Category Archives: Blog

Your blog category

ಹೈ ಬಿಪಿಯಿಂದ ಮರೆವು ಹೆಚ್ಚಾಗುತ್ತಾ? ಮೆದುಳಿನ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ?

ಇತ್ತೀಚಿನ ದಿನಗಳಲ್ಲಿ ಹೈ ಬಿಪಿ (High BP) ಸಮಸ್ಯೆ ಯುವಕರಲ್ಲೂ ಹೆಚ್ಚಾಗಿ ಕಾಣಿಸುತ್ತಿದೆ. ಇದನ್ನು ಹಲವರು ಹೃದಯ ಸಂಬಂಧಿತ ಸಮಸ್ಯೆ ಎಂದು ಭಾವಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಹೈ ಬಿಪಿ ದೇಹದ ಹಲವು ಅಂಗಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ, ಇದು ಮೆದುಳಿನ ಆರೋಗ್ಯ ಮತ್ತು ನೆನಪಿನ ಶಕ್ತಿಯ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ. ಆರೋಗ್ಯ ತಜ್ಞರ ಪ್ರಕಾರ, ದೀರ್ಘಕಾಲ ಹೈ ಬಿಪಿ ಇದ್ದವರಿಗೆ ಮೆದುಳಿಗೆ ರಕ್ತವನ್ನು ಸಾಗಿಸುವ ರಕ್ತನಾಳಗಳು ಹಾನಿಗೊಳಗಾಗಬಹುದು. ಇದರಿಂದ ಗಮನ ಕೇಂದ್ರೀಕರಿಸುವುದು, ವಿಚಾರಗಳನ್ನು ನೆನಪಿಟ್ಟುಕೊಳ್ಳುವುದು ಮತ್ತು ಯೋಚನೆ ಮಾಡುವ ಸಾಮರ್ಥ್ಯ ಕುಗ್ಗುವ ಸಾಧ್ಯತೆ ಇದೆ. ಕೆಲವರಲ್ಲಿ ಮರೆವು, ಮಾನಸಿಕ ದೌರ್ಬಲ್ಯ ಮತ್ತು ಏಕಾಗ್ರತೆ ಸಮಸ್ಯೆಗಳು ಕಾಣಿಸಬಹುದು. ಆದರೆ ಜನ ಇವುಗಳನ್ನು ತಲೆನೋವು, ದಣಿವು ಅಥವಾ ಒತ್ತಡ ಎಂದು ಭಾವಿಸಿ ಈ ರೀತಿಯ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ ದೀರ್ಘಕಾಲ ಬಿಪಿ ನಿಯಂತ್ರಣದಲ್ಲಿಲ್ಲದಿದ್ದರೆ ಅದು ಬ್ರೇನ್ ಹೆಲ್ತ್ ಮೇಲೆ ನಿಧಾನವಾಗಿ ಪರಿಣಾಮ ಬೀರುತ್ತದೆ ಎಂದು ವೈದ್ಯರು ಎಚ್ಚರಿಸುತ್ತಾರೆ. ಹಾಗಾದರೆ ಯಾವ ರೀತಿಯ ಲಕ್ಷಣಗಳನ್ನು ನಿರ್ಲಕ್ಷಿಸಬಾರದು, ಈ ಸಮಸ್ಯೆಯನ್ನು ನಿಯಂತ್ರಿಸಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯಾವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು?

  • ಪದೇಪದೇ ಮರೆತು ಹೋಗುವುದು
  • ಗಮನ ಕೇಂದ್ರೀಕರಿಸಲು ಕಷ್ಟವಾಗುವುದು
  • ತಲೆ ಸುತ್ತುವುದು
  • ನಿರಂತರ ತಲೆನೋವು
  • ಗೊಂದಲ ಅಥವಾ ಮಾನಸಿಕ ದಣಿವು

ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ ಬಿಪಿ ಮತ್ತು ಮೆದುಳಿನ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ಇದನ್ನೂ ಓದಿ: ನಿಮಗೆ ಹೈ ಬಿಪಿ ಇದ್ಯಾ? ಹಾಗಿದ್ರೆ ಸ್ಟ್ರೋಕ್ ಆಗದಂತೆ ತಡೆಯಲು ಈ ರೀತಿ ಮಾಡಿ

ಹೈ ಬಿಪಿ ನಿಯಂತ್ರಣಕ್ಕೆ ಏನು ಮಾಡಬೇಕು?

ತಜ್ಞರ ಸಲಹೆಯಂತೆ ನಿಯಮಿತವಾಗಿ ಬಿಪಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಉಪ್ಪಿನ ಸೇವನೆಯನ್ನು ಕಡಿಮೆ ಮಾಡುವುದು, ಪೌಷ್ಟಿಕ ಆಹಾರ ಸೇವಿಸುವುದು ಮತ್ತು ಪ್ರತಿದಿನ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಸಹಕಾರಿ. ಜೊತೆಗೆ ಉತ್ತಮ ನಿದ್ರೆ, ಒತ್ತಡ ನಿಯಂತ್ರಣ ಮತ್ತು ಧೂಮಪಾನ- ಮದ್ಯಪಾನದಿಂದ ದೂರ ಇರುವುದು ಕೂಡ ಮೆದುಳಿನ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಹೈ ಬಿಪಿಯನ್ನು ನಿರ್ಲಕ್ಷಿಸದೆ ಆರಂಭದಲ್ಲೇ ನಿಯಂತ್ರಣದಲ್ಲಿಟ್ಟರೆ ಹೃದಯ ಮತ್ತು ಮೆದುಳಿನ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

GT vs RR: ಟಾಸ್ ವೇಳೆ ಗೊಂದಲ; ಟಾಸ್ ಗೆದ್ದ ಗಿಲ್, ಬ್ಯಾಟಿಂಗ್‌ ಆಯ್ದುಕೊಂಡ ಪರಾಗ್

ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಎರಡನೇ ಕ್ವಾಲಿಫೈಯರ್ ಪಂದ್ಯ ಆರಂಭಕ್ಕೂ ಮುನ್ನವೇ ವಿವಾದವೊಂದು ಹುಟ್ಟಿಕೊಂಡಿದೆ. ವಾಸ್ತವವಾಗಿ ಈ ಪಂದ್ಯದ ಟಾಸ್ ಅನ್ನು ಎರಡು ಬಾರಿ ನಡೆಸಬೇಕಾಯಿತು. ಮ್ಯಾಚ್ ರೆಫರಿ ಪ್ರಕಾಶ್ ಭಟ್ ಅವರ ಈ ನಿರ್ಧಾರ ಶುಭ್​ಮನ್ ಗಿಲ್ ಅವರ ಅಸಮಾಧಾನಕ್ಕೆ ಕಾರಣವಾಯಿತು. ಏಕೆಂದರೆ ಮೊದಲ ಬಾರಿಗೆ ನಡೆದ ಟಾಸ್‌ನಲ್ಲಿ ಶುಭಮನ್ ಗಿಲ್ ಟಾಸ್ ಗೆದ್ದಿದ್ದರು. ಆದರೆ ಮ್ಯಾಚ್ ರೆಫರಿ ಈ ಟಾಸ್ ಪ್ರಕ್ರಿಯೆಯನ್ನು ತಿರಸ್ಕರಿಸಿದರು. ಇದರಿಂದಾಗಿ ಎರಡನೇ ಬಾರಿಗೆ ನಡೆದ ಟಾಸ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡರು. ಅಷ್ಟಕ್ಕೂ ಈ ಪಂದ್ಯದಲ್ಲಿ ಎರಡೆರಡು ಬಾರಿ ಟಾಸ್ ನಡೆಯಲು ಕಾರಣವೇನು ಎಂಬುದನ್ನು ನೋಡುವುದಾದರೆ..

ಈ ಪಂದ್ಯಕ್ಕೆ ಪ್ರಕಾಶ್ ಭಟ್ ಮ್ಯಾಚ್ ರೆಫರಿ ಆಗಿದ್ದರು. ಇತ್ತ ಶುಭ್​ಮನ್ ಗಿಲ್ ನಾಣ್ಯ ಚಿಮ್ಮಿಸಿದರೆ, ರಿಯಾನ್ ಪರಾಗ್ ತಮ್ಮ ನಿರ್ಧಾರ ಹೇಳಿದರು. ಆದರೆ ಪರಾಗ್ ಯಾವ ನಿರ್ಧಾರ ಹೇಳಿದರು ಎಂಬುದು ಮ್ಯಾಚ್ ರೆಫರಿಗೆ ಸರಿಯಾಗಿ ಕೇಳಿಸಲಿಲ್ಲ. ಹೀಗಾಗಿ ರೆಫರಿ ಮೊದಲ ಟಾಸ್ ಅನ್ನು ರದ್ದುಗೊಳಿಸಿದರು. ಆದಾಗ್ಯೂ ಟಾಸ್ ಶುಭ್​ಮನ್ ಗಿಲ್ ಪರವಾಗಿ ಹೋಗಿತ್ತಾದರೂ ರೆಫರಿ ಅದನ್ನು ರದ್ದುಗೊಳಿಸಿದರು. ಹೀಗಾಗಿ ಎರಡನೇ ಬಾರಿಗೆ ಟಾಸ್ ನಡೆಸಬೇಕಾಯಿತು. ಎರಡನೇ ಬಾರಿಗೆ ನಡೆದ ಟಾಸ್​ನಲ್ಲಿ ರಿಯಾನ್ ಪರಾಗ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಈ ವೇಳೆ ಗಿಲ್ ಸ್ವಲ್ಪ ಅಸಮಾಧಾನಗೊಂಡವರಂತೆ ಕಾಣುತ್ತಿದ್ದರು. ಇದೀಗ ಅದರ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯಾವುದೇ ಕಟ್ ಇಲ್ಲದೇ ಯು/ಎ ಪ್ರಮಾಣಪತ್ರ ಪಡೆದ ಕ್ರೈಂ ಥ್ರಿಲ್ಲರ್ ಸಿನಿಮಾ ‘ಚಾರ್ಜ್‌ಶೀಟ್ 03-08’

ಕನ್ನಡದ ಬಹುನಿರೀಕ್ಷಿತ ಕ್ರೈಂ ಥ್ರಿಲ್ಲರ್ ಸಿನಿಮಾ ‘ಚಾರ್ಜ್‌ಶೀಟ್ 03-08’ (Chargesheet 03-08) ಈಗ ಸೆನ್ಸಾರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸೆನ್ಸಾರ್ ಮಂಡಳಿಯಿಂದ ಯಾವುದೇ ವಿಡಿಯೋ ಕಟ್ ಇಲ್ಲದೆ U/A ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಚಿತ್ರದ ನಿರೂಪಣೆ ಹಾಗೂ ಕಥೆಯ ನಿರ್ವಹಣೆಯನ್ನು ನೋಡಿ ಸೆನ್ಸಾರ್ ಮಂಡಳಿ (CBFC) ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಚಿತ್ರತಂಡ ಹೇಳಿದೆ. ಯಾವುದೇ ಕಟ್ ಇಲ್ಲದೇ ಯು/ಎ ಪ್ರಮಾಣಪತ್ರ ಸಿಕ್ಕಿರುವುದರಿಂದ ಚಿತ್ರತಂಡಕ್ಕೆ ಸಂತಸ ಆಗಿದೆ.

‘ಎಂ.ಎಸ್ ಅರ್ಜುನ್ ಫಿಲ್ಮ್ಸ್’ ಬ್ಯಾನರ್ ಮೂಲಕ ನಿರ್ಮಾಣ ಆಗಿರುವ ಈ ಸಿನಿಮಾಗೆ ದಿನೇಶ್ ಮತ್ತು ಲಕ್ಷ್ಮಣ್ ಅವರು ನಿರ್ಮಾಪಕರು. ‘ಚಾರ್ಜ್‌ಶೀಟ್ 03-08’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಸಿಕ್ಕಿರುವ ಮೆಚ್ಚುಗೆ ಬಗ್ಗೆ ಅವರು ಅಪಾರ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಚಿತ್ರವನ್ನು ಅಧಿಕೃತವಾಗಿ ‘ಕ್ರೈಂ ಥ್ರಿಲ್ಲರ್’ ಶೈಲಿಯ ಅಡಿಯಲ್ಲಿ ಪ್ರಮಾಣೀಕರಿಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.

ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್ ಅವರ ಮೂಲ ಕಥಾಹಂದರವನ್ನು ಇಟ್ಟುಕೊಂಡು ಈ ಸಿನಿಮಾ ನಿರ್ಮಾಣ ಆಗಿದೆ. ಈ ಚಿತ್ರವನ್ನು ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ವೆಂಕಟ್ ಭಾರದ್ವಾಜ್ ನಿರ್ದೇಶಿಸಿದ್ದಾರೆ. ಅವರೇ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ನೈಜವಾಗಿ ಸಾಗುವ ತನಿಖಾ ಶೈಲಿಯ ಕಥಾಹಂದರವು ಪ್ರೇಕ್ಷಕರನ್ನು ಸೆಳೆಯಲಿದೆ ಎಂಬ ವಿಶ್ವಾಸ ಈ ತಂಡಕ್ಕಿದೆ.

ಅಲ್ಲದೇ, ಸಿನಿಮಾದ ಆಡಿಯೋ ಹಕ್ಕುಗಳನ್ನು ‘A2 ಮ್ಯೂಸಿಕ್’ ಸಂಸ್ಥೆ ಪಡೆದುಕೊಂಡಿರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಚಿತ್ರದ ಪ್ರಚಾರ ಕಾರ್ಯಗಳನ್ನು ಈಗಾಗಲೇ ಆರಂಭಿಸಲಾಗಿದೆ. ಮೊದಲಿಗೆ ಟೀಸರ್, ನಂತರ 2 ಹಾಡುಗಳು ಮತ್ತು ಕೊನೆಯಲ್ಲಿ ಟ್ರೇಲರ್ ಬಿಡುಗಡೆ ಮಾಡುವ ಯೋಜನೆಯನ್ನು ಚಿತ್ರತಂಡ ರೂಪಿಸಿಕೊಂಡಿದೆ. ಚಿತ್ರದ ಪ್ರಚಾರವನ್ನು ಕರ್ನಾಟಕದಲ್ಲಿ ಮಾತ್ರವಲ್ಲದೆ ವಿಶ್ವದ ಕನ್ನಡಿಗರಿಗೂ ತಲುಪಿಸುವ ಉದ್ದೇಶ ಇದೆ. ಚೆನ್ನೈ, ಮುಂಬೈ ಸೇರಿದಂತೆ ಭಾರತದ ಪ್ರಮುಖ ಮೆಟ್ರೋ ನಗರಗಳಲ್ಲಿಯೂ ಪ್ರಚಾರ ಮಾಡಲು ತಂಡ ಸಜ್ಜಾಗಿದೆ.

ಇದನ್ನೂ ಓದಿ: ಎಸ್.ಕೆ. ಉಮೇಶ್ ಬರೆದ ‘ಐ ವಿಟ್ನೆಸ್’ ಕೃತಿ ಆಧಾರಿತ ಸಿನಿಮಾ ‘ಚಾರ್ಜ್‌ಶೀಟ್ 03-08’

ಈ ಸಿನಿಮಾದಲ್ಲಿ ಸುಂದರ್ ರಾಜ್, ಹರ್ಷ್ ಅರ್ಜುನ್, ಅಮರ್, ಸತ್ಯಶ್ರೀ, ರೂಪೇಶ್, ಡಾ. ಸುಧಾಕರ್ ಶೆಟ್ಟಿ, ಡಾ. ಪ್ರಮೋದ್, ಚೇತನ ಖೋಟ್, ವೆಂಕಟ್ ಭಾರದ್ವಾಜ್ ಮುಂತಾದವರು ಈ ನಟಿಸಿದ್ದಾರೆ. ಸಮೀರ್ ಕುಲಕರ್ಣಿ ಅವರು ಸಂಗೀತ ಮತ್ತು ಹಿನ್ನೆಲೆ ಸಂಗೀತ ನೀಡಿದ್ದಾರೆ. ಪ್ರಮೋದ್ ಭಾರತೀಯ ಅವರು ಛಾಯಾಗ್ರಹಣ ಮಾಡಿದ್ದಾರೆ. ಶಮೀಕ್ ವಿ. ಭರದ್ವಾಜ್ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಳದಿ ಮಾರ್ಗದಲ್ಲಿ ಮೆಟ್ರೋ ರೈಲುಗಳ ಕೊರತೆ ಹಿನ್ನೆಲೆ ನಿತ್ಯ ಪರದಾಟ: BMRCL ವಿರುದ್ಧ ಪ್ರಯಾಣಿಕರ ಆಕ್ರೋಶ

ನಮ್ಮ ಮೆಟ್ರೋ ಹಳದಿ ಮಾರ್ಗದ ರೈಲುImage Credit source: wikipedia

ಬೆಂಗಳೂರು, ಮೇ 29: ರಾಜಧಾನಿ ಬೆಂಗಳೂರಿನ (Bengaluru) ಟ್ರಾಫಿಕ್​ ಸಮಸ್ಯೆ ನಿವಾರಸುವ ನಿಟ್ಟಿನಲ್ಲಿನ ಪ್ರಮುಖ ಯೋಜನೆಗಳ ಪೈಕಿ ನಮ್ಮ ಮೆಟ್ರೋ ಕೂಡ ಒಂದು. ಹಸಿರು, ನೇರಳೆ ಮತ್ತು ಹಳದಿ  ಸೇರಿ ಒಟ್ಟು ಮೂರು ಮಾರ್ಗಗಳಲ್ಲಿ ಈಗಾಗಲೇ ಮೆಟ್ರೋ ರೈಲುಗಳು ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿವೆ. ಹೀಗಿದ್ದರೂ ಪ್ರಯಾಣಿಕರು ಮಾತ್ರ ಬಿಎಂಆರ್​​ಸಿಎಲ್​​ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ಕಾರಣವಾಗಿರೋದು ಹಳದಿ ಮಾರ್ಗದಲ್ಲಿ ಸಂಚರಿಸುವ ರೈಲುಗಳ ನಡುವೆ ಇರುವ ಸಮಯದ ಅಂತರ.

ಮುಖ್ಯಾಂಶಗಳು

  • ಹಳದಿ ಮಾರ್ಗದಲ್ಲಿ ರೈಲುಗಳ ಕೊರತೆ ಹಿನ್ನೆಲೆ ಪರದಾಟ
  • BMRCL ವಿರುದ್ಧ ನಮ್ಮ ಮೆಟ್ರೋ ಪ್ರಯಾಣಿಕರ ಆಕ್ರೊಶ
  • ಪ್ರಯಾಣಿಕರ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮಕ್ಕೆ ಆಗ್ರಹ

ಹೌದು, ಪ್ರಧಾನಿ ನರೇಂದ್ರ ಮೋದಿ ಅವರಿಂದ 2025ರ ಆಗಸ್ಟ್​​ 10ರಂದು ನಮ್ಮ ಮೆಟ್ರೋದ ಯೆಲ್ಲೋ ಮಾರ್ಗಕ್ಕೆ ಚಾಲನೆ ಸಿಕ್ಕಿದ್ದು, ಆಗಸ್ಟ್​​ 11ರಿಂದ ವಾಣಿಜ್ಯ ಕಾರ್ಯಾಚರಣೆ ಆರಂಭವಾಗಿತ್ತು. ಆದರೆ ಈ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರ ಶುರುವಾಗಿ 9 ತಿಂಗಳುಗಳೇ ಕಳೆದಿದ್ದರೂ ರೈಲುಗಳಿಗಾಗಿ ಪ್ರಯಾಣಿಕರ ಪರದಾಟ ಮಾತ್ರ ತಪ್ಪಿಲ್ಲ. ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಹೆಚ್ಚು ಜನಸಂದಣಿ ಇರುವ ಸಮಯದ ವೇಳೆ 3-4 ನಿಮಿಷಕ್ಕೊಂದರಂತೆ ರೈಲು ಸಂಚರಿಸುತ್ತವೆ. ಹಾಗೆಯೇ ಉಳಿದ ಸಮದಲ್ಲಿ 5 ನಿಮಿಷಗಳಿಗೊಂದು ಮೆಟ್ರೋ ಓಡಾಡಲಿದೆ. ಹೀಗಿರುವಾಗ ಯೆಲ್ಲೋ ಲೈನ್​​ನಲ್ಲಿ ಮಾತ್ರ ಪೀಕ್​​ ಅವರ್​​ನಲ್ಲಿ 9 ನಿಮಿಷಕ್ಕೊಂದು ಹಾಗೆಯೇ ಉಳಿದ ಸಮಯದಲ್ಲಿ 14 ನಿಮಿಷಗಳಿಗೊಂದು ರೈಲು ಸಂಚಾರ ಯಾಕೆಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ. ಗ್ರೀನ್ ಲೈನ್ ಮೂಲಕ ಆರ್. ವಿ. ರೋಡ್​​ಗೆ ಬರುವ ಪ್ರಯಾಣಿಕರು, ಯೆಲ್ಲೋ ಲೈನ್​​ನ ರೈಲಿಗಾಗಿ ಇಲ್ಲಿ ಸುಮಾರು 10 ರಿಂದ 14 ನಿಮಿಷಗಳ ಕಾಲ ಕಾಯಬೇಕಾದ ಸ್ಥಿತಿ ಇದೆ ಎಂದು ಅಲವತ್ತುಕೊಂಡಿದ್ದಾರೆ.

ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರೇ ಗಮನಿಸಿ!; ಭಾನುವಾರ ನೇರಳೆ ಮಾರ್ಗದ ಈ ನಿಲ್ದಾಣಗಳ ನಡುವೆ ನಮ್ಮ ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತ!

ಹಳದಿ ಮಾರ್ಗದ ಮೆಟ್ರೋ ರೈಲುಗಳ ಕಾರ್ಯಾಚರಣೆ ಶುರುವಾಗಿ 9 ತಿಂಗಳುಗಳೇ ಕಳೆದರೂ ರೈಲುಗಳ ಸಂಖ್ಯೆ ಮಾತ್ರ ಹೆಚ್ಚಾಗಿಲ್ಲ. ಈ ಲೈನ್​​ ಆರಂಭದ ವೇಳೆ 3 ರೈಲುಗಳು ಕಾರ್ಯಾಚರಣೆ ನಡೆಸುತ್ತಿದ್ದರೆ ಈಗ ಅವುಗಳ ಸಂಖ್ಯೆ 8ಕ್ಕೆ ಏರಿವೆ. 9 ಮತ್ತು 10ನೇ ರೈಲು ಅದಾಗಲೇ ಬೆಂಗಳೂರಿಗೆ ಆಗಮಿಸಿದ್ದರೂ ಅವುಗಳಿನ್ನೂ ವಾಣಿಜ್ಯ ಸಂಚಾರಕ್ಕೆ ಲಭ್ಯವಾಗಿಲ್ಲ. ಅವುಗಳ ಪರೀಕ್ಷೆ ಇನ್ನೂ ಮುಗಿಯದ ಕಾರಣ ಮೆಟ್ರೋ ಪ್ರಯಾಣಿಕರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಹೀಗಾಗಿ ಶೀಘ್ರ ಆ ಎರಡು ರೈಲುಗಳ ಪರೀಕ್ಷೆ ಮುಗಿಸಿ ಅವುಗಳನ್ನು ವಾಣಿಜ್ಯ ಸಂಚಾರಕ್ಕೆ ಲಭ್ಯ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:58 pm, Fri, 29 May 26

Source link

Bangaluru Rain: ಬೆಂಗಳೂರಲ್ಲಿ ವರುಣಾರ್ಭಟ: ರಸ್ತೆಗಳು ಜಲಾವೃತ, ಸಂಚಾರ ವ್ಯತ್ಯಯ

ಬೆಂಗಳೂರು, ಮೇ 29: ಸಿಲಿಕಾನ್​ ಸಿಟಿ ಜನರಿಗೆ ವೀಕೆಂಡ್ ಆರಂಭದಲ್ಲೇ ಮಳೆ ಶಾಕ್ ನೀಡಿದೆ. ಮೋಡ ಕವಿದ ವಾತಾವರಣವಿದ್ದ ನಗರದಲ್ಲಿ ಸಂಜೆಯಾಗುತ್ತಿದ್ದಂತೆ ವರುಣನ ಅಬ್ಬರ ಜೋರಾಗಿದೆ. ನಗರದ ಪ್ರಮುಖ ರಸ್ತೆಗಳು ಮಳೆ ನೀರಿಂದಾಗಿ ಜಲಾವೃತಗೊಂಡಿದ್ದು, ಮನೆಗೆ ಮರಳುತ್ತಿದ್ದ ಉದ್ಯೋಗಿಗಳು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಧಾರಾಕಾರ ಮಳೆಗೆ ಅಂಡರ್‌ಪಾಸ್‌ಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಮತ್ತಷ್ಟು ಮಾಹಿತಿ ಅಪ್​ಡೇಟ್​ ಆಗಲಿದೆ.

Source link

IPL 2026 GT vs RR Qualifier-2 Live Score: ಟಾಸ್ ಗೆದ್ದ ರಾಜಸ್ಥಾನ್ ಬ್ಯಾಟಿಂಗ್ ಆಯ್ಕೆ

ಇಂದು ಕ್ವಾಲಿಫೈಯರ್ 2 ರಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಿವೆ. ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯವನ್ನು ಗೆದ್ದ ತಂಡ ಫೈನಲ್‌ಗೆ ಮುನ್ನಡೆಯುತ್ತದೆ. ಗುಜರಾತ್ ತನ್ನ ಕೊನೆಯ ಫೈನಲ್ ಅನ್ನು 2023 ರಲ್ಲಿ ಆಡಿದರೆ, ರಾಜಸ್ಥಾನ ಕೊನೆಯದಾಗಿ 2022 ರಲ್ಲಿ ಪ್ರಶಸ್ತಿ ಪಂದ್ಯವನ್ನು ತಲುಪಿತು, ಅಲ್ಲಿ ಗುಜರಾತ್ ವಿರುದ್ಧ ಸೋತಿತು. ಈಗ ರಾಜಸ್ಥಾನವು ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಮತ್ತು ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗುವತ್ತ ಮುನ್ನಡೆಯುವ ಅವಕಾಶವನ್ನು ಹೊಂದಿದೆ.

Source link

ಚಿನ್ನಕ್ಕಿಂತಲೂ ಬಿಟ್​ಕಾಯಿನ್ ಒಂದು ಕೈ ಮೇಲೆ ಎನ್ನುತ್ತಿದ್ದ ಮಾರ್ಕ್ ಕ್ಯೂಬನ್ ಈಗ ಕೈಚೆಲ್ಲಿ ಕೂತ ಕಥೆ..!

ಬಿಟ್​ಕಾಯಿನ್ ಸಾಂದರ್ಭಿಕ ಚಿತ್ರImage Credit source: Getty Images

ವಾಷಿಂಗ್ಟನ್, ಮೇ 29: ಒಂದಾನೊಂದು ಕಾಲದಲ್ಲಿ ಕ್ರಿಪ್ಟೋಕರೆನ್ಸಿ (crypto currency) ಪರವಾಗಿ ಅತ್ಯಂತ ಪ್ರಬಲವಾಗಿ ಧ್ವನಿ ಎತ್ತುತ್ತಿದ್ದ ಅಮೆರಿಕದ ಬಿಲಿಯನೇರ್ ಉದ್ಯಮಿ ಮತ್ತು ‘ಶಾರ್ಕ್ ಟ್ಯಾಂಕ್’ (Shark Tank) ಕಾರ್ಯಕ್ರಮದ ಮಾಜಿ ಹೂಡಿಕೆದಾರ ಮಾರ್ಕ್ ಕ್ಯೂಬನ್ (Mark Cuban) ಈಗ ವರಸೆ ಬದಲಿಸಿದ್ದಾರೆ. ತಮಗೆ ಸೇರಿದ ಬಹುಪಾಲು ಬಿಟ್‌ಕಾಯಿನ್ (Bitcoin) ಹೂಡಿಕೆಯನ್ನು ಮಾರಾಟ ಮಾಡಿರುವುದಾಗಿ ಅವರು ಬಹಿರಂಗಪಡಿಸಿದ್ದಾರೆ. ಜಾಗತಿಕ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಸುರಕ್ಷಿತ ಆಸ್ತಿಯಾಗಿ (Hedge against global turmoil) ಕಾರ್ಯನಿರ್ವಹಿಸುವಲ್ಲಿ ಬಿಟ್‌ಕಾಯಿನ್ ವಿಫಲವಾಗಿದೆ ಎಂದು ಅವರು ತಮ್ಮ ಈ ನಿರ್ಧಾರಕ್ಕೆ ಪ್ರಮುಖ ಕಾರಣ ನೀಡಿದ್ದಾರೆ.

“ಇದು ನಾನು ಅಂದುಕೊಂಡಂತೆ ಇಲ್ಲ” ಎಂದ ಕ್ಯೂಬನ್

ಮಾರ್ಕ್ ಕ್ಯೂಬನ್ ಈ ಹಿಂದೆ ಬಿಟ್‌ಕಾಯಿನ್ ಅನ್ನು “ಚಿನ್ನದ ಅತ್ಯಂತ ಸುಧಾರಿತ ಆವೃತ್ತಿ” (Better version of gold than gold) ಎಂದು ಬಣ್ಣಿಸಿದ್ದರು. ಆದರೆ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಈ ಡಿಜಿಟಲ್ ಆಸ್ತಿಯು ಮಾರುಕಟ್ಟೆಯ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜಾಗತಿಕ ಸವಾಲುಗಳ ನಡುವೆಯೂ 2026-27ರಲ್ಲಿ ಭಾರತದ ಜಿಡಿಪಿ ಶೇ. 6.9 ವೃದ್ಧಿ: ಆರ್​ಬಿಐ ವಾರ್ಷಿಕ ವರದಿಯಲ್ಲಿ ಅಂದಾಜು

“ಇರಾನ್ ಯುದ್ಧದಂತಹ ಜಾಗತಿಕ ಉದ್ವಿಗ್ನತೆಗಳು ತಾರಕಕ್ಕೇರಿದಾಗ, ಸಾಂಪ್ರದಾಯಿಕ ಕರೆನ್ಸಿಗಳ ಮೌಲ್ಯ ಕುಸಿತಕ್ಕೆ ಬಿಟ್‌ಕಾಯಿನ್ ಅತ್ಯುತ್ತಮ ಪರ್ಯಾಯವಾಗಬಹುದು ಮತ್ತು ಇದು ಚಿನ್ನಕ್ಕಿಂತಲೂ ಉತ್ತಮವಾಗಿರಬಹುದು ಎಂದು ನಾನು ಭಾವಿಸಿದ್ದೆ. ಆದರೆ ಕಠಿಣ ಪರಿಸ್ಥಿತಿ ಎದುರಾದಾಗ ಚಿನ್ನದ ಬೆಲೆ ಗಗನಕ್ಕೇರಿ (ಸುಮಾರು $5,000 ತಲುಪಿತು), ಬಿಟ್‌ಕಾಯಿನ್ ಮೌಲ್ಯ ಮಾತ್ರ ತೀವ್ರವಾಗಿ ಕುಸಿಯಿತು. ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಇದು ನನಗೆ ಬೇಕಾದ ಸುರಕ್ಷತೆಯನ್ನು ಒದಗಿಸಲಿಲ್ಲ” ಎಂದಿದ್ದಾರೆ ಮಾರ್ಕ್ ಕ್ಯೂಬನ್.

ಕ್ರಿಪ್ಟೋ ಮಾರುಕಟ್ಟೆಯಿಂದ ದೂರ ಸರಿದರಾ ಬಿಲಿಯನೇರ್?

ಮಾರ್ಕ್ ಕ್ಯೂಬನ್ ಅವರ ಈ ಹೇಳಿಕೆಯು ಕ್ರಿಪ್ಟೋ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಏಕೆಂದರೆ 2021ರ ಅವಧಿಯಲ್ಲಿ ಅವರು ಪ್ರತಿದಿನ ಗಂಟೆಗಟ್ಟಲೆ ಕ್ರಿಪ್ಟೋ ಬಗ್ಗೆ ಅಧ್ಯಯನ ಮಾಡುತ್ತಿದ್ದರು ಮತ್ತು ತಮ್ಮ ಬಾಸ್ಕೆಟ್‌ಬಾಲ್ ತಂಡವಾದ ‘ಡಲ್ಲಾಸ್ ಮಾವೆರಿಕ್ಸ್’ನಲ್ಲೂ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಅಳವಡಿಸಿದ್ದರು. ಆ ಸಮಯದಲ್ಲಿ ಅವರ ಒಟ್ಟು ಕ್ರಿಪ್ಟೋ ಪೋರ್ಟ್‌ಫೋಲಿಯೊದಲ್ಲಿ ಶೇ. 60 ರಷ್ಟು ಬಿಟ್‌ಕಾಯಿನ್, ಶೇ. 30 ರಷ್ಟು ಎಥೆರಿಯಮ್ ಮತ್ತು ಶೇ. 10 ರಷ್ಟು ಇತರೆ ಸಣ್ಣ ಟೋಕನ್‌ಗಳಿದ್ದವು.

ಆದರೆ ಪ್ರಸ್ತುತ ಕ್ರಿಪ್ಟೋ ವ್ಯವಸ್ಥೆಯು ತನ್ನ ಹಾದಿ ತಪ್ಪಿದೆ (Lost the plot) ಎಂದಿರುವ ಕ್ಯೂಬನ್, ಇತ್ತೀಚಿನ ಮೀಮ್‌ಕಾಯಿನ್‌ಗಳು (Memecoins) ಮತ್ತು ಸಣ್ಣ ಟೋಕನ್‌ಗಳನ್ನು “ಕಸ” (Garbage) ಎಂದು ಕರೆಯುವ ಮೂಲಕ ತೀವ್ರವಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ: ನೋಟು ಹಾಳಾಗುವ ಭಯ ಬೇಡ; ಕಾಗದದ ಬದಲು ಪಾಲಿಮರ್ ನೋಟು ಮುದ್ರಿಸಲು ಸರ್ಕಾರದ ಆಲೋಚನೆ

ಎಥೆರಿಯಮ್ ಮೇಲೆ ಇನ್ನೂ ಇದೆ ನಂಬಿಕೆ

ಬಿಟ್‌ಕಾಯಿನ್ ಮಾರಾಟ ಮಾಡಿದ್ದರೂ, ತಮಗೆ ಎಥೆರಿಯಮ್ (Ethereum) ಮೇಲೆ ಅಷ್ಟೊಂದು ನಿರಾಶೆಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹಣಕಾಸು ಅಪ್ಲಿಕೇಶನ್‌ಗಳು ಮತ್ತು ಸ್ಮಾರ್ಟ್ ಕಾಂಟ್ರಾಕ್ಟ್‌ಗಳನ್ನು ರನ್ ಮಾಡಲು ಎಥೆರಿಯಮ್ ಪ್ಲಾಟ್​ಫಾರ್ಮ್ ಉತ್ತಮವಾಗಿ ಬಳಕೆಯಾಗುತ್ತಿರುವುದೇ ಇದಕ್ಕೆ ಕಾರಣ ಎಂದಿದ್ದಾರೆ. ಆದಾಗ್ಯೂ, ಕಳೆದ ಐದು ವರ್ಷಗಳ ಮಾರುಕಟ್ಟೆ ಇತಿಹಾಸವನ್ನು ನೋಡಿದರೆ ಬಿಟ್‌ಕಾಯಿನ್ ಎಥೆರಿಯಮ್‌ಗಿಂತ ಹೆಚ್ಚಿನ ಲಾಭ ನೀಡಿದೆ ಎಂಬುದು ಗಮನಾರ್ಹ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ರಿಷಭ್ ಪಂತ್ ಜೊತೆಗೆ ಈ 4 ತಂಡಗಳ ನಾಯಕರಿಗೂ ಗೇಟ್​ಪಾಸ್ ಖಚಿತ

Source link

ಕರ್ನಾಟಕದ ಏಕೈಕ ಮಹಿಳಾ ವಿವಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: Phd, ಸಿಬ್ಬಂದಿ ನೇಮಕಾತಿಯಲ್ಲೂ ಭಾರಿ ಗೋಲ್ಮಾಲ್!

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯImage Credit source: tv9 kannada

ವಿಜಯಪುರ, ಮೇ 29: ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವಾದ ವಿಜಯಪುರದ (vijayapura) ‘ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ’ದಲ್ಲಿ (Karnataka State Akkamahadevi Women University) ಭ್ರಷ್ಟಾಚಾರ ಮತ್ತು ಅಕ್ರಮಗಳ ಸರಣಿ ಆರೋಪ ಕೇಳಿಬಂದಿವೆ. ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ನಿಯಮಗಳ ಉಲ್ಲಂಘನೆ ಹಾಗೂ ಪಿಎಚ್‌ಡಿ ಪದವಿ ಪ್ರದಾನ ವಿಚಾರದಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ಮತ್ತು ಲಂಚಕ್ಕೆ ಬೇಡಿಕೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ಚರ್ಚೆಗೆ ಗ್ರಾಸವಾಗಿದೆ.

ಮುಖ್ಯಾಂಶಗಳು

  • ಕರ್ನಾಟಕ ಮಹಿಳಾ ವಿವಿ: ಬೋಧಕೇತರ ಸಿಬ್ಬಂದಿ ನೇಮಕಾತಿ ಅಕ್ರಮ
  • ಪಿಹೆಚ್‌ಡಿ ಪ್ರವೇಶಾತಿ ಮತ್ತು ಪದವಿ ಪ್ರದಾನದಲ್ಲಿ ಭ್ರಷ್ಟಾಚಾರ ಆರೋಪ
  • ಅಕ್ರಮಗಳ ಪರಿಹಾರಕ್ಕೆ ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹ

ನೇಮಕಾತಿ ಪ್ರಕ್ರಿಯೆ ನಿಯಮಬಾಹಿರ

ವಿಜಯಪುರ ನಗರದ ಹೊರ ಭಾಗದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಹೊರಗುತ್ತಿಗೆ ಆಧಾರದಲ್ಲಿ 20ಕ್ಕೂ ಅಧಿಕ ಬೋಧಕೇತರ ಸಿಬ್ಬಂದಿ, ಡಾಟಾ ಎಂಟ್ರಿ ಆಪರೇಟರ್‌ಗಳ ನೇಮಕಾತಿ ಪ್ರಕ್ರಿಯೆ ನಿಯಮಬಾಹಿರವಾಗಿ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬೋಧಕೇತರ ಸಿಬ್ಬಂದಿ ನೇಮಕಾತಿಗೆ ರಾಜ್ಯ ಸರ್ಕಾರ ಹಾಗೂ ವಿಶ್ವವಿದ್ಯಾಲಯದ ಹಣಕಾಸು ಸಮಿತಿಯಿಂದ ಅಗತ್ಯ ಅನುಮತಿ ಪಡೆಯಲಾಗಿಲ್ಲ. ಅಲ್ಲದೇ, ಯಾವುದೇ ಅಧಿಕೃತ ನೋಟಿಫಿಕೇಶನ್ ಹೊರಡಿಸದೆ ಹಾಗೂ ಮೀಸಲಾತಿ ನಿಯಮಾವಳಿ ಅನುಸರಿಸದೆ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಸರ್ಕಾರದ ಅನುಮತಿ ಪಡೆದು ನಿಯಮಾನುಸಾರ ನೇಮಕಾತಿ ನಡೆಯಬೇಕು ಹಾಗೂ ರೋಸ್ಟರ್ ಪದ್ಧತಿ ಕಡ್ಡಾಯವಾಗಿ ಪಾಲಿಸಬೇಕು. ನಿಯಮಬಾಹಿರ ನೇಮಕ ನಡೆದರೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹಾಲಿ ಮಾಜಿ ಸಿಂಡಿಕೇಟ್ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಕಚೇರಿ ಸಮಯ ಬದಲಾವಣೆ: ವಿಜಯಪುರ ಸರ್ಕಾರಿ ಅಧಿಕಾರಿ-ಸಿಬ್ಬಂದಿಗೆ ಹೇಳೋರಿಲ್ಲ, ಕೇಳೋರಿಲ್ಲ

ಇನ್ನು ಪಿಹೆಚ್​​ಡಿ ಪದವಿ ಪ್ರದಾನ ವಿಚಾರದಲ್ಲೂ ಭ್ರಷ್ಟಾಚಾರ, ಕಿರುಕುಳ ಆರೋಪ ಕೇಳಿಬಂದಿವೆ. ಸರ್ಕಾರದ ಹಾಗೂ ಮೀಸಲಾತಿ ನಿಯಮಾವಳಿಗಳಿಗೆ ಅನುಗುಣವಾಗಿ ಪಿಹೆಚ್‌.ಡಿ ಪ್ರವೇಶಾತಿಯನ್ನು ಲಿಖಿತ ಮತ್ತು ಮೌಖಿಕ ಪರೀಕ್ಷೆಗಳ ಮೂಲಕ ನಡೆಸಬೇಕು. ಈ ವರ್ಷ 100ಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ದಾಖಲಾತಿ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಪ್ರವೇಶ ಪ್ರಕ್ರಿಯೆಯಲ್ಲಿ ಎಕ್ಸಿಕ್ಯೂಟಿವ್ ಕಮಿಟಿಯನ್ನು ನಿಷ್ಕ್ರಿಯಗೊಳಿಸಿ, ಕೆಲವರಿಗೆ ಅನುಕೂಲವಾಗುವ ರೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಹಣ, ಚಿನ್ನಕ್ಕೆ ಬೇಡಿಕೆ

ಮಹಾಪ್ರಬಂಧ ಸಲ್ಲಿಕೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯಲ್ಲೂ ಗೋಲ್ಮಾಲ್ ನಡೆಯುತ್ತಿವೆ ಎಂದು ಸಂಶೋಧನಾ ವಿದ್ಯಾರ್ಥಿನಿ ಹೇಳಿದ್ದಾರೆ. ಮೌಖಿಕ ಪರೀಕ್ಷೆ ಮತ್ತು ಮಹಾಪ್ರಬಂಧ ಮೌಲ್ಯಮಾಪನವನ್ನು ಬಾಹ್ಯ ತಜ್ಞರ ಸಮಿತಿಯಿಂದ ಸಮರ್ಪಕವಾಗಿ ನಡೆಸದೇ, ಕಾಟಾಚಾರಕ್ಕೆ ಎಂಬಂತೆ ಪ್ರಕ್ರಿಯೆ ನಡೆಯುತ್ತಿದೆಯಂತೆ. ಮಹಾಪ್ರಬಂಧ ಸಲ್ಲಿಕೆಗೆ ವಿಶ್ವವಿದ್ಯಾಲಯ ಅನುಮತಿ ಪತ್ರ ನೀಡುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಹಣ ಹಾಗೂ ಚಿನ್ನಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ವಿವಿ ಕುಲಪತಿ ಪ್ರೊ ವಿಜಯಾ ಕೋರಿಶೆಟ್ಟಿ ಹೇಳಿದ್ದಿಷ್ಟು

ಮಹಿಳಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಸಿಂಡಿಕೇಟ್ ಅನುಮತಿ ನೀಡಲಾಗಿದೆ ಎಂದು ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಮಾಹಿತಿ ನೀಡಿದ್ದಾರೆ.

ಯಾವುದೇ ಅಕ್ರಮಕ್ಕೆ ಅವಕಾಶವಿಲ್ಲದಂತೆ ನೇಮಕಾತಿ ನಿಯಮಾವಳಿ ಪಾಲಿಸಲಾಗುವುದು. ಜೊತೆಗೆ ಪಿಹೆಚ್‌ಡಿ ಅಧ್ಯಯನಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದರೆ ವಿದ್ಯಾರ್ಥಿನಿಯರು ನೇರವಾಗಿ ನನ್ನ ಗಮನಕ್ಕೆ ತರಬಹುದು. ಸೂಕ್ತ ಕ್ರಮಕೈಗೊಳ್ಳಲಾಗುವುದು. ಇದರಾಚೆ ಯಾವುದೇ ಬೇಡಿಕೆಯಿಲ್ಲ, ಇದ್ದರು ಸಹ ನಮ್ಮ ಗಮನಕ್ಕೆ ತರಬೇಕೆಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅಕ್ಕ ಮಹಾದೇವಿ ಮಹಿಳಾ ವಿವಿ ಸಿಬ್ಬಂದಿಯಿಂದ ಲೈಂಗಿಕ ಕಿರುಕುಳ; ದಯಾಮರಣಕ್ಕೆ ಸಂತ್ರಸ್ತೆ ಮನವಿ

ಬೋಧಕೇತರ ಸಿಬ್ಬಂದಿ ನೇಮಕಾತಿ ಹಾಗೂ ಪಿಹೆಚ್​​ಡಿ ಪದವಿ ಪ್ರದಾನ ವಿಚಾರದಲ್ಲಿ ವಿಜಯಪುರದ ಮಹಿಳಾ ವಿವಿ ಮೇಲೆ ಆರೋಪಗಳು ಕೇಳಿಬಂದಿವೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರು ಹಾಗೂ ಕುಲಾಧಿಪತಿಗಳು ಆಗಿರುವ ರಾಜ್ಯಪಾಲರು ಗಮನ ಹರಿಸಬೇಕಿದೆ. ಸತ್ಯಾಸತ್ಯತೆ ಪರಿಶೀಲಿಸಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಗರ್ಭಾವಸ್ಥೆಯಲ್ಲಿ ಹೆಚ್ಚು ಕೋಪ, ಚಿಕ್ಕ ಚಿಕ್ಕ ವಿಷಯಕ್ಕೂ ಸ್ಟ್ರೆಸ್ ತೆಗೆದುಕೊಳ್ಳುತ್ತಿದ್ದರೆ ಈ ಸುದ್ದಿಯನ್ನು ತಪ್ಪದೆ ಓದಿ

ಗರ್ಭಾವಸ್ಥೆ (Pregnancy) ಮಹಿಳೆಯ ಜೀವನದ ಅತ್ಯಂತ ಮಹತ್ವದ ಹಂತವಾಗಿದೆ. ಈ ಸಮಯದಲ್ಲಿ ದೇಹದಲ್ಲಿ ಹಾರ್ಮೋನ್ ಬದಲಾವಣೆಗಳು ವೇಗವಾಗಿ ನಡೆಯುತ್ತವೆ ಎಂಬುದು ತಿಳಿದ ವಿಚಾರ. ಜೊತೆಗೆ ಮಾನಸಿಕ ಒತ್ತಡ, ಆತಂಕ ಮತ್ತು ಭಾವನಾತ್ಮಕ ಬದಲಾವಣೆಗಳು ಸಹ ಸಾಮಾನ್ಯವಾಗಿರುತ್ತವೆ. ಆದರೆ ಗರ್ಭಾವಸ್ಥೆಯಲ್ಲಿ ಹೆಚ್ಚು ಒತ್ತಡ ತೆಗೆದುಕೊಳ್ಳುವುದು ಪದೇ ಪದೇ ಕೋಪ ಮಾಡಿಕೊಳ್ಳುವುದು ಮತ್ತು ಚಿಕ್ಕ ಚಿಕ್ಕ ವಿಷಯಕ್ಕೂ ಸ್ಟ್ರೆಸ್ ತೆಗೆದುಕೊಳ್ಳುವುದರಿಂದ ಗರ್ಭದಲ್ಲಿರುವ ಮಗುವಿನ ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಿದ್ದಾರೆ. ಅಧ್ಯಯನಗಳ ಪ್ರಕಾರ, ದೀರ್ಘಕಾಲ ಮಾನಸಿಕ ಒತ್ತಡದಲ್ಲಿರುವ ಗರ್ಭಿಣಿಯರಲ್ಲಿ ಕೆಲವು ಹಾರ್ಮೋನ್ ಬದಲಾವಣೆಗಳು ಉಂಟಾಗುತ್ತವೆ. ಇದು ತಾಯಿಯ ಆರೋಗ್ಯದ ಜೊತೆಗೆ ಗರ್ಭದಲ್ಲಿರುವ ಮಗುವಿನ ಬೆಳವಣಿಗೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾದರೆ ಸ್ಟ್ರೆಸ್ ಮಗುವಿನ ಮೆದುಳಿನ ಬೆಳವಣಿಗೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ಯಾವ ರೀತಿಯ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು, ಜೊತೆಗೆ ಈ ರೀತಿ ಒತ್ತಡ ಕಡಿಮೆ ಮಾಡಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಗುವಿನ ಮೆದುಳಿನ ಬೆಳವಣಿಗೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ತಜ್ಞರ ಪ್ರಕಾರ, ಗರ್ಭಾವಸ್ಥೆಯಲ್ಲಿ ನಿರಂತರ ಒತ್ತಡದಲ್ಲಿದ್ದರೆ ಮಗುವಿನ ಭಾವನಾತ್ಮಕ ಬೆಳವಣಿಗೆ, ವರ್ತನೆ ಮತ್ತು ಏಕಾಗ್ರತೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕೆಲವು ಮಕ್ಕಳಲ್ಲಿ ಚಿಡಿಚಿಡಿತನ, ಆತಂಕ ಅಥವಾ ಗಮನ ಕೇಂದ್ರೀಕರಿಸುವಲ್ಲಿ ತೊಂದರೆ ಕಾಣಿಸಬಹುದು. ಆದರೆ ಎಲ್ಲಾ ಮಹಿಳೆಯರಿಗೂ ಮತ್ತು ಪ್ರತಿಯೊಂದು ಗರ್ಭಧಾರಣೆಯಲ್ಲೂ ಇದೇ ರೀತಿಯ ಪರಿಣಾಮ ಕಾಣಿಸಿಕೊಳ್ಳುತ್ತದೆ ಎನ್ನುವುದಕ್ಕೆ ಸಾಧ್ಯವಿಲ್ಲ.

ಯಾವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು?

  • ನಿರಂತರ ಆತಂಕ ಅಥವಾ ಭಯ
  • ಹೆಚ್ಚಾಗಿ ಕೋಪ ಅಥವಾ ಚಿಡಿಚಿಡಿತನ
  • ನಿದ್ರೆಯ ಕೊರತೆ
  • ಹೆಚ್ಚು ದುಃಖ ಅಥವಾ ಏಕಾಂಗಿತನ
  • ದೈನಂದಿನ ಕೆಲಸಗಳಲ್ಲಿ ಆಸಕ್ತಿ ಕಡಿಮೆಯಾಗುವುದು

ಈ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ ವೈದ್ಯರು ಅಥವಾ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದು ಉತ್ತಮ.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಯೂರಿನ್ ಇನ್ಫೆಕ್ಷನ್ ಹೆಚ್ಚಾಗುವುದಕ್ಕೆ ಕಾರಣವೇನು? ಇದನ್ನು ತಡೆಗಟ್ಟಲು ಏನು ಮಾಡಬೇಕು ತಿಳಿದುಕೊಳ್ಳಿ

ಒತ್ತಡ ಕಡಿಮೆ ಮಾಡಲು ಏನು ಮಾಡಬೇಕು?

ಗರ್ಭಿಣಿಯರು ಸಾಕಷ್ಟು ವಿಶ್ರಾಂತಿ ಪಡೆಯಬೇಕು ಮತ್ತು ಚೆನ್ನಾಗಿ ನಿದ್ರೆ ಮಾಡಬೇಕು. ಕುಟುಂಬದವರೊಂದಿಗೆ ಮಾತುಕತೆ ನಡೆಸುವುದು ಭಾವನಾತ್ಮಕ ಬೆಂಬಲ ನೀಡುತ್ತದೆ. ಲಘು ವ್ಯಾಯಾಮ, ಧ್ಯಾನ ಮತ್ತು ಸಮತೋಲನ ಆಹಾರ ಮಾನಸಿಕ ಆರೋಗ್ಯವನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ. ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆಯುವುದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಉತ್ತಮವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link