Category Archives: Blog

Your blog category

Dude 2: ಬರಲಿದೆ ‘ಡ್ಯೂಡ್ 2’ ಸಿನಿಮಾ; ಕಥೆ ಮೆಚ್ಚಿದ ನಟ ಪ್ರದೀಪ್ ರಂಗನಾಥನ್ – Kannada News

ಕಾಲಿವುಡ್‌ನ ಯುವ ಸೆನ್ಸೇಷನ್ ಪ್ರದೀಪ್ ರಂಗನಾಥನ್ (Pradeep Ranganathan) ನಟನೆಯ ‘ಡ್ಯೂಡ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ದೊಡ್ಡ ಮಟ್ಟದ ಯಶಸ್ಸು ಗಳಿಸಿತ್ತು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಯಾವುದೇ ದೊಡ್ಡ ನಿರೀಕ್ಷೆಯಿಲ್ಲದೆ ಬಿಡುಗಡೆಯಾಗಿದ್ದ ಈ ರೊಮ್ಯಾಂಟಿಕ್ ಎಂಟರ್‌ಟೈನರ್ ಸಿನಿಮಾ, ವಿಶ್ವಾದ್ಯಂತ ಬರೋಬ್ಬರಿ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಅಚ್ಚರಿ ಮೂಡಿಸಿತ್ತು. ‘ಡ್ಯೂಡ್’ (Dude) ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ಕೀರ್ತೀಶ್ವರನ್ ಮೊದಲ ಚಿತ್ರದಲ್ಲೇ ಭರವಸೆಯ ನಿರ್ದೇಶಕನಾಗಿ ಗುರುತಿಸಿಕೊಂಡರು. ಈಗ ಅವರು ಈ ಸಿನಿಮಾದ ಸೀಕ್ವೆಲ್ (Dude 2) ಬಗ್ಗೆ ಒಂದು ಅಪ್​ಡೇಟ್ ನೀಡಿದ್ದಾರೆ.

ಖ್ಯಾತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವೀ ಮೇಕರ್ಸ್’ ಬಂಡವಾಳ ಹೂಡಿದ್ದ ಈ ಸಿನಿಮಾ, ಹೊಸ ತಲೆಮಾರಿನ GenZ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಸಾಯಿ ಅಭ್ಯಂಕರ್ ಅವರ ಸೂಪರ್ ಹಿಟ್ ಸಂಗೀತ ಕೂಡ ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣವಾಗಿತ್ತು. ಇದೀಗ ಈ ಸೂಪರ್ ಹಿಟ್ ಸಿನಿಮಾದ ಅಭಿಮಾನಿಗಳಿಗೆ ನಿರ್ದೇಶಕರು ಸಿಹಿ ಸುದ್ದಿ ಕೊಟ್ಟಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ನಿರ್ದೇಶಕ ಕೀರ್ತೀಶ್ವರನ್, ‘ಡ್ಯೂಡ್ 2’ ಚಿತ್ರದ ಬಗ್ಗೆ ಮಹತ್ವದ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ‘ನಾನು ಈಗಾಗಲೇ ಡ್ಯೂಡ್ 2 ಚಿತ್ರದ ಒಂದು ಸಣ್ಣ ಲೈನ್ ಅಥವಾ ಐಡಿಯಾವನ್ನು ಪ್ರದೀಪ್ ರಂಗನಾಥನ್ ಅವರಿಗೆ ವಿವರಿಸಿದ್ದೇನೆ. ಆ ಕಾನ್ಸೆಪ್ಟ್ ಪ್ರದೀಪ್ ಅವರಿಗೂ ತುಂಬಾ ಇಷ್ಟವಾಗಿದೆ. ಒಂದು ವೇಳೆ ಸೀಕ್ವೆಲ್ ಸೆಟ್ಟೇರಿದರೆ, ಮೊದಲ ಭಾಗದ ಪ್ರಸಿದ್ಧ ‘ಕಮ್ ಆನ್, ಡ್ಯೂಡ್’ ಸನ್ನಿವೇಶದಿಂದಲೇ ಕಥೆ ಮುಂದುವರಿಯಲಿದೆ’ ಎಂದು ಅವರು ಹೇಳಿದ್ದಾರೆ.

ಆದರೆ, ಚಿತ್ರದ ಸೀಕ್ವೆಲ್ ಬಗ್ಗೆ ಕೀರ್ತೀಶ್ವರನ್ ಒಂದು ಸ್ಪಷ್ಟನೆಯನ್ನೂ ನೀಡಿದ್ದಾರೆ. ‘ಸದ್ಯಕ್ಕೆ ಇದು ಕೇವಲ ಒಂದು ಪ್ರಾಥಮಿಕ ಐಡಿಯಾ ಅಷ್ಟೇ. ಇದು ಇನ್ನೂ ಸಂಪೂರ್ಣವಾಗಿ ಫೈನಲ್ ಆಗಿಲ್ಲ. ಕಥೆ ಪೂರ್ತಿಯಾಗಿ ಸಿದ್ಧಗೊಂಡು, ಮೊದಲ ಭಾಗಕ್ಕಿಂತಲೂ ಅದ್ಭುತವಾಗಿ ಮೂಡಿಬರುತ್ತದೆ ಎಂಬ ಭರವಸೆ ಸಿಕ್ಕರೆ ಮಾತ್ರ ನಾವು ಡ್ಯೂಡ್ 2 ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದೇವೆ. ಸ್ಕ್ರಿಪ್ಟ್ ಆ ಹಂತಕ್ಕೆ ತಲುಪಿದ ನಂತರವೇ ಅಧಿಕೃತ ನಿರ್ಧಾರ ಪ್ರಕಟಿಸುತ್ತೇವೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವೃತ್ತಿಜೀವನದ ಆರಂಭದಲ್ಲೇ 100 ಕೋಟಿ ರೂ. ಹ್ಯಾಟ್ರಿಕ್ ಸಾಧಿಸಿದ ಪ್ರದೀಪ್ ರಂಗನಾಥನ್

ಈ ಮೊದಲು ‘ಡ್ಯೂಡ್’ ಸಿನಿಮಾವನ್ನು ಫ್ರಾಂಚೈಸಿ ಅಥವಾ ಸೀಕ್ವೆಲ್ ಮಾಡುವ ಉದ್ದೇಶದಿಂದ ನಿರ್ಮಾಣ ಮಾಡಿರಲಿಲ್ಲ. ಆದರೆ ಬಾಕ್ಸ್ ಆಫೀಸ್‌ನಲ್ಲಿ ಆ ಸಿನಿಮಾ ಗಳಿಸಿದ ಅಭೂತಪೂರ್ವ ಯಶಸ್ಸು ಮತ್ತು ಪ್ರದೀಪ್ ರಂಗನಾಥನ್ ಪಾತ್ರಕ್ಕೆ ಸಿಕ್ಕ ಜನಪ್ರಿಯತೆ, ಈಗ ಸೀಕ್ವೆಲ್ ಮಾಡುವಂತೆ ಚಿತ್ರತಂಡವನ್ನು ಪ್ರೇರೇಪಿಸಿದೆ. ಸದ್ಯಕ್ಕೆ ಪ್ರದೀಪ್ ರಂಗನಾಥನ್ ಮತ್ತು ಕೀರ್ತೀಶ್ವರನ್ ಇಬ್ಬರೂ ತಮ್ಮ ಮುಂದಿನ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ನಿರ್ದೇಶಕರು ಈಗಾಗಲೇ ಸೀಕ್ವೆಲ್‌ಗೆ ಬೀಜ ಬಿತ್ತಿರುವುದರಿಂದ, ಮುಂದಿನ ದಿನಗಳಲ್ಲಿ ‘ಡ್ಯೂಡ್ 2’ ಸಿನಿಮಾ ಸೆಟ್ಟೇರುವ ಸಾಧ್ಯತೆಗಳು ದಟ್ಟವಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟಿ20 ವಿಶ್ವಕಪ್​ನಲ್ಲಿ ಭಾರತ- ಪಾಕ್ ನಡುವೆ ಫೈಟ್; ಹೇಗಿದೆ ಮುಖಾಮುಖಿ ದಾಖಲೆ? – Kannada News

2026 ರ ಮಹಿಳಾ ಟಿ20 ವಿಶ್ವಕಪ್ (Women’s T20 World Cup 2026) ಜೂನ್ 12 ರಿಂದ ಆರಂಭವಾಗಲಿದೆ. ಇಂಗ್ಲೆಂಡ್​ನ ಆತಿಥ್ಯದಲ್ಲಿ ನಡೆಯುತ್ತಿರುವ 10ನೇ ಆವೃತ್ತಿಯ ಟಿ20 ವಿಶ್ವಕಪ್​ನ ಹೈವೋಲ್ಟೇಜ್ ಕದನ ಜೂನ್ 14 ರಂದು ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವೆ ನಡೆಯಲಿದೆ. ಟೂರ್ನಿಯಲ್ಲಿ ಈ ಎರಡು ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಮೊದಲ ಮುಖಾಮುಖಿ ಇದಾಗಿದೆ. ಅಂದರೆ, ಭಾರತ ಮತ್ತು ಪಾಕಿಸ್ತಾನ ತಂಡಗಳು 2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಪರಸ್ಪರ ವಿರುದ್ಧವಾಗಿ ಆಡುವ ಮೂಲಕ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿವೆ.

ಮುಖಾಮುಖಿ ದಾಖಲೆ

ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳ ಮುಖಾಮುಖಿಯಲ್ಲಿ ಭಾರತ ತಂಡ ಪ್ರಾಬಲ್ಯ ಸಾಧಿಸಿದೆ. ಆದಾಗ್ಯೂ ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು ಎಂದಿಗೂ ಟಿ20 ಸರಣಿಯನ್ನು ಆಡಿಲ್ಲ. ಆದರೆ ಈ ಎರಡೂ ತಂಡಗಳು ಐಸಿಸಿ ಟೂರ್ನಿಗಳು, ಏಷ್ಯಾಕಪ್ ಮತ್ತು ಏಷ್ಯನ್ ಗೇಮ್ಸ್ ಅಥವಾ ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಇಲ್ಲಿಯವರೆಗೆ, ಈ ಎರಡೂ ತಂಡಗಳು 16 ಪಂದ್ಯಗಳನ್ನು ಆಡಿದ್ದು, ಇವುಗಳಲ್ಲಿ ಭಾರತ 13 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ 3 ಪಂದ್ಯಗಳನ್ನು ಗೆದ್ದಿದೆ.

ಟಿ20 ವಿಶ್ವಕಪ್‌ನಲ್ಲಿ ಪ್ರದರ್ಶನ

ಇಲ್ಲಿಯವರೆಗೆ, ಟಿ20 ವಿಶ್ವಕಪ್‌ನಲ್ಲಿ ಈ ಎರಡೂ ತಂಡಗಳ ನಡುವೆ 8 ಪಂದ್ಯಗಳು ನಡೆದಿವೆ. ಈ ಪೈಕಿ 6 ಪಂದ್ಯಗಳಲ್ಲಿ ಭಾರತ, ಪಾಕಿಸ್ತಾನವನ್ನು ಸೋಲಿಸಿದೆ. ಪಾಕಿಸ್ತಾನ ಕೇವಲ ಎರಡು ಪಂದ್ಯಗಳನ್ನು ಗೆದ್ದಿದೆ. ಈಗ, ಈ ಎರಡೂ ತಂಡಗಳು ಒಂಬತ್ತನೇ ಬಾರಿಗೆ ಮುಖಾಮುಖಿಯಾಗಲಿವೆ. ಕೊನೆಯ ಬಾರಿಗೆ ಎರಡೂ ತಂಡಗಳು 2024 ರ ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತ, ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿತ್ತು.

Womens T20 World Cup 2026: ಮಹಿಳಾ ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾ ಪ್ರಕಟ

ವಿಶ್ವಕಪ್ ಇತಿಹಾಸದಲ್ಲಿ 2 ತಂಡಗಳ ಪ್ರಯಾಣ

ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡೂ ತಂಡಗಳು ವಿಭಿನ್ನ ಪ್ರದರ್ಶನಗಳನ್ನು ನೀಡಿವೆ. ಭಾರತ ಹಲವು ಬಾರಿ ನಾಕೌಟ್ ಹಂತವನ್ನು ತಲುಪಿದ್ದರೂ, ಪಾಕಿಸ್ತಾನ ಗುಂಪು ಹಂತವನ್ನು ಮೀರಿ ಮುನ್ನಡೆಯಲು ಹೆಣಗಾಡಿದೆ. ಭಾರತ ತಂಡವು 2020 ರಲ್ಲಿ ಪ್ರಶಸ್ತಿಗೆ ಹತ್ತಿರವಾಗಿದ್ದು, ರನ್ನರ್ ಅಪ್ ಸ್ಥಾನ ಪಡೆದಿತ್ತು. ಕಳೆದ ವಿಶ್ವಕಪ್‌ನಲ್ಲಿ ಎರಡೂ ತಂಡಗಳ ಪ್ರಯಾಣ ಗುಂಪು ಹಂತದಲ್ಲಿಯೇ ಕೊನೆಗೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಳೆ ಪ್ರಧಾನಿ ಮೋದಿ-ಸಿಎಂ ಡಿ.ಕೆ. ಶಿವಕುಮಾರ್ ಭೇಟಿ: ಕೇಂದ್ರ ಸಚಿವರ ಜತೆಗೂ ಮಾತುಕತೆಗೆ ಪ್ಲಾನ್ – Kannada News

ದೆಹಲಿ, ಜೂ.10: ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ನೀಡಿರುವ ಡಿ.ಕೆ. ಶಿವಕುಮಾರ್ ಅವರು ನಾಳೆ (ಜೂ.11) ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕೃತವಾಗಿ ಭೇಟಿ ಮಾಡಲಿದ್ದಾರೆ. ಪ್ರಧಾನಮಂತ್ರಿಯವರ ಭೇಟಿಗೆ ಅಧಿಕೃತ ಸಮಯ ಸಿಕ್ಕಿರುವುದನ್ನು ಖಚಿತಪಡಿಸಿರುವ ಸಿಎಂ, ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಹಲವು ಪ್ರಮುಖ ವಿಷಯಗಳನ್ನು ಹಂಚಿಕೊಂಡಿದ್ದಾರೆ. “ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ದೂರವಾಣಿ ಕರೆ ಮಾಡಿ ಅಭಿನಂದನೆಗಳನ್ನು ತಿಳಿಸಿದ್ದರು. ಜೊತೆಗೆ ರಾಜ್ಯದ ಅಭಿವೃದ್ಧಿಗೆ ಅಗತ್ಯ ಸಹಕಾರ ಕೊಡುವುದಾಗಿಯೂ ಭರವಸೆ ನೀಡಿದ್ದರು. ನಾಳೆ ಅವರ ಭೇಟಿಗೆ ಸಮಯ ನಿಗದಿಯಾಗಿದ್ದು, ಪ್ರಧಾನಿಯವರನ್ನು ಭೇಟಿಯಾಗಿ ರಾಜ್ಯದ ಪ್ರಮುಖ ನೀರಾವರಿ ಹಾಗೂ ಆರ್ಥಿಕ ಯೋಜನೆಗಳ ಕುರಿತು ಮಾತುಕತೆ ನಡೆಸಲಾಗುವುದು” ಎಂದು ಸಿಎಂ ತಿಳಿಸಿದ್ದಾರೆ. ನಾಳೆ ದೆಹಲಿಯಲ್ಲಿ ನಡೆಯಲಿರುವ ‘ನೀತಿ ಆಯೋಗ’ದ (NITI Aayog) ಸಭೆಯಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಇದರೊಂದಿಗೆ ದೆಹಲಿಯಲ್ಲೇ ಇರುವ ಕೆಲವು ಪ್ರಮುಖ ಕೇಂದ್ರ ಸಚಿವರನ್ನು ಭೇಟಿ ಮಾಡಲು ಸಹ ಸಿಎಂ ಸಮಯ ಕೋರಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ವೈದ್ಯರು ಹೇಳುವ ಈ ಸರಳ ಸಲಹೆಗಳನ್ನು ಪಾಲಿಸಿ – Kannada News

ದಿನದಿಂದ ದಿನಕ್ಕೆ ಬದಲಾಗುತ್ತಿರುವ ಹವಾಮಾನದಲ್ಲಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುವುದು ಸಾಮಾನ್ಯ. ಅವುಗಳಲ್ಲಿ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಹಾಗೂ ಮಲಬದ್ಧತೆ (Constipation) ಸಮಸ್ಯೆಗಳು ಕೂಡ ಒಂದು. ಸಾಮಾನ್ಯವಾಗಿ ಇಂತಹ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ. ಅದರಲ್ಲಿಯೂ ಉಷ್ಣತೆ ಹೆಚ್ಚಿದ್ದಾಗ ದೇಹದಲ್ಲಿ ನೀರಿನ ಕೊರತೆ ಉಂಟಾಗಿ ಮಲ ವಿಸರ್ಜನೆ ಕಷ್ಟಕರವಾಗಬಹುದು. ಇದರ ಪರಿಣಾಮವಾಗಿ ದೇಹದಲ್ಲಿ ದೌರ್ಬಲ್ಯ, ಅಸ್ವಸ್ಥತೆ ಮತ್ತು ದಣಿವು ಕಾಣಿಸಿಕೊಳ್ಳಬಹುದು. ತಜ್ಞರ ಪ್ರಕಾರ, ದೇಹವು ಹೆಚ್ಚು ಬೆವರುವವರು ಸಾಕಷ್ಟು ನೀರು ಕುಡಿಯದಿದ್ದರೆ ದೇಹವು ತನ್ನಲ್ಲಿರುವ ನೀರನ್ನೇ ಹೀರಿಕೊಳ್ಳುತ್ತದೆ. ಇದರಿಂದ ಮಲ ಗಟ್ಟಿಯಾಗುತ್ತದೆ ಮತ್ತು ಮಲ ವಿಸರ್ಜನೆ ವೇಳೆ ತೊಂದರೆ ಉಂಟಾಗುತ್ತದೆ. ಹಾಗಾದರೆ ಮಲಬದ್ಧತೆಯ ಲಕ್ಷಣಗಳು ಹೇಗಿರುತ್ತವೆ, ಈ ಸಮಸ್ಯೆ ತಡೆಗಟ್ಟಲು ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಲಬದ್ಧತೆಯ ಸಾಮಾನ್ಯ ಲಕ್ಷಣಗಳು:

  • ವಾರದಲ್ಲಿ ಮೂರು ಬಾರಿಗಿಂತ ಕಡಿಮೆ ಮಲ ವಿಸರ್ಜನೆ ಆಗುವುದು
  • ಮಲ ಗಟ್ಟಿಯಾಗಿ ಮತ್ತು ಒಣಗಿದಂತೆ ಕಾಣಿಸುವುದು
  • ಹೊಟ್ಟೆ ಉಬ್ಬರ ಮತ್ತು ಅಸ್ವಸ್ಥತೆ
  • ಮಲ ವಿಸರ್ಜನೆ ಸಮಯದಲ್ಲಿ ಹೆಚ್ಚು ಒತ್ತಡ ಹಾಕಬೇಕಾಗುವುದು
  • ಹೊಟ್ಟೆ ಸಂಪೂರ್ಣ ಖಾಲಿಯಾಗಿಲ್ಲ ಎಂಬ ಭಾವನೆ
  • ಆಸಿಡಿಟಿ, ಅಲಸ್ಯ ಮತ್ತು ಹಸಿವು ಕಡಿಮೆಯಾಗುವುದು

ಮಲಬದ್ಧತೆ ಹೆಚ್ಚಾಗಲು ಕಾರಣಗಳೇನು?

ನೀರಿನ ಕೊರತೆ: ಸಾಕಷ್ಟು ನೀರು ಕುಡಿಯದಿದ್ದರೆ ದೇಹದಲ್ಲಿ ಡೀಹೈಡ್ರೇಶನ್ ಉಂಟಾಗುತ್ತದೆ. ಇದು ಮಲಬದ್ಧತೆಗೆ ಪ್ರಮುಖ ಕಾರಣವಾಗಿದೆ.

ಫೈಬರ್ ಆಹಾರದ ಕೊರತೆ: ಹಣ್ಣು, ತರಕಾರಿ ಮತ್ತು ಪೌಷ್ಟಿಕ ಆಹಾರ ಕಡಿಮೆ ಸೇವಿಸಿದರೆ ಜೀರ್ಣಕ್ರಿಯೆ ನಿಧಾನವಾಗಬಹುದು.

ಜಂಕ್ ಫುಡ್ ಸೇವನೆ: ಹೆಚ್ಚು ಎಣ್ಣೆ, ಮಸಾಲೆ ಮತ್ತು ಪ್ರಾಸೆಸ್ಡ್ ಆಹಾರ ಸೇವಿಸುವುದರಿಂದ ಹೊಟ್ಟೆ ಸಮಸ್ಯೆಗಳು ಹೆಚ್ಚಾಗಬಹುದು.

ವ್ಯಾಯಾಮದ ಕೊರತೆ: ತೀವ್ರ ಬಿಸಿಲಿನ ಕಾರಣದಿಂದ ಅನೇಕರು ವ್ಯಾಯಾಮ ಅಥವಾ ನಡೆಯುವ ಅಭ್ಯಾಸವನ್ನು ಕಡಿಮೆ ಮಾಡುತ್ತಾರೆ. ಇದರಿಂದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಕಂಡುಬರುವ ಮಲಬದ್ಧತೆಗೆ ಇಲ್ಲಿದೆ ಪರಿಹಾರ

ಮಲಬದ್ಧತೆಯಿಂದ ಮುಕ್ತಿ ಪಡೆಯಲು ಏನು ಮಾಡಬೇಕು?

  • ಪ್ರತಿದಿನ ಕನಿಷ್ಠ 3 ರಿಂದ 4 ಲೀಟರ್ ನೀರು ಕುಡಿಯಿರಿ
  • ಕಲ್ಲಂಗಡಿ, ಸೌತೆಕಾಯಿ, ಕಿತ್ತಳೆ ಹಣ್ಣು, ಮಜ್ಜಿಗೆ ಮುಂತಾದ ನೀರಿನ ಅಂಶ ಹೆಚ್ಚಿರುವ ಆಹಾರ ಸೇವಿಸಿ
  • ಹಸಿರು ತರಕಾರಿ, ಧಾನ್ಯ ಮತ್ತು ಫೈಬರ್ ಅಧಿಕವಾಗಿರುವ ಆಹಾರವನ್ನು ಡೈಟ್‌ನಲ್ಲಿ ಸೇರಿಸಿ
  • ಜಂಕ್ ಫುಡ್, ಹೆಚ್ಚು ಕಾಫಿ ಮತ್ತು ಟೀ ಸೇವನೆಯನ್ನು ಕಡಿಮೆ ಮಾಡಿ
  • ಪ್ರತಿದಿನ ಒಂದೇ ಸಮಯಕ್ಕೆ ಊಟ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ
  • ನಿಯಮಿತ ವ್ಯಾಯಾಮ ಮತ್ತು ಚೆನ್ನಾಗಿ ನಿದ್ರೆ ಮಾಡಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಂಪನಗೌಡ ಬಾದರ್ಲಿಗೆ ಸಚಿವ ಸ್ಥಾನ ಸಿಗಲಿ ಎಂದು ಶಕ್ತಿ ದೇವತೆಗೆ ವಿಶೇಷ ಪೂಜೆ, ಉರುಳು ಸೇವೆ – Kannada News

ರಾಯಚೂರು, ಜೂನ್ 10): ಡಿಕೆ ಶಿವಕುಮಾರ್ ಸರ್ಕಾರದ ಸಂಪುಟ ವಿಸ್ತರಣೆ ಆಗಬೇಕಿದ್ದು, ಬಾಕಿ ಇರುವ 20 ಸಚಿವ ಸ್ಥಾನಗಳಿಗೆ ಬರೋಬ್ಬರಿ 40 ಆಕಾಂಕ್ಷಿಗಳು ಲಾಬಿ ಮಾಡುತ್ತಿದ್ದಾರೆ. ಕೆಲವರು ದೆಹಲಿಯಲ್ಲಿ ಮಂತ್ರಿ ಸ್ಥಾನಕ್ಕೆ ತೀವ್ರ ಕಸರತ್ತು ನಡೆಸಿದ್ದಾರೆ. ಇನ್ನೊಂದೆಡೆ ಅವರ ಬೆಂಬಲಿಗರು ಕ್ಷೇತ್ರದಲ್ಲಿ ಪ್ರತಿಭಟನೆಗಳಿದಿದ್ದಾರೆ. ಇದಕ್ಕೆ ಪೂರಕವೆಂಬಂತೆ ರಾಯಚೂರು ಜಿಲ್ಲೆ ಸಿಂಧನೂರು ಕ್ಷೇತ್ರದ ಹಿರಿಯ ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಅವರ ಬೆಂಬಲಿಗರು ಆಗ್ರಹಿಸಿದ್ದಾರೆ. ಇನ್ನು  ಹಂಪನಗೌಡ ಬಾದರ್ಲಿಗೆ ಮತ್ರಿ ಸ್ಥಾನ ಕರುಣಿಸಲಿ ಎಂದು ಅವರ ಅಭಿಮಾನಿಗಳು, ಗಾಳಿ ದುರ್ಗಮ್ಮ ದೇವಸ್ಥಾನದವರೆಗೆ ಪಾದಯಾತ್ರೆ ನಡೆಸಿದ್ದು, ತಮ್ಮ ನಾಯಕನಿಗೆ ಸಚಿವ ಸ್ಥಾನ ಸಿಗಲಿ ಎಂದು ಶಕ್ತಿ ದೇವತೆ ಗಾಳಿ ದುರ್ಗಮ್ಮಗೆ 101 ತೆಂಗಿನಕಾಯಿ ಒಡೆದ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದಾರೆ. ಇನ್ನು ಈ ಬಗ್ಗೆ ನಮ್ಮ ರಾಯಚೂರು ಜಿಲ್ಲಾ ಪ್ರತಿನಿಧಿ ಭೀಮೇಶ್ ನೀಡಿರೋ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

Source link

ಇಷ್ಟು ದೂರ ಬರುತ್ತೇನೆಂದು ಕನಸಲ್ಲೂ ಅಂದುಕೊಂಡಿರಲಿಲ್ಲ; ಎನ್​ಡಿಎ ಸಭೆಯಲ್ಲಿ ಭಾವುಕರಾದ ಪ್ರಧಾನಿ ಮೋದಿ – Kannada News

ನವದೆಹಲಿ, ಜೂನ್ 10: ಅತಿ ದೀರ್ಘಾವಧಿಗೆ ಪ್ರಧಾನಿಯಾಗಿ ಅಧಿಕಾರ ನಡೆಸಿದ ಪ್ರಧಾನಮಂತ್ರಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನರೇಂದ್ರ ಮೋದಿ (PM Narendra Modi) ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಸಂದರ್ಭವನ್ನು ಆಚರಿಸಲು ದೆಹಲಿಯ ಭಾರತ್ ಮಂಟಪದಲ್ಲಿ ಎನ್​ಡಿಎ ನಾಯಕರ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ಸಮಾವೇಶದಲ್ಲಿ ಎನ್​ಡಿಎ ಮೈತ್ರಿಕೂಟದ ಎಲ್ಲಾ ನಾಯಕರಲ್ಲದೆ, ಎನ್‌ಡಿಎ ಆಡಳಿತವಿರುವ ಎಲ್ಲಾ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಕೂಡ ಉಪಸ್ಥಿತರಿದ್ದರು. ಈ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಾನು ಮುಂದೊಂದು ದಿನ ಈ ದಾಖಲೆ ನಿರ್ಮಿಸುತ್ತೇನೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. 12 ವರ್ಷ ಭಾರತಮಾತೆಯ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ದೇವರು ನನಗೆ ಕಲ್ಪಿಸಿಕೊಟ್ಟ ಅವಕಾಶ ಎಂದಿದ್ದಾರೆ.

ಎನ್‌ಡಿಎ ನಾಯಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಜನತೆ ಈಗ ರಾಜಕೀಯ ಸ್ಥಿರತೆಯ ಪ್ರಾಮುಖ್ಯತೆಯನ್ನು ಮತ್ತು ಸ್ಥಿರ ಸರ್ಕಾರದ ನಿರ್ಣಾಯಕ ನಿರ್ಧಾರಗಳ ಮಹತ್ವವನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಹೇಳಿದರು. ‘ವಿಕಸಿತ ಭಾರತ’ದ ಕನಸು ಯಾವುದೇ ಒಬ್ಬ ವ್ಯಕ್ತಿ ಅಥವಾ ಪಕ್ಷಕ್ಕೆ ಸೇರಿದ್ದಲ್ಲ, ಬದಲಿಗೆ ಅದು ದೇಶದ ಪ್ರತಿಯೊಬ್ಬ ನಾಗರಿಕನ ಸಂಕಲ್ಪವಾಗಿದೆ. ನನಗೆ ಜನರೇ ಜನಾರ್ದನ” ಎಂದರು.

“ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಸ್ಥಿರತೆಯ ಪ್ರಾಮುಖ್ಯತೆಯನ್ನು ದೇಶದ ಜನತೆ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಅವರ ಪ್ರಬುದ್ಧತೆಯಿಂದಾಗಿಯೇ ನನಗೆ ಇಷ್ಟು ಸುದೀರ್ಘ ಕಾಲ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ: PM Modi Speech Live: ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ; ಲೈವ್​​ ವಿಡಿಯೋ ಇಲ್ಲಿದೆ ನೋಡಿ

ಪ್ರಧಾನಿ ಮೋದಿ ಅವರು ಬುಧವಾರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಮುರಿದರು. 1952ರ ಸಾರ್ವತ್ರಿಕ ಚುನಾವಣೆಯ ನಂತರ ಚುನಾಯಿತ ಪ್ರಧಾನಿಯಾಗಿ ನೆಹರು ಅವರು ಹೊಂದಿದ್ದ 4,398 ದಿನಗಳ ನಿರಂತರ ಅಧಿಕಾರಾವಧಿಯ ದಾಖಲೆಯನ್ನು ಮೋದಿ ಹಿಂದಿಕ್ಕಿದ್ದಾರೆ. ನೆಹರು ಅವರ 1947ರಿಂದ 1952ರವರೆಗಿನ ಅವಧಿಯು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿದ್ದ ಅವಧಿಯಾಗಿತ್ತು. ಏಕೆಂದರೆ 1952ರವರೆಗೆ ದೇಶದಲ್ಲಿ ಚುನಾವಣೆಗಳು ನಡೆದಿರಲಿಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಒಟ್ಟು 14 ವರ್ಷಗಳಿಗಿಂತ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆಯಾದರೂ ಅವರ ಅಧಿಕಾರಾವಧಿಯು ನಿರಂತರವಾಗಿರಲಿಲ್ಲ. ಇದೀಗ ಸಚಿವ ಸಂಪುಟದಲ್ಲಿ ಸತತ 4,399 ದಿನಗಳನ್ನು ಪೂರೈಸುವ ಮೂಲಕ ಮೋದಿ ಭಾರತದ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಅವಧಿಗೆ ಸತತವಾಗಿ ಚುನಾಯಿತರಾದ ಪ್ರಧಾನ ಮಂತ್ರಿಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಎನ್‌ಡಿಎ ನಾಯಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “2014ರಲ್ಲಿ ಭಾರತವು ತನಗೆ ಅಗತ್ಯವಿದ್ದ ಬಹುಪಾಲು ಮೊಬೈಲ್ ಫೋನ್‌ಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಇಂದು, ಭಾರತವು ದೇಶೀಯವಾಗಿಯೇ 33 ಕೋಟಿಗೂ (330 ಮಿಲಿಯನ್) ಹೆಚ್ಚು ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ತಯಾರಿಸುತ್ತಿದೆ. 2014ರಲ್ಲಿ ದೇಶದ ಸೌರಶಕ್ತಿ ಸಾಮರ್ಥ್ಯವು ಕೇವಲ 2.5 ಗಿಗಾವ್ಯಾಟ್ ಆಗಿತ್ತು. ಇಂದು ಅದು 150 ಗಿಗಾವ್ಯಾಟ್‌ಗಳನ್ನು ಮೀರಿದೆ. ಎಥೆನಾಲ್ ಮಿಶ್ರಣವು 2014ರಲ್ಲಿ ಕೇವಲ 1.5%ರಷ್ಟಿತ್ತು, ಆದರೆ ಇಂದು ಅದು 20% ತಲುಪಿದೆ. 2014ರಲ್ಲಿ ದೇಶದಲ್ಲಿ ಒಂದೇ ಒಂದು ಸೆಮಿಕಂಡಕ್ಟರ್ ಘಟಕ ಇರಲಿಲ್ಲ. ಇಂದು ನಿರ್ಮಾಣ ಹಂತದಲ್ಲಿರುವ 10ಕ್ಕೂ ಹೆಚ್ಚು ಸೆಮಿಕಂಡಕ್ಟರ್ ಘಟಕಗಳು ಭಾರತವನ್ನು ಆಧುನಿಕತೆಯತ್ತ ಮುನ್ನಡೆಸುತ್ತಿವೆ” ಎಂದು ವಿವರಿಸಿದರು.

“ನಾವು ದೇಶದ ಅಗತ್ಯತೆಗಳನ್ನೇ ನಮ್ಮ ನೀತಿಗಳು ಮತ್ತು ನಿರ್ಧಾರಗಳ ಅಡಿಪಾಯವನ್ನಾಗಿ ಮಾಡಿಕೊಂಡೆವು. ಹೊಸ ಉಪಕ್ರಮಗಳನ್ನು ಕೈಗೊಳ್ಳಲು ಹೊಸ ಆಲೋಚನಾ ಶೈಲಿಯನ್ನು ಅಳವಡಿಸಿಕೊಂಡೆವು. ಯುವಕರಿಗಾಗಿ ನಾವು ಪ್ರತ್ಯೇಕ ಕೌಶಲ್ಯಾಭಿವೃದ್ಧಿ ಸಚಿವಾಲಯವನ್ನು ಸ್ಥಾಪಿಸಿದೆವು. ಸಹಕಾರ ವಲಯವನ್ನು ಬಲಪಡಿಸಲು ಪ್ರತ್ಯೇಕ ಸಹಕಾರ ಸಚಿವಾಲಯವನ್ನು ರಚಿಸಲಾಯಿತು ಮತ್ತು ನಮ್ಮ ಮೀನುಗಾರರಿಗಾಗಿ ಮೀಸಲಾದ ಮೀನುಗಾರಿಕೆ ಸಚಿವಾಲಯವನ್ನು ಸ್ಥಾಪಿಸಲಾಯಿತು. ಅಭಿವೃದ್ಧಿಯ ಈ ಓಟದಲ್ಲಿ ಯಾರೂ ಹಿಂದೆ ಉಳಿಯಬಾರದು ಎಂಬುದು ನಮ್ಮ ಸ್ಪಷ್ಟ ಗುರಿಯಾಗಿತ್ತು. ನಾವು ದಿವ್ಯಾಂಗರಿಗಾಗಿ (ವಿಕಲಚೇತನರು) ಕಾನೂನುಗಳನ್ನು ರೂಪಿಸಿದೆವು. ಬುಡಕಟ್ಟು ಜನಾಂಗದವರಿಗಾಗಿ ‘ಜನ್ಮನ್’ನಂತಹ ಯೋಜನೆಗಳನ್ನು ಪ್ರಾರಂಭಿಸಿದೆವು” ಎಂದು ತಮ್ಮ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದರು.

ಇದನ್ನೂ ಓದಿ: ನೆಹರು ದಾಖಲೆ ಮುರಿದ ಪ್ರಧಾನಿ ಮೋದಿಗೆ ಸಂಪುಟ ಸಚಿವರಿಂದ ಎದ್ದು ನಿಂತು ಚಪ್ಪಾಳೆಯ ಗೌರವ

“ಇಂದು, ಈ ಸುದೀರ್ಘ ಪಯಣದ ಭಾಗವಾಗಿರುವ ಎಲ್ಲಾ ಸಹೋದ್ಯೋಗಿಗಳಿಗೆ ನಾನು ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಸಂದರ್ಭದಲ್ಲಿ ಎನ್‌ಡಿಎ ಕುಟುಂಬದ ಸದಸ್ಯರು ಅಭಿನಂದನಾ ನಿರ್ಣಯವನ್ನು ಮಂಡಿಸಿದ್ದಾರೆ. ಇದು ನಿಮ್ಮ ಪ್ರೀತಿ ಮತ್ತು ಉದಾರತೆಯನ್ನು ಪ್ರತಿಬಿಂಬಿಸುತ್ತದೆ. ಆದರೆ ನಾನು ಈ ಪಯಣವನ್ನು ನನ್ನ ವೈಯಕ್ತಿಕ ಸಾಧನೆ ಎಂದು ಪರಿಗಣಿಸುವುದಿಲ್ಲ. ಇದು ಪ್ರತಿಯೊಂದು ವಿಷಯದಲ್ಲೂ ನಮ್ಮ ಸಾಮೂಹಿಕ ಸಾಧನೆಯಾಗಿದೆ. ಎನ್‌ಡಿಎಯ ಪ್ರತಿಯೊಂದು ಪಾಲುದಾರ ಪಕ್ಷದ ಜಂಟಿ ಯಶಸ್ಸಾಗಿದೆ. ಆದ್ದರಿಂದ, ನಾನು ಈ ನಿರ್ಣಯವನ್ನು ನಿಮಗೆ ಮತ್ತು ಬಿಜೆಪಿ ಸೇರಿದಂತೆ ನಮ್ಮ ಎನ್‌ಡಿಎ ಕುಟುಂಬದ ಪ್ರತಿಯೊಬ್ಬ ಕಾರ್ಯಕರ್ತನಿಗೆ ಅರ್ಪಿಸುತ್ತೇನೆ. ಭಾರತದ ಜನರ ಸಹಜ ಬುದ್ಧಿವಂತಿಕೆ ಯಾವಾಗಲೂ ಅಪಾರವಾದದ್ದು.” ಎಂದು ಮೋದಿ ಹೇಳಿದರು.

“ಭಾರತ ಮಾತೆಗೆ ಇಷ್ಟು ಸುದೀರ್ಘ ಕಾಲ ಸೇವೆ ಸಲ್ಲಿಸುವುದು, ಆಕೆಯ ಸೇವೆ ಮಾಡುವ ಸೌಭಾಗ್ಯ ಸಿಗುವುದು ದೇವರ ವಿಶೇಷ ಕೃಪೆಯಿಂದ ಮಾತ್ರ ಸಾಧ್ಯ. ಮತ್ತು ನನಗೆ, ಜನರೇ ದೇವರ ಸ್ವರೂಪ. ಅದಕ್ಕಾಗಿಯೇ ನಾನು ಈ ಸೇವೆಯನ್ನು ಯಾವಾಗಲೂ ಒಂದು ಆಧ್ಯಾತ್ಮಿಕ ಸಾಧನೆ ಅಥವಾ ತಪಸ್ಸು ಎಂದು ಭಾವಿಸಿದ್ದೇನೆ. ಈ ಆಧ್ಯಾತ್ಮಿಕ ಸಾಧನೆ ಎಂದಿಗೂ ಏಕಾಂಗಿಯಾಗಿರಲಿಲ್ಲ. ಇದೊಂದು ಸಾಮೂಹಿಕ ‘ಯಜ್ಞ’ವಾಗಿದ್ದು, ಇದರಲ್ಲಿ ನೀವೆಲ್ಲರೂ ಮತ್ತು ಇತರ ಅನೇಕ ಸಹೋದ್ಯೋಗಿಗಳು ಕರ್ತವ್ಯ ಪ್ರಜ್ಞೆಯಿಂದ ತಮ್ಮ ಸೇವೆಯನ್ನು ಕೊಡುಗೆಯಾಗಿ ನೀಡಿದ್ದೀರಿ” ಎಂದು ಪ್ರಧಾನಿ ಮೋದಿ ಭಾವುಕರಾದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದು ವರ್ಷದಲ್ಲಿ 13 ಸಿನಿಮಾ: ಹಳೆಯ ದಿನಗಳ ನೆನೆದ ಶ್ರುತಿ

ನಟಿ ಶ್ರುತಿ (Shruthi) ಕನ್ನಡ ಚಿತ್ರರಂಗದ ಹಿರಿಯ ನಟಿ. ಹಾಸ್ಯ, ಗಂಭೀರ, ಎಮೋಷನಲ್, ಗ್ರಾಮೀಣ, ಪೌರಾಣಿಕ, ಜನಪದ, ಕಲಾತ್ಮಕ ಸಿನಿಮಾ ಹೀಗೆ ಹಲವು ರೀತಿಯ ಸಿನಿಮಾಗಳು, ಪಾತ್ರಗಳಲ್ಲಿ ನಟಿಸಿ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದಾರೆ. ಇದೀಗ ಶ್ರುತಿ ಅವರ 175ನೇ ಸಿನಿಮಾ ‘ಮದರ್’ ಸೆಟ್ಟೇರಿದೆ. ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೆ ನೆರವೇರಿದ್ದು, ನಟಿ ಶ್ರುತಿ ಅವರು ಮುಹೂರ್ತದ ಸಂದರ್ಭದಲ್ಲಿ ಮಾಧ್ಯಮದವರೊಟ್ಟಿಗೆ ಮಾತನಾಡುತ್ತಾ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

Viral: ಆಟೋ ಹಿಂಬದಿ ಬರೆದ ಸಾಲಿನಲ್ಲಿ ತಂದೆ ತಾಯಿ ಮಹತ್ವ ಸಾರಿದ ಆಟೋ ಡ್ರೈವರ್ – Kannada News

ಆಟೋ ಹಿಂಬದಿ ಬರೆದ ಸಾಲುImage Credit source: Instagram

ಆಟೋ (auto) ಹಾಗೂ ಬೈಕ್ ಹಿಂಬದಿ ಮನಮುಟ್ಟುವ ಸಂದೇಶಗಳು, ಕೈ ಕೊಟ್ಟ ಪ್ರೇಯಸಿಯನ್ನು ಹಾಗೂ ತಂದೆ ತಾಯಿಯನ್ನು ನೆನಪಿಸುವಂತಹ ಸಾಲುಗಳು ಕಣ್ಣಿಗೆ ಕಾಣಿಸುತ್ತದೆ. ಇನ್ನು ಕೆಲ ಸಾಲುಗಳನ್ನು ಕಂಡಾಗ ತುಟಿಯಂಚಿನಲ್ಲಿ ನಗುವಿಗೂ ಕಾರಣವಾಗುತ್ತದೆ. ಇದೀಗ ಇಂತಹದ್ದೇ ಸಾಲೊಂದು ವೈರಲ್ ಆಗಿದ್ದು, ಇದು ಪ್ರಪಂಚದಲ್ಲಿ ತಂದೆ-ತಾಯಿಯ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎಂಬುದನ್ನು ನೆನಪಿಸುವಂತಿದೆ. ಹೌದು, ತನ್ನ ಜೀವನದ ಹೀರೋ ತಂದೆ ಹಾಗೂ ತಾಯಿಯೇ ದೇವರು ಎನ್ನುವ ಅರ್ಥ ನೀಡುವ ಸಾಲು ನೆಟ್ಟಿಗರ ಗಮನ ಸೆಳೆಯುತ್ತಿದೆ.

ಜೀವನ್ ಶೆಟ್ಟಿಗಾರ್ (Jeevan Shettigar) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಟೋ ಹಿಂಬದಿ ಬರೆಯಲಾದ ಸಾಲುಗಳನ್ನು ಹಂಚಿಕೊಂಡಿದ್ದಾರೆ. ಆಟೋದಲ್ಲಿ, ಎಷ್ಟೇ ಸಿನಿಮಾ ನೋಡಿದರು ತಂದೆ ತರ ಹೀರೋ ಸಿಗಲ್ಲ ಎಷ್ಟೇ ದೇವಸ್ಥಾನ ಸುತ್ತಿದರು ತಾಯಿ ತರ ದೇವರು ಸಿಗಲ್ಲ ಎಂದು ಬರೆದಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಆಟೋ ಬಾಡಿಗೆ 150ರೂ., ಖಾತೆಗೆ ಬಂದಿದ್ದು 15 ಸಾವಿರ; ಪ್ರಯಾಣಿಕನ ಹಣವನ್ನು ಮರಳಿಸಿ ಮಾದರಿಯಾದ ಚಾಲಕ

ಈ ವಿಡಿಯೋ ಹದಿನೇಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಜವಾದ ಸಾಲುಗಳು ಎಂದಿದ್ದಾರೆ. ಮತ್ತೊಬ್ಬರು, ಹೃದಯಕ್ಕೆ ಹತ್ತಿರವಾಗುವ ಸಾಲುಗಳು ಎಂದು ಹೇಳಿದ್ದಾರೆ. ಇನ್ನೊಬ್ಬರು, ಎಲ್ಲರ ಅಪ್ಪ ಹೀರೋ ಆಗಿರಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉಜ್ಜಿನಿಯಲ್ಲಿ ನೈಜ ದೃಶ್ಯಗಳನ್ನು ಸೆರೆ ಹಿಡಿದ ‘ಊರಬ್ಬ’ ಸಿನಿಮಾ; ಟ್ರೇಲರ್ ನೋಡಿ – Kannada News

ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇರುವ ‘ಊರಬ್ಬ’ (Urabba) ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಮಾಗಡಿ ತಾಲೂಕಿನ ಸುಪ್ರಸಿದ್ದ ಉಜ್ಜಿನಿ ಚೌಡೇಶ್ವರಿ ಜಾತ್ರೆ ಮತ್ತು ಅದರ ಹಿನ್ನೆಲೆಯಲ್ಲಿ ನಡೆಯುವ ಕಥೆ ಇಟ್ಟುಕೊಂಡು ನಿರ್ದೇಶಕ ಲಕ್ಕಿ ಶಂಕರ್ ಅವರು ಈ ಸಿನಿಮಾ ಮಾಡಿದ್ದಾರೆ. ಒನ್ಸ್ ಮೋರ್ ಕೌರವ ಖ್ಯಾತಿಯ ನರೇಶ್ ಗೌಡ, ತನಿಷಾ ಕುಪ್ಪಂಡ (Tanisha Kuppanda), ಸಿದ್ದು ಮೂಲಿಮನಿ, ಪಾಯಲ್ ಚಂಗಪ್ಪ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕುಣಿಗಲ್ ಶಾಸಕ ರಂಗನಾಥ್ ಅವರು ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದರು.

ವಿಶೇಷ ಏನೆಂದರೆ ಉಜ್ಜನಿ ಜಾತ್ರೆಯ ನೈಜ ದೃಶ್ಯಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತದೆ. ಎಂ.ಡಿ. ಶ್ರೀಧರ್, ಹೆಚ್. ವಾಸು, ಎ.ವಿ. ಕೃಷ್ಣಕುಮಾರ್, ಬಾಹುಬಲಿ, ಈಶ್ವರ್ ಹೀಗೆ ಐವರು ಸೇರಿ ಎಂಟು ಕ್ಯಾಮೆರಾ ಬಳಸಿ ಜಾತ್ರೆ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ನಿರ್ದೇಶಕ ಲಕ್ಕಿ ಶಂಕರ್ ಅವರು ಮಾಹಿತಿ ನೀಡಿದರು.

‘ಊರಬ್ಬ’ ಸಿನಿಮಾದ ಟ್ರೇಲರ್:

‘ಇದು ನಾನು ಮಾಡಿದ್ದಲ್ಲ, ಆ ಚೌಡೇಶ್ವರಿಯೇ ಮಾಡಿಸಿದ್ದು. ಆಕೆಯ ಶಕ್ತಿಯನ್ನು ನಂಬಿ ಈ ಸಿನಿಮಾ ಮಾಡಿದ್ದೇನೆ. ಹಿಂದಿನಿಂದ ಕಂಟೆಂಟ್ ಬೇಸ್ ಸಿನಿಮಾಗಳನ್ನೇ ಮಾಡಿಕೊಂಡು ಬಂದಿದ್ದೇನೆ. ಏನಾದರೂ ಭಿನ್ನವಾಗಿ ಮಾಡೋಣ ಎಂದಾಗ ಈ ಕಾನ್ಸೆಪ್ಟ್ ಹೊಳೆಯಿತು. ಶೂಟಿಂಗ್ ಮಾಡುವಾಗ ಊರ ಜನರ ಸಹಕಾರ ತುಂಬಾ ಇತ್ತು. ಈ ಥರದ ಪ್ರಾಜೆಕ್ಟ್ ಮಾಡಲು ನಿರ್ಮಾಪಕ ನರೇಶ್ ಗೌಡ ಅವರು ಸಾಥ್ ನೀಡಿದರು’ ಎಂದು ಲಕ್ಕಿ ಶಂಕರ್ ಹೇಳಿದರು.

Urabba Kannada Movie Team

‘ಉಗಾದಿ ಹಬ್ಬದ 15 ದಿನಗಳ ನಂತರ ಈ ಜಾತ್ರೆ ಆರಂಭ ಆಗುತ್ತೆ. ಡೈಲಾಗ್ ಬರೆದ ವಾಸು, ಶ್ರೀಧರ್ ಅವರೇ ನಿಜವಾದ ಡೈರೆಕ್ಟರ್. ಅವರ ಸಲಹೆ ತಗೊಂಡು ಇಡೀ ಜಾತ್ರೆಯನ್ನು ಲೈವ್ ಆಗಿ ಶೂಟ್ ಮಾಡಿದ್ದೇವೆ. ಈ ಪ್ರಯತ್ನ ಭಾರತದಲ್ಲೇ ಮೊದಲು. ಸಾವಿರಾರು ವರ್ಷಗಳ ಹಿಂದೆ ನಡೆದ ಇತಿಹಾಸವನ್ನು ತಿಳಿದುಕೊಂಡು ಸಿನಿಮಾ ಮಾಡಿದ್ದೇನೆ. ಸೆನ್ಸಾರ್​ನಲ್ಲಿ ಸ್ವಲ್ಪ ತೊಂದರೆ ಆದರೂ, ಸರಿ ಮಾಡಿಕೊಂಡೆವು ’ ಎಂದಿದ್ದಾರೆ ಲಕ್ಕಿ ಶಂಕರ್.

ಇದನ್ನೂ ಓದಿ: ತನಿಷಾ ಕುಪ್ಪಂಡ ಜೊತೆ ಅಸಭ್ಯವಾಗಿ ವರ್ತಿಸಿದ ಫೋಟೋಗ್ರಾಫರ್; ನಟಿಯ ನೇರ ಕ್ಲಾಸ್

ನಿರ್ಮಾಪಕ ನರೇಶ್ ಗೌಡ ಕೂಡ ಈ ವೇಳೆ ಮಾತನಾಡಿದರು. ‘ಈ ಸಿನಿಮಾ ಆಗಲು ಮುಖ್ಯ ಕಾರಣ ಲಕ್ಕಿ ಶಂಕರ್. ನಾನು ಸಿನಿಮಾನೇ ಮಾಡಬಾರದು ಎಂದುಕೊಂಡಿದ್ದೆ, ಈಗ ಮಾಡಿದ್ದೇನೆ. ಮಂಗಳವಾರ ಚೌಡೇಶ್ವರಿ ದೇವಿಯ ವಾರ. ಚಿತ್ರದ ಎಲ್ಲ ಕೆಲಸಗಳು ಇದೇ ದಿನ ಆಗುತ್ತಿವೆ. ಈ ಸಿನಿಮಾದಲ್ಲಿ 30ರಿಂದ 40 ಜನ‌ ಕಲಾವಿದರು ನಟನೆ ಮಾಡಿದ್ದಾರೆ. ನಾನೂ ಒಂದು ಪಾತ್ರ ಮಾಡಿದ್ದೇನೆ. ಬಹಳ ಜನ ತಂತ್ರಜ್ಞರು ಕೈಜೋಡಿಸಿದ್ದಾರೆ’ ಎಂದು ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Chanakya Niti: ಚಾಣಕ್ಯರ ಈ ಮಾತುಗಳನ್ನು ಅನುಸರಿಸಿದವರು ಜೀವನದಲ್ಲಿ ಖಂಡಿತವಾಗಿಯೂ ಯಶಸ್ಸು ಕಾಣುತ್ತಾರಂತೆ – Kannada News

ಜೀವನದಲ್ಲಿ ಯಶಸ್ಸನ್ನು (success) ಸಾಧಿಸುವ ಬಯಕೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಆದರೆ ಇದನ್ನು ಸಾಧಿಸುವುದೆಂದರೆ ಅಷ್ಟೇನೂ ಸುಲಭದ ಕೆಲಸವಲ್ಲ. ಯಶಸ್ಸಿನ ಪ್ರತಿಯೊಂದು ಮೆಟ್ಟಿಲು ಕಷ್ಟಕರವೆನಿಸುತ್ತದೆ. ಯಶಸ್ಸನ್ನು ಸಾಧಿಸಲು ಕಠಿಣ ಪರಿಶ್ರಮ, ಆತ್ಮವಿಶ್ವಾಸ, ದೃಢ ನಿರ್ಧಾರ ಎಲ್ಲವೂ ಬೇಕಾಗುತ್ತದೆ.  ಇದರ ಜೊತೆಗೆ ಆಚಾರ್ಯ ಚಾಣಕ್ಯರ ಈ ಕೆಲವೊಂದು ಮಾತುಗಳನ್ನು ಪಾಲಿಸುವ ಮೂಲಕ ಯಶಸ್ಸಿನ ಹಾದಿಯಲ್ಲಿ ಸಾಗಬಹುದು. ಚಾಣಕ್ಯರು ಜೀವನದಲ್ಲಿ ಯಶಸ್ಸನ್ನು ಗಳಿಸಲು ಬೇಕಾಗಿರುವಂತಹ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಆ ಸಲಹೆಗಳನ್ನು ತಪ್ಪದೇ ಅನುಸರಿದರೆ ನೀವು ಸಹ ಜೀವನದಲ್ಲಿ ಸಕ್ಸಕ್‌ ಕಾಣ್ತೀರಿ.

ಚಾಣಕ್ಯರು ತಿಳಿಸಿರುವ ಯಶಸ್ಸಿನ ಮೂಲ ರಹಸ್ಯಗಳಿವು:

ಬಲವಾದ ಉದ್ದೇಶ ಅತ್ಯಗತ್ಯ: ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ, ಯಾವುದೇ ಕೆಲಸವನ್ನು ಸಾಧಿಸಲು ವ್ಯಕ್ತಿಯು ಬಲವಾದ ದೃಢಸಂಕಲ್ಪವನ್ನು ಹೊಂದಿರಬೇಕು ಎಂದು ಹೇಳುತ್ತಾರೆ. ಬಲವಾದ ಉದ್ದೇಶವನ್ನು ಹೊಂದಿರುವ ವ್ಯಕ್ತಿ ಬೇರೆ ವಿಚಾರಗಳ ಬಗ್ಗೆ ಯೋಚಿಸುವುದಿಲ್ಲ ಬದಲಾಗಿ ಆತನ ಗಮನವು ಗುರಿಯ ಕಡೆಗೆ ಇರುತ್ತದೆ. ಇದು ಆತನನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ.

ವೈಫಲ್ಯಕ್ಕೆ ಹೆದರಬೇಡಿ: ಅನೇಕ ಜನರು ವೈಫಲ್ಯಕ್ಕೆ ಹೆದರಿ ಬಿಟ್ಟುಬಿಡುತ್ತಾರೆ. ಆಚಾರ್ಯ ಚಾಣಕ್ಯರು  ವೈಫಲ್ಯಗಳಿಗೆ ಹೆದರಬಾರದು, ಮರಳಿ ಪ್ರಯತ್ನವನ್ನು ಮಾಡುತ್ತಲೇ ಇರಬೇಕು. ಈ ರೀತಿ ಮರಳಿ ಮರಳಿ ಪ್ರಯತ್ನವನ್ನು ಮಾಡಿದರೆ ಖಂಡಿತವಾಗಿ ಯಶಸ್ಸನ್ನು ಸಾಧಿಸಬಹುದು ಎನ್ನುತ್ತಾರೆ.

ರಹಸ್ಯಗಳನ್ನು ಸುರಕ್ಷಿತವಾಗಿಡಬೇಕು: ಚಾಣಕ್ಯ ನೀತಿಯ ಪ್ರಕಾರ, ಜೀವನದಲ್ಲಿ ಯಶಸ್ವಿಯಾಗಲು ಬಯಸುವವರು ತಮ್ಮ ಯೋಜನೆಗಳು ಮತ್ತು ವೈಯಕ್ತಿಕ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ರಹಸ್ಯಗಳನ್ನು ಬಹಿರಂಗಪಡಿಸುವವರು ಹೆಚ್ಚಾಗಿ ತೊಂದರೆಗೆ ಸಿಲುಕುತ್ತಾರೆ. ಹಾಗಾಗಿ ನಿಮ್ಮ ಯಾವುದೇ ರಹಸ್ಯಗಳನ್ನು ಯಾರೊಂದಿಗೂ ಬಹಿರಂಗಪಡಿಸಬೇಡಿ.

ಸಮಯಕ್ಕೆ ಮಹತ್ವ ನೀಡಬೇಕು: ಸಮಯ ಅತ್ಯಂತ ಅಮೂಲ್ಯವಾದದದ್ದು ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಸಮಯವನ್ನು ಗೌರವಿಸುವವರು, ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳುವವರು ಮಾತ್ರ ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ನೀವು ಜೀವನದಲ್ಲಿ ಮುನ್ನಡೆಯಲು ಬಯಸಿದರೆ  ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಿ, ಸಮಯವನ್ನು ಎಂದಿಗೂ ವ್ಯರ್ಥ ಮಾಡಬೇಡಿ.

ಇದನ್ನೂ ಓದಿ: ಬುದ್ಧಿವಂತ ಮಹಿಳೆ ಮಾತ್ರ ವಿಶೇಷ ಗುಣಗಳನ್ನು ಹೊಂದಿರುವುದಂತೆ

ಕೆಟ್ಟ ಸಹವಾಸದಿಂದ ದೂರವಿರಬೇಕು: ಒಬ್ಬ ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುವಲ್ಲಿ ಅವನ ಸ್ನೇಹಿತರು ಮತ್ತು ಸುತ್ತಮುತ್ತಲಿನವರು ಪ್ರಮುಖ ಪಾತ್ರ ವಹಿಸುತ್ತಾರೆ. ಕೆಟ್ಟ ಸಹವಾಸವು ಅವನನ್ನು ತಪ್ಪು ದಾರಿಗೆ ಕೊಂಡೊಯ್ಯಬಹುದು ಅದೇ ಒಳ್ಳೆಯವರ  ಸಹವಾಸವು ವ್ಯಕ್ತಿಯ ಆಲೋಚನೆಗಳು ಮತ್ತು ಕಾರ್ಯಗಳನ್ನು ಸುಧಾರಿಸುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.  ಆದ್ದರಿಂದ, ಸ್ನೇಹಿತರನ್ನು ಎಚ್ಚರಿಕೆಯಿಂದ ಆರಿಸಿಕೊಳ್ಳಬೇಕು, ಒಳ್ಳೆಯವರ ಸಹವಾಸವನ್ನೇ ಮಾಡಬೇಕು. ಇದು ನಿಮ್ಮ ಯಶಸ್ಸಿಗೆ ಅಡ್ಡಿಯಾಗುವುದಿಲ್ಲ.

ಆತ್ಮವಿಶ್ವಾಸ ಅತ್ಯಗತ್ಯ: ಆತ್ಮವಿಶ್ವಾಸವೇ ಯಶಸ್ಸಿಗೆ ಆಧಾರ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ನಿಮ್ಮಲ್ಲಿ ಆತ್ಮವಿಶ್ವಾಸವಿದ್ದರೆ, ಯಾವುದೇ ಅಡೆತಡೆಗಳು ನಿಮ್ಮನ್ನು ತಡೆಯಲು ಸಾಧ್ಯವಿಲ್ಲ. ನೀವು ನಿಮ್ಮ ನಿರ್ಧಾರಗಳಲ್ಲಿ ದೃಢವಾಗಿರಬೇಕು. ನೀವು ಇತರರ ಅಭಿಪ್ರಾಯಗಳಿಗೆ ಹೆದರಬಾರದು. ಇದು ನಿಮ್ಮನ್ನು ಒಳಗೆ ಬಲಶಾಲಿಯಾಗಿಸುತ್ತದೆ, ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ.

ಅವಕಾಶವನ್ನು ಕಳೆದುಕೊಳ್ಳಬೇಡಿ: ಚಾಣಕ್ಯ ನೀತಿಯ ಪ್ರಕಾರ, ಅವಕಾಶ ಸಿಕ್ಕಾಗಲೆಲ್ಲಾ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶವನ್ನು ಯಾರೂ ಕಳೆದುಕೊಳ್ಳಬಾರದು. ಅವಕಾಶಗಳು ಸಿಕ್ಕಾಗ ಅದನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳದಿದ್ದರೆ ಮುಂದೊಂದು ದಿನ ವಿಷಾದ ಪಡಬೇಕಾಗುತ್ತದೆ. ಅದೇ ಸಿಕ್ಕಂತಹ ಪ್ರತಿಯೊಂದು ಅವಕಾಶಗಳನ್ನು ಬಳಸಿಕೊಳ್ಳುವವರು ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link