ಬಾಗಲಕೋಟೆ, ಮಾರ್ಚ್ 30: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಏಪ್ರಿಲ್ 9ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಪ್ರಚಾರ ನಡೆಸಿದ ಬಿವೈ ವಿಜಯೇಂದ್ರ, ಪಕ್ಷದ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಚಾರಕ್ಕೆ ಬಂದರೆ ಸ್ವಾಗತಿಸುತ್ತೀರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷದವರೇ ಕೆಲವರು ಒಳಗೊಳಗೆ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಸಹಕಾರ ನೀಡುತ್ತಿದ್ದಾರೆ. ಯಾರೇ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದರೂ, ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕೆಲಸ ಮಾಡಿದರೂ ಅದನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ.
ಬಿಜೆಪಿಯಲ್ಲಿ 20 ಬಾಗಿಲುಗಳಾಗಿವೆ ಎಂಬ ಸಚಿವ ಎಂಬಿ ಪಾಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಚುನಾವಣೆ ಫಲಿತಾಂಶ ಬರಲಿ. ಯಾವ ಪಕ್ಷದಲ್ಲಿ ಎಷ್ಟು ಗುಂಪುಗಾರಿಕೆ ಇದೆ ಎಂಬುದು ಆಗ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಮುಂಬೈ, ಮಾರ್ಚ್ 30: ಸಮಸ್ಯೆ ಇರುವ ಬಲಗೈಗೆ ಬಿಟ್ಟು ವೈದ್ಯರು ಬಾಲಕನ ಎಡಗೈಗೆ ಶಸ್ತ್ರ ಚಿಕಿತ್ಸೆ(Operation) ಮಾಡಿದ್ದಲ್ಲದೆ, ಬೆರಳನ್ನು ಕೂಡ ಕತ್ತರಿಸಿರುವ ಘಟನೆ ಮಹಾರಾಷ್ಟ್ರದ ಪಂಢರಪುರದಲ್ಲಿ ನಡೆದಿದೆ. ಸಾಮಾನ್ಯವಾಗಿ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡುವಾಗ ರೋಗಿಯ ಸಮಸ್ಯೆಯ ಬಗ್ಗೆ ಇದ್ದ ಫೈಲ್ ಅನ್ನು ಒಮ್ಮೆ ಓದಿದ ಬಳಿಕವೇ ಆಪರೇಷನ್ ಮಾಡುತ್ತಾರೆ. ಆದರೆ ಈ ವೈದ್ಯರು ಹಾಗೆ ಮಾಡಲೇ ಇಲ್ಲ.
ಬಾಲಕ ಪೋಸ್ಟಾಕ್ಸಿಯಲ್ ಪಾಲಿಡಾಕ್ಟಿಲಿಯಿಂದ ಬಳಲುತ್ತಿತ್ತು, ಎರಡೂ ಕೈಗಳಲ್ಲಿ ಹೆಚ್ಚುವರಿ ಕಿರುಬೆರಳುಗಳಿದ್ದವು, ಬಲಗೈಯ ಒಂದು ಬೆರಳಿನಲ್ಲಿ ಬಿಗಿತ, ನೋವು ಇದ್ದ ಕಾರಣ ಆಸ್ಪತ್ರೆಗೆ ಬಂದಿದ್ದರು.
ಶಸ್ತ್ರ ಚಿಕಿತ್ಸೆ ನಡೆಸಬೇಕೆಂದು ವೈದ್ಯರು ಸಲಹೆ ನಿಡಿದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಾಲಕನ ಬಲಗೈಗೆ ಶಸ್ತ್ರ ಚಿಕಿತ್ಸೆ ಮಾಡಬೇಕಿತ್ತು, ಆದರೆ, ವೈದ್ಯರು ಎಡಗೈಗೆ ತಪ್ಪಾಗಿ ತಪ್ಪಾಗಿ ಶಸ್ತ್ರ ಚಿಕಿತ್ಸೆ ನಡೆಸಿ ತಪ್ಪು ಬೆರಳನ್ನು ತೆಗೆದಿದ್ದಾರೆ. ದೋಷ ಕಂಡುಬಂದ ನಂತರ ಬಾಲಕನ ಕುಟುಂಬವು ತಕ್ಷಣ ದೂರು ದಾಖಲಿಸಿದೆ.
ಆಸ್ಪತ್ರೆ ಅಧಿಕಾರಿಗಳು ಮಗುವಿನ ಎರಡೂ ಕೈಯಲ್ಲೂ ದೋಷವಿತ್ತು ಎಂದು ಹೇಳಿಕೊಂಡಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಬೇಕಿತ್ತು ಎಂದಿದ್ದಾರೆ.ಆದರೆ ಕುಟುಂಬವು ಆತನ ಎಡಗೈಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ, ಎಂದು ಹೇಳಿದ್ದಾರೆ. ಈ ಆರೋಪಗಳ ನಂತರ, ಆರೋಗ್ಯ ಇಲಾಖೆ ವಿವರವಾದ ತನಿಖೆ ನಡೆಸಲು ಇಬ್ಬರು ಸದಸ್ಯರ ಸಮಿತಿಯನ್ನು ರಚಿಸಿತು.
ಬಲಗೈಯಲ್ಲಿ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡುವ NOCಗೆ ಸ್ಪಷ್ಟವಾಗಿ ಸಹಿ ಹಾಕಿದ್ದೇವೆ ಎಂದು ಮಗುವಿನ ಕುಟುಂಬ ಹೇಳಿದೆ. ಇದರ ಹೊರತಾಗಿಯೂ, ವೈದ್ಯರು ಎಡಗೈಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು. ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಪಾಟ್ನಾ, ಮಾರ್ಚ್ 30: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar) ಅವರು ತಮ್ಮ ವಿಧಾನಪರಿಷತ್ತಿನ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮಾರ್ಚ್ 16 ರಂದು ರಾಜ್ಯಸಭೆಗೆ ಆಯ್ಕೆಯಾದಾಗಿನಿಂದ, ಅವರು 14 ದಿನಗಳಲ್ಲಿ ರಾಜೀನಾಮೆ ನೀಡಬೇಕಾಗಿತ್ತು, ಆ ಗಡುವು ಇಂದು ಮುಕ್ತಾಯಗೊಳ್ಳುತ್ತಿತ್ತು. ಮುಖ್ಯಮಂತ್ರಿಯ ಅಧಿಕೃತ ನಿವಾಸದಲ್ಲಿ ಪರಿಷತ್ತಿನ ಅಧ್ಯಕ್ಷ ಅವಧೇಶ್ ನಾರಾಯಣ್ ಸಿಂಗ್ ಅವರಿಗೆ ರಾಜೀನಾಮೆ ಸಲ್ಲಿಸಲಾಯಿತು.
ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಅವರು (ನಿತೀಶ್ ಕುಮಾರ್) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ನಿತೀಶ್ ಕುಮಾರ್ ಅವರ ರಾಜೀನಾಮೆ ಬಿಹಾರ ರಾಜಕೀಯದಲ್ಲಿ ಹೊಸ ಯುಗದ ಆರಂಭ ಹುಟ್ಟುಹಾಕಲಿದೆ. 2005 ರಲ್ಲಿ ಎನ್ ಡಿಎ ಮೊದಲ ಜಯ ಸಾಧಿಸಿದ ನಂತರ ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಮೊದಲ ಬಾರಿಗೆ ಬಿಹಾರ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ.
ರಾಜ್ಯಸಭೆಯಲ್ಲಿ ಅವರ ಅವಧಿ ಏಪ್ರಿಲ್ 10 ರಂದು ಪ್ರಾರಂಭವಾಗುತ್ತದೆ, ಆದರೆ ಹೊಸ ಮುಖ್ಯಮಂತ್ರಿಯ ನೇತೃತ್ವದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದ ರಾಜಕೀಯ ಚಟುವಟಿಕೆಗಳು ಖಂಡಿತವಾಗಿಯೂ ತೀವ್ರಗೊಳ್ಳುತ್ತವೆ.
ಬಿಜೆಪಿ ಅಥವಾ ಜೆಡಿಯು ಅಧಿಕೃತವಾಗಿ ಯಾವ ಪಕ್ಷವು ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸುತ್ತದೆ ಎಂದು ಹೇಳಿಲ್ಲ, ಆದರೆ ಎರಡೂ ಪಕ್ಷಗಳ ಹಿರಿಯ ಅಧಿಕಾರಿಗಳು ನಿತೀಶ್ (75) ಅವರ ಸ್ಥಾನವನ್ನು ಬಿಜೆಪಿ ಅಭ್ಯರ್ಥಿ ಅಲಂಕರಿಸಲಿದ್ದಾರೆ ಎಂದು ಸೂಚಿಸಿದ್ದಾರೆ. ಏತನ್ಮಧ್ಯೆ, ನಿತೀಶ್ ಅವರ ಪುತ್ರ ನಿಶಾಂತ್ ಕುಮಾರ್ ಉಪಮುಖ್ಯಮಂತ್ರಿಯಾಗುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಬಿಜೆಪಿ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರನ್ನು ನಿತೀಶ್ ಕುಮಾರ್ ಸ್ಥಾನಕ್ಕೆ ಮುಂಚೂಣಿಯಲ್ಲಿ ಪರಿಗಣಿಸಲಾಗಿದೆ ಇದಕ್ಕೆ ಹಲವು ಕಾರಣಗಳೂ ಇವೆ.
ಮಾರ್ಚ್ 16 ರಂದು ಜೆಡಿಯು ಅಧ್ಯಕ್ಷರು ಸಂಸತ್ತಿನ ಮೇಲ್ಮನೆಗೆ ಆಯ್ಕೆಯಾದರು. ಸಂವಿಧಾನದ ಪ್ರಕಾರ, ಒಬ್ಬ ವ್ಯಕ್ತಿಯು ಏಕಕಾಲದಲ್ಲಿ ಎರಡು ಸದನಗಳ ಸದಸ್ಯತ್ವವನ್ನು ಹೊಂದಲು ಸಾಧ್ಯವಿಲ್ಲ, ಇದು 14 ದಿನಗಳಲ್ಲಿ ಒಂದು ಸ್ಥಾನವನ್ನು ತ್ಯಜಿಸುವುದು ಕಡ್ಡಾಯಗೊಳಿಸುತ್ತದೆ.
ಗದಗ, ಮಾರ್ಚ್ 30: ಜಿಲ್ಲೆಯ ರೋಣ ಪಟ್ಟಣದ ಹೊರವಲಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿದೆ. ಶೇಖರಯ್ಯ ಅಜ್ಜನ ಮಠದ ಸಮೀಪ ರಸ್ತೆ ಪಕ್ಕದ ಜಮೀನಿಗೆ ಉರುಳಿದ ಲಾರಿಯಿಂದ ಗ್ಯಾಸ್ ಸಿಲಿಂಡರ್ಗಳು ಚೆಲ್ಲಾಪಿಲ್ಲಿಯಾಗಿದ್ದು, ಕೆಲಕಾಲ ಸ್ಥಳೀಯರಲ್ಲಿ ಆತಂಕ ಉಂಟಾಗಿತ್ತು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಲಿಲ್ಲ. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ರೋಣ ಠಾಣೆಯಲ್ಲಿ ದಾಖಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನ 2ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಜಯ ಸಾಧಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆರ್ ತಂಡವು 20 ಓವರ್ಗಳಲ್ಲಿ 220 ರನ್ ಕಲೆಹಾಕಿತು. ಈ ಗುರಿಯನ್ನು ಮುಂಬೈ ಇಂಡಿಯನ್ಸ್ ತಂಡವು 19.1 ಓವರ್ಗಳಲ್ಲಿ ಚೇಸ್ ಮಾಡಿದೆ. ಪರಿಣಾಮ ಮೊದಲ ಮ್ಯಾಚ್ನಲ್ಲಿ ಬೃಹತ್ ಮೊತ್ತ ಪೇರಿಸಿದರೂ ಕೆಕೆಆರ್ ಸೋಲಿನೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿದೆ.
ಈ ಸೋಲಿನ ಬಳಿಕ ಮಾತನಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ, ನಾವು 220-225 ರನ್ಗಳ ಗುರಿ ಉತ್ತಮ ಮೊತ್ತ ಎಂದು ನಾನು ಭಾವಿಸಿದ್ದೆವು. ಅದರಂತೆ ನಾವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದೆವು. ಆದರೆ ಅನಾನುಭವಿ ಬೌಲಿಂಗ್ ದಾಳಿಯಿಂದಾಗಿ ಸೋಲಬೇಕಾಯಿತು.
ಮುಂಬೈ ಇಂಡಿಯನ್ಸ್ ಎಂಬುದು ಬಲಿಷ್ಠ ಬ್ಯಾಟಿಂಗ್ ತಂಡ. ಅವರ ವಿರುದ್ಧ ಆಡುವುದೇ ಕಲಿಕೆಯ ವಿಷಯ. ಏಕೆಂದರೆ ನಮ್ಮ ತಂಡದಲ್ಲಿದದ್ದು ಅನಾನುಭವಿ ಬೌಲರ್ಗಳು. ವೈಭವ್ ಅರೋರ, ಕಾರ್ತಿಕ್ ತ್ಯಾಗಿ, ಐಪಿಎಲ್ಗೆ ಹೊಸಬರಾದ ಬ್ಲೆಸಿಂಗ್ ಮುಝರಬಾನಿ ಎಲ್ಲರೂ ದೊಡ್ಡ ಅನುಭವ ಹೊಂದಿಲ್ಲ.
ಇದರ ಸಂಪೂರ್ಣ ಲಾಭ ಪಡೆದಿರುವ ಮುಂಬೈ ಇಂಡಿಯನ್ಸ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದೆ. ಇದರಿಂದಾಗಿ ನಮ್ಮ ಬೌಲರ್ಗಳು ಖಂಡಿತವಾಗಿಯೂ ಕಲಿಯುತ್ತಾರೆ. ಈ ಕಲಿಕೆಯೊಂದಿಗೆ ಮುಂದಿನ ಪಂದ್ಯದಲ್ಲಿ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ವಿಶ್ವಾಸವಿದೆ ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.
ಮೊದಲ ಪಂದ್ಯದಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಿರುವುದು ಸಕಾರಾತ್ಮಕ ವಿಷಯ. ಚೆಂಡಿನೊಂದಿಗೆ ಆ ಸಮತೋಲನವನ್ನು ಕಂಡುಕೊಳ್ಳಬೇಕಿದೆ. ಇಲ್ಲಿ ಕ್ಯಾಮರೋನ್ ಗ್ರೀನ್ ಫಿಟ್ನೆಸ್ ಸಮಸ್ಯೆಯ ಕಾರಣ ಮೊದಲ ಮ್ಯಾಚ್ನಲ್ಲಿ ಬೌಲಿಂಗ್ ಮಾಡಿರಲಿಲ್ಲ. ಇದಾಗ್ಯೂ ಮುಂದಿನ ಮ್ಯಾಚ್ಗಳಲ್ಲಿ ನಮ್ಮ ಬೌಲರ್ಗಳಿಂದ ಉತ್ತಮ ಪ್ರದರ್ಶನವನ್ನು ಮೂಡಿಬರಲಿದೆ ಎಂಬ ವಿಶ್ವಾಸವಿದೆ ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.
ಇನ್ನು ಈ ಪಂದ್ಯದಲ್ಲಿ 40 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ಗಳೊಂದಿಗೆ ಅಜಿಂಕ್ಯ ರಹಾನೆ 67 ರನ್ ಬಾರಿಸಿದ್ದರು. ಈ ಬಗ್ಗೆ ಕೇಳಿದಾಗ, ನಾನು ಇನ್ನೂ ಸಹ ಯಂಗ್ ಆಟಗಾರ. ನನಗೆ ಜಸ್ಟ್ 37 ವರ್ಷವಷ್ಟೇ ಆಗಿದೆ ಎಂದು ನಕ್ಕರು.
ಇದೇ ವೇಳೆ ಸ್ನಾಯು ಸೆಳೆತದ ಕಾರಣ ಮೈದಾನದಿಂದ ಹೊರಗುಳಿದ ಬಗ್ಗೆ ಮಾತನಾಡಿದ ರಹಾನೆ, ಇದೀಗ ಸರಿಯಾಗಿದೆ. ಸ್ನಾಯು ಸೆಳೆತವಿದ್ದ ಕಾರಣ ಫೀಲ್ಡಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಯಾವುದೇ ಸಮಸ್ಯೆಯಿಲ್ಲ. ಈ ಮೂಲಕ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದೇನೆ ಎಂಬುದನ್ನು ಖಚಿತಪಡಿಸಿದ್ದಾರೆ.
ಇತ್ತ ಅಜಿಂಕ್ಯ ರಹಾನೆ ಅರ್ಧದಲ್ಲೇ ಮೈದಾನ ತೊರೆದಿದ್ದರಿಂದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಉಪನಾಯಕ ರಿಂಕು ಸಿಂಗ್ ಮುನ್ನಡೆಸಿದ್ದರು. ಆದರೆ ಮುಂಬೈ ಇಂಡಿಯನ್ಸ್ ಬ್ಯಾಟರ್ಗಳ ಅಬ್ಬರದಿಂದಾಗಿ ರಿಂಕು ಪ್ಲ್ಯಾನಿಂಗ್ಗಳು ತಲೆಕೆಳಗಾಗಿದ್ದವು.
ಬೆಂಗಳೂರು, ಮಾ.30: ಬೆಂಗಳೂರಿನಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ಇತ್ತೀಚೆಗೆ ಗ್ರಾಹಕರಿಗೆ ವಿಧಿಸಲಾಗುತ್ತಿದ್ದ ‘ಎಲ್ಪಿಜಿ ಫೀಸ್’ ಅಥವಾ ‘ಫ್ಯೂಯಲ್ ಸರ್ಚಾರ್ಜ್’ (ಇಂಧನ ಚೇತರಿಕೆ ಶುಲ್ಕ) ಗಳಿಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಬ್ರೇಕ್ ಹಾಕಿದೆ. ಅಡುಗೆ ಅನಿಲದ ಬಿಕ್ಕಟ್ಟಿನ ನೆಪವೊಡ್ಡಿ ಗ್ರಾಹಕರಿಂದ ಅನಗತ್ಯವಾಗಿ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದ ಹೋಟೆಲ್ಗಳ ವಿರುದ್ಧ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಬೆಂಗಳೂರಿನ ಹಲವು ಹೋಟೆಲ್ಗಳು ಮೆನು ಬೆಲೆ ಮತ್ತು ತೆರಿಗೆಗಳ ಹೊರತಾಗಿ, ‘ಎಲ್ಪಿಜಿ ಚಾರ್ಜ್’ ಹೆಸರಿನಲ್ಲಿ ಪ್ರತ್ಯೇಕ ಶುಲ್ಕವನ್ನು ಬಿಲ್ನಲ್ಲಿ ಸೇರಿಸುತ್ತಿದ್ದವು. ಈ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿರುವ ಸಿಸಿಪಿಎ, “ಗ್ಯಾಸ್, ಇಂಧನ ಅಥವಾ ವಿದ್ಯುತ್ ವೆಚ್ಚಗಳು ವ್ಯವಹಾರದ ಕಾರ್ಯಾಚರಣೆಯ ಭಾಗವಾಗಿವೆ. ಇವುಗಳನ್ನು ಬಿಲ್ನಲ್ಲಿ ಪ್ರತ್ಯೇಕವಾಗಿ ತೋರಿಸಿ ಗ್ರಾಹಕರಿಂದ ವಸೂಲಿ ಮಾಡುವುದು ಗ್ರಾಹಕ ಸಂರಕ್ಷಣಾ ಕಾಯ್ದೆ-2019ರ ಅಡಿಯಲ್ಲಿ ‘ಅನ್ಯಾಯದ ವ್ಯಾಪಾರ ಪದ್ಧತಿ’ ಎಂದು ಪರಿಗಣಿಸಲಾಗುತ್ತದೆ” ಎಂದು ಸ್ಪಷ್ಟಪಡಿಸಿದೆ.
ಬೆಂಗಳೂರು ಹೋಟೆಲ್ಗಳ ಸಂಘದ ಜಿ.ಕೆ. ಶೆಟ್ಟಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಬಿಲ್ನಲ್ಲಿ ಪ್ರತ್ಯೇಕವಾಗಿ ಎಲ್ಪಿಜಿ ಶುಲ್ಕ ವಿಧಿಸುವುದು ಕಾನೂನುಬಾಹಿರ. ಈ ಬಗ್ಗೆ ನಮ್ಮ ಸದಸ್ಯ ಹೋಟೆಲ್ಗಳಿಗೆ ಸುತ್ತೋಲೆ ಕಳುಹಿಸುತ್ತೇವೆ. ಅಡುಗೆ ಅನಿಲದ ದರ ಹೆಚ್ಚಳದಿಂದ ನಷ್ಟವಾಗುತ್ತಿದ್ದರೆ, ಹೋಟೆಲ್ಗಳು ಮೆನು ಬೆಲೆಯನ್ನು ಶೇ. 5 ರಿಂದ 10 ರಷ್ಟು ಹೆಚ್ಚಿಸಲು ಆಲೋಚಿಸಬಹುದು, ಆದರೆ ಪ್ರತ್ಯೇಕವಾಗಿ ಶುಲ್ಕ ವಿಧಿಸುವುದನ್ನು ನಾವು ಬೆಂಬಲಿಸುವುದಿಲ್ಲ” ಎಂದು ತಿಳಿಸಿದ್ದಾರೆ.
ಕಾಮತ್ ಹೋಟೆಲ್ಸ್ನ ವೀರೇಂದ್ರ ಕಾಮತ್ ಅವರು ಎಲ್ಪಿಜಿ ಬಿಕ್ಕಟ್ಟಿನ ತೀವ್ರತೆಯನ್ನು ವಿವರಿಸುತ್ತಾ, “ನಮಗೆ ದಿನಕ್ಕೆ ಐದು ಸಿಲಿಂಡರ್ ಬೇಕಿದ್ದರೆ ಈಗ ಕೇವಲ ಎರಡು ಮಾತ್ರ ಸಿಗುತ್ತಿದೆ. ಇದರಿಂದಾಗಿ ಗ್ಯಾಸ್ ಹೆಚ್ಚು ಬಳಸುವ ದೋಸೆಯಂತಹ ತಿಂಡಿಗಳನ್ನು ದಿನವಿಡೀ ನೀಡಲು ಸಾಧ್ಯವಾಗುತ್ತಿಲ್ಲ. ಅವುಗಳನ್ನು ಕೇವಲ ಬೆಳಿಗ್ಗೆ ಮತ್ತು ಸಂಜೆ ಅವಧಿಗೆ ಸೀಮಿತಗೊಳಿಸಿದ್ದೇವೆ. ನಷ್ಟ ಸರಿದೂಗಿಸಲು ಶೇ. 10 ರಷ್ಟು ಬೆಲೆ ಏರಿಕೆ ಅನಿವಾರ್ಯವಾಗಬಹುದು” ಎಂದಿದ್ದಾರೆ. ಸಣ್ಣ ಹೋಟೆಲ್ ಮಾಲೀಕರು ಈ ನಿಯಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, “ವಿಮಾನಯಾನ ಸಂಸ್ಥೆಗಳು ಇಂಧನ ಶುಲ್ಕ ವಿಧಿಸಿದಾಗ ಪ್ರಶ್ನಿಸದವರು, ನಮ್ಮನ್ನೇ ಏಕೆ ಗುರಿ ಮಾಡುತ್ತಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು, ಮಾರ್ಚ್ 30: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಶಕ್ತಿ ಯೋಜನೆಯ ಪರಿಣಾಮವಾಗಿ ಗಂಭೀರ ಆರ್ಥಿಕ ಒತ್ತಡವನ್ನು ಎದುರಿಸುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಈ ಯೋಜನೆಗಾಗಿ ಸರ್ಕಾರದಿಂದ ಬರಬೇಕಿದ್ದ 850 ಕೋಟಿ ರೂ. ಬಾಕಿಯಾಗಿದ್ದು, ವಿಧಾನ ಪರಿಷತ್ತಿನಲ್ಲಿ ಎಂಎಲ್ಸಿ ಹೆಚ್.ಎಸ್ ಗೋಪಿನಾಥ್ ಕೇಳಿದ ಪ್ರಶ್ನೆಗೆ ಉತ್ತರವಾಗಿ ಈ ಮಾಹಿತಿ ಬಹಿರಂಗವಾಗಿದೆ.
ಶಕ್ತಿ ಯೋಜನೆ ಆರಂಭವಾದ ನಂತರದಿಂದ ಫೆಬ್ರವರಿ 2026ರವರೆಗೆ ರಾಜ್ಯದಾದ್ಯಂತ ಮಹಿಳೆಯರು ಒಟ್ಟು 680.87 ಕೋಟಿ ರೂ. ವೆಚ್ಚದಲ್ಲಿ ಉಚಿತ ಬಸ್ ಪ್ರಯಾಣಗಳನ್ನು ಮಾಡಿದ್ದಾರೆ. ಇದರಲ್ಲೂ BMTC ಪಾಲು 217.62 ಕೋಟಿ ರೂಪಾಯಿಯಷ್ಟಿದೆ. ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವುದರಿಂದ ಯೋಜನೆಯ ವೆಚ್ಚವೂ ಏರಿಕೆಯಾಗುತ್ತಿದೆ. ಆದರೆ ಸರ್ಕಾರದಿಂದ ಆಗುತ್ತಿರುವ ಪರಿಹಾರ ಮೊತ್ತವು ಅದರ ಅನುಪಾತದಲ್ಲಿ ಹೆಚ್ಚಳ ಕಾಣುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.
ಈ ಯೋಜನೆಗಾಗಿ ಸರ್ಕಾರದಿಂದ 3,097.27 ಕೋಟಿ ರೂ. ಸಂದಾಯವಾಗಬೇಕಿತ್ತು. ಆದರೆ ಸಧ್ಯಕ್ಕೆ ಕೇವಲ 2,247.35 ಕೋಟಿ ರೂ. ಮಾತ್ರ ಪರಿಹಾರವಾಗಿ ಲಭ್ಯವಾಗಿದ್ದು, ಸುಮಾರು 850 ಕೋಟಿ ರೂ. ಕೊರತೆ ಉಂಟಾಗಿದೆ ಎಂದು ತಿಳಿದುಬಂದಿದೆ.
ನಿರ್ವಹಣಾ ವೆಚ್ಚ ಹೆಚ್ಚಾಗಿ ಪೇಚಾಟ
ಅದಲ್ಲದೆ ಶಕ್ತಿ ಯೋಜನೆ ಜಾರಿಗೂ ಮೊದಲೇ ಬಿಎಂಟಿಸಿ 1,383.86 ಕೋಟಿ ರೂಪಾಯಿಯಷ್ಟು ಕೊರತೆಯಿತ್ತು ಎಂಬುದು ತಿಳಿದುಬಂದಿದೆ. ಇಂಧನ ಕಂಪನಿಗಳಿಗೆ ಬಾಕಿ ಪಾವತಿಗಳು, ಭವಿಷ್ಯ ನಿಧಿ (PF) ಬಾಧ್ಯತೆಗಳು ಮತ್ತು ಪೂರೈಕೆದಾರರಿಗೆ ಕೊಡಬೇಕಾದ ಹಣಗಳು ಸಂಸ್ಥೆಯ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಕಠಿಣಗೊಳಿಸಿವೆ. ನಂತರದ ಅವಧಿಯಲ್ಲಿ ಡೀಸೆಲ್ ಬೆಲೆ ಏರಿಕೆ, ಸಿಬ್ಬಂದಿ ವೇತನ ಪರಿಷ್ಕರಣೆ ಹಾಗೂ ನಿರ್ವಹಣಾ ವೆಚ್ಚಗಳ ಹೆಚ್ಚಳದಿಂದ ಭಾರ ಇನ್ನಷ್ಟು ಹೆಚ್ಚಾಗಿದೆ ಎನ್ನಲಾಗಿದೆ.
ಈ ಸವಾಲುಗಳನ್ನು ಮನಗಂಡ ರಾಜ್ಯ ಸರ್ಕಾರವು ಪ್ರತಿ ತಿಂಗಳೂ ಶಕ್ತಿ ಯೋಜನೆಯಡಿ ಮುಂಗಡ ಹಣ ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದೆ. 2026ರ ಮಾರ್ಚ್ ತನಕ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಬಿಎಂಟಿಸಿ ಆರ್ಥಿಕ ಸ್ಥಿತಿಯನ್ನು ಸ್ಥಿರಗೊಳಿಸಲು ಸರ್ಕಾರವು 589.20 ಕೋಟಿ ರೂ. ಸಾಲವನ್ನು ಪಡೆಯಲು ಅನುಮತಿ ನೀಡಿದ್ದು, ಅದರ ಮರುಪಾವತಿಗೆ ಬಜೆಟ್ ಸಹಾಯವನ್ನು ಒದಗಿಸುತ್ತಿದೆ.
ಅಲ್ಲದೆ ಸಾರಿಗೆ ವ್ಯವಸ್ಥೆಯನ್ನು ವಿಸ್ತರಿಸುವ ಮತ್ತು ಆಧುನೀಕರಿಸುವ ಪ್ರಯತ್ನಗಳೂ ನಡೆಯುತ್ತಿವೆ. ಡೀಸೆಲ್ ಹಾಗೂ ಎಲೆಕ್ಟ್ರಿಕ್ ಬಸ್ಸುಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು, ಪಿಎಂ ಇ-ಡ್ರೈವ್ ಸ್ಕೀಮ್ ಯೋಜನೆಯಡಿ 4,500 ಎಲೆಕ್ಟ್ರಿಕ್ ಬಸ್ಸುಗಳ ಖರೀದಿಗೆ ಅನುಮೋದನೆ ನೀಡಲಾಗಿದೆ. ಜೊತೆಗೆ 2026–27ರ ಬಜೆಟ್ನಲ್ಲಿ ಹೆಚ್ಚುವರಿ 1,000 ಡೀಸೆಲ್ ಬಸ್ಸುಗಳ ಖರೀದಿ ಘೋಷಿಸಲಾಗಿದೆ.
ಒಟ್ಟಾರೆ, ಶಕ್ತಿ ಯೋಜನೆ ಮಹಿಳೆಯರ ಸಾರ್ವಜನಿಕ ಸಾರಿಗೆ ಬಳಕೆಯನ್ನು ಗಣನೀಯವಾಗಿ ಹೆಚ್ಚಿಸಿದರೂ, ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ಥಿರತೆ ಬಗ್ಗೆ ಆತಂಕಗಳು ಹೆಚ್ಚುತ್ತಿವೆ. ಪ್ರಯಾಣಿಕರ ಸಂಖ್ಯೆಯ ಏರಿಕೆ ಮತ್ತು ಕಾರ್ಯಾಚರಣಾ ವೆಚ್ಚಗಳ ಹೆಚ್ಚಳ ನಡುವೆಯೂ ಸಮರ್ಪಕ ಪರಿಹಾರ ದೊರೆಯದಿದ್ದರೆ, ಮುಂದಿನ ದಿನಗಳಲ್ಲಿ ಸಂಸ್ಥೆಯ ಆರ್ಥಿಕ ಸ್ಥಿತಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.
ಹಾಸನ, ಮಾರ್ಚ್ 30: ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕುಪ್ಪಗೋಡು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಗ್ರಾಮಕ್ಕೆ ನುಗ್ಗಿದ ‘ಪೆನ್ಸಿಲ್ ಕೋರೆ’ ಹೆಸರಿನ ದೈತ್ಯ ಒಂಟಿಸಲಗ, ಕೃಷ್ಣಪ್ಪ ಎಂಬುವವರಿಗೆ ಸೇರಿದ ಆಟೋವನ್ನು ಜಖಂಗೊಳಿಸಿದೆ. ಆನೆಯನ್ನು ಓಡಿಸಲು ಪಟಾಕಿ ಸಿಡಿಸಿದಾಗ ರೊಚ್ಚಿಗೆದ್ದ ಸಲಗ, ಮನೆಯ ಮುಂದಿದ್ದ ಆಟೋ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿದೆ. ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಆನೆಗಳ ಹಿಂಡು ಬೀಡುಬಿಟ್ಟಿದ್ದು, ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಕೃಷಿಕರು ಭಯಪಡುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಕನ್ನಡ, ಹಿಂದಿ ಸೇರಿದಂತೆ ಭಾರತದ ಬಹುತೇಕ ಚಿತ್ರರಂಗದವರು ವಿದೇಶದಲ್ಲಿ ಶೂಟ್ ಮಾಡುತ್ತಾರೆ. ಅದರಲ್ಲೂ ಬಾಲಿವುಡ್ನವರು ವಿದೇಶಿ ಲೊಕೇಶನ್ಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೆಚ್ಚು. ಈಗ ಅಚ್ಚರಿ ಎಂಬಂತೆ ರಷ್ಯಾದ ಚಿತ್ರವೊಂದು ಭಾರತದ ಬೀದಿಗಳಲ್ಲಿ ಶೂಟ್ ಆಗಿದೆ. ಏಪ್ರಿಲ್ 1ರಂದು ಸಿನಿಮಾ ತೆರೆಗೆ ಬರುತ್ತಿದೆ. ಈ ಸಿನಿಮಾ ಸಂಪೂರ್ಣವಾಗಿ ಭಾರತದ ಸಿನಿಮಾಗಳಿಂದ ಪ್ರೇರಿತವಾಗಿದೆ.
ಭಾರತ ಹಾಗೂ ರಷ್ಯಾ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ. ‘ಪರ್ಸಿಮನ್ ಆಫ್ ಲವ್’ ಎಂಬುದು ಚಿತ್ರದ ಹೆಸರು. ಪರ್ಸಿಮನ್ ಎಂದರೆ ಆರೆಂಜ್ ರೀತಿಯಲ್ಲೇ ಇರುವ ಒಂದುಹಣ್ಣು. ಭಾರತ ಹಾಗೂ ರಷ್ಯಾ ಒಟ್ಟಾಗಿ ನಿರ್ಮಿಸಿರುವ ಮೊದಲ ಸಿನಿಮಾ ಇದಾಗಿದೆ. ಈ ಸಿನಿಮಾ ಟ್ರೇಲರ್ ಮೂಲಕ ಗಮನ ಸೆಳೆದಿದೆ.
ಮಾರಿಯಸ್ ವೈಸ್ಬರ್ಗ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಬಾಲಿವುಡ್ ಶೈಲಿಯಲ್ಲಿ ಸಿನಿಮಾ ಮೂಡಿಬಂದಿದೆ. ಕಾಮಿಡಿ ಕ್ಲಬ್ ತಾರೆಯರಾದ ಡೆಮಿಸ್ ಕರಿಬಿಡಿಸ್ ಮತ್ತು ಮಿಖಾಯಿಲ್ ಗಲುಸ್ಟಿಯನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಅಡಿಲಾ ರಾಗಿಮೋವಾ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದಾರೆ.
ಒಬ್ಬರು ಪೊಲೀಸ್ ಅಧಿಕಾರಿ ಆದರೆ, ಇನ್ನೊಬ್ಬರು ಅಪರಾಧಿ. ಅವರ ಪೈಪೋಟಿಯು ದೀರ್ಘಕಾಲದಿಂದ ಸಮಾಧಿಯಾಗಿ ಉಳಿದಿರುವ ಸತ್ಯದ ಆವಿಷ್ಕಾರಕ್ಕೆ ಕಾರಣವಾಗುತ್ತದೆ. ಬಾಲ್ಯದಲ್ಲಿ ಬೇರ್ಪಟ್ಟ ಒಡಹುಟ್ಟಿದವರು ಎಂಬ ವಿಷಯ ನಂತರ ಹೊರ ಬರುತ್ತದೆ.
India, Russia film cooperation.
Poster of Russian movie “Persimmon of My Love”. It is the first major Russian feature film entirely shot in India. Set to premiere across Russia on April 1, blends Bollywood song and dance with Russian humour and brotherly drama. pic.twitter.com/9Vo5SBFkny
Promo of Russian Movie “Persimmon of My Love”. The movie has been entirely shot in India.
The Rom-Com was filmed entirely on location in Mumbai, Udaipur and Jodhpur. First such movie in post soviet era. Has Hindi songs too, including ‘Jimmy Jimmy Aja Aja’ https://t.co/gTNVMRU1cgpic.twitter.com/iEmIOOeHab
ಇದು ಭಾರತದಲ್ಲಿ ಶೈಟ್ ಆಗಿರುವುದರಿಂದ ಭಾರತದ ಪ್ರಮುಖ ನಗರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ಹಿಂದಿಗೆ ಡಬ್ ಮಾಡುವ ಪ್ಲ್ಯಾನ್ ಕೂಡ ಇದೆಯೇ ಎಂಬುದು ಸದ್ಯದ ಪ್ರಶ್ನೆ.
ಬೆಂಗಳೂರು, ಮಾರ್ಚ್ 30: ಕಳೆದ ವಾರ ನಾಲ್ಕು ದಿನ ಏರಿದ್ದ ಚಿನ್ನದ ಬೆಲೆ (Gold Rates) ಇವತ್ತು ಸೋಮವಾರ ಕಡಿಮೆಗೊಂಡಿದೆ. ಹತ್ತು ಗ್ರಾಮ್ ಚಿನ್ನದ ಬೆಲೆಯಲ್ಲಿ 750 ರೂಗಳಷ್ಟು ಕಡಿಮೆ ಆಗಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಬೆಲೆಯಲ್ಲಿ ವ್ಯತ್ಯಯ ಆಗಿಲ್ಲ. ಇನ್ನು, ಬೆಳ್ಳಿ ಬೆಲೆಯೂ ಯಥಾಸ್ಥಿತಿ ಹೊಂದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,35,000 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,47,280 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,35,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 24,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 25,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 30ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,728 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,500 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,046 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 245 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,728 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,500 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 245 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)