All posts by nagaraj11081993

‘ಬ್ರಹ್ಮರಾಕ್ಷಸ’ ತಂಡದಿಂದ ‘ಶ್ರೀಕೃಷ್ಣ’ ಸಿನಿಮಾ: ಉಧೋ ಉಧೋ ಯಲ್ಲವ್ವ ಹಾಡು ರಿಲೀಸ್

‘ಬ್ರಹ್ಮರಾಕ್ಷಸ’ ತಂಡದಿಂದ ‘ಶ್ರೀಕೃಷ್ಣ’ ಸಿನಿಮಾ: ಉಧೋ ಉಧೋ ಯಲ್ಲವ್ವ ಹಾಡು ರಿಲೀಸ್

ಕನ್ನಡ ಚಿತ್ರರಂಗದಲ್ಲಿ ಯಲ್ಲಮ್ಮನ (Yellamma) ಕುರಿತು ಒಂದಷ್ಟು ಹಾಡುಗಳು ಬಂದಿವೆ. ಈಗ ಅವುಗಳ ಸಾಲಿಗೆ ಮತ್ತೊಂದು ಹೊಸ ಗೀತೆ ಸೇರ್ಪಡೆ ಆಗಿದೆ. ಈ ಹಿಂದೆ ‘ಬ್ರಹ್ಮರಾಕ್ಷಸ’ ಸಿನಿಮಾ ಮಾಡಿದ್ದ ಶಂಕರ್ ರಾಜ ವರ್ಮ ಅವರು ಈಗ ‘ಶ್ರೀಕೃಷ್ಣ’ (Shri Krishna) ಎಂಬ ಹೊಸ ಚಿತ್ರವನ್ನು ಮಾಡಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಮೇ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಪ್ಲ್ಯಾನ್ ಇದೆ. ಈಗ ಇದೇ ಸಿನಿಮಾದಿಂದ ‘ಉಧೋ ಉಧೋ ಯಲ್ಲವ್ವ..’ (Udho Udho Yellavva) ಹಾಡನ್ನು ರಿಲೀಸ್ ಮಾಡಲಾಗಿದೆ.

ಈ ಹಾಡಿಗೆ ಎಂ.ಎಸ್‍. ತ್ಯಾಗರಾಜ್‍ ಅವರು ಸಾಹಿತ್ಯ ಬರೆದು, ಸಂಗೀತ ನೀಡಿದ್ದಾರೆ. ಅಲ್ಲದೇ, ಅವರೇ ಧ್ವನಿಯಾಗಿದ್ದಾರೆ. ಅವರ ಜೊತೆಗೆ ಸರಯೂ ಕೂಡ ಹಾಡಿದ್ದಾರೆ. ‘ಸಿರಿ ಮ್ಯೂಸಿಕ್‍’ ಮೂಲಕ ಈ ಲಿರಿಕಲ್‍ ಹಾಡು ಬಿಡುಗಡೆ ಆಗಿದೆ. ಹಾಡಿನ ಬಿಡುಗಡೆ ಕಾರ್ಯಕ್ರಮದ ವೇಳೆ ಚಿತ್ರತಂಡದವರು ಮಾತನಾಡಿ ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ‘ಬೃಹಸ್ಪತಿ ಕ್ರಿಯೇಷನ್ಸ್’ ಬ್ಯಾನರ್‍ ಮೂಲಕ ಶಂಕರ್‍ ರಾಜ ವರ್ಮ ಮತ್ತು ಅಜಯ್‍ ಕುಮಾರ್ ಪಿ.ಎಂ. ಅವರು ‘ಶ್ರೀಕೃಷ್ಣ’ ಸಿನಿಮಾ ನಿರ್ಮಿಸುತ್ತಿದ್ದಾರೆ. ಶಿವಲಿಂಗಯ್ಯ ಸಿ.ಎಂ, ಉಲ್ಲಾಸ್‍ ಕೆ.ಸಿ.ಎಸ್., ಚಾಣುಕ್ಯ ಆರ್‍, ‘ನೆನಪಿರಲಿ’ ಮೋಹನ್‍ ಹಾಗೂ ಲತಾ ಮಂಜುನಾಥ್‍ ಸಹ ನಿರ್ಮಾಪಕರಾಗಿದಾರೆ.

Shri Krishna Movie Team

ನಟ-ನಿರ್ದೇಶಕ ಶಂಕರ್ ರಾಜ ವರ್ಮ ಮಾತನಾಡಿ, ‘ನಾನು ನಿರ್ದೇಶಕನಾಗುತ್ತೇನೆ, ಒಂದು ಸಂಸ್ಥೆ ಕಟ್ಟಿ ಇಷ್ಟು ದೂರ ಸಾಗುತ್ತೇನೆ ಎಂದು ಯಾವತ್ತೂ ಯೋಚಿಸಿರಲಿಲ್ಲ. ಅದಕ್ಕೆ ಕಾರಣರಾದವರು ನಮ್ಮ ತಂದೆ-ತಾಯಿ, ಕುಟುಂಬದವರು ಮತ್ತು ಸ್ನೇಹಿತರು. ಅವರೆಲ್ಲರ ಪ್ರೋತ್ಸಾಹ ಮತ್ತು ಬೆಂಬಲದಿಂದ ಈ ಚಿತ್ರ ಸಾಧ್ಯವಾಗಿದೆ. ‘ಬ್ರಹ್ಮರಾಕ್ಷಸ’ ಚಿತ್ರದಲ್ಲಿ ಬಹುತೇಕ ಯಾರೆಲ್ಲಾ ಕೆಲಸ ಮಾಡಿದ್ದಾರೋ, ಅವರೆಲ್ಲರೂ ಈ ಚಿತ್ರತಂಡದಲ್ಲಿದ್ದಾರೆ’ ಎಂದು ಹೇಳಿದರು.

ಉಧೋ ಉಧೋ ಯಲ್ಲವ್ವ ಹಾಡು:

ಕಥೆ ಬಗ್ಗೆ ಕೂಡ ಅವರು ಮಾಹಿತಿ ನೀಡಿದರು. ‘ಮೂವರು ಅನಾಥರ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದನ್ನು ಈ ಸಿನಿಮಾ ಹೇಳುತ್ತದೆ. ಇಲ್ಲಿ ನಾಯಕಿ ಸಹ ಅನಾಥೆ. ಎಲ್ಲರೂ ಜೊತೆಯಾಗಿರುವಾಗ ಅವರ ಜೀವನದಲ್ಲೊಂದು ಘಟನೆ ನಡೆಯುತ್ತದೆ. ಇದರಿಂದ ಅವರು ಜೈಲಿಗೆ ಹೋಗಬೇಕಾಗುತ್ತದೆ. ಜೈಲಿಂದ ತಪ್ಪಿಸಿಕೊಂಡು ಬಂದ ನಂತರ ಅವರು ಏನೆಲ್ಲಾ ಮಾಡುತ್ತಾರೆ ಎನ್ನುವುದೇ ಚಿತ್ರದ ಕಥೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ‘ಯಲ್ಲಮ್ಮ’ ಸಿನಿಮಾದಿಂದ ಹೊರನಡೆದ ಸಾಯಿ ಪಲ್ಲವಿ, ಕಾರಣವೇನು?

ಅನಿರುದ್ಧ್ ಅವರ ಛಾಯಾಗ್ರಹಣ, ಕೀರ್ತಿರಾಜು ಅವರ ಸಂಕಲನ ‘ಶ್ರೀಕೃಷ್ಣ’ ಚಿತ್ರಕ್ಕಿದೆ. ಚೈತ್ರಾ ತೋಟದ್ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಹುಬ್ಬಳ್ಳಿ ಮೂಲದ ಅವರು ‘ಬ್ರಹ್ಮರಾಕ್ಷಸ’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡಿದ್ದರು. ಈಗ ನಾಯಕಿಯಾಗಿದ್ದಾರೆ. ಪ್ರದೀಪ್‍ ಪೂಜಾರಿ, ಭುವನ್‍ ಗೌಡ, ಸ್ನೇಹಾ, ಈಶ್ವರ್‍ ಶೆಟ್ಟಿ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮದ್ವೆಯಾದ ಒಂದೇ ತಿಂಗಳಲ್ಲಿ ವಿರಸ:ಮೇಕಪ್ ಆರ್ಟಿಸ್ಟ್​​ನ ವಿವಾಹವಾಗಿದ್ದ ಉದ್ಯಮಿ ದುರಂತ ಸಾವು

ಉಡುಪಿ, (ಮಾರ್ಚ್ 30): ಮದುವೆಯಾದ (Marriage)  ಒಂದೇ ತಿಂಗಳಿಗೆ ಉದ್ಯಮಿ (Businessman)  ಆತ್ಮಹತ್ಯೆ  ಮಾಡಿಕೊಂಡಿರುವ ಘಟನೆ  ಉಡುಪಿ (Udupi) ಜಿಲ್ಲೆ ಕಾರ್ಕಳ ತಾಲೂಕಿನಲ್ಲಿ ನಡೆದಿದೆ. ಮೂಲತಃ ನೆಲ್ಯಾಡಿ ನಿವಾಸಿಯಾಗಿರುವ ಸುದೀಪ್​ ಶೆಟ್ಟಿ ಎಂಬುವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ತಿಂಗಳು ಮದುವೆಯಾಗಿದ್ದ ವಿವಾಹಿತ ಉದ್ಯಮಿ ಸುದೀಪ್​ ಶೆಟ್ಟಿ, ಮಾರ್ಚ್ 17ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ, ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದ್ರೆ, ಹತ್ತಾರು ದಿನ ಜೀವನ್ಮರಣ ಹೋರಾಟ ನಡೆಸಿ ಕೊನೆಗೆ ಚಿಕಿತ್ಸೆ ಫಲಿಸದೆ ಮಾರ್ಚ್ 29ರಂದು ಕೊನೆಯುಸಿರೆಳೆದಿದ್ದಾರೆ.ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸುದೀಪ್‌ನ ತಂದೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಸುದೀಪ್‌ನ ಪತ್ನಿ ಸೌಮ್ಯ ಶೆಟ್ಟಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ದೂರು ದಾಖಲಿಸಿದ್ದಾರೆ.

ಮದ್ವೆಯಾದ ಒಂದೇ ತಿಂಗಳಲ್ಲಿ ವಿರಸ

ಸುದೀಪ್ ಹಾಗೂ ಸೌಮ್ಯ ಶೆಟ್ಟಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಮೂಲತಃ ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆ ನಿವಾಸಿಯಾಗಿರುವ ಸೌಮ್ಯ ಶೆಟ್ಟಿ, ಜೊತೆ ಸುದೀಪ್​ ಕಳೆದ ತಿಂಗಳು ಫೆಬ್ರವರಿ 17ರಂದು ಪುತ್ತೂರು ರಿಜಿಸ್ಟರ್ ಆಫೀಸಿನಲ್ಲಿ ಮದುವೆಯಾಗಿದ್ದರು. ನಾಟಕ ಕಲಾವಿದೆ ಹಾಗೂ ಮೇಕಪ್ ಆರ್ಟಿಸ್ಟ್ ಆಗಿರುವ ಸೌಮ್ಯ ಶೆಟ್ಟಿ ಈ ಹಿಂದೆ ಒಂದು ಮದುವೆಯಾಗಿ ಪತಿಗೆ ಡಿವೋರ್ಸ್ ನೀಡಿ ಸುದೀಪ್​ ಜೊತೆ ವಿವಾಹವಾಗಿದ್ದರು. ಆದರೆ, ಸೌಮ್ಯ ಜೊತೆ ವಿವಾಹದ ಬಗ್ಗೆ ಸುದೀಪ್ ಕುಟುಂಬ ಆಕ್ಷೇಪ ವ್ಯಕ್ತಪಡಿಸಿತ್ತು.

ಸೌಮ್ಯ ಶೆಟ್ಟಿ ಜೊತೆ ಮದುವೆಯಾಗಿದ್ದಕ್ಕೆ ಸುದೀಪ್ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆ ಒಂದೇ ತಿಂಗಳಲ್ಲಿ ಸಂಬಂಧ ಬಿಗಡಾಯಿಸಿತ್ತು. ಬಳಿಕ ಸುದೀಪ್ ಕಳೆದ ಮಾರ್ಚ್ 17 ರಂದು ಕಡಬ ತಾಲೂಕಿನ ನೆಲ್ಯಾಡಿಯಲ್ಲಿದ್ದ ವೇಳೆ ಅಲ್ಲಿಗೆ ಬಂದಿದ್ದ ಸೌಮ್ಯ ಬೆದರಿಕೆ ಹಾಕಿರುವುದಾಗಿ ಆರೋಪ ಕೇಳಿಬಂದಿದೆ. ಇದಾದ ಬಳಿಕ ಮಾರ್ಚ್ 22 ರಂದು ಸುದೀಪ್ ವಿಷ ಸೇವಿಸಿರುವ ಬಗ್ಗೆ ಸೌಮ್ಯ ಸಂಬಂಧಿಕರು ಮಾಹಿತಿ ನೀಡಿದ್ದರು. ಮಾ.23 ರಂದು ವಿಷ ಸೇವಿಸಿದ ಸುದೀಪ್​ನನ್ನು ಸೌಮ್ಯ ನಿಟ್ಟೆಯ ಗಜಾರಿಯ ಆಸ್ಪತ್ರೆಗೆ ಸೇರಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆದರ್ಶ ಆಸ್ಪತ್ರೆಗೆ ರವಾನಿಸಲಾಗಿತ್ತು. ನಂತರ ಮಾರ್ಚ್ 24ರಂದು ಸುದೀಪ್ ತಂದೆ ಮಂಗಳೂರಿನ ಏನಪೋಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆದರೆ ದುರಾದೃಷ್ಟವಶಾತ್ ಸುದೀಪ್​ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29ರಂದು ಸಾವನ್ನಪ್ಪಿದ್ದಾರೆ.

ಮಗ ಸಾವನ್ನಪ್ಪಿದ ಬೆನ್ನಲ್ಲೇ ಸೊಸೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂದು ಮೃತ ಸುದೀಪ್​ ತಂದೆ ದಾಮೋದರ್ ಆರೋಪ ಮಾಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕಾರ್ಕಳ ನಗರ ಪೊಲೀಸರು, ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಮುಂದಿನ ತನಿಖೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ಪತ್ನಿ ಸೌಮ್ಯ ಶೆಟ್ಟಿ ಹೇಳಿದ್ದೇನು?

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊತ್ತಿರುವ ಸೌಮ್ಯ ಶೆಟ್ಟಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸುದೀಪ್ ಸಾವಿಗೆ ನಾನು ಕಾರಣವಲ್ಲ. ಸುದೀಪ್ ಸ್ವತಃ ವಿಷ ಸೇವಿಸಿರುವ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ವಿಷ ಸೇವಿಸಿದ ನಂತರವೂ 4-5 ದಿನ ಆರಾಮಾಗಿದ್ದರು. ಬಳಿಕ ಫುಡ್ ಪಾಯಿಸನ್ ಆಗಿದೆ ಎಂಬ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಿದೆ. ಅಲ್ಲಿ ಜಾಂಡಿಸ್ ಆಗಿರಬಹುದು ಎಂದು ಚಿಕಿತ್ಸೆ ನೀಡಿದರು. ಯಾವ ಕಾರಣಕ್ಕೆ ವಿಷ ಸೇವಿಸಿದ್ದಾರೆ ತಿಳಿದಿಲ್ಲ ಎಂದು ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

CSK vs RR: ಒಂದಂಕಿ ದಾಟದ 8 ಬ್ಯಾಟರ್ಸ್​; ಕಷ್ಟಪಟ್ಟು 100 ರನ್ ಗಡಿ ದಾಟಿದ ಸಿಎಸ್​ಕೆ

ಐಪಿಎಲ್ 2026 ರ ಮೂರನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಇಂದು ಮುಖಾಮುಖಿಯಾಗಿವೆ. ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದೊಂದಿಗೆ, ಮಾಜಿ ಐಪಿಎಲ್ ಚಾಂಪಿಯನ್‌ ತಂಡಗಳು ಲೀಗ್‌ನ 19 ನೇ ಸೀಸನ್‌ನಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಿವೆ. ಅದರಂತೆ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್​ಕೆ, ರಾಜಸ್ಥಾನ್ ಬೌಲಿಂಗ್ ದಾಳಿಗೆ ತತ್ತರಿ ಕೇವಲ 127 ರನ್​ಗಳಿಗೆ ತನ್ನ ಇನ್ನಿಂಗ್ಸ್ ಮುಗಿಸಿದೆ. ತಂಡದ ಪರ 8ನೇ ಕ್ರಮಾಂಕದಲ್ಲಿ ಬಂದ ಜೆಮಿ ಓವರ್ಟನ್ ಅತ್ಯಧಿಕ 42 ರನ್​ಗಳ ಇನ್ನಿಂಗ್ಸ್ ಆಡಿದರೆ, ಕಾರ್ತಿಕ್ ಶರ್ಮಾ 18 ರನ್​ಗಳ ಕಾಣಿಕೆ ನೀಡಿದರು. ಉಳಿದಂತೆ ತಂಡದ 8 ಬ್ಯಾಟ್ಸ್‌ಮನ್​ಗಳಿಗೆ ಒಂದಂಕಿ ಮೊತ್ತವನ್ನು ದಾಟಲು ಸಾಧ್ಯವಾಗಲಿಲ್ಲ.

ಪವರ್​ಪ್ಲೇನಲ್ಲಿ 4 ವಿಕೆಟ್

ಗುವಾಹಟಿಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡುತ್ತಿದ ಸಿಎಸ್​ಕೆಗೆ ಉತ್ತಮ ಆರಂಭ ಸಿಗಲಿಲ್ಲ. ಪವರ್‌ಪ್ಲೇನಲ್ಲಿಯೇ ತಂಡ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 41 ರನ್ ಕಲೆಹಾಕಿತು. ಇದು ತಂಡವನ್ನು ಆರಂಭದಲ್ಲೇ ಒತ್ತಡಕ್ಕೆ ಸಿಲುಕಿಸಿತು. ಆರಂಭಿಕರಾದ ನಾಯಕ ರುತುರಾಜ್ ಗಾಯಕ್ವಾಡ್ ಹಾಗೂ ಸಂಜು ಸ್ಯಾಮ್ಸನ್​ಗೆ 10 ರನ್​ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ.

ಮೊದಲ ವಿಕೆಟ್ ರೂಪದಲ್ಲಿ ಸಂಜು ಸ್ಯಾಮ್ಸನ್ ಪೆವಿಲಿಯನ್​ತ್ತ ಹೆಜ್ಜೆ ಹಾಕಿದರು. ಸಂಜು ತಮ್ಮ ಇನ್ನಿಂಗ್ಸ್​ನಲ್ಲಿ 7 ಎಸೆತಗಳನ್ನು ಎದುರಿಸಿ 6 ರನ್​ಗಳಿಗೆ ಔಟಾದರು. ಸಂಜು ವಿಕೆಟ್ ಪತನದ ನಂತರ ಇನ್ನಿಂಗ್ಸ್ ನಿಭಾಯಿಸುವ ಜವಾಬ್ದಾರಿ ಹೊಂದಿದ್ದ ರುತುರಾಜ್ ಕೂಡ ಸಂಜು ಔಟಾದ ಮುಂದಿನ ಓವರ್​ನಲ್ಲೇ ಅಂದರೆ ಮೂರನೇ ಓವರ್​ನ ಕೊನೆಯ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು. ರುತುರಾಜ್ ತಮ್ಮ ಇನ್ನಿಂಗ್ಸ್​ನಲ್ಲಿ 11 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಸಹಿತ 6 ರನ್ ಬಾರಿಸಿ ಔಟಾದರು.

ಓವರ್ಟನ್ ಏಕಾಂಗಿ ಹೋರಾಟ

ರುತುರಾಜ್ ವಿಕೆಟ್ ಪತನದ ಬಳಿಕ ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ಕೂಡ ಖಾತೆ ತೆರೆಯದೆ ಔಟಾದರೆ, ಮ್ಯಾಟ್ ಶಾರ್ಟ್ ಕೂಡ 2 ರನ್​ಗಳಿಗೆ ಸುಸ್ತಾದರು. ಶಿವಂ ದುಬೆ ಕೂಡ 6 ರನ್​​ಗಳಿಗೆ ಬ್ಯಾಟ್ ಎತ್ತಿಟ್ಟರು. ತಂಡದ ಪರ ಏಕಾಂಗಿ ಹೋರಾಟ ನೀಡಿದ ಜೆಮಿ ಓವರ್ಟನ್ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದು 42 ರನ್​ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ಓವರ್ಟನ್ ಅವರ ಈ ಇನ್ನಿಂಗ್ಸ್, ಸಿಎಸ್​ಕೆ ತಂಡವನ್ನು 100 ರನ್​ಗಳ ಗಡಿ ದಾಟಿಸಿತು. ಇಲ್ಲದಿದ್ದರೆ, ಸಿಎಸ್​ಕೆ ಎರಡಂಕಿ ಮೊತ್ತವನ್ನು ದಾಟುತ್ತಿರಲಿಲ್ಲ. ಇತ್ತ ರಾಜಸ್ಥಾನ್ ಪರ ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಣ್ಣ ವಯಸ್ಸಿನ ವರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಈ ಅಭ್ಯಾಸಗಳು ಕಾರಣ!

ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ (Heart Attack) ವಯಸ್ಸಾದವರಲ್ಲಿ ಮಾತ್ರವಲ್ಲ ಸಣ್ಣ ವಯಸ್ಸಿನವರಲ್ಲಿಯೂ ಕಂಡುಬರುತ್ತಿರುವುದನ್ನು ನೀವು ಕಂಡಿರಬಹುದು. ಜೊತೆಗೆ ಹೃದಯ ಸಂಬಂಧಿತ ಸಮಸ್ಯೆಗಳು, ಹೈ ಬ್ಲಡ್ ಪ್ರೆಶರ್, ಕೊಲೆಸ್ಟ್ರಾಲ್ ಹೆಚ್ಚಾಗುವುದು, ಬ್ಲಾಕೇಜ್ ಮತ್ತು ಹೃದಯ ಬಡಿತದಲ್ಲಿ ಏರುಪೇರಾಗುತ್ತಿರುವ ಸಮಸ್ಯೆ ಕಂಡುಬರುತ್ತಿದೆ. ಇದಕ್ಕೆ ಜೀವನಶೈಲಿಯ ಬದಲಾವಣೆ, ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು, ಹೆಚ್ಚುತ್ತಿರುವ ಒತ್ತಡ ಮತ್ತು ದೈಹಿಕ ಚಟುವಟಿಕೆಗಳ ಕೊರತೆ ಪ್ರಮುಖ ಕಾರಣಗಳಾಗಿವೆ. ಅದರಲ್ಲಿಯೂ ದೀರ್ಘಕಾಲ ಕುಳಿತು ಕೆಲಸ ಮಾಡುವವರು, ಸದಾ ಒತ್ತಡದಲ್ಲಿ ಇರುವವರು ಅಥವಾ ಕುಟುಂಬದಲ್ಲಿ ಹೃದಯ ರೋಗ ಸಂಬಂಧಿ ಸಮಸ್ಯೆ ಇರುವವರು ಹೆಚ್ಚಿನ ಅಪಾಯದಲ್ಲಿದ್ದಾರೆ. ಯುವಕರಲ್ಲಿ ಹೆಚ್ಚುತ್ತಿರುವ ಈ ಸಮಸ್ಯೆ ಆರೋಗ್ಯದ ಕಡೆ ನಿರ್ಲಕ್ಷ್ಯ ತೋರಬಾರದು. ಅದರ ಬದಲು ಈ ರೀತಿಯಾಗುವುದಕ್ಕೆ ಕಾರಣವೇನು, ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ತಿಳಿದುಕೊಂಡು ಈ ರೀತಿಯ ಸಮಸ್ಯೆ ಹೆಚ್ಚಾಗದಂತೆ ತಡೆಯಬೇಕು.

ಸಣ್ಣ ವಯಸ್ಸಿನಲ್ಲಿ ಹೃದಯಾಘಾತವಾಗುವುದಕ್ಕೆ ಕಾರಣ:

  • ದೀರ್ಘಕಾಲ ಕುಳಿತುಕೊಳ್ಳುವುದು ಮತ್ತು ವ್ಯಾಯಾಮ ಮಾಡದಿರುವುದು
  • ಜಂಕ್ ಫುಡ್ ಮತ್ತು ಹೆಚ್ಚು ಎಣ್ಣೆಯ ಆಹಾರ ಸೇವನೆ
  • ನಿದ್ರೆಯ ಕೊರತೆ ಮತ್ತು ರಾತ್ರಿ ತಡವಾಗಿ ಮಲಗುವುದು
  • ನಿರಂತರ ಒತ್ತಡ, ಕೋಪ ಮತ್ತು ಮಾನಸಿಕ ಒತ್ತಡ
  • ಧೂಮಪಾನ ಮತ್ತು ಮದ್ಯಪಾನ ಮಾಡುವುದು

ಹೃದಯಾಘಾತವಾಗುವ ಮುನ್ನ ಕಂಡುಬರುವ ಲಕ್ಷಣಗಳು:

  • ಎದೆಯಲ್ಲಿ ನೋವು ಅಥವಾ ಒತ್ತಡ
  • ಕೈ, ಕತ್ತು ಅಥವಾ ಬೆನ್ನಿನ ಭಾಗದಲ್ಲಿ ನೋವು
  • ಉಸಿರಾಟದ ತೊಂದರೆ
  • ಅಚಾನಕ್ ಆಗಿ ಹೆಚ್ಚು ಬೆವರು ಬರುವುದು
  • ತಲೆಸುತ್ತು ಮತ್ತು ದುರ್ಬಲತೆ
  • ವಾಂತಿ

ಇದನ್ನೂ ಓದಿ: ಹಠಾತ್ ಆಗಿ ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್

ಹೇಗೆ ಮುನ್ನೆಚ್ಚರಿಕೆ ವಹಿಸಬೇಕು?

  • ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಿ
  • ಪ್ರತಿದಿನ ವ್ಯಾಯಾಮ ಅಥವಾ ವಾಕಿಂಗ್ ಮಾಡುವ ಅಭ್ಯಾಸ ಮಾಡಿಕೊಳ್ಳಿ
  • ಸಮತೋಲನ ಮತ್ತು ಆರೋಗ್ಯಕರ ಆಹಾರ ಸೇವನೆ ಮಾಡಬೇಕು
  • ಜಂಕ್ ಫುಡ್ ನಿಂದ ಆದಷ್ಟು ದೂರವಿರಿ
  • ಒತ್ತಡ ಕಡಿಮೆ ಮಾಡಲು ಯೋಗ ಮತ್ತು ಧ್ಯಾನ ಮಾಡಿರಿ
  • ಚೆನ್ನಾಗಿ ನಿದ್ರೆ ಮಾಡಿ
  • ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರತ್ಯೇಕ ಘಟನೆ: ರಜೆ ತಂದ ಆಪತ್ತು; ಈಜಲು ತೆರಳಿದ್ದ ಐವರು ಬಾಲಕರು ನೀರುಪಾಲು

ಬೆಳಗಾವಿ, ಮಾರ್ಚ್​ 30: ಈಜಲು ತೆರಳಿದ್ದ ಇಬ್ಬರು ಬಾಲಕರು (boys) ನೀರುಪಾದ (death) ಘಟನೆ ಜಿಲ್ಲೆ ಹುಕ್ಕೇರಿ ತಾಲೂಕಿನ ಹಳೆಗುಡಗನಟ್ಟಿ ಗ್ರಾಮದ ಬಳಿಯ ಹಿಡಕಲ್​ ಡ್ಯಾಮ್​ನ ಹಿನ್ನೀರಲ್ಲಿ ನಡೆದಿದೆ. ಕೃಷ್ಣಾ ಖಾನಾಪುರಿ(14) ಮತ್ತು ಪ್ರಜ್ವಲ್ ಗೋಕಾರ್(13) ಮೃತ ಬಾಲಕರು. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.

ನಡೆದಿದ್ದೇನು?

ಹಿಡಕಲ್ ಜಲಾಶಯ ಹಿನ್ನೀರಿನಲ್ಲಿ ಬಾಲಕರು ಈಜುಲು ತೆರಳಿದ್ದರು. ಈ ವೇಳೆ ಈಜಲು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರ ಶವಗಳನ್ನ ಸ್ಥಳೀಯರು ಮತ್ತು ಪೊಲೀಸರು ಹೊರತೆಗೆದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

ಎತ್ತಿನ ಮೈತೊಳೆಯಲು ಹೋಗಿದ್ದ ಯುವಕ ಕೆರೆಯಲ್ಲಿ ಮುಳುಗಿ ದುರ್ಮರಣ

ಎತ್ತಿನ ಮೈತೊಳೆಯಲು ಹೋಗಿದ್ದ ಯುವಕ ಕೆರೆಯಲ್ಲಿ ಮುಳುಗಿ ದುರ್ಮರಣ ಹೊಂದಿರುವಂತಹ ಘಟನೆ ಗದಗ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ನಡೆದಿದೆ. ಮುತ್ತಪ್ಪ ಮುರ್ಲಾಪುರ(20) ಮೃತ ಯುವಕ. ಗದಗ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: ಮಕ್ಕಳ ಪಾಲಿಗೆ ಮೃತ್ಯುಕೂಪವಾದ ಕೃಷಿಹೊಂಡ: ಈಜಲು ಹೋದ ನಾಲ್ವರು ಜಲಸಮಾಧಿ

ಸಂಬಂಧಿಕರ ಮನೆಗೆ ಬಂದಿದ್ದ ಮುಳುಗುಂದ ಗ್ರಾಮದ ಮುತ್ತಪ್ಪ ಮುರ್ಲಾಪುರ ಈ ವೇಳೆ ಎತ್ತಿನ ಮೈ ತೊಳೆಯಲು ಕೆರೆಗೆ ಹೋದಾಗ ದುರ್ಘಟನೆ ಸಂಭವಿಸಿದೆ. ಆಯಾತಪ್ಪಿ ಕೆರೆಗೆ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ ಯುವಕನ ಮೃತದೇಹವನ್ನು ಹೊರತೆಗೆದಿದ್ದಾರೆ. ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.

ಕೃಷಿಹೊಂಡಕ್ಕೆ ಬಿದ್ದು ಬಾಲಕಿ ಸಾವು

ಆಟವಾಡುವ ವೇಳೆ ಆಯತಪ್ಪಿ ಕೃಷಿಹೊಂಡಕ್ಕೆ ಬಿದ್ದು ಬಾಲಕಿ ಸಾವನ್ನಪ್ಪಿರುವಂತಹ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚನ್ನಗಾನಹಳ್ಳಿಯಲ್ಲಿ ನಡೆದಿದೆ. ಕೀರ್ತನಾ(10) ಮೃತ ಬಾಲಕಿ. ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಜಲು ಹೋಗಿದ್ದ SSLC ವಿದ್ಯಾರ್ಥಿ ಸಾವು

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಯಲಿಯೂರು ಗ್ರಾಮದಲ್ಲಿ ಸ್ನೇಹಿತರ ಜತೆ ಈಜಲು ಹೋಗಿದ್ದ SSLC ವಿದ್ಯಾರ್ಥಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಕುಶಾಲ್​(16) ಮೃತ ವಿದ್ಯಾರ್ಥಿ. ಸದ್ಯ ಅಗ್ನಿಶಾಮಕದಳ ಸಿಬ್ಬಂದಿಯಿಂದ ಮೃತದೇಹಕ್ಕೆ ಶೋಧ ಕಾರ್ಯ ನಡೆದಿದೆ.

ಇದನ್ನೂ ಓದಿ: ಸ್ನೇಹಿತರನ್ನು ಮೀಟ್ ಮಾಡಲು ಬಂದಿದ್ದ ವಿದ್ಯಾರ್ಥಿ ದುರಂತ ಅಂತ್ಯ: 12ನೇ ಮಹಡಿಯಿಂದ ಬಿದ್ದು ಸಾವು

ನಿನ್ನೆ ಶಾಲೆಯ ವಿಶೇಷ ತರಗತಿ ಮುಗಿಸಿಕೊಂಡು ಮನೆಗೆ ತೆರಳಿದ್ದ ವಿದ್ಯಾರ್ಥಿ ಕುಶಾಲ್, ಬಳಿಕ ಸ್ನೇಹಿತರ ಜೊತೆಗೆ ಕೆರೆಗೆ ತೆರಳಿದ್ದು, ಕೆರೆಯ ಆಳ ಪ್ರದೇಶದಲ್ಲಿ ಮುಳುಗಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಸ್ನೇಹಿತರು ಹಾಗೂ ಕುರಿಗಾಯಿಯಿಂದ ರಕ್ಷಿಸಲು ಯತ್ನಿಸಲಾಗಿದೆ. ಆದರೆ ಕುಶಾಲ್ ದೇಹ ನಾಪತ್ತೆಯಾಗಿದೆ.

ಪೋಷಕರ ಗಮನಕ್ಕೆ

ಸದ್ಯ ಬೇಸಿಗೆ ರಜೆ ಆರಂಭವಾಗಿದೆ. ಹೀಗಾಗಿ ಪೋಷಕರು ತಮ್ಮ ಚಿಕ್ಕ ಮಕ್ಕಳ ಚಲನವಲನಗಳ ಬಗ್ಗೆ ಗಮನಹರಿಸಬೇಕಿದೆ. ಒಮ್ಮೆ ಹೋದ ಜೀವ ಮತ್ತೆ ವಾಪಸ್ ಬರಲ್ಲ. ಹಾಗಾಗಿ ಮಕ್ಕಳನ್ನ ಬಾವಿ, ಕೆರೆ-ಕಟ್ಟೆಗಳು, ಕೃಷಿ ಹೊಂಡಗಳು, ಸ್ವಿಮ್ಮಿಂಗ್ ಪೂಲ್, ನದಿ ಬಳಿ ಬಿಡದಿರುವುದು ಉತ್ತಮ. ಒಂದು ಸಣ್ಣ ನಿರ್ಲಕ್ಷ್ಯದಿಂದ ಮಕ್ಕಳ ಜೀವವೇ ಹೋಗಬಹುದು ಜಾಗರೂಕರಾಗಿರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

CSK vs RR: ಒಂದೇ ಓವರ್​ನಲ್ಲಿ 2 ವಿಕೆಟ್; ಸಿಎಸ್​ಕೆ ವಿರುದ್ಧ ಜಡೇಜಾ ಪ್ರತೀಕಾರ

2012 ರಲ್ಲಿ ಸಿಎಸ್​ಕೆ ತಂಡವನ್ನು ಸೇರಿ ಈ ತಂಡದ ಪರ ಬರೋಬ್ಬರಿ 12 ಆವೃತ್ತಿಗಳನ್ನು ಆಡಿದ್ದ ರವೀಂದ್ರ ಜಡೇಜಾ, ಈ ಆವೃತ್ತಿಯಲ್ಲಿ ತನ್ನ ಮಾತೃ ತಂಡ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದಾರೆ. ವಾಸ್ತವವಾಗಿ ಈ ವರ್ಷ ನಡೆದ ಮಿನಿ ಹರಾಜಿಗೂ ಮುನ್ನ ಸಿಎಸ್​ಕೆ ತಂಡ, ರವೀಂದ್ರ ಜಡೇಜಾ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡದೊಂದಿಗೆ ಟ್ರೇಡ್ ಮಾಡಿಕೊಂಡಿತ್ತು. ಜಡೇಜಾ ಬದಲಿಗೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಸಂಜು ಸ್ಯಾಮ್ಸನ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿತ್ತು.

ಈ ರೀತಿ ಟ್ರೇಡ್ ಮೂಲಕ ರಾಜಸ್ಥಾನ್ ತಂಡವನ್ನು ಸೇರಿಕೊಂಡಿದ್ದ ಜಡೇಜಾ, ಈ ಲೀಗ್​ನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಸಿಎಸ್​ಕೆ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ್ದಾರೆ. ತಂಡವನ್ನು ಮೂರು ಬಾರಿ ಚಾಂಪಿಯನ್‌ ಮಾಡುವಲ್ಲಿ ಶ್ರಮಿಸಿದ್ದ ತನ್ನನ್ನು ಕೈಬಿಟ್ಟ ಸಿಎಸ್​ಕೆ ವಿರುದ್ಧ ಸೇಡು ತೀರಿಸಿಕೊಂಡಿರುವ ಜಡೇಜಾ, ಸಿಎಸ್​ಕೆ ವಿರುದ್ಧ ಆಡಿದ ಮೊದಲ ಪಂದ್ಯದ ಮೊದಲ ಓವರ್​ನಲ್ಲೇ ಎರಡು ಪ್ರಮುಖ ವಿಕೆಟ್‌ಗಳನ್ನು ಉರುಳಿಸಿ ಸರಿಯಾದ ತಿರುಗೇಟು ನೀಡಿದ್ದಾರೆ.

ಸಿಎಸ್​ಕೆ ಇನ್ನಿಂಗ್ಸ್​ನ 8ನೇ ಓವರ್ ಬೌಲ್ ಮಾಡಲು ಬಂದ ಜಡೇಜಾ, ಈ ಓವರ್​ನ ಎರಡನೇ ಎಸೆತದಲ್ಲಿ ಸರ್ಫರಾಜ್ ಖಾನ್ ಅವರನ್ನು ಎಲ್​ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಸರ್ಫರಾಜ್ ವಿಕೆಟ್ ಪತನದ ಬಳಿಕ ಬಂದ ಶಿವಂ ದುಬೆ ಬಂದ ಕೂಡಲೇ ಜಡೇಜಾ ಅವರ ಎಸೆತವನ್ನು ಸಿಕ್ಸರ್​ಗಟ್ಟಿದರು. ಮತ್ತದೇ ಸಿಕ್ಸರ್​ಗೆ ಕೈ ಹಾಕಿದ ದುಬೆ ಕ್ಯಾಚಿತ್ತು ನಿರ್ಗಮಿಸಿದರು. ಅಂದರೆ ಜಡೇಜಾ ತಾವು ಬೌಲ್ ಮಾಡಿದ ಮೊದಲ ಓವರ್​ನಲ್ಲೇ ಪ್ರಮುಖ 2 ವಿಕೆಟ್‌ಗಳನ್ನು ಉರುಳಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CSK vs RR: ಸಿಎಸ್​ಕೆ ಪರ ಮೊದಲ ಪಂದ್ಯದಲ್ಲೇ ಎಡವಿದ ಸಂಜು ಸ್ಯಾಮ್ಸನ್

Source link

CSK vs RR: W,W,W, W.. ಸಿಎಸ್​ಕೆ ಪೆವಿಲಿಯನ್ ಪರೇಡ್ ಶುರು

Source link

ದಳಪತಿ ವಿಜಯ್ 603 ಕೋಟಿ ರೂಪಾಯಿ ಆಸ್ತಿ ವಿವರ ಬಹಿರಂಗ: ಪತ್ನಿ ಬಳಿ ಎಷ್ಟಿದೆ?

ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ ಬರೆಯಲು ಹೊರಟಿರುವ ತಮಿಳು ವೆಟ್ರಿ ಕಳಗಂ (TVK) ಪಕ್ಷದ ಸ್ಥಾಪಕ, ನಟ ದಳಪತಿ ವಿಜಯ್ (Thalapathy Vijay) ಅವರು ಸೋಮವಾರ (ಮಾರ್ಚ್ 30) ತಮ್ಮ ಮೊದಲ ಚುನಾವಣಾ ಅಫಿಡವಿಟ್ ಸಲ್ಲಿಸಿದ್ದಾರೆ. ಈ ಅಫಿಡವಿಟ್‌ನಲ್ಲಿ ಅವರು ಘೋಷಿಸಿಕೊಂಡಿರುವ ಆಸ್ತಿಯ ಮೊತ್ತ ಕೇಳಿ ಅಭಿಮಾನಿಗಳು ಹಾಗೂ ರಾಜಕೀಯ ವಲಯ ದಂಗಾಗಿದೆ. 52 ವರ್ಷ ವಯಸ್ಸಿನ ವಿಜಯ್ ಅವರು ಸುಮಾರು 603.20 ಕೋಟಿ ರೂಪಾಯಿ ಮೌಲ್ಯದ ಒಟ್ಟು ಆಸ್ತಿಯನ್ನು (Thalapathy Vijay Net Worth) ಹೊಂದಿರುವುದಾಗಿ ತಿಳಿಸಿದ್ದಾರೆ.

ವಿಜಯ್ ಅವರ ಒಟ್ಟು ಆಸ್ತಿಯಲ್ಲಿ 404.58 ಕೋಟಿ ರೂಪಾಯಿ ಮೊತ್ತದ ಚರಾಸ್ತಿ ಹಾಗೂ 198.62 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಸೇರಿದೆ. ಕೊಡೈಕೆನಾಲ್‌ನಲ್ಲಿ ಕೃಷಿ ಭೂಮಿ, ಚೆನ್ನೈನ ವಿವಿಧೆಡೆ ವಾಣಿಜ್ಯ ಮಳಿಗೆಗಳು ಮತ್ತು ವಸತಿ ಕಟ್ಟಡಗಳನ್ನು ಅವರು ಹೊಂದಿದ್ದಾರೆ. ಇನ್ನು, ವಿಜಯ್ ಅವರ ಪತ್ನಿ ಸಂಗೀತಾ ಅವರ ಹೆಸರಿನಲ್ಲಿ 15.76 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ.

ವಿಜಯ್ ಅವರು ಐಷಾರಾಮಿ ಜೀವನಶೈಲಿಗೆ ಹೆಸರಾಗಿದ್ದು, ಅವರ ಬಳಿ ಬಿಎಂಡಬ್ಲ್ಯು 530, ಟೊಯೋಟಾ ಲೆಕ್ಸಸ್, ಟೊಯೋಟಾ ವೆಲ್‌ಫೈರ್ ಮತ್ತು ಬಿಎಂಡಬ್ಲ್ಯು ಐ7 ಮುಂತಾದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಕಾರುಗಳಿವೆ. ಅವರ ಕೈಯಲ್ಲಿ 2 ಲಕ್ಷ ರೂ. ನಗದು ಹಾಗೂ ವಿವಿಧ ಬ್ಯಾಂಕ್‌ ಖಾತೆಗಳಲ್ಲಿ 213 ಕೋಟಿ ರೂಪಾಯಿಗೂ ಅಧಿಕ ಠೇವಣಿ ಇದೆ. 883 ಗ್ರಾಂ ಚಿನ್ನ ಮತ್ತು 15 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳನ್ನು ಅವರು ಘೋಷಿಸಿದ್ದಾರೆ.

ವಿಜಯ್ ಅವರ ಅಫಿಡವಿಟ್‌ನಲ್ಲಿ ಗಮನ ಸೆಳೆದ ಪ್ರಮುಖ ಅಂಶವೆಂದರೆ ಅವರ ಸಾಲದ ವಿವರ. ಇಷ್ಟೊಂದು ದೊಡ್ಡ ಮೊತ್ತದ ಆಸ್ತಿ ಹೊಂದಿದ್ದರೂ ಬ್ಯಾಂಕ್ ಅಥವಾ ಯಾವುದೇ ಹಣಕಾಸು ಸಂಸ್ಥೆಗಳಿಗೆ ಅವರು ಒಂದು ರೂಪಾಯಿ ಕೂಡ ಸಾಲ ಬಾಕಿ ಉಳಿಸಿಕೊಂಡಿಲ್ಲ. 2024-25ರ ಆರ್ಥಿಕ ವರ್ಷದಲ್ಲಿ ಅವರು 184.53 ಕೋಟಿ ರೂಪಾಯಿ ಆದಾಯವನ್ನು ಐಟಿ ರಿಟರ್ನ್ಸ್‌ನಲ್ಲಿ ತೋರಿಸಿದ್ದಾರೆ.

ಇದನ್ನೂ ಓದಿ: ಇಫ್ತಾರ್​​ಕೂಟದಲ್ಲಿ ಭಾಗಿ ಆದ ದಳಪತಿ ವಿಜಯ್; ವಿವಾದದಿಂದ ತಪ್ಪಿಸಿಕೊಳ್ಳಲು ಹೊಸ ಐಡಿಯಾ

ವಿಜಯ್ ಅವರು 1992ರಲ್ಲಿ ಚೆನ್ನೈನ ಲೊಯೊಲಾ ಕಾಲೇಜಿನಲ್ಲಿ ಬಿಎಸ್‌ಸಿ ಪದವಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. 1989 ಮತ್ತು 1991ರಲ್ಲಿ 10 ಮತ್ತು 12ನೇ ತರಗತಿಯನ್ನು ಖಾಸಗಿಯಾಗಿ ಪೂರೈಸಿದ್ದಾರೆ. ಅವರ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳು ಬಾಕಿ ಇಲ್ಲ ಹಾಗೂ ಯಾವುದೇ ಪ್ರಕರಣದಲ್ಲಿ ಶಿಕ್ಷೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮಿಳುನಾಡು ವಿಧಾನಸಭೆಗೆ ಏಪ್ರಿಲ್ 23ರಂದು ಚುನಾವಣೆ ನಡೆಯಲಿದೆ. ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೊಸ ಚರ್ಚೆ ಹುಟ್ಟುಹಾಕಿದ KPS ಮ್ಯಾಗ್ನೆಟ್ ಶಾಲೆ ಯೋಜನೆ: ಆರಂಭಕ್ಕೂ ಮುನ್ನವೇ ಅಪಸ್ವರ ಏಕೆ?

ತುಮಕೂರು, ಮಾರ್ಚ್​ 30: ಅದೊಂದು ಕಾಲವಿತ್ತು. ಶಾಲೆ ಎಂದರೇ ಸಾಕು ಮಕ್ಕಳು ಕಿ.ಮೀಗಳಷ್ಟು ದೂರ ಹೆಜ್ಜೆ ಹಾಕಬೇಕಿತ್ತು. ಊರಿಂದೂರಿಗೆ ಬಂದು ಪಾಠ ಕೇಳಬೇಕಿತ್ತು. ನಂತರದಲ್ಲಿ ನಮ್ಮೂರ ಶಾಲೆ ಎಂಬಂತೆ ಹಳ್ಳಿಹಳ್ಳಿಯಲ್ಲೂ ಸರ್ಕಾರಿ ಶಾಲೆ ತೆರೆಯಲಾಗಿತ್ತು. ಮಕ್ಕಳು ಖುಷಿಯಾಗಿ ಪಾಠ ಕೇಳುತಿದ್ದರು. ಆದ್ರೀಗ ಸರ್ಕಾರದ ಕೆಪಿಎಸ್ ಮ್ಯಾಗ್ನೆಟ್ ಶಾಲೆಯ (KPS Magnet Schools) ನೀತಿ ಆರಂಭಕ್ಕೂ ಮುನ್ನವೇ ಒಂದಷ್ಟು ಅಪಸ್ವರದ ಚರ್ಚೆ ಸೃಷ್ಟಿಸಿದೆ.

ವಿವಿಧೋದ್ದೇಶಿತ ಶಾಲಾ ನೀತಿಗೆ ವಿರೋಧ 

ಕೆಪಿಎಸ್ ಶಾಲೆ, ಕರ್ನಾಟಕ ಸಾರ್ವಜನಿಕ ಶಾಲೆಗಳ ಮ್ಯಾಗ್ನೆಟ್ ಯೋಜನೆ. ಇದು ರಾಜ್ಯದ ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಣೆ ಮತ್ತು ಏಕೀಕರಣಕ್ಕಾಗಿ ಹಮ್ಮಿಕೊಂಡಿರುವ ನೀತಿ. ಸುಮಾರು ಒಂದರಿಂದ ಐದು ಕಿ.ಮೀ ವ್ಯಾಪ್ತಿಯ ಸಣ್ಣ ಶಾಲೆಗಳನ್ನು ವಿಲೀನಗೊಳಿಸಿ, ಸುಮಾರು 1,200ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಾಮರ್ಥ್ಯದ ಆಧುನಿಕ ಸೌಲಭ್ಯಗಳಿರುವ ಶಾಲೆಗಳನ್ನು ನಿರ್ಮಿಸುವ ಗುರಿಯಾಗಿದೆ. ಆ ಮೂಲಕ ಪೂರ್ವ ಹಾಗೂ ಪ್ರಾಥಮಿಕದಿಂದ ಪಿಯುಸಿವರೆಗೆ ಒಂದೇ ಸೂರಿನಡಿ ಶಿಕ್ಷಣ ಮತ್ತು ಆಧುನಿಕ ಮೂಲಸೌಕರ್ಯಗಳನ್ನು ಒದಗಿಸುವ ಉದ್ದೇಶ ಹೊಂದಿದೆ. ಈ ರೀತಿಯ ವಿವಿಧೋದ್ದೇಶಿತ ಶಾಲಾ ನೀತಿಗೆ ಈಗ ತುಮಕೂರಿನಲ್ಲಿ ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ: ವರ್ಷಗಳಿಂದ ಅಭಿವೃದ್ಧಿ ಕಾಣದೆ ಉಳಿದ ಬಾಲಕಿಯರ ವಸತಿ ನಿಲಯ; ಮೌಢ್ಯವನ್ನೇ ನೆಪ ಮಾಡಿಕೊಂಡಿತಾ ಸರ್ಕಾರ?

ತುಮಕೂರು ಜಿಲ್ಲೆಯಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ನೀತಿಗೆ ದಿನದಿಂದದಿನಕ್ಕೆ ವಿರೋಧದ ಕೂಗು ಜೋರಾಗುತ್ತಿದೆ. ವಿಲೀನ ನೀತಿ ಪ್ರಕಾರವಾಗಿ ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕ್ರಮದ ವಿರುದ್ಧ ಶಾಲಾ ಮಕ್ಕಳು, ಪೋಷಕರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ತುಮಕೂರು ನಗರ, ಶಿರಾ, ಕೊರಟಗೆರೆ ಸೇರಿದಂತೆ ಹಲವು ತಾಲ್ಲೂಕಿನ ಭಾಗಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಕಾರಣ, ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ನಮ್ಮೂರ ಸರ್ಕಾರಿ ಶಾಲೆಗಳಿಗೆ ಬೀಗ ಹಾಕುವ ಮುಖಾಂತರ ಮುಚ್ಚಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ರೀತಿ ಜಿಲ್ಲೆಯಲ್ಲಿ ಒಟ್ಟು 1200 ಸರ್ಕಾರಿ ಶಾಲೆಗಳ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ವಿದ್ಯಾರ್ಥಿಗಳು ಮತ್ತು ಪೋಷಕರ ಜೊತೆ ಪ್ರತಿಭಟನೆ

ಇನ್ನು ಈ ಹೋರಾಟಕ್ಕೆ ಎಐಡಿಎಸ್ಒ ಸಂಘಟನೆ ಜೊತೆಯಾಗಿದೆ. ಹಳ್ಳಿಹಳ್ಳಿಯ ಸಣ್ಣ ಸರ್ಕಾರಿ ಶಾಲೆಗಳ ಉಳಿವಿಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರ ಜೊತೆ ಪ್ರತಿಭಟನೆ ನಡೆಸುತ್ತಿದೆ. ಗ್ರಾಮಸ್ಥರು ನಮ್ಮ ಶಾಲೆ ಮುಚ್ಚಲು ಬಿಡುವುದಿಲ್ಲ ಎಂದು ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕೂಗು ಹಂತ ಹಂತವಾಗಿ ಜಿಲ್ಲೆಯಾದ್ಯಂತ ವಿರೋಧದ ಅಲೆ ಹೆಚ್ಚಾಗುತ್ತಿದ್ದು, ಸರ್ಕಾರದ ನಿರ್ಧಾರ ಹಿಂಪಡೆಯುವಂತೆ ಆಗ್ರಹ ಹೆಚ್ಚಾಗಿದೆ.

ಇದನ್ನೂ ಓದಿ: ಚಲಿಸುವ ಬಸ್ ಕಿಟಕಿಯಲ್ಲಿ ಬ್ಯಾಗ್ ಇಡಲು ಹೋಗಿ ಚಕ್ರಕ್ಕೆ ಸಿಲುಕಿದ ವಿದ್ಯಾರ್ಥಿನಿ ಕಾಲು: ಸೆರೆಯಾಯ್ತು ಭೀಕರ ದೃಶ್ಯ

ಸದ್ಯ ದಿನದಿಂದ ದಿನಕ್ಕೆ ಕೆಪಿಎಸ್ ಮ್ಯಾಗ್ನೆಟ್ ಶಾಲಾ ನೀತಿಗೆ ತುಮಕೂರಿನಲ್ಲಿ ವಿರೋಧ ಹೆಚ್ಚಾಗುತ್ತಿದೆ. ಸರ್ಕಾರ ಈ ಚಿಂತನೆ ನಿಲ್ಲಿಸುವಂತೆ ಒತ್ತಾಯ ಕೇಳಿಬರುತ್ತಿದೆ. ಸದ್ಯ ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಸ್ವರೂಪ ಪಡೆಯುವ ಸಾಧ್ಯತೆಯಿದ್ದು, ಸರ್ಕಾರ ಈ ವಿಚಾರವಾಗಿ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link