ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸಬಲ್ಲ ವಿಧಾನಪರಿಷತ್ ಚುನಾವಣೆಯ ಮಹಾ ಕಣಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜೂನ್ 18ರ ಮಹಾಸಮರಕ್ಕೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಭರ್ಜರಿ ಲೆಕ್ಕಾಚಾರ ನಡೆಸಿವೆ. ಇತ್ತ, ಅಂತರರಾಷ್ಟ್ರೀಯ ಫುಟ್ಬಾಲ್ ಅಂಗಳದಲ್ಲಿ ಅರ್ಜೆಂಟೀನಾದ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಹ್ಯಾಟ್ರಿಕ್ ಗೋಲುಗಳ ಭರ್ಜರಿ ದಾಖಲೆಯೊಂದಿಗೆ ಹೊಸ ಇತಿಹಾಸ ಬರೆದಿದ್ದಾರೆ. ಇನ್ನು ಸ್ಯಾಂಡಲ್ವುಡ್ ಹಿರಿಯ ನಟ ದೊಡ್ಡಣ್ಣ ಅವರ ನಿಧನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳ ವಿರುದ್ಧ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಾನೂನು ಬಿಸಿ ಮುಟ್ಟಿದೆ. ರಾಷ್ಟ್ರೀಯ ರಾಜಕಾರಣದಲ್ಲಿ ತೃಣಮೂಲ ಕಾಂಗ್ರೆಸ್ನ (TMC) ಬಿಕ್ಕಟ್ಟು ತಾರಕಕ್ಕೇರಿದ್ದು, ಬಂಡಾಯ ಸಂಸದರು ವಿಲೀನಗೊಳ್ಳಲಿರುವ NCPI ಪಕ್ಷಕ್ಕೆ ಜ್ಯೋತಿಪ್ರಕಾಶ್ ಚಟರ್ಜಿ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
ನ್ಯೂಝಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್ನಲ್ಲಿ ಐದು ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಯೊಂದಿಗೆ ಮೂವರು ಆಟಗಾರರು ಇಂಗ್ಲೆಂಡ್ ಪರ ಪಾದಾರ್ಪಣೆ ಮಾಡಲಿದ್ದಾರೆ. ಈ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 115 ರನ್ಗಳ ಭರ್ಜರಿ ಜಯ ಸಾಧಿಸಿತ್ತು. ಈ ಗೆಲುವಿನ ಬಳಿಕ ನಡೆದ ಹೈ ಡ್ರಾಮಾದಿಂದಾಗಿ ಇದೀಗ ಪ್ಲೇಯಿಂಗ್ ಇಲೆವೆನ್ನಲ್ಲಿ ಮಹತ್ವದ ಬದಲಾವಣೆ ಕಂಡು ಬಂದಿದೆ.
ಇಷ್ಟೊಂದು ಬದಲಾವಣೆ ಯಾಕೆ?
ಶಿಸ್ತು ಉಲ್ಲಂಘನೆ, ಗಾಯ ಹಾಗೂ ಪಿತೃತ್ವ ರಜೆಯ ಕಾರಣದಿಂದಾಗಿ ಲಾರ್ಡ್ಸ್ ಟೆಸ್ಟ್ ಗೆದ್ದ ತಂಡದಲ್ಲಿದ್ದ ಐದು ಪ್ರಮುಖ ಆಟಗಾರರು ಇಂಗ್ಲೆಂಡ್ ತಂಡದಿಂದ ಹೊರಬಿದ್ದಿದ್ದಾರೆ.
ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮತ್ತು ಪ್ರಮುಖ ವೇಗಿ ಗಸ್ ಅಟ್ಕಿನ್ಸನ್ ಇಬ್ಬರನ್ನೂ ತಂಡದ ನಿಯಮಾವಳಿಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಈ ಪಂದ್ಯದಿಂದ ಕೈಬಿಡಲಾಗಿದೆ. ಈ ಇಬ್ಬರು ಆಟಗಾರರು ಮಧ್ಯರಾತ್ರಿಯ ಕರ್ಫ್ಯೂ ನಿಯಮ ಮೀರಿ ಪಬ್ನಲ್ಲಿ ಪಾರ್ಟಿ ಮಾಡಿದ್ದರು. ಹೀಗಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಇವರ ಮೇಲೆ ಕಠಿಣ ಶಿಸ್ತು ಕ್ರಮ ಜರುಗಿಸಿದೆ.
ಇನ್ನು ಮೊದಲ ಪಂದ್ಯದಲ್ಲಿ ಅದ್ಭುತವಾಗಿ ಆಡಿದ್ದ ವಿಕೆಟ್ಕೀಪರ್-ಬ್ಯಾಟರ್ ಜೇಮಿ ಸ್ಮಿತ್ ಅವರ ಪತ್ನಿ ಮಂಗಳವಾರವಷ್ಟೇ ಮಗುವಿಗೆ ಜನ್ಮ ನೀಡಿದ್ದಾರೆ. ಹಾಗಾಗಿ ಅವರು ಪಿತೃತ್ವ ರಜೆಯ ಮೇರೆಗೆ ತವರಿಗೆ ಮರಳಿದ್ದಾರೆ.
ಹಾಗೆಯೇ ಮೊದಲ ಪಂದ್ಯದಲ್ಲಿ ಮಿಂಚಿನ ದಾಳಿ ಸಂಘಟಿಸಿದ್ದ ಒಲ್ಲಿ ರಾಬಿನ್ಸನ್ ಮಂಡಿ ನೋವಿನಿಂದ ಬಳಲುತ್ತಿರುವುದರಿಂದ ವಿಶ್ರಾಂತಿ ನೀಡಲಾಗಿದೆ.
ಮತ್ತೊಂದೆಡೆ ಕೆನ್ನಿಂಗ್ಟನ್ ಓವಲ್ ಮೈದಾನದ ಪಿಚ್ ಸಂಪೂರ್ಣವಾಗಿ ವೇಗದ ಬೌಲಿಂಗ್ಗೆ ಹೆಚ್ಚು ಸಹಕಾರಿಯಾಗಿರುವ ಕಾರಣ ತಂಡದಲ್ಲಿದ್ದ ಏಕೈಕ ಸ್ಪಿನ್ನರ್ ಬಶೀರ್ ಅವರನ್ನು ಆಡುವ ಬಳಗದಿಂದ ಕೈಬಿಡಲಾಗಿದೆ.
ಬದಲಿ ಆಟಗಾರರು ಯಾರು?
ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಇಂಗ್ಲೆಂಡ್ ಪರ ಐವರು ಆಟಗಾರರು ಕಣಕ್ಕಿಳಿಯಲಿದ್ದಾರೆ. ಅಂದರೆ ಮೊದಲ ಟೆಸ್ಟ್ ಪಂದ್ಯದಲ್ಲಿ ಕಾಣಿಸಿಕೊಳ್ಳದ 5 ಆಟಗಾರರು ಈ ಬಾರಿ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಆ ಆಟಗಾರರು ಯಾರೆಂದರೆ…
ಜೋರ್ಡನ್ ಕಾಕ್ಸ್ (ವಿಕೆಟ್ ಕೀಪರ್ ಬ್ಯಾಟರ್)
ಸನ್ನಿ ಬೇಕರ್ (ವೇಗದ ಬೌಲರ್)
ಜೇಮ್ಸ್ ರೀವ್ (ವಿಕೆಟ್ ಕೀಪರ್ ಬ್ಯಾಟರ್)
ಜೋಫ್ರಾ ಆರ್ಚರ್ (ವೇಗದ ಬೌಲರ್)
ಮ್ಯಾಥ್ಯೂ ಫಿಶರ್ (ವೇಗದ ಬೌಲರ್)
ಜೋ ರೂಟ್ ಹೆಗಲಿಗೆ ನಾಯಕತ್ವ:
ಈ ಪಂದ್ಯದಿಂದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅಮಾನತಾಗಿರುವ ಹಿನ್ನೆಲೆಯಲ್ಲಿ ಅನುಭವಿ ಆಟಗಾರ ಜೋ ರೂಟ್ ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಹೀಗಾಗಿ ತಂಡದ ಸಂಪೂರ್ಣ ಜವಾಬ್ದಾರಿ ರೂಟ್ ಹೆಗಲೇರಲಿದೆ. ಏಕೆಂದರೆ ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್ನಲ್ಲಿರುವ ಆಟಗಾರರ ಒಟ್ಟು ಟೆಸ್ಟ್ ಅನುಭವ 281 ಪಂದ್ಯಗಳು ಮಾತ್ರ. ಇದರಲ್ಲಿ ಜೋ ರೂಟ್ ಒಬ್ಬರದ್ದೇ 164 ಪಂದ್ಯಗಳಿವೆ. ಅಂದರೆ ಇಂಗ್ಲೆಂಡ್ ತಂಡವು ಅನಾನುಭವಿ ಬಳಗದೊಂದಿಗೆ ನ್ಯೂಝಿಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ.
ಬೆಂಗಳೂರು, ಜೂನ್ 17: ಕಾಂಗ್ರೆಸ್ ಶಾಸಕ H.C.ಮಹದೇವಪ್ಪ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು, ಬೆಂಗಳೂರು ನಿವಾಸಿಯೊಬ್ಬರು ಈ ಸಂಬಂಧ ರಾಜ್ಯಪಾಲರಿಗೆ ದೂರು ಸಲ್ಲಿಕೆ ಮಾಡಿದ್ದಾರೆ. ಹೆಚ್.ಸಿ.ಮಹದೇವಪ್ಪ ಸಚಿವರಾಗಿದ್ದ ಅವಧಿಯಲ್ಲಿ ಸಾಮಾಜಿಕ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS) ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮ/ಮಂಡಳಿಯ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ, ಭ್ರಷ್ಟಾಚಾರ, ದಾಖಲೆಗಳ ನಕಲಿ ಸೃಷ್ಟಿ ಹಾಗೂ ಅಧಿಕಾರ ದುರುಪಯೋಗ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮನವಿಯ ಪ್ರಕಾರ, ಹೆಚ್.ಸಿ. ಮಹದೇವಪ್ಪ ಅವರು ಸಾಮಾಜಿಕ ಕಲ್ಯಾಣ ಸಚಿವರಾಗಿದ್ದ ಅವಧಿಯಲ್ಲಿ KREIS ಅಡಿಯಲ್ಲಿ ನಡೆದ ಹಲವು ಟೆಂಡರ್ಗಳನ್ನು ಪಾರದರ್ಶಕ ಹಾಗೂ ಸ್ಪರ್ಧಾತ್ಮಕ ಪ್ರಕ್ರಿಯೆಯ ಬದಲು ನಿರ್ದಿಷ್ಟ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಅನುಕೂಲವಾಗುವಂತೆ ಮಂಜೂರು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸಂಸ್ಥೆಗಳು ನಕಲಿ, ತಿರುಚಿದ ಹಾಗೂ ನಕಲಿ ಅನುಭವ ಪ್ರಮಾಣಪತ್ರಗಳು, ಯೋಜನೆ ಪೂರ್ಣಗೊಳಿಸಿದ ದಾಖಲೆಗಳು ಮತ್ತು ಇತರೆ ಪೂರಕ ಮಾಹಿತಿ ನೀಡಿ ಟೆಂಡರ್ ಅರ್ಹತೆ ಪಡೆದಿವೆ ಎಂದೂ ಉಲ್ಲೇಖಿಸಲಾಗಿದೆ.
ಹೀಗಾಗಿ ಸ್ವತಂತ್ರ, ನಿಷ್ಪಕ್ಷಪಾತ ಮತ್ತು ಕಾಲಮಿತಿಯೊಳಗಿನ ತನಿಖೆ ನಡೆಸುವಂತೆ ಹಾಗೂ ಟೆಂಡರ್ ಪ್ರಕ್ರಿಯೆ, ಅರ್ಹತಾ ದಾಖಲೆಗಳು, ಸರ್ಕಾರಿ ಅಧಿಕಾರಿಗಳ ಪಾತ್ರ, GeM ಪೋರ್ಟಲ್ ನಿಯಮ ಪಾಲನೆ ಬಗ್ಗೆ ಸಮಗ್ರ ಪರಿಶೀಲನೆ ನಡೆಸುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ಅಲ್ಲದೆ, ಆರೋಪಗಳು ಸಾಬೀತಾದಲ್ಲಿ ಸಾರ್ವಜನಿಕ ನಿಧಿಗೆ ಉಂಟಾದ ನಷ್ಟವನ್ನು ವಸೂಲಿ ಮಾಡುವುದರ ಜೊತೆಗೆ ಹೆಚ್.ಸಿ. ಮಹದೇವಪ್ಪ ಅವರನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಗರುಡ ಪುರಾಣವು ಊಟದ ಕುರಿತು ಅತಿ ಮಹತ್ವದ ನಿಯಮಗಳನ್ನು ತಿಳಿಸಿದೆ, ಇದು ನಾವು ಎಲ್ಲಿ ಊಟ ಮಾಡಬೇಕು, ಎಲ್ಲಿ ಮಾಡಬಾರದು ಮತ್ತು ಅದರ ಫಲಗಳು ಏನೆಂಬುದನ್ನು ವಿವರಿಸುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿಯವರು ಹೇಳುವಂತೆ, ಸಾಮಾನ್ಯವಾಗಿ, ದೈವಾಧೀನರಾದವರ ಮನೆಯಲ್ಲಿ ಊಟ ಮಾಡಿದಾಗ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಇದೆ. ಹಾಗೆಯೇ, ದೇವಾಲಯಗಳಲ್ಲಿ ಮಾಡುವ ಊಟವನ್ನು ದೇವರ ಪ್ರಸಾದ ಎಂದು ಸ್ವೀಕರಿಸಿದಾಗ ಅದು ನಮ್ಮ ದೇಹಕ್ಕೆ ಸೇರಿ ಭಗವಂತನ ಕೃಪೆಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಗರುಡ ಪುರಾಣವು ಊಟದ ಹಿಂದಿರುವ ಆಳವಾದ ಆಧ್ಯಾತ್ಮಿಕ ಪರಿಣಾಮಗಳನ್ನು ವಿಶ್ಲೇಷಿಸುತ್ತದೆ.
ಊಟ ಮಾಡುವಾಗ ನಮ್ಮ ಪಂಚಭೂತಗಳು ಮತ್ತು ಸಪ್ತಚಕ್ರಗಳು ಆ ಆಹಾರವನ್ನು ಸ್ವೀಕರಿಸುತ್ತವೆ. ಆದ್ದರಿಂದ, ಆಹಾರದ ಮೂಲ ಮತ್ತು ಅದನ್ನು ನೀಡುವ ವ್ಯಕ್ತಿಯ ಮನಸ್ಥಿತಿ ಮಹತ್ವದ್ದಾಗುತ್ತದೆ. ನಾವು ಮನಸ್ಸು ಮತ್ತು ಬಾಯಿ ಒಪ್ಪಿದರೂ, ನಮ್ಮ ಆಂತರಿಕ ಶಕ್ತಿಗಳು ಆಹಾರವನ್ನು ಒಪ್ಪುವಂತಿರಬೇಕು. ಹಣ ಕೊಟ್ಟು ಹೋಟೆಲ್ನಲ್ಲಿ ಊಟ ಮಾಡುವುದು ಕೇವಲ ಒಂದು ವ್ಯವಹಾರವಾಗಿದ್ದು, ಯಾವುದೇ ವಿಶೇಷ ಫಲವನ್ನು ನೀಡುವುದಿಲ್ಲ ಎಂದು ಪುರಾಣ ಹೇಳುತ್ತದೆ.
ಊಟ ಮಾಡಬಾರದು?
ಗರುಡ ಪುರಾಣದ ಪ್ರಕಾರ, ಕೆಲವು ಜನರ ಮನೆಯಲ್ಲಿ ಊಟ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ದುಷ್ಟ ಜನರು, ಸಮಾಜಕ್ಕೆ ಒಗ್ಗದ ವ್ಯಕ್ತಿಗಳು, ಕೆಟ್ಟ ಮನಸ್ಸಿನವರು, ಕೋಪಿಗಳು, ವಿಪರೀತ ಬಡ್ಡಿ ವಸೂಲಿ ಮಾಡುವವರು, ದುಷ್ಕೃತ್ಯಗಳನ್ನು ಎಸಗುವವರು – ಇಂತಹವರ ಮನೆಯಲ್ಲಿ ಊಟ ಮಾಡಬಾರದು. ಅನ್ಯಾಯ ಮತ್ತು ಅಕ್ರಮ ಸಂಪಾದನೆಯಿಂದ ಶ್ರೀಮಂತರಾದವರ ಮನೆಯಲ್ಲಿ ಊಟ ಮಾಡಿದರೆ ಅದು ನಮ್ಮ ವಂಶಕ್ಕೆ ತೊಂದರೆ ತರಬಹುದು ಎಂದು ಶಾಸ್ತ್ರಗಳು ಎಚ್ಚರಿಸುತ್ತವೆ. ದುರಹಂಕಾರಿಗಳು, ಮುಂಗೋಪಿಗಳು, ಪಶುಪಕ್ಷಿಗಳನ್ನು ಅಥವಾ ವೃದ್ಧರನ್ನು ನಿರ್ಲಕ್ಷಿಸುವವರು, ಹೆಂಡತಿ, ಮಕ್ಕಳನ್ನು ಹಿಂಸಿಸುವವರು, ಮತ್ತು ಭೂಕಬಳಿಕೆದಾರರ ಮನೆಯಲ್ಲಿ ಸಹ ಊಟ ಮಾಡಬಾರದು. ಅಂತಹ ಜನರ ನಡತೆ ಸಮಾಜಕ್ಕೆ ತಿಳಿದಿರುತ್ತದೆ, ಮತ್ತು ಅವರ ಹಣವು ಪಾಪದ ಹಣವಾಗಿರುತ್ತದೆ.
ಇದಕ್ಕೆ ವ್ಯತಿರಿಕ್ತವಾಗಿ, ಕಷ್ಟಪಟ್ಟು ದುಡಿದು, ಪ್ರಾಮಾಣಿಕವಾಗಿ ಜೀವನ ಸಾಗಿಸುವ ಶ್ರಮಜೀವಿಗಳ ಮನೆಯಲ್ಲಿ ಒಂದು ತುತ್ತು ಅನ್ನ ಸೇವಿಸುವುದು ಅತಿ ಶುಭಕರ. ಅಂತಹವರ ಮನೆಯಲ್ಲಿ ಭಗವಂತನ ಆವಾಸವಿರುತ್ತದೆ, ಮತ್ತು ಅಲ್ಲಿ ಸೇವಿಸಿದ ಆಹಾರವು ನಮಗೆ ಒಳ್ಳೆಯದನ್ನು ತರುತ್ತದೆ ಎಂದು ನಂಬಲಾಗುತ್ತದೆ. ಭಗವಂತನು ಸಕಾಲಕ್ಕೆ ಅವರಿಗೆ ಬೇಕಾದ ಎಲ್ಲವನ್ನೂ ಒದಗಿಸುತ್ತಾನೆ.
ಅತಿ ಬುದ್ಧಿವಂತಿಕೆ, ದುರಹಂಕಾರ ಮತ್ತು ಬಡ್ಡಿ ವಸೂಲಿ ಮಾಡುವವರ ಮನೆಯಲ್ಲಿ ಆಹಾರ ಸೇವಿಸುವುದು ಶುಭವಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ. ಊಟ ಮಾಡುವಾಗ ಅದನ್ನು ಭಗವಂತನಿಗೆ ಅರ್ಪಣೆ ಮಾಡಿ ಸೇವಿಸುವುದು ಉತ್ತಮ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಲಕ್ನೋ, ಜೂನ್ 17: ಬನ್ ತಿಂದು ಹಣ ಕೊಡದೆ ಸತಾಯಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ಬಂಧಿಸಲು ಇದೊಂದೇ ಕಾರಣವಲ್ಲ. ಬನ್ ತಿಂದು ಹಣ ಕೊಟ್ಟಿಲ್ಲ ಸರ್ ಎಂದು ಅಂಗಡಿ ಮಾಲೀಕ ಪೊಲೀಸರಿಗೆ ಕರೆ ಮಾಡಿದ್ದ, ಪೊಲೀಸ್(Police) ಬಂದು ವಿಚಾರಿಸಿದಾಗ ತಾನು ನೋಯ್ಡಾದಲ್ಲಿ ಕೆಲಸ ಮಾಡುತ್ತಿರುವ ಐಪಿಎಸ್ ಅಧಿಕಾರಿ ನಂಗೆ ಸೆಲ್ಯೂಟ್ ಮಾಡುವುದು ಬಿಟ್ಟು ನನ್ನನ್ನೇ ಪ್ರಶ್ನೆ ಮಾಡ್ತಿದ್ದೀರಾ ಎಂದು ಆ ವ್ಯಕ್ತಿ ಗದರಿದ್ದಾನೆ.
ಹಾಗಾದರೆ ಮೊದಲು ಸಮವಸ್ತ್ರದಲ್ಲಿ ಬನ್ನಿ, ಗುರುತಿನ ಚೀಟಿ ತೋರಿಸಿ ಆಮೇಲೆ ಸೆಲ್ಯೂಟ್ ಮಾಡ್ತೀವಿ ಎಂದು ಪೊಲೀಸರು ಕೂಡ ಪಟ್ಟು ಹಿಡಿದಿದ್ದರು.
ವರದಿಗಳ ಪ್ರಕಾರ, ಲಕ್ನೋದ ರಸ್ತೆ ಬದಿಯ ಅಂಗಡಿಯೊಂದರಲ್ಲಿ ಈ ವ್ಯಕ್ತಿ ಬನ್ ತಿಂದು, ಅದಕ್ಕೆ ಆಗಿದ್ದ 40 ರೂಪಾಯಿ ಬಿಲ್ ಕೊಡದೇ ಹೋಗಲು ಯತ್ನಿಸಿದ್ದಾನೆ. ಅಂಗಡಿ ಮಾಲೀಕರು ಇದನ್ನು ವಿರೋಧಿಸಿ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದಾಗ ಆ ವ್ಯಕ್ತಿ ತಾನೊಬ್ಬ ದೊಡ್ಡ ಐಪಿಎಸ್ ಅಧಿಕಾರಿ ಎಂದು ಬೆದರಿಸಲು ಹಾದಿ ತುಳಿದಿದ್ದಾನೆ.
ವಿಚಾರಣೆಗೆ ಬಂದ ಕಾನ್ಸ್ಟೆಬಲ್ಗಳು ಆತನನ್ನು ಅಣ್ಣಾ ಎಂದು ಕರೆದಾಗ ಕೋಪಗೊಂಡಿದ್ದ, ತಕ್ಷಣವೇ ಪೊಲೀಸರನ್ನು ತಡೆದು, ಅಣ್ಣಾ ಅಂತಾ ಕರೀಬೇಡಿ ಸರ್ ಅನ್ನಿ ಎಂದು ದಬಾಯಿಸಿದ್ದಾನೆ. ನಾನೊಬ್ಬ ಐಪಿಎಸ್ ಅಧಿಕಾರಿ, ನೀವೇಕೆ ನನಗೆ ಸೆಲ್ಯೂಟ್ ಮಾಡುತ್ತಿಲ್ಲ ಎಂದು ಕರ್ತವ್ಯದಲ್ಲಿದ್ದ ಪೊಲೀಸರನ್ನೇ ಪ್ರಶ್ನಿಸಿ ವಿಶೇಷ ಮರ್ಯಾದೆ ನೀಡುವಂತೆ ಹಠ ಹಿಡಿದಿದ್ದಾನೆ.
ಕಾನ್ಸ್ಟೆಬಲ್ ಪ್ರತಿಕ್ರಿಯೆಗೆ ನೆಟ್ಟಿಗರು ಫಿದಾ
ಆರೋಪಿಯ ನಾಟಕಕ್ಕೆ ಬೆದರದ ಕಾನ್ಸ್ಟೆಬಲ್ ಅತ್ಯಂತ ಶಾಂತವಾಗಿ ಮತ್ತು ವೃತ್ತಿಪರವಾಗಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಆತನಿಗೆ ಖಡಕ್ ಆಗಿ ಉತ್ತರಿಸಿದ ಕಾನ್ಸ್ಟೆಬಲ್, ಮೊದಲು ಸರಿಯಾದ ಪೊಲೀಸ್ ಸಮವಸ್ತ್ರ ಧರಿಸಿ ಬನ್ನಿ, ನಿಮ್ಮ ಐಡಿ ಕಾರ್ಡ್ ತೋರಿಸಿ, ಆಮೇಲೆ ನಾನು ನಿಮಗೆ ಸೆಲ್ಯೂಟ್ ಮಾಡುತ್ತೇನೆ. ಅಲ್ಲಿಯವರೆಗೂ ಇಲ್ಲ ಎಂದು ಹೇಳಿದ್ದಾರೆ. ಕಾನ್ಸ್ಟೆಬಲ್ ಅವರ ಈ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.
ವಿಡಿಯೋ
Lucknow: Man impersonating Noida IPS officer steals ₹40 bun packet from a tea stall, refuses to pay. Video shows him arguing with police, demanding ‘full izzat’
ಕೇಳಿದಾಗ ಯಾವುದೇ ಗುರುತಿನ ಚೀಟಿ (ID Card) ತೋರಿಸದ ಹಿನ್ನೆಲೆಯಲ್ಲಿ ಆತ ನಕಲಿ ಎಂಬುದು ಸಾಬೀತಾಗಿದೆ. ಲಕ್ನೋದ ಮಹಾನಗರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ವಂಚನೆ ಮತ್ತು ಸರ್ಕಾರಿ ಸಿಬ್ಬಂದಿಗೆ ದಾರಿ ತಪ್ಪಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಜೈಲಿಗಟ್ಟಲಾಗಿದೆ.
ಪರಿಷತ್ ಸಮರ: ಜೋರಾದ ಸಂಖ್ಯಾ ಬಲದ ಅಂತಿಮ ಲೆಕ್ಕಾಚಾರ Image Credit source: PTI
ಬೆಂಗಳೂರು, ಜೂನ್ 17: ನಾಳೆ (ಜೂನ್ 18) ವಿಧಾನಪರಿಷತ್ ಚುನಾವಣೆ ನಡೆಯಲಿರುವ ಹಿನ್ನೆಲೆ ರಾಜ್ಯದ ಮೂರೂ ಪ್ರಮುಖ ಪಕ್ಷಗಳಲ್ಲಿಯೂ ಆತಂಕ ಹೆಚ್ಚಿದೆ. ಅದರಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ಈ ಎಲೆಕ್ಷನ್ ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಟ್ಟಿದೆ. ಏಳು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದು, ಗೆಲುವಿಗಾಗಿ ಭಾರೀ ಲೆಕ್ಕಾಚಾರ ಶುರುವಾಗಿದೆ.
ಕಾಂಗ್ರೆಸ್ನಿಂದ ಐವರು, ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಮೂವರು ಅಭ್ಯರ್ಥಿಗಳು ಅಖಾಡದಲ್ಲಿದ್ದು, ಕಾಂಗ್ರೆಸ್ನ ಐದನೇ ಅಭ್ಯರ್ಥಿ ಮತ್ತು ಎನ್ಡಿಎ ಮೂರನೇ ಅಭ್ಯರ್ಥಿಯ ಭವಿಷ್ಯದ ಬಗ್ಗೆ ಕುತೂಹಲ ಹೆಚ್ಚಿದೆ. ಜೆಡಿಎಸ್ ಮತಬ್ಯಾಂಕ್ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದ್ದು, ಶಾಸಕರನ್ನು ಹಿಡಿದಿಡಲು ದಳಪತಿಗಳು ತಂತ್ರ ರೂಪಿಸಿದ್ದಾರೆ. ಮತ್ತೊಂದೆಡೆ ಜೆಡಿಎಸ್ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿದೆ ಎಂಬ ಕಾರಣಕ್ಕೆ ಅಡ್ಡಮತದಾನದ ಭೀತಿಯಿಂದ ಈಗಾಗಲೇ ಕೈ ನಾಯಕರು ರೆಸಾರ್ಟ್ ವಾಸ್ತವ್ಯದಲ್ಲಿದ್ದಾರೆ. ಜೆಡಿಎಸ್ ಶಾಸಕರು ಕೂಡ ಇಂದು ದೇವನಹಳ್ಳಿ ಸಮೀಪದ ರೆಸಾರ್ಟ್ಗೆ ಸ್ಥಳಾಂತರವಾಗುವ ಸಾಧ್ಯತೆ ಇದ್ದು, ಕೊನೆಯ ಕ್ಷಣದ ರಾಜಕೀಯ ಕಸರತ್ತು ಜೋರಾಗಿದೆ.
ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗೆಲ್ಲಲು 28 ಮೊದಲ ಪ್ರಾಶಸ್ತ್ಯದ ಮತಗಳು ಅಗತ್ಯವಾಗಿವೆ. ಹೀಗಾಗಿ ಕಾಂಗ್ರೆಸ್ಗೆ 5 ಅಭ್ಯರ್ಥಿಗಳನ್ನು ಗೆಲ್ಲಿಸಲು ಕನಿಷ್ಠ 140 ಮತಗಳು ಬೇಕು. 135 ತನ್ನದೇ ಮತಗಳನ್ನು ಹೊಂದಿರುವ ಆಡಳಿತಾರೂಢ ಪಕ್ಷಕ್ಕೆ 2 ಪಕ್ಷೇತರರು ಹಾಗೂ 1 ಸರ್ವೋದಯ ಪಕ್ಷದ ಸದಸ್ಯರ ಬೆಂಬಲದಿಂದ ಬಲ 138ಕ್ಕೆ ಏರಿಕೆ ಆಗಲಿದೆ. ಬಿಜೆಪಿ ಉಚ್ಚಾಟಿತ ಶಾಸಕರಾದ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಬೆಂಬಲ ನೀಡಿದರೆ ಸಂಖ್ಯೆ 140 ತಲುಪಲಿದೆ. ಹೀಗಾಗಿ ಕಾಂಗ್ರೆಸ್ ಐದೂ ಅಭ್ಯರ್ಥಿಗಳನ್ನು ಗೆಲ್ಲಿಸುವ ಲೆಕ್ಕಾಚಾರದಲ್ಲಿ ಇದೆ.
62 ಶಾಸಕರ ಬಲ ಹೊಂದಿರುವ ಬಿಜೆಪಿಯಿಂದ ಕಣದಲ್ಲಿರುವ 2 ಅಭ್ಯರ್ಥಿಗಳಿಗೆ ತಲಾ 28ರಂತೆ 56 ಮತಗಳು ಅಗತ್ಯವಿದೆ. ಹೀಗಾಗಿ 6 ಮತಗಳು ಹೆಚ್ಚುವರಿಯಾಗಿ ಉಳಿಯಲಿವೆ. ಆದರೆ ಓರ್ವ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಿರುವ ಜೆಡಿಎಸ್ ಬಳಿ ಇರೋದು ಕೇವಲ 18 ಶಾಸಕರು. ಹೀಗಿದ್ದರೂ ಬಿಜೆಪಿಯ 6 ಹೆಚ್ಚುವರಿ ಮತ, ಜನಾರ್ದನ ರೆಡ್ಡಿ, ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲ ಸೇರಿದರೆ ಒಟ್ಟು 26 ಮತಗಳ ಗಡಿ ತಲುಪಲಿದೆ. ಆದರೆ ಗೆಲುವಿಗೆ 28 ಮತಗಳು ಬೇಕಿರುವ ಹಿನ್ನೆಲೆ 2 ಮತಗಳ ಕೊರತೆ ಜೆಡಿಎಸ್ಗೆ ಆಗಲಿದೆ.
ಇಂದು ಬಿಎಲ್ಪಿ ಸಭೆ
ವಿಧಾನಪರಿಷತ್ ಚುನಾವಣೆ ಹಿನ್ನೆಲೆ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಇಂದು ಸಂಜೆ 6 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಜೆಪಿ ಶಾಸಕರಿಗೆ ವಿಪ್ ಜಾರಿಯಾಗಲಿದ್ದು, ಮತದಾನ ಪ್ರಕ್ರಿಯೆ ಮತ್ತು ಮತ ಹಂಚಿಕೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎನ್ನಲಾಗಿದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸ್ತುತ ‘ಜೋಡಿ ನಂಬರ್ 1’ ರಿಯಾಲಿಟಿ ಶೋ ಯಶಸ್ವಿಯಾಗಿ ಪ್ರಸಾರ ಕಾಣುತ್ತಿದೆ. ಇತ್ತೀಚೆಗೆ ನಡೆದ ಎಪಿಸೋಡ್ ಒಂದರಲ್ಲಿ ಸ್ಪರ್ಧಿಗಳು ತಮ್ಮ ವೈಯಕ್ತಿಕ ವಿಷಯಗಳನ್ನು ವೇದಿಕೆ ಮೇಲೆ ಮುಕ್ತವಾಗಿ ಹೇಳಿಕೊಂಡಿದ್ದರು. ಆದರೆ, ಇದು ಸರಿ ಅಲ್ಲ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿಬಂದಿದ್ದವು. ಕಲಾವಿದರು ತಮ್ಮ ಖಾಸಗಿ ವಿಷಯವನ್ನು ಟಿಆರ್ಪಿಗಾಗಿ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ ಎಂಬ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದೀಗ ಈ ಎಲ್ಲಾ ವಿವಾದ ಹಾಗೂ ನೆಗೆಟಿವ್ ಕಾಮೆಂಟ್ಗಳಿಗೆ ಶೋನ ಸ್ಪರ್ಧಿ, ನಟಿ ಗೀತಾ ಭಾರತಿ ಭಟ್ (Geetha Bharati Bhat) ಹಾಗೂ ಅವರ ಪತಿ ರಾಜಾರಾಮ್ ಭಟ್ ವಿಡಿಯೋ ಮೂಲಕ ಖಡಕ್ ಸ್ಪಷ್ಟನೆ ನೀಡಿದ್ದಾರೆ.
ಸೋಶಿಯಲ್ ಮೀಡಿಯಾ ಟ್ರೋಲ್ಗಳಿಗೆ ಗೀತಾ ಭಾರತಿ ಭಟ್ ಉತ್ತರ:
ಸಾಮಾಜಿಕ ಜಾಲತಾಣದಲ್ಲಿ ಜಂಟಿ ವಿಡಿಯೋ ಹಂಚಿಕೊಂಡಿರುವ ಈ ಜೋಡಿ, ನೆಟ್ಟಿಗರ ಸರಣಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ವಿಡಿಯೋದ ಆರಂಭದಲ್ಲಿಯೇ ಮಾತನಾಡಿದ ನಟಿ ಗೀತಾ ಭಾರತಿ ಭಟ್, ‘ಎಲ್ಲರಿಗೂ ನಮಸ್ಕಾರ, ಇಷ್ಟು ದಿನ ನೀವು ಮಾತನಾಡಿದ್ದನ್ನೆಲ್ಲಾ ನಾವು ತುಂಬಾನೇ ತಾಳ್ಮೆಯಿಂದ ಕೇಳಿಸಿಕೊಂಡಿದ್ದೀವಿ. ಈಗ ನಾವು ಮಾತನಾಡುವುದನ್ನು ಪ್ಲೀಸ್ ಸ್ವಲ್ಪ ಕೇಳಿಸಿಕೊಳ್ಳಿ’ ಎಂದು ಮಾತು ಆರಂಭಿಸಿದ್ದಾರೆ.
‘ನಾವು ವೇದಿಕೆ ಮೇಲೆ ಪ್ರೀತಿ ತೋರಿಸಿದಾಗ ನೀವೆಲ್ಲಾ ಸ್ಕ್ರಾಲ್ ಮಾಡಿದ್ರಿ. ಸ್ನೇಹದ ಬಗ್ಗೆ ಮಾತನಾಡಿದಾಗ ಅದನ್ನ ಸ್ಕಿಪ್ ಮಾಡಿದ್ರಿ. ಆದರೆ, ಗಂಡ-ಹೆಂಡತಿ ನಡುವೆ ನಡೆದ ಒಂದು ಮುಕ್ತ ಸಂಭಾಷಣೆಯನ್ನ ಜಗಳ ಅಂತ ಅಂದುಕೊಂಡು, ಅದನ್ನ ಲೈಕ್, ಶೇರ್, ಕಾಮೆಂಟ್, ಡಿಬೇಟ್, ಡಿಸ್ಕಷನ್ ಮಾಡಿ ಅದರ ಬಗ್ಗೆ ಇನ್ನೊಂದು ವಿಡಿಯೋ ಮಾಡಿ ವೈರಲ್ ಮಾಡಿದ್ರಿ, ರೀ-ಪೋಸ್ಟ್ ಮಾಡಿದ್ರಿ’ ಎಂದು ವ್ಯಂಗ್ಯವಾಡಿದ್ದಾರೆ.
‘ಎಂಟರ್ಟೈನ್ಮೆಂಟ್ಗೋಸ್ಕರ ಅಂತ ಕೊಡುವಂತಹ ಕಂಟೆಂಟ್ಗಳನ್ನ ನೀವು ತಿರುಗಿಯೂ ನೋಡುವುದಿಲ್ಲ. ಆದರೆ ಇಂತಹದ್ದೇನಾದರೂ ಒಂದು ಚಿಕ್ಕ ವಿವಾದ ನಡೀತಿದೆ ಅಂದ ತಕ್ಷಣ ಎಲ್ಲರೂ ಓಡಿ ಬಂದು ಅದನ್ನ ವೈರಲ್ ಮಾಡ್ತೀರಾ ಅಲ್ವಾ’ ಎಂದು ಪ್ರಶ್ನಿಸಿದ್ದಾರೆ.
‘ಜನರು ನಮಗೆ ಏನೇನೋ ಹೇಳ್ತಿದ್ದಾರೆ. ಟಿಆರ್ಪಿಗೋಸ್ಕರ ನಾವು ಇದನ್ನ ಮಾಡ್ತಾ ಇದ್ದೀವಿ, ದುಡ್ಡು ತಗೊಂಡು ಸ್ಟೇಜ್ ಮೇಲೆ ಜಗಳ ಮಾಡ್ತಾ ಇದ್ದೀವಿ. ನಾಲ್ಕು ಗೋಡೆಗಳ ಮಧ್ಯೆ ಇರಬೇಕಾಗಿರೋ ವಿಚಾರನ ತಗೊಂಡು ಬಂದು ಪಬ್ಲಿಕ್ನಲ್ಲಿ ಡಿಸ್ಕಸ್ ಮಾಡ್ತಾ ಇದ್ದೀವಿ ಅಂತ ಕಾಮೆಂಟ್ ಮಾಡ್ತಿದ್ದಾರೆ. ಓಕೆ ಫೈನ್, ಇದು ನಿಮ್ಮ ಅಭಿಪ್ರಾಯ ಆಗಿರಬಹುದು. ಆದರೆ ನಮಗೂ ಒಂದು ಒಪಿನಿಯನ್ ಇದೆ ಅಲ್ವಾ? ನಾಲ್ಕು ಗೋಡೆ ಮಧ್ಯೆ ಇರಬೇಕಾದ ವಿಚಾರನ ನಾವು ಅಲ್ಲೇ ಇಟ್ಟುಕೊಂಡಿದ್ದೀವಿ. ಡಿಸ್ಕಸ್ ಮಾಡಬೇಕಾದ ವಿಚಾರವನ್ನ ಮಾತ್ರ ವೇದಿಕೆ ಮೇಲೆ ಮಾತನಾಡಿದ್ದೀವಿ. ಎಲ್ಲರ ಮನೆಗಳಲ್ಲೂ ನಡೆಯುವಂತಹ ಸಾಮಾನ್ಯ ವಿಚಾರವನ್ನೇ ನಾವು ಚರ್ಚೆ ಮಾಡಿರೋದು’ ಎಂದು ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ನಮಗೆ ಹತ್ತಾರು ಮೆಸೇಜ್ಗಳು ಬಂದಿವೆ:
ವೇದಿಕೆ ಮೇಲೆ ತಮ್ಮ ಮನದ ಮಾತು ಹಂಚಿಕೊಂಡಿದ್ದಕ್ಕೆ ಪಾಸಿಟಿವ್ ಪ್ರತಿಕ್ರಿಯೆಗಳೂ ಬಂದಿವೆ ಎಂದಿರುವ ಗೀತಾ, ‘ನಮಗೆ ಹತ್ತಾರು ಜನರು ಮೆಸೇಜ್ ಮಾಡಿದ್ದಾರೆ. ಮ್ಯಾಮ್, ನಮ್ಮ ಮನೆಯಲ್ಲೂ ಇದೇ ರೀತಿ ಆಗುತ್ತಿತ್ತು, ನಾವೂ ಮನಸ್ಸಲ್ಲೇ ಇಟ್ಟುಕೊಂಡು ಕೊರಗುತ್ತಿದ್ದೆವು, ಆದರೆ ಈ ಎಪಿಸೋಡ್ ನೋಡಿದ ಮೇಲೆ ನಮಗೂ ನಮ್ಮವರ ಜೊತೆ ಶೇರ್ ಮಾಡ್ಕೋಬೇಕು ಅಂತ ಅನಿಸ್ತು ಮ್ಯಾಮ್ ಅಂತ ಹೇಳಿದ್ದಾರೆ’ ಎಂದು ನೆನಪಿಸಿಕೊಂಡಿದ್ದಾರೆ.
ಇದೇ ವೇಳೆ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ಗಳ ವಿರುದ್ಧ ಕಿಡಿಕಾರಿದ ಗೀತಾ, ‘ಈ ಸೋಕಾಲ್ಡ್ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ ಇದ್ದಾರಲ್ಲ, ಆಲ್ರೆಡಿ ವೈರಲ್ ಆಗಿರೋ ವಿಡಿಯೋನ ತಗೊಂಡು, ಅದರ ಮೇಲೆ ತಮ್ಮ ಒಪಿನಿಯನ್ ಹೇಳಿ ಅದನ್ನ ಇನ್ನೊಂದು ವಿಡಿಯೋ ಮಾಡಿ ಹಾಕ್ತಾರೆ. ವಾಹಿನಿಯವರು ಆ ವಿಡಿಯೋನ ಡಿಲೀಟ್ ಮಾಡಿಸಿದರೆ, ತಕ್ಷಣ ಇವರದ್ದು ಇನ್ನೊಂದು ವಿಡಿಯೋ ರೆಡಿ ಆಗಿಬಿಡುತ್ತೆ. ‘ಚಾನೆಲ್ನವರು ನಾನು ನಿಜ ಹೇಳಿದ್ದಕ್ಕೆ ವಿಡಿಯೋ ಡಿಲೀಟ್ ಮಾಡಿಸಿದ್ದಾರೆ, ಇವಾಗ ಇನ್ನೊಂದು ವಿಡಿಯೋ ಮಾಡಿದ್ದೀನಿ ನೋಡಿ’ ಅಂತ ಹಾಕ್ತಾರೆ. ಅದು ಒಂದೇ ದಿನದಲ್ಲಿ 1 ಮಿಲಿಯನ್ ವೀವ್ಸ್ ರೀಚ್ ಆಗುತ್ತೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಣ್ಣೀರು-ಬಿಸಿಯಲ್ಲಿ ಕೈ ಕಾಯಿಸಿಕೊಳ್ಳಬೇಡಿ ಎಂದ ಪತಿ ರಾಜಾರಾಮ್:
ವಿಡಿಯೋದಲ್ಲಿ ಪತ್ನಿಯ ಜೊತೆಗಿದ್ದ ರಾಜಾರಾಮ್ ಭಟ್ ಕೂಡ ನೆಟ್ಟಿಗರಿಗೆ ಬುದ್ಧಿವಾದ ಹೇಳಿದ್ದಾರೆ. ‘ನೀವೆಲ್ಲಾ ಇದನ್ನೆಲ್ಲಾ ಮಾಡೋದು ಟಿಆರ್ಪಿಗೋಸ್ಕರ ಅಲ್ವಾ? ಇನ್ನೊಬ್ಬರಿಗೆ ಹೇಳುವುದಕ್ಕಿಂತ ಮುಂಚೆ, ನಾನು ಏನು ಮಾಡ್ತಾ ಇದ್ದೀನಿ ಅನ್ನೋದನ್ನ ಮೊದಲು ತಿಳಿದುಕೊಳ್ಳಬೇಕು. ಬೇರೆಯವರ ಕಣ್ಣೀರು ಅಥವಾ ಕಷ್ಟದ ಬಿಸಿಯಲ್ಲಿ ತಾವು ಬಿಸಿ ಕಾಯಿಸಿಕೊಳ್ಳುವುದಲ್ಲ ಜೀವನ. ಜೀವನ ಅಂದರೆ ನಾಲ್ಕು ಜನಕ್ಕೆ ಒಳ್ಳೆಯದು ಮಾಡಬೇಕಾಗಿರೋದು ಅಷ್ಟೇ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಕೊನೆಯಲ್ಲಿ ಮಾತನಾಡಿದ ಗೀತಾ ಭಾರತಿ ಭಟ್, ‘ನೀವು ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕೊಡ್ತೀರಾ ಅಂತ ಅಂದರೆ ಸೆನ್ಸಿಬಲ್ (ಅರ್ಥಪೂರ್ಣ) ಆಗಿರೋ ಕಂಟೆಂಟ್ ಕೊಡಿ. ದಯವಿಟ್ಟು ನೀವೇ ಯೋಚನೆ ಮಾಡಿ, ಪ್ರಾಬ್ಲಮ್ ಇರೋದು ಪ್ರೋಗ್ರಾಮ್ನಲ್ಲಿ ಅಲ್ಲ ಅಥವಾ ನಮ್ಮಲ್ಲಿ ಅಲ್ಲ. ನೆಗೆಟಿವ್ ಆಗಿರೋದನ್ನೇ ಹುಡುಕಿ ಅದನ್ನ ವೈರಲ್ ಮಾಡುವಂತಹ ನಿಮ್ಮ ಅಭ್ಯಾಸದಲ್ಲಿದೆ ಸಮಸ್ಯೆ. ಪ್ಲೀಸ್ ಥಿಂಕ್ ಮಾಡಿ’ ಎಂದು ವಿನಂತಿಸಿಕೊಂಡಿದ್ದಾರೆ.
ಆರೋಹೆಡ್ ಅಂಗಳದಲ್ಲಿ ನಡೆದಿದ್ದು ಕೇವಲ ಕಾಲ್ಚೆಂಡಿನ ಆಟವಾಗಿರಲಿಲ್ಲ, ಬದಲಾಗಿ ಫುಟ್ಬಾಲ್ ಮೈದಾನದ ಹಸಿರು ಹಾಸಿನ ಮೇಲೆ ಬರೆದ ಇತಿಹಾಸದ ಮಹಾಕಾವ್ಯ! ಕಾಲಿನಲ್ಲೇ ಕಲೆಯುಂಡು, ಚೆಂಡನ್ನೇ ತನ್ನ ಆಜ್ಞಾಧಾರಕನನ್ನಾಗಿ ಮಾಡಿಕೊಂಡಿರುವ ಫುಟ್ಬಾಲ್ ಲೋಕದ ಏಕೈಕ ‘ಮಾಂತ್ರಿಕ’ ಲಿಯೋನೆಲ್ ಮೆಸ್ಸಿ (Lionel Messi) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಹ್ಯಾಟ್ರಿಕ್ ಗೋಲು ದಾಖಲಿಸುವ ಮೂಲಕ ಎಂಬುದು ವಿಶೇಷ.
2026ರ ಫಿಫಾ ವಿಶ್ವಕಪ್ನ ಗ್ರೂಪ್ ‘ಜೆ’ ನ ಆರಂಭಿಕ ಪಂದ್ಯದಲ್ಲಿ ಆಲ್ಜೀರಿಯಾ ವಿರುದ್ಧ ಭರ್ಜರಿ ಹ್ಯಾಟ್ರಿಕ್ ಗೋಲು ಸಿಡಿಸುವ ಮೂಲಕ ಮೆಸ್ಸಿ, ಜರ್ಮನಿಯ ದಿಗ್ಗಜ ಮಿರೋಸ್ಲಾವ್ ಕ್ಲೋಸ್ ಅವರ ಹೆಸರಲ್ಲಿದ್ದ ಅತಿ ಹೆಚ್ಚು ವಿಶ್ವಕಪ್ ಗೋಲುಗಳ ಸಾರ್ವಕಾಲಿಕ ದಾಖಲೆಯನ್ನು ಸರಿಗಟ್ಟಿದ್ದಾರೆ.
ಮಿರೋಸ್ಲಾವ್ ಕ್ಲೋಸ್: ಜರ್ಮನಿ ಪರ 24 ವಿಶ್ವಕಪ್ ಪಂದ್ಯಗಳನ್ನಾಡಿರುವ ಮಿರೋಸ್ಲಾವ್ ಕ್ಲೋಸ್ 16 ಗೋಲುಗಳನ್ನು ಬಾರಿಸಿ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ ಗೋಲು ದಾಖಲಿಸಿದ ವಿಶ್ವ ದಾಖಲೆ ನಿರ್ಮಿಸಿದ್ದರು.
ಲಿಯೋನೆಲ್ ಮೆಸ್ಸಿ: ಅರ್ಜೆಂಟೀನಾ ಪರ ಈವರೆಗೆ 27 ವಿಶ್ವಕಪ್ ಪಂದ್ಯಗಳನ್ನಾಡಿರುವ ಮೆಸ್ಸಿ ಒಟ್ಟು 16 ಗೋಲುಗಳನ್ನು ದಾಖಲಿಸಿದ್ದಾರೆ. ಈ ಮೂಲಕ ಫಿಫಾ ವಿಶ್ವಕಪ್ನಲ್ಲಿ ಅತ್ಯಧಿಕ ಗೋಲು ದಾಖಲಿಸಿ ಕ್ಲೋಸ್ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮೆಸ್ಸಿ ಸರಿಗಟ್ಟಿದ್ದಾರೆ.
ಮೆಸ್ಸಿ ಅವರ ಈ ಭರ್ಜರಿ ಪ್ರದರ್ಶನದ ನೆರವಿನೊಂದಿಗೆ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು ಅಲ್ಜೀರಿಯಾ ವಿರುದ್ಧ 3-0 ಗೋಲುಗಳ ಅಮೋಘ ಜಯ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಮೆಸ್ಸಿ ಮ್ಯಾಜಿಕ್:
ಅಮೆರಿಕದ ಕನ್ಸಾಸ್ ಸಿಟಿಯ ಆರೋಹೆಡ್ ಸ್ಟೇಡಿಯಂನಲ್ಲಿ ನಡೆದ ಪಂದ್ಯವು ಸಂಪೂರ್ಣವಾಗಿ ಮೆಸ್ಸಿ ಮಯವಾಗಿತ್ತು. ಈ ಪಂದ್ಯಕ್ಕೂ ಮುನ್ನ ವಿಶ್ವಕಪ್ಗಳಲ್ಲಿ 13 ಗೋಲುಗಳನ್ನು ಹೊಂದಿದ್ದ ಮೆಸ್ಸಿ, ಪಂದ್ಯದ 17ನೇ ನಿಮಿಷದಲ್ಲೇ ಅದ್ಭುತ ಲಾಂಗ್-ರೇಂಜ್ ಗೋಲು ಬಾರಿಸಿ ಅರ್ಜೆಂಟೀನಾಕ್ಕೆ 1-0 ಮುನ್ನಡೆ ತಂದುಕೊಟ್ಟರು.
ಇದಾದ ಬಳಿಕ 60ನೇ ನಿಮಿಷದಲ್ಲಿ ಎರಡನೇ ಗೋಲು ಮತ್ತು 76ನೇ ನಿಮಿಷದಲ್ಲಿ ಮೂರನೇ ಗೋಲು ಬಾರಿಸುವ ಮೂಲಕ ತಮ್ಮ ವಿಶ್ವಕಪ್ ವೃತ್ತಿಜೀವನದ ಚೊಚ್ಚಲ ಹ್ಯಾಟ್ರಿಕ್ ಪೂರೈಸಿದರು.
ಹಲವು ದಾಖಲೆಗಳು ಧೂಳೀಪಟ:
ಈ ಪಂದ್ಯದಲ್ಲಿ ಗೋಲು ಗಳಿಸುತ್ತಿದ್ದಂತೆ ಲಿಯೋನೆಲ್ ಮೆಸ್ಸಿ ಫುಟ್ಬಾಲ್ ಇತಿಹಾಸದ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡರು. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ…
ಮೊದಲ ವಿಶ್ವಕಪ್ ಹ್ಯಾಟ್ರಿಕ್: ಮೆಸ್ಸಿ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅರ್ಜೆಂಟೀನಾ ಪರ 200ನೇ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಇದರ ನಡುವೆ 6 ಬಾರಿ ವಿಶ್ವಕಪ್ನಲ್ಲಿ ಕಣಕ್ಕಿಳಿದಿದ್ದಾರೆ. ಇದಾಗ್ಯೂ ಅವರಿಗೆ ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿಯ ವಿಶ್ವಕಪ್ನ ಮೊದಲ ಮ್ಯಾಚ್ನಲ್ಲೇ ತಮ್ಮ ಬಹುದೊಡ್ಡ ಕನಸನ್ನು ನನಸಾಗಿಸಿಕೊಂಡಿರುವುದು ವಿಶೇಷ.
ಹಿರಿಯ ಆಟಗಾರ: 2006ರಲ್ಲಿ ಸೆರ್ಬಿಯಾ ಮತ್ತು ಮಾಂಟೆನೆಗ್ರೊ ವಿರುದ್ಧ 18ನೇ ವಯಸ್ಸಿನಲ್ಲಿ ತಮ್ಮ ಮೊದಲ ವಿಶ್ವಕಪ್ ಗೋಲು ಗಳಿಸಿದ್ದ ಮೆಸ್ಸಿ, ಈಗ 20 ವರ್ಷಗಳ ನಂತರ ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಅತ್ಯಂತ ಹಿರಿಯ ಅರ್ಜೆಂಟೀನಾ ಆಟಗಾರ ಎನಿಸಿಕೊಂಡಿದ್ದಾರೆ.
ಏಕೈಕ ಆಟಗಾರ: ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಆರು ವಿಭಿನ್ನ ವಿಶ್ವಕಪ್ ಟೂರ್ನಿಗಳಲ್ಲಿ (2006, 2010, 2014, 2018, 2022, 2026) ಅರ್ಜೆಂಟೀನಾ ತಂಡವನ್ನು ಪ್ರತಿನಿಧಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನಿಜವಾದ ಕ್ಲೋಸ್ ಭವಿಷ್ಯ!
ಈ ಬಾರಿಯ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಸ್ವತಃ ಮಿರೋಸ್ಲಾವ್ ಕ್ಲೋಸ್ ಅವರೇ, “ನನ್ನ ವಿಶ್ವಕಪ್ ದಾಖಲೆಯನ್ನು ಮುರಿಯಲು ಯಾರಾದರೂ ಅರ್ಹರಿದ್ದರೆ ಅದು ಲಿಯೋನೆಲ್ ಮೆಸ್ಸಿ ಮಾತ್ರ” ಎಂದು ಹೇಳಿದ್ದರು.
ಮೆಸ್ಸಿ ಈಗ ಅವರ ದಾಖಲೆಯನ್ನು ಸರಿಗಟ್ಟಿದ್ದು, ಮುಂಬರುವ ಪಂದ್ಯಗಳಲ್ಲಿ ಇನ್ನೂ ಒಂದು ಗೋಲು ಗಳಿಸಿದರೆ ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ಗೋಲು ಗಳಿಸಿದ ಏಕೈಕ ಆಟಗಾರ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.
ಬೆಂಗಳೂರು, ಜೂನ್ 17: ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳವನ್ನು ಖಂಡಿಸಿ ಮತ್ತು ತಮಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಬೆಂಗಳೂರಿನ (Bengaluru) ಸುಮಾರು 58,000ಕ್ಕೂ ಹೆಚ್ಚು ಬೇಕರಿ, ಬೀಡಾ ಅಂಗಡಿ ಮಾಲೀಕರು ಹಾಗೂ ಬೀದಿ ಬದಿ ವ್ಯಾಪಾರಿಗಳು ಜೂನ್ 18ರಿಂದ (ಗುರುವಾರ) ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಮುಖ್ಯಾಂಶಗಳು
ಅಧಿಕಾರಿಗಳ ಕಿರುಕುಳ ಖಂಡಿಸಿ ಸಣ್ಣ ವ್ಯಾಪಾರಿಗಳು ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಜೂನ್ 18 ರಿಂದ ಬೆಂಗಳೂರಿನಾದ್ಯಂತ ಬೇಕರಿ, ಸಣ್ಣ ಅಂಗಡಿಗಳು ಬಂದ್ ಆಗಲಿವೆ.
ಪ್ಲಾಸ್ಟಿಕ್ ನಿಷೇಧ ಹೆಸರಿನಲ್ಲಿ ತಾರತಮ್ಯದ ದಂಡ ವಿಧಿಸುತ್ತಿರುವುದಕ್ಕೆ ವ್ಯಾಪಾರಿಗಳ ಆಕ್ರೋಶ.
ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ರಾಜ್ಯ ಅಧ್ಯಕ್ಷರಾದ ರವಿಶೆಟ್ಟಿ ಬೈಂದೂರು ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಣ್ಣ ವ್ಯಾಪಾರಿಗಳು ಕಾನೂನುಬದ್ಧವಾಗಿ ವ್ಯಾಪಾರ ಮಾಡುತ್ತಾ, ತೆರಿಗೆ ಪಾವತಿಸುತ್ತಿದ್ದರೂ ಸಹ ಅಧಿಕಾರಿಗಳಿಂದ ನಿರಂತರ ತಪಾಸಣೆ, ದಂಡ ಮತ್ತು ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.
ರಾಜ್ಯಾದ್ಯಂತ ಭಾಗಶಃ ಬೆಂಬಲ
ಈ ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಎಲ್ಲಾ ಬೇಕರಿಗಳು ಮತ್ತು ಸಣ್ಣ ಅಂಗಡಿಗಳು ಸಂಪೂರ್ಣ ಬಂದ್ ಆಗಲಿವೆ. ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದ್ದರೂ, ಕರ್ನಾಟಕದ ಇತರ ಭಾಗಗಳಲ್ಲಿ ಭಾಗಶಃ ಸಹಕರಿಸುವ ಸಾಧ್ಯತೆಯಿದೆ ಎಂದು ಪರಿಷತ್ ತಿಳಿಸಿದೆ.
ಅಧಿಕಾರಿಗಳ ಕಿರುಕುಳದ ವಿರುದ್ಧ ವ್ಯಾಪಾರಿಗಳ ಆಕ್ರೋಶ
ಸಣ್ಣ ವ್ಯಾಪಾರಿಗಳ ಅಸೋಸಿಯೇಷನ್ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ. ವ್ಯಾಪಾರಿಗಳನ್ನು ಪೊಲೀಸ್ ಠಾಣೆ ಹಾಗೂ ಪಾಲಿಕೆ ಕಚೇರಿಗಳಿಗೆ ಅಲೆದಾಡಿಸಿ, ಸುದೀರ್ಘ ವಿಚಾರಣೆ ನಡೆಸಿ ನಿಂದಿಸಲಾಗುತ್ತಿದೆ. ಅಲ್ಲದೆ ಯಾವುದೇ ಮುನ್ಸೂಚನೆ ಇಲ್ಲದೆ ಅಂಗಡಿಗಳನ್ನು ಮುಚ್ಚಿಸಲಾಗುತ್ತಿದೆ. ನಿಷೇಧಿತ ಪ್ಲಾಸ್ಟಿಕ್ ಕವರ್ಗಳನ್ನು ಉತ್ಪಾದಿಸುವ ದೊಡ್ಡ ಸಂಸ್ಥೆಗಳು ಮತ್ತು ಸಗಟು ವ್ಯಾಪಾರಿಗಳನ್ನು ಬಿಟ್ಟು, ಸಣ್ಣ ಚಿಲ್ಲರೆ ವ್ಯಾಪಾರಿಗಳ ಮೇಲೆ ಅಧಿಕಾರಿಗಳು ಭಾರಿ ಮೊತ್ತದ ದಂಡ ಹೇರುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೆ ಸರ್ಕಾರದಿಂದ ಅನುಮತಿ ಪಡೆದ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಿದರೂ ಸಹ ಅಂಗಡಿ ಮಾಲೀಕರಿಗೆ ದಂಡ ವಿಧಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ವ್ಯಾಪಾರಿಗಳು ದೂರಿದ್ದಾರೆ. ಹೀಗಾಗಿ ನಿಯಮಾವಳಿಗಳ ಹೆಸರಿನಲ್ಲಿ ನಡೆಯುತ್ತಿರುವ ಈ ಅನಗತ್ಯ ಕಿರುಕುಳ ನಿಲ್ಲುವವರೆಗೂ ಮುಷ್ಕರ ಮುಂದುವರಿಯಲಿದೆ ಎಂದು ಸಂಘಟನೆಗಳು ಎಚ್ಚರಿಸಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಜೂನ್ 17: ಸಾಫ್ಟ್ವೇರ್ ಮತ್ತು ಸೇವೆಗಳ ರಫ್ತಿನಲ್ಲಿ ಕರ್ನಾಟಕವು ದೇಶದ ಅಗ್ರ ರಾಜ್ಯ ಎಂಬ ತನ್ನ ಸ್ಥಾನವನ್ನು ಮತ್ತೊಮ್ಮೆ ಉಳಿಸಿಕೊಂಡಿದೆ. ಈ ಕುರಿತ ಮಾಹಿತಯ್ನು ಸ್ವತಃ ಸಿಎಂ ಡಿ.ಕೆ. ಶಿವಕುಮಾರ್ ಅವರೇ ಎಕ್ಸ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದು, 2025-26ನೇ ಹಣಕಾಸು ವರ್ಷದಲ್ಲಿ ಸುಮಾರು 173 ಬಿಲಿಯನ್ ಡಾಲರ್ (ಸುಮಾರು ₹19.7 ಲಕ್ಷ ಕೋಟಿ) ಮೌಲ್ಯದ ರಫ್ತು ದಾಖಲಿಸಿದೆ. ಇದರ ಜೊತೆಗೆ 34 ಬಿಲಿಯನ್ ಡಾಲರ್ ಮೌಲ್ಯದ ಸರಕು (Merchandise) ರಫ್ತಿನೊಂದಿಗೆ ಕರ್ನಾಟಕ ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.
ಶೇ. 9.3ರಷ್ಟು ಬೆಳವಣಿಗೆ
ನಮ್ಮ ಸರ್ಕಾರದ ದೂರದೃಷ್ಟಿಯ ಕೈಗಾರಿಕಾ ನೀತಿಗಳು ಹಾಗೂ ಉದ್ಯಮ ಸ್ನೇಹಿ ಆಡಳಿತದ ಫಲವಾಗಿ, 2025-26ರ ಆರ್ಥಿಕ ವರ್ಷದಲ್ಲಿ ರಾಜ್ಯದ ಒಟ್ಟು ರಫ್ತು ಪ್ರಮಾಣವು ಶೇ. 9.5 ರಷ್ಟು ಪ್ರಗತಿ ಕಂಡು, ಸುಮಾರು ₹19.7 ಲಕ್ಷ ಕೋಟಿಗೆ ತಲುಪಿದೆ. ಈ ಮೂಲಕ ಕರುನಾಡು ಜಾಗತಿಕ ಮಟ್ಟದಲ್ಲಿ ಹೊಸ ಉದ್ಯೋಗ ಮತ್ತು ಹೂಡಿಕೆಗೆ ಅಪಾರ ಅವಕಾಶಗಳನ್ನು… pic.twitter.com/MizLM04lQL
ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಾಗೂ ಡೈರೆಕ್ಟರೇಟ್ ಜನರಲ್ ಆಫ್ ಕಮರ್ಷಿಯಲ್ ಇಂಟೆಲಿಜೆನ್ಸ್ ಅಂಡ್ ಸ್ಟಾಟಿಸ್ಟಿಕ್ಸ್ (DGCIS) ಅಂಕಿಅಂಶಗಳ ಪ್ರಕಾರ, 2025-26ನೇ ಹಣಕಾಸು ವರ್ಷದಲ್ಲಿ ರಾಜ್ಯದ ಸಾಫ್ಟ್ವೇರ್, ಸೇವೆ ಹಾಗೂ ಸರಕು ರಫ್ತುಗಳಲ್ಲಿ ಶೇ. 9.3ರಷ್ಟು ಬೆಳವಣಿಗೆ ದಾಖಲಾಗಿದೆ. ಭಾರತದ ಪ್ರಮುಖ ಸಾಫ್ಟ್ವೇರ್ ಮತ್ತು ಸೇವಾ ರಫ್ತು ರಾಜ್ಯವಾಗಿ ಕರ್ನಾಟಕ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, ಉತ್ಪಾದನಾ ಕ್ಷೇತ್ರ, ಏರೋಸ್ಪೇಸ್, ಸಂಶೋಧನೆ ಹಾಗೂ ನವೋದ್ಯಮಗಳಲ್ಲಿ ಕರ್ನಾಟಕದ ಶಕ್ತಿ ಅಡಗಿದೆ. ವಿಶ್ವಮಟ್ಟದ ಪ್ರತಿಭೆ, ಚೈತನ್ಯಮಯ ಆರ್ಥಿಕತೆ ಹಾಗೂ ಉದ್ಯಮಶೀಲತೆಯ ಮನೋಭಾವವೇ ರಾಜ್ಯದ ಯಶಸ್ಸಿನ ಮೂಲ ಎಂದು ಸಿಎಂ ಹೇಳಿದ್ದಾರೆ.
2025-26ನೇ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ಸಾಫ್ಟ್ವೇರ್ ಮತ್ತು ಸೇವಾ ರಫ್ತಿನ ಶೇ. 41ರಷ್ಟು ಪಾಲು ಕರ್ನಾಟಕದ್ದಾಗಿದೆ.
ಇತರೆ ಪ್ರಮುಖ ರಾಜ್ಯಗಳ ಪಾಲು
ಮಹಾರಾಷ್ಟ್ರ – ಶೇ. 16
ತಮಿಳುನಾಡು – ಶೇ. 12.5
ಉತ್ತರ ಪ್ರದೇಶ – ಶೇ. 5
ಆಂಧ್ರ ಪ್ರದೇಶ – ಶೇ. 1
ಗುಜರಾತ್ – ಶೇ. 0.9
ಕರ್ನಾಟಕದ ಉತ್ಪನ್ನಗಳು, ಸೇವೆಗಳು ಮತ್ತು ಆಲೋಚನೆಗಳು ಜಾಗತಿಕ ಮಾರುಕಟ್ಟೆ ತಲುಪುತ್ತಿರುವ ಸಂದರ್ಭದಲ್ಲಿ ಹೂಡಿಕೆ, ಕೈಗಾರಿಕೆ, ಉದ್ಯಮಶೀಲತೆ ಹಾಗೂ ಉದ್ಯೋಗ ಸೃಷ್ಟಿಗೆ ಇನ್ನಷ್ಟು ಅವಕಾಶಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಭಾರತದ ಆರ್ಥಿಕ ಬೆಳವಣಿಗೆಯ ಪ್ರಮುಖ ಎಂಜಿನ್ ಆಗಿ ಕರ್ನಾಟಕದ ಸ್ಥಾನವನ್ನು ಮತ್ತಷ್ಟು ಬಲಪಡಿಸುವುದು ನಮ್ಮ ಗುರಿ ಎಂದು ಮುಖ್ಯಮಂತ್ರಿಗಳು ತಿಳಿಸಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.