ಜಾರ್ಖಂಡ್, ಏಪ್ರಿಲ್ 09: ಕಲ್ಲಿದ್ದಲು ಟ್ರಕ್ ಸ್ಕಾರ್ಪಿಯೋಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ಜಾರ್ಖಂಡ್ನ ದನ್ಬಾನ್ನಲ್ಲಿ ಕಲ್ಲಿದ್ದಲು ತುಂಬಿದ್ದ ಟ್ರಕ್ ಒಂದು ನಿಯಂತ್ರಣ ಕಳೆದುಕೊಂಡು ಡಿವೈಡರ್ಗೆ ಡಿಕ್ಕಿ ಹೊಡೆದು ಬಳಿಕ ವಿರುದ್ಧ ದಿಕ್ಕಿಗೆ ಬಂದು ಸ್ಕಾರ್ಪಿಯೋಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತದ ಬಳಿಕ ಟ್ರಕ್ ಕೂಡ ಮಗುಚಿ ಬಿದ್ದಿದ್ದು, ಕಲ್ಲಿದ್ದಲು ರಸ್ತೆ ತುಂಬಾ ಹರಡಿತ್ತು.
ಬಾಗಲಕೋಟೆ, ಏಪ್ರಿಲ್ 9: ಬಾಗಲಕೋಟೆ ವಿಧಾನಸಭಾ ಉಪಚುನಾವಣೆಗೆ ಮತದಾನ ಪ್ರಕ್ರಿಯೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯುತ್ತಿದೆ. ಹೆಚ್. ವೈ. ಮೇಟಿ ಅವರ ಅಕಾಲಿಕ ನಿಧನದಿಂದ ತೆರವಾದ ಈ ಕ್ಷೇತ್ರಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಎರಡೂ ಪಕ್ಷಗಳ ಪ್ರಮುಖ ನಾಯಕರು ತೀವ್ರ ಪ್ರಚಾರ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರು ದಿನಗಳ ಕಾಲ ಕ್ಷೇತ್ರದಲ್ಲಿ ಬೀಡುಬಿಟ್ಟು ಪ್ರಚಾರ ಮಾಡಿದರೆ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಿ. ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಅನೇಕ ಘಟಾನುಘಟಿ ನಾಯಕರು ಪ್ರಚಾರದಲ್ಲಿ ಭಾಗಿಯಾಗಿದ್ದರು.
ಮತದಾರರು ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸುತ್ತಿದ್ದು, ಸರದಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ. ಈ ಉಪಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ ಎಂದು ವಿಶ್ಲೇಷಿಸಲಾಗಿದೆ. ಕ್ಷೇತ್ರದಲ್ಲಿ ಒಟ್ಟು 2,59,797 ಮತದಾರರಿದ್ದು, 322 ಮತಗಟ್ಟೆಗಳಲ್ಲಿ ಮತದಾನ ಸುಗಮವಾಗಿ ನಡೆಯುತ್ತಿದೆ.
ಚುನಾವಣೆ ಸಂಬಂಧಿತ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮುಂಬೈ, ಏಪ್ರಿಲ್ 09: ನ್ಯಾಯಾಲಯದಲ್ಲಿ ಆರೋಪಿಯೊಬ್ಬ ಪೊಲೀಸ್(Police) ಅಧಿಕಾರಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಕೊಲೆ ಯತ್ನದ ಪ್ರಕರಣದ ವಿಚಾರಣಾಧೀನ ಆರೋಪಿ ಹ್ಯಾರಿಸನ್ ಆಂಥೋನಿ ಜೋಸೆಫ್,ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿ ಕೈಕೋಳ ಸಮೇತ ಪರಾರಿಯಾಗಿದ್ದು, ಪೊಲೀಸರು ಆರೋಪಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
42 ವರ್ಷದ ಹ್ಯಾರಿಸನ್ ಆಂಥೋನಿ ಜೋಸೆಫ್ ವಿರುದ್ಧ MCOCA ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆತ ಮಾರ್ಚ್ 2024ರಲ್ಲಿ ವ್ಯಕ್ತಿಯೊಬ್ಬರ ಮೇಲೆ ಗುಂಡು ಹಾರಿಸಿದ ಆರೋಪ ಎದುರಿಸುತ್ತಿದ್ದಾನೆ. ಆರ್ಥರ್ ರಸ್ತೆ ಜೈಲಿನಿಂದ ವಿಚಾರಣೆಗೆ ಕರೆತಂದಿದ್ದಾಗ, ಪೊಲೀಸ್ ಕಾನ್ಸ್ಟೇಬಲ್ ಪ್ರಶಾಂತ್ ಕಾಂಬ್ಳೆ ಅವರ ಮೇಲೆ ದಾಳಿ ನಡೆಸಿ ನ್ಯಾಯಾಲಯದ ಆವರಣದಿಂದಲೇ ತಪ್ಪಿಸಿಕೊಂಡಿದ್ದಾನೆ.ಕೊಲಾಬಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದ್ದು, ರೈಲ್ವೆ ನಿಲ್ದಾಣಗಳು ಸೇರಿದಂತೆ ಪ್ರಮುಖ ಸಾರಿಗೆ ಕೇಂದ್ರಗಳಲ್ಲಿ ಪೊಲೀಸರ ವಿಶೇಷ ತಂಡಗಳು ಹದ್ದಿನ ಕಣ್ಣಿಟ್ಟಿವೆ.
ಕೇರಳದ ಜೋಸೆಫ್ ಪರಾರಿಯಾಗಿರುವುದರಿಂದ, ಅಧಿಕಾರಿಗಳು ರೈಲ್ವೆ ಟರ್ಮಿನಲ್ಗಳು ಮತ್ತು ಇತರ ಸಾರಿಗೆ ಕೇಂದ್ರಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಅನೇಕ ತಂಡಗಳನ್ನು ನಿಯೋಜಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
2024 ರಲ್ಲಿ ನಡೆದ ಸಣ್ಣ ವಿವಾದಕ್ಕೆ ಸಂಬಂಧಿಸಿದಂತೆ ಜೋಸೆಫ್ ಮತ್ತು ಅವರ ಸಹಚರರು ಬ್ಯಾಗ್ ಮಾರಾಟಗಾರ ರಾಜು ಶೇಖ್ ಅವರ ಮೇಲೆ ಏರ್ ಗನ್ನಿಂದ ಹಲ್ಲೆ ನಡೆಸಿದ್ದ ಎನ್ನುವ ಆರೋಪವಿದೆ. ನ್ಯಾಯಾಲಯದ ಕಟಕಟೆಗೆ ಕರೆದೊಯ್ಯುತ್ತಿದ್ದಾಗ ಘಟನೆ ನಡೆದಿದೆ. ಮಾರ್ಚ್ 2024 ರಲ್ಲಿ ವ್ಯಕ್ತಿಯೊಬ್ಬರ ಮೇಲೆ ಗುಂಡು ಹಾರಿಸಿದ್ದ ಮತ್ತು ಆತನನ್ನು ಜನವರಿ 2025 ರಲ್ಲಿ ಬಂಧಿಸಲಾಗಿತ್ತು.
‘ಕರ್ಣ’ ಧಾರಾವಾಹಿ ಹೊಸ ಹೊಸ ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಈ ಧಾರಾವಾಹಿ ಟಿಆರ್ಪಿಯಲ್ಲೂ ನಂಬರ್ 1 ಸ್ಥಾನದಲ್ಲಿ ಇದೆ. ಹೀಗಿರುವಾಗಲೇ ‘ಕರ್ಣ’ ಧಾರಾವಾಹಿಯಲ್ಲಿ ಒಂದು ಕಟು ಸತ್ಯವೂ ರಿವೀಲ್ ಆಗಿದೆ ಎನ್ನಬಹುದು. ಕರ್ಣನು ರಮೇಶ್ ಮಗ ಎಂಬ ಕಟು ಸತ್ಯವನ್ನು ರಮೇಶ್ ತಂಗಿ ತಾರಾ ರಿವೀಲ್ ಮಾಡಿದ್ದಾಳೆ. ಇದು ಶಾಕಿಂಗ್ ಎನಿಸಿದೆ. ಇದು ಧಾರಾವಾಹಿಯಲ್ಲಿ ದೊಡ್ಡ ತಿರುವಿಗೆ ಕಾರಣ ಆಗಬಹುದು ಎಂದು ಊಹಿಸಲಾಗಿದೆ. ಮುಂದಿನ ಕಥೆ ಮತ್ತಷ್ಟು ರೋಚಕವಾಗಿದೆ.
‘ಕರ್ಣ’ ಧಾರಾವಾಹಿಯಲ್ಲಿ ಹಲವು ತಿರುವುಗಳು ಎದುರಾಗಿವೆ. ಇದರಲ್ಲಿ ಈಗ ದೊಡ್ಡ ತಿರುವು ಬರುವ ಸೂಚನೆ ಸಿಕ್ಕಿದೆ. ಅದೇನೆಂದರೆ, ಕರ್ಣ ಧಾರಾವಾಹಿಯಲ್ಲಿ ಕರ್ಣನು ಹಾದಿಯಲ್ಲಿ ಸಿಕ್ಕ ಮಗ ಎಂದು ಹೇಳಲಾಗಿತ್ತು. ಆತ ಬೀದಿಯಲ್ಲಿ ಸಿಕ್ಕವನು ಎಂಬ ಕಾರಣಕ್ಕೆ ರಮೇಶ್ ಆತನನ್ನು ಕೀಳಾಗಿ ನೋಡುತ್ತಾ ಬಂದಿದ್ದಾನೆ. ಆದರೆ, ಅಸಲಿ ಕಥೆ ಬೇರೆಯೇ ಇದೆ.
ಆದರೆ, ಈಗ ಎಲ್ಲವೂ ಬದಲಾಗಿದೆ. ರಮೇಶ್ ಸಹೋದರಿ ಒಂದು ಶಾಕಿಂಗ್ ವಿಷಯ ರಿವೀಲ್ ಮಾಡಿದ್ಧಾಳೆ. ಕರ್ಣನು ರಮೇಶ್ ಮಗ ಎಂಬುದನ್ನು ಹೇಳಿದ್ದಾಳೆ. ಕರ್ಣನಿಗೆ ಸಾಕಷ್ಟು ತೊಂದರೆ ಕೊಡುವ ಕೆಲಸ ರಮೇಶ್ನಿಂದ ಆಗಿತ್ತು. ಆದರೆ, ಈಗ ಎಲ್ಲವೂ ಬದಲಾಗಿದೆ. ಕರ್ಣ ತೊಂದರೆ ಕೊಡುವ ನಿರ್ಧಾರಕ್ಕೆ ಬಂದಿದ್ದಾನೆ. ‘ನಾನು ಆಟ ಆಡಿಸ್ತೀನಿ, ನೀನು ಆಟ ಆಡಬೇಕು’ ಎಂದು ಅವಾಜ್ ಹಾಕಿದ್ದಾನೆ ಕರ್ಣ.
ಹೀಗಿರುವಾಗಲೇ ರಮೇಶ್ನ ಸ್ಥಿತಿ ನೋಡಿ ಆತನ ಸಹೋದರಿ ತಾರಾ ಒಳಗೊಳಖಗೆ ಖುಷಿ ಆಗಿದ್ದಾಳೆ. ‘ನಿನಗೆ ಈ ಪರಿಸ್ಥಿತಿ ಬರೋಕೆ ನಿನ್ನ ಸ್ವಂತ ಮಗನೇ ಕಾರಣ ಅಣ್ಣ’ ಎಂದು ಹೇಳಿಕೊಂಡಿರುವುದು ಚರ್ಚೆಗೆ ಕಾರಣ ಆಗಿದೆ.
‘ಕರ್ಣ’ ಧಾರಾವಾಹಿಯಲ್ಲಿ ರಮೇಶ್ಗೆ ಮತ್ತೊಂದು ಪತ್ನಿ/ ಪ್ರೀತಿ ಇತ್ತು ಎಂಬ ಅನುಮಾನ ಆರಂಭದಲ್ಲೇ ಬಂದಿತ್ತು. ಆದರೆ, ನಂತರ ಅದು ಅಲ್ಲಿಗೇ ನಿಂತಿತ್ತು. ಈಗ ಈ ಅನುಮಾನ ಮತ್ತಷ್ಟು ಜೋರಾಗಿದೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 14ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ (GT) ವಿರುದ್ಧದ ಈ ಪಂದ್ಯದಲ್ಲಿ ಒಂದು ರನ್ನ ಸೋಲಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವು ವಿಶೇಷ ದಾಖಲೆಯೊಂದನ್ನು ಬರೆದಿದೆ.
ಈ ಮ್ಯಾಚ್ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ಶುಭ್ಮನ್ ಗಿಲ್ (70), ಜೋಸ್ ಬಟ್ಲರ್ (52) ಹಾಗೂ ವಾಷಿಂಗ್ಟನ್ ಸುಂದರ್ (55) ಅವರ ಅರ್ಧಶತಕಗಳ ನೆರವಿನೊಂದಿಗೆ 20 ಓವರ್ಗಳಲ್ಲಿ 210 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲ್ಲಲು ಕೊನೆಯ ಓವರ್ನಲ್ಲಿ 13 ರನ್ಗಳು ಬೇಕಿದ್ದವು. ಆದರೆ ಅಂತಿಮ ಓವರ್ನಲ್ಲಿ ಕಲೆಹಾಕಿದ್ದು ಕೇವಲ 11 ರನ್ಗಳು ಮಾತ್ರ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಒಂದು ರನ್ನಿಂದ ಸೋಲೊಪ್ಪಿಕೊಂಡಿತು.
ಈ ಸೋಲಿನೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ 1 ರನ್ನಿಂದ ಸೋತ ತಂಡವೆಂಬ ಹಣೆಪಟ್ಟಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದೆ. ಅಂದರೆ ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಪಡೆಯು ಮೂರು ಬಾರಿ ಒಂದು ರನ್ ಅಂತರದಿಂದ ಸೋತ ನಿದರ್ಶನಗಳಿವೆ.
2015 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಒಂದು ರನ್ಗಳ ಅಂತರದಿಂದ ಮೊದಲ ಬಾರಿಗೆ ಸೋತಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು, 2016 ರಲ್ಲಿ ಗುಜರಾತ್ ಲಯನ್ಸ್ ತಂಡದ ವಿರುದ್ಧ ಒಂದು ರನ್ನಿಂದನೇ ಸೋಲೊಪ್ಪಿಕೊಂಡಿದ್ದರು. ಇನ್ನು 2021 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 1 ರನ್ನ ಅಂತರದಿಂದ ಸೋಲನುಭವಿಸಿದ್ದರು.
ಇದೀಗ ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ 1 ರನ್ ಅಂತರದಿಂದ ಸೋಲೊಪ್ಪಿಕೊಂಡಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಒಂದು ರನ್ ಅಂತರದಿಂದ ಸೋತ ತಂಡವೆಂಬ ದಾಖಲೆಯನ್ನು ನಿರ್ಮಿಸಿದೆ.
ನಮ್ಮ ಸಂಪ್ರದಾಯಗಳು, ಪದ್ಧತಿಗಳು ಮತ್ತು ವಿಧಿವಿಧಾನಗಳ ಮಹತ್ವವನ್ನು ಅರಿಯುವುದು ಮುಖ್ಯ. ತಾಳ್ಮೆ, ಸಹನೆ ಮತ್ತು ನೆಮ್ಮದಿಯ ಜೀವನ ನಡೆಸಲು ನಮ್ಮ ಮಾತುಗಳು ಬಹಳ ಪ್ರಭಾವ ಬೀರುತ್ತವೆ. ಆಯಸ್ಸನ್ನು ಕಡಿಮೆ ಮಾಡುವಲ್ಲಿ ತಪ್ಪು ಮಾತಿನ ಶೈಲಿಗಳ ಪಾತ್ರವಿದೆ. ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಏರು ಧ್ವನಿಯಲ್ಲಿ ಮಾತನಾಡುವುದು ಸೂಕ್ತವಲ್ಲ. ವಿದ್ಯಾಲಯಗಳಲ್ಲಿ, ಆಸ್ಪತ್ರೆಗಳಲ್ಲಿ, ಹಣಕಾಸು ವ್ಯವಹಾರಗಳಲ್ಲಿ, ಪೂಜಾ ಸಮಯದಲ್ಲಿ, ದಾಂಪತ್ಯ ಜೀವನದಲ್ಲಿ, ಮೇಲಧಿಕಾರಿಗಳೊಂದಿಗೆ ಮತ್ತು ಮಕ್ಕಳೊಂದಿಗೆ ಮಾತನಾಡುವಾಗ ಮೃದುವಾದ ಧ್ವನಿ ಬಹಳ ಮುಖ್ಯ. ಜೋರಾಗಿ ಮಾತನಾಡಿದಾಗ ನಮ್ಮ ಜ್ಞಾನ ಕುಂಠಿತವಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಆಸ್ಪತ್ರೆಗಳಲ್ಲಿ ಅನಾರೋಗ್ಯ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಪೂಜೆಯಲ್ಲಿ ಏಕಾಗ್ರತೆ ಭಂಗವಾಗುತ್ತದೆ. ಸೌಮ್ಯ ಮಾತು ನಮ್ಮ ಜೀವನದಲ್ಲಿ ಸಕಾರಾತ್ಮಕ ಪರಿಣಾಮಗಳನ್ನು ತರುತ್ತದೆ. ಇವು ನಮ್ಮ ಆಯುಷ್ಯ ಮತ್ತು ಮನಸ್ಸಿನ ಶಾಂತಿಗೆ ಸಹಕಾರಿ.
ಕ್ರಿಕೆಟರ್ ವಿರಾಟ್ ಕೊಹ್ಲಿ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಏನೇ ಮಾಡಿದರೂ ಆ ಬಗ್ಗೆ ಚರ್ಚೆಗಳು ನಡೆಯುತ್ತವೆ. ಇತ್ತೀಚೆಗೆ ಅವರು ‘ಧುರಂಧರ್ 2’ ಚಿತ್ರವನ್ನು ನೋಡಿ ಹಾಡಿ ಹೊಗಳಿದ್ದರು. ಆದಿತ್ಯ ಧಾರ್ ನಿರ್ದೇಶನ, ರಣವೀರ್ ಸಿಂಗ್ ನಟನೆ ಸೇರಿ ಎಲ್ಲದಕ್ಕೂ ಮೆಚ್ಚುಗೆ ಸೂಚಿಸಿದ್ದರು. ಸಿನಿಮಾ ಅದ್ಭುತ ಎಂದಿದ್ದರು. ಇದಾದ ಬಳಿಕ ಸಿನಿಮಾ ಹೌಸ್ಫುಲ್ ಕಾಣುತ್ತಿದೆ ಎಂಬ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗಾದರೆ, ಸಿನಿಮಾದ ಕಲೆಕ್ಷನ್ ಹೆಚ್ಚಿತೇ? ಆ ಬಗ್ಗೆ ಇಲ್ಲಿದೆ ವಿವರ.
‘ಧುರಂಧರ್ 2’ ಸಿನಿಮಾ ವಿಶ್ವ ಮಟ್ಟದಲ್ಲಿ 1652 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದಲ್ಲಿ ಚಿತ್ರದ ಗ್ರಾಸ್ ಕಲೆಕ್ಷನ್ 1653 ರೂಪಾಯಿ. ಈ ಚಿತ್ರದ ನೆಟ್ ಕಲೆಕ್ಷನ್ 1,041 ಕೋಟಿ ರೂಪಾಯಿ. ಈವರೆಗೆ ಸಿನಿಮಾ ಸುಮಾರು 4 ಲಕ್ಷ ಶೋಗಳನ್ನು ರನ್ ಮಾಡಿದೆ. ಈ ಸಿನಿಮಾ ಕಳೆದ ಭಾನುವಾರ 30 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.
Crazy scenes in cinema halls for Dhurandhar 2 after just one story from Virat Kohli!
ಕೊಹ್ಲಿ ಸಿನಿಮಾ ಬಗ್ಗೆ ಪೋಸ್ಟ್ ಮಾಡಿದ್ದು ಸೋಮವಾರ ಸಂಜೆ. ಸೋಮವಾರ ಚಿತ್ರದ ಗಳಿಕೆ 12 ಕೋಟಿ ರೂಪಾಯಿ ಇತ್ತು. ಮಂಗಳವಾರ ಚಿತ್ರದ ಕಲೆಕ್ಷನ್ ತಗ್ಗಿಲ್ಲ. ಬದಲಿಗೆ 12 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಬುಧವಾರ ಸಿನಿಮಾದ ಕಲೆಕ್ಷನ್ 9.46 ಕೋಟಿ ರೂಪಾಯಿಗೆ ಇಳಿದಿದೆ. ಇದನ್ನು ಹೋಲಿಕೆ ಮಾಡಿದರೆ ಮಂಗಳವಾರ ಸ್ವಲ್ಪ ಪ್ರಮಾಣದಲ್ಲಿ ಕೊಹ್ಲಿ ಅಭಿಮಾನಿಗಳು ಸಿನಿಮಾ ವೀಕ್ಷಿಸಿರಬಹುದು ಎನ್ನಬಹುದು. ಆದರೆ, ಗಳಿಕೆಯಲ್ಲಿ ಗಮನಾರ್ಹ ಏರಿಕೆ ಏನೂ ಆಗಿಲ್ಲ.
ಸದ್ಯ ವೈರಲ್ ಆಗಿರೋ ವಿಡಿಯೋದಲ್ಲಿ ಕೊಹ್ಲಿ ಅಭಿಮಾನಿಗಳು ಥಿಯೇಟರ್ನಲ್ಲಿ ಸಿನಿಮಾ ನೋಡಲು ನೂಕು ನುಗ್ಗಲು ಮಾಡುತ್ತಿದ್ದಾರೆ ಎಂಬ ರೀತಿಯಲ್ಲಿ ಇದೆ. ಆದರೆ, ಅಸಲಿಗೆ ಆ ರೀತಿ ಇಲ್ಲ ಎಂದು ಹೇಳಲಾಗುತ್ತಾ ಇದೆ. ಕೆಲವರು ಹಳೆಯ ವಿಡಿಯೋವನ್ನು ಈಗ ವೈರಲ್ ಮಾಡಿರಬಹುದು ಎಂದು ಊಹಿಸಲಾಗಿದೆ. ವೈರಲ್ ಆಗಿರೋ ವಿಡಿಯೋದ ಸತ್ಯಾ ಸತ್ಯತೆ ಇನ್ನೂ ಬಹಿರಂಗವಾಗಿಲ್ಲ.
ಬೆಂಗಳೂರು, ಏ.9: ಪ್ರಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 2026ರ ಏಪ್ರಿಲ್ 9, ಗುರುವಾರದ ದೈನಂದಿನ ರಾಶಿಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ಪರಾಭವನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣ ಪಕ್ಷದ ಸಪ್ತಮಿ, ಪೂರ್ವಾಷಾಡ ನಕ್ಷತ್ರ, ಪರಿಘ ಯೋಗ ಮತ್ತು ಭವಕರಣಗಳನ್ನು ಒಳಗೊಂಡಿದೆ. ರಾಹುಕಾಲ ಮಧ್ಯಾಹ್ನ 1:52 ರಿಂದ 3:25 ರವರೆಗೆ ಇದ್ದು, ಸರ್ವಸಿದ್ಧಿ, ಸಂಕಲ್ಪ ಹಾಗೂ ಶುಭಕಾಲ ಮಧ್ಯಾಹ್ನ 12:21 ರಿಂದ 1:54 ರವರೆಗೆ ಇರುತ್ತದೆ. ರವಿ ಮೀನ ರಾಶಿಯಲ್ಲಿ ಮತ್ತು ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ ಮಾಡುತ್ತಿದ್ದು, ಇದು ದ್ವಾದಶ ರಾಶಿಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಮೇಷ ರಾಶಿಯವರಿಗೆ ಆರ್ಥಿಕವಾಗಿ ಉತ್ತಮವಾಗಿದ್ದು, ಕೆಲಸ ಕಾರ್ಯಗಳಲ್ಲಿ ಶ್ರದ್ಧೆ ವಹಿಸಲು ಸೂಚಿಸಲಾಗಿದೆ. ವೃಷಭ ರಾಶಿಯವರು ಪ್ರಯತ್ನಗಳಿಗೆ ತಕ್ಕ ಫಲ, ಆದರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮಿಥುನ ರಾಶಿಯವರಿಗೆ ಆರ್ಥಿಕವಾಗಿ ಸಣ್ಣಪುಟ್ಟ ಸಂಕಷ್ಟಗಳಿರಬಹುದು, ಕಾನೂನು ವಿಚಾರಗಳಲ್ಲಿ ಜಾಗೃತಿ ಅಗತ್ಯ. ಕರ್ಕಾಟಕ ರಾಶಿಯವರಿಗೆ ಕುಟುಂಬ ಸೌಖ್ಯ, ಉತ್ತಮ ಆರೋಗ್ಯ ಮತ್ತು ಆಸ್ತಿ ವಿಷಯಗಳಲ್ಲಿ ಶುಭಫಲವಿರಲಿದೆ. ಪ್ರತಿಯೊಂದು ರಾಶಿಗೆ ಅದೃಷ್ಟ ಸಂಖ್ಯೆ, ಬಣ್ಣ, ದಿಕ್ಕು ಮತ್ತು ಜಪಿಸಬೇಕಾದ ಮಂತ್ರಗಳನ್ನು ಗುರೂಜಿ ವಿವರಿಸಿದ್ದಾರೆ. ಈ ದಿನದಂದು ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸುವವರಿಗೆ ಶುಭ ಹಾರೈಕೆಗಳನ್ನು ಸಲ್ಲಿಸಲಾಗಿದೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 14ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವು ಕೇವಲ 1 ರನ್ನಿಂದ ಸೋತಿದೆ. ಗೆಲುವಿನ ಹೊಸ್ತಿಲಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಡೇವಿಡ್ ಮಿಲ್ಲರ್ ಅವರ ಒಂದು ನಿರ್ಧಾರದಿಂದಾಗಿ ಸೋಲೊಪ್ಪಿಕೊಳ್ಳಬೇಕಾಯಿತು ಎಂದರೆ ತಪ್ಪಾಗಲಾರದು.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್ಗಳಲ್ಲಿ 210 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೊನೆಯ ಓವರ್ನಲ್ಲಿ 13 ರನ್ಗಳ ಅಗತ್ಯವಿತ್ತು. ಕ್ರೀಸ್ನಲ್ಲಿದ್ದ ಸ್ಫೋಟಕ ಬ್ಯಾಟರ್ ಡೇವಿಡ್ ಮಿಲ್ಲರ್ ಅಬ್ಬರದ ಬ್ಯಾಟಿಂಗ್ ನಡೆಸಿ ಪಂದ್ಯವನ್ನು ಕೊನೆಯ ಎರಡು ಎಸೆತಗಳಲ್ಲಿ 2 ರನ್ಗಳ ಅಗತ್ಯಕ್ಕೆ ತಂದಿಟ್ಟರು.
19.5ನೇ ಎಸೆತದಲ್ಲಿ ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್ನಲ್ಲಿ ಮಿಲ್ಲರ್ ಚೆಂಡನ್ನು ಡೀಪ್ ಸ್ಕ್ವೇರ್ ಲೆಗ್ಗೆ ಹೊಡೆದರು. ಈ ವೇಳೆ ಸುಲಭವಾಗಿ ಒಂದು ರನ್ ಓಡುವ ಅವಕಾಶವಿತ್ತು. ಆದರೆ, ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಮಿಲ್ಲರ್, ನಾನ್-ಸ್ಟ್ರೈಕರ್ ಎಂಡ್ನಲ್ಲಿದ್ದ ಕುಲ್ದೀಪ್ ಯಾದವ್ ಅವರನ್ನು ವಾಪಸ್ ಕಳುಹಿಸಿ ಸಿಂಗಲ್ ಓಡಲು ನಿರಾಕರಿಸಿದರು.
ಪರಿಣಾಮ ಕೊನೆಯ ಎಸೆತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲ್ಲಲು 2 ರನ್ ಬೇಕಿತ್ತು (ಸಿಂಗಲ್ ತೆಗೆದುಕೊಂಡಿದ್ದರೆ ಪಂದ್ಯ ಟೈ ಆಗುತ್ತಿತ್ತು). ಆದರೆ ಅಂತಿಮ ಎಸೆತದಲ್ಲಿ ಮಿಲ್ಲರ್ ರನ್ ಹೊಡೆಯಲು ವಿಫಲರಾದರು. ಇದಾಗ್ಯೂ ಬೈ ರನ್ ಓಡಲು ಪ್ರಯತ್ನಿಸಿದ ಕುಲ್ದೀಪ್ ಯಾದವ್ ಅವರನ್ನು ಜೋಸ್ ಬಟ್ಲರ್ ಅದ್ಭುತವಾಗಿ ರನ್ ಔಟ್ ಮಾಡಿದರು. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡವು 1 ರನ್ನ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.
ಒಂದು ವೇಳೆ ಡೇವಿಡ್ ಮಿಲ್ಲರ್ 5ನೇ ಎಸೆತದಲ್ಲಿ ಒಂದು ರನ್ ಓಡಿದ್ದರೆ ಪಂದ್ಯವನ್ನು ಟೈ ಮಾಡಿ ಸೋಲನ್ನು ತಪ್ಪಿಸಿಕೊಳ್ಳಬಹುದಿತ್ತು. ಆದರೆ ಆ ಒಂದು ನಿರಾಕರಣೆಗೆ ಡೆಲ್ಲಿ ಕ್ಯಾಪಿಟಲ್ಸ್ ಸೋಲಿನ ಬೆಲೆ ತೆರಬೇಕಾಗಿ ಬಂದಿದೆ.
ಇದೀಗ ಮಿಲ್ಲರ್ ಅವರ ಈ ನಿರ್ಧಾರ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅವರು ಕುಲ್ದೀಪ್ ಯಾದವ್ ಅವರ ಮೇಲೆ ಭರವಸೆ ಇಡಲಿಲ್ಲವೇ? ಅಥವಾ ತಾನೇ ಪಂದ್ಯ ಮುಗಿಸುತ್ತೇನೆಂಬ ಅತಿಯಾದ ಆತ್ಮವಿಶ್ವಾಸ ಮುಳುವಾಯಿತೇ? ಎಂಬ ಪ್ರಶ್ನೆಗಳು ಎದ್ದಿವೆ. ಒಂದು ವೇಳೆ ಸಿಂಗಲ್ ಪಡೆದಿದ್ದರೆ ಪಂದ್ಯ ಕನಿಷ್ಠ ಪಕ್ಷ ‘ಸೂಪರ್ ಓವರ್’ ಹಂತಕ್ಕೆ ತಲುಪುತ್ತಿತ್ತು.
ಒಟ್ಟಿನಲ್ಲಿ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಸೋಲುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಂಕಪಟ್ಟಿಯಲ್ಲಿ ಮಹತ್ವದ ಸ್ಥಾನ ಕಳೆದುಕೊಂಡರೆ, ಗುಜರಾತ್ ಟೈಟಾನ್ಸ್ ತಂಡವು ಅದೃಷ್ಟದ ಗೆಲುವಿನೊಂದಿಗೆ ಸಂಭ್ರಮಿಸಿದೆ.
ವಾಷಿಂಗ್ಟನ್, ಏಪ್ರಿಲ್ 09: ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿದ್ದ ಯುದ್ಧದ ಜ್ವಾಲೆಗೆ ತಕ್ಷಣದ ವಿರಾಮ ಬಿದ್ದಿದೆ. ಇರಾನ್(Iran) ಮತ್ತು ಅಮೆರಿಕ ನಡುವೆ ಎರಡು ವಾರಗಳ ಕಾಲದ ಕದನ ವಿರಾಮ ಏರ್ಪಟ್ಟಿದ್ದು, ಈ ಐತಿಹಾಸಿಕ ಒಪ್ಪಂದದ ಹಿಂದೆ ಪಾಕಿಸ್ತಾನದ “ಚಾಣಕ್ಯ ನೀತಿ” ಕೆಲಸ ಮಾಡಿದೆ ಎಂದು ವರದಿಯಾಗಿದೆ. ಆದರೂ ಇಸ್ರೇಲ್ ಲೆಬನಾನ್ ಮೇಲೆ ದಾಳಿ ನಡೆಸಿದ್ದು, ಇದರ ಪರಿಣಾಮ ಇರಾನ್ ಮತ್ತೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದೆ.
ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು ‘ನನ್ನ ಪ್ರೀತಿಯ ಸಹೋದರರು’ ಎಂದು ಕರೆದು ಕೃತಜ್ಞತೆ ಸಲ್ಲಿಸಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕಿಸ್ತಾನದ ಶಾಂತಿ ಪ್ರಯತ್ನಗಳನ್ನು ಶ್ವೇತಭವನದ ಪರವಾಗಿ ಒಪ್ಪಿಕೊಂಡಿದ್ದಾರೆ. ಏಪ್ರಿಲ್ 10 ರಂದು ಪಾಕಿಸ್ತಾನದಲ್ಲಿ ಎರಡೂ ದೇಶಗಳ ನಿಯೋಗಗಳು ಮುಂದಿನ ಹಂತದ ಮಾತುಕತೆ ನಡೆಸಲಿವೆ.
ಪಾಕಿಸ್ತಾನ ಹೇಗೆ ಮಧ್ಯವರ್ತಿಯಾಯಿತು?
ಒಂದು ಕಡೆ ಇರಾನ್ನೊಂದಿಗೆ ಹಂಚಿಕೊಂಡಿರುವ ಭೌಗೋಳಿಕ ಗಡಿ ಮತ್ತು ಧಾರ್ಮಿಕ ನಂಟು, ಇನ್ನೊಂದು ಕಡೆ ಅಮೆರಿಕದೊಂದಿಗೆ ಸುಧಾರಿಸುತ್ತಿರುವ ಮಿಲಿಟರಿ ಸಂಬಂಧಗಳು ಪಾಕಿಸ್ತಾನವನ್ನು ವಿಶ್ವಾಸಾರ್ಹ ಕೊಂಡಿಯನ್ನಾಗಿ ಮಾಡಿದೆ.
ವಿಶ್ವಾಸಕ್ಕೆ ಕಾರಣಗಳು
ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂಧವಿಲ್ಲದಿರುವುದು, ಟ್ರಂಪ್ ಅವರ ‘ಶಾಂತಿ ಮಂಡಳಿ’ಯಲ್ಲಿ ಪಾಕಿಸ್ತಾನದ ಸದಸ್ಯತ್ವವಿರುವುದು, ಇರಾನ್ಗೆ ಅರಘ್ಚಿ ಮತ್ತು ಮುನೀರ್ ನಡುವಿನ ನಿಕಟ ಸಂಪರ್ಕವಿದೆ, ಇನ್ನು ಅಮೆರಿಕ ವಿಚಾರಕ್ಕೆ ಬಂದರೆ ಮುನೀರ್ ಅವರು ಟ್ರಂಪ್ ಅವರ ನೆಚ್ಚಿನ ಫೀಲ್ಡ್ ಮಾರ್ಷಲ್.ಪಾಕ್ ಇರಾನ್ನ 15 ಅಂಶಗಳ ಪ್ರಸ್ತಾವನೆಯನ್ನು ತಲುಪಿಸುವಲ್ಲಿ ಮಧ್ಯಸ್ಥಿಕೆವಹಿಸಿತ್ತು. ಪಾಕಿಸ್ತಾನಕ್ಕೆ ಉನ್ನತ ಮಟ್ಟದ ಅಮೆರಿಕನ್ ಅಧಿಕಾರಿಗಳೊಂದಿಗೆ ಸತತ ಸಂಪರ್ಕವನ್ನೂ ಹೊಂದಿದ್ದಾರೆ.
ಈ ಕದನ ವಿರಾಮವು ಅತ್ಯಂತ ದುರ್ಬಲವಾಗಿದ್ದು, ಯಾವುದೇ ಕ್ಷಣದಲ್ಲಿ ಮುರಿಯಬಹುದು. ಮಾತುಕತೆ ವಿಫಲವಾದರೆ ಅದರ ಹೊಣೆಗಾರಿಕೆ ಪಾಕಿಸ್ತಾನದ ಮೇಲೆ ಬೀಳುವ ಸಾಧ್ಯತೆಯಿದೆ. ಒಪ್ಪಂದವನ್ನು ಬಲವಂತವಾಗಿ ಜಾರಿಗೊಳಿಸುವ ಮಿಲಿಟರಿ ಅಥವಾ ಆರ್ಥಿಕ ಶಕ್ತಿ ಇಸ್ಲಾಮಾಬಾದ್ಗೆ ಇಲ್ಲ. ಯುದ್ಧ ಮುಂದುವರೆದರೆ ಇಂಧನ ಬೆಲೆ ಏರಿಕೆ ಮತ್ತು ಅಫ್ಘಾನಿಸ್ತಾನ ಗಡಿಯ ಬಿಕ್ಕಟ್ಟು ಪಾಕಿಸ್ತಾನವನ್ನು ಮತ್ತಷ್ಟು ಹೈರಾಣಾಗಿಸಬಹುದು.
ಪಾಕಿಸ್ತಾನವು ಸದ್ಯಕ್ಕೆ ಜಾಗತಿಕ ವೇದಿಕೆಯಲ್ಲಿ ದೊಡ್ಡ ಮಟ್ಟದ ರಾಜತಾಂತ್ರಿಕ ಅಂಕಗಳನ್ನು ಗಳಿಸಿದೆ. ಆದರೆ, ಇಸ್ಲಾಮಾಬಾದ್ ಮಾತುಕತೆಯು ಕೇವಲ ತಾತ್ಕಾಲಿಕ ವಿರಾಮವೋ ಅಥವಾ ಶಾಶ್ವತ ಶಾಂತಿಯೋ ಎಂಬುದು ಏಪ್ರಿಲ್ 10 ರಂದು ನಿರ್ಧಾರವಾಗಲಿದೆ. ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮವು ಅತ್ಯಂತ ದುರ್ಬಲವಾಗಿದ್ದು, ಮುಂಬರುವ ದಿನಗಳು ವಾಷಿಂಗ್ಟನ್ ಮತ್ತು ಟೆಹ್ರಾನ್ ಮಾತುಕತೆಗಳನ್ನು ಹೇಗೆ ಮುಂದಕ್ಕೆ ಕೊಂಡೊಯ್ಯುತ್ತವೆ ಎಂಬುದನ್ನು ತೋರಿಸುತ್ತವೆ.
ಆದ್ದರಿಂದ ಪಾಕಿಸ್ತಾನವು ಮಧ್ಯವರ್ತಿಯಾಗಿ ಹೊರಹೊಮ್ಮುವ ಮೂಲಕ ರಾಜತಾಂತ್ರಿಕ ಅಂಕಗಳನ್ನು ಗಳಿಸಬಹುದು, ಆದರೆ ಈ ಒಪ್ಪಂದದ ಕುಸಿತವು ಅದರ ವಿಶ್ವಾಸಾರ್ಹತೆಗೆ ದೊಡ್ಡ ಹೊಡೆತವಾಗುತ್ತದೆ. ತನ್ನದೇ ಆದ ಆರ್ಥಿಕ ಮತ್ತು ಗಡಿ ಬಿಕ್ಕಟ್ಟುಗಳ ನಡುವೆಯೂ, ಪಾಕಿಸ್ತಾನವು ಎರಡೂ ಕಡೆಯವರೊಂದಿಗೆ ಸಮಾನ ದೂರ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಈ ರಾಜತಾಂತ್ರಿಕ ವಿಜಯಕ್ಕೆ ಕಾರಣವಾಯಿತು.