ಬೆಂಗಳೂರು, ಮೇ 22: ಗುರುವಾರ ಸಂಜೆ ಸುರಿದ ಭಾರೀ ಮಳೆಗೆ (Weather) ರಾಜ್ಯದ ಅನೇಕ ಕಡೆಗಳಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಬೆಂಗಳೂರು ಸೇರಿದಂತೆ ದಾವಣಗೆರೆ , ಕೋಲಾರ, ಚಿತ್ರದುರ್ಗ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಜೋರು ಮಳೆಗೆ ಕೆಲವೆಡೆ ಮನೆಗಳಿಗೆ ನೀರು ನಿಗ್ಗಿದರೆ, ಇನ್ನೂ ಕೆಲ ಕಡೆ ಮರಗಳು ಧರೆಗುರುಳಿವೆ. ವರುಣಾರ್ಭಟಕ್ಕೆ ರಾಜ್ಯದ ಜನತೆ ತತ್ತರಿಸಿಹೋಗಿದ್ದಾರೆ. ಇನ್ನೂ ಮೂರು ದಿನ ರಾಜ್ಯದಲ್ಲಿ ಹೀಗೆ ಮಳೆಯ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಖ್ಯಾಂಶಗಳು
- ಬೆಂಗಳೂರಿನಲ್ಲಿ ಮರ ಬಿದ್ದು ನಾಲ್ಕು ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿವೆ.
- ಕೋಲಾರದಲ್ಲಿ ಬಿರುಗಾಳಿಗೆ ಪಾಲಿಹೌಸ್ ನಾಶವಾಗಿ 90 ಲಕ್ಷದ ಬೆಳೆ ನಷ್ಟವಾಗಿದೆ.
- ದಾವಣಗೆರೆಯಲ್ಲಿ ಚರಂಡಿ ವ್ಯವಸ್ಥೆಯಿಲ್ಲದೆ ಶಂಕರ ಲೇಔಟ್ನ ಮನೆಗಳಿಗೆ ನೀರು ನುಗ್ಗಿದೆ.
ಬೆಂಗಳೂರಲ್ಲಿ ಧರೆಗುರುಳಿದ ಮರಗಳು
ಬೆಂಗಳೂರಿನ ವೈಯ್ಯಾಲಿಕಾವಲ್ ಹಾಗೂ ಮಹಾಲಕ್ಷ್ಮಿ ಲೇಔಟ್ನಲ್ಲಿ ತಡರಾತ್ರಿ ಸುರಿದ ಭಾರಿ ಗಾಳಿ-ಮಳೆಗೆ ಬೃಹತ್ ಮರಗಳು ಬುಡಮೇಲಾಗಿವೆ. ವೈಯ್ಯಾಲಿಕಾವಲ್ ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ದ್ವಿಚಕ್ರ ವಾಹನವೊಂದು ಜಖಂಗೊಂಡಿದೆ. ಇತ್ತ ಮಹಾಲಕ್ಷ್ಮಿ ಲೇಔಟ್ನ ಪೈಪ್ ಲೈನ್ ರಸ್ತೆಯಲ್ಲಿ ಬೃಹತ್ ಮರವೊಂದು ರಸ್ತೆಗೆ ಉರುಳಿದ್ದು, ಅದರ ಅಡಿಯಲ್ಲಿ ಸಿಲುಕಿ ಮೂರು ಕಾರುಗಳು ಸಂಪೂರ್ಣ ಜಖಂಗೊಂಡಿವೆ.
ದಾವಣಗೆರೆಯಲ್ಲಿ ಮನೆಗಳಿಗೆ ನುಗ್ಗಿದ ನೀರು
ಬೆಣ್ಣೆನಗರಿ ದಾವಣಗೆರೆಯ ಹಳೇ ಪಿಬಿ ರಸ್ತೆಯ ಬಿಎಸ್ಎನ್ಎಲ್ ಕಚೇರಿ ಹಿಂಭಾಗದಲ್ಲಿರುವ ಶಂಕರ ಲೇಔಟ್ನ ರಸ್ತೆಗಳು ಜಲಾವೃತಗೊಂಡು ಹಳ್ಳದಂತಾಗಿವೆ. ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ನೇರವಾಗಿ ಹಲವು ಮನೆಗಳಿಗೆ ನುಗ್ಗಿದ್ದು, ಜನರು ಮನೆಯಿಂದ ಹೊರಬರಲಾರದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಕೋಲಾರದಲ್ಲಿ ಪಾಲಿಹೌಸ್ ನಾಶ: ಲಕ್ಷಾಂತರ ರೂಪಾಯಿ ನಷ್ಟ
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ದೊಡ್ಡ ದಾನವಹಳ್ಳಿಯಲ್ಲಿ ಬಿರುಗಾಳಿ ಮಳೆಯ ಆರ್ಭಟಕ್ಕೆ ಚನ್ನರಾಯಪ್ಪ ಎಂಬುವವರಿಗೆ ಸೇರಿದ 2 ಎಕರೆ ಪ್ರದೇಶದ ಪಾಲಿಹೌಸ್ ಸಂಪೂರ್ಣ ನೆಲಕಚ್ಚಿದೆ. ಸುಮಾರು 90 ಲಕ್ಷ ರೂಪಾಯಿ ವೆಚ್ಚದಲ್ಲಿ ಬೆಳೆದಿದ್ದ ಕಲರ್ ಕ್ಯಾಪ್ಸಿಕಂ ಬೆಳೆ ಸಂಪೂರ್ಣ ನಾಶವಾಗಿದೆ. ಬಿರುಗಾಳಿಯ ರಭಸಕ್ಕೆ ಪಾಲಿಹೌಸ್ನ ಪ್ಲಾಸ್ಟಿಕ್ ಶೀಟ್ ಹಾಗೂ ನೆಟ್ಗಳು ಹರಿದು ಹೋಗಿದ್ದು, ಮಾಸ್ತಿ ಸುತ್ತಮುತ್ತಲಿನ ಹಲವೆಡೆ ವಿದ್ಯುತ್ ಕಂಬ ಹಾಗೂ ಮರಗಳು ನೆಲಕ್ಕುರುಳಿವೆ.
ಚಿತ್ರದುರ್ಗದಲ್ಲಿ ಜಿನುಗು ಮಳೆ
ಚಿತ್ರದುರ್ಗ ನಗರ ಹಾಗೂ ಜಿಲ್ಲೆಯಾದ್ಯಂತ ರಾತ್ರಿಯಿಂದ ನಿರಂತರವಾಗಿ ಸೋನೆ ಮಳೆ (ತುಂತುರು ಮಳೆ) ಸುರಿಯುತ್ತಿದೆ. ಸತತವಾಗಿ ಸುರಿಯುತ್ತಿರುವ ಜಿನುಗು ಮಳೆಯಿಂದಾಗಿ ಕೋಟೆನಾಡಿನಲ್ಲಿ ಮಲೆನಾಡಿನ ಸೊಬಗು ನಿರ್ಮಾಣವಾಗಿದ್ದರೂ, ಸಾರ್ವಜನಿಕ ಜನಜೀವನ ಮಾತ್ರ ಅಸ್ತವ್ಯಸ್ತಗೊಂಡಿದೆ.
ಇದನ್ನೂ ಓದಿ ಬೆಂಗಳೂರಿಗರೇ ಎಚ್ಚರ! ಮುಂದಿನ 3 ದಿನಗಳ ಕಾಲ ನಗರದಲ್ಲಿ ವರುಣಾರ್ಭಟ
ಯಾದಗಿರಿಯಲ್ಲಿ ಗಾಳಿ ಮಳೆ
ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ತುಮಕೂರು ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಭೀಕರ ಅವಾಂತರ ಸೃಷ್ಟಿಯಾಗಿದೆ. ಬಿರುಗಾಳಿಯ ರಭಸಕ್ಕೆ ಗ್ರಾಮವೊಂದರಲ್ಲೇ 30ಕ್ಕೂ ಅಧಿಕ ಮರಗಳು ಧರಾಶಾಹಿಯಾಗಿವೆ. ಗಾಳಿಯ ವೇಗಕ್ಕೆ ಮನೆಯೊಂದರ ಮೇಲ್ಚಾವಣಿಯ ಶೀಟ್ಗಳು ಹಾರಿಹೋಗಿದ್ದು, ಕುಟುಂಬಸ್ಥರು ಬೀದಿಗೆ ಬಿದ್ದಂತಾಗಿದ್ದಾರೆ. ಅಷ್ಟೇ ಅಲ್ಲದೆ, ಮರ ಬಿದ್ದ ಪರಿಣಾಮ ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿಯೊಂದು ಜಖಂಗೊಂಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
