Category Archives: Blog

Your blog category

Bengaluru Air Quality: ಇಂದು ಸಿಲಿಕಾನ್ ಸಿಟಿಯಲ್ಲಿ ಶುದ್ಧ ಗಾಳಿ: ಬೆಂಗಳೂರಿನ AQI ಮಟ್ಟದಲ್ಲಿ ಸುಧಾರಣೆ!! – Kannada News

ಬೆಂಗಳೂರು, ಜೂನ್ 12: ಕರ್ನಾಟಕದ ಪ್ರಮುಖ ನಗರಗಳಲ್ಲಿ ಮತ್ತು ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) ಅತ್ಯಂತ ಸಮಾಧಾನಕರ ಹಾಗೂ ಆರೋಗ್ಯಕರ ಮಟ್ಟದಲ್ಲಿದೆ. ಮುಂಗಾರು ಮಳೆಯ ಪ್ರಭಾವ ಮತ್ತು ಶುದ್ಧ ಗಾಳಿಯ ಕಾರಣದಿಂದಾಗಿ ರಾಜ್ಯದ ಬಹುತೇಕ ಭಾಗಗಳಲ್ಲಿ ಮಾಲಿನ್ಯದ ಪ್ರಮಾಣ ಗಣನೀಯವಾಗಿ ಕುಸಿದಿದೆ.

ಮುಖ್ಯಾಂಶಗಳು

  • ಮುಂಗಾರು ಮಳೆಯ ಪ್ರಭಾವದಿಂದ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಅತ್ಯಂತ ಉತ್ತಮವಾಗಿದೆ.
  • ಸಿಲಿಕಾನ್ ಸಿಟಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 23-29 ದಾಖಲಾಗಿದೆ.
  • ಮಂಡ್ಯ ಮತ್ತು ಮೈಸೂರು ನಗರಗಳಲ್ಲಿ ಅತ್ಯಂತ ಶುದ್ಧ ಗಾಳಿ ವರದಿಯಾಗಿದೆ.

ಬೆಂಗಳೂರಿನ ಇಂದಿನ ವಾಯು ಗುಣಮಟ್ಟ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ವಾಯು ಗುಣಮಟ್ಟವು ಉತ್ತಮ ವಿಭಾಗದಲ್ಲಿದೆ. ನಗರದ ಸರಾಸರಿ AQI ಪ್ರಮಾಣವು 23 ರಿಂದ 29ರ ಆಸುಪಾಸಿನಲ್ಲಿ ದಾಖಲಾಗಿದೆ. PM2.5 ಕಣಗಳ ಪ್ರಮಾಣ 17 µg/m³ ಮತ್ತು PM10 ಕಣಗಳ ಪ್ರಮಾಣ 21 µg/m³ ನಷ್ಟಿದ್ದು, ಇವು ಸುರಕ್ಷಿತ ಮಿತಿಗಿಂತ ತುಂಬಾ ಒಳಗಿವೆ.

ಬಿಟಿಎಂ ಲೇಔಟ್, ಜಯನಗರ ಮತ್ತು ಸಿಲ್ಕ್ ಬೋರ್ಡ್‌ಗಳಂತಹ ಸದಾ ವಾಹನ ದಟ್ಟಣೆ ಇರುವ ಪ್ರದೇಶಗಳಲ್ಲೂ ಇಂದು ಮಳೆಯ ಕಾರಣದಿಂದಾಗಿ AQI ಮಟ್ಟವು 55 ಕ್ಕಿಂತ ಕಡಿಮೆ (ಸಾಧಾರಣ) ದಾಖಲಾಗಿದೆ. ಇದು ನಗರದ ಜನರಿಗೆ ಯಾವುದೇ ಆರೋಗ್ಯದ ಅಪಾಯವಿಲ್ಲದೆ ಮುಕ್ತವಾಗಿ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸೂಕ್ತವಾದ ವಾತಾವರಣವನ್ನು ನಿರ್ಮಿಸಿದೆ.

ಕರ್ನಾಟಕದ ಇತರೆ ಪ್ರಮುಖ ನಗರಗಳ ಸ್ಥಿತಿಗತಿ

ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರೆ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲೂ ಇಂದಿನ ವಾಯು ಗುಣಮಟ್ಟವು ಉತ್ತಮ ಸ್ಥಿತಿಯಲ್ಲಿದೆ. ಇಡೀ ರಾಜ್ಯದಲ್ಲೇ ಅತ್ಯಂತ ಸ್ವಚ್ಛವಾದ ಗಾಳಿಯನ್ನು ಹೊಂದಿರುವ ನಗರಗಳಲ್ಲಿ ಮಂಡ್ಯ ಮುಂಚೂಣಿಯಲ್ಲಿದ್ದು, ಇಲ್ಲಿನ AQI ಕೇವಲ 15ರಷ್ಟು ದಾಖಲಾಗಿದೆ.

ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ಕರಾವಳಿಯ ಮಂಗಳೂರಿನಲ್ಲಿ ಇಂದಿನ AQI 25 ರಿಂದ 30ರ ಆಸುಪಾಸಿನಲ್ಲಿದ್ದು, ಸಂಪೂರ್ಣ ಸ್ವಚ್ಛ ಮತ್ತು ಹಸಿರು ಪರಿಸರವನ್ನು ಹೊಂದಿದೆ. ಉತ್ತರ ಕರ್ನಾಟಕದ ಈ ಪ್ರಮುಖ ವಾಣಿಜ್ಯ ನಗರಗಳಲ್ಲಿ ಇಂದಿನ ವಾಯು ಗುಣಮಟ್ಟ ಸೂಚ್ಯಂಕವು 35 ರಿಂದ 45 ರಷ್ಟಿದ್ದು, ಉತ್ತಮ ಶ್ರೇಣಿಯಲ್ಲೇ ಮುಂದುವರಿದಿದೆ.

ಒಟ್ಟಾರೆಯಾಗಿ, ಜೂನ್ ತಿಂಗಳ ಈ ಮುಂಗಾರು ಅವಧಿಯಲ್ಲಿ ಸುರಿಯುತ್ತಿರುವ ಸತತ ಮಳೆ ಮತ್ತು ಬೀಸುತ್ತಿರುವ ಬಲವಾದ ಗಾಳಿಯು ಕರ್ನಾಟಕದ ನಗರಗಳಲ್ಲಿದ್ದ ಧೂಳು ಮತ್ತು ಹಾನಿಕಾರಕ ಕಣಗಳನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದಿದೆ. ಶ್ವಾಸಕೋಶದ ತೊಂದರೆ ಇರುವವರು ಹಾಗೂ ಮಕ್ಕಳು ಯಾವುದೇ ಆತಂಕವಿಲ್ಲದೆ ಇಂದಿನ ಹಿತಕರವಾದ ವಾತಾವರಣವನ್ನು ಆನಂದಿಸಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಆಲ್ಫಾ’ ಟೀಸರ್‌ಗೆ ಆರ್‌ಆರ್‌ಆರ್‌ ನಿರ್ದೇಶಕ ರಾಜಮೌಳಿ ಫಿದಾ; ಆಲಿಯಾ ಆ್ಯಕ್ಷನ್ ಅವತಾರಕ್ಕೆ ಭಾರಿ ಮೆಚ್ಚುಗೆ – Kannada News

ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ ಬಹುನಿರೀಕ್ಷಿತ, ಮಹಿಳಾ ಪ್ರಧಾನ ಆ್ಯಕ್ಷನ್ ಚಿತ್ರ ‘ಆಲ್ಫಾ’ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು ಗೊತ್ತೇ ಇದೆ. ಈ ಟೀಸರ್ ಭಾರಿ ಸದ್ದು ಮಾಡುತ್ತಿದೆ. ಟೀಸರ್‌ನಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಅವರ ರಗಡ್ ಲುಕ್‌ಗೆ ಸಿನಿರಸಿಕರು ಮಾತ್ರವಲ್ಲದೆ ಚಿತ್ರರಂಗದ ಗಣ್ಯರು ಕೂಡ ಮನಸೋತಿದ್ದಾರೆ. ಈ ಸಾಲಿನಲ್ಲಿ ಈಗ ಭಾರತೀಯ ಚಿತ್ರರಂಗದ ಹೆಮ್ಮೆಯ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಸೇರಿಕೊಂಡಿದ್ದು, ಆಲ್ಫಾ ಟೀಸರ್ ನೋಡಿ ಮೆಚ್ಚುಗೆಯ ಸುರಿಮಳೆ ಗರೆದಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಆಲ್ಫಾ ಟೀಸರ್ ಹಂಚಿಕೊಂಡಿರುವ ರಾಜಮೌಳಿ, ‘ಆಲಿಯಾ ಯಾವಾಗಲೂ ಅದ್ಭುತವಾಗಿ ನಟಿಸುತ್ತಾರೆ. ಆ್ಯಕ್ಷನ್ ಸೀಕ್ವೆನ್ಸ್‌ಗಳಲ್ಲಿ ಆಕೆಯ ನಟನೆ ಅತ್ಯುತ್ತಮ ಮತ್ತು ಭೀಕರವಾಗಿದೆ. #AlphaTeaser ಪ್ರಾಮಿಸಿಂಗ್ ಆಗಿ ಕಾಣಿಸುತ್ತಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಬರೆದುಕೊಂಡಿದ್ದಾರೆ.

ರಾಜಮೌಳಿ ಮಾತ್ರವಲ್ಲದೆ ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಮತ್ತು ದುಲ್ಕರ್ ಸಲ್ಮಾನ್ ಅವರಂತಹ ಪ್ರಮುಖ ಸ್ಟಾರ್‌ಗಳು ಆಲಿಯಾ ಭಟ್ ಅವರ ಈ ಹೊಸ ಮಾಸ್ ಅವತಾರವನ್ನು ಕೊಂಡಾಡಿದ್ದಾರೆ.

ಆರ್‌ಆರ್‌ಆರ್‌ ಒಡನಾಟ ನೆನೆದ ಅಭಿಮಾನಿಗಳು:

ನಿರ್ದೇಶಕ ಎಸ್.ಎಸ್. ರಾಜಮೌಳಿ ಮತ್ತು ಆಲಿಯಾ ಭಟ್ ನಡುವೆ ಉತ್ತಮ ವೃತ್ತಿಪರ ಒಡನಾಟವಿದೆ. ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ಬ್ಲಾಕ್‌ಬಸ್ಟರ್ ಚಿತ್ರ ‘ಆರ್‌ಆರ್‌ಆರ್‌’ (RRR) ನಲ್ಲಿ ರಾಜಮೌಳಿ ನಿರ್ದೇಶನದಲ್ಲಿ ಆಲಿಯಾ ಭಟ್ (ಸೀತಾ ಪಾತ್ರದಲ್ಲಿ) ನಟಿಸಿದ್ದರು. ಈ ಸಿನಿಮಾದ ಮೂಲಕ ಇಬ್ಬರ ನಡುವೆ ಬೆಳೆದ ಆತ್ಮೀಯ ಬಾಂಧವ್ಯ ಈಗಲೂ ಮುಂದುವರಿದಿದ್ದು, ಆಲಿಯಾ ಅವರ ಹೊಸ ಸಾಹಸಮಯ ಹೆಜ್ಜೆಗೆ ರಾಜಮೌಳಿ ಬೆನ್ನುತಟ್ಟಿದ್ದಾರೆ.

ತಂದೆ-ಮಗಳ ಹೈ-ಸ್ಟೇಕ್ ಮಿಷನ್ ಕಥೆ:

ಶಿವ ರವೈಲ್ ನಿರ್ದೇಶನದ ಈ ಚಿತ್ರದಲ್ಲಿ ಆಲಿಯಾ ಭಟ್ ಜೊತೆಗೆ ಶಾರ್ವರಿ ವಾಗ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಭಾರತದ ಮುಂದಿನ ಪೀಳಿಗೆಯ ಎಲೈಟ್ ಸೈನಿಕರನ್ನು ಸಿದ್ಧಪಡಿಸುವ ‘ಆಲ್ಫಾ’ ಎಂಬ ರಹಸ್ಯ ತರಬೇತಿ ಕಾರ್ಯಕ್ರಮದ ಸುತ್ತ ಚಿತ್ರದ ಕಥೆ ಸಾಗಲಿದ್ದು, ಬಾಬಿ ಡಿಯೋಲ್ ಇಲ್ಲಿ ಆಲಿಯಾ ಅವರ ತಂದೆಯಾಗಿ (ಬಾಬಾ), ಕಠಿಣ ಹಾಗೂ ಅಪಾಯಕಾರಿ ಮಿಷನ್ ನೀಡುವ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಆಲಿಯಾ ಭಟ್ ‘ಆಲ್ಫಾ’ ಹಾಲಿವುಡ್ ಚಿತ್ರದ ಕಾಪಿ? ಸಿಕ್ಕಿತು ಸಾಕ್ಷಿ

ಇನ್ನು ಒಂದೆಡೆ ಸೆಲೆಬ್ರಿಟಿಗಳು ಟೀಸರ್‌ ಅನ್ನು ಮುಕ್ತಕಂಠದಿಂದ ಹೊಗಳುತ್ತಿದ್ದರೆ, ಮತ್ತೊಂದೆಡೆ ಸೋಶಿಯಲ್ ಮೀಡಿಯಾದ ಕೆಲವು ನೆಟ್ಟಿಗರು ಇತ್ತೀಚೆಗೆ ಬಿಡುಗಡೆಯಾಗಿದ್ದ ರಣವೀರ್ ಸಿಂಗ್ ಅವರ ‘ಧುರಂಧರ್’ ಚಿತ್ರದ ಟೀಸರ್ ಜೊತೆಗೆ ಹೋಲಿಕೆ ಮಾಡುತ್ತಿದ್ದಾರೆ. ಇನ್ನು ಕೆಲವರು ಇದನ್ನು ಟ್ರೋಲ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಹಲವು ಬಾರಿ ಬಿಡುಗಡೆ ದಿನಾಂಕವನ್ನು ಬದಲಾಯಿಸಿಕೊಂಡಿದ್ದ ‘ಆಲ್ಫಾ’ ಅಂತಿಮವಾಗಿ 2026ರ ಜುಲೈ 3 ರಂದು ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಲೋಕಾರ್ಪಣೆಗೆ ಸಜ್ಜಾಗ್ತಿದೆ ದೇಶದ ಅತಿ ಎತ್ತರದ ಜಯದೇವ ಮೆಟ್ರೋ ಸ್ಟೇಷನ್: 155 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ – Kannada News

ಪಂಚಸ್ತರದ ಜಯದೇವ ಮೆಟ್ರೋ ನಿಲ್ದಾಣImage Credit source: tv9

ಬೆಂಗಳೂರು, ಜೂನ್ 12: ಬೆಂಗಳೂರಿನ ವಾಹನ ಸವಾರರು ಹಾಗೂ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಭರ್ಜರಿ ಸಿಹಿ ಸುದ್ದಿ ನೀಡಿದೆ. ದೇಶದಲ್ಲೇ ಅತಿ ಎತ್ತರದ ಹಾಗೂ ವಿಶಿಷ್ಟ ತಂತ್ರಜ್ಞಾನದ ಇಂಟರ್‌ಚೇಂಜ್ ನಿಲ್ದಾಣ ಎಂದೇ ಖ್ಯಾತಿ ಪಡೆದಿರುವ ಜಯದೇವ ಆಸ್ಪತ್ರೆ ಮೆಟ್ರೋ ಸ್ಟೇಷನ್ (Jayadeva Metro Station) ಇದೇ ಆಗಸ್ಟ್ ತಿಂಗಳಿನಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ. ಒಟ್ಟು ಐದು ಸ್ತರಗಳಲ್ಲಿ (5-Tier) ನಿರ್ಮಾಣವಾಗಿರುವ ದೇಶದ ಮೊದಲ ಮೆಟ್ರೋ ನಿಲ್ದಾಣ ಇದಾಗಿದ್ದು, ಇದರ ಆರಂಭದಿಂದ ಬನ್ನೇರುಘಟ್ಟ ರಸ್ತೆ ಮತ್ತು ಸುತ್ತಮುತ್ತಲಿನ ಐಟಿ ಉದ್ಯೋಗಿಗಳು ಹಾಗೂ ಸ್ಥಳೀಯ ನಿವಾಸಿಗಳ ದಶಕದ ಟ್ರಾಫಿಕ್ ಸಂಕಷ್ಟಕ್ಕೆ ಕೊನೆಗೂ ಮುಕ್ತಿ ದೊರೆಯಲಿದೆ.

ಮುಖ್ಯಾಂಶಗಳು

  • ಆಗಸ್ಟ್‌ನಲ್ಲಿ ದೇಶದ ಅತಿ ಎತ್ತರದ ಸ್ಟೇಷನ್ ಓಪನ್.
  • ₹155 ಕೋಟಿ ವೆಚ್ಚದಲ್ಲಿ ಪಂಚಸ್ತರದ ನಿಲ್ದಾಣ ನಿರ್ಮಾಣ.
  • ಗುಲಾಬಿ-ಹಳದಿ ಮಾರ್ಗಗಳ ಇಂಟರ್‌ಚೇಂಜ್ ಕನೆಕ್ಷನ್.

ದೇಶದಲ್ಲೇ ಮೊದಲ ಬಾರಿಗೆ 5 ಸ್ತರದ ಅದ್ಭುತ ಮೆಟ್ರೋ ಸ್ಟೇಷನ್ ನಿರ್ಮಾಣ

ಸುಮಾರು 155 ಕೋಟಿ ರೂ. ಭಾರಿ ವೆಚ್ಚದಲ್ಲಿ ಜಯದೇವ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣವನ್ನು ನಿರ್ಮಿಸಲಾಗಿದೆ. ಈ ಸ್ಟೇಷನ್‌ನ ವಿನ್ಯಾಸವೇ ಅತ್ಯಂತ ರೋಚಕವಾಗಿದ್ದು, ಇಂಜಿನಿಯರಿಂಗ್ ಅದ್ಭುತ ಎನ್ನಲಾಗಿದೆ. ನೆಲದ ಕೆಳಗೆ ಅಂಡರ್‌ಪಾಸ್ (Underpass), ಅದರ ಮೇಲೆ ಸಾಮಾನ್ಯ ರಸ್ತೆ, ಮೂರನೇ ಸ್ತರದಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್ (Double Decker Flyover), ನಾಲ್ಕನೇ ಸ್ತರದಲ್ಲಿ ನಮ್ಮ ಮೆಟ್ರೋದ ಹಳದಿ ಮಾರ್ಗ (Yellow Line) ಹಾಗೂ ಎಲ್ಲದಕ್ಕಿಂತ ಮೇಲಿನ ಅಂದರೆ ಐದನೇ ಸ್ತರದಲ್ಲಿ ಪಿಂಕ್ ಲೈನ್ (Pink Line) ಹಾದು ಹೋಗುತ್ತದೆ. ಸದ್ಯ ಆಗಸ್ಟ್‌ನಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಆರು ಮೆಟ್ರೋ ನಿಲ್ದಾಣಗಳ ಮಾರ್ಗವನ್ನು ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ಭರದಿಂದ ಸಿದ್ಧತೆ ನಡೆಸುತ್ತಿದೆ.

ಪ್ರಯಾಣಿಕರಿಗೆ ಸುಲಭ ಮಾರ್ಗ ಬದಲಾವಣೆ ಸೌಲಭ್ಯ

ಕಳೆದ ವರ್ಷವೇ ಆ‌ರ್‌.ವಿ. ರಸ್ತೆಯಿಂದ ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗ ಉದ್ಘಾಟನೆಯಾಗಿದ್ದರೂ, ಜಯದೇವ ಮೆಟ್ರೋ ನಿಲ್ದಾಣ ಮಾತ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಇದೀಗ ಆಗಸ್ಟ್‌ನಲ್ಲಿ ಪಿಂಕ್ ಲೈನ್‌ನ ಕಾಳೇನ ಅಗ್ರಹಾರ-ತಾವರೆಕೆರೆ ನಡುವೆ ಮೆಟ್ರೋ ಸಂಚಾರ ಆರಂಭವಾದರೆ, ಪ್ರಯಾಣಿಕರು ಸುಲಭವಾಗಿ ಮಾರ್ಗ ಬದಲಾಯಿಸಬಹುದು. ಬನ್ನೇರುಘಟ್ಟ ರಸ್ತೆಯಿಂದ ಬರುವವರು ಜಯದೇವ ನಿಲ್ದಾಣದಲ್ಲಿ ಇಳಿದು ಹಳದಿ ಮಾರ್ಗದ ಮೂಲಕ ಆ‌ರ್‌.ವಿ. ರಸ್ತೆ ತಲುಪಬಹುದು. ಅಲ್ಲಿಂದ ನೇರವಾಗಿ ಮೆಜೆಸ್ಟಿಕ್ ಹಾಗೂ ಹಸಿರು ಮಾರ್ಗದ (Green Line) ಸಿಲ್ಕ್ ಇನ್ಸ್ಟಿಟ್ಯೂಟ್‌ನಿಂದ ಮಾದಾವರದವರೆಗೆ ಟ್ರಾಫಿಕ್ ಕಿರಿಕಿರಿ ಇಲ್ಲದೆ ಪ್ರಯಾಣಿಸಬಹುದಾಗಿದೆ.

ಸುತ್ತಮುತ್ತಲಿನ ಜನತೆಗೆ ನಿಟ್ಟುಸಿರು

ಈ ನೂತನ ಇಂಟರ್‌ಚೇಂಜ್ ನಿಲ್ದಾಣದ ಕಾರ್ಯಾಚರಣೆಯಿಂದ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ (IIMB), ಜೆ.ಪಿ. ನಗರ ಹಾಗೂ ತಾವರೆಕೆರೆ ಸುತ್ತಮುತ್ತಲಿನ ಲಕ್ಷಾಂತರ ಜನರಿಗೆ ಆನೆ ಬಲ ಬಂದಂತಾಗಲಿದೆ. ಪಿಂಕ್ ಲೈನ್ ಸಂಪೂರ್ಣವಾಗಿ ಕಾರ್ಯಾರಂಭ ಮಾಡುತ್ತಿದ್ದಂತೆ ಪ್ರಯಾಣಿಕರು ಗ್ರೀನ್, ಪರ್ಪಲ್ ಮತ್ತು ಯೆಲ್ಲೋ ಲೈನ್‌ಗಳಿಗೆ ಸುಲಭವಾಗಿ ಕನೆಕ್ಟ್ ಮಾಡಿಕೊಂಡು ನಗರದ ಯಾವುದೇ ಮೂಲೆಗಾದರೂ ನಿರಾಯಾಸವಾಗಿ ಸಂಚರಿಸಬಹುದಾಗಿದೆ ಎಂದು ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರು ಸಂತಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುಜರಾತ್: ಏರ್ ಇಂಡಿಯಾ ಅಪಘಾತವಾದ ಸ್ಥಳದಲ್ಲಿ ಸುಸಜ್ಜಿತ ವೈದ್ಯಕೀಯ ಹಾಸ್ಟೆಲ್ ಸಂಕೀರ್ಣ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ – Kannada News

ಗಾಂಧಿನಗರ, ಜೂನ್ 12: ಕಳೆದ ವರ್ಷ ಜೂನ್ 12 ರಂದು ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ(Air India) AI-171 ವಿಮಾನ ದುರಂತದ ಕಹಿ ನೆನಪಿಗೆ ಈಗ ಒಂದು ವರ್ಷ ತುಂಬಿದೆ. ಈ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗುಜರಾತ್ ಸರ್ಕಾರವು ಅತ್ಯಂತ ಮಾನವೀಯ ನಿರ್ಧಾರವೊಂದನ್ನು ಪ್ರಕಟಿಸಿದೆ. 260 ಮಂದಿ ಪ್ರಾಣ ಕಳೆದುಕೊಂಡ ದುರಂತದ ಆ ಜಾಗವನ್ನು ಈಗ ಭವಿಷ್ಯದ ವೈದ್ಯರನ್ನು ರೂಪಿಸುವ, ಜೀವ ಉಳಿಸುವ ಪವಿತ್ರ ಶೈಕ್ಷಣಿಕ ಕೇಂದ್ರವನ್ನಾಗಿ ಮರು ಅಭಿವೃದ್ಧಿ ಮಾಡಲು ಸರ್ಕಾರ ಮುಂದಾಗಿದೆ.

ಬಿಜೆ ವೈದ್ಯಕೀಯ ಕಾಲೇಜಿನ ಹಳೆಯ ಹಾಸ್ಟೆಲ್ ಸಂಕೀರ್ಣಕ್ಕೆ ವಿಮಾನ ಡಿಕ್ಕಿ ಹೊಡೆದಿದ್ದ ಸ್ಥಳದಲ್ಲಿ, ಹಳೆಯ ಶಿಥಿಲಗೊಂಡ ರಚನೆಗಳನ್ನು ಕೆಡವಿ ಹೊಸ ಆಧುನಿಕ ಹಾಸ್ಟೆಲ್ ಸಂಕೀರ್ಣವನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.

ಜತೆಗೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನೇತೃತ್ವದ ಸಭೆಯ ವಿವರಗಳನ್ನು ಹಂಚಿಕೊಂಡ ರಾಜ್ಯ ಆರೋಗ್ಯ ಸಚಿವ ಪ್ರಫುಲ್ ಪನ್ಶೇರಿಯಾ, ಆ ಸ್ಥಳದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಮುಂದುವರಿಸುವುದು ಅತ್ಯಂತ ಅರ್ಥಪೂರ್ಣ ಮತ್ತು ಪವಿತ್ರ ಕೆಲಸವಾಗಿದೆ. ಭವಿಷ್ಯದಲ್ಲಿ ಇಲ್ಲಿ ಸಾವಿರಾರು ವೈದ್ಯರು ವಿದ್ಯಾಭ್ಯಾಸ ಮಾಡಿ ರೋಗಿಗಳ ಸೇವೆ ಸಲ್ಲಿಸಲಿದ್ದಾರೆ. ಅಗಲಿದ ಆತ್ಮಗಳಿಗೆ ಇದಕ್ಕಿಂತ ಉತ್ತಮ ಗೌರವ ಬೇರೊಂದಿಲ್ಲ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಓದಿ:
ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು

ಏಳು ಹೊಸ ಬ್ಲಾಕ್‌ಗಳ ಆಧುನಿಕ ಸಂಕೀರ್ಣ
ಮೇ 27 ರಂದು ಔಪಚಾರಿಕವಾಗಿ ಘೋಷಿಸಲಾದ ಈ ಪುನರಾಭಿವೃದ್ಧಿ ಯೋಜನೆಯಡಿ, ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ಅತ್ಯಾಧುನಿಕ ಸೌಲಭ್ಯಗಳನ್ನು ನಿರ್ಮಿಸಲಾಗುವುದು.

ವಸತಿ ಸೌಕರ್ಯ: ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ಏಳು ಹೊಸ ಕಟ್ಟಡಗಳ (Blocks) ಹಾಸ್ಟೆಲ್ ಸಂಕೀರ್ಣ.

ಇತರ ಸೌಲಭ್ಯಗಳು: ವಿಶಾಲವಾದ ಡೈನಿಂಗ್ ಮೆಸ್, ಆಧುನಿಕ ಜಿಮ್ನಾಷಿಯಂ, ಮನರಂಜನಾ ಪ್ರದೇಶಗಳು ಮತ್ತು ಆಕರ್ಷಕ ರಸ್ತೆ ಹಾಗೂ ತೋಟದ ವಿನ್ಯಾಸ. ಈ ಬೃಹತ್ ಯೋಜನೆಗೆ ಏರ್ ಇಂಡಿಯಾ ಆರ್ಥಿಕ ನೆರವು ನೀಡುತ್ತಿದ್ದು, ಗುಜರಾತ್ ಸರ್ಕಾರವು ಹೆಚ್ಚುವರಿ ಹಣವನ್ನು ಒದಗಿಸುತ್ತಿದೆ.

ವಿಧಿವಿಜ್ಞಾನ ಮತ್ತು ವೈದ್ಯಕೀಯ ತಂಡಗಳ ಶ್ಲಾಘನೀಯ ಸೇವೆ
ದುರಂತದ ನಂತರದ ಕಠಿಣ ದಿನಗಳಲ್ಲಿ ಅಹಮದಾಬಾದ್ ಸಿವಿಲ್ ಆಸ್ಪತ್ರೆ ಮತ್ತು ವಿಧಿವಿಜ್ಞಾನ ತಂಡಗಳು ತೋರಿದ ಕರ್ತವ್ಯನಿಷ್ಠೆಯನ್ನು ಸಚಿವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಬೆಂಕಿಯ ತೀವ್ರತೆಯಿಂದಾಗಿ ಮೃತರ ಗುರುತು ಪತ್ತೆ ಹಚ್ಚುವುದು ಕಷ್ಟವಾಗಿದ್ದಾಗ, ಈ ತಂಡಗಳು ಹಗಲಿರುಳು ಶ್ರಮಿಸಿ ಡಿಎನ್‌ಎ (DNA) ಪರೀಕ್ಷೆಗಳ ಮೂಲಕ ಅತ್ಯಂತ ಸೂಕ್ಷ್ಮವಾಗಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ಕಾರ್ಯ ಮಾಡಿದ್ದವು.

ವಾರ್ಷಿಕೋತ್ಸವದ ಅಂಗವಾಗಿ ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ದುರಂತದಲ್ಲಿ ಅಗಲಿದ ಆತ್ಮಗಳ ಚಿರಶಾಂತಿಗಾಗಿ ವಿಶೇಷ ಪ್ರಾರ್ಥನಾ ಸಭೆಯನ್ನು ಆಯೋಜಿಸಲಾಗಿದೆ. ಒಂದು ಕಡೆ ಅಪಘಾತದ ತನಿಖೆ ಮತ್ತು ಪರಿಹಾರ ಪ್ರಕ್ರಿಯೆಗಳು ನಡೆಯುತ್ತಿದ್ದರೂ, ಮತ್ತೊಂದೆಡೆ ದುರಂತ ಸಂಭವಿಸಿದ ಜಾಗದಲ್ಲೇ ನೂರಾರು ಜೀವಗಳನ್ನು ಉಳಿಸುವ ವೈದ್ಯರ ವಸತಿ ನಿಲಯ ತಲೆಯೆತ್ತುತ್ತಿರುವುದು ಜಗತ್ತಿಗೆ ಮಾನವೀಯತೆಯ ವಿಶಿಷ್ಟ ಸಂದೇಶವನ್ನು ಸಾರುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್‌ ಟ್ವಿಸ್ಟ್: ರಿಟ್ ಅರ್ಜಿಯಲ್ಲಿ ನಟ ಪ್ರಕಾಶ್‌ ರಾಜ್‌ ಹೆಸರು ಉಲ್ಲೇಖಿಸಿದ ಚಿನ್ನಯ್ಯ! – Kannada News

ನಟ ಪ್ರಕಾಶ್ ರಾಜ್ ಹಾಗೂ ಪೊಲೀಸ್ ಜತೆ ಚಿನ್ನಯ್ಯImage Credit source: TV9 Network

ಬೆಂಗಳೂರು, ಜೂನ್ 12: ಧರ್ಮಸ್ಥಳ ಗ್ರಾಮದ ಬುರುಡೆ ಕೇಸ್ ಕೇಸ್‌ಗೆ (Dharmasthala Skull Case) ಬಿಗ್ ಟ್ವಿಸ್ಟ್ ಸಿಕ್ಕಿದೆ. ತನ್ನನ್ನು ಬಳಸಿಕೊಂಡು ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ಚಿನ್ನಯ್ಯ (Chinnayya) ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾನೆ. ಈ ಬಗ್ಗೆ SIT ತನಿಖೆಯನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿದ್ದಾನೆ. ಷಡ್ಯಂತ್ರದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಜಯಂತ್, ಯೂಟ್ಯೂಬರ್‌ಗಳಾದ ಸಮೀರ್ ಎಂ.ಡಿ., ಅಜಯ್, ದಿನೇಶ್ ಸೇರಿದಂತೆ ಹಲವರ ಪಾತ್ರದ ಬಗ್ಗೆ ಉಲ್ಲೇಖಿಸಲಾಗಿದೆ. ನಟ ಪ್ರಕಾಶ್ ರಾಜ್ (Prakash Raj) ಬಗ್ಗೆಯೂ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಚಿನ್ನಯ್ಯ ರಿಟ್ ಅರ್ಜಿಯಲ್ಲೇನಿದೆ?

‘ವಿಠಲ್ ಗೌಡ ತಮ್ಮನ್ನು ಮಹೇಶ್ ಶೆಟ್ಟಿ ತಿಮರೋಡಿಗೆ ಪರಿಚಯಿಸಿದರು. ಧರ್ಮಸ್ಥಳದಲ್ಲಿ ಅನೇಕ ಶವಗಳನ್ನು ದಫನ್‌ ಮಾಡಲಾಗಿದೆ. ಅಲ್ಲಿ ಸಾವಿರಾರು ಶವಗಳಿವೆ ಎಂದು ಹೇಳಲು ನಿರ್ದೇಶಿಸಿದರು. ನಂತರ ಗಿರೀಶ್ ಮಟ್ಟಣ್ಣನವರ್, ವಿಠಲ್ ಗೌಡ, ಗಣೇಶ್ ಮತ್ತಿತರರು ಕೇರಳ, ತಮಿಳುನಾಡು ಸೇರಿದಂತೆ ಹಲವೆಡೆ ಕರೆದೊಯ್ದರು. ಆಗಿಂದಾಗ್ಗೆ 5 ಸಾವಿರ, 15 ಸಾವಿರ ಹಣ ನೀಡುತ್ತಿದ್ದರು. ನಂತರ ಬೆಂಗಳೂರಿನ ಜಯಂತ್ ಮನೆಗೆ ಕರೆದೊಯ್ದು ತಲೆ ಬುರುಡೆ ಕೊಟ್ಟು ಕೈಯಲ್ಲಿ ಹಿಡಿದುಕೊಳ್ಳುವಂತೆ ಸೂಚಿಸಿ ಫೋಟೋ ತೆಗೆದುಕೊಂಡರು. ನಂತರ ವಕೀಲರ ಕಚೇರಿಗೆ ಕರೆದೊಯ್ದು ಅಲ್ಲಿ ಸಹಿ ಪಡೆದರು. ನಂತರ ಸುಜಾತಾ ಭಟ್‌ ಅವರೊಂದಿಗೆ ಗಿರೀಶ್ ಮಟ್ಟಣ್ಣನವರ್ ತಮ್ಮನ್ನೂ ದೆಹಲಿಗೆ ಸುಪ್ರೀಂಕೋರ್ಟ್‌ಗೆ ಕರೆದೊಯ್ದರು. ನಂತರ ಉಜಿರೆಗೆ ತೆರಳಿದಾಗ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದಲ್ಲಿ ಕೂಡಿ ಹಾಕಲಾಗಿತ್ತು. ಸಂಜೆ ವೇಳೆ ಗಿರೀಶ್ ಮಟ್ಟಣ್ಣನವರ್ ಅವರ ತಲೆ, ಕಾಲುಗಳನ್ನು ಮಸಾಜ್ ಮಾಡಲು, ಮಹೇಶ್ ಶೆಟ್ಟಿ ತಿಮರೋಡಿ ಅವರಿಗೂ ಮಸಾಜ್ ಮಾಡಲು ಒತ್ತಾಯಿಸಲಾಗುತ್ತಿತ್ತು. ಅವರ ಕೃಷಿ ಭೂಮಿಯಲ್ಲಿ ಕೆಲಸ ಮಾಡಿಸುತ್ತಿದ್ದರು. ವಕೀಲರು ಹೇಳಿದಂತೆ ಕೋರ್ಟ್‌ಗೆ ಹೇಳದಿದ್ದರೆ ಕೊಂದು ಅದೇ ಜಾಗದಲ್ಲಿ ಹೂಳುವುದಾಗಿ ಬೆದರಿಸಿದ್ದರು. ಸಮೀರ್ ಎಂ.ಡಿ. ಅಜಯ್ ಅವರ ಯೂಟ್ಯೂಬ್ ಚಾನಲ್‌ಗಳಲ್ಲಿ ಅವರ ಸೂಚನೆಯಂತೆ ಹೇಳಿಸಿ ರೆಕಾರ್ಡ್ ಮಾಡಿಸಲಾಯಿತು. ಮನೆ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ಚೆಕ್ ನೀಡುವುದಾಗಿ ಭರವಸೆ ನೀಡಿದ್ದರು’
ಎಂದು ಚಿನ್ನಯ್ಯನ ರಿಟ್ ಅರ್ಜಿಯಲ್ಲಿ ಉಲ್ಲೇಖವಾಗಿದೆ.

ಹೀಗೆ, ಬುರುಡೆ ಗ್ಯಾಂಗ್‌ನ ಷಡ್ಯಂತ್ರವನ್ನು ರಿಟ್‌ ಅರ್ಜಿಯಲ್ಲಿ ಉಲ್ಲೇಖಿಸಿರುವ ಮಾಸ್ಕ್‌ಮ್ಯಾನ್‌ ಚಿನ್ನಯ್ಯ, ಮತ್ತೊಂದು ಸ್ಫೋಟಕ ಹೆಸರನ್ನು ಬಯಲಿಗೆ ತಂದಿದ್ದಾನೆ. ಬಹುಭಾಷಾ ಖ್ಯಾತ ನಟ ಪ್ರಕಾಶ್‌ ರಾಜ್‌ ಹೆಸರನ್ನೂ ಸಹ ಚಿನ್ನಯ್ಯ ಉಲ್ಲೇಖ ಮಾಡಿದ್ದಾನೆ.

ಪ್ರಕಾಶ್‌ ರಾಜ್‌ ಹೆಸರು ಉಲ್ಲೇಖಿಸಿದ ಚಿನ್ನಯ್ಯ

ತಲೆ ಬುರುಡೆ ನೀಡಿ ಪೊಲೀಸರಿಗೆ ದೂರು ಕೊಟ್ಟ ಬಳಿಕ ಕೇರಳದ ರೆಸಾರ್ಟ್‌ಗೆ ಕರೆದೊಯ್ದರು. ಅಲ್ಲಿ ರಾತ್ರಿ 8 ಗಂಟೆಗೆ ನಟ ಪ್ರಕಾಶ್ ರಾಜ್ ಅವರಿಗೆ ಕರೆ ಮಾಡಿ ಅರ್ಜಿದಾರರಿಗೆ ಫೋನ್ ನೀಡಿದರು. ಪ್ರಕಾಶ್ ರಾಜ್ ಅವರು ತಮಿಳಿನಲ್ಲಿ ಮಾತನಾಡಿ ಗಿರೀಶ್ ಮಟ್ಟಣ್ಣನವರ್ ಹೇಳಿಕೊಟ್ಟಂತೆ ಹೇಳಿಕೆ ನೀಡಬೇಕು. ತಾವು 29 ನೇ ತಾರೀಕಿಗೆ ಬಂದು ಅಪ್ಪಿಕೊಳ್ಳುವುದಾಗಿ ಹೇಳಿದರು. ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದಾಗ ಸಂಭ್ರಮಿಸಿ ವೀರೇಂದ್ರ ಹೆಗ್ಗಡೆ ಅವರನ್ನು ಜೈಲಿಗೆ ಕಳುಹಿಸುವ ಸಮಯ ಬಂದಿತೆಂದು ಸಂಭ್ರಮಿಸಿದರು. ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣವರ್ ಬಂಗ್ಲೆಗುಡ್ಡದ ಸ್ಥಳ ಗುರುತಿಸಿ ಅಲ್ಲಿ ಉತ್ಖನನ ನಡೆಸಿ ಸರ್ಕಾರದ ಹಣ ವ್ಯಯ ಮಾಡಿಸುವಂತೆ ಸೂಚಿಸಿದರು. ಯೋಜನೆಯ ಬಜೆಟ್ 200 ಕೋಟಿ ಇದ್ದು, ವೀರೇಂದ್ರ ಹೆಗ್ಗಡೆ ಅವರನ್ನು ಜೈಲಿಗೆ ಕಳುಹಿಸಲು ಸಹಕರಿಸಿದರೆ 50 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದರು. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಜಯಂತ್, ಯೂಟ್ಯೂಬರ್‌ಗಳಾದ ಸಮೀರ್ ಎಂ.ಡಿ., ಅಜಯ್, ದಿನೇಶ್ ಅವರು ಹೇಳಿದ ಜಾಗಗಳನ್ನು SITಗೆ ತೋರಿಸುವಂತೆ ಸೂಚಿಸಿ, ಹಾಗೆ ಮಾಡದಿದ್ದರೆ ತಮ್ಮ ಪತ್ನಿಯನ್ನ ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಆದರೆ ಅಲ್ಲಿ ಯಾವುದೇ ಶವದ ಅವಶೇಷ ಸಿಗಲಿಲ್ಲ. ಧರ್ಮಸ್ಥಳದ ವಿರುದ್ಧ ಇವರ ಷಡ್ಯಂತ್ರದಿಂದ ಭೀತನಾಗಿ ಸತ್ಯ ಹೇಳಲು ತೀರ್ಮಾನಿಸಿದೆ. ನಂತರ SIT ಮುಂದೆ ಷಡ್ಯಂತ್ರದ ಹೇಳಿಕೆ ನೀಡಿದೆ ಎಂದು ಚಿನ್ನಯ್ಯ ಉಲ್ಲೇಖಿಸಿದ್ದಾನೆ.

ಇದನ್ನೂ ಓದಿ: ಧರ್ಮಸ್ಥಳಕ್ಕೆ ಕಳಂಕ ತರಲು ಬುರುಡೆ ಗ್ಯಾಂಗ್ ಹುನ್ನಾರ: 200 ಕೋಟಿ ಬಜೆಟ್ ಇಟ್ಟುಕೊಂಡು ಷಡ್ಯಂತ್ರ

ಹೀಗೆ, ಇಡೀ ಪ್ರಕರಣದಲ್ಲಿ ಸ್ಫೋಟಕ ತಿರುವು ಎಂಬಂತೆ ಪ್ರಕಾಶ್‌ ರಾಜ್‌ ಹೆಸರನ್ನೂ ಚಿನ್ನಯ್ಯ ರಿಟ್‌ ಅರ್ಜಿಯಲ್ಲಿ ಉಲ್ಲೇಖಿಸಿರುವುದು ತೀವ್ರ ಅಚ್ಚರಿ ಮೂಡಿಸಿದೆ. ತಾವು ಹೇಳಿಕೆ ನೀಡಿದ ಬಳಿಕ ಷಡ್ಯಂತ್ರ ರೂಪಿಸಿದವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸರ್ಕಾರ, ಎಸ್‌ಐಟಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಚಿನ್ನಯ್ಯ ಕೋರಿದ್ದಾನೆ. ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರ SITಗೆ ನೋಟಿಸ್ ಜಾರಿಗೊಳಿಸಿದೆ. ಜೂನ್ 29 ರೊಳಗೆ SIT ತನಿಖೆಯ ಸ್ಥಿತಿಗತಿ ಬಗ್ಗೆ ವಿವರ ಒದಗಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?

ಟಿವಿ9 ಕನ್ನಡ ಡಿಜಿಟಲ್​ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ ಎಂದು ಡಾ.ಬಸವರಾಜ ಗುರೂಜಿ ತಿಳಿಸಿದ್ದಾರೆ. ಹಿಂದೂ ಸನಾತನ ಸಂಪ್ರದಾಯದಲ್ಲಿ, ಹೆಣ್ಣುಮಕ್ಕಳಂತೆ ಗಂಡು ಮಕ್ಕಳಿಗೂ ಕಿವಿ ಚುಚ್ಚಿಸುವ ಪದ್ಧತಿ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದೆ. ಇದನ್ನು ಕರ್ಣವೇದ ಸಂಸ್ಕಾರ ಎಂದು ಕರೆಯಲಾಗುತ್ತದೆ. ಇದು ಕೇವಲ ಅಲಂಕಾರ ಅಥವಾ ಫ್ಯಾಷನ್ ಆಗಿರದೆ, ಅನೇಕ ಆಧ್ಯಾತ್ಮಿಕ, ವೈಜ್ಞಾನಿಕ ಮತ್ತು ಶೈಕ್ಷಣಿಕ ಪ್ರಯೋಜನಗಳನ್ನು ಹೊಂದಿದೆ.

ಸಾಮಾನ್ಯವಾಗಿ ಉಪನಯನ ಸಮಯದಲ್ಲಿ ಅಥವಾ 21 ವರ್ಷದ ಒಳಗಿನ ಮಕ್ಕಳಿಗೆ ಕಿವಿ ಚುಚ್ಚಿಸುವುದು ಶುಭ ಎಂದು ಪರಿಗಣಿಸಲಾಗುತ್ತದೆ. ಆಧ್ಯಾತ್ಮಿಕವಾಗಿ, ಇದು ದೇಹವನ್ನು ಋಣಾತ್ಮಕ ಶಕ್ತಿಗಳಿಂದ ಮತ್ತು ರಾಹು-ಕೇತುಗಳ ಕೆಟ್ಟ ಪ್ರಭಾವಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಕಿವಿ ಚುಚ್ಚಿಸಿದಾಗ ದೇಹವು ಭಿನ್ನ ಆಗಿ, ಕೆಟ್ಟ ಶಕ್ತಿಗಳ ಆವಾಹನೆಯಾಗುವುದಿಲ್ಲ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

Source link

Horoscope Today: ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 12, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ಪರಾಭವ ನಾಮ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠಮಾಸ, ಗ್ರೀಷ್ಮ ಋತು, ಕೃಷ್ಣಪಕ್ಷ, ದ್ವಾದಶಿ, ಭರಣಿ ನಕ್ಷತ್ರ, ಅತಿಗಂಡ ಯೋಗ, ತೈತಿಲಕರಣವನ್ನು ಒಳಗೊಂಡಿದೆ. ರಾಹುಕಾಲವು ಬೆಳಗ್ಗೆ 10:41 ರಿಂದ ಮಧ್ಯಾಹ್ನ 12:18 ರವರೆಗೆ ಇರಲಿದ್ದು, ಶುಭಕಾಲವು ಮಧ್ಯಾಹ್ನ 12:19 ರಿಂದ 1:56 ರವರೆಗೆ ಇರುತ್ತದೆ ಎಂದು ಗುರೂಜಿ ಹೇಳಿದ್ದಾರೆ.

ಶುಕ್ರವಾರವು ಶ್ರೀ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಲು ಸೂಕ್ತ ದಿನವಾಗಿದ್ದು, ಪ್ರದೋಷದ ಕಾಲವೂ ಇದಾಗಿದೆ. ಅಂತರಾಷ್ಟ್ರೀಯವಾಗಿ ವಿಶ್ವ ಬಾಲ ಕಾರ್ಮಿಕರ ದಿನಾಚರಣೆಯೂ ಇಂದೇ. ಗ್ರಹಗಳ ಸಂಚಾರದಂತೆ, ರವಿಯು ವೃಷಭ ರಾಶಿಯಲ್ಲಿ ಹಾಗೂ ಚಂದ್ರನು ಮೇಷ ರಾಶಿಯ ಭರಣಿ ನಕ್ಷತ್ರದಲ್ಲಿ ಸಂಚರಿಸುತ್ತಾನೆ ಎಂದು ಬಸವರಾಜ ಗುರೂಜಿ ತಿಳಿಸಿದ್ದಾರೆ.

Source link

Horoscope Today 12 June: ಇಂದು ಈ ರಾಶಿಯವರು ತಮ್ಮ ಪ್ರಭಾವವನ್ನು ಬಳಸುವಲ್ಲಿ ಎಡವುವರು – Kannada News

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಮೃಗಶಿರಾ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಭರಣೀ, ಯೋಗ : ಸೌಭಾಗ್ಯ, ಕರಣ : ತೈತಿಲ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 51 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:47 – 12:24, ಯಮಗಂಡ ಕಾಲ 15:38 – 17:15, ಗುಳಿಕ ಕಾಲ 07:34 – 09:11

ಮೇಷ ರಾಶಿ :

ನಿಮ್ಮನ್ನು ಬುದ್ಧಿಯನ್ನು ಯಾರಾದರೂ ಬಳಸಿಕೊಂಡು ಕೈಬಿಡಬಹುದು. ನೀವಿಂದು ಮಂಗಲಕಾರ್ಯಗಳಿಗೆ ಹಣವನ್ನು ನೀಡುವಿರಿ. ಪರರಿಂದ ಆದ ಪ್ರಚೋದನೆಯು ತಾತ್ಕಾಲಿಕವಾಗಿ ಉಪಶಮನವಾಗಲಿದೆ. ಯೋಜನೆಯನ್ನು ಸಾಕಾರಗೊಳಿಸಲು ಒಳ್ಳೆಯ ಕಾಲ ದುಡಿಮೆಗೆ ತಕ್ಕ ಫಲ ಸಿಗಲಿದೆ. ವಿದ್ಯಾಭ್ಯಾಸದ ಬಗದಗೆ ಅತಿಯಾದ ಚಿಂತೆ ಬೇಡ. ಆಗುವುದು ಆಗಿಯೇ ಆಗುವುದು ಎಂಬ ಸತ್ಯ ತಿಳಿದಿರಿಲಿ. ಆರೋಗ್ಯವು ಹಾಳಾಗಬಹುದು.

ವೃಷಭ ರಾಶಿ :

ಆದಾಯವನ್ನು ಭೂಮಿಯ ಖರೀದಿಗೆ ಹಾಕುವ ಯೋಜನೆ ಬರುವುದು. ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಲ್ಲ ಕಡೆ ಎಂದು ಅನ್ನಿಸುತ್ತಿರಬಹುದು. ಅದನ್ನು ಆಲೋಚನೆಯಿಂದ ದೂರವಿರಿಸಿ. ಸಿಗುವ ಮನ್ನಣೆಯು ಮತ್ತೇನನ್ನೋ ಬಯಸುವ ಸಂದೇಹ ಬರಲಿದೆ. ಸೌಂದರ್ಯಪ್ರಜ್ಞೆಯು ನಿಮಗೆ ವರದಾನವೆಂದೇ ತಿಳಿಯುತ್ತದೆ. ನಿಮ್ಮ ಬಗ್ಗೆ ನಿಮ್ಮ ಶತ್ರಗಳು ವಿವರವನ್ನು ಕಲೆಹಾಕಬಹುದು. ಅತಿಯಾದ ನಿರ್ಲಕ್ಷ್ಯ ಬೇಡ.

ಮಿಥುನ ರಾಶಿ :

ಇಂದು ನಿಮ್ಮ ಸ್ವಂತ ವಾಹನದಲ್ಲಿ ಪ್ರಯಾಣ ಅನಿವಾರ್ಯವಾಗಬಹುದು, ಇಂದು ಎಲ್ಲಿಗೂ ಪ್ರಯಾಣ ಮಾಡಬೇಡಿ. ಯಾರಿಂದಲಾದರೂ ನಿಮಗೆ ಮುಖ್ಯ ಸ್ಥಾನ ದೊರೆಯಬಹುದು. ಒಳ್ಳೆಯ ಮನಸ್ಸಿನ ಪ್ರಯತ್ನಕ್ಕೆ ದೈವಾನುಕೂಲ ಲಭಿಸುವುದು. ಹಣಕಾಸಿನಲ್ಲಿ ಬಂಡವಾಳ ಹೂಡಿಕೆಗೆ ಸಮಯ ಸೂಕ್ತ. ಕುಟುಂಬದಲ್ಲಿ ಸಂತೋಷದ ಕ್ಷಣಗಳ ಅನುಭವ. ದೀರ್ಘಕಾಲದ ಅನಂತರ ಸ್ನೇಹಿತರ ಜೊತೆ ಭೇಟಿಯಾಗಬಹುದು.

ಕರ್ಕಾಟಕ ರಾಶಿ :

ಅಭಾವದ ಕಾರಣ ಅಧ್ಯಾತ್ಮದಲ್ಲಿ ಒಲವು ಮೂಡಬಹುದು. ನಿಮಗೆ ಗೌರವ ಸಿಗದ ಜಾಗದಲ್ಲಿ ಹೆಚ್ಚು ಕಾಲ ಇರಲಾರಿರಿ. ಮಕ್ಕಳಿಂದ ಸಂತೋಷ ಸಿಗುತ್ತದೆ. ಪ್ರಯಾಣದ ಸಾಧ್ಯತೆಯೂ ಇದೆ. ಆದರೆ ಸಂಜೆ ಸಮಸ್ಯೆಗಳು ಹೆಚ್ಚಾಗಬಹುದು. ಬಂಧುಗಳ ಮನೆಗೆ ಅತಿಥಿಯಾಗಿ ಆಹ್ವಾನ ಬರಬಹುದು. ಅಪಕ್ವಮನುಷ್ಯರ ಜೊತೆ ಮಾತುಕತೆಗಳು ಬೇಡ. ಅಪಮಾನವಾದೀತು. ಸಮಾರಂಭಗಳಲ್ಲಿ ಬಂಧುಗಳು ನಿಮ್ಮನ್ನು ಭೇಟಿಯಾಗುವರು.

ಸಿಂಹ ರಾಶಿ :

ನಿಮ್ಮ ಕೆಲಸದ ಸ್ಥಳದಲ್ಲಿ ಸವಾಲುಗಳಿದ್ದು ಸಹಕಾರದ ಅಗತ್ಯವಲಿದೆ ಹಣಕಾಸಿನಲ್ಲಿ ಚಿಕ್ಕ ಶ್ರಮದಿಂದ ಲಾಭ ಸಾಧ್ಯ. ನಿಮ್ಮಿಂದ ಬಯಸಿದ್ದನ್ನು ನೀಡುವುದು ಕಷ್ಟ. ಸ್ನೇಹಿತರಿಂದ ಖುಷಿಯ ಸುದ್ದಿ ಕೇಳಬಹುದು. ಮನಸ್ಸು ಶಾಂತವಾಗಿರಿಸಲು ಪ್ರಯತ್ನಿಸಿ. ಅನಿರೀಕ್ಷಿತವಾಗಿ ಬಂಧುಗಳ ಭೇಟಿಯಾಗಲಿದೆ. ಆದರೂ ನಿಮ್ಮ ಯೋಜಿತವಾದ ಕಾರ್ಯಗಳು ನಿರ್ಬಿಡೆಯಿಂದ ಸಾಗುವುದು. ಪ್ರಭಾವಿ ವ್ಯಕ್ತಿತ್ವವು ನಿಮಗೆ ಅನುಸರಣೀಯವಾಗಬಹುದು.

ಕನ್ಯಾ ರಾಶಿ :

ಯಾರ ಒತ್ತಡಕ್ಕೂ ತಲೆಬಾಗದೇ ಇದ್ದರೆ ನಿಮ್ಮನ್ನು ಅನ್ಯರೀತಿಯಲ್ಲಿ ನೋಡಬಹುದು. ವರ್ಗಾವಣೆಗಾಗಿ ಕಾಯುತ್ತಿದ್ದವರಿಗೆ ಒಳ್ಳೆಯ ಸುದ್ದಿ ಸಿಗಬಹುದು. ವಿದೇಶದಲ್ಲಿ ಅವಕಾಶಗಳು ಸಿಗುವ ಸಾಧ್ಯತೆ ಇದೆ. ಬಾಂಧವ್ಯ ಸ್ಥಿರತೆಗೆ ಬದ್ಧಮನಸ್ಸಿರುವುದು. ಅವುಗಳಿಂದ ದೂರವಿರುವುದು ಉಚಿತ. ನಿಮ್ಮ ಅಹಂಕಾರಕ್ಕೆ ಪೆಟ್ಟುಬೀಳುವುದು. ಯಾವ ವಿವರಗಳನ್ನೂ ಕೊಡಬೇಡಿ. ಅದನ್ನು ಹೊಂದಿಸುವುದು ಕಷ್ಟವಾದೀತು. ವಾಗ್ವಾದವಾಗುವುದೆಂಬ ಭಯವೂ ನಿಮ್ಮನ್ನು ಕಾಡುವುದು.

ತುಲಾ ರಾಶಿ :

ನೀವು ಏನೂ ಗೊತ್ತಿಲ್ಲದವರಂತೆ ವರ್ತಿಸಿ, ಮುಂಬರುವ ಸಂಕಟದಿಂದ ಬಚಾವಾಗುವಿರಿ. ನಿರ್ಧಾರಗಳ ಮೇಲೆ ಸ್ಥಿರವಾಗಿರುವುದು ಯಶಸ್ಸು ತರುತ್ತದೆ. ಹಣಕಾಸಿನಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ. ಪರರ ಸಂಪತ್ತಿನ ಬಗ್ಗೆ ಆಸೆ ಬೇಡ. ಕುಟುಂಬದ ಸದಸ್ಯರೊಂದಿಗೆ ಆಸ್ತಿಯ ವಿಚಾರವಾಗಿ ಸುದೀರ್ಘ ಚರ್ಚೆ. ಯಾರಮೇಲಾದರೂ ಪ್ರೀತಿಯು ಉಂಟಾಗಬಹುದು. ಸುಮ್ಮನೇ ಕುಳಿತು ಸಮಯವನ್ನು ವ್ಯರ್ಥಮಾಡಬೇಡಿ.

ವೃಶ್ಚಿಕ ರಾಶಿ :

ಸ್ನೇಹಿತರು ನಿಮಗೆ ಉತ್ತಮ ಕೆಲಸ ಹಾಗು ಸಂಬಳದ ಸ್ಥಳವನ್ನು ತಿಳಿಸಬಹುದು. ನಿರೀಕ್ಷೆ ಇಟ್ಟುಕೊಳ್ಳುವುದರಿಂದ ನಿರಾಶೆ. ನಿರ್ಧಾರಗಳನ್ನು ತಾಳ್ಮೆಯಿಂದ ತೆಗೆದುಕೊಳ್ಳಿ. ಯಾರದೋ ಸಂತೋಷಕ್ಕೆ ನೀವು ಬಲಿಯಾಗುವ ಸಂದರ್ಭ ಬರಬಹುದು. ಹಣಕಾಸಿನ ವಿಚಾರದಲ್ಲಿ ಉತ್ತಮ ಅವಕಾಶ ಸಿಗಬಹುದು. ಓಡಾಟ ಬೇಡವೆಂದು ಕುಳಿತ ನಿಮಗೆ ಅನಿವಾರ್ಯದ ಪ್ರಯಾಣವು ಬರಲಿದೆ. ಅಪರಿಚಿತರ ವ್ಯವಹಾರದಲ್ಲಿ ಎಷ್ಟೇ ಜಾಣ್ಮೆಯಿದ್ದರೂ ಸಾಲದು.‌

ಧನು ರಾಶಿ :

ಕುಟುಂಬದವರ ಜೊತೆ ಭಾವನಾತ್ಮಕ ಮಾತುಕತೆ ನಡೆಯಬಹುದು. ಯಾವುದೇ ಕಠಿಣ ಪರಿಸ್ಥಿತಿಯಲ್ಲಿ ಶಾಂತಿ ಮತ್ತು ತಾಳ್ಮೆಯನ್ನು ಕಾಪಾಡಿಕೊಳ್ಳಿ, ಹಣಕಾಸು ಸ್ಥಿತಿ ಸ್ಥಿರವಾಗಿರುತ್ತದೆ. ಸ್ನೇಹಿತರಿಂದ ಸಹಾಯ ನಿರೀಕ್ಷಿಸಬಹುದು. ಉದ್ವೇಗದ ಮಾತುಗಳು ನಿಮ್ಮ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ. ಕುಟುಂಬದವರು ನಿಮ್ಮನ್ನು ಬಹಳ ಪ್ರೀತಿಸುವರು. ಅವರಿಗೆ ಸ್ವಲ್ಪ ಸಮಯ ಕೊಡಿ. ಹಣವನ್ನು ಉಳಿಸಲು ಪ್ರಯತ್ನಶೀಲರಾಗುವಿರಿ.

ಮಕರ ರಾಶಿ :

ಇದನ್ನೂ ಓದಿ: ಕೇತುವಿನ ಮೇಲಿದೆ ಕುಜನ ದೃಷ್ಟಿ: ಯಾರಿಗೆ ಒಲಿಯಲಿದೆ ಪೂರ್ಣ ರಾಜಯೋಗ? ಯಾರಿಗೆ ಧನಲಾಭ?

ನಿಮ್ಮನ್ನು ಇಷ್ಟಪಟ್ಟವರಿಗೆ ಇಂದು ನಿಮ್ಮಿಂದ‌ ಅಸಮಾಧಾನವಾಗುವ ಸಾಧ್ಯತೆ ಇದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಶೋಧನೆ ಮಾಡುವ ಸಂಭವ ಬರಲಿದೆ. ನಿಮ್ಮ ಮಾತುಗಳೇ ನಿಮ್ಮ ಶಕ್ತಿ ಸಾಮಾಜಿಕ ವಲಯದಲ್ಲಿ ಮೆರೆಯುವ ಅವಕಾಶ ಇದೆ. ಉದ್ಯೋಗದಲ್ಲಿ ಉನ್ನತಿ ಸೂಚನೆಗಳು ಸಿಗಬಹುದು. ಅತಿಯಾದ ಭಾವನೆಗಳಿಂದ ದೂರವಿರಿ. ಹಣದ ವಿಚಾರದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವುದು ಒಳಿತು. ಕೃಷಿಯಲ್ಲಿ ಲಾಭ ಗಳಿಸಬೇಕೆಂದು ನಾನಾ ಪ್ರಯತ್ನವನ್ನು ಮಾಡುವಿರಿ.

ಕುಂಭ ರಾಶಿ :

ಮನೆಯವರ ಸಹಾಯವು ಅನಿವಾರ್ಯ ಸ್ಥಿತಿ ಬಂದಾಗ ಸಿಗಲಿದೆ. ಅನಿರೀಕ್ಷಿತ ಲಾಭದಿಂದ ದಾರಿ ತಪ್ಪಬಹುದು. ಮನೆಯವರ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಚ್ಛಿಸುವಿರಿ. ಆತ್ಮೀಯರ ಸಹಾಯದಿಂದ ಸಮಸ್ಯೆಗಳ ಪರಿಹಾರ ಸಿಗುತ್ತದೆ. ಹಣದ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ವಿದೇಶದಿಂದ ಉದ್ಯೋಗಕ್ಕೆ ಕರೆ ಬರಲಿದೆ. ಬೇಸರಿಸದೇ ಬಂದುದನ್ನು ಬಂದಂತೆ ಎದುರಿಸವುದು ನಿಮಗೆ ಸ್ವಭಾವಸಿದ್ಧ. ನೀವು ಬಯಸಿದ ಕೆಲಸವನ್ನು ಮಾಡುವಿರಿ.

ಮೀನ ರಾಶಿ :

ಯೋಗ ಹಾಗೂ ಧ್ಯಾನದಿಂದ ಶ್ರಮದ ಪರಿಹಾರವಾಗಲಿದೆ. ಆರ್ಥಿಕವಾಗಿ ನಷ್ಟ ಎದುರಾಗುವುದು. ಇಂದಿನ ನಿಮ್ಮ ಕರ್ಮಕ್ಕೆ ಅನ್ಯರ ಸಹಕಾರ ಇರದು. ಕುಟುಂಬದೊಂದಿಗೆ ಸಮಯ ಕಳೆಯುವುದರಿಂದ ಮನಸ್ಸಿಗೆ ಶಾಂತಿ ಸಿಗಬಹುದು. ದೂರದ ಗೆಳೆಯರಿಂದ ಶುಭ ಸುದ್ದಿ ಬರುತ್ತದೆ. ಧಾರ್ಮಿಕ ಕ್ಷೇತ್ರದವರಿಗೆ ಹೊಸ ಅವಕಾಶ. ವೃತ್ತಿಯ ಸ್ಥಳದಲ್ಲಿ ನೀವು ಸಂತೋಷವಾಗಿ ಕೆಲಸಮಾಡುವಿರಿ. ಸ್ನೇಹಿತರ ಮಾತಿನಿಂದ ವಿದೇಶಕ್ಕೆ ಹೋಗುವ ಆಸೆ ಅತಿಯಾಗುವುದು.

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ! – Kannada News

ಮುಂಬೈ, ಜೂನ್ 11: ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ದಿಯೋನಿ ತಾಲೂಕಿನ ಬಂಬಾಲಿ ಗ್ರಾಮದಲ್ಲಿ ದೇಶವನ್ನೇ ಬೆಚ್ಚಿಬೀಳಿಸುತ್ತಿರುವ ಹೃದಯವಿದ್ರಾವಕ ಘಟನೆ (Viral News) ಬೆಳಕಿಗೆ ಬಂದಿದೆ. ದೇಶಕ್ಕೆ ಅನ್ನ ನೀಡುವ ರೈತ ಕುಟುಂಬದ ದುಃಸ್ಥಿತಿಯನ್ನು ನೋಡಿ ನೆಟ್ಟಿಗರು ಮರುಕಪಡುತ್ತಿದ್ದಾರೆ. ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಸಿಡಿಲಿನ ಹೊಡೆತಕ್ಕೆ ಬಂಬಲಿ ಗ್ರಾಮದ ಬಡ ರೈತ ಕಾಶಿನಾಥ್ ಗಾಯಕ್ವಾಡ್ ಅವರಿಗೆ ಸೇರಿದ ಎತ್ತು ಸಾವನ್ನಪ್ಪಿತು. ಖಾರಿಫ್ ಋತು ಆರಂಭವಾಗಿ ಕೃಷಿ ಕೆಲಸಗಳು ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಅವರ ಜೀವನೋಪಾಯಕ್ಕೆ ಆಧಾರವಾಗಿದ್ದ ಎತ್ತಿನ ಸಾವಿನಿಂದ ಕೃಷಿ ಕೆಲಸ ನಿಂತುಹೋಗಬಹುದು ಎಂಬ ಆತಂಕ ಅವರನ್ನು ಕಾಡಿತು. ಮಾರುಕಟ್ಟೆಯಲ್ಲಿ ಮತ್ತೊಂದು ಎತ್ತನ್ನು ಖರೀದಿಸಲು ಆ ಬಡ ರೈತನಿಗೆ ಆರ್ಥಿಕ ಸಾಮರ್ಥ್ಯವಿರಲಿಲ್ಲ. ಈ ಹಿನ್ನೆಲೆಯಲ್ಲಿ ನೇಗಿಲಿನ ಒಂದು ಬದಿ ಒಂದು ಎತ್ತನ್ನು ಕಟ್ಟಿ, ಇನ್ನೊಂದು ಬದಿಗೆ ಹೆಂಡತಿಯ ಭುಜಕ್ಕೆ ನೊಗ ಇಟ್ಟು ಆ ರೈತ ಉಳುಮೆ ಮಾಡಿದ್ದಾರೆ.

ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ನೆಟಿಜನ್‌ಗಳು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ದೃಶ್ಯಗಳನ್ನು ನೋಡಿದ ಅವರು ಸ್ಥಳೀಯ ಅಧಿಕಾರಿಗಳು, ಸಾರ್ವಜನಿಕ ಪ್ರತಿನಿಧಿಗಳು ಮತ್ತು ಸಂಬಂಧಿತ ಸಚಿವರು ತಕ್ಷಣ ಪ್ರತಿಕ್ರಿಯಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

(Video Source: Rohit Pawar X Account)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

370 ರೂ. ಬಿರಿಯಾನಿ ವಿವಾದ: ಪ್ರಣಿತ್ ಮೋರೆ, ಹಿಮಾಂಶು, ಡಾ. ಸೆಜಲ್​ಗೆ ಮಹಿಳಾ ಆಯೋಗ ನೋಟಿಸ್ – Kannada News

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ‘370 ರೂಪಾಯಿ ಬಿರಿಯಾನಿ’ ಜೋಕ್ ಮತ್ತು ಮೃತದೇಹಗಳ ಕುರಿತಾದ ಆಕ್ಷೇಪಾರ್ಹ ಹಾಸ್ಯ ಪ್ರಹಸನಗಳು ಈಗ ಸ್ಟ್ಯಾಂಡಪ್ ಕಾಮಿಡಿಯನ್‌ಗಳಿಗೆ ಭಾರೀ ಸಂಕಷ್ಟ ತಂದಿಟ್ಟಿವೆ. ಮಹಿಳೆಯರ ಕುರಿತು ಅಶ್ಲೀಲ ಹಾಗೂ ಅವಹೇಳನಕಾರಿ ಕಾಮೆಂಟ್ ಮಾಡಿದ ಆರೋಪದ ಮೇಲೆ ಕಾಮಿಡಿಯನ್ ಪ್ರಣಿತ್ ಮೋರೆ (Pranit More), ಹಿಮಾಂಶು ಜಾಂಗ್ರಾ (Himanshu Jangra) ಮತ್ತು ಡಾ. ಸೇಜಲ್ ಪವಾರ್ (Sejal Pawar) ವಿರುದ್ಧ ಮುಂಬೈ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮತ್ತೊಂದೆಡೆ, ಈ ಘಟನೆಯನ್ನು ರಾಷ್ಟ್ರೀಯ ಮಹಿಳಾ ಆಯೋಗವು ಗಂಭೀರವಾಗಿ ಪರಿಗಣಿಸಿದ್ದು, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಜೂನ್ 22ರಂದು ಸಂಜೆ 4 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಆಯೋಗವು ಸಮನ್ಸ್ ಜಾರಿ ಮಾಡಿದೆ.

ಹರಿಯಾಣದ ಗುರುಗ್ರಾಮದಲ್ಲಿ ಪ್ರಣಿತ್ ಮೋರೆ ನಡೆಸಿಕೊಡುತ್ತಿದ್ದ ಸ್ಟ್ಯಾಂಡಪ್ ಕಾಮಿಡಿ ಶೋ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಹಿಮಾಂಶು ಜಾಂಗ್ರಾ ಎಂಬಾತ ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ಕಾಮೆಂಟ್ ಮಾಡಿದ್ದ. ತಾನು ಡೇಟಿಂಗ್‌ಗೆ ಹೋದಾಗ ಹುಡುಗಿಗೆ 370 ರೂಪಾಯಿ ಕೊಟ್ಟು ಚಿಕನ್ ಬಿರಿಯಾನಿ ಕೊಡಿಸಿದ್ದೆ. ಅವಳು ಮನೆಗೆ ಬಿಡಲು ಕೇಳಿದಾಗ, ‘ನಾನು 370 ರೂಪಾಯಿ ಖರ್ಚು ಮಾಡಿದ್ದೇನೆ, ಅದನ್ನು ವಸೂಲಿ ಮಾಡದೆ ಬಿಡುವುದಿಲ್ಲ’ ಎಂದು ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾಗಿ ಹೇಳಿಕೊಂಡಿದ್ದ. ಇದನ್ನು ಕೇಳಿ ಕಾಮಿಡಿಯನ್ ಪ್ರಣಿತ್ ಮೋರೆ ನಕ್ಕಿದ್ದರು.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಡೇಟಿಂಗ್ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಮತ್ತು ಬಲವಂತವನ್ನು ಹಾಸ್ಯದ ರೂಪದಲ್ಲಿ ವೈಭವೀಕರಿಸಿದ್ದಕ್ಕೆ ನೆಟ್ಟಿಗರು ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದರು. ಇದೇ ಶೋನ ಮತ್ತೊಂದು ಕ್ಲಿಪ್‌ನಲ್ಲಿ ಡಾ. ಸೆಜಲ್ ಪವಾರ್ ಎಂಬಾಕೆ, ವೈದ್ಯಕೀಯ ಶಿಕ್ಷಣಕ್ಕಾಗಿ ಬಳಸುವ ಮೃತದೇಹಗಳ ಬಗ್ಗೆ ಮತ್ತು ಮೃತ ಪುರುಷರ ದೇಹಗಳ ಬಗ್ಗೆ ಅತ್ಯಂತ ಅಶ್ಲೀಲ ಹಾಗೂ ವಿಕೃತವಾಗಿ ಮಾತನಾಡಿದ್ದರು. ಇದು ಸತ್ತವರ ಘನತೆಗೆ ಅಪಚಾರ ಎಸಗಿದಂತೆ ಇದೆ ಎಂದು ಸಾರ್ವಜನಿಕರು ಹಾಗೂ ಸೈಬರ್ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಾಹಟ್ಕರ್ ಅವರು ಹರಿಯಾಣ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದು, ಈ ಬಗ್ಗೆ ತಕ್ಷಣವೇ ಕಟ್ಟುನಿಟ್ಟಿನ ಮತ್ತು ಸಮಯದ ಮಿತಿಯೊಳಗೆ ಕ್ರಮ ಕೈಗೊಳ್ಳಬೇಕು ಹಾಗೂ 7 ದಿನಗಳ ಒಳಗಾಗಿ ಕೈಗೊಂಡ ಕ್ರಮಗಳ ವರದಿಯನ್ನು ಸಲ್ಲಿಸಬೇಕು ಎಂದು ಆದೇಶಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ.

ಇದನ್ನೂ ಓದಿ: 370 ರೂ. ಬಿರಿಯಾನಿ ವಿವಾದ: ಇನ್‌ಸ್ಟಾಗ್ರಾಮ್ ಖಾತೆ ಡಿಆಕ್ಟಿವೇಟ್ ಮಾಡಿದ ಪ್ರಣಿತ್ ಮೋರೆ

‘ಮಹಿಳೆಯರ ಒಪ್ಪಿಗೆ, ಘನತೆ ಮತ್ತು ಸ್ವಾತಂತ್ರ್ಯವನ್ನು ಕೇವಲ ಮನರಂಜನೆಗಾಗಿ ಬಳಸಿಕೊಳ್ಳುವುದು ಮತ್ತು ಇಂತಹ ವಿಕೃತ ನಡವಳಿಕೆಗಳನ್ನು ಸಾಮಾನ್ಯೀಕರಿಸುವುದು ಸಮಾಜದಲ್ಲಿ ಲಿಂಗ ಆಧಾರಿತ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದಂತೆ ಆಗುತ್ತದೆ’ ಎಂದು ಮಹಿಳಾ ಆಯೋಗ ಕಳವಳ ವ್ಯಕ್ತಪಡಿಸಿದೆ. ಸದ್ಯ ಮಹಾರಾಷ್ಟ್ರ ಸೈಬರ್ ಪೊಲೀಸರು ಮೂವರ ವಿರುದ್ಧವೂ ಭಾರತೀಯ ನ್ಯಾಯ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link