Category Archives: Blog

Your blog category

ಸಿದ್ದರಾಮಯ್ಯ ಬೆನ್ನಲ್ಲೇ ದೆಹಲಿಗೆ ಹೊರಟ ಡಿಸಿಎಂ ಡಿ.ಕೆ. ಶಿವಕುಮಾರ್​​: ಕಾರಣ ಇಲ್ಲಿದೆ

ಬೆಂಗಳೂರು, ಮೇ 28: ಸಿಎಂ ಸ್ಥಾನಕ್ಕೆ ರಾಜೀನಾಮೆ ಬಳಿಕ ಸಿದ್ದರಾಮಯ್ಯ ದೆಹಲಿಗೆ ತೆರಳಿರುವ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ರಾಷ್ಟ್ರ ರಾಜಧಾನಿಯತ್ತ ತೆರಳಿದ್ದಾರೆ. ರಾಜ್ಯ ರಾಜಕೀಯದಲ್ಲಿನ ಪ್ರಮುಖ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರ ಈ ಭೇಟಿ ಮಹತ್ವ ಪಡೆದುಕೊಂಡಿದೆ. ನೂತನ ಮುಖ್ಯಮಂತ್ರಿ ನೇಮಕ, ಅಧಿಕಾರ ಹಂಚಿಕೆ, ಸಚಿವ ಸಂಪುಟ ಪುನಾರಚನೆ ಮತ್ತು ಇತರ ಆಂತರಿಕ ರಾಜಕೀಯ ಚರ್ಚೆಗಳ ಕುರಿತು ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಲು ಅವರು ದೆಹಲಿಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ವೀರೇಂದ್ರ ಪಾಟೀಲರಿಗೆ ಅಪ್ಪ,ಸಿದ್ದರಾಮಯ್ಯಗೆ ಮಗ ಅಪಮಾನ:ಇದ್ದೊಬ್ಬ ಒಬಿಸಿ ಸಿಎಂ ಕೆಳಗಿಸಿದ ಕೈ ಎಂದ ಜೋಶಿ

ಮಂಗಳೂರು, (ಮೇ 28): ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ರಾಜಿನಾಮೆ ಒಬಿಸಿ ವರ್ಗಕ್ಕೆ ರಾಹುಲ್ ಗಾಂಧಿ (Rahul Gandhi) ಕೊಟ್ಟ ಬಳುವಳಿ. ದಿನ ಬೆಳಗಾದರೆ ಒಬಿಸಿ ಎಂದು ಬೊಬ್ಬೆ ಹೊಡೆಯುತ್ತಿದ್ದವರು ಇಂದು ಅದೇ ವರ್ಗದ ಸಿಎಂ ಅನ್ನು ಕೆಳಗಿಳಿಸಿ ಅಪಮಾನಿಸಿದ್ದಾರೆ. ಕಾಂಗ್ರೆಸ್ ಆಡಳಿತದ 4 ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಮೇಲ್ವರ್ಗದವರು ಸಿಎಂ ಇದ್ದಾರೆ. ಕರ್ನಾಟಕದಲ್ಲಿ ಮಾತ್ರ ಒಬಿಸಿ ಸಿಎಂ ಇದ್ದರು. ಈಗ ಇದ್ದೊಬ್ಬ ಒಬಿಸಿ ಸಿಎಂ ಅನ್ನು ಕಾಂಗ್ರೆಸ್ ಅಸ್ಥಿರಗೊಳಿಸಿದೆ ಎಂದು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ( Pralhad joshi) ಟೀಕಿಸಿದ್ದಾರೆ.

ಮುಖ್ಯಾಂಶಗಳು

  • ಸಿದ್ದರಾಮಯ್ಯ ರಾಜೀನಾಮೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯೆ
  •  ಇದ್ದೊಬ್ಬ ಒಬಿಸಿ ಮುಖ್ಯಮಂತ್ರಿಯನ್ನು ಕಾಂಗ್ರೆಸ್ ಕೆಳಗಿಳಿಸಿದ ಎಂದ ಜೋಶಿ
  •  ನೆಪಕ್ಕಷ್ಟೇ ಒಬಿಸಿ ಜಪಿಸುವ ಕಾಂಗ್ರೆಸ್; ಅರಾಜಕತೆ, ಅಸ್ಥಿರತೆಯೇ ಗ್ಯಾರೆಂಟಿ
  •  ಸಿದ್ದರಾಮಯ್ಯ ರಾಜ್ಯದ ಆರ್ಥಿಕತೆ ಹದಗೆಡಿಸಿ ಹೈ ಕಮಾಂಡ್ ಗೆ ATM ಆಗಿದ್ದ ಎಂದು ಕಿಡಿ

ಮಂಗಳೂರಿನಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡುವಾಗ ಸಿಎಂ ಸಿದ್ದರಾಮಯ್ಯ ಅವರ ರಾಜಿನಾಮೆ ಬಗ್ಗೆ ಪ್ರತಿಕ್ರಿಯಿಸಿದ ಪ್ರಹ್ಹಾದ್ ಜೋಶಿ, ಕಾಂಗ್ರೆಸ್ ಪಕ್ಷ ನೆಪಕ್ಕಷ್ಟೇ ಒಬಿಸಿ ಜಪ ಮಾಡುತ್ತದೆ. ಆದರೆ, ನಡೆದುಕೊಳ್ಳುವ ರೀತಿಯೇ ಬೇರೆ. ಒಬಿಸಿ ವರ್ಗದವರನ್ನು ಯಾವತ್ತೂ ಕಡೆಗಣಿಸುತ್ತಲೇ ಇದೆ ಎಂದು ಕಿಡಿಕಾರಿದರು.

ಇದನ್ನೂ ನೋಡಿ: ಕರುನಾಡ ಜನತೆಗೆ ಕೈ ಮುಗಿದ ಸಿದ್ದರಾಮಯ್ಯ ಪೋಸ್ಟ್ ನಲ್ಲೇನಿದೆ?

ವೀರೇಂದ್ರ ಪಾಟೀಲರಿಗೆ ಅಪ್ಪ, ಸಿದ್ದರಾಮಯ್ಯರಿಗೆ ಮಗ ಅಪಮಾನ

ಅಪ್ಪ ರಾಜೀವ್ ಗಾಂಧಿ ಅಂದು ವೀರೇಂದ್ರ ಪಾಟೀಲರನ್ನು ನಡೆಸಿಕೊಂಡಂತೆ ಮಗ ರಾಹುಲ್ ಗಾಂಧಿ ಇಂದು ಸಿದ್ದರಾಮಯ್ಯ ಅವರನ್ನು ನಡೆಸಿಕೊಂಡಿದ್ದಾರೆ. ರಾಜೀವ್ ಗಾಂಧಿ ವೀರೇಂದ್ರ ಪಾಟೀಲರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಅಪಮಾನಿಸಿದ್ದರು. ಅಂತೆಯೇ ಮಗ ರಾಹುಲ್ ಗಾಂಧಿ ಸಹ ಸಿದ್ದರಾಮಯ್ಯರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಿ ಅವಮಾನಿಸಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.

 ಆರ್ಥಿಕತೆ ಹದಗೆಡಿಸಿ, ಹೈ ಕಮಾಂಡ್ ಗೆ ATM ಆಗಿದ್ರು

ಅರಾಜಕತೆ, ಅಸ್ಥಿರತೆ, ಅವಿಶ್ವಾಸ, ಗೊಂದಲದ ವಾತಾವರಣವೇ ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ. ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಿಂದ ಆಂತರಿಕ ಗೊಂದಲ, ಅರಾಜಕತೆ, ಅಸ್ಥಿರತೆ ಪರಾಕಾಷ್ಠೆ ತಲೆದೋರಿದೆ. ಕಾಂಗ್ರೆಸ್ ಒಂದು ಅರಾಜಕತೆಯ ಪಕ್ಷ . ಸಿದ್ದರಾಮಯ್ಯ ಅವರು ವಿದಾಯ ಭಾಷಣದಲ್ಲಿ ರಾಜ್ಯದ ಸಂಪತ್ತು ‌ಬರಿದಾಗಿದ್ದನ್ನು ಪ್ರಸ್ತಾಪಿಸುತ್ತ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದ ಜೋಶಿ, ಅವೈಜ್ಞಾನಿಕ ಗ್ಯಾರೆಂಟಿ ಯೋಜನೆಗಳು ಮತ್ತು ಹೈಕಮಾಂಡ್ ಅನ್ನು ತೃಪ್ತಿಪಡಿಸಲು ಹೋಗಿ ರಾಜ್ಯದ ಆರ್ಥಿಕತೆಯನ್ನು ಹದಗೆಡಿಸಿದರು ಎಂದು ತಿರುಗೇಟು ನೀಡಿದರು.

ರಾಜ್ಯದಲ್ಲಿ ಬಹುತೇಕ ವಸ್ತುಗಳ ಬೆಲೆ ಏರಿಸಿ ಆರ್ಥಿಕತೆಯನ್ನು ತೂಗಿಸಲು ಸರ್ಕಸ್ ಮಾಡಿದ ಸಿದ್ದರಾಮಯ್ಯ ಅವರು, ಅಭಾವವಿಲ್ಲದ ಸಮಯದಲ್ಲೂ ಮೂರು ಬಾರಿ ಇಂಧನದ ಬೆಲೆ ಏರಿಸಿ ಜನಜೀವನ ದುಬಾರಿ ಮಾಡಿದರೆ, ಕಾಂಗ್ರೆಡ್ ಹೈ ಕಮಾಂಡ್, ರಾಹುಲ್ ಗಾಂಧಿ ಸಿದ್ದರಾಮಯ್ಯರನ್ನು ATM ರೀತಿ ಬಳಸಿಕೊಂಡಿತು ಎಂದು ದೂರಿದರು.

ವಿಬಿಜಿ ರಾಮ್ ಜಿ, ಜಲಜೀವನ ಮಿಷನ್, 15ನೇ ಹಣಕಾಸು ಆರ್ಥಿಕ ನೆರವು, ಜಿ ಎಸ್ ಟಿ ಸೇರಿದಂತೆ ಕೇಂದ್ರ ಸರ್ಕಾರದ ಆರ್ಥಿಕ ನೆರವುಗಳ ಬಗ್ಗೆ ಕೂಲಕುಂಶ ಮಾಹಿತಿ ನೀಡಿದ್ದಲ್ಲದೆ, ಹಣ ಬಿಡುಗಡೆ ಆಗಿರುವ ಬಗ್ಗೆ ಹಲವು ಬಾರಿ ಕೇಂದ್ರ ಸ್ಪಷ್ಟಪಡಿಸಿದೆ. ಹಾಗಿದ್ದರೂ ಕೇಂದ್ರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಸಚಿವ ಪ್ರಲ್ಹಾದ ಜೋಶಿ ಕಿಡಿಕಾರಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಮ ಆಡಳಿತ ಸುವರ್ಣಾಕ್ಷರಗಳಲ್ಲಿ ಉಳಿಯಲಿದೆ: ಸಿದ್ದರಾಮಯ್ಯ ಗುಣಗಾನ ಮಾಡಿದ ವೇಣುಗೋಪಾಲ್​​

ಸಿದ್ದರಾಮಯ್ಯ ಗುಣಗಾನ ಮಾಡಿದ ವೇಣುಗೋಪಾಲ್​​Image Credit source: Tv9 Kannada

ಬೆಂಗಳೂರು, ಮೇ 28: ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ರಾಜೀನಾಮೆ ನೀಡಿದ್ದು, ಆ ಬೆನ್ನಲ್ಲೇ ಹೈಕಮಾಂಡ್​​ ಭೇಟಿಗಾಗಿ ದೆಹಲಿಗೆ ತೆರಳಿದ್ದಾರೆ. ವಿಶೇಷ ಅಂದ್ರೆ ನಾಯಕತ್ವ ಬದಲಾವಣೆ ಸಂದರ್ಭದಲ್ಲಿಯೂ ರಾಜ್ಯ ನಾಯಕರು ಒಗ್ಗಟ್ಟಿನ ಸಂದೇಶ ಸಾರಿರೋದು ವಿಪಕ್ಷಗಳ ಹುಬ್ಬೇರಿಸಿದೆ. ಉಪಹಾರ ಕೂಟದಿಂದ ಹಿಡಿದು ರಾಜಭವನದಲ್ಲಿ ಸಿದ್ದರಾಮಯ್ಯ ರಾಜೀನಾಮೆ ಪತ್ರ ನೀಡುವವರೆಗೂ ಡಿಸಿಎಂ ಡಿಕೆಶಿ ಮತ್ತು ಸಿಎಂ ಸಿದ್ದರಾಮಯ್ಯ ಒಟ್ಟಾಗಿಯೇ ಕಾಣಿಸಿಕೊಂಡಿದ್ದಾರೆ. ಈ ಕುರಿತು ಎಕ್ಸ್​​ ಪೋಸ್ಟ್​​ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​​ ಸ್ವಾರ್ಥಕ್ಕಿಂತ ಪಕ್ಷ, ಅಧಿಕಾರಕ್ಕಿಂತ ಜನ, ಕಾಂಗ್ರೆಸ್‌ಗೆ ಪಕ್ಷವೇ ಕುಟುಂಬ, ಜನರೇ ಧ್ಯೇಯ ಎಂದು ಬರೆದುಕೊಂಡಿದ್ದಾರೆ.

ವೇಣುಗೋಪಾಲ್​​ ಪೋಸ್ಟ್​​ನಲ್ಲಿ ಏನಿದೆ?

ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ನೀಡಿದ ಅದ್ಭುತ ಆಡಳಿತ ಅವಧಿಯ ಬಗ್ಗೆ ನಾವು ಎಲ್ಲರೂ ಅಪಾರ ಹೆಮ್ಮೆ ಹೊಂದಿದ್ದೇವೆ. ಅವರ ನಾಯಕತ್ವದಲ್ಲಿ ಕರ್ನಾಟಕವು ಕಾಗದದ ಮಟ್ಟದಲ್ಲೇ ಉಳಿಯದ ಪರಿವರ್ತನಾ ಅಭಿವೃದ್ಧಿಯನ್ನು ಕಂಡಿದ್ದು, ಸಮಾಜದ ಅಂಚಿನಲ್ಲಿರುವ ಪ್ರತಿಯೊಬ್ಬ ಕನ್ನಡಿಗನ ಬದುಕಿಗೂ ಸ್ಪರ್ಶಿಸಿದೆ. ಸರಳ ಕೃಷಿಕ ಕುಟುಂಬದ ಹಿನ್ನೆಲೆಯಿಂದ ಹೊರಹೊಮ್ಮಿ, ತಮ್ಮ ತತ್ವನಿಷ್ಠೆ, ಜನಪರ ಬದ್ಧತೆ ಮತ್ತು ಆಡಳಿತ ಜಾಣ್ಮೆಯ ಬಲದಿಂದ ರಾಜ್ಯದ ಅತ್ಯುನ್ನತ ಹುದ್ದೆ ತಲುಪಿದ ನಾಯಕ ಸಿದ್ದರಾಮಯ್ಯ. ಬಡವರು, ಹಿಂದುಳಿದವರು ಹಾಗೂ ಸಮಾಜದ ಅಂಚಿನ ವರ್ಗಗಳ ಸಬಲೀಕರಣಕ್ಕಾಗಿ ಮಾಡಿದ ಕಾರ್ಯಗಳಿಂದ ಅವರ ಆಡಳಿತ ಇತಿಹಾಸದಲ್ಲಿ ಚಿನ್ನದ ಅಕ್ಷರಗಳಲ್ಲಿ ಉಳಿಯಲಿದೆ.

ಇದನ್ನೂ ಓದಿ: ಪ್ರಮಾಣವಚಕ್ಕೆ ಸಿದ್ಧತೆ; ಜ್ಯೋತಿಷಿ ಬಳಿ ಮುಹೂರ್ತ ಕೇಳಿದ ಡಿಕೆ ಶಿವಕುಮಾರ್

ಇಂದು ಪಕ್ಷದ ಹಿತದೃಷ್ಟಿಯಿಂದ ಅವರು ತೆಗೆದುಕೊಂಡ ನಿಸ್ವಾರ್ಥ ನಿರ್ಧಾರವನ್ನು ಕಾಂಗ್ರೆಸ್ ಅತ್ಯಂತ ಗೌರವದಿಂದ ಸ್ವಾಗತಿಸುತ್ತದೆ. ಅವರು ತೋರಿದ ಗೌರವಯುತ ಹಾಗೂ ಪ್ರೌಢ ನಡೆ, ಸಾರ್ವಜನಿಕ ಜೀವನದಲ್ಲಿರುವ ನಾಯಕರು ಹೇಗೆ ವರ್ತಿಸಬೇಕು ಎಂಬುದಕ್ಕೆ ಮಾದರಿಯಾಗಿದೆ. ಅವರ ಮುಂದಿನ ರಾಜಕೀಯ ಹಾಗೂ ಸಾರ್ವಜನಿಕ ಜೀವನಕ್ಕೆ ನಮ್ಮ ಹಾರೈಕೆಗಳು. ಕಾಂಗ್ರೆಸ್ ಪಕ್ಷದ ಅಮೂಲ್ಯ ನಾಯಕರಾಗಿ, ಅವರ ಜ್ಞಾನ ಮತ್ತು ಅನುಭವ ನಮ್ಮ ರಾಜಕೀಯ ಪಯಣದಲ್ಲಿ ಸದಾ ಅಪ್ರತಿಮವಾಗಿಯೇ ಉಳಿಯಲಿದೆ ಎಂದು ವೇಣುಗೋಪಾಲ್​ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

IPL 2026: ಯಶಸ್ವಿ ಜೈಸ್ವಾಲ್ ರಾಜಸ್ಥಾನ್ ರಾಯಲ್ಸ್ ತಂಡ ತೊರೆಯಲಿ

ರಾಜಸ್ಥಾನ್ ರಾಯಲ್ಸ್ (RR) ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಮಣಿಸುವ ಮೂಲಕ ಐಪಿಎಲ್ 2026 (IPL 2026) ರ ಎರಡನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದುಕೊಂಡಿದೆ. ರಾಜಸ್ಥಾನ್ ತಂಡದ ಈ ಗೆಲುವಿನಲ್ಲಿ ಯುವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರ ಸಿಡಿಲಬ್ಬರದ 97 ರನ್​ಗಳ ಇನ್ನಿಂಗ್ಸ್ ಪ್ರಮುಖ ಪಾತ್ರವಹಿಸಿತು. ಇದೀಗ ರಾಜಸ್ಥಾನ್ ತಂಡ ಫೈನಲ್​ಗೇರಬೇಕೆಂದರೆ ಇದೀಗ ಕ್ವಾಲಿಫೈಯರ್ 2 ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಬೇಕಿದೆ. ಈ ಪಂದ್ಯದಲ್ಲೂ ವೈಭವ್ ಅಬ್ಬರಿಸಿದರೆ ತಂಡಕ್ಕೆ ಗೆಲುವು ಖಚಿತ. ಇದರ ನಡುವೆ ಅದೇ ರಾಜಸ್ಥಾನ್ ತಂಡದ ಮತ್ತೊಬ್ಬ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಮುಂದಿನ ಆವೃತ್ತಿಯಲ್ಲಿ ತಂಡ ಬದಲಿಸಿದರೆ ಅವರಿಗೆ ಉಳಿಗಾಲ, ಇಲ್ಲದಿದ್ದರೆ ಅವರಿಗೆ ಸಿಗುವ ಸ್ಥಾನಮಾನ ಸಿಗುವುದಿಲ್ಲ ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ಅಂಬಟಿ ರಾಯುಡು ಸಲಹೆ ನೀಡಿದ್ದಾರೆ.

ಈ ಆವೃತ್ತಿಯ ಉದ್ದಕ್ಕೂ, ವೈಭವ್ ಸೂರ್ಯವಂಶಿ ಉತ್ತಮ ಪ್ರದರ್ಶನವನ್ನು ನೀಡಿ ತಂಡಕ್ಕೆ ಸ್ಫೋಟಕ ಆರಂಭವನ್ನು ಒದಗಿಸಿದ್ದಾರೆ. ಇದರಿಂದ ಎಲ್ಲರ ಗಮನ ವೈಭವ್ ಸೂರ್ಯವಂಶಿ ಮೇಲೆಯೇ ಇದೆ. ಆದರೆ ವೈಭವ್ ಬರುವುದಕ್ಕೂ ಮುನ್ನ ರಾಜಸ್ಥಾನ್ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿಕೊಡುತ್ತಿದ್ದ ಯಶಸ್ವಿ ಇದೀಗ ಜನಮನದಿಂದ ಕಾಣೆಯಾಗಿರುವಂತೆ ತೋರುತ್ತಿದೆ.

ನೆರಳಿನಲ್ಲಿ ಉಳಿಯಲು ಸಾಧ್ಯವಿಲ್ಲ

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ನಂತರ, ಇಎಸ್‌ಪಿಎನ್-ಕ್ರಿಕ್‌ಇನ್ಫೋದಲ್ಲಿ ಜೈಸ್ವಾಲ್ ಬಗ್ಗೆ ಇದೇ ರೀತಿಯ ಹೇಳಿಕೆ ನೀಡಿದ ರಾಯುಡು, ಯಶಸ್ವಿ ಜೈಸ್ವಾಲ್ ತಂಡವನ್ನು ಬದಲಾಯಿಸಬೇಕು. ಯಶಸ್ವಿ ತಮ್ಮ ಆಟವನ್ನು ಬದಲಾಯಿಸುವ ಅಗತ್ಯವಿಲ್ಲ. ಸೂರ್ಯವಂಶಿಯೊಂದಿಗೆ ಬ್ಯಾಟಿಂಗ್ ಮಾಡುವ ಮೂಲಕ ಅವರ ನೆರಳಿನಲ್ಲಿ ಉಳಿಯಲು ಸಾಧ್ಯವಿಲ್ಲ. ಅವರು ಸ್ವತಃ ಒಬ್ಬ ಸ್ಟಾರ್ ಆಟಗಾರ. ಅವರು ಬೇರೆ ತಂಡಕ್ಕೆ ಹೋದರೆ, ಅವರು ಏಕಾಂಗಿಯಾಗಿ ಪಂದ್ಯಗಳನ್ನು ಗೆದ್ದುಕೊಡುತ್ತಾರೆ. ಅವರಿಗೆ ಇನ್ನೊಂದು ವೇದಿಕೆ ಬೇಕು. ಅದು ಸಾಧ್ಯವಾದರೆ, ಜೈಸ್ವಾಲ್ ಇತರ ಆಟಗಾರರನ್ನು ಮೀರಿಸುತ್ತಾರೆ.

ಮುಂಬೈ ಇಂಡಿಯನ್ಸ್ ಉತ್ತಮ ತಂಡ

ಜೈಸ್ವಾಲ್ ಯಾವ ತಂಡವನ್ನು ಸೇರಬೇಕು ಎಂಬುದನ್ನು ತಿಳಿಸಿರುವ ರಾಯುಡು, ‘ಜೈಸ್ವಾಲ್​ಗೆ ಮುಂಬೈ ಇಂಡಿಯನ್ಸ್ ಉತ್ತಮ ತಂಡವಾಗಿದೆ. ಏಕೆಂದರೆ ಅವರು ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ಪರ ಆಡುತ್ತಾರೆ. ಈ ತಂಡ ಅವರಿಗೆ ಮನೆಯಂತೆ ಭಾಸವಾಗುತ್ತದೆ ಮತ್ತು ಸ್ಥಳೀಯ ಅಭಿಮಾನಿಗಳಿಂದ ಅವರಿಗೆ ಉತ್ತಮ ಬೆಂಬಲ ಸಿಗುತ್ತದೆ. ಅವರು ಈಗಾಗಲೇ ವಾಂಖೆಡೆ ಕ್ರೀಡಾಂಗಣದಲ್ಲಿ ಹಲವಾರು ಉತ್ತಮ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಇದಲ್ಲದೆ, ರೋಹಿತ್ ಶರ್ಮಾ ಅವರ ಫಿಟ್‌ನೆಸ್ ಮತ್ತು ಫಾರ್ಮ್ ಅನ್ನು ಗಮನಿಸಿದರೆ, ಮುಂಬೈಗೆ ಯುವ ಭಾರತೀಯ ಆರಂಭಿಕ ಆಟಗಾರನ ಅಗತ್ಯವಿರಬಹುದು. ಇದನ್ನು ಗಮನಿಸಿದರೆ ಜೈಸ್ವಾಲ್‌ಗಿಂತ ಉತ್ತಮ ಆಯ್ಕೆ ಇಲ್ಲ ಎಂದು ರಾಯುಡು ಅಭಿಪ್ರಾಯಪಟ್ಟಿದ್ದಾರೆ.

MI vs RR: ಮೊದಲ ಓವರ್​ನಲ್ಲಿ ಸಿಕ್ಸರ್; ರೋಹಿತ್ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್

ರಾಜಸ್ಥಾನ ಪರ ಜೈಸ್ವಾಲ್ ದಾಖಲೆ

ಈ ಆವೃತ್ತಿಯಲ್ಲಿ ಜೈಸ್ವಾಲ್ ಅವರ ಪ್ರದರ್ಶನವು ಕಳೆದ ಸೀಸನ್​ಗೆ ಹೋಲಿಸಿದರೆ ಸ್ವಲ್ಪ ನೀರಸವಾಗಿದೆ. ಆದಾಗ್ಯೂ, ಅವರು ರಾಜಸ್ಥಾನ ಪರ ಕೆಲವು ನಿರ್ಣಾಯಕ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಐಪಿಎಲ್ 2026 ರಲ್ಲಿ ಇಲ್ಲಿಯವರೆಗೆ, ಜೈಸ್ವಾಲ್ 15 ಪಂದ್ಯಗಳಲ್ಲಿ 426 ರನ್ ಗಳಿಸಿದ್ದು, ಸರಾಸರಿ 32.77 ಮತ್ತು 153.23 ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇನ್ನು ಅವರ ಒಟ್ಟಾರೆ ಐಪಿಎಲ್ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ, ಜೈಸ್ವಾಲ್ 2020 ರಿಂದ ರಾಜಸ್ಥಾನದ ಭಾಗವಾಗಿದ್ದ್ದು, ಈ ಫ್ರಾಂಚೈಸಿ ಪರ 82 ಪಂದ್ಯಗಳನ್ನು ಆಡಿದ್ದು, ಎರಡು ಶತಕಗಳು ಮತ್ತು 18 ಅರ್ಧಶತಕಗಳು ಸೇರಿದಂತೆ 2,592 ರನ್ ಗಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ, ಧೋ ಅಂತ ಸುರಿಯುತ್ತಿದೆ ಮಳೆ!: ಆಫೀಸ್ ಮುಗಿಸಿ ಬರುವ ಉದ್ಯೋಗಿಗಳೇ ಎಚ್ಚರ

ಬೆಂಗಳೂರು, ಮೇ,28: ರಾಜಧಾನಿ ಬೆಂಗಳೂರಿನ ಜನತೆಗೆ ಹವಾಮಾನ ಇಲಾಖೆ (IMD) ನೀಡಿದ್ದ ‘ಯೆಲ್ಲೋ ಅಲರ್ಟ್’ ಮುನ್ಸೂಚನೆ ಅಕ್ಷರಶಃ ನಿಜವಾಗಿದೆ. ಇದೀಗ ಸಿಲಿಕಾನ್ ಸಿಟಿಯಾದ್ಯಂತ ಹವಾಮಾನ ಸಂಪೂರ್ಣ ತಲೆಕೆಳಗಾಗಿದ್ದು, ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬೀಸಿದ ಭೀಕರ ಧೂಳಿನ ಬಿರುಗಾಳಿ (Gusty Winds) ಮತ್ತು ಗುಡುಗು-ಮಿಂಚಿನ ಆರ್ಭಟದೊಂದಿಗೆ ಧಾರಾಕಾರ ಮಳೆ ಆರಂಭವಾಗಿದೆ. ಮಧ್ಯಾಹ್ನದವರೆಗೆ ಉರಿ ಬಿಸಿಲಿನಿಂದ ಕಂಗಾಲಾಗಿದ್ದ ಬೆಂಗಳೂರಿನಲ್ಲಿ ಸಂಜೆ 6 ಗಂಟೆಯ ನಂತರ ದಿಢೀರ್ ಆಗಿ ಕಪ್ಪು ಮೋಡಗಳು ಆವರಿಸಿದವು. ಬಿರುಗಾಳಿಯ ತೀವ್ರತೆ ಎಷ್ಟಿತ್ತೆಂದರೆ ವಾಹನ ಸವಾರರಿಗೆ ರಸ್ತೆ ಸರಿಯಾಗಿ ಕಾಣಿಸದಷ್ಟು (Reduced Visibility) ಧೂಳು ಆವರಿಸಿತ್ತು. ಅದರ ಬೆನ್ನಲ್ಲೇ ಮೆಜೆಸ್ಟಿಕ್, ಕಾರ್ಪೊರೇಷನ್, ಎಂ.ಜಿ. ರಸ್ತೆ, ಯಶವಂತಪುರ, ಇಂದಿರಾನಗರ, ವೈಟ್‌ಫೀಲ್ಡ್, ಜಯನಗರ ಮತ್ತು ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ನಗರದ ಬಹುತೇಕ ಎಲ್ಲಾ ಭಾಗಗಳಲ್ಲಿ ಮಳೆ ಸುರಿಯುತ್ತಿದೆ.

ಕಛೇರಿ ಮುಗಿಸಿ ಮನೆಗೆ ಮರಳುತ್ತಿದ್ದ ಸಾರ್ವಜನಿಕರು ಮತ್ತು ದ್ವಿಚಕ್ರ ವಾಹನ ಸವಾರರು ದಿಢೀರ್ ಮಳೆಗೆ ಸಿಲುಕಿ ರಸ್ತೆ ಬದಿಯಲ್ಲಿ ಆಶ್ರಯ ಪಡೆದಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ಹರಿಯುತ್ತಿರುವುದರಿಂದ ಹೆದ್ದಾರಿ ಹಾಗೂ ಫ್ಲೈಓವರ್‌ಗಳ ಮೇಲೆ ಭಾರಿ ಸಂಚಾರ ದಟ್ಟಣೆ (Traffic Jam) ಉಂಟಾಗಿದೆ. ಬಿರುಗಾಳಿಯ ರಭಸಕ್ಕೆ ನಗರದ ಕೆಲವು ಭಾಗಗಳಲ್ಲಿ ಮರದ ರೆಂಬೆಗಳು ಮುರಿದು ಬಿದ್ದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬೆಸ್ಕಾಂ (BESCOM) ಹಲವು ಏರಿಯಾಗಳಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದೆ.

ಇದನ್ನೂ ಓದಿ: ನಾಳೆಯಿಂದ 3 ದಿನ ರಾಜ್ಯಾದ್ಯಂತ ಭಾರಿ ಗುಡುಗು, ಸಿಡಿಲು ಸಹಿತ ಮಳೆ; ಈ ಜಿಲ್ಲೆಗಳಿಗೆ ಆರೆಂಜ್‌ – ಯೆಲ್ಲೋ ಅಲರ್ಟ್

ಹವಾಮಾನ ಇಲಾಖೆಯ ಪ್ರಕಾರ, ಮುಂದಿನ 2 ರಿಂದ 3 ಗಂಟೆಗಳ ಕಾಲ ಮಳೆಯ ಆರ್ಭಟ ಹೀಗೆಯೇ ಮುಂದುವರಿಯಲಿದ್ದು, ಸಾರ್ವಜನಿಕರು ಅನಗತ್ಯವಾಗಿ ರಸ್ತೆಗೆ ಇಳಿಯದಂತೆ ಮತ್ತು ಜಾಗರೂಕರಾಗಿರುವಂತೆ ಬಿಬಿಎಂಪಿ (BBMP) ಹಾಗೂ ಟ್ರಾಫಿಕ್ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ದಿ ಕೇರಳ ಸ್ಟೋರಿ 2’ ನಿರ್ದೇಶಕನ ಹೊಸ ಸಿನಿಮಾ ‘ಶ್ರೀ ರಾಮ್ ಭೂಮಿ’

ಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆಯಾದ ಜೀ ಸ್ಟುಡಿಯೋಸ್ (Zee Studios) ತನ್ನ ಮುಂದಿನ ಮಹತ್ವಾಕಾಂಕ್ಷೆಯ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದೆ. ‘ಶ್ರೀ ರಾಮ್ ಭೂಮಿ’ (Shri Ram Bhoomi) ಎಂದು ಹೆಸರಿಡಲಾಗಿರುವ ಈ ಹೊಸ ಸಿನಿಮಾದ ಪ್ರಕಟಣೆಯನ್ನು ಸಂಸ್ಥೆಯು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಶೀರ್ಷಿಕೆಯ ಕಾರಣದಿಂದಾಗಿ ಈ ಸಿನಿಮಾ ಬಗ್ಗೆ ತೀವ್ರ ಕುತೂಹಲ ಮೂಡಿದೆ. ಈ ಬಿಗ್ ಬಜೆಟ್ ಚಿತ್ರದಲ್ಲಿ ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ (Anupam Kher) ಅವರು ಪ್ರಮುಖ ಪಾತ್ರ ಮಾಡಲಿದ್ದಾರೆ.

ಅನುಪಮ್ ಖೇರ್ ಜೊತೆ ರಿತ್ವಿಕ್ ಭೌಮಿಕ್, ಅಮೃತಾ ಖಾನ್ವಿಲ್ಕರ್ ಕೂಡ ‘ಶ್ರೀ ರಾಮ್ ಭೂಮಿ’ ಸಿನಿಮಾದಲ್ಲಿ ನಟಿಸಲಿದ್ದಾರೆ. ಇತ್ತೀಚೆಗಷ್ಟೇ ಸದ್ದು ಮಾಡಿದ್ದ ‘ದಿ ಕೇರಳ ಸ್ಟೋರಿ 2’ ಚಿತ್ರದ ನಿರ್ದೇಶಕ ಕಾಮಾಕ್ಯ ನಾರಾಯಣ್ ಸಿಂಗ್ ಅವರು ಈಗ ಈ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಹಲವು ನಿರ್ಮಾಪಕರು ಜೊತೆಯಾಗಿ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.

ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರಿಗೆ ‘ಶ್ರೀ ರಾಮ್ ಭೂಮಿ’ ಸಿನಿಮಾ ಮಹತ್ವ ಮಹತ್ವದ್ದಾಗಿದೆ. ಇದು ಅವರ ಚಿತ್ರಜೀವನದಲ್ಲಿ ಒಂದು ಮೈಲಿಗಲ್ಲಾಗಲಿದೆ. ಅವರು ನಟನೆ 552ನೇ ಚಿತ್ರ ಇದಾಗಿದೆ. ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ಅನುಪಮ್ ಕೇರ್ ಅವರು ಸಿನಿಮಾ ಬಗ್ಗೆ ತಮಗೆ ಇರುವ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ.

ಈ ಚಿತ್ರದ ಕಥೆಯು ಸಾಂಸ್ಕೃತಿಕ ಮತ್ತು ಭಾವನಾತ್ಮಕವಾಗಿ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ವಿವರಿಸಿರುವ ಖೇರ್, ‘ತಲೆಮಾರುಗಳನ್ನು ದಾಟಿ ನಿಲ್ಲುವಂತಹ ಅತ್ಯಂತ ಪ್ರಮುಖವಾದ ಕಥೆಯನ್ನು ಈ ಸಿನಿಮಾ ಹೇಳುತ್ತದೆ. ಸತ್ಯ, ನಂಬಿಕೆಯ ಪರಿಕಲ್ಪನೆಯಲ್ಲಿ ಬೇರೂರಿರುವ ಈ ಅದ್ಭುತ ಚಿತ್ರದ ಭಾಗವಾಗಲು ನನಗೆ ಹೆಮ್ಮೆಯಾಗುತ್ತಿದೆ’ ಎಂದು ಅನುಪಮ್ ಖೇರ್ ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಪ್ರತಿ ಸಿನಿಮಾದ ಸಂಭಾವನೆಯಲ್ಲಿ ತಮ್ಮ ಗುರುವಿಗೆ 25 ಸಾವಿರ ಕೊಡ್ತಾರೆ ಅನುಪಮ್ ಖೇರ್

ಸದ್ಯಕ್ಕೆ ಚಿತ್ರದ ಕಥೆಯ ಸಂಪೂರ್ಣ ವಿವರಗಳನ್ನು ಚಿತ್ರತಂಡ ರಹಸ್ಯವಾಗಿಟ್ಟಿದೆ. ಆದಾಗ್ಯೂ, ಜೀ ಸ್ಟುಡಿಯೋಸ್ ಮತ್ತು ಅನುಪಮ್ ಖೇರ್ ಅವರ ಹೇಳಿಕೆಗಳನ್ನು ಗಮನಿಸಿದರೆ, ಇದೊಂದು ಆಧ್ಯಾತ್ಮಿಕ ಹಾಗೂ ಸಾಮಾಜಿಕವಾಗಿ ಅತ್ಯಂತ ಪ್ರಭಾವಶಾಲಿಯಾದ ಕಥೆಯನ್ನು ಒಳಗೊಂಡ ಸಿನಿಮಾ ಆಗಿರಲಿದೆ ಎಂಬ ಸುಳಿವು ಸಿಗುತ್ತಿದೆ. ಚಿತ್ರದ ಅಧಿಕೃತ ಪ್ರಕಟಣೆ ಹೊರಬಿದ್ದಿರುವುದರಿಂದ ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದ್ದು, ಬಿಡುಗಡೆಯ ದಿನಾಂಕ ಮತ್ತು ಉಳಿದ ತಾರಾಗಣದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬರಲು ಸಿನಿಪ್ರೇಕ್ಷಕರು ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮುಜರಾಯಿ ದೇಗುಲಗಳ ಆದಾಯಕ್ಕೆ ಬೂಸ್ಟ್​​ ಕೊಟ್ಟ ಶಕ್ತಿ ಯೋಜನೆ: ಭಕ್ತರ ಜೊತೆ ಕಾಣಿಕೆ ಸಂಗ್ರಹವೂ ಹೆಚ್ಚಳ

ಬೆಂಗಳೂರು, ಮೇ 28: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯ ಪರಿಣಾಮ ರಾಜ್ಯದ ಮುಜರಾಯಿ ದೇಗುಲಗಳಲ್ಲಿನ ಆದಾಯದಲ್ಲಿ ಗಣನೀಯ ಹೆಚ್ಚಳ ಆಗಿರುವುದು ಕಂಡುಬಂದಿದೆ. ಈ ಯೋಜನೆಯಡಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಸಿಗುತ್ತಿರುವ ಕಾರಣ ದೇಗುಲಗಳಿಗೆ ಬರುತ್ತಿರುವ ಭಕ್ತರ ಸಂಖ್ಯೆ ಹಡೆಚ್ಚಿದೆ. ಹೀಗಾಗಿ ಆದಾಯವೂ ಏರಿಕೆ ಕಾಣುತ್ತಿದೆ ಎನ್ನಲಾಗಿದೆ.

ಆದಾಯದಲ್ಲಿ ಗಮನಾರ್ಹ ಹೆಚ್ಚಳ

ವಿಶೇಷವಾಗಿ ಮಹಿಳೆಯರು ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವ ಪರಿಣಾಮ, ರಾಜ್ಯದ ಪ್ರಮುಖ 15 ದೇವಸ್ಥಾನಗಳ ಆದಾಯದಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ಬೆಂಗಳೂರಿನ ಬನಶಂಕರಿ ದೇವಸ್ಥಾನ ಹಾಗೂ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಹಲವು ದೇವಾಲಯಗಳಲ್ಲಿನ ಕಾಣಿಕೆ ಸಂಗ್ರಹದಲ್ಲಿ ಏರಿಕೆಯಾಗಿದೆ. 2025-26ನೇ ಸಾಲಿನಲ್ಲಿ ಈ ದೇವಸ್ಥಾನಗಳ ಒಟ್ಟು ಆದಾಯ 613.5 ಕೋಟಿಯಿಂದ 666.2 ಕೋಟಿಗೆ ಏರಿಕೆಯಾಗಿ, ಶೇಕಡಾ 8.6ರಷ್ಟು ಹೆಚ್ಚಳ ಕಂಡಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳ ಪರಿಷ್ಕರಣೆಗೆ ನಿರ್ಧರಿಸಿದ ರಾಜ್ಯ ಸರ್ಕಾರ

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಮೂರು ವರ್ಷಗಳ ಹಿಂದೆ ಆರಂಭವಾದ ಶಕ್ತಿ ಯೋಜನೆ ರಾಜ್ಯದ ಯಾತ್ರಾ ಪ್ರವಾಸೋದ್ಯಮಕ್ಕೆ ಮಹತ್ವದ ಉತ್ತೇಜನ ನೀಡಿದೆ. ಮಹಿಳೆಯರು ಪ್ರಯಾಣಿಸುವಾಗ ಕುಟುಂಬದವರನ್ನೂ ಜೊತೆ ಕರೆದುಕೊಂಡು ಬರುತ್ತಾರೆ. ಇದರಿಂದ ಭಕ್ತರ ಆಗಮನ ಹೆಚ್ಚಾಗಿದೆ. ದೇವಸ್ಥಾನಗಳಿಂದ ಬರುವ ಆದಾಯವನ್ನು ಅದೇ ದೇವಸ್ಥಾನದ ಅಭಿವೃದ್ಧಿಗೆ ಬಳಸಲಾಗುತ್ತದೆ. ಇತರೆ ಮುಜರಾಯಿ ದೇವಸ್ಥಾನಗಳಿಗೆ ಅನುದಾನ ವರ್ಗಾಯಿಸಲು ಸರ್ಕಾರದ ಅನುಮತಿ ಅಗತ್ಯ ಎಂದು ಅವರು ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರ ಪ್ರಕಾರ, ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಪ್ರಮುಖ ದೇವಸ್ಥಾನಗಳಿರುವ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಬಸ್ ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಕೆಎಸ್‌ಆರ್‌ಟಿಸಿ ಬಳಿ 8,900 ಬಸ್‌ಗಳಿದ್ದು, ಅದರಲ್ಲಿ 7,000ಕ್ಕೂ ಹೆಚ್ಚು ಸಾಮಾನ್ಯ ಬಸ್‌ಗಳಲ್ಲಿ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಸೌಲಭ್ಯ ಇದೆ. ರಾಜ್ಯದ ಪ್ರಮುಖ ದೇವಾಲಯಗಳ ಮಾರ್ಗಗಳಲ್ಲಿ ಈ ಬಸ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಓಡಿಸಲಾಗುತ್ತಿದೆ. ಹಬ್ಬದ ಸಂದರ್ಭಗಳು ಹಾಗೂ ಶಾಲಾ ರಜಾದಿನಗಳಲ್ಲಿ ಹೆಚ್ಚುವರಿ ಬಸ್‌ಗಳನ್ನೂ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿರೋದಾಗಿ ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಾಳೆಯಿಂದ 3 ದಿನ ರಾಜ್ಯಾದ್ಯಂತ ಭಾರಿ ಗುಡುಗು, ಸಿಡಿಲು ಸಹಿತ ಮಳೆ; ಈ ಜಿಲ್ಲೆಗಳಿಗೆ ಆರೆಂಜ್‌ – ಯೆಲ್ಲೋ ಅಲರ್ಟ್

ಬೆಂಗಳೂರು, ಮೇ,28: ರಾಜ್ಯದಲ್ಲಿ ದಿನದ ಅವಧಿಯಲ್ಲಿ ಬಿಸಿಲಿನ ಬೇಗೆ ಮುಂದುವರಿದಿದ್ದರೂ, ಮಧ್ಯಾಹ್ನದ ನಂತರ ವಾತಾವರಣದಲ್ಲಿ ದಿಢೀರ್ ಬದಲಾವಣೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD) ಇಂದು (ಮೇ 28) ನೀಡಿರುವ ವರದಿಗಳ ಪ್ರಕಾರ, ಮುಂದಿನ 7 ದಿನಗಳ ಅಧಿಕೃತ ಮುನ್ಸೂಚನೆಯ ಪ್ರಕಾರ, ರಾಜ್ಯದಾದ್ಯಂತ ಮೇ 31 ರವರೆಗೆ ಭಾರಿ ಗುಡುಗು, ಸಿಡಿಲು ಹಾಗೂ ಬಿರುಗಾಳಿ (Squall) ಸಹಿತ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದೆ.

ದಕ್ಷಿಣ ಒಳನಾಡು: ಇಂದು ಆರೆಂಜ್ ಅಲರ್ಟ್!

ಮೇ 28 : ಅತ್ಯಂತ ಅಪಾಯಕಾರಿ ಹವಾಮಾನ ಇರಲಿದ್ದು, ಇಲಾಖೆಯು ‘ಆರೆಂಜ್ ಅಲರ್ಟ್’ ಘೋಷಿಸಿದೆ. ಭಾರಿ ಗುಡುಗು, ಮಿಂಚು ಹಾಗೂ ಚಂಡಮಾರುತದ ಮಾದರಿ ತೀವ್ರ ಗಾಳಿ ಬೀಸಲಿದೆ.

ಮೇ 29 ರಿಂದ ಮೇ 31: ಮುಂದಿನ ಮೂರು ದಿನಗಳ ಕಾಲ ಈ ವಲಯಕ್ಕೆ ‘ಯೆಲ್ಲೋ ಅಲರ್ಟ್’ ನೀಡಲಾಗಿದ್ದು, ಅಲ್ಲಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಜೂನ್ 1 ರಿಂದ ಜೂನ್ 3: ಯಾವುದೇ ಹವಾಮಾನ ಎಚ್ಚರಿಕೆಗಳು ಇರುವುದಿಲ್ಲ

ಉತ್ತರ ಒಳನಾಡು: ಮುಂದಿನ 2 ದಿನ ಹೈ ಅಲರ್ಟ್!

ಮೇ 28 ಮತ್ತು ಮೇ 29 (ಇಂದು ಮತ್ತು ನಾಳೆ): ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹವಾಮಾನ ತೀವ್ರಗೊಳ್ಳಲಿದ್ದು, ಆರಂಭದ ಎರಡು ದಿನಗಳ ಕಾಲ ‘ಆರೆಂಜ್ ಅಲರ್ಟ್’ ಜಾರಿಯಲ್ಲಿರಲಿದೆ. ತೀವ್ರ ಸಿಡಿಲು ಮತ್ತು ಬಿರುಗಾಳಿ ಅಪ್ಪಳಿಸುವ ಸಾಧ್ಯತೆಯಿದೆ.

ಮೇ 30 ಮತ್ತು ಮೇ 31: ವಾತಾವರಣದ ತೀವ್ರತೆ ಕೊಂಚ ತಗ್ಗಲಿದ್ದು, ‘ಯೆಲ್ಲೋ ಅಲರ್ಟ್’ ಇರಲಿದೆ.

ಜೂನ್ 1 ರಿಂದ ಜೂನ್ 3: ಮಳೆಯ ಅಬ್ಬರ ಸಂಪೂರ್ಣ ಶಾಂತವಾಗಲಿದೆ.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಇವತ್ತು ಉಸಿರಾಡಲು ಯೋಗ್ಯವಾದ ಗಾಳಿ!

ಕರಾವಳಿ ಕರ್ನಾಟಕ : 4 ದಿನಗಳ ಕಾಲ ಯೆಲ್ಲೋ ಅಲರ್ಟ್!

ಮೇ 28 ರಿಂದ ಮೇ 31: ಕರಾವಳಿಯ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ನಿರಂತರವಾಗಿ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಗುಡುಗು ಸಹಿತ ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ.

ಜೂನ್ 1 ರಿಂದ ಜೂನ್ 3: ಹವಾಮಾನ ಸಾಮಾನ್ಯ ಸ್ಥಿತಿಗೆ ಮರಳಲಿದ್ದು, ಯಾವುದೇ ಮುನ್ನೆಚ್ಚರಿಕೆ ಇರುವುದಿಲ್ಲ.

ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ಉಂಟಾಗಿ ಕ್ಷಣಾರ್ಧದಲ್ಲಿ ಭಾರಿ ಗಾಳಿ ಮಳೆ ಬರುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ಸಿಡಿಲಿನ ಸಮಯದಲ್ಲಿ ಸುರಕ್ಷಿತ ಕಟ್ಟಡಗಳಲ್ಲಿ ಆಶ್ರಯ ಪಡೆಯಬೇಕು. ರೈತರು ಕಟಾವು ಮಾಡಿದ ಬೆಳೆಗಳನ್ನು ಸುರಕ್ಷಿತವಾಗಿ ಮುಚ್ಚಿಡಲು ಸೂಚಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಡಿಕೆಶಿ ಬಗ್ಗೆ ನೊಣವಿನಕೆರೆ ಸ್ವಾಮೀಜಿ ಮತ್ತೊಂದು ಸ್ಫೋಟಕ ಭವಿಷ್ಯ

ತುಮಕೂರು, (ಮೇ 28): ಸಿದ್ದರಾಮಯ್ಯ (Siddaramaiah) ರಾಜೀನಾಮೆ ನೀಡಿದ್ದು, ಡಿಕೆ ಶಿವಕುಮಾರ್ (DK Shivakumar) ಮುಂದಿನ ಸಿಎಂ ಎನ್ನುವುದು ಖಚಿತವಾಗಿದೆ. ಇದಕ್ಕೂ ಮೊದಲು ದೆಹಲಿಯಲ್ಲಿ ಆದ ಬೆಳವಣಿಗೆಗಳ ಬಗ್ಗೆ ಡಿಕೆ ಶಿವಕುಮಾರ್ ಬಹುವಾಗಿ ನಂಬುವ ನೊಣವಿನಕೆರೆ ಮಠದ (Nonavinakere Swamiji) ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಡಿಕೆಶಿ ಸಿಎಂ ಆಗುವ ಬಗ್ಗೆ ಭವಿಷ್ಯ ನುಡಿದಿದ್ದರು.  ಅದರಂತೆ ಇದೀಗ ಸ್ವಾಮೀಜಿಯ ಭವಿಷ್ಯ ನಿಜವಾಗಿದೆ. ಇನ್ನು ಇತ್ತ ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಸ್ವಾಮೀಜಿ, ಡಿಕೆ ಶಿವಕುಮಾರ್ ಬಗ್ಗೆ ಕೆಲ ಮಾತುಗಳನ್ನಾಡಿದ್ದು, ಶ್ರೀಮಠದ ಆಶೀರ್ವಾದ ಡಿಕೆ ಶಿವಕುಮಾರ ಅವರಿಗೆ ಇರುತ್ತದೆ. ರಾಜಾ‌ ಪ್ರತ್ಯಾಕ್ಷ ದೇವತಾ. ರಾಜ್ಯವನ್ನು ಆಳುವಂತಾ ದೊರೆ ನಾಯಕ. ರೈತರ ಪರ ,ಬಡವರ ಪರ ಇರುವ ನಾಯಕನಾಗಿ ಹೊರಹೊಮ್ಮುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಶ್ರೀ ‌ಮಠದ ಧರ್ಮದ ಧ್ವಜವನ್ನು ಕೊಟ್ಟು ಅವರಿಗೆ ಆರ್ಶಿವಾದ ಮಾಡುವ ಕಾಲ ಹತ್ತಿರ ಬಂದಿದೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ಅವರ ಬಾಳು ಬಂಗಾರವಾಗಲೆಂದು ಆರ್ಶಿವಾದ ಮಾಡುತ್ತೇನೆ. ಪ್ರಮಾಣವಚನದ ಸಮಯ ನಾವು ಹೇಳಲು ಆಗಲ್ಲ. ಅವರವರ ನಿರ್ಧಾರಕ್ಕೆ ಬಿಟ್ಟಿದ್ದು. ಅದಕ್ಕೆ ನಾನು ಅವರ ಪ್ರಮಾಣಚನ ಆಗುವ ವರೆಗೂ ನಾನು ಮಾತಾನಾಡಬಾರದು ಅಂತಾ ಇದ್ದೆ. ಶಾಸ್ತ್ರದ ಪ್ರಕಾರ ಸಕಲ ದೋಷವನ್ನು ನೋಡಿಕೊಂಡು ಡಿಕೆ ಶಿವಕುಮಾರ್ ನಡೆದು ಕೊಳ್ಳಬೇಕಾಗುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಅವರು ಸಾಧಕನಾಗಿದ್ದಾರೆ. ಎರಡು ವರ್ಷ ಅವರು ರಾಜಾ ಪ್ರತ್ಯಕ್ಷ ದೇವತಾ ಎನ್ನುವಂತೆ ಜನಸೇವೆ ಮಾಡುವ ಸದ್ಬುದ್ದಿ ಕೊಡಲಿ. ಧರ್ಮದ ಧ್ವಜಾವರಿಗೆ ಕೊಟ್ಟಿದ್ದೇವೆ.ಮುಂದೆ ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಇದನ್ನೂ ನೋಡಿ: ಆರಾಧ್ಯ ಗುರುಗಳ ಭವಿಷ್ಯದಿಂದ ಚಿಗುರೊಡೆದ ಡಿಕೆ ಶಿವಕುಮಾರ್ ಸಿಎಂ ಆಗುವ ಆಸೆ

Source link

June Festival List 2026: ಜೂನ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

ತಿಂಗಳು ಉರುಳಿದ್ದೇ ತಿಳಿಯುತ್ತಿಲ್ಲ. ಕಣ್ಣು ಮುಚ್ಚಿ ಬಿಡುವುದರೊಳಗೆ 2026 ರ ಆರನೇ ತಿಂಗಳಿಗೆ ಕಾಲಿಡಲು ಸಜ್ಜಾಗಿದ್ದೇವೆ. ಮೇ ತಿಂಗಳಿಗೆ ಗುಡ್ ಬೈ ಹೇಳಿ ಜೂನ್ ತಿಂಗಳನ್ನು ಆಹ್ವಾನಿಸಲು ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಹಿಂದೂ ಪಂಚಾಂಗದ (Hindu Calendar) ಪ್ರಕಾರವಾಗಿ ಜೂನ್ ತಿಂಗಳು ಜ್ಯೇಷ್ಠ ಮಾಸದಿಂದ ಪ್ರಾರಂಭವಾಗುತ್ತದೆ. ಜೂನ್ ತಿಂಗಳಲ್ಲಿ ಪ್ರಮುಖವಾದ ಹಬ್ಬ ಹಾಗೂ ಆಚರಣೆಗಳಿವೆ. ಹಾಗಾದ್ರೆ ಈ ಜೂನ್ ತಿಂಗಳಿನಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಕುರಿತಾದ ಮಾಹಿತಿ ಇಲ್ಲಿದೆ.

ಜೂನ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

  • ಜೂನ್ 01 – ಅಧಿಕ ಜ್ಯೇಷ್ಠ ಕೃಷ್ಣ ಪಕ್ಷ
  • ಜೂನ್ 03 – ಸಂಕಷ್ಟಹರ ಚತುರ್ಥಿ
  • ಜೂನ್ 05 – ಶ್ರವಣ ಅಹೋರಾತ್ರ
  • ಜೂನ್ 08- ಮಹಾನಕ್ಷತ್ರ ಮೃಗಾಶಿರಾ
  • ಜೂನ್ 11- ಪರಮ ಏಕಾದಶಿ
  • ಜೂನ್ 12 – ಪ್ರದೋಷ
  • ಜೂನ್ 13 – ಮಾಸಶಿವರಾತ್ರಿ
  • ಜೂನ್ 15 – ಮಿಥುನ ಸಂಕ್ರಮಣ
  • ಜೂನ್ 15 – ಕರವೀರವ್ರತ
  • ಜೂನ್ 15 – ಸೋಮಾವತಿ ಅಮಾವಾಸ್ಯಾ
  • ಜೂನ್ 16 – ನಿಜಜ್ಯೇಷ್ಠ ಶುಕ್ಲಪಕ್ಷ
  • ಜೂನ್ 17 – ಮೊಹರಂ ಪ್ರಾರಂಭ
  • ಜೂನ್ 18 – ಉಮಾಪೂಜನ ವ್ರತ
  • ಜೂನ್ 19 – ಶ್ರುತ ಪಂಚಮಿ
  • ಜೂನ್ 21 – ದಕ್ಷಿಣಾಯನ ಆರಂಭ
  • ಜೂನ್ 22 – ಮಹಾನಕ್ಷತ್ರ ಆರ್ದಾ
  • ಜೂನ್ 25 – ನಿರ್ಜಲಾ ಏಕಾದಶಿ
  • ಜೂನ್ 26 – ಮೊಹರಂ
  • ಜೂನ್ 27 – ಪ್ರದೋಷ
  • ಜೂನ್ 29 – ವಟಸಾವಿತ್ರಿ ವ್ರತ
  • ಜೂನ್ 29 – ಕಬೀರದಾಸ ಜಯಂತಿ
  • ಜೂನ್‌ 30 – ನಿಜ ಜ್ಯೇಷ್ಠ ಕೃಷ್ಣ ಪಕ್ಷ

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:26 pm, Thu, 28 May 26

Source link