Category Archives: Blog

Your blog category

RCBಯ ಈ ದಾಂಡಿಗ ಬೌಲರ್‌ಗಳ ಪಾಲಿನ “ಸಿಂಹಸ್ವಪ್ನ” – Kannada News | Irfan Pathan labels this RCB star as nightmare for bowlers

ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​-19 ರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪ್ರಚಂಡ ಪ್ರದರ್ಶನ ನೀಡುತ್ತಿದೆ. ಈ ಪ್ರದರ್ಶನದೊಂದಿಗೆ ಓರ್ವ ಬ್ಯಾಟರ್ ಮಾತ್ರ ಎದುರಾಳಿ ಬೌಲರ್‌ಗಳ ನಿದ್ದೆಗೆಡಿಸಿದ್ದಾರೆ. ಅವರು ಮತ್ಯಾರೂ ಅಲ್ಲ, ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟರ್ ರಜತ್ ಪಾಟಿದಾರ್.

ಟೀಮ್ ಇಂಡಿಯಾದ ಮಾಜಿ ಆಟಗಾರ ಮತ್ತು ಖ್ಯಾತ ವಿಶ್ಲೇಷಕ ಇರ್ಫಾನ್ ಪಠಾಣ್, ರಜತ್ ಪಾಟಿದಾರ್ ಅವರ ವಿಸ್ಫೋಟಕ ಬ್ಯಾಟಿಂಗ್​ಗೆ ಮಾರುಹೋಗಿದ್ದಾರೆ. ಅಲ್ಲದೆ ಅವರನ್ನು ಬೌಲರ್‌ಗಳ ಪಾಲಿನ “ಸಿಂಹಸ್ವಪ್ನ” ಎಂದು ಕರೆದಿದ್ದಾರೆ.

ಪಠಾಣ್ ಮೆಚ್ಚುಗೆಗೆ ಕಾರಣವೇನು?

ಸಾಮಾನ್ಯವಾಗಿ ವಿರಾಟ್ ಕೊಹ್ಲಿ ಅಥವಾ ಫಿಲ್ ಸಾಲ್ಟ್ ಅವರ ಮೇಲೆ ಎಲ್ಲರ ಕಣ್ಣಿರುತ್ತದೆ. ಆದರೆ, ಈ ಬಾರಿ ಇರ್ಫಾನ್ ಪಠಾಣ್ ಅವರ ಗಮನ ಸೆಳೆದಿರುವುದು ರಜತ್ ಪಾಟಿದಾರ್ ಅವರ ಅಪ್ರತಿಮ ‘ಇಂಟೆಂಟ್’.

ಈ ಬಗ್ಗೆ ಮಾತನಾಡಿದ ಪಠಾಣ್, “ಪಾಟಿದಾರ್ ಕ್ರೀಸ್‌ಗೆ ಬಂದ ಮೊದಲ ಎಸೆತದಿಂದಲೇ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತಾರೆ. ಅವರ ಆಕ್ರಮಣಕಾರಿ ಆಟ ಆರ್‌ಸಿಬಿ ತಂಡದ ರನ್ ಗತಿಯನ್ನೇ ಬದಲಿಸುತ್ತಿದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.

ರಜತ್ ಅಬ್ಬರ:

  • ವೇಗದ ಅರ್ಧಶತಕ: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 20 ಎಸೆತಗಳಲ್ಲಿ 53 ರನ್ ಚಚ್ಚುವ ಮೂಲಕ ಪಾಟಿದಾರ್ ತಮ್ಮ ಕೆಪಾಸಿಟಿ ಏನೆಂದು ತೋರಿಸಿಕೊಟ್ಟಿದ್ದರು. ಇದರಲ್ಲಿ 5 ಅಮೋಘ ಸಿಕ್ಸರ್‌ಗಳಿದ್ದವು.
  • ಸ್ಪಿನ್ನರ್‌ಗಳ ಧೂಳೀಪಟ: ಈ ಸೀಸನ್‌ನಲ್ಲಿ ರಜಯ್ ಪಾಟಿದಾರ್ ಸ್ಪಿನ್ ಬೌಲರ್‌ಗಳ ವಿರುದ್ಧ 218ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸುತ್ತಿದ್ದಾರೆ. ಯಾವುದೇ ಸ್ಪಿನ್ನರ್ ಎದುರಾದರೂ ಕ್ರೀಸ್‌ನಿಂದ ಹೊರಬಂದು ಸಿಕ್ಸರ್ ಸಿಡಿಸುವುದು ಇವರ ಸ್ಪೆಷಾಲಿಟಿ.
  • ಸ್ಥಿರ ಪ್ರದರ್ಶನ: ಕೇವಲ ಒಂದು ಪಂದ್ಯಕ್ಕೆ ಸೀಮಿತವಾಗದೆ, ಬ್ಯಾಕ್-ಟು-ಬ್ಯಾಕ್ ಅರ್ಧಶತಕಗಳನ್ನು ಸಿಡಿಸುವ ಮೂಲಕ ಆರ್‌ಸಿಬಿ ಬ್ಯಾಟಿಂಗ್ ಬೆನ್ನೆಲುಬಾಗಿ ನಿಂತಿದ್ದಾರೆ.

ಇರ್ಫಾನ್ ಪಠಾಣ್ ಅವರ ಪ್ರಕಾರ, ಆರ್‌ಸಿಬಿ ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಬೇಕಾದರೆ ರಜತ್ ಪಾಟಿದಾರ್ ಅವರ ಫಾರ್ಮ್ ಅತ್ಯಂತ ನಿರ್ಣಾಯಕ. ವಿರಾಟ್ ಕೊಹ್ಲಿ ಒಂದು ಕಡೆ ನೆಲೆಯೂರಿದರೆ, ಇನ್ನೊಂದು ತುದಿಯಲ್ಲಿ ರಜತ್ ಪಾಟಿದಾರ್ ನಡೆಸುವ ಆಕ್ರಮಣಕಾರಿ ಬ್ಯಾಟಿಂಗ್ ಎದುರಾಳಿ ತಂಡದ ತಂತ್ರಗಳನ್ನೆಲ್ಲ ತಲೆಕೆಳಗಾಗಿಸುತ್ತಿದೆ.

ಇದನ್ನೂ ಓದಿ: RCB ವಿರುದ್ಧ ‘ರಾಜಧಾನಿ ಎಕ್ಸ್​ಪ್ರೆಸ್​’ ಆಗಮನ..!

ಹೀಗಾಗಿ ಮುಂದಿನ ಪಂದ್ಯದಲ್ಲಿ ರಜತ್ ಪಾಟಿದಾರ್ ಹೇಗೆ ಆಡಲಿದ್ದಾರೆ ಎಂಬುದರ ಮೇಲೆ ಆರ್​ಸಿಬಿ ತಂಡದ ಪ್ಲೇಆಫ್ ಲೆಕ್ಕಾಚಾರ ನಿರ್ಧಾರವಾಗಲಿದೆ. ಒಟ್ಟಿನಲ್ಲಿ ಈ ಬಾರಿಯ ಐಪಿಎಲ್‌ನಲ್ಲಿ ರಜತ್ ಪಾಟಿದಾರ್ ಕೇವಲ ಒಬ್ಬ ಬ್ಯಾಟರ್ ಆಗಿ ಉಳಿಯದೆ, ಆರ್‌ಸಿಬಿ ಪಾಲಿನ ‘ಎಕ್ಸ್-ಫ್ಯಾಕ್ಟರ್’ ಆಗಿ ಹೊರಹೊಮ್ಮುತ್ತಿರುದು ವಿಶೇಷ.

Published On – 2:05 pm, Wed, 15 April 26

Source link

ಸಿದ್ದರಾಮಯ್ಯ ಬಣಕ್ಕೆ ಮತ್ತೊಂದು ಪೆಟ್ಟು ನೀಡಿದ ಡಿಕೆ ಶಿವಕುಮಾರ್: ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ಜಬ್ಬಾರ್ ಅಮಾನತು – Kannada News | KPCC Action: DK Shivakumar Suspends MLC Jabbar, Shakes Karnataka Congress

ಬೆಂಗಳೂರು, ಏ.15: ದಾವಣಗೆರೆ ದಂಗಲ್ ಮುಗಿಯುವಂತೆ ಕಾಣುತ್ತಿಲ್ಲ, ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರ ಅಸಮಾಧನಕ್ಕೆ ಕಾರಣರಾದ ಹಾಗೂ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದ್ದಕ್ಕೆ ಕಾಂಗ್ರೆಸ್​​​​​​ ಮೂವರು ಮುಸ್ಲಿಂ ನಾಯಕರಲ್ಲಿ ಇಬ್ಬರ ತಲೆದಂಡವಾಗಿದೆ. ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್​​ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿತ್ತು. ನಂತರ ನಸೀರ್ ಅಹ್ಮದ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡಲಾಗಿತ್ತು. ಇದರ ಜತೆಗೆ ಸಚಿವ ಜಮೀರ್​​ಗೂ ಸಿಎಂ ಮನೆಗೆ ಕರೆಸಿ ತರಾಟೆ ತೆಗೆದುಕೊಂಡಿದ್ದು ಆಯಿತು. ಇದೀಗ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ ಮತ್ತು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದ ಮೇಲೆ ವಿಧಾನಪರಿಷತ್ ಸದಸ್ಯ (MLC) ಅಬ್ದುಲ್ ಜಬ್ಬಾರ್ ಅವರಿಗೆ ಕೆಪಿಸಿಸಿ ಮತ್ತೊಂದು ಶಾಕ್​​ ನೀಡಿದೆ. ಇದೀಗ ಜಬ್ಬಾರ್​​ ಅವರನ್ನು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶಿಸಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಬಣಕ್ಕೆ ಮೇಲಿಂದ ಮೇಲೆ ಪೆಟ್ಟು ಬೀಳುತ್ತಿದೆ. ಕಾಂಗ್ರೆಸ್​​ ಪಕ್ಷಕ್ಕೆ ಮುಸ್ಲಿಂ ನಾಯಕರೇ ಬಲ, ಮುಸ್ಲಿಂರಿಗೂ ಕಾಂಗ್ರೆಸ್​​​​ ಬೇಕು, ಅದರೂ ಇಂತಹ ಚಟುವಟಿಕೆ ನಡೆದಿರುವುದು ರಾಜಕೀಯ ಪಾಲಯದಲ್ಲಿ ದೊಡ್ಡ ಅಚ್ಚರಿಯನ್ನೇ ಮೂಡಿಸಿದೆ.

ಇನ್ನು ವಿಧಾನಪರಿಷತ್ ಸದಸ್ಯ (MLC) ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿ ಆದೇಶವನ್ನು ಡಿ.ಕೆ. ಶಿವಕುಮಾರ್ ಅವರೇ ಸ್ವತಃ ನೀಡಿದ್ದಾರೆ. ಅವರು ಪಕ್ಷದ ಶಿಸ್ತನ್ನು ಉಲ್ಲಂಘಿಸಿ ಬಂಡಾಯಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಚುನಾವಣಾ ಸಂದರ್ಭದಲ್ಲಿ ಜಬ್ಬಾರ್ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಬಗ್ಗೆ ಕೆಪಿಸಿಸಿಗೆ ಭದ್ರವಾದ ದಾಖಲೆಗಳು ಲಭ್ಯವಾಗಿವೆ ಎನ್ನಲಾಗಿದೆ.

ಇದನ್ನೂ ಓದಿ: ಸಚಿವ ಜಮೀರ್ ಅಚ್ಚರಿಯ ನಡೆ: ನಸೀರ್ ಅಹ್ಮದ್ ನಿವಾಸಕ್ಕೆ ಭೇಟಿ ನೀಡಿದ ಜಮೀರ್, ಕುತೂಹಲ ಮೂಡಿಸಿದ ಚರ್ಚೆ!

ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿ ಆದೇಶ

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಯಾವುದೇ ಮುಲಾಜಿಲ್ಲದೆ ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ವಜಾಗೊಳಿಸುವ ಮೂಲಕ ಡಿ.ಕೆ. ಶಿವಕುಮಾರ್ ಬಂಡಾಯ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ.ಉಪಚುನಾವಣೆಯ ಟಿಕೆಟ್ ಹಂಚಿಕೆ ವಿಚಾರವಾಗಿ ಆರಂಭವಾದ ಅಸಮಾಧಾನವು ಈಗ ನಸೀರ್ ಅಹ್ಮದ್ ಮತ್ತು ಅಬ್ದುಲ್ ಜಬ್ಬಾರ್ ಅಂತಹ ಹಿರಿಯ ನಾಯಕರ ರಾಜಕೀಯ ಭವಿಷ್ಯಕ್ಕೆ ಸಂಕಷ್ಟ ತಂದೊಡ್ಡಿದೆ. ಡಿಕೆ ಶಿವಕುಮಾರ್​ ಅವರ ಈ ನಡೆಯಿಂದ ಸಚಿವ ಜಮೀರ್​​​​ಗೂ ಕೂಡ ನಡುಕ ಶುರುವಾಗಿದೆ. ಡಿಕೆ ಶಿವಕುಮಾರ್​​​​ ಜಮೀರ್​​ ವಿರುದ್ಧವೂ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:41 pm, Wed, 15 April 26

Source link

ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತದ ಉತ್ತಮ ಆರ್ಥಿಕ ಬೆಳವಣಿಗೆ ಸಾಧ್ಯತೆ: ಐಎಂಎಫ್ ಅಂದಾಜು – Kannada News | India will remain fastest growing economy, despite global headwinds, predicts IMF

ನವದೆಹಲಿ, ಏಪ್ರಿಲ್ 15: ಯುದ್ಧಗಳು, ತೈಲ ಬಿಕ್ಕಟ್ಟು, ಟ್ರಂಪ್ ಟ್ಯಾರಿಫ್ ಇತ್ಯಾದಿ ಜಾಗತಿಕವಾಗಿ ಪ್ರತಿಕೂಲ ಪರಿಸ್ಥಿತಿ ನಡುವೆಯೂ ಭಾರತದ ಆರ್ಥಿಕ ಬೆಳವಣಿಗೆ (India GDP growth) ಉತ್ತಮವಾಗಿ ಸಾಗಿದೆ. ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಅತಿವೇಗವಾಗಿ ಬೆಳೆಯುತ್ತಿದೆ. ಮುಂದೆಯೂ ಇದೇ ಹಾದಿಯಲ್ಲಿ ಭಾರತದ ಆರ್ಥಿಕತೆ ಸಾಗಲಿದೆ ಎಂದು ವಿವಿಧ ಏಜೆನ್ಸಿಗಳು ಹೇಳುತ್ತಿವೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯಾದ ಐಎಂಎಫ್ ಕೂಡ ಇದನ್ನು ಪುಷ್ಟೀಕರಿಸಿದೆ. ಐಎಂಎಫ್ ಪ್ರಕಾರ 2026ರಲ್ಲಿ ಭಾರತದ ಜಿಡಿಪಿ ಶೇ. 6.5ರಷ್ಟು ಹೆಚ್ಚಬಹುದು. ಇದು ಈ ವರ್ಷ ವಿಶ್ವದಲ್ಲೇ ಅತಿವೇಗದ ಆರ್ಥಿಕ ಬೆಳವಣಿಗೆಯಾಗಬಹುದು.

ಕಳೆದ ಕೆಲ ದಶಕಗಳಿಂದ ಸೂಪರ್ ವೇಗದಲ್ಲಿ ಬೆಳವಣಿಗೆ ದಾಖಲಿಸಿದ್ದ ಚೀನಾ ಇತ್ತೀಚಿನ ಕೆಲ ವರ್ಷಗಳಿಂದ ಮಂಕಾಗಿತ್ತು. ಈಗ ಮತ್ತೆ ಕಂಬ್ಯಾಕ್ ಮಾಡುತ್ತಿದೆ. 2026ರಲ್ಲಿ ಚೀನಾದ ಜಿಡಿಪಿ ಶೇ 4.9ರಷ್ಟು, ಹಾಗೂ 2027ರಲ್ಲಿ ಶೇ. 4.8ರಷ್ಟು ಹೆಚ್ಚಬಹುದು ಎಂದು ಐಎಂಎಫ್ ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ.

ಇದನ್ನೂ ಓದಿ: ಸೆನ್ಸೆಕ್ಸ್ 1,400 ಅಂಕ ಏರಿಕೆ; ಹೂಡಿಕೆದಾರರಿಗೆ 9 ಲಕ್ಷ ಕೋಟಿ ರೂ ಲಾಭದ ಹಿಗ್ಗು; ಷೇರುಪೇಟೆ ಖುಷಿಯಲ್ಲಿರುವುದು ಯಾಕೆ?

ಜಾಗತಿಕ ಆರ್ಥಿಕ ಬೆಳವಣಿಗೆ ಶೇ. 3.1 ಮಾತ್ರ

ವಿಶ್ವಾದ್ಯಂತ ಎಲ್ಲಾ ದೇಶಗಳ ಜಿಡಿಪಿ ಬೆಳವಣಿಗೆ ಪರಿಗಣಿಸಿದರೆ 2026ರಲ್ಲಿ ಸರಾಸರಿಯಾಗಿ ಶೇ. 3.1ರಷ್ಟು ಹೆಚ್ಚಬಹುದು. 2027ರಲ್ಲಿ ಶೇ. 3.2ರಷ್ಟು ವೃದ್ಧಿಸಬಹುದು ಎನ್ನಲಾಗಿದೆ.

ಕಳೆದ ಕೆಲ ವರ್ಷಗಳಿಂದ ಇರುವ ಟ್ರೆಂಡ್​ನಂತೆ ಶ್ರೀಮಂತ ಮತ್ತು ಮುಂದುವರಿದ ದೇಶಗಳ ಜಿಡಿಪಿ ಬೆಳವಣಿಗೆ ಬಹಳ ಕಡಿಮೆ ಇರಲಿದೆ. 2026ರಲ್ಲಿ ಈ ದೇಶಗಳ ಜಿಡಿಪಿ ಶೇ 1.8ರಷ್ಟು ಮಾತ್ರ ಏರಿಕೆ ಆಗಲಿದೆ. ಭಾರತದಂತಹ ಉದಯೋನ್ಮುಖ ಆರ್ಥಿಕತೆಗಳು ಸರಾಸರಿಯಾಗಿ ಶೇ. 3.9ರಷ್ಟು ಬೆಳವಣಿಗೆ ಹೊಂದಬಹುದು ಎಂದು ಐಎಂಎಫ್ ಹೇಳಿದೆ. ಕೆಳ ಆದಾಯ ವರ್ಗದ ಅಭಿವೃದ್ಧಿಶೀಲ ದೇಶಗಳು 2026ರಲ್ಲಿ ಶೇ. 4.8 ಮತ್ತು 2027ರಲ್ಲಿ ಶೇ. 4.9ರಷ್ಟು ಜಿಡಿಪಿ ವೃದ್ಧಿ ಕಾಣಬಹುದು.

ಇದನ್ನೂ ಓದಿ: ಎನ್​ವಿಡಿಯಾದ ಭಾರತೀಯ ಉದ್ಯೋಗಿಗಳಿಗೆ ಭರ್ಜರಿ ಕೊಡಗೆ; ಒಂದು ಕೋಟಿ ರೂವರೆಗೆ ಸ್ಟಾಕ್ ಗ್ರಾಂಟ್

ಭಾರತದ ಉತ್ತಮ ಜಿಡಿಪಿ ಬೆಳವಣಿಗೆಗೆ ಏನು ಕಾರಣ?

ಭಾರತವು 2025ರಲ್ಲಿ ನಿರೀಕ್ಷೆಮೀರಿದ ಆರ್ಥಿಕ ಬೆಳವಣಿಗೆ ಕಂಡಿದೆ. ಇದರ ಸಕಾರಾತ್ಮಕ ಪರಿಣಾಮ 2026 ಮತ್ತು 2027ರಲ್ಲೂ ಮುಂದುವರಿಯಬಹುದು. ಇದು ಮೊದಲ ಪ್ರಮುಖ ಕಾರಣ.

ಎರಡನೇ ಬಲವಾದ ಕಾರಣ ಎಂದರೆ, ಭಾರತದ ಆರ್ಥಿಕತೆಯ ವೇಗಕ್ಕೆ ಹೆಚ್ಚಿನ ಪುಷ್ಟಿ ಕೊಟ್ಟಿರುವುದು ರಫ್ತಿಗಿಂತ ಹೆಚ್ಚಾಗಿ ಆಂತರಿಕ ಅನುಭೋಗ. ಅಂದರೆ, ದೇಶೀಯ ಮಾರುಕಟ್ಟೆ ಬಲವಾಗಿದೆ. ಅಂತರಿಕ ಬೇಡಿಕೆ ಹೆಚ್ಚಿದೆ. ಇದು ಆರ್ಥಿಕತೆ ಮಂದಗೊಳ್ಳದಂತೆ ನೋಡಿಕೊಳ್ಳುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪವನ್ ಖೇರಾಗೆ ಬಿಗ್ ಶಾಕ್: ತೆಲಂಗಾಣ ಹೈಕೋರ್ಟ್ ನೀಡಿದ್ದ ಜಾಮೀನಿಗೆ ಸುಪ್ರೀಂ ತಡೆ – Kannada News | Pawan Khera’s Bail Shock: SC Stays Telangana HC Order, Khera Must Seek Relief in Assam

ನವದೆಹಲಿ, ಏಪ್ರಿಲ್ 15: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರ ವಿರುದ್ಧದ ಗಂಭೀರ ಆರೋಪಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಪವನ್ ಖೇರಾ(Pawan Khera) ಅವರಿಗೆ ಸಿಕ್ಕಿದ್ದ ತಾತ್ಕಾಲಿಕ ರಿಲೀಫ್‌ಗೆ ಈಗ ಸುಪ್ರೀಂ ಕೋರ್ಟ್ ತಡೆ ನೀಡಿದೆ. ತೆಲಂಗಾಣ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನು ಆದೇಶವನ್ನು ಪ್ರಶ್ನಿಸಿ ಅಸ್ಸಾಂ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್‌ನ ನಿರ್ಧಾರಕ್ಕೆ ಆಶ್ಚರ್ಯ ವ್ಯಕ್ತಪಡಿಸಿದೆ.

ಏನಿದು ಪ್ರಕರಣ?
ಅಸ್ಸಾಂ ಮುಖ್ಯಮಂತ್ರಿಯವರ ಪತ್ನಿ ವಿವಿಧ ದೇಶಗಳ ಬಹು ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ ಎಂಬ ಆರೋಪದ ಮೇಲೆ ಅಸ್ಸಾಂ ಪೊಲೀಸರು ಪವನ್ ಖೇರಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಭಾರತೀಯ ನ್ಯಾಯ ಸಂಹಿತೆಯಡಿ ವಂಚನೆ (ಸೆಕ್ಷನ್ 318), ನಕಲಿ ದಾಖಲೆ ಸೃಷ್ಟಿ (ಸೆಕ್ಷನ್ 338, 340) ಮತ್ತು ಮಾನನಷ್ಟ (ಸೆಕ್ಷನ್ 356) ಸೇರಿದಂತೆ ಹಲವು ಗಂಭೀರ ಸೆಕ್ಷನ್‌ಗಳಡಿ ಗುವಾಹಟಿ ಅಪರಾಧ ಶಾಖೆಯಲ್ಲಿ ಪ್ರಕರಣ ದಾಖಲಾಗಿದೆ. ಏಪ್ರಿಲ್ 7 ರಂದು ಅಸ್ಸಾಂ ಪೊಲೀಸರು ಖೇರಾ ಅವರ ಹುಡುಕಾಟದಲ್ಲಿ ಹೈದರಾಬಾದ್ ಮತ್ತು ದೆಹಲಿಯ ನಿವಾಸಗಳಿಗೆ ಭೇಟಿ ನೀಡಿದ್ದರು.

ಹೈಕೋರ್ಟ್ ನೀಡಿದ್ದ ಜಾಮೀನು ಮತ್ತು ಸುಪ್ರೀಂ ತರಾಟೆ
ಏಪ್ರಿಲ್ 10 ರಂದು ತೆಲಂಗಾಣ ಹೈಕೋರ್ಟ್, ಪವನ್ ಖೇರಾ ಅವರಿಗೆ ಒಂದು ವಾರದ ಸೀಮಿತ ನಿರೀಕ್ಷಣಾ ಜಾಮೀನು ನೀಡಿತ್ತು. ಆದರೆ, ಇದರ ವಿರುದ್ಧ ಅಸ್ಸಾಂ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ಅಸ್ಸಾಂ ಸರ್ಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಾತನಾಡಿ, ಖೇರಾ ಅವರು ತಮಗೆ ಬೇಕಾದ ಸ್ಥಳಗಳಲ್ಲಿ ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ . ಅವರ ಪತ್ನಿ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ಸುಳ್ಳು ಹೇಳಲಾಗಿದೆ, ಆದರೆ ಅವರ ಆಧಾರ್ ಕಾರ್ಡ್ ದೆಹಲಿಯ ವಿಳಾಸವನ್ನು ಹೊಂದಿದೆ ಎಂದು ವಾದಿಸಿದರು.

ಮತ್ತಷ್ಟು ಓದಿ: ದೆಹಲಿಗೆ ಬಂದ ಅಸ್ಸಾಂ ಪೊಲೀಸರು, ಹೈದರಾಬಾದ್​ಗೆ ಪರಾರಿಯಾದ ಪವನ್ ಖೇರಾ

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ ಮತ್ತು ನ್ಯಾಯಮೂರ್ತಿ ಅತುಲ್ ಎಸ್. ಚಂದೂರ್ಕರ್ ಅವರಿದ್ದ ಪೀಠವು, ಹೈಕೋರ್ಟ್ ಆದೇಶದಿಂದ ನಮಗೆ ಆಶ್ಚರ್ಯವಾಗಿದೆ ಎಂದು ಹೇಳಿತು. ಸುಪ್ರೀಂ ಕೋರ್ಟ್ ತೆಲಂಗಾಣ ಹೈಕೋರ್ಟ್‌ನ ಆದೇಶಕ್ಕೆ ತಡೆ ನೀಡಿದೆಯಾದರೂ, ಪವನ್ ಖೇರಾ ಅವರಿಗೆ ಒಂದು ಸಣ್ಣ ಕಿಟಕಿ ತೆರೆದಿಟ್ಟಿದೆ. ಖೇರಾ ಅವರು ನೇರವಾಗಿ ಅಸ್ಸಾಂ  ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ಸ್ವತಂತ್ರರಾಗಿದ್ದಾರೆ.

ಸುಪ್ರೀಂ ಕೋರ್ಟ್‌ನ ಈ ತಡೆಯಾಜ್ಞೆಯು ಅವರು ಅಸ್ಸಾಂನಲ್ಲಿ ಸಲ್ಲಿಸುವ ಹೊಸ ಜಾಮೀನು ಅರ್ಜಿಯ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರದು ಎಂದು ಸ್ಪಷ್ಟಪಡಿಸಿದೆ.

ಮತ್ತೆ ಬಂಧನದ ಭೀತಿ
ಗುವಾಹಟಿ ಪೊಲೀಸರು ಈಗಾಗಲೇ ಖೇರಾ ಅವರನ್ನು ಬಂಧಿಸಲು ತೀವ್ರ ಶೋಧ ನಡೆಸುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನ ಈ ಇತ್ತೀಚಿನ ಆದೇಶದಿಂದಾಗಿ ಖೇರಾ ಅವರಿಗೆ ತಕ್ಷಣದ ರಕ್ಷಣೆ ಕೈತಪ್ಪಿದಂತಾಗಿದೆ. ಚುನಾವಣಾ ಸಮಯದಲ್ಲಿ ಸುಳ್ಳು ಹೇಳಿಕೆ ಮತ್ತು ನಕಲಿ ದಾಖಲೆಗಳ ಆರೋಪ ಹೊತ್ತಿರುವ ಖೇರಾ, ಈಗ ಅಸ್ಸಾಂನಲ್ಲೇ ಕಾನೂನು ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.

ಕಾರ್ಪೊರೇಟ್ ವಲಯ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಈ ಪ್ರಕರಣವು, ಅಧಿಕಾರ ವ್ಯಾಪ್ತಿ ಮೀರಿ ಹೈಕೋರ್ಟ್‌ಗಳು ಜಾಮೀನು ನೀಡಬಹುದೇ ಎಂಬ ಸಾಂವಿಧಾನಿಕ ಪ್ರಶ್ನೆಯನ್ನೂ ಮತ್ತೆ ಮುನ್ನೆಲೆಗೆ ತಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

RCB ವಿರುದ್ಧ ‘ರಾಜಧಾನಿ ಎಕ್ಸ್​ಪ್ರೆಸ್​’ ಆಗಮನ..! – Kannada News | Mayank Yadav is expected to return for the LSG vs RCB

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪಂದ್ಯದ ಮೂಲಕ ‘ರಾಜಧಾನಿ ಎಕ್ಸ್‌ಪ್ರೆಸ್’ ಮತ್ತೆ ಮರಳಲಿದೆಯಾ? ಇಂತಹದೊಂದು ಪ್ರಶ್ನೆ ಹುಟ್ಟುಕೊಂಡಿರುವುದು ಮಯಾಂಕ್ ಯಾದವ್​ ಅವರ ಫಿಟ್​ನೆಸ್ ಅಪ್​ಡೇಟ್​ನಿಂದ. ಏಕೆಂದರೆ ಈ ಬಾರಿಯ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವಾಡದ ‘ರಾಜಧಾನಿ ಎಕ್ಸ್‌ಪ್ರೆಸ್’ ಖ್ಯಾತಿಯ ಮಯಾಂಕ್ ಯಾದವ್ ಇದೀಗ ಸಂಪೂರ್ಣ ಫಿಟ್​ ಆಗಿದ್ದಾರೆ. ಅಲ್ಲದೆ ಆರ್​ಸಿಬಿ ವಿರುದ್ಧ ಕಣಕ್ಕಿಳಿಯಲು ಉತ್ಸುಕರಾಗಿದ್ದಾರೆ.

ವಿಶೇಷ ಎಂದರೆ ಇದೇ ಮಯಾಂಕ್ ಯಾದವ್ 2024ರಲ್ಲಿ ಬೆಂಗಳೂರಿನ ಪಿಚ್​ನಲ್ಲಿ ಆರ್‌ಸಿಬಿ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದರು.  ಇದೀಗ ಮತ್ತೆ ರಾಯಲ್ ಪಡೆಯ ವಿರುದ್ಧವೇ ಕಣಕ್ಕಿಳಿಯುವ ಮೂಲಕ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.

ಮಯಾಂಕ್ ಯಾದವ್

ಎಲ್‌ಎಸ್‌ಜಿ ತಂಡದ ಕ್ರಿಕೆಟ್ ನಿರ್ದೇಶಕ ಟಾಮ್ ಮೂಡಿ ಅವರು, ಆರ್​ಸಿಬಿ ವಿರುದ್ಧ ಆಡಲು ಮಯಾಂಕ್ ಸಿದ್ಧರಿದ್ದಾರೆ ಎಂದು ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಕಠಿಣ ತರಬೇತಿ ಮತ್ತು ಬೌಲಿಂಗ್ ವರ್ಕ್‌ಲೋಡ್ ನಿರ್ವಹಣೆಯ ನಂತರ ಅವರು ಈಗ 150+ ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಲು ಫಿಟ್ ಆಗಿದ್ದಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಮಯಾಂಕ್ ಯಾದವ್ ಆರ್​ಸಿಬಿ ವಿರುದ್ಧದ ಪಂದ್ಯದ ಮೂಲಕ ಕಂಬ್ಯಾಕ್ ಮಾಡುವ ಸೂಚನೆ ನೀಡಿದ್ದಾರೆ.

ಇತ್ತ ಮಯಾಂಕ್ ಯಾದವ್ ಮರಳುತ್ತಿರುವುದರಿಂದ ಲಕ್ನೋ ತಂಡದ ಬೌಲಿಂಗ್ ಲೈನಪ್ ಮತ್ತಷ್ಟು ಬಲಿಷ್ಠವಾಗುವುದರಲ್ಲಿ ಡೌಟೇ ಇಲ್ಲ. ಏಕೆಂದರೆ ಈಗಾಗಲೇ ಮೊಹಮ್ಮದ್ ಶಮಿ ಮತ್ತು ಪ್ರಿನ್ಸ್ ಯಾದವ್ ಉತ್ತಮ ಲಯದಲ್ಲಿದ್ದಾರೆ. ಇದೀಗ ಮಯಾಂಕ್ ಯಾದವ್ ಕೂಡ ಕಣಕ್ಕಿಳಿದರೆ ಲಕ್ನೋ ಸೂಪರ್ ಜೈಂಟ್ಸ್ ಬೌಲಿಂಗ್ ವಿಭಾಗಕ್ಕೆ ಆನೆಬಲ ಬಂದಂತಾಗಲಿದೆ.

ಇಲ್ಲಿ ಮಯಾಂಕ್ ಯಾದವ್ ಅವರ ಆಗಮನವು ಆರ್​ಸಿಬಿ ಪಾಲಿಗೆ ದೊಡ್ಡ ಸವಾಲಾಗುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ 2024 ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಯಾಂಕ್ ತನ್ನ ವೇಗಾಸ್ತ್ರದೊಂದಿಗೆ ಆರ್​ಸಿಬಿ ದಾಂಡಿಗರನ್ನು ಕಟ್ಟಿ ಹಾಕಿದ್ದರು.  ಅಲ್ಲದೆ ಈ ವೇಳೆ 4 ಓವರ್​ಗಳಲ್ಲಿ ನೀಡಿದ್ದು ಕೇವಲ 14 ರನ್​ಗಳು ಮಾತ್ರ. ಇದರ ನಡುವೆ 3 ವಿಕೆಟ್ ಎಗರಿಸಿದ್ದರು.

ಇದೀಗ ಸಂಪೂರ್ಣ ಫಿಟ್​ನೆಸ್​ನೊಂದಿಗೆ ಕಣಕ್ಕಿಳಿಯಲು ಸಜ್ಜಾಗಿರುವ ಮಯಾಂಕ್ ಯಾದವ್ ಮತ್ತೊಮ್ಮೆತನ್ನ ಘಾತಕ ವೇಗದೊಂದಿಗೆ ಆರ್​ಸಿಬಿ ಪಾಲಿಗೆ ಮುಳುವಾಗಲಿದ್ದಾರಾ ಕಾದು ನೋಡಬೇಕಿದೆ.

ಇದನ್ನೂ ಓದಿ: IPL 2026: ಸೋಲಿನಿಂದ ಕಂಗೆಟ್ಟ ಕೆಕೆಆರ್ ತಂಡದ ನಾಯಕನಿಗೆ ದಂಡದ ಬರೆ..!

ಲಕ್ನೋ ಸೂಪರ್ ಜೈಂಟ್ಸ್ ತಂಡ: ರಿಷಭ್ ಪಂತ್ (ನಾಯಕ), ಅಬ್ದುಲ್ ಸಮದ್, ಆಯುಷ್ ಬದೋನಿ, ಐಡೆನ್ ಮರ್ಕ್ರಾಮ್, ಮ್ಯಾಥ್ಯೂ ಬ್ರೀಟ್ಝ್ಕ್​, ಹಿಮ್ಮತ್ ಸಿಂಗ್,  ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್, ಶಹಬಾಝ್ ಅಹ್ಮದ್, ಅರ್ಶಿನ್ ಕುಲಕರ್ಣಿ, ಮಯಾಂಕ್ ಯಾದವ್, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಣಿಮಾರನ್ ಸಿದ್ಧಾರ್ಥ್, ದಿಗ್ವೇಶ್ ರಾಠಿ, ಪ್ರಿನ್ಸ್ ಯಾದವ್, ಆಕಾಶ್ ಸಿಂಗ್, ಮೊಹಮ್ಮದ್ ಶಮಿ, ಅರ್ಜುನ್ ತೆಂಡೂಲ್ಕರ್, ವನಿಂದು ಹಸರಂಗ, ಅನ್ರಿಕ್ ನೋಕಿಯ, ಮುಕುಲ್ ಚೌಧರಿ, ನಮನ್ ತಿವಾರಿ, ಅಕ್ಷತ್ ರಘುವಂಶಿ, ಜೋಶ್ ಇಂಗ್ಲಿಸ್.

Source link

ಸೆನ್ಸೆಕ್ಸ್ 1,400 ಅಂಕ ಏರಿಕೆ; ಹೂಡಿಕೆದಾರರಿಗೆ 9 ಲಕ್ಷ ಕೋಟಿ ರೂ ಲಾಭದ ಹಿಗ್ಗು; ಷೇರುಪೇಟೆ ಖುಷಿಯಲ್ಲಿರುವುದು ಯಾಕೆ? – Kannada News | Stock market sensex nifty rise on wednesday possible reasons behind this surge

ನವದೆಹಲಿ, ಏಪ್ರಿಲ್ 15: ಭಾರತದ ಷೇರು ಮಾರುಕಟ್ಟೆ (stock market) ಇವತ್ತು ಒಟ್ಟಾರೆಯಾಗಿ ಭರ್ಜರಿ ಓಟದಲ್ಲಿದೆ. ಬಿಎಸ್​ಇ ಮತ್ತು ಎನ್​ಎಸ್​ಇನ ಸೆನ್ಸೆಕ್ಸ್ ಮತ್ತು ನಿಫ್ಟಿ ಸೇರಿ ಹೆಚ್ಚಿನ ಸೂಚ್ಯಂಕಗಳು ಪಾಸಿಟಿವ್ ಇವೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಕೂಡ ಇವತ್ತು ಶೇ. 2ರವರೆಗೆ ಹಿಗ್ಗಿವೆ. ಬಿಎಸ್​ಇ ಸೆನ್ಸೆಕ್ಸ್ ಇವತ್ತು ಒಂದು ಹಂತದಲ್ಲಿ 1,400 ಅಂಕಗಳಷ್ಟು ಏರಿಕೆ ಕಂಡಿತ್ತು. ನಿಫ್ಟಿ 400 ಅಂಕಗಳು ಜಿಗಿದಿತ್ತು. 24,280ರ ಮಟ್ಟಕ್ಕೆ ಹೋಗಿತ್ತು. ಸದ್ಯ 384 ಅಂಕಗಳ ಹೆಚ್ಚಳದೊಂದಿಗೆ 24,163ರ ಮಟ್ಟದಲ್ಲಿದೆ. ಬಿಎಸ್​ಇನಲ್ಲಿ ಲಿಸ್ಟ್ ಆಗಿರುವ ಎಲ್ಲಾ ಕಂಪನಿಗಳ ಒಟ್ಟೂ ಮಾರುಕಟ್ಟೆ ಆಸ್ತಿಮೌಲ್ಯ 449 ಲಕ್ಷ ಕೋಟಿ ರುನಿಂದ 458 ಲಕ್ಷ ಕೋಟಿ ರೂಗೆ ಏರಿದೆ. ಇವತ್ತು 9 ಲಕ್ಷ ಕೋಟಿ ರೂನಷ್ಟು ಸಂಪತ್ತು ಹಿಗ್ಗಿದೆ. ಷೇರು ಮಾರುಕಟ್ಟೆಯ ಇವತ್ತಿನ ರಂಗಿಗೆ ಏನು ಕಾರಣಗಳು?

ಅಮೆರಿಕ ಇರಾನ್ ಮಾತುಕತೆ ಪುನಾರಂಭಗೊಳ್ಳುವ ಸಾಧ್ಯತೆ

ಜಗತ್ತಿಗೆ ತಲೆನೋವಾಗಿರುವುದು ಇರಾನ್ ಅಮೆರಿಕ ಯುದ್ಧ. ಸದ್ಯ ಕದನ ವಿರಾಮ ಇದೆ. ಈ ನಡುವೆ ಮೊದಲ ಸುತ್ತಿನ ಸಂಧಾನ ಮಾತುಕತೆ ಮುರಿಬಿದ್ದದ್ದು ಚಿಂತೆಯ ಸಂಗತಿಯಾಗಿತ್ತು. ಈಗ ಪಾಕಿಸ್ತಾನದಲ್ಲೇ ಎರಡನೇ ಸುತ್ತಿನ ಸಂಧಾನ ಸಭೆ ನಡೆಯಬಹುದು ಎನ್ನಲಾಗಿದೆ. ಇನ್ನೆರಡು ದಿನದಲ್ಲಿ ಮಾತುಕತೆ ಪುನಾರಂಭಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಇದು ಮಾರುಕಟ್ಟೆಯ ಖುಷಿಗೆ ಕಾರಣವಾಗಿರುವುದು.

ಇದನ್ನೂ ಓದಿ: ಎನ್​ವಿಡಿಯಾದ ಭಾರತೀಯ ಉದ್ಯೋಗಿಗಳಿಗೆ ಭರ್ಜರಿ ಕೊಡಗೆ; ಒಂದು ಕೋಟಿ ರೂವರೆಗೆ ಸ್ಟಾಕ್ ಗ್ರಾಂಟ್

ಕಚ್ಚಾ ತೈಲ ಬೆಲೆಯಲ್ಲಿ ಇಳಿಮುಖ

ಬ್ಯಾರಲ್​ಗೆ 100 ಡಾಲರ್​ಗಿಂತ ಹೆಚ್ಚಿಗೆ ಏರಿದ್ದ ಕಚ್ಚಾ ತೈಲ ಬೆಲೆ ಈಗ 95 ಡಾಲರ್​ಗಿಂತ ಕಡಿಮೆಗೆ ಇಳಿದಿದೆ. ಇದು ಷೇರು ಬಜಾರಿಗೆ ಡಬಲ್ ಧಮಾಕ ಕೊಟ್ಟಿರುವ ಸಂಗತಿ.

ಜಾಗತಿಕ ಮಾರುಕಟ್ಟೆಯೂ ಹುರುಪಿನಲ್ಲಿ

ಜಾಗತಿಕ ಷೇರು ಮಾರುಕಟ್ಟೆಗಳೂ ಕೂಡ ಬುಧವಾರ ಗರಿಗೆದರಿವೆ. ಜಪಾನ್​ನ ನಿಕ್ಕೀ, ಸೌತ್ ಕೊರಿಯಾದ ಕೊಸ್ಪಿ, ಅಮೆರಿಕದ ನಾಸ್ಡಾಕ್, ಎಸ್ ಅಂಡ್ ಪಿ ಇತ್ಯಾದಿ ಮಾರುಕಟ್ಟೆಗಳು ಉತ್ಸಾಹದಲ್ಲಿವೆ. ಇದು ಭಾರತದ ಮಾರುಕಟ್ಟೆಯ ಮೇಲೂ ಪ್ರಭಾವ ಬೀರಿರಬಹುದು.

ಇದನ್ನೂ ಓದಿ: ಒತ್ತಡದ ನಡುವೆಯೂ ಏರದ ಪೆಟ್ರೋಲ್ ಬೆಲೆ; ಪೆಟ್ರೋಲಿಯಂ ಕಂಪನಿಗಳಿಗೆ ಒಂದು ಲೀಟರ್ ಪೆಟ್ರೋಲ್​ಗೆ ಆಗುತ್ತಿರುವ ನಷ್ಟವೆಷ್ಟು ಗೊತ್ತಾ?

ರುಪಾಯಿ ಬಲವರ್ಧನೆ

ಡಾಲರ್ ಎದುರು ರುಪಾಯಿ ಮೌಲ್ಯ ಏರಿಕೆ ಕಂಡಿದೆ. ಇವತ್ತಿನ ಟ್ರೇಡಿಂಗ್​ನಲ್ಲಿ ರುಪಾಯಿ ಮೌಲ್ಯ 12 ಪೈಸೆಯಷ್ಟು ಹೆಚ್ಚಳವಾಗಿದೆ. ಕಚ್ಚಾ ತೈಲ ಬೆಲೆ ಕಡಿಮೆಗೊಂಡಿದ್ದರಿಂದ ಆಮದು ವೆಚ್ಚವೂ ಕಡಿಮೆಯಾಗಿ ರುಪಾಯಿಯ ಮೇಲಿನ ಒತ್ತಡ ತಗ್ಗುವಂತಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್​​ಬಾಸ್ ಧನುಶ್ ಸಾಹಸಕ್ಕೆ ಬೆನ್ನುತಟ್ಟಿದ ಸುದೀಪ್: ವಿಡಿಯೋ ನೋಡಿ – Kannada News | Sudeep praises Bigg Boss Dhanush’s new song wished him luck

ನಟ ಸುದೀಪ್ (Sudeep), ಸದಾ ಹೊಸಬರ, ಭಿನ್ನವಾಗಿ ಪ್ರಯತ್ನಿಸುವವರ ಮತ್ತು ತಮ್ಮ ಆಪ್ತರು, ಕಿರಿಯರಿಗೆ ಬೆಂಬಲ ನೀಡುತ್ತಲೇ ಇರುತ್ತಾರೆ. ಇದೀಗ ಮಾಜಿ ಬಿಗ್​​ಬಾಸ್ ಸ್ಪರ್ಧಿ ಧನುಶ್ ಅವರ ಹೊಸ ಪ್ರಯತ್ನಕ್ಕೆ ಬೆಂಬಲ ಸೂಚಿಸಿದ್ದು, ಒಳಿತಾಗಲೆಂದು ಹಾರೈಸಿದ್ದಾರೆ. ಧನುಶ್ ಹಾಗೂ ಸ್ಪಂದನಾ ಅವರು ‘ಜಿನುಗೋ ಮಳೆ’ ಹೆಸರಿನ ಹಾಡು ಮಾಡಿದ್ದು, ಅದನ್ನು ಪಿಆರ್​​ಕೆ ಮೂಲಕ ಬಿಡುಗಡೆ ಮಾಡಲಾಗುತ್ತಿದೆ. ಇದೀಗ ಸುದೀಪ್ ಅವರು ಹಾಡು ವೀಕ್ಷಿಸಿದ್ದು, ಧನುಶ್ ಅವರ ಈ ಹೊಸ ಪ್ರಯತ್ನಕ್ಕೆ ಬೆಂಬಲ ಸೂಚಿಸಿದ್ದಾರೆ. ಭವಿಷ್ಯಕ್ಕೆ ಒಳಿತಾಗಲಿ ಎಂದು ಹಾರೈಕೆ ಮಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

“ಮೋದಿ ನಾಯಕತ್ವ ಭಾರತೀಯರ ಹೃದಯದಲ್ಲಿ ಬೇರೂರಿದೆ”: ಪ್ರಧಾನಿ ಗುಣಗಾನ ಮಾಡಿದ ಹೆಚ್.ಡಿ. ಕುಮಾರಸ್ವಾಮಿ! – Kannada News | Adichunchanagiris Bhairavaikya Mandira Inaugurated: Kumarswamy Praises Balagangadharanatha Swamijis Legacy

ಮಂಡ್ಯ, ಏ.15: ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಭೈರವೈಕ್ಯ ಮಂದಿರ ಲೋಕಾರ್ಪಣೆ ಕಾರ್ಯಕ್ರಮ ಆದಿಚುಂಚನಗಿರಿ ಮಹಾಕ್ಷೇತ್ರದಲ್ಲಿ ಯಶಸ್ವಿಯಾಗಿ ನೆರವೇರಿತು. ಈ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿ, ಕರ್ನಾಟಕ ರಾಜ್ಯಪಾಲ ಶ್ರೀ ತಾವರ್ಚಂದ್ ಗೆಹ್ಲೋಟ್, ಮಾಜಿ ಪ್ರಧಾನಮಂತ್ರಿ ಶ್ರೀ ಹೆಚ್.ಡಿ. ದೇವೇಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ಬಾಲಗಂಗಾಧರನಾಥ ಸ್ವಾಮೀಜಿಯವರ ಮಾನವಕುಲಕ್ಕೆ ಸಮರ್ಪಿತವಾದ ಜೀವನಕ್ಕೆ ಗೌರವ ಸಲ್ಲಿಸಿದರು. ಆದಿಚುಂಚನಗಿರಿ ಮಠವು ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸೇವೆಗಳಲ್ಲಿ ಪರಿವರ್ತನಾತ್ಮಕ ಪಾತ್ರವನ್ನು ವಹಿಸಿದೆ ಎಂದು ಹೇಳಿದರು. ಸಣ್ಣ ಮಠವಾಗಿದ್ದ ಇದನ್ನು ಜಾಗತಿಕ ಶ್ರದ್ಧಾ ಕೇಂದ್ರವಾಗಿ ರೂಪಿಸಿದ ಸ್ವಾಮೀಜಿಯವರ ಸಾಧನೆಯನ್ನು ಕೊಂಡಾಡಿದರು. ಮೋದಿ ಅವರ ನಾಯಕತ್ವದಲ್ಲಿ ದೇಶ ಪ್ರಗತಿಪಥದಲ್ಲಿ ಸಾಗುತ್ತಿದೆ ಎಂದು ಹೇಳುತ್ತಾ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರಧಾನಮಂತ್ರಿಯವರಿಗೆ ಧನ್ಯವಾದ ಸಲ್ಲಿಸಿದರು. ಬಾಲಗಂಗಾಧರನಾಥ ಸ್ವಾಮೀಜಿಯವರ ಪರಂಪರೆ ಮುಂದಿನ ತಲೆಮಾರುಗಳಿಗೆ ದಾರಿದೀಪವಾಗಲಿದೆ ಎಂದು ತಿಳಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವವು ಮೆಚ್ಚುಗೆಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಲಕ್ಷಾಂತರ ಭಾರತೀಯರ ಹೃದಯದಲ್ಲಿ ಆಳವಾಗಿ ಬೇರೂರಿದೆ ಎಂದು ಕುಮಾರಸ್ವಾಮಿ ಬಣ್ಣಿಸಿದರು. ಅವರ ದಣಿವರಿಯದ ಸಮರ್ಪಣೆ ಮತ್ತು ಆಡಳಿತದಲ್ಲಿ ಭಾರತೀಯರು ಶಕ್ತಿ, ಸಹಾನುಭೂತಿ ಮತ್ತು ಪ್ರಗತಿಯನ್ನು ಕಾಣುತ್ತಾರೆ ಎಂದು ಹೇಳಿದರು. ಈ ಸ್ಮಾರಕವು ಮುಂದಿನ ತಲೆಮಾರುಗಳಿಗೆ ಮಾರ್ಗದರ್ಶಿ ದೀಪವಾಗಿ ನಿಲ್ಲಲಿ, ಸೇವೆ, ಆಧ್ಯಾತ್ಮಿಕತೆ ಮತ್ತು ಏಕತೆಯ ಶಕ್ತಿಯನ್ನು ನೆನಪಿಸಲಿ ಎಂದು ಆಶಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PM Modi Speech: ಸಕ್ಕರೆ ನಾಡಲ್ಲಿ ರಾಗಿ ಮುದ್ದೆಯ ಗುಣಗಾನ, ಕರ್ನಾಟಕದ ದೇಸಿ ಆಹಾರದ ತಾಕತ್ತು ಕೊಂಡಾಡಿದ ನರೇಂದ್ರ ಮೋದಿ – Kannada News | PM Modi Praises Ragi Mudde and Karnataka Culture in Mandya: A Call for Millets

ಮಂಡ್ಯ, ಏಪ್ರಿಲ್ 15: ರಾಗಿ ಮುದ್ದೆ ಕೇವಲ ಆಹಾರವಲ್ಲ ಅದೊಂದು ಶಕ್ತಿ, ಮಂಡ್ಯದಲ್ಲಿ ದೇವೇಗೌಡರು ಅದನ್ನು ಫೇಮಸ್ ಮಾಡಿದ್ದಾರೆ, ಯುವಕರು ರಾಗಿ ಮುದ್ದೆ ಹಾಗೂ ನವಧಾನ್ಯಗಳನ್ನು ಹೆಚ್ಚು ಸೇವಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಂಡ್ಯದ ಆದಿಚುಂಚನಗಿರಿ ಮಠದಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕರ್ನಾಟಕದ ಸಂಸ್ಕೃತಿ ಮತ್ತು ಮಠದ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಕರ್ನಾಟಕಕ್ಕೆ ಬರುವುದೆಂದರೆ ನನಗೆ ಖುಷಿಯ ವಿಷಯ. ಇಲ್ಲಿಗೆ ಬಂದಾಗಲೆಲ್ಲಾ ಹೊಸ ಪ್ರೇರಣೆ ಸಿಗುತ್ತದೆ. ಅದರಲ್ಲೂ ಸಕ್ಕರೆ ನಾಡು ಮಂಡ್ಯಕ್ಕೆ ಬಂದಿರುವುದು ಈ ಭೇಟಿಯನ್ನು ಇನ್ನಷ್ಟು ಮಹತ್ವಪೂರ್ಣವಾಗಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.

ತತ್ವಜ್ಞಾನ ಮತ್ತು ತಂತ್ರಜ್ಞಾನದ ಸಮೃದ್ಧಿ
ಕರ್ನಾಟಕದ ಮಣ್ಣಿನ ಗುಣವನ್ನು ಬಣ್ಣಿಸಿದ ಪ್ರಧಾನಿ, ಈ ಮಣ್ಣು ತತ್ವಜ್ಞಾನ ಮತ್ತು ತಂತ್ರಜ್ಞಾನ ಎರಡರಲ್ಲೂ ಸಮೃದ್ಧವಾಗಿದೆ. ಇಲ್ಲಿ ದರ್ಶನದ ಆಳವೂ ಇದೆ, ಟೆಕ್ನಾಲಜಿಯ ಶಕ್ತಿಯೂ ಇದೆ. ಆದಿಚುಂಚನಗಿರಿ ಮಠವು ಕಳೆದ ಎರಡು ಸಾವಿರ ವರ್ಷಗಳಿಂದ ಭಾರತದ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಜೀವಂತವಾಗಿರಿಸಿರುವ ಸಾಕ್ಷಾತ್ ರೂಪ ಎಂದರು.

ಬಾಲಗಂಗಾಧರನಾಥ ಶ್ರೀಗಳು: ಕೇವಲ ಸಂತರಲ್ಲ, ಸಮಾಜದ ಬಂಧು
ಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿಯವರನ್ನು ಸ್ಮರಿಸಿದ ಮೋದಿ, ಅವರು ಕೇವಲ ಆಧ್ಯಾತ್ಮಿಕ ಮಾರ್ಗದರ್ಶನಕ್ಕೆ ಸೀಮಿತವಾಗಿರಲಿಲ್ಲ. ಗ್ರಾಮೀಣ ಭಾಗದಿಂದ ಬಂದಿದ್ದರಿಂದ ಅವರಿಗೆ ಹಳ್ಳಿಯ ಯುವಕರ ಆಕಾಂಕ್ಷೆ ಮತ್ತು ಸವಾಲುಗಳ ಅರಿವಿತ್ತು. ಭಕ್ತಿ ಎಂದರೆ ಸಮಾಜದಿಂದ ದೂರ ಹೋಗುವುದಲ್ಲ, ಸಮಾಜದ ಜವಾಬ್ದಾರಿ ತೆಗೆದುಕೊಳ್ಳುವುದು ಎಂದು ಅವರು ತೋರಿಸಿಕೊಟ್ಟರು. ಬಡ ಮಕ್ಕಳಿಗೆ ಎಂಜಿನಿಯರಿಂಗ್, ಮೆಡಿಕಲ್ ಶಿಕ್ಷಣ ನೀಡುವ ಮೂಲಕ ಅವರು ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ ಎಂದು ಗುಣಗಾನ ಮಾಡಿದರು.

ಮನುಷ್ಯರಷ್ಟೇ ಅಲ್ಲ, ಜೀವಿಗಳ ಮೇಲೂ ಕರುಣೆ
ಸ್ವಾಮೀಜಿಯವರ ಪರಿಸರ ಪ್ರೇಮವನ್ನು ಮೆಚ್ಚಿದ ಪ್ರಧಾನಿ, ಅವರ ಕರುಣೆ ಕೇವಲ ಮನುಷ್ಯರಿಗೆ ಸೀಮಿತವಾಗಿರಲಿಲ್ಲ. ರಾಷ್ಟ್ರಪಕ್ಷಿ ನವಿಲುಗಳ ಸಂರಕ್ಷಣೆಗಾಗಿ ಅವರು ನಡೆಸಿದ ಸಾಮಾಜಿಕ ಆಂದೋಲನವು ಇಂದಿಗೂ ನಮಗೆ ಮಾದರಿ. ಪರಿಸರ ಸಂರಕ್ಷಣೆ ನಮ್ಮ ಸಾಂಸ್ಕೃತಿಕ ಚೇತನದ ಭಾಗ ಎಂಬುದನ್ನು ಅವರು ಸಾಬೀತುಪಡಿಸಿದರು ಎಂದರು.

ಅನ್ನ, ಅಕ್ಷರ, ಆರೋಗ್ಯ ಮತ್ತು ಅಧ್ಯಾತ್ಮ, ಆಶ್ರಯ, ಅರಣ್ಯ ಮತ್ತು ಅನುಕಂಪ. ಆಕಳು (ಗೋರಕ್ಷಣೆ), ಅನುಬಂಧ ಮತ್ತು ಸ್ವಚ್ಛತೆ ಈ ಸೇವೆಯನ್ನು ಮೋದಿ ಶ್ಲಾಘಿಸಿದರು. ಈ ಮಠವು ಸ್ವದೇಶಿ ಮತ್ತು ಆತ್ಮನಿರ್ಭರತೆಯ ಸಂಕೇತವಾಗಿದೆ. ನಮ್ಮ ಸರ್ಕಾರ ಕೂಡ ಆಯುಷ್ಮಾನ್ ಭಾರತ್ ಅಡಿಯಲ್ಲಿ ಉಚಿತ ಚಿಕಿತ್ಸೆ ನೀಡುವ ಮೂಲಕ ಮಠದ ಆಶಯದಂತೆಯೇ ಆರೋಗ್ಯ ಸೇವೆಯನ್ನು ಬಡವರಿಗೆ ತಲುಪಿಸುತ್ತಿದೆ ಎಂದು ಮೋದಿ ಅವರು ಸರ್ಕಾರದ ಯೋಜನೆಗಳನ್ನು ಮಠದ ಸೇವೆಯೊಂದಿಗೆ ಸಮೀಕರಿಸಿದರು.

ಭೈರವೈಕ್ಯ ಮಂದಿರದಲ್ಲಿ ಬಾಲಗಂಗಾಧರನಾಥ ಶ್ರೀಗಳ ಆಶೀರ್ವಾದ ಪಡೆದಿದ್ದು ನನ್ನ ಭಾಗ್ಯ. ಅವರ ಪರಂಪರೆ ನಮ್ಮೆಲ್ಲರಿಗೂ ಕರ್ತವ್ಯದ ಹಾದಿಯಲ್ಲಿ ನಡೆಯಲು ಸ್ಫೂರ್ತಿ ನೀಡಲಿ ಎಂದು ಹಾರೈಸಿದರು.

ಕರ್ನಾಟಕದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಆಶಾ ಭೋಸ್ಲೆ ಹಾಡು ಪ್ರಸಾರ ಮಾಡಿದ ಪಾಕ್ ಟಿವಿಗೆ ನೊಟೀಸ್, ಆದರೆ… – Kannada News | Pakistan issue notice to tv channel which telecast Asha Bhosle song

ಕಲೆಗೆ, ಕಲಾವಿದರಿಗೆ ಗಡಿ ಇಲ್ಲ ಎನ್ನಲಾಗುತ್ತದೆ. ಆದರೆ ಸರ್ಕಾರಗಳು ಈ ಗಡಿ ಹೇರುವ ಪ್ರಯತ್ನ ಮಾಡಿದರೂ ಸಹ ಅವು ಕಲೆಯ ಪ್ರಸರಣಕ್ಕೆ ತಡೆ ಒಡ್ಡಿಲ್ಲ. ಇತ್ತೀಚೆಗಷ್ಟೆ ಭಾರತದ ಖ್ಯಾತ ಗಾಯಕಿ ಆಶಾ ಭೊಸ್ಲೆ (Asha Bhosle) ನಿಧನ ಹೊಂದಿದರು. ಭಾರತದ ಹಲವು ವಾಹಿನಿಗಳು, ರೆಡಿಯೋ ಚಾನೆಲ್​​ಗಳು ಆಶಾ ಭೋಸ್ಲೆ ನೆನಪಲ್ಲಿ ಅವರ ಹಲವಾರು ಹಾಡುಗಳನ್ನು ಪ್ರಸಾರ ಮಾಡಿ ಗೌರವ ಸೂಚಿಸಿದವು. ನೆರೆಯ ಪಾಕಿಸ್ತಾನದಲ್ಲಿ ಸಹ ಆಶಾ ಭೊಸ್ಲೆ ಅವರ ಗೌರವಾರ್ಥ ಅವರ ಹಾಡುಗಳನ್ನು ಚಾನೆಲ್ ಒಂದು ಪ್ರಸಾರ ಮಾಡಿತ್ತು. ಆದರೆ ಈಗ ಪಾಕ್ ಸರ್ಕಾರ ಆ ಚಾನೆಲ್​​ಗೆ ನೊಟೀಸ್ ನೀಡಿದೆ.

ಭಾರತದ ಖ್ಯಾತ ಗಾಯಕಿ ಆಶಾ ಭೋಂಸ್ಲೆ ಅವರು ಕಳೆದ ಭಾನುವಾರ ನಿಧನರಾದಾಗ, ಅವರಿಗೆ ಗೌರವ ನಮನ ಸಲ್ಲಿಸಿ ಆಶಾ ಭೋಸ್ಲೆ ಅವರ ಜನಪ್ರಿಯ ಹಾಡುಗಳನ್ನು ಪಾಕಿಸ್ತಾನದ ‘ಜಿಯೋ ನ್ಯೂಸ್’ (Geo News) ಚಾನೆಲ್‌ ಪ್ರಸಾರ ಮಾಡಿತ್ತು, ಆಶಾ ಭೊಸ್ಲೆ ಅವರಿಗೆ ಗೌರವ ಸಹ ಸಲ್ಲಿಸಲಾಗಿತ್ತು. ಇದೀಗ ಪಾಕಿಸ್ತಾನದ ಎಲೆಕ್ಟ್ರಾನಿಕ್ ಮೀಡಿಯಾ ರೆಗ್ಯುಲೇಟರಿ ಅಥಾರಿಟಿ (PEMRA) ಜಿಯೋ ನ್ಯೂಸ್​​ಗೆ ನೋಟಿಸ್ ನೀಡಿದೆ. ಆಶಾ ಭೋಂಸ್ಲೆ ಅವರ ನಿಧನದ ಸುದ್ದಿಯೊಂದಿಗೆ ‘ಭಾರತೀಯ ಕಂಟೆಂಟ್’ ಪ್ರಸಾರ ಮಾಡಿದ್ದಕ್ಕಾಗಿ ಈ ನೋಟಿಸ್ ನೀಡಲಾಗಿದ್ದು, ವಿವರಣೆ ಕೇಳಲಾಗಿದೆ.

ಜಿಯೋ ನ್ಯೂಸ್‌ನ ಎಂಡಿ ಅಜರ್ ಅಬ್ಬಾಸ್ ಅವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ‘ದಿಗ್ಗಜ ಕಲಾವಿದರು ನಿಧನರಾದಾಗ ಅವರ ಸಾಧನೆಯನ್ನು ಸ್ಮರಿಸುವುದು ಸಂಪ್ರದಾಯ. ಆಶಾ ಭೋಸ್ಲೆ ಅವರಂತಹ ಮಹಾನ್ ಗಾಯಕಿ ಪಾಕಿಸ್ತಾನದ ಖ್ಯಾತ ಗಾಯಕಿ ನೂರ್ ಜಹಾನ್ ಅವರನ್ನು ‘ಅಕ್ಕ’ ಎಂದು ಕರೆಯುತ್ತಿದ್ದರು ಮತ್ತು ನುಸ್ರತ್ ಫತೇ ಅಲಿ ಖಾನ್ ಅವರೊಂದಿಗೆ ಕೆಲಸ ಮಾಡಿದ್ದರು. ಯುದ್ಧದ ಸಮಯದಲ್ಲಿ ಕಲೆ ಮತ್ತು ಕಲಾವಿದರು ಬಲಿಯಾಗಬಾರದು’ ಎಂದು ಅವರು ಟ್ವಿಟ್ಟರ್​​ನಲ್ಲಿ ನಲ್ಲಿ ಬರೆದುಕೊಂಡಿದ್ದಾರೆ. ಅಜರ್ ಅಬ್ಬಾಸ್ ಅವರ ಟ್ವೀಟ್​​ಗೆ ಸಾಕಷ್ಟು ಬೆಂಬಲ ಸಹ ವ್ಯಕ್ತವಾಗಿದೆ.

ಇದನ್ನೂ ಓದಿ:ಆಶಾ ಭೋಸ್ಲೆ ಬಗ್ಗೆ ಹಲವರಿಗೆ ತಿಳಿಯದ ವಿಷಯಗಳು ಇಲ್ಲಿವೆ

ಭಾರತೀಯ ಮಾಧ್ಯಮಗಳ ಮೇಲೆ ಪಾಕಿಸ್ತಾನವು 2018 ರಿಂದಲೇ ನಿಷೇಧ ಹೇರಿದೆ. ಆದಾಗ್ಯೂ, ಅಲ್ಲಿ ಭಾರತೀಯ ಚಲನಚಿತ್ರಗಳು ಮತ್ತು ಹಾಡುಗಳು ಟ್ರೆಂಡ್ ಆಗುತ್ತಲೇ ಇರುತ್ತವೆ. ಇತ್ತೀಚೆಗೆ ತೆರೆಕಂಡ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಪಾಕಿಸ್ತಾನದಲ್ಲಿ ದೊಡ್ಡ ಅಲೆ ಎಬ್ಬಿಸಿವೆ. ಜನ ಪೈರಸಿ ಸಿಡಿಗಳನ್ನು ಖರೀದಿಸಿ ಸಿನಿಮಾ ನೋಡಿದ್ದಾರೆ. ಪಾಕ್ ನೆಟ್​​ಫ್ಲಿಕ್ಸ್​​ನಲ್ಲಿಯೂ ಸಹ ‘ಧುರಂಧರ್’ ಸಿನಿಮಾ ಟಾಪ್ ಟ್ರೆಂಡಿಂಗ್​​ನಲ್ಲಿತ್ತು. ಪಾಕಿಸ್ತಾನದ ಸ್ಪಾಟಿಫೈ (ಆನ್​ಲೈನ್ ಹಾಡುಗಳ ಆಪ್) ಇತರೆ ಆನ್​​ಲೈನ್ ವೇದಿಕೆಗಳಲ್ಲಿ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾದ ಹಾಡುಗಳೇ ಟ್ರೆಂಡಿಂಗ್​​ನಲ್ಲಿವೆ.

‘ಧುರಂಧರ್: ದಿ ರಿವೆಂಜ್’ ಸಿನಿಮಾದ ‘ಜೈಯೇ ಸಜನ’ ಹಾಡು 6 ಲಕ್ಷಕ್ಕೂ ಹೆಚ್ಚು ಬಾರಿ ಪ್ಲೇ ಆಗುವ ಮೂಲಕ 3ನೇ ಸ್ಥಾನದಲ್ಲಿದೆ. ಭಾರತದ ಕರಣ್ ಔಜ್ಲಾ ಅವರ ‘ಬಾಯ್‌ಫ್ರೆಂಡ್’ ಹಾಡು 6ನೇ ಸ್ಥಾನದಲ್ಲಿದೆ. ಪಾಕಿಸ್ತಾನ ನೆಟ್‌ಫ್ಲಿಕ್ಸ್ ನಲ್ಲಿ ‘ಧುರಂಧರ್’ ಮೊದಲ ಭಾಗವು 3ನೇ ಸ್ಥಾನದಲ್ಲಿದ್ದರೆ, ರಾಣಿ ಮುಖರ್ಜಿ ನಟಿಸಿರುವ ‘ಮರ್ದಾನಿ 3’ ಮತ್ತು ‘ವಧ್ 2’ ಮೊದಲ ಎರಡು ಸ್ಥಾನಗಳಲ್ಲಿವೆ. ಪಾಕಿಸ್ತಾನ ಸರ್ಕಾರವು ಟಿವಿ ಮತ್ತು ಚಿತ್ರಮಂದಿರಗಳಲ್ಲಿ ಭಾರತೀಯ ಕಂಟೆಂಟ್ ಮೇಲೆ ನಿಯಂತ್ರಣ ಹೇರಿದ್ದರೂ, ಡಿಜಿಟಲ್ ಜಗತ್ತಿನಲ್ಲಿ ಜನರು ಭಾರತೀಯ ಸಂಗೀತ ಮತ್ತು ಸಿನಿಮಾಗಳನ್ನು ಅತಿಯಾಗಿ ಇಷ್ಟಪಡುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 12:24 pm, Wed, 15 April 26

Source link