Category Archives: Blog

Your blog category

ನಮ್ಮ ನಿಮ್ಮ ಎಸ್​ಐಪಿಗಳು ವಿದೇಶೀ ಹೂಡಿಕೆದಾರರಿಗೆ ಆಹಾರವಾಗುತ್ತಿವೆಯಾ? ಜೆಫರೀಸ್ ಏಜೆನ್ಸಿ ಬಿಚ್ಚಿಟ್ಟಿದೆ ಘೋರ ಸತ್ಯ – Kannada News | Indians SIPs main reason behind falling rupee and exiting of FPIs, says Jefferies

ನವದೆಹಲಿ, ಮೇ 24: ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ಜೆಫರೀಸ್ (Jefferies), ಭಾರತೀಯ ಆರ್ಥಿಕತೆ ಮತ್ತು ಷೇರು ಮಾರುಕಟ್ಟೆಯಲ್ಲಿ ಸದ್ಯ ನಡೆಯುತ್ತಿರುವ ಮೂರು ಪ್ರಮುಖ ವಿದ್ಯಮಾನಗಳ ನಡುವಿನ ಆಸಕ್ತಿದಾಯಕ ನಂಟನ್ನು ಬಿಚ್ಚಿಟ್ಟಿದೆ. ಭಾರತೀಯರಲ್ಲಿ ಹೆಚ್ಚುತ್ತಿರುವ ಮ್ಯೂಚುಯಲ್ ಫಂಡ್ ಎಸ್‌ಐಪಿ (SIP) ಹೂಡಿಕೆ, ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆದಾರರ (FPI) ಭಾರಿ ಪ್ರಮಾಣದ ಹಣದ ಹಿಂತೆಗೆತ (FPI outflows), ಮತ್ತು ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿಯ ಮೌಲ್ಯ ಕುಸಿತ, ಈ ಮೂರು ಬೆಳವಣಿಗೆಗಳ ಮಧ್ಯೆ ಒಂದಕ್ಕೊಂಡು ನಂಟು ಬೆಸೆದುಕೊಂಡಿರುವುದನ್ನು ಜೆಫರೀಸ್ ಗಮನಿಸಿದೆ. ಈ ಮೂರು ಅಂಶಗಳು ಹೇಗೆ ಒಂದಕ್ಕೊಂದು ಹೇಗೆ ಸಂಬಂಧ ಹೊಂದಿವೆ? ಜೆಫರೀಸ್ ಪ್ರಕಾರ, ಸಾಕಷ್ಟು ಗಮನ ಸೆಳೆದಿರುವ ವಿದೇಶೀ ಹೂಡಿಕೆಗಳ ನಿರ್ಗಮನ ಹಾಗೂ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ, ಈ ಎರಡು ವಿದ್ಯಮಾನಗಳಿಗೆ ಎಸ್​ಐಪಿಗಳೇ ಪ್ರಮುಖ ಕಾರಣವಂತೆ. ಬಹಳ ಕುತೂಹಲವೆನಿಸುವ ವಿಶ್ಲೇಷಣೆಯನ್ನು ನೀಡಿದೆ.

ದಾಖಲೆಯ ಎಸ್‌ಐಪಿ (SIP) ಹರಿವು ಮತ್ತು ಸ್ಥಳೀಯ ಶಕ್ತಿ

ಭಾರತದಲ್ಲಿ ಪ್ರಸ್ತುತ ದೇಶೀಯ ಹೂಡಿಕೆದಾರರು ಮ್ಯೂಚುಯಲ್ ಫಂಡ್‌ಗಳ ಮೂಲಕ (ವಿಶೇಷವಾಗಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ – SIP) ದಾಖಲೆ ಪ್ರಮಾಣದ ಹಣವನ್ನು ಷೇರು ಮಾರುಕಟ್ಟೆಗೆ ಹರಿಸುತ್ತಿದ್ದಾರೆ. ಜೆಫರೀಸ್ ಪ್ರಕಾರ, ಈ ನಿರಂತರ ದೇಶೀಯ ಹಣದ ಹರಿವು (Domestic Liquidity) ಭಾರತೀಯ ಷೇರು ಮಾರುಕಟ್ಟೆಗೆ ಭದ್ರವಾದ ರಕ್ಷಣೆ ನೀಡಿದೆ. ಆದರೆ, ಅದೇ ವೇಳೆ ಮಾರುಕಟ್ಟೆ ಮೌಲ್ಯೀಕರಣ ಅಸಹಜವಾಗಿ ಹೆಚ್ಚಿಸಿದೆಯಂತೆ.

ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ; ನೊಂದಣಿ, ಆದಾಯ, ಫಲಾನುಭವಿಗಳ ಸಂಖ್ಯೆ ಇತ್ಯಾದಿ ಮಾಹಿತಿ

ಎಫ್‌ಪಿಐ (FPI) ನಿರ್ಗಮನಕ್ಕೆ ಹಾದಿ ಸುಗಮ

ಸಾಮಾನ್ಯವಾಗಿ ವಿದೇಶಿ ಹೂಡಿಕೆದಾರರು (FPIs) ಭಾರತೀಯ ಮಾರುಕಟ್ಟೆಯಿಂದ ದೊಡ್ಡ ಮಟ್ಟದಲ್ಲಿ ಹಣವನ್ನು ಹಿಂತೆಗೆದುಕೊಂಡಾಗ (ಷೇರುಗಳನ್ನು ಮಾರಿದಾಗ), ಷೇರು ಮಾರುಕಟ್ಟೆ ತೀವ್ರವಾಗಿ ಕುಸಿಯುತ್ತದೆ. ಆದರೆ, ಪ್ರಸ್ತುತ ಎಫ್​ಪಿಐಗಳು ಭಾರೀ ಪ್ರಮಾಣದಲ್ಲಿ ನಿರ್ಗಮಿಸುತ್ತಿದ್ದರೂ ಮಾರುಕಟ್ಟೆಯಲ್ಲಿ ಅದಕ್ಕೆ ಅನುಗುಣವಾದ ಕುಸಿತ ಆಗುತ್ತಿಲ್ಲ. ಇದಕ್ಕೆ ಕಾರಣ ಎಸ್​ಐಪಿಯಿಂದ ಹರಿದುಬರುತ್ತಿರುವ ಬಂಡವಾಳ. ಇದರಿಂದ ವಿದೇಶೀ ಹೂಡಿಕೆದಾರರು ಮನಸೋಯಿಚ್ಛೆ ನಿರ್ಗಮಿಸಲು ಒಳ್ಳೆಯ ವಾತಾವರಣ ನಿರ್ಮಾಣವಾದಂತಾಗಿದೆ. ಯಾವುದೇ ದೊಡ್ಡ ಆತಂಕವಿಲ್ಲದೆ ತಮ್ಮ ಹೂಡಿಕೆಯನ್ನು ಮಾರಿ ಹೊರಹೋಗಲು ಸಾಧ್ಯವಾಗುತ್ತಿದೆ. ಏಕೆಂದರೆ ಅವರು ಮಾರುವ ಷೇರುಗಳನ್ನು ಖರೀದಿಸಲು ದೇಶೀಯ ಮ್ಯೂಚುಯಲ್ ಫಂಡ್‌ಗಳ ಬಳಿ ಸಾಕಷ್ಟು ಹಣವಿದೆ.

ರೂಪಾಯಿ ದೌರ್ಬಲ್ಯಕ್ಕೆ ಕಾರಣವೇನು?

ಜೆಫರೀಸ್ ವಿಶ್ಲೇಷಣೆಯ ಪ್ರಕಾರ, ಎಸ್‌ಐಪಿ ಹಣವು ಮಾರುಕಟ್ಟೆಯನ್ನು ಕುಸಿಯದಂತೆ ತಡೆದಿದೆಯಾದರೂ, ಅದು ರೂಪಾಯಿಯ ಮೌಲ್ಯ ಕುಸಿತವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣಗಳೂ ಇವೆ. ಎಫ್‌ಪಿಐಗಳು ಭಾರತೀಯ ಷೇರುಗಳನ್ನು ಮಾರಿದಾಗ ಅವರಿಗೆ ರೂಪಾಯಿಗಳಲ್ಲಿ ಹಣ ಸಿಗುತ್ತದೆ. ಈ ಹಣವನ್ನು ಅವರು ತಮ್ಮ ದೇಶಗಳಿಗೆ ಕೊಂಡೊಯ್ಯಲು ರೂಪಾಯಿಯನ್ನು ನೀಡಿ ಡಾಲರ್ ಖರೀದಿಸಬೇಕಾಗುತ್ತದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಡಾಲರ್‌ಗೆ ಬೇಡಿಕೆ ಹೆಚ್ಚಿ, ರೂಪಾಯಿಯ ಮೌಲ್ಯವು ಡಾಲರ್ ಎದುರು ದುರ್ಬಲಗೊಳ್ಳುತ್ತಿದೆ.

ಇದನ್ನೂ ಓದಿ: ಹತ್ತು ದಿನಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ, ಬೆಂಗಳೂರಲ್ಲಿ ಎಷ್ಟಿದೆ?

ಜೆಫರೀಸ್ ಸಂಸ್ಥೆಯ ಪ್ರಮುಖ ಅಭಿಪ್ರಾಯಗಳು

ಭಾರತೀಯ ಚಿಲ್ಲರೆ ಹೂಡಿಕೆದಾರರ (Retail Investors) ಎಸ್‌ಐಪಿ ಬಲವು ಜಾಗತಿಕ ಮಾರುಕಟ್ಟೆಯ ಏರಿಳಿತಗಳಿಂದ ಭಾರತೀಯ ಷೇರು ಮಾರುಕಟ್ಟೆಯನ್ನು ರಕ್ಷಿಸುತ್ತಿದೆ.

ಷೇರು ಮಾರುಕಟ್ಟೆ ಸ್ಥಿರವಾಗಿದ್ದರೂ, ವಿದೇಶಿ ಹೂಡಿಕೆದಾರರು ಹಣವನ್ನು ಹೊರಗೆ ಕೊಂಡೊಯ್ಯುತ್ತಿರುವುದರಿಂದ ಕರೆನ್ಸಿ ಮಾರುಕಟ್ಟೆಯ ಮೇಲೆ ಒತ್ತಡ ಮುಂದುವರಿದಿದ್ದು, ರೂಪಾಯಿ ಸಾರ್ವಕಾಲಿಕ ಕುಸಿತವನ್ನು ಕಾಣುತ್ತಿದೆ.

ಆರ್‌ಬಿಐ (RBI) ತನ್ನ ವಿದೇಶಿ ವಿನಿಮಯ ಮೀಸಲು (Forex Reserves) ನಿಧಿಯನ್ನು ಬಳಸಿಕೊಂಡು ರೂಪಾಯಿಯ ತೀವ್ರ ಕುಸಿತವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ ಎಂದು ಜೆಫರೀಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಿಂಚಿನ ವೇಗ… ಹೊಸ ಇತಿಹಾಸ ಬರೆದ ಗುರಿಂದರ್ವೀರ್ ಸಿಂಗ್ – Kannada News | Gurindervir singh smashes 100m national record with historic 10 09s

ರಾಂಚಿಯ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆದ 2026ರ ನ್ಯಾಷನಲ್ ಸೀನಿಯರ್ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪಂಜಾಬ್‌ನ 25 ವರ್ಷದ ಓಟಗಾರ ಗುರಿಂದರ್ವೀರ್ ಸಿಂಗ್ ಕೇವಲ 10.09 ಸೆಕೆಂಡುಗಳಲ್ಲಿ ಗುರಿ ತಲುಪಿ, ಪುರುಷರ 100 ಮೀಟರ್ ಓಟದಲ್ಲಿ ಹೊಸ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಈ ಮೂಲಕ ಭಾರತದ ಇತಿಹಾಸದಲ್ಲೇ 10.10 ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ಓಡಿದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭರ್ಜರಿ ಪೈಪೋಟಿ:

ನ್ಯಾಷನಲ್ ಸೀನಿಯರ್ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪುರುಷರ 100 ಮೀಟರ್ ಓಟದಲ್ಲಿ ಗುರಿಂದರ್ವೀರ್ ಸಿಂಗ್ ಮತ್ತು ಒಡಿಶಾದ ಅನಿಮೇಶ್ ಕುಜುರ್ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು. ಸೆಮಿಫೈನಲ್​ನಿಂದ ಶುರುವಾದ ಈ ಪೈಪೋಟಿಯು ಫೈನಲ್​ನಲ್ಲೂ ಮುಂದುವರೆಯಿತು. ಪರಿಣಾಮ ಗುರಿಂದರ್ವೀರ್ ಸಿಂಗ್ ಹೊಸ ದಾಖಲೆಯೊಂದಿಗೆ ಗುರಿ ತಲುಪಿದರು.

  • ಸೆಮಿಫೈನಲ್ ಹೀಟ್ 1: ಗುರಿಂದರ್ವೀರ್ 10.17 ಸೆಕೆಂಡುಗಳಲ್ಲಿ ಓಡಿ ಮೊದಲ ದಾಖಲೆ ಬರೆದರು.
  • ಸೆಮಿಫೈನಲ್ ಹೀಟ್ 2: ಕೆಲವೇ ನಿಮಿಷಗಳ ನಂತರ ಅನಿಮೇಶ್ ಕುಜುರ್ 10.15 ಸೆಕೆಂಡುಗಳಲ್ಲಿ ಗುರಿ ತಲುಪಿ ಆ ದಾಖಲೆಯನ್ನು ಮುರಿದರು.
  •  ಫೈನಲ್ ಫೈಟ್: ಅಂತಿಮ ಸುತ್ತಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ಗುರಿಂದರ್ವೀರ್, 10.09 ಸೆಕೆಂಡುಗಳ ಐತಿಹಾಸಿಕ ಸಮಯದೊಂದಿಗೆ ಚಿನ್ನದ ಪದಕ ಮತ್ತು ರಾಷ್ಟ್ರೀಯ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಪುರುಷರ 100 ಮೀಟರ್ ಫೈನಲ್ ಫಲಿತಾಂಶಗಳು:

  • 🥇 ಚಿನ್ನ: ಗುರಿಂದರ್ವೀರ್ ಸಿಂಗ್ (ಪಂಜಾಬ್) – 10.09 ಸೆಕೆಂಡ್ (ಹೊಸ ರಾಷ್ಟ್ರೀಯ ದಾಖಲೆ)
  • 🥈 ಬೆಳ್ಳಿ: ಅನಿಮೇಶ್ ಕುಜುರ್ (ಒಡಿಶಾ) – 10.20 ಸೆಕೆಂಡ್
  • 🥉 ಕಂಸ: ಪ್ರಣವ್ ಗುರವ್ (ಮಹಾರಾಷ್ಟ್ರ) – 10.29 ಸೆಕೆಂಡ್

ಇತರೆ ಪ್ರಮುಖ ದಾಖಲೆಗಳು:

ನ್ಯಾಷನಲ್ ಸೀನಿಯರ್ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ಕ್ರೀಡಾಕೂಟದಲ್ಲಿ ಇನ್ನು ಎರಡು ಪ್ರಮುಖ ರಾಷ್ಟ್ರೀಯ ದಾಖಲೆಗಳು ನಿರ್ಮಾಣವಾದವು:

  •  ವಿಶಾಲ್ ಟಿಕೆ (400 ಮೀಟರ್): 400  ಮೀಟರ್ ರೇಸ್​ನಲ್ಲಿ ವಿಶಾಲ್ ಟಿಕೆ ಕೇವಲ 44.98 ಸೆಕೆಂಡುಗಳಲ್ಲಿ ಗುರಿ ತಲುಪಿ ಹೊಸ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದರು.
  • ತೇಜಸ್ವಿನ್ ಶಂಕರ್ (ಡೆಕಥ್ಲಾನ್): ಡೆಕಥ್ಲಾನ್​ನಲ್ಲಿ ತೇಜಸ್ವಿನ್ ಶಂಕರ್ ತಮ್ಮದೇ ಹಳೆಯ ದಾಖಲೆಯನ್ನು ಮುರಿದು 8057 ಅಂಕಗಳೊಂದಿಗೆ ಹೊಸ ರಾಷ್ಟ್ರೀಯ ದಾಖಲೆ ಸ್ಥಾಪಿಸಿದರು.

ಇದನ್ನೂ ಓದಿ: 27 ಕ್ರೀಡೆಗಳು: ಕರ್ನಾಟಕದ ಹೊಸ ಕ್ರಿಕೆಟ್ ಸ್ಟೇಡಿಯಂ ವಿಶೇಷತೆಗಳೇನು ಗೊತ್ತಾ?

ಕಾಮನ್​ವೆಲ್ತ್​ ಗೇಮ್ಸ್​ಗೆ ಎಂಟ್ರಿ:

ಈ ಭರ್ಜರಿ ಪ್ರದರ್ಶನದೊಂದಿಗೆ ಗುರಿಂದರ್ವೀರ್ ಸಿಂಗ್ 2026ರ ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ಗೆ ನೇರ ಅರ್ಹತೆ ಪಡೆದಿದ್ದಾರೆ. ಹೀಗಾಗಿ ಮುಂಬರುವ ಕಾಮನ್​ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತವು ಪದಕವನ್ನು ನಿರೀಕ್ಷಿಸಬಹುದು.

Source link

ಎಷ್ಟು ಕಾದ್ರೂ ಡಾಕ್ಟ್ರೇ ಬರ್ತಿಲ್ಲ! ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ – Kannada News | Patients Face Severe Neglect and Delays at Bagalakotes Bilagi Taluk Hospital

ಬಾಗಲಕೋಟೆ, ಮೇ 24: ಜಿಲ್ಲೆಯ ಬೀಳಗಿ ತಾಲ್ಲೂಕಾಸ್ಪತ್ರೆಯಲ್ಲಿ ರೋಗಿಗಳು ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದ್ದು, ರೋಗಿಗಳು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಬೀಳಗಿಯಿಂದ ಬಂದ ರೋಗಿಗಳು, ಬೆಳಗ್ಗೆ ಆರು ಗಂಟೆಯಿಂದ ಎಂಟು ಗಂಟೆಯವರೆಗಿನ ಡೋಸ್ ನೀಡಬೇಕಾಗಿತ್ತು, ಆದರೆ ಎಂಟೂವರೆ ಆದರೂ ಯಾರೂ ಬಂದು ನೋಡಿಕೊಳ್ಳಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಕೇಳಿದಾಗ, ಸಿಬ್ಬಂದಿಯೊಬ್ಬರು ಡೋಸ್‌ಗಳು ಖಾಲಿಯಾಗಿವೆ ಎಂದು ಹೇಳಿದ್ದಾರೆ. ಆಸ್ಪತ್ರೆಯ ಯಾವುದೇ ಭಾಗದಲ್ಲಿ ನರ್ಸ್‌ಗಳು ಸಹ ಕಾಣಿಸುತ್ತಿಲ್ಲ ಎಂದು ರೋಗಿಗಳು ಆರೋಪಿಸಿದ್ದಾರೆ. ರಾತ್ರಿ ಪಾಳಿಯ ನಂತರ ಬೆಳಗ್ಗೆ ಆರು ಗಂಟೆಗೆ ಬಂದ ಒಬ್ಬ ನರ್ಸ್‌ ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಇದರಿಂದ ಜ್ವರ ಮತ್ತು ಇನ್ನಿತರ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಆಸ್ಪತ್ರೆ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ರೋಗಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೂಕ್ತ ಸಮಯದಲ್ಲಿ ವೈದ್ಯರು ಇಲ್ಲದಿರುವುದು ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿ ರೋಗಿಗಳ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಿವಾನಂದ ನೀಲಣ್ಣವರ್ ದರೋಡೆ ಮಾಡಿಲ್ಲ! ಹೂಡಿಕೆದಾರರ ವೀಡಿಯೋ ವೈರಲ್ – Kannada News | Belagavi Ponzi Scam: Investors Rally to Defend Shivanand Neelannavar

ಬೆಳಗಾವಿ, ಮೇ 24: ಜಿಲ್ಲೆಯಲ್ಲಿ 4,500 ಕೋಟಿ ರೂಪಾಯಿ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಶಿವಾನಂದ ನೀಲಣ್ಣವರ್ ಬಂಧನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಶಿವಾನಂದ ಅವರು ಯಾರಿಗೂ ದ್ರೋಹ ಮಾಡಿಲ್ಲ, ಯಾರ ಜೇಬಿಗೂ ಕತ್ತರಿ ಹಾಕಿಲ್ಲ ಎಂದು ಹಲವು ಹೂಡಿಕೆದಾರರು ಕಣ್ಣೀರು ಹಾಕಿ ಬೆಂಬಲ ವ್ಯಕ್ತಪಡಿಸಿದ್ದಾರೆ. ನೀಲಣ್ಣವರ್ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಎರಡು ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದ್ದು, ನಿವೃತ್ತ ಸೈನಿಕರು ಮತ್ತು ವಯೋವೃದ್ಧ ಮಹಿಳೆಯರು ನೀಲಣ್ಣವರ್‌ರನ್ನು ನೆನಪಿಸಿಕೊಂಡು ಭಾವುಕರಾಗಿ ಮಾತನಾಡಿದ್ದಾರೆ. ತಾವು ಲಾಭ ಪಡೆದಿರುವುದಾಗಿ ಹೂಡಿಕೆದಾರರು ಹೇಳುತ್ತಿದ್ದು, ಅವರ ಬಂಧನದ ಕುರಿತು ಸಿಐಡಿ ತನಿಖೆ ಮುಂದುವರೆದಿದ್ದರೂ, ಹೂಡಿಕೆದಾರರಿಂದ ವ್ಯಕ್ತವಾಗುತ್ತಿರುವ ಈ ಬಲವಾದ ಬೆಂಬಲ ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ. ಸಿಐಡಿ ಅಧಿಕಾರಿಗಳು ಹಣ ವರ್ಗಾವಣೆ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದು, ಹೆಚ್ಚಿನ ಲಾಭಾಂಶ ಪಡೆದವರಿಂದ ಹಣ ವಸೂಲಿಗೆ ಸಿದ್ಧತೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Guru Sanchara 2026: ಗುರು ಸಂಚಾರ ಕನ್ಯಾ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ? – Kannada News | Virgo Horoscope 2026: Jupiter Transits Impact and Benefits

ಜ್ಯೋತಿಷ್ಯದಲ್ಲಿ ಗುರು ಗ್ರಹದ ಸಂಚಾರವು ಅತ್ಯಂತ ಮಹತ್ವದ್ದಾಗಿದೆ. ಈ ವರ್ಷ ಗುರುವು ಜೂನ್‌ನಲ್ಲಿ ಸ್ಥಾನ ಬದಲಾಯಿಸುತ್ತಿದ್ದು, ಕನ್ಯಾ ರಾಶಿಯವರಿಗೆ ಗುರು ಸಂಚಾರ ಹೇಗಿರಲಿದೆ ಎಂಬುದನ್ನು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ. ಕನ್ಯಾ ರಾಶಿಯವರಿಗೆ 2026ರ ಗುರು ಸಂಚಾರವು ಮಹತ್ವದ ಬದಲಾವಣೆಗಳನ್ನು ತರಲಿದೆ. ಜೂನ್ 2 ರಿಂದ ಪ್ರಾರಂಭವಾಗುವ ಈ ಗುರು ಸಂಚಾರದಲ್ಲಿ, ಗುರುವು ಕನ್ಯಾ ರಾಶಿಯವರಿಗೆ 11ನೇ ಮನೆಗೆ ಪ್ರವೇಶಿಸುತ್ತಾನೆ. ಇದನ್ನು ಲಾಭಸ್ಥಾನ ಎಂದು ಪರಿಗಣಿಸಲಾಗುತ್ತದೆ, ಇದು ಗುರು ಬಲವನ್ನು ಹೆಚ್ಚಿಸುತ್ತದೆ. ಉತ್ತರಾ, ಹಸ್ತ, ಮತ್ತು ಚಿತ್ತ ನಕ್ಷತ್ರಗಳ ಅಡಿಯಲ್ಲಿ ಜನಿಸಿದವರಿಗೆ ಇದು ವಿಶೇಷವಾಗಿ ಲಾಭದಾಯಕವಾಗಿದೆ.

ಆದರೆ, ಸಿಕ್ಕ ಸುಖಕ್ಕೆ ಅಹಂಕಾರ ಬೇಡ, ತಾಳ್ಮೆ ಮತ್ತು ವಿನಯದಿಂದ ಇರುವುದು ಮುಖ್ಯ. ಕೃಷಿಕರು, ವಿದ್ಯಾರ್ಥಿಗಳು, ಮಹಿಳೆಯರು, ವ್ಯಾಪಾರಸ್ಥರು, ಸರ್ಕಾರಿ ನೌಕರರು, ಮತ್ತು ಕಾನೂನು ವೃತ್ತಿಯವರಿಗೆ ಈ ಸಮಯ ಅನುಕೂಲಕರವಾಗಿದೆ. ರಾಜಕೀಯ ವ್ಯಕ್ತಿಗಳಿಗೆ ಇದು ಸನ್ನಿಹಿತ ಕಾಲವಲ್ಲವಾದರೂ, ರಾಜಕೀಯವಾಗಿ ಪ್ರಗತಿ ಇರಲಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗಾಳಿಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ: ಬಾಣಂತಿ, ಮಗು ಅದೃಷ್ಟವಶಾತ್ ಪಾರು – Kannada News | Yadgiri: Mother and Child Miraculously Escape as Storm Blows Off House Roof

ಯಾದಗಿರಿ, ಮೇ 24: ಜಿಲ್ಲೆಯಲ್ಲಿ ಸುರಿದ ಭಾರಿ ಗಾಳಿ ಸಹಿತ ಮಳೆಯು ಅಪಾರ ಅವಾಂತರ ಸೃಷ್ಟಿಸಿದೆ. ಸುರಪುರ ತಾಲೂಕಿನ ಚಿಗರಿಹಾಳ ಗ್ರಾಮದಲ್ಲಿ ಭಾರಿ ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ಮನೆಯೊಂದರ ಶೀಟ್‌ಗಳು ಹಾರಿಹೋಗಿ ಅಪಾರ ನಷ್ಟ ಸಂಭವಿಸಿದೆ. ಮನೆಯ ಮೇಲ್ಛಾವಣಿಯ ಟಿನ್ ಶೀಟ್‌ಗಳು ಕಿತ್ತುಬಂದಿದ್ದು, ಕಲ್ಲುಗಳು ಬಿದ್ದಿವೆ. ಘಟನೆ ವೇಳೆ ಮನೆಯಲ್ಲಿ ಮಗುವನ್ನು ಮಡಿಲಲ್ಲಿ ಇಟ್ಟುಕೊಂಡು ಮಲಗಿದ್ದ ಬಾಣಂತಿ ಮತ್ತು ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ನಂತರ, ತಾಯಿ ಮತ್ತು ಮಗುವನ್ನು ತಕ್ಷಣವೇ ಹತ್ತಿರದ ದೇವಸ್ಥಾನಕ್ಕೆ ಕರೆದೊಯ್ದು ಆಶ್ರಯ ನೀಡಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಡಾನ್ 3’ ವಿವಾದ: ನಟ ರಣವೀರ್ ಸಿಂಗ್ ವಿರುದ್ಧ ದೂರು ನೀಡಿದ ಫರ್ಹಾನ್ ಅಖ್ತರ್ – Kannada News | Farhan Ahtar files complaint against Ranveer Singh over Don 3 exit decision on 25 May

ಬಾಲಿವುಡ್‌ನ ಬಹುನಿರೀಕ್ಷಿತ ‘ಡಾನ್ 3’ (Don 3) ಚಿತ್ರದ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಚಿತ್ರದಿಂದ ನಟ ರಣವೀರ್ ಸಿಂಗ್ ದಿಢೀರ್ ಹೊರನಡೆದಿರುವ ಹಿನ್ನೆಲೆಯಲ್ಲಿ, ನಿರ್ದೇಶಕ-ನಿರ್ಮಾಪಕ ಫರ್ಹಾನ್ ಅಖ್ತರ್ (Farhan Ahtar) ಈಗ ಸಿನಿಮಾ ನೌಕರರ ಒಕ್ಕೂಟದ (FWICE) ಮೆಟ್ಟಿಲೇರಿದ್ದಾರೆ. ರಣವೀರ್ ಸಿಂಗ್ ವಿರುದ್ಧ ಅವರು ಅಧಿಕೃತ ದೂರು ದಾಖಲಿಸಿದ್ದು, ಈ ಕುರಿತು ಒಕ್ಕೂಟವು ಮೇ 25ರ ಪತ್ರಿಕಾಗೋಷ್ಠಿ ನಡೆಸಿ ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ. ಸದ್ಯ ‘ಧುರಂಧರ್ 2’ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಣವೀರ್ ಸಿಂಗ್ (Ranveer Singh) ಅವರು ‘ಡಾನ್ 3’ ಚಿತ್ರದಲ್ಲಿ ನಟಿಸಲು ಸಿದ್ಧರಿಲ್ಲ. ಅದೇ ಇಷ್ಟೆಲ್ಲ ವಿವಾದಕ್ಕೆ ಕಾರಣ ಆಗಿದೆ.

ಶಾರುಖ್ ಖಾನ್ ಬಳಿಕ ‘ಡಾನ್’ ಸರಣಿಯ ಹೊಸ ನಾಯಕನಾಗಿ ರಣವೀರ್ ಸಿಂಗ್ ಅವರನ್ನು ಅಧಿಕೃತವಾಗಿ ಘೋಷಿಸಲಾಗಿತ್ತು. ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ತಿಂಗಳುಗಳಿಂದ ನಡೆಯುತ್ತಿದ್ದವು. ಆದರೆ, ಇತ್ತೀಚೆಗೆ ರಣವೀರ್ ಸಿಂಗ್ ಚಿತ್ರದಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ಹರಿದಾಡತೊಡಗಿತು. ಸ್ಕ್ರಿಪ್ಟ್ ಮತ್ತು ಚಿತ್ರದ ನಿರ್ದೇಶನದ ವಿಷಯದಲ್ಲಿ ಮೂಡಿದ ಕೆಲವು ಭಿನ್ನಾಭಿಪ್ರಾಯಗಳೇ ರಣವೀರ್ ಅವರ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಆದರೆ, ಈ ಬಗ್ಗೆ ರಣವೀರ್ ಸಿಂಗ್ ಆಗಲಿ ಅಥವಾ ‘ಎಕ್ಸೆಲ್ ಎಂಟರ್‌ಟೈನ್‌ಮೆಂಟ್’ ಸಂಸ್ಥೆಯಾಗಲಿ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿರಲಿಲ್ಲ.

ವರದಿಗಳ ಪ್ರಕಾರ, ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ರಣವೀರ್ ಸಿಂಗ್ ಅವರನ್ನು ಗಮನದಲ್ಲಿಟ್ಟುಕೊಂಡು ಚಿತ್ರಕಥೆ ಮತ್ತು ಪ್ರಿ-ಪ್ರೊಡಕ್ಷನ್ ಕೆಲಸಗಳಿಗಾಗಿ ಈಗಾಗಲೇ ಭಾರಿ ಹಣ ಹೂಡಿಕೆ ಮಾಡಿದೆ. ನಟನ ದಿಢೀರ್ ನಿರ್ಧಾರದಿಂದ ಚಿತ್ರೀಕರಣ ತಡವಾಗುತ್ತಿರುವುದರಿಂದ ನಿರ್ಮಾಣ ಸಂಸ್ಥೆಗೆ ಸುಮಾರು 40 ಕೋಟಿ ರೂಪಾಯಿ ನಷ್ಟವಾಗಿದೆ ಎನ್ನಲಾಗಿದ್ದು, ಈ ನಷ್ಟವನ್ನು ರಣವೀರ್ ಸಿಂಗ್ ಅವರಿಂದಲೇ ವಸೂಲಿ ಮಾಡಲು ಫರ್ಹಾನ್ ಅಖ್ತರ್ ಕಾನೂನು ಹೋರಾಟದ ಆಯ್ಕೆಗಳನ್ನು ಪರಿಶೀಲಿಸುತ್ತಿದ್ದಾರೆ.

ಫರ್ಹಾನ್ ಅಖ್ತರ್ ಅವರು ಸದಸ್ಯರಾಗಿರುವ ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ನಿರ್ದೇಶಕರ ಸಂಘದ (IFTDA) ಮೂಲಕ ಈ ದೂರನ್ನು FWICEಗೆ ರವಾನಿಸಲಾಗಿದೆ. ‘ದೂರಿನ ಎಲ್ಲಾ ಆಯಾಮಗಳನ್ನು ಪರಿಶೀಲಿಸಿದ ಬಳಿಕ ಸೋಮವಾರ ನಡೆಸಲಿರುವ ಸುದ್ದಿಗೋಷ್ಠಿಯಲ್ಲಿ ನಮ್ಮ ಅಧಿಕೃತ ನಿಲುವನ್ನು ಪ್ರಕಟಿಸುತ್ತೇವೆ’ ಎಂದು ಒಕ್ಕೂಟ ತಿಳಿಸಿದೆ. ಮತ್ತೊಂದೆಡೆ, ವಿವಾದ ಇತ್ಯರ್ಥದ ಭಾಗವಾಗಿ ರಣವೀರ್ ಸಿಂಗ್ ತಾವು ಪಡೆದಿದ್ದ ಮುಂಗಡ ಹಣವನ್ನು ಮರಳಿ ನೀಡಲು ಒಪ್ಪಿಕೊಂಡಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಇದನ್ನೂ ಓದಿ: ರಣವೀರ್ ಸಿಂಗ್, ಆದಿತ್ಯ ಚೋಪ್ರಾ ರಹಸ್ಯ ಸಭೆ; ಹಳೇ ಮುನಿಸು ಮರೆತು ಒಂದಾದ ಗುರು-ಶಿಷ್ಯ

‘ಡಾನ್ 3’ ಚಿತ್ರದಲ್ಲಿ ಶಾರುಖ್ ಖಾನ್ ಅವರ ಐಕಾನಿಕ್ ಪಾತ್ರಕ್ಕೆ ರಣವೀರ್ ಸಿಂಗ್ ಆಯ್ಕೆಯಾದಾಗ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ದೊಡ್ಡ ಚರ್ಚೆಯೇ ನಡೆದಿತ್ತು. ಈಗ ಸೃಷ್ಟಿಯಾಗಿರುವ ಗೊಂದಲಗಳಿಂದಾಗಿ ‘ಡಾನ್ 3’ ಚಿತ್ರ ರಣವೀರ್ ಅವರೊಂದಿಗೇ ಮುಂದುವರಿಯುತ್ತದೆಯೇ, ಹೊಸ ನಾಯಕನ ಹುಡುಕಾಟ ನಡೆಯಲಿದೆಯೇ ಅಥವಾ ಚಿತ್ರದ ಕಥೆಯಲ್ಲೇ ದೊಡ್ಡ ಬದಲಾವಣೆ ಮಾಡಲಾಗುತ್ತದೆಯೇ ಎಂಬ ಕುತೂಹಲ ಬಾಲಿವುಡ್ ವಲಯದಲ್ಲಿ ಮನೆಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

27 ಕ್ರೀಡೆಗಳು: ಕರ್ನಾಟಕದ ಹೊಸ ಕ್ರಿಕೆಟ್ ಸ್ಟೇಡಿಯಂ ವಿಶೇಷತೆಗಳೇನು ಗೊತ್ತಾ? – Kannada News | Karnataka’s New Cricket Stadium: 27 Disciplines Under One Roof

ಬೆಂಗಳೂರಿನ ಆನೇಕಲ್ ಬಳಿಯ ಸೂರ್ಯನಗರದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ (ಮೇ 23) ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಕರ್ನಾಟಕ ಗೃಹ ಮಂಡಳಿ (KHB) ವತಿಯಿಂದ ನಿರ್ಮಾಣವಾಗಲಿರುವ ಈ ಮಹತ್ವಾಕಾಂಕ್ಷಿ ಯೋಜನೆಯ ಪ್ರಮುಖ ಮುಖ್ಯಾಂಶಗಳು ಮತ್ತು ಉದ್ದೇಶಗಳು ಕೆಳಗಿನಂತಿವೆ…

  • ಒಟ್ಟು ವಿಸ್ತೀರ್ಣ: ಒಟ್ಟು 75 ಎಕರೆ (ಸುಮಾರು 1,21,713 ಚದರ ಮೀಟರ್) ವಿಶಾಲವಾದ ಜಾಗದಲ್ಲಿ ಈ ಕ್ರೀಡಾಂಗಣ ತಲೆಯೆತ್ತಲಿದೆ. ಇದರಲ್ಲಿ ಕ್ರೀಡಾಂಗಣದ ಮುಖ್ಯ ಪೋಡಿಯಂ ವಲಯವೇ 12,750 ಚದರ ಮೀಟರ್ ವ್ಯಾಪ್ತಿಯನ್ನು ಹೊಂದಿರಲಿದೆ.
  • ಆಸನ ಸಾಮರ್ಥ್ಯ: 80,000 ಆಸನಗಳು. ಇದು ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ (1,32,000 ಸಾಮರ್ಥ್ಯ) ಬಿಟ್ಟರೆ ಭಾರತದ 2ನೇ ಅತಿದೊಡ್ಡ ಮತ್ತು ವಿಶ್ವದ ಮೂರನೇ ಅತಿದೊಡ್ಡ ಕ್ರೀಡಾಂಗಣ ಎನಿಸಿಕೊಳ್ಳಲಿದೆ.
  •  ಅಂದಾಜು ವೆಚ್ಚ: ಮೊದಲ ಹಂತದ ಸ್ಟೇಡಿಯಂ ಕಾಮಗಾರಿಗಾಗಿ ₹943 ಕೋಟಿಯಿಂದ ₹950 ಕೋಟಿ ವೆಚ್ಚ ಮಾಡಲಾಗುತ್ತಿದೆ.

ವಿಶೇಷ ಹಣಕಾಸು ಮಾದರಿ:

ಸಾಮಾನ್ಯವಾಗಿ ಇಂತಹ ಬೃಹತ್ ಕ್ರೀಡಾಂಗಣಗಳನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಅಥವಾ ಬಿಸಿಸಿಐ (BCCI) ನಿರ್ಮಿಸುತ್ತವೆ. ಆದರೆ, ಈ ಪ್ರಾಜೆಕ್ಟ್‌ನ ವಿಶೇಷತೆಯೆಂದರೆ ಇದನ್ನು ಸಂಪೂರ್ಣವಾಗಿ ಕರ್ನಾಟಕ ಗೃಹ ಮಂಡಳಿ (KHB) ತನ್ನದೇ ಆದ ಸ್ವಂತ ನಿಧಿಯಿಂದ ನಿರ್ಮಿಸುತ್ತಿದೆ. ರಾಜ್ಯ ಸರ್ಕಾರದಿಂದ ಇದಕ್ಕೆ ಯಾವುದೇ ಪ್ರತ್ಯೇಕ ಬಜೆಟ್ ಅನುದಾನವನ್ನು ಪಡೆದುಕೊಳ್ಳುತ್ತಿಲ್ಲ.

‘ಸೂರ್ಯ ಕ್ರೀಡಾ ಗ್ರಾಮ’ ಯೋಜನೆ:

ಇದು ಕೇವಲ ಕ್ರಿಕೆಟ್‌ಗೆ ಸೀಮಿತವಾಗಿರದೆ, ಮುಂದಿನ ದಿನಗಳಲ್ಲಿ ಸಂಪೂರ್ಣ ಕ್ರೀಡಾ ಹಬ್ ಆಗಿ ಬದಲಾಗಲಿದೆ. ಎರಡನೇ ಹಂತದಲ್ಲಿ ಇಲ್ಲಿ ಒಟ್ಟು 24 ವಿವಿಧ ಕ್ರೀಡೆಗಳಿಗೆ ಜಾಗತಿಕ ಮಟ್ಟದ ಸೌಲಭ್ಯ ಸಿಗಲಿದೆ.

  • 3,000 ಆಸನ ಸಾಮರ್ಥ್ಯದ ಅತ್ಯಾಧುನಿಕ ಆಡಿಟೋರಿಯಂ.
  • ಒಲಿಂಪಿಕ್ ಗುಣಮಟ್ಟದ ಈಜುಕೊಳ.
  • ಅಥ್ಲೆಟಿಕ್ ಟ್ರ್ಯಾಕ್‌ಗಳು, ಒಳಾಂಗಣ ಕ್ರೀಡಾಂಗಣಗಳು.
  • ಕ್ರೀಡಾಪಟುಗಳಿಗೆ ತರಬೇತಿ ಕೇಂದ್ರಗಳು, ವಸತಿ ನಿಲಯಗಳು ಮತ್ತು ಹೋಟೆಲ್ ಸೌಲಭ್ಯಗಳು.
  • ಕ್ರೀಡಾ ಇತಿಹಾಸ ಸಾರುವ ಹೆರಿಟೇಜ್ ಹಾಲ್ ಆಫ್ ಫೇಮ್.

ಈ ಯೋಜನೆಯ ಹಿನ್ನೆಲೆ ಮತ್ತು ಅಗತ್ಯತೆ:

  • ಚಿನ್ನಸ್ವಾಮಿ ಸ್ಟೇಡಿಯಂನ ಮಿತಿ: ಪ್ರಸ್ತುತ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂ ಕೇವಲ 40,000 ಸಾಮರ್ಥ್ಯ ಹೊಂದಿದ್ದು, ನಗರದ ಹೃದಯಭಾಗದಲ್ಲಿ ಇರುವುದರಿಂದ ಪಂದ್ಯಗಳ ಸಂದರ್ಭದಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು.
  • ಸುರಕ್ಷತೆ ಮತ್ತು ನಿರ್ವಹಣೆ: ಕಳೆದ 2025ರ ಐಪಿಎಲ್ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ನಡೆದ ದುರದೃಷ್ಟಕರ ಕಾಲ್ತುಳಿತದ ಘಟನೆಯಲ್ಲಿ 11 ಜನರು ಪ್ರಾಣ ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಜನದಟ್ಟಣೆ ನಿರ್ವಹಣೆ ಮತ್ತು ಉತ್ತಮ ಭದ್ರತೆಗಾಗಿ ನಗರದ ಹೊರವಲಯದಲ್ಲಿ ದೊಡ್ಡ ಸ್ಟೇಡಿಯಂ ನಿರ್ಮಿಸಲು ಜಸ್ಟಿಸ್ ಕುನ್ಹಾ ಸಮಿತಿ ಶಿಫಾರಸು ಮಾಡಿತ್ತು.
  • ಆರ್ಥಿಕ ಮತ್ತು ರಿಯಲ್ ಎಸ್ಟೇಟ್ ಪ್ರಗತಿ: ಹೊಸೂರು ರಸ್ತೆ, ಬೊಮ್ಮಸಂದ್ರ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಕಾರಿಡಾರ್‌ಗೆ ಹತ್ತಿರವಿರುವುದರಿಂದ ಈ ಭಾಗದಲ್ಲಿ ಮೂಲಸೌಕರ್ಯ, ಉದ್ಯೋಗಾವಕಾಶ ಮತ್ತು ಸಾರಿಗೆ ವ್ಯವಸ್ಥೆ (ಮೆಟ್ರೋ ಮತ್ತಿತರ ಸಂಪರ್ಕಗಳು) ವೇಗವಾಗಿ ವೃದ್ಧಿಯಾಗಲಿವೆ.

ಕ್ರೀಡಾಂಗಣದ ವಿಶೇಷತೆ:

  • ಭಾರತದ 2ನೇ ದೊಡ್ಡ ಸ್ಟೇಡಿಯಂ: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ (1.32 ಲಕ್ಷ ಸಾಮರ್ಥ್ಯ) ಬಿಟ್ಟರೆ, 80,000 ಆಸನಗಳ ಸಾಮರ್ಥ್ಯ ಹೊಂದಲಿರುವ ಈ ಸ್ಟೇಡಿಯಂ ಭಾರತದ 2ನೇ ಅತಿ ದೊಡ್ಡ ಮತ್ತು ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಕ್ರೀಡಾಂಗಣಗಳ ಪಟ್ಟಿಗೆ ಸೇರಲಿದೆ.
  • ವಿಶೇಷ ಹುಲ್ಲಿನ ಹಾಸು: ಮಳೆ ಬಂದ ಕೇವಲ 15-20 ನಿಮಿಷಗಳಲ್ಲಿ ನೀರನ್ನು ಸಂಪೂರ್ಣವಾಗಿ ಹೀರಿಕೊಂಡು, ಪಂದ್ಯವನ್ನು ತಕ್ಷಣವೇ ಮುಂದುವರಿಸಲು ಸಹಕಾರಿಯಾಗುವ ಅತ್ಯಾಧುನಿಕ ಸಬ್-ಏರ್ ಡ್ರೈನೇಜ್ ವ್ಯವಸ್ಥೆ ಇಲ್ಲಿರಲಿದೆ.
  •  ಸೌರಶಕ್ತಿ ಬಳಕೆ: ಇಡೀ ಕ್ರೀಡಾಂಗಣದ ವಿದ್ಯುತ್ ಅಗತ್ಯವನ್ನು ಪೂರೈಸಲು ಬೃಹತ್ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಲಾಗುತ್ತಿದೆ.
  • ಒಂದೇ ಸೂರಿನಡಿ ಎಲ್ಲ: ಇದು ಕೇವಲ ಕ್ರಿಕೆಟ್‌ಗೆ ಸೀಮಿತವಲ್ಲ. ಒಲಿಂಪಿಕ್ ಗುಣಮಟ್ಟದ ಈಜುಕೊಳ, ಅಥ್ಲೆಟಿಕ್ ಟ್ರ್ಯಾಕ್ ಹಾಗೂ ಒಳಾಂಗಣ ಕ್ರೀಡಾ ಸಂಕೀರ್ಣಗಳನ್ನು ಒಳಗೊಂಡ ಕರ್ನಾಟಕದ ಮೊದಲ ಸಂಪೂರ್ಣ ಕ್ರೀಡಾ ನಗರಿಯಾಗಿ ಇದು ಬದಲಾಗಲಿದೆ.
  • ಕ್ರೀಡಾಪಟುಗಳಿಗೆ ಹಾಸ್ಟೆಲ್: ಗ್ರಾಮೀಣ ಭಾಗದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಅಂತರರಾಷ್ಟ್ರೀಯ ಮಟ್ಟದ ಅಕಾಡೆಮಿ ಮತ್ತು ವಸತಿ ನಿಲಯಗಳು ಇಲ್ಲಿ ನಿರ್ಮಾಣವಾಗಲಿವೆ.

27 ಕ್ರೀಡೆಗಳಿಗೆ ಸುಸಜ್ಜಿತ ವೇದಿಕೆ:

ಈ ಕ್ರೀಡಾ ಗ್ರಾಮವು ಕೇವಲ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಿರದೆ, ಒಟ್ಟು 27 ಒಳಾಂಗಣ (Indoor) ಮತ್ತು ಹೊರಾಂಗಣ (Outdoor) ಕ್ರೀಡೆಗಳಿಗೆ ಜಾಗತಿಕ ಮಟ್ಟದ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಒದಗಿಸಲಿದೆ.

ಅಧಿಕೃತ ಯೋಜನಾ ನಕಾಶೆಯ ಪ್ರಕಾರ ಈ ಬೃಹತ್ ಕ್ರೀಡಾ ಸಂಕೀರ್ಣದಲ್ಲಿ ಒಳಗೊಂಡಿರುವ ಪ್ರಮುಖ 27 ಕ್ರೀಡಾ ವಿಭಾಗಗಳ ಪಟ್ಟಿ ಇಲ್ಲಿದೆ:

ಹೊರಾಂಗಣ ಕ್ರೀಡೆಗಳು:-

  • ಕ್ರಿಕೆಟ್ (ಮುಖ್ಯ ಕ್ರೀಡಾಂಗಣ ಮತ್ತು 3 ಅಭ್ಯಾಸ ಮೈದಾನಗಳು)
  • ಫುಟ್‌ಬಾಲ್
  • ಅಥ್ಲೆಟಿಕ್ಸ್ (400 ಮೀಟರ್ ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ಗಳು)
  • ಹಾಕಿ
  • ರಗ್ಬಿ
  • ಲಾವನ್ ಟೆನಿಸ್ ಕೋರ್ಟ್​
  • ವಾಲಿಬಾಲ್
  • ಬಾಸ್ಕೆಟ್‌ಬಾಲ್
  • ಖೋ-ಖೋ
  • ಕಬಡ್ಡಿ
  • ಹ್ಯಾಂಡ್‌ಬಾಲ್
  • ನೆಟ್​ ಬಾಲ್
  • ಬಿಲ್ಲುಗಾರಿಕೆ

ಒಳಾಂಗಣ ಕ್ರೀಡೆಗಳು:

  • ಬ್ಯಾಡ್ಮಿಂಟನ್
  • ಟೆಬಲ್ ಟೆನಿಸ್
  • ಸ್ಕ್ವಾಶ್
  • ಜಿಮ್ನಾಸ್ಟಿಕ್
  • ಕುಸ್ತಿ
  • ಬಾಕ್ಸಿಂಗ್
  • ವೇಟ್ ಲಿಫ್ಟಿಂಗ್
  • ಶೂಟಿಂಗ್
  • ಫೆನ್ಸಿಂಗ್
  • ಜುಡೋ / ಕರಾಟೆ (ಮಾರ್ಷಲ್ ಆರ್ಟ್ಸ್)
  • ಚೆಸ್ ಮತ್ತು ಕ್ಯಾರಂ
  • ಈಜು (ಒಲಿಂಪಿಕ್ ಗಾತ್ರದ ಮುಖ್ಯ ಈಜುಕೊಳ)
  • ಡೈವಿಂಗ್ (ಪ್ರತ್ಯೇಕ ಡೈವಿಂಗ್ ಪೂಲ್)
  • ವಾಟರ್ ಪೋಲೋ

ಈ ಎಲ್ಲ ಕ್ರೀಡೆಗಳಿಗೆ ಪೂರಕವಾಗಿ ಹೈ-ಪರ್ಫಾರ್ಮೆನ್ಸ್ ಜಿಮ್, ಫಿಟ್‌ನೆಸ್ ಸೆಂಟರ್, ಫಿಸಿಯೋಥೆರಪಿ ಸೆಂಟರ್ ಮತ್ತು ಕ್ರೀಡಾಪಟುಗಳಿಗಾಗಿ ಸುಸಜ್ಜಿತ ಸ್ಪೋರ್ಟ್ಸ್ ಹಾಸ್ಟೆಲ್ ವ್ಯವಸ್ಥೆಯನ್ನು ಸಹ ಒಂದೇ ಆವರಣದಲ್ಲಿ ಕಲ್ಪಿಸಲಾಗುತ್ತಿದೆ.

ಸಿಂಗಾಪುರ್ ಮಾದರಿಯ ಹೌಸಿಂಗ್ ಟೌನ್‌ಶಿಪ್:

ಕ್ರೀಡಾಂಗಣದ ಸುತ್ತಮುತ್ತ ಕರ್ನಾಟಕ ಗೃಹ ಮಂಡಳಿ (KHB) ಸಿಂಗಾಪುರ್ ಮಾದರಿಯಲ್ಲಿ ಅತ್ಯಾಧುನಿಕ ಹೈಟೆಕ್ ವಿಲ್ಲಾಗಳು ಮತ್ತು ಅಪಾರ್ಟ್‌ಮೆಂಟ್‌ಗಳನ್ನು (ಸೂರ್ಯ ಶೈನ್ ಮತ್ತು ಸೂರ್ಯ ಡಿವೈನ್) ನಿರ್ಮಿಸುತ್ತಿದೆ. ಅಂದರೆ, ಭವಿಷ್ಯದಲ್ಲಿ ಜನರು ಸ್ಟೇಡಿಯಂ ಪಕ್ಕದಲ್ಲೇ ವಾಸಿಸಬಹುದಾಗಿದೆ.

ಸ್ಟೇಡಿಯಂ ಲೋಕಾರ್ಪಣೆ ಯಾವಾಗ?

ಈ ಮಹತ್ವಾಕಾಂಕ್ಷಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಯೋಜನೆಯು 2029 ರ ವೇಳೆಗೆ ಸಂಪೂರ್ಣವಾಗಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸರ್ಕಾರ ಮತ್ತು ಕರ್ನಾಟಕ ಗೃಹ ಮಂಡಳಿ (KHB) ನಿಗದಿಪಡಿಸಿರುವ ಕಾಲಮಿತಿಯ ವಿವರಗಳು ಈ ಕೆಳಗಿನಂತಿವೆ:

  • ಅಂದಾಜು ಸಮಯದ ಗಡುವು: ಶಂಕುಸ್ಥಾಪನೆ ನೆರವೇರಿಸಿದ ದಿನದಿಂದ ಕಾಮಗಾರಿಯನ್ನು ಮುಗಿಸಲು ಒಟ್ಟು 33 ತಿಂಗಳುಗಳು (ಅಂದರೆ ಸುಮಾರು 3 ವರ್ಷಗಳು) ಕಾಲಾವಕಾಶ ನೀಡಲಾಗಿದೆ.
  • ಹಂತ-ಹಂತದ ಅಭಿವೃದ್ಧಿ: ಸದ್ಯ ₹943 ಕೋಟಿ ವೆಚ್ಚದ ಮೊದಲ ಹಂತದ ಟೆಂಡರ್ ಪ್ರಕ್ರಿಯೆಗಳು ಮುಗಿದಿದ್ದು, ತಕ್ಷಣವೇ ಮೈದಾನದ ಪ್ರಮುಖ ಕಾಮಗಾರಿಗಳು ಆರಂಭವಾಗಲಿವೆ.

ಎಲ್ಲಾ ಕಾಮಗಾರಿಗಳು ಅಂದುಕೊಂಡಂತೆ ನಡೆದರೆ, 2029 ರ ಆರಂಭದಲ್ಲಿ ಈ ಕ್ರೀಡಾಂಗಣವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಸಜ್ಜಾಗಲಿದೆ.

ಇದನ್ನೂ ಓದಿ: ರಿಷಭ್ ಪಂತ್​ಗೆ ಗೇಟ್ ಪಾಸ್​? ಟಾಮ್ ಮೂಡಿ ಬಿಚ್ಚಿಟ್ಟ ಸತ್ಯ!

ವಿವಾದಗಳು ಮತ್ತು ಸವಾಲುಗಳು:

ಈ ಯೋಜನೆಗೆ ಅದ್ಧೂರಿ ಚಾಲನೆ ಸಿಕ್ಕಿದ್ದರೂ, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ರೈತರಿಂದ ಪ್ರತಿಭಟನೆಗಳು ವ್ಯಕ್ತವಾಗುತ್ತಿವೆ.

    •  ಬನ್ನೇರುಘಟ್ಟ ಅರಣ್ಯಕ್ಕೆ ಧಕ್ಕೆ: ಪ್ರಸ್ತಾಪಿತ ಸ್ಟೇಡಿಯಂ ಜಾಗವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪರಿಸರ ಸೂಕ್ಷ್ಮ ವಲಯದಿಂದ ಕೇವಲ 1.5 ಕಿಲೋಮೀಟರ್ ದೂರದಲ್ಲಿದೆ. ಭಾರಿ ಜನಸಂದಣಿ ಮತ್ತು ಬೆಳಕಿನ ಮಾಲಿನ್ಯದಿಂದ ವನ್ಯಜೀವಿಗಳ ಕಾರಿಡಾರ್‌ಗೆ ತೊಂದರೆಯಾಗಬಹುದು ಎಂಬ ಆತಂಕವಿದೆ.
    • ನ್ಯಾಯಾಲಯದಲ್ಲಿ ಪ್ರಕರಣ: ಈ ಯೋಜನೆಯ ಭೂಸ್ವಾಧೀನ ಮತ್ತು ಪರಿಸರ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ದಾಖಲಾಗಿದ್ದು, ಕಾನೂನು ಹೋರಾಟದ ನಡುವೆಯೇ ಸರ್ಕಾರ ಶಂಕುಸ್ಥಾಪನೆ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸೂರ್ಯನಗರದ ಈ ಅಂತರರಾಷ್ಟ್ರೀಯ ಕ್ರೀಡಾಂಗಣವು ಕೇವಲ ಒಂದು ಕ್ರಿಕೆಟ್ ಮೈದಾನವಲ್ಲ, ಬದಲಾಗಿ ಇದು ಭವಿಷ್ಯದ ಬೆಂಗಳೂರಿನ ಆಧುನಿಕ ಮುಖರೇಖೆಯಾಗಿದೆ. ಕ್ರೀಡಾ ಜಗತ್ತಿನಲ್ಲಿ ಕರ್ನಾಟಕದ ಹೆಮ್ಮೆಯನ್ನು ಜಾಗತಿಕ ಮಟ್ಟಕ್ಕೇರಿಸುವ ಜೊತೆಗೆ, ನಗರದ ಜನದಟ್ಟಣೆಯನ್ನು ಸಮತೋಲನಗೊಳಿಸುವ ಅತ್ಯಾಧುನಿಕ ಹೆಜ್ಜೆಯಾಗಿದೆ.

Source link

ಹಾರ್ಮುಜ್ ಜಲಸಂಧಿ ಮಾರ್ಗ ತೆರೆಯುವ ಸುಳಿವು ನೀಡಿದ ಟ್ರಂಪ್

ವಾಷಿಂಗ್ಟನ್, ಮೇ 24: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗಿನ ಶಾಂತಿ ಒಪ್ಪಂದ ಹಾಗೂ ಜಾಗತಿಕ ಇಂಧನ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಸಂಚಾರಕ್ಕೆ ಮುಕ್ತಗೊಳಿಸುವ ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಈ ಬಗ್ಗೆ ತಮ್ಮ ‘ಟ್ರುತ್ ಸೋಶಿಯಲ್’ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇರಾನ್ ಹಾಗೂ ಇತರ ಸಂಬಂಧಿತ ದೇಶಗಳೊಂದಿಗೆ ಶಾಂತಿಗೆ ಸಂಬಂಧಿಸಿದ ‘ತಿಳಿವಳಿಕೆ ಪತ್ರ’ (MoU) ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ ಎಂದು ತಿಳಿಸಿದ್ದಾರೆ. ಈ ಒಪ್ಪಂದದ ಅತ್ಯಂತ ಪ್ರಮುಖ ಭಾಗವಾಗಿ ಫೆಬ್ರವರಿಯಿಂದ ಮುಚ್ಚಲ್ಪಟ್ಟಿದ್ದ ಹಾರ್ಮುಜ್ ಜಲಸಂಧಿಯನ್ನು ಜಾಗತಿಕ ಹಡಗು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಇದರಿಂದ ಇತರೆ ದೇಶಗಳು ಕೂಡ ನಿಟ್ಟುಸಿರು ಬಿಡುವಂತಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Tv9 Kannada News Live: ಕಾರ್ಮಿಕರ ವೇತನ ಹೆಚ್ಚಳ, ತೆಲಂಗಾಣದಲ್ಲಿ ಉಷ್ಣ ಅಲೆ ಮತ್ತು ಚೇತನ್ ಅಹಿಂಸಾ ಹೇಳಿಕೆ ವಿವಾದ! ಇಲ್ಲಿವೆ ಈ ಹೊತ್ತಿನ ಪ್ರಮುಖ ಸುದ್ದಿಗಳು – Kannada News | Tv9 Kannada News Live: Karnataka Minimum Wage Hike, Telangana Heatwave Deaths and Actor Chetan Controversy

ಬೆಂಗಳೂರು, ಮೇ 24: ಕರ್ನಾಟಕದಲ್ಲಿ 81 ವಲಯಗಳ ಕಾರ್ಮಿಕರ ಕನಿಷ್ಠ ವೇತನವನ್ನು  (Minimum Wage) ಶೇ 60 ರಷ್ಟು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಮತ್ತೊಂದೆಡೆ, ನೆರೆರಾಜ್ಯ ತೆಲಂಗಾಣದಲ್ಲಿ ಭೀಕರ ಉಷ್ಣಗಾಳಿಗೆ 16 ಜನರು ಬಲಿಯಾಗಿದ್ದು ಹೈ ಅಲರ್ಟ್ ಘೋಷಿಸಲಾಗಿದೆ. ಇನ್ನು, ಬೆಂಗಳೂರಿನಲ್ಲಿ ನಟ ಚೇತನ್ ಅಹಿಂಸಾ ಅವರು ಡಾ. ರಾಜ್‌ಕುಮಾರ್ ಸಮಾಧಿ ಜಾಗದ ಕುರಿತು ತಾವು ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡು ಸುದ್ದಿಗೋಷ್ಠಿ ನಡೆಸಿದ್ದಾರೆ.

ರಾಜ್ಯದ ಲಕ್ಷಾಂತರ ಕಾರ್ಮಿಕರಿಗೆ ಬಂಪರ್ ಕೊಡುಗೆ

ಕರ್ನಾಟಕ ಸರ್ಕಾರವು 81 ವಲಯಗಳ ಅಸಂಘಟಿತ ಮತ್ತು ನಿರ್ದಿಷ್ಟ ವಲಯಗಳ ಕಾರ್ಮಿಕರ ಕನಿಷ್ಠ ವೇತನವನ್ನು ಶೇಕಡಾ 60 ರಷ್ಟು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ಕಾರ್ಮಿಕ ಇಲಾಖೆಯು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮೇ 22ರ ಶುಕ್ರವಾರವೇ ಈ ಅಧಿಕೃತ ಆದೇಶ ಹೊರಡಿಸಿದೆ. ಹೊಸ ನಿಯಮದಂತೆ ಇಡೀ ರಾಜ್ಯವನ್ನು 3 ವಲಯಗಳಾಗಿ ವಿಂಗಡಿಸಲಾಗಿದ್ದು, ಬೆಂಗಳೂರಿನಲ್ಲಿ ಉನ್ನತ ಕುಶಲ ಕಾರ್ಮಿಕರ ಮಾಸಿಕ ವೇತನ 31,114 ರೂ.ಗೆ ಏರಲಿದೆ. ಈ ಹೊಸ ಕನಿಷ್ಠ ವೇತನ ಸೌಲಭ್ಯವು ಇ-ಕಾಮರ್ಸ್, ಕೊರಿಯರ್ ಮತ್ತು ಖಾಸಗಿ ಶಾಲಾ ಸಿಬ್ಬಂದಿಗೂ ಅನ್ವಯವಾಗಲಿದ್ದು, ಈ ಹಿಂದೆ ಇದ್ದ 4 ಪ್ರತ್ಯೇಕ ವಲಯಗಳ ವರ್ಗೀಕರಣ ಪದ್ಧತಿಯನ್ನು ರದ್ದುಗೊಳಿಸಿ ಎಲ್ಲಾ ಉದ್ಯೋಗಗಳನ್ನು ಒಂದೇ ಅಧಿಸೂಚನೆಯಡಿ ತರಲಾಗಿದೆ.

ಇದನ್ನೂ ಓದಿ ಕರ್ನಾಟಕದಲ್ಲಿ ಕಾರ್ಮಿಕರ ಕನಿಷ್ಠ ವೇತನದಲ್ಲಿ ಶೇ 60ರಷ್ಟು ಹೆಚ್ಚಳ!

ತೆಲಂಗಾಣದಲ್ಲಿ ಭೀಕರ ಬಿಸಿಲಿನ ಬೇಗೆ

ದೇಶದಲ್ಲಿ ದಿನದಿಂದ ದಿನಕ್ಕೆ ಸೂರ್ಯನ ತಾಪಮಾನ ಮಿತಿಮೀರುತ್ತಿದ್ದು, ನೆರೆರಾಜ್ಯ ತೆಲಂಗಾಣದಲ್ಲಿ ಭೀಕರ ಉಷ್ಣಗಾಳಿ ಮತ್ತು ತೀವ್ರ ಬಿಸಿಲಿಗೆ ಕಳೆದ ಕೆಲವು ದಿನಗಳಲ್ಲಿ ಒಟ್ಟು 16 ಜನರು ಸಾವನ್ನಪ್ಪಿದ್ದಾರೆ. ರಾಜ್ಯದ ಏಳು ಜಿಲ್ಲೆಗಳಲ್ಲಿ ಈ ಸಾವುಗಳು ವರದಿಯಾಗಿದ್ದು, ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಸರ್ಕಾರ ಹೈ ಅಲರ್ಟ್ ಘೋಷಿಸಿದೆ. ಕಂದಾಯ ಸಚಿವ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಅವರು ತುರ್ತು ಪರಿಶೀಲನಾ ಸಭೆ ನಡೆಸಿದ ಬಳಿಕ ಜಯಶಂಕರ್ ಭೂಪಾಲಪಲ್ಲಿಯಲ್ಲಿ 4, ವಾರಂಗಲ್, ಕರೀಮನಗರ, ನಿಜಾಮಾಬಾದ್‌ನಲ್ಲಿ ತಲಾ 3 ಹಾಗೂ ಗದ್ವಾಲ್, ರಂಗಾರೆಡ್ಡಿ, ಸೂರ್ಯಪೇಟ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಸಿಎಂ ರೇವಂತ್ ರೆಡ್ಡಿ ಅವರ ನಿರ್ದೇಶನದಂತೆ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.

ಇದನ್ನೂ ಓದಿ ತೆಲಂಗಾಣದಲ್ಲಿ ಬಿಸಿಲಿಗೆ 16 ಜನ ಸಾವು! ಭೀಕರ ಉಷ್ಣಗಾಳಿಗೆ ನಡುಗಿದ 7 ಜಿಲ್ಲೆಗಳು

ಡಾ. ರಾಜ್‌ಕುಮಾರ್ ಸಮಾಧಿ ಜಾಗದ ವಿವಾದ: ತಮ್ಮ ಹೇಳಿಕೆಗೆ ನಟ ಚೇತನ್ ಅಹಿಂಸಾ ಬದ್ಧ

‘ಆ ದಿನಗಳು’ ಸಿನಿಮಾ ಖ್ಯಾತಿಯ ನಟ ಚೇತನ್ ಅಹಿಂಸಾ ಅವರು ಡಾ. ರಾಜ್​ಕುಮಾರ್ ಸಮಾಧಿಗೆ ಸರ್ಕಾರ ಎಕರೆಗಟ್ಟಲೆ ಜಾಗ ನೀಡಿದ್ದನ್ನು ಪ್ರಶ್ನಿಸಿ ನೀಡಿದ್ದ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿತ್ತು. ರಾಜ್​ಕುಮಾರ್ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರೂ, ಚೇತನ್ ತಮ್ಮ ನಿಲುವಿಗೆ ಬದ್ಧರಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾವೂ ರಾಜ್‌ಕುಮಾರ್ ಅಭಿಮಾನಿಗಳೇ, ಆದರೆ ಸರ್ಕಾರದ ಪಾಲಿಸಿಯಲ್ಲಿನ ಪಕ್ಷಪಾತದ ಬಗ್ಗೆ ನಾನು ಮೂರು ಸಾಲಿನ ಪೋಸ್ಟ್ ಮಾಡಿದ್ದೆ. ನಾನು ಹೇಳಿದ್ದರಲ್ಲಿ ಸತ್ಯ ಇದೆ ಎಂದು ಕರ್ನಾಟಕದ ಜನ ದೊಡ್ಡ ಪ್ರಮಾಣದಲ್ಲಿ ಒಪ್ಪಿಕೊಂಡಿದ್ದಾರೆ. ನಮಗೆ ಸಮಾನತೆಯ, ನ್ಯಾಯದ, ವೈಜ್ಞಾನಿಕತೆಯ ಸಮಾಜ ಬೇಕು” ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ ಡಾ. ರಾಜ್ ಸಮಾಧಿ ಬಗ್ಗೆ ನಾನು ಹೇಳಿದ್ದರಲ್ಲಿ ಸತ್ಯ ಇದೆ ಅಂತ ಜನ ಒಪ್ಪಿದ್ದಾರೆ: ಚೇತನ್ ಅಹಿಂಸಾ

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:00 am, Sun, 24 May 26

Source link