಿಪಕ್ಷಗಳ ಬೇಡಿಕೆ ಮತ್ತು ಸಚಿವ ಸ್ಥಾನಗಳ ಹಂಚಿಕೆ ಕಸರತ್ತು

ಯುಡಿಎಫ್ ಮೈತ್ರಿಕೂಟದಲ್ಲಿ ಕಾಂಗ್ರೆಸ್ ನಂತರದ ದೊಡ್ಡ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಮತ್ತು ಇತರ ಪ್ರಾದೇಶಿಕ ಪಕ್ಷಗಳು ತಮಗಾಗಿ ಹೆಚ್ಚಿನ ಸಚಿವ ಸ್ಥಾನ ಹಾಗೂ ಪ್ರಮುಖ ಖಾತೆಗಳಿಗಾಗಿ ಪಟ್ಟು ಹಿಡಿದಿವೆ.

ಇದನ್ನೂ ಓದಿ: ಭಾರತಕ್ಕೆ 2ನೇ ಅತಿದೊಡ್ಡ ರಫ್ತು ಮಾರುಕಟ್ಟೆ ಈಗ ಯುಎಇ ಅಲ್ಲ, ಸಿಂಗಾಪುರ

  • ಐಯುಎಂಎಲ್ (IUML): ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾದ ಐಯುಎಂಎಲ್ ಒಟ್ಟು 5 ಸಚಿವ ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ. ಇದರೊಂದಿಗೆ ಕೈಗಾರಿಕೆ, ಶಿಕ್ಷಣ, ಲೋಕೋಪಯೋಗಿ (PWD) ಮತ್ತು ಸ್ಥಳೀಯ ಸಂಸ್ಥೆಗಳ ಇಲಾಖೆಗಳಂತಹ ಪ್ರಮುಖ ಖಾತೆಗಳನ್ನು ಕೇಳಿದೆ. ಐಯುಎಂಎಲ್‌ನಿಂದ ಪಿ.ಕೆ. ಕುನ್ಹಾಲಿ ಕುಟ್ಟಿ, ಎನ್. ಸಂಸುದ್ದೀನ್, ಪರಕ್ಕಲ್ ಅಬ್ದುಲ್ಲಾ, ಕೆ.ಎಂ. ಶಾಜಿ ಮತ್ತು ವಿ.ಇ. ಅಬ್ದುಲ್ ಗಫೂರ್ ಅವರ ಹೆಸರುಗಳು ಮುಂಚೂಣಿಯಲ್ಲಿವೆ.
  • ಕೇರಳ ಕಾಂಗ್ರೆಸ್ (ಜೋಸೆಫ್ ಬಣ): 7 ಶಾಸಕರನ್ನು ಹೊಂದಿರುವ ಈ ಪಕ್ಷವು 2 ಸಚಿವ ಸ್ಥಾನಗಳಿಗಾಗಿ ಭಾರಿ ಒತ್ತಡ ಹೇರುತ್ತಿದೆ. ಐಯುಎಂಎಲ್‌ಗೆ 5 ಸ್ಥಾನ ನೀಡುವುದಾದರೆ ನಮಗೆ 2 ಸ್ಥಾನ ನೀಡಬೇಕು ಎಂಬುದು ಇವರ ವಾದ. ಈ ಬಣದಿಂದ ಮೊನ್ಸ್ ಜೋಸೆಫ್ ಸಚಿವರಾಗುವುದು ಖಚಿತವಾಗಿದ್ದು, ಕಂದಾಯ (Revenue) ಖಾತೆಗೆ ಬೇಡಿಕೆ ಇಟ್ಟಿದ್ದಾರೆ.
  • ಆರ್‌ಎಸ್‌ಪಿ (RSP): ಶಿಬು ಬೇಬಿ ಜಾನ್ ಅವರು ಸಚಿವರಾಗುವುದು ಖಚಿತವಾಗಿದ್ದು, ಇಂಧನ (Power) ಇಲಾಖೆಯಂತಹ ಪ್ರಮುಖ ಖಾತೆಯನ್ನು ನಿರೀಕ್ಷಿಸುತ್ತಿದ್ದಾರೆ.
  • ರೊಟೇಶನ್ ಸೂತ್ರದ ಪ್ರಸ್ತಾಪ: ಕೇರಳ ಕಾಂಗ್ರೆಸ್ (ಜೇಕಬ್ ಬಣ) ಪಕ್ಷದ ಅನೂಪ್ ಜಾಕೋಬ್ ಮತ್ತು ಕೇರಳ ಡೆಮಾಕ್ರಟಿಕ್ ಪಾರ್ಟಿಯ ಮಣಿ ಸಿ. ಕಪ್ಪನ್ ಅವರಿಗೆ ತಲಾ ಎರಡುವರೆ ವರ್ಷಗಳ ಕಾಲ ಸರದಿಯ ಆಧಾರದ ಮೇಲೆ (Rotational Basis) ಒಂದೇ ಸಚಿವ ಸ್ಥಾನವನ್ನು ಹಂಚಿಕೊಳ್ಳುವಂತೆ ಕಾಂಗ್ರೆಸ್ ಹೈಕಮಾಂಡ್ ಪ್ರಸ್ತಾಪಿಸಿದೆ. ಆದರೆ ಈ ಇಬ್ಬರೂ ನಾಯಕರು ಈ ಪ್ರಸ್ತಾಪಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಮಾತುಕತೆ ಮುಂದುವರಿದಿದೆ. ಈ ಎರಡೂ ಪಕ್ಷಗಳು ತಮಗೆ ತಲಾ ಒಂದು ಸಚಿವ ಸ್ಥಾನ ಸಿಗಬೇಕೆಂದು ಪಟ್ಟು ಹಿಡಿದಿವೆ.

ಇದನ್ನೂ ಓದಿ: ದಿ ಹೇಗ್‌ನಲ್ಲಿ 16 ಡಚ್ ಸಿಇಒಗಳನ್ನು ಭೇಟಿಯಾದ ಪ್ರಧಾನಿ ಮೋದಿ: ಏನಿದು ಒಪ್ಪಂದ? ಏನು ಚರ್ಚೆಯಾಯಿತು?

ಕಾಂಗ್ರೆಸ್ ಪಾಳೆಯದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು

ಮೈತ್ರಿ ಪಕ್ಷಗಳ ಖಾತೆ ಹಂಚಿಕೆ ಮುಗಿದ ಬಳಿಕವಷ್ಟೇ ಕಾಂಗ್ರೆಸ್ ತನ್ನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಿದೆ. ಜಾತಿ, ಪ್ರಾದೇಶಿಕ ಸಮತೋಲನ ಹಾಗೂ ಪಕ್ಷದ ಒಳಗಿನ ಪ್ರಮುಖ ನಾಯಕರ (ಸತೀಶನ್, ಚೆನ್ನಿತ್ತಲ ಮತ್ತು ವೇಣುಗೋಪಾಲ್) ಬಣಗಳನ್ನು ತೃಪ್ತಿಪಡಿಸುವ ನಿಟ್ಟಿನಲ್ಲಿ ಸಚಿವರ ಆಯ್ಕೆ ನಡೆಯಲಿದೆ. ಕಾಂಗ್ರೆಸ್‌ನಿಂದ ಸಚಿವ ಸ್ಥಾನದ ರೇಸ್‌ನಲ್ಲಿರುವ ಪ್ರಮುಖರೆಂದರೆ, ಕೆ. ಮುರಳೀಧರನ್, ತಿರುವಂಚೂರ್ ರಾಧಾಕೃಷ್ಣನ್, ಎ.ಪಿ. ಅನಿಲ್ ಕುಮಾರ್, ಸನ್ನಿ ಜೋಸೆಫ್, ಪಿ.ಸಿ. ವಿಷ್ಣುನಾಥ್ ಮತ್ತಿತರರು.

ಸಚಿವ ಸಂಪುಟದ ಅಂತಿಮ ಪಟ್ಟಿಯನ್ನು ರಾಜ್ಯಪಾಲರಾದ ರಾಜೇಂದ್ರ ಅರ್ಲೇಕರ್ ಅವರಿಗೆ ಸಲ್ಲಿಸಲಾಗುತ್ತಿದ್ದು, ಮೇ 18 ರಂದು ಬೆಳಗ್ಗೆ 10 ಗಂಟೆಗೆ ತಿರುವನಂತಪುರಂನ ಸೆಂಟ್ರಲ್ ಸ್ಟೇಡಿಯಂನಲ್ಲಿ ನೂತನ ಸರ್ಕಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದೆ. ಸಂಪುಟ ಸದಸ್ಯರ ಹೆಸರು ಅಂತಿಮಗೊಂಡರೆ, ನಾಳೆಯೇ ಸಿಎಂ ಜೊತೆಗೆ ಈ ಎಲ್ಲಾ ಸಂಪುಟ ಸದಸ್ಯರು ಪ್ರಮಾಣ ವಚನ ಸ್ವೀಕರಿಸಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

PBKS vs RCB Playing XI: ಆರ್​​ಸಿಬಿಗೆ ಆಘಾತ; ಪಂಜಾಬ್ ವಿರುದ್ಧ ಆಡಲ್ಲ ರಜತ್ ಪಾಟಿದರ್ – Kannada News | PBKS vs RCB Playing XI Punjab Kings vs Royal Challengers Bengaluru Today IPL 2026 match Confirmed playing 11 details with name in Kannada

ಐಪಿಎಲ್ 2026 ರ ನಿರ್ಣಾಯಕ ಪಂದ್ಯ ಧರ್ಮಶಾಲಾ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯವು ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಈ ಪಂದ್ಯದಲ್ಲಿ ಗೆಲುವು ಪಂಜಾಬ್ ಕಿಂಗ್ಸ್‌ನ ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸುತ್ತದೆ. ಇತ್ತ ಆರ್​ಸಿಬಿಗೆ ಈ ಪಂದ್ಯದ ಗೆಲುವು ಪ್ಲೇಆಫ್ ಸ್ಥಾನವನ್ನು ಖಚಿತಪಡಿಸುತ್ತದೆ. ಪ್ರಸ್ತುತ ಆರ್​​ಸಿಬಿ ಐಪಿಎಲ್ 2026 ಅಂಕಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆಡಿರುವ 12 ಪಂದ್ಯಗಳಲ್ಲಿ 16 ಅಂಕಗಳನ್ನು ಹೊಂದಿದ್ದು, ಅದರ ನೆಟ್ ರನ್​ರೇಟ್ 1.053 ಆಗಿದೆ. ಇತ್ತ ಪಂಜಾಬ್ ಕಿಂಗ್ಸ್ ತಂಡವು ಕಳೆದ ಐದು ಪಂದ್ಯಗಳಲ್ಲಿ ಸೋತಿದ್ದು, 12 ಪಂದ್ಯಗಳ ನಂತರ ಕೇವಲ 13 ಅಂಕಗಳನ್ನು ಹೊಂದಿದೆ. ಅದಕ್ಕಾಗಿಯೇ ಈ ಪಂದ್ಯವನ್ನು ಗೆಲ್ಲುವುದು ಆರ್‌ಸಿಬಿಗಿಂತ ಪಂಜಾಬ್ ಕಿಂಗ್ಸ್‌ಗೆ ಹೆಚ್ಚು ಮುಖ್ಯವಾಗಿದೆ. ಏಕೆಂದರೆ ಯಾವುದೇ ಬೆಲೆ ತೆತ್ತಾದರೂ ಪಂಜಾಬ್ ಉಳಿದಿರುವ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕು.

ಈ ಮಧ್ಯಾಹ್ನದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಲಿದೆ. ಇನ್ನು ಈ ಪಂದ್ಯದಲ್ಲಿ ಜಿತೇಶ್ ಶರ್ಮಾ ಆರ್‌ಸಿಬಿ ತಂಡದ ನಾಯಕರಾಗಿದ್ದಾರೆ. ಏಕೆಂದರೆ ತಂಡದ ಖಾಯಂ ನಾಯಕ ರಜತ್ ಪಾಟಿದಾರ್ ಈ ಪಂದ್ಯವನ್ನು ಆಡುತ್ತಿಲ್ಲ. ಟಾಸ್ ಬಳಿಕ ಮಾತನಾಡಿದ ಜಿತೇಶ್, ರಜತ್ ಪಾಟಿದರ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಆಡಲಿದ್ದಾರೆ ಎಂಬುದನ್ನು ಖಚಿತಪಡಿಸಿದ್ದಾರೆ.

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ XI – ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ (ನಾಯಕ), ಕೂಪರ್ ಕಾನೊಲಿ, ಸೂರ್ಯಾಂಶ್ ಶೆಡ್ಜ್, ಶಶಾಂಕ್ ಸಿಂಗ್, ಅಜ್ಮತುಲ್ಲಾ ಒಮರ್ಜೈ, ಹರ್ಪ್ರೀತ್ ಬ್ರಾರ್ (ಮಾರ್ಕೊ ಯಾನ್ಸೆನ್ ಬದಲಿಗೆ), ಲಾಕಿ ಫರ್ಗುಸನ್ (ಕ್ಸೇವಿಯರ್ ಬಾರ್ಟ್ಲೆಟ್ ಬದಲಿಗೆ), ಅರ್ಶ್ದೀಪ್ ಸಿಂಗ್ ಮತ್ತು ಯುಜ್ವೇಂದ್ರ ಚಾಹಲ್.

ಇಂಪ್ಯಾಕ್ಟ್ ಪ್ಲೇಯರ್ಸ್​: ಮಾರ್ಕಸ್ ಸ್ಟೊಯಿನಿಸ್, ಕ್ಸೇವಿಯರ್ ಬಾರ್ಟ್ಲೆಟ್, ವಿಷ್ಣು ವಿನೋದ್, ಮುಶೀರ್ ಖಾನ್ ಮತ್ತು ಪ್ರವೀಣ್ ದುಬೆ.

ಆರ್​​ಸಿಬಿ ಪ್ಲೇಯಿಂಗ್ XI – ಜೇಕಬ್ ಬೆಥೆಲ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ವೆಂಕಟೇಶ್ ಅಯ್ಯರ್, ಜಿತೇಶ್ ಶರ್ಮಾ (ನಾಯಕ), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್ (ಜಾಕೋಬ್ ಡಫಿ ಬದಲಿಗೆ), ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ (ರಜತ್ ಪಾಟಿದಾರ್ ಬದಲಿಗೆ) ಮತ್ತು ಜೋಶ್ ಹ್ಯಾಜಲ್‌ವುಡ್.

ಇಂಪ್ಯಾಕ್ಟ್ ಪ್ಲೇಯರ್ಸ್​: ರಾಸಿಖ್ ಸಲಾಂ, ಜೋರ್ಡಾನ್ ಕಾಕ್ಸ್, ಅಭಿನಂದನ್ ಸಿಂಗ್, ಸ್ವಪ್ನಿಲ್ ಸಿಂಗ್ ಮತ್ತು ಕನಿಷ್ಕ್ ಚೌಹಾಣ್.

Published On – 3:21 pm, Sun, 17 May 26

Source link