All posts by nagaraj11081993

IND vs AFG: ಭಾರತ- ಅಫ್ಘನ್ 2ನೇ ಪಂದ್ಯಕ್ಕೂ ಮಳೆ ಅಡ್ಡಿಪಡಿಸುತ್ತಾ? ಹೇಗಿರಲಿದೆ ಹವಾಮಾನ? – Kannada News | India vs Afghanistan 2nd ODI: Date, Time, Pitch, Weather Report and Squads

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಎರಡನೇ ಏಕದಿನ ಪಂದ್ಯ ಜೂನ್ 17 ರಂದು ಉತ್ತರ ಪ್ರದೇಶದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯ ಕೂಡ ಮಧ್ಯಾಹ್ನ 1:30 ಕ್ಕೆ ಆರಂಭವಾಗಲಿದೆ. ಮೊದಲನೇ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಸುಲಭವಾಗಿ ಮಣಿಸಿದ್ದ ಟೀಂ ಇಂಡಿಯಾ ಎರಡನೇ ಪಂದ್ಯವನ್ನು ಗೆದ್ದು ಸರಣಿಯನ್ನು ತನ್ನ ಕೈವಶ ಮಾಡಿಕೊಳ್ಳಲು ನೋಡುತ್ತಿದೆ. ಇತ್ತ ಅಫ್ಘಾನಿಸ್ತಾನ ಕೂಡ ಈ ಪಂದ್ಯವನ್ನು ಗೆದ್ದು ಸರಣಿಯನ್ನು ಜೀವಂತವಾಗಿರಿಸಲು ಪ್ರಯತ್ನಿಸಲಿದೆ. ಆದಾಗ್ಯೂ ಈ ಪಂದ್ಯಕ್ಕೂ ಮಳೆ ಅಡ್ಡಿಪಡಿಸುತ್ತಾ ಎಂಬ ಆತಂಕ ಅಭಿಮಾನಿಗಳಿಗಿದೆ. ಏಕೆಂದರೆ ಮಳೆಯಿಂದಾಗಿ ಮೊದಲ ಏಕದಿನ ಪಂದ್ಯವನ್ನು ತಲಾ 25 ಓವರ್​ಗಳಿಗೆ ನಿಗದಿಪಡಿಸಲಾಗಿತ್ತು. ಹೀಗಾಗಿ ಈ ಪಂದ್ಯದ ದಿನದಂದು ಹವಾಮಾನ ವರದಿ ಹೇಗಿರಲಿದೆ ಎಂಬುದು ಪ್ರಶ್ನೆ?

ಹವಾಮಾನ ಹೇಗಿರಲಿದೆ?

ಮೇಲೆ ಹೇಳಿದಂತೆ ಎರಡನೇ ಪಂದ್ಯ ಲಕ್ನೋದಲ್ಲಿ ನಡೆಯಲಿದ್ದು, ಈ ಪಂದ್ಯಕ್ಕೆ ಯಾವುದೇ ಮಳೆಯ ಆತಂಕವಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಪಂದ್ಯದ ದಿನದಂದು ಲಕ್ನೋದಲ್ಲಿ ಬಿಸಿಲು ಹೆಚ್ಚಿರಲಿದ್ದು, ಮಳೆಯಾಗುವ ಸಾಧ್ಯತೆಗಳಿಲ್ಲ. ಆದರೆ ಬಿಸಿ ತಾಪಮಾನದಿಂದ ಆಟಗಾರರು ತೊಂದರೆಗೊಳಗಾಗಬಹುದು. ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಿರಲಿದ್ದು, 45 ಡಿಗ್ರಿ ತಲುಪಬಹುದು ಎಂದು ನಿರೀಕ್ಷಿಸಲಾಗಿದೆ.

ಪಿಚ್ ಹೇಗಿರಲಿದೆ?

ಇನ್ನು ಏಕನಾ ಕ್ರೀಡಾಂಗಣದ ಪಿಚ್ ಬಗ್ಗೆ ಹೇಳುವುದಾದರೆ, ಇದು ಸಾಮಾನ್ಯವಾಗಿ ಬೌಲರ್‌ಗಳಿಗೆ, ವಿಶೇಷವಾಗಿ ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿರುತ್ತದೆ. ಪಂದ್ಯ ಮುಂದುವರೆದಂತೆ, ಪಿಚ್ ನಿಧಾನವಾಗುತ್ತದೆ, ಇದರಿಂದಾಗಿ ಬ್ಯಾಟಿಂಗ್ ಕಷ್ಟವಾಗುತ್ತದೆ. ಹೀಗಾಗಿ ಬ್ಯಾಟ್ಸ್‌ಮನ್‌ಗಳು ದೊಡ್ಡ ಇನ್ನಿಂಗ್ಸ್ ಕಟ್ಟಬೇಕೆಂದರೆ ಆರಂಭದಲ್ಲಿ ತಾಳ್ಮೆಯ ಬ್ಯಾಟಿಂಗ್‌ ಮಾಡುವುದು ಅವಶ್ಯಕ. ಈ ಮೈದಾನದಲ್ಲಿ ಏಕದಿನ ಪಂದ್ಯದಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 213 ರನ್ ಆಗಿದೆ. ಆದ್ದರಿಂದ, ಈ ಪಂದ್ಯ ಹೆಚ್ಚಿನ ಸ್ಕೋರಿಂಗ್ ಪಂದ್ಯವಾಗುವುದು ಅನುಮಾನ.

IND vs AFG: ಮೊದಲ ಏಕದಿನ ಪಂದ್ಯದ ನಡುವೆ ಟೀಂ ಇಂಡಿಯಾಕ್ಕೆ ಸಿಹಿ ಸುದ್ದಿ

ಉಭಯ ತಂಡಗಳು

ಏಕದಿನ ಸರಣಿಗೆ ಟೀಂ ಇಂಡಿಯಾ: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್, ಹರ್ಷ್ ದುಬೆ.

ಏಕದಿನ ಸರಣಿಗೆ ಅಫ್ಘಾನಿಸ್ತಾನ ತಂಡ: ಹಸ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ಸೇದಿಕುಲ್ಲಾ ಅಟಲ್, ದರ್ವಿಶ್ ರಸೂಲಿ, ರಹಮತ್ ಷಾ, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್ಜೈ, ರಶೀದ್ ಖಾನ್, ನಂಗ್ಯಾಲ್ ಖರೋಟೈ, ಎಎಮ್ ಗಜನ್ಫರ್, ಜಿಯಾ ಯು ರೆಹಮಾನ್ ಶರೀಫಿ, ಫರೀದ್ ಮಲಿಕ್, ಬಿಲಾಲ್ ಸಾಮಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ವರ್ಷದಲ್ಲಿ ಮೂರು ಸಿನಿಮಾಗಳ ಬಿಡುಗಡೆಗೆ ರೆಡಿಯಾದ ನಟ ಪ್ರಭಾಸ್? – Kannada News | Pan India Superstar Prabhas Triple Treat for fans in next 12 months

ಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ (Prabhas) ಸದ್ಯ ಸಾಲು ಸಾಲು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಕೈಯಲ್ಲಿ ಸದ್ಯ ಮೂರ್ನಾಲ್ಕು ದೊಡ್ಡ ಸಿನಿಮಾಗಳಿದ್ದು, ಅವುಗಳ ಬಿಡುಗಡೆಯ ಬಗ್ಗೆ ಸಿನಿಮಾ ವಲಯದಲ್ಲಿ ಒಂದು ಲೆಕ್ಕಾಚಾರ ಶುರುವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಕೇವಲ ಒಂದು ವರ್ಷದ ಅಂತರದಲ್ಲಿ ಪ್ರಭಾಸ್ ಅವರ 3 ಮೆಗಾ ಸಿನಿಮಾಗಳು (Prabhas Upcoming Movies) ಥಿಯೇಟರ್​ನಲ್ಲಿ ತೆರೆಕಾಣಲಿವೆ. ಒಂದು ವೇಳೆ ಆ ರೀತಿ ಆಗಿದ್ದೇ ಹೌದಾದರೆ ಪ್ರಭಾಸ್ ಅವರ ಅಭಿಮಾನಿಗಳಿಗೆ ಹಬ್ಬ ಆಗಲಿದೆ. ಬ್ಯಾಕ್ ಟು ಬ್ಯಾಕ್ ಮನರಂಜನೆ ಸಿಗಲಿದೆ.

ಪ್ರಭಾಸ್ ಅವರ ಮುಂಬರುವ ಸಿನಿಮಾಗಳ ಸಂಭಾವ್ಯ ಬಿಡುಗಡೆಯ ಪಟ್ಟಿಯಲ್ಲಿ ‘ಫೌಜಿ’, ‘ಸ್ಪಿರಿಟ್’, ‘ಕಲ್ಕಿ 2’ ಸಿನಿಮಾಗಳಿವೆ. ಈ ಸಾಲಿನಲ್ಲಿ ಮೊದಲಿಗೆ ಥಿಯೇಟರ್‌ಗೆ ಬರಲು ಸಜ್ಜಾಗುತ್ತಿರುವುದು ಹನು ರಾಘವಪುಡಿ ನಿರ್ದೇಶನದ ‘ಫೌಜಿ’ ಸಿನಿಮಾ. ಸದ್ಯದಲ್ಲೇ ಈ ಚಿತ್ರದ ಶೂಟಿಂಗ್ ಬಹಳ ವೇಗವಾಗಿ ಮುಂದುವರಿಯಲಿದ್ದು, ಚಿತ್ರತಂಡವು ಡಿಸೆಂಬರ್ ವೇಳೆಗೆ ಸಿನಿಮಾವನ್ನು ತೆರೆಗೆ ತರಲು ಭರ್ಜರಿ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ.

‘ಅರ್ಜುನ್ ರೆಡ್ಡಿ’, ‘ಅನಿಮಲ್’ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ಮತ್ತು ಪ್ರಭಾಸ್ ಕಾಂಬಿನೇಷನ್‌ನ ‘ಸ್ಪಿರಿಟ್’ ಚಿತ್ರದ ಮೇಲಿನ ನಿರೀಕ್ಷೆ ಮುಗಿಲು ಮುಟ್ಟಿದೆ. ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಮುಕ್ತಾಯದ ಹಂತದಲ್ಲಿದ್ದು, ಶೀಘ್ರದಲ್ಲೇ ಶೂಟಿಂಗ್ ಆರಂಭವಾಗಲಿದೆ. ಸದ್ಯದ ಮಾಹಿತಿ ಪ್ರಕಾರ, ಈ ಚಿತ್ರವು 2027ರ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

2024ರಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್ ‘ಕಲ್ಕಿ 2’ ಸಿನಿಮಾಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಸೈನ್ಸ್ ಫಿಕ್ಷನ್ ಸಿನಿಮಾದ ಅಧಿಕೃತ ಬಿಡುಗಡೆಯ ದಿನಾಂಕ ಇನ್ನೂ ಪ್ರಕಟವಾಗಿಲ್ಲವಾದರೂ, ಚಿತ್ರವು 2027ರ ಡಿಸೆಂಬರ್ ವೇಳೆಗೆ ತೆರೆಗೆ ಬರುವ ಸಾಧ್ಯತೆ ದಟ್ಟವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

ಇದನ್ನೂ ಓದಿ: ಭೀಕರ ಅಪಘಾತ: ಪ್ರಭಾಸ್ ನಟನೆಯ ‘ಫೌಜಿ’ ಚಿತ್ರತಂಡದ ಸದಸ್ಯ ಸಾವು; ಶೂಟಿಂಗ್ ಸ್ಥಗಿತ

ಒಂದು ವೇಳೆ ಈ ಬಿಡುಗಡೆಯ ಪ್ಲ್ಯಾನ್ ನಿಜವಾದರೆ, 2026ರ ಡಿಸೆಂಬರ್ ತಿಂಗಳಿಂದ 2027ರ ಡಿಸೆಂಬರ್ ನಡುವಿನ ಕೇವಲ 12 ತಿಂಗಳ ಅವಧಿಯಲ್ಲಿ ಪ್ರಭಾಸ್ ಅವರ ಮೂರು ಬಿಗ್ ಬಜೆಟ್ ಚಿತ್ರಗಳು ಪ್ರೇಕ್ಷಕರ ಮುಂದೆ ಬರಲಿವೆ. ಭಾರತೀಯ ಚಿತ್ರರಂಗದ ಇಂದಿನ ಮಾರುಕಟ್ಟೆಯಲ್ಲಿ ಇಷ್ಟು ದೊಡ್ಡ ಮಟ್ಟದ ಸಿನಿಮಾಗಳು ಒಂದೇ ವರ್ಷದಲ್ಲಿ ಒಬ್ಬ ಸ್ಟಾರ್ ನಟನಿಂದ ಬರುವುದು ಅಪರೂಪ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವೇದಿಕೆ ಮೇಲೆ ಸಮಂತಾಗೆ ‘ಐ ಲವ್ ಯೂ’ ಹೇಳಲು ನಿರಾಕರಿಸಿದ ಪತಿ ರಾಜ್ ನಿಡಿಮೋರು – Kannada News | Samantha Ruth Prabhu Husband Raj Nidimoru Funny Stage Moment at Maa Inti Bangaram

ದೇಶಾದ್ಯಂತ ದೊಡ್ಡ ಮಟ್ಟದ ಅಭಿಮಾನಿ ಬಳಗ ಹೊಂದಿರುವ ನಟಿ ಸಮಂತಾ ರುತ್ ಪ್ರಭು (Samantha) ಸದ್ಯ ತಮ್ಮ ಮುಂಬರುವ ಚಿತ್ರ ‘ಮಾ ಇಂಟಿ ಬಂಗಾರಂ’ (Maa Inti Bangaram) ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಈ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಸಮಂತಾ ಮತ್ತು ಅವರ ಪತಿ, ಖ್ಯಾತ ನಿರ್ದೇಶಕ ರಾಜ್ ನಿಡಿಮೋರು (Raj Nidimoru) ಒಟ್ಟಿಗೆ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಈ ವೇಳೆ ವೇದಿಕೆ ಮೇಲೆ ನಡೆದ ಒಂದು ಮಜಾವಾದ ಪ್ರಸಂಗದ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಕಾರ್ಯಕ್ರಮದ ನಿರೂಪಕಿ ಸುಮಾ ಅವರು ವೇದಿಕೆ ಮೇಲಿದ್ದ ರಾಜ್ ನಿಡಿಮೋರು ಅವರಿಗೆ, ‘ಸಮಂತಾ ಅವರಿಗೆ ಸಾರ್ವಜನಿಕವಾಗಿ ಐ ಲವ್ ಯೂ ಅಂತ ಹೇಳಿ’ ಎಂದು ಕೇಳಿಕೊಂಡರು. ಇದಕ್ಕೆ ಅಲ್ಲಿದ್ದ ಅಭಿಮಾನಿಗಳು ಕೂಡ ಜೋರಾಗಿ ಕಿರುಚುತ್ತಾ ಬೆಂಬಲ ನೀಡಿದರು. ಆದರೆ ರಾಜ್ ನಿಡಿಮೋರು ವೇದಿಕೆ ಮೇಲೆ ಪ್ರೀತಿ ವ್ಯಕ್ತಪಡಿಸಲು ನಿರಾಕರಿಸಿದರು.

ಅದಕ್ಕೆ ಅವರು ನೀಡಿದ ಕಾರಣ ಕೇಳಿ ಅಲ್ಲಿದ್ದ ಪ್ರೇಕ್ಷಕರು ನಗೆಗಡಲಲ್ಲಿ ತೇಲಿದರು. ‘ಈಗಾಗಲೇ ವೇದಿಕೆ ಮೇಲಿಂದ ಮತ್ತು ಆಡಿಯನ್ಸ್ ಕಡೆಯಿಂದ ಸಾಕಷ್ಟು ಜನರು ಸಮಂತಾಗೆ ಐ ಲವ್ ಯೂ ಅಂತ ಹೇಳುತ್ತಿದ್ದಾರೆ. ಹೀಗಾಗಿ ನಾನು ಹೊಸದಾಗಿ ಹೇಳುವುದರಲ್ಲಿ ಏನೂ ವಿಶೇಷತೆ ಇಲ್ಲ’ ಎಂದು ರಾಜ್ ತಮಾಷೆಯಾಗಿ ಉತ್ತರಿಸಿದರು. ಅಲ್ಲದೇ ಅವರು ಸಿನಿಮಾ ಬಗ್ಗೆ ಮಾತ್ರ ಮಾತನಾಡಿದರು.

ವೇದಿಕೆ ಮೇಲೆ ಪ್ರೀತಿ ವ್ಯಕ್ತಪಡಿಸಲು ಹಿಂಜರಿದರೂ, ರಾಜ್ ನಿಡಿಮೋರು ಅವರು ಸಮಂತಾ ಅವರ ನಟನಾ ಕೌಶಲ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ‘ಈ ಸಿನಿಮಾದಲ್ಲಿ ಕೆಲಸ ಮಾಡುವಾಗ ಸಮಂತಾ ಅವರ ನಟನೆಯ ಆಳ ಮತ್ತು ಸೂಕ್ಷ್ಮತೆಗಳು ನನಗೆ ಇನ್ನಷ್ಟು ಹತ್ತಿರದಿಂದ ಅರ್ಥವಾದವು. ಎಷ್ಟೋ ಕಷ್ಟದ ಎಮೋಷನಲ್ ದೃಶ್ಯಗಳನ್ನು ಸಮಂತಾ ಮೊದಲ ಟೇಕ್‌ನಲ್ಲೇ ಅದ್ಭುತವಾಗಿ ನಟಿಸಿ ಇಡೀ ಚಿತ್ರತಂಡಕ್ಕೆ ಆಶ್ಚರ್ಯ ಮೂಡಿಸುತ್ತಿದ್ದರು. ಅವರು ಪ್ರತಿ ಸಿನಿಮಾದಲ್ಲೂ ಹೊಸ ಆಯಾಮವನ್ನು ತೋರಿಸುವ ಅದ್ಭುತ ನಟಿ’ ಎಂದರು.

ಇದನ್ನೂ ಓದಿ: ರಿಲೀಸ್​​ಗೂ ಮೊದಲೇ ಸೇಫ್ ಆದ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’

‘ಮಾ ಇಂಟಿ ಬಂಗಾರಂ’ ಸಿನಿಮಾವನ್ನು ಸಮಂತಾ ತಮ್ಮದೇ ‘ಟ್ರಾ ಲಾಲಾ ಮೂವಿಂಗ್ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ‘ನಟಿಯಾಗಿ ನಟಿಸುವುದು ಸುಲಭ, ಆದರೆ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿರ್ಮಾಪಕಿಯಾಗುತ್ತಿರುವುದರಿಂದ ಸಿನಿಮಾ ಬಿಡುಗಡೆಗೂ ಮುನ್ನ ಕೊಂಚ ಒತ್ತಡ ಎದುರಾಗಿದೆ’ ಎಂದು ಹಂಚಿಕೊಂಡರು. ಜೊತೆಗೆ ಸಿನಿಮಾದ ಯಶಸ್ಸಿಗೆ ತೆರೆಮರೆಯಲ್ಲಿ ಶ್ರಮಿಸಿದ ಪ್ರತಿಯೊಬ್ಬ ತಂತ್ರಜ್ಞರಿಗೂ ಅವರು ಧನ್ಯವಾದ ಅರ್ಪಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Women’s T20 World Cup: ಭಾರತದ ವಿರುದ್ಧ ಸೋತ ಪಾಕಿಸ್ತಾನ ತಂಡಕ್ಕೆ ದಂಡ – Kannada News | ICC Fines Pakistan Women’s Team in T20 World Cup 2026 for Slow Over Rate After India Defeat

ಭಾರತದ ವಿರುದ್ಧದ ಭಾರೀ ಸೋಲಿನ ನಂತರ, ಪಾಕಿಸ್ತಾನ ಮುಂದಿನ ಸುತ್ತಿಗೆ ಮುನ್ನಡೆಯುವ ಸಾಧ್ಯತೆಗಳು ತೀರಾ ಕಡಿಮೆ ಎಂದು ತೋರುತ್ತದೆ. ಏಕೆಂದರೆ ಪಾಕ್ ತಂಡ ಪ್ರಸ್ತುತ ಗ್ರೂಪ್ ಎ ನಲ್ಲಿ ಐದನೇ ಸ್ಥಾನದಲ್ಲಿದ್ದು ಅದರ ನೆಟ್ ರನ್​ರೇಟ್ -3,200 ಆಗಿದೆ. ಇದೀಗ ಪಾಕಿಸ್ತಾನ ತನ್ನ ಮುಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ, ಈ ಪಂದ್ಯ ಜೂನ್ 17 ರಂದು ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ (PC-PTI).

Source link

ದೆಹಲಿಯಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರರ ಜಾಲ ಪತ್ತೆ; 7 ಮಂದಿ ಬಂಧನ – Kannada News | Pakistan ISI backed terror network busted in Delhi 7 arrested

ನವದೆಹಲಿ, ಜೂನ್ 16: ದೇಶದ ಭದ್ರತಾ ಸಂಸ್ಥೆಗಳ ನಿರಂತರ ನಿಗಾ ಮತ್ತು ಸಮಯೋಚಿತ ಕಾರ್ಯಾಚರಣೆಯಿಂದಾಗಿ ದೆಹಲಿಯಲ್ಲಿ (Delhi) ಸಂಭವಿಸಬೇಕಿದ್ದ ಭಾರಿ ದುರಂತವೊಂದು ತಪ್ಪಿದೆ. ಪಾಕಿಸ್ತಾನದ ನೆರವಿನಿಂದ ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಅಂತಾರಾಷ್ಟ್ರೀಯ ಉಗ್ರ ಜಾಲದ 7 ಜನ ಸಕ್ರಿಯ ಸದಸ್ಯರನ್ನು ದೆಹಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳು ಹಬ್ಬಗಳ ಸಂದರ್ಭದಲ್ಲಿ ದೆಹಲಿ ಮತ್ತು ದೇಶದ ಇತರ ಪ್ರಮುಖ ನಗರಗಳಲ್ಲಿ ಜನನಿಬಿಡ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ದೆಹಲಿಯ ವಿವಿಧ ಪ್ರದೇಶಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ ವಿಶೇಷ ಪೊಲೀಸ್ ಪಡೆಗಳು, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಉಗ್ರರ ಅಡಗುದಾಣಗಳಿಂದ ಆಘಾತಕಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಾರಿ ಪ್ರಮಾಣದ ಜೀವಂತ ಗುಂಡುಗಳು, ವಿವಿಧ ರೀತಿಯ ಸ್ಫೋಟಕ ಸಾಮಗ್ರಿಗಳು ಮತ್ತು ಸುಧಾರಿತ ತಂತ್ರಜ್ಞಾನದ ಸಂವಹನ ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಆಯುಧಗಳನ್ನು ಗಡಿ ಭಾಗದ ಮೂಲಕ ಸಾಗಿಸಿ, ದೆಹಲಿಯಲ್ಲಿ ವಿಧ್ವಂಸಕ ಕೃತ್ಯ ಎಸಗಲೆಂದೇ ತಲುಪಿಸಲಾಗಿತ್ತು ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ವೃದ್ಧೆಗೂ ಇಲ್ಲ ಭದ್ರತೆ; ಕಣ್ಣು ಕಾಣದ 70 ವರ್ಷದ ದೆಹಲಿಯ ಮಹಿಳೆ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯಕ್ಕೆ ಯತ್ನ

ಪೊಲೀಸ್ ತನಿಖೆಯ ಪ್ರಕಾರ, ಬಂಧಿತ ಆರೋಪಿಗಳು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಹಾಗೂ ಅಲ್ಲಿನ ಗುಪ್ತಚರ ಸಂಸ್ಥೆಯಾದ ಐಎಸ್‌ಐ (ISI) ಹ್ಯಾಂಡ್ಲರ್‌ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಇವರಿಗೆ ಎನ್‌ಕ್ರಿಪ್ಟೆಡ್ ಸೋಶಿಯಲ್ ಮೀಡಿಯಾ ಆಪ್‌ಗಳ (ಉದಾಹರಣೆಗೆ ಟೆಲಿಗ್ರಾಂ, ಸಿಗ್ನಲ್) ಮೂಲಕ ಪಾಕಿಸ್ತಾನದಿಂದಲೇ ಬಾಂಬ್ ತಯಾರಿಕೆ ಮತ್ತು ವಿಧ್ವಂಸಕ ಕೃತ್ಯಗಳ ತರಬೇತಿ ನೀಡಲಾಗಿತ್ತು.

ಈ ಜಾಲವನ್ನು ಸಕ್ರಿಯವಾಗಿಡಲು ಹವಾಲಾ ಚಾನೆಲ್‌ಗಳ ಮೂಲಕ ಮತ್ತು ಕ್ರಿಪ್ಟೋಕರೆನ್ಸಿ ಬಳಸಿ ಪಾಕಿಸ್ತಾನದಿಂದ ಭಾರಿ ಪ್ರಮಾಣದ ಹಣ ಹರಿದುಬಂದಿರುವುದನ್ನು ಬ್ಯಾಂಕ್ ಖಾತೆಗಳ ಪರಿಶೀಲನೆಯಿಂದ ಪತ್ತೆಹಚ್ಚಲಾಗಿದೆ. ಈ ಉಗ್ರ ಜಾಲ ಪತ್ತೆಯಾದ ಬೆನ್ನಲ್ಲೇ ನವದೆಹಲಿ ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ರೈಲ್ವೆ ನಿಲ್ದಾಣಗಳು, ಮೆಟ್ರೋ ಸ್ಟೇಷನ್‌ಗಳು, ವಿಮಾನ ನಿಲ್ದಾಣ ಹಾಗೂ ಮಾಲ್‌ಗಳಂತಹ ಜನನಿಬಿಡ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಕೋರ್ಟ್ ತೀರ್ಪು ಬರೋ ಮುನ್ನವೇ ಮಡಿವಾಳ ಬಾಂಬ್ ಸ್ಫೋಟ ಕೇಸ್‌ನ ಶಂಕಿತ ಉಗ್ರ ಸಾವು

ಬಂಧಿತ 7 ಮಂದಿ ಉಗ್ರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇವರ ಹಿಂದೆ ದೇಶದೊಳಗೆ ಬೇರೆ ಯಾರಾದರೂ ಸ್ಥಳೀಯ ಸಹಚರರು ಇದ್ದಾರೆಯೇ ಎಂಬ ನಿಟ್ಟಿನಲ್ಲಿ ತನಿಖೆ ತೀವ್ರಗೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ 2ನೇ ಪಂದ್ಯ; ಎದುರಾಳಿ ಯಾರು? ಪಂದ್ಯ ಎಷ್ಟು ಗಂಟೆಗೆ ಆರಂಭ? – Kannada News | India vs Netherlands Women’s T20 WC: Match Preview, Squads and Live Stream Details

2026 ರ ಮಹಿಳಾ ಟಿ20 ವಿಶ್ವಕಪ್‌ನ (Women’s T20 World Cup 2026) 10ನೇ ಪಂದ್ಯದಲ್ಲಿ ಭಾರತ ಹಾಗೂ ನೆದರ್ಲ್ಯಾಂಡ್ಸ್ (India vs Netherlands) ಮಹಿಳಾ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಲೀಗ್​ನಲ್ಲಿ ಎರಡು ತಂಡಗಳಿಗೆ ಇದು ಎರಡನೇ ಪಂದ್ಯವಾಗಿದೆ. ಭಾರತ ತಂಡ ತನ್ನ ಮೊದಲನೇ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ತನ್ನ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿತ್ತು. ಹೀಗಾಗಿ ಹರ್ಮನ್‌ಪ್ರೀತ್ ಪಡೆ ಭಾರತ ತನ್ನ ಗೆಲುವಿನ ಓಟವನ್ನು ಮುಂದುವರಿಸಲು ಎದುರು ನೋಡುತ್ತಿದೆ. ಏತನ್ಮಧ್ಯೆ, ಬಾಂಗ್ಲಾದೇಶ ವಿರುದ್ಧದ ಸೋಲಿನಿಂದ ಹೊರಬಂದಿರುವ ನೆದರ್ಲ್ಯಾಂಡ್ಸ್, ತನ್ನ ಗೆಲುವಿನ ಖಾತೆಯನ್ನು ತೆರೆಯುವ ಗುರಿಯೊಂದಿಗೆ ಕಣಕ್ಕಿಳಿಯುತ್ತಿದೆ.

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪಂದ್ಯ ಯಾವಾಗ ನಡೆಯಲಿದೆ?

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪಂದ್ಯ ಜೂನ್ 17 ರ ಬುಧವಾರದಂದು ನಡೆಯಲಿದೆ.

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪಂದ್ಯ ಎಲ್ಲಿ ನಡೆಯಲಿದೆ?

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪಂದ್ಯ ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನಡೆಯಲಿದೆ.

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪಂದ್ಯ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪಂದ್ಯ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಪ್ರಾರಂಭವಾಗಲಿದ್ದು, ಟಾಸ್ ಸಂಜೆ 6:30ಕ್ಕೆ ನಡೆಯಲಿದೆ.

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪಂದ್ಯವನ್ನು ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು.

IND vs PAK: ವಿಶ್ವಕಪ್​ ಅಂಗಳದಲ್ಲೂ ಕೈಕುಲುಕದ ಉಭಯ ನಾಯಕಿಯರು

ಉಭಯ ತಂಡಗಳು

ನೆದರ್ಲ್ಯಾಂಡ್ಸ್ ಮಹಿಳಾ ತಂಡ: ಬಾಬೆಟ್ ಡಿ ಲೀಡೆ (ನಾಯಕ), ಕ್ಯಾರೊಲಿನ್ ಡಿ ಲ್ಯಾಂಗೆ, ಫ್ರೆಡೆರಿಕ್ ಓವರ್‌ಡಿಜ್ಕ್, ಹನ್ನಾ ಲ್ಯಾಂಡ್‌ಹೀರ್, ಹೀದರ್ ಸೆಗರ್ಸ್, ಐರಿಸ್ ಜ್ವಿಲ್ಲಿಂಗ್, ಇಸಾಬೆಲ್ಲೆ ವ್ಯಾನ್ ಡೆರ್ ವೊನಿಂಗ್, ಲಾರಾ ಲೀಮ್‌ಹುಯಿಸ್, ಮಿರ್ತೆ ವ್ಯಾನ್ ಡೆನ್ ರಾಡ್, ಫೆಬೆ ಮೊಲ್ಕೆನ್‌ಬೋರ್, ರಾಬಿನ್ ರಿಜ್ಕೆರ್ಯಾ, ರೊಸಾಲಿ ಕ್ವೆರೆನಾ, ರೊಸಾಲೀ ಕ್ವೆರ್ರೆನಾ ಕಾಲಿಸ್.

ಭಾರತೀಯ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್, ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ನಂದನಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಕ್ರಾಂತಿ ಗೌಡ್, ಶ್ರೇಯಾಂಕ ಪಾಟೀಲ್, ರಾಧಾ ಯಾದವ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:36 pm, Tue, 16 June 26

Source link

ಅಂಬಾನಿ ನೀಡಿದ 2.2 ಕೋಟಿ ರೂಪಾಯಿ ಬೆಲೆಯ ಬ್ರೇಸ್​ಲೆಟ್ ಧರಿಸಿ ಮಿಂಚಿದ ರಿಯಾನಾ – Kannada News | Global singer Rihanna shows off Ambani gifted Jewelry in viral video

ಜಾಗತಿಕ ಮ್ಯೂಸಿಕ್ ಐಕಾನ್ ರಿಯಾನಾ ಮತ್ತು ಭಾರತದ ಶ್ರೀಮಂತ ಉದ್ಯಮಿ ಅಂಬಾನಿ (Mukesh Ambani) ಕುಟುಂಬದ ನಡುವಿನ ಸ್ನೇಹ ಈಗ ಮತ್ತೆ ಸುದ್ದಿಯಲ್ಲಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಮುಂಬೈನ ಅಂಬಾನಿ ನಿವಾಸಕ್ಕೆ ಭೇಟಿ ನೀಡಿದ್ದ ರಿಯಾನಾ ಅವರಿಗೆ, ಅಂಬಾನಿ ಕುಟುಂಬದವರು ಅತ್ಯಂತ ಬೆಲೆಬಾಳುವ ವಜ್ರದ ಬ್ರೇಸ್ಲೆಟ್ ಉಡುಗೊರೆಯಾಗಿ ನೀಡಿದ್ದರು. ಆ ಬಗ್ಗೆ ಈಗ ರಿಯಾನಾ (Rihanna) ಅವರು ಮಾತನಾಡಿದ್ದಾರೆ. ವಜ್ರದ ಬ್ರೇಸ್ಲೆಟ್ ಬೆಲೆ ಎಷ್ಟು ಎಂಬುದು ತಿಳಿದು ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಅದರ ಬೆಲೆ ಬರೋಬ್ಬರಿ 2.2 ಕೋಟಿ ರೂಪಾಯಿ!

ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ರಿಯಾನಾ ಈ ಸುಂದರವಾದ ಬ್ರೇಸ್ಲೆಟ್ ಅನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ. ‘ದಿ ಪೀಪಲ್ ಗ್ಯಾಲರಿ’ ಎಂಬ ಇನ್‌ಸ್ಟಾಗ್ರಾಮ್ ಪೇಜ್ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ರಿಯಾನಾ ಅವರು ತಮ್ಮ ಅಂದಿನ ಫ್ಯಾಷನ್ ಮತ್ತು ಉಡುಪಿನ ಬಗ್ಗೆ ವಿವರಿಸುತ್ತಿದ್ದರು. ಡಬಲ್-ಡೆನಿಮ್ ಔಟ್‌ಫಿಟ್ ಧರಿಸಿದ್ದ ಅವರು, ತಮ್ಮ ಕೈಯಲ್ಲಿದ್ದ ವಜ್ರದ ಬ್ರೇಸ್ಲೆಟ್ ಅನ್ನು ಕ್ಯಾಮೆರಾ ಹತ್ತಿರ ತಂದು, ‘ಇದು ಭಾರತದ ಅಂಬಾನಿ ಕುಟುಂಬದವರು ನೀಡಿದ್ದು’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಸೆಲೆಬ್ರಿಟಿ ಜ್ಯುವೆಲ್ಲರಿ ಎಕ್ಸ್‌ಪರ್ಟ್ ಪ್ರಿಯಾಂಶು ಗೋಯಲ್ ಅವರ ಪ್ರಕಾರ, ಈ ವಜ್ರದ ಟೆನ್ನಿಸ್ ಬ್ರೇಸ್ಲೆಟ್​ನ ಅಂದಾಜು ಮೊತ್ತ ಸುಮಾರು 2.2 ಕೋಟಿ ರೂಪಾಯಿಗಳು. ಇದು ಅತ್ಯಂತ ಸರಳ, ಸುಂದರ ಮತ್ತು ಕಾಲಾತೀತ ವಿನ್ಯಾಸವನ್ನು ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಿಯಾನಾ ಮತ್ತು ಅಂಬಾನಿ ಕುಟುಂಬದ ನಡುವಿನ ಒಡನಾಟಕ್ಕೆ ಈ ಉಡುಗೊರೆಯೇ ಸಾಕ್ಷಿಯಾಗಿದೆ.

ರಿಯಾನಾ ವೈರಲ್ ವಿಡಿಯೋ:

ಈ ವಿಡಿಯೋದಲ್ಲಿ ರಿಯಾನಾ ಮತ್ತೊಂದು ಆಸಕ್ತಿದಾಯಕ ವಿಷಯವನ್ನು ಹಂಚಿಕೊಂಡಿದ್ದಾರೆ. ತಾವು ಧರಿಸಿರುವ ಮೇಕಪ್ ಮತ್ತು ಕೇಶವಿನ್ಯಾಸವನ್ನು ಯಾವುದೇ ಗ್ಲಾಮ್ ಟೀಮ್ ಸಹಾಯವಿಲ್ಲದೆ ತಾವೇ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಇದಕ್ಕಾಗಿ ಅವರು ತಮ್ಮದೇ ಸ್ವಂತ ಬ್ರ್ಯಾಂಡ್ ಆದ ‘ಫೆಂಟಿ ಬ್ಯೂಟಿ’ ಉತ್ಪನ್ನಗಳನ್ನು ಬಳಸಿದ್ದಾರೆ.

ಇದನ್ನೂ ಓದಿ: 6ನೇ ವರ್ಷವೂ ಸಂಬಳ ಬೇಡ ಎಂದ ಮುಕೇಶ್ ಅಂಬಾನಿ; ಏಷ್ಯಾದ ಅತಿ ಶ್ರೀಮಂತ ಉದ್ಯಮಿಗೆ ಆದಾಯ ಎಲ್ಲಿಂದ?

ರಿಯಾನಾ ಅವರು ಏಪ್ರಿಲ್ ತಿಂಗಳಲ್ಲಿ ತಮ್ಮ ಬ್ಯೂಟಿ ಬ್ರ್ಯಾಂಡ್ ಕೆಲಸದ ನಿಮಿತ್ತ ಮುಂಬೈಗೆ ಬಂದಿದ್ದರು. ಈ ಸಂದರ್ಭದಲ್ಲಿ ಅವರು ಅಂಬಾನಿ ನಿವಾಸದಲ್ಲಿ ಆರತಿ ಬೆಳಗಿ, ಭಾರತೀಯ ಸಂಪ್ರದಾಯದಂತೆ ಸಂಭ್ರಮಿಸಿದ್ದರು. 2024ರಲ್ಲಿ ಜಾಮ್‌ನಗರದಲ್ಲಿ ನಡೆದ ಅಂಬಾನಿ ಕುಟುಂಬದ ಕಾರ್ಯಕ್ರಮದಲ್ಲಿ ರಿಯಾನಾ ಅವರ ಪ್ರದರ್ಶನ ಇಡೀ ವಿಶ್ವದ ಗಮನ ಸೆಳೆದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

World Day to Combat Desertification and Drought 2026: ಬರಡಾಗುತ್ತಿರುವ ಭೂಮಿಯ ರಕ್ಷಣೆ ನಮ್ಮೆಲ್ಲರ ಹೊಣೆ – Kannada News | World Day to Combat Desertification and Drought 2026: What is the purpose of the World Day for the Prevention of Desertification and Drought?

ಮರುಭೂಮೀಕರಣ ಮತ್ತು ಬರಗಾಲ ತಡೆ ದಿನ Image Credit source: vecteezy

ಅರಣ್ಯ ನಾಶ, ನಗರೀಕರಣದಂತಹ ಮಾನವನ ಚಟುವಟಿಕೆಗಳು ಮತ್ತು ಹವಾಮಾನ ಬದಲಾವಣೆ (Climate change), ಜಾಗತಿಕ ತಾಪಮಾನದ ಕಾರಣದಿಂದಾಗಿ ಭೂಮಿ ಬರಡಾಗುತ್ತಿದ್ದು, ಫಲವತ್ತತೆ ಅವನತಿಯ ಹಂತ ತಲುಪುತ್ತಿದೆ. ಬಹಳಷ್ಟು ಪ್ರದೇಶಗಳು ಮರುಭೂಮಿಗಳಾಗಿ ಬದಲಾಗುವ ಅಂಚಿಗೆ ತಲುಪಿವೆ. ಇದಕ್ಕೆ ಉದಾಹರಣೆಯೆಂಬಂತೆ ಮುಂಗಾರು ಆರಂಭವಾಗಿ ಒಂದೆರಡು ವಾರ ಕಳೆದ್ರೂ ಈ ಬಾರಿ ದೇಶದ ಹಲವು ಭಾಗಗಳಲ್ಲಿ ನಿರೀಕ್ಷೆಯಂತೆ ಮಳೆಯಾಗುತ್ತಿಲ್ಲ. ಡ್ಯಾಮ್‌ಗಳೆಲ್ಲಾ ಬರಿದಾಗುತ್ತಿದ್ದು, ಬರದ ಛಾಯೆ ಮೂಡುತ್ತಿದೆ. ಈ ಬರಗಾಲ ಪರಿಸ್ಥಿತಿ ಜಗತ್ತಿಗೆ ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ. ಈ ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿ, ಬರಗಾಲ ಮತ್ತು ಮರುಭೂಮೀಕರಣದ ಪರಿಣಾಮಗಳನ್ನು ತಡೆಗಟ್ಟಲು ಪ್ರತಿವರ್ಷ ಜೂನ್‌ 17 ರಂದು ವಿಶ್ವ ಮರುಭೂಮೀಕರಣ ಮತ್ತು ಬರಗಾಲ ತಡೆ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಮರುಭೂಮೀಕರಣ ಮತ್ತು ಬರಗಾಲ ತಡೆ ದಿನದ ಇತಿಹಾಸವೇನು?

ಮರುಭೂಮೀಕರಣ ಮತ್ತು ಬರಗಾಲ ಸಮಸ್ಯೆಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಈ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 1994 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ಪರಿಸರ ಅವನತಿ ಮತ್ತು ಮರುಭೂಮೀಕರಣವನ್ನು ಎದುರಿಸಲು  ವಿಶ್ವಸಂಸ್ಥೆಯ ಸಮಾವೇಶವನ್ನು (UNCCD) ಅಂಗೀಕರಿಸಿತು. ಆ ದಿನದಂದು ಜೂನ್‌ 17 ರಂದು ಮರುಭೂಮೀಕರಣ ಮತ್ತು ಬರಗಾಲ ತಡೆ ದಿನವನ್ನು ಆಚರಿಸಲಾಗುವುದು ಎಂದು ಘೋಷಿಸಲಾಯಿತು. ಈ ದಿನವನ್ನು ಮೊದಲು 1995 ರಲ್ಲಿ ಆಚರಿಸಲಾಯಿತು. ಮತ್ತು  ಅಂದಿನಿಂದ ಈ ದಿನವನ್ನು ಪ್ರತಿವರ್ಷ ಆಚರಿಸಲಾಗುತ್ತಿದೆ.

ಇದನ್ನೂ ಓದಿ: ವಿಶ್ವ ಪವನ ದಿನಾಚರಣೆಯ ಉದ್ದೇಶವೇನು?

ವಿಶ್ವ ಮರುಭೂಮೀಕರಣ ಮತ್ತು ಬರಗಾಲ ತಡೆ ದಿನದ ಮಹತ್ವವೇನು?

  • ಮರುಭೂಮೀಕರಣ ಮತ್ತು ಬರಗಾಲದಿಂದಾಗಿ ಜಗತ್ತಿನಲ್ಲಿ ಎಷ್ಟು ಸಮಸ್ಯೆಗಳು ಎದುರಾಗುತ್ತಿವೆ ಮತ್ತು ಅವುಗಳನ್ನು ಹೇಗೆ ನಿಭಾಯಿಸಬಹುದು ಎಂಬುದನ್ನು ಜನರಿಗೆ ಅರ್ಥಮಾಡಿಸಲು ವಿಶ್ವ ಮರುಭೂಮೀಕರಣ ಮತ್ತು ಬರಗಾಲ ತಡೆ ದಿನವನ್ನು ಆಚರಿಸಲಾಗುತ್ತದೆ.
  • ಈ ದಿನದ ಮಹತ್ವವೆಂದರೆ, ಪ್ರಪಂಚದಾದ್ಯಂತ ಭೂ ದುರುಪಯೋಗ, ಮರುಭೂಮಿೀಕರಣ ಮತ್ತು ಬರಗಾಲದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಮತ್ತು ಅವುಗಳನ್ನು ಹೇಗೆ ಪರಿಹರಿಸಬಹುದು ಎಂಬುದರ ಕುರಿತು ಜನರಿಗೆ ಶಿಕ್ಷಣ ನೀಡುವುದು. ಈ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಜನರು ಒಟ್ಟಾಗಿ ಹೇಗೆ ಕೆಲಸ ಮಾಡಬಹುದು ಎಂಬುದರ ಕುರಿತು ಇದು ಜಾಗೃತಿ ಮೂಡಿಸುವುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯಗೆ ಸಿಕ್ತು ವಿಶೇಷ ಸ್ಥಾನ – Kannada News | Minister Yathindra Siddaramaiah gets chance to Sit On Stage of CLP Meeting

ಬೆಂಗಳೂರು, (ಜೂನ್ 16): ಇದೇ ಜೂನ್ 18ರಂದು ವಿಧಾನಪರಿಷತ್​ನ 7 ಸ್ಥಾನಗಳಿಗೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಶಾಸಕರು ರೆಸಾರ್ಟ್​​​ಗೆ ಶಿಫ್ಟ್ ಆಗಿದ್ದು, ಬಿಡದಿ ಬಳಿಯ ವಂಡರ್​ಲಾ ರೆಸಾರ್ಟ್​ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಸಿಎಲ್​ಪಿ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು ಉಪಸ್ಥಿತರಿದ್ದಾರೆ. ಇನ್ನು ಸಭೆಯಲ್ಲಿ ಮಾದರಿ ಮತಪತ್ರ ಪ್ರದರ್ಶಿಸಿ ಮತದಾನ ಮಾಡುವುದು ಹೇಗೆ ಎಂದು ಮಾಹಿತಿ ನೀಡಲಾಗುತ್ತಿದೆ.

ಇನ್ನು ವಿಶೇಷ ಅಂದ್ರೆ ಈ ಸಭೆಯಲ್ಲಿ ಸಿದ್ದರಾಮಯ್ಯನವರ ಪುತ್ರ, ಸಚಿವರೂ ಆಗಿರುವ ಯತೀಂದ್ರ ಅವರಿಗೆ ವಿಶೇಷ ಗೌರವ ನೀಡಲಾಗಿದೆ. ಹೌದು..ಶಾಸಕಾಂಗ ಪಕ್ಷದ ಸಭೆಯ ವೇದಿಕೆ ಮೇಲೆ ಹಿರಿಯ ಸಚಿವರಿಗೂ ಅವಕಾಶ ಇಲ್ಲ. ಆದ್ರೆ, ಯತೀಂದ್ರ ಸಿದ್ದರಾಮಯ್ಯನವರಿಗೆ ವೇದಿಕೆ ಮೇಲೆ ಅವಕಾಶ ನೀಡಿರುವುದು ಅಚ್ಚರಿ ಮೂಡಿಸಿದ್ದು, ಈ ಸಂಬಂಧ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನೀಟ್ ಪರೀಕ್ಷೆಗೆ ಮಿಲಿಟರಿ ಮಾದರಿಯ ಭದ್ರತೆ ಬೇಕೇ? ವಿದ್ಯಾರ್ಥಿಗಳ ಮೇಲಿನ ಒತ್ತಡದ ಬಗ್ಗೆ ಅಣ್ಣಾಮಲೈ ಕಳವಳ – Kannada News | Annamalai questions military grade security for NEET retest flags Increase of Exam Stress

ಚೆನ್ನೈ, ಜೂನ್ 16: ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿದ್ದ ನೀಟ್ ಪರೀಕ್ಷೆಯ (NEET Exam) ಅಕ್ರಮಗಳ ಹಿನ್ನೆಲೆಯಲ್ಲಿ ನಡೆಯುತ್ತಿರುವ ಮರುಪರೀಕ್ಷೆಯ ಭದ್ರತಾ ವ್ಯವಸ್ಥೆಯ ವಿರುದ್ಧ ತಮಿಳುನಾಡು ಮಾಜಿ ಬಿಜೆಪಿ ನಾಯಕ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಧ್ವನಿ ಎತ್ತಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಜಾರಿಗೆ ತರಲಾದ ಮಿಲಿಟರಿ ಶೈಲಿಯ ಭದ್ರತೆಯು ವಿದ್ಯಾರ್ಥಿಗಳನ್ನು ಅಪರಾಧಿಗಳಂತೆ ನೋಡುವ ವಾತಾವರಣವನ್ನು ನಿರ್ಮಿಸುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ಅತಿರೇಕದ ತಪಾಸಣಾ ಕ್ರಮಗಳು ಮತ್ತು ಪರೀಕ್ಷಾ ಕೇಂದ್ರಗಳ ವಾತಾವರಣವು ವಿದ್ಯಾರ್ಥಿಗಳಲ್ಲಿ ಅನಗತ್ಯ ಭಯ ಹಾಗೂ ತೀವ್ರ ಮಾನಸಿಕ ಒತ್ತಡವನ್ನು ಸೃಷ್ಟಿಸುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಣ್ಣಾಮಲೈ, ಪರೀಕ್ಷೆಯ ಪಾರದರ್ಶಕತೆಯನ್ನು ಕಾಪಾಡುವುದು ಮುಖ್ಯವಾದರೂ, ಅದು ವಿದ್ಯಾರ್ಥಿಗಳ ಮಾನಸಿಕ ನೆಮ್ಮದಿಯನ್ನು ಕದಡುವಂತಿರಬಾರದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (NTA) ಕಿವಿಮಾತು ಹೇಳಿದ್ದಾರೆ. ಪರೀಕ್ಷಾ ಕೇಂದ್ರಗಳ ಹೊರಗೆ ವಿದ್ಯಾರ್ಥಿಗಳನ್ನು ತಪಾಸಣೆ ನಡೆಸುವ ವಿಧಾನವನ್ನು ತೀವ್ರವಾಗಿ ಖಂಡಿಸಿದ ಅಣ್ಣಾಮಲೈ, ಇದು ಹದಿಹರೆಯದ ಯುವಜನರ ಮೇಲೆ ಬೀರುತ್ತಿರುವ ನಕಾರಾತ್ಮಕ ಪ್ರಭಾವವನ್ನು ಎತ್ತಿ ತೋರಿಸಿದರು.

ಇದನ್ನೂ ಓದಿ: ನೀಟ್ ಮರುಪರೀಕ್ಷೆ ಒತ್ತಡದಲ್ಲಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಈ ವರ್ಷ ಮೆಡಿಕಲ್, ಡೆಂಟಲ್ ಕೋರ್ಸ್ ಶುಲ್ಕ ಹೆಚ್ಚಳವಿಲ್ಲ

ಮಕ್ಕಳು ಯುದ್ಧಭೂಮಿಗೆ ಹೋಗುತ್ತಿಲ್ಲ:

“ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬರುತ್ತಿದ್ದಾರೆಯೇ ಹೊರತು ಯಾವುದೇ ಯುದ್ಧಭೂಮಿಗೆ ಹೋಗುತ್ತಿಲ್ಲ. ಪರೀಕ್ಷಾ ಕೇಂದ್ರಗಳಲ್ಲಿ ಕೈಗೊಳ್ಳಲಾಗುತ್ತಿರುವ ಮಿಲಿಟರಿ ದರ್ಜೆಯ ಭದ್ರತೆ ಮತ್ತು ಕಠಿಣ ನಿಯಮಗಳು ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕವನ್ನು ಉಂಟುಮಾಡುತ್ತಿವೆ. ಶೂ ಬಿಚ್ಚಿಸುವುದು, ಬಟ್ಟೆಗಳ ತಪಾಸಣೆ ಮತ್ತು ಪೋಷಕರನ್ನು ದೂರವಿಡುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಕುಗ್ಗುತ್ತಿದೆ. ಪ್ರಸ್ತುತ ಪರೀಕ್ಷಾ ವ್ಯವಸ್ಥೆಯು ವಿದ್ಯಾರ್ಥಿಗಳ ಜ್ಞಾನವನ್ನು ಪರೀಕ್ಷಿಸುವ ಬದಲು ಅವರ ಒತ್ತಡವನ್ನು ತಾಳುವ ಶಕ್ತಿಯನ್ನು ಪರೀಕ್ಷಿಸುತ್ತಿದೆ.” ಎಂದು ಕೆ. ಅಣ್ಣಾಮಲೈ ಹೇಳಿದ್ದಾರೆ.

ಇದನ್ನೂ ಓದಿ: NEET UG Re Exam 2026 Date: ಜೂನ್ 21 ನೀಟ್ ಯುಜಿ ಮರು ಪರೀಕ್ಷೆ, ವಿದ್ಯಾರ್ಥಿಗಳಿಗೆ 15 ನಿಮಿಷ ಹೆಚ್ಚುವರಿ ಸಮಯ

ಇತ್ತೀಚಿನ ದಿನಗಳಲ್ಲಿ ನೀಟ್ ಪರೀಕ್ಷೆಯ ಭೀತಿ ಹಾಗೂ ಫಲಿತಾಂಶದ ಗೊಂದಲಗಳಿಂದಾಗಿ ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗುತ್ತಿರುವುದು ಮತ್ತು ಆತ್ಮಹತ್ಯೆಯಂತಹ ಘೋರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದನ್ನು ಅಣ್ಣಾಮಲೈ ಪ್ರಸ್ತಾಪಿಸಿದರು. ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ಮಾಡುವುದಷ್ಟೇ ಅಲ್ಲ, ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಮುನ್ನವೇ ಸೂಕ್ತ ಮಾನಸಿಕ ಸಮಾಲೋಚನೆ ಮತ್ತು ಧೈರ್ಯ ತುಂಬುವ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು ಎಂದರು.

ಪರೀಕ್ಷಾ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಮತ್ತು ತಂತ್ರಜ್ಞಾನವನ್ನು ಬಳಸಿ ಡಿಜಿಟಲ್ ಮಾದರಿಯಲ್ಲಿ ಸುರಕ್ಷಿತವಾಗಿ ಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಗೊಂದಲಮುಕ್ತ ವಾತಾವರಣ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link