All posts by nagaraj11081993

Live: ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ, ನೇರಪ್ರಸಾರ – Kannada News | AKSSA and BJP Protest in Dharwad: Students Demand Filling of Vacant govt Posts, Live Updates

ಧಾರವಾಡ, ಫೆಬ್ರವರಿ 24: ಧಾರವಾಡದಲ್ಲಿ ಖಾಲಿ ಇರುವ 2.75 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (AKSSA) ಬೃಹತ್ ಪ್ರತಿಭಟನೆ ನಡೆಸುತ್ತಿದೆ. ಪ್ರತಿಪಕ್ಷ ಬಿಜೆಪಿ ಸಹ ಪ್ರತಿಭಟನೆ ನಡೆಸುತ್ತಿದೆ. ಶಿಕ್ಷಣ, ಪೊಲೀಸ್, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಹುದ್ದೆಗಳನ್ನು ಭರ್ತಿ ಮಾಡುವಂತೆ ಪಕ್ಷವು ಒತ್ತಾಯಿಸಲಾಗಿದೆ.

ಪ್ರತಿಭಟನೆಯು ಧಾರವಾಡದ ಶ್ರೀನಗರ ವೃತ್ತದಿಂದ ಆರಂಭವಾಗಿ ಮಿಚಿಗನ್ ಕಾಂಪೌಂಡ್‌ನಲ್ಲಿ ಸಭೆಯೊಂದಿಗೆ ಅಂತ್ಯಗೊಳ್ಳಲಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಉಪನಾಯಕ ಅರವಿಂದ ಬೆಲ್ಲದ್ ಮತ್ತು ಛಲುವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿಭಟನೆಯ ನೇರ ಪ್ರಸಾರ ಇಲ್ಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯ್ ಪಾಲಕರು ರಶ್ಮಿಕಾ ಮಂದಣ್ಣಗೆ ಹಾಕಿದ ಷರತ್ತು ಏನು? – Kannada News | Vijay Deverakonda and Rashmika Mandanna Wedding: Parents Reveal Their Only Condition

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರ ವಿವಾಹ ಸಮೀಪಿಸುತ್ತಿದೆ. ಅವರ ವಿವಾಹವು ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದೆ. ಈ ಅದ್ದೂರಿ ವಿವಾಹದಲ್ಲಿ ಕುಟುಂಬ ಸದಸ್ಯರು, ಆಪ್ತರು ಮತ್ತು ಸಂಬಂಧಿಕರು ಮಾತ್ರ ಭಾಗವಹಿಸಲಿದ್ದಾರೆ ಎಂದು ತೋರುತ್ತದೆ. ಆದಾಗ್ಯೂ, ಮಾರ್ಚ್ 04 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ಆಯೋಜಿಸಲಾಗಿದೆ ಎಂದು ವರದಿಯಾಗಿದೆ. ಈಗ ವಿಜಯ್ ಪಾಲಕರು ರಶ್ಮಿಕಾಗೆ ಹಾಕಿದ ಷರತ್ತಿನ ಬಗ್ಗೆ ಚರ್ಚೆ ನಡೆದಿದೆ.

ಇಲ್ಲಿಯವರೆಗೆ ತಮ್ಮ ಪ್ರೀತಿ ಮತ್ತು ಮದುವೆಯ ಬಗ್ಗೆ ಮೌನವಾಗಿದ್ದ ವಿಜಯ್ ಮತ್ತು ರಶ್ಮಿಕಾ, ತಮ್ಮ ಅದ್ದೂರಿ ವಿವಾಹದ ಬಗ್ಗೆ ಅಧಿಕೃತ ಘೋಷಣೆಯನ್ನು ಮಾಡಿದರು. ತಮ್ಮ ಅಭಿಮಾನಿಗಳ ಕೋರಿಕೆಯ ಮೇರೆಗೆ ತಮ್ಮ ವಿವಾಹ ಸಮಾರಂಭಕ್ಕೆ ‘ವಿರೋಷ್’ ಎಂದು ಹೆಸರಿಟ್ಟಿದ್ದಾರೆ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ್ದಾರೆ. ಈ ಸಂದರ್ಭದಲ್ಲಿ, ವಿಜಯ್ ದೇವರಕೊಂಡ ಅವರ ಪೋಷಕರು ತಮ್ಮ ಭಾವಿ ಸೊಸೆ ಹೊಂದಿರಬೇಕಾದ ಗುಣಗಳ ಬಗ್ಗೆ ಮಾತನಾಡುತ್ತಿರುವ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ವಿಜಯ್ ನಟಿಸಿದ ಚಿತ್ರ ಒಂದರ ಸಕ್ಸಸ್​ ಮೀಟ್​​ ಅಲ್ಲಿ ನಿರೂಪಕಿ ಸುಮಾ ವಿಜಯ್ ಅವರ ಪೋಷಕರೊಂದಿಗೆ ಮಾತನಾಡುವಾಗ ಅವರ ಮದುವೆಯ ವಿಷಯವನ್ನು ಪ್ರಸ್ತಾಪಿಸಿದರು. ಸುಮಾ ವಿಜಯ್ ಅವರ ತಾಯಿ ಮಾಧವಿ ಅವರನ್ನು ಯಾವ ರೀತಿಯ ಸೊಸೆ ಬೇಕು ಎಂದು ಕೇಳಿದಾಗ, ಅವರು ಒಂದೇ ಒಂದು ಷರತ್ತು ಹೊಂದಿದ್ದಾರೆಂದು ಹೇಳಿದರು.

ಇದನ್ನೂ ಓದಿ: 2017 To 2026: ಆ ಒಂದು ಘಟನೆಯಿಂದ ಗಟ್ಟಿ ಆಯ್ತು ವಿಜಯ್ ದೇವರಕೊಂಡ-ರಶ್ಮಿಕಾ ಬಂಧ

‘ನಮ್ಮ ಮಗನನ್ನು ಚೆನ್ನಾಗಿ ನೋಡಿಕೊಳ್ಳುವ ಸೊಸೆ ಸಾಕು. ಅವಳು ಅವನನ್ನು ಬೇಷರತ್ತಾಗಿ ಪ್ರೀತಿಸಬೇಕು, ಅಷ್ಟೇ. ನಮ್ಮ ಮಗ ಚಿತ್ರರಂಗದಲ್ಲಿ ಇರುವುದರಿಂದ, ಅವಳು ಅವನನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು’ ಎಂದು ಮಾಧವಿ ಹೇಳಿದ್ದರು. ಅದರ ನಂತರ, ವಿಜಯ್ ಅವರ ತಂದೆ ಗೋವರ್ಧನ್ ರಾವ್ ಕೂಡ, ‘ಅವನು ಇಷ್ಟಪಡುವ ಹುಡುಗಿಯನ್ನು ಮದುವೆಯಾಗಬೇಕು. ನನಗೆ ಯಾವುದೇ ಆಕ್ಷೇಪಣೆ ಅಥವಾ ನಿರೀಕ್ಷೆಗಳಿಲ್ಲ. ಜಾತಿ ಅಥವಾ ಧರ್ಮದಂತಹ ಯಾವುದೇ ಕಾಳಜಿಯೂ ನನಗಿಲ್ಲ. ಅವನು ಭಾರತೀಯ ಹುಡುಗಿಯನ್ನು, ವಿಶೇಷವಾಗಿ ದಕ್ಷಿಣದ ಹುಡುಗಿಯನ್ನು ಮದುವೆಯಾದರೆ ನನಗೆ ತುಂಬಾ ಸಂತೋಷವಾಗುತ್ತದೆ’ ಎಂದು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೆಹಲಿಯ ಉತ್ತಮ್ ನಗರದಲ್ಲಿ ಮೆಟ್ರೋ ಮುಂದೆ ಹಾರಿ ಪ್ರಾಣ ಬಿಟ್ಟ ವ್ಯಕ್ತಿ, ಐದು ದಿನಗಳಲ್ಲಿ ಎರಡನೇ ಘಟನೆ – Kannada News | Second Metro Track Tragedy in Five Days Reported at Uttam Nagar

ನವದೆಹಲಿ, ಫೆಬ್ರವರಿ 24: ದೆಹಲಿಯ ಉತ್ತಮ್ ನಗರ ಪೂರ್ವ ಮೆಟ್ರೋ(Metro) ನಿಲ್ದಾಣದಲ್ಲಿ ಹಳಿ ಮೇಲೆ ಹಾರಿ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. 45 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ರಾಜಸ್ಥಾನದ ಕರೋಲಿ ಜಿಲ್ಲೆಯ ಹಂಡು ರಾಮ್ ಅವರ ಪುತ್ರ ಮಹಾರಾಜ್ ಸಿಂಗ್ ಎಂದು ಗುರುತಿಸಲಾಗಿದೆ. ಅವರ ಶವವನ್ನು ಹಳಿಯಿಂದ ಹೊರತೆಗೆದು ಡಿಡಿಯು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಮಹಾರಾಜ್ ಸಿಂಗ್ ಹಲವಾರು ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು ಮತ್ತು ಆರ್‌ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಘಟನೆಗೆ ಕೇವಲ ಒಂದು ದಿನ ಮೊದಲು ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅವರು ತಮ್ಮ ಅಣ್ಣನ ಮಗಳ ಮದುವೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಬಂದಿದ್ದರು. ಅವರು ಪತ್ನಿ, 18 ವರ್ಷದ ಒಬ್ಬ ಮಗಳು ಮತ್ತು 17 ಮತ್ತು 20 ವರ್ಷದ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಪೊಲೀಸರು CrPC ಸೆಕ್ಷನ್ 174 ರ ಅಡಿಯಲ್ಲಿ ವಿಚಾರಣೆ ಆರಂಭಿಸಿದ್ದಾರೆ. ಘಟನೆಯ ಸುತ್ತಲಿನ ಸಂದರ್ಭಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಐದು ದಿನಗಳಲ್ಲಿ ಉತ್ತಮ್ ನಗರ ಪೂರ್ವ ಮೆಟ್ರೋ ನಿಲ್ದಾಣದಲ್ಲಿ ನಡೆದ ಎರಡನೇ ಆತ್ಮಹತ್ಯೆ ಪ್ರಕರಣ ಇದಾಗಿದೆ.

ಮತ್ತಷ್ಟು ಓದಿ: ದೆಹಲಿ ಮೆಟ್ರೋ ಎದುರು ಹಾರಿ ಬಾಲಕ ಆತ್ಮಹತ್ಯೆ

ಮತ್ತೊಂದು ಘಟನೆ 

ವೈಯಕ್ತಿಕ ಸಮಸ್ಯೆಗಳಿಂದ ಬೇಸತ್ತು ಬಾಲಕನೊಬ್ಬ ದೆಹಲಿ ಮೆಟ್ರೋ(Delhi Metro) ಎದುರು ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿತ್ತು. ಇಂದು ಬೆಳಗ್ಗೆ ಪಶ್ಚಿಮ ದೆಹಲಿಯ ಉತ್ತಮ್ ನಗರ ಪೂರ್ವ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಬೆಳಗ್ಗೆ 11.7ಕ್ಕೆ ನಿಲ್ದಾಣ ನಿಯಂತ್ರಕರಿಂದ ವ್ಯಕ್ತಿಯೊಬ್ಬ ಹಳಿಗಳ ಮೇಲೆ ಹಾರಿದ ಬಗ್ಗೆ ಮಾಹಿತಿ ಬಂದಿತ್ತು. ದ್ವಾರಕಾ ಕಡೆಯಿಂದ ಬರುತ್ತಿದ್ದ ಮೆಟ್ರೋ ರೈಲು ಆತನ ಮೇಲೆ ಹರಿದಿದೆ. ಪೊಲೀಸರು ಬರುವ ಮೊದಲೇ ಮೃತದೇಹವನ್ನು ಹಳಿಗಳಿಂದ ತೆಗೆಯಲಾಗಿತ್ತು.

ಮೃತ ವ್ಯಕ್ತಿಯನ್ನು ನಜಾಫ್‌ಗಢ ನಿವಾಸಿ ಎಂದು ಗುರುತಿಸಲಾಗಿದೆ. ಆತ 12ನೇ ತರಗತಿ ಪೂರ್ಣಗೊಳಿಸಿದ್ದು, ಉತ್ತಮ್ ನಗರದ ಖಾಸಗಿ ಸಂಸ್ಥೆಯಲ್ಲಿ ಕೋಚಿಂಗ್ ತರಗತಿಗಳಿಗೆ ಹಾಜರಾಗುತ್ತಾ ಹೆಚ್ಚಿನ ಅಧ್ಯಯನಕ್ಕೆ ತಯಾರಿ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಿಂದಾಗಿ ನೀಲಿ ಮಾರ್ಗದಲ್ಲಿ ಮೆಟ್ರೋ ಸೇವೆಗಳು ಸಹ ಸ್ವಲ್ಪ ಸಮಯದವರೆಗೆ ಸ್ಥಗಿತಗೊಂಡಿದ್ದವು.

ಪ್ರಾಥಮಿಕ ತನಿಖೆಯಲ್ಲಿ ಆತ ವೈಯಕ್ತಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ. ಆತನ ತಂದೆ ಡಿಟಿಸಿಯಲ್ಲಿ ಗುತ್ತಿಗೆ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ, ಪೋಷಕರಿಗೆ ಆತನೊಬ್ಬನೇ ಆ ಎಂದು ಡಿಸಿಪಿ ಮೆಟ್ರೋ ಕುಶಾಲ್ ಪಾಲ್ ಸಿಂಗ್ ಹೇಳಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ರವಾನಿಸಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌ಎಸ್‌ಎಸ್) ಸೆಕ್ಷನ್ 194 ರ ಅಡಿಯಲ್ಲಿ ತನಿಖಾ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಶಿವಮೊಗ್ಗ ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ಕೊಲೆ ಪ್ರಕರಣ: 15 ಲಕ್ಷ ರೂ. ಪರಿಹಾರ ಘೋಷಿಸಿದ ಸರ್ಕಾರ – Kannada News | Karnataka Govt Announces Rs 15 Lakh Compensation in Shivamogga SSLC Student Sanketh Murder Case

ಶಿವಮೊಗ್ಗ, ಫೆಬ್ರವರಿ 24: ಶಿವಮೊಗ್ಗದಲ್ಲಿ (Shivamogga) ಕೊಲೆಯಾದ ಬಾಲಕ ಸಂಕೇತ್ ಕುಟುಂಬದವರಿಗೆ ರಾಜ್ಯ ಸರ್ಕಾರ 15 ಲಕ್ಷ ರೂ. ಪರಿಹಾರ ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದೂರವಾಣಿ ಮೂಲಕ ಪರಿಹಾರ ನೀಡುವಂತೆ ಸೂಚನೆ ನೀಡಿದ್ದು, ಅದರಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮೂಲಕ ಈ ಘೋಷಣೆ ಮಾಡಿಸಿದ್ದಾರೆ. ಪರಿಹಾರ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ‘ಅಪ್ರಾಪ್ತ ಬಾಲಕನ ಸಾವಿಗೆ ಸರ್ಕಾರದಿಂದ ಒಟ್ಟು 15 ಲಕ್ಷ ರೂ. ಪರಿಹಾರ ಮಂಜೂರು ಮಾಡಲಾಗಿದೆ. ಇದರಲ್ಲಿ 10 ಲಕ್ಷ ರೂ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಾಗೂ 5 ಲಕ್ಷ ರೂ. ಶಿಕ್ಷಣ ಇಲಾಖೆಯಿಂದ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಘಟನೆ ಬಳಿಕ ಜಿಲ್ಲೆಯಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಘಟನೆ ನಡೆದ ಬಡಾವಣೆಯಲ್ಲೂ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಜಾತ್ರೆ ಹಾಗೂ ಮುಂಬರುವ ಹಬ್ಬಗಳ ಹಿನ್ನೆಲೆ ಹೆಚ್ಚುವರಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಊರುಗಡೂರು ಭಾಗದಲ್ಲಿ ಔಟ್‌ಪೋಸ್ಟ್ ತೆರೆಯುವ ಮೂಲಕ ವಿಶೇಷ ಪೊಲೀಸ್ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಲ್ಲೆ ಮಾಡಿದ ವಿದ್ಯಾರ್ಥಿಗಳು ಗಾಂಜಾ ಸೇವಿಸಿದ್ದರೇ?


ಬಾಲಕ ಸಂಕೇತ್ ಮೇಲೆ ಹಲ್ಲೆ ಮಾಡಿದ ವಿದ್ಯಾರ್ಥಿಗಳು ಗಾಂಜಾ ಸೇವಿಸಿದ್ದರೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಶಿವಮೊಗ್ಗ ಎಸ್‌ಪಿ ನಿಖಿಲ್ ಭರವಸೆ ನೀಡಿದ್ದಾರೆ. ಏತನ್ಮಧ್ಯೆ, ಡ್ರಗ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶ ನೀಡಲಾಗಿದ್ದು, ಗಾಂಜಾ ಸೇವನೆ ಹಾಗೂ ಮಾರಾಟದ ವಿರುದ್ಧ ಸಮರ ಸಾರಲಾಗಿದೆ. ಈ ಪ್ರಕರಣದಲ್ಲೂ ಡ್ರಗ್ಸ್ ಸಂಪರ್ಕ ಕಂಡುಬಂದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಎಸ್‌ಪಿ ನಿಖಿಲ್ ಹೇಳಿದ್ದೇನು?

ಕೊಲೆ ಪ್ರಕರಣ ಕುರಿತು ಶಿವಮೊಗ್ಗ ಎಸ್‌ಪಿ ನಿಖಿಲ್ ಮಾಹಿತಿ ನೀಡಿದ್ದು, ಈಗಾಗಲೇ ಕೊಲೆ ಸಂಬಂಧ 7 ಅಪ್ರಾಪ್ತರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಕ್ರಿಕೆಟ್ ಆಟದ ವೇಳೆ ನಡೆದಿದ್ದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಗಿರೀಶ್ ಎಂಬಾತನ ಬಳಿ ಆರೋಪಿಗಳು ಕ್ರಿಕೆಟ್ ಆಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದಿನಿಂದಲೇ ಗಲಾಟೆ ನಡೆಯುತ್ತಿತ್ತು. ಸಂಕೇತ್ ಗಲಾಟೆ ಬಿಡಿಸಲು ತೆರಳಿದ್ದ ವೇಳೆ ಕೈಯಿಂದ ಗುದ್ದಿ ಹಲ್ಲೆ ನಡೆಸಿದ್ದು, ಅದರಿಂದ ಸಾವಾಗಿದೆ ಎಂದು ಎಸ್​ಪಿ ವಿವರಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಯ ಕೊಲೆ: ಅಸಲಿಗೆ ಅಲ್ಲಿ ನಡೆದಿದ್ದೇನು ಗೊತ್ತೇ? ಆಘಾತಕಾರಿ ಮಾಹಿತಿ ಬಯಲು

ಬಂಧಿತ ಅಪ್ರಾಪ್ತರ ಗಾಂಜಾ ಸೇವನೆ ಬಗ್ಗೆ ಪರೀಕ್ಷೆ ನಡೆಸಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ. ಊರುಗಡೂರು ಭಾಗದಲ್ಲಿ ವಿಶೇಷ ಬೀಟ್ ವ್ಯವಸ್ಥೆ ಮಾಡಲಾಗಿದ್ದು, ಔಟ್‌ಪೋಸ್ಟ್ ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಈ ದುರ್ಘಟನೆ ಜಿಲ್ಲೆಯಲ್ಲಿ ಆತಂಕ ಉಂಟುಮಾಡಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅರೆಬೆತ್ತಲೆ ಪ್ರತಿಭಟನೆಗೆ ಖರ್ಗೆ ಸಮರ್ಥನೆ: ದೇಶದ ಹಿತಕ್ಕಾಗಿ ಪ್ರೊಟೆಸ್ಟ್​​​​ ಎಂದ AICC ಅಧ್ಯಕ್ಷ – Kannada News | Mallikarjun Kharge Defends Youth Congress Protest at AI Summit: Condemns Arrests

ಮಲ್ಲಿಕಾರ್ಜುನ ಖರ್ಗೆImage Credit source: Tv9 Kannada

ಬೆಂಗಳೂರು, ಫೆಬ್ರವರಿ 24: ದೆಹಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಯ (AI Impact Summit) ಸಭಾಂಗಣದೊಳಗೆ ಶರ್ಟ್ ಬಿಚ್ಚಿ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯರ್ತರ ನಡೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮರ್ಥಿಸಿಕೊಂಡಿದ್ದಾರೆ. ಯೂತ್​ ಕಾಂಗ್ರೆಸ್​ ಮುಖಂಡರ ಬಂಧನವನ್ನು ಖಂಡಿಸುತ್ತೇನೆ ಎಂದಿರುವ ಖರ್ಗೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು ಸಹಜ. ದೇಶದ ಹಿತಕ್ಕಾಗಿ ಇಂತಹ ಪ್ರೊಟೆಸ್ಟ್​​ಗಳು ಆಗುತ್ತವೆ ಎಂದು ಹೇಳಿದ್ದಾರೆ. ಯೂತ್​​ ಕಾಂಗ್ರೆಸ್​​ ಕಾರ್ಯಕರ್ತರ ನಡೆಯನ್ನು ಕೆಲ ಕಾಂಗ್ರೆಸ್​​ ನಾಯಕರೇ ಖಂಡಿಸಿರುವ ನಡುವೆ ಮಲ್ಲಿಕಾರ್ಜುನ ಖರ್ಗೆ ಈ ಹೇಳಿಕೆ ಹುಬ್ಬೇರುವಂತೆ ಮಾಡಿದೆ.

ಖರ್ಗೆ ಕಿಡಿ


ಕಾಮನ್ ವೆಲ್ತ್ ಗೇಮ್​​ ವೇಳೆ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿರಲಿಲ್ವಾ? ಯೂತ್​​ ಕಾಂಗ್ರೆಸ್​​ನವರು ಗಮನ ಸೆಳೆಯುವ ನಿಟ್ಟಿನಲ್ಲಿ ಪ್ರೊಟೆಸ್ಟ್​​ ನಡೆಸಿದ್ದಾರೆ. ಯೂತ್​ ಕಾಂಗ್ರೆಸ್​ ಪ್ರತಿಭಟನೆ ಬಗ್ಗೆ ಮೋದಿ ಮಾತನಾಡಿರುವು ಮತ್ತು ಕಾರ್ಯಕರ್ತರ ಮೇಲಿನ ದೌರ್ಜನ್ಯವನ್ನು ಖಂಡಿಸೋದಾಗಿ ಖರ್ಗೆ ಹೇಳಿದ್ದಾರೆ. ಅಲ್ಲದೆ, ಅಮೆರಿಕ ಅಧ್ಯಕ್ಷ ಟ್ರಂಪ್​ ಹೇಳಿದ್ದನ್ನು ಪ್ರಧಾನಿ ಮೋದಿ ಕೇಳುತ್ತಿದ್ದು, ಅವರು ಸರೆಂಡರ್ ಆಗಿದ್ದಾರೆ ಅಂತಲೂ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಜಗತ್ತಿನ ಮುಂದೆ ಬೆತ್ತಲಾದ ಕಾಂಗ್ರೆಸ್; ಎಐ ಸಮಿಟ್​ನಲ್ಲಿ ಕಾಂಗ್ರೆಸ್ಸಿಗರ ಅರೆಬೆತ್ತಲೆ ಪ್ರತಿಭಟನೆಗೆ ಹಲವರ ಅಸಮಾಧಾನ

ಶಿಸ್ತಿನ ಪಾಠ ಮಾಡಿದ್ದ ‘ಕೈ’ ನಾಯಕಿ

ಯೂತ್​​ ಕಾಂಗ್ರೆಸ್​​ ಕಾರ್ಯಕರ್ತರ ವರ್ತನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೇರಿ ವಿಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದ ನಡುವೆ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಹಾಗೂ ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವಾ ಸ್ವಪಕ್ಷ ಕಾರ್ಯಕರ್ತರ ನಡೆಯನ್ನು ಖಂಡಿಸಿದ್ದರು. ಕಾರ್ಯಕರ್ತರಿಗೆ ಶಿಸ್ತಿನ ಪಾಠ ಮಾಡಿದ್ದ ಅವರು, ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಶಿಸ್ತು ಮತ್ತು ಸಭ್ಯತೆ ಅತ್ಯಂತ ಮುಖ್ಯ ಎಂದು ಹೇಳಿದ್ದಿದ್ದು ದೊಡ್ಡ ಸುದ್ದಿಯಾಗಿತ್ತು.

ಅಂದು ನಡೆದಿದ್ದೇನು?

ಭಾರತ್ ಮಂಟಪಂನಲ್ಲಿ ನಡೆದ ಎಐ ಶೃಂಗಸಭೆಯ ಸಂದರ್ಭ ಯುವ ಕಾಂಗ್ರೆಸ್ಸಿನ 10 ಮಂದಿ ನಾಯಕರು ಏಕಾಏಕಿ ತಾವು ತೊಟ್ಟಿದ್ದ ಶರ್ಟನ್ನು ಕಳಚಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಟ್ರಂಪ್ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.  ‘ಪ್ರಧಾನಿ ಮೋದಿ ರಾಜಿ ಮಾಡಿಕೊಂಡಿದ್ದಾರೆ’ ಎಂಬ ಸ್ಲೋಗನ್ ಹೊಂದಿರುವ ಟಿ-ಶರ್ಟ್‌ಗಳನ್ನು ಕೈಯಲ್ಲಿ ಹಿಡಿದು ಬೀಸುವ ಮೂಲಕ, ಜನರ ಗಮನ ಸೆಳೆಯುವ ಯತ್ನ ನಡೆದಿತ್ತು. ನೇಪಾಳದ ಜೆನ್‌ ಝಿ ಪ್ರತಿಭಟನೆಯಿಂದ ಪ್ರೇರಿತರಾದ ಕಾಂಗ್ರೆಸ್ ಕಾರ್ಯಕರ್ತರು ಎಐ ಶೃಂಗಸಭೆಯಲ್ಲಿ ಗಲಭೆ ಸೃಷ್ಟಿಸಲು ಪಿತೂರಿ ನಡೆಸಿದ್ದರು ಎಂಬ ವಿಚಾರ ಪೊಲೀಸ್ ತನಿಖೆ ವೇಳೆ ಬಯಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:40 pm, Tue, 24 February 26

Source link

ಯಶ್ ‘ಟಾಕ್ಸಿಕ್’ ಕಲೆಕ್ಷನ್ ಪ್ಲ್ಯಾನ್ ಹೇಗಿದೆ? ವಾರಕ್ಕೆ ಎಷ್ಟಾಗುತ್ತದೆ ಗಳಿಕೆ? – Kannada News | Yash starrer Toxic movie Box office prediction here is the calculation

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇವೆ. ಮಾರ್ಚ್ 19ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಬಿಡುಗಡೆ ಹಕ್ಕು ಮಾರಾಟ, ಡಿಜಿಟಲ್ ಹಕ್ಕು ಮಾರಾಟ ಇನ್ನಿತರೆಗಳನ್ನು ಇತ್ತೀಚೆಗಷ್ಟೆ ಚಿತ್ರತಂಡ ಮುಗಿಸಿದೆ. ‘ಟಾಕ್ಸಿಕ್’ ಸಿನಿಮಾದ ಪ್ರಚಾರಕ್ಕಾಗಿ ಯಶ್ ಇನ್ನೂ ಹೊರಬಂದಿಲ್ಲ ಆದರೂ ಸಹ ಈಗಾಗಲೇ ‘ಟಾಕ್ಸಿಕ್’ ಭಾರತದ ಅತ್ಯಂತ ನಿರೀಕ್ಷೆಯ ಸಿನಿಮಾ ಎನಿಸಿಕೊಂಡಿದೆ. ಪ್ರಚಾರವನ್ನು ಇನ್ನೂ ಆರಂಭಿಸದಿದ್ದರೂ ಸಹ ಸಿನಿಮಾದ ಯಶಸ್ಸಿಗೆ ದೊಡ್ಡ ಯೋಜನೆಯನ್ನೇ ಯಶ್ ಹಾಕಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಕೇವಲ ಒಂದು ವಾರದಲ್ಲೆ ಅಷ್ಟೂ ಬಜೆಟ್ ರಿಕವರಿ ಮಾಡಿ ದೊಡ್ಡ ಲಾಭವನ್ನೂ ಸಹ ದುಡಿದುಕೊಳ್ಳುವಂತೆ ಪ್ಲ್ಯಾನ್ ಮಾಡಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಪ್ರೀ ರಿಲೀಸ್ ಸೇಲ್ಸ್ ಅನ್ನು ಯಶ್ ಮತ್ತು ಕೆವಿಎನ್ ಅವರು ಅದ್ಧೂರಿಯಾಗಿ ಮಾಡಿದ್ದಾರೆ. ‘ಧುರಂಧರ್ 2’ ಸಿನಿಮಾ ಎದುರಾಳಿಯಾಗಿ ಬರುತ್ತಿದ್ದರೂ ಸಹ ‘ಟಾಕ್ಸಿಕ್’ ಸಿನಿಮಾವನ್ನು ಸುಮಾರು 5000 ದಿಂದ 6000 ಸ್ಕ್ರೀನ್​​ಗಳಲ್ಲಿ ಬಿಡುಗಡೆ ಮಾಡಲು ಯೋಜಿಸಿರುವುದು ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಭಾರಿ ದೊಡ್ಡ ಪರಿಣಾಮ ಬೀರಲಿದೆ. ‘ಧುರಂಧರ್ 2’ ಸಿನಿಮಾ ಇನ್ನೂ ಪ್ರೀ ರಿಲೀಸ್ ಅಥವಾ ಇನ್ನಿತರೆ ಯೋಜನೆ ಪ್ರಾರಂಭಿಸುವ ಮುನ್ನವೇ ‘ಟಾಕ್ಸಿಕ್’ ಸಿನಿಮಾ ಚಿತ್ರಮಂದಿರಗಳ ಬುಕಿಂಗ್ ವರೆಗೂ ಕೆಲಸ ಮುಗಿಸಿರುವುದು ಸಿನಿಮಾಕ್ಕೆ ಭಾರಿ ದೊಡ್ಡ ಮುನ್ನಡೆಯನ್ನು ಧಕ್ಕಿಸಿಕೊಟ್ಟಂತಾಗಿದೆ.

ಕಲೆಕ್ಷನ್ ಪ್ರಿಡಿಕ್ಷನ್ ವಿಚಾರಕ್ಕೆ ಬರುವುದಾದರೆ ಲೆಕ್ಕ ಸುಲಭವಿದೆ. ಚಿತ್ರತಂಡ 6000 ಸ್ಕ್ರೀನ್​​ಗಳಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ. ಒಂದೊಮ್ಮೆ ಕನಿಷ್ಟ 5000 ಸ್ಕ್ರೀನ್​​ಗಳಲ್ಲಿ ಬಿಡುಗಡೆ ಆದರೂ ಸಹ ಭಾರಿ ದೊಡ್ಡ ಮೊತ್ತವನ್ನೇ ಸಿನಿಮಾ ಗಳಿಸಿಕೊಳ್ಳಲಿದೆ. ಅದರ ಲೆಕ್ಕಾಚಾರ ಇಲ್ಲಿದೆ, ಒಂದು ಸ್ಕ್ರೀನ್​​ನಲ್ಲಿ ಸರಾಸರಿ 250 ಮಂದಿ ಸಿನಿಮಾ ನೋಡುತ್ತಾರೆ. ಒಂದು ಟಿಕೆಟ್​ನ ಸರಾಸರಿ ಬೆಲೆ ಕೇವಲ 200 ರೂಪಾಯಿಗಳು (ಅಸಲು ಬೆಲೆ ಇನ್ನೂ ಹೆಚ್ಚೇ ಇರಲಿದೆ) ಎಂದು ಲೆಕ್ಕ ಹಾಕಿಕೊಂಡರೆ ಒಂದು ಸ್ಕ್ರೀನಿನ ಒಂದು ಶೋಗೆ ಒಟ್ಟಾಗುವ ಮೊತ್ತ 50,000 ರೂಪಾಯಿಗಳು. ಅಲ್ಲಿಗೆ 5000 ಸ್ಕ್ರೀನ್​​ಗಳಿಗೆ ಒಂದು ಶೋಗೆ ಕಲೆಕ್ಟ್ ಆಗುವ ಮೊತ್ತ 25 ಕೋಟಿ ರೂಪಾಯಿಗಳು. ಅಲ್ಲಿಗೆ 5000 ಸ್ಕ್ರೀನ್​​ಗಳಲ್ಲಿ ದಿನಕ್ಕೆ ನಾಲ್ಕು ಶೋ ಮಾತ್ರವೇ ನಡೆದರೂ ಸಹ ದಿನದ ಗಳಿಕೆ 100 ಕೋಟಿ ರೂಪಾಯಿಗಳಾಗುತ್ತವೆ. ನೆನಪಿರಲಿ ಯಶ್ ಅವರ ‘ಕೆಜಿಎಫ್ 2’ ಸಿನಿಮಾ ಮೊದಲ ದಿನ 132 ಕೋಟಿಗೂ ಹೆಚ್ಚು ಗಳಿಕೆ ಮಾಡಿತ್ತು. ‘ಟಾಕ್ಸಿಕ್’ ಸಿನಿಮಾ ಅದಕ್ಕಿಂತಲೂ ಹೆಚ್ಚಿನ ಗಳಿಕೆಯನ್ನೇ ಮಾಡುವ ನಿರೀಕ್ಷೆ ಇದೆ.

ಇದನ್ನೂ ಓದಿ:ಯಶ್ ‘ಟಿಕೆಟ್’ ಲುಕ್ ಎಐ ಎಂದವರಿಗೆ ಸಿಕ್ತು ಉತ್ತರ; ಯಶ್ ಮೇಕೋವರ್ ನೋಡಿ

‘ಟಾಕ್ಸಿಕ್’ ಸಿನಿಮಾಕ್ಕೆ ಸುಮಾರು 500 ಕೋಟಿ ರೂಪಾಯಿ ಬಜೆಟ್ ಹಾಕಲಾಗಿದೆ ಎನ್ನಲಾಗುತ್ತಿದೆ. ಆದರೆ ಈ ಹಣ ಕೇವಲ ಮೂರು-ನಾಲ್ಕು ದಿನಗಳಲ್ಲೇ ಮರಳಿ ಬರಲಿದೆ. ಯಶ್​​ ಅವರ ಕ್ರೇಜ್ ಅದ್ಯಾವ ಮಟ್ಟಿಗಿದೆಯೆಂದರೆ ಮೊದಲ ಮೂರು ದಿನ ಸಿನಿಮಾ ಚೆನ್ನಾಗಿಲ್ಲವೆಂದರೂ ಹೌಸ್​​ಫುಲ್ ಆಗುವುದು ಪಕ್ಕಾ. ಅದು ಮಾತ್ರವೇ ಅಲ್ಲದೆ, ಸಿನಿಮಾದ ಆಡಿಯೋ ಹಕ್ಕುಗಳು, ಡಿಜಿಟಲ್ ಹಕ್ಕುಗಳು ಹಿಂದೆಂದೂ ಕೇಳಿರದ ಭಾರಿ ಮೊತ್ತಕ್ಕೆ ಮಾರಾಟ ಆಗುತ್ತಿವೆ. ಅಲ್ಲಿಗೆ ಸಿನಿಮಾದ ಒಟ್ಟು ಗಳಿಕೆ ಸುಲಭವಾಗಿ 1500 ಕೋಟಿ ದಾಟುವುದು ಖಾತ್ರಿ. ಒಂದೊಮ್ಮೆ ಸಿನಿಮಾ ಆವರೇಜ್​​ಗಿಂತಲೂ ತುಸುವೇ ಚೆನ್ನಾಗಿದ್ದರೂ ಸಾಕು ‘ದಂಗಲ್’, ‘ಬಾಹುಬಲಿ 2’ ದಾಖಲೆಗಳು ಸಹ ಮುರಿದು ಬೀಳುವುದು ಖಾತ್ರಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗಂಗಾರತಿ ಮೂಲಕ ನದಿ ತಿರುವು ಯೋಜನೆ ವಿರುದ್ಧ ಸತ್ಯಾಗ್ರಹ; ವಿಶಿಷ್ಟ ಕರೆ ನೀಡಿದ ಸ್ವರ್ಣವಲ್ಲಿ ಶ್ರೀಗಳು – Kannada News | Uttara Kannada River Diversion Project Swarnavalli Mutt Leads Gangarati Protest To Save Rivers

ಉತ್ತರ ಕನ್ನಡ ಜಿಲ್ಲೆಗೆ ಸದ್ಯ ನದಿ ತಿರುವು ಯೋಜನೆಯ ಭೂತ ಕಾಡುತ್ತಿದೆ. ಇಲ್ಲಿ ಹರಿಯುವ ವಿವಿಧ ನದಿ ಹಾಗೂ ಹಳ್ಳಗಳಿಗೆ ಡ್ಯಾಮ್ ಕಟ್ಟಿ, ಉತ್ತರ ಕರ್ನಾಟಕದ ಕಡೆಗೆ ನೀರು ತೆಗೆದುಕೊಂಡು ಹೋಗುವ ಯೋಜನೆ ಇದಾಗಿದೆ. ಇದಕ್ಕೆ ಸಾವಿರಾರು ಕೋಟಿ ರೂಪಾಯಿ ಸುರಿಯಲು ಸರ್ಕಾರ ಮುಂದಾಗಿದೆ. ಇದರಿಂದ ಪಶ್ಚಿಮಘಟ್ಟದ ನಾಶ ಖಚಿತ ಎಂಬ ಅಭಿಪ್ರಾಯ ತಜ್ಞರದ್ದು. ಆದಾಗ್ಯೂ ನಾವು ಯೋಜನೆ ಮಾಡಿಯೇ ತಿರುತ್ತೇವೆ ಎಂಬ ಹುಂಬುತನ ರಾಜಕಾಣಿಗಳದ್ದು. ಜನವರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಈ ಯೋಜನೆ ವಿರುದ್ಧ ಬೃಹತ್ ಪ್ರತಿಭಟನೆ ಮಾಡಲಾಯಿತು. 25 ಸಾವಿರಕ್ಕೂ ಅಧಿಕ ಜನರು ಸೇರಿ ಈ ಯೋಜನೆಯನ್ನು ವಿರೋಧಿಸಿದರು. ಈಗ ‘ಗಂಗಾರತಿ’ ಮೂಲಕ ಯೋಜನೆಯ ವಿರುದ್ಧ ಪ್ರತಿಭಟನೆ ಮಾಡಲು ಕರೆ ನೀಡಲಾಗಿದೆ.

ಶಿರಸಿಯ ಮುರೆಗಾರ್ ಜಲಪಾತಕ್ಕೆ (ಪಟ್ಟಣದ ಹಳ್ಳ) ಡ್ಯಾಂ ನಿರ್ಮಾಣ ಮಾಡುವ ಯೋಜನೆಯನ್ನು ಸರ್ಕಾರ ಹೊಂದಿದೆ. ಇದು ಬೇಡ್ತಿ–ಶರಾವತಿ ನದಿ ತಿರುವು ಯೋಜನೆಯ ಭಾಗವಾಗಿದೆ.  ಈ ಯೋಜನೆಗಳ ವಿರುದ್ಧ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ವಿಶಿಷ್ಟ ಕರೆ ನೀಡಿದ್ದಾರೆ. ಅದುವೇ  ನದಿ ಪೂಜೆ ಗಂಗಾರತಿ.

ಮುರೆಗಾರ್ ಜಲಪಾತದಲ್ಲಿ ಫೆಬ್ರವರಿ 23ರ ಸಂಜೆ ನದಿ ಪೂಜೆ ಗಂಗಾರತಿ ಮಾಡಲಾಯಿತು. ಗಂಗಾ ನದಿ ತೀರದಲ್ಲಿ ನಡೆಯುವಂತೆ ಇಲ್ಲಿಯ ನದಿಗಳ ನೀರಿಗೂ ಪೂಜೆ ನಡೆದವು. ಈ ರೀತಿ ಮಾಡುವುದರ ಹಿಂದಿನ ಕಾರಣವನ್ನು ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ವಿವರಿಸಿದರು.

‘ನದಿಗಳ ಬಗ್ಗೆ ವೇದಗಳಲ್ಲಿ ಬರೆಯಲಾಗಿದೆ. ನೀರಲ್ಲಿ ಎಲ್ಲ ದೇವತೆಗಳು ಇರುತ್ತಾರೆ. ನೀರು ಹಾಗೂ ನದಿ ಪೂಜ್ಯವಾದದ್ದು. ಯಾವುದು ಪೂಜ್ಯವೋ ಅದನ್ನು ಮನುಷ್ಯ ಸರಿಯಾಗಿ ಇಟ್ಟುಕೊಳ್ಳುತ್ತಾನೆ. ನದಿಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಎಂಬುದನ್ನು ಜಾಗೃತ ಮಾಡಲು ಈ ಪೂಜೆ. ನದಿಗಳು ಭಗವಂತನ ಇಚ್ಛೆಯಂತೆ ಹರಿಯುತ್ತಿವೆ. ಆದರೆ, ನದಿಗಳ ದಿಕ್ಕನ್ನು ಬದಲಿಸೋದು ಅಧರ್ಮ. ಪಾಪದ ಕೆಲಸ ಮಾಡಲು ಹೊರಡಲಾಗುತ್ತಿದೆ. ಹೀಗಾಗಿ ಧರ್ಮಪೀಠ ಅದನ್ನು ವಿರೋಧಿಸುತ್ತಿದೆ’ ಎಂದು ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳು ಹೇಳಿದರು.

‘ಈ ಪೂಜೆ ಹೊಸ ರೀತಿಯ ಸತ್ಯಾಗ್ರಹ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿ ಅವರು ಉಪವಾಸ ಸತ್ಯಾಗ್ರಹ ಮಾಡಿದರು. ಅದೇ ರೀತಿ ಈಗ ಪೂಜೆ ಮೂಲಕ ನಮ್ಮ ಸತ್ಯಾಗ್ರಹ ಆರಂಭಿಸಿದ್ದೇವೆ. ಮತ್ತೆ ಮತ್ತೆ ಪೂಜೆ ಮಾಡಿ ಯೋಜನೆಗೆ ವಿರೋಧ ಹೊರಹಾಕಬೇಕಿದೆ. ಇದು ನಮ್ಮ ಜನರಿಗೆ ಜಾಗೃತಿ ಹಾಗೂ ಯೋಜನೆ ಮಾಡುವವರಿಗೆ ವಿರೋಧವೂ ಹೌದು. ಎರಡನ್ನೂ ಒಟ್ಟಿಗೆ ಮಾಡುವ ಅಹಿಂಸಾತ್ಮಕ ಯೋಜನೆಯೇ ನದಿ ಪೂಜೆ’ ಎಂದರು ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ.

ಇದನ್ನೂ ಓದಿ: ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆ; ರಾಜಕಾರಣಿಗಳ ಆಸೆಗೆ ಪಶ್ಚಿಮ ಘಟ್ಟ ಬಲಿ?

‘ಉತ್ತರ ಭಾರತವನ್ನು ನೋಡಿ ನಾವು ಕಲಿಯಬೇಕಿದೆ. ಗಂಗಾರತಿ ಬಂದಿರೋದು ಉತ್ತರ ಭಾರತದಿಂದ. ಉತ್ತರ ಭಾರತದವರು ನದಿಯನ್ನು ಬಹುವಚನ ಕೊಟ್ಟು ಕರೆಯುತ್ತಾರೆ. ನದಿಗಳ ಬಗ್ಗೆ ಇರುವ ಶ್ರದ್ಧೆ ಹಾಗೂ ಗೌರವವನ್ನು ಇದು ತೋರಿಸುತ್ತದೆ’ ಎಂದರು ಅವರು.

ಇನ್ನು, ಪತ್ರಕ್ಕೆ ಸಹಿ ಮಾಡಿ ನದಿ ತಿರುವು ಯೋಜನೆಗೆ ವಿರೋಧ ಹೊರಹಾಕುವ ಚಳುವಳಿಗೂ ಚಾಲನೆ ಕೊಡಲಾಯಿತು. ಈ ಪತ್ರಗಳನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ ಆಗಲಿದೆ. ಈ ಮೂಲಕ ಸರ್ಕಾರಕ್ಕೆ ತಮ್ಮ ವಿರೋಧ ತೋರಿಸಬೇಕು ಎಂಬ ಆಶಯವನ್ನು ಇದು ಹೊಂದಿದೆ. ಈ ವೇಳೆ ಮಾತನಾಡಿದ ಅನಂತ್ ಹೆಗಡೆ ಅಶೀಸರ, ನೀರವಾರಿ ತಜ್ಞರ ಜೊತೆ ತೆರಳಿ ರಾಜ್ಯ ನೀರಾವರಿ ಇಲಾಖೆಯ ಅಧಿಕಾರಗಳ ಜೊತೆ ಮಾತನಾಡುವ ಆಲೋಚನೆ ಇದೆ ಎಂದು ಹೇಳಿದರು.

ಮತ್ತಷ್ಟು ಕರ್ನಾಟಕ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

Source link

Ranji Trophy final: ಫೈನಲ್ ಪಂದ್ಯ ಡ್ರಾ ಆದರೆ ಯಾರು ಚಾಂಪಿಯನ್? – Kannada News | If ranji final is draw who will win

ರಣಜಿ ಟೂರ್ನಿಯ 91ನೇ ಸೀಸನ್​ನ ಫೈನಲ್​ ಪಂದ್ಯ ಶುರುವಾಗಿದೆ. ಹುಬ್ಬಳ್ಳಿಯ ಕೆಎಸ್​ಸಿಎ ಮೈದಾನದಲ್ಲಿ ನಡೆಯುತ್ತಿರುವ ಈ ಬಾರಿಯ ಫೈನಲ್​ನಲ್ಲಿ ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಜಮ್ಮು-ಕಾಶ್ಮೀರ ತಂಡದ ನಾಯಕ ಪರಸ್ ಡೋಗ್ರಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಮೊದಲ ಇನಿಂಗ್ಸ್ ಆಡುತ್ತಿರುವ ಜಮ್ಮು-ಕಾಶ್ಮೀರ ತಂಡವು ಭೋಜನಾ ವಿರಾಮದ ವೇಳೆಗೆ 34 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 104 ರನ್​ ಕಲೆಹಾಕಿದೆ. ಎಚ್ಚರಿಕೆಯ ಬ್ಯಾಟಿಂಗ್​ಗೆ ಒತ್ತು ನೀಡಿರುವ ಕಾಶ್ಮೀರಿ ಪಡೆ ಮೊದಲ ಇನಿಂಗ್ಸ್​ನಲ್ಲಿ ಬೃಹತ್ ಮೊತ್ತ ಪೇರಿಸುವ ಇರಾದೆಯಲ್ಲಿದೆ.

ಹೀಗೆ ಬೃಹತ್ ಮೊತ್ತ ಪೇರಿಸಿ ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡರೆ ಯಾರಿಗೆ ಚಾಂಪಿಯನ್ ಪಟ್ಟ ಒಲಿಯಲಿದೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಈ ಕೆಳಗಿನಂತಿದೆ..

  • ರಣಜಿ ಟ್ರೋಫಿ ಫೈನಲ್ ಪಂದ್ಯವು ಡ್ರಾ ಆದಲ್ಲಿ, ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ  ಸಾಧಿಸಿದ ತಂಡವನ್ನು ವಿಜೇತ ಎಂದು ಘೋಷಿಸಲಾಗುತ್ತದೆ.
  • ಒಂದು ವೇಳೆ ಮೊದಲು ಬ್ಯಾಟ್ ಮಾಡುತ್ತಿರುವ ಜಮ್ಮು-ಕಾಶ್ಮೀರ ತಂಡವು ಮೊದಲ ಇನಿಂಗ್ಸ್​ನಲ್ಲಿ 400 ರನ್​ ಕಲೆಹಾಕಿ, ಕರ್ನಾಟಕ ತಂಡ ಮೊದಲ ಇನಿಂಗ್ಸ್​ನಲ್ಲಿ 399 ರನ್​ಗಳಿಸಿ ಪಂದ್ಯ ಡ್ರಾ ಆದರೆ, ಮೊದಲ ಇನಿಂಗ್ಸ್​ನಲ್ಲಿ 1 ರನ್​ಗಳ ಮುನ್ನಡೆ ಹೊಂದಿರುವ ಜಮ್ಮು-ಕಾಶ್ಮೀರ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.
  • ಜಮ್ಮು-ಕಾಶ್ಮೀರ ತಂಡ ಮೊದಲ ಇನಿಂಗ್ಸ್​ನಲ್ಲಿ 400 ರನ್​ಗಳಿಸಿ, ಕರ್ನಾಟಕ ಪ್ರಥಮ ಇನಿಂಗ್ಸ್​ನಲ್ಲಿ 401 ರನ್​ಗಳಿಸಿ ಪಂದ್ಯ ಡ್ರಾನಲ್ಲಿ ಅಂತ್ಯವಾದರೆ, ಮೊದಲ ಇನಿಂಗ್ಸ್​ನಲ್ಲಿ 1 ರನ್​ಗಳ ಮುನ್ನಡೆ ಹೊಂದಿರುವ ಕರ್ನಾಟಕ ತಂಡ ಚಾಂಪಿಯನ್ ಪಟ್ಟಕ್ಕೇರಲಿದೆ.

ರಣಜಿ ಟ್ರೋಫಿ ಫೈನಲ್ ಪಂದ್ಯದ ನಿಯಮಗಳು:

  • ಮೊದಲ ಇನಿಂಗ್ಸ್ ಮುನ್ನಡೆ: ಐದು ದಿನಗಳ ಆಟದ ನಂತರವೂ ಪಂದ್ಯವು ಯಾವುದೇ ಸ್ಪಷ್ಟ ಫಲಿತಾಂಶ ನೀಡದೆ ಡ್ರಾನಲ್ಲಿ ಅಂತ್ಯಗೊಂಡರೆ, ಯಾವ ತಂಡವು ತನ್ನ ಮೊದಲ ಇನಿಂಗ್ಸ್‌ನಲ್ಲಿ ಹೆಚ್ಚಿನ ರನ್ ಗಳಿಸಿರುತ್ತದೆಯೋ ಆ ತಂಡಕ್ಕೆ ಚಾಂಪಿಯನ್ ಪಟ್ಟ ಸಿಗುತ್ತದೆ.
  • ಮೊದಲ ಇನಿಂಗ್ಸ್ ಟೈ: ಒಂದು ವೇಳೆ ಮೊದಲ ಇನಿಂಗ್ಸ್ ಮೊತ್ತವೂ ಸಮನಾಗಿದ್ದರೆ ಅಥವಾ ಮೊದಲ ಇನಿಂಗ್ಸ್ ಪೂರ್ಣಗೊಳ್ಳದಿದ್ದರೆ, ಲೀಗ್ ಹಂತದಲ್ಲಿ ಹೆಚ್ಚಿನ ಅಂಕಗಳನ್ನು (Points) ಗಳಿಸಿದ ತಂಡವನ್ನು ವಿಜೇತ ಎಂದು ಪರಿಗಣಿಸಲಾಗುತ್ತದೆ.
  • ಹಿಂದಿನ ಇತಿಹಾಸ: ಕಳೆದ ವರ್ಷ (2024-25) ವಿದರ್ಭ ತಂಡವು ಕೇರಳ ವಿರುದ್ಧ ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಚಾಂಪಿಯನ್ ಆಗಿತ್ತು.

ಇದನ್ನೂ ಓದಿ: ಟೀಮ್ ಇಂಡಿಯಾ ಕೇವಲ 11 ಓವರ್​ಗಳಲ್ಲಿ ಪಂದ್ಯ ಮುಗಿಸಬೇಕು!

ಒಟ್ಟಾರೆಯಾಗಿ ಹೇಳುವುದಾದರೆ ಫೈನಲ್ ಪಂದ್ಯದ ಮೊದಲ ಇನಿಂಗ್ಸ್‌ನ ಪ್ರದರ್ಶನವು ಅತ್ಯಂತ ನಿರ್ಣಾಯಕವಾಗಿರುತ್ತದೆ. ಅದರಲ್ಲೂ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುತ್ತಿರುವ ಜಮ್ಮು-ಕಾಶ್ಮೀರ ತಂಡಕ್ಕೆ ಬೃಹತ್ ಮೊತ್ತ ಪೇರಿಸಲು ಉತ್ತಮ ಅವಕಾಶವಿದೆ. ಈ ಅವಕಾಶವನ್ನು ಬಳಸಿಕೊಂಡು ಬೃಹತ್ ಮೊತ್ತ ಪೇರಿಸಿದರೆ ಕರ್ನಾಟಕ ತಂಡ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಕರ್ನಾಟಕ ತಂಡವು ಜಮ್ಮು-ಕಾಶ್ಮೀರ ತಂಡವನ್ನು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿ ಮೊದಲ ಇನಿಂಗ್ಸ್​ನಲ್ಲಿ ಮುನ್ನಡೆ ಸಾಧಿಸುವುದು ಅತ್ಯಗತ್ಯ.

Source link

ಬಲ್ಡೋಟಾ ಕಾರ್ಖಾನೆ ವಿರುದ್ಧ ಸಿಡಿದ ರೈತರು: ಸರ್ಕಾರದ ಶವಯಾತ್ರೆ, ಜನಪ್ರತಿನಿಧಿಗಳಿಗೆ ತರಾಟೆ – Kannada News | Baldota Factory Expansion Sparks Large Scale Farmer Protest in Koppal

ಬೃಹತ್​​ ಪ್ರತಿಭಟನೆImage Credit source: Tv9 Kannada

ಕೊಪ್ಪಳ, ಫೆಬ್ರವರಿ 24: ಜಿಲ್ಲೆಯಲ್ಲಿ ಬಲ್ಡೋಟಾ ಕಾರ್ಖಾನೆಯ ವಿಸ್ತರಣೆಯನ್ನು ವಿರೋಧಿಸಿ ರೈತರು ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಕಾರ್ಖಾನೆಯಿಂದ ಹೊರಬರುವ ಹೊಗೆ ಮತ್ತು ಧೂಳಿನಿಂದಾಗಿ ತಮ್ಮ ಬೆಳೆಗಳು ಹಾಳಾಗುತ್ತಿವೆ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗವಿಮಠದ ಆವರಣದಿಂದ ಆರಂಭಗೊಂಡ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದೆ.

ರೈತರ ಆಕ್ರೋಶ


ಹಾಲಿವರ್ತಿ ಪ್ರದೇಶದ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಕಡಲೆ, ಮೆಕ್ಕೆಜೋಳ, ಜೋಳ ಸೇರಿದಂತೆ ಹಲವು ಬೆಳೆಗಳಿಗೆ ಕಾರ್ಖಾನೆಯ ಹೊಗೆಯಿಂದಾಗುವ ಹಾನಿಯನ್ನು ಪ್ರದರ್ಶಿಸಲು, ಹಾಳಾದ ಬೆಳೆಗಳನ್ನು ಎತ್ತಿನ ಬಂಡಿಗಳಲ್ಲಿ ಹೊತ್ತು ತಂದಿದ್ದಾರೆ. ಕಳೆದ ಒಂದು ವರ್ಷದಿಂದ ಈ ಸಮಸ್ಯೆ ಎದುರಿಸುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ದೂರಿದ್ದಾರೆ.

ಇದನ್ನೂ ಓದಿ: ಮತ್ತೆ‌ ಮುನ್ನಲೆಗೆ ಬಂದ ಬಲ್ಡೋಟಾ ಕಾರ್ಖಾನೆ ವಿವಾದ; ಹೋರಾಟಕ್ಕಿಳಿದ ರೈತರು

ಪ್ರತಿಭಟನಾ ಸ್ಥಳಕ್ಕೆ ತೊಟ್ಟಿಲು ಸಮೇತ ಆಗಮಿಸಿದ ಮಹಿಳೆಯರು ಕಾರ್ಖಾನೆಗಳ ಹೊಗೆಯಿಂದ ಮಕ್ಕಳಾಗುತ್ತಿಲ್ಲವೆಂದು ಖಾಲಿ ತೊಟ್ಟಿಲು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ಮಹಿಳೆಯರಿಗೆ ಗರ್ಭಪಾತವಾಗಿದೆ, ನಮಗೆ ಸಂತಾನವಿಲ್ಲ. ಮನೆಯಲ್ಲಿ ತೊಟ್ಟಿಲು ತೂಗೋಕೆ ಆಗುತ್ತಿಲ್ಲವೆಂದು ಕಿಡಿ ಕಾರಿದ್ದಾರೆ. ಮತ್ತೊಂದೆಡೆ ಆಕ್ಸಿಜನ್ ಮಾಸ್ಕ್ ಸಮೇತ ರೈತನೋರ್ವ ಪ್ರತಿಭಟನೆಗೆ ಆಗಮಿಸಿರೋದು ಗಮನ ಸೆಳೆದಿದೆ. ಆಕ್ಸಿಜನ್ ಮಾಸ್ಕ್ ಧರಿಸಿ ಹೋರಾಟದಲ್ಲಿ ಭಾಗಿಯಾಗಿರುವ ಹಿರೇಬಗನಾಳದ ರೈತ ಮಂಜುನಾಥ, ಕಾರ್ಖಾನೆಗಳಿಂದ ಬರುವ ಹೊಗೆಯಿಂದ ಉಸಿರಾಡಲು ಆಗುತ್ತಿಲ್ಲ ಎಂದು ದೂರಿದ್ದಾರೆ.

ರೈತರಿಂದ ಸರ್ಕಾರದ ಶವಯಾತ್ರೆ

ಟ್ರ್ಯಾಕ್ಟರ್​ಗಳಲ್ಲಿ ಆಗಮಿಸಿ ಪ್ರತಿಭಟನೆಯಲ್ಲಿ ರೈತರು ಭಾಗಿಯಾಗಿದ್ದು, ಕೊಪ್ಪಳದ ಬಸವೇಶ್ವರ ವೃತ್ತದಲ್ಲಿ ರೈತರಿಂದ ಸರ್ಕಾರದ ಶವಯಾತ್ರೆ ನಡೆಸಲಾಗಿದೆ. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಕೂಡ ಭಾಗಿಯಾಗಿದ್ದು, ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿವೆ.

ಜನಪ್ರತಿನಿಧಿಗಳಿಗೆ ತರಾಟೆ

ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗಿಯಾದ ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಸಂಸದ ರಾಜಶೇಖರ ಹಿಟ್ನಾಳ ಮತ್ತು ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್​​ರನ್ನು ರೈತರು ತರಾಟೆಗೆ ಪಡೆದ ಪ್ರಸಂಗವೂ ನಡೆದಿದೆ. ಕಾರ್ಖಾನೆ ವಿಸ್ತರಣೆ ಮಾಡುವಾಗ ಸುಮ್ಮನಿದ್ದು ಇಲ್ಲಿಗ್ಯಾಕೆ ಬಂದ್ರಿ ಎಂದು ಕೊಪ್ಪಳದ ಗಡಿಯಾರ ಕಂಬದ ಬಳಿ ಜನಪ್ರತಿನಿಧಿಗಳನ್ನು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

NCERT: ಎಂಟನೇ ತರಗತಿಯ ಹೊಸ ಪಠ್ಯದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಉಲ್ಲೇಖ – Kannada News | NCERT Class 8 Textbook Flags Judicial Corruption and Case Backlog as Key Issues

ನವದೆಹಲಿ, ಫೆಬ್ರವರಿ 24: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಸೋಮವಾರ 8 ನೇ ತರಗತಿಯ ಹೊಸ ಸಮಾಜ ವಿಜ್ಞಾನ ಪುಸ್ತಕವನ್ನು ಬಿಡುಗಡೆ ಮಾಡಿದೆ. ಹೊಸ ಪುಸ್ತಕವು ನ್ಯಾಯಾಂಗ(Judiciary)ದ ಪಾತ್ರವನ್ನು ವಿವರಿಸುವ, ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಮತ್ತು ಬಾಕಿ ಇರುವ ನ್ಯಾಯಾಲಯದ ಪ್ರಕರಣಗಳಂತಹ ಸವಾಲುಗಳನ್ನು ಪರಿಹರಿಸುವ ಹೊಸ ವಿಭಾಗವನ್ನು ಒಳಗೊಂಡಿದೆ. ಈ ವಿಷಯಗಳನ್ನು ಹಳೆಯ ಪುಸ್ತಕದಲ್ಲಿ ನೇರವಾಗಿ ಉಲ್ಲೇಖಿಸದ ಕಾರಣ ಈ ಬದಲಾವಣೆಯು ಮಹತ್ವದ್ದಾಗಿದೆ.

ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ ಎಂಬ ಅಧ್ಯಾಯದಲ್ಲಿ ಹೊಸ ಪುಸ್ತಕವು ನ್ಯಾಯಾಲಯಗಳು ಎದುರಿಸುತ್ತಿರುವ ಸವಾಲುಗಳನ್ನು ವಿವರಿಸುತ್ತದೆ. ನ್ಯಾಯಾಂಗದ ವಿವಿಧ ಹಂತಗಳಲ್ಲಿ ಭ್ರಷ್ಟಾಚಾರವು ಪ್ರಚಲಿತವಾಗಿದೆ ಎಂದು ಅದು ಸ್ಪಷ್ಟವಾಗಿ ಹೇಳುತ್ತದೆ. ನ್ಯಾಯಾಧೀಶರ ಕೊರತೆ, ಕಾನೂನು ಪ್ರಕ್ರಿಯೆಯ ಸಂಕೀರ್ಣತೆಗಳು ಮತ್ತು ನ್ಯಾಯಾಲಯಗಳಲ್ಲಿ ಸರಿಯಾದ ಮೂಲಸೌಕರ್ಯಗಳ ಕೊರತೆಯಂತಹ ಹಲವಾರು ಕಾರಣಗಳನ್ನು ಉಲ್ಲೇಖಿಸಿ, ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಾಕಿ ಇರುವುದನ್ನು ಪುಸ್ತಕವು ಎತ್ತಿ ತೋರಿಸುತ್ತದೆ.

ಹೊಸ ಪುಸ್ತಕವು ದೇಶದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಅಂದಾಜು ಅಂಕಿಅಂಶಗಳನ್ನು ಸಹ ಒದಗಿಸುತ್ತದೆ. ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಸುಮಾರು 81,000 ಪ್ರಕರಣಗಳು ಬಾಕಿ ಉಳಿದಿವೆ. ಏತನ್ಮಧ್ಯೆ, ಭಾರತದ ಹೈಕೋರ್ಟ್‌ಗಳಲ್ಲಿ ಸುಮಾರು 6,240,000 ಪ್ರಕರಣಗಳು ಬಾಕಿ ಉಳಿದಿವೆ.

ಮತ್ತಷ್ಟು ಓದಿ: ಅಮೆರಿಕ ಸುಪ್ರೀಂ ಕೋರ್ಟ್​ನಲ್ಲಿ ಟ್ರಂಪ್ ಸೊಕ್ಕು ಮುರಿಯಲು ಕಾರಣರಾಗಿದ್ದು ಭಾರತೀಯ ಮೂಲದ ವಕೀಲ! ಯಾರು ಗೊತ್ತೇ ಈ ನೀಲ್ ಕತ್ಯಾಲ್?

ಹೆಚ್ಚುವರಿಯಾಗಿ, ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಸುಮಾರು 47,000,000 ಪ್ರಕರಣಗಳು ಬಾಕಿ ಉಳಿದಿವೆ. ನ್ಯಾಯ ವ್ಯವಸ್ಥೆಯ ಮೇಲಿನ ಒತ್ತಡವನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಈ ಅಂಕಿಅಂಶಗಳನ್ನು ಬಳಸಲಾಗುತ್ತದೆ. ನ್ಯಾಯಾಧೀಶರು ನೀತಿ ಸಂಹಿತೆಗೆ ಬದ್ಧರಾಗಿರುತ್ತಾರೆ ಎಂದು ಪುಸ್ತಕವು ಹೇಳುತ್ತದೆ. ಅವರು ನ್ಯಾಯಾಲಯದ ಒಳಗೆ ಮತ್ತು ಹೊರಗೆ ಸರಿಯಾದ ನಡವಳಿಕೆಯನ್ನು ಕಾಪಾಡಿಕೊಳ್ಳಬೇಕು.

ನ್ಯಾಯಾಧೀಶರ ವಿರುದ್ಧ ದೂರು ಬಂದರೆ, ಅದನ್ನು ತನಿಖೆ ಮಾಡಲು ಒಂದು ವ್ಯವಸ್ಥೆ ಇದೆ. ಈ ಉದ್ದೇಶಕ್ಕಾಗಿ ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ಮೇಲ್ವಿಚಾರಣಾ ವ್ಯವಸ್ಥೆ (CPGRAMS) ಎಂಬ ವ್ಯವಸ್ಥೆಯನ್ನು ಉಲ್ಲೇಖಿಸಲಾಗಿದೆ. ಪುಸ್ತಕದ ಪ್ರಕಾರ, 2017 ಮತ್ತು 2021 ರ ನಡುವೆ 1,600 ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.

ಆರೋಪಗಳು ಸಾಕಷ್ಟು ಗಂಭೀರವಾಗಿದ್ದರೆ, ಸಂಸತ್ತು ದೋಷಾರೋಪಣೆ ಪ್ರಕ್ರಿಯೆಯ ಮೂಲಕ ನ್ಯಾಯಾಧೀಶರನ್ನು ತೆಗೆದುಹಾಕಬಹುದು. ಈ ಪ್ರಕ್ರಿಯೆಯು ಸಂಪೂರ್ಣ ತನಿಖೆಯ ನಂತರವೇ ಪ್ರಾರಂಭವಾಗುತ್ತದೆ ಮತ್ತು ನ್ಯಾಯಾಧೀಶರಿಗೆ ತಮ್ಮ ವಾದವನ್ನು ಮಂಡಿಸಲು ಪೂರ್ಣ ಅವಕಾಶವನ್ನು ನೀಡಲಾಗುತ್ತದೆ.

ಈ ಪುಸ್ತಕವು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಹೇಳಿಕೆಯನ್ನು ಸಹ ಉಲ್ಲೇಖಿಸುತ್ತದೆ. ಜುಲೈ 2025 ರಲ್ಲಿ, ನ್ಯಾಯಾಂಗದೊಳಗೆ ಭ್ರಷ್ಟಾಚಾರ ಮತ್ತು ದುಷ್ಕೃತ್ಯದ ಘಟನೆಗಳು ಬೆಳಕಿಗೆ ಬಂದಿವೆ, ಇದು ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸುತ್ತಿದೆ ಎಂದು ಅವರು ಹೇಳಿದರು. ಸಾರ್ವಜನಿಕ ವಿಶ್ವಾಸವನ್ನು ಪುನಃಸ್ಥಾಪಿಸಲು ಅಂತಹ ಪ್ರಕರಣಗಳಲ್ಲಿ ಪಾರದರ್ಶಕ ಮತ್ತು ಕಠಿಣ ಕ್ರಮ ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.

ಹಳೆಯ ಪುಸ್ತಕದಲ್ಲಿ ಏನಿತ್ತು?
ಹಳೆಯ ಪುಸ್ತಕವು ನ್ಯಾಯಾಂಗದ ಪಾತ್ರ, ಸ್ವತಂತ್ರ ನ್ಯಾಯಾಂಗದ ಅರ್ಥ, ನ್ಯಾಯಾಲಯಗಳ ರಚನೆ ಮತ್ತು ಸಾರ್ವಜನಿಕ ಪ್ರವೇಶದ ಬಗ್ಗೆ ಮಾಹಿತಿಯನ್ನು ನೀಡಲಾಗಿತ್ತು. ಇದು ಭ್ರಷ್ಟಾಚಾರವನ್ನು ಉಲ್ಲೇಖಿಸಿರಲಿಲ್ಲ, ಆದರೆ ನ್ಯಾಯಾಲಯದ ಪ್ರಕರಣಗಳು ಇತ್ಯರ್ಥವಾಗಲು ವರ್ಷಗಳು ಬೇಕಾಗುತ್ತದೆ ಎಂದು ಅದು ಹೇಳಿತ್ತು.

2018 ರಲ್ಲಿ ಸರ್ಕಾರವು ಚುನಾವಣಾ ಬಾಂಡ್ ಯೋಜನೆಯನ್ನು ಪ್ರಾರಂಭಿಸಿತು, ಅದರ ಮೂಲಕ ವ್ಯಕ್ತಿಗಳು ಮತ್ತು ಕಂಪನಿಗಳು ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ದೇಣಿಗೆ ನೀಡಬಹುದು ಎಂದು ಪುಸ್ತಕವು ವಿವರಿಸುತ್ತದೆ. ಆದಾಗ್ಯೂ, ಸುಪ್ರೀಂ ಕೋರ್ಟ್ ಇದನ್ನು ಅಸಂವಿಧಾನಿಕ ಎಂದು ಘೋಷಿಸಿತು ಮತ್ತು ಪಕ್ಷಗಳಿಗೆ ಯಾರು ಹಣಕಾಸು ಒದಗಿಸುತ್ತಿದ್ದಾರೆಂದು ತಿಳಿಯುವ ಹಕ್ಕು ಮತದಾರರಿಗೆ ಇದೆ ಎಂದು ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link