ಬೆಂಗಳೂರು, ಏಪ್ರಿಲ್ 23: ಮಡಿವಾಳದ ಕೃಪಾನಿಧಿ ಕಾಲೇಜಿನಲ್ಲಿ ನಡೆದ ಸಿಇಟಿ ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವ ಆರೋಪ ಕೇಳಿಬಂದಿದೆ. ಕಳೆದ ವರ್ಷ ಜನಿವಾರದ ವಿಷಯದಲ್ಲಿ ವಿರೋಧಗಳು ವ್ಯಕ್ತವಾಗಿ, ವಿಷಯ ಹೈಕೋರ್ಟ್ ಮೆಟ್ಟಿಲೇರಿ ಮುಖ್ಯಮಂತ್ರಿಗಳು ಕೂಡ ಜನಿವಾರ ತೆಗೆಸದಂತೆ ಸೂಚನೆ ನೀಡಿದ್ದರು. ಆದರೂ, ನಿನ್ನೆ ಐದಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜನಿವಾರ ತೆಗೆಯಲು ಪರೀಕ್ಷಾ ಕೇಂದ್ರದ ಸಿಬ್ಬಂದಿ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಒಬ್ಬ ವಿದ್ಯಾರ್ಥಿಯ ಪ್ರಕಾರ, ಪ್ರವೇಶದ ವೇಳೆ ಜನಿವಾರವನ್ನು ಪರಿಶೀಲಿಸಿದ ಸಿಬ್ಬಂದಿ, ಅದನ್ನು ತೆಗೆದುಹಾಕುವಂತೆ ಸೂಚಿಸಿದ್ದಾರೆ. ಇದು ಕೇವಲ ದಾರ, ಯಾವುದೇ ಮೆಟಲ್ ಇಲ್ಲ ಎಂದು ವಿದ್ಯಾರ್ಥಿ ಹೇಳಿದರೂ, ಅನುಮತಿ ಇಲ್ಲ, ತೆಗೆದು ಬನ್ನಿ ಇಲ್ಲವಾದರೆ ಬಿಡುವುದಿಲ್ಲ ಎಂದು ಹೇಳಲಾಗಿದೆ. ಪರೀಕ್ಷೆ ತಪ್ಪಿಹೋಗುವ ಭಯದಿಂದ ವಿದ್ಯಾರ್ಥಿ ಜನಿವಾರ ತೆಗೆದು ಪರೀಕ್ಷೆ ಬರೆದಿದ್ದಾನೆ. ನಂತರ ಪೋಷಕರಿಗೆ ವಿಷಯ ತಿಳಿಸಿದ್ದು, ಅವರು ಕಾಲೇಜಿನ ಪ್ರಿನ್ಸಿಪಾಲ್ ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು, ಪೋಷಕರು ದೂರು ನೀಡಲು ಮುಂದಾಗಿದ್ದಾರೆ.
ಬೆಂಗಳೂರು, ಏಪ್ರಿಲ್ 24: ಬೆಂಗಳೂರಿನಲ್ಲಿ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಪೋಷಕರು ಹಾಗೂ ಬಿಜೆಪಿ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಡಿವಾಳದಲ್ಲಿರುವ ಕೃಪಾನಿಧಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಸಿಇಟಿ ಪರೀಕ್ಷೆಗೆ ಹಾಜರಾಗಿದ್ದ ಐದಕ್ಕೂ ಹೆಚ್ಚು ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಪರೀಕ್ಷಾ ಕೇಂದ್ರದ ಸಿಬ್ಬಂದಿ ಜನಿವಾರ ತೆಗೆಸುವಂತೆ ಸೂಚಿಸಿದ್ದಾರೆ. ಜನಿವಾರ ತೆಗೆಯಲು ವಿದ್ಯಾರ್ಥಿಗಳು ನಿರಾಕರಿಸಿದಾಗ, ಅವರನ್ನು ಪರೀಕ್ಷೆಗೆ ಕೂರಲು ಬಿಡುವುದಿಲ್ಲ ಎಂದು ಹೇಳಿ ಮನೆಗೆ ಕಳುಹಿಸುವ ಬೆದರಿಕೆ ಹಾಕಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಘಟನೆ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಧಾರ್ಮಿಕ ಆಚರಣೆಯ ಭಾಗವಾಗಿರುವ ಜನಿವಾರ ತೆಗೆಸುವ ಕ್ರಮವು ಧಾರ್ಮಿಕ ಹಕ್ಕಿಗೆ ಧಕ್ಕೆ ತಂದಿದೆ ಎಂದು ಪೋಷಕರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಘಟನೆಗಳು ಹಿಂದೂ ವಿರೋಧಿ ನೀತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಕೆಲ ಪೋಷಕರು ಸರ್ಕಾರವನ್ನು ದೂಷಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನಟ ರಿತೇಶ್ ದೇಶಮುಖ್ ಅಭಿನಯದ ‘ರಾಜ ಶಿವಾಜಿ’ ಚಿತ್ರ ಮೇ 1ರಂದು ದೊಡ್ಡ ಪರದೆಯ ಮೇಲೆ ಬರಲಿದೆ. ಪ್ರೇಕ್ಷಕರು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಅನೇಕ ಬಾಲಿವುಡ್ ನಟರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಟ ಸಂಜಯ್ ದತ್ ನಿಂದ ನಟಿ ವಿದ್ಯಾ ಬಾಲನ್ ವರೆಗೆ, ಅನೇಕ ಬಾಲಿವುಡ್ ನಟರು ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. 100 ಕೋಟಿ ರೂ. ಬಜೆಟ್ನಲ್ಲಿ ನಿರ್ಮಿಸಲಾದ ಚಿತ್ರದಲ್ಲಿ ನಟರ ಸಂಭಾವನೆ ಕೂಡ ದೊಡ್ಡದಿದೆ,. ಆ ಬಗ್ಗೆ ಇಲ್ಲಿದೆ ವಿವರ.
‘ರಾಜ ಶಿವಾಜಿ’ ಚಿತ್ರದ ತಾರಾಬಳಗದ ಬಗ್ಗೆ ಹೇಳುವುದಾದರೆ , ಚಿತ್ರದಲ್ಲಿ ನಟರಾದ ರಿತೇಶ್ ದೇಶಮುಖ್, ಸಂಜಯ್ ದತ್, ಅಭಿಷೇಕ್ ಬಚ್ಚನ್, ವಿದ್ಯಾ ಬಾಲನ್, ಸಚಿನ್ ಖೇಡೇಕರ್, ಮಹೇಶ್ ಮಂಜ್ರೇಕರ್ ಮತ್ತು ಜೆನೆಲಿಯಾ ದೇಶಮುಖ್ ಅವರಂತಹ ಸೆಲೆಬ್ರಿಟಿಗಳು ಇದ್ದಾರೆ.ಇವರ ಸಂಭಾವನೆ ವಿವರ ಇಲ್ಲಿದೆ.
ರಿತೇಶ್ ದೇಶಮುಖ್ – ‘ರಾಜ ಶಿವಾಜಿ’ ಚಿತ್ರದಲ್ಲಿ ರಿತೇಶ್ ಛತ್ರಪತಿ ಶಿವಾಜಿ ಮಹಾರಾಜರ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರವನ್ನು ರಿತೇಶ್ ಅವರೇ ಬರೆದು, ನಿರ್ದೇಶಿಸಿದ್ದಾರೆ. ಬಂದಿರುವ ಮಾಹಿತಿಯ ಪ್ರಕಾರ, ಈ ಚಿತ್ರಕ್ಕಾಗಿ ನಟ 15 ರಿಂದ 18 ಕೋಟಿ ರೂಪಾಯಿಗಳ ಸಂಭಾವನೆ ಪಡೆದಿದ್ದಾರೆ.
ಸಂಜಯ್ ದತ್ – ಸಂಜು ಬಾಬಾ ಈ ಚಿತ್ರದಲ್ಲಿ ಅಫ್ಜಲ್ ಖಾನ್ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪಾತ್ರವನ್ನು ನಿರ್ವಹಿಸಲು ಈ ನಟ ಸುಮಾರು 8 ರಿಂದ 10 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ. ಅಭಿಮಾನಿಗಳು ಕೂಡ ಅಫ್ಜಲ್ ಖಾನ್ ಪಾತ್ರದಲ್ಲಿ ನಟನನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ಅಭಿಷೇಕ್ ಬಚ್ಚನ್ – ನಟ ಅಭಿಷೇಕ್ ಬಚ್ಚನ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ನಟ ಸುಮಾರು 6 ರಿಂದ 8 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ… ಚಿತ್ರದಲ್ಲಿ, ಅಭಿಷೇಕ್ ಮಹಾರಾಜ್ ಅವರ ಹಿರಿಯ ಸಹೋದರ ಸಂಭಾಜಿ ಶಹಾಜಿ ಭೋಸಲೆ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಜಿನಿಲಿಯಾ ದೇಶಮುಖ್ – ಜಿನಿಲಿಯಾ ದೇಶಮುಖ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜಿನಿಲಿಯಾ ಮಹಾರಾಜ್ ಅವರ ಪತ್ನಿ ಸಾಯಿಬಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಜಿನಿಲಿಯಾ ಅವರೇ ನಿರ್ಮಿಸಿದ್ದಾರೆ. ಈ ಪಾತ್ರಕ್ಕಾಗಿ ನಟಿ 1 ರಿಂದ 2 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.
ಮಹೇಶ್ ಮಂಜ್ರೇಕರ್ – ಮಹೇಶ್ ಮಂಜ್ರೇಕರ್ ‘ಮೀ ಶಿವಾಜಿರಾಜೇ ಭೋಸಲೆ ಬೋಲ್ಟೋಯ್’ ಚಿತ್ರದಲ್ಲಿ ಮಹಾರಾಜನ ಪಾತ್ರದಲ್ಲಿ ನಟಿಸಿದ್ದಾರೆ… ಆದರೆ ಮಂಜ್ರೇಕರ್ ‘ರಾಜ ಶಿವಾಜಿ’ ಚಿತ್ರದಲ್ಲಿ ಲಖುಜಿ ಜಾಧವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಂದಿರುವ ಮಾಹಿತಿಯ ಪ್ರಕಾರ, ಅವರು ಈ ಪಾತ್ರಕ್ಕಾಗಿ 2-3 ಕೋಟಿ ಸಂಭಾವನೆ ಪಡೆದಿದ್ದಾರೆ.
ನಟ ಫರ್ದೀನ್ ಖಾನ್ – ಫರ್ದೀನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಫರ್ದೀನ್ ಶಹಜಹಾನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕಾಗಿ ನಟನಿಗೆ 2 ರಿಂದ 3 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆ.
ನಟಿ ವಿದ್ಯಾ ಬಾಲನ್ – ಎಲ್ಲಾ ಸೆಲೆಬ್ರಿಟಿಗಳಿಗೆ ಹೋಲಿಸಿದರೆ ವಿದ್ಯಾ ಬಾಲನ್ ಅತ್ಯಂತ ಕಡಿಮೆ ಸಂಭಾವನೆ ಪಡೆದಿದ್ದಾರೆ. ಚಿತ್ರದಲ್ಲಿ ನಟಿ ‘ಬಡಿ ಬೇಗಂ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ನಟಿ 1.5 ಕೋಟಿ ಸಂಭಾವನೆ ಪಡೆದಿದ್ದಾರೆ.
ಗುವಾಹಟಿ, ಏಪ್ರಿಲ್ 24: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ದಾಖಲಿಸಿರುವ ಕ್ರಿಮಿನಲ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ(Pawan Khera) ಅವರಿಗೆ ಭಾರಿ ಹಿನ್ನಡೆಯಾಗಿದೆ. ಪವನ್ ಖೇರಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಗುವಾಹಟಿ ಹೈಕೋರ್ಟ್ ತಿರಸ್ಕರಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮಂಗಳವಾರ ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ್ದ ನ್ಯಾಯಮೂರ್ತಿ ಪಾರ್ಥಿವಜ್ಯೋತಿ ಸೈಕಿಯಾ ಅವರ ಏಕಸದಸ್ಯ ಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಅಂತಿಮ ಆದೇಶ ಹೊರಡಿಸಿದ ನ್ಯಾಯಾಲಯವು, ಖೇರಾ ಅವರಿಗೆ ಜಾಮೀನು ನೀಡಲು ನಿರಾಕರಿಸಿದೆ. ಇದರಿಂದಾಗಿ ಪವನ್ ಖೇರಾ ಅವರಿಗೆ ಬಂಧನದ ಭೀತಿ ಎದುರಾಗಿದೆ.
ಅಸ್ಸಾಂ ಮುಖ್ಯಮಂತ್ರಿಯವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಪವನ್ ಖೇರಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ದೂರು ದಾಖಲಿಸಿದ್ದರು. ಸಾರ್ವಜನಿಕವಾಗಿ ತಮ್ಮ ವಿರುದ್ಧ ಅವಹೇಳನಕಾರಿ ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮ ಘನತೆಗೆ ಧಕ್ಕೆ ತರಲಾಗಿದೆ ಎಂಬುದು ರಿನಿಕಿ ಅವರ ದೂರಿನ ಸಾರಾಂಶವಾಗಿತ್ತು. ಈ ದೂರಿನ ಆಧಾರದ ಮೇಲೆ ಅಸ್ಸಾಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ಮೋದಿಯವರ ಹೆಸರಿನ ಕುರಿತಾದ ಹೇಳಿಕೆಯಿಂದ ಕಾನೂನು ಹೋರಾಟ ನಡೆಸುತ್ತಿರುವ ಪವನ್ ಖೇರಾ ಅವರಿಗೆ, ಅಸ್ಸಾಂನ ಈ ಪ್ರಕರಣ ಹೊಸ ತಲೆನೋವಾಗಿ ಪರಿಣಮಿಸಿದೆ. ಹೈಕೋರ್ಟ್ನ ಈ ನಿರ್ಧಾರವು ಅಸ್ಸಾಂ ಸರ್ಕಾರ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ವಾಕ್ಸಮರವನ್ನು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆಯಿದೆ.
ಗುವಾಹಟಿ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ವಜಾಗೊಂಡಿರುವ ಹಿನ್ನೆಲೆಯಲ್ಲಿ, ಪವನ್ ಖೇರಾ ಅವರು ಈಗ ಸುಪ್ರೀಂ ಕೋರ್ಟ್ನ ಮೊರೆ ಹೋಗುವ ಸಾಧ್ಯತೆಯಿದೆ ಅಥವಾ ಸ್ಥಳೀಯ ನ್ಯಾಯಾಲಯದಲ್ಲಿ ಕಾನೂನು ಪ್ರಕ್ರಿಯೆಗಳನ್ನು ಎದುರಿಸಬೇಕಾಗುತ್ತದೆ. ಒಟ್ಟಾರೆಯಾಗಿ, ಕಾನೂನು ಹೋರಾಟದಲ್ಲಿ ಪವನ್ ಖೇರಾ ಅವರಿಗೆ ಸಿಗುತ್ತಿದ್ದ ‘ರಿಲೀಫ್’ ಸದ್ಯಕ್ಕೆ ಅಂತ್ಯಗೊಂಡಂತೆ ತೋರುತ್ತಿದ್ದು, ಅಸ್ಸಾಂ ಪೊಲೀಸರ ಮುಂದಿನ ನಡೆ ಕುತೂಹಲ ಮೂಡಿಸಿದೆ.
ಮೈಸೂರು, ಏಪ್ರಿಲ್ 24: ಜಿಲ್ಲೆಯ ಕೆ.ಆರ್. ನಗರ ತಾಲೂಕಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ವಿದ್ಯುತ್ ಅವಘಡಗಳಲ್ಲಿ ಇಬ್ಬರು ಮೃತಪಟ್ಟ (Death)ಘಟನೆ ನಡೆದಿದೆ. ಜಮೀನಿನಲ್ಲಿದ್ದ ವಿದ್ಯುತ್ ತಂತಿ ತಗುಲಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಇನ್ನೊಂದು ಪ್ರಕರಣದಲ್ಲಿ 22 ವರ್ಷದ ಯುವಕ ಪಂಪ್ಸೆಟ್ ಸರಿ ಮಾಡುತ್ತಿದ್ದ ವೇಳೆ ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ. ಎರದೂ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಪಕ್ಕದ ಜಮೀನಿನಿಂದ ಬಂದಿದ್ದ ವಿದ್ಯುತ್ ತಂತಿ
ಮೊದಲ ಘಟನೆಯಲ್ಲಿ, ಅಡಗೂರು ಮಾರಗೌಡನಹಳ್ಳಿ ಗ್ರಾಮದ ನಿವಾಸಿ ಮಹದೇವ್ (58) ಜಮೀನಿಗೆ ನೀರು ಹಾಯಿಸಲು ತೆರಳಿದ್ದಾಗ ದುರ್ಘಟನೆ ಸಂಭವಿಸಿದೆ. ಪಕ್ಕದ ಜಮೀನಿನಿಂದ ಬಂದಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಅದನ್ನು ಅರಿಯದೆ ತುಳಿದ ಪರಿಣಾಮ ಅವರಿಗೆ ತೀವ್ರ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇತ್ತೀಚೆಗಷ್ಟೇ ಮದುವೆಯಾಗಿದ್ದವ ಸಾವು
ಮತ್ತೊಂದು ಘಟನೆಯಲ್ಲಿ, ಕೆಸ್ತೂರು ಕೊಪ್ಪಲು ಗ್ರಾಮದಲ್ಲಿ 22 ವರ್ಷದ ಯುವಕ ಪುನೀತ್ ವಿದ್ಯುತ್ ಶಾಕ್ಗೆ ಬಲಿಯಾಗಿದ್ದಾನೆ. ಪಕ್ಕದ ಜಮೀನಿನ ಪಂಪ್ಸೆಟ್ ಮೋಟಾರ್ ದುರಸ್ತಿ ಮಾಡಲು ಹೋಗಿದ್ದ ವೇಳೆ ವಿದ್ಯುತ್ ಪ್ರವಹಿಸಿ ಈ ಅವಘಡ ಸಂಭವಿಸಿದೆ. ನೀರಿನ ತೊಟ್ಟಿಗೆ ಇಳಿದು ಮೋಟಾರ್ ಪರಿಶೀಲಿಸುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಹರಿದು ಪುನೀತ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ಮದುವೆಯಾಗಿದ್ದ ಪುನೀತ್ ಸಾವಿನಿಂದ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಈ ಎರಡು ಘಟನೆಗಳೂ ಕೆ.ಆರ್.ನಗರ ತಾಲೂಕಿನಲ್ಲಿ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಸಂಬಂಧಿತ ಪ್ರಕರಣಗಳು ಕೆ.ಆರ್.ನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಹಳ್ಳಿಗಳಲ್ಲಿ ಬಳಕೆಯಲ್ಲಿರುವ ಅನೇಕ ಗಾದೆಗಳು, ನಾಣ್ಣುಡಿಗಳು ಮತ್ತು ಮಾತುಗಳ ಹಿಂದೆ ಆಳವಾದ ತತ್ವಗಳು ಹಾಗೂ ಅರ್ಥಗಳಿವೆ. ಅಂತಹ ಒಂದು ಮಹತ್ವದ ಮಾತಾಗಿದೆ, “ದೇವರಿಗೆ ಕಣ್ಣಿಲ್ಲವಾ”. ಈ ಮಾತು ಯಾವಾಗ ಮತ್ತು ಏಕೆ ನಮ್ಮಿಂದ ಹೊರಹೊಮ್ಮುತ್ತದೆ, ಮತ್ತು ಅದರ ಫಲಿತಾಂಶವೇನು ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿಯವರು ಹೇಳುವಂತೆ, ಸಾಮಾನ್ಯವಾಗಿ, ಈ ಮಾತನ್ನು ಅತೀವ ನೋವು, ಅಸಹಾಯಕತೆ ಅಥವಾ ಘೋರ ಅನ್ಯಾಯಕ್ಕೆ ಒಳಗಾದಾಗ ಮನದಾಳದಿಂದ ಉಚ್ಚರಿಸುತ್ತೇವೆ. ನಮ್ಮ ಕಡೆ ನ್ಯಾಯವಿದ್ದರೂ ಮೋಸ ಹೋದಾಗ, ಅಥವಾ ಬಲಿಷ್ಠರ ವಿರುದ್ಧ ಹೋರಾಡಿ ಹೋರಾಡಿ ಸಾಕಾಗಿ ಹೋದಾಗ ಈ ಭಾವನಾತ್ಮಕ ಉದ್ಗಾರ ಹೊರಬರುತ್ತದೆ. ಇದು ಕೇವಲ ಮೌಖಿಕ ಅಭಿವ್ಯಕ್ತಿಯಲ್ಲ, ಬದಲಿಗೆ ನಮ್ಮ ಭಾವನೆಗಳ ತೀವ್ರತೆಯ ಪ್ರತೀಕವಾಗಿದೆ. ಯಾವುದೇ ಜಪ, ತಪ ಅಥವಾ ಪೂಜೆಯ ಅಗತ್ಯವಿಲ್ಲದೆ, ಕೇವಲ ಹೃದಯದ ಆಳದಿಂದ ಹೊರಹೊಮ್ಮುವ ಈ ಕರೆಯು ಶಕ್ತಿಯುತವಾಗಿದೆ.
ಸಂಕಷ್ಟದ ಸಂದರ್ಭಗಳಲ್ಲಿ, ನಾವು ಧರ್ಮಬದ್ಧವಾಗಿ ಮತ್ತು ನ್ಯಾಯಸಮ್ಮತವಾಗಿ ನಡೆದುಕೊಂಡಿದ್ದರೂ ಮಾನಸಿಕವಾಗಿ, ದೈಹಿಕವಾಗಿ, ಆರ್ಥಿಕವಾಗಿ ಅಥವಾ ರಾಜಕೀಯವಾಗಿ ಸಂಪೂರ್ಣವಾಗಿ ಕುಗ್ಗಿ ಹೋದಾಗ ಈ ಮಾತು ಸ್ವಾಭಾವಿಕವಾಗಿ ಬರುತ್ತದೆ. ಇದು ಕೇವಲ ಬಡವರ ಅಥವಾ ಶ್ರೀಮಂತರ ಮಾತುಗಳಲ್ಲ, ಸಾಮಾನ್ಯ ಮನುಷ್ಯನ ಅಳಲು. ಈ ಮಾತಿಗೆ ಯಾವುದೇ ವಿಶೇಷ ಮಹನೀಯತೆ ಅಥವಾ ತಪಸ್ವಿಗಳ ಪದವಿ ಬೇಕಾಗಿಲ್ಲ, ಸಾಮಾನ್ಯರೂ ಕೂಡ ಈ ವಾಕ್ಯಶಕ್ತಿಯನ್ನು ಹೊಂದಬಹುದು.
ಕರ್ಮ ಸಿದ್ಧಾಂತದ “ಮಾಡಿದ್ದುಣ್ಣೋ ಮಹಾರಾಯ” ಎಂಬ ಮಾತಿನ ಆಚೆಗೆ, ಈ “ದೇವರಿಗೆ ಕಣ್ಣಿಲ್ಲವಾ” ಎಂಬ ಮಾತು ಮಹತ್ವ ಪಡೆಯುತ್ತದೆ. ನಮ್ಮ ಬಾಯಿಂದ ಈ ಮಾತು ಹೊರಬಂದಾಗ, ತಕ್ಷಣವೇ ಭಗವಂತನ ಅನುಗ್ರಹವು ನಮಗೆ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದು ಶುಭ ನುಡಿಯೇ ಶಕುನ ಎಂಬ ನಂಬಿಕೆಗೆ ಪೂರಕವಾಗಿದೆ, ಅಂದರೆ ಶುಭ ನುಡಿಗಳಿಂದ ಶುಭ ಫಲಿತಾಂಶಗಳು ಪ್ರಾಪ್ತವಾಗುತ್ತವೆ.
ಮಹಾಭಾರತದ ದ್ರೌಪದಿ ವಸ್ತ್ರಾಪಹರಣದ ಸಂದರ್ಭದಲ್ಲಿ ಇದಕ್ಕೆ ಸ್ಪಷ್ಟ ಉದಾಹರಣೆಯಿದೆ. ಭೀಷ್ಮ, ಪಂಚಪಾಂಡವರು, ಮತ್ತು ಇಡೀ ಕುಟುಂಬದ ಸದಸ್ಯರು ಉಪಸ್ಥಿತರಿದ್ದರೂ, ಯಾರೊಬ್ಬರೂ ಅಸಹಾಯಕರಾಗಿದ್ದ ದ್ರೌಪದಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಅಂತಹ ಸಂದರ್ಭದಲ್ಲಿ, ದ್ರೌಪದಿ “ಅನೇತಾ ಶರಣಂ ನಾಸ್ತಿ” ಎಂದು ತಿಳಿದು, ಕೃಷ್ಣ ಭಗವಾನನನ್ನು “ಅಪ್ಪ, ನಿನಗೆ ಕಣ್ಣಿಲ್ವಾ?” ಎಂದು ಮನದಾಳದಿಂದ ಕರೆದಳು. ಆಕೆಯ ಆ ತೀವ್ರವಾದ ಕರೆಯಿಂದಾಗಿ ಕೃಷ್ಣನು ತಕ್ಷಣವೇ ಪ್ರತ್ಯಕ್ಷನಾಗಿ ಆಕೆಯನ್ನು ರಕ್ಷಿಸಿದನು.
ಅದೇ ರೀತಿ ಕಲಿಯುಗದಲ್ಲಿಯೂ ಸಹ, ನಾವು ನ್ಯಾಯವಂತರಾಗಿ, ಸತ್ಯವಂತರಾಗಿ ಮತ್ತು ಧರ್ಮವಂತರಾಗಿ ನಡೆದುಕೊಂಡಾಗ, ಆದರೆ ಕಷ್ಟಗಳು ನಮ್ಮನ್ನು ಸುತ್ತುವರಿದಾಗ, ನಮ್ಮ ಕೊನೆಯ ಭರವಸೆಯಾಗಿ “ದೇವರಿಗೆ ಕಣ್ಣಿಲ್ಲವಾ” ಎಂಬ ಮಾತು ಹೊರಬರುತ್ತದೆ. ಇದು ಕೇವಲ ಒಂದು ಮಾತು ಎಂದರ್ಥವಲ್ಲ, ಬದಲಿಗೆ ಹೃದಯದಿಂದ ಅತ್ತಾಗ, ಭಗವಂತನು ಬಂದೇ ಬರುತ್ತಾನೆ ಎಂಬ ಅಚಲ ನಂಬಿಕೆಯನ್ನು ಇದು ಸೂಚಿಸುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕೊರ್ಬಾ, ಏಪ್ರಿಲ್ 24: ಛತ್ತೀಸ್ಗಢದ ಕೊರ್ಬಾ ಜಿಲ್ಲೆಯಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಘೋರ ಘಟನೆಯೊಂದು ಜರುಗಿದೆ. ಕ್ಷುಲ್ಲಕ ಕೌಟುಂಬಿಕ ಕಲಹ ಮತ್ತು ಮದ್ಯದ ಅಮಲು ಒಬ್ಬ ವ್ಯಕ್ತಿಯನ್ನು ಎಷ್ಟು ಕ್ರೂರನನ್ನಾಗಿ ಮಾಡಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಜಿಲ್ಲೆಯ ರಾಜ್ಗಮರ್ ಪೊಲೀಸ್ ಔಟ್ಪೋಸ್ಟ್ ವ್ಯಾಪ್ತಿಯ ಬುಂದೇಲಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. 58 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಹರಿತವಾದ ಆಯುಧದಿಂದ ಶಿರಚ್ಛೇದ(Behead) ಮಾಡಿ, ಬಳಿಕ ಕತ್ತರಿಸಿದ ತಲೆಯನ್ನು ಹಿಡಿದು ಗ್ರಾಮದ ಬೀದಿಗಳಲ್ಲಿ ಓಡಾಡಿದ್ದಾನೆ.
ಆರೋಪಿ ಸಲಿಕ್ ರಾಮ್ ಯಾದವ್ ಸ್ಥಳೀಯ ಕೋಳಿ ಸಾಕಣೆ ಕೇಂದ್ರದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ. ಬುಧವಾರ ಸಂಜೆ ಪತ್ನಿ ಸುಮತಿ (50) ಅವರೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿದ್ದ ಸಲಿಕ್, ಮದ್ಯದ ಅಮಲಿನಲ್ಲಿದ್ದ ಎನ್ನಲಾಗಿದೆ. ಜಗಳ ವಿಕೋಪಕ್ಕೆ ಹೋದಾಗ, ಕೋಳಿ ಕತ್ತರಿಸಲು ಬಳಸುವ ಹರಿತವಾದ ಮಾಂಸ ಕತ್ತರಿಸುವ ಆಯುಧದಿಂದ ಪತ್ನಿಯ ಕುತ್ತಿಗೆಗೆ ಬಲವಾಗಿ ಏಟು ಹಾಕಿ ಶಿರಚ್ಛೇದ ಮಾಡಿದ್ದಾನೆ.
ಹತ್ಯೆಯ ನಂತರದ ದೃಶ್ಯಗಳು ಗ್ರಾಮಸ್ಥರನ್ನು ಸ್ತಬ್ಧಗೊಳಿಸಿದ್ದವು. ಸಲಿಕ್ ಒಂದು ಕೈಯಲ್ಲಿ ಪತ್ನಿಯ ಕತ್ತರಿಸಿದ ತಲೆಯನ್ನು ಮತ್ತು ಇನ್ನೊಂದು ಕೈಯಲ್ಲಿ ರಕ್ತಸಿಕ್ತ ಆಯುಧವನ್ನು ಹಿಡಿದುಕೊಂಡು ಗ್ರಾಮದ ಬೀದಿಗಳಲ್ಲಿ ಓಡಾಡಿದ್ದಾನೆ. ಬಳಿಕ ತಲೆ ಮತ್ತು ಆಯುಧವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಪೊಲೀಸ್ ವಿಚಾರಣೆಯ ವೇಳೆ ಸಲಿಕ್ ನೀಡಿದ ಹೇಳಿಕೆಗಳು ಆಘಾತಕಾರಿಯಾಗಿವೆ. ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ಮೂಲತಃ ಅಜ್ಗರ್ಬಹಾರ್ ಹಲ್ದಿಮಾಡ ಗ್ರಾಮದ ಈ ದಂಪತಿ ಕಳೆದ ಮೂರು ವರ್ಷಗಳಿಂದ ಈ ಕೋಳಿ ಸಾಕಣೆ ಕೇಂದ್ರದಲ್ಲಿ ನೆಲೆಸಿದ್ದರು. ಅವರಿಗೆ ನಾಲ್ಕು ಮಕ್ಕಳಿದ್ದು, ತಂದೆ ಜೈಲು ಪಾಲಾಗಿ ತಾಯಿ ಹೆಣವಾಗಿ ಬಿದ್ದಿರುವುದನ್ನು ಕಂಡು ಮಕ್ಕಳು ದಿಕ್ಕೆಟ್ಟಿದ್ದಾರೆ.
ಮುಂಬೈ, ಏ.24: ಐಪಿಎಲ್ 2026ರ ನಿರ್ಣಾಯಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಬ್ಯಾಟಿಂಗ್ಗೆ ಇಳಿಯುವ ಮುನ್ನ ಮೈದಾನದ ಹೊರಗೆ ಭರ್ಜರಿ ವಾರ್ಮ್-ಅಪ್ ನಡೆಸಿ ಅಬ್ಬರಿಸಿದ ಹಾರ್ದಿಕ್, ಕ್ರೀಸ್ನಲ್ಲಿ ಕೇವಲ 1 ರನ್ ಗಳಿಸಿ ಪೆವಿಲಿಯನ್ ಸೇರುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಪಂದ್ಯದ ಸಂಕಷ್ಟದ ಸಮಯದಲ್ಲಿ ಮುಂಬೈ ತಂಡಕ್ಕೆ ಹಾರ್ದಿಕ್ ಆಸರೆಯಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಡಗೌಟ್ ಬಳಿಕ ಹಾರ್ದಿಕ್ ಪಾಂಡ್ಯ ನೆಟ್ಸ್ನಲ್ಲಿ ಹಾಗೂ ಮೈದಾನದ ಬದಿಯಲ್ಲಿ ವಾರ್ಮ್-ಅಪ್ ಮಾಡುತ್ತಿದ್ದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಇದನ್ನು ಕಂಡ ಅಭಿಮಾನಿಗಳು “ಇಂದು ಹಾರ್ದಿಕ್ ಅಬ್ಬರ ಖಚಿತ” ಎಂದು ಭಾವಿಸಿದ್ದರು. ಆದರೆ, ಕ್ರೀಸ್ಗೆ ಬಂದ ಹಾರ್ದಿಕ್ ಎದುರಿಸಿದ ಮೊದಲ ಕೆಲವು ಎಸೆತಗಳಲ್ಲೇ ಪರದಾಡಿದರು. ಅಂತಿಮವಾಗಿ ಕೇವಲ 1 ರನ್ ಗಳಿಸಿ ಬೇಜವಾಬ್ದಾರಿಯುತ ಶಾಟ್ ಬಾರಿಸಲು ಹೋಗಿ ಕ್ಯಾಚ್ ನೀಡಿ ಔಟಾದರು. ಸಾಮಾಜಿಕ ಜಾಲತಾಣಗಳಲ್ಲಿ ಹಾರ್ದಿಕ್ ಪಾಂಡ್ಯ ಅವರ ವಾರ್ಮ್-ಅಪ್ ವಿಡಿಯೋ ಮತ್ತು ಅವರ ಸ್ಕೋರ್ ಕಾರ್ಡ್ ಅನ್ನು ಹೋಲಿಸಿ ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ. “ವಾರ್ಮ್-ಅಪ್ನಲ್ಲಿ ತೋರಿದ ಆಟ ಪಂದ್ಯದಲ್ಲಿ ಕಾಣಿಸಲಿಲ್ಲ” ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂಬೈ ಇಂಡಿಯನ್ಸ್ ಸತತ ಸೋಲುಗಳಿಂದ ಕಂಗಾಲಾಗಿರುವ ಈ ಸಮಯದಲ್ಲಿ ನಾಯಕನ ಈ ಪ್ರದರ್ಶನ ತಂಡದ ಮೇಲೆ ಮತ್ತಷ್ಟು ಒತ್ತಡ ಹೇರಿದೆ.
ತಿರುಪತಿ: ವಿಶ್ವಪ್ರಸಿದ್ಧ ಪುಣ್ಯಕ್ಷೇತ್ರ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಕಾಯುತ್ತಿರುವ ಭಕ್ತರಿಗೆ ಪ್ರಮುಖ ಅಪ್ಡೇಟ್ ಇಲ್ಲಿದೆ. 2026ರ ಜುಲೈ ತಿಂಗಳ ದರ್ಶನ ಕೋಟಾವನ್ನು ತಿರುಮಲ ತಿರುಪತಿ ದೇವಸ್ಥಾನಂ (TTD) ಇಂದು (ಏಪ್ರಿಲ್ 24) ಅಧಿಕೃತವಾಗಿ ಬಿಡುಗಡೆ ಮಾಡುತ್ತಿದೆ. ಆದ್ದರಿಂದ ತಡಮಾಡದೇ ಟಿಕೆಟ್ ಬುಕ್ ಮಾಡುವುದು ಹೇಗೆ ಎಂಬುದರ ಸಂಪೂರ್ಣ ವಿವರವನ್ನು ಹಂತ ಹಂತವಾಗಿ ಇಲ್ಲಿ ತಿಳಿದುಕೊಳ್ಳಿ.
ಟಿಕೆಟ್ ಬುಕ್ಕಿಂಗ್ ಸಮಯದ ವಿವರ:
ನೀವು ಜುಲೈ ತಿಂಗಳಲ್ಲಿ ದರ್ಶನ ಪಡೆಯಲು ಯೋಜಿಸುತ್ತಿದ್ದರೆ, ಸಮಯದ ಬಗ್ಗೆ ವಿಶೇಷ ಗಮನವಿರಲಿ. 300 ರೂ.ವಿಶೇಷ ಪ್ರವೇಶ ದರ್ಶನ ಇಂದು ಬೆಳಿಗ್ಗೆ 10:00 ಗಂಟೆಗೆ ಆನ್ಲೈನ್ ಕೋಟಾ ಬಿಡುಗಡೆಯಾಗಿದೆ. ಇದಲ್ಲದೇ ತಿರುಮಲ ಮತ್ತು ತಿರುಪತಿಯಲ್ಲಿನ ಕೊಠಡಿಗಳ ಬುಕ್ಕಿಂಗ್ ಇಂದು ಮಧ್ಯಾಹ್ನ 3:00 ಗಂಟೆಗೆ ಲಭ್ಯವಾಗಲಿದೆ.
ಮಧ್ಯವರ್ತಿಗಳ ಬಗ್ಗೆ ಎಚ್ಚರವಿರಲಿ:
ದರ್ಶನ ಟಿಕೆಟ್, ಅರ್ಜಿತ ಸೇವೆಗಳು ಅಥವಾ ವಸತಿ ಸೌಕರ್ಯದ ಹೆಸರಿನಲ್ಲಿ ಭಕ್ತರನ್ನು ವಂಚಿಸುವ ಜಾಲದ ಬಗ್ಗೆ ಟಿಟಿಡಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಯಾವುದೇ ಕಾರಣಕ್ಕೂ ಬ್ರೋಕರ್ ಅಥವಾ ಮಧ್ಯವರ್ತಿಗಳ ಮೂಲಕ ಟಿಕೆಟ್ ಪಡೆಯಲು ಪ್ರಯತ್ನಿಸಬೇಡಿ. ಕೇವಲ ಟಿಟಿಡಿಯ ಅಧಿಕೃತ ವೆಬ್ಸೈಟ್ ಮೂಲಕವೇ ಬುಕ್ಕಿಂಗ್ ಮಾಡಲು ಸೂಚಿಸಲಾಗಿದೆ.
ಲಭ್ಯವಿರುವ ದಿನಾಂಕಗಳಲ್ಲಿ ಹಸಿರು ಬಣ್ಣದ ಸ್ಲಾಟ್ ಅನ್ನು ಆಯ್ಕೆ ಮಾಡಿ.
ಭಕ್ತರ ಆಧಾರ್ ಕಾರ್ಡ್ ವಿವರಗಳನ್ನು ಸರಿಯಾಗಿ ನಮೂದಿಸಿ.
ಆನ್ಲೈನ್ ಮೂಲಕ ಹಣ ಪಾವತಿಸಿ, ನಿಮ್ಮ ಟಿಕೆಟ್ ಅನ್ನು ಪ್ರಿಂಟ್ ಪಡೆದುಕೊಳ್ಳಿ.
ನೆನಪಿರಲಿ: ಜುಲೈ ತಿಂಗಳಲ್ಲಿ ರಜೆಗಳು ಹೆಚ್ಚಿರುವುದರಿಂದ ಭಕ್ತರ ಸಂಖ್ಯೆ ಅಧಿಕವಾಗಿರುತ್ತದೆ. ಆದ್ದರಿಂದ ಟಿಕೆಟ್ಗಳು ಅತಿ ವೇಗವಾಗಿ ಖಾಲಿಯಾಗುವ ಸಾಧ್ಯತೆ ಇರುವುದರಿಂದ ಮುಂಚಿತವಾಗಿಯೇ ಲಾಗ್ ಇನ್ ಆಗಿ ಸಿದ್ಧರಿರುವುದು ಉತ್ತಮ. ಇದಲ್ಲದೇ ಹೊರಡುವ ಮುನ್ನ ಟಿಟಿಡಿಯ ಅಧಿಕೃತ ಪ್ರಕಟಣೆಗಳನ್ನು ಗಮನಿಸುವುದು ಸೂಕ್ತ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ದೇಶದ ಅಭಿವೃದ್ಧಿ ಹಳ್ಳಿಗಳಿಂದಲೇ ಆರಂಭವಾಗಬೇಕು. ಗ್ರಾಮಕ್ಕೆ ಧಕ್ಕೆ ಬಂದರೆ ಇಡೀ ಭಾರತಕ್ಕೆ ಧಕ್ಕೆ ಬರಬಹುದು ಎನ್ನುವ ಗಾಂಧೀಜಿಯವರ ಮಾತಿದೆ. ಹೀಗಾಗಿ ಒಂದು ದೇಶವು ಅಭಿವೃದ್ಧಿಯತ್ತ ಸಾಗಬೇಕಾದರೆ ಹಳ್ಳಿಗಳ ಅಭಿವೃದ್ಧಿಯು ಮುಖ್ಯ. ಈ ಗ್ರಾಮಗಳ ಅಭಿವೃದ್ಧಿಗೆ ಪಂಚಾಯತ್ ರಾಜ್ ವ್ಯವಸ್ಥೆ ಬಹಳ ಮುಖ್ಯವಾದದ್ದಾಗಿದೆ. ಗ್ರಾಮ ಪಂಚಾಯತ್ ಪಾತ್ರವನ್ನು ಗುರುತಿಸುವುದು ಹಾಗೂ ಹಳ್ಳಿಗಳ ಅಭಿವೃದ್ಧಿ ಹೆಚ್ಚು ಒತ್ತು ನೀಡುವುದಾಗಿದೆ. ಈ ವ್ಯವಸ್ಥೆ ಜಾರಿಗೆ ಬಂದ ಸವಿ ನೆನಪಿಗಾಗಿ ಪ್ರತಿ ವರ್ಷ ಏಪ್ರಿಲ್ 24 ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು (National Panchayati Raj Day) ಆಚರಿಸಲಾಗುತ್ತದೆ.
ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಇತಿಹಾಸವೇನು?
ಗ್ರಾಮೀಣ ಮಟ್ಟದಲ್ಲಿ ಅಧಿಕಾರ ವಿಕೇಂದ್ರೀಕರಣ, ಪಂಚಾಯತ್ ರಾಜ್ನ 1992ರ ಸಂವಿಧಾನ ತಿದ್ದುಪಡಿಯು (73ನೇ ತಿದ್ದುಪಡಿ) 1993ರ ಏಪ್ರಿಲ್ 24ರಂದು ಜಾರಿಗೆ ಬಂದವು. ಹೀಗಾಗಿ ಪಂಚಾಯತ್ ರಾಜ್ ಸಚಿವಾಲಯವು ಪ್ರತಿವರ್ಷ ಏಪ್ರಿಲ್ 24ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನಾಗಿ ಆಚರಿಸಲಾಗುತ್ತಿದೆ.
ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಮಹತ್ವ, ಆಚರಣೆ ಹೇಗೆ?
ಪಂಚಾಯತ್ ರಾಜ್ ವ್ಯವಸ್ಥೆಯು ಗ್ರಾಮಗಳ ಅಭಿವೃದ್ಧಿಯತ್ತ ಹೆಚ್ಚು ಗಮನ ಹರಿಸುತ್ತದೆ. ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಗ್ರಾಮೀಣ ಪ್ರಜೆಗಳ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಜಾರಿಗೆ ತಂದ ವ್ಯವಸ್ಥೆಯಾಗಿದೆ. ಗ್ರಾಮೀಣ ಭಾರತದಲ್ಲಿ ಪ್ರಜಾಪ್ರಭುತ್ವದ ತಳಹದಿಯನ್ನು ಬಲಪಡಿಸುವುದು, ಗ್ರಾಮ ಪಂಚಾಯತ್ಗಳ ಪಾತ್ರವನ್ನು ಗುರುತಿಸುವುದು, ಪಂಚಾಯತ್ ರಾಜ್ ಸಂಸ್ಥೆಗಳು ಹಳ್ಳಿಗಳ ಅಭಿವೃದ್ಧಿಗೆ ಇನ್ನಷ್ಟು ಕೆಲಸ ಮಾಡುವಂತೆ ಪ್ರೋತ್ಸಾಹಿಸುವುದು ಈ ದಿನದ ಉದ್ದೇಶವಾಗಿದೆ.
ಈ ವಿಶೇಷ ದಿನದಂದು ಕೇಂದ್ರ ಸರಕಾರವು ಪ್ರಮುಖವಾಗಿ ನ್ಯಾನ್ಜಿ ದೇಶಮುಖ್ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರ್, ದೀನ್ ದಯಾಳ್ ಉಪಾಧ್ಯಾಯ್ ಪಂಚಾಯತ್ ಸಶಕ್ತೀಕರಣ ಪುರಸ್ಕಾರ, ಮಕ್ಕಳ ಸ್ನೇಹಿ ಗ್ರಾಮ ಸಭಾ ಪುರಸ್ಕಾರ, ಗ್ರಾ. ಪಂ. ಅಭಿವೃದ್ಧಿ ಯೋಜನಾ ಪುರಸ್ಕಾರವನ್ನು ನೀಡಿ ಉತ್ತಮವಾಗಿ ಕೆಲಸ ಮಾಡುವ ಗ್ರಾಮ ಪಂಚಾಯತ್ ನ್ನು ಗುರುತಿಸಿ ಗೌರವಿಸುತ್ತವೆ. ಈ ದಿನದಂದು ವಿವಿಧ ಜಾಗೃತಿ ಕಾರ್ಯಕ್ರಮಗಳು ಚಟುವಟಿಕೆಗಳು, ವಿಚಾರ ಸಂಕಿರಣಗಳು, ಕಾರ್ಯಗಾರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಇನ್ನಷ್ಟು ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ