ಹಾವೇರಿ, ಮಾರ್ಚ್ 09: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿ ದಾಳಿ ಹಿನ್ನೆಲೆ ಹಾವೇರಿಯ ಪ್ರಸಿದ್ಧ ಬ್ಯಾಡಗಿ ಮೆಣಸಿನ ಮಾರುಕಟ್ಟೆಗೂ ಯುದ್ಧದ ಬಿಸಿ ತಟ್ಟಿದೆ. ಗಲ್ಫ್ ರಾಷ್ಟ್ರಗಳಿಗೆ ಆಗುತ್ತಿದ್ದ ಬ್ಯಾಡಗಿ ಮೆಣಸು ರಫ್ತಿನ ಮೇಲೆ ಪರಿಣಾಮ ಉಂಟಾಗಿದೆ. ಮಸಾಲೆ ಪದಾರ್ಥಗಳು ಮತ್ತು ಸೌಂದರ್ಯವರ್ಧಕ ತಯಾರಿಕೆಗೆ ಬಳಕೆಯಾಗುವ ಈ ಮೆಣಸು ಮಲೇಷಿಯಾ, ಸಿಂಗಾಪುರ, ಇಂಡೋನೇಷಿಯಾ, ಬಾಲಿ, ಥೈಲ್ಯಾಂಡ್, ಇಸ್ರೇಲ್, ಇರಾನ್, ಅಮೆರಿಕಕ್ಕೆ ರಫ್ತಾಗುತ್ತಿತ್ತು. ಯುದ್ಧದ ಹಿನ್ನೆಲೆ ಈ ಮೊದಲು 1800 US ಡಾಲರ್ ಇದ್ದ ಕಂಟೇನರ್ ಬಾಡಿಗೆ ದರ 3500 US ಡಾಲರ್ ದಾಟಿದೆ. ಯುದ್ಧ ಮುಂದುವರಿದರೆ ಬ್ಯಾಡಗಿ ಮೆಣಸಿನ ದರ ಕುಸಿಯುವ ಆತಂಕವನ್ನು ರೈತರು, ವರ್ತಕರು ವ್ಯಕ್ತಪಡಿಸಿದ್ದಾರೆ.
ದರ್ಶನ್ ಬಗ್ಗೆ ಜನರಿಗೆ ಯಾವ ರೀತಿ ಕ್ರೇಜ್ ಇದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ದರ್ಶನ್ (Darshan) ಫೋಟೋ ಎದುರು ಈ ಜೋಡಿ ಮದುವೆ ಆಗಿದೆ. ಮದುವೆ ಬಳಿಕ ನವ ದಂಪತಿ ರಾಜರಾಜೇಶ್ವರಿ ನಗರದ ದರ್ಶನ್ ಮನೆ ಮುಂದೆ ಬಂದಿದ್ದಾರೆ. ದರ್ಶನ್ ಅವರ ಆಶೀರ್ವಾದ ಪಡೆಯಬೇಕು ಎಂಬುದು ಈ ಜೋಡಿಯ ಆಸೆ ಆಗಿತ್ತು. ಅಚ್ಚರಿ ಎಂದರೆ ಹುಡುಗನ ಹೆಸರು ದರ್ಶನ್, ಹುಡುಗಿ ಹೆಸರು ವಿಜಯಲಕ್ಷ್ಮಿ! ‘ದರ್ಶನ್ ಫೋಟೋ ಮುಂದೆ ತಾಳಿ ಕಟ್ಟಿದ್ದು. ಅವರ ಮನೆ ಎದುರೇ ತಾಳಿ ಕಟ್ಟಬೇಕು ಎಂಬ ಕನಸು ಇತ್ತು. ಆದರೆ ಮನೆಯವರು ಬೈಯ್ದರು. ದರ್ಶನ್ ಅವರು ಮಾಡುವ ದಾನ ಧರ್ಮ ನಮಗೆ ಇಷ್ಟ. ಬದುಕಿದರೆ ಅವರ ಥರ ನಾವು ಕೂಡ ಬದುಕಬೇಕು. 6ನೇ ತರಗತಿಯಿಂದಲೂ ನಾವು ಅವರ ಫ್ಯಾನ್ಸ್’ ಎಂದು ಈ ಜೋಡಿ ಹೇಳಿದ್ದಾರೆ.
ನವದೆಹಲಿ, ಮಾರ್ಚ್ 9: ಭಾರತದ ಬತ್ತಳಿಕೆಯಲ್ಲಿರುವ ಯುದ್ಧಾಸ್ತ್ರಗಳಲ್ಲಿ ಪ್ರಮುಖವಾಗಿರುವ ಬ್ರಹ್ಮೋಸ್ ಮಿಸೈಲ್ ಸಿಸ್ಟಂ (Brahmos missile system) ಅನ್ನು ಖರೀದಿಸಲು ಇಂಡೋನೇಷ್ಯಾ ಒಪ್ಪಂದ ಮಾಡಿಕೊಂಡಿದೆ. ಈ ವಿಚಾರವನ್ನು ಇಂಡೋನೇಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರರಾದ ರಿಕೋ ರಿಕಾರ್ಡೊ ಸಿರಾಯ್ಟ್ ಅವರೇ ಖುದ್ದಾಗಿ ಮಾಹಿತಿ ನೀಡಿದ್ದಾರೆ. 2023ರಲ್ಲೇ ಭಾರತ ಮತ್ತು ಇಂಡೋನೇಷ್ಯಾ ನಡುವೆ ಈ ಒಪ್ಪಂದ ಸಂಬಂಧ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಹೇಳಲಾಗಿತ್ತು. ಈ ಡೀಲ್ ಸುಮಾರು 200 ಮಿಲಿಯನ್ ಡಾಲರ್ನಿಂದ 350 ಮಿಲಿಯನ್ ಡಾಲರ್ ಇರಬಹುದು. ಅಂದರೆ ಸುಮಾರು 2,000 ಕೋಟಿ ರೂ ಮೊತ್ತದ ಡೀಲ್ ಇದಾಗಿರಬಹುದು.
ಆದರೆ, ಒಪ್ಪಂದದ ಸ್ವರೂಪ ಏನು ಎಂಬುದು ಗೊತ್ತಾಗಿಲ್ಲ. ಇಂಡೋನೇಷ್ಯಾದ ವಕ್ತಾರರು ನೀಡಿರುವ ಮಾಹಿತಿ ಪ್ರಕಾರ, ತಮ್ಮ ಮಿಲಿಟರಿ ಹಾರ್ಡ್ವೇರ್ನ ಆಧುನೀಕರಣ ಹಾಗೂ ರಕ್ಷಣಾ ಸಾಮರ್ಥ್ಯ ಬಲಪಡಿಸಲು ಈ ಒಪ್ಪಂದವನ್ನು ಬಳಸಲಾಗಿದೆ. ಆದರೆ, ಅವರು ಈ ಡೀಲ್ನ ಒಟ್ಟು ಮೊತ್ತವೆಷ್ಟು ಎಂದು ನಿಖರ ಡಾಟಾ ಕೊಡಲು ನಿರಾಕರಿಸಿದ್ದಾರೆ.
ಪಾಕಿಸ್ತಾನ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂದೂರ್ನಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಸಾಮರ್ಥ್ಯ ಜಗಜ್ಜಾಹೀರಾಗಿತ್ತು. ಭಾರತದ ಡಿಆರ್ಡಿಒ ಮತ್ತು ರಷ್ಯಾದ ಎನ್ಪಿಒ ಮಷಿನೋಸ್ಟ್ರೋಯೇನಿಯಾ ಕಂಪನಿಗಳು ಜಂಟಿಯಾಗಿ ಸೇರಿ ಬ್ರಹ್ಮೋಸ್ ಏರೋಸ್ಪೇಸ್ ಎನ್ನುವ ಸಂಸ್ಥೆ ಹುಟ್ಟುಹಾಕಿವೆ. ಬ್ರಹ್ಮೋಸ್ ಹೆಸರಿನಲ್ಲಿ ಭಾರತದ ಬ್ರಹ್ಮಪುತ್ರ ಮತ್ತು ರಷ್ಯಾದ ಮೋಸ್ಕವಾ ನದಿಗಳ ಹೆಸರಿವೆ.
ಬ್ರಹ್ಮೋಸ್ ಕ್ಷಿಪಣಿ ಖರೀದಿಸಲು ವಿಶ್ವದ ಅನೇಕ ದೇಶಗಳು ಆಸಕ್ತವಾಗಿವೆ. 2022ರಲ್ಲಿ ಫಿಲಿಪ್ಪೈನ್ಸ್ ದೇಶವು ಬ್ರಹ್ಮೋಸ್ ಖರೀದಿಗೆ ಡೀಲ್ ಮಾಡಿಕೊಂಡಿತ್ತು. ಇದೀಗ ಇಂಡೋನೇಷ್ಯಾದಿಂದ ಒಪ್ಪಂದ ಆಗಿದೆ.
ಬ್ರಹ್ಮೋಸ್ ಕ್ಷಿಪಣಿಯನ್ನು ಹಡಗು, ಸಬ್ಮರೀನ್, ಮೊಬೈಲ್ ಲಾಂಚರ್ಸ್ ಹಾಗೂ ಫೈಟರ್ ಜೆಟ್ಗಳಿಂದ ಹಾರಿಬಿಡಬಹುದು. ಇದಕ್ಕೆ ಗುರಿ ನಿಗದಿ ಮಾಡಿ ಬಿಟ್ಟರೆ ಸಾಕು ಬಹಳ ನಿಖರವಾಗಿ ಗುರಿಯನ್ನು ಹೊಡೆದು ಹಾಕುತ್ತದೆ.
ಈ ಕ್ಷಿಪಣಿಯ ದೂರ ಶ್ರೇಣಿ ಮೂಲತಃ 290 ಕಿಮೀ ಇದೆ. ಇದನ್ನು 800 ಕಿಮೀವರೆಗೂ ವಿಸ್ತರಿಸುವ ಅವಕಾಶ ಇರುತ್ತದೆ. ರಾಡಾರ್ ಕಣ್ಣಿಂದ ತಪ್ಪಿಸಿಕೊಳ್ಳಲು ಇದು ಸಮುದ್ರದ ನೀರಿನಿಂದ ಕೇವಲ 3-10 ಮೀಟರ್ ಎತ್ತರದಲ್ಲಿ ತೂರಿ ಹೋಗಬಲ್ಲುದು. 15 ಕಿಮೀ ಎತ್ತರದಲ್ಲೂ ಇದು ಹೋಗಬಹುದು.
ಬ್ರಹ್ಮೋಸ್ ಕ್ಷಿಪಣಿಯ ವೇಗ ಮ್ಯಾಕ್ 3 ಇದೆ. ಅಂದರೆ ಶಬ್ದಕ್ಕಿಂತ ಮೂರು ಪಟ್ಟು ಹೆಚ್ಚು ವೇಗದಲ್ಲಿ ಇದು ಕ್ರಮಿಸಬಲ್ಲುದು. ಎರಡನೇ ಆವೃತ್ತಿಯ ಬ್ರಹ್ಮೋಸ್ ತಯಾರಿಕೆ ನಡೆದಿದ್ದು ಇದು ಮ್ಯಾಕ್ 8 ವೇಗದಲ್ಲಿ ಸಾಗಬಲ್ಲುದು ಎಂದು ಹೇಳಲಾಗುತ್ತಿದೆ.
2024 ರ ಟಿ20 ವಿಶ್ವಕಪ್ (T20 World Cup) ಮುಗಿದ ಬಳಿಕ ಭಾರತ ಟಿ20 ತಂಡದ ನಾಯಕತ್ವವಹಿಸಿಕೊಂಡ ಸೂರ್ಯಕುಮಾರ್ ಯಾದವ್ (Suryakumar Yadav) ನಾಯಕನಾಗಿ ತಂಡವನ್ನು ದಾಖಲೆಯ ಗೆಲುವುಗಳತ್ತ ಮುನ್ನಡೆಸಿದ್ದಾರೆ. ಆದಾಗ್ಯೂ ಆಟಗಾರನಾಗಿ ಸೂರ್ಯಕುಮಾರ್ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಸೂರ್ಯಕುಮಾರ್ ಬರೋಬ್ಬರಿ 1 ವರ್ಷದಿಂದ ರನ್ ಬರ ಎದುರಿಸಿದ್ದರು. ಆದರೆ ವಿಶ್ವಕಪ್ ಸಮೀಪವಾಗುತ್ತಿದ್ದಂತೆ ಫಾರ್ಮ್ ಕಂಡುಕೊಂಡಿದ್ದ ಸೂರ್ಯ, ಇದೀಗ ತಂಡವನ್ನು ದಾಖಲೆಯ ಗೆಲುವಿನತ್ತ ಮುನ್ನಡೆಸಿದ್ದಾರೆ.
ಸೂರ್ಯ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಂ ಇಂಡಿಯಾ ಅಹಮದಾಬಾದ್ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಟ್ರೋಫಿಯನ್ನು ಎತ್ತಿಹಿಡಿಯಿತು. ಆದಾಗ್ಯೂ, 35 ವರ್ಷದ ಸೂರ್ಯಕುಮಾರ್ ಯಾದವ್ ಪಂದ್ಯಾವಳಿಯ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗುತ್ತಾರೆ ಎಂಬ ಊಹಾಪೋಹಗಳು ಪಂದ್ಯಾವಳಿಯ ಆರಂಭದಿಂದಲೂ ಕೇಳಿಬಂದಿದ್ದವು. ಇದೀಗ ಫೈನಲ್ ಮುಗಿದ ಬಳಿಕ ಮಾತನಾಡಿರುವ ಸೂರ್ಯ, ನಿವೃತ್ತಿಯ ಬಗ್ಗೆ ಹರಡಿರುವ ವದಂತಿಗಳಿಗೆ ತೆರೆ ಎಳಿದರು.
ನಿವೃತ್ತಿ ಬಗ್ಗೆ ಸೂರ್ಯ ಹೇಳಿದ್ದೇನು?
2026 ರ ಟಿ20 ವಿಶ್ವಕಪ್ ಫೈನಲ್ ಗೆದ್ದ ನಂತರ, ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಪತ್ರಿಕಾಗೋಷ್ಠಿಯಲ್ಲಿ ನಿವೃತ್ತಿಯ ಕುರಿತ ಪ್ರಶ್ನೆಗಳಿಗೆ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದರು. ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಹಾಜರಿದ್ದ ಸೂರ್ಯ, ‘ಎಲ್ಲವೂ ಚೆನ್ನಾಗಿ ನಡೆಯುತ್ತಿರುವಾಗ, ನಿವೃತ್ತಿಯ ಬಗ್ಗೆ ಏಕೆ ಯೋಚಿಸಬೇಕು?. ಹೀಗಾಗಿ ನಾನು ನಿವೃತ್ತಿ ನಿರ್ಧಾರದ ಬಗ್ಗೆ ಯಾವ ಯೋಚನೆಯನ್ನು ಮಾಡಿಲ್ಲ. ಇನ್ನೂ ನನ್ನಲ್ಲಿ ಸಾಕಷ್ಟು ಕ್ರಿಕೆಟ್ ಉಳಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತ ಚಾಂಪಿಯನ್ ಆದ ಹೊರತಾಗಿಯೂ ಫೈನಲ್ ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಯಾವುದೇ ರನ್ ಗಳಿಸದೆ ಔಟಾದರು. ಆದಾಗ್ಯೂ ಪಂದ್ಯಾವಳಿಯಲ್ಲಿ ಆಡಿದ ಒಂಬತ್ತು ಪಂದ್ಯಗಳಲ್ಲಿ ಒಟ್ಟು 242 ರನ್ ಕಲೆಹಾಕಿರುವ ಸೂರ್ಯ 2026 ರ ಟಿ20 ವಿಶ್ವಕಪ್ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಇದರಲ್ಲಿ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿನ ಅರ್ಧಶತಕವೂ ಸೇರಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾ.9: ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳವೊಂದು ತಾರಕಕ್ಕೇರಿ, ಯುವತಿ ಮತ್ತು ಆಕೆಯ ಪೋಷಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಈ ಸಂಬಂಧ ನಂದಿನಿ ಲೇಔಟ್ ನಿವಾಸಿ ಪಾಂಡುರಂಗ (32) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತರಬನಹಳ್ಳಿಯಲ್ಲಿ ವಾಸವಾಗಿರುವ ಸುಮಲತಾ (27) ಮತ್ತು ಪಾಂಡುರಂಗ ನಡುವೆ ಸಂಬಂಧವಿತ್ತು ಎನ್ನಲಾಗಿದೆ. ಸೋಮವಾರ ಸುಮಲತಾ ಮನೆಗೆ ಬಂದ ಪಾಂಡುರಂಗ, ಆಕೆಯ ದ್ವಿಚಕ್ರ ವಾಹನವನ್ನು (ಸ್ಕೂಟರ್) ನೀಡುವಂತೆ ಕೇಳಿದ್ದಾನೆ. ಸುಮಲತಾ ಸ್ಕೂಟರ್ ನೀಡಲು ನಿರಾಕರಿಸಿದಾಗ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಸುಮಲತಾ ಪೋಷಕರು ಜಗಳ ಬಿಡಿಸಲು ಮಧ್ಯಪ್ರವೇಶಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪಾಂಡುರಂಗ, ತನ್ನ ಬಳಿ ಇದ್ದ ಪೆಟ್ರೋಲ್ ಬಾಟಲಿಯನ್ನು ಸುಮಲತಾ ಮತ್ತು ಆಕೆಯ ಪೋಷಕರ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆಯ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಇದು ಕೋಪದ ಭರದಲ್ಲಿ ಮಾಡಿದ ಕೃತ್ಯ ಎಂದು ಹೇಳಲಾಗಿದೆ.
ಚೀರಾಟ ಕೇಳಿ ಧಾವಿಸಿದ ನೆರೆಹೊರೆಯವರು ಕೂಡಲೇ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮೂವರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಅವರ ಪರಿಸ್ಥಿತಿಯನ್ನು ವೈದ್ಯರು ಗಮನಿಸುತ್ತಿದ್ದಾರೆ. ಸೊಲದೇವನಹಳ್ಳಿ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು. ಭಾನುವಾರ ಆರೋಪಿ ಪಾಂಡುರಂಗನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 109 (ಕೊಲೆ ಯತ್ನ) ಮತ್ತು 351(2) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
ಬೇಸಿಗೆ ಕಾಲ (summer) ಆರಂಭವಾಗಿದೆ. ಈ ಋತುವಿನಲ್ಲಿ ವಿಪರೀತ ಶಾಖ ಇರುವ ಕಾರಣ ನಿರ್ಜಲೀಕರಣ, ಆಯಾಸ, ದಣಿವು, ದೇಹ ಉರಿ, ಶಾಖದ ಹೊಡೆದ, ಜೀರ್ಣಕಾರಿ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಈ ಸಮಯದಲ್ಲಿ ಆರೋಗ್ಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ದೇಹವನ್ನು ತಂಪಾಗಿಡಲು, ನಿರ್ಜಲೀಕರಣ ಸಮಸ್ಯೆಯನ್ನು ಹೋಗಲಾಡಿಸಲು ಜನ ಎಳನೀರು, ನೀರು, ಕಲ್ಲಂಗಡಿಯಂತಹ ಕಾಲೋಚಿತ ಹಣ್ಣುಗಳನ್ನು ಸೇವನೆ ಮಾಡುತ್ತಾರೆ. ಇದರ ಜೊತೆಗೆ ಈ ಸುಡು ಬೇಸಿಗೆಯಲ್ಲಿ ಸೋಂಪು ನೀರನ್ನೂ ಕುಡಿಯಬಹುದು. ಇದು ದೇಹವನ್ನು ತಂಪಾಗಿಸುವುದರ ಜೊತೆಗೆ ಇನ್ನೂ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅವು ಯಾವುವು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಬೇಸಿಗೆಯಲ್ಲಿ ಸೋಂಪು ನೀರು ಏಕೆ ಕುಡಿಯಬೇಕು?
ಆಯುರ್ವೇದದ ಪ್ರಕಾರ, ಬೇಸಿಗೆಯಲ್ಲಿ, ದೇಹದಲ್ಲಿ ‘ಪಿತ್ತ ದೋಷ’ ಹೆಚ್ಚಾಗುತ್ತದೆ, ಇದು ಶಾಖ, ಉರಿಯೂತ ಮತ್ತು ಆಮ್ಲೀಯತೆಗೆ ಕಾರಣವಾಗಿದೆ. ಸೋಂಪು ತಂಪಾಗಿಸುವ ಗುಣವನ್ನು ಹೊಂದಿದ್ದಿ, ಇದು ಪಿತ್ತವನ್ನು ಸಮತೋಲನಗೊಳಿಸುತ್ತದೆ. ಹಾಗಾಗಿ ಸುಡು ಬೇಸಿಗೆಯಲ್ಲಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೋಂಪು ನೀರನ್ನು ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಸಮತೋಲನದಲ್ಲಿರುತ್ತದೆ ಮತ್ತು ಶಾಖದ ಹೊಡೆತದ ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಎಂತಹದೇ ಉರಿ ಬಿಸಿಲಿನಲ್ಲೂ ದೇಹ ತಂಪಾಗಿರುತ್ತದೆ.
ಸೋಂಪು ನೀರಿನ ಪ್ರಯೋಜನಗಳೇನು?
ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ: ಬೇಸಿಗೆಯಲ್ಲಿ ಆಮ್ಲೀಯತೆ, ಅನಿಲ, ಮಲಬದ್ಧತೆ ಮತ್ತು ಹೊಟ್ಟೆ ನೋವು ಮುಂತಾದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಸೋಂಪು ನೀರು ಈ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಿದ್ದು, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೊಟ್ಟೆಯನ್ನು ಹಗುರವಾಗಿರಿಸುತ್ತದೆ.
ದೇಹವನ್ನು ತಂಪಾಗಿಸುತ್ತದೆ: ಸೋಂಪು ನೈಸರ್ಗಿಕ ತಂಪಾಗಿಸುವ ಗುಣಗಳನ್ನು ಹೊಂದಿದ್ದು, ಇದರ ನೀರನ್ನು ಕುಡಿಯುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ ಮತ್ತು ಇದು ಶಾಖದ ಹೊಡೆತದಿಂದ ದೇಹವನ್ನು ರಕ್ಷಿಸುತ್ತದೆ. ಹಾಗಾಗಿ ಸುಡು ಬೇಸಿಗೆಯಲ್ಲಿ ಹೊರಗೆ ಹೋಗುವ ಮೊದಲು ಸೋಮಪು ನೀರನ್ನು ಕುಡಿಯಿರಿ.
ಜಲಸಂಚಯನ ಒದಗಿಸುತ್ತದೆ: ನೀರಿಗೆ ಸ್ವಲ್ಪ ಸೋಂಪು ಬೀಜಗಳನ್ನು ಸೇರಿಸುವುದರಿಂದ ಅದರ ರುಚಿ ಹೆಚ್ಚಾಗುತ್ತದೆ, ಅಲ್ಲದೆ ಸೋಂಪು ನೀರು ಜಲಸಂಚಯನವನ್ನು ಉತ್ತೇಜಿಸುತ್ತದೆ. ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು, ಜೀವಕೋಶಗಳ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ದೇಹವನ್ನು ಡಿಟಾಕ್ಸ್ ಮಾಡುತ್ತದೆ: ಸೋಂಪು ನೀರು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಯಕೃತ್ತು ಮತ್ತು ಮೂತ್ರಪಿಂಡಗಳನ್ನು ಶುದ್ಧೀಕರಿಸುತ್ತದೆ, ಇದರಿಂದಾಗಿ ಸ್ಪಷ್ಟ ಮತ್ತು ಹೊಳೆಯುವ ಚರ್ಮವನ್ನು ನೀವು ಪಡೆಯುವಿರಿ.
ತೂಕ ಇಳಿಕೆಗೂ ಪ್ರಯೋಜನಕಾರಿ: ನೀವು ಬೇಗನೆ ತೂಕ ಇಳಿಸಿಕೊಳ್ಳಲು ಬಯಸಿದರೆ, ಬೇಸಿಗೆಯಲ್ಲಿ ನೀವು ಖಂಡಿತವಾಗಿಯೂ ಸೋಂಪು ನೀರನ್ನು ಕುಡಿಯಬೇಕು. ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ನಿಮ್ಮ ಹಸಿವನ್ನು ನಿಯಂತ್ರಿಸುತ್ತದೆ.
ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ: ಸೋಂಪು ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ ಮತ್ತು ಕೂದಲನ್ನು ಬೇರುಗಳಿಂದ ಬಲಪಡಿಸುತ್ತವೆ.
ಸೋಂಪು ನೀರನ್ನು ಹೇಗೆ ತಯಾರಿಸುವುದು?
ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ಒಂದು ಟೀಚಮಚ ಸೋಂಪು ಬೀಜಗಳನ್ನು ನೆನೆಸಿಡಿ. ಬೆಳಿಗ್ಗೆ ನೀರನ್ನು ಸೋಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಬೇಕಾದರೆ, ನೀವು ಅದನ್ನು ಬಿಸಿ ಮಾಡಬಹುದು. ನೀವು ಅದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ನಿಂಬೆಹಣ್ಣನ್ನು ಕೂಡ ಸೇರಿಸಬಹುದು. ಇದಲ್ಲದೆ ಸೋಂಪು ಕಾಳು ಮತ್ತು ಕಲ್ಲು ಸಕ್ಕರೆಯನ್ನು ಪುಡಿ ಮಾಡಿ ಇಟ್ಟುಕೊಂಡು ತಣ್ಣೀರಿನಲ್ಲಿ ಬೆರೆಸಿ ಸ್ವಲ್ಪ ನಿಂಬೆ ರಸ ಸೇರಿಸಿ ಕುಡಿಯಬಹುದು.
ನವದೆಹಲಿ, (ಮಾರ್ಚ್ 09): ಕರ್ನಾಟಕದಲ್ಲಿ (Karnataka) ಅಧಿಕಾರ ಹಂಚಿಕೆ ಬಿಕ್ಕಟ್ಟು ಮತ್ತಷ್ಟು ಜೋರಾಗಿದೆ. ಹೈಕಮಾಂಡ್ ಅವಕಾಶ ಕೊಟ್ಟರೆ ಮುಂದಿನ ಎರಡು ವರ್ಷವೂ ನಾನೇ ಆಯವ್ಯಯ ಮಂಡಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಅವರು ದೆಹಲಿಗೆ ತೆರಳಿದ್ದು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದಾರೆ. ಬಜೆಟ್ ಮುಗಿತುತ್ತಿದ್ದಂಯೆಯೇ ಡಿಕೆಶಿ ಮತ್ತಷ್ಟು ಆ್ಯಕ್ಟೀವ್ ಆಗಿರುವುದು ಕುತೂಲಹಕ್ಕೆ ಕಾರಣವಾಗಿದೆ.
ಮಾರ್ಚ್ 08 (ಭಾನುವಾರ) ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರ್ರದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಅಲ್ಲಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ವಿಮಾನದಲ್ಲಿ ದೆಹಲಿ ಪ್ರಯಾಣ ತೆರಳಿದ್ದು, ಅಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಅಧಿಕಾರ ಹಂಚಿಕೆ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಈ ಬಗ್ಗೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಗಳಿಗೆ ಪ್ರತಿಕ್ರಿಯಿಸಿದ್ದು, ಏನೆಲ್ಲಾ ಹೇಳಿದ್ದಾರೆ ಎನ್ನುವುದ್ನು ಕೇಳಿ.
ನವದೆಹಲಿ, ಮಾರ್ಚ್ 9: ಯುದ್ಧದ ತೀವ್ರತೆ ಹೆಚ್ಚುತ್ತಿರುವಂತೆಯೇ ಇರಾನ್ ಅನ್ನು ಕಟ್ಟಿಹಾಕಲು ಅಮೆರಿಕ ವಿವಿಧ ಮಾರ್ಗೋಪಾಯಗಳನ್ನು ಅವಲೋಕಿಸುತ್ತಿದೆ. ಇರಾನ್ನ ಹಲವು ಮಿಲಿಟರಿ ಮತ್ತು ಪರಮಾಣು ಸೌಕರ್ಯಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ಪಡೆಗಳಿಂದ ಸಾಕಷ್ಟು ದಾಳಿಗಳಾಗಿವೆ. ಈ ಮಧ್ಯೆ ಅಮೆರಿಕ ಹೊಸ ತಂತ್ರ ಹಾಕಿದೆ. ಇರಾನ್ನ ಆರ್ಥಿಕತೆಯ ಬೆನ್ನೆಲುಬಾಗಿರುವ ಒಂದು ದ್ವೀಪದ ಮೇಲೆ ಟ್ರಂಪ್ ಕಣ್ಣಾಕಿದ್ದಾರೆ. ಅದು ಖರ್ಗ್ ಐಲ್ಯಾಂಡ್ (Kharg Island).
ಖರ್ಗ್ ದ್ವೀಪವು ಇರಾನ್ನ ಪ್ರಮುಖ ರಫ್ತು ಅಡ್ಡೆ ಎನಿಸಿದೆ. ಈ ದ್ವೀಪವನ್ನು ವಶಕ್ಕೆ ತೆಗೆದುಕೊಳ್ಳಲು ಅಥವಾ ಹಾನಿ ಮಾಡಲು ಅಮೆರಿಕ ಯೋಜಿಸಿದೆ. ಖರ್ಗ್ ದ್ವೀಪವು ಪರ್ಷಿಯನ್ ಕೊಲ್ಲಿಯಲ್ಲಿರುವ ಒಂದು ಪುಟ್ಟ ದ್ವೀಪ. ಇರಾನ್ನ ಕರಾವಳಿಯಿಂದ ಸುಮಾರು 30 ಕಿಮೀ ದೂರದಲ್ಲಿದೆ. ಇದು ಇರಾನ್ನ ಪ್ರಮುಖ ಕಚ್ಚಾ ತೈಲ ರಫ್ತಿನ ಟರ್ಮಿನಲ್ ಅಥವಾ ಹಡಗುದಾಣ ಎನಿಸಿದೆ. ಇರಾನ್ನ ಶೇ. 90ರಷ್ಟು ತೈಲ ರಫ್ತು ಈ ಟರ್ಮಿನಲ್ನಿಂದಲೇ ಆಗುವುದು. ದಿನಕ್ಕೆ 70 ಲಕ್ಷ ಬ್ಯಾರಲ್ ತೈಲವನ್ನು ಇಲ್ಲಿಂದ ಲೋಡ್ ಮಾಡಿ ಕಳುಹಿಸಬಹುದು.
ಖರ್ಗ್ ದ್ವೀಪಕ್ಕೆ ಅಥವಾ ಅದರಲ್ಲಿರುವ ಆಯಿಲ್ ಎಕ್ಸ್ಪೋರ್ಟ್ ಟರ್ಮಿನಲ್ಗೆ ಧಕ್ಕೆಯಾದರೆ ಇರಾನ್ನ ಆರ್ಥಿಕ ಬೆನ್ನೆಲುಬು ಮುರಿದಂತಾಗಬಹುದು. ಆದರೂ ಕೂಡ ದಶಕಗಳಿಂದ ಗಲ್ಫ್ನಲ್ಲಿ ಯಾವ ಸಂಘರ್ಷ ಏರ್ಪಟ್ಟರೂ ಇರಾನ್ನಲ್ಲಿರುವ ಖರ್ಗ್ ಐಲ್ಯಾಂಡ್ ಮೇಲೆ ಇದೂವರೆಗೂ ಯಾರೂ ಕೂಡ ದಾಳಿ ಮಾಡಿದ್ದಿಲ್ಲ. ಅದಕ್ಕೆ ಕೆಲ ಸಕಾರಣಗಳಿವೆ.
ಖರ್ಗ್ ಐಲ್ಯಾಂಡ್ನಿಂದ ಜಗತ್ತಿಗೆ ಸಾಕಷ್ಟು ತೈಲ ಸರಬರಾಜಾಗುತ್ತದೆ. ಇದಕ್ಕೆ ಧಕ್ಕೆಯಾದರೆ ತೈಲಕ್ಕೆ ಹಾಹಾಕಾರ ಶುರುವಾಗಬಹುದು. ಜಗತ್ತಿನ ಶೇ. 40ರಷ್ಟು ತೈಲ ಸಾಗಣೆ ಆಗುವ ಹಾರ್ಮುಜ್ ಜಲಸಂಧಿಗೆ ಬಹಳ ಸಮೀಪದಲ್ಲೇ ಖರ್ಗ್ ಇದೆ. ಇಲ್ಲಿ ಹಾನಿಯಾದರೆ ಹಾರ್ಮುಜ್ ಮಾರ್ಗಕ್ಕೂ ಧಕ್ಕೆಯಾಗಬಹುದು. ಇದರಿಂದ ಜಾಗತಿಕವಾಗಿ ಪರಿಣಾಮಗಳಾಗಬಹುದು. ಈ ಕಾರಣಕ್ಕೆ ಇದೂವರೆಗೂ ಯಾರೂ ಕೂಡ ಖರ್ಗ್ ದ್ವೀಪವನ್ನು ಮುಟ್ಟಿಲ್ಲ. ಈಗ ಅಮೆರಿಕ ಮತ್ತು ಇಸ್ರೇಲ್ ದೇಶಗಳು ಖರ್ಗ್ ಮೇಲೆ ಕಣ್ಣಾಕಿವೆ.
ಇರಾನ್ ಅನ್ನು ಹೇಗಾದರೂ ಸೋಲಿಸಲೇಬೇಕು ಅಥವಾ ನಿಯಂತ್ರಿಸಬೇಕು ಎಂದು ಪಣತೊಟ್ಟಿರುವ ಇಸ್ರೇಲ್ ಮತ್ತು ಅಮೆರಿಕ ದೇಶಗಳಿಗೆ ಈಗ ಖರ್ಗ್ ಐಲ್ಯಾಂಡ್ ಒಂದು ಆಯಕಟ್ಟಿನ ಜಾಗವಾಗಬಹುದು. ಈ ಜಾಗವೇನಾದರೂ ತಮ್ಮ ವಶಕ್ಕೆ ಹೋದರೆ ಇರಾನ್ನ ತಳಹದಿಯೇ ಅಲುಗಾಡುತ್ತದೆ. ಹೀಗಾಗಿ, ಖರ್ಗ್ ಮೇಲೆ ಎರಗಿ ಹೋಗುವ ಆಲೋಚನೆ ನಡೆದಿದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
2024ರ ಬ್ಲಾಕ್ ಬಸ್ಟರ್ ಸಿನಿಮಾ ‘ಕಲ್ಕಿ 2898 AD’ (Kalki 2898 AD) ಕೇವಲ ದೃಶ್ಯ ವೈಭವದಿಂದ ಮಾತ್ರವಲ್ಲದೇ, ಅದರಲ್ಲಿ ನಟಿಸಿದ ಕಲಾವಿದರ ಸಂಭಾವನೆಯ ವಿಚಾರವಾಗಿಯೂ ಈಗ ಸುದ್ದಿಯಲ್ಲಿದೆ. ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಅವರಂತಹ ದಿಗ್ಗಜರ ನಡುವೆ, ತಮಿಳಿನ ಸ್ಟಾರ್ ಹೀರೋ ಕಮಲ್ ಹಾಸನ್ (Kamal Haasan) ಅವರು ಪಡೆದ ಸಂಭಾವನೆ ಎಷ್ಟು ಎಂಬ ಕುತೂಹಲಕ್ಕೆ ಈಗ ಅವರ ಆಪ್ತ ಗೆಳೆಯ ಯುಗಿ ಸೇತು ತೆರೆ ಎಳೆದಿದ್ದಾರೆ. ಕಮಲ್ ಹಾಸನ್ ಅವರ ದಶಕಗಳ ಕಾಲದ ಗೆಳೆಯ ಮತ್ತು ನಟ ಯುಗಿ ಸೇತು (Yugi Sethu) ಇತ್ತೀಚಿನ ಸಂದರ್ಶನವೊಂದರಲ್ಲಿ ಅಚ್ಚರಿಯ ವಿಷಯ ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಈ ಚಿತ್ರಕ್ಕಾಗಿ ಕಮಲ್ ಹಾಸನ್ ಸುಮಾರು 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.
ಕಮಲ್ ಹಾಸನ್ ಅವರ ಸಂಭಾವನೆ ಕುರಿತು ಸ್ವಾರಸ್ಯಕರ ಘಟನೆಯನ್ನು ಯುಗಿ ಸೇತು ಹಂಚಿಕೊಂಡಿದ್ದಾರೆ. ‘ನಾನು ಚಿತ್ರದ ನಿರ್ಮಾಪಕ ಸಿ. ಅಶ್ವಿನಿ ದತ್ ಅವರಿಗೆ ಧನ್ಯವಾದ ಅರ್ಪಿಸುತ್ತಾ, ನನ್ನ ಗೆಳೆಯನನ್ನು ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟನನ್ನಾಗಿ ಮಾಡಿದ್ದೀರಿ ಎಂದು ಹೇಳಿದೆ. ಆಗ ದತ್ ಅವರು ನನ್ನನ್ನು ತಿದ್ದುತ್ತಾ, ಕಮಲ್ ಶೂಟಿಂಗ್ ಮಾಡಿದ್ದು 20 ದಿನಗಳಲ್ಲ, ಕೇವಲ 10 ದಿನಗಳು ಮಾತ್ರ ಎಂದರು. ಅಂದರೆ ಅವರ ಲೆಕ್ಕಾಚಾರದ ಪ್ರಕಾರ, ಕಮಲ್ ಹಾಸನ್ ದಿನಕ್ಕೆ ಸುಮಾರು 2 ಮಿಲಿಯನ್ ಡಾಲರ್ (ಅಂದಾಜು 18 ಕೋಟಿ ರೂಪಾಯಿಗೂ ಹೆಚ್ಚು) ಸಂಭಾವನೆ ಪಡೆದಂತಾಯಿತು’ ಎಂದು ಯುಗಿ ಸೇತು ಹೇಳಿದ್ದಾರೆ.
‘ಕಲ್ಕಿ 2898 AD’ ಚಿತ್ರದಲ್ಲಿ ಕಮಲ್ ಹಾಸನ್ ಅವರು ‘ಸುಪ್ರೀಂ ಯಾಸ್ಕಿನ್’ ಎಂಬ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಭಾಗದಲ್ಲಿ ಅವರ ಸ್ಕ್ರೀನ್ ಟೈಮ್ ಕಡಿಮೆ ಇದ್ದರೂ, ಅವರ ಪಾತ್ರ ಸೃಷ್ಟಿಸಿದ ಇಂಪ್ಯಾಕ್ಟ್ ಮಾತ್ರ ದೊಡ್ಡದಿದೆ. ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಅವರ ಪಾತ್ರದ ಭೀಕರತೆಯು ಎರಡನೇ ಭಾಗದ ಮೇಲೆ ಭಾರಿ ನಿರೀಕ್ಷೆ ಮೂಡಿಸಿದೆ.
ಇದನ್ನು ಕಮಲ್ ಹಾಸನ್ ಅವರ ‘ಸೆಕೆಂಡ್ ಇನ್ನಿಂಗ್ಸ್’ ಎನ್ನಬಹುದು. 2022ರಲ್ಲಿ ತೆರೆಕಂಡ ‘ವಿಕ್ರಮ್’ ಚಿತ್ರದ ಭರ್ಜರಿ ಯಶಸ್ಸಿನ ನಂತರ ಕಮಲ್ ಹಾಸನ್ ಅವರ ಬೇಡಿಕೆ ಗಗನಕ್ಕೇರಿದೆ. 150 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣವಾಗಿದ್ದ ‘ವಿಕ್ರಮ್’ ಚಿತ್ರ 400 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿತ್ತು. ‘ಕಲ್ಕಿ’ ಸರಣಿಯ ಮೂಲಕ ಅವರು ಮತ್ತೆ ಭಾರತೀಯ ಚಿತ್ರರಂಗದ ದುಬಾರಿ ನಟನಾಗಿ ಹೊರಹೊಮ್ಮುತ್ತಿದ್ದಾರೆ.
ಸದ್ಯಕ್ಕೆ ‘ಕಲ್ಕಿ’ ಚಿತ್ರದ ಎರಡನೇ ಭಾಗದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ದಶಕಗಳ ನಂತರ ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಹಬ್ಬದಂತಿದೆ. ಯುಗಿ ಸೇತು ಅವರು ಸಂಭಾವನೆ ಬಗ್ಗೆ ಮಾತನಾಡಿದ್ದಕ್ಕೆ ಮುಂದಿನ ದಿನಗಳಲ್ಲಿ ಕಮಲ್ ಹಾಸನ್ ಪ್ರತಿಕ್ರಿಯೆ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕು.
ಕಾನ್ಪುರ, ಮಾ.9: ಉತ್ತರ ಪ್ರದೇಶದ ಕಾನ್ಪುರದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ದೇವಾಲಯದ ಅರ್ಚಕರೊಬ್ಬರನ್ನು ಜನರ ಗುಂಪು ಮನಬಂದಂತೆ ಥಳಿಸಿರುವ ಘಟನೆ ಭಾನುವಾರ ತಡರಾತ್ರಿ ಸಂಭವಿಸಿದೆ. ಹೋಟೆಲ್ವೊಂದರಲ್ಲಿ ಅರ್ಚಕರು ಮಾಂಸಾಹಾರ ಸೇವಿಸುತ್ತಿದ್ದಾರೆ ಎನ್ನಲಾದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈ ಹಿಂಸಾಚಾರ ನಡೆದಿದೆ.
ಕಾನ್ಪುರದ ಭೂತೇಶ್ವರ ದೇವಾಲಯದ ಅರ್ಚಕ ಪ್ರಶಾಂತ್ ಗಿರಿ ಮೇಲೆ ಸುಮಾರು 50 ರಿಂದ 60 ಜನರ ಗುಂಪೊಂದು ದಾಳಿ ನಡೆಸಿದೆ. ಅರ್ಚಕರನ್ನು ಅವರ ಕೊಠಡಿಯಿಂದ ಹೊರಗೆ ಎಳೆದುಕೊಂಡು ಬಂದು ರಸ್ತೆಯಲ್ಲಿ ಧರಧರನೆ ಎಳೆದಾಡಿ ಹಿಗ್ಗಾಮುಗ್ಗಾ ಥಳಿಸಲಾಗಿದೆ.
ಇಲ್ಲಿದೆ ನೋಡಿ ವಿಡಿಯೋ:
यूपी – कानपुर में मंदिर के महंत प्रशांत गिरी उर्फ गोलू पंडित। ये तस्वीर 2 दिन पहले वायरल हुई, जिसमें दावा किया गया है कि वो रेस्टोरेंट में बैठकर मांस खा रहे थे। ये तस्वीर देखकर मंदिर से जुड़े लोगों की भावनाएं आहत हुईं और महंत की पिटाई कर दी। https://t.co/SR3M1IBqeupic.twitter.com/3agXjIwneu
ಈ ವೇಳೆ ದೇವಾಲಯದಲ್ಲಿದ್ದ ಕೆಲವು ಮಹಿಳೆಯರು ಅರ್ಚಕರನ್ನು ಕಾಪಾಡಲು ಮುಂದಾದರು. ಅರ್ಚಕರ ಸುತ್ತಲೂ ಕುಳಿತು ಗುರಾಣಿಯಂತೆ ರಕ್ಷಣೆ ನೀಡಲು ಪ್ರಯತ್ನಿಸಿದರು. ಆದರೆ, ಉದ್ರಿಕ್ತ ಗುಂಪು ಅರ್ಚಕರನ್ನು ಉಳಿಸಲು ಬಂದ ಮಹಿಳೆಯರ ಮೇಲೆ ಕೂಡ ಹಲ್ಲೆ ನಡೆಸಿ, ಅವರನ್ನು ದೂಡಿ ಹಾಕಿ ಅರ್ಚಕನಿಗೆ ಹೊಡೆದಿದ್ದಾರೆ.ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಗುಂಪಿನಿಂದ ಅರ್ಚಕರನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಗಾಯಗೊಂಡಿರುವ ಅರ್ಚಕರು ಈ ಬಗ್ಗೆ ದೂರು ನೀಡಿದ್ದು, “ತನ್ನನ್ನು ದೇವಾಲಯದಿಂದ ಹೊರಹಾಕಲು ನಡೆದ ಪಿತೂರಿ ಇದಾಗಿದೆ. ರೆಸ್ಟೋರೆಂಟ್ವೊಂದರಲ್ಲಿ ನಾನು ಕುಳಿತಿದ್ದ ಹಳೆಯ ಫೋಟೋವನ್ನು ಎಡಿಟ್ ಮಾಡಿ, ಅಲ್ಲಿ ಮಾಂಸಾಹಾರ ಇರುವಂತೆ ಬಿಂಬಿಸಲಾಗಿದೆ” ಎಂದು ಆರೋಪಿಸಿದ್ದಾರೆ. ಪೊಲೀಸರು ವೈರಲ್ ವಿಡಿಯೋ ಆಧರಿಸಿ ಕಿಡಿಗೇಡಿಗಳ ಪತ್ತೆಗೆ ಮುಂದಾಗಿದ್ದಾರೆ.