Category Archives: Blog

Your blog category

ಅಬುಧಾಬಿ ಬಿಎಪಿಎಸ್ ದೇವಾಲಯ ಏಕತೆಯ ಸಂಕೇತ; ಯುಎಇ ಅಧ್ಯಕ್ಷರ ಸಾಂಸ್ಕೃತಿಕ ಸಲಹೆಗಾರರಿಂದ ಶ್ಲಾಘನೆ – Kannada News | UAE Cultural Advisor Zaki Anwar Nusseibeh visit to BAPS Hindu Mandir in Abu Dhabi

ನವದೆಹಲಿ, ಜನವರಿ 17: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷರ ಸಾಂಸ್ಕೃತಿಕ ಸಲಹೆಗಾರ ಮತ್ತು ಯುಎಇ ವಿಶ್ವವಿದ್ಯಾಲಯದ ಕುಲಪತಿ ಜಾಕಿ ಅನ್ವರ್ ನುಸ್ಸೀಬೆಹ್ ಅವರು ಇತ್ತೀಚೆಗೆ ಅಬುಧಾಬಿಯಲ್ಲಿರುವ ಬಿಎಪಿಎಸ್ ಹಿಂದೂ ದೇವಾಲಯಕ್ಕೆ (BAPS Hindu Temple) ಭೇಟಿ ನೀಡಿದರು. ತಮ್ಮ ಭೇಟಿಯ ಸಮಯದಲ್ಲಿ, ಅವರು ದೇವಾಲಯದ ಮುಖ್ಯಸ್ಥ ಸ್ವಾಮಿ ಬ್ರಹ್ಮವಿಹಾರಿ ದಾಸ್ ಅವರನ್ನು ಭೇಟಿಯಾದರು. ಅವರು ಬಿಎಪಿಎಸ್ ದೇವಾಲಯವನ್ನು 21ನೇ ಶತಮಾನದ ಜಾಗತಿಕ ಏಕತೆಯ ದಾರಿದೀಪವೆಂದು ಶ್ಲಾಘಿಸಿದರು. ಈ ದೇವಾಲಯವು ಸಂಸ್ಕೃತಿ ಮತ್ತು ಮೌಲ್ಯಗಳ ಕೇಂದ್ರವಾಗಿದೆ ಎಂದು ಅವರು ಹೇಳಿದರು.

ಯುಎಇಯ ಸ್ಥಾಪಕ ಪಿತಾಮಹ ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರು ಕಲ್ಪಿಸಿಕೊಂಡ ಸಹಿಷ್ಣುತೆ, ಸಹಬಾಳ್ವೆ ಮತ್ತು ಪರಸ್ಪರ ಗೌರವದ ಮೌಲ್ಯಗಳನ್ನು ಈ ದೇವಾಲಯವು ನಿರೂಪಿಸುತ್ತದೆ ಎಂದು ಜಾಕಿ ಅನ್ವರ್ ನುಸ್ಸೀಬೆಹ್ ಹೇಳಿದರು. ಈ ದೇವಾಲಯವು ಭವಿಷ್ಯದ ಪೀಳಿಗೆಗೆ ಕಲಿಕೆಯ ಅವಕಾಶಗಳನ್ನು ಒದಗಿಸುವ ವಿಶ್ವ ದರ್ಜೆಯ ಮಾನವೀಯ ಶಾಲೆಯಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಜೀವನದ ಅದ್ಭುತ ಅನುಭವದಲ್ಲೊಂದು; ಅಬುಧಾಬಿಯ ಬಿಎಪಿಎಸ್ ಹಿಂದೂ ಮಂದಿರಕ್ಕೆ ಸಿಎಂ ಚಂದ್ರಬಾಬು ನಾಯ್ಡು ಭೇಟಿ

ಬಿಎಪಿಎಸ್ ದೇವಾಲಯವು ಪೂಜಾ ಸ್ಥಳವಾಗಿ ಮಾತ್ರವಲ್ಲದೆ ಸಾಂಸ್ಕೃತಿಕ ತಿಳುವಳಿಕೆ ಮತ್ತು ಬೌದ್ಧಿಕ ಜ್ಞಾನೋದಯದ ಕೇಂದ್ರವಾಗಿಯೂ ನಿಂತಿದೆ. ಇಂತಹ ಸ್ಥಳವನ್ನು ನಾನು ಎಲ್ಲಿಯೂ ನೋಡಿಲ್ಲ. ನಾನು ಪ್ರಪಂಚದ ಅನೇಕ ದೇಶಗಳು ಮತ್ತು ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಆದರೆ ನಾನು ಎಲ್ಲಿಯೂ ಇಂತಹ ಪವಾಡವನ್ನು ನೋಡಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಬಿಎಪಿಎಸ್-ವಿಶ್ವಸಂಸ್ಥೆಯ 30 ವರ್ಷಗಳ ಪಾಲುದಾರಿಕೆಯ ಸಂಭ್ರಮಾಚರಣೆ

ಅಬುಧಾಬಿ ನಗರದ ಸಮೀಪವಿರುವ ಅಲ್ ರಹ್ಬಾ ಪ್ರದೇಶದಲ್ಲಿ ಅಬುಧಾಬಿ BAPS ಹಿಂದೂ ದೇವಾಲಯವನ್ನು ನಿರ್ಮಿಸಲಾಗಿದೆ. ಈ ನಿರ್ಮಾಣವನ್ನು BAPS ಸ್ವಾಮಿನಾರಾಯಣ ಸಂಸ್ಥೆಯ ಆಶ್ರಯದಲ್ಲಿ ನಡೆಸಲಾಯಿತು. ಇದು ಮಧ್ಯಪ್ರಾಚ್ಯದಲ್ಲಿ ವಿಶ್ವಪ್ರಸಿದ್ಧ BAPS ಸಂಘಟನೆಯ ಮೊದಲ ಸಾಂಪ್ರದಾಯಿಕ ಹಿಂದೂ ದೇವಾಲಯವಾಗಿದೆ. ದೇವಾಲಯ ನಿರ್ಮಾಣಕ್ಕೆ ಭೂಮಿಯನ್ನು ಯುಎಇ ಸರ್ಕಾರ ಒದಗಿಸಿದೆ. 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ದೇವಾಲಯದ ನಿರ್ಮಾಣಕ್ಕೆ ಅಡಿಪಾಯ ಹಾಕಿದರು. ಇದನ್ನು ಫೆಬ್ರವರಿ 14, 2024ರಂದು ಉದ್ಘಾಟಿಸಲಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 5:56 pm, Sat, 17 January 26

Source link

Apply Now: ಬೆಂಗಳೂರಿನ ಕೃಷಿ ವಿಜ್ಞಾನ ವಿವಿಯಲ್ಲಿ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಾತಿ – Kannada News | UAS Bengaluru Professor Jobs: PhD Holders Apply Now for Career Opportunity

ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು(UAS) ಅಧಿಕೃತ ಅಧಿಸೂಚನೆಯ ಮೂಲಕ ಪ್ರೊಫೆಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರಿನಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 02 ರ ಮೊದಲು ಅರ್ಜಿ ಸಲ್ಲಿಸತಕ್ಕದ್ದು.

ಶೈಕ್ಷಣಿಕ ಅರ್ಹತೆ:

ಯುಎಎಸ್ ಬೆಂಗಳೂರು ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪಿಎಚ್‌ಡಿ ಪದವಿಯನ್ನು ಪೂರ್ಣಗೊಳಿಸಿರಬೇಕು.

ಇದನ್ನೂ ಓದಿ: ಗ್ರಾಮ ಪಂಚಾಯತ್ನಲ್ಲಿ ಬಿಲ್ ಕಲೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ; ಪಿಯುಸಿ ಆಗಿದ್ರೆ ಸಾಕು

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲನೆಯದಾಗಿ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
  • ಮೇಲಿನ ಲಿಂಕ್‌ನಿಂದ ಅಥವಾ ಅಧಿಕೃತ ಅಧಿಸೂಚನೆಯಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಮತ್ತು ನಿಗದಿತ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.
  • ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ.
  • ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಲಾದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ.
    ಕೊನೆಗೆ ಅರ್ಜಿ ನಮೂನೆಯನ್ನು ಈ ಕೆಳಗಿನ ವಿಳಾಸಕ್ಕೆ ನಿಗದಿತ ರೀತಿಯಲ್ಲಿ, ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಅಥವಾ ಯಾವುದೇ ಇತರ ಸೇವೆಯ ಮೂಲಕ ಕಳುಹಿಸಿ.
  • ವಿಳಾಸ: ಆಡಳಿತಾಧಿಕಾರಿ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು-560065

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘45’ ಸಿನಿಮಾಕ್ಕೆ ಪೆಟ್ಟು ಕೊಟ್ಟದ್ದು ಯಾರು? ನಿರ್ಮಾಪಕ ಮಾತು – Kannada News | 45 Kannada movie producer talks about his movie success

ಶಿವರಾಜ್ ಕುಮಾರ್ (Shiva Rajkumar), ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟನೆಯ ‘45’ ಸಿನಿಮಾ ಕೆಲ ವಾರಗಳ ಹಿಂದೆ ಬಿಡುಗಡೆ ಆಗಿತ್ತು. ಡಿಸೆಂಬರ್ ಅಂತ್ಯದಲ್ಲಿ ಬಿಡುಗಡೆ ಆದ ಈ ಸಿನಿಮಾಕ್ಕೆ ಪೈರಸಿ ಸಮಸ್ಯೆಗಳು ಸಹ ಕಾಡಿದ್ದವು. ‘45’ ಸಿನಿಮಾದ ಚಿತ್ರೀಕರಣ, ಬಿಡುಗಡೆ, ಯಶಸ್ಸು, ಸಮಸ್ಯೆ ಎಲ್ಲ ವಿಷಯಗಳ ಬಗ್ಗೆ ನಿರ್ಮಾಪಕ ರಮೇಶ್ ರೆಡ್ಡಿ ಅವರು ಟಿವಿ9 ಜೊತೆಗೆ ಮಾತನಾಡಿದ್ದಾರೆ. ‘45’ ಸಿನಿಮಾ ಚೆನ್ನಾಗಿ ಬಿಡುಗಡೆ ಆಯ್ತು, ಜನರಿಂದ ಒಳ್ಳೆಯ ಪ್ರತಿಕ್ರಿಯೆಯೂ ಸಹ ದೊರಕಿತು, ಆದರೆ ಕೆಲ ‘ಕಾಣದ ಕೈಗಳಿಂದಾಗಿ’ ಸಿನಿಮಾಕ್ಕೆ ಸಮಸ್ಯೆ ಆಯ್ತು ಎಂದಿದ್ದಾರೆ. ಯಾವುದು ಆ ಕಾಣದ ಕೈ ಅವರೇ ವಿವರಿಸಿದ್ದಾರೆ ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Vande Bharat Sleeper Train: ಬಂಗಾಳದ ಮಾಲ್ಡಾದಲ್ಲಿ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ – Kannada News | PM Narendra Modi flags off Indias first Vande Bharat sleeper train in Malda

ಮಾಲ್ಡಾ, ಜನವರಿ 17: ಇಂದು ಭಾರತೀಯ ರೈಲ್ವೆ ಇಲಾಖೆಗೆ ಮಹತ್ವದ ದಿನ. ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಮಾಲ್ಡಾದಲ್ಲಿ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ (Vande Bharat Sleeper Train) ಹಸಿರು ನಿಶಾನೆ ತೋರಿದರು. ಈ ವಂದೇ ಭಾರತ್ ಸ್ಲೀಪರ್ ರೈಲು ಹೌರಾ ಮತ್ತು ಗುವಾಹಟಿ (ಕಾಮಾಕ್ಯ) ನಡುವೆ ಸಂಚರಿಸಲಿದೆ.

ಆಧುನಿಕ ಭಾರತದ ಸಾರಿಗೆ ಅಗತ್ಯಗಳನ್ನು ಪೂರೈಸಲು ಆಧುನಿಕ ಸೌಲಭ್ಯಗಳೊಂದಿಗೆ ವಂದೇ ಭಾರತ್ ಸ್ಲೀಪರ್ ರೈಲನ್ನು ತಯಾರಿಸಲಾಗಿದೆ. ಇದು ಸಂಪೂರ್ಣ ಹವಾನಿಯಂತ್ರಿತ ಸ್ಲೀಪರ್ ರೈಲು ಆಗಿದ್ದು, ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ವಿಮಾನಯಾನದಂತಹ ಅನುಭವವನ್ನು ನೀಡುತ್ತದೆ.

ಪ್ರಧಾನಿ ಮೋದಿ 2 ದಿನಗಳ ಕಾಲ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಪ್ರವಾಸದಲ್ಲಿದ್ದು, ಹಲವಾರು ರೈಲು ಮತ್ತು ರಸ್ತೆ ಯೋಜನೆಗಳನ್ನು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ. ಮಾಲ್ಡಾದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಮೋದಿ 3,250 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ರೈಲು ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Vande Bharat Sleeper: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿನ ವಿಶೇಷತೆ, ಟಿಕೆಟ್ ದರ ಏನು? – Kannada News | India’s first Vande Bharat sleeper train premium facilities Price and Feautures

ನವದೆಹಲಿ, ಜನವರಿ 17 ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ (Vande Bharat Sleeper Train) ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ. ಪ್ರಯಾಣಿಕರಿಗೆ ಐಷಾರಾಮಿ ಪ್ರಯಾಣವನ್ನು ನೀಡಲು ವಿನ್ಯಾಸಗೊಳಿಸಲಾದ ಹೊಸ ವಂದೇ ಭಾರತ್ ರೈಲಲ್ಲಿ ವಿಮಾನದ ರೀತಿಯ ವಿನ್ಯಾಸ, ವಿಶೇಷತೆಗಳಿವೆ. ಆದರೆ, ಇದು ವಿಮಾನಕ್ಕಿಂತ ಕಡಿಮೆ ದರದಲ್ಲಿ ವಿಮಾನದ ರೀತಿಯದ್ದೇ ಸೇವೆ ನೀಡಲಿದೆ. ಇದು ತನ್ನ ಪ್ರಯಾಣಿಕರಿಗೆ ದೀರ್ಘ ಪ್ರಯಾಣವನ್ನು ಸುಲಭಗೊಳಿಸುವ ಪ್ರಮುಖ ಸೌಲಭ್ಯಗಳನ್ನು ಒಳಗೊಂಡಿದೆ.

ಈ ರೈಲು ಹೌರಾ-ಗುವಾಹಟಿ (ಕಾಮಾಕ್ಯ) ಮಾರ್ಗದಲ್ಲಿ ಸುಮಾರು ಎರಡೂವರೆ ಗಂಟೆಗಳ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಈ ರೈಲು ಧಾರ್ಮಿಕ ಪ್ರಯಾಣ ಮತ್ತು ಪ್ರವಾಸೋದ್ಯಮಕ್ಕೂ ಪ್ರಮುಖ ಉತ್ತೇಜನ ನೀಡುತ್ತದೆ. ರಾತ್ರಿಯ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾದ ಬರ್ತ್‌ಗಳು, ಸುರಕ್ಷಿತ ಮತ್ತು ಸುಲಭವಾದ ಮೇಲಿನ ಬರ್ತ್ ಪ್ರವೇಶಕ್ಕಾಗಿ ಪ್ರಯಾಣಿಕ ಸ್ನೇಹಿ ಏಣಿಗಳು, ಆಧುನಿಕ ವಿನ್ಯಾಸದ ಶೌಚಾಲಯಗಳು ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಕೇಂದ್ರೀಕೃತ ಮೇಲ್ವಿಚಾರಣೆ ಮತ್ತು ಸಿಸಿಟಿವಿಗಳು ಇರದಲ್ಲಿ ಇರಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಹೌರಾ ಮತ್ತು ಗುವಾಹಟಿ (ಕಾಮಾಕ್ಯ) ನಡುವೆ ಸಂಚರಿಸುವ ಈಶಾನ್ಯ ಗಡಿನಾಡು ರೈಲ್ವೆ (NFR) ವಲಯದಿಂದ ನಿರ್ವಹಿಸಲ್ಪಡುವ ಹೊಸ ಪ್ರೀಮಿಯಂ ರೈಲಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ಈ ರೈಲಿನ ಮಾರ್ಗ, ಪ್ರಮುಖ ವೈಶಿಷ್ಟ್ಯಗಳು, ಟಿಕೆಟ್ ಬೆಲೆ, ಇತರ ವಿವರಗಳ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:Vande Bharat Sleeper Train: ಬಂಗಾಳದ ಮಾಲ್ಡಾದಲ್ಲಿ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

ಭಾರತದಲ್ಲಿ ವಿನ್ಯಾಸಗೊಳಿಸಿ ತಯಾರಿಸಲಾದ ವಂದೇ ಭಾರತ್ ಸ್ಲೀಪರ್ ರೈಲು 16 ಬೋಗಿಗಳನ್ನು ಹೊಂದಿದೆ. ಇದು 823 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ. ಈ ಪ್ರೀಮಿಯಂ ರೈಲು 11 ಮೂರು ಹಂತದ AC ಕೋಚ್‌ಗಳು, 4 ಎರಡು ಹಂತದ AC ಕೋಚ್‌ಗಳು ಮತ್ತು 1ನೇ ದರ್ಜೆಯ AC ಕೋಚ್ ಅನ್ನು ಒಳಗೊಂಡಿದೆ.

ರೈಲಿನ ಟಿಕೆಟ್ ಬೆಲೆ:

ಹೌರಾ ಮತ್ತು ಕಾಮಾಕ್ಯ ನಡುವಿನ ವಂದೇ ಭಾರತ್ ಸ್ಲೀಪರ್ ರೈಲಿನ 3ನೇ ಎಸಿ ಟಿಕೆಟ್‌ನ ಬೆಲೆ ಸುಮಾರು 2,300 ರೂ. ಆಗಿರುತ್ತದೆ. 2ನೇ ಎಸಿ ಟಿಕೆಟ್ ದರ ಸುಮಾರು 3,000 ರೂ. ಮತ್ತು 1ನೇ ಎಸಿ ಟಿಕೆಟ್‌ನ ಬೆಲೆ ಸುಮಾರು 3,600 ರೂ. ಇರಲಿದೆ. ಈ ರೈಲು ಗಂಟೆಗೆ 180 ಕಿ.ಮೀ. ವೇಗವನ್ನು ತಲುಪಲು ನಿರ್ಮಿಸಲಾಗಿದ್ದರೂ, ಇದು ಗಂಟೆಗೆ ಗರಿಷ್ಠ 120-130 ಕಿ.ಮೀ. ವೇಗದಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: Vande Bharat Sleeper Train: ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ವಿಡಿಯೋ

ಮೆಟ್ರೋ ರೈಲುಗಳಂತೆಯೇ ಪ್ರಯಾಣದ ಉದ್ದಕ್ಕೂ ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳು ಮುಚ್ಚಲ್ಪಟ್ಟಿರುವಂತೆ ಪ್ರೋಗ್ರಾಮ್ ಮಾಡಲಾಗಿದೆ. ರೈಲು ನಿಲ್ದಾಣಕ್ಕೆ ಬಂದಾಗ ಮಾತ್ರ ಬಾಗಿಲು ತೆರೆಯುತ್ತದೆ. ಈ ರೈಲುಗಳು ಸಂಪೂರ್ಣ ಎಸಿ (ಹವಾನಿಯಂತ್ರಿತ)ಯನ್ನು ಒಳಗೊಂಡಿರುತ್ತದೆ.

ವೇಗ, ನೈರ್ಮಲ್ಯ ಮತ್ತು ಸುರಕ್ಷತೆಯ ಜೊತೆಗೆ, ಈ ರೈಲು ತನ್ನ ಪ್ರಯಾಣಿಕರಿಗೆ ಪ್ರೀಮಿಯಂ ವಿಮಾನಯಾನ ಸೇವೆಗಳಂತೆಯೇ ಸ್ಥಳೀಯ ಆಹಾರವನ್ನು ನೀಡುತ್ತದೆ. ಟಿಕೆಟ್ ಬೆಲೆಯಲ್ಲಿ ಆಹಾರವನ್ನು ಕೂಡ ಸೇರಿಸಲಾಗಿರುತ್ತದೆ. ಸ್ಥಳೀಯ ಆಹಾರವನ್ನು ಪ್ರಯಾಣಿಕರಿಗೆ ನೀಡುವ ಉದ್ದೇಶದಿಂದ ಕಾಮಾಕ್ಯದಿಂದ ಹೌರಾಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅಸ್ಸಾಮಿ ಆಹಾರವನ್ನು ನೀಡಲಾಗುತ್ತದೆ. ಹೌರಾದಿಂದ ಕಾಮಾಕ್ಯಕ್ಕೆ ಹಿಂದಿರುಗುವ ಪ್ರಯಾಣದಲ್ಲಿರುವವರು ಬಂಗಾಳಿ ಆಹಾರವನ್ನು ಸವಿಯಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

25 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಕೈಗೆ ರೆಡ್ ಹ್ಯಾಂಡ್ ಸಿಕ್ಕಿದ್ದ ಅಬಕಾರಿ ಉಪ ಆಯುಕ್ತ – Kannada News | Lokayukta Raid: Bengaluru Excise Deputy Commissioner Arrested for Liquor License Bribe

ಬೆಂಗಳೂರು, ಜ.17: ಲೋಕಾಯುಕ್ತ ಪೊಲೀಸರು ಬೆಂಗಳೂರಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ಅಬಕಾರಿ ಉಪ ಆಯುಕ್ತ (ಡಿಸಿ) ಜಗದೀಶ್ ನಾಯಕ್ ಅವರನ್ನು ಬಂಧಿಸಿದ್ದಾರೆ. ಮೈಕ್ರೋ ಬ್ರಿವರಿ ಮತ್ತು ಸಿಎಲ್ 7 ಪರವಾನಗಿಗಳಿಗಾಗಿ 75 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಅವರ ಮೇಲಿತ್ತು. ಮೊದಲ ಕಂತಿನ 25 ಲಕ್ಷ ರೂಪಾಯಿ ಲಂಚವನ್ನು ಸ್ವೀಕರಿಸುತ್ತಿದ್ದಾಗ ಬ್ಯಾಟರಾಯನಪುರದ ಅಬಕಾರಿ ಕಚೇರಿಯಲ್ಲಿ ಜಗದೀಶ್ ನಾಯಕ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ. ಈ ಪ್ರಕರಣದಲ್ಲಿ ಜಗದೀಶ್ ನಾಯಕ್ ಜೊತೆಗೆ ಅಧೀಕ್ಷಕ ತಮ್ಮಣ್ಣ ಮತ್ತು ಅಬಕಾರಿ ಇಲಾಖೆಯ ಕಾನ್ಸ್ಟೇಬಲ್ ಲಕ್ಕಪ್ಪ ಅವರನ್ನೂ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ದೂರುದಾರರು ಲಕ್ಷ್ಮೀನಾರಾಯಣ ನೀಡಿದ ಮಾಹಿತಿ ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನೂ ವಶಕ್ಕೆ ಪಡೆದಿದ್ದಾರೆ. ಲಂಚದ ಹಣದ ಸಮೇತ ಕಾನ್ಸ್ಟೇಬಲ್ ಲಕ್ಕಪ್ಪನನ್ನು ಕರೆದುಕೊಂಡು ಹೋಗಿದ್ದಾರೆ. ಲಕ್ಷ್ಮೀನಾರಾಯಣ ಅವರ ಪ್ರಕಾರ, ಮೈಕ್ರೋ ಬ್ರಿವರಿ ಮತ್ತು ಸಿಎಲ್ 7 ಪರವಾನಗಿಗಳಿಗಾಗಿ ಆರಂಭದಲ್ಲಿ 80 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ನಂತರ ಈ ಮೊತ್ತವನ್ನು 2.25 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿತ್ತು. ಕೊನೆಗೆ 50 ಲಕ್ಷ ರೂಪಾಯಿಗೆ ಬಂದು ನಿಂತಿದ್ದು, ಮೊದಲ ಕಂತಿನ 25 ಲಕ್ಷ ರೂಪಾಯಿ ಹಣವನ್ನು ನೀಡುವಂತೆ ಒತ್ತಾಯಿಸಲಾಗಿತ್ತು. ಈ ಹಣವನ್ನು ಹೊಂದಿಸಲು ತಾನು ಸ್ನೇಹಿತರಿಂದ ಸಾಲ ಪಡೆದಿದೆ ಎಂದು ಹೇಳಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಲಂಚ ನೀಡದೆ ಯಾವುದೇ ಕೆಲಸ ಆಗುವುದಿಲ್ಲ ಎಂದು ಅಧಿಕಾರಿಗಳು ನೇರವಾಗಿ ಹೇಳುತ್ತಿದ್ದರು ಎಂದು ದೂರುದಾರರು ಹೇಳಿದ್ದಾರೆ.

ವರದಿ: ಪ್ರದೀಪ್ 

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

U19 World Cup 2026: ಪಾಕ್ ಬಳಿಕ ಬಾಂಗ್ಲಾ ಜೊತೆಗೆ ಶೇಕ್ ಹ್ಯಾಂಡ್ ಮಾಡದ ಟೀಂ ಇಂಡಿಯಾ – Kannada News | India U19 vs Bangladesh: Ayush Mhatre Handshake Row Ignites New Cricket Controversy

ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಐಸಿಸಿ ಅಂಡರ್-19 ವಿಶ್ವಕಪ್ 2026 ರ ತನ್ನ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶವನ್ನು ಎದುರಿಸಿತು. ಮಳೆ ಪೀಡಿತ ಈ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್‌ ಮಾಡಿತು. ಆದಾಗ್ಯೂ ಟಾಸ್ ಸಮಯದಲ್ಲಿ ನಡೆದ ಅಚ್ಚರಿಯ ಘಟನೆ ಇದೀಗ ಕ್ರಿಕೆಟ್ ಲೋಕದಲ್ಲಿ ಮತ್ತೊಂದು ವಿವಾದವನ್ನು ಹುಟ್ಟುಹಾಕಿದೆ. ನಡೆದಿದ್ದೇನೆಂದರೆ ಟಾಸ್ ಮುಗಿದ ಎರಡೂ ತಂಡಗಳ ನಾಯಕರು ಹ್ಯಾಂಡ್‌ಶೇಕ್ ಮಾಡಲಿಲ್ಲ. ಬಾಂಗ್ಲಾದೇಶ ನಾಯಕ ಕೈಕುಲುಕಲು ತಮ್ಮ ಕೈಯನ್ನು ಜೇಬಿನಿಂದ ಹೊರತೆಗೆದರಾದರೂ, ಟೀಂ ಇಂಡಿಯಾ ನಾಯಕ ಆಯುಷ್ ಮ್ಹಾತ್ರೆ ಮಾತ್ರ ಕೈಕುಲುಕಲದೆ ಹಿಂದೆ ಸರಿದರು. ಇದೀಗ ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ.

ವಾಸ್ತವವಾಗಿ ಕಳೆದ ವರ್ಷ ಅಂದರೆ 2025 ರ ಏಷ್ಯಾಕಪ್ ಸಮಯದಲ್ಲಿ ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಅವರೊಂದಿಗೆ ಹ್ಯಾಂಡ್‌ಶೇಕ್ ಮಾಡಲು ನಿರಾಕರಿಸಿದ್ದರು. ಈ ಘಟನೆ ವಿವಾದ ಹುಟ್ಟಿಕೊಳ್ಳಲು ಕಾರಣವಾಗಿತ್ತು. ಇದೀಗ ಆ ಪ್ರವೃತ್ತಿ ಬಾಂಗ್ಲಾದೇಶಕ್ಕೂ ಹರಡುತ್ತಿರುವಂತೆ ತೋರುತ್ತಿದೆ.

ಈ ಘಟನೆಯು ಬಿಸಿಸಿಐ ಮತ್ತು ಬಿಸಿಬಿ ನಡುವೆ ಇತ್ತೀಚೆಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಪರಿಣಾಮವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್ ಇತ್ತೀಚೆಗೆ ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್​ನಿಂದ ಹೊರಹಾಕಿತ್ತು. ಇದರಿಂದ ಕೆರಳಿದ ಬಾಂಗ್ಲಾ ಕ್ರಿಕೆಟ್ ಮಂಡಳಿ ಭದ್ರತೆ ಮತ್ತು ಇತರ ಕಳವಳಗಳನ್ನು ಉಲ್ಲೇಖಿಸಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ ತನ್ನ ತಂಡವನ್ನು ಕಳುಹಿಸಲು ಹಿಂದೇಟು ಹಾಕಿ ತನ್ನ ತಂಡದ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂದು ವಿನಂತಿಸಿತ್ತು. ಈ ವಿವಾದದ ನಡುವೆ ಇದೀಗ ಮತ್ತೊಂದು ವಿವಾದ ಹುಟ್ಟಿಕೊಂಡಿದ್ದು ಮುಂದಿನ ದಿನಗಳಲ್ಲಿ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹೇಶ್ ಬಾಬು ಚಿತ್ರಮಂದಿರದಲ್ಲಿ ದರ್ಶನ್​​ಗಿಲ್ಲ ಜಾಗ – Kannada News | No Darshan photo in Mahesh Babu’s AMB Cinemas Bengaluru

ಮಹೇಶ್ ಬಾಬು (Mahesh Babu) ಭಾರತೀಯ ಚಿತ್ರರಂಗದ ಸ್ಟಾರ್ ನಟರುಗಳಲ್ಲಿ ಒಬ್ಬರು. ಸ್ಟಾರ್ ನಟರಾಗಿರುವ ಜೊತೆಗೆ ಮಹೇಶ್ ಬಾಬು ಒಳ್ಳೆಯ ಉದ್ಯಮಿಯೂ ಹೌದು. ಹಲವು ಉದ್ಯಮಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ ಮಹೇಶ್ ಬಾಬು. ಅವುಗಳಲ್ಲಿ ಚಿತ್ರಮಂದಿರ ಪ್ರದರ್ಶನವೂ ಹೌದು. ಮಹೇಶ್ ಬಾಬು ಅವರು ಎಎಂಬಿ ಹೆಸರಿನಲ್ಲಿ ಮಲ್ಟಿಪ್ಲೆಕ್ಸ್​ ಚಿತ್ರಮಂದಿರಗಳನ್ನು ನಡೆಸುತ್ತಾರೆ. ಈಗಾಗಲೇ ಹೈದರಾಬಾದ್​​ನಲ್ಲಿ ಹಾಗೂ ಇನ್ನೂ ಕೆಲವೆಡೆ ಐಶಾರಾಮಿ ಮಲ್ಟಿಪ್ಲೆಕ್ಸ್​ಗಳನ್ನು ಮಹೇಶ್ ಬಾಬು ಹೊಂದಿದ್ದು, ಇದೀಗ ಬೆಂಗಳೂರಿನಲ್ಲೂ ಎಎಂಬಿಯನ್ನು ಪ್ರಾರಂಭಿಸಿದ್ದಾರೆ.

ಬೆಂಗಳೂರಿನ ಐಕಾನಿಕ್ ಚಿತ್ರಮಂದಿರಗಳಲ್ಲಿ ಒಂದಾಗಿದ್ದ ಕಪಾಲಿ ಚಿತ್ರಮಂದಿರ ಇದ್ದ ಸ್ಥಳದಲ್ಲಿಯೇ ಇದೀಗ ಮಹೇಶ್ ಬಾಬು ಅವರ ಎಎಂಬಿ ಪ್ರಾರಂಭ ಆಗಿದೆ. ಅತ್ಯುತ್ತಮ ಸೀಟಿಂಗ್ ವ್ಯವಸ್ಥೆ, ಸೌಂಡ್, ಸ್ಕ್ರೀನ್, ಗುಣಮಟ್ಟದ ಆಹಾರ, ಶುಚಿತ್ವ ಎಲ್ಲವನ್ನೂ ಸಹ ಎಎಂಬಿ ಒಳಗೊಂಡಿದೆ. ಇವುಗಳ ಜೊತೆಗೆ ಅತ್ಯುತ್ತಮ ಇಂಟೀರಿಯರ್ ಡೆಕೊರೇಷನ್ ಅನ್ನು ಸಹ ಎಎಂಬಿ ಒಳಗೊಂಡಿದೆ. ಕನ್ನಡದ ಸ್ಟಾರ್ ನಟರುಗಳ ಚಿತ್ರಗಳನ್ನು ಸಹ ಇಲ್ಲಿ ಪ್ರದರ್ಶನ ಮಾಡಲಾಗಿದೆ. ಆದರೆ ದರ್ಶನ್ ಅವರ ಚಿತ್ರವನ್ನು ಪ್ರದರ್ಶಿಸಲಾಗಿಲ್ಲ.

ಕನ್ನಡದ ಪ್ರಸ್ತುತ ಜನಪ್ರಿಯ ನಟರುಗಳ ಚಿತ್ರಗಳನ್ನು ಎಎಂಬಿಯ ಆರ್ಟಿಸ್ಟ್ ಗ್ಯಾಲೆರಿಯಲ್ಲಿ ಪ್ರದರ್ಶಿಸಲಾಗಿದೆ. ಶಿವರಾಜ್ ಕುಮಾರ್, ಸುದೀಪ್, ಉಪೇಂದ್ರ, ಯಶ್, ಗಣೇಶ್, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ಶ್ರೀಮುರಳಿ, ರಕ್ಷಿತ್ ಶೆಟ್ಟಿ ಅವರುಗಳ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಆದರೆ ಇಲ್ಲಿ ದರ್ಶನ್ ಚಿತ್ರವನ್ನು ಪ್ರದರ್ಶಿಸಲಾಗಿಲ್ಲ. ಇದು ಅವರ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ:‘ಅವತಾರ್ 3’ ಸಿನಿಮಾನಲ್ಲಿ ಮಹೇಶ್ ಬಾಬು? ಇದೆಂಥ ಅಚ್ಚರಿ

ಇತ್ತೀಚೆಗಷ್ಟೆ ನಿರ್ದೇಶಕ ರವಿ ಶ್ರೀವತ್ಸ ಅವರು ಎಎಂಬಿಗೆ ಭೇಟಿ ನೀಡಿದ್ದರು. ಅಲ್ಲಿ ಆರ್ಟಿಸ್ಟ್ ಗ್ಯಾಲೆರಿಯಲ್ಲಿ ನಟ ದರ್ಶನ್ ಚಿತ್ರ ಇಲ್ಲದೇ ಇರುವುದನ್ನು ಗಮನಿಸಿ ಚಿತ್ರವನ್ನು ಟ್ವೀಟ್​ ಮಾಡಿದ್ದಾರೆ. ‘ಮಹೇಶ್ ಬಾಬು ಅವರೇ ಬೆಂಗಳೂರಿಗೆ ಸ್ವಾಗತ, ಎಎಂಬಿ ಸ್ಕ್ರೀನ್ಸ್​​ಗೆ ಭೇಟಿ ನೀಡಿದ್ದೆ. ಅದ್ಭುತವಾಗಿದೆ. ಗುಣಮಟ್ಟದ ಮಲ್ಟಿಪ್ಲೆಕ್ಸ್ ನಿರ್ಮಿಸಿದ್ದಕ್ಕೆ ಧನ್ಯವಾದಗಳು, ಒಳ್ಳೆಯದಾಗಲಿ. ಆದರೆ ಆರ್ಟಿಸ್ಟ್ ಗ್ಯಾಲೆರಿಯಲ್ಲಿ ದರ್ಶನ್ ಅವರ ಫೋಟೊ ಮಿಸ್ ಆಗಿದೆ, ಇದು ನೋಡಿ ಬೇಸರವಾಯ್ತು’ ಎಂದಿದ್ದಾರೆ.

ನಟ ದರ್ಶನ್ ಪ್ರಸ್ತುತ ರೇಣುಕಾ ಸ್ವಾಮಿ ಕೊಲೆ ಕೇಸಿನ ಆರೋಪಿ ಆಗಿದ್ದು, ಕೊಲೆ ಕೇಸೊಂದರ ಆರೋಪಿಯ ಚಿತ್ರ ಕಲಾವಿದರ ಗ್ಯಾಲೆರಿಯಲ್ಲಿ ಹಾಕುವುದು ಬೇಡವೆಂದು ಎಎಂಬಿ ವ್ಯವಸ್ಥಾಪನ ಮಂಡಳಿ ನಿರ್ಣಯಿಸಿರುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

U19 World Cup 2026: ಅಚ್ಚರಿಯ ಫಲಿತಾಂಶ; ಅಫ್ಘಾನಿಸ್ತಾನ ವಿರುದ್ಧ ಸೋತ ದಕ್ಷಿಣ ಆಫ್ರಿಕಾ – Kannada News | U19 World Cup: Afghanistan Stuns South Africa by 28 Runs in Group D Upset

ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ 2026 ರ ಅಂಡರ್-19 ವಿಶ್ವಕಪ್ (U19 World Cup) ಪ್ರಾರಂಭವಾಗಿದೆ. ಅದರಂತೆ ಪಂದ್ಯಾವಳಿಯ 6ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ದಕ್ಷಿಣ ಆಫ್ರಿಕಾ ಹೀನಾಯ ಸೋಲನ್ನು ಅನುಭವಿಸಿದೆ. ಗ್ರೂಪ್ ಡಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 28 ರನ್‌ಗಳಿಂದ ಸೋಲಿಸುವ ಮೂಲಕ ಅಫ್ಘಾನಿಸ್ತಾನ (Afghanistan vs South Africa) ಎಲ್ಲರನ್ನೂ ಅಚ್ಚರಿಗೊಳಿಸಿ ಗೆಲುವಿನ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 266 ರನ್‌ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು 238 ರನ್​ಗಳಿಗೆ ಆಲೌಟ್ ಆಗುವ ಮೂಲಕ 28 ರನ್​ಗಳಿಂದ ಸೋಲೊಪ್ಪಿಕೊಂಡಿತು.

266 ರನ್​ ಕಲೆಹಾಕಿದ ಅಫ್ಘಾನಿಸ್ತಾನ

ವಿಶ್ವಕಪ್‌ನ ಈ ಆರನೇ ಪಂದ್ಯವು ನಮೀಬಿಯಾದ ವಿಂಡ್‌ಹೋಕ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 8 ವಿಕೆಟ್‌ಗೆ 266 ರನ್ ಗಳಿಸಿತು. ಮೊದಲ ವಿಕೆಟ್ ಬೇಗನೆ ಕಳೆದುಕೊಂಡ ನಂತರ, ಖಾಲಿದ್ ಅಹ್ಮದ್‌ಜೈ ಮತ್ತು ಫೈಸಲ್ ಶಿನೋಜಾಡಾ 152 ರನ್‌ಗಳ ಅದ್ಭುತ ಪಾಲುದಾರಿಕೆಯನ್ನು ನೀಡಿದರು. ಇಬ್ಬರೂ ಅರ್ಧಶತಕ ಬಾರಿಸಿದರಾದರೂ ಶತಕದ ಗಡಿ ತಲುಪುವ ಮೊದಲೇ ಔಟಾದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಕೇವಲ ನಾಲ್ಕು ಎಸೆತಗಳ ಅಂತರದಲ್ಲಿ ಔಟಾದರು. ನಂತರ ಉಜೈರುಲ್ಲಾ ನಿಯಾಜೈ 51 ಎಸೆತಗಳಲ್ಲಿ 51 ರನ್ ಗಳಿಸಿ ತಂಡವನ್ನು 266 ರನ್​ಗಳ ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು.

4 ಆಟಗಾರರು ರನೌಟ್​ಗೆ ಬಲಿ

ಮತ್ತೊಂದೆಡೆ ಕಳಪೆ ಆರಂಭ ಪಡೆದ ದಕ್ಷಿಣ ಆಫ್ರಿಕಾ ಕೇವಲ 49 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ತಂಡದ ಹತ್ತು ವಿಕೆಟ್‌ಗಳಲ್ಲಿ ನಾಲ್ಕು ವಿಕೆಟ್‌ಗಳು ರನ್ ಔಟ್‌ಗಳ ಮೂಲಕ ಬಿದ್ದಿದ್ದು ತಂಡಕ್ಕೆ ದೊಡ್ಡ ಹೊಡೆತ ನೀಡಿತು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಜೇಸನ್ ರೋಲ್ಯಾಂಡ್ಸ್ 98 ರನ್ ಬಾರಿಸಿ ರನೌಟ್​ಗೆ ಬಲಿಯಾದರು. ಉಳಿದಂತೆ ಯಾವ ಬ್ಯಾಟ್ಸ್​ಮನ್​ಗೂ 30 ರನ್​ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಮೂವರು ಬ್ಯಾಟ್ಸ್​ಮನ್​ಗಳು 20 ರನ್​ಗಳ ಗಡಿ ದಾಟಿದರಾದರೂ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲಿಲ್ಲ. ಇದು ಮಾತ್ರವಲ್ಲದೆ ದಕ್ಷಿಣ ಆಫ್ರಿಕಾ ನಿಯಮಿತ ಅಂತರದಲ್ಲಿ ವಿಕೆಟ್​ ಕಳೆದುಕೊಂಡಿದ್ದರಿಂದ ಗೆಲುವು ಕಷ್ಟಕರವಾಯಿತು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡವು 47.4 ಓವರ್‌ಗಳಲ್ಲಿ 238 ರನ್‌ಗಳಿಗೆ ಆಲೌಟ್ ಆಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:59 pm, Sat, 17 January 26

Source link

ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಏರಿಕೆ? ವದಂತಿ ಬಗ್ಗೆ ಬೆಸ್ಕಾಂ ಎಂಡಿ ಸ್ಪಷ್ಟನೆ – Kannada News | No New Power Tariff Hike Proposal to KERC: BESCOM MD Clarifie

ಬೆಂಗಳೂರು, ಜನವರಿ 17: ವಿದ್ಯುತ್ ದರ ಏರಿಕೆ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (KERC) ನಾವು ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ಬೆಸ್ಕಾಂ ಎಂಡಿ ಶಿವಶಂಕರ್ ಸ್ಪಷ್ಟನೆ ನೀಡಿದ್ದಾರೆ. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಮತ್ತೆ ವಿದ್ಯುತ್ ದರ ಏರಿಕೆ ವದಂತಿ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ ಅವರು, 2025-26, 2026-27, 2027-28ರ ದರ ನಿಗದಿ ಆಗಿ ಹೋಗಿದೆ. 2024-25ರಲ್ಲಿ ಬೆಸ್ಕಾಂಗೆ 2,800 ಕೋಟಿ ರೂ ಆದಾಯ ಕೊರತೆ ಉಂಟಾಗಿತ್ತು. ಆ ವರ್ಷದಲ್ಲಿ ಆದಾಯ ಕೊರತೆಯ ಬಗ್ಗೆ KERC ಗಮನಕ್ಕೆ ತಂದಿದ್ದೇವೆ. ನಷ್ಟ ಸರಿದೂಗಿಸಲು ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದ್ದೇವೆ. ಸದ್ಯ 2024-25ನೇ ಆರ್ಥಿಕ ವರ್ಷದ ವರದಿಯನ್ನು KERCಗೆ ಸಲ್ಲಿಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link