Category Archives: Blog

Your blog category

ಡಿಸಿ, ತಹಶೀಲ್ದಾರ್ ಡೋಂಟ್ ಕೇರ್: ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು – Kannada News | Villegers theft Chicken And Egg From Farm over smell at Gadag

ರಮೇಶ್ ಬಿ. ಜವಳಗೇರಾ |

Updated on:Dec 25, 2025 | 9:29 PM

Share

ಕೋಳಿಫಾರಂ ದುವಾರ್ಸನೆಯಿಂದ ಬೇಸತ್ತು ಕೋಳಿ, ಮೊಟ್ಟೆಗಳನ್ನು ಕದ್ದೊಯ್ದಿರುವ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಉಣಚಗೇರಿ ಗ್ರಾಮದಲ್ಲಿ ನಡೆದಿದೆ.
ಕೋಳಿಫಾರಂ​​ನಿಂದ ಬರುತ್ತಿದ್ದ ದುವಾರ್ಸನೆಯಿಂದ ಉಣಚಗೇರಿ ಗ್ರಾಮಸ್ಥರು ರೋಸಿ ಹೋಗಿದ್ದರು. ಹೀಗಾಗಿ ಗ್ರಾಮದಿಂದ ಕೋಳಿಫಾರಂ ತೆರವುಗೊಳಿಸುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್​ಗೆ ಮನವಿ ಮಾಡಿದ್ದಾರೆ. ಆದ್ರೆ, ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಜನರು ತಾಳ್ಮೆಯ ಕಟ್ಟೆ ಹೊಡೆದಿದ್ದು, ಗ್ರಾಮಸ್ಥರೇ ಕೋಳಿಫಾರಂಗೆ ನುಗ್ಗಿ ಕೋಳಿ, ಮೊಟ್ಟೆ ಕದ್ದುಕೊಂಡು ಹೋಗಿದ್ದಾರೆ. ಇದರಿಂದ ಮಾಲೀಕ ಕಂಗಾಲಾಗಿದ್ದಾನೆ.

Published on: Dec 25, 2025 09:27 PM

Source link

KSCA ಅಂಡರ್ 14 ಕ್ರಿಕೆಟ್: ಬೆಂಗಳೂರಿನ ವಿದ್ಯಾನಿಕೇತನ ಶಾಲೆಗೆ 410 ರನ್‌ಗಳ ಭರ್ಜರಿ ಜಯ – Kannada News | KSCA Under 14th Cricket: Bengaluru vidyaniketan School Wins 410 runs Against carmel school

ಬೆಂಗಳೂರು, (ಡಿಸೆಂಬರ್ 25): 2025-26ನೇ ಸಾಲಿನ ಕೆ.ಎಸ್.ಸಿ.ಎ (KSCA) ಬಿ.ಟಿ.ಆರ್ 14 ವರ್ಷದೊಳಗಿನವರ ಎರಡನೇ ಡಿವಿಷನ್ ಕ್ರಿಕೆಟ್ ಪಂದ್ಯದಲ್ಲಿ ಬೆಂಗಳೂರಿನ ವಿದ್ಯಾನಿಕೇತನ ಶಾಲೆ (Bengaluru vidyaniketan School) ಭರ್ಜರಿ ಜಯಗಳಿಸಿದೆ. ವ್ಯೊಮ್ ನಾಯ್ಡು ಅದ್ಭುತ ದ್ವಿಶತಕದ ನೆರವಿನಿಂದ ವಿದ್ಯಾನಿಕೇತನ ಶಾಲೆಯು, ಬೆಂಗಳೂರಿನ ಕಾರ್ಮೆಲ್ ಶಾಲೆ (carmel school) (B-70) ವಿರುದ್ಧ 410 ರನ್‌ಗಳ ಬೃಹತ್ ಮೊತ್ತದ ಜಯ ದಾಖಲಿಸಿದೆ.

ಬೆಂಗಳೂರು ನಗರದ ಸರ್ ಎಂ. ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MVIT-2) ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿದ್ಯಾನಿಕೇತನ ಶಾಲೆ,  ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 504 ರನ್‌ ಪೇರಿಸಿತು.  ವಿದ್ಯಾನಿಕೇತನ ಪರವಾಗಿ ವ್ಯೊಮ್ ನಾಯ್ಡು 150 ಎಸೆತಗಳಲ್ಲಿ  47 ಬೌಂಡರಿಗಳ ಮೂಲಕ  ಬರೋಬ್ಬರಿ 283 ರನ್‌ ಬಾರಿಸಿ ಮಿಂಚಿದರು.

ಈ ಬೃಹತ್ ಮೊತ್ತದ ಗುರಿಯನ್ನು ಬೆನ್ನಟ್ಟಿದ ಬೆಂಗಳುರಿನ ಕಾರ್ಮೆಲ್ ಶಾಲೆ ಕೇವಲ 20.5 ಓವರ್‌ಗಳಲ್ಲಿ  94 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 410 ರನ್​​​ಗಳಿಂದ ಸೋಲೊಪ್ಪಿಕೊಂಡಿತು. ಈ ಮೂಲಕ ವಿದ್ಯಾನಿಕೇತನ ಶಾಲೆ ಭಾರಿ ಅಂತರದ ಜಯವನ್ನು ತನ್ನದಾಗಿಸಿಕೊಂಡಿದೆ. ಈ ಅಮೋಘ ಪ್ರದರ್ಶನ ನೀಡುವ ಮೂಲಕ ವ್ಯೊಮ್ ನಾಯ್ಡು ಅವರು ಪ್ರಸ್ತುತ ಕೆ.ಎಸ್.ಸಿ.ಎ ಬಿ.ಟಿ.ಆರ್ ಶೀಲ್ಡ್‌ ಟೂರ್ನಿಯಲ್ಲಿ ಅತ್ಯಂತ ಭರವಸೆಯ ಯುವ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್ – Kannada News | Shivarajkumar condemns fans bad comments on Vijayalakshmi Darshan

ಸೋಶಿಯಲ್ ಮೀಡಿಯಾದಲ್ಲಿ ಕೆಲವು ಕಿಡಿಗೇಡಿಗಳು ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ. ಅಂಥವರ ವಿರುದ್ಧ ಈಗಾಗಲೇ ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ಅವರು ದೂರು ನೀಡಿದ್ದಾರೆ. ಈ ಮೊದಲು ನಟಿ ರಮ್ಯಾಗೆ ಇದೇ ರೀತಿ ಕೆಟ್ಟ ಕಮೆಂಟ್ ಬಂದಿತ್ತು. ಈ ಎಲ್ಲ ಘಟನೆಗಳ ಬಗ್ಗೆ ನಟ ಶಿವರಾಜ್​ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಫ್ಯಾನ್ಸ್ ವಾರ್ ನಿಲ್ಲಿಸಬೇಕು. ಇದನ್ನು ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ಎಲ್ಲ ಅಭಿಮಾನಿಗಳಲ್ಲೂ ನಾನು ಕೇಳಿಕೊಳ್ಳುತ್ತೇನೆ. ಒಬ್ಬರಿಂದ ಇನ್ನೊಬ್ಬರಿಗೆ ಆ ಕಿಡಿ ಹಾರಬಾರದು. ಅದು ತುಂಬಾ ಅಪಾಯಕಾರಿ. ಅಂಥ ಕಮೆಂಟ್ ಮಾಡಿದರೆ ಪೊಲೀಸ್ ಕೇಸ್ ಆಗುತ್ತದೆ. ಯಾಕೆ ಇದೆಲ್ಲ. ಎಲ್ಲರಿಗೂ ಫ್ಯಾಮಿಲಿ ಇರುತ್ತದೆ. ಯಾವ ಹೆಣ್ಣಿನ ಬಗ್ಗೆ ಆದರೂ ಕೆಟ್ಟ ಕಮೆಂಟ್ ಮಾಡುವುದು ತಪ್ಪು. ಮಹಿಳೆಯರನ್ನು ಗೌರವಿಸಬೇಕು’ ಎಂದು ಶಿವರಾಜ್​​ಕುಮಾರ್ (Shivarajkumar) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಗ್ ಬಾಸ್ ಧರ್ಮ ಕೀರ್ತಿರಾಜ್ ನಟನೆಯ 25ನೇ ಸಿನಿಮಾ ‘ನಯನ ಮನೋಹರ’ – Kannada News | Dharma Keerthiraj starrer 25th Movie Nayana Manohara title and teaser launch

ನಟ ಧರ್ಮ ಕೀರ್ತಿರಾಜ್ (Dharma Keerthiraj) ಅವರು ಬಿಗ್ ಬಾಸ್ ಶೋ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು. ಹಲವು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಈಗ ಅವರು 25ನೇ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾಗೆ ‘ನಯನ ಮನೋಹರ’ (Nayana Manohara) ಎಂದು ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗೆ ಈ ಸಿನಿಮಾದ ಟೈಟಲ್ ಅನಾವರಣ ಆಯಿತು. ಜೊತೆಗೆ ಟೀಸರ್ ಕೂಡ ಬಿಡುಗಡೆ ಮಾಡಲಾಗಿದೆ. ಯುಬಿ ಸಿಟಿಯ ಮ್ಯಾರಿಯಟ್ ಅಪಾರ್ಟ್‌ಮೆಂಟ್ಸ್‌ನಲ್ಲಿ ಈ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಅನುಷ್ ಸಿದ್ದಪ್ಪ ಅವರು ‘ಎಕ್ಸ್ಕ್ವಿಸಿಟ್ ಎಂಟರ್‌ಟೈನ್‌ಮೆಂಟ್ಸ್’ ಮೂಲಕ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.

ಪುನೀತ್ ಕೆಜಿಆರ್ ಅವರು ‘ನಯನ ಮನೋಹರ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ತಮ್ಮದೇ ‘ಲಾಸ್ಟ್ ಬೆಂಚ್ ವಂಡರ್ಸ್ ಸಿನ್ಸ್ 1990’ ಎಂಬ ತಂಡದೊಂದಿಗೆ ಅವರು ಈ ಸಿನಿಮಾ ಮಾತ್ತಿದ್ದಾರೆ. ‘ಇದು ನಿಮ್ಮನ್ನು ನಿಮಗೆ ಪರಿಚಯಿಸುವ ಸುಂದರ ಕಾವ್ಯ’ ಎಂಬ ಟ್ಯಾಗ್​ಲೈನ್ ಈ ಸಿನಿಮಾಗೆ ಇದೆ. ಈ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಪ್ರಿಯಾಂಕಾ ಉಪೇಂದ್ರ ಹಾಗೂ ವಿನೋದ್ ಪ್ರಭಾಕರ್ ಅವರು ಅತಿಥಿಗಳಾಗಿ ಆಗಮಿಸಿದ್ದರು.

ವೇದಿಕೆಯಲ್ಲಿ ಧರ್ಮ ಕೀರ್ತಿರಾಜ್ ಅವರು ಮಾತನಾಡಿದರು. ‘ಅಪ್ಪ, ಅಮ್ಮ, ಅಕ್ಕ ಬಂದಿರುವುದು ನನಗೆ ಶಕ್ತಿ ತಂದಿದೆ. 25ನೇ ಸಿನಿಮಾ ಒಂದು ಮೈಲಿಗಲ್ಲು. ಮುಖ್ಯವಾದ ಹೀರೋ ಅಂದರೆ ನಿರ್ಮಾಪಕರು. ನನ್ನ ಅದೃಷ್ಟಕ್ಕೆ ಅವರೇ ಕಾರಣ. ನಿರ್ದೇಶಕರು ಕಥೆ ಹೇಳಿದಾಗ ಬಹಳ ಸಂತೋಷ ಆಯಿತು. 3 ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತೇನೆ’ ಎಂದು ಧರ್ಮ ಕೀರ್ತಿರಾಜ್ ಮಾಹಿತಿ ನೀಡಿದರು.

ವಾಸುಕಿ ವೈಭವ್ ಅವರು ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ನಿರ್ದೇಶಕ ಪುನೀತ್ ಕೆಜಿಆರ್ ಮಾತನಾಡಿ, ‘ಈ ಸಿನಿಮಾ ಧರ್ಮ ಕೀರ್ತಿರಾಜ್ ಅವರಿಗೆ ಗೆಲುವು ಕೊಡುತ್ತದೆ’ ಎಂದು ಆಶಾಭಾವನೆ ವ್ಯಕ್ತಪಡಿಸಿದರು. ನಾಯಕಿ ಯಾರು ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ನಿರ್ದೇಶಕರು ಹೇಳಿದ್ದಾರೆ. ಈ ಚಿತ್ರತಂಡಕ್ಕೆ ಪ್ರಿಯಾಂಕಾ ಉಪೇಂದ್ರ, ವಿನೋದ್ ಪ್ರಭಾಕರ್ ಶುಭ ಹಾರೈಸಿದರು.

ಇದನ್ನೂ ಓದಿ: ಟಾಲಿವುಡ್​ಗೆ ಧರ್ಮ ಕೀರ್ತಿರಾಜ್; ಅಪ್ಸರೆಯ ಜೊತೆ ಸಿನಿಮಾ

ಪ್ರಿಯಾಂಕಾ ಉಪೇಂದ್ರ ಮಾತನಾಡಿ, ‘ಸಿನಿಮಾ 100ನೇ ದಿನ ಪ್ರದರ್ಶನ ಕಂಡು ಇದೇ ಜಾಗದಲ್ಲಿ ಸಂಭ್ರಮಿಸೋಣ. ನಿರ್ಮಾಪಕರ ಅಭಿರುಚಿ ಏನು ಎಂಬುದು ತುಣುಕುಗಳಲ್ಲಿ ಕಂಡುಬಂದಿದೆ. ಟೀಸರ್‌ನಲ್ಲಿ ಇರುವಂತೆಯೇ ಸಿನಿಮಾ ಮಾಡಿ’ ಎಂದು ಸಲಹೆ ನೀಡಿದರು. ‘ಟೀಸರ್ ಚೆನ್ನಾಗಿ ಬಂದಿದೆ. ಉತ್ತಮ ಸಿನಿಮಾ ಇದಾಗಲಿದೆ ಅಂತ ಅನಿಸಿದೆ. ಪಾತ್ರದ ಪರಿಚಯ ಚೆನ್ನಾಗಿ ಮಾಡಿದ್ದೀರಿ’ ಎಂದು ವಿನೋದ್ ಪ್ರಭಾಕರ್ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Infra Achievements: 2025ರಲ್ಲಿ ಭಾರತದಲ್ಲಿ ಅದೆಷ್ಟು ಮೂಲಸೌಕರ್ಯ ಯೋಜನೆಗಳು, ಮೈಲಿಗಲ್ಲುಗಳು, ಮೊದಲುಗಳು – Kannada News | Building the New India: 2025 A Year of Infrastructure Breakthroughs

ಭಾರತದ ಅಭಿವೃದ್ಧಿ ಪಥದಲ್ಲಿ 2025 ಒಂದು ಪ್ರಮುಖ ಘಟ್ಟ ಎನಿಸಿದೆ. ರೈಲು, ರಸ್ತೆ, ಆಕಾಶ, ಸಮುದ್ರ, ಡಿಜಿಟಲ್, ಹೀಗೆ ಪ್ರತೀ ಆಯಾಮದಲ್ಲೂ ಭಾರತದ ಅಭಿವೃದ್ಧಿಯಲ್ಲಿ ಗಣನೀಯ ಪ್ರಗತಿ ಕಾಣತೊಡಗಿದೆ. ಕನೆಕ್ಟಿವಿಟಿ ದಟ್ಟಗೊಂಡಿತು, ಅಂತರಗಳು ತಗ್ಗಿದವು, ಆಶೋತ್ತರಗಳು ಗಟ್ಟಿಗೊಂಡವು. ಇನ್​ಫ್ರಾಸ್ಟ್ರಕ್ಚರ್​ಗಾಗಿ ಸರ್ಕಾರದ ಬಂಡವಾಳ ಹೂಡಿಕೆ ಮೊತ್ತವು 2025-26ರ ಹಣಕಾಸು ವರ್ಷದಲ್ಲಿ 11.21 ಲಕ್ಷ ಕೋಟಿ ರೂಗೆ ಏರಿದೆ. ಇದು ಜಿಡಿಪಿಯ ಶೇ. 3.1ರಷ್ಟಾಗಿದೆ. 2047ರವರೆಗೂ ಭಾರತದ ಜಿಡಿಪಿ ಪ್ರತೀ 12-18 ತಿಂಗಳಿಗೆ ಒಂದು ಟ್ರಿಲಿಯನ್ ಡಾಲರ್​ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಆರ್ಥಿಕ ಪ್ರಗತಿಗೆ ಇನ್​ಫ್ರಾಸ್ಟ್ರಕ್ಚರ್ (Infrastructure) ಎಂಬುದು ಮಲ್ಟಿಪ್ಲಯರ್ ಅಥವಾ ಗುಣಕವಾಗಿದೆ. ಇದರ ಪರಿಣಾಮವಾಗಿ, ಈ ವರ್ಷದಿಂದಲೇ ಫಲಿತಾಂಶ ಗೋಚರವಾಗತೊಡಗಿದೆ.

ಭಾರತದ ರೈಲ್ವೆ ಜಾಲಕ್ಕೆ ಮೊದಲ ಬಾರಿಗೆ ಸೇರ್ಪಡೆಯಾದ ಮಿಝೋರಾಂ

ಮಿಝೋರಾಮ್ ರಾಜ್ಯ ಮೊತ್ತಮೊದಲ ಬಾರಿಗೆ ರೈಲ್ವೆ ಜಾಲಕ್ಕೆ ಸೇರ್ಪಡೆಯಾಗುವ ಮೂಲಕ ಹೊಸ ಇತಿಹಾಸ ರಚನೆಯಾಗಿದೆ. ಈಶಾನ್ಯ ಭಾರತಕ್ಕೆ ಇದೊಂದು ಮೈಲಿಗಲ್ಲಾಗಿದೆ. 8,000 ಕೋಟಿ ರೂಗಿಂತ ಅಧಿಕ ವೆಚ್ಚದಲ್ಲಿ 51 ಕಿಮೀ ಬೈರಾಬಿ ಮತ್ತು ಸಾಯಿರಂಗ್ ರೈಲ್ವೆ ಮಾರ್ಗವನ್ನು ನಿರ್ಮಿಸಲಾಯಿತು. ಇದರೊಂದಿಗೆ, ಮಿಜೋರಾಮ್ ರಾಜ್ಯಕ್ಕೆ ಚೊಚ್ಚಲ ರೈಲು ಸಂಪರ್ಕ ಸಿಕ್ಕಂತಾಯಿತು.

ತುರ್ತು ಸೇವೆಗಳು, ಮಿಲಿಟರಿ ಸಾಗಣೆ, ನಾಗರಿಕ ಆರೋಗ್ಯ ಸಂಪರ್ಕ, ಶಿಕ್ಷಣ ಮತ್ತು ಉದ್ಯೋಗಾವಕಾಶ ಇವೆಲ್ಲವೂ ಒಂದು ರೈಲು ಮಾರ್ಗದಿಂದಾಗಿ ಮಿಜೋರಾಮ್ ಜನರಿಗೆ ಸಿಕ್ಕಂತಾಯಿತು. 2025ರ ಸೆಪ್ಟೆಂಬರ್ 14ರಂದು ಮೊದಲ ಸರಕು ಸಾಗಣೆ ರೈಲು ಓಡಿತು. ಅಸ್ಸಾಮ್​ನಿಂದ ಐಜ್ವಾಲ್​ಗೆ 21 ಸಿಮೆಂಟ್ ಬೋಗಿಗಳು ಹೋದವು. ಈಗ ಮಿಜೋರಾಮ್​ನ ಸ್ಥಳೀಯ ಕೃಷಿ ಉತ್ಪನ್ನಗಳಾದ ಬಿದಿರು, ಹಣ್ಣು, ತರಕಾರಿ, ವಿಶೇಷ ಬೆಳೆಗಳು ರಾಷ್ಟ್ರೀಯ ಮಾರುಕಟ್ಟೆಗಳನ್ನು ರೈಲು ಮೂಲಕ ಸರಾಗವಾಗಿ ತಲುಪಲು ಸಾಧ್ಯ.

ವಿಶ್ವದ ಅತಿ ಎತ್ತರದ ರೈಲು ಸೇತುವೆ

ಜಮ್ಮು ಕಾಶ್ಮೀರದಲ್ಲಿ ಉಧಮ್​ಪುರ್ ಶ್ರೀನಗರ್ ಬಾರಾಮುಲ್ಲಾ ರೈಲ್ ಲಿಂಕ್ ಪ್ರಾಜೆಕ್ಟ್ ಭಾಗವಾಗಿ ಚಿನಾಬ್ ಸೇತುವೆ ನಿರ್ಮಿಸಲಾಗಿದೆ. ಇದು ವಿಶ್ವದ ಅತಿ ಎತ್ತರದ ರೈಲ್ವೆ ಬ್ರಿಡ್ಜ್ ಎನಿಸಿದೆ. ಕಠಿಣ ಸ್ಥಳದಲ್ಲಿ ಈ ಸೇತುವೆ ನಿರ್ಮಿಸಿದ್ದು ಭಾರತದ ಎಂಜಿನಿಯರಿಂಗ್ ಪರಿಣಿತಿ ಬಗ್ಗೆ ವಿಶ್ವಾಸ ಮೂಡಿಸುತ್ತದೆ.

ಭಾರತದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆ

2025ರಲ್ಲಿ ಭಾರತದ ಎಂಜಿನಿಯರಿಂಗ್ ಪರಿಣಿತಿಗೆ ದ್ಯೋತಕವೆನಿಸಿದ್ದು ಪಂಬನ್ ಬ್ರಿಡ್ಜ್. ಇದು ಭಾರತದ ಮೊದಲ ವರ್ಟಿಲ್ ಲಿಫ್ಟ್ ಸಮುದ್ರ ಸೇತುವೆ ಎನಿಸಿದೆ. ಅಮೆರಿಕದ ಗೋಲ್ಡನ್ ಗೇಟ್ ಬ್ರಿಡ್ಜ್, ಲಂಡನ್​ನ ಟವರ್ ಬ್ರಿಡ್ಜ್, ಡೆನ್ಮಾರ್ಕ್​ನ ಒರೆಸುಂಡ್ ಬ್ರಿಡ್ಜ್​ಗಳ ಸಾಲಿಗೆ ಪಂಬನ್ ಸೇತುವೆ ಸೇರುತ್ತದೆ.

ಇದನ್ನೂ ಓದಿ: ಚೀನಾ ಹೇಳೋದು ಬೇರೆ, ವಾಸ್ತವ ಬೇರೆಯಾ? 2025ರಲ್ಲಿ ಚೀನಾ ಆರ್ಥಿಕ ಬೆಳವಣಿಗೆ ಶೇ 3 ಮಾತ್ರವಾ?

ಭಾರತದ ಮೊದಲ ಕಂಟೇನರ್ ಟ್ರಾನ್ಸ್​ಶಿಪ್​ಮೆಂಟ್ ಪೋರ್ಟ್

ಈ ವರ್ಷ (2025) ವಿಳಿಂಜಮ್ ಆಳಸಮುದ್ರ ಬಂದರನ್ನು ಉದ್ಘಾಟಿಸಲಾಯಿತು. ಇದು ಕಂಟೇನರ್​ಗಳ ಟ್ರಾನ್ಸ್​ಶಿಪ್​ಮೆಂಟ್ ಪೋರ್ಟ್ ಆಗಿದೆ. ಅಂದರೆ, ಹಡಗುಗಳಿಂದ ಹಡಗುಗಳಿಗೆ ಕಂಟೇನರ್​ಗಳನ್ನು ವರ್ಗಾಯಿಸುವ ಪೋರ್ಟ್. ಇದಕ್ಕೆಂದೇ ಮುಡಿಪಾದ ಇಂಥದ್ದೊಂದು ಬಂದರು ಭಾರತದಲ್ಲಿ ಇದೇ ಮೊದಲ ಬಾರಿಗೆ ಸ್ಥಾಪನೆಯಾಗಿದೆ.

ಬಿಹಾರದಲ್ಲಿ ಮೊತ್ತ ಮೊದಲ ವಂದೇ ಮೆಟ್ರೋ

ಬಿಹಾರದಲ್ಲಿ ನಮೋ ಭಾರತ್ ರಾಪಿಡ್ ರೈಲ್ ಎಂದು ಹೆಸರಾದ ವಂದೇ ಮೆಟ್ರೋವನ್ನು ಆರಂಭಿಸಲಾಗಿದೆ. ಜಯನಗರದಿಂದ ಪಟ್ನಾಗೆ ಈ ರೈಲು ಸಂಪರ್ಕಿಸುತ್ತದೆ. ಪೂರ್ಣ ಎಸಿ ಕೋಚ್​ಗಳಿರುವ ಈ ಟ್ರೈನು ಜಯನಗರದಿಂದ ಪಾಟ್ನಾಗೆ ಕೇವಲ ಐದೂವರೆ ಗಂಟೆಯಲ್ಲಿ ತಲುಪುತ್ತದೆ.

ಜಮ್ಮು ಕಾಶ್ಮೀರದಲ್ಲಿ ಝಡ್ ಮೋರ್ ಸುರಂಗ

ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರ್ಷ ಪ್ರಧಾನಿಗಳು ಝಡ್-ಮೋರ್ (Z-Morh) ಸುರಂಗವನ್ನು ಉದ್ಘಾಟಿಸಿದ್ದಾರೆ. ಸೋನಾಮಾರ್ಗ್​ಗೆ ಇದು ಸರ್ವಋತುವಿನಲ್ಲೂ ಸಂಪರ್ಕವನ್ನು ಖಚಿತಪಡಿಸುತ್ತದೆ. ಲಡಾಖ್ ಪ್ರದೇಶದ ಭದ್ರತೆಗೂ ಈ ಸುರಂಗ ಸಹಕಾರಿಯಾಗುತ್ತದೆ.

ಶ್ರೀನಗರ್-ಲೇಹ್ ಹೆದ್ದಾರಿಯಲ್ಲಿ ಕೆಲವೆಡೆ ಹಿಮಪಾತದ ಪ್ರದೇಶಗಳಿವೆ. ಅವುಗಳನ್ನು ತಪ್ಪಿಸಿ ಸಾಗಿ ಹೋಗಲು ಈ ಸುರಂಗ ಮಾರ್ಗ ಸಹಕಾರಿಯಾಗುತ್ತದೆ.

ಜಮ್ಮುವಿನಿಂದ ಶ್ರೀನಗರಕ್ಕೆ ಮೊದಲ ಬಾರಿಗೆ ನೇರ ರೈಲು ಸಂಪರ್ಕ

ಜಮ್ಮು ಕಾಶ್ಮೀರದಲ್ಲಿ ಈ ವರ್ಷ ಪ್ರಧಾನಗಳು ವಂದೇ ಭಾರತ್ ಎಕ್ಸ್​ಪ್ರೆಸ್ ಟ್ರೈನ್ ಅನ್ನು ಉದ್ಘಾಟನೆ ಮಾಡಿದ್ದಾರೆ. ಜಮ್ಮು ಮತ್ತು ಶ್ರೀನಗರ ಮಧ್ಯೆ ಇದೇ ಮೊದಲ ಬಾರಿಗೆ ನೇರ ರೈಲು ಸಂಪರ್ಕ ಸಿಕ್ಕಂತಾಗಿದೆ.

ಡೆಲ್ಲಿ ಮೀರತ್ ರಾಪಿಡ್ ಟ್ರಾನ್ಸಿಟ್ ಸಿಸ್ಟಂ

ದೆಹಲಿ ಮತ್ತು ಮೀರತ್ ನಡುವಿನ ರೀಜನಲ್ ರಾಪಿಡ್ ಟ್ರಾನ್ಸಿಟ್ ಸಿಸ್ಟಂ (ವೇಗದ ರೈಲು) ಪೂರ್ಣವಾಗಿ ಸಿದ್ಧವಾಗಿದೆ. ಈ ವರ್ಷ ಇದರ ಫೈನಲ್ ಸೆಕ್ಷನ್ ಉದ್ಘಾಟನೆಗೊಂಡಿತು. ದೆಹಲಿಯ ಸರಾಯ್ ಕಾಲೆ ಖಾನ್ ಸ್ಟೇಷನ್​ನಿಂದ ಮೀರತ್​ನ ಮೋದಿಪುರಂ ಸ್ಟೇಷನ್​ವರೆಗೂ 82 ಕಿಮೀ ಉದ್ದದ ರೈಲು ಮಾರ್ಗ ಇದು. ಈ ಮಾರ್ಗದಲ್ಲಿ ರೈಲು ಗಂಟೆಗೆ 180 ಕಿಮೀ ವೇಗದಲ್ಲಿ ಸಂಚರಿಸಲು ಸಾಧ್ಯವಾಗುತ್ತದೆ.

ನವಿ ಮುಂಬೈ ಇಂಟರ್ನ್ಯಾಷನಲ್ ಏರ್​ಪೋರ್ಟ್

ಮುಂಬೈ ಸಮೀಪ ಎರಡನೇ ಏರ್​ಪೋರ್ಟ್ ನಿರ್ಮಾಣವಾಗುತ್ತಿದೆ. ನವಿ ಮುಂಬೈ ಇಂಟರ್​ನ್ಯಾಷನಲ್ ಏರ್​ಪೋರ್ಟ್​ನ ಮೊದಲ ಹಂತದ ಉದ್ಘಾಟನೆಯಾಗಿದೆ. ಇದರೊಂದಿಗೆ, ಮುಂಬೈನ ಈಗಿರುವ ಏರ್ಪೋರ್ಟ್ ಮೇಲಿನ ಒತ್ತಡ ಕಡಿಮೆ ಆಗಲಿದೆ.

ನೌಕಾ ಮೂಲಸೌಕರ್ಯಕ್ಕೆ ದೊಡ್ಡ ವರ್ಷ 2025

ಈ ವರ್ಷವು ನೇವಲ್ ಇನ್ಫ್ರಾಸ್ಟ್ರಕ್ಚರ್​ಗೆ ಗುರುತಾಗುವಂಥ ವರ್ಷ. ಆಗಸ್ಟ್ ತಿಂಗಳಲ್ಲಿ ಐಎನ್​ಎಸ್ ಹಿಮಗಿರಿ ಮತ್ತು ಐಎನ್​ಎಸ್ ಉದಯಗಿರಿ ಎನ್ನುವ ಎರಡು ಸ್ಟೀಲ್ತ್ ಫ್ರಿಗೇಟ್​ಗಳನ್ನು ನೌಕಾಪಡೆ ಬತ್ತಳಿಕೆಗೆ ಸೇರಿಸಲಾಯಿತು.

ಇದನ್ನೂ ಓದಿ: ಬರಲಿವೆ ಹೊಸ ಏರ್ಲೈನ್ಸ್; ಶಂಖ್ ಏರ್ ಆಯ್ತು, ಈಗ ಅಲ್ ಹಿಂದ್ ಏರ್ ಮತ್ತು ಫ್ಲೈ ಎಕ್ಸ್​ಪ್ರೆಸ್​ಗೂ ಸಿಕ್ಕಿತು ಎನ್​ಒಸಿ

ಬೆಂಗಳೂರಿನಲ್ಲಿ ನಮ್ಮ ಮೆಟ್ರೋದ ಯೆಲ್ಲೋ ಲೈನ್ ಸರ್ವಿಸ್

ಬೆಂಗಳೂರಿನ ನಮ್ಮ ಮೆಟ್ರೋದ ಯೆಲ್ಲೋ ಲೈನ್ ಉದ್ಘಾಟನೆ ಮಾಡಲಾಯಿತು. ಆರ್​ವಿ ರೋಡ್ ಮೆಟ್ರೋ ಸ್ಟೇಷನ್​ನಿಂದ ಎಲೆಕ್ಟ್ರಾನಿಕ್ಸ್ ಸಿಟಿವರೆಗೆ ಈ ಮಾರ್ಗ ಇದೆ.

17 ಕುಗ್ರಾಮಗಳಿಗೆ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ

2025ರ ಮೇ ತಿಂಗಳಲ್ಲಿ ಛತ್ತೀಸ್​ಗಡದ ಮನಪುರ್ ಅಂಬಾಗಡ್ ಚೌಕಿ ಜಿಲ್ಲೆಯ 17 ಕುಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕೊಡಲಾಯಿತು. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದ ಬಳಿಕ ಮೊದಲ ಬಾರಿಗೆ ಈ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಸಿಕ್ಕಿರುವುದು.

ಮಹಾರಾಷ್ಟ್ರದ ಈ ಗ್ರಾಮಕ್ಕೆ ಮೊದಲ ಬಸ್ ಸಂಪರ್ಕ

ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯಲ್ಲಿರುವ ನಕ್ಸಲ್ ಪೀಡಿತ ಕಾಟೆಜಾರಿ ಎಂಬ ಗ್ರಾಮಕ್ಕೆ ಬಸ್ ಸಂಪರ್ಕ ಕೊಡಲಾಯಿತು. ಈ ಗ್ರಾಮಕ್ಕೆ ಬಸ್ ಹೋಗುತ್ತಿರುವುದು ಇದೇ ಮೊದಲು.

ಕೊಂಡಪಲ್ಲಿಯಲ್ಲಿ ಮೊಬೈಲ್ ನೆಟ್ವರ್ಕ್

ಛತ್ತೀಸ್​ಗಡದ ನಕ್ಸಲ್ ಪೀಡಿತ ಬಿಜಾಪುರ್ ಜಿಲ್ಲೆಯ ಕೊಂಡಪಲ್ಲಿ ಗ್ರಾಮದಲ್ಲಿ ಮೊತ್ತಮೊದಲ ಮೊಬೈಲ್ ಟವರ್ ಸ್ಥಾಪಿಸಲಾಗಿದೆ. ಇದೇ ಡಿಸೆಂಬರ್ ತಿಂಗಳಲ್ಲಿ ಇದಾಗಿದ್ದು.

ಇದನ್ನೂ ಓದಿ: ಚಂಡಮಾರುತದಿಂದ ನಲುಗಿದ ಶ್ರೀಲಂಕಾಕ್ಕೆ 4,000 ಕೋಟಿ ರೂ. ಆರ್ಥಿಕ ಪ್ಯಾಕೇಜ್ ಘೋಷಿಸಿದ ಭಾರತ

ದೇಶದಲ್ಲಿವೆ 160ಕ್ಕೂ ಅಧಿಕ ವಿಮಾನ ನಿಲ್ದಾಣಗಳು

ಭಾರತದಲ್ಲಿ ಏರ್​ಪೋರ್ಟ್​ಗಳ ಸಂಖ್ಯೆ 2014ರಲ್ಲಿ 74 ಇತ್ತು. 2025ರಲ್ಲಿ ಅದು 163ಕ್ಕೆ ಏರಿದೆ. ಈ ಮಧ್ಯೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ದೇಶೀಯ ವೈಮಾನಿಕ ಮಾರುಕಟ್ಟೆ ಎನಿಸಿದೆ.

ಶೇ. 99ರಷ್ಟು ರೈಲ್ವೆ ವಿದ್ಯುದೀಕರಣ

ಭಾರತೀಯ ರೈಲ್ವೇಸ್ ಸಂಸ್ಥೆಯು ತನ್ನ ಶೇ. 99ರಷ್ಟು ಬ್ರಾಡ್ ಗೇಜ್ ನೆಟ್ವರ್ಕ್ ಅನ್ನು ವಿದ್ಯುದೀಕರಿಸಿದೆ. 2026ಕ್ಕೆ ನೂರಕ್ಕೆ ನೂರು ಎಲೆಕ್ಟ್ರಿಫಿಕೇಶನ್ ಆಗುವ ನಿರೀಕ್ಷೆ ಇದೆ.

ಮೂರನೇ ಅತಿದೊಡ್ಡ ಮೆಟ್ರೋ ಜಾಲ

ಭಾರತದ ಮೆಟ್ರೋ ಜಾಲ 2014ರಲ್ಲಿ 248 ಕಿಮೀ ಇತ್ತು. 2025ರಲ್ಲಿ ಇದು 1,015 ಕಿಮೀಗೆ ಹೆಚ್ಚಿದೆ. ಚೀನಾ, ಅಮೆರಿಕ ನಂತರ ಭಾರತವೇ ಅತಿದೊಡ್ಡ ಮೆಟ್ರೋ ನೆಟ್ವರ್ಕ್ ಹೊಂದಿರುವುದು.

ರಸ್ತೆ ಮತ್ತು ಹೆದ್ದಾರಿ ಮೈಲಿಗಲ್ಲುಗಳು

ದೇಶದ ರಾಷ್ಟ್ರೀಯ ಹೆದ್ದಾರಿಗಳ ಉದ್ದ ಗಣನೀಯವಾಗಿ ಹೆಚ್ಚಿದೆ. 2019ರಲ್ಲಿ 1,32,499 ಕಿಮೀ ಇತ್ತು. ಈಗ ಅದು 1,46,560 ಕಿಮೀಗೆ ಹೆಚ್ಚಿದೆ. ಚತುಷ್ಪಥ ಹಾಗೂ ಇನ್ನೂ ವಿಸ್ತಾರದ ಹೆದ್ದಾರಿ ಜಾಲವು 2019ರಲ್ಲಿ 31,066 ಕಿಮೀ ಇತ್ತು. ಈಗ 43,512 ಕಿಮೀಗೆ ಹೆಚ್ಚಿದೆ. ಆರು ವರ್ಷದಲ್ಲಿ ಬಹುತೇಕ ಒಂದೂವರೆ ಪಟ್ಟು ಹೆಚ್ಚಿದೆ.

(ಮಾಹಿತಿ ಕೃಪೆ: ಪಿಐಬಿ ಪ್ರಕಟಣೆಗಳು)

Source link

ಶಕ್ತಿ ಯೋಜನೆಯೇ ಬಂಡವಾಳ, ಮಹಿಳೆಯರೇ ಟಾರ್ಗೆಟ್​​: ಕಳ್ಳಿಯರ ಗ್ಯಾಂಗ್​​ ಭೇದಿಸಿದ ಖಾಕಿ – Kannada News | Shakti Yojana Misused: Women’s Jewelry Theft Gang Arrested in Kalaburagi

ಕಲಬುರಗಿ, ಡಿಸೆಂಬರ್​​ 25: ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸಾರಿಗೆಯೆ ಸಾಮಾನ್ಯ ಬಸ್​​ಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆಯನ್ನು ಸರ್ಕಾರ ಶಕ್ತಿ ಯೋಜನೆಯಡಿ  ಕಲ್ಪಿಸಿದೆ. ಆದ್ರೆ ಇದೇ ಫ್ರೀ ಬಸ್​​ ಸ್ಕೀಂನ ಬಂಡವಾಳ ಮಾಡಿಕೊಂಡು ಮಹಿಳಾ ಪ್ರಯಾಣಿಕರ ಆಭರಣಗಳನ್ನು ಕದಿಯುತ್ತಿದ್ದ ಖತರ್ನಾಕ್​​ ಲೇಡಿ​​ ಗ್ಯಾಂಗ್​​ ಒಂದನ್ನು ಕಲಬುರಗಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ ನಗರದ ಮಾಂಗರವಾಡಿ ಬಡಾವಣೆಯ ನಿವಾಸಿಗಳಾದ ಚಿಮನ್ ಕಾಂಬಳೆ, ಶಕೀಲಾಬಾಯಿ ಉಪಾಧ್ಯಾ ಮತ್ತು‌ ಮಾಧುರಿ ಬಂಧಿತ ಆರೋಪಿಗಳಾಗಿದ್ದಾರೆ. ಕಳ್ಳತನವನ್ನೇ ಇವರು ವೃತ್ತಿ ಮಾಡಿಕೊಂಡಿದ್ದು, ರಾಜ್ಯ ಸರ್ಕಾರದ ಶಕ್ತಿ ಯೋಜನೆಯನ್ನ ಇದಕ್ಕಾಗಿ ಇವರು ಬಂಡವಾಳ ಮಾಡಿಕೊಂಡಿದ್ದರು. ಕಲಬುರಗಿ ನಗರದಿಂದ ಜಿಲ್ಲೆಯ ಸೇಡಂ, ಶಹಾಬಾದ್ ಸೇರಿ ಹಲವೆಡೆ ಉಚಿತ ಪ್ರಯಾಣ ಮಾಡಿ ಕಳ್ಳತನ ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಇದನ್ನೂ ಓದಿ: ಬಸ್​​ನಲ್ಲಿದ್ದ 55 ಲಕ್ಷ ಕಳವು; ಸಿನೆಮಾ ಸ್ಟೈಲ್​ನಲ್ಲಿ ಆರೋಪಿ ಅರೆಸ್ಟ್​​

ಬಸ್ ನಿಲ್ದಾಣಗಳಲ್ಲಿ ಓಡಾಡಿಕೊಂಡು ಚಿನ್ನಾಭರಣ ಧರಿಸಿದ್ದ ಮಹಿಳಾ ಪ್ರಯಾಣಿಕರನ್ನ ಮೊದಲು ಈ ಗ್ಯಾಂಗ್​​ ಗಮನಿಸುತ್ತಿತ್ತು. ಆ ಬಳಿಕ ಮಹಿಳಾ ಪ್ರಯಾಣಿಕರು ಬಸ್ ಹತ್ತುವ ವೇಳೆ ಎಂಟ್ರಿ ಕೊಡ್ತಿದ್ದ ಇವರು, ಅವರನ್ನು ಸುತ್ತುವರಿಯುತ್ತಿದ್ದರು.  ಗಮನ ಬೆರೆಡೆ ಸೆಳೆದು ಚಿನ್ನದ ನೆಕ್ಲೇಸ್​​, ಪದಕ, ಉಂಗುರ, ಕಿವಿ ಓಲೆ, ಮಾಂಗಲ್ಯ ಸರಗಳನ್ನು ಕ್ಷಣಾರ್ಧದಲ್ಲಿ ಕಟ್ ಮಾಡಿ ಯಾರಿಗೂ ಅನುಮಾನ ಬಾರದಂತೆ ಎಸ್ಕೇಪ್​​ ಆಗುತ್ತಿದ್ದರು ಎನ್ನಲಾಗಿದೆ. ಹಲವು ತಿಂಗಳಿಂದ ಮಹಿಳಾ ಪ್ರಯಾಣಿಕರ ನಿದ್ದೆಗೆಡಿಸಿದ್ದ ಈ ಮೂವರು ಸರಗಳ್ಳಿಯರನ್ನು ಕೊನೆಗೂ ಖಾಕಿ ಹೆಡೆಮುರಿ ಕಟ್ಟಿದೆ.

ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದ ಆರೋಪಿಗಳ ಚಲನವಲನಗಳನ್ನು ಆಧರಿಸಿ ಪೊಲೀಸರು ಗ್ಯಾಂಗ್​​ ಭೇದಿಸಿದ್ದಾರೆ. ಇವರ ವಿರುದ್ಧ ಸೇಡಂ ಹಾಗೂ ಶಹಾಬಾದ್ ಠಾಣೆಯಲ್ಲಿ ಒಟ್ಟು ಮೂರು ಸರಗಳ್ಳತನ ಪ್ರಕರಣಗಳು ದಾಖಲಾಗಿದ್ದವು. ಬಂಧಿತರಿಂದ ಬರೋಬ್ಬರಿ 14 ಲಕ್ಷ ಮೌಲ್ಯದ 110 ಗ್ರಾಂ ಚಿನ್ನದ ಆಭರಣಗಳು, ನಗದು ಮತ್ತು ಕೃತ್ಯಕ್ಕೆ ಬಳಸಿದ್ದ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕರ್ನಾಟಕದಲ್ಲಿ ಸಾಲು ಸಾಲು ಅಗ್ನಿ ದುರಂತ: ಬೆಳೆ ರಕ್ಷಿಸಿಕೊಳ್ಳಲು ಹೋಗಿ ರೈತ ಸಜೀವದಹನ – Kannada News | Fire Incident Today In Karnataka: Farmer dies who try to rescue palm oil crop from fire at Davanagere

ದಾವಣಗೆರೆ, (ಡಿಸೆಂಬರ್ 25): ಚಿತ್ರದುರ್ಗ  (Chitradruga) ಜಿಲ್ಲೆ ಹಿರಿಯೂರಿನ ಗೊರ್ಲತ್ತು ಕ್ರಾಸ್​​​ಬಳಿ ಬಸ್ ಅಗ್ನಿ ದುರಂತದಲ್ಲಿ ಆರು ಜನ ಸಾವನ್ನಪ್ಪಿದ್ದಾರೆ. ಬೆಂಗಳೂರಿನಿಂದ ಗೋಕರ್ಣಕ್ಕೆ 32 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಸೀಬರ್ಡ್ ಖಾಸಗಿ ಬಸ್​​ಗೆ ಲಾರಿ ಡಿವೈಡರ್ ಹಾರಿ ಬಂದು ಗುದ್ದಿದೆ. ಇದರಿಂದ ಬಸ್ ಹೊತ್ತಿ ಉರಿದಿದ್ದು, ಆರು ಜನ ಸುಟ್ಟು ಕರಕಲಾಗಿದ್ದಾರೆ. ಈ ಘಟನೆ ಇಡೀ ಕರ್ನಾಟಕವೇ (Karnataka) ಮಮ್ಮಲ ಮರುಗಿದೆ. ಇದರ ನಡುವೆ ದಾವಣಗೆರೆಯಲ್ಲಿ (Davanagere) ಅಗ್ನಿ ದುರಂತ ಸಂಭವಿಸಿದ್ದು, ತಾನು ಬೆಳೆದಿದ್ದ ತಾಳೆ ಬೆಳೆಯನ್ನು ರಕ್ಷಣೆ ಮಾಡಲು ಹೋಗಿ ರೈತ ಸಜೀವ ದಹನವಾಗಿರುವ ಘಟನೆ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಕುರುವ ಗ್ರಾಮದಲ್ಲಿ ನಡೆದಿದೆ,

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕುರುವ ಗ್ರಾಮದ ಈಶ್ವರಪ್ಪ (75) ಎನ್ನುವರ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ತಾಳೆ ಮರ ಬೆಳೆಯಲಾಗಿದ್ದು, ಅದ್ಗೇಗೆ ಏನೋ ಏಕಾಏಕಿ ತಾಳಿ ಮರಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಗಾಬರಿಗೊಂಡ ರೈತ ರೈತ ಈಶ್ವರಪ್ಪ ತಾನು ಹಾಕಿದ್ದ ತಾಳೆ ಉಳಿಸಲುಕೊಳ್ಳಲು ಮುಂದಾಗಿದ್ದಾನೆ. ಆದ್ರೆ, ದುರ್ವೈವ ಬೆಂಕಿಯಲ್ಲಿ ತಾಳೆ ಜೊತೆ ರೈತ ಈಶ್ವರಪ್ಪ ಸಹ ಸಜೀವದಹನವಾಗಿದ್ದಾರೆ.

ಇದನ್ನೂ ಓದಿ: Chitradurga Bus Accident: ಮದುವೆಗೂ ಮುನ್ನ ಮಸಣ ಸೇರಿದ ಯುವತಿ; ತಾಯಿ-ಮಗಳು ಅಗ್ನಿಗೆ ಆಹುತಿ

ಶಾರ್ಟ್ ಸರ್ಕ್ಯೂಟ್ ಸುಟ್ಟು ಕರಕಲಾದ ಮನೆ

ಯಾದಗಿರಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಯೊಂದು ಸುಟ್ಟು ಕರಕಲಾಗಿರುವ ಘಟನೆ ಇಂದು (ಡಿಸೆಂಬರ್ 25) ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಐಕೂರು ಗ್ರಾಮದಲ್ಲಿ ನಡೆದಿದೆ. ಎಲ್ಲರೂ ಕೆಲಸಕ್ಕೆ ಹೋದಾಗ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮಹೆಬೂಬ್ ಎನ್ನುವವರಿಗೆ ಸೇರಿದ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು, ನೋಡು ನೋಡುತ್ತಿದ್ದಂತೆಯೇ ಬೆಂಕಿಯ ಜ್ವಾಲೆ ಮನೆಯಲ್ಲ ವಾಪಿಸಿಕೊಂಡಿದೆ. ಪರಿಣಾಮ ಮನೆಯಲ್ಲಿದ್ದ 2 ಲಕ್ಷ ನಗದು ಹಾಗೂ 30 ಗ್ರಾಂ ಚಿನ್ನ ಸುಟ್ಟು ಕರಲಾಗಿದೆ.

ಪಾಪ ರೈತ ಮಹೆಬೂಬ್ ಅವರು ಹತ್ತಿ ಮಾರಾಟ ಮಾಡಿ ಹಣವನ್ನು ತಂದು ಮನೆಯಲ್ಲಿಟ್ಟಿದ್ದ. ಆದ್ರೆ, ಬೆಂಕಿಯಲ್ಲಿ ಸುಟ್ಟು ಹೋಗಿದೆ. ಜೊತೆಗೆ ದಿನಸಿ ಹಾಗೂ ದಿನ ಬಳಕೆ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಶಾಮಕದಳ ತಂಡ ದೌಡಾಯಿಸಿ ಬೆಂಕಿ ನಂದಿಸಿದರು.

ರಾಗಿ ಮೆದೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು

ರಾಮನಗರ: ಇನ್ನೊಂದೆಡೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಜಯಪುರ ಗೇಟ್​ ಬಳಿ ಅಗ್ನಿ ಅವಘಡ ಸಂಭವಿಸಿದೆ. ಕಿಡಿಗಡಿಗಳು ಬೇಕಂತಲೇ ರಾಗಿ ಮೆದೆಗೆ ಬೆಂಕಿ ಇಟ್ಟು ಪರಾರಿಯಾಗಿದ್ದಾರೆ. ಇದರಿಂದ ಒಕ್ಕಣೆ ಮಾಡಲು ಹಾಕಲಾಗಿದ್ದ ರಾಗಿ ಮೆದೆ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿ ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು.

ಹೀಗೆ ಕರ್ನಾಟಕದದ ನಾನಾ ಭಾಗದಲ್ಲಿ ಸಾಲು ಸಾಲು ಅಗ್ನಿ ಅವಘಡಗಳು ಸಂಭವಿಸುತ್ತಿವೆ. ಇದರಿಂದ ಸಾರ್ವಜನಿಕರು ಎಚ್ಚರದಿಂದ ಇರುವುದು ಒಳಿತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಜೈಲಲ್ಲಿದ್ದುಕೊಂಡೇ ಜಾಕ್ವೆಲಿನ್​​ಗೆ ಮನೆ ಉಡುಗೊರೆ ಕೊಟ್ಟ ಸುಖೇಶ್? – Kannada News | Sukhesh claims he gifted Jacqueline Fernandez a house in Beverly Hills

ಸುಖೇಶ್ ಚಂದ್ರಶೇಖರ್ (Sukhesh Chandrashekhar), ಭಾರತದ ನಂಬರ್ ಕಾನ್​ಮ್ಯಾನ್ (ಮೋಸಗಾರ) ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾನೆ. ದೇಶದ ಕೆಲವು ಪ್ರಮುಖ ರಾಜಕಾರಣಿಗಳು, ವಿಐಪಿ ವ್ಯಕ್ತಿಗಳು, ಖ್ಯಾತ ಉದ್ಯಮಿಗಳು, ಚಿತ್ರರಂಗದ ಕೆಲವರಿಗೆ ಸಹ ಮೋಸ ಮಾಡಿ ನೂರಾರು ಕೋಟಿ ರೂಪಾಯಿ ಹಣ ಗಳಿಸಿದ್ದಾನೆ ಈ ಆಸಾಮಿ. ಬಾಲಿವುಡ್​​ ನಟಿಯರ ಮೇಲೆ ವಿಶೇಷ ಮೋಹ ಹೊಂದಿದ್ದ ಸುಖೇಶ್, ತನ್ನ ಮೋಸದ ಹಣದ ನೆರವಿನಿಂದ ಹಲವು ನಟಿಯರಿಗೆ ಕೋಟ್ಯಂತರ ಮೌಲ್ಯದ ಉಡುಗೊರೆಗಳನ್ನು ನೀಡುತ್ತಿದ್ದ. ಜಾಕ್ವೆಲಿನ್ ಫರ್ನಾಂಡೀಸ್​ ಅನ್ನು ಗರ್ಲ್​​ಫ್ರೆಂಡ್ ಸಹ ಮಾಡಿಕೊಂಡಿದ್ದ. ಇದೀಗ ಈತ ಜೈಲಿನಲ್ಲಿದ್ದು, ಜೈಲಿನಲ್ಲಿದ್ದುಕೊಂಡೇ ತಾನು ಜಾಕ್ವೆಲಿನ್ ಫರ್ನಾಂಡೀಸ್​​ಗೆ ದುಬಾರಿ ಉಡುಗೊರೆ ಕೊಟ್ಟಿರುವುದಾಗಿ ಹೇಳಿಕೊಂಡಿದ್ದಾನೆ.

ವಿಶ್ವದ ಟಾಪ್ ಶ್ರೀಮಂತರು, ಹಾಲಿವುಡ್​ ಸೂಪರ್ ಸ್ಟಾರ್​​ಗಳು ನೆಲೆಸಿರುವ ಅಮೆರಿಕದ ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್​​ನಲ್ಲಿ ತಾವು ಜಾಕ್ವೆಲಿನ್​​ಗೆ ದುಬಾರಿ ಮನೆಯೊಂದನ್ನು ಕ್ರಿಸ್​​ಮಸ್ ಉಡುಗೊರೆಯಾಗಿ ನೀಡಿರುವುದಾಗಿ ಸುಖೇಶ್ ಹೇಳಿಕೊಂಡಿದ್ದಾನೆ. ಜೈಲಿಂದ ಪತ್ರ ಬರೆದಿರುವ ಸುಖೇಶ್, ಜಾಕ್ವೆಲಿನ್​​ಗೆ ಲವ್ ನೆಸ್ಟ್ (ಪ್ರೀತಿಯ ಗೂಡು) ನೀಡಿರುವುದಾಗಿ ಹೇಳಿಕೊಂಡಿದ್ದಾನೆ.

‘ನಿನಗಾಗಿ ನಾನು ಖರೀದಿಸಿದ್ದ ದುಬಾರಿ ಪ್ರಾಪರ್ಟಿ, ಈ ಮನೆ ನಿರ್ಮಾಣ ಪೂರ್ಣ ಆಗುವುದಿಲ್ಲ ಎಂದು ನೀನು ಅಂದುಕೊಂಡಿದ್ದ ಅದೇ ಪ್ರಾಪರ್ಟಿ ಇದೀಗ ಕಾಮಗಾರಿ ಪೂರ್ಣಗೊಂಡಿದೆ. ಇದು ನಮ್ಮ ಮನೆ ಆಗಲಿದೆ. ಇದನ್ನು ಈ ಕ್ರಿಸ್​​ಮಸ್​​ಗೆ ನಿನಗಾಗಿ ಉಡುಗೊರೆ ನೀಡುತ್ತಿದ್ದೇನೆ’ ಎಂದು ಸುಖೇಶ್ ಚಂದ್ರಶೇಖರ್ ಪತ್ರದಲ್ಲಿ ಹೇಳಿದ್ದಾನೆ. ‘ಈ ಮೊದಲು ನಾವು ಯೋಜನೆ ಹಾಕಿದ್ದಕ್ಕಿಂತಲೂ ದೊಡ್ಡದಾಗಿದೆ ನಮ್ಮ ಈ ಪ್ರಾಪರ್ಟಿ. ನಮ್ಮ ಈ ಹೊಸ ಮನೆಯ ಸುತ್ತ ದೊಡ್ಡ ಗಾಲ್ಫ್ ಕೋರ್ಸ್ ಸಹ ಇದೆ’ ಎಂದಿದ್ದಾನೆ.

ಇದನ್ನೂ ಓದಿ:ಮಹಾ ವಂಚಕ ಸುಖೇಶ್ ಕುರಿತ ಡಾಕ್ಯುಮೆಂಟರಿ, ನಟಿಯಿಂದ ತಕರಾರು?

‘ನಿನ್ನ ಮತ್ತೊಂದು ಆಸೆಯನ್ನು ಪೂರೈಸುವ ಪ್ರಯತ್ನದಲ್ಲಿ ನಾನು ಇದ್ದೀನೆ. ಒಂದು ಐಪಿಎಲ್ ತಂಡದ ಒಡತಿ ಆಗಬೇಕು ಎಂಬುದು ನಿನ್ನ ಆಸೆ ಆಗಿತ್ತು. ನಾನು ಅದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಆದಷ್ಟು ಬೇಗ ಆ ಸರ್ಪ್ರೈಸ್ ಅನ್ನು ಸಹ ನಾನು ನಿನಗೆ ನೀಡಲಿದ್ದೇನೆ’ ಎಂದಿದ್ದಾನೆ ಸುಖೇಶ್.

ಆದರೆ ಸುಖೇಶ್ ಬರೆದಿರುವ ವಿಷಯಗಳು ಸತ್ಯವೊ, ಸುಳ್ಳೊ ತಿಳಿಯದು. ಸುಖೇಶ್​​ಗೆ ಸೇರಿದ ಆಸ್ತಿ, ಕಾರುಗಳು ಬ್ಯಾಂಕ್ ಖಾತೆಗಳನ್ನು ಪೊಲೀಸರು ಈಗಾಗಲೇ ವಶಪಡಿಸಿಕೊಂಡಿದ್ದಾರೆ. ಸುಖೇಶ್​​ಗೆ ಈ ಹಿಂದೆ ಜೈಲಿನಲ್ಲಿ ನೀಡಲಾಗಿದ್ದ ಎಲ್ಲ ವಿಶೇಷ ಸವಲತ್ತುಗಳನ್ನು ರದ್ದು ಮಾಡಲಾಗಿದೆ. ಆದರೆ ಅದು ಹೇಗೆ ಈತ ಜೈಲಿನಲ್ಲಿದ್ದುಕೊಂಡು ಬೆವರ್ಲಿ ಹಿಲ್​​ನಲ್ಲಿ ಮನೆ ಕಟ್ಟಿಸಿದ ಎಂಬುದು ಅನುಮಾನ.

ಸುಖೇಶ್, ಹಲವು ವರ್ಷಗಳಿಂದ ಜೈಲಿನಲ್ಲಿದ್ದಾನೆ. ಆದರೆ ಜೈಲಿನಲ್ಲಿದ್ದುಕೊಂಡೇ ಹಲವು ವಿಐಪಿಗಳಿಗೆ ಮೋಸ ಮಾಡಿ ನೂರಾರು ಕೋಟಿ ರೂಪಾಯಿ ಹಣ ಗಳಿಕೆ ಮಾಡಿದ್ದ. ಜಾಕ್ವೆಲಿನ್ ಫರ್ನಾಂಡೀಸ್, ನೋರಾ ಫತೇಹಿ ಸೇರಿದಂತೆ ಹಲವು ಬಾಲಿವುಡ್ ನಟಿಯರಿಗೆ ದುಬಾರಿ ಕಾರುಗಳು, ಮನೆಗಳನ್ನು ಉಡುಗೊರೆಯಾಗಿ ನೀಡಿದ್ದ. ಜಾಕ್ವೆಲಿನ್ ಜೊತೆಗೆ ಅತ್ಯಾಪ್ತ ಸಂಬಂಧವನ್ನು ಸುಖೇಶ್ ಹೊಂದಿದ್ದ. ಸುಖೇಶ್ ಜೊತೆಗೆ ಜಾಕ್ವೆಲಿನ್ ಆಪ್ತವಾಗಿರುವ ಚಿತ್ರಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಸುಖೇಶ್ನ ವಂಚನೆ ಪ್ರಕರಣದ ತನಿಖಾಧಿಕಾರಿಗಳು ಜಾಕ್ವೆಲಿನ್ ವಿರುದ್ಧವೂ ಎಫ್​​ಐಆರ್ ದಾಖಲಿಸದ್ದು, ವಿಚಾರಣೆ ಚಾಲ್ತಿಯಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ; ದುರುಳರ ಹಿಂಸಾಚಾರಕ್ಕೆ 29 ವರ್ಷದ ಸಾಮ್ರಾಟ್ ಬಲಿ – Kannada News | Bangladesh violence, Amrit Mandal beaten to death, second hindu person killed in a week

ಢಾಕಾ, ಡಿಸೆಂಬರ್ 25: ಬಾಂಗ್ಲಾದೇಶದಲ್ಲಿ ಹಿಂಸಾಚಾರ (Bangladesh violence) ಘಟನೆಗಳು ನಿಲ್ಲುತ್ತಲೇ ಇಲ್ಲ. ರಕ್ತಪಿಪಾಸುಗಳಂತೆ ವರ್ತಿಸುತ್ತಿರುವ ಕೆಲ ಜನರು ಅಲ್ಪಸಂಖ್ಯಾತರನ್ನು ಗುರಿ ಮಾಡಿದಂತೆ ಕಾಣುತ್ತಿದೆ. ಕೆಲ ದಿನಗಳ ಹಿಂದೆ ದೀಪು ಚಂದ್ರದಾಸ್ ಎನ್ನುವ ಹಿಂದೂ ವ್ಯಕ್ತಿಯನ್ನು ಬಲಿಪಡೆದಿದ್ದ ದುರುಳರು ಇದೀಗ ಮತ್ತೊಬ್ಬ ಹಿಂದೂ ಧರ್ಮೀಯನನ್ನು ಕೊಂದಿದ್ದಾರೆ. ರಾಜ್​ಬಾರಿ ಜಿಲ್ಲೆಯಲ್ಲಿ 29 ವರ್ಷದ ಅಮೃತ್ ಮಂಡಲ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಸಾಯಿಸಿದ್ದಾರೆ.

ಈ ಘಟನೆ ನಿನ್ನೆ ಬುಧವಾರ ರಾತ್ರಿ 11 ಗಂಟೆಗೆ ಸಂಭವಿಸಿರುವುದು ಬೆಳಕಿಗೆ ಬಂದಿದೆ. ರಾಜಬರಿ ಜಿಲ್ಲೆಯ ಹೊಸಾಯಿದಂಗ ಓಲ್ಡ್ ಮಾರ್ಕೆಟ್ ಬಳಿ ಜನರ ಗುಂಪೊಂದು ಅಮೃತ್ ಮಂಡಲ್ ಅಲಿಯಾಸ್ ಸಾಮ್ರಾಟ್​ನ ಮೇಲೆ ಹಲ್ಲೆ ಎಸಗಿದೆ. ಪಂಗಶಾ ಠಾಣೆ ಪೊಲೀಸರ ಪ್ರಕಾರ ಅಮೃತ್ ಮಂಡಲ್ ಹೊಸಾಯಿದಂಗ ಗ್ರಾಮದನಾಗಿದ್ದಾನೆ. ಆತ ಒಬ್ಬ ಸುಲಿಗೆಕೋರನಾಗಿದ್ದನೆಂದು ಸ್ಥಳೀಯ ನಿವಾಸಿಗಳು ಆರೋಪಿಸುತ್ತಿದ್ದಾರೆ ಎಂಬುದು ಪೊಲೀಸರು ನೀಡುತ್ತಿರುವ ಮಾಹಿತಿ.

ಇದನ್ನೂ ಓದಿ: ಇದು ಬಾಂಗ್ಲಾದೇಶದ 2ನೇ ವಿಮೋಚನೆ: 2024ರ ದಂಗೆಯನ್ನು ಹೊಗಳಿದ ಬಿಎನ್​ಪಿ ನಾಯಕ ತಾರಿಖ್ ರಹಮಾನ್

ಹಿಂದೆ ಇದೇ ರೀತಿ ಹಲ್ಲೆ ಮಾಡಿ ಸಾಯಿಸಿ ಸುಟ್ಟುಹಾಕಲಾಗಿದ್ದ ದೀಪು ಚಂದ್ರದಾಸ್ ವಿರುದ್ಧವೂ ಹೀಗೇ ಆರೋಪಗಳಿದ್ದುವು. ಆತ ಇಸ್ಲಾಮ್ ಧರ್ಮ ನಿಂದನೆ ಮಾಡಿದ್ದಾನೆಂದು ಸಾಯಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ ಆ ಆರೋಪ ಸುಳ್ಳೆಂಬುದು ಸಾಬೀತಾಗಿತ್ತು. ಈಗ ಸಾಮ್ರಾಟ್ ಮೇಲೂ ಕೂಡ ಸುಲಿಗೆಯ ಆರೋಪ ಹೊರಿಸಿ, ಕೊಲೆಯನ್ನು ಸಮರ್ಥನೆ ಮಾಡಿಕೊಳ್ಳಲು ಯತ್ನಿಸುತ್ತಿರಬಹುದು.

ಬಾಂಗ್ಲಾದಲ್ಲಿ ದಟ್ಟವಾಗುತ್ತಿದೆ ಭಾರತ ವಿರೋಧಿ ಮನೋಭಾವ

2024ರ ಬಾಂಗ್ಲಾ ದಂಗೆಯ ರೂವಾರಿಯಾಗಿದ್ದ ಮತ್ತು ಭಾರತ ವಿರೋಧಿ ಧೋರಣೆ ಹೊಂದಿದ್ದ ಉಸ್ಮಾನ್ ಹದಿ ಎಂಬಾತನ ಮೇಲೆ ಡಿಸೆಂಬರ್ 12ರಂದು ಗುಂಡಿನ ದಾಳಿ ಮಾಡಲಾಯಿತು. ಕೆಲ ದಿನಗಳ ನಂತರ ಆತ ಸಾವನ್ನಪ್ಪಿದ್ದ. ಅದಾದ ಬಳಿಕ ಬಾಂಗ್ಲಾದೇಶದಲ್ಲಿ ಹಿಂಸಾಚಾರಗಳು ಹೆಚ್ಚುತ್ತಿವೆ. ಭಾರತ ವಿರೋಧಿ ಮನೋಭಾವ ಹೆಚ್ಚುತ್ತಿದೆ. ಭಾರತದ ರಾಜತಾಂತ್ರಿಕ ಕಚೇರಿಗಳನ್ನು ಗುರಿ ಮಾಡಲಾಗುತ್ತಿದೆ. ಹಿಂದೂ ಧರ್ಮೀಯರನ್ನೂ ಟಾರ್ಗೆಟ್ ಮಾಡಿ ದಾಳಿ ಮಾಡಲಾಗುತ್ತಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಆಲಿಗಡ್ ಮುಸ್ಲಿಂ ಯೂನಿವರ್ಸಿಟಿ ಕ್ಯಾಂಪಸ್​ನಲ್ಲೇ ಬೋಧಕ ರಾವ್ ದಾನಿಶ್ ಅಲಿ ಹತ್ಯೆ – Kannada News | Aligarh Muslim University teacher Rao Danish Ali shot dead at campus area

ಘಟನೆ ನಡೆದ ಯೂನಿವರ್ಸಿಟಿ ಕ್ಯಾಂಟೀನ್ ಸ್ಥಳ

ಕಾನಪುರ್, ಡಿಸೆಂಬರ್ 9: ಆಲಿಗಡ್ ಮುಸ್ಲಿಂ ಯೂನಿವರ್ಸಿಟಿಯ (Aligarh Muslim University) ಬೋಧಕರೊಬ್ಬರನ್ನು ಕ್ಯಾಂಪಸ್​ನಲ್ಲೇ ಹತ್ಯೆ ಮಾಡಿದ ಘಟನೆ ನಡೆದಿದೆ. ವಿಶ್ವವಿದ್ಯಾಲಯದ ಎಬಿಕೆ ಸ್ಕೂಲ್​ನಲ್ಲಿ ಬೋಧಕರಾಗಿರುವ ರಾವ್ ದಾನಿಸ್ ಅಲಿಯನ್ನು ಗುಂಡಿಟ್ಟು ಸಾಯಿಸಲಾಗಿದೆ. ಆಲಿಗಡ್​ನಲ್ಲಿರುವ ಯೂನಿವರ್ಸಿಟಿ ಕ್ಯಾಂಪಸ್​ನ ಮೌಲಾನ ಆಜಾದ್ ಲೈಬ್ರರಿ ಪ್ರದೇಶದಲ್ಲಿ ಬುಧವಾರ ರಾತ್ರಿ 9 ಗಂಟೆಗೆ ಈ ಘಟನೆ ನಡೆದಿದೆ.

ಈ ಹತ್ಯೆಗೈದ ಹಂತಕರು ಯಾರೆಂದು ಗೊತ್ತಾಗಿಲ್ಲ. ದಾನಿಶ್ ಅಲಿ ಅವರು ತಮ್ಮ ಇಬ್ಬರು ಸಹೋದ್ಯೋಗಿಗಳೊಂದಿಗೆ ಮೌಲಾನ ಆಜಾದ್ ಲೈಬ್ರರಿ ಸಮೀಪದ ಕ್ಯಾಂಟೀನ್​ಗೆ ವಾಕಿಂಗ್​ಗೆ ಹೋಗಿದ್ದರು. ಆಗ ಬೈಕ್​ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿ, ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ ಘಟನೆಯ ನಂತರ ಮತ್ತೊಂದು ಭಯಾನಕ ಅಪಘಾತ: ಎರಡು ಕಾರಿಗೆ ಡಿಕ್ಕಿ ಹೊಡೆದ ಸರ್ಕಾರಿ ಬಸ್ಸು, 7 ಮಂದಿ ಸಾವು

ಪೊಲೀಸರು ಕೂಡಲೇ ಸ್ಥಳಕ್ಕೆ ಬಂದು, ರಾವ್ ಅಲಿಯನ್ನು ಜವಾಹರಲಾಲ್ ನೆಹರೂ ಮೆಡಿಕಲ್ ಕಾಲೇಜಿಗೆ ಕರೆದೊಯ್ದಿದ್ದಾರೆ. ಆದರೆ, ಗಂಭೀರವಾಗಿ ಗಾಯಗೊಂಡಿದ್ದರಿಂದ ಅವರ ಪ್ರಾಣ ಉಳಿಯಲಿಲ್ಲ. ಇಬ್ಬರು ಅಪರಿಚಿತ ವ್ಯಕ್ತಿಗಳು ಈ ಹತ್ಯೆಗೈದಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ.

ಅಲಿಗಡ್ ಪೊಲೀಸರ ಟ್ವೀಟ್

ಯಾವ ಕಾರಣಕ್ಕೆ ಈ ಕೊಲೆ ನಡೆದಿದೆ ಎಂಬುದು ಗೊತ್ತಾಗಿಲ್ಲ. ಸದ್ಯ ಪೊಲೀಸರು ತನಿಖೆ ನಡೆಸತೊಡಗಿದ್ದಾರೆ. ಸುತ್ತಮುತ್ತಲಿನ ಸ್ಥಳದ ಸಿಸಿಟಿವಿ ಫೂಟೇಜ್ ಅನ್ನು ಪರಿಶೀಲಿಸಲಾಗುತ್ತಿದ್ದು, ಹಂತಕರನ್ನು ಪತ್ತೆ ಮಾಡುವ ಪ್ರಯತ್ನವಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link