ಪುನೀತ್ ರಾಜ್ಕುಮಾರ್ (Puneeth Rajkumar) ನಟಿಸಿ 2005 ರಲ್ಲಿ ಬಿಡುಗಡೆ ಆಗಿದ್ದ ‘ಆಕಾಶ್’ ಸಿನಿಮಾ ದಶಕಗಳ ಬಳಿಕ ಇಂದು (ಮಾರ್ಚ್ 13) ಮರು ಬಿಡುಗಡೆ ಆಗಿದೆ. ರಮ್ಯಾ ನಾಯಕಿಯಾಗಿ ನಟಿಸಿದ್ದ ಈ ಸಿನಿಮಾ 2005 ರಲ್ಲಿ ಬಿಡುಗಡೆ ಆಗಿದ್ದಾಗ ಭಾರಿ ದೊಡ್ಡ ಹಿಟ್ ಆಗಿತ್ತು. ಮಹೇಶ್ ಬಾಬು ನಿರ್ದೇಶಿಸಿದ್ದ ಈ ಸಿನಿಮಾಕ್ಕೆ ಪಾರ್ವತಮ್ಮ ರಾಜ್ಕುಮಾರ್ ಬಂಡವಾಳ ಹೂಡಿದ್ದರು. ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ‘ಆಕಾಶ್’ ಸಿನಿಮಾ ಮರು ಬಿಡುಗಡೆ ಆಗಿದೆ. ಸಿನಿಮಾವನ್ನು ಅಪ್ಪು ಅಭಿಮಾನಿಗಳು ಸಂಭ್ರಮದಿಂದ ಸ್ವಾಗತ ಮಾಡಿದ್ದಾರೆ. ನರ್ತಕಿ ಚಿತ್ರಮಂದಿರದಲ್ಲಿಯಂತೂ ಅಪ್ಪು ಅಭಿಮಾನಿಗಳು ಹಬ್ಬವನ್ನೇ ಮಾಡಿದ್ದಾರೆ. ಅಭಿಮಾನಿಗಳ ಸಂಭ್ರಮ ಹೇಗಿತ್ತೆಂಬುದನ್ನು ವಿಡಿಯೋನಲ್ಲಿ ನೋಡಿ…
ಇಂಗ್ಲೆಂಡ್ನಲ್ಲಿ ನಡೆಯುವ ದಿ ಹಂಡ್ರೆಡ್ (The Hundred) ಲೀಗ್ ಪ್ರಸ್ತುತ ಭಾರತದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ, ದಿ ಹಂಡ್ರೆಡ್ ಲೀಗ್ನಲ್ಲಿ ಫ್ರಾಂಚೈಸಿಯನ್ನು ಖರೀದಿಸಿರುವ ಭಾರತದ ಕಾವ್ಯ ಮಾರನ್ (Kavya Maran). ವಾಸ್ತವವಾಗಿ ಮುಂಬರುವ ದಿ ಹಂಡ್ರೆಡ್ ಲೀಗ್ಗೆ ನಿನ್ನೆ ಹರಾಜು ನಡೆಯಿತು. ಈ ಹರಾಜಿನಲ್ಲಿ ಕಾವ್ಯ ಮಾರನ್ ಒಡೆತನದ ಸನ್ರೈಸರ್ಸ್ ಲೀಡ್ಸ್ (Sunrisers Leeds) ಫ್ರಾಂಚೈಸಿ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ (Abrar Ahmed) ಅವರನ್ನು ಖರೀದಿ ಮಾಡಿತು. ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನದೊಂದಿಗೆ ಯಾವ ಸಂಬಂದಕ್ಕೂ ಸಿದ್ಧರಿಲ್ಲದ ಭಾರತೀಯರನ್ನು ಕಾವ್ಯ ಮಾರನ್ ಮಾಡಿದ್ದು ಕೆರಳುವಂತೆ ಮಾಡಿದೆ. ಹೀಗಾಗಿ ಕಾವ್ಯ ಮಾರನ್ ಹಾಗೂ ಐಪಿಎಲ್ನಲ್ಲಿ ಅವರ ಒಡೆತನದ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಅಭಿಮಾನಿಗಳು ಕೆರಳಿದ್ದಾರೆ. ಐಪಿಎಲ್ನಿಂದ ಈ ತಂಡವನ್ನು ಬ್ಯಾನ್ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಇದೆಲ್ಲದರ ನಡುವೆ ತಂಡದ ಹೆಡ್ ಕೋಚ್ ಡೇನಿಯಲ್ ವೆಟ್ಟೋರಿ ನೀಡಿರುವ ಹೇಳಿಕೆ ಭಾರತೀಯರನ್ನು ಇನ್ನಷ್ಟು ಕೆರಳಿಸಿದೆ.
ನಮಗೆ ಸಂತಸ ತಂದಿದೆ
ವಾಸ್ತವವಾಗಿ ಅಬ್ರಾರ್ ಅಹ್ಮದ್ ಅವರನ್ನು 2.35 ಕೋಟಿ ರೂ.ಗೆ ಖರೀದಿ ಮಾಡಿದ ಬಳಿಕ ಅವರನ್ನು ಏಕೆ ಖರೀದಿಸಲಾಯಿತು ಎಂಬುದರ ಬಗ್ಗೆ ವಿವರಣೆ ನೀಡಿರುವ ಡೇನಿಯಲ್ ವೆಟ್ಟೋರಿ, ‘ಆರಂಭದಲ್ಲಿ, ನಾವು ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಅವರನ್ನು ಖರೀದಿ ಮಾಡಲು ಯೋಚಿಸಿದ್ದೆವು. ಆದರೆ ಅವರನ್ನು ಸದರ್ನ್ ಬ್ರೇವ್ಸ್ ಖರೀದಿ ಮಾಡುವಲ್ಲಿ ಯಶಸ್ವಿಯಾಗಿತು. ಹೀಗಾಗಿ ನಮಗೆ ವಿದೇಶಿ ಸ್ಪಿನ್ನರ್ನ ಅವಶ್ಯಕತೆ ಇದ್ದ ಕಾರಣ, ನಾವು ನಾಲ್ಕೈದು ಆಟಗಾರರ ಮೇಲೆ ಕಣ್ಣಿಟ್ಟಿದ್ದೆವು. ಅವರುಗಳಲ್ಲಿ ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಕೂಡ ಒಬ್ಬರು. ಅದರಂತೆ ನಾವು ಅವರನ್ನು ಖರೀದಿ ಮಾಡುವಲ್ಲಿ ಯಶಸ್ವಿಯಾಗಿದ್ದು, ಅವರು ನಮ್ಮ ತಂಡವನ್ನು ಸೇರಿಕೊಂಡಿರುವುದು ನಮಗೆ ಸಂತಸ ತಂದಿದೆ’ ಎಂದಿದ್ದಾರೆ.
ಯಾವುದೇ ಚರ್ಚೆ ನಡೆದಿರಲಿಲ್ಲ
ಇನ್ನು ದಿ ಹಂಡ್ರೆಡ್ ಲೀಗ್ನಲ್ಲಿ ಭಾರತೀಯರ ಒಡೆತನದಲ್ಲಿರುವ ಫ್ರಾಂಚೈಸಿಗಳು ಪಾಕಿಸ್ತಾನದ ಆಟಗಾರರನ್ನು ಖರೀದಿಸುವ ಸಾಧ್ಯತೆಗಳಿಲ್ಲ ಎಂಬುದು ಈ ಮೊದಲು ಕೇಳಿಬಂದ ಸುದ್ದಿಯಾಗಿತ್ತು. ಆದರೆ ಅದೆಲ್ಲವನ್ನು ಸುಳ್ಳು ಮಾಡಿದ ಸನ್ರೈಸರ್ಸ್ ಲೀಡ್ಸ್ ಫ್ರಾಂಚೈಸಿ ಪಾಕ್ ಆಟಗಾರನನ್ನು ಖರೀದಿ ಮಾಡಿದೆ. ಈ ಬಗ್ಗೆ ವೆಟ್ಟೋರಿ ಬಳಿ ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ವೆಟ್ಟೋರಿ, ‘ಪಾಕಿಸ್ತಾನಿ ಆಟಗಾರರನ್ನು ಖರೀದಿಸದಿರುವ ವಿಷಯದ ಬಗ್ಗೆ ಯಾವುದೇ ಚರ್ಚೆ ನಡೆದಿರಲಿಲ್ಲ. ಪಾಕಿಸ್ತಾನಿ ಆಟಗಾರರನ್ನು ಆಯ್ಕೆ ಮಾಡದಿರುವ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ. ಉತ್ತಮ ಆಯ್ಕೆ ಯಾರು ಎಂಬುದನ್ನು ಮಾತ್ರ ನಾವು ಚರ್ಚಿಸಿದ್ದೇವು’ ಎಂದು ವೆಟ್ಟೋರಿ ಹೇಳಿದ್ದಾರೆ.
ಕಾವ್ಯಾ ಮಾರನ್, ಅಬ್ರಾರ್ ಅಹ್ಮದ್ ಅವರನ್ನು 2.3 ಕೋಟಿ ರೂ.ಗೆ ಖರೀದಿಸಿದರು. ಈ ಮೂಲಕ ಟಿ20 ಲೀಗ್ನಲ್ಲಿ ಐಪಿಎಲ್ನೊಂದಿಗೆ ಸಂಯೋಜಿತವಾಗಿರುವ ಭಾರತೀಯ ಮಾಲೀಕರು ಖರೀದಿಸಿದ ಮೊದಲ ಪಾಕಿಸ್ತಾನಿ ಆಟಗಾರ ಅಬ್ರಾರ್ ಅಹ್ಮದ್. ಪಾಕಿಸ್ತಾನಿ ಆಟಗಾರರು ಕೊನೆಯ ಬಾರಿಗೆ 2009 ರ ಐಪಿಎಲ್ನಲ್ಲಿ ಆಡಿದ್ದರು. ಅಂದಿನಿಂದ, ಪಾಕಿಸ್ತಾನಿ ಆಟಗಾರರನ್ನು ಐಪಿಎಲ್ನಿಂದ ನಿಷೇಧಿಸಲಾಗಿದೆ. ಆದಾಗ್ಯೂ, ಅವರನ್ನು ದಿ ಹಂಡ್ರೆಡ್ ಲೀಗ್ನಲ್ಲಿ ಖರೀದಿ ಮಾಡುವ ಮೂಲಕ ಸನ್ರೈಸರ್ಸ್ ಹೈದರಾಬಾದ್ ತಂಡವು ವಿವಾದಾತ್ಮಕ ನಿರ್ಧಾರವನ್ನು ತೆಗೆದುಕೊಂಡಿದೆ. ಇದರಿಂದಾಗಿ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ವ್ಯಾಪಕ ಟೀಕೆಗಳನ್ನು ಎದುರಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ವಿಷಯವನ್ನು ಕಾವ್ಯ ಮಾರನ್ ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 13: ಇಸ್ರೇಲ್, ಅಮೆರಿಕ ಮತ್ತು ಇರಾನ್ ಯುದ್ಧದ ಕಿಚ್ಚು ಈಗಾಗಲೇ ಭಾರತದ ಅಡುಗೆ ಮನೆಯ ಬಾಗಿಲು ತಟ್ಟಿದೆ. ಯುದ್ಧದ ಎಫೆಕ್ಟ್ಗೆ ರಾಜ್ಯದಲ್ಲಿ ಕಮರ್ಷಿಯಲ್ ಗ್ಯಾಸ್ನ ಅಭಾವ ಸೃಷ್ಟಿಯಾಗಿದೆ. ಈ ಮಧ್ಯೆ ಹೋಟೆಲ್ ನಂತರ ಇದೀಗ ಅಡುಗೆ ಎಣ್ಣೆ (cooking oil)ಅಂಗಡಿಯ ಸರದಿ. ಗ್ಯಾಸ್ನಂತೆ ಅಡುಗೆ ಆಯಿಲ್ ಅಂಗಡಿಗಳು ಬಂದ್ ಆಗುವ ಸಾಧ್ಯತೆ ಇದೆ. ಆ ಮೂಲಕ ಸಿಟಿ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ.
ಕಳೆದ ನಾಲ್ಕೈದು ದಿನಗಳಿಂದ ಕಮರ್ಷಿಯಲ್ ಸಿಲಿಂಡರ್ಗಳ ಪೂರೈಕೆಯಲ್ಲಿ ವ್ಯತ್ಯಯ ಶುರುವಾಗಿದ್ದು, ಹೋಟೆಲ್ ಮಾಲೀಕರ ಸ್ಥಿತಿ ಕೇಳತೀರದಾಗಿದೆ. ಬೆಂಗಳೂರಿನಲ್ಲಿ ಕೆಲ ಹೋಟೆಲ್ಗಳು ಬಂದ್ ಕೂಡ ಆಗಿವೆ. ಹೀಗಿರುವಾಗ ಅಡುಗೆ ಎಣ್ಣೆ ಅಂಗಡಿಯ ಸರದಿ ಶುರುವಾಗಿದೆ. ಕಮರ್ಷಿಯಲ್ ಗ್ಯಾಸ್ನಂತೆ ಅಡುಗೆ ಆಯಿಲ್ ಅಂಗಡಿಗಳು ಬಂದ್ ಆಗುವ ಸಾಧ್ಯತೆ ಇದೆ.
ಅಡುಗೆ ಎಣ್ಣೆ ಅಂಗಡಿಯ ಮಾಲೀಕರು ಹೇಳಿದ್ದಿಷ್ಟು
ಇನ್ನು ಈ ಬಗ್ಗೆ ಅಡುಗೆ ಎಣ್ಣೆ ಅಂಗಡಿಯ ಮಾಲೀಕರೊಬ್ಬರು ಪ್ರತಿಕ್ರಿಯಿಸಿದ್ದು, ಕಳೆದ 1 ವಾರದಿಂದ ಅಡುಗೆ ಎಣ್ಣೆ ಸರಬರಾಜು ಆಗುತ್ತಿಲ್ಲ. 100 ರಿಂದ 200 ಬಾಕ್ಸ್ ಬುಕ್ ಮಾಡಿದರೆ ಕೇವಲ 20 ರಿಂದ 50 ಬಾಕ್ಸ್ ಮಾತ್ರ ಏಜೆಂಟರು ಕಳಿಸುತ್ತಿದ್ದಾರೆ. ಏಕೆ ಅಂತಾ ಕೇಳಿದರೆ ಸಪ್ಲೈ ಆಗುತ್ತಿಲ್ಲ ಎನ್ನುತ್ತಿದ್ದಾರೆ. ಹೆಚ್ಚು ಬಾಕ್ಸ್ ನೀಡುವುದಕ್ಕೆ ಆಗಲ್ಲ ಎನ್ನುತ್ತಿದ್ದಾರೆ. ಇದರ ನಡುವೆ 15 ರಿಂದ 20 ರೂ ದರ ಕೂಡ ಜಾಸ್ತಿ ಆಗಿದೆ. ಇದರಿಂದ ನಮಗೆ ತುಂಬಾ ಸಮಸ್ಯೆ ಆಗಿದೆ ಎನ್ನುತ್ತಿದ್ದಾರೆ ಮಾಲೀಕರು.
ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲೂ ಸಿಲಿಂಡರ್ ಅಭಾವ
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೂ ಕಮರ್ಷಿಯಲ್ ಸಿಲಿಂಡರ್ ಅಭಾವದ ಎಫೆಕ್ಟ್ ತಟ್ಟಿದೆ. ಆಸ್ಪತ್ರೆ ಹೊರಗಿರುವ ಫುಡ್ ಪ್ಯಾಲೇಸ್ನಲ್ಲಿ ಅನ್ನ ಸಾಂಬಾರ್, ರೈಸ್ ಬಾತ್ ಸೇರಿ ಕೆಲವೇ ಕೆಲವು ಆಹಾರ ಲಭ್ಯವಾಗುತ್ತಿದೆ. ಚೈನೀಸ್, ತಂದೂರ್ ಆಹಾರಗಳ ತಯಾರಿಕೆಯನ್ನ ನಿಲ್ಲಿಸಿದ್ದಾರೆ.
ಕೆ.ಆರ್ ಮಾರ್ಕೆಟ್ನಲ್ಲಿ ತರಕಾರಿ ವ್ಯಾಪಾರಕ್ಕೆ ತಟ್ಟಿದ ಬಿಸಿ
ಕಮರ್ಷಿಯಲ್ ಸಿಲಿಂಡರ್ ಇಲ್ಲದೇ ದರ್ಶಿನಿ, ಬೀದಿ ಬದಿ ಹೋಟೆಲ್ಗಳು ಕ್ಲೋಸ್ ಆಗಿವೆ. ಇದರಿಂದ ಕೆ.ಆರ್ ಮಾರ್ಕೆಟ್ನಲ್ಲಿ ತರಕಾರಿ ವ್ಯಾಪಾರದ ಮೇಲೂ ಪರಿಣಾಮ ಬೀರಿದೆ. ಹೋಟೆಲ್ಗಳು ಬಂದ್ ಆಗಿರೋದ್ರಿಂದ ತರಕಾರಿ ತೆಗೆದುಕೊಳ್ಳೋರೇ ಇಲ್ಲದಂತಾಗಿದೆ.
ಪವನ್ ಕಲ್ಯಾಣ್ (Pawan Kalyan) ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಪವನ್ ಕಲ್ಯಾಣ್, ಆಂಧ್ರ ಪ್ರದೇಶದ ಡಿಸಿಎಂ ಆದ ಬಳಿಕ ಬಿಡುಗಡೆ ಆಗುತ್ತಿರುವ ಅವರ ಮೂರನೇ ಸಿನಿಮಾ ಇದಾಗಿದೆ. ರಣ್ವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾದ ಎದುರು ‘ಉಸ್ತಾದ್ ಭಗತ್ ಸಿಂಗ್’ ಬಿಡುಗಡೆ ಆಗುತ್ತಿದ್ದು, ‘ಧುರಂಧರ್ 2’ಗೆ ಪೈಪೋಟಿ ನೀಡಲು ಭಾರಿ ಪ್ರಚಾರವನ್ನೇ ಚಿತ್ರತಂಡ ಮಾಡಬೇಕಿದೆ. ಆದರೆ ಈ ವರೆಗೂ ಸಿನಿಮಾದ ಮುಖ್ಯ ಆಕರ್ಷಣೆಯಾಗಿರುವ ಪವನ್ ಕಲ್ಯಾಣ್ ಪ್ರಚಾರಕ್ಕೆ ಇಳಿದೇ ಇಲ್ಲ. ಆದರೆ ಇದೀಗ ಪವನ್ ಕಲ್ಯಾಣ್ ಆಗಮನಕ್ಕೆ ದಿನಾಂಕ ನಿಗದಿ ಆಗಿದ್ದು, ಸಿನಿಮಾದ ಅದ್ಧೂರಿ ಪ್ರೀ ರಿಲೀಸ್ ಆಯೋಜನೆ ಮಾಡಲಾಗಿದೆ.
‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಪ್ರಚಾರ ಈಗಾಗಲೇ ಪ್ರಾರಂಭವಾಗಿದೆ. ಸಿನಿಮಾದ ನಾಯಕಿ ಶ್ರೀಲೀಲಾ ಮತ್ತು ನಿರ್ದೇಶಕ ಹರೀಶ್ ಶಂಕರ್ ಅವರುಗಳು ಕಾಲೇಜುಗಳು ಇನ್ನಿತರೆ ಕಡೆಗಳಿಗೆ ಹೋಗಿ ಸಿನಿಮಾದ ಪ್ರಚಾರ ಮಾಡುತ್ತಲಿದ್ದಾರೆ. ಆದರೆ ಸಿನಿಮಾಕ್ಕೆ ಸಿಗಬೇಕಿದ್ದ ಹೈಪ್ ಇನ್ನೂ ಸೃಷ್ಟಿಯಾಗಿಲ್ಲ. ಹೈಪ್ ಸೃಷ್ಟಿಯಾಗಬೇಕೆಂದರೆ ಪವನ್ ಕಲ್ಯಾಣ್ ಅಖಾಡಕ್ಕೆ ಇಳಿಯಲೇ ಬೇಕಿದೆ.
ಇದೇ ಕಾರಣಕ್ಕೆ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಮಾರ್ಚ್ 15 ರಂದು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವು ವಿಶಾಲವಾದ ಹೈದರಾಬಾದ್ನ ಯೂಸಫ್ಘಡದ ಪೊಲೀಸ್ ಗ್ರೌಂಡ್ನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಜೊತೆಗೆ ಶ್ರೀಲೀಲಾ ಹಾಗೂ ಸಿನಿಮಾದ ಇನ್ನೂ ಕೆಲವು ನಟ-ನಟಿಯರು ಭಾಗಿ ಆಗಲಿದ್ದಾರೆ. ಅತಿಥಿಯಾಗಿ ಪವನ್ ಅವರ ಆತ್ಮೀಯರಾದ ಕೆಲವು ರಾಜಕಾರಣಿಗಳು ಸಹ ಭಾಗಿ ಆಗಲಿದ್ದಾರೆ ಎನ್ನಲಾಗುತ್ತಿದೆ.
ಪವನ್ ಕಲ್ಯಾಣ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಹಾಡೊಂದು ಈಗಾಗಲೇ ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿದೆ. ಸಿನಿಮಾದ ಟ್ರೈಲರ್ ಮಾರ್ಚ್ 15ರಂದು ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿಯೇ ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಮುಖ್ಯ ನಾಯಕಿಯಾಗಿ ಶ್ರೀಲೀಲಾ ಮತ್ತು ರಾಶಿ ಖನ್ನಾ ಸಹ ಇದ್ದಾರೆ.
ಸಂಜನಾ ಬುರ್ಲಿ (Sanjana Burli) ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯನ್ನು ಅರ್ಧಕ್ಕೆ ತೊರೆದು ಶಾಕ್ ಕೊಟ್ಟಿದ್ದರು. ಆ ಬಳಿಕ ‘ಶ್ರೀ ಗಂಧದ ಗುಡಿ’ ಧಾರಾವಾಹಿಯ ಭಾಗ ಆಗಿದ್ದರು. ಶಾಕಿಂಗ್ ವಿಷಯ ಏನೆಂದರೆ, ಈಗ ಅವರು ಈ ಸೀರಿಯಲ್ನಿಂದಲೂ ಹೊರ ನಡೆದಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಧಾರಾವಾಹಿಯ ಕಥೆ ಏನು ಎಂಬ ಆತಂಕ ಮೂಡಿದ್ದು, ಅದಕ್ಕೆ ಉತ್ತರವೂ ಸಿಕ್ಕಿದೆ.
‘ಶ್ರೀ ಗಂಧದ ಗುಡಿ’ ಧಾರಾವಾಹಿ ತಮಿಳು ಸೀರಿಯಲ್ನ ರಿಮೇಕ್. ಈ ಸೀರಿಯಲ್ನಲ್ಲಿ ಶಿಶಿರ್, ಸಂಜನಾ ಮೊದಲಾದವರು ನಟಿಸಿದ್ದಾರೆ. ಈ ಸೀರಿಯಲ್ ವೀಕ್ಷಕರ ಮನ ಗೆದ್ದಿದೆ. ಒಳ್ಳೆಯ ಟಿಆರ್ಪಿ ಪಡೆಯುತ್ತಲೂ ಇತ್ತು. ಆದರೆ, ಧಾರಾವಾಹಿಯಲ್ಲಿ ಈಗ ನಡೆದ ಹೊಸ ಬೆಳವಣಿಗೆಯಿಂದ ವೀಕ್ಷಕರು ಬೇಸರಗೊಂಡಿದ್ದಾರೆ.
ಸಂಜನಾ ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಸ್ನೇಹಾ ಹೆಸರಿನ ಪಾತ್ರ ಮಾಡಿದ್ದರು. ಈ ಪಾತ್ರವನ್ನು ಸಂಜನಾ ಅರ್ಧಕ್ಕೆ ತೊರೆದರು. ಶಿಕ್ಷಣದ ಕಾರಣ ನೀಡಿ ಅವರು ಧಾರಾವಾಹಿ ಬಿಟ್ಟರು. ಈಗ ಸಂಜನಾ ಬುರ್ಲಿ ಅವರು ಮದುವೆ ಕಾರಣ ನೀಡಿ, ‘ಶ್ರೀ ಗಂಧದ ಗುಡಿ’ ಧಾರಾವಾಹಿ ತೊರೆದರು ಎಂದು ವರದಿ ಆಗಿದೆ. ಈ ಜಾಗಕ್ಕೆ ಹೊಸ ಪಾತ್ರಧಾರಿಯ ಆಯ್ಕೆ ಕೂಡ ಆಗಿದೆ.
ಸ್ನೇಹಾ ಮಂಜುನಾಥ್ ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂದು ವರದಿ ಆಗಿದೆ. ಜೀ ಪವರ್ನಲ್ಲಿ ಪ್ರಸಾರ ಕಾಣುತ್ತಿದ್ದ ‘ಶುಭಸ್ಯ ಶೀಘ್ರಂ’ ಸೀರಿಯಲ್ನಲ್ಲಿ ಸ್ನೇಹಾ ನಟಿಸುತ್ತಿದ್ದರು. ಈ ಧಾರಾವಾಹಿಗಳನ್ನು ನಿಲ್ಲಿಸಲಾಗಿದೆ. ಈಗ ಅವರು ಈ ಧಾರಾವಾಹಿ ಆಫರ್ ಪಡೆದು ನಟಿಸೋಕೆ ಆರಂಭಿಸಿದ್ದಾರೆ. ಇಂದಿನ (ಮಾರ್ಚ್ 13) ಎಪಿಸೋಡ್ ಅಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ.
ಸಂಜನಾ ಬುರ್ಲಿ ಅವರು ಈ ರೀತಿ ಮಾಡುತ್ತಿರುವುದು ಇದು ಎರಡನೇ ಬಾರಿ. ಈ ಮೊದಲು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಸಂದರ್ಭದಲ್ಲಿ ಹಾಗೆಯೇ ಮಾಡಿದ್ದರು. ಈಗ ಮತ್ತೆ ಅದೇ ರೀತಿಯ ಘಟನೆ ರಿಪೀಟ್ ಆಗಿದೆ.
ಚಾಮರಾಜನಗರ, ಮಾರ್ಚ್ 13: ಗೆಳೆಯನ ಜೊತೆ ಬೈಕ್ ಏರಿ ಪಾರ್ಟಿಗೆ ಹೋಗಿದ್ದ ವ್ಯಕ್ತಿಯೋರ್ವ ಬರ್ಬರವಾಗಿ ಕೊಲೆಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣಕ್ಕೆ ಹೊಂದಿಕೊಂಡಂತಿರುವ ದೊಡ್ಡಕೆರೆ ಏರಿ ಬಳಿ ನಡೆದಿದೆ. ಗುಂಡ್ಲುಪೇಟೆಯ ಮೂಖಹಳ್ಳಿ ಗ್ರಾಮದ ನಂಜುಂಡಸ್ವಾಮಿ (23) ಮೃತ ವ್ಯಕ್ತಿಯಾಗಿದ್ದು, ಕತ್ತು ಕೊಯ್ದು ಹತ್ಯೆ ಮಾಡಿರುವ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಅಜಯ್ ಎಂಬಾತ ನಂಜುಂಡಸ್ವಾಮಿಯನ್ನು ಪಾರ್ಟಿಗೆಂದು ಕರೆದೊಯ್ದಿದ್ದ ಎನ್ನಲಾಗಿದ್ದು, ಅಲ್ಲಿ ನಡೆದಿದ್ದಾರೂ ಏನು ಎಂಬ ಪ್ರಶ್ನೆ ಈಗ ಉದ್ಭವಿಸಿದೆ.
ನಂಜುಂಡಸ್ವಾಮಿ ಬೆಂಗಳೂರು, ನಂಜನಗೂಡು ಹೀಗೆ ಹಲವೆಡೆ ಸಣ್ಣಪುಟ್ಟ ಕೂಲಿ, ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ. ಕೆಲಸ ಮುಗಿಸಿ ಮನೆಗೆ ಬಂದಿದ್ದ ನಂಜುಂಡಸ್ವಾಮಿಯನ್ನು ಬಲವಂತದಿಂದ ಪಾರ್ಟಿ ಮಾಡೋಣ ಬಾ ಎಂದು ಕರೆದೊಯ್ದಿದ್ದ ಅಜಯ್ ಎಂಬಾತ ಸದ್ಯ ತಲೆ ಮರೆಸಿಕೊಂಡಿದ್ದಾನೆ. ಅಷ್ಟಕ್ಕೂ ಪಾರ್ಟಿಯಲ್ಲಿ ಏನಾಯಿತು? ಇಬ್ಬರೇ ಪಾರ್ಟಿ ಮಾಡಿದ್ದರಾ ಅಥವಾ ಜೊತೆಗೆ ಇನ್ನಷ್ಟು ಮಂದಿ ಇದ್ದರೇ ಎಂಬುದು ಇನ್ನೂ ನಿಗೂಢವಾಗಿದೆ. ಗಾಂಜಾ ಮತ್ತು ಅಥವಾ ಮದ್ಯದ ನಶೆಯಲ್ಲಿ ಈ ಕೊಲೆ ನಡೆದಿರಬಹುದು ಎಂಬ ಗುಮಾನಿ ಇದೆ. ಹೀಗಾಗಿ ಎಲ್ಲ ಆಯಾಮಗಳಲ್ಲಿಯೂ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಇನ್ನು ಮರಣೋತ್ತರ ಪರೀಕ್ಷೆ ಬಳಿಕ ಯುವಕನ ಶವವನ್ನು ವಾರಸುದಾರರಿಗೆ ಹಸ್ತಾಂತರ ಮಾಡಲಾಗಿದೆ. ಸದ್ಯ, ನಂಜುಂಡಸ್ವಾಮಿ ಸಹೋದರ ರಾಜು ನೀಡಿರುವ ದೂರಿನ ಅನ್ವಯ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರ ತಂಡ ರಚಿಸಲಾಗಿದೆ. ನಂಜುಂಡಸ್ವಾಮಿಯನ್ನು ಪಾರ್ಟಿಗೆ ಕರೆದೊಯ್ದಿದ್ದ ಅಜಯ್ ಸಿಕ್ಕ ಬಳಿಕವೇ ಘಟನೆ ಸಂಪೂರ್ಣ ಸತ್ಯ ಬಯಲಾಗಬೇಕಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮತ್ತೊಂದೆಡೆ ತನ್ನ ಮಗನ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಮೃತನ ತಂದೆ ಕರಿಯಯ್ಯ ಮತ್ತು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಬೆಂಗಳೂರು, ಮಾರ್ಚ್ 13: ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ 30 ಜೀವಾವಧಿ ಕೈದಿಗಳನ್ನು ಉತ್ತಮ ನಡೆಗುಣದ ಆಧಾರದ ಮೇಲೆ ಮುಂಗಡವಾಗಿ ಬಿಡುಗಡೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಪರಿಶೀಲನಾ ಸಮಿತಿ (Life Convict Review – LCR) ಶಿಫಾರಸಿನ ಮೇರೆಗೆ ರಾಜ್ಯ ಸರ್ಕಾರ ಈ ಕುರಿತು ಆದೇಶ ಹೊರಡಿಸಿದ್ದು, ಸಂವಿಧಾನದ ಆರ್ಟಿಕಲ್ 161 ಅನ್ವಯ ರಾಜ್ಯಪಾಲರ ಅನುಮೋದನೆಯೂ ಇದಕ್ಕೆ ದೊರೆತಿದೆ. ವಿವಿಧ ಕೇಂದ್ರ ಕಾರಾಗೃಹಗಳಿಂದ ಬಂದ 54 ಪ್ರಕರಣಗಳನ್ನು ಪರಿಶೀಲಿಸಿದ LCR ಸಮಿತಿ, ಅವುಗಳಲ್ಲಿ 30 ಜೀವಾವಧಿ ಕೈದಿಗಳನ್ನು ಬಿಡುಗಡೆಗೆ ಆಯ್ಕೆ ಮಾಡಿದೆ.
ಬಿಡುಗಡೆಯಾಗಲಿರುವ 30 ಕೈದಿಗಳಲ್ಲಿ ಮೂರು ಮಂದಿ ಮಹಿಳೆಯರು ಸೇರಿದ್ದಾರೆ. ಈ ಮಹಿಳಾ ಕೈದಿಗಳು ಪ್ರಸ್ತುತ ಮೈಸೂರು, ಕಲಬುರಗಿ ಮತ್ತು ಶಿವಮೊಗ್ಗ ಮಹಿಳಾ ಕೇಂದ್ರ ಕಾರಾಗೃಹಗಳಲ್ಲಿ ಬಂಧನದಲ್ಲಿದ್ದಾರೆ. ಪರಪ್ಪನ ಅಗ್ರಹಾರದಲ್ಲಿರುವ ಬೆಂಗಳೂರು ಕೇಂದ್ರ ಕಾರಾಗೃಹದಿಂದ 14 ಮಂದಿ ಜೀವಾವಧಿ ಕೈದಿಗಳು ಬಿಡುಗಡೆಗೊಳ್ಳಲಿದ್ದರೆ, ಮೈಸೂರು ಕಾರಾಗೃಹದಿಂದ ಒಬ್ಬ ಮಹಿಳಾ ಕೈದಿ, ಬೆಳಗಾವಿ ಮತ್ತು ಕಲಬುರಗಿ ಕಾರಾಗೃಹಗಳಿಂದ ತಲಾ ಓರ್ವ ಮಹಿಳೆ ಸೇರಿ ಇಬ್ಬರು ರಿಲೀಸ್ ಆಗಲಿದ್ದಾರೆ. ಶಿವಮೊಗ್ಗ ಜೈಲಿನಿಂದ ಒಬ್ಬರು, ವಿಜಯಪುರ ಕಾರಾಗೃಹದಿಂದ ಐವರು, ಬಳ್ಳಾರಿಯಿಂದ ಮೂವರು ಮತ್ತು ಧಾರವಾಡ ಕಾರಾಗೃಹದಿಂದ ಒಬ್ಬ ಜೀವಾವಧಿ ಕೈದಿ ಬಿಡುಗಡೆಗೊಳ್ಳಲಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಜೆಡಿಎಸ್ ಸದಸ್ಯ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2023ರಲ್ಲಿ ರಾಜ್ಯದಲ್ಲಿ 22,225 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದವು. 2025ರ ವೇಳೆಗೆ ಅವು 14,899ಕ್ಕೆ ಇಳಿಕೆಯಾಗಿವೆ. ಪೊಲೀಸ್ ಇಲಾಖೆ ಕೈಗೊಂಡ ಪರಿಣಾಮಕಾರಿ ಕ್ರಮಗಳು, ಪ್ರಕರಣಗಳ ತ್ವರಿತ ಪತ್ತೆ ಮತ್ತು ಸಾರ್ವಜನಿಕರಲ್ಲಿ ಮೂಡಿಸಿದ ಜಾಗೃತಿ ಕಾರಣದಿಂದ ಈ ಇಳಿಕೆ ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ನವದೆಹಲಿ, ಮಾರ್ಚ್ 13: ಭಾರತದ ಸ್ಥಾಪಿತ ವಿದ್ಯುತ್ ಸಾಮರ್ಥ್ಯದಲ್ಲಿ ಪ್ರಸ್ತುತ ಪಳೆಯುಳಿಕೆಗಿಂತ ಪಳೆಯುಳಿಕೆಯೇತರ, ನವೀಕರಿಸಬಹುದಾದ ಇಂಧನ ಪಾಲೇ ಹೆಚ್ಚಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ (Pralhad Joshi) ಜೋಶಿ ತಿಳಿಸಿದ್ದಾರೆ.
ಎಷ್ಟಿದೆ ನವೀಕರಿಸಬಹುದಾದ ಇಂಧನ?
ದೇಶದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಪಳೆಯುಳಿಕೆಯೇತರ ಇಂಧನ ಶೇ.52.3ರಷ್ಟಿದ್ದರೆ, ನವೀಕರಿಸಬಹುದಾದ ಇಂಧನ ಶೇ.50.6ರಷ್ಟಿದೆ. ಪಳೆಯುಳಿಕೆ ಇಂದಿನ ಮೂಲದಿಂದ ಶೇ.47.7ರಷ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಕಂಡುಬಂದಿದೆ. 2026ರ ಜನವರಿ ಅಂತ್ಯದವರೆಗೆ ಭಾರತ 52,536.49 ಮೆಗಾವ್ಯಾಟ್ ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಸೇರಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಜನವರಿ 31ಕ್ಕೆ ಒಟ್ಟು ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 5,20,511 ಮೆಗಾವ್ಯಾಟ್ ಆಗಿದ್ದು, ಇದರಲ್ಲಿ 2,48,542 ಮೆಗಾವ್ಯಾಟ್ ಪಳೆಯುಳಿಕೆ-ಇಂಧನ ಮೂಲ ಮತ್ತು 2,71,969 ಮೆಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಮೂಲದ ವಿದ್ಯುತ್ ಉತ್ಪಾದನೆ ಆಗಿದೆ. ಒಟ್ಟು ಸ್ಥಾಪಿತ ಸಾಮರ್ಥ್ಯದಲ್ಲಿ ‘ನವೀಕರಿಸಬಹುದಾದ ಇಂಧನ’ ಮೂಲಗಳ ಪಾಲು 2,63,189 ಮೆಗಾವ್ಯಾಟ್ ಆಗಿದೆ ಎಂದಿದ್ದಾರೆ.
2025-26ರ ಆರ್ಥಿಕ ವರ್ಷದಲ್ಲಿ ಅಖಿಲ ಭಾರತ ಒಟ್ಟು ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸೇರ್ಪಡೆ 52,536.49 ಮೆ.ವ್ಯಾ. ಆಗಿದ್ದು, ನವೀಕರಿಸಬಹುದಾದ ಇಂಧನದ್ದೇ 43,026.49 ಮೆ.ವ್ಯಾ ಅಗ್ರ ಪಾಲಿದೆ. ಇನ್ನು ಮೀ, ಉಷ್ಣಶಕ್ತಿಯಲ್ಲಿ ಕಲ್ಲಿದ್ದಲು ಒಂದರಿಂದಲೇ 8,810 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಆಗಿದೆ. ಅನಿಲದಿಂದ ಶೂನ್ಯವಾಗಿದೆ. ಹೈಡ್ರೋದಲ್ಲಿ 3,370 ಮೆ.ವ್ಯಾ, ಗಾಳಿಯಿಂದ 4,612.58 ಮೆ.ವ್ಯಾ, ಸೌರಶಕ್ತಿಯಿಂದ ಬರೋಬ್ಬರಿ 34,955.24 ಮೆ.ವ್ಯಾ, ಜೈವಿಕ ಶಕ್ತಿ-30.61, ಸಣ್ಣ ಹೈಡ್ರೋದಿಂದ 58.06 ಮೆ.ವ್ಯಾ ಹಾಗೂ 700 ಮೆ.ವ್ಯಾ ಪರಮಾಣು ವಿದ್ಯುತ್ ಸಾಮರ್ಥ್ಯ ಸೇರ್ಪಡೆಯಾಗಿದೆ ಎಂದು ವಿವರಿಸಿದ್ದಾರೆ.
ಪಳೆಯುಳಿಕೆ ಇಂಧನದಲ್ಲಿ ಕಲ್ಲಿದ್ದಲು-2,21,210 ಮೆಗಾವ್ಯಾಟ್, (ಶೇ.42.5), ಲಿಗ್ನೈಟ್ -6,620 (ಶೇ.1.3), ಅನಿಲ-20,122 (ಶೇ.3.9), ಡೀಸೆಲ್- 589 (ಶೇ.0.1 ) ಒಟ್ಟು ಪಳೆಯುಳಿಕೆ ಇಂಧನದಿಂದ 2,48,542 (ಶೇ.47.7) ಹಾಗೂ ಪಳೆಯುಳಿಕೆಯಲ್ಲದ ಇಂಧನ RES (ಹೈಡ್ರೋ ಸೇರಿದಂತೆ)- 2,63,189 ಮೆಗಾವ್ಯಾಟ್ ಶೇ.50.6 ರಷ್ಟಿದೆ. ಹೈಡ್ರೋ – 51,165 (ಶೇ.9.8), ಪವನ, ಸೌರ ಮತ್ತು ಇತರ ನವೀಕರಿಸಬಹುದಾದ ವಿದ್ಯುತ್ – 2,12,025 ಮೆಗಾವ್ಯಾಟ್ ಶೇ.40.7ರಷ್ಟಿದೆ ಎಂದು ತಿಳಿಸಿದ್ದಾರೆ.
ಗಾಳಿಯಿಂದ 54,650 ಮೆಗಾವ್ಯಾಟ್ (ಶೇ.10.5), ಸೌರಶಕ್ತಿ -1,40,602 ಮೆಗಾವ್ಯಾಟ್ (27.0), ಬಿಎಂ ಪವರ್ ಕೋಜೆನ್. – 10,757 (ಶೇ.2.1), ತ್ಯಾಜ್ಯದಿಂದ ಶಕ್ತಿಗೆ- 857 (0.2), ಸಣ್ಣ ಜಲ ವಿದ್ಯುತ್ ಸ್ಥಾವರ – 5,159 (ಶೇ.1.0) ಹಾಗೂ ಪರಮಾಣು-8,780 (ಶೇ.1.7) ವಿದ್ಯುತ್ ಉತ್ಪಾದನೆ ಸೇರ್ಪಡೆ ಸಾಧ್ಯವಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಈಗಂತೂ ಆಪ್ಟಿಕಲ್ ಇಲ್ಯೂಷನ್ (Optical Illusion), ಬ್ರೈನ್ ಟೀಸರ್ನಂತಹ ಒಗಟಿನ ಆಟಗಳು ಟ್ರೆಂಡಿಂಗ್ನಲ್ಲಿವೆ. ಒಂದಕ್ಕಿಂತ ಒಂದು ಒಗಟಿನ ಚಿತ್ರಗಳು ಟ್ರಿಕ್ಕಿಯಾಗಿದ್ದು, ಬಿಡಿಸುವುದು ಕಷ್ಟಕರ. ಆದರೆ ನಿಮ್ಮ ಬುದ್ಧಿವಂತಿಕೆಗೆ ಸವಾಲೊಡ್ಡುವಂತಹ ಇಂತಹ ಆಟಗಳನ್ನು ಆಡುವ ಮಜಾನೇ ಬೇರೆ. ಇದೀಗ ಗಣಿತದ ಲೆಕ್ಕವನ್ನು ನೀಡಲಾಗಿದ್ದು, ನೀವು ಲೆಕ್ಕ ಬಿಡಿಸೋದರಲ್ಲಿ ಪಂಟರಾಗಿದ್ದರೆ ಈ ಒಗಟು ಬಿಡಿಸಿ ಸರಿಯಾದ ಉತ್ತರ ಹೇಳಿ.
ಒಗಟಿನ ಪ್ರಶ್ನೆ ಹೀಗಿದೆ ನೋಡಿ
ನೋಡೋದಕ್ಕೆ ಸುಲಭ ಎನಿಸಿದರೂ ಉತ್ತರ ಹುಡುಕುವ ಅಷ್ಟು ಸುಲಭವಲ್ಲ. ಈ ಬ್ರೈನ್ ಟೀಸರ್ ಒಗಟಿನ ಪ್ರಶ್ನೆ ತಲೆಗೆ ಹುಳ ಬಿಟ್ಟಂತಿದೆ. 2+3 = 10, 8+4= 96, 7+2 = 63, 6+5 = 66 ಮತ್ತು 9+5 = ಎಷ್ಟು ಎಂದು ಕಂಡು ಹಿಡಿಯುವುದೇ ಇಲ್ಲಿರುವ ಸವಾಲು. ಆದರೆ ಈ ಲೆಕ್ಕವನ್ನು ಐದು ಸೆಕೆಂಡುಗಳಲ್ಲಿ ಬಿಡಿಸುವ ಸವಾಲು ನೀಡಲಾಗಿದೆ. ನೀವು ನಿಮ್ಮ ಮೆದುಳಿಗೆ ಕೆಲಸ ನೀಡುವ ಸಮಯ ಈಗ ಆರಂಭವಾಗಿದ್ದು, ಈ ಲೆಕ್ಕ ಬಿಡಿಸಿ ಜಾಣರು ಎನಿಸಿಕೊಳ್ಳಿ.
ಮೆದುಳಿಗೆ ಕೈ ಹಾಕುವಂತಿರುವ ಈ ಟ್ರಿಕ್ಕಿ ಗಣಿತದ ಲೆಕ್ಕ ಬಿಡಿಸಲು ಎಲ್ಲರಿಂದಲೂ ಸಾಧ್ಯವಿಲ್ಲ. ಆದರೆ, ಗಣಿತದಲ್ಲಿ ಪರಿಣಿತರಾಗಿದ್ದವರೂ ಮಾತ್ರ ಸಲೀಸಾಗಿ ಈ ಲೆಕ್ಕ ಬಿಡಿಸುತ್ತಾರೆ. 2+3 = 10, 8+4 = 96, 7+2 = 63, 6+5 = 66 ಮತ್ತು 9+5 =? ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಸಾಧ್ಯವಾಗಿಲ್ಲವೇ. ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಈ ಲೆಕ್ಕದ ಉತ್ತರವನ್ನು ನಾವೇ ನಿಮಗೆ ಹೇಳುತ್ತೇವೆ. 2+2=10 ( 2*2+3*2) , 8+4=96 ( 8*8+4*8), 9+5 = (9*9+5*9 ) = 126 ಈ ಲೆಕ್ಕವನ್ನು ಬಿಡಿಸುವ ರೀತಿ ಹೀಗಿದೆ. ಹೀಗಾಗಿ ಈ ಟ್ರಿಕ್ಕಿ ಲೆಕ್ಕದ ಉತ್ತರ 126 ಆಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮೈಸೂರು, ಮಾರ್ಚ್ 13: ಕರ್ನಾಟಕ ಕಾಂಗ್ರೆಸ್ನಲ್ಲಿ (Congress) ಅಧಿಕಾರ ಹಂಚಿಕೆ ಕುರಿತ ಚರ್ಚೆಗಳು ಜೋರಾಗಿರುವ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಮ್ಮ ರಾಜಕೀಯ ಜೀವನದ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ನನ್ನ ಉಸಿರು ಇರುವವರೆಗೂ ರಾಜಕೀಯದಲ್ಲೇ ಇರುತ್ತೇನೆ ಮತ್ತು ಜನರ ಸೇವೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರ ವ್ಯಾಪ್ತಿಯ ವರಕೋಡು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ ಜೀವನದ ಬಗ್ಗೆ ಮನಬಿಚ್ಚಿ ಮಾತನಾಡಿದರು.
ರಾಜಕೀಯದಲ್ಲಿ ಗೆಲುವು-ಸೋಲು ಸಹಜವಾದದ್ದು ಎಂದು ಹೇಳಿದ ಸಿಎಂ, ನನ್ನ ರಾಜಕೀಯ ಜೀವನದಲ್ಲಿ ಸೋಲು-ಗೆಲುವು ಎರಡನ್ನೂ ಕಂಡಿದ್ದೇನೆ. ಆದರೆ ಚುನಾವಣೆಯಲ್ಲಿ ಸೋತಾಗಲೂ ನಾನು ಜನಸೇವೆಯನ್ನು ಎಂದಿಗೂ ಬಿಟ್ಟಿಲ್ಲ ಎಂದು ಹೇಳಿದರು.
ನನ್ನನ್ನು ಬೆಳೆಸಿದಂತೆಯೇ ಮಗನನ್ನೂ ಬೆಳೆಸಿ: ಸಿದ್ದರಾಮಯ್ಯ ಮನವಿ
ಮುಖ್ಯಮಂತ್ರಿಯಾಗಿರುವುದರಿಂದ ಕ್ಷೇತ್ರಕ್ಕೆ ಹೆಚ್ಚು ಬಾರಿ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ ಸಿದ್ದರಾಮಯ್ಯ, ನನ್ನ ಮಗ ಯತೀಂದ್ರ ಆಗಾಗ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ನೀವು ನನ್ನನ್ನು ಹೇಗೆ ಬೆಳೆಸಿದಿರೋ ಹಾಗೆಯೇ ಯತೀಂದ್ರನನ್ನೂ ರಾಜಕೀಯವಾಗಿ ಬೆಳೆಸಬೇಕು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ದೇವರ ಕುರಿತ ನಂಬಿಕೆಯನ್ನು ಸಿದ್ದರಾಮಯ್ಯ ವಿಶ್ಲೇಷಿಸಿದ್ದು ಹೀಗೆ…
ದೇವರ ಬಗ್ಗೆ ತಮ್ಮ ನಂಬಿಕೆ ಕುರಿತು ಕೂಡ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದೇವರ ಮೇಲಿನ ಭಕ್ತಿ ಶುದ್ಧವಾಗಿರಬೇಕು. ದೇವರು ಇದ್ದಾನೆ. ಭಕ್ತಿ ಎಲ್ಲರಲ್ಲೂ ಇರಬೇಕು. ಆದರೆ ಶುದ್ಧವಾದ ಭಕ್ತಿ ಇಲ್ಲದೆ ಎಷ್ಟೇ ದೇವರ ದರ್ಶನ ಮಾಡಿದರೂ ಅದರ ಪ್ರಯೋಜನವಾಗುವುದಿಲ್ಲ. ಯಾರನ್ನೂ ದ್ವೇಷಿಸದ ಭಕ್ತಿ ಇರಬೇಕು ಎಂದು ತಿಳಿಸಿದರು.
ನಮಗೂ ಹಾಗೂ ಇತರರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದಾಗ ಮಾತ್ರ ದೇವರು ಒಲಿಯುತ್ತಾನೆ. ದೇವರು ದೇವಸ್ಥಾನದಲ್ಲೇ ಮಾತ್ರ ಅಲ್ಲ, ಎಲ್ಲೆಡೆ ಇದ್ದಾನೆ. ಯಾರು ಶುದ್ಧ ಮನಸ್ಸಿನಿಂದ ದೇವರನ್ನು ಪೂಜಿಸುತ್ತಾರೋ ಅವರಿಗೆ ದೇವರು ಒಳ್ಳೆಯದನ್ನು ಮಾಡುತ್ತಾನೆ ಎಂದು ಹೇಳಿದರು.
ಇದೇ ವೇಳೆ, ದೇವರು ಪ್ರತಿಕ್ಷಣ ನಾವು ಮಾಡುವ ಕೆಲಸವನ್ನು ನೋಡುತ್ತಾನೆ. ಇತರರಿಗೆ ಕೆಟ್ಟದ್ದು ಬಯಸಿದರೆ ದೇವರು ಒಳ್ಳೆಯದು ಮಾಡುವುದಿಲ್ಲ. ನಾನು ಸದಾ ಇಡೀ ನಾಡಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸಿಎಂ ಕಾರ್ಯಕ್ರಮದಲ್ಲಿ ಸೇಬಿಗಾಗಿ ಮುಗಿಬಿದ್ದ ಜನರು
ಬೀರೇಶ್ವರಸ್ವಾಮಿ ದೇವಸ್ಥಾನ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾದರು. ಅವರು ಗ್ರಾಮಕ್ಕೆ ಆಗಮಿಸಿದಾಗ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತಿಸಲಾಯಿತು. ಸಿಎಂ ತೆರಳಿದ ನಂತರ ಸೇಬು ಕೀಳಲು ಜನರು ಮುಗಿಬಿದ್ದರು. ಹೆಚ್ಚು ಜನ ಜಮಾಯಿಸಿದ್ದನ್ನು ಕಂಡು ಕ್ರೇನ್ ಆಪರೇಟರ್ ಹಾರವನ್ನು ಜಗ್ಗಾಡಿ ಆಟವಾಡಿಸಿದ ದೃಶ್ಯ ಕಂಡುಬಂತು. ಆತ ಹಾರ ಕೆಳಗಿಳಿಸುತ್ತಿದ್ದಂತೆಯೇ ಜನರು ಇಡೀ ಹಾರವನ್ನೇ ತುಂಡರಿಸಿ ಸೇಬನ್ನು ಕಿತ್ತುಕೊಂಡರು. ಕ್ಷಣಾರ್ಧದಲ್ಲಿ ಬೃಹತ್ ಹಾರದ ಒಂದೂ ಸೇಬನ್ನು ಬಿಡದೆ ಕಿತ್ತು ಮುಗಿಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ