ಬೆಂಗಳೂರು, ಮಾರ್ಚ್ 09: ಕಸ್ಟಮರ್ ಮನೆಯಲ್ಲಿ 25 ಲಕ್ಷ ಮೌಲ್ಯದ ಚಿನ್ನಾಭರಣ ದೊಚ್ಚಿದ್ದ ಕ್ಯಾಬ್ ಚಾಲಕನನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ರೆಹಮಾನ್ ಬಂಧಿತ ಆರೋಪಿಯಾಗಿದ್ದು, ಚಿನ್ನಾಭರಣ ಸಮೇತ ಚಾಲಕನನ್ನು ಪೊಲೀಸರು ಲಾಕ್ ಮಾಡಿದ್ದಾರೆ. ಫೆಬ್ರವರಿ 11 ಶಾಪಿಂಗ್ಗೆ ಮುಂಬೈಗೆ ಹೊರಟಿದ್ದ ದಂಪತಿ, ಹೆಬ್ಬಾಳದಿಂದ ಯಶವಂತಪುರಕ್ಕೆ ಕ್ಯಾಬ್ ಬುಕ್ ಮಾಡಿದ್ದರು. ಈ ವೇಳೆ ಸೈಯದ್ ಸಲ್ಮಾನ್ ಪತ್ನಿಗೆ ಮನೆಯಲ್ಲಿ ಚಿನ್ನಾಭರಣ ಇರುವ ಕಪಾಟು ಲಾಕ್ ಮಾಡಿದ್ದೀಯಾ ಎಂದು ಕೇಳಿದ್ದರು. ಮಾರ್ಗ ಮಧ್ಯೆ ಮೂರು ದಿನಗಳ ಕಾಲ ಮನೆಗೆ ವಾಪಾಸ್ ಬರಲ್ಲ ಎಂದು ಇವರು ಮಾತಾಡಿದ್ದನ್ನೂ ಸಹ ಆರೋಪಿ ಕೇಳಿಸಿಕೊಂಡಿದ್ದ. ಸೈಯದ್ ಕುಟುಂಬವನ್ನು ಯಶವಂತಪುರಕ್ಕೆ ಡ್ರಾಪ್ ಮಾಡಿ ಹೆಬ್ಬಾಳಕ್ಕೆ ಬಂದಿದ್ದ ಅಬ್ದುಲ್ ರೆಹಮಾನ್, ಸೈಯದ್ ಸಲ್ಮಾನ್ ಮನೆಯಲ್ಲಿ ಕಳ್ಳತನ ನಡೆಸಿದ್ದ. ಈ ಸಂಬಂಧ ಸಿಸಿ ಕ್ಯಾಮೆರಾ ಪರಿಶೀಲನೆ ವೇಳೆ ಕ್ಯಾಬ್ ಚಾಲಕ ಬಂದಿರೋದು ಪತ್ತೆಯಾಗಿದ್ದು, ಆತನ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಈತ ಈ ಹಿಂದೆಯೂ ಇದೇ ರಿತಿಯ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಜಾಮೀನಿನ ಮೇಲೆ ಹೊರ ಬಂದಿದ್ದ ಎಂಬುದು ಗೊತ್ತಾಗಿದೆ.
T20 World Cup 2026: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಈ ಯಶಸ್ಸಿನೊಂದಿಗೆ ಟೀಮ್ ಇಂಡಿಯಾ 3ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದ ಹೊರತಾಗಿಯೂ ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾದ ನಾಯಕನಾಗಿ ಮುಂದುವರೆಯುವುದು ಅನುಮಾನ.
ಏಕೆಂದರೆ ಬಿಸಿಸಿಐ 2026ರ ಟಿ20 ವಿಶ್ವಕಪ್ಗಾಗಿ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕನನ್ನಾಗಿ ನೇಮಿಸಿದೆ. ಇದೀಗ ಅವರು ವಯಸ್ಸು 35 ವರ್ಷ. ಮುಂಬರುವ ಟಿ20 ವಿಶ್ವಕಪ್ನಲ್ಲಿ ಅವರು ಕಣಕ್ಕಿಳಿಯುವುದಿಲ್ಲ ಎಂದೇ ಹೇಳಬಹುದು.
ಇದಕ್ಕೂ ಮುನ್ನ 2024ರ ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ ಪಟ್ಟದಿಂದ ಕೆಳಗಿಳಿಸುವ ಸೂಚನೆ ನೀಡಲಾಗಿತ್ತು. ಹೀಗಾಗಿ ಹಿಟ್ಮ್ಯಾನ್ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು.
ಇತ್ತ ಸೂರ್ಯಕುಮಾರ್ ಯಾದವ್ಗೂ ಇದೇ ರೀತಿಯ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಇದಾಗ್ಯೂ ಅವರು ಭಾರತ ಟಿ20 ತಂಡದಲ್ಲಿ ಮುಂದುವರೆಯಲು ಇಚ್ಛಿಸಿದ್ದಾರೆ. ಹೀಗಾಗಿ ಮುಂದಿನ ಸರಣಿಯಲ್ಲೂ ಸೂರ್ಯಕುಮಾರ್ ಯಾದವ್ ಕಾಣಿಸಿಕೊಳ್ಳಲಿದ್ದಾರೆ. ಆದರೆ ಅವರು ನಾಯಕನಾಗಿ ಕಣಕ್ಕಿಳಿಯುವುದು ಡೌಟ್ ಎನ್ನಲಾಗುತ್ತಿದೆ.
ಸೂರ್ಯಕುಮಾರ್ ಯಾದವ್ ಬದಲಿಗೆ ಹೊಸ ನಾಯಕನನ್ನು ಆಯ್ಕೆ ಮಾಡಲು ಬಿಸಿಸಿಐ ಚಿಂತಿಸಿದೆ. ಅದರಲ್ಲೂ ಮೂರು ಸ್ವರೂಪಗಳ ತಂಡಕ್ಕೆ ಏಕೈಕ ನಾಯಕ ಇರಬೇಕೆಂಬ ಆಶಯವನ್ನು ಬಿಸಿಸಿಐ ಹೊಂದಿದೆ.
ಹೀಗಾಗಿ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕನಾಗಿರುವ ಶುಭ್ಮನ್ ಗಿಲ್ಗೆ ಕ್ಯಾಪ್ಟನ್ ಪಟ್ಟ ನೀಡಬಹುದು. ಆದರೆ ಅದಕ್ಕೂ ಮುನ್ನ ಗಿಲ್ ಭಾರತ ಟಿ20 ತಂಡಕ್ಕೆ ಕಂಬ್ಯಾಕ್ ಮಾಡಬೇಕಿದೆ.
ಹೀಗೆ ಕಂಬ್ಯಾಕ್ ಮಾಡಲು ಶುಭ್ಮನ್ ಗಿಲ್ ಮುಂದಿರುವ ದಾರಿ ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್. ಅಂದರೆ ಈ ಬಾರಿಯ ಐಪಿಎಲ್ನಲ್ಲಿ ಗಿಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರೆ ಭಾರತ ಟಿ20 ತಂಡಕ್ಕೆ ಕಂಬ್ಯಾಕ್ ಮಾಡುವುದು ಖಚಿತ.
ಅದರಲ್ಲೂ ಸ್ಥಿರ ಪ್ರದರ್ಶನದೊಂದಿಗೆ ಗುಜರಾತ್ ಟೈಟಾನ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರೆ ಭಾರತ ಟಿ20 ತಂಡದ ನಾಯಕನಾಗಿ ಶುಭ್ಮನ್ ಗಿಲ್ ಆಯ್ಕೆಯಾಗಲಿದ್ದಾರೆ. ಇಲ್ಲದಿದ್ದರೆ ಹಾರ್ದಿಕ್ ಪಾಂಡ್ಯಗೆ ಕ್ಯಾಪ್ಟನ್ ನೀಡಬಹುದು.
ಅಂದರೆ ಮುಂಬರುವ ಟಿ20 ಸರಣಿಗೂ ಮುನ್ನ ವಿಶ್ವ ಚಾಂಪಿಯನ್ ಟೀಮ್ ಇಂಡಿಯಾದ ನಾಯಕ ಬದಲಾಗುವ ಸಾಧ್ಯತೆ ಹೆಚ್ಚಿದೆ. ಈ ಮೂಲಕ 2028 ರ ಟಿ20 ವಿಶ್ವಕಪ್ಗೆ ಈಗಲೇ ನಾಯಕನನ್ನು ರೂಪಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸುತ್ತಿದೆ.
ನವದೆಹಲಿ, ಮಾರ್ಚ್ 09: ದೆಹಲಿಯ ಅಬಕಾರಿ ನೀತಿಯಲ್ಲಿನ ಹಗರಣಕ್ಕೆ ಸಂಬಂಧಿಸಿದ ಸಿಬಿಐ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಅರವಿಂದ್ ಕೇಜ್ರಿವಾಲ್(Arvind Kejriwal) ಮತ್ತು ರೌಸ್ ಅವೆನ್ಯೂ ನ್ಯಾಯಾಲಯದಿಂದ ಖುಲಾಸೆಗೊಂಡ ಎಲ್ಲಾ 23 ವ್ಯಕ್ತಿಗಳಿಗೆ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯವು ಈಗ ಮಾರ್ಚ್ 16 ರಂದು ಮುಂದಿನ ವಿಚಾರಣೆಯನ್ನು ನಡೆಸಲಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಯ ವಿರುದ್ಧ ಇಲಾಖಾ ಕ್ರಮಕ್ಕೆ ನಿರ್ದೇಶಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ತಡೆಹಿಡಿದಿದೆ.
ಸೋಮವಾರ, ಸಿಬಿಐ ಅರ್ಜಿಯ ನಂತರ ಕೇಜ್ರಿವಾಲ್, ಸಿಸೋಡಿಯಾ ಮತ್ತು ಇತರರ ಬಿಡುಗಡೆ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿತು. ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಸಿಬಿಐ ಪರವಾಗಿ ವಾದ ಮಂಡಿಸಿದ ಎಸ್ಜಿ ತುಷಾರ್ ಮೆಹ್ತಾ, ಕೇಜ್ರಿವಾಲ್ ಮತ್ತು ಸಿಸೋಡಿಯಾ ಸೇರಿದಂತೆ ಇತರ 23 ಜನರ ಬಿಡುಗಡೆ ಆದೇಶಕ್ಕೆ ತಡೆ ನೀಡುವಂತೆ ಕೋರಿದ್ದರು. ನ್ಯಾಯಾಲಯ ಈ ಆದೇಶವನ್ನು ನೀಡಲು ನಿರಾಕರಿಸಿತು.
ಎಲ್ಲಾ ಆರೋಪಿಗಳ ಬಿಡುಗಡೆಯ ವಿರುದ್ಧ ಸಿಬಿಐ ಸಲ್ಲಿಸಿದ ಪರಿಷ್ಕರಣಾ ಅರ್ಜಿಯನ್ನು ಹೈಕೋರ್ಟ್ ನಿರ್ಧರಿಸುವವರೆಗೆ ಇಡಿ ಪ್ರಕರಣವನ್ನು ಮುಂದೂಡುವಂತೆ ನ್ಯಾಯಮೂರ್ತಿ ವಿಚಾರಣಾ ನ್ಯಾಯಾಲಯವನ್ನು ಕೇಳಿದ್ದಾರೆ.
ಮತ್ತಷ್ಟು ಓದಿ:
ಈ ಪ್ರಕರಣದಲ್ಲಿ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ನೋಟಿಸ್ ಜಾರಿಗೊಳಿಸಿ, ಸಿಬಿಐ ಮನವಿಯನ್ನು ಹೈಕೋರ್ಟ್ ಆಲಿಸುವವರೆಗೆ ಜಾರಿ ನಿರ್ದೇಶನಾಲಯದ ಹಣ ವರ್ಗಾವಣೆ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದರು.
ಈ ಪ್ರಕರಣದಲ್ಲಿ ದೋಷಮುಕ್ತರಾದ ಎಲ್ಲರಿಗೂ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ತನಿಖಾಧಿಕಾರಿಯ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳುವಂತೆ ವಿಚಾರಣಾ ನ್ಯಾಯಾಲಯವು ಈ ಹಿಂದೆ ಶಿಫಾರಸು ಮಾಡಿತ್ತು.
ಫೆಬ್ರವರಿ 27 ರಂದು, ದೆಹಲಿ ನ್ಯಾಯಾಲಯವು ಎಎಪಿ ನಾಯಕರಾದ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಇತರರನ್ನು ಖುಲಾಸೆಗೊಳಿಸಿತು, ಅಬಕಾರಿ ನೀತಿಯಲ್ಲಿ ಯಾವುದೇ ಪಿತೂರಿ ಅಥವಾ ಕ್ರಿಮಿನಲ್ ಉದ್ದೇಶ ಇರಲಿಲ್ಲ ಎಂಬುದನ್ನು ಗಮನಿಸಿತು.
ಕಾರವಾರ, ಮಾರ್ಚ್ 09: ಉತ್ತರ ಕನ್ನಡ ಜಿಲ್ಲೆಯ (Uttara Kannada) ಕಾರವಾರದಲ್ಲಿ ಮಧ್ಯಪ್ರಾಚ್ಯ ಯುದ್ಧ ಸಂಘರ್ಷದ ಪರಿಣಾಮ ವಾಣಿಜ್ಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಇರಾನ್ನಿಂದ ಕಾರವಾರದ ವಾಣಿಜ್ಯ ಬಂದರಿಗೆ ಬರುತ್ತಿದ್ದ ಕಚ್ಚಾ ಡಾಂಬರ್ ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದ ತಿಂಗಳಿಗೆ 80 ಲಕ್ಷ ರೂ.ಗಳವರೆಗೂ ನಷ್ಟವಾಗುತ್ತಿದೆ ಎಂದು ತಿಳಿದು ಬಂದಿದೆ.
ಡೀಸೆಲ್ ಸರಬರಾಜಿಗೂ ಸಂಕಷ್ಟ
ಸಾಮಾನ್ಯವಾಗಿ ಪ್ರತಿ ತಿಂಗಳು ಇರಾನ್ನಿಂದ ಕಚ್ಚಾ ಡಾಂಬರ್ ಸಾಗಣೆ ಹಡಗುಗಳು ಕಾರವಾರ ಬಂದರಿಗೆ ಆಗಮಿಸುತ್ತಿದ್ದವು. ಆದರೆ ಯುದ್ಧ ಪರಿಸ್ಥಿತಿಯಿಂದ ಈಗ ಹಡಗುಗಳು ಬಾರದ ಕಾರಣ ಬಂದರು ಬಿಕೋ ಎನ್ನುತ್ತಿದೆ. ಇದರಿಂದ ಗಲ್ಪ್ ರಾಷ್ಟ್ರಗಳಿಂದ ಬರುತ್ತಿದ್ದ ಡೀಸೆಲ್ ಸರಬರಾಜಿಗೂ ಸಂಕಷ್ಟ ಉಂಟಾಗಿದೆ. ಕಾರವಾರದ ಕದಂಬ ನೌಕಾ ನೆಲೆಗೆ ಅಗತ್ಯವಿರುವ ಡೀಸೆಲ್ ಅನ್ನು ಈಗ ಮುಂಬೈಯಿಂದ ತರಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಬಂದರು ವಾಣಿಜ್ಯ ಚಟುವಟಿಕೆಗಳ ಮೇಲೆ ಅವಲಂಬಿತವಾಗಿದ್ದ ಲಾರಿ ಮಾಲೀಕರು ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಚ್ಚಾ ಡಾಂಬರ್ ಸಾಗಣೆಗಾಗಿ ಬಂದಿದ್ದ ಲಾರಿಗಳು ಕಾರವಾರ ವಾಣಿಜ್ಯ ಬಂದರು ಬಳಿ ಸಾಲುಗಟ್ಟಿ ನಿಂತಿದ್ದು, ಕಳೆದ ಹತ್ತು ದಿನಗಳಿಂದ ಕೆಲಸವಿಲ್ಲದೇ ನಿಂತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಡಗು ಸಂಚಾರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬಂದರಿಗೆ ಪ್ರತಿ ತಿಂಗಳು ಸುಮಾರು 70 ರಿಂದ 80 ಲಕ್ಷ ರೂಪಾಯಿ ನಷ್ಟ ಉಂಟಾಗುತ್ತಿದೆ ಎಂದು ತಿಳಿದುಬಂದಿದೆ. ಇದರಿಂದ ಬಂದರು ಆಧಾರಿತ ವ್ಯಾಪಾರಿಗಳು ಹಾಗೂ ಕಾರ್ಮಿಕರಲ್ಲಿ ಆತಂಕ ಹೆಚ್ಚಾಗಿದೆ.
ಬೆಂಗಳೂರು, ಮಾರ್ಚ್ 09 : ಬೆಂಗಳೂರು (Bengaluru) ಅಂದ್ರೆ ಯುವಕ ಯುವತಿಯರಿಗೆ ಅದೇನೋ ಸೆಳೆತ, ಹೀಗಾಗಿ ಅದೆಷ್ಟೋ ಯುವಕ ಯುವತಿಯರು ಉದ್ಯೋಗ ಅರಸುತ್ತಾ ಬರುತ್ತಾರೆ. ರಾಜಧಾನಿ ಬೆಂಗಳೂರಿನಲ್ಲಿ ಒಂದು ವರ್ಷ ಕಳೆದ ಬಳಿಕ ತನ್ನ ಪ್ರಯಾಣ ಹಾಗೂ ತನ್ನ ಪ್ರಾಮಾಣಿಕ ಅನುಭವದ ಬಗ್ಗೆ ಮಾತನಾಡಿದ್ದು, ಬೆಂಗಳೂರಿನ ಜನರನ್ನು ಹಾಡಿ ಹೊಗಳಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
atyacreates ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದ ಶೀರ್ಷಿಕೆಯಲ್ಲಿನಮ್ಮ ಬೆಂಗಳೂರಿನಲ್ಲಿ ಒಂದು ವರ್ಷ ಕಳೆದಿದ್ದೇನೆ. ಈ ನಗರವು ಒಂದು ದೊಡ್ಡ ವ್ಯಕ್ತಿತ್ವವನ್ನು ಹೊಂದಿದೆ, ಅದನ್ನು ಒಂದೇ ರೀಲ್ನಲ್ಲಿ ಸಂಪೂರ್ಣವಾಗಿ ಚಿತ್ರೀಕರಿಸಲು ಸಾಧ್ಯವಿಲ್ಲ. ಈ ನಗರವು ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ. ಒಳ್ಳೆಯ ಅಧ್ಯಾಯಗಳು ತೆರೆದುಕೊಳ್ಳುತ್ತವೆ ಎಂದು ನಾನು ಭಾವಿಸುತ್ತೇನೆ. ನನ್ನನ್ನು ಅಪ್ಪಿಕೊಂಡಿದ್ದಕ್ಕಾಗಿ ಮತ್ತು ನಾನು ಇಲ್ಲಿಗೆ ಸೇರಿದವಳು ಎಂದು ನನಗೆ ಅನಿಸುವಂತೆ ಮಾಡಿದ್ದಕ್ಕಾಗಿ ಬೆಂಗಳೂರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಬರೆಯಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ
ಈ ವಿಡಿಯೋದಲ್ಲಿ ಮಹಿಳೆಯೂ, ನಾನು ಈ ತಿಂಗಳು ಬೆಂಗಳೂರಿನಲ್ಲಿ ನನ್ನ ಒಂದು ವರ್ಷವನ್ನು ಪೂರ್ಣಗೊಳಿಸಿದೆ. ಇಲ್ಲಿನ ಹವಾಮಾನ, ಹೂವುಗಳು ಮತ್ತು ಚಹಾದ ಬಗ್ಗೆ ಮಾತನಾಡುತ್ತಾರೆ, ಆದರೆ ಬೆಂಗಳೂರಿನಲ್ಲಿ ಅದಕ್ಕಿಂತ ಹೆಚ್ಚಿನವುಗಳಿವೆ. ನಾನು ಕನ್ನಡದ ಒಂದೇ ಒಂದು ಪದವನ್ನು ಕಲಿಯದೇ ಇಲ್ಲಿಗೆ ಸ್ಥಳಾಂತರಗೊಂಡಿದ್ದೇನೆ. ನಾನು ಇಲ್ಲಿ ಚೆನ್ನಾಗಿದ್ದೇನೆ. ಬೆಂಗಳೂರಿನ ನಿವಾಸಿಗಳು ಮೊದಲಿಗೆ ಹೆಚ್ಚು ಸ್ನೇಹಪರರಾಗಿ ಕಾಣಿಸದಿದ್ದರೂ, ಅವರು ವೈಯಕ್ತಿಕ ಗಡಿಗಳನ್ನು ಗೌರವಿಸುತ್ತಾರೆ. ಯಾವುದೇ ಸಮಸ್ಯೆ ಮಾಡದ ಜನರು, ಇಲ್ಲಿನವರಲ್ಲಿ ಯಾವುದೇ ನಾಟಕವಿಲ್ಲ ಮತ್ತು ವಾಸ್ತವವಾಗಿ ಇಲ್ಲಿ ತುಂಬಾ ಕಡಿಮೆ ಒತ್ತಡವಿದೆ ಎಂದು ಹೇಳಿದ್ದಾರೆ.
ಇಲ್ಲಿನ ಜನರು ಹೆಚ್ಚಾಗಿ ಆರೋಗ್ಯದ ಬಗ್ಗೆ ಪ್ರಜ್ಞೆ ಹೊಂದಿರುತ್ತಾರೆ. ಮಹತ್ವಾಕಾಂಕ್ಷೆ ಮತ್ತು ಸ್ವಯಂ ಅಭಿವ್ಯಕ್ತಿ ಇರುವ ಏಕೈಕ ನಗರ ಇದಾಗಿದೆ ಎಂದು ನಾನು ಭಾವಿಸುತ್ತೇನೆ. ಎಲ್ಲದಕ್ಕೂ ಒಂದು ಸಮುದಾಯವಿದೆ. ನೀವು ಒಮ್ಮೆ ಇಲ್ಲಿ ಕಾಣಿಸಿಕೊಂಡರೆ ನೀವು ನೂರು ಹವ್ಯಾಸಗಳು ಮತ್ತು ಉತ್ಸಾಹಗಳನ್ನು ಹೊಂದಿರುವ ವ್ಯಕ್ತಿಯಾಗುತ್ತೀರಿ. ಮಸಾಲಾ ದೋಸೆಯಿಂದ ಪೂರಿ ಇಡ್ಲಿಯವರೆಗೆ, ಬೀದಿ ಆಹಾರವು ಆರೋಗ್ಯಕರ ಹಾಗೂ ಅಗ್ಗವಾಗಿದೆ. ಇಲ್ಲಿ ಅತ್ಯುತ್ತಮವಾದ ತುಪ್ಪದಲ್ಲಿ ಬೇಯಿಸಿದ ಆಹಾರವನ್ನು ಪಡೆಯುತ್ತೀರಿ ಎಂದು ಹೇಳಿರುವುದನ್ನು ಕಾಣಬಹುದು.
ಇಲ್ಲಿ ಯಾರೂ ನಿಮ್ಮನ್ನು ನಿರ್ಣಯಿಸುವುದಿಲ್ಲ ಅಥವಾ ವಿಚಿತ್ರವಾದ ವೈಯಕ್ತಿಕ ಪ್ರಶ್ನೆಗಳನ್ನು ಕೇಳುವುದಿಲ್ಲ. ನೀವು ಅಭಿಪ್ರಾಯಗಳಿಗೆ ಹೆದರದಿದ್ದಾಗ, ನೀವು ನಿಮ್ಮ ನಿಜವಾದ ಸ್ವಭಾವವನ್ನು ಹೊರಹಾಕುತ್ತೀರಿ. ನೀವು ಮುಕ್ತವಾಗಿ ಮಾತನಾಡುತ್ತೀರಿ. ಹೀಗಿದ್ದಾಗ ನಿಮ್ಮನ್ನು ನೀವು ಮುಕ್ತವಾಗಿ ಕಂಡುಕೊಳ್ಳಲು ಸಾಧ್ಯ ಎಂದು ವಿವರಿಸಿದ್ದಾರೆ.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಇದನ್ನು ತುಂಬಾ ಸುಂದರವಾಗಿ ಸಂಕ್ಷೇಪಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ. ಮತ್ತೊಬ್ಬರು, ನನಗೆ ನನ್ನ ಸ್ವಂತ ನಗರ ಪುಣೆಗಿಂತ ಇದು ಹೆಚ್ಚು ಇಷ್ಟ. ಎಷ್ಟರ ಮಟ್ಟಿಗೆ ಎಂದರೆ ಕೆಲಸ ಬದಲಾಯಿಸಿದ ನಂತರವೂ ನಾನು ಈ ನಗರವನ್ನು ಬಿಡಲಿಲ್ಲ. ನಾನು ಎರಡು ನಗರಗಳ ನಡುವೆ ಬದಲಾಯಿಸುತ್ತೇನೆ. ಬೆಂಗಳೂರು ತುಂಬಾ ಇಷ್ಟ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ನಿಮ್ಮ ಮಾತುಗಳು ನೂರಕ್ಕೆ ನೂರರಷ್ಟು ಸತ್ಯ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver Prices) ಕಡಿಮೆ ಆಗತೊಡಗಿವೆ. ಸಾಮಾನ್ಯವಾಗಿ ಈ ಅಮೂಲ್ಯ ಲೋಹಗಳನ್ನು ಆಪತ್ಕಾಲದ ಆಸ್ತಿಗಳೆಂದು ಪರಿಗಣಿಸಲಾಗುತ್ತದೆ. ಜಾಗತಿಕ ರಾಜಕೀಯ ಬಿಕ್ಕಟ್ಟು, ಯುದ್ಧ, ಆರ್ಥಿಕ ಹಿಂಜರಿಕೆ ಇತ್ಯಾದಿ ಅನಿಶ್ಚಿತ ಸಂದರ್ಭಗಳು ಎದುರಾದಾಗ ಈ ಲೋಹಗಳ ಬೆಲೆ ಸಹಜವಾಗಿ ಏರಿಕೆ ಆಗುತ್ತದೆ. ಇತ್ತೀಚೆಗೆ ದೊಡ್ಡ ಮಟ್ಟದ ಅನಿಶ್ಚಿತ ಪರಿಸ್ಥಿತಿ ಬಂದೆರಗದೇ ಹೋದರೂ ಒಂದೆರಡು ತಿಂಗಳಲ್ಲೇ ಚಿನ್ನ, ಬೆಳ್ಳಿ ಬೆಲೆಗಳು ಸಿಕ್ಕಾಪಟ್ಟೆ ಏರಿದ್ದವು. ಈಗ ಇರಾನ್ ಯುದ್ಧದಿಂದ ಪಶ್ಚಿಮ ಏಷ್ಯಾ ಹೊತ್ತಿ ಉರಿಯುತ್ತಿದ್ದರೂ ಚಿನ್ನ, ಬೆಳ್ಳಿ ಬೆಲೆಗಳು ಏರಿಕೆಯಾಗುತ್ತಿಲ್ಲ. ಬದಲಾಗಿ ಬೆಲೆ ಇಳಿಕೆ ಆಗುತ್ತಿರುವುದು ಅಚ್ಚರಿ ಮೂಡಿಸಿದೆ. ಅದಕ್ಕೆ ಕೆಲ ಕುತೂಹಲಕಾರಿ ಕಾರಣಗಳಿವೆ.
ಸೆಂಟ್ರಲ್ ಬ್ಯಾಂಕುಗಳಿಂದ ಚಿನ್ನದ ಮಾರಾಟ?
ಇತ್ತೀಚಿನ ಎರಡು ತಿಂಗಳಲ್ಲಿ ಚಿನ್ನದ ಬೆಲೆ ಸಿಕ್ಕಾಪಟ್ಟೆ ಏರಲು ಸೆಂಟ್ರಲ್ ಬ್ಯಾಂಕ್ಗಳು ಕಾರಣವಾಗಿದ್ದವು. ಚಿನ್ನವನ್ನು ಸತತವಾಗಿ ಖರೀದಿ ಮಾಡಿದ್ದರಿಂದ ಬೆಲೆ ಏರಿತ್ತು. ಇದೀಗ ಕೆಲ ವರದಿಗಳ ಪ್ರಕಾರ ಸೆಂಟ್ರಲ್ ಬ್ಯಾಂಕುಗಳು ಚಿನ್ನವನ್ನು ಮಾರಾಟ ಮಾಡುತ್ತಿವೆ. ಲಿಕ್ವಿಡಿಟಿ ಹೆಚ್ಚಿಸಲು, ಅಂದರೆ, ನಗದನ್ನು ಪಡೆಯಲು ಚಿನ್ನದ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್ನ ಇತ್ತೀಚಿನ ವರದಿ ಪ್ರಕಾರವೂ ಜನವರಿ ತಿಂಗಳಿಂದಲೇ ಸೆಂಟ್ರಲ್ ಬ್ಯಾಂಕುಗಳಿಂದ ಚಿನ್ನದ ಖರೀದಿ ಕಡಿಎಮ ಆಗಿದೆ.
ಚಿನ್ನ ಮತ್ತು ಬೆಳ್ಳಿ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದ ಬಳಿಕ ಹೂಡಿಕೆದಾರರು ಪ್ರಾಫಿಟ್ ಬುಕಿಂಗ್ನಲ್ಲಿ ನಿರತರಾಗಿರಬಹುದು. ಈಕ್ವಿಟಿ ಮಾರುಕಟ್ಟೆ ಹಿನ್ನಡೆಯಾಗಿರುವುದರಿಂದ ಅದರ ನಷ್ಟ ಸರಿದೂಗಿಸಲು ಚಿನ್ನದ ಹೂಡಿಕೆಯನ್ನು ಮಾರುತ್ತಿರಲೂ ಬಹುದು ಎನ್ನಲಾಗುತ್ತಿದೆ.
ಪ್ರಬಲವಾಗಿರುವ ಅಮೆರಿಕನ್ ಡಾಲರ್
ಅಮೆರಿಕನ್ ಡಾಲರ್ ಕರೆನ್ಸಿ ಮತ್ತಷ್ಟು ಪ್ರಬಲವಾಗಿದೆ. ಇತರ ಕರೆನ್ಸಿಗಳಲ್ಲಿ ಚಿನ್ನವನ್ನು ಖರೀದಿಸುವುದು ತುಸು ದುಬಾರಿ ಎನಿಸಿದೆ. ಹಾಗೆಯೇ, 10 ವರ್ಷದ ಅಮೆರಿಕನ್ ಟ್ರೆಷರಿ ಯೀಲ್ಡ್ ಹೆಚ್ಚಿದೆ. ಇದು ಹೂಡಿಕೆದಾರರಿಗೆ ಹೆಚ್ಚು ಆಕರ್ಷಣೀಯ ಎನಿಸಿರಬಹುದು.
ಅಲ್ಲದೇ, ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ ಬಡ್ಡಿದರವನ್ನು ಕಡಿತ ಮಾಡುವ ನಿರೀಕ್ಷೆ ಬಹುತೇಕ ಹುಸಿಯಾಗಿದೆ. ಬಡ್ಡಿದರ ಕಡಿಮೆ ಮಾಡಿದ್ದರೆ ಚಿನ್ನದ ಮೇಲಿನ ಹೂಡಿಕೆ ಹೆಚ್ಚು ಆಕರ್ಷಕ ಎನಿಸುತ್ತಿತ್ತು. ಆದರೆ, ಬಡ್ಡಿದರ ಕಡಿಮೆ ಆಗದ ಕಾರಣ ಚಿನ್ನವನ್ನು ಇರಿಸಿಕೊಳ್ಳುವುದು ಹೂಡಿಕೆದಾರರಿಗೆ ಹೆಚ್ಚು ಲಾಭದಾಯಕ ಎನಿಸದಿರಬಹುದು.
ಮಡಿಕೇರಿ, ಮಾರ್ಚ್ 09: ಕಾಫಿನಾಡು ಚಿಕ್ಕಮಗಳೂರಿನ ಹಲವೆಡೆ ಕಾಡಾನೆಗಳ ಗ್ಯಾಂಗ್ ಜನವಸತಿ ಪ್ರದೇಶಗಲಿಗೆ ನುಗ್ಗಿ ಭಯಬೀಳಿಸುತ್ತಿದ್ದರೆ ಇತ್ತ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ವಾಲ್ನೂರಿನಲ್ಲಿ ಕಾಡಾನೆ ದಾಳಿಗೆ ಮಹಿಳೆಯೋರ್ವರು ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ನಂಜರಾಯಪಟ್ಟಣ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಜಲಜಾಕ್ಷಿ(53) ಮೃತ ದುರ್ದೈವಿ. ನಡೆದುಕೊಂಡು ಹೋಗುತ್ತಿದ್ದ ಜಲಜಾಕ್ಷಿ ಅವರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡು ಮಹಿಳೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಎಸಿಎಫ್ ಗೋಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಮಡಿಕೇರಿ ತಾಲೂಕಿನ ಗುಡ್ಡಗಾಡು ಗ್ರಾಮ ಬೆಟ್ಟತ್ತೂರಿನಲ್ಲಿ ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಪೂಜ್ಯ ಎಂಬಾಕೆ ದಾರುಣವಾಗಿ ಬಲಿಯಾಗಿದ್ದಳು. ಸಂಜೆ ತನ್ನ ತಂದೆ-ತಾಯಿ ಜೊತೆ ಬೈಕ್ನಲ್ಲಿ ಬಂದ ಪೂಜ್ಯ, ಬೈಕ್ನಿಂದ ಇಳಿದ ಕೆಲವೇ ಸೆಕೆಂಡುಗಳಲ್ಲಿ ಕತ್ತಲಿನಲ್ಲಿ ಹಿಂಬದಿಯಿಂದ ಬಂದ ಆನೆ ಭೀಕರ ದಾಳಿ ನಡೆಸಿತ್ತು. ಈ ವೇಳೆ ಆಕೆಯ ಕಿರುಚಾಟ ಕೇಳಿ ತಾಯಿ ಬೊಬ್ಬೆಹೊಡೆದರೂ ಸಲಗದ ಕಾಲಡಿ ಸಿಲುಕಿದ್ದ ಪೂಜ್ಯ ಪ್ರಾಣ ಬಿಟ್ಟಿದ್ದರು. ಆ ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಸಾವು ನಡೆದಿರುವ ಕಾರಣ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಾನವ-ಪ್ರಾಣಿ ಸಂಘರ್ಷ ಹೆಚ್ಚುತ್ತಿದ್ದು, ರಾಜ್ಯದ ಹಲವೆಡೆ ಪ್ರಾಣಿ ದಾಳಿಯಿಂದ ನೂರಾರು ಮಂದಿ ಸಾಯುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಮೈಸೂರು, ಚಾಮರಾಜನಗರ, ಕೊಡಗು ಮತ್ತು ಹಾಸನಗಳ ಜಿಲ್ಲೆಗಳಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, 32 ಸಾವುಗಳೊಂದಿಗೆ ಕೊಡಗು ಜಿಲ್ಲೆ ಈ ಪಟ್ಟಿಯಲ್ಲಿ ಎರಡನೇಯ ಸ್ಥಾನ ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಮೇಲಿಂದ ಮೇಲೆ ಕಾಡು ಪ್ರಾಣಿಗಳ ದಾಳಿಗೆ ಜನರು ಬಲಿಯಾಗ್ತಿದ್ದರೂ ಅರಣ್ಯ ಇಲಾಖೆ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪವೂ ಸಾರ್ವಜನಿಕರಿಂದ ವ್ಯಕ್ತವಾಗಿದೆ.
T20 World Cup 2026: ಟಿ20 ವಿಶ್ವಕಪ್ನ ಆರಂಭದಿಂದಲೂ ಈ ಬಾರಿ ಭಾರತ ತಂಡ ಚಾಂಪಿಯನ್ ಪಟ್ಟಕ್ಕೇರಲ್ಲ ಎಂದು ಭವಿಷ್ಯ ನುಡಿಯುತ್ತಾ ಬಂದಿದ್ದ ಪಾಕಿಸ್ತಾನ್ ಕ್ರಿಕೆಟಿಗ ಮೊಹಮ್ಮದ್ ಅಮಿರ್ ಇದೀಗ ಪೇಚಿಗೆ ಸಿಲುಕಿದ್ದಾರೆ. ಅದರಲ್ಲೂ ಸೆಮಿಫೈನಲ್ ತಲುಪಲ್ಲ ಎಂದಿದ್ದ ಅಮಿರ್ ಲೆಕ್ಕಾಚಾರವನ್ನು ಟೀಮ್ ಇಂಡಿಯಾ ತಲೆ ಕೆಳಗೆ ಮಾಡಿತ್ತು.
ಇದಾಗ್ಯೂ ಸೆಮಿಫೈನಲ್ನಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ಗೆದ್ದೇ ಗೆಲ್ಲುತ್ತೆ ಎಂದು ಮೊಹಮ್ಮದ್ ಅಮಿರ್ ಖಾಸಗಿ ಚಾನೆಲ್ನಲ್ಲಿ ಹೇಳಿಕೊಂಡಿದ್ದರು. ಆದರೆ ಅಲ್ಲೂ ಕೂಡ ಅವರ ಲೆಕ್ಕಾಚಾರ ತಲೆಕೆಳಗಾಯಿತು. ಇಂಗ್ಲೆಂಡ್ ವಿರುದ್ಧ 7 ರನ್ಗಳ ಜಯದೊಂದಿಗೆ ಟೀಮ್ ಇಂಡಿಯಾ ಫೈನಲ್ಗೇರಿತು.
ಇನ್ನು ಫೈನಲ್ ಪಂದ್ಯದಲ್ಲಿ ಗೆಲ್ಲುವ ಫೇವರೇಟ್ ತಂಡ ಯಾವುದು ಎಂಬ ಪ್ರಶ್ನೆಗೂ ಮೊಹಮ್ಮದ್ ಅಮಿರ್ ಕಡೆಯಿಂದ ಬಂದಂತಹ ಉತ್ತರ ನ್ಯೂಝಿಲೆಂಡ್. ಭಾರತ ತಂಡವನ್ನು ನ್ಯೂಝಿಲೆಂಡ್ ಸೋಲಿಸಿಯೇ ಸೋಲಿಸುತ್ತದೆ ಎಂದು ಪಾಕ್ ಕ್ರಿಕೆಟಿಗ ಭವಿಷ್ಯ ನುಡಿದಿದ್ದರು. ಈ ಭವಿಷ್ಯವನ್ನು ಕೂಡ ಟೀಮ್ ಇಂಡಿಯಾ ಸುಳ್ಳಾಗಿಸಿದೆ.
ಅಹಮದಾಬಾದ್ನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಫೈನಲ್ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 255 ರನ್ಗಳು. ಈ ಮೂಲಕ ಭಾರತ ತಂಡ ಗೆಲುವನ್ನು ಮೊದಲ ಇನಿಂಗ್ಸ್ನಲ್ಲೇ ಖಚಿತಪಡಿಸಿಕೊಂಡಿದ್ದರು.
ಇನ್ನು ಈ ಬೃಹತ್ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡ 19 ಓವರ್ಗಳಲ್ಲಿ ಕೇವಲ 159 ರನ್ಗಳಿಸಿ ಆಲೌಟ್ ಆಗಿತ್ತು. ಈ ಮೂಲಕ ಟೀಮ್ ಇಂಡಿಯಾ 96 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಗೆಲುವಿನ ಬೆನ್ನಲ್ಲೇ ಖಾಸಗಿ ಚಾನೆಲ್ನ ಕಾರ್ಯಕ್ರಮದ ನಡುವೆ ಮೊಹಮ್ಮದ್ ಅಮಿರ್ ಜೊತೆ ವ್ಯಕ್ತಿಯೋರ್ವರು ಪಂದ್ಯದ ಫಲಿತಾಂಶದ ಬಗ್ಗೆ ಕೇಳಿದ್ದಾರೆ.
ನಿಮ್ಮ ಭವಿಷ್ಯ ಸುಳ್ಳಾಗಿದೆ, ಭಾರತ ತಂಡ ಗೆಲುವು ದಾಖಲಿಸಿದೆ. ಈ ಬಗ್ಗೆ ಈಗ ನೀವೇನು ಹೇಳುತ್ತೀರಾ ಎಂಬ ಪ್ರಶ್ನೆಯನ್ನು ಅಮಿರ್ ಮುಂದಿಡಲಾಗಿತ್ತು.
ಈ ಸರಳ ಪ್ರಶ್ನೆಗೆ ಕುಪಿತಗೊಂಡ ಮೊಹಮ್ಮದ್ ಅಮಿರ್, “ಅವರು (ಭಾರತ) ಗೆದ್ದರೆ ಟ್ರೋಫಿಯನ್ನು ನನ್ನ ಮನೆಗೆ ತರುವುದಿಲ್ಲ, ಅವರ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ ಅಷ್ಟೆ,” ಎಂದು ಕಿಡಿಕಾರಿದ್ದಾರೆ.
ARROGANT MOHAMMAD AMIR STARTED CRYING
“India won, that’s fine. They’re not going to bring the trophy to my house. They’ll take it to their own place.”
ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ತೈಲ ಕೇಂದ್ರಗಳ ಮೇಲೆ ದಾಳಿಗಳಿಗೆ ಕಾರಣವಾಗಿದ್ದು, ಇದು ಕೇವಲ ಆರ್ಥಿಕ ನಷ್ಟವಲ್ಲದೆ, ಭೀಕರ ಪರಿಸರ ದುರಂತಕ್ಕೆ ನಾಂದಿ ಹಾಡಿದೆ. ತೈಲ ಬಾವಿಗಳಿಗೆ ಬೆಂಕಿ ಬಿದ್ದಾಗ ಹೊರಹೊಮ್ಮುವ ದಟ್ಟ ಕಪ್ಪು ಹೊಗೆ ನೂರಾರು ಕಿಲೋಮೀಟರ್ ದೂರದವರೆಗೆ ಹರಡಿ ಜನರ ಆರೋಗ್ಯಕ್ಕೆ ಮಾರಕವಾಗಲಿದೆ. ಈ ಹೊಗೆಯಲ್ಲಿರುವ ಕಾರ್ಬನ್ ಮೊನಾಕ್ಸೈಡ್, ಸಲ್ಫರ್ ಡೈಯಾಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್ಗಳು ಶ್ವಾಸಕೋಶ ಮತ್ತು ರಕ್ತದ ಮೇಲೆ ನೇರ ಪರಿಣಾಮ ಬೀರುತ್ತವೆ. ಗಾಳಿಯಲ್ಲಿ ಸೇರಿದ ಈ ವಿಷಗಳು ಮಳೆ ನೀರಿನಲ್ಲಿ ಬೆರೆತು ಆಮ್ಲ ಮಳೆಯನ್ನು ಸೃಷ್ಟಿಸಿ ಶ್ವಾಸಕೋಶಗಳನ್ನು ಹಾನಿಗೊಳಿಸುತ್ತವೆ. ಚರ್ಮ ರೋಗಗಳು, ಕ್ಯಾನ್ಸರ್ ಮತ್ತು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ತಕ್ಷಣವೇ ಸಾವು ಸಂಭವಿಸದಿದ್ದರೂ, ದೀರ್ಘಾವಧಿಯಲ್ಲಿ ದೇಹದ ಅಂಗಾಂಗಗಳನ್ನು ಹಾನಿಗೊಳಿಸುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
1991ರಲ್ಲಿ ಗಲ್ಫ್ ಯುದ್ಧದ ವೇಳೆ ಅಮೆರಿಕ ಇರಾಕ್ ತೈಲ ಬಾವಿಗಳಿಗೆ ಬೆಂಕಿ ಹಚ್ಚಿದ್ದ ನಂತರ ಗಲ್ಫ್ ವಾರ್ ಸಿಂಡ್ರೋಮ್ ಕಾಣಿಸಿಕೊಂಡಿತ್ತು. ಅಮೆರಿಕದ ಸಾವಿರಾರು ಸೈನಿಕರು 30 ವರ್ಷಗಳ ನಂತರವೂ ದೀರ್ಘಕಾಲದ ಆಯಾಸ, ನರಗಳ ಹಾನಿ, ಕ್ಯಾನ್ಸರ್ನಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದೀಗ ಇರಾನ್ನ ಬೃಹತ್ ತೈಲ ಸಂಗ್ರಹಾಗಾರಗಳ ಮೇಲೆ ದಾಳಿಯಾದರೆ, ಈ ದುರಂತ 1991ರ ಗಲ್ಫ್ ಯುದ್ಧಕ್ಕಿಂತ ಹತ್ತು ಪಟ್ಟು ಹೆಚ್ಚು ಅಪಾಯಕಾರಿಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಹೊಗೆ ಪರ್ಷಿಯನ್ ಗಲ್ಫ್ ದಾಟಿ ನೆರೆ ರಾಷ್ಟ್ರಗಳಿಗೂ ಹರಡಿ ಜಾಗತಿಕ ಹವಾಮಾನ ವೈಪರಿತ್ಯಕ್ಕೆ ಕಾರಣವಾಗಬಹುದು. ಭಾರತದ ವರೆಗೂ ಪರಿಣಾಮ ತಟ್ಟುವ ಸಾಧ್ಯತೆ ಇದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಮಾರ್ಚ್ 09: ನಗರದ ಆನೇಕಲ್ನಲ್ಲಿ (Anekal Kidnap and Murder)ಅಪಹರಣಕ್ಕೊಳಗಾಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಹತ್ಯೆಯಾದ ಘಟನೆ ಬೆಳಕಿಗೆ ಬಂದಿದೆ. ನಿನ್ನೆ ಸಂಜೆ ದುಷ್ಕರ್ಮಿಗಳು ಗೋಪಾಲ್ ಅವರ ಕಾರನ್ನು ಅಡ್ಡಗಟ್ಟಿ ಅಪಹರಿಸಿ ಕರೆದೊಯ್ದಿದ್ದರು. ಬಳಿಕ ಅವರನ್ನು ತಮಿಳುನಾಡಿನ ಡೆಂಕಣಿಕೋಟೆ ಸಮೀಪಕ್ಕೆ ಕರೆದೊಯ್ದು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವುದು ತಿಳಿದುಬಂದಿದೆ. ಇಂದು ಡೆಂಕಣಿಕೋಟೆ ಬಳಿ ಗೋಪಾಲ್ ಅವರ ಮೃತದೇಹ ಪತ್ತೆಯಾಗಿದೆ.
ನಡೆದಿದ್ದೇನು?
ಈ ಹತ್ಯೆ ಪ್ರಕರಣದಲ್ಲಿ ಮೋಹನ್ ಬಾಬು ಎಂಬ ವ್ಯಕ್ತಿ 25 ಲಕ್ಷ ರೂಪಾಯಿ ಸುಪಾರಿ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಸುಪಾರಿ ಪಡೆದ ದುಷ್ಕರ್ಮಿಗಳು ಗೋಪಾಲ್ರನ್ನು ಕಾರಿನಲ್ಲಿ ಕರೆದೊಯ್ದು ಹತ್ಯೆಗೈದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆ ತಿಳಿದು ಆಕ್ರೋಶಗೊಂಡ ಗೋಪಾಲ್ ಕುಟುಂಬಸ್ಥರು ಹಾಗೂ ಬಂಧುಗಳು ಆನೇಕಲ್ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದರು. ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಗೋಪಾಲ್ ರಿಯಲ್ ಎಸ್ಟೇಟ್ ಹಾಗೂ ಹಣಕಾಸು ವ್ಯವಹಾರ ನಡೆಸುತ್ತಿದ್ದರು. ಕರ್ಪೂರು ಗೇಟ್ ಬಳಿ ಗೋಪಾಲ್ ಹಾಗೂ ಸತೀಶ್ ಇದ್ದ ಕಾರಿಗೆ ದುಷ್ಕರ್ಮಿಗಳು ವಾಹನದಿಂದ ಡಿಕ್ಕಿ ಹೊಡೆದು, ನಂತರ ಅವರನ್ನು ಅಪಹರಿಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಕುಟುಂಬಸ್ಥರ ಶಂಕೆಯ ಮೇರೆಗೆ ಜಿಗಣಿ ಪೊಲೀಸರು ಮೋಹನ್ ಬಾಬು, ಹರೀಶ್ ಹಾಗೂ ಕಿರಣ್ ಎಂಬ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಗೋಪಾಲ್ ಪತ್ತೆಗಾಗಿ ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ನೇತೃತ್ವದಲ್ಲಿ 9 ಇನ್ಸ್ಪೆಕ್ಟರ್ಗಳೊಂದಿಗೆ 7 ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.