Category Archives: Blog

Your blog category

ಗುಜರಾತ್‌ನಲ್ಲಿ ಎಬೋಲಾ ಭೀತಿ; ಕಾಂಗೋದಿಂದ ಬಂದ ವ್ಯಕ್ತಿ ಅಹಮದಾಬಾದ್‌ನಲ್ಲಿ ಕ್ವಾರಂಟೈನ್

ಅಹಮದಾಬಾದ್, ಮೇ 27: ಇಡೀ ಜಗತ್ತನ್ನು ಆತಂಕಕ್ಕೆ ದೂಡಿರುವ ಎಬೋಲಾ (Ebola)  ವೈರಸ್ ಭಾರತಕ್ಕೂ ಎಂಟ್ರಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಆಫ್ರಿಕಾದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಿಂದ ಗುಜರಾತ್‌ಗೆ ಮರಳಿದ್ದ 37 ವರ್ಷದ ಬ್ಯಾಂಕರ್ ಒಬ್ಬರಲ್ಲಿ ಎಬೋಲಾ ರೋಗದ ಲಕ್ಷಣಗಳು ಕಂಡುಬಂದಿವೆ. ಇದು ಗುಜರಾತ್ ರಾಜ್ಯದಲ್ಲೇ ವರದಿಯಾಗಿರುವ ಮೊದಲ ಶಂಕಿತ ಪ್ರಕರಣವಾಗಿದೆ.

ಈ ವ್ಯಕ್ತಿ ಕಾಂಗೋದಿಂದ ಮುಂಬೈ ಮಾರ್ಗವಾಗಿ ವಡೋದರಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ವಡೋದರಾದಲ್ಲಿದ್ದಾಗ ಅವರಿಗೆ ತೀವ್ರ ಜ್ವರ ಸೇರಿದಂತೆ ಎಬೋಲಾ ಮಾದರಿಯ ಲಕ್ಷಣಗಳು ಕಾಣಿಸಿಕೊಂಡಿವೆ. ತಕ್ಷಣವೇ ಅವರನ್ನು ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಿ, ವಿಶೇಷವಾಗಿ ಸಿದ್ಧಪಡಿಸಲಾದ ಎಬೋಲಾ ಐಸೊಲೇಶನ್ ವಾರ್ಡ್‌ನಲ್ಲಿ ಇರಿಸಲಾಗಿದೆ. ವೈದ್ಯಕೀಯ ತಂಡಗಳು ಅವರ ಮೇಲೆ ನಿರಂತರ ನಿಗಾ ಇಟ್ಟಿವೆ. ಪ್ರಾಥಮಿಕ ವರದಿಯಲ್ಲಿ ನೆಗೆಟಿವ್ ಬಂದಿದ್ದರೂ, ಮುಂದಿನ ಎಲ್ಲಾ ಪರೀಕ್ಷಾ ವರದಿಗಳು ನೆಗೆಟಿವ್ ಬರುವವರೆಗೂ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಎಬೋಲಾ ಆತಂಕ; ಕಾಂಗೋ, ಉಗಾಂಡಾ, ದಕ್ಷಿಣ ಸುಡಾನ್‌ ಪ್ರಯಾಣಿಕರಿಗೆ ಭಾರತದಿಂದ ಮಾರ್ಗಸೂಚಿ ಬಿಡುಗಡೆ

ಬೆಂಗಳೂರಿನ ಶಂಕಿತ ಪ್ರಕರಣ ನೆಗೆಟಿವ್:

ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಇತ್ತೀಚೆಗೆ ಆತಂಕ ಮೂಡಿಸಿದ್ದ ಉಗಾಂಡಾದ 28 ವರ್ಷದ ಮಹಿಳೆಯ ಎಬೋಲಾ ಪರೀಕ್ಷಾ ವರದಿ ‘ನೆಗೆಟಿವ್’ ಬಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಆಕೆಗೆ ಮೈಕೈ ನೋವು ಸೇರಿದಂತೆ ಸಣ್ಣಪುಟ್ಟ ಲಕ್ಷಣಗಳು ಕಾಣಿಸಿಕೊಂಡಾಗ ಬೆಂಗಳೂರಿನ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ದಾಖಲಿಸಿ, ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (NIV) ಸಂಸ್ಥೆಗೆ ಕಳುಹಿಸಲಾಗಿತ್ತು. ಸದ್ಯ ಆಕೆ ಸುರಕ್ಷಿತವಾಗಿದ್ದಾರೆ.

ಆಫ್ರಿಕಾದ ಕೆಲವು ಭಾಗಗಳಲ್ಲಿ ಎಬೋಲಾ ಹರಡುತ್ತಿರುವುದರಿಂದ ಜಾಗತಿಕವಾಗಿ ಆತಂಕ ಸೃಷ್ಟಿಯಾಗಿದೆ. ಆಫ್ರಿಕಾದಲ್ಲಿ ಪರಿಸ್ಥಿತಿ ಗಂಭೀರವಾಗಿರುವುದರಿಂದ, ಅಲ್ಲಿಂದ ಭಾರತಕ್ಕೆ ಬರುವ ಪ್ರಯಾಣಿಕರು ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಮತ್ತು ಕನಿಷ್ಠ 21 ದಿನಗಳ ಕಾಲ ತಮ್ಮ ಆರೋಗ್ಯದ ಮೇಲೆ ನಿಗಾ ಇಡಬೇಕು ಎಂದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಇದನ್ನೂ ಓದಿ: ಎಬೋಲಾ ಎಂಟ್ರಿ ಆತಂಕದಲ್ಲಿದ್ದ ಕರ್ನಾಟವೀಗ ನಿರಾಳ: ಉಗಾಂಡಾ ಮೂಲದ ಮಹಿಳೆಯ ಸ್ಯಾಂಪಲ್​​ ವರದಿ ನೆಗೆಟಿವ್​​

ಎಬೋಲಾ ಎಂದರೇನು?:

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಎಬೋಲಾ ಪ್ರಾಣಿಗಳಿಂದ (ಮುಖ್ಯವಾಗಿ ಬಾವಲಿ, ಮುಳ್ಳುಹಂದಿ ಇತ್ಯಾದಿ) ಮನುಷ್ಯರಿಗೆ ಮತ್ತು ನಂತರ ಮನುಷ್ಯರಿಂದ ಮನುಷ್ಯರ ದೈಹಿಕ ದ್ರವಗಳ (ಬೆವರು, ರಕ್ತ) ಸಂಪರ್ಕದ ಮೂಲಕ ಹರಡುವ ಅತ್ಯಂತ ಅಪಾಯಕಾರಿ ಸಾಂಕ್ರಾಮಿಕ ಕಾಯಿಲೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸದ್ಯದ ಮಾಹಿತಿಯ ಪ್ರಕಾರ ಭಾರತದಲ್ಲಿ ಇದುವರೆಗೆ ಯಾವುದೇ ಅಧಿಕೃತ ಎಬೋಲಾ ಪ್ರಕರಣಗಳು ದೃಢಪಟ್ಟಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:37 pm, Wed, 27 May 26

Source link

ಎಚ್​ಡಿಎಫ್​ಸಿಯಿಂದ 45 ಕೋಟಿ ರೂ ಅಕ್ರಮ ಬಡ್ಡಿ ಪಾವತಿ ವಿವಾದ; ಆರೋಪ ನಿರಾಕರಿಸಿದ ಬ್ಯಾಂಕ್

ಎಚ್‌ಡಿಎಫ್‌ಸಿ ಬ್ಯಾಂಕ್Image Credit source: Getty Images

ಮುಂಬೈ, ಮೇ 27: ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ (MSRDC) ಸಂಬಂಧಿಸಿದ 45 ಕೋಟಿ ರೂ ಬಡ್ಡಿ ಪಾವತಿಯಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂಬ ವರದಿಗಳು ಹರಿದಾಡಿದ ಬೆನ್ನಲ್ಲೇ, ಭಾರತದ ಅತಿ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಇಂದು ಷೇರು ಬಜಾರಿನಲ್ಲಿ ಶೇ. 2.54ರಷ್ಟು (19 ರೂ) ಹಿನ್ನಡೆ ಅನುಭವಿಸಿದೆ. ತನ್ನ ಮೇಲಿನ ಎಲ್ಲಾ ಆರೋಪಗಳನ್ನು ಬ್ಯಾಂಕು ತಳ್ಳಿಹಾಕಿದರೂ, ಷೇರು ಕುಸಿತ ತಡೆಯಲು ಆಗಲಿಲ್ಲ. ಮಂಗಳವಾರ ವಹಿವಾಟಿನಲ್ಲಿ ಈ ಬ್ಯಾಂಕ್​ನ ಷೇರು ಸಂಪತ್ತು 24,000 ಕೋಟಿ ರೂಗೂ ಅಧಿಕ ಮೊತ್ತದಷ್ಟು ಕರಗಿದೆ. ಎಚ್​ಡಿಎಫ್​ಸಿ ಬ್ಯಾಂಕ್​ನ ಸ್ಪಷ್ಟನೆಗಳು ಹೂಡಿಕೆದಾರರಿಗೆ ಸಮಾಧಾನ ಎನಿಸಿದಲ್ಲಿ ನಾಳೆ ಗುರುವಾರ ಅದರ ಷೇರುಬೆಲೆ ಚೇತರಿಕೆ ಕಾಣಬಹುದು.

ಏನಿದು ಎಚ್​ಡಿಎಫ್​ಸಿ ಎಂಎಸ್​ಆರ್​ಡಿಸಿ ವಿವಾದ?

ಮಹಾರಾಷ್ಟ್ರ ಸರ್ಕಾರಿ ಸ್ವಾಮ್ಯದ ಎಂಎಸ್‌ಆರ್‌ಡಿಸಿ (MSRDC) ಸಂಸ್ಥೆಯ ನಿಧಿ ನಿರ್ವಹಣೆ ಮತ್ತು ಅದಕ್ಕೆ ಸಂಬಂಧಿಸಿದ ಸುಮಾರು 45 ಕೋಟಿ ರೂಪಾಯಿಗಳ ಬಡ್ಡಿ ಪಾವತಿಯ ಪ್ರಕ್ರಿಯೆಯಲ್ಲಿ ಕೆಲವು ನಿಯಮ ಬಾಹಿರ ಚಟುವಟಿಕೆಗಳು ನಡೆದಿವೆ ಎಂದು ಇಂಡಿಯನ್ ಎಕ್ಸ್​ಪ್ರೆಸ್ ಪತ್ರಿಕೆಯಲ್ಲಿ ವರದಿಯಾಗಿತ್ತು. ಈ ವರದಿ ಹೂಡಿಕೆದಾರರು ಮತ್ತು ಬ್ಯಾಂಕಿಂಗ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ವರದಿ ಪ್ರಕಾರ, ಮಹಾರಾಷ್​ಟ್ರ ರಸ್ತೆ ಅಭಿವೃದ್ಧಿ ನಿಗಮವು ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಠೇವಣಿಗಳನ್ನು ಇಟ್ಟಿತ್ತು. ಇದಕ್ಕೆ ಪೂರ್ವದಲ್ಲೇ ನಿಗದಿಯಾದ ಬಡ್ಡಿದರಕ್ಕಿಂತಲೂ ಹೆಚ್ಚಿನ ಬಡ್ಡಿಯನ್ನು ಬ್ಯಾಂಕ್ ನೀಡಿತ್ತು. ಈ ಹೆಚ್ಚುವರಿ ಬಡ್ಡಿ ಮೊತ್ತ 45 ಕೋಟಿ ರೂ. ಸ್ಥಳೀಯ ಕಂಪನಿಗಳ ಮೂಲಕ ರಸ್ತೆ ಸುರಕ್ಷತೆ ಅಭಿಯಾನ ಇತ್ಯಾದಿ ಹೆಸರಿನಲ್ಲಿ ಬ್ಯಾಂಕ್​ನ ಮಾರ್ಕೆಟಿಂಗ್ ವಿಭಾಗದ ಮೂಲಕ ನಿಗಮದ ಅಕೌಂಟ್​ಗೆ ಹಣವನ್ನು ಹಾಕಲಾಗಿತ್ತು.

ಮಾರ್ಚ್ 12ರಂದು ಎಂಡಿ ರಂಗನಾಥ್ ಅಧ್ಯಕ್ಷತೆಯ ಆಡಿಟ್ ಕಮಿಟಿ ಬೋರ್ಡ್ (ಎಸಿಬಿ) ಈ ಹೆಚ್ಚುವರಿ ಪಾವತಿ ವಿಚಾರವಾಗಿ ಆಂತರಿಕ ವಿಚಕ್ಷಣಾ ತನಿಖೆಗೆ (Internal Vigilance Investigation) ಆದೇಶ ನೀಡಿತ್ತು. ಈ ವಿಚಾರವನ್ನು ಬ್ಯಾಂಕ್ ತನ್ನ ಷೇರುದಾರರಿಗೆ ತಿಳಿಸದೆ ಮುಚ್ಚಿಟ್ಟಿತು ಎನ್ನುವ ಆರೋಪವೂ ಇದೆ.

ಇದನ್ನೂ ಓದಿ: ಷೇರುಬಜಾರಲ್ಲಿ ಅದಾನಿ ಪವರ್ ಅಬ್ಬರ; ಮಾರುಕಟ್ಟೆ ಮೌಲ್ಯದಲ್ಲಿ ಇನ್ಫೋಸಿಸ್ ಹಿಂದಿಕ್ಕಿದ್ದು ಹೇಗೆ?

ಎಚ್‌ಡಿಎಫ್‌ಸಿ ಬ್ಯಾಂಕ್ ನೀಡಿದ ಸ್ಪಷ್ಟನೆ

ಮಾಧ್ಯಮಗಳ ವರದಿಗೆ ಅಧಿಕೃತವಾಗಿ ಪ್ರತಿಕ್ರಿಯಿಸಿರುವ ಎಚ್‌ಡಿಎಫ್‌ಸಿ ಬ್ಯಾಂಕ್, “ನಮ್ಮ ಬ್ಯಾಂಕಿಂಗ್ ವಹಿವಾಟುಗಳು ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ವಿಧಿಸಿರುವ ಎಲ್ಲಾ ನಿಯಂತ್ರಕ ಮಾರ್ಗಸೂಚಿಗಳು ಮತ್ತು ಆಡಳಿತಾತ್ಮಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ” ಎಂದು ಹೇಳಿದೆ.

ಎಂಎಸ್‌ಆರ್‌ಡಿಸಿ ನಿಧಿಗೆ ಸಂಬಂಧಿಸಿದ ಬಡ್ಡಿ ಲೆಕ್ಕಾಚಾರ ಅಥವಾ ಪಾವತಿಯಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ತಪ್ಪು ನಡೆದಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ಸತ್ಯಕ್ಕೆ ದೂರವಾಗಿವೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.

ಬ್ಯಾಂಕ್ ತನ್ನ ಕಾರ್ಪೊರೇಟ್ ಗ್ರಾಹಕರೊಂದಿಗೆ ಮಾಡಿಕೊಂಡಿರುವ ಒಪ್ಪಂದದ ನಿಯಮಗಳ ಅಡಿಯಲ್ಲೇ ಎಲ್ಲಾ ಹಣಕಾಸು ಪ್ರಕ್ರಿಯೆಗಳನ್ನು ನಡೆಸಿದೆ ಎಂದು ಸಮರ್ಥಿಸಿಕೊಂಡಿದೆ.

ಇದನ್ನೂ ಓದಿ: ಆನ್​ಲೈನ್ ಗೇಮಿಂಗ್ ಕಂಪನಿಗಳಿಗೆ ಸುಪ್ರೀಂ ಶಾಕ್; ಶೇ 28 ಜಿಎಸ್​ಟಿ ಪೂರ್ವಾನ್ವಯ ತೆರಿಗೆ ಸಿಂಧು ಎಂದು ಕೋರ್ಟ್ ತೀರ್ಪು

ಮಾರುಕಟ್ಟೆಯ ಮೇಲಿನ ಪರಿಣಾಮ

ಇಂತಹ ದೊಡ್ಡ ಮೊತ್ತದ ವಿವಾದಗಳು ಮುಂಚೂಣಿಗೆ ಬಂದಾಗ ಬ್ಯಾಂಕ್‌ಗಳ ಷೇರುಗಳ ಮೇಲೆ ಪ್ರಭಾವ ಬೀರುವುದು ಸಹಜ. ಆದರೆ ಎಚ್‌ಡಿಎಫ್‌ಸಿ ಬ್ಯಾಂಕ್ ತಕ್ಷಣವೇ ಅಧಿಕೃತ ಸ್ಪಷ್ಟನೆ ನೀಡಿ ಆರೋಪಗಳನ್ನು ತಳ್ಳಿಹಾಕಿರುವುದರಿಂದ, ಹೂಡಿಕೆದಾರರಲ್ಲಿ ಉಂಟಾಗಬಹುದಾಗಿದ್ದ ಆತಂಕ ನಿವಾರಣೆಯಾದಂತಾಗಿದೆ.

ದೇಶದ ಅತ್ಯಂತ ನಂಬಿಕಸ್ಥ ಮತ್ತು ಬಲಿಷ್ಠ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿರುವ ಎಚ್‌ಡಿಎಫ್‌ಸಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಬಿದ್ದರೆ ನಿಯಂತ್ರಕ ಸಂಸ್ಥೆಗಳಿಗೆ ಸಂಪೂರ್ಣ ದಾಖಲೆಗಳನ್ನು ಒದಗಿಸಲು ಸಿದ್ಧವಿರುವುದಾಗಿ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026 Eliminator SRH vs RR Live: ಶತಕ ವಂಚಿತ ವೈಭವ್

  • 27 May 2026 08:20 PM (IST)

    IPL 2026 Eliminator Live: 100 ರನ್ ದಾಟಿದ ರಾಜಸ್ಥಾನ

    ರಾಜಸ್ಥಾನ್ ರಾಯಲ್ಸ್ ತಂಡವು 7.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 100 ರನ್‌ಗಳ ಗಡಿ ದಾಟಿತು. ವೈಭವ್ ಸೂರ್ಯವಂಶಿ 77 ರನ್ ಗಳಿಸಿ ಶತಕದ ಸಮೀಪದಲ್ಲಿದ್ದಾರೆ.

  • 27 May 2026 08:04 PM (IST)

    IPL 2026 Eliminator Live: ಸೂರ್ಯವಂಶಿ ಅರ್ಧಶತಕ

    ವೈಭವ್ ಸೂರ್ಯವಂಶಿ ಕೇವಲ 16 ಎಸೆತಗಳಲ್ಲಿ ಎಂಟು ಸಿಕ್ಸರ್‌ಗಳನ್ನು ಬಾರಿಸಿ ಅರ್ಧಶತಕ ಪೂರೈಸಿದರು. ಇದರೊಂದಿಗೆ, ರಾಜಸ್ಥಾನ ನಾಲ್ಕು ಓವರ್‌ಗಳಲ್ಲಿ 63 ರನ್ ಗಳಿಸಿದೆ.

  • 27 May 2026 07:51 PM (IST)

    IPL 2026 Eliminator Live:ಸೂರ್ಯವಂಶಿಯ ಬಿರುಗಾಳಿ

    ವೈಭವ್ ಸೂರ್ಯವಂಶಿ ಕೇವಲ 10 ಎಸೆತಗಳಲ್ಲಿ 36 ರನ್ ಗಳಿಸಿದ್ದಾರೆ. ಇದರೊಂದಿಗೆ, ರಾಜಸ್ಥಾನದ ಸ್ಕೋರ್ ಮೂರು ಓವರ್‌ಗಳ ನಂತರ ವಿಕೆಟ್ ನಷ್ಟವಿಲ್ಲದೆ 45 ರನ್ ಗಳಿಸಿದೆ.

  • 27 May 2026 07:42 PM (IST)

    IPL 2026 Eliminator Live: ರಾಜಸ್ಥಾನಕ್ಕೆ ಉತ್ತಮ ಆರಂಭ

    ರಾಜಸ್ಥಾನ್ ರಾಯಲ್ಸ್ ತಂಡ ಉತ್ತಮ ಆರಂಭ ಪಡೆದುಕೊಂಡಿದೆ. ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಮೊದಲ ಎರಡು ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 20 ರನ್ ಗಳಿಸಿದರು.

  • 27 May 2026 07:16 PM (IST)

    IPL 2026 Eliminator Live: ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ 11

    ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹೆನ್ರಿಚ್ ಕ್ಲಾಸೆನ್, ಸ್ಮರಣ್ ರವಿಚಂದ್ರನ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್ (ನಾಯಕ), ಶಿವಂಗ್ ಕುಮಾರ್, ಇಶಾನ್ ಮಾಲಿಂಗ, ಶಾಕಿಬ್ ಹುಸೇನ್, ಪ್ರಫುಲ್ ಹಿಂಗೆ.

  • 27 May 2026 07:15 PM (IST)

    IPL 2026 Eliminator Live: ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ XI

    ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಡೊನೊವನ್ ಫೆರೇರಾ, ದಸುನ್ ಶನಕ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಬ್ರಿಜೇಶ್ ಶರ್ಮಾ, ಯಶ್ ರಾಜ್ ಪುಂಜಾ.

  • 27 May 2026 07:03 PM (IST)

    IPL 2026 Eliminator Live: ಟಾಸ್ ಗೆದ್ದ ಸನ್​​ರೈಸರ್ಸ್

    ಟಾಸ್ ಗೆದ್ದ ಸನ್​​ರೈಸರ್ಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

  • Source link

    ಪಿರಿಯಡ್ಸ್ ಸಮಯದಲ್ಲಿ ಸರಿಯಾದ ಸ್ಯಾನಿಟರಿ ಪ್ಯಾಡ್ ಆಯ್ಕೆ ಮಾಡುವುದು ಎಷ್ಟು ಮುಖ್ಯ ಗೊತ್ತಾ?

    ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರಲ್ಲಿ ಪಿರಿಯಡ್ಸ್ (Periods) ಹೈಜೀನ್ ಬಗ್ಗೆ ಜಾಗೃತಿ ಹೆಚ್ಚಾಗಿದೆ. ಈಗ ಮಹಿಳೆಯರು ತಾವು ಬಳಸುವ ಪ್ಯಾಡ್‌ನ ಗುಣಮಟ್ಟ ಮತ್ತು ಅದು ಚರ್ಮದ ಮೇಲೆ ಬೀರುವ ಪರಿಣಾಮಗಳತ್ತವೂ ಹೆಚ್ಚು ಗಮನ ಹರಿಸುತ್ತಿದ್ದಾರೆ. ತಜ್ಞರ ಪ್ರಕಾರ, ಸರಿಯಾದ ಸ್ಯಾನಿಟರಿ ಪ್ಯಾಡ್ ಆಯ್ಕೆ ಮಾಡದಿದ್ದರೆ ಚರ್ಮದ ಸಮಸ್ಯೆಗಳು ಮತ್ತು ಸೋಂಕಿನ ಅಪಾಯ ಹೆಚ್ಚಾಗಬಹುದು. ವೈದ್ಯರು ನೀಡುವ ಮಾಹಿತಿ ಪ್ರಕಾರ, ಸ್ಯಾನಿಟರಿ ಪ್ಯಾಡ್‌ನ ಮೇಲಿನ ಪದರ ದೇಹದ ಸೂಕ್ಷ್ಮ ಭಾಗದೊಂದಿಗೆ ನೇರ ಸಂಪರ್ಕದಲ್ಲಿರುತ್ತದೆ. ಪ್ಯಾಡ್‌ನಲ್ಲಿ ಹೆಚ್ಚು ಸುಗಂಧ ದ್ರವ್ಯಗಳು ಅಥವಾ ಹಾನಿಕಾರಕ ರಾಸಾಯನಿಕಗಳು ಇದ್ದರೆ ಚರ್ಮದಲ್ಲಿ ಉರಿ, ಕೆಂಪು ದದ್ದುಗಳು ಮತ್ತು ಅಲರ್ಜಿ ಸಮಸ್ಯೆಗಳು ಕಾಣಿಸಬಹುದು. ವಿಶೇಷವಾಗಿ ಬೇಸಿಗೆ ಮತ್ತು ತೇವಾಂಶ ಇರುವ ವಾತಾವರಣದಲ್ಲಿ ದೀರ್ಘಕಾಲ ಒಂದೇ ಪ್ಯಾಡ್ ಬಳಸುವುದರಿಂದ ಬ್ಯಾಕ್ಟೀರಿಯಾ ಹಾಗೂ ಫಂಗಲ್ ಇನ್‌ಫೆಕ್ಷನ್ ಅಪಾಯ ಹೆಚ್ಚಾಗುತ್ತದೆ. ಹಾಗಾದರೆ ಯಾವ ರೀತಿಯ ಪ್ಯಾಡ್ ಬಳಸಬೇಕು, ಏನಿದು ಮೋರಿಂಗಾ ಪ್ಯಾಡ್‌, ಇದು ನಿಜವಾಗಿಯೂ ಉಪಯೋಗಕಾರಿಯೇ ಎಂಬುದನ್ನು ತಿಳಿದುಕೊಳ್ಳಿ.

    ಯಾವ ರೀತಿಯ ಪ್ಯಾಡ್ ಬಳಸಬೇಕು?

    ತಜ್ಞರು, ಮಹಿಳೆಯರಿಗೆ ಮೃದುವಾದ, ಗಾಳಿಯಾಡುವ ಮತ್ತು ಚರ್ಮ ಸ್ನೇಹಿ ಪ್ಯಾಡ್‌ಗಳನ್ನು ಬಳಸುವಂತೆ ಸಲಹೆ ನೀಡುತ್ತಾರೆ. ಹೆಚ್ಚು ಸುಗಂಧವಿರುವ ಪ್ಯಾಡ್‌ಗಳನ್ನು ಬಳಸದಿರುವುದು ಉತ್ತಮ ಎಂದು ಹೇಳಿದ್ದಾರೆ. ಜೊತೆಗೆ ಪ್ರತಿ 4ರಿಂದ 6 ಗಂಟೆಗಳಿಗೊಮ್ಮೆ ಪ್ಯಾಡ್ ಬದಲಾಯಿಸುವುದು ಆರೋಗ್ಯದ ದೃಷ್ಟಿಯಿಂದ ಅಗತ್ಯವಾಗಿದೆ. ಹೆಚ್ಚು ಬೆವರು ಅಥವಾ ಚರ್ಮದ ಸಮಸ್ಯೆ ಇರುವಂತಹ ಮಹಿಳೆಯರಿಗೆ ಕಾಟನ್ ಆಧಾರಿತ ಪ್ಯಾಡ್‌ಗಳು ಅಥವಾ ಕಾಟನ್ ಪ್ಯಾಂಟಿ ಉತ್ತಮ ಆಯ್ಕೆ ಎಂದು ವೈದ್ಯರು ಹೇಳಿದ್ದಾರೆ.

    ಇದನ್ನೂ ಓದಿ: ಋತುಚಕ್ರದ ಸಮಯದಲ್ಲಿ ಈ ಆಹಾರಗಳನ್ನು ಕಡ್ಡಾಯವಾಗಿ ಸೇವಿಸಬೇಕು!

    ಮೋರಿಂಗಾ ಪ್ಯಾಡ್‌ ನಿಜವಾಗಿಯೂ ಉಪಯೋಗಕಾರಿಯೇ?

    ಇತ್ತೀಚೆಗೆ ಮೋರಿಂಗಾ ಆಧಾರಿತ ಸ್ಯಾನಿಟರಿ ಪ್ಯಾಡ್‌ಗಳು ಗಮನ ಸೆಳೆಯುತ್ತಿವೆ. ಮೋರಿಂಗಾದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿ ಕಡಿಮೆ ಮಾಡುವ ಗುಣಗಳಿರುವುದರಿಂದ ಚರ್ಮದ ಸಮಸ್ಯೆ ಹಾಗೂ ದುರ್ಗಂಧ ಕಡಿಮೆ ಮಾಡಲು ಸಹಾಯಕವಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಮಹಿಳೆಯರ ಆರೋಗ್ಯಕ್ಕೆ ಪೀರಿಯಡ್ಸ್ ಹೈಜೀನ್ ಅತ್ಯಂತ ಮುಖ್ಯ. ಆದ್ದರಿಂದ ಗುಣಮಟ್ಟದ ಮತ್ತು ಸುರಕ್ಷಿತ ಸ್ಯಾನಿಟರಿ ಪ್ಯಾಡ್ ಆಯ್ಕೆ ಮಾಡುವುದು ಆರೋಗ್ಯ ಕಾಪಾಡುವ ಪ್ರಮುಖ ಹೆಜ್ಜೆಯಾಗಿದೆ.

    ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Source link

    ಸಿದ್ದರಾಮಯ್ಯ ಮನೆ ಮುಂದೆ ಭುಗಿಲೆದ್ದ ಆಕ್ರೋಶ: ಅಭಿಮಾನಿಗಳು ಪೊಲಿಸ್ ವಶಕ್ಕೆ

    ಬೆಂಗಳೂರು, ಮೇ 27: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ದಟ್ಟವಾಗುತ್ತಿದ್ದಂತೆ, ಅವರ ಬೆಂಬಲಿಗರು ಮತ್ತು ಅಹಿಂದ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ನಿರ್ಧಾರದ ವಿರುದ್ಧ ನಿಗಿ ನಿಗಿ ಎನ್ನುತ್ತಿರುವ ಅಭಿಮಾನಿಗಳು ಸಿದ್ದರಾಮಯ್ಯನವರ ನಿವಾಸದ ಮುಂದೆ ಜಮಾಯಿಸಿ ಪ್ರತಿಭಟಿಸಿದರು. ‘ಯಾವನು ಹೈಕಮಾಂಡ್’ ಎಂದು ಸಿದ್ದರಾಮಯ್ಯ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೆ ಕಾಂಗ್ರೆಸ್ ಪಕ್ಷ ಸರ್ವನಾಶವಾಗುತ್ತದೆ ಎಂದು ಬೆಂಬಲಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಹಿಂದೆ ಸಿದ್ದರಾಮಯ್ಯ ಜೆಡಿಎಸ್ ತೊರೆದ ನಂತರ ಆ ಪಕ್ಷಕ್ಕೆ ಹಿನ್ನಡೆಯಾಗಿತ್ತು ಎಂದು ಉದಾಹರಿಸಿದ ಅಭಿಮಾನಿಗಳು, ಇದೇ ಪರಿಸ್ಥಿತಿ ಕಾಂಗ್ರೆಸ್ ಪಕ್ಷಕ್ಕೂ ಎದುರಾಗಲಿದೆ ಎಂದು ಎಚ್ಚರಿಸಿದ್ದಾರೆ. ಸಿದ್ದರಾಮಯ್ಯ ಒಬ್ಬ ಜನಪ್ರಿಯ ನಾಯಕರು ಮತ್ತು ಅಹಿಂದ ವರ್ಗದ ಬಲ ಎಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದೇ ಸಿದ್ದರಾಮಯ್ಯರಿಂದ, ಒಂದು ವೇಳೆ ಸಿಎಂ ಸ್ಥಾನದಿಂದ ಅವರನ್ನ ಕೆಳಗಿಳಿಸಿದರೆ, 2028ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತೆ ಎಂದಿದ್ದಾರೆ. ಇನ್ನು ಆಕ್ರೋಶ ವ್ಯಕ್ತಪಡಿಸುತ್ತಿದ್ದ ಅಭಿಮಾನಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

    Source link

    ದೆಹಲಿಯಲ್ಲಿ ನಕಲಿ ಕೆವೈಸಿ ಮೂಲಕ ಚಹಾ ವ್ಯಾಪಾರಿಗೆ 90,000 ರೂ. ವಂಚನೆ; ಮೂವರ ಬಂಧನ

    ನವದೆಹಲಿ, ಮೇ 27: ಮೊಬೈಲ್ ಆಪ್‌ಗಳಲ್ಲಿ ಕೆವೈಸಿ (KYC) ಅಪ್‌ಡೇಟ್ ಮಾಡುವ ನೆಪದಲ್ಲಿ ಚಹಾ ವ್ಯಾಪಾರಿಯೊಬ್ಬರಿಂದ 90,000 ರೂ. ಹಣ ದೋಚಿದ್ದ ಅಂತಾರಾಜ್ಯ ಸೈಬರ್ ವಂಚಕರ ಜಾಲವನ್ನು ದೆಹಲಿ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಂಚಕನೊಬ್ಬ ತಾನು ಪ್ರಮುಖ ಡಿಜಿಟಲ್ ಪೇಮೆಂಟ್ ಕಂಪನಿಯೊಂದರ ಉದ್ಯೋಗಿ ಎಂದು ಪರಿಚಯಿಸಿಕೊಂಡು ಚಹಾ ಅಂಗಡಿಗೆ ಬಂದಿದ್ದ. ಆತ ವ್ಯಾಪಾರಿಯ ಮೊಬೈಲ್‌ನಲ್ಲಿ ಪೇಮೆಂಟ್ ಆಪ್‌ನ ಸೆಟ್ಟಿಂಗ್ಸ್ ಸರಿಪಡಿಸಿಕೊಡುವ ಮತ್ತು ಕೆವೈಸಿ (KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ನೆಪದಲ್ಲಿ ಆತನ ನಂಬಿಕೆ ಗಳಿಸಿದ್ದ.

    ದೆಹಲಿಯ ಸೌತ್ ಪಟೇಲ್ ನಗರದ ಚಹಾ ವ್ಯಾಪಾರಿಯೊಬ್ಬರು ಈ ವಂಚನೆಗೆ ಒಳಗಾಗಿದ್ದಾರೆ. ಡಿಜಿಟಲ್ ಪೇಮೆಂಟ್ ಕಂಪನಿಯೊಂದರ ಉದ್ಯೋಗಿಯಂತೆ ನಟಿಸಿ ಬಂದಿದ್ದ ವ್ಯಕ್ತಿಯೊಬ್ಬ, ವ್ಯಾಪಾರಿಯ ಮೊಬೈಲ್‌ನಲ್ಲಿ ಕೆವೈಸಿ (KYC) ಪ್ರಕ್ರಿಯೆ ಮತ್ತು ಆಪ್ ಸೆಟ್ಟಿಂಗ್ಸ್ ಸರಿಪಡಿಸಿಕೊಡುವುದಾಗಿ ನಂಬಿಸಿದ್ದ. ವ್ಯಾಪಾರಿಯ ವಿಶ್ವಾಸಗಳಿಸಿ ಆತನ ಮೊಬೈಲ್ ಪಡೆದುಕೊಂಡ ವಂಚಕ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 90,000 ರೂ. ಹಣವನ್ನು ವರ್ಗಾಯಿಸಿಕೊಂಡು ಪರಾರಿಯಾಗಿದ್ದ.

    ಇದನ್ನೂ ಓದಿ: ದಿನಕ್ಕೆ 400 ರೂ. ಆಸೆ ತೋರಿಸಿ 13 ಸಾವಿರ ಜನರನ್ನು ಲೂಟಿ ಮಾಡಿದ ಕ್ರಿಪ್ಟೋ ಗ್ಯಾಂಗ್! ಪ್ರಮುಖ ಆರೋಪಿ ಅರೆಸ್ಟ್

    ಆ ವ್ಯಾಪಾರಿ ಮೇ 15ರಂದು ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಸ್ಥಳೀಯರ ಮಾಹಿತಿ ಆಧಾರದ ಮೇಲೆ ಹರಿಯಾಣದ ಪಂಚಕುಲ, ಪಂಜಾಬ್‌ನ ಜಿರಾಕ್‌ಪುರ ಸೇರಿದಂತೆ ಹಲವು ಕಡೆ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಯಿತು. ಬಂಧಿತರನ್ನು ಹರಿಯಾಣದ ಪಂಚಕುಲ ನಿವಾಸಿಗಳಾದ ವಿಶೇಷ್ ಸಿಂಗ್, ಸಚಿನ್ ಮೌರ್ಯ (22) ಮತ್ತು ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಆಶಿಶ್ ಶರ್ಮಾ (27) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸೈಬರ್ ವಂಚನೆಗೆ ಬಳಸುತ್ತಿದ್ದ ಮೊಬೈಲ್ ಫೋನ್‌ಗಳು ಮತ್ತು ಬ್ಯಾಂಕ್ ಖಾತೆಗಳ ವಿವರಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಇದನ್ನೂ ಓದಿ: ಮಂಡ್ಯ: ಪತ್ನಿಗೆ ಶ್ರೀಮಂತಿಕೆ ತೋರಿಸಲು ಕಳ್ಳತನಕ್ಕಿಳಿದ ಪತಿ! ಕೃತ್ಯ ನಿಲ್ಲಿಸಿದ ವರ್ಷದ ಬಳಿಕ ಮೂವರು ಸಹಚರರೊಂದಿಗೆ ಅಂದರ್

    ಬ್ಯಾಂಕ್ ಖಾತೆಗಳ ಅಕ್ರಮ ಜಾಲ:

    ಪೊಲೀಸ್ ಅಧಿಕಾರಿಗಳ ಪ್ರಕಾರ, ಈ ಬಂಧಿತರು ಕೇವಲ ಸ್ಥಳೀಯ ವಂಚಕರಲ್ಲ. ಇವರು ದೇಶದ ವಿವಿಧ ರಾಜ್ಯಗಳಲ್ಲಿ ಸೈಬರ್ ಅಪರಾಧ ಎಸಗುವ ದೊಡ್ಡ ಸಿಂಡಿಕೇಟ್‌ಗಳಿಗೆ ನಕಲಿ/ಬಾಡಿಗೆ ಬ್ಯಾಂಕ್ ಖಾತೆಗಳು (Mule Accounts), ಸಿಮ್ ಕಾರ್ಡ್‌ಗಳು ಮತ್ತು ಎಟಿಎಂ ಕಾರ್ಡ್‌ಗಳನ್ನು ಪೂರೈಸುವ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನುಳಿದ ಆರೋಪಿಗಳ ಪತ್ತೆಗೆ ಹಾಗೂ ಹಣ ವರ್ಗಾವಣೆಯ ಸಂಪೂರ್ಣ ಜಾಲವನ್ನು ಭೇದಿಸಲು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

    ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Source link

    SRH vs RR: ಸಿಕ್ಸರ್​ಗಳಿಂದಲೇ ಅರ್ಧಶತಕ ಚಚ್ಚಿದ ವೈಭವ್ ಸೂರ್ಯವಂಶಿ

    ಐಪಿಎಲ್ 2026 ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ ಪರ ಆರಂಭಿಕ ವೈಭವ್ ಸೂರ್ಯವಂಶಿ ಮತ್ತೊಮ್ಮೆ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ವೈಭವ್ ತಮ್ಮ ಅರ್ಧಶತಕದ ಇನ್ನಿಂಗ್ಸ್​ನಲ್ಲಿ 8 ಸಿಕ್ಸರ್​ಗಳು ಹಾಗೂ 1 ಬೌಂಡರಿ ಬಾರಿಸಿದರು. ಅಂದರೆ ವೈಭವ್ ಕೇವಲ ಬೌಂಡರಿ ಹಾಗೂ ಸಿಕ್ಸರ್​ಗಳಿಂದಲೇ ತಮ್ಮ ಅರ್ಧಶತಕ ಪೂರೈಸಿದರು. ವೈಭವ್ ಅವರ ಈ ಆರ್ಭಟದಿಂದಾಗಿ ರಾಜಸ್ಥಾನ್ 3.2 ಓವರ್​ಗಳಲ್ಲಿಯೇ 50 ರನ್​ಗಳ ಗಡಿ ದಾಟಿತು.

    Source link

    ರಾಜೀನಾಮೆಗೂ ಮುನ್ನ ಜಾತಿ ಗಣತಿ ವರದಿ ಸ್ವೀಕರಿಸಿದ ಸಿದ್ದದರಾಮಯ್ಯ, ಮುಸ್ಲಿಂ ನಂ.1 ಜಾತಿ!

    ಜಾತಿ ಗಣತಿ ವರದಿ ಸ್ವೀಕರಿಸಿದ ಸಿದ್ದದರಾಮಯ್ಯ

    ಬೆಂಗಳೂರು, (ಮೇ 27): ಕಳೆದ 9 ವರ್ಷಗಳಿಂದ ನಿರಂತರವಾಗಿ ಸಂಚಲನ ಸೃಷ್ಟಿಸಿದ್ದ ಕರ್ನಾಟಕ ಜಾತಿಗಣತಿ ವರದಿಯನ್ನು (Karnataka Caste Census Report) ಸಿಎಂ ಸಿದ್ದರಾಮಯ್ಯ  (Siddaramaiah) ಸ್ವೀಕರಿಸಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಒಂದು ದಿನ ಮೊದಲೇ ಆಸೆಯದಂತೆ ರಾಜ್ಯ ಹಿಂದುಳಿದ ವರ್ಗಗಳ‌ ಆಯೋಗ ಸಿದ್ದಪಡಿಸಿದ “ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ” ಯನ್ನು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸ್ವೀಕರಿಸಿರುವುದು ವಿಶೇಷ. ಇದರೊಂದಿಗೆ ತಾವು ಅಧಿಕಾರಿದಲ್ಲಿದ್ದಾಗಲೇ ಜಾತಿಗಣತಿ ಸ್ವೀಕಾರ ಮಾಡಿದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ವರದಿ (ಜಾತಿ ಗಣತಿ) ಬಹಿರಂಗವಾಗಿದ್ದು, ವರದಿ ಪ್ರಕಾರ ಮುಸ್ಲಿಮರೇ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಸಮುದಾಯವಾಗಿದೆ.

    ಮುಸ್ಲಿಮರೇ ನಂ.1

    ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಅವರು ಸಿಎಂ ಸಿದ್ದರಾಮಯ್ಯವರಿಗೆ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವರದಿ ನೀಡಿದ್ದು, ಈ ಜಾತಿಗಣತಿ ಪ್ರಕಾರ, ರಾಜ್ಯದಲ್ಲಿ ಮುಸ್ಲಿಂ ಅತಿ ದೊಡ್ಡ  ಸಮುದಾಯವಾಗಿದೆ.  ಶೇ.14ರಷ್ಟು ಅಂದರೆ ಬರೋಬ್ಬರಿ 75.25 ಲಕ್ಷ ಜಸಂಖ್ಯೆ ಇದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

    ಜಾತಿವಾರುಜನಸಂಖ್ಯೆ ವಿವರ

    ಇನ್ನು ಮುಸ್ಲಿಮರು 75 ರಿಂದ‌ 80 ಲಕ್ಷ ಜನಸಂಖ್ಯೆಯೊಂದಿಗೆ ಕರ್ನಾಟಕದಲ್ಲಿ ನಂಬರ್ ಒನ್ ಪ್ರಬಲ ಸಮುದಾಯವಾಗಿದೆ. ವೀರಶೈವ ಲಿಂಗಾಯತ ಶೇ.11ರಷ್ಟು 60 ರಿಂದ 65 ಲಕ್ಷ ಜನಸಂಖ್ಯೆ ಹೊಂದಿದ್ದು ಕರ್ನಾಟಕದಲ್ಲಿ ಎರಡನೇ ಅತಿ ದೊಡ್ಡ ಸಮುದಾಯವಾಗಿದ್ದರೆ, ಶೇ.10ರೊಂದಿಗೆ ಒಕ್ಕಲಿಗರು 55 ರಿಂದ 60 ಲಕ್ಷ ಜನಸಂಖ್ಯೆ ಹೊಂದಿದ 3ನೇ ಸಮುದಾಯವಾಗಿದೆ. ಇನ್ನು ಕುರುಬರು ಸಮುದಾಯ ಶೇ.8ರಷ್ಟು ಇದ್ದು, 40 ರಿಂದ 45 ಲಕ್ಷ ಜನಸಂಖ್ಯೆ ಹೊಂದಿಗೆ ರಾಜ್ಯದ 4ನೇ ದೊಡ್ಡ ಸಮುದಾಯವಾಗಿದೆ ಎಂದು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಜಾತಿವಾರು ಜನಸಂಖ್ಯೆ ಬಗ್ಗೆ ಉಲ್ಲೇಖವಾಗಿದೆ.

    ಮುಸ್ಲಿಂ ಒಂದು ಧರ್ಮ ಹಾಗೂ ಮುಸ್ಲಿಮರು ಸಾಮಾಜಿಕವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿಲ್ಲ. ಹೀಗಾಗಿ ಅವರಿಗೆ ಮೀಸಲಾತಿ ನೀಡುವ ಅಗತ್ಯವಿಲ್ಲ ಎಂದು ಹೇಳಿ 1974ರಲ್ಲಿ ಹಾವನೂರು ಆಯೋಗದ ವರದಿಯು ಲಿಂಗಾಯತ, ಕ್ರಿಶ್ಚಿಯನ್‌ ಹಾಗೂ ಮುಸ್ಲಿಮರಿಗೆ ಮೀಸಲಾತಿ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ನಡೆಸಿದ ಬಳಿಕ 1985ರಲ್ಲಿ ಸುಪ್ರೀಂ ಕೋರ್ಟ್‌ ಹಾವನೂರು ಆಯೋಗದ ವರದಿಯಲ್ಲೇ ಮುಸ್ಲಿಮರು ಶಿಕ್ಷಣ ಹಾಗೂ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವುದಾಗಿ ತಿಳಿಸಲಾಗಿದೆ. ಹೀಗಾಗಿ ಎಲ್ಲಾ ಹಿಂದುಳಿದ ವರ್ಗಗಳಂತೆ ಮುಸ್ಲಿಮರನ್ನೂ ಪರಿಗಣಿಸಿ ಮೀಸಲಾತಿಗೆ ಅರ್ಹರನ್ನಾಗಿ ಮಾಡಬೇಕು ಎಂದು ಹೇಳಿತ್ತು. ಬಳಿಕ ನೇಮಕವಾದ ವೆಂಕಟಸ್ವಾಮಿ ಆಯೋಗ ಹಾಗೂ ಚಿನ್ನಪ್ಪರೆಡ್ಡಿ ಆಯೋಗದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗದ ಜಾತಿ ಎಂದೇ ಪರಿಗಣಿಸಲಾಗಿದೆ. ಹೀಗಾಗಿ ಕಾಂತರಾಜು ಆಯೋಗ ಹಾಗೂ ಜಯಪ್ರಕಾಶ್‌ ಹೆಗ್ಡೆ ನೇತೃತ್ವದ ಆಯೋಗವು ಮುಸ್ಲಿಮರನ್ನು ಜಾತಿ ಎಂದೇ ಪರಿಗಣಿಸಿದ್ದಾರೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮೂಲಗಳು ತಿಳಿಸಿದ್ದವು.

    ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

    Source link

    Viral: ಬೆಂಗ್ಳೂರಿನಲ್ಲಿ 3BHK ಅಪಾರ್ಟ್‌ಮೆಂಟ್‌ನ ತಿಂಗಳ ಬಾಡಿಗೆ 1.1 ಲಕ್ಷ ರೂ, ವೈರಲ್ ಆಯ್ತು ಪೋಸ್ಟ್

    ಬೆಂಗಳೂರು, ಮೇ 27: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಬಾಡಿಗೆ ಮನೆಯ ದರಗಳು ಗಗನಕ್ಕೇರುತ್ತಿವೆ. ಹೀಗಾಗಿ ತಿಂಗಳ ಸಂಬಳದ ಮುಕ್ಕಾಲು ಭಾಗ ಹಣವನ್ನು ಮನೆ ಬಾಡಿಗೆಗೆ ಮೀಸಲಿಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದೀಗ ವ್ಯಕ್ತಿಯೊಬ್ಬರು ಇದೇ ಬಾಡಿಗೆ ಮನೆ ವಿಚಾರವಾಗಿ ಪೋಸ್ಟ್ ಮಾಡಿದ್ದಾರೆ. ಹೌದು, ಬೆಂಗಳೂರಿನಲ್ಲಿ 3 ಬಿಹೆಚ್ ಕೆ ಅಪಾರ್ಟ್ಮೆಂಟ್‌ನ ತಿಂಗಳ ಬಾಡಿಗೆ 1.1 ಲಕ್ಷ ರೂ ಹಾಗೂ ಡೆಪಾಸಿಟ್ 4 ಲಕ್ಷ ರೂಪಾಯಿ ಎಂದಿದ್ದಾರೆ. ಈ ಪೋಸ್ಟ್ ನಗರದ ಗಗನಕ್ಕೇರುತ್ತಿರುವ ವಸತಿ ವೆಚ್ಚಗಳ ಬಗ್ಗೆ ಆನ್‌ಲೈನ್‌ನಲ್ಲಿ ಚರ್ಚೆ ಹುಟ್ಟುಹಾಕಿದೆ.

    @kipupwidanshika ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ನ ಶೀರ್ಷಿಕೆಯಲ್ಲಿ ಬೆಂಗಳೂರಿನಲ್ಲಿ 3ಬಿಹೆಚ್ ಕೆ ಮನೆಗೆ 1.1 ಲಕ್ಷ ರೂಪಾಯಿಗೆ ಬಾಡಿಗೆ. ಇದು ನಿಜಕ್ಕೂ ಯಾರೊಬ್ಬರ ಮಾಸಿಕ ಸಂಬಳವೇ? ಎಂದು ಬರೆದುಕೊಂಡಿದ್ದಾರೆ. ಪೋಸ್ಟ್‌ನೊಂದಿಗೆ ಸ್ಕ್ರೀನ್‌ಶಾಟ್‌ನಲ್ಲಿ ದೊಮ್ಮಲೂರು ಮತ್ತು ಇಂದಿರಾನಗರದ ಎಂಬಸಿ ಗಾಲ್ಫ್ ಲಿಂಕ್ಸ್ ಬಿಸಿನೆಸ್ ಪಾರ್ಕ್ ಬಳಿ ಇರುವ ಅರೆ ಸುಸಜ್ಜಿತ 3BHK ಫ್ಲಾಟ್‌ನ ವಿವರಗಳನ್ನು ತೋರಿಸಲಾಗಿದೆ. ಈ ಅಪಾರ್ಟ್ಮೆಂಟ್ ಸುಮಾರು 1800 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ.

    ವೈರಲ್ ಪೋಸ್ಟ್ ಇಲ್ಲಿದೆ

    ಖಾಸಗಿ ಟೆರೇಸ್, ಬಾಲ್ಕನಿ, ಪೂಜಾ ಕೊಠಡಿ, ಮಾಡ್ಯುಲರ್ ಅಡುಗೆಮನೆ ಮತ್ತು ಲಿವಿಂಗ್ ರೂಮಿನಲ್ಲಿ ಮರದ ನೆಲಹಾಸು ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮಾಸಿಕ ಬಾಡಿಗೆಯನ್ನು 1.1 ಲಕ್ಷ ರೂ, ನಿರ್ವಹಣಾ ಶುಲ್ಕಗಳು ಸುಮಾರು 6,000 ರೂ ಫ್ಲಾಟ್‌ಗೆ ಭದ್ರತಾ ಠೇವಣಿ 4 ಲಕ್ಷ ರೂ ಎಂದು ಉಲ್ಲೇಖಿಸಿರುವುದನ್ನು ಕಾಣಬಹುದು. ಈ ಅಪಾರ್ಟ್‌ಮೆಂಟ್ ನ ಸಂಕೀರ್ಣದಲ್ಲಿ ಈಜುಕೊಳ, ಜಿಮ್ನಾಷಿಯಂ, ಟೆನಿಸ್ ಕೋರ್ಟ್, ಸ್ಕ್ವಾಷ್ ಕೋರ್ಟ್, ಸ್ಕೇಟಿಂಗ್ ರಿಂಕ್, ಉದ್ಯಾನಗಳು ಮತ್ತು ಸಮುದಾಯ ಭವನ ಸೇರಿದಂತೆ ಇನ್ನಿತ್ತರ ಸೌಲಭ್ಯಗಳನ್ನು ಹೊಂದಿರುವ ಬಗ್ಗೆ ಉಲ್ಲೇಖಿಸಲಾಗಿದೆ.

    ಇದನ್ನೂ ಓದಿ: ಮನೆ ಬಾಗಿಲಿಗೆ ಬರುವ ಪೌರ ಕಾರ್ಮಿಕರಿಗೆ ಚಹಾ ಬಿಸ್ಕೆಟ್ ಕೊಟ್ಟು ಉಪಚರಿಸುವ ಮಹಿಳೆ

    ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದು ಲೂಟಿ ಮಾಡುವ ವಿಧಾನ. ಇದಕ್ಕೆ ಹಣ ನೀಡುವ ಯಾರಾದರೂ ಮೂರ್ಖರೇ ಸರಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ಅಪಾರ್ಟ್ಮೆಂಟ್ ನನ್ನ ಅಪಾರ್ಟ್ಮೆಂಟ್ ನ ಪಕ್ಕದಲ್ಲಿದೆ. ಹಿಂದಿನ ದಾಖಲೆಗಳ ಆಧಾರದ ಮೇಲೆ ಈ ಮಾಲೀಕರು ಕೆಟ್ಟವರು. ಅವರು ತಮ್ಮ ಫ್ಲಾಟ್ ಅನ್ನು ಬಾಡಿಗೆಗೆ ನೀಡುವ ಮೂಲಕ ಒಂದು ಉಪಕಾರ ಮಾಡುತ್ತಿರುವಂತೆ ವರ್ತಿಸುತ್ತಾರೆ. ಇದು 20 ವರ್ಷ ಹಳೆಯ ಫ್ಲಾಟ್ ಮತ್ತು ಹೊರಗಿನಿಂದ ಬಿರುಕುಗಳು ಗೋಚರಿಸುತ್ತವೆ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ. ಇನ್ನೊಬ್ಬರು, ಬಾಡಿಗೆ ಮನೆಗಿಂತ ಸ್ವಂತ ಮನೆ ಖರೀದಿಸಿದರೆ ಅದೇ ಬಾಡಿಗೆ ದುಡ್ಡಲ್ಲಿ ಸಾಲ ತೀರಿಸಬಹುದು ಎಂದಿದ್ದಾರೆ.

    ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Source link

    ಹಂಪಿಯಿಂದ ಕೋಲಾರಕ್ಕೆ ಶಿಫ್ಟ್: ಸ್ಥಳ ಬದಲಾಗಿದ್ದಕ್ಕೆ ವಿಚಲಿತವಾಗಿ ಆರ್ಭಟಿಸಿದ ಲಕ್ಷ್ಮೀ ಆನೆ

    ಕೋಲಾರ, ಮೇ 27: ಅನಾರೋಗ್ಯ ಹಿನ್ನೆಲೆ ವಿಜಯನಗರ ಜಿಲ್ಲೆಯ ಹಂಪಿಯ ವಿರುಪಾಕ್ಷೇಶ್ವರ ದೇವಾಲಯದಿಂದ ಸ್ಥಳಾಂತರಿಸಲಾಗಿರುವ ಲಕ್ಷ್ಮೀ ಆನೆ, ಕೋಲಾರ ತಾಲ್ಲೂಕು ನರಸಾಪುರ ಬಳಿಯ ಆನೆ ಪುನರ್ವಸತಿ ಕೇಂದ್ರಕ್ಕೆ ಆಗಮಿಸಿದ ಕೂಡಲೇ ಸ್ವಲ್ಪ ವಿಚಲಿತಗೊಂಡು ಆರ್ಭಟಿಸಿದೆ. ಅರಣ್ಯ ಇಲಾಖೆಯಿಂದ ನಿರ್ಮಾಣವಾಗಿರುವ ರಾಜ್ಯದ ಏಕೈಕ ಆನೆ ಪುನರ್ವಸತಿ ಕೇಂದ್ರಕ್ಕೆ ಲಕ್ಷ್ಮೀ ಆನೆಯನ್ನು ಬುಧವಾರ ಸ್ಥಳಾಂತರಿಸಲಾಗಿತ್ತು. ಹೊಸ ಜಾಗಕ್ಕೆ ಬಂದಿರುವ ಕಾರಣಕ್ಕೆ ಲಕ್ಷ್ಮೀ ಆನೆ ಕೊಂಚ ವಿಚಲಿತಗೊಂಡು ಆರ್ಭಟಿಸಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಕ್ಷ್ಮೀ ಆನೆಯನ್ನು ಹಂಪಿಯಿಂದ ಸ್ಥಳಾಂತರಿಸುವ ನಿರ್ಧಾರಕ್ಕೆ ನಿನ್ನೆ ದೇವಾಲಯದ ಭಕ್ತರು ಪ್ರತಿಭಟನೆ ನಡೆಸಿದ್ದರು. ಮೂರು ತಿಂಗಳ ಚಿಕಿತ್ಸೆ ಬಳಿಕ ವಾಪಸ್ ಕರೆತಂದು ಬಿಡುವ ಭರವಸೆ ನೀಡಿದ ಬಳಿಕ ಭಕ್ತರು ಪ್ರತಿಭಟನೆ ಕೈಬಿಟ್ಟಿದ್ದರು. ಸದ್ಯ ಪುನರ್ವಸತಿ ಕೇಂದ್ರದಲ್ಲಿ ಲಕ್ಷ್ಮೀ ಆನೆ ಸೇರಿದಂತೆ ಹತ್ತಕ್ಕೂ ಹೆಚ್ಚು ಆನೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

    ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

    Source link