All posts by nagaraj11081993

ಬೆಂಗಳೂರಿನಲ್ಲಿ ವಿಚಿತ್ರ ಮನೆ: 3×7 ಅಡಿಯಲ್ಲಿ 4 ಅಂತಸ್ತಿನ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ – Kannada News | Bengaluru’s Bizarre 3×7 House: This 4 Storey Building Will Leave You Amazed

ಬೆಂಗಳೂರು, ಮೇ 12: ಬ್ರ್ಯಾಂಡ್ ಬೆಂಗಳೂರಿನಲ್ಲಿ ಯಾರು ಬೇಕಾದರೂ, ಹೇಗೆ ಬೇಕಾದರೂ ಮನೆ ಕಟ್ಟಬಹುದೇ? ಎಂಬ ಪ್ರಶ್ನೆಗೆ ರಾಜರಾಜೇಶ್ವರಿ ನಗರದ ಜವರೇಗೌಡ ನಗರದಲ್ಲಿ ತಲೆ ಎತ್ತಿರುವ ವಿಚಿತ್ರ ಕಟ್ಟಡ ಇದಕ್ಕೆ ಸಾಕ್ಷಿ ಎನ್ನುವಂತಿದೆ. ಕೇವಲ 3×7 ಅಡಿ ಜಾಗದಲ್ಲೇ ಬರೋಬ್ಬರಿ 4 ಮಹಡಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಸದ್ಯ ನೋಡುಗರನ್ನು ಆಶ್ಚರ್ಯಕ್ಕೀಡು ಮಾಡಿದೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಈ ವಿಚಿತ್ರ ಕಟ್ಟಡದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ಟೀಕೆಗಳು ಕೇಳಿಬರುತ್ತಿದ್ದರು ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯವಹಿಸಿದ್ದಾರೆ. ಇನ್ನು ಈಗಾಗಲೇ ಕಟ್ಟಡದ ಕೆಳಭಾಗ ಹಾಗೂ ಮುಂಭಾಗ ಕುಸಿದಿದ್ದು, ಯಾವ ಕ್ಷಣದಲ್ಲಾದರೂ ಸಂಪೂರ್ಣ ಕುಸಿಯುವ ಆತಂಕ ಎದುರಾಗಿದೆ. ಇದರಿಂದ ಪಕ್ಕದ ಮನೆಗೂ ಅಪಾರ ಪ್ರಮಾಣದ ಹಾನಿಯಾಗಿದ್ದು, ನಿವಾಸಿಗಳು ಕಳೆದ ಹಲವು ವರ್ಷಗಳಿಂದ ಜೀವಭಯದಲ್ಲೇ ವಾಸಿಸುವಂತಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಪಾಕ್ ಆಟಗಾರನ ಕಳ್ಳಾಟ ಬಯಲು..! – Kannada News | Shaheen Afridi Faces Disciplinary Heat Over Ball Tampering

ಕ್ರಿಕೆಟ್ ಎನ್ನುವುದು ಜಂಟಲ್​ಮ್ಯಾನ್ ಗೇಮ್. ಇದರ ಜೊತೆಗೆ ಕ್ರೀಡಾ ಸ್ಫೂರ್ತಿಗೆ ಹೆಸರಾದ ಆಟ. ಆದರೆ, ಗೆಲುವಿನ ಹಪಾಹಪಿ ಅಥವಾ ಮೈದಾನದ ಹತಾಶೆ ಕೆಲವೊಮ್ಮೆ ಸ್ಟಾರ್ ಆಟಗಾರರನ್ನೂ ದಾರಿ ತಪ್ಪಿಸುತ್ತದೆ. ಇದಕ್ಕೆ ತಾಜಾ ಉದಾಹರಣೆ ಪಾಕಿಸ್ತಾನ್ ವೇಗಿ ಶಾಹೀನ್ ಶಾ ಆಫ್ರಿದಿ. ಬಾಂಗ್ಲಾದೇಶ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ವೇಳೆ ಶಾಹೀನ್ ‘ಬಾಲ್ ಟ್ಯಾಂಪರಿಂಗ್’ (ಚೆಂಡು ವಿರೂಪಗೊಳಿಸುವಿಕೆ) ಮಾಡಿದ ಗಂಭೀರ ಆರೋಪಕ್ಕೆ ಗುರಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಏನಿದು ಘಟನೆ?

ಢಾಕಾದ ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಾಕ್ ಮತ್ತು ಬಾಂಗ್ಲಾ ನಡುವಣ ಪಂದ್ಯದ ನಾಲ್ಕನೇ ದಿನದಂದು ಈ ಘಟನೆ ಸಂಭವಿಸಿದೆ. ಬಾಂಗ್ಲಾದೇಶದ ಬ್ಯಾಟರ್‌ಗಳು ಬಲವಾದ ಮುನ್ನಡೆ ಸಾಧಿಸುತ್ತಿದ್ದಾಗ, ಹತಾಶರಾದಂತೆ ಕಂಡ ಆಫ್ರಿದಿ ಅವರು ತಮ್ಮ ಶೂಗಳ ಸ್ಪೈಕ್ಸ್ (Spikes) ಬಳಸಿ ಚೆಂಡಿನ ಮೇಲ್ಮೈಯನ್ನು ವಿರೂಪಗೊಳಿಸಲು ಪ್ರಯತ್ನಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಂಪೈರ್‌ಗಳ ಕ್ರಮ:

ಮೈದಾನದಲ್ಲಿದ್ದ ಅಂಪೈರ್‌ಗಳಾದ ಕುಮಾರ್ ಧರ್ಮಸೇನಾ ಮತ್ತು ರಿಚರ್ಡ್ ಕೆಟಲ್‌ಬರೋ ಅವರು ತಕ್ಷಣವೇ ಇದನ್ನು ಗಮನಿಸಿ, ಚೆಂಡನ್ನು ಪರಿಶೀಲಿಸಿದರು. ಹಾನಿಯಾಗಿರುವುದು ಖಚಿತವಾದ ಮೇಲೆ ಅವರು ಕೂಡಲೇ ಚೆಂಡನ್ನು ಬದಲಾಯಿಸಿ ಆಟ ಮುಂದುವರಿಸಿದರು.

ಸಂಭವನೀಯ ಶಿಕ್ಷೆಗಳು:

ICC ನಿಯಮಗಳ ಪ್ರಕಾರ, ಚೆಂಡು ವಿರೂಪಗೊಳಿಸುವುದು ಗಂಭೀರ ಅಪರಾಧವಾಗಿದೆ. ಒಂದು ವೇಳೆ ಆರೋಪ ಸಾಬೀತಾದಲ್ಲಿ ಆಫ್ರಿದಿ ಅವರಿಗೆ ಈ ಕೆಳಗಿನ ಶಿಕ್ಷೆಗಳಾಗುವ ಸಾಧ್ಯತೆಯಿದೆ:

  • ಪಂದ್ಯದ ಶುಲ್ಕದಲ್ಲಿ ಶೇ. 50 ರಿಂದ 100 ರಷ್ಟು ದಂಡ ವಿಧಿಸಬಹುದು.
  • ಕನಿಷ್ಠ 2 ರಿಂದ 4 ಸಸ್ಪೆನ್ಷನ್ ಪಾಯಿಂಟ್‌ಗಳನ್ನು ನೀಡಬಹುದು. ಇದರರ್ಥ ಅವರು ಮುಂದಿನ ಕೆಲವು ಪಂದ್ಯಗಳಿಂದ (ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್ ಅಥವಾ ಇಂಗ್ಲೆಂಡ್ ಸರಣಿ) ಹೊರಗುಳಿಯಬೇಕಾಗುತ್ತದೆ.

ಪುನರಾವರ್ತಿತ ವರ್ತನೆ:

ಇತ್ತೀಚೆಗಷ್ಟೇ ಪಿಎಸ್ಎಲ್ (PSL) ಪಂದ್ಯದಲ್ಲೂ ಇವರ ಮೇಲೆ ಇಂತಹದ್ದೇ ಆರೋಪ ಕೇಳಿ ಬಂದಿದ್ದರಿಂದ, ಐಸಿಸಿ ಇದನ್ನು ಕೇವಲ ಆಕಸ್ಮಿಕ ಎಂದು ಪರಿಗಣಿಸದೇ, ಉದ್ದೇಶಪೂರ್ವಕ ಕೃತ್ಯ ಎಂದು ಪರಿಗಣಿಸುವ ಸಾಧ್ಯತೆ ಇದೆ. ಇದು ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ನಾನು ಹೇಳಿದ್ದು ಹಂಗಲ್ಲ, ಹಿಂಗೆ: ಎಸ್​. ಬದರಿನಾಥ್ ಸ್ಪಷ್ಟನೆ!

ಮುಂದಿನ ಪ್ರಕ್ರಿಯೆ ಏನು?

ಪಂದ್ಯ ಮುಗಿದ ನಂತರ ಮ್ಯಾಚ್ ರೆಫರಿ ಅವರು ವಿಡಿಯೋ ಪುರಾವೆಗಳನ್ನು ಮತ್ತೊಮ್ಮೆ ಪರಿಶೀಲಿಸಿ ಶಾಹೀನ್ ಅವರ ವಿಚಾರಣೆ ನಡೆಸಲಿದ್ದಾರೆ. ಒಂದು ವೇಳೆ ಅವರು ತಪ್ಪೊಪ್ಪಿಕೊಂಡರೆ ಶಿಕ್ಷೆ ತಕ್ಷಣ ಘೋಷಣೆಯಾಗುತ್ತದೆ, ಇಲ್ಲದಿದ್ದರೆ ಶಿಸ್ತು ಸಮಿತಿಯ ಮುಂದೆ ವಿಚಾರಣೆ ನಡೆಯಲಿದೆ.

Source link

NTPC Recruitment 2026: ಎನ್‌ಟಿಪಿಸಿ ನೇಮಕಾತಿ; ಸಹಾಯಕ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ; ಲಕ್ಷದವರೆಗೆ ಸಿಗಲಿದೆ ವೇತನ! – Kannada News | NTPC Assistant Officer Recruitment 2026: Apply Online for 20 Posts Before May 21st!

ಎನ್‌ಟಿಪಿಸಿ ನೇಮಕಾತಿImage Credit source: gemini ai

ಭಾರತದ ಪ್ರಮುಖ ಇಂಧನ ಕಂಪನಿಯಾದ ಎನ್‌ಟಿಪಿಸಿ (NTPC) ಲಿಮಿಟೆಡ್, ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಸಹಾಯಕ ಅಧಿಕಾರಿ (Assistant Officer) ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಈ ಕಂಪನಿಯಲ್ಲಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ ಮತ್ತು ಒಟ್ಟು ಸಂಖ್ಯೆ:

ಈ ನೇಮಕಾತಿ ಅಧಿಸೂಚನೆಯ ಅಡಿಯಲ್ಲಿ ಒಟ್ಟು 20 ಸಹಾಯಕ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಅತ್ಯುತ್ತಮ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದ್ದು, ಮಾಸಿಕ 30,000 ರಿಂದ 1,20,000 ರೂ. ವರೆಗೆ ಸಂಬಳ ದೊರೆಯಲಿದೆ. ಇದರೊಂದಿಗೆ ಕೇಂದ್ರ ಸರ್ಕಾರದ ನಿಯಮಗಳ ಅನ್ವಯ ಇತರೆ ಸವಲತ್ತುಗಳು ಮತ್ತು ಭತ್ಯೆಗಳು ಸಹ ಸಿಗಲಿವೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ. 60ರಷ್ಟು ಅಂಕಗಳೊಂದಿಗೆ ಸಂಬಂಧಿತ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪೂರೈಸಿರಬೇಕು. ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 30 ವರ್ಷಗಳಾಗಿರಬೇಕು. ಮೀಸಲಾತಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ (SC/ST/OBC/PWD) ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.

ಇದನ್ನೂ ಓದಿ: ಇನ್ಫೋಸಿಸ್‌ನಿಂದ ಭರ್ಜರಿ ಉದ್ಯೋಗಾವಕಾಶ; 20,000 ಫ್ರೆಶರ್ಸ್‌ ನೇಮಕಾತಿ ಘೋಷಣೆ

ಅರ್ಜಿ ಶುಲ್ಕದ ವಿವರ:

ನೇಮಕಾತಿ ಪ್ರಕ್ರಿಯೆಯಲ್ಲಿ ಸಾಮಾನ್ಯ (General), ಒಬಿಸಿ (OBC) ಮತ್ತು ಇಡಬ್ಲ್ಯೂಎಸ್ (EWS) ವರ್ಗದ ಅಭ್ಯರ್ಥಿಗಳಿಗೆ 300ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಆದರೆ, ಎಸ್‌ಸಿ (SC), ಎಸ್‌ಟಿ (ST), ವಿಕಲಚೇತನ (PWD) ಮತ್ತು ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ:

ಅರ್ಹ ಅಭ್ಯರ್ಥಿಗಳು ಎನ್‌ಟಿಪಿಸಿಯ ಅಧಿಕೃತ ಕೆರಿಯರ್ ಪೋರ್ಟಲ್ ಆದ careers.ntpc.co.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಪೂರ್ಣವಾಗಿ ಓದಿ ಅರ್ಹತೆಯನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೇ 21 ಕೊನೆಯ ದಿನಾಂಕವಾಗಿರುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೈಲ ಶೋಧಕರಿಗೆ ರಾಯಲ್ಟಿ ರಿಯಾಯಿತಿ; ಇಂಧನ ಕೊರತೆ ಕಡಿಮೆ ಮಾಡಲು ಸರ್ಕಾರ ಕಸರತ್ತು – Kannada News | Boost to India’s Energy Self Reliance: Govt Slashes Oil/Gas Exploration Royalties

ನವದೆಹಲಿ, ಮೇ 12: ಭಾರತದ ಇಂಧನ ಅಗತ್ಯಗಳಿಗಾಗಿ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ದೇಶೀಯವಾಗಿ ಕಚ್ಚಾ ತೈಲ ಹಾಗೂ ಅನಿಲ ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ತೈಲ ಮತ್ತು ಅನಿಲದ ಪರಿಶೋಧನೆ ಹಾಗೂ ಉತ್ಪಾದನೆಯ ಮೇಲೆ ಕಂಪನಿಗಳು ಪಾವತಿಸಬೇಕಾದ ರಾಯಲ್ಟಿ ದರಗಳನ್ನು (ರಾಯಧನ) ಕಡಿಮೆ ಮಾಡಿದೆ. ವಿಶೇಷವಾಗಿ ಕಠಿಣ ಭೌಗೋಳಿಕ ಪ್ರದೇಶಗಳಲ್ಲಿ (Deepwater and Ultra-deepwater blocks) ನಡೆಯುವ ಉತ್ಪಾದನೆಗೆ ಈ ರಿಯಾಯಿತಿ ಅನ್ವಯಿಸಲಿದೆ.

ಪ್ರಸ್ತುತ ಭಾರತವು ತನ್ನ ಕಚ್ಚಾ ತೈಲದ ಅಗತ್ಯತೆಯ ಶೇ. 85ಕ್ಕಿಂತ ಹೆಚ್ಚು ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ದೇಶದ ಒಳಗೇ ಉತ್ಪಾದನೆ ಹೆಚ್ಚಿಸುವ ಮೂಲಕ ಈ ಆಮದು ಪ್ರಮಾಣವನ್ನು ತಗ್ಗಿಸುವುದು ಮತ್ತು ವಿದೇಶಿ ವಿನಿಮಯವನ್ನು ಉಳಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ.

ಇದನ್ನೂ ಓದಿ: ಇಂಧನ ಬಿಕ್ಕಟ್ಟು; ವರ್ಕ್ ಫ್ರಂ ಹೋಂ, ಪೆಟ್ರೋಲ್ ಖರೀದಿಮಿತಿ ಇತ್ಯಾದಿ ಕ್ರಮ ಜಾರಿಯಲ್ಲಿರುವ ದೇಶಗಳು

ರಾಯಲ್ಟಿ ಕಡಿತದಿಂದಾಗಿ ಒಎನ್‌ಜಿಸಿ (ONGC) ಮತ್ತು ರಿಲಾಯನ್ಸ್‌ನಂತಹ ದೊಡ್ಡ ಕಂಪನಿಗಳಿಗೆ ಹೆಚ್ಚಿನ ಲಾಭ ಸಿಗಲಿದೆ. ಇದು ಹೊಸ ತೈಲ ಬಾವಿಗಳ ಪತ್ತೆಗಾಗಿ ಹೆಚ್ಚಿನ ಹೂಡಿಕೆ ಮಾಡಲು ಕಂಪನಿಗಳಿಗೆ ಪ್ರೇರಣೆ ನೀಡುತ್ತದೆ.

ಉತ್ಪಾದನಾ ವೆಚ್ಚ ಕಡಿಮೆಯಾಗುವುದರಿಂದ ದೀರ್ಘಾವಧಿಯಲ್ಲಿ ದೇಶದ ಇಂಧನ ಭದ್ರತೆ ಬಲಗೊಳ್ಳಲಿದೆ. ಅಲ್ಲದೆ, ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದಾಗ ದೇಶದ ಆರ್ಥಿಕತೆಯ ಮೇಲೆ ಬೀರುವ ಪರಿಣಾಮವನ್ನು ಇದು ತಗ್ಗಿಸಲಿದೆ.

ತೈಲ ಪರಿಶೋಧನೆ ಅಥವಾ ಆಯಿಲ್ ಎಕ್ಸ್​ಪ್ಲೋರೇಶನ್ ಅತಿ ಹೆಚ್ಚು ಅಪಾಯ ಮತ್ತು ಹೆಚ್ಚಿನ ಬಂಡವಾಳ ಬೇಡುವ ಕ್ಷೇತ್ರವಾಗಿದೆ. ಸರ್ಕಾರದ ಈ ತೆರಿಗೆ ವಿನಾಯಿತಿ ಕ್ರಮವು ಖಾಸಗಿ ಮತ್ತು ವಿದೇಶಿ ಹೂಡಿಕೆದಾರರನ್ನು ಭಾರತದತ್ತ ಸೆಳೆಯಲು ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಭಾರತದ ಆರ್ಥಿಕ ಬೆಳವಣಿಗೆಯ ದರ ಶೇ. 6ಕ್ಕೆ ಇಳಿಕೆ? ಎಚ್‌ಎಸ್‌ಬಿಸಿ (HSBC) ಭವಿಷ್ಯವಾಣಿ ಮತ್ತು ಆರ್‌ಬಿಐ ಬಡ್ಡಿ ದರ ಏರಿಕೆ ಸಾಧ್ಯತೆ

ಕಳೆದ ವರ್ಷ ಸರ್ಕಾರವು ಓಆರ್​ಡಿ (ತೈಲಬಾವಿ ನಿಯಂತ್ರಕ ಮತ್ತು ಅಭಿವೃದ್ಧಿ) ಕಾಯ್ದೆ ಮತ್ತು ಪಿಎನ್​ಜಿ ನಿಯಮಗಳಿಗೆ ತಿದ್ದುಪಡಿ ತಂದಿತ್ತು. ತೈಲ ಕ್ಷೇತ್ರದಲ್ಲಿ ಹೂಡಿಕೆದಾರರಿಗೆ ಅನುಕೂಲವಾಗುವ ಸುಧಾರಣೆಗಳು ಈ ಕಾಯ್ದೆಯಲ್ಲಿವೆ. ಒಟ್ಟಾರೆಯಾಗಿ, ‘ಆತ್ಮನಿರ್ಭರ ಭಾರತ’ ಯೋಜನೆಯಡಿಯಲ್ಲಿ ಇಂಧನ ಕ್ಷೇತ್ರದಲ್ಲಿ ಸ್ವಯಂ ಅವಲಂಬನೆ ಸಾಧಿಸಲು ಈ ಕ್ರಮವು ದಿಕ್ಸೂಚಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹಿಂದಿ ‘ದೃಶ್ಯಂ 3’ ಮಲಯಾಳಂಗಿಂತ ಸಾಕಷ್ಟು ಭಿನ್ನ: ಬಿಡುಗಡೆಯಲ್ಲಿ ಗೊಂದಲ – Kannada News | Hindi Drishyam 3 will be very different from Malayalam Drishyam 3

ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ಸಸ್ಪೆನ್ಸ್ ಥ್ರಿಲ್ಲರ್ ‘ದೃಶ್ಯಂ’. ಮೋಹನ್​​ಲಾಲ್ (Mohanlal) ನಟಿಸಿ ಜೀತು ಜೋಸೆಫ್ ನಿರ್ದೇಶನ ಮಾಡಿದ್ದ ಈ ಸಿನಿಮಾ ಭಾರತದ ಬೇರೆ ಬೇರೆ ಭಾಷೆಗಳು ಸೇರಿದಂತೆ ಹಲವು ವಿದೇಶಿ ಭಾಷೆಗಳಲ್ಲಿಯೂ ರೀಮೇಕ್ ಆಗಿ ಬಹುತೇಕ ಎಲ್ಲೆಡೆ ಸೂಪರ್ ಹಿಟ್ ಆಯ್ತು. ಬಳಿಕ ‘ದೃಶ್ಯಂ 2’ ಸಿನಿಮಾ 2022 ರಲ್ಲಿ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಯ್ತು. ಈ ಸಿನಿಮಾದ ರೀಮೇಕ್ ಅನ್ನು ಹಿಂದಿಯಲ್ಲಿ ಅಜಯ್ ದೇವಗನ್ ಮಾಡಿದ್ದರು. ಇದೀಗ ‘ದೃಶ್ಯಂ’ ಸಿನಿಮಾದ ಮೂರನೇ ಭಾಗ ಬಿಡುಗಡೆ ಆಗುತ್ತಿದೆ. ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಇದೇ ಸಿನಿಮಾ ಹಿಂದಿಗೂ ರೀಮೇಕ್ ಆಗುತ್ತಿದ್ದು, ಆದರೆ ಹಿಂದಿಯ ‘ದೃಶ್ಯಂ 3’, ಮಲಯಾಳಂನ ‘ದೃಶ್ಯಂ 3’ ಸಿನಿಮಾಕ್ಕಿಂತಲೂ ಬಹಳ ಭಿನ್ನವಾಗಿರಲಿದೆ ಎಂದು ಚಿತ್ರತಂಡ ಹೇಳಿದೆ.

ಮಲಯಾಳಂ ರೀತಿಯೇ ಹಿಂದಿಯಲ್ಲಿಯೂ ಸಹ ‘ದೃಶ್ಯಂ’ ಸಿನಿಮಾಗಳು ದೊಡ್ಡ ಹಿಟ್ ಆಗಿವೆ. ಮಲಯಾಳಂನಲ್ಲಿ ಮೋಹನ್​​ಲಾಲ್ ನಟಿಸಿದ್ದ ಪಾತ್ರಗಳಲ್ಲಿ ಹಿಂದಿಯಲ್ಲಿ ಅಜಯ್ ದೇವಗನ್ ನಟಿಸುತ್ತಾ ಬಂದಿದ್ದಾರೆ. ಮೊದಲ ಎರಡು ಸಿನಿಮಾಗಳನ್ನು ಮಲಯಾಳಂನಲ್ಲಿ ಇರುವಂತೆಯೇ ಯಥಾವತ್ತು ಕಾಪಿ ಮಾಡಿದ್ದ ಹಿಂದಿ ತಂಡ, ಈಗ ‘ದೃಶ್ಯಂ 3’ ಅನ್ನು ಭಿನ್ನವಾಗಿ ಪ್ರೆಸೆಂಟ್ ಮಾಡಲಿದ್ದಾರೆ. ಇದಕ್ಕೆ ಕಾರಣವೂ ಇದೆ.

ಮಲಯಾಳಂ ನಿರ್ದೇಶಕ ಮತ್ತು ‘ದೃಶ್ಯಂ’ ಸರಣಿಯ ಸೃಷ್ಟಿಕರ್ತ ಜೀತು ಜೋಸೆಫ್ ಹೇಳಿರುವಂತೆ, ‘ದೃಶ್ಯಂ 3’ ಕೌಟುಂಬಿಕ ಸಿನಿಮಾ ಆಗಿರಲಿದೆ. ಅಂದರೆ ಇದರಲ್ಲಿ ಸಸ್ಪೆನ್ಸ್ ಭಾಗ ತುಸು ಕಡಿಮೆ ಇರಲಿದೆ. ಆ ಒಂದು ಕೊಲೆಯಿಂದ ನಾಯಕ ಜಾರ್ಜ್ ಕುಟ್ಟಿಗೆ ಆದ ಸಮಸ್ಯೆಗಳು, ಅವನ ಕುಟುಂಬಕ್ಕೆ ಆದ ಸಮಸ್ಯೆಗಳ ಮೇಲೆ ಈ ಸಿನಿಮಾ ಗಮನ ಹರಿಸಲಿದೆ. ಆ ಮೂಲಕ ಈ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಗಿಂತಲೂ ಹೆಚ್ಚಾಗಿ ಎಮೋಷನಲ್ ಡ್ರಾಮಾ ಆಗಿರಲಿದೆ.

ಇದನ್ನೂ ಓದಿ:‘ಟಾಕ್ಸಿಕ್’ ಹಾದಿ ಹಿಡಿದ ಮೋಹನ್​​ಲಾಲ್ ನಟನೆಯ ‘ದೃಶ್ಯಂ 3’

ಆದರೆ ಇದು ಹಿಂದಿಯವರಿಗೆ ಬೇಕಾಗಿಲ್ಲ. ಅವರಿಗೆ ನಾಯಕನನ್ನು ವೈಭವೀಕರಿಸುವ, ಸಸ್ಪೆನ್ಸ್ ಥ್ರಿಲ್ಲರ್ ಕಟ್ಟಿಕೊಡುವ ಬಯಕೆ ಇದ್ದು, ಅದಕ್ಕೆ ತಕ್ಕಂತೆ ಮತ್ತು ಅಜಯ್ ದೇವಗನ್ ಅವರ ಮಾಸ್ ಇಮೇಜಿಗೆ ತಕ್ಕಂತೆ ಚಿತ್ರಕತೆಯನ್ನು ತಿದ್ದಿದ್ದಾರಂತೆ. ಸಿನಿಮಾದ ಅಂತ್ಯದಲ್ಲಿ ನಾಯಕ (ಹಿಂದಿಯಲ್ಲಿ ವಿಜಯ್ ಸಾಳಗಾಂವ್ಕರ್) ತನ್ನ ಕುಟುಂಬವನ್ನು ಬುದ್ಧಿವಂತಿಕೆಯಿಂದ ಕಾಪಾಡುವ ಕತೆ ಇರಲಿದೆಯಂತೆ. ಆದರೆ ಮಲಯಾಳಂ ‘ದೃಶ್ಯಂ 3’ ನಲ್ಲಿ ಭಿನ್ನವಾದ ಕತೆ ಇರಲಿದೆ.

‘ದೃಶ್ಯಂ 3’ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಸಿನಿಮಾ ಇದೇ ತಿಂಗಳು 21 ರಂದು ಬಿಡುಗಡೆ ಆಗಲಿದೆ. ಹಿಂದಿಯ ‘ದೃಶ್ಯಂ 3’ ಸಿನಿಮಾವನ್ನು ಅದೇ ಸಮಯಕ್ಕೆ ಬಿಡುಗಡೆ ಮಾಡುವ ಉದ್ದೇಶ ನಿರ್ಮಾಪಕರಿಗೆ ಇತ್ತು. ಆದರೆ ಮಲಯಾಳಂ ತಂಡದವರ ಜೊತೆಗಿನ ಭಿನ್ನಾಭಿಪ್ರಾಯ ಮತ್ತು ಒಪ್ಪಂದದ ಬಳಿಕ ಇದೀಗ ಹಿಂದಿ ಸಿನಿಮಾವನ್ನು ಅಕ್ಟೋಬರ್​ನಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಲ್ಲಂಗಡಿ ಹಣ್ಣಿಗೆ ಮತ್ತೊಂದು ಬಲಿ: ಛತ್ತೀಸ್‌ಗಢದಲ್ಲಿ 15 ವರ್ಷದ ಬಾಲಕ ಸಾವು; ಮೂವರು ಮಕ್ಕಳ ಸ್ಥಿತಿ ಗಂಭೀರ! – Kannada News | Chhattisgarh Food Poisoning: Boy Dies, 3 Ill After Consuming Cut Watermelon; Safety Alert

ಕಲ್ಲಂಗಡಿ ಹಣ್ಣಿಗೆ ಮತ್ತೊಂದು ಬಲಿImage Credit source: Pinterest

ಛತ್ತೀಸ್‌ಗಢ, ಮೇ 12: ಮುಂಬೈನಲ್ಲಿ ನಡೆದ ಕಲ್ಲಂಗಡಿ ಹಣ್ಣಿನ ದುರಂತದ ಬೆನ್ನಲ್ಲೇ, ಈಗ ಛತ್ತೀಸ್‌ಗಢದ ಜಾಂಜಗೀರ್-ಚಂಪಾದಲ್ಲಿ ಅಂತಹದ್ದೇ ಮತ್ತೊಂದು ಘಟನೆ ವರದಿಯಾಗಿದೆ. ಕತ್ತರಿಸಿ ಇಟ್ಟಿದ್ದ ಕಲ್ಲಂಗಡಿ ಹಣ್ಣನ್ನು ಸೇವಿಸಿದ 15 ವರ್ಷದ ಬಾಲಕ ಮೃತಪಟ್ಟಿದ್ದು, ಉಳಿದ ಮೂವರು ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ:

ಜಾಂಜಗೀರ್-ಚಂಪಾ ಜಿಲ್ಲೆಯ ಘುರ್ಕೋಟ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕನನ್ನು ಪೋಡಿ ದಲ್ಹಾ ಗ್ರಾಮದ ಅಖಿಲೇಶ್ ಧಿವರ್ ಎಂದು ಗುರುತಿಸಲಾಗಿದೆ. ಈತ ತನ್ನ ಸೋದರ ಮಾವನ ಮನೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಭಾಗವಹಿಸಲು ಬಂದಿದ್ದಾಗ ಈ ಘಟನೆ ಸಂಭವಿಸಿದೆ. ಮೃತನ ಜೊತೆಗೆ ಪಿಂಟು (12), ಹಿತೇಶ್ (13) ಮತ್ತು ಮತ್ತೊಬ್ಬ 4 ವರ್ಷದ ಬಾಲಕ ಕೂಡ ಹಣ್ಣನ್ನು ಸೇವಿಸಿದ್ದರು.

ದುರಂತಕ್ಕೆ ಕಾರಣವಾಯಿತೇ ದೀರ್ಘಕಾಲ ಇಟ್ಟಿದ್ದ ಹಣ್ಣು?

ಸೋಮವಾರ ಬೆಳಿಗ್ಗೆ ಕತ್ತರಿಸಿ ಇಟ್ಟಿದ್ದ ಕಲ್ಲಂಗಡಿ ಹಣ್ಣನ್ನು ಮಕ್ಕಳು ಸಂಜೆ ಸೇವಿಸಿದ್ದರು ಎಂದು ವರದಿಯಾಗಿದೆ. ಹಣ್ಣು ತಿಂದ ಕೆಲವೇ ಗಂಟೆಗಳಲ್ಲಿ ಮಕ್ಕಳಿಗೆ ವಾಂತಿ, ಭೇದಿ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಅಖಿಲೇಶ್‌ನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಆತ ಸಾವನ್ನಪ್ಪಿದ್ದಾನೆ. ಸದ್ಯ ಉಳಿದ ಮೂವರು ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಬಿರಿಯಾನಿ ತಿಂದ ನಂತರ ಕಲ್ಲಂಗಡಿ ಸೇವನೆ ಮಾರಕವೇ? ಮುಂಬೈ ಘಟನೆಯ ಬೆನ್ನಲ್ಲೇ ತಜ್ಞರು ನೀಡಿದ ಎಚ್ಚರಿಕೆ ಇಲ್ಲಿದೆ!

ವಿಷಾಹಾರದ ಶಂಕೆ, ತನಿಖೆಗೆ ಆದೇಶ:

ಕತ್ತರಿಸಿದ ಹಣ್ಣನ್ನು ದೀರ್ಘಕಾಲ ತೆರೆದಿಟ್ಟಿದ್ದರಿಂದ ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು ‘ಫುಡ್ ಪಾಯಿಸನಿಂಗ್’ (Food Poisoning) ಆಗಿರುವ ಸಾಧ್ಯತೆಯಿದೆ ಎಂದು ವೈದ್ಯರು ಶಂಕಿಸಿದ್ದಾರೆ. ಮಕ್ಕಳು ಕಲ್ಲಂಗಡಿ ಹಣ್ಣಿನ ಜೊತೆಗೆ ಕೋಳಿ ಮಾಂಸವನ್ನೂ ಸೇವಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ತನಿಖೆ ಮುಂದುವರಿದಿದೆ. ಜಿಲ್ಲಾಧಿಕಾರಿಗಳು ಘಟನೆಯ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.

ಹಣ್ಣುಗಳನ್ನು ಸೇವಿಸುವಾಗ ಜಾಗ್ರತೆ ಇರಲಿ:

ಬೇಸಿಗೆಯ ಸಮಯದಲ್ಲಿ ಕತ್ತರಿಸಿದ ಹಣ್ಣುಗಳನ್ನು, ವಿಶೇಷವಾಗಿ ರಸ್ತೆಬದಿಯಲ್ಲಿ ಅಥವಾ ದೀರ್ಘಕಾಲ ತೆರೆದಿಟ್ಟ ಹಣ್ಣುಗಳನ್ನು ತಿನ್ನುವುದು ಅತ್ಯಂತ ಅಪಾಯಕಾರಿ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ. ಹಣ್ಣುಗಳನ್ನು ಕತ್ತರಿಸಿದ ಕೂಡಲೇ ಸೇವಿಸುವುದು ಅಥವಾ ಸರಿಯಾಗಿ ಮುಚ್ಚಿಡುವುದು ಆರೋಗ್ಯದ ದೃಷ್ಟಿಯಿಂದ ಸುರಕ್ಷಿತ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:22 pm, Tue, 12 May 26

Source link

ಮೋದಿ ಮನವಿಗೆ ಸ್ಪಂದನೆ; ಪೆಟ್ರೋಲ್ ಉಳಿಸಲು ಸೈಕಲ್​ನಲ್ಲೇ ನ್ಯಾಯಾಲಯಕ್ಕೆ ಬಂದ ಹೈಕೋರ್ಟ್ ನ್ಯಾಯಮೂರ್ತಿ – Kannada News | Madhya Pradesh High Court judge rides cycle to Court after PM Modi’s appeal to save fuel

ನವದೆಹಲಿ, ಮೇ 12: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಇಂಧನ ಉಳಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮನವಿ ಮಾಡಿದ್ದರು. ಎಲೆಕ್ಟ್ರಿಕ್ ವಾಹನ, ಸರ್ಕಾರಿ ಸಾರಿಗೆಯನ್ನು ಬಳಸಲು ಕರೆನೀಡಿದ್ದರು. ಅವರ ಮನವಿಗೆ ದೇಶಾದ್ಯಂತ ಸಾಕಷ್ಟು ಉತ್ತಮ ಸ್ಪಂದನೆ ಬರುತ್ತಿದೆ. ಮಧ್ಯಪ್ರದೇಶದ ಹೈಕೋರ್ಟ್ ನ್ಯಾಯಾಧೀಶರು ಕೂಡ ಪ್ರಧಾನಿ ಮೋದಿಯ ಮನವಿಗೆ ಸ್ಪಂದಿಸಿ, ನ್ಯಾಯಾಲಯಕ್ಕೆ ಕಾರಿನ ಬದಲು ಸೈಕಲ್​ನಲ್ಲಿ ಆಗಮಿಸಿದ್ದಾರೆ. ಈ ವಿಡಿಯೋ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಅಮೆರಿಕ-ಇರಾನ್ ಯುದ್ಧದಿಂದಾಗಿ ನಡೆಯುತ್ತಿರುವ ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆ ಇಂಧನ ಉಳಿಸಲು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಮಾಡಿದ ಮನವಿಗೆ ಪ್ರತಿಕ್ರಿಯೆಯಾಗಿ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶೆ ನ್ಯಾಯಮೂರ್ತಿ ದ್ವಾರಕಾ ಧೀಶ್ ಬನ್ಸಾಲ್ ಇಂದು ನ್ಯಾಯಾಲಯಕ್ಕೆ ಸೈಕಲ್ ಸವಾರಿ ಮಾಡಿಕೊಂಡು ಆಗಮಿಸಿದ್ದಾರೆ. ಅವರ ಹಿಂದೆ ಭದ್ರತಾ ಸಿಬ್ಬಂದಿ ಕೂಡ ಸೈಕಲ್​ನಲ್ಲಿಯೇ ಆಗಮಿಸಿದ್ದಾರೆ.

ಜಬಲ್ಪುರ ಹೈಕೋರ್ಟ್ ಪೀಠದಲ್ಲಿ ನಿಯೋಜಿತರಾಗಿರುವ ನ್ಯಾಯಮೂರ್ತಿ ಬನ್ಸಾಲ್, ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ನ್ಯಾಯಾಲಯದ ಆವರಣಕ್ಕೆ ಸುಮಾರು 3 ಕಿಲೋಮೀಟರ್ ಸೈಕಲ್‌ನಲ್ಲಿ ಪ್ರಯಾಣಿಸಿದರು, ಅವರ ಜೊತೆಗೆ ನ್ಯಾಯಾಲಯದ ಸಿಬ್ಬಂದಿಯೂ ಇದ್ದರು.

ಇದನ್ನೂ ಓದಿ: ವರ್ಕ್ ಫ್ರಂ ಹೋಂ, ಆನ್​ಲೈನ್ ಕ್ಲಾಸ್, ಚಿನ್ನ ಬೇಡ, ಇಂಧನದ ಮಿತ ಬಳಕೆ; ಮತ್ತೊಮ್ಮೆ ಪ್ರಧಾನಿ ಮೋದಿ ಮನವಿ

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಉಳಿತಾಯ ಸೇರಿದಂತೆ ಇತರ ವಿಷಯಗಳ ಬಗ್ಗೆ ಮನವಿ ಮಾಡುವುದನ್ನು ನಾನು ಗಮನಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹೈಕೋರ್ಟ್‌ಗೆ ಸೈಕಲ್‌ನಲ್ಲಿ ಹೋಗಿ ಸಾಮಾನ್ಯ ಜನರಿಗೆ ಸಾಧ್ಯವಾದಾಗಲೆಲ್ಲಾ ಕಡಿಮೆ ದೂರಕ್ಕೆ ಪ್ರಯಾಣಿಸಲು ಸೈಕಲ್ ಬಳಸುವ ಸಂದೇಶ ನೀಡಬೇಕೆಂದು ನಾನು ಸೈಕಲ್​ನಲ್ಲೇ ಕೋರ್ಟ್​ಗೆ ತೆರಳಿದೆ ಎಂದು ನ್ಯಾಯಮೂರ್ತಿ ಬನ್ಸಾಲ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಅಕ್ಷರ್ ಪಟೇಲ್​ಗೆ 12 ಲಕ್ಷ ರೂ. ದಂಡ! – Kannada News | Axar Patel Fined 12 Lakh for Slow Over Rate Against PBKS

IPL 2026: ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ಭರ್ಜರಿ ಜಯ ಸಾಧಿಸಿದೆ. ಆದರೆ, ತಂಡದ ಗೆಲುವಿನ ಸಂತೋಷದ ನಡುವೆಯೇ ನಾಯಕ ಅಕ್ಷರ್ ಪಟೇಲ್‌ಗೆ (Axar Patel) ಐಪಿಎಲ್ ಆಡಳಿತ ಮಂಡಳಿಯು ಭಾರಿ ಮೊತ್ತದ ದಂಡ ವಿಧಿಸಿ ಶಾಕ್ ನೀಡಿದೆ.

12 ಲಕ್ಷ ರೂಪಾಯಿ ದಂಡ:

ಪಂದ್ಯದ ವೇಳೆ ನಿಗದಿತ ಸಮಯಕ್ಕೆ ಓವರ್‌ಗಳನ್ನು ಪೂರ್ಣಗೊಳಿಸದ ಕಾರಣ (Slow Over-rate) ಅಕ್ಷರ್ ಪಟೇಲ್‌ಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆಯ ಅಡಿಯಲ್ಲಿ ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಇದು ಈ ಸೀಸನ್‌ನಲ್ಲಿ ಡೆಲ್ಲಿ ತಂಡದ ಮೊದಲ ತಪ್ಪಾಗಿದೆ, ಆದ್ದರಿಂದ ಕೇವಲ ನಾಯಕನಿಗೆ ಮಾತ್ರ ದಂಡ ವಿಧಿಸಲಾಗಿದೆ.

ಇದನ್ನೂ ಓದಿ: ಪಾಕ್ ಆಟಗಾರನ ಕಳ್ಳಾಟ ಬಯಲು..!

ಐಪಿಎಲ್ ಸ್ಲೋಓವರ್​ ರೇಟ್ ನಿಯಮ:

  • ಐಪಿಎಲ್​ ನಿಯಮದ ಪ್ರಕಾರ, ಪ್ರತಿ ತಂಡಗಳು 20 ಓವರ್​ಗಳನ್ನು 1 ಗಂಟೆ 30 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಒಂದು ವೇಳೆ ಇದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಬೌಂಡರಿ ಲೈನ್​ನಿಂದ ಒಬ್ಬ ಫೀಲ್ಡರ್​ನನ್ನು ಕಡಿತ ಮಾಡಲಾಗುತ್ತದೆ.
  • ಈ ತಪ್ಪು ಮಾಡಿದ ಅಂದರೆ ನಿಗದಿತ ಸಮಯದೊಳಗೆ 20 ಓವರ್​ಗಳನ್ನು ಪೂರ್ಣಗೊಳಿಸದ ತಂಡದ ನಾಯಕನಿಗೆ ಪಂದ್ಯದ ಬಳಿಕ 12 ಲಕ್ಷ ರೂ., ದಂಡ ವಿಧಿಸಲಾಗುತ್ತದೆ.
  • ಇದೇ ತಪ್ಪನ್ನು 2ನೇ ಬಾರಿ ಪುನರಾವರ್ತಿಸಿದರೆ ನಾಯಕನಿಗೆ 24 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇದರ ಜೊತೆಗೆ ಪ್ಲೇಯಿಂಗ್ ಇಲೆವೆನ್​ನ ಎಲ್ಲಾ ಆಟಗಾರರಿಗೆ 6 ಲಕ್ಷ ಅಥವಾ ಪಂದ್ಯದ ಶುಲ್ಕದ 25% ದಂಡವನ್ನು ವಿಧಿಸಲಾಗುತ್ತದೆ
  • ಈ ತಪ್ಪನ್ನು ಮೂರನೇ ಬಾರಿ ಆವರ್ತಿಸಿದರೆ, ತಂಡದ ನಾಯಕನಿಗೆ 30 ಲಕ್ಷ ದಂಡ ವಿಧಿಸಲಾಗುತ್ತದೆ. ಅಲ್ಲದೆ ನಾಯಕನಿಗೆ ಡಿಮೆರಿಟ್ ಪಾಯಿಂಟ್ ನೀಡಲಾಗುತ್ತದೆ. ಹಾಗೆಯೇ ಪ್ಲೇಯಿಂಗ್ ಇಲೆವೆನ್​ನ 10 ಆಟಗಾರರಿಗೆ 12 ಲಕ್ಷ ಅಥವಾ ಅವರ ಪಂದ್ಯದ ಶುಲ್ಕದ 50% ದಂಡವನ್ನು ವಿಧಿಸಲಾಗುತ್ತದೆ.


ಇನ್ನು ನಾಯಕ ನಾಯಕನ ಖಾತೆಯಲ್ಲಿ ಡಿಮೆರಿಟ್ ಪಾಯಿಂಟ್‌ಗಳು ಒಂದು ನಿರ್ದಿಷ್ಟ ಮಿತಿಯನ್ನು (ಉದಾಹರಣೆಗೆ 3 ವರ್ಷಗಳಲ್ಲಿ 4 ಪಾಯಿಂಟ್ಸ್) ಮೀರಿದಾಗ ಮಾತ್ರ ಪಂದ್ಯದ ನಿಷೇಧ ಹೇರಬಹುದು. ಅಂದರೆ ಅತ್ಯಂತ ಗಂಭೀರ ಅಥವಾ ಅತಿ ಹೆಚ್ಚು ಬಾರಿ ತಪ್ಪು ಮಾಡಿದಾಗ ಮಾತ್ರ ನಾಯಕನನ್ನು ಒಂದು ಪಂದ್ಯದಿಂದ ನಿಷೇಧಿಸಲಾಗುತ್ತದೆ.

Source link

ಸಿನಿಮಾಗೂ ಮೊದಲೇ ‘ತಿಕ್ಲು ರಾಮ’ ಕಾದಂಬರಿ ಬಿಡುಗಡೆ ಮಾಡಿದ ಚಿತ್ರತಂಡ – Kannada News | Thiklu Rama Kannada novel released movie shooting in progress

ಟೈಟಲ್ ಕಾರಣದಿಂದ ಸುದ್ದಿಯಾದ ‘ತಿಕ್ಲು ರಾಮ’ (Thiklu Rama) ಸಿನಿಮಾದಲ್ಲಿ ಪರಿಸರಕ್ಕೆ ಸಂಬಂಧಿಸಿದ ಕಥೆ ಇರಲಿದೆ. ಇದು ಹೃದಯಸ್ಪರ್ಶಿ ಕಥೆ ಎಂದು ಚಿತ್ರತಂಡ ಹೇಳಿದೆ. ಇದು ಡಾ. ನಟರಾಜ ಅವರು ಬರೆದ ‘ತಿಕ್ಲು ರಾಮ’ ಕಾದಂಬರಿ ಆಧಾರಿತ ಸಿನಿಮಾ. ಈಗಾಗಲೇ ಈ ಸಿನಿಮಾಗೆ ಶೇಕಡ 40 ಭಾಗ ಶೂಟಿಂಗ್ ಮುಗಿದಿದೆ. ಈಗ ಕಾದಂಬರಿಯನ್ನು ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ‘ತಿಕ್ಲು ರಾಮ’ ಕಾದಂಬರಿ (Kannada Novel) ಬಿಡುಗಡೆ ಸಮಾರಂಭ ನಡೆಯಿತು. ಈ ವೇಳೆ ಚಿತ್ರತಂಡದವರು ಹಾಜರಿದ್ದರು.

ಬೆಂಗಳೂರಿನ ಖಾಸಗಿ ಮಾಲ್​​ನಲ್ಲಿ ಕಾದಂಬರಿ ಬಿಡುಗಡೆ ಸಮಾರಂಭ ಮಾಡಲಾಯಿತು. ಹಿರಿಯ ಗೀತಸಾಹಿತಿ ಡಾ. ದೊಡ್ಡರಂಗೇಗೌಡ, ನಟ-ನಿರ್ದೇಶಕ ಕೆ. ಸುಚೇಂದ್ರ ಪ್ರಸಾದ್, ಸಾಹಿತಿ ಮತ್ತು ನಿರ್ದೇಶಕ ಬಿ. ಶಿವಾನಂದ, ಡಾ. ಭರತ್ ಮುಂತಾದವರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ‘ತಿಕ್ಲು ರಾಮ’ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು.

ಈ ಸಿನಿಮಾಗೆ ಮಂಜು ಕವಿ ಅವರು ನಿರ್ದೇಶನ ಮಾಡುತ್ತಿದ್​ದಾರೆ. ಡಾ. ರಾಜವೀರ್ ಅವರು ನಾಯಕನಾಗಿ ನಟಿಸುತ್ತಿದ್ದಾರೆ. ಕರಿಷ್ಮ-ಶ್ರ್ಯಾವ್ಯ ಕಂಬೈನ್ಸ್ ಬ್ಯಾನರ್ ಮೂಲಕ ಶ್ರುತಿ ಜಿ.ಬಿ. ಮತ್ತು ಕೋಮಲ ನಟರಾಜು ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸುಚೇಂದ್ರ ಪಸ್ರಾದ್, ಜಹಾಂಗೀರ್, ಚೈತ್ರಾ ರಾಮ್, ಗಿರೀಶ್, ವಿನೋದ್ ಪವಿತ್ರಾ, ನಿಖಿತಾ ಸ್ವಾಮಿ, ಶ್ರಾವ್ಯ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

‘ತಿಕ್ಲು ರಾಮ’ ಕಾದಂಬರಿ ಬಿಡುಗಡೆ ವೇಳೆ ನಿರ್ದೇಶಕ ಮಂಜು ಕವಿ ಮಾತನಾಡಿದರು. ‘ಪುಸ್ತಕವನ್ನು ಪ್ರತಿಯೊಬ್ಬರು ಓದಬೇಕು. ಓದುವುದರಿಂದ ಖಂಡಿತ ಒಂದಷ್ಟು ಜನರು ಬದಲಾವಣೆ ಆಗ್ತಾರೆ. ಪರಿಸರದ ಬಗ್ಗೆ ಯಾವ ರೀತಿ ಕಾಳಜಿ ವಹಿಸಬೇಕು? ಪ್ರಕೃತಿ ನಮಗೆ ಏನೆಲ್ಲ ಕೊಟ್ಟಿದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ವರ್ಣನೆ ಮಾಡಲಾಗಿದೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ‘ತಿಕ್ಲು ರಾಮ’ ಸಿನಿಮಾದ ಶೀರ್ಷಿಕೆ ವಿವಾದ: ದೂರು ದಾಖಲಾದ ಬಳಿಕ ಟೈಟಲ್ ಬದಲಾವಣೆ?

ಸುಚೇಂದ್ರ ಪ್ರಸಾದ್ ಅವರು ಈ ಸಿನಿಮಾದಲ್ಲಿ ಶಾಸಕರಾಗಿ ಬಣ್ಣ ಹಚ್ಚುತ್ತಿದ್ದಾರೆ. ‘ಪುಸ್ತಕದಲ್ಲಿ ಗ್ರಾಮೀಣ ಸೊಗಡು ಇದೆ. ಓದುಗರಲ್ಲಿ ಪರಿಸರ ಕಾಳಜಿ ಬಗ್ಗೆ ಆಸಕ್ತಿ ತರಿಸುವಂತಿದೆ. ಇಂತಹ ಕೃತಿಗಳು ನಿರಂತವಾಗಿ ಹೊರಬರಲಿ’ ಎಂದು ಅವರು ಹೇಳಿದರು. ‘ತಿಕ್ಲು ರಾಮ ಕಾದಂಬರಿ ಚೆನ್ನಾಗಿದೆ. ಸಿನಿಮಾ ನೋಡಲು ಕಾತುರನಾಗಿದ್ದೇನೆ’ ಎಂದು ಡಾ. ದೊಡ್ಡರಂಗೇಗೌಡ ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಸಿಸ್ಟೆಂಟ್ ಡೈರೆಕ್ಟರ್ ಮಗ ಈಗ ತಮಿಳುನಾಡಿನ ಸುಲ್ತಾನ್: ದಳಪತಿ ವಿಜಯ್ ಸಾಧನೆಗೆ ದೊಡ್ಡಗೌಡರ ಸಲಾಂ! – Kannada News | Deve Gowda Hails CM Joseph Vijay’s Rise: A New Era for Tamil Nadu Politics

ಹಾಸನ, ಮೇ.12: ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ನಟ, ಟಿವಿಕೆ (TVK) ನಾಯಕ ಜೋಸೆಫ್ ವಿಜಯ್ ಅವರ ಸಾಧನೆಯನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಹಾಡಿ ಹೊಗಳಿದ್ದಾರೆ. ವಿಜಯ್ ಅವರು ತಮಿಳುನಾಡಿನ ಸಾಂಪ್ರದಾಯಿಕ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಯನ್ನು ಮೀರಿಸಿ ಬೆಳೆದಿರುವುದು ಸಾಮಾನ್ಯ ಸುದಿಯೇನಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೆ.ಕಾಮರಾಜ್, ಎಂಜಿಆರ್, ಕರುಣಾನಿಧಿ ಮತ್ತು ಜಯಲಲಿತಾ ಅವರಂತಹ ಮಹಾನ್ ನಾಯಕರ ಪ್ರಭಾವವನ್ನು ಮೀರಿ ವಿಜಯ್ ಇಂದು ತಮಿಳುನಾಡಿನ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. “ವಿಜಯ್ ಎಲ್ಲೇ ಹೋದರೂ 40 ರಿಂದ 50 ಲಕ್ಷ ಜನರು ಸೇರುತ್ತಾರೆ. ಒಬ್ಬ ಸಾಮಾನ್ಯ ಅಸಿಸ್ಟೆಂಟ್ ಡೈರೆಕ್ಟರ್ ಮಗ ಈ ಎತ್ತರಕ್ಕೆ ಬೆಳೆದಿರುವುದು ಅವರ ಕಠಿಣ ಪರಿಶ್ರಮಕ್ಕೆ ಸಾಕ್ಷಿ” ಎಂದು ಗೌಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ತಮಿಳುನಾಡು ಮತ್ತು ಕರ್ನಾಟಕದ ನಡುವೆ ಹಲವು ಸಮಸ್ಯೆಗಳಿವೆ (ಕಾವೇರಿ ವಿಚಾರ). ವಿಜಯ್ ಅವರೊಂದಿಗೆ ಕುಳಿತು ಮಾತನಾಡುವ ಮೂಲಕ ಆ ಸಮಸ್ಯೆಗಳನ್ನು ಬಗೆಹರಿಸುವ ಕಾಲ ಬರಬಹುದು” ಎಂದು ಅವರು ಆಶಾವಾದ ವ್ಯಕ್ತಪಡಿಸಿದರು. ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷವು ಡಿಎಂಕೆ ಬಿಟ್ಟು ಟಿವಿಕೆಗೆ ಬೆಂಬಲ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ಟಿಕೆಟ್ ಹಂಚಿಕೆ ವೇಳೆ ಸ್ಟಾಲಿನ್ ಮತ್ತು ಕಾಂಗ್ರೆಸ್ ನಡುವೆ ವ್ಯತ್ಯಾಸ ಬಂದಿರಬಹುದು, ಅದು ಅವರ ವೈಯಕ್ತಿಕ ವಿಚಾರ. ಸ್ಟಾಲಿನ್ ಏನು ಮಾಡಿದರು ಎಂದು ಚರ್ಚಿಸುವುದರಲ್ಲಿ ಈಗ ಅರ್ಥವಿಲ್ಲ” ಎಂದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link