Category Archives: Blog

Your blog category

Viral: ಬೆಂಗ್ಳೂರಿನಲ್ಲಿ 3BHK ಅಪಾರ್ಟ್‌ಮೆಂಟ್‌ನ ತಿಂಗಳ ಬಾಡಿಗೆ 1.1 ಲಕ್ಷ ರೂ, ವೈರಲ್ ಆಯ್ತು ಪೋಸ್ಟ್

ಬೆಂಗಳೂರು, ಮೇ 27: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಬಾಡಿಗೆ ಮನೆಯ ದರಗಳು ಗಗನಕ್ಕೇರುತ್ತಿವೆ. ಹೀಗಾಗಿ ತಿಂಗಳ ಸಂಬಳದ ಮುಕ್ಕಾಲು ಭಾಗ ಹಣವನ್ನು ಮನೆ ಬಾಡಿಗೆಗೆ ಮೀಸಲಿಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದೀಗ ವ್ಯಕ್ತಿಯೊಬ್ಬರು ಇದೇ ಬಾಡಿಗೆ ಮನೆ ವಿಚಾರವಾಗಿ ಪೋಸ್ಟ್ ಮಾಡಿದ್ದಾರೆ. ಹೌದು, ಬೆಂಗಳೂರಿನಲ್ಲಿ 3 ಬಿಹೆಚ್ ಕೆ ಅಪಾರ್ಟ್ಮೆಂಟ್‌ನ ತಿಂಗಳ ಬಾಡಿಗೆ 1.1 ಲಕ್ಷ ರೂ ಹಾಗೂ ಡೆಪಾಸಿಟ್ 4 ಲಕ್ಷ ರೂಪಾಯಿ ಎಂದಿದ್ದಾರೆ. ಈ ಪೋಸ್ಟ್ ನಗರದ ಗಗನಕ್ಕೇರುತ್ತಿರುವ ವಸತಿ ವೆಚ್ಚಗಳ ಬಗ್ಗೆ ಆನ್‌ಲೈನ್‌ನಲ್ಲಿ ಚರ್ಚೆ ಹುಟ್ಟುಹಾಕಿದೆ.

@kipupwidanshika ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ನ ಶೀರ್ಷಿಕೆಯಲ್ಲಿ ಬೆಂಗಳೂರಿನಲ್ಲಿ 3ಬಿಹೆಚ್ ಕೆ ಮನೆಗೆ 1.1 ಲಕ್ಷ ರೂಪಾಯಿಗೆ ಬಾಡಿಗೆ. ಇದು ನಿಜಕ್ಕೂ ಯಾರೊಬ್ಬರ ಮಾಸಿಕ ಸಂಬಳವೇ? ಎಂದು ಬರೆದುಕೊಂಡಿದ್ದಾರೆ. ಪೋಸ್ಟ್‌ನೊಂದಿಗೆ ಸ್ಕ್ರೀನ್‌ಶಾಟ್‌ನಲ್ಲಿ ದೊಮ್ಮಲೂರು ಮತ್ತು ಇಂದಿರಾನಗರದ ಎಂಬಸಿ ಗಾಲ್ಫ್ ಲಿಂಕ್ಸ್ ಬಿಸಿನೆಸ್ ಪಾರ್ಕ್ ಬಳಿ ಇರುವ ಅರೆ ಸುಸಜ್ಜಿತ 3BHK ಫ್ಲಾಟ್‌ನ ವಿವರಗಳನ್ನು ತೋರಿಸಲಾಗಿದೆ. ಈ ಅಪಾರ್ಟ್ಮೆಂಟ್ ಸುಮಾರು 1800 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ.

ವೈರಲ್ ಪೋಸ್ಟ್ ಇಲ್ಲಿದೆ

ಖಾಸಗಿ ಟೆರೇಸ್, ಬಾಲ್ಕನಿ, ಪೂಜಾ ಕೊಠಡಿ, ಮಾಡ್ಯುಲರ್ ಅಡುಗೆಮನೆ ಮತ್ತು ಲಿವಿಂಗ್ ರೂಮಿನಲ್ಲಿ ಮರದ ನೆಲಹಾಸು ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮಾಸಿಕ ಬಾಡಿಗೆಯನ್ನು 1.1 ಲಕ್ಷ ರೂ, ನಿರ್ವಹಣಾ ಶುಲ್ಕಗಳು ಸುಮಾರು 6,000 ರೂ ಫ್ಲಾಟ್‌ಗೆ ಭದ್ರತಾ ಠೇವಣಿ 4 ಲಕ್ಷ ರೂ ಎಂದು ಉಲ್ಲೇಖಿಸಿರುವುದನ್ನು ಕಾಣಬಹುದು. ಈ ಅಪಾರ್ಟ್‌ಮೆಂಟ್ ನ ಸಂಕೀರ್ಣದಲ್ಲಿ ಈಜುಕೊಳ, ಜಿಮ್ನಾಷಿಯಂ, ಟೆನಿಸ್ ಕೋರ್ಟ್, ಸ್ಕ್ವಾಷ್ ಕೋರ್ಟ್, ಸ್ಕೇಟಿಂಗ್ ರಿಂಕ್, ಉದ್ಯಾನಗಳು ಮತ್ತು ಸಮುದಾಯ ಭವನ ಸೇರಿದಂತೆ ಇನ್ನಿತ್ತರ ಸೌಲಭ್ಯಗಳನ್ನು ಹೊಂದಿರುವ ಬಗ್ಗೆ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಮನೆ ಬಾಗಿಲಿಗೆ ಬರುವ ಪೌರ ಕಾರ್ಮಿಕರಿಗೆ ಚಹಾ ಬಿಸ್ಕೆಟ್ ಕೊಟ್ಟು ಉಪಚರಿಸುವ ಮಹಿಳೆ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದು ಲೂಟಿ ಮಾಡುವ ವಿಧಾನ. ಇದಕ್ಕೆ ಹಣ ನೀಡುವ ಯಾರಾದರೂ ಮೂರ್ಖರೇ ಸರಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ಅಪಾರ್ಟ್ಮೆಂಟ್ ನನ್ನ ಅಪಾರ್ಟ್ಮೆಂಟ್ ನ ಪಕ್ಕದಲ್ಲಿದೆ. ಹಿಂದಿನ ದಾಖಲೆಗಳ ಆಧಾರದ ಮೇಲೆ ಈ ಮಾಲೀಕರು ಕೆಟ್ಟವರು. ಅವರು ತಮ್ಮ ಫ್ಲಾಟ್ ಅನ್ನು ಬಾಡಿಗೆಗೆ ನೀಡುವ ಮೂಲಕ ಒಂದು ಉಪಕಾರ ಮಾಡುತ್ತಿರುವಂತೆ ವರ್ತಿಸುತ್ತಾರೆ. ಇದು 20 ವರ್ಷ ಹಳೆಯ ಫ್ಲಾಟ್ ಮತ್ತು ಹೊರಗಿನಿಂದ ಬಿರುಕುಗಳು ಗೋಚರಿಸುತ್ತವೆ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ. ಇನ್ನೊಬ್ಬರು, ಬಾಡಿಗೆ ಮನೆಗಿಂತ ಸ್ವಂತ ಮನೆ ಖರೀದಿಸಿದರೆ ಅದೇ ಬಾಡಿಗೆ ದುಡ್ಡಲ್ಲಿ ಸಾಲ ತೀರಿಸಬಹುದು ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಂಪಿಯಿಂದ ಕೋಲಾರಕ್ಕೆ ಶಿಫ್ಟ್: ಸ್ಥಳ ಬದಲಾಗಿದ್ದಕ್ಕೆ ವಿಚಲಿತವಾಗಿ ಆರ್ಭಟಿಸಿದ ಲಕ್ಷ್ಮೀ ಆನೆ

ಕೋಲಾರ, ಮೇ 27: ಅನಾರೋಗ್ಯ ಹಿನ್ನೆಲೆ ವಿಜಯನಗರ ಜಿಲ್ಲೆಯ ಹಂಪಿಯ ವಿರುಪಾಕ್ಷೇಶ್ವರ ದೇವಾಲಯದಿಂದ ಸ್ಥಳಾಂತರಿಸಲಾಗಿರುವ ಲಕ್ಷ್ಮೀ ಆನೆ, ಕೋಲಾರ ತಾಲ್ಲೂಕು ನರಸಾಪುರ ಬಳಿಯ ಆನೆ ಪುನರ್ವಸತಿ ಕೇಂದ್ರಕ್ಕೆ ಆಗಮಿಸಿದ ಕೂಡಲೇ ಸ್ವಲ್ಪ ವಿಚಲಿತಗೊಂಡು ಆರ್ಭಟಿಸಿದೆ. ಅರಣ್ಯ ಇಲಾಖೆಯಿಂದ ನಿರ್ಮಾಣವಾಗಿರುವ ರಾಜ್ಯದ ಏಕೈಕ ಆನೆ ಪುನರ್ವಸತಿ ಕೇಂದ್ರಕ್ಕೆ ಲಕ್ಷ್ಮೀ ಆನೆಯನ್ನು ಬುಧವಾರ ಸ್ಥಳಾಂತರಿಸಲಾಗಿತ್ತು. ಹೊಸ ಜಾಗಕ್ಕೆ ಬಂದಿರುವ ಕಾರಣಕ್ಕೆ ಲಕ್ಷ್ಮೀ ಆನೆ ಕೊಂಚ ವಿಚಲಿತಗೊಂಡು ಆರ್ಭಟಿಸಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಕ್ಷ್ಮೀ ಆನೆಯನ್ನು ಹಂಪಿಯಿಂದ ಸ್ಥಳಾಂತರಿಸುವ ನಿರ್ಧಾರಕ್ಕೆ ನಿನ್ನೆ ದೇವಾಲಯದ ಭಕ್ತರು ಪ್ರತಿಭಟನೆ ನಡೆಸಿದ್ದರು. ಮೂರು ತಿಂಗಳ ಚಿಕಿತ್ಸೆ ಬಳಿಕ ವಾಪಸ್ ಕರೆತಂದು ಬಿಡುವ ಭರವಸೆ ನೀಡಿದ ಬಳಿಕ ಭಕ್ತರು ಪ್ರತಿಭಟನೆ ಕೈಬಿಟ್ಟಿದ್ದರು. ಸದ್ಯ ಪುನರ್ವಸತಿ ಕೇಂದ್ರದಲ್ಲಿ ಲಕ್ಷ್ಮೀ ಆನೆ ಸೇರಿದಂತೆ ಹತ್ತಕ್ಕೂ ಹೆಚ್ಚು ಆನೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: ಫೈನಲ್​ಗೇರಿರುವ ಆರ್​ಸಿಬಿ ಮೇಲೆ ಕೋಟಿ ಮೊತ್ತದ ಬಹುಮಾನದ ಮಳೆ

Source link

ರೋಗಿ ಜೊತೆ ಅನೈತಿಕ ಸಂಬಂಧ; ಭಾರತ ಮೂಲದ ಇಂಗ್ಲೆಂಡ್ ವೈದ್ಯನ ಲೈಸೆನ್ಸ್ ರದ್ದು!

ನವದೆಹಲಿ, ಮೇ 27: ಯುನೈಟೆಡ್ ಕಿಂಗ್ಡಮ್ (ಇಂಗ್ಲೆಂಡ್)ನಲ್ಲಿ ಭಾರತೀಯ ಮೂಲದ ವೈದ್ಯರೊಬ್ಬರು ರೋಗಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಲ್ಲದೆ ಆಕೆಗೆ ಕಾನೂನುಬಾಹಿರವಾಗಿ ಅಫೀಮು ಆಧಾರಿತ ಮಾದಕ ದ್ರವ್ಯಗಳನ್ನು ನೀಡಿದ ಗಂಭೀರ ಆರೋಪದ ಮೇಲೆ ಅವರ ವೈದ್ಯಕೀಯ ಲೈಸೆನ್ಸ್ ಅನ್ನು ರದ್ದುಗೊಳಿಸಲಾಗಿದೆ. ಆರೋಪಿ ವೈದ್ಯರ ಹೆಸರು ಡಾ. ಚಿರಾಗ್ ಪಟೇಲ್. ಇವರು ಕಾರ್ಡಿಫ್‌ನ ‘ಯೂನಿವರ್ಸಿಟಿ ಹಾಸ್ಪಿಟಲ್ ಆಫ್ ವೇಲ್ಸ್’ನಲ್ಲಿ ಕನ್ಸಲ್ಟೆಂಟ್ ನ್ಯೂರೋಸರ್ಜನ್ ಆಗಿ 2018ರಿಂದ ಸೇವೆ ಸಲ್ಲಿಸುತ್ತಿದ್ದರು.

ಇಡೀ ವೇಲ್ಸ್ ಭಾಗದಲ್ಲಿ ಈ ನಿರ್ದಿಷ್ಟ ಬೆನ್ನುಮೂಳೆಯ ಕಾಯಿಲೆಗೆ ಚಿಕಿತ್ಸೆ ನೀಡಬಲ್ಲ ಏಕೈಕ ವೈದ್ಯ ಇವರಾಗಿದ್ದರು. ಆದರೆ, ರೋಗಿಯ ಜೊತೆ ಅನೈತಿಕ ಸಂಬಂಧ ಹೊಂದಿದ ಮತ್ತು ಆಕೆಯ ವೈದ್ಯಕೀಯ ದಾಖಲೆಗಳಲ್ಲಿ ನಮೂದಿಸದೆಯೇ ಅತ್ಯಂತ ವ್ಯಸನಕಾರಿ ನೋವು ನಿವಾರಕ ಮಾತ್ರೆಗಳನ್ನು (Opioids) ನೀಡಿದ ಹಿನ್ನೆಲೆಯಲ್ಲಿ ಅವರನ್ನು 8 ತಿಂಗಳ ಕಾಲ ವೈದ್ಯಕೀಯ ವೃತ್ತಿ ಮಾಡದಂತೆ ಅಮಾನತುಗೊಳಿಸಲಾಗಿದೆ.

ಇದನ್ನೂ ಓದಿ: 3 ವರ್ಷದ ಮಗುವಿಗೆ ಮರುಜೀವ; ಉಚಿತವಾಗಿ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು

ಕೇವಲ ದೈಹಿಕ ಸಂಬಂಧ ಮಾತ್ರವಲ್ಲದೆ, ಆ ಮಹಿಳೆಗೆ ವೈದ್ಯಕೀಯ ಚೀಟಿ (Prescription) ಇಲ್ಲದೆಯೇ ಅತ್ಯಂತ ಅಪಾಯಕಾರಿ ಮತ್ತು ವ್ಯಸನಕಾರಿ ಔಷಧಗಳಾದ ‘ಒಪಿಯಾಡ್ಸ್’ (ಅಫೀಮು ಆಧಾರಿತ ನೋವು ನಿವಾರಕ ಮಾತ್ರೆಗಳು) ಅನ್ನು ಅಕ್ರಮವಾಗಿ ನೀಡುತ್ತಿದ್ದರು. ಈ ಘಟನೆಯು ಬೆಳಕಿಗೆ ಬಂದ ತಕ್ಷಣ ಯುಕೆಯ ವೈದ್ಯಕೀಯ ಮಂಡಳಿಯು ಇದನ್ನು ಅತ್ಯಂತ ಗಂಭೀರ ವೃತ್ತಿಪರ ದುರ್ನಡತೆ ಎಂದು ಪರಿಗಣಿಸಿದೆ.

ಇಂಗ್ಲೆಂಡ್​​ನ ವೈದ್ಯಕೀಯ ನ್ಯಾಯಮಂಡಳಿಯು ಡಾ. ಅಮೀರ್ ಕಮಲ್ ಅವರ ವೈದ್ಯಕೀಯ ನೋಂದಣಿ ಮತ್ತು ಲೈಸೆನ್ಸ್ ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಅವರು ಇನ್ನು ಮುಂದೆ ಇಂಗ್ಲೆಂಡ್​​ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುವಂತಿಲ್ಲ. ವೈದ್ಯರ ಈ ವರ್ತನೆಯು ಇಡೀ ವೈದ್ಯಕೀಯ ಕ್ಷೇತ್ರದ ಮೇಲಿರುವ ಸಾರ್ವಜನಿಕರ ನಂಬಿಕೆಗೆ ದ್ರೋಹ ಬಗೆದಂತಿದೆ ಎಂದು ವೈದ್ಯಕೀಯ ಮಂಡಳಿ ಆಕ್ರೋಶ ವ್ಯಕ್ತಪಡಿಸಿದೆ. ಅವರ ವಿರುದ್ಧ ಮತ್ತಷ್ಟು ತನಿಖೆ ನಡೆಯುತ್ತಿದ್ದು, ಅವರ ಲೈಸೆನ್ಸ್ ಅನ್ನು ಶಾಶ್ವತವಾಗಿ ರದ್ದುಗೊಳಿಸುವ ಸಾಧ್ಯತೆಯೂ ಇದೆ.

ಏನಿದು ಘಟನೆ?:

2019ರ ಫೆಬ್ರವರಿಯಲ್ಲಿ ಬೆನ್ನುಮೂಳೆಯ ಡಿಸ್ಕ್ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ಡಾ. ಚಿರಾಗ್ ಪಟೇಲ್ ಮೊದಲ ಬಾರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದರು. 2019ರ ಆಗಸ್ಟ್​​ನಲ್ಲಿ ಆಕೆಗೆ ಎರಡನೇ ಬಾರಿ ಶಸ್ತ್ರಚಿಕಿತ್ಸೆ ಮಾಡಿದ ನಂತರ, ತುರ್ತು ವೈದ್ಯಕೀಯ ಕಾರಣಗಳಿಗಾಗಿ ಸಂಪರ್ಕಿಸಲು ವೈದ್ಯರು ತಮ್ಮ ವೈಯಕ್ತಿಕ ಫೋನ್ ನಂಬರ್ ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ವೈಯಕ್ತಿಕ ಸಂಬಂಧ ಆರಂಭವಾಗಿ, ಅದು ಲೈಂಗಿಕ ಸಂಬಂಧಕ್ಕೆ ತಿರುಗಿತು. ಈ 6 ತಿಂಗಳ ಸಂಬಂಧದ ಅವಧಿಯಲ್ಲಿ ವೈದ್ಯರು ತಮ್ಮ ನಗ್ನ ಚಿತ್ರಗಳನ್ನು ಸಹ ಆಕೆಗೆ ಕಳುಹಿಸಿದ್ದರು. 2021ರ ಡಿಸೆಂಬರ್ ತಿಂಗಳಲ್ಲಿ ವೈದ್ಯರು ಆಕೆಗೆ ಮೂರನೇ ಬಾರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದರು.

ಇದನ್ನೂ ಓದಿ: ಆಪರೇಷನ್ ಮಾಡದೆ ಸುಳ್ಳು ಹೇಳಿ ಹಣ ಪೀಕಿದ ವೈದ್ಯ?: ಸ್ಕ್ಯಾನಿಂಗ್​​ ವರದಿ ಕಂಡು ರೋಗಿಗೆ ಶಾಕ್​​!

ಇವರಿಬ್ಬರ ನಡುವಿನ ನಿಕಟ ಸಂಬಂಧ ಜನವರಿ 2023ರವರೆಗೆ ಮುಂದುವರಿದಿತ್ತು. ಈ ಸಮಯದಲ್ಲಿ ಡಾ. ಚಿರಾಗ್ ಪಟೇಲ್ ಆಕೆಗೆ ಅಪಾಯಕಾರಿ ಮಾದಕ ದ್ರವ್ಯಗಳಾದ ‘ಮಾರ್ಫಿನ್ ಸಲ್ಫೇಟ್’ ಮತ್ತು ‘ಡಯಾಜೆಪಮ್’ ಮಾತ್ರೆಗಳನ್ನು ಆಸ್ಪತ್ರೆಯ ಅಧಿಕೃತ ದಾಖಲೆಗಳಿಗೆ ಸೇರಿಸದೆಯೇ ಅಕ್ರಮವಾಗಿ ನೀಡುತ್ತಿದ್ದರು. ಆ ಮಹಿಳೆ ಡಾ. ಚಿರಾಗ್ ಪಟೇಲ್ ಜೊತೆಗಿನ ತನ್ನ ಸಂಬಂಧದ ವಿಷಯವನ್ನು ಎಲ್ಲರಿಗೂ ತಿಳಿಸುವುದಾಗಿ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದ ಕಾರಣದಿಂದ ಆಕೆಗೆ ಮಾತ್ರೆಗಳನ್ನು ನೀಡುತ್ತಿದ್ದುದಾಗಿ ಚಿರಾಗ್ ಪಟೇಲ್ ಅವರೇ ಒಪ್ಪಿಕೊಂಡಿದ್ದಾರೆ ಎಂದು ಎನ್​ಡಿಟಿವಿ ವರದಿ ಮಾಡಿದೆ.

ಇಬ್ಬರ ಸಂಬಂಧ ಹದಗೆಟ್ಟ ನಂತರ, ಆ ಮಹಿಳೆಯು ಪೊಲೀಸರ ಬಳಿ ಹೋಗಿ ದೂರು ನೀಡಿದ್ದರು. ಪೊಲೀಸರು ಅಧಿಕೃತವಾಗಿ ಕೇಸ್ ದಾಖಲಿಸದಿದ್ದರೂ, ಆರೋಗ್ಯ ಮಂಡಳಿಯ ವೈದ್ಯಕೀಯ ನಿರ್ದೇಶಕರಿಗೆ ಮಾಹಿತಿ ನೀಡಿದ್ದರು. ಅದೇ ತಿಂಗಳು ಡಾ. ಚಿರಾಗ್ ಪಟೇಲ್ ತಾವೇ ಜನರಲ್ ಮೆಡಿಕಲ್ ಕೌನ್ಸಿಲ್ (GMC) ಮುಂದೆ ಶರಣಾದರು. ಪ್ರಸ್ತುತ ಕಾರ್ಡಿಫ್ ಆರೋಗ್ಯ ಮಂಡಳಿಯು ಡಾ. ಚಿರಾಗ್ ಪಟೇಲ್ ಅವರನ್ನು ಸೇವೆಯಿಂದ ವಜಾಗೊಳಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಷೇರುಬಜಾರಲ್ಲಿ ಅದಾನಿ ಪವರ್ ಅಬ್ಬರ; ಮಾರುಕಟ್ಟೆ ಮೌಲ್ಯದಲ್ಲಿ ಇನ್ಫೋಸಿಸ್ ಹಿಂದಿಕ್ಕಿದ್ದು ಹೇಗೆ?

ಮುಂಬೈ, ಮೇ 27: ಭಾರತದ ಷೇರು ಮಾರುಕಟ್ಟೆಯಲ್ಲಿ (Stock Market) ಅದಾನಿ ಗ್ರೂಪ್‌ನ ಪ್ರಮುಖ ಕಂಪನಿಯಾದ ‘ಅದಾನಿ ಪವರ್’ (Adani Power) ಐತಿಹಾಸಿಕ ಸಾಧನೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಕಂಪನಿಯ ಷೇರುಗಳು ಬರೋಬ್ಬರಿ ಶೇ. 124 ರಷ್ಟು ಭಾರಿ ಜಿಗಿತ ಕಂಡ ಹಿನ್ನೆಲೆಯಲ್ಲಿ, ಅದರ ಷೇರು ಸಂಪತ್ತು ಅಥವಾ ಮಾರುಕಟ್ಟೆ ಮೌಲ್ಯ (Market Capitalization) ಗಣನೀಯವಾಗಿ ಹೆಚ್ಚಿದೆ. ಇದರೊಂದಿಗೆ, ಮಾರುಕಟ್ಟೆ ಮೌಲ್ಯದಲ್ಲಿ ಐಟಿ ದಿಗ್ಗಜ ಇನ್ಫೋಸಿಸ್ (Infosys) ಅನ್ನು ಹಿಂದಿಕ್ಕಿದೆ. ಇದೀಗ ಅದಾನಿ ಪವರ್ ದೇಶದ ಅತ್ಯಂತ ಮೌಲ್ಯಯುತ ಟಾಪ್ ಕಂಪನಿಗಳ ಲೀಗ್‌ಗೆ ಅಧಿಕೃತವಾಗಿ ಲಗ್ಗೆ ಇಟ್ಟಂತಾಗಿದೆ. ಭಾರತದ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಅತಿಹೆಚ್ಚು ಮೌಲ್ಯದ ಕಂಪನಿಗಳ ಪಟ್ಟಿಯಲ್ಲಿ ಅದಾನಿ ಪವರ್ 11ನೇ ಸ್ಥಾನಕ್ಕೇರಿದೆ. ರಿಲಾಯನ್ಸ್​ನಿಂದ ಹಿಡಿದು ಐಟಿಸಿವರೆಗೆ ವಿವಿಧ ಕಂಪನಿಗಳು ಟಾಪ್-10ನಲ್ಲಿ ಇವೆ.

ಅದಾನಿ ವರ್ಸಸ್ ಇನ್ಫೋಸಿಸ್, ಮಾರುಕಟ್ಟೆ ಮೌಲ್ಯ

ಷೇರು ಮಾರುಕಟ್ಟೆಯ ಇವತ್ತಿನ ವಹಿವಾಟಿನ ನಂತರದ ಅಂಕಿ-ಅಂಶಗಳ ಪ್ರಕಾರ ಎರಡೂ ಕಂಪನಿಗಳ ಮಾರುಕಟ್ಟೆ ಮೌಲ್ಯದ ಸ್ಥಿತಿ ಹೀಗಿದೆ:

  • ಅದಾನಿ ಪವರ್ (Adani Power): ₹6.78 ಲಕ್ಷ ಕೋಟಿಗಿಂತ ಹೆಚ್ಚು
  • ಇನ್ಫೋಸಿಸ್ (Infosys): ₹6.63 ಲಕ್ಷ ಕೋಟಿ

ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ಭಾರತದ ಸಾಂಪ್ರದಾಯಿಕ ಮತ್ತು ಅತ್ಯಂತ ಬಲಿಷ್ಠ ಐಟಿ ಕಂಪನಿಯಾದ ಇನ್ಫೋಸಿಸ್ ಅನ್ನು ಇಂಧನ ಮತ್ತು ವಿದ್ಯುತ್ ವಲಯದ ಕಂಪನಿಯೊಂದು ಮಾರುಕಟ್ಟೆ ಮೌಲ್ಯದಲ್ಲಿ ಓವರ್‌ಟೇಕ್ ಮಾಡಿರುವುದು ಹೂಡಿಕೆದಾರರಲ್ಲಿ ಭಾರಿ ಸಂಚಲನ ಮೂಡಿಸಿದೆ.

ಇದನ್ನೂ ಓದಿ: ಆನ್​ಲೈನ್ ಗೇಮಿಂಗ್ ಕಂಪನಿಗಳಿಗೆ ಸುಪ್ರೀಂ ಶಾಕ್; ಶೇ 28 ಜಿಎಸ್​ಟಿ ಪೂರ್ವಾನ್ವಯ ತೆರಿಗೆ ಸಿಂಧು ಎಂದು ಕೋರ್ಟ್ ತೀರ್ಪು

ಅದಾನಿ ಪವರ್​ನ ಈ ಭಾರಿ ರ‍್ಯಾಲಿಗೆ ಪ್ರಮುಖ ಕಾರಣಗಳೇನು?

ಲಾಭದಲ್ಲಿ ಭಾರಿ ಪ್ರಗತಿ: ಅದಾನಿ ಪವರ್ ಕಂಪನಿಯು ಇತ್ತೀಚಿನ ತ್ರೈಮಾಸಿಕಗಳಲ್ಲಿ ಸತತವಾಗಿ ಬಲವಾದ ನಿವ್ವಳ ಲಾಭ (Net Profit) ಮತ್ತು ಆದಾಯವನ್ನು ದಾಖಲಿಸುತ್ತಾ ಬಂದಿದೆ. ದೇಶದಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯು ಕಂಪನಿಗೆ ವರದಾನವಾಗಿದೆ.

ಸಾಲ ಮರುಪಾವತಿ ಮತ್ತು ಆರ್ಥಿಕ ಸುಧಾರಣೆ: ಹಿಂಡನ್‌ಬರ್ಗ್ ವಿವಾದದ ನಂತರ ಅದಾನಿ ಸಮೂಹವು ತನ್ನ ಸಾಲಗಳನ್ನು ಗಣನೀಯವಾಗಿ ಕಡಿಮೆ ಮಾಡಿಕೊಂಡಿದ್ದು, ಸಾಲದಾತರು ಮತ್ತು ಜಾಗತಿಕ ಹೂಡಿಕೆದಾರರಲ್ಲಿ ನಂಬಿಕೆ ದುಪ್ಪಟ್ಟಾಗಿದೆ.

ಸಾಂಸ್ಥಿಕ ಹೂಡಿಕೆದಾರರ ಒಲವು: ದೇಶೀಯ (DII) ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಅದಾನಿ ಪವರ್ ಷೇರುಗಳನ್ನು ಭಾರಿ ಪ್ರಮಾಣದಲ್ಲಿ ಖರೀದಿಸುತ್ತಿರುವುದು ಷೇರು ಬೆಲೆ 124% ನಷ್ಟು ಹೆಚ್ಚಾಗಲು ಮುಖ್ಯ ಕಾರಣವಾಗಿದೆ.

ಇದನ್ನೂ ಓದಿ: ಪ. ಬಂಗಾಳದಲ್ಲಿ ತೈಲ ನಿಕ್ಷೇಪ; ಉತ್ಪಾದನೆ ದಿಕ್ಕು ಕಾಣಲು ಬೇಕಾಯ್ತು 7 ವರ್ಷ

ಇನ್ಫೋಸಿಸ್‌ಗೆ ಹಿನ್ನಡೆ ಏಕೆ?

ಮತ್ತೊಂದೆಡೆ, ಜಾಗತಿಕವಾಗಿ ಐಟಿ ವಲಯದಲ್ಲಿ (IT Sector) ಕಂಡುಬಂದಿರುವ ಮಂದಗತಿ, ಅಮೆರಿಕ ಮತ್ತು ಯುರೋಪ್ ಮಾರುಕಟ್ಟೆಗಳಿಂದ ಐಟಿ ವೆಚ್ಚ ಕಡಿತ ಮತ್ತು ನಿಧಾನಗತಿಯ ಕ್ಲೈಂಟ್ ಒಪ್ಪಂದಗಳಿಂದಾಗಿ ಇನ್ಫೋಸಿಸ್ ಷೇರುಗಳು ಇತ್ತೀಚಿನ ತಿಂಗಳುಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮುನ್ನಡೆಯಲು ಸಾಧ್ಯವಾಗಿಲ್ಲ. ಇದೇ ಆಟದ ಲಾಭ ಪಡೆದ ಅದಾನಿ ಪವರ್ ರೇಸ್‌ನಲ್ಲಿ ಮುಂಚೂಣಿಗೆ ಬಂದಿದೆ.

ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ (Renewable Energy) ವಲಯಕ್ಕೆ ಭಾರತ ಸರ್ಕಾರ ನೀಡುತ್ತಿರುವ ಭಾರಿ ಉತ್ತೇಜನದಿಂದಾಗಿ ಮುಂಬರುವ ದಿನಗಳಲ್ಲಿ ಅದಾನಿ ಪವರ್ ಮತ್ತಷ್ಟು ಎತ್ತರಕ್ಕೆ ಬೆಳೆಯುವ ಮುನ್ಸೂಚನೆಗಳನ್ನು ಮಾರುಕಟ್ಟೆ ತಜ್ಞರು ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಐಶ್ವರ್ಯಾ ರೈ ಕಾಲಿಗೆ ಬಿದ್ದ ಊರ್ವಶಿ ರೌಟೇಲಾ? ವೈರಲ್ ಆದ ಎಐ ಫೋಟೋ ಕಂಡು ಕಿಡಿಕಾರಿದ ನಟಿ

ಬಾಲಿವುಡ್‌ನ ಗ್ಲಾಮರಸ್ ನಟಿ ಊರ್ವಶಿ ರೌಟೇಲಾ (Urvashi Rautela) ಇತ್ತೀಚೆಗೆ ನಡೆದ ಪ್ರತಿಷ್ಠಿತ ಕಾನ್ ಚಲನಚಿತ್ರೋತ್ಸವದಲ್ಲಿ (Cannes Film Festival 2026) ತಮ್ಮ ವಿಭಿನ್ನ ಹಾಗೂ ಭವ್ಯವಾದ ಗೌನ್‌ಗಳ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆದರೆ ಪ್ರಸ್ತುತ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಯೊಬ್ಬರು ಹಂಚಿಕೊಂಡಿರುವ ಎಐ ತಂತ್ರಜ್ಞಾನದ (AI-generated) ಚಿತ್ರವೊಂದರ ವಿರುದ್ಧ ಊರ್ವಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಚಿತ್ರದಲ್ಲಿ ಊರ್ವಶಿ ಅವರನ್ನು ಬಾಲಿವುಡ್‌ನ ಇತರೆ ನಟಿಯರಾದ ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ, ಮಾಧುರಿ ದೀಕ್ಷಿತ್ ಮತ್ತು ದೀಪಿಕಾ ಪಡುಕೋಣೆ ಅವರೊಂದಿಗೆ ಹೋಲಿಸಿ ಕೀಳಾಗಿ ಬಿಂಬಿಸಲಾಗಿತ್ತು.

ವೈರಲ್ ಆಗಿರುವ ಆ ಕೃತಕ ಬುದ್ಧಿಮತ್ತೆ (AI) ಚಿತ್ರದಲ್ಲಿ, ಜಾಗತಿಕ ಮಟ್ಟದ ಸ್ಟಾರ್‌ಡಮ್‌ನಲ್ಲಿ ಐಶ್ವರ್ಯಾ ರೈ ಎಲ್ಲರಿಗಿಂತ ಉನ್ನತ ಸ್ಥಾನದಲ್ಲಿರುವಂತೆ ತೋರಿಸಲಾಗಿದೆ. ಮಧ್ಯದಲ್ಲಿ ಪ್ರಿಯಾಂಕಾ ಚೋಪ್ರಾ ಸಿಂಹಾಸನದ ಮೇಲೆ ಕುಳಿತಿದ್ದರೆ, ಅವರ ಇಕ್ಕೆಲಗಳಲ್ಲಿ ದೀಪಿಕಾ ಪಡುಕೋಣೆ ಮತ್ತು ಮಾಧುರಿ ದೀಕ್ಷಿತ್ ನಿಂತಿದ್ದಾರೆ. ಆದರೆ ಆಲಿಯಾ ಭಟ್, ಕತ್ರಿನಾ ಕೈಫ್, ಕರೀನಾ ಕಪೂರ್ ಮತ್ತು ಊರ್ವಶಿ ರೌಟೇಲಾ ಅವರು ಮಂಡಿಯೂರಿ ಕುಳಿತಿರುವಂತೆ ಚಿತ್ರಿಸಲಾಗಿದ್ದು, ಅವರ ಹೆಸರುಗಳನ್ನು ಟ್ಯಾಗ್ ಮಾಡಲಾಗಿದೆ.

ಚಿತ್ರರಂಗದಲ್ಲಿ ನಟಿಯರ ನಡುವೆ ನಡೆಯುವ ನಿರಂತರ ಹೋಲಿಕೆ ಮತ್ತು ಫ್ಯಾನ್ ವಾರ್‌ಗಳ ವಿರುದ್ಧ ಊರ್ವಶಿ ರೌಟೇಲಾ ಗಟ್ಟಿಯಾಗಿ ಧ್ವನಿ ಎತ್ತಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ‘ಪ್ರತಿಯೊಬ್ಬ ನಟಿಗೂ ತನ್ನದೇ ಆದ ಕಠಿಣ ಪರಿಶ್ರಮ, ಸ್ವಂತ ಪಯಣ ಮತ್ತು ಹಣೆಬರಹ ಇರುತ್ತದೆ ಎಂದು ನಾನು ಬಲವಾಗಿ ನಂಬುತ್ತೇನೆ. ಹೀಗೆ ಮಹಿಳೆಯರನ್ನು ಹೋಲಿಕೆ ಮಾಡುವುದು ಅಥವಾ ಅಭಿಮಾನಿಗಳ ನಡುವೆ ಜಗಳ ತರುವುದು ಕೇವಲ ನಕಾರಾತ್ಮಕತೆಯನ್ನು ಹರಡುತ್ತದೆ. ಅದರ ಬದಲು ನಾವೆಲ್ಲರೂ ಪ್ರತಿಭೆ, ಬೆಳವಣಿಗೆ ಮತ್ತು ದಯೆಯನ್ನು ಸಂಭ್ರಮಿಸೋಣ. ದಯವಿಟ್ಟು ಈ ವಿಷಕಾರಿ ಪ್ರವೃತ್ತಿಯನ್ನು ಇಲ್ಲಿಗೆ ನಿಲ್ಲಿಸಿ’ ಎಂದು ಊರ್ವಶಿ ರೌಟೇಲಾ ಅವರು ಮನವಿ ಮಾಡಿದ್ದಾರೆ.

2025ರಲ್ಲೂ ಕಾನ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಊರ್ವಶಿ ರೌಟೇಲಾ ಒಟ್ಟು ಮೂರು ಬಾರಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದರು. ಅವರ ಮೊದಲ ದಿನದ ಲುಕ್ ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆದಿತ್ತು. ಅಂದು ಅವರು ಮೈಕಲ್ ಸಿಂಕೋ ವಿನ್ಯಾಸಗೊಳಿಸಿದ ಹೊಳೆಯುವ ಗೌನ್ ಧರಿಸಿದ್ದರು. ಇದರೊಂದಿಗೆ ಹಕ್ಕಿಯ ಆಕಾರದಲ್ಲಿದ್ದ ವಿಶಿಷ್ಟವಾದ ಕೈಚೀಲ ಮತ್ತು ಅತ್ಯಂತ ಅಪರೂಪದ ಆಭರಣಗಳನ್ನು ಧರಿಸಿದ್ದರು.

ಇದನ್ನೂ ಓದಿ: ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್​ನಲ್ಲಿ ಊರ್ವಶಿ ರೌಟೇಲಾ

ಅಂತಾರಾಷ್ಟ್ರೀಯ ಮಾಧ್ಯಮಗಳು ಮಾಡಿದ ವರದಿಯ ಪ್ರಕಾರ, ಊರ್ವಶಿ ಅವರ ಆ ದಿನದ ಸಂಪೂರ್ಣ ಲುಕ್‌ನ ಒಟ್ಟು ಮೌಲ್ಯ ಬರೋಬ್ಬರಿ 155.9 ಮಿಲಿಯನ್ ಡಾಲರ್, ಅಂದರೆ, 1300 ಕೋಟಿ ರೂಪಾಯಿಗೂ ಅಧಿಕ. ಈ ವಿಷಯ ತಿಳಿದು ಎಲ್ಲರೂ ಹೌಹಾರಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಡಾನ್ 3’ ಮಾತ್ರವಲ್ಲ, ನಿಂತು ಹೋದ ರಣ್ವೀರ್ ಸಿಂಗ್ ಸಿನಿಮಾಗಳಿವು

ಧುರಂಧರ್’ (Dhurandar) ಮತ್ತು ‘ಧುರಂಧರ್ 2’ ಸಿನಿಮಾಗಳ ಮೂಲಕ ಇಂಡಸ್ಟ್ರಿ ಹಿಟ್ ನೀಡಿರುವ ರಣ್ವೀರ್ ಸಿಂಗ್ ಈಗ ಅದೇ ಇಂಡಸ್ಟ್ರಿಯಿಂದ ನಿಷೇಧಕ್ಕೆ ಒಳಗಾಗಿದ್ದಾರೆ. ರಣ್ವೀರ್ ಸಿಂಗ್ ಒಪ್ಪಿಕೊಂಡಿದ್ದ ‘ಡಾನ್ 3’ ಸಿನಿಮಾದಿಂದ ಹೊರಬಂದಿದ್ದಕ್ಕಾಗಿ ಇದೀಗ ಫೆಡರೇಷನ್ ಆಫ್ ಇಂಡಿಯನ್ ಸಿನಿ ಎಂಪ್ಲಾಯಿಸ್ (ಎಫ್​ಡಬ್ಲುಐಸಿಇ) ರಣ್ವೀರ್ ಸಿಂಗ್ ವಿರುದ್ಧ ಅಸಹಕಾರಕ್ಕೆ ಕರೆ ನೀಡಿದ್ದು, ರಣ್ವೀರ್ ಸಿಂಗ್ ನಟಿಸುವ ಯಾವುದೇ ಸಿನಿಮಾನಲ್ಲಿ ಕೆಲಸ ಮಾಡುವುದಿಲ್ಲ ಎಂದು ಘೋಷಿಸಿದೆ. ‘ಡಾನ್ 3’ ಸಿನಿಮಾದಿಂದ ರಣ್ವೀರ್ ಸಿಂಗ್ ಅವರು ಹೊರಬಂದಿದ್ದೇ ಇದಕ್ಕೆ ಕಾರಣವಾಗಿದೆ. ಆದರೆ ರಣ್ವೀರ್ ಸಿಂಗ್ ಅವರು ನಟಿಸಲಿದ್ದ ಸಿನಿಮಾ ನಿಂತು ಹೋಗಿರುವುದು ಇದು ಮೊದಲೇನೂ ಅಲ್ಲ. ಇಲ್ಲಿದೆ ನೋಡಿ ಪಟ್ಟಿ…

ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ‘ರಾಮ್ ಲೀಲಾ’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದರು. ಆ ಸಿನಿಮಾವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ್ದರು. ಸಂಜಯ್ ಅವರೇ ನಿರ್ದೇಶಿಸಿದ್ದ ‘ಬಾಜಿರಾವ್ ಮಸ್ತಾನಿ’ ಸಿನಿಮಾನಲ್ಲೂ ರಣ್ವೀರ್ ನಾಯಕ. ರಣ್ವೀರ್ ನಟನೆಯಿಂದ ಇಂಪ್ರೆಸ್ ಆಗಿದ್ದ ಸಂಜಯ್ ಲೀಲಾ ಬನ್ಸಾಲಿ, ರಣ್ವೀರ್ ಜೊತೆಗೆ ‘ಬೈಜು ಬವರಾ’ ಹೆಸರಿನ ಸಿನಿಮಾ ಘೋಷಿಸಿದ್ದರು. ಆದರೆ ಆ ಸಿನಿಮಾ ಶುರುವಾಗುವ ಮುಂಚೆಯೇ ನಿಂತು ಹೋಯ್ತು.

ಕರಣ್ ಜೋಹರ್ ಅವರು ರಣ್ವೀರ್ ಸಿಂಗ್ ನಾಯಕನಾಗಿ ಹಾಕಿಕೊಂಡು ‘ತಕ್ತ್’ ಹೆಸರಿನ ಸಿನಿಮಾ ಘೋಷಿಸಿದ್ದರು. ಆ ಸಿನಿಮಾಕ್ಕೆ ಕರಣ್ ಜೋಹರ್ ನಿರ್ಮಾಪಕ ಆದರೆ ಆ ಸಿನಿಮಾ ಸಹ ನಿಂತು ಹೋಯ್ತು. ಆ ಬಳಿಕ ಕರಣ್ ನಿರ್ದೇಶಿಸಿದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾನಲ್ಲಿ ರಣ್ವೀರ್ ನಟಿಸಿದರು. ಬಳಿಕ ತಮಿಳಿನ ಸ್ಟಾರ್ ನಿರ್ದೇಶಕ ಶಂಕರ್ ಅವರು ರಣ್ವೀರ್ ಸಿಂಗ್ ಅವರನ್ನು ಹಾಕಿಕೊಂಡು ಹಿಂದಿಯಲ್ಲಿ ತಮಿಳಿನ ‘ಅನ್ನಿಯನ್’ ಸಿನಿಮಾದ ರೀಮೇಕ್ ಮಾಡಲು ಬಯಸಿದ್ದರು. ಇಬ್ಬರೂ ಒಟ್ಟಿಗೆ ಫೋಟೊ ಶೂಟ್ ಸಹ ಮಾಡಿಸಿದರು. ಆದರೆ ಆ ಸಿನಿಮಾ ಸಹ ಸೆಟ್ಟೇರಲಿಲ್ಲ.

ಇದನ್ನೂ ಓದಿ:ದೈವಕ್ಕೆ ಅಪಮಾನ: ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್

ತೆಲುಗಿನ ಯುವ ಸ್ಟಾರ್ ನಿರ್ದೇಶಕ ಪ್ರಶಾಂತ್ ವರ್ಮಾ, ರಣ್ವೀರ್ ಸಿಂಗ್​​ಗಾಗಿ ಸಿನಿಮಾ ಮಾಡಲು ಮುಂದಾಗಿದ್ದರು. ಬಹಳ ಸಮಯ ಇಬ್ಬರೂ ಕತೆಯ ಬಗ್ಗೆ ಚರ್ಚೆ ನಡೆಸಿದರು. ಆದರೆ ಕೊನೆಗೆ ರಣ್ವೀರ್ ಸಿಂಗ್ ಸಿನಿಮಾದಿಂದ ಹಿಂದೆ ಸರಿದರು. ಆ ಬಗ್ಗೆ ಟ್ವೀಟ್ ಸಹ ಮಾಡಿದ್ದರು. ಕೆಲ ಸುದ್ದಿಗಳ ಪ್ರಕಾರ, ಅದೇ ಕತೆಯನ್ನು ಈಗ ಪ್ರಶಾಂತ್ ವರ್ಮಾ ಅವರು ರಿಷಬ್ ಶೆಟ್ಟಿಗಾಗಿ ‘ಜೈ ಹನುಮಾನ್’ ಹೆಸರಲ್ಲಿ ಸಿನಿಮಾ ಮಾಡುತ್ತಿದ್ದಾರೆ.

ಮಲಯಾಳಂನ ಸ್ಟಾರ್ ನಟ ಮತ್ತು ನಿರ್ದೇಶಕ ಬಾಸಿಲ್ ಜೋಸೆಫ್ ಅವರು ರಣ್ವೀರ್ ಸಿಂಗ್ ಅವರಿಗಾಗಿ ‘ಶಕ್ತಿಮಾನ್’ ಕತೆಯನ್ನು ಸಿನಿಮಾ ಮಾಡಲು ಬಯಸಿದ್ದರು. ಈ ಸಿನಿಮಾ ಮಾಡಲೆಂದು ಅವರು ಸುಮಾರು ಒಂದು ವರ್ಷ ಮುಂಬೈನಲ್ಲಿ ಕಳೆದರು. ಇಬ್ಬರ ನಡುವೆ ಸಾಕಷ್ಟು ಚರ್​ಚೆಗಳು ಸಹ ನಡೆದವು. ಬಾಸಿಲ್ ಸಹ ತಮ್ಮ ಚಿತ್ರಕತೆಯನ್ನು ರಣ್ವೀರ್ ಅವರ ಕೋರಿಕೆಯಂತೆ ಹಲವು ಬಾರಿ ಬದಲಾವಣೆ ಸಹ ಮಾಡಿದರು. ಕೊನೆಗೆ ರಣ್ವೀರ್ ಸಿಂಗ್, ಬಾಸಿಲ್​​ಗೂ ನೋ ಹೇಳಿದರು. ಈಗ ಅದೇ ಕತೆಯನ್ನು ತುಸು ಬದಲಾವಣೆ ಮಾಡಿ, ಅಲ್ಲು ಅರ್ಜುನ್​​ಗಾಗಿ ಸಿನಿಮಾ ಮಾಡುತ್ತಿದ್ದಾರೆ ಬಾಸಿಲ್. ಇವು ಮಾತ್ರವೇ ಅಲ್ಲದೆ, ರಣ್ವೀರ್ ಅವರು ಇನ್ನೂ ಕೆಲ ಸಿನಿಮಾಗಳನ್ನು ಒಪ್ಪಿಕೊಂಡು ಬಳಿಕ ನಿರಾಕರಿಸಿದ್ದಿದೆ. ಆದರೆ ‘ಡಾನ್ 3’ ಮಾತ್ರ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಾಜಿ ಪ್ರೇಯಸಿ ಕರೆದಳೆಂದು ಹೋದ ಪ್ರಿಯಕರ ದುರಂತ ಸಾವು: ಆಗಿದ್ದೇನು?

ಪ್ರಾತಿನಿಧಿಕ ಚಿತ್ರImage Credit source: Getty images

ಬೆಂಗಳೂರು, ಮೇ 27: ಮಾಜಿ ಪ್ರೇಯಸಿಯ (Ex-girlfriend) ಕರೆ ಹಿನ್ನೆಲೆ ಆಕೆಯನ್ನು ಭೇಟಿ ಮಾಡಲು ಮನೆಗೆ ಹೋಗಿದ್ದ ಯುವಕನೋರ್ವ ತೀವ್ರ ಹಲ್ಲೆಗೊಳಗಾಗಿ ಸಾವನ್ನಪ್ಪಿರುವಂತಹ (death) ಘಟನೆ ನಗರದ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಮನಗರದ ಬಿಡಿ ಕಾಲೋನಿ ನಿವಾಸಿ ಮೊಹಮ್ಮದ್ ಖಾಸಿಂ(27) ಕೊಲೆಯಾದ ಯುವಕ. ಕೊಲೆ ಆರೋಪ ಹಿನ್ನೆಲೆ ಮಾಜಿ ಪ್ರೇಯಸಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸದ್ಯ ಬ್ಯಾಟರಯನಪುರ ಪೊಲೀಸ್​ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು

  • ಮಾಜಿ ಪ್ರೇಯಸಿ ಕರೆಗೆ ಓಗೊಟ್ಟು ಮನೆಗೆ ಹೋದವ ಕೊಲೆ
  • ಕೊಲೆ ಆರೋಪ ಹಿನ್ನೆಲೆ ಮಾಜಿ ಪ್ರೇಯಸಿಯನ್ನು ವಶಕ್ಕೆ
  • ಬ್ಯಾಟರಯನಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು

ನಡೆದಿದ್ದೇನು?

ಮೊಹಮ್ಮದ್ ಖಾಸಿಂ ಹಾಗೂ ಯುವತಿ ಕಳೆದ ನಾಲ್ಕು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿಗೆ ಬೆಂಗಳೂರಿನ ಮತ್ತೊಬ್ಬ ಯುವಕನೊಂದಿಗೆ ವಿವಾಹ ಮಾಡಲಾಗಿತ್ತು. ಮೇ 25ರ ಸಂಜೆ ಮಾಜಿ ಪ್ರೇಯಸಿಯ ಕರೆಯ ಮೇರೆಗೆ ಆಕೆಯನ್ನು ಭೇಟಿ ಮಾಡಲು ಖಾಸಿಂ ಬ್ಯಾಟರಾಯನಪುರ ವ್ಯಾಪ್ತಿಯ ಶ್ಯಾಮಣ್ಣ ಗಾರ್ಡನ್‌ನಲ್ಲಿರುವ ಆಕೆಯ ಮನೆಗೆ ಹೋಗಿದ್ದಾನೆ.

ಇದನ್ನೂ ಓದಿ: ನೆಲಮಂಗಲ: ಸ್ನಾಪ್‌ಚಾಟಲ್ಲಿ ಪ್ರೀತಿಸಿ ಮದುವೆ, ಎರಡೇ ತಿಂಗಳಿಗೆ ಬ್ರೇಕ್‌ಅಪ್! ಗಂಡ ಬೇಕೆಂದು ಠಾಣೆ ಮೆಟ್ಟಿಲೇರಿದ ಯುವತಿ

ಈ ವೇಳೆ ಪ್ರೇಯಸಿಯ ಮನೆಯಲ್ಲಿ ಖಾಸಿಂ ಆಕೆಯ ಪತಿ ಕೈಯಲ್ಲಿ ಸಿಕ್ಕಿಬಿದ್ದಿದ್ದ. ಇದರಿಂದ ಆಕ್ರೋಶಗೊಂಡ ಯುವತಿಯ ಪತಿ ಹಾಗೂ ಆತನ ಕುಟುಂಬಸ್ಥರು ಮೊಹಮ್ಮದ್ ಖಾಸಿಂ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆಯ ಬಳಿಕ ತೀವ್ರವಾಗಿ ಗಾಯಗೊಂಡಿದ್ದ ಖಾಸಿಂ ರಾಮನಗರದ ತನ್ನ ನಿವಾಸಕ್ಕೆ ತೆರಳಿ ಮಲಗಿದ್ದ. ಗಾಯದ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಮೂರು ದಿನಗಳ ಕಾಲ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಖಾಸಿಂ ಕೊನೆಯುಸಿರೆಳೆದಿದ್ದಾನೆ.

800 ರೂಪಾಯಿಗಾಗಿ ಸ್ನೇಹಿತನ ಕೊಂದು ಹೂತಿಟ್ಟ ಸ್ನೇಹಿತರು

ಬೆಂಗಳೂರಿನ ಕುಂಬಳಗೋಡುವಿನಲ್ಲಿ ಕೇವಲ 800 ರೂಪಾಯಿ ಗಾಂಜಾ ಹಣದ ವಿಚಾರವಾಗಿ ಗೆಳೆಯರೇ ಸೇರಿ ಆಟೋ ಚಾಲಕ ರಕ್ಷಿತ್‌ನನ್ನು ದೊಣ್ಣೆ ಮತ್ತು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವಂತಹ ಘಟನೆ ನಡೆದಿದೆ. ನಂತರ ಆರೋಪಿಗಳು ಶವವನ್ನು ರಾಮಸಂದ್ರ ಕೆರೆ ಬಳಿ ಹೂತಿಟ್ಟಿದ್ದಾರೆ. ಆಟೋ ಮೇಲಿದ್ದ ರಕ್ತದ ಕಲೆ ಆಧರಿಸಿ ಕಾರ್ಯಾಚರಣೆ ನಡೆಸಿದ ನೈರುತ್ಯ ವಿಭಾಗದ ಪೊಲೀಸರು, ಪ್ರಮುಖ ಆರೋಪಿ ಮೊಹೀನ್ ಪಾಷಾ ಹಾಗೂ ಆತನ ಅಪ್ರಾಪ್ತ ಸಂಬಂಧಿಯನ್ನು ಬಂಧಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಿದ್ದರಾಮಯ್ಯ ರಾಜೀನಾಮೆ ಹೊತ್ತಲ್ಲೇ ನಿಕೇತ್‌ ಮೌರ್ಯ, ನಟಿ ಭಾವನಾ ರಾಮಣ್ಣ ಸೇರಿದಂತೆ 31 ಕೆಪಿಸಿಸಿ ಪದಾಧಿಕಾರಿಗಳಿಗೆ ಗೇಟ್‌ಪಾಸ್‌

ಭಾವನಾ ರಾಮಣ್ಣ, ನಿಕೇತ್ ರಾಜ್ ಮೌರ್ಯ

ಬೆಂಗಳೂರು, (ಮೇ 27):‌ ಕರ್ನಾಟಕ ಕಾಂಗ್ರೆಸ್ (Karnataka Congress) ನಾಯಕತ್ವ ಬದಲಾವಣೆ ರಾಜಕೀಯ ಬೆಳವಣಿಗೆಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದು, ನಾಳೆ (ಮೇ 28) ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಲೋಕಭವನದ ಸಮಯ‌‌ ಕೇಳಿದ್ದಾರೆ. ಈ ಎಲ್ಲಾ ಮಹತ್ವದ ಬೆಳವಣಿಗೆಗಳ ನಡುವೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) , ಕೆಪಿಸಿಸಿ ವಕ್ತಾರ ನಿಕೇತ್‌ ಮೌರ್ಯ, ನಟಿ ಭಾವನಾ ರಾಮಣ್ಣ ಸೇರಿದಂತೆ 31 ಕೆಪಿಸಿಸಿ ಪದಾಧಿಕಾರಿಗಳಿಗೆ ಗೇಟ್‌ಪಾಸ್ ಕೊಟ್ಟಿದ್ದಾರೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(SIR) ಸಭೆಗೆ ಗೈರು ಹಾಜರಿ ಹಿನ್ನೆಲೆಯಲ್ಲಿ ಈ ಕ್ರಮಕೈಗೊಂಡಿದ್ದಾರೆ.

ಮುಖ್ಯಾಂಶಗಳು

  • ಎಸ್​ಐಆರ್​ ಸಭೆಗೆ ಹಾಜರಾಗದ ಕೆಪಿಸಿಸಿ ಪದಾಧಿಕಾರಿಗಳಿಗೆ ಗೇಟ್​ಪಾಸ್
  • ಮೂವರು ಉಪಾಧ್ಯಕ್ಷರು, 29 ಪ್ರಧಾನ ಕಾರ್ಯದರ್ಶಿ ಹುದ್ದೆಗಳಿಂದ ಬಿಡುಗಡೆ
  • ಸಭೆಗೆ ಹಾಜರಾಗದ ಬಗ್ಗೆ ಗಂಭೀರವಾಗಿ ತೆಗೆದುಕೊಂಡಿದ್ದ ಸುರ್ಜೇವಾಲ
  • ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ, ಭಾವನಾ ರಾಮಣ್ಣ ಸೇರಿ ಒಟ್ಟು 31 ಗೇಟ್​ಪಾಸ್​ ನೀಡಿದ ಕೆಪಿಸಿಸಿ

ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ, ಭಾವನಾ ರಾಮಣ್ಣ, ಶಿವಮೂರ್ತಿ ನಾಯಕ್, ಎಂ ಸಿ ವೇಣುಗೋಪಾಲ್, ಷಣ್ಮುಖ ಶಿವಳ್ಳಿ, ಸಿಆರ್ ಮನೋಹರ್ ಸೇರಿದಂತೆ ಮೂವರು ಕೆಪಿಸಿಸಿ ಉಪಾಧ್ಯಕ್ಷರು, 29 ಪ್ರಧಾನ ಕಾರ್ಯದರ್ಶಿಗಳಿಗೆ ಡಿಕೆಶಿವಕುಮಾರ್ ಗೇಟ್ ಪಾಸ್ ನೀಡಿದ್ದಾರೆ.ತಕ್ಷಣವೇ ಈ ನಾಯಕರನ್ನು ಪಕ್ಷದ ಹುದ್ದೆಯಿಂದ ಕೈ ಬಿಡಲಾಗಿದೆ ಎಂದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ನೋಡಿ: Karnataka SIR: ಕರ್ನಾಟಕದಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ: ಎಂದಿನಿಂದ? ಹೇಗೆಲ್ಲಾ ನಡೆಯುತ್ತೆ? ಇಲ್ಲಿದೆ ವಿವರ

ಪದಾಧಿಕಾರಿಗಳನ್ನ ಕಿತ್ತಾಕಿದ್ದೇಕೆ?

ಮೇ 24 ರಂದು ಬೆಂಗಳೂರಿನ ಹೊರವಲಯದಲ್ಲಿಎಸ್‌ಐಆರ್‌ ಪ್ರಕ್ರಿಯೆ, ಜಿಬಿಎ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ, ಪಕ್ಷ ಸಂಘಟನೆ ಕುರಿತ ಪೂರ್ವಭಾವಿ ಸಭೆಯ ನಡೆದಿತ್ತು. ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಲಾ ಸಹ ಭಾಗಿಯಾಗಿದ್ದರು. ಆದ್ರೆ, ಕೆಲ ಪದಾಧಿಕಾರಿಗಳು ಗೈರಾಗಿದ್ದು, ಇದಕ್ಕೆ ಸುರ್ಜೆವಾಲ ಆಕ್ರೋಶೊಂಡಿದ್ದರು. ಅಲ್ಲದೇ ಅವರು ಪಕ್ಷದ ಸಭೆ ಗೈರಾಗಿರುವ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಈ ಸೂಚನೆಯ ಬೆನ್ನಲ್ಲೇ ಗೈರಾಗಿರುವ ನಾಯಕರಿಗೆ ಗೇಟ್‌ಪಾಸ್‌ ನೀಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.

ಕರ್ನಾಟಕದಲ್ಲೂ ಎಸ್ ಐ ಆರ್ ಪ್ರತಿಕ್ರಿಯೆ ಆರಂಭಗೊಳ್ಳುತ್ತಿದೆ. ಎಸ್ ಐ ಆರ್ ಆರಂಭಕ್ಕೂ ಮೊದಲೇ ಈ ಪ್ರಕ್ರಿಯೆಯ ಬಗ್ಗೆ ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದೆ. ಪಶ್ಚಿಮ ಬಂಗಾಳದಲ್ಲಿ ಎಸ್ ಐ ಆರ್ ಕುರಿತಾಗಿ ಕೇಳಿಬಂದ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕದ ಕಾಂಗ್ರೆಸ್ ನಾಯಕರು ಅಲರ್ಟ್ ಆಗಿದ್ದಾರೆ. ಈಗಾಗಲೇ ತಳಮಟ್ಟದಲ್ಲಿ ಎಸ್ ಐ ಆರ್ ಬಗ್ಗೆ ಜಾಗೃತಿ ಮೂಡಿಸುವ ಪ್ರಕ್ರಿಯೆಯೂ ನಡೆಯುತ್ತಿದೆ.

ಹೇಗಿದೆ ನಡೆಯಲಿದೆ ಪ್ರಕ್ರಿಯೆ?

ಇನ್ನು ಕರ್ನಾಟಕದಲ್ಲಿ ಜೂನ್ 20 ರಂದು ಎಸ್‌ಐ ಆರ್‌ ಕುರಿತಾಗಿ ಸಿಬ್ಬಂದಿಗೆ ತರಬೇತಿ ನಡೆಯಲಿದೆ. ಜೂನ್ 30 ರಿಂದ ಬಿ ಎಲ್‌ ಒ ಗಳು ಮನೆಗಳಿಗೆ ಭೇಟಿ ನೀಡಲಿದ್ದಾರೆ. ಈ ಪ್ರಕ್ರಿಯೆ ಜುಲೈ 29ರವರೆಗೆ ನಡೆಯಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜೀವನದಲ್ಲಿ ಸಂತೋಷವಾಗಿರಲು ಬಯಸಿದರೆ ಇಂತಹ ಜನಗಳಿಂದ ಆದಷ್ಟು ದೂರವಿರಿ

ನಮ್ಮ ಸುತ್ತಮುತ್ತಲಿನ ಜನರು ನಮ್ಮ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಾರೆ. ಹೌದು ಕೆಟ್ಟ ಸಹವಾಸವು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ, ಅದೇ ಒಳ್ಳೆಯ ಜನರ ಸಹವಾಸವು ಉತ್ತಮ ಜೀವನಕ್ಕೆ ದಾರಿ ಮಾಡಿಕೊಡುತ್ತದೆ. ಅದೇ ರೀತಿ ಈ ಕೆಲವೊಂದಿಷ್ಟು ಜನರಿಂದ ಜೀವನದ ಸಂತೋಷವೆಲ್ಲಾ (happiness) ಹಾಳಾಗಿಬಿಡುತ್ತದೆ. ಈ ಜನರು ಜೀವನದಲ್ಲಿ ನಕಾರಾತ್ಮಕತೆಯನ್ನು ತರುತ್ತಾರೆ ಮತ್ತು ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾರೆ. ಅಲ್ಲದೆ ಇಂತಹ ಜನರು ಗೆದ್ದಲುಗಳಂತೆ, ನಮ್ಮ ಜೀವನದ ಶಾಂತಿ ಮತ್ತು ಸಂತೋಷವನ್ನು ಮೌನವಾಗಿ ಕಸಿದುಕೊಳ್ಳುತ್ತಾರೆ. ಹಾಗಾಗಿ ಈ ಕೆಲವೊಂದಿಷ್ಟು ಜನರಿಂದ ದೂರವಿರುವ ಮೂಲಕ ಸಂತೋಷದ ಜೀವನ ನಡೆಸಿ.

ಜೀವನದಲ್ಲಿ ಸಂತೋಷವಾಗಿರಲು ಬಯಸಿದರೆ ಈ ಜನಗಳಿಂದ ದೂರವಿರಿ:

ಯಾವಾಗಲೂ ಅಳುವ ಮತ್ತು ದೂರು ನೀಡುವ ಜನರು: ಇವರು ಜೀವನದಲ್ಲಿ ಎಂದಿಗೂ ಒಳ್ಳೆಯದನ್ನು ನೋಡದ ಜನರು. ಇಂತಹ ಜನರು ಯಾವಾಗಲೂ ನಕಾರಾತ್ಮಕವಾಗಿಯೇ ಯೋಚಿಸುತ್ತಿರುತ್ತಾರೆ. ಇವರ ಈ ನಕಾರಾತ್ಮಕತೆ ನಿಮ್ಮ ಮನಸ್ಥಿತಿಯನ್ನು ಹಾಳುಮಾಡಬಹುದು. ಅಂತಹ ಜನರು ನಿಮ್ಮ ಸಕಾರಾತ್ಮಕ ಶಕ್ತಿಯನ್ನು, ಸಂತೋಷವನ್ನು ಕಸಿದುಕೊಳ್ಳುತ್ತಾರೆ. ಹಾಗಾಗಿ ಯಾವಾಗಲೂ ಇತರರನ್ನು ದೂರುವ, ನಕಾರಾತ್ಮಕ ಮಾತುಗಳನ್ನಾಡುವ ಜನರಿಂದ ದೂರವಿರುವುದು ಉತ್ತಮ.

ತಮ್ಮ ಸ್ವಂತ ಹಿತಾಸಕ್ತಿಗಳನ್ನು ಮಾತ್ರ ಬಯಸುವ ಜನರು: ನಮ್ಮ ಸುತ್ತಮುತ್ತ ಕೆಲವೊಂದಿಷ್ಟು ಸ್ವಾರ್ಥ ಸ್ವಭಾವದ ಜನಗಳಿರುತ್ತಾರೆ. ಅವರು ತಮ್ಮ ಸ್ವಾರ್ಥದ ಬಗ್ಗೆ ಮಾತ್ರ ಯೋಚಿಸುತ್ತಾರೆ. ಅವರು ತಮ್ಮ ಕಾರ್ಯವನ್ನು ಸಾಧಿಸುವವರೆಗೆ ಮಾತ್ರ ನಿಮ್ಮ ಜೊತೆ ಇರುತ್ತಾರೆ, ನಂತರ ನಿಮ್ಮ ಬೆನ್ನಿಗೆ ಚೂರಿ ಹಾಕಿ ಹೋಗುತ್ತಾರೆ. ಇಂತಹ ಜನಗಳಿಂದ ನೋವು, ನಂಬಿಕೆ ದ್ರೋಹ ಹೊರತು ನಿಮಗೆ ಬೇರೇನು ಸಿಗುವುದಿಲ್ಲ. ಆದ್ದರಿಂದ ಸ್ವಾರ್ಥಿಗಳಿಂದ ದೂರವಿರಿ.

ಚಾಡಿಕೋರರು: ನಿಮ್ಮ ಜೊತೆ ಇರುವ ಯಾರಾದರೂ ಯಾವಾಗಲೂ ಇತರರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ, ನಿರಂತರವಾಗಿ ಇತರರ ಬಗ್ಗೆ ಚಾಡಿ ಹೇಳುತ್ತಿದ್ದರೆ ಅಂತಹ ಜನಗಳಿಂದ ದೂರವಿರಿ. ಇವರ ಈ ಕೆಟ್ಟ ಮನಸ್ಥಿಯ ಕಾರಣದಿಂದ ನಿಮ್ಮ ಮನಸ್ಸು ಹಾಳಾಗುತ್ತದೆ. ಜೊತೆಗೆ ಅವರು ಸಂಬಂಧಗಳನ್ನೂ ಹಾಳು ಮಾಡುತ್ತಾರೆ. ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲು ಬಯಸಿದರೆ ಚಾಡಿಕೋರರಿಂದ ದೂರವಿರಿ.

ಇದನ್ನೂ ಓದಿ: ಅತಿಯಾದ ಕೋಪ ದೇಹದ ಎಷ್ಟೆಲ್ಲಾ ದುಷ್ಪರಿಣಾಮಗಳನ್ನು ಬೀರುತ್ತವೆ ಗೊತ್ತಾ?

ನಿಮ್ಮ ಪ್ರಗತಿ ಮತ್ತು ಸಂತೋಷವನ್ನು ನೋಡಿ ಅಸೂಯೆ ಪಡುವವರು: ನಿಮ್ಮ ಸಂತೋಷ, ಏಳಿಗೆಯನ್ನು ನೋಡಿ ಕೆಲವರು ತಾವು ಖುಷಿ ಪಟ್ಟವರಂತೆ ನಟಿಸಿ ಹಿಂದೆಯಿಂದ ಅಸೂಯೆಪಟ್ಟುಕೊಳ್ಳುತ್ತಾರೆ. ಇಂತಹ ಜನರಿಂದ ನೆಮ್ಮದಿಯೇ ಹಾಳಾಗುತ್ತದೆ. ನಿಮ್ಮ ಸುತ್ತಮುತ್ತಲೂ ಇಂತಹ ಜನರಿದ್ದರೆ ಅವರಿಂದ ಸಾಧ್ಯವಾದಷ್ಟು ದೂರವಿರಿ.

ನಿಮ್ಮನ್ನು ಪ್ರೋತ್ಸಾಹಿಸದ ಜನ: ನೀವು ಹೊಸ ಕಾರ್ಯಗಳನ್ನು ಅಥವಾ ಸಕಾರಾತ್ಮಕವಾದ ಏನನ್ನಾದರು ಮಾಡಲು ಮುಂದಾದಾಗ ಅದಕ್ಕೆ ಬೆಂಬಲ ನೀಡದೆ ನಕಾರಾತ್ಮಕ ಮಾತುಗಳನ್ನಾಡಿ ನಿಮಗೆ ಭಯ ಹುಟ್ಟಿಸುವ ಜನರಿಂದ ಆದಷ್ಟು ದೂರವಿರಿ. ಇವರು ನಿಮ್ಮ ಸಂತೋಷ, ಆತ್ಮವಿಶ್ವಾಸ ಎರಡನ್ನೂ ಕಿತ್ತುಕೊಳ್ಳುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:54 pm, Wed, 27 May 26

Source link