Category Archives: Blog

Your blog category

ರೈತರಿಗೆ ಗುಡ್​ ನ್ಯೂಸ್: ಜೂನ್ ಮೊದಲ ವಾರದಲ್ಲೇ ಮುಂಗಾರು ಮಳೆ – Kannada News | Monsoon Rain Arriving in Karnataka On June First Week Says Meteorological director CS Patil

ಬೆಂಗಳೂರು, (ಮೇ 18): ಕರ್ನಾಟಕದಲ್ಲಿ ಪೂರ್ವ ಮುಂಗಾರು (Monsoon Rain) ಚುರುಕುಗೊಂಡಿದೆ. ಹೌದು..ಕಳೆದ ಕೆಲ ದಿನಗಳಿಂದ ರಾಜ್ಯ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗುತ್ತಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದಲ್ಲಿ ಮಳೆಯಾಗುತ್ತಿದೆ. ಇನ್ನು ಈ ಬಗ್ಗೆ ಹವಾಮಾನ ತಜ್ಞರಾದ CS ಪಾಟೀಲ ಮಾತನಾಡಿದ್ದು, ರಾಜ್ಯದ ಹಲವು ಕಡೆ ಮಾನ್ಸೂನ್ ಮಳೆಯಾಗಲಿದೆ. ಜೂನ್ ಮೊದಲೇ ವಾರದಲ್ಲಿ ನೈನೃತ್ಯ ಮಾನ್ಸೂನ್ ಆರಂಭವಾಗಲಿದ್ದು,  60-100 ಸೆಂಟಿಮೀಟರ್ ನಷ್ಟು ಮಳೆಯ ಸಾಧ್ಯತೆ ಇದೆ. ವಿನ್ಸ್ ಕನ್ವರ್ಷನ್ ಪ್ರಮಾಣ ಹೆಚ್ಚಿರುವ ಕಾರಣ ಬಂಗಾಳ ಕೊಲ್ಲಿಯಲ್ಲಿ ಗಾಳಿ ಪ್ರಮಾಣ ಜಾಸ್ತಿ ಇರುತ್ತೆ. ಇದರಿಂದ ರಾಜ್ಯದಲ್ಲಿ ಮೇ 18ರ ಬಳಿಕ ಮಳೆ ಆಗುವ ಸಾಧ್ಯತೆ ಹೆಚ್ಚಿದ್ದು, ಜುಲೈ ತಿಂಗಳಲ್ಲಿ ಎಲ್ ನೀನು ಪರಿಣಾಮ ಬೀರಲಿದೆ ಎಂದಿದ್ದಾರೆ. ಇನ್ನು ಹವಾಮಾನ ತಜ್ಞ ಪಾಟೀಲ ಅವರು ಕರ್ನಾಟಕದ ಹವಾಮಾನ ಹಾಗೂ ಮುಂಗಾರು ಬಗ್ಗೆ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ಕೇಳಿ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೈಕು, ಬಸ್ಸು, ಕಾರು, ರೈಲು, ಹೀಗೆ ನೀವು ಯಾವುದರಲ್ಲಿ ಪ್ರಯಾಣಿಸಿದ್ದು ಎಂಬುದು ಗೂಗಲ್​ಗೆ ಗೊತ್ತಾಗೋದು ಹೇಗೆ? – Kannada News | Google maps how it knows your travel mode speed data ai secrets revealed

ತಂತ್ರಜ್ಞಾನ, ದತ್ತಾಂಶ ಮತ್ತು ಬುದ್ಧಿಮತ್ತೆ ಸೇರಿದರೆ ಅದ್ಭುತ ಸೇವೆ ಸೃಷ್ಟಿಯಾಗುತ್ತದೆ. ಅದುವೇ ಗೂಗಲ್ ಮ್ಯಾಪ್ಸ್. ಬಹುತೇಕ ಮೊಬೈಲ್ ಬಳಕೆದಾರರು ಮ್ಯಾಪ್ಸ್ ಬಳಸುತ್ತಾರೆ. ಅಷ್ಟರಮಟ್ಟಿಗೆ ಗೂಗಲ್​ನ ಈ ನಕ್ಷೆಯ ಆ್ಯಪ್ (Google Maps) ಉಪಯುಕ್ತ ಎನಿಸಿದೆ. ಗೂಗಲ್ ಈ ಭೂಮಿಯ ಮೂಲೆ ಮೂಲೆಯನ್ನೂ ಹೊಕ್ಕಿ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಸೆಟಿಲೈಟ್, ವಿಮಾನ, ಸ್ಟ್ರೀಟ್​ವ್ಯೂ ವಾಹನಗಳು ಸೆರೆಹಿಡಿಯುವ ಚಿತ್ರಗಳನ್ನು ಬಳಸುತ್ತದೆ. ಅದರ ಜೊತೆಗೆ ಏಜೆನ್ಸಿ ಫೀಡ್​ಗಳು, ಸರ್ಕಾರಗಳು ಒದಗಿಸುವ ದತ್ತಾಂಶ, ಮೊಬೈಲ್ ಬಳಕೆದಾರರ ಲೊಕೇಶನ್ ಮಾಹಿತಿ ಇತ್ಯಾದಿ ಅಗಾಧ ದತ್ತಾಂಶವನ್ನು ಬಹಳ ಜಾಣತನದಿಂದ ಬಳಸಿ ಅದ್ಬುತವಾದ ಸೇವೆ ಒದಗಿಸುತ್ತದೆ ಗೂಗಲ್ ಮ್ಯಾಪ್ಸ್.

ಯಾವ ವಾಹನದಲ್ಲಿ ಹೋಗಿದ್ದು ಎಂದು ಮ್ಯಾಪ್ಸ್​ಗೆ ಹೇಗೆ ಗೊತ್ತಾಗುತ್ತದೆ?

ನೀವು ಗೂಗಲ್ ಮ್ಯಾಪ್ಸ್​ನನಲ್ಲಿನ ನಿಮ್ಮ ಪ್ರೊಫೈಲ್​ನಲ್ಲಿರುವ ಟೈಮ್​ಲೈನ್​ಗೆ ಹೋದಾಗ ನಿಮ್ಮ ಟ್ರಾವಲ್ ಹಿಸ್ಟರಿಯೇ ಅಲ್ಲಿರುತ್ತದೆ. ನೀವು ಲೊಕೇಶನ್ ಆನ್ ಮಾಡಿಕೊಂಡಿದ್ದರೆ ಇದು ದಾಖಲಾಗಿರುತ್ತದೆ. ನೀವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಎಷ್ಟು ಹೊತ್ತಿಗೆ ಹೋದಿರಿ, ಯಾವ ವಾಹನದಲ್ಲಿ ಹೋದಿರಿ ಎಂದೆಲ್ಲಾ ವಿವರವನ್ನು ದಾಖಲು ಮಾಡಿಕೊಳ್ಳುತ್ತದೆ.

ಇದನ್ನೂ ಓದಿ: ಅತ್ಯಂತ ಮೌಲ್ಯಯುತ ಭಾರತೀಯ ಕಂಪನಿಗಳು; ರಿಲಾಯನ್ಸ್ ನಂತರ ಏರ್ಟೆಲ್; ಎಚ್​ಡಿಎಫ್​ಸಿಯನ್ನು ಹಿಂದಿಕ್ಕಿದ ಭಾರತೀಯ ಟೆಲಿಕಾಂ ಕಂಪನಿ

ಸೈಕಲ್, ದ್ವಿಚಕ್ರ ವಾಹನ, ಕಾರು, ಬಸ್ಸು, ರೈಲುಗಳಲ್ಲಿ ಪ್ರಯಾಣ ಮಾಡಿದರೆ ಅದನ್ನು ಬಹುತೇಕ ನಿಖರವಾಗಿ ತಿಳಿಸುತ್ತದೆ. ಅದು ಹೇಗೆ ಸಾಧ್ಯ? ಇದೆಲ್ಲವೂ ಕೂಡ ಬಹುತೇಕ ನಿಮ್ಮ ಫೋನ್​ನ ಜಿಪಿಎಸ್ ಬಳಸಿ ಮಾಡಲಾಗುವ ಅಂದಾಜು. ಆದರೂ ಕೂಡ ಯಾವ ವಾಹನದಲ್ಲಿ ಪ್ರಯಾಣಿಸಿದ್ದು ಎಂದು ಹೇಗೆ ಪತ್ತೆ ಮಾಡುತ್ತೆ? ಇದು ಬಹಳ ಕುತೂಹಲದ ಸಂಗತಿ.

ಪ್ರಯಾಣದ ವೇಗ, ಅಲುಗಾಟ, ಮಾರ್ಗ ಇತ್ಯಾದಿ ಗಮನಿಸುವ ಗೂಗಲ್ ಮ್ಯಾಪ್ಸ್

ಪ್ರಯಾಣದ ವೇಗದ ಮೇಲೆ ನೀವು ಯಾವುದರಲ್ಲಿ ಪ್ರಯಾಣಿಸಿದ್ದಿರಿ ಎಂದು ಗೂಗಲ್ ಅಂದಾಜು ಮಾಡುತ್ತದೆ. 6-8 ಕಿಮೀ ವೇಗದಲ್ಲಿ ಆಗಿದ್ದರೆ ಸೈಕಲ್ ಎಂದು, 15-25 ಕಿಮೀ ವೇಗವಿದ್ದರೆ ಅದು ದ್ವಿಚಕ್ರ ವಾಹನ ಎಂದು ಬಗೆಯುತ್ತದೆ. ಇನ್ನೂ ಹೆಚ್ಚಿನ ವೇಗವಾದರೆ ಕಾರು, ಬಸ್ಸು ಇತ್ಯಾದಿ ಎಂದು ಭಾವಿಸುತ್ತದೆ.

ಗೂಗಲ್ ಕೇವಲ ವೇಗವೊಂದನ್ನೇ ನೆಚ್ಚಿಕೊಳ್ಳುವುದಿಲ್ಲ. ನಡೆಯುವಾಗ ಆಗುವ ಅಲುಗಾಟ, ಬೈಕ್ ಓಡಿಸುವಾಗಿನ ಅಲುಗಾಟ, ಕಾರ್ ಎಂಜಿನ್​ನ ವೈಬ್ರೇಶನ್​ನಲ್ಲಿ ಕುಳಿತಾಗಿನ ಅಲುಗಾಟ ಇವೆಲ್ಲವೂ ಪರಿಸ್ಪರ ಭಿನ್ನವಾಗಿರುತ್ತದೆ.

ಇದನ್ನೂ ಓದಿ: ಪೇಟಿಎಂನಲ್ಲಿ ಹೊಸ ಫೀಚರ್; ಪೋಷಕರಿಂದ ಮಕ್ಕಳು ಪಡೆಯಬಹುದು ಆನ್​ಲೈನ್ ಪಾಕೆಟ್ ಮನಿ

ಇಷ್ಟು ಮಾತ್ರವಲ್ಲ, ನೀವು ಯಾವ ಮಾರ್ಗದಲ್ಲಿ ಹೋಗುತ್ತಿದ್ದೀರಿ ಎಂಬುದರ ಮೇಲೆ ನೀವಿರುವ ವಾಹನವನ್ನು ಅಂದಾಜಿಸಬಲ್ಲುದು. ರೈಲ್ವೆ ಟ್ರ್ಯಾಕ್​ನಾದ್ಯಂತ ನಿಮ್ಮ ಪ್ರಯಾಣ ಇದ್ದರೆ ನೀವು ರೈಲಿನಲ್ಲಿ ಹೋಗುತ್ತಿದ್ದಿರಬಹುದು. ಬಸ್ ಮಾರ್ಗದಲ್ಲಿ ಹೋಗುವುದು, ಬಸ್ ನಿಲ್ದಾಣಗಳಲ್ಲಿ ನಿಲ್ಲುವುದು ಇತ್ಯಾದಿ ಇದ್ದಾಗ ನೀವು ಬಸ್​ನಲ್ಲಿ ಪ್ರಯಾಣಿಸಿದ್ದಿರಬಹುದು ಎಂದು ಗೆಸ್ ಮಾಡುತ್ತೆ ಗೂಗಲ್.

ಹೀಗಾಗಿ, ಗೂಗಲ್ ಮ್ಯಾಪ್ಸ್​ನಲ್ಲಿ ನಿಮ್ಮ ಟೈಮ್​ಲೈನ್​ಗೆ ಹೋದಾಗ ಟ್ರಾವಲ್ ಹಿಸ್ಟರಿಯ ವಿವರ ಕಂಡು ನಿಮಗೆ ಅಚ್ಚರಿ ಆಗದೇ ಇರದು. ಬೆಂಗಳೂರಿನಲ್ಲಿ ಗೂಗಲ್ ಮ್ಯಾಪ್ಸ್ ಹೆಚ್ಚು ಕನ್​ಫ್ಯೂಸ್ ಮಾಡಿಕೊಳ್ಳುವುದು ಬೈಕ್ ಮತ್ತು ಸೈಕಲ್ ವಿಚಾರಕ್ಕೆ. ನಗರದ ಟ್ರಾಫಿಕ್​ನಲ್ಲಿ ಬೈಕ್​ನಲ್ಲಿ ಪ್ರಯಾಣಿಸುವ ವೇಗ ಬಹುತೇಕ ಸೈಕಲ್​ನಷ್ಟೇ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗರ್ಭದಲ್ಲಿರುವಾಗಲೇ ಅಮ್ಮನ ಆಕಳಿಕೆಯನ್ನು ಕಾಪಿ ಮಾಡುತ್ತಂತೆ ಮಗು! – Kannada News | Unborn babies might copy their mothers yawns new pregnancy study reveals

ನವದೆಹಲಿ, ಮೇ 18: ಈ ಬ್ರಹ್ಮಾಂಡದಲ್ಲಿ ಆಕಳಿಸದವರು ಯಾರಾದರೂ ಇದ್ದಾರಾ? ನಾವು ಯಾರದ್ದಾದರೂ ಎದುರು ಕುಳಿತಾಗ ಅವರು ಆಕಳಿಸಿದರೆ ಅಥವಾ ನಾವು ಆಕಳಿಸುವವರನ್ನು ನೋಡಿದರೆ ನಮಗೂ ಆಕಳಿಕೆ ಬರುತ್ತದೆ. ಹೀಗಾಗಿ, ಆಕಳಿಕೆಯನ್ನು ಕಂಟ್ರೋಲ್ ಮಾಡುವುದು ಬಹಳ ಕಷ್ಟ. ನಮ್ಮೆದುರು ಇರುವ ವ್ಯಕ್ತಿ ಆಕಳಿಸಿದಾಗ ಎಷ್ಟು ಬೇಗನೆ ನಮಗೂ ಆಕಳಿಕೆ ಬರುತ್ತದೆಯೋ, ಅಷ್ಟೇ ವೇಗವಾಗಿ ಪ್ರಪಂಚದ ಯಾವುದೋ ಮೂಲೆಯಲ್ಲಿರುವ ವ್ಯಕ್ತಿಯೊಂದಿಗೆ ಜೂಮ್ ವಿಡಿಯೋ ಕರೆಯಲ್ಲಿ ಮಾತನಾಡುವಾಗಲೂ ಆಕಳಿಕೆ ಹರಡುತ್ತದೆ ಎಂಬುದು ಅಚ್ಚರಿಯ ಸಂಗತಿ. ಇಷ್ಟೇ ಅಲ್ಲ, ಸಂಶೋಧನೆಯ ಪ್ರಕಾರ, ಆಕಳಿಕೆ ಎಷ್ಟು ವೇಗವಾಗಿ ಹರಡುತ್ತದೆ ಎಂದರೆ, ಗರ್ಭಿಣಿ ಮಹಿಳೆಯೊಬ್ಬರು ಆಕಳಿಸಿದಾಗ ಅವರ ಹೊಟ್ಟೆಯೊಳಗಿರುವ ಭ್ರೂಣವೂ (ಶಿಶು) ಕೂಡ ಆಕಳಿಸುತ್ತದೆ!

  • ಗರ್ಭದಲ್ಲಿರುವಾಗಲೇ ಮಗುವಿಗೆ ಅಮ್ಮನ ಆಕಳಿಕೆಯ ಅನುಭವವಾಗುತ್ತದೆ
  • ಗರ್ಭಿಣಿ ಪ್ರತಿಬಾರಿ ಆಕಳಿಸಿದಾಗಲೂ ಮಗುವೂ ಹೊಟ್ಟೆಯೊಳಗೆ ಆಕಳಿಸುತ್ತದೆ
  • ಹೊಕ್ಕಳುಬಳ್ಳಿ ಮೂಲಕ ಮಗುವಿಗೆ ಹಾರ್ಮೋನು ಹರಡುತ್ತದೆ

ಗರ್ಭದಲ್ಲಿರುವ ಶಿಶುಗಳಿಗೆ ಹೊರಗಿನ ಪ್ರಪಂಚವನ್ನು ನೋಡಲು ಸಾಧ್ಯವಿಲ್ಲದ ಕಾರಣ, ಈ ಆಕಳಿಕೆ ಹರಡಲು ಕೆಲವು ಪ್ರಮುಖ ಕಾರಣಗಳಿರಬಹುದು. ತಾಯಿ ಆಕಳಿಸಿದಾಗ ಅವರ ಹೃದಯ ಬಡಿತ ಮತ್ತು ರಕ್ತದೊತ್ತಡದಲ್ಲಿ ಬದಲಾವಣೆಯಾಗುತ್ತದೆ. ಪ್ಲಾಸೆಂಟಾ (ಹೊಕ್ಕುಳಬಳ್ಳಿ) ಮೂಲಕ ಹರಡುವ ಹಾರ್ಮೋನುಗಳು ಮಗುವಿಗೂ ಆಕಳಿಸುವಂತೆ ಪ್ರೇರೇಪಿಸಬಹುದು. ಆಕಳಿಸುವಾಗ ತಾಯಿಯ ಹೊಟ್ಟೆಯ ಭಾಗದಲ್ಲಿ ಉಂಟಾಗುವ ಚಲನೆ ಮತ್ತು ಕಂಪನಗಳನ್ನು ಗರ್ಭದಲ್ಲಿರುವ ಶಿಶುಗಳು (ವಿಶೇಷವಾಗಿ ಅವಳಿ ಮಕ್ಕಳಿದ್ದಾಗ) ಗ್ರಹಿಸಿ, ತಾವೂ ಆಕಳಿಸಬಹುದು.

ಇದನ್ನೂ ಓದಿ: ಗರ್ಭದಲ್ಲೇ ಸಂಸ್ಕಾರ ನೀಡುವ ಶಕ್ತಿ ತಾಯಿಯದ್ದು; ಹಿಂದೂ ಧರ್ಮದ ದೃಷ್ಟಿಯಲ್ಲಿ ಮಾತೃತ್ವದ ಮಹತ್ವ

‘ಕರೆಂಟ್ ಬಯಾಲಜಿ’ (Current Biology) ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಗರ್ಭದಲ್ಲಿರುವಾಗಲೇ ಶಿಶುಗಳು ತಮ್ಮ ತಾಯಂದಿರಿಂದ ಆಕಳಿಕೆಯನ್ನು ಗ್ರಹಿಸುತ್ತವೆ ಎಂಬುದಕ್ಕೆ ವಿಜ್ಞಾನಿಗಳು ಸಾಕ್ಷ್ಯವನ್ನು ಕಂಡುಕೊಂಡಿದ್ದಾರೆ. ಇಟಲಿಯ ಪಾರ್ಮಾ ವಿಶ್ವವಿದ್ಯಾಲಯದ ಸಂಶೋಧಕರು 8 ತಿಂಗಳು ತುಂಬಿದ ಗರ್ಭಿಣಿ ಮಹಿಳೆಯರಿಗೆ ಆಕಳಿಸುವ ವಿಡಿಯೋಗಳನ್ನು ತೋರಿಸುವ ಮೂಲಕ ಈ ಕಲ್ಪನೆಯನ್ನು ಪರೀಕ್ಷಿಸಿದರು. ಮಹಿಳೆಯರ ಪ್ರತಿಕ್ರಿಯೆಗಳನ್ನು ಕ್ಯಾಮೆರಾಗಳು ರೆಕಾರ್ಡ್ ಮಾಡಿದರೆ, ಭ್ರೂಣದ ಚಲನೆಯನ್ನು ಅಲ್ಟ್ರಾಸೌಂಡ್ ಮೂಲಕ ಗಮನಿಸಲಾಯಿತು.

ಇದನ್ನೂ ಓದಿ: ಗರ್ಭಿಣಿಯರೇ ಗಮನಿಸಿ: ಹೀಟ್​​ ಸ್ಟ್ರೋಕ್​ ಅಪಾಯ ಮಗುವಿನ ಮೇಲೂ ಪರಿಣಾಮ ಬೀರಬಹುದು ಎಚ್ಚರ!

ಆಕಳಿಸುವ ವಿಡಿಯೋಗಳನ್ನು ನೋಡಿದ ನಂತರ ಸುಮಾರು ಶೇ. 64ರಷ್ಟು ಮಹಿಳೆಯರು ಕನಿಷ್ಠ ಒಂದು ಬಾರಿಯಾದರೂ ಆಕಳಿಸಿದರು. ಆ ಪ್ರಕರಣಗಳ ಪೈಕಿ, ಅರ್ಧಕ್ಕಿಂತ ಕೊಂಚ ಹೆಚ್ಚು ಭ್ರೂಣಗಳು ಸುಮಾರು 90 ಸೆಕೆಂಡುಗಳ ಒಳಗೆ ಆಕಳಿಸಿದವು. ಗರ್ಭದೊಳಗೆ ಬೆಳವಣಿಗೆಯ ಹಂತದಲ್ಲಿ ಭ್ರೂಣಗಳು ಸ್ವಾಭಾವಿಕವಾಗಿ ಆಕಳಿಸುತ್ತವೆ ಎಂಬುದು ವಿಜ್ಞಾನಿಗಳಿಗೆ ಮೊದಲೇ ತಿಳಿದಿತ್ತು. ಆಕಳಿಕೆ ಭ್ರೂಣದ ಉಸಿರಾಟ ಮತ್ತು ಮುಖದ ಚಲನೆಗೆ ಸಂಬಂಧಿಸಿದ ಸ್ನಾಯುಗಳು ಹಾಗೂ ನರಗಳ ಸಂಪರ್ಕವನ್ನು ಸಿದ್ಧಪಡಿಸಲು ಸಹಾಯ ಮಾಡುತ್ತವೆ. ಆದರೆ, ತಾಯಿ ಆಕಳಿಸಿದಾಗ ಮಗು ಕೂಡ ಅದನ್ನು ಗ್ರಹಿಸಿ ಆಕಳಿಸುತ್ತದೆ ಎಂಬುದು ಹೊಸ ಅಧ್ಯಯನ. ಹೀಗಾಗಿ, ನೀವು ಗರ್ಭಿಣಿಯಾಗಿದ್ದರೆ, ನೀವು ಆಕಳಿಸಿದಾಗಲೆಲ್ಲ ನಿಮ್ಮ ಹೊಟ್ಟೆಯಲ್ಲಿರುವ ಮಗು ಕೂಡ ನಿಮ್ಮೊಂದಿಗೆ ಆಕಳಿಸುತ್ತಿರುತ್ತದೆ ಎಂಬುದನ್ನು ನೆನಪಿಡಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊದಲ ಬಾರಿಗೆ ಸಿನಿಮಾ ಹಾಡಿಗೆ ಧ್ವನಿ ನೀಡಿದ ಶಿಲ್ಪಾ ಗಣೇಶ್; ಜುಲೈ 24ಕ್ಕೆ ‘ಪಿಚ್ಚರ್’ ಬಿಡುಗಡೆ – Kannada News | Shilpa Ganesh turns singer for Tulu Kannada movie Picture release date

ಸಾಮಾನ್ಯವಾಗಿ ಪ್ರಚಾರದಿಂದ ದೂರವಿರುವ ಶಿಲ್ಪಾ ಗಣೇಶ್ (Shilpa Ganesh) ಅವರು ಈಗ ಸುದ್ದಿಯಲ್ಲಿದ್ದಾರೆ. ತುಳು ಮನೆಮಾತು ಆಗಿರುವ ಶಿಲ್ಪಾ ಅವರಿಗೆ, ತಮ್ಮ ಮಾತೃಭಾಷೆಯಲ್ಲಿ ಸಿನಿಮಾ ನಿರ್ಮಿಸಬೇಕು ಎನ್ನುವ ಹಂಬಲ ಈಗ ಈಡೇರುತ್ತಿದೆ. ಕನ್ನಡದಲ್ಲಿ ನಿರ್ಮಾಪಕಿಯಾಗಿ ತನ್ನದೇ ಆದ ಛಾಪನ್ನು ಮೂಡಿಸಿರುವ ಶಿಲ್ಪಾ ಅದ್ದೂರಿಯಾಗಿ ನಿರ್ಮಿಸಿರುವ ತುಳು ಸಿನಿಮಾ ‘ಪಿಚ್ಚರ್’ (Picture Movie) ಜುಲೈ 24ರಂದು ತೆರೆಗೆ ಬರಲಿದೆ. ತುಳು (Tulu) ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಈ ಸಿನಿಮಾ ಸಿದ್ಧವಾಗಿದೆ. ತುಳು ಚಿತ್ರರಂಗಕ್ಕೆ ನಿರ್ಮಾಪಕಿಯಾಗಿ ಮಾತ್ರವಲ್ಲದೆ, ಈ ಸಿನಿಮಾದ ಮೂಲಕ ಶಿಲ್ಪಾ ಗಣೇಶ್ ಅವರು ಗಾಯಕಿಯಾಗಿ ಪರಿಚಯವಾಗುತ್ತಿದ್ದಾರೆ ಎಂಬುದು ವಿಶೇಷ.

ಈಗಾಗಲೇ ‘ಆನಂದ್ ಆಡಿಯೋ’ ಮೂಲಕ ಬಿಡುಗಡೆ ಆಗಿರುವ ‘ಗೋಕುಲದ ರಾಧೆ’ ಹಾಡಿಗೆ ಶಿಲ್ಪಾ ಗಣೇಶ್ ಅವರು ಧ್ವನಿ ನೀಡಿದ್ದಾರೆ. ಸ್ಯಾಮುವೆಲ್ ಅಬಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಜಸ್ಕರಣ್ ಸಿಂಗ್ ಜೊತೆ ಶಿಲ್ಪಾ ಗಣೇಶ್ ಅವರು ಹಾಡಿದ್ದಾರೆ. ಮೊದಲಿಂದಲೂ ಹಾಡುವ ಹವ್ಯಾಸ ಇರುವ ಶಿಲ್ಪಾ ಅವರು ಸಿನಿಮಾಗಾಗಿ ಹಾಡಿರುವುದು ಇದೇ ಮೊದಲು. ಶಿಲ್ಪಾ ಅವರ ಕಂಠಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶಿಲ್ಪಾ ಗಣೇಶ್ ಅವರು ಕೇವಲ ನಿರ್ಮಾಣದ ಹಿಂದೆ ಇರುವ ವ್ಯಕ್ತಿಯಲ್ಲ. ಕಲೆಯ ವಿವಿಧ ಆಯಾಮಗಳತ್ತ ಆಸಕ್ತಿ ಹೊಂದಿರುವ ಸೃಜನಶೀಲ ವ್ಯಕ್ತಿ ಎಂದು ಚಿತ್ರತಂಡ ಹೇಳಿದೆ.

ತುಳು ಸಿನಿಮಾಗಳಿಗೆ ಸೀಮಿತ ಬಂಡವಾಳದ ಕಾರಣ ಈ ತನಕ ಕಾಶ್ಮೀರದಲ್ಲಿ ಚಿತ್ರೀಕರಣ ನಡೆದಿಲ್ಲ. ಇದೇ ಮೊದಲ ಬಾರಿಗೆ ಅಲ್ಲಿ ಈ ಹಾಡಿನ ಶೂಟಿಂಗ್ ಮಾಡಲಾಗಿದೆ. ನಿತ್ಯಪ್ರಕಾಶ್, ಅಮೃತ ಸುದು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ತುಳು ಚಿತ್ರರಂಗದ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೇ, ಅತಿಥಿ ಪಾತ್ರದಲ್ಲಿ ಗಣೇಶ್ ಅವರು ಕಾಣಿಸಿಕೊಂಡಿದ್ದಾರೆ.

‘ಗೋಕುಲದ ರಾಧೆ’ ಹಾಡು:

ತುಳು ಚಿತ್ರರಂಗಕ್ಕೆ ಉತ್ತಮ ಸಿನಿಮಾಗಳನ್ನು ನೀಡಬೇಕು ಎಂಬ ಆಶಯ ಶಿಲ್ಪಾ ಗಣೇಶ್ ಅವರದ್ದು. ಸಾಕಷ್ಟು ತುಳು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಸಂದೀಪ್ ಬೆದ್ರ ರಚನೆ ಮತ್ತು ನಿರ್ದೇಶನದಲ್ಲಿ ‘ಪಿಚ್ಚರ್’ ಸಿನಿಮಾ ಮೂಡಿಬರುತ್ತಿದೆ. ನಾಯಕನಾಗಿ ನಿತ್ಯಪ್ರಕಾಶ್ ಬಂಟ್ವಾಳ ಅವರು ನಟಿಸಿದ್ದಾರೆ. ಹೆಸರಾಂತ ಛಾಯಾಗ್ರಾಹಕರಾದ ಸಂತೋಷ್ ರೈ ಪಾತಾಜೆ ಮತ್ತು ಚಂದ್ರಶೇಖರ್ ಅವರು ಛಾಯಾಗ್ರಹಣ ಮಾಡಿದ್ದಾರೆ.

ಇದನ್ನೂ ಓದಿ: ಮಂಗಳೂರಿನ ಜೊತೆ ನಟ ಗೋಲ್ಡನ್ ಸ್ಟಾರ್​ ಗಣೇಶ್​ಗೆ ಅವಿನಾಭಾವ ಸಂಬಂಧ

ಗಣೇಶ್ ನಟನೆಯ ‘ಮಳೆಯಲಿ ಜೊತೆಯಲಿ’, ‘ಕೂಲ್’, ‘ಮುಗುಳುನಗೆ’ ಮತ್ತು ‘ಗೀತಾ’ ಚಿತ್ರಗಳನ್ನು ಶಿಲ್ಪಾ ಅವರು ನಿರ್ಮಿಸಿದ್ದಾರೆ. ನಿರ್ಮಾಪಕಿಯಾಗಿ ಅವರು ವ್ಯವಹಾರದ ಜೊತೆಗೆ ಭಾವನಾತ್ಮಕ ಮೌಲ್ಯ ಇರುವ ಕಥೆಗಳತ್ತ ಒಲವು ತೋರಿಸುತ್ತಾರೆ. ಈ ಕಾರಣದಿಂದ ‘ಪಿಚ್ಚರ್’ ಸಿನಿಮಾದ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಮೂಡುವಂತಾಗಿದೆ. ಕನ್ನಡ ಸಿನಿಮಾಗಳ ಜೊತೆಗೆ ವರ್ಷಕ್ಕೆ ಒಂದಾದರೂ ತುಳು ಚಿತ್ರ ನಿರ್ಮಿಸುವ ಯೋಚನೆ ಶಿಲ್ಪಾ ಅವರಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಆರ್​ಸಿಬಿಯ ಕೊನೆಯ ಲೀಗ್ ಪಂದ್ಯ ಯಾವಾಗ? ಎದುರಾಳಿ ಯಾರು? – Kannada News | RCB in IPL 2026 Playoffs! Next Match vs SRH: Date, Time, Venue, Live Stream Details

ಐಪಿಎಲ್ 2026 ರ 61 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ತಂಡವಾಗಿ ಪ್ಲೇಆಫ್​ಗೆ ಅರ್ಹತೆ ಪಡೆದುಕೊಂಡಿದೆ. ಲೀಗ್‌ನಲ್ಲಿ ತನ್ನ 13ನೇ ಪಂದ್ಯವನ್ನಾಡಿದ ಆರ್​ಸಿಬಿ ಮೊದಲು ಬ್ಯಾಟಿಂಗ್‌ ಮಾಡಿ 20 ಓವರ್​ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 222 ರನ್ ಗಳಿಸಿ, ಪಂಜಾಬ್ ಗೆಲುವಿಗೆ 223 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 199 ರನ್ ಗಳಿಸಲಷ್ಟೇ ಶಕ್ತವಾಗಿ 23 ರನ್​ಗಳಿಂದ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್​ಸಿಬಿ, ಅಗ್ರಸ್ಥಾನದಲ್ಲೇ ಮುಂದುವರೆಯಬೇಕಾದರೆ ತನ್ನ ಕೊನೆಯ ಲೀಗ್ ಪಂದ್ಯವನ್ನು ಗೆಲ್ಲಬೇಕು. ಆ ಕೊನೆಯ ಲೀಗ್ ಪಂದ್ಯ ಯಾವಾಗ ನಡೆಯಲಿದೆ? ಎದುರಾಳಿ ಯಾರು ಎಂಬುದರ ವಿವರ ಇಲ್ಲಿದೆ.

ಸನ್​ರೈಸರ್ಸ್​ಗೆ ಸೇಡಿನ ಸಮರ

ಆರ್‌ಸಿಬಿ ತನ್ನ ಕೊನೆಯ ಲೀಗ್ ಪಂದ್ಯವನ್ನು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಈ ಲೀಗ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ ಉಭಯ ತಂಡಗಳು ಲೀಗ್​ನ ಉದ್ಘಾಟನಾ ಪಂದ್ಯದಲ್ಲಿ ಎದುರುಬದುರಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಸನ್‌ರೈಸರ್ಸ್ 201 ರನ್ ಕಲೆಹಾಕಿತ್ತು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ 16ನೇ ಓವರ್​ನಲ್ಲಿಯೇ ಜಯದ ನಗೆ ಬೀರಿತ್ತು. ಹೀಗಾಗಿ ಸನ್‌ರೈಸರ್ಸ್ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದ್ದರೆ, ಇತ್ತ ಆರ್​ಸಿಬಿ ಈ ಪಂದ್ಯವನ್ನು ಗೆದ್ದು ಅಗ್ರಸ್ಥಾನದಲ್ಲಿ ಉಳಿಯಲು ಯತ್ನಿಸಲಿದೆ.

ಸನ್‌ರೈಸರ್ಸ್ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ 2026 ರ 67ನೇ ಪಂದ್ಯ ಯಾವಾಗ ನಡೆಯಲಿದೆ?

ಸನ್‌ರೈಸರ್ಸ್ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ 2026 ರ 67ನೇ ಪಂದ್ಯ ಮೇ 22 ರಂದು ನಡೆಯಲಿದೆ.

ಸನ್‌ರೈಸರ್ಸ್ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ 2026 ರ 67ನೇ ಪಂದ್ಯ ಎಲ್ಲಿ ನಡೆಯಲಿದೆ?

ಸನ್‌ರೈಸರ್ಸ್ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ 2026 ರ 67ನೇ ಪಂದ್ಯ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣ, ಹೈದರಾಬಾದ್​ನಲ್ಲಿ ನಡೆಯಲಿದೆ.

ಸನ್‌ರೈಸರ್ಸ್ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ 2026 ರ 67ನೇ ಪಂದ್ಯ ಎಷ್ಟು ಗಂಟೆಗೆ ಆರಂಭ?

ಸನ್‌ರೈಸರ್ಸ್ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ 2026 ರ 67ನೇ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಟಾಸ್ ಸಂಜೆ 6:30 ಕ್ಕೆ ನಡೆಯಲಿದೆ.

ಸನ್‌ರೈಸರ್ಸ್ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ 2026 ರ 67ನೇ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಸನ್‌ರೈಸರ್ಸ್ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ 2026 ರ 67ನೇ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಪಂದ್ಯವನ್ನು ವೀಕ್ಷಿಸಲು ಇಷ್ಟಪಡುವ ವೀಕ್ಷಕರಿಗೆ, ಜಿಯೋ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:15 pm, Mon, 18 May 26

Source link

ಹುಬ್ಬಳ್ಳಿಗೆ ಬಾಂಗ್ಲಾ ನುಸುಳುಕೋರರ ಲಗ್ಗೆ? ರೈಲ್ವೆ ಪೊಲೀಸರ ವಿರುದ್ಧ ಭುಗಿಲೆದ್ದ ಆಕ್ರೋಶ – Kannada News | Illegal Bangladeshi Immigrants Reaching Hubballi; Protest Led by Pramod Muthalik

ಶ್ರೀ ಸಿದ್ದಾರೂಢ ರೈಲ್ವೆ ನಿಲ್ದಾಣ, ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಪ್ರತಿಭಟನೆImage Credit source: tv9 kannada

ಹುಬ್ಬಳ್ಳಿ, ಮೇ 18: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಹೆಚ್ಚು ಚರ್ಚೆಯಲ್ಲಿದಿದ್ದು ಅಕ್ರಮ ಬಾಂಗ್ಲಾ ವಲಸಿಗರ (Illegal Bangladeshi migrants) ವಿಚಾರ. ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಇದೀಗ ಚುನಾವಣೆ ನಂತರ ಬಾಂಗ್ಲಾ ವಲಿಸಿಗರು ಸುರಕ್ಷಿತ ಸ್ಥಳಗಳಾದ ಹುಬ್ಬಳ್ಳಿ (Hubballi) ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳತ್ತ ಮುಖ ಮಾಡುತ್ತಿದ್ದಾರಂತೆ. ಹೀಗಾಗಿ ಅಕ್ರಮ ಬಾಂಗ್ಲಾ ವಲಸಿಗರು ಇತ್ತ ಬಾರದಂತೆ ನೋಡಬೇಕು ಎನ್ನುವ ಆಗ್ರಹ ಇದೀಗ ಜೋರಾಗುತ್ತಿದೆ.

ಮುಖ್ಯಾಂಶಗಳು

  • ಹುಬ್ಬಳ್ಳಿಯತ್ತ ಅಕ್ರಮ ಬಾಂಗ್ಲಾ ವಲಸಿಗರು ಬರುತ್ತಿರುವ ಆರೋಪ
  • ಶ್ರೀರಾಮಸೇನೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
  • ಸಮಗ್ರ ತನಿಖೆಗೆ ಹಿಂದೂಪರ ಸಂಘಟನೆಗಳು ಆಗ್ರಹ

ಶ್ರೀರಾಮಸೇನೆ ಪ್ರತಿಭಟನೆ

ಅಕ್ರಮ ಬಾಂಗ್ಲಾ ವಲಸಿಗರು ನಗರಕ್ಕೆ ಬಾರದಂತೆ ತಡೆಯಬೇಕು ಎಂದು ಆಗ್ರಹಿಸಿ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ರೈಲ್ವೇ ನಿಲ್ದಾಣದ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಯಿತು. ಇತ್ತೀಚೆಗೆ ಪಶ್ಚಿಮ ಬಂಗಾಳದಿಂದ ಬಂದಿದ್ದ ಕೆಲ ಶಂಕಿತರನ್ನು ರೈಲ್ವೆ ಪೊಲೀಸರು ಕೇವಲ ಆಧಾರ್ ಕಾರ್ಡ್ ಪರಿಶೀಲಿಸಿ ಬಿಟ್ಟು ಕಳುಹಿಸಿದ್ದರು. ಅವರು ಬಾಗಲಕೋಟೆಗೆ ಕೂಲಿ ಕೆಲಸಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದರು. ಆದರೆ, ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿ ವಲಸಿಗರು ಬರುತ್ತಿರುವ ಸಾಧ್ಯತೆ ಇರುವುದರಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಮುತಾಲಿಕ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮೆಗಾ ಡಿಪೋರ್ಟೇಷನ್ ಆಪರೇಷನ್: ಬರೋಬ್ಬರಿ 272 ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು

ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಹೆಚ್ಚು ಚರ್ಚೆಯಲ್ಲಿದ್ದು ಅಕ್ರಮ ಬಾಂಗ್ಲಾ ವಲಸಿಗರ ವಿಚಾರ. ಎಸ್​ಐಆರ್​​ ನಂತರ ಸರಿಸುಮಾರು 91 ಲಕ್ಷ ಮತದಾರರನ್ನು ಕೈಬಿಡಲಾಗಿತ್ತು. ಅದರಲ್ಲಿ ಹೆಚ್ಚಿನವರು ಅಕ್ರಮ ಬಾಂಗ್ಲಾ ನುಸುಳುಕೋರರೇ ಇದ್ದಾರೆ ಅಂತ ಹೇಳಲಾಗಿತ್ತು. ಈ ವಿಚಾರ ಚುನಾವಣೆಯಲ್ಲಿ ಜೋರಾಗಿ ಚರ್ಚೆ ಆಗಿತ್ತು. ಇನ್ನು ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲ್ಲುತ್ತಿದ್ದಂತೆ, ಅಕ್ರಮ ಬಾಂಗ್ಲಾ ವಲಿಸಿಗರು ಇದೀಗ ಸುರಕ್ಷಿತ ಸ್ಥಳಕ್ಕಾಗಿ ದಕ್ಷಿಣ ಭಾರತದ ನಗರಗಳತ್ತ ಮುಖ ಮಾಡುತ್ತಿದ್ದಾರೆ ಎನ್ನುವ ಆರೋಪ ಹೆಚ್ಚಾಗಿ ಕೇಳಿ ಬರುತ್ತಿದೆ.

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿಗೆ 10ಕ್ಕೂ ಹೆಚ್ಚು ಜನ ಬಾಂಗ್ಲಾದೇಶಿಯರು ಬಂದಿರುವ ಅನುಮಾನ ವ್ಯಕ್ತವಾಗಿತ್ತು. ಅವರನ್ನು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ತಪಾಸಣೆ ನಡೆಸಿದಾಗ, ಅವರು ಪಶ್ಚಿಮ ಬಂಗಾಳದಿಂದ ಬಂದಿದ್ದು, ಕೂಲಿ ಕೆಲಸಕ್ಕೆ ಬಾಗಲಕೋಟೆಗೆ ಹೋಗುತ್ತಿರುವುದಾಗಿ ಹೇಳಿದ್ದರಂತೆ. ಅವರು ಆಧಾರ ಕಾರ್ಡ್ ತೋರಿಸಿದ್ದರಿಂದ ಅವರನ್ನು ರೈಲ್ವೆ ಪೊಲೀಸರು ಬಿಟ್ಟು ಕಳುಹಿಸಿದ್ದರು. ಆದರೆ ಇದು ಶ್ರೀರಾಮಸೇನೆ ಸೇರಿದಂತೆ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೇವಲ ಆಧಾರ ಕಾರ್ಡ್ ನೋಡಿ ಬಿಟ್ಟು ಕಳುಹಿಸಿದರೆ ಸಾಲದು, ಏಕೆಂದರೆ ನಕಲಿ ಆಧಾರ ಕಾರ್ಡ್ ಮಾಡಿಸಿಕೊಂಡು ಅನೇಕರು ಬರುತ್ತಿದ್ದಾರೆ. ಹೀಗಾಗಿ ಪಶ್ಚಿಮ ಬಂಗಾಳದಿಂದ ಯಾರೆಲ್ಲಾ ಹುಬ್ಬಳ್ಳಿಗೆ ಬರುತ್ತಾರೆ ಅವರನ್ನು ಸಮಗ್ರ ತನಿಖೆ ಮಾಡಬೇಕು ಅಂತ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಕಾಟಾಚಾರದ ತಪಾಸಣೆ?

ಇನ್ನು ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಪಶ್ಚಿಮ ಬಂಗಾಳದಿಂದ ಹುಬ್ಬಳ್ಳಿಗೆ ಆಗಮಿಸಿದ ಶಾಲಿಮಾರ ಎಕ್ಸಪ್ರೆಸ್ ರೈಲಿನಲ್ಲಿ ಬಂದ ಅನೇಕ ಪ್ರಯಾಣಿಕರನ್ನು ತಪಾಸಣೆ ಮಾಡುವ ಕೆಲಸಕ್ಕೆ ಸ್ಥಳೀಯ ಪೊಲೀಸರು ಮತ್ತು ರೈಲ್ವೆ ಪೊಲೀಸರು ಮುಂದಾದ್ದರು. ಆದರೆ ಅದು ಕಾಟಾಚಾರಕ್ಕೆ ಎನ್ನುವಂತಾಗಿತ್ತು. ನೂರಾರು ಪ್ರಯಾಣಿಕರು ಬಂದಿದ್ದರಿಂದ ಪೊಲೀಸರು ಯಾರನ್ನು ಕೂಡ ಸರಿಯಾಗಿ ತಪಾಸಣೆ ಮಾಡಲು ಸಾಧ್ಯವಾಗಲಿಲ್ಲ. ಹಿಂದೂಪರ ಸಂಘಟನೆಗಳ ಆರೋಪಗಳ ಬಗ್ಗೆ ರೈಲ್ವೆ ಇಲಾಖೆ ಅಧಿಕಾರಿಗಳು ಅಧಿಕೃತವಾಗಿ ಯಾವುದೇ ಮಾಹಿತಿ ನೀಡದೇ ಇದ್ದರು ಕೂಡ, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ. ಅವರ ಸೂಚನೆ ಮೇರೆಗೆ ಮುಂದಿನ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಿಂದ ಬರೋ ರೈಲುಗಳಲ್ಲೇ ಬರ್ತಾರಾ ಬಾಂಗ್ಲಾ ಅಕ್ರಮ ವಲಸಿಗರು? ಬೆಂಗಳೂರಿನ ಭದ್ರತೆಗೆ ಭಾರಿ ಆತಂಕ

ಸದ್ಯ ಅಕ್ರಮ ಬಾಂಗ್ಲಾ ವಲಸಿಗರು ಹುಬ್ಬಳ್ಳಿ ಸೇರಿದಂತೆ ಅನೇಕ ನಗರಗಳಿಗೆ ಬರುತ್ತಿರುವ ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ಸರಿಯಾಗಿ ಪರಿಶೀಲನೆ ನಡೆಸಬೇಕಿದೆ. ರೈಲ್ವೆ ಪೊಲೀಸರು ಜೊತೆಗೆ ಸ್ಥಳೀಯ ಪೊಲೀಸರು ಕೂಡ ಪಶ್ಟಿಮ ಬಂಗಾಳದಿಂದ ಬಂದಿರುವವರ ಮೇಲೆ ಹೆಚ್ಚಿನ ನಿಗಾವಹಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತೀವ್ರ ಸ್ವರೂಪ ಪಡೆದ ಕರ್ನಾಟಕ ಯೂತ್ ಕಾಂಗ್ರೆಸ್​ ಗಲಾಟೆ: ಅಧ್ಯಕ್ಷ ವಿರುದ್ಧ ಗಂಭೀರ ಆರೋಪ – Kannada News | Karnataka Youth Congress Row: Deepika Reddy major allegations Against President Manjunath Gowda

ಬೆಂಗಳೂರು, (ಮೇ 18): ಕರ್ನಾಟಕ ಯುವ ಕಾಂಗ್ರೆಸ್​​​ನಲ್ಲಿ (Karnataka Youth Congress) ರಾಜಕೀಯ ಪ್ರಹಸನಗಳು ನಡೆಯುತ್ತಿವೆ. ಯೂತ್ ಕಾಂಗ್ರೆಸ್ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಸೇರಿದಂತೆ 15 ಪದಾಧಿಕಾರಿಗಳನ್ನ ವಜಾ ಮಾಡಿರುವುದು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೀಗ ಪರಸ್ಪರ ಕೈ- ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಹೌದು…ಕೆಪಿಸಿಸಿ (KPCC) ಕಚೇರಿಯಲ್ಲಿಂದು ನೀಟ್​​​ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಪ್ರತಿಭಟನೆ ನಡೆಸಲು ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ (Manjunath Gowda) ಹಾಗೂ ಅಮಾನತುಗೊಂಡಿರುವ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಬೆಂಬಲಿಗರ ನಡುವೆ ತೀವ್ರ ವಾಗ್ವಾದ, ತಳ್ಳಾಟ-ನೂಕಾಟ ನಡೆದು ಕೊನೆಗೆ ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಇದರ ಮಧ್ಯೆ ದೀಪಿಕಾ ರೆಡ್ಡಿ (Deepika Reddy) ಅವರು ಪ್ರತಿಕ್ರಿಯಿಸಿದ್ದು, ಇದು ಶಿಸ್ತಿನ ಕ್ರಮವಲ್ಲ, ವೈಯಕ್ತಿಕ ಸೇಡು ಎಂದು ಅಧ್ಯಕ್ಷ ಎಚ್.ಎಸ್.ಮಂಜುನಾಥ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

  • ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಮಂಜುನಾಥ್ ವಿರುದ್ಧ ಗಂಭೀರ ಆರೋಪ.
  • ಪ್ರೆಸ್‌ನೋಟ್ ರಿಲೀಸ್ ಮಾಡಿದ ಆರೋಪಿಸಿದ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ
  • ಹುದ್ದೆ ತಡೆಹಿಡಿದಿದ್ದು ಕಾನೂನುಬಾಹಿರ ಹಾಗೂ ಪ್ರತೀಕಾರದ ಕ್ರಮ
  • ಇದು ಶಿಸ್ತಿನ ಕ್ರಮವಲ್ಲ, ವೈಯಕ್ತಿಕ ಸೇಡು ಎಂದು ಆರೋಪಿಸಿದ ದೀಪಿಕಾ ರೆಡ್ಡಿ

ಇದು ಶಿಸ್ತಿನ ಕ್ರಮವಲ್ಲ, ವೈಯಕ್ತಿಕ ಸೇಡು

ಕೆಪಿಸಿಸಿ ಕಚೇರಿಯಲ್ಲಿ ನಡೆದ ಗಲಾಟೆ ಬಳಿಕ ದೀಪಿಕಾ ರೆಡ್ಡಿ ಅವರು ಪ್ರೆಸ್‌ನೋಟ್ ರಿಲೀಸ್ ಮಾಡಿದ್ದು, ಹುದ್ದೆ ತಡೆಹಿಡಿದಿದ್ದು ಕಾನೂನುಬಾಹಿರ ಹಾಗೂ ಪ್ರತೀಕಾರದ ಕ್ರಮ. ಇದು ಶಿಸ್ತಿನ ಕ್ರಮವಲ್ಲ, ವೈಯಕ್ತಿಕ ಸೇಡು. ಸ್ತ್ರೀ ದ್ವೇಷದ ಪಿತೂರಿ ಮತ್ತು ಸೇಡಿನ ರಾಜಕೀಯಕ್ಕೆ ಮೌನವಾಗುವುದಿಲ್ಲ. ಕಾಂಗ್ರೆಸ್ ಪಕ್ಷ ಹಾಗೂ ಹೈಕಮಾಂಡ್ ಮೇಲಿನ ನಿಷ್ಠೆ ಅಚಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ನೋಡಿ: ಕೆಪಿಸಿಸಿ ಕಚೇರಿಯಲ್ಲಿಯೇ ಯೂತ್​​ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ: ಕಾರಣ ಇಲ್ಲಿದೆ

ಪಿತೂರಿ ಮತ್ತು ಮಾನಸಿಕ ಕಿರುಕುಳ

ಯುವ ಕಾಂಗ್ರೆಸ್ ಚುನಾವಣೆಯಲ್ಲಿ 2.95 ಲಕ್ಷ ಮತಗಳ ಪಡೆದಿದ್ದೇನೆ. ದೇಶದಲ್ಲೇ ಅತಿ ಹೆಚ್ಚು ಮತ ಪಡೆದ ಮಹಿಳಾ ಅಭ್ಯರ್ಥಿಗಳಲ್ಲಿ ನಾನು ಒಬ್ಬಳು. ಪುರುಷ ಪ್ರಾಬಲ್ಯದ ರಾಜಕೀಯದಲ್ಲಿ ಅವರ ವಿರುದ್ಧ ಹೋರಾಟ ನಡೆಸಿದ್ದೇನೆ. ಚುನಾವಣೆಯ ಬಳಿಕವೂ ಪಕ್ಷ ಸಂಘಟನೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ. ಎಚ್.ಎಸ್. ಮಂಜುನಾಥ್ ಅಭದ್ರತೆ ಮತ್ತು ಅಸೂಯೆಯಿಂದ ನಡೆದುಕೊಳ್ಳುತ್ತಿದ್ದಾರೆ. ಮಹಿಳಾ ನಾಯಕಿಯರನ್ನು ವ್ಯವಸ್ಥಿತವಾಗಿ ಗುರಿ ಮಾಡಲಾಗ್ತಿದೆ. ಮಂಜುನಾಥ್ ಗೌಡ ನೇತೃತ್ವದ ಯುವ ಕಾಂಗ್ರೆಸ್ ಮಹಿಳೆಯರಿಗೆ ಅಸುರಕ್ಷಿತ ವಾತಾವರಣ ನಿರ್ಮಿಸಲಾಗಿದೆ. ಚುನಾವಣೆಯ ಬಳಿಕ ರಾಜಕೀಯ ಪಿತೂರಿ ಮತ್ತು ಮಾನಸಿಕ ಕಿರುಕುಳ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸಾರ್ವಜನಿಕ ಬೆಂಬಲ ಹೊಂದಿರುವ ಮಹಿಳಾ ನಾಯಕರನ್ನು ಬೆದರಿಸಲು ಅಧಿಕಾರ ದುರುಪಯೋಗ ಮಾಡಿಕೊಳ್ತಿದ್ದಾರೆ. ಈ ಕ್ರಮಗಳು ನನ್ನನ್ನು ಬೆದರಿಸಲಾರವು. ಜನಾದೇಶವನ್ನು ಯಾವುದೇ ಆದೇಶ ಅಳಿಸಲಾರದು. ಈ ವಿಚಾರವನ್ನ ರಾಷ್ಟ್ರೀಯ ನಾಯಕರ ಮುಂದೆ ತೆಗೆದುಕೊಂಡು ಹೋಗುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ದಿಢೀರ್ 15 ಪದಾಧಿಕಾರಿಗಳ ವಜಾ: ಹೈಕಮಾಂಡ್​​ನ ಈ ದಿಟ್ಟ ಕ್ರಮಕ್ಕೆ ಕರ್ನಾಟಕ ಕಾಂಗ್ರೆಸ್​​ನಲ್ಲಿ ಸಂಚಲನ

ನನಗೆ 8 ಜಿಲ್ಲೆಗಳನ್ನ ಕೊಟ್ಟಿದ್ದಾರೆ. ಹೆದರದೆ ಕೆಲಸ ಮಾಡಿದ್ದೇನೆ. ನಾನು ಮಾಡಿದ ಕೆಲಸದ ಬಗ್ಗೆ ದಾಖಲೆ ಇದೆ. ರಾಹುಲ್ ಗಾಂಧಿ ಹೇಳಿದ ಹಾಗೆ ಚುನಾವಣೆಯಲ್ಲಿ‌ ಕೆಲಸ ಮಾಡಿದ್ದೇವೆ. ನನ್ನ ಬಿಟ್ಟು ಎಲ್ಲಾ ಪದಾಧಿಕಾರಿಗಳಿಗೆ ತೊಂದರೆ ಕೊಟ್ರು. ಹೊಡೆದು ಆಳುವ ನೀತಿಯನ್ನ ಮಂಜುನಾಥ್ ಮಾಡಿದ್ದಾರೆ. ಸಭೆಯಿಂದ ನಮ್ಮ‌ ಪದಾಧಿಕಾರಿ ಎದ್ದು ಹೊರಡಲು ಪ್ರಯತ್ನ ಮಾಡಿದ್ರು. ಎಲ್ಲರನ್ನೂ ಜೊತೆ ತೆಗೆದುಕೊಂಡು ಹೋಗುವುದು ರಾಹುಲ್ ಗಾಂಧಿ ಐಡಿಯಾಲಜಿ. ನಮ್ಮ ಸಮಸ್ಯೆಯನ್ನ ಡಿಸಿಎಂ, ಸಿಎಂ ಕರೆಸಿ ಬಗೆಹರಿಸುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದುಬಾರೆ ಶಿಬಿರದಲ್ಲಿ ಸಾಕಾನೆಗಳ ಕಾದಾಟದ ವೇಳೆ ಅವುಗಳ ನಡುವೆ ಸಿಲುಕಿ ಮಹಿಳೆ ಸಾವು – Kannada News | Dubare Elephant Camp Tragedy: Tourist Killed in Kodagu as Elephants Fight

ಸಾಕಾನೆಗಳ ಕಾದಾಟದ ವೇಳೆ ಮಹಿಳೆ ಸಾವು

ಮಡಿಕೇರಿ, ಮೇ 18: ಸಾಕಾನೆಗಳ ಕಾದಾಟದ ವೇಳೆ ಅವುಗಳ ನಡುವೆ ಸಿಲುಕಿ ಮಹಿಳೆಯೋರ್ವರು ದಾರುಣವಾಗಿ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ದುಬಾರೆ ಶಿಬಿರದಲ್ಲಿ ನಡೆದಿದೆ. ಒಂದು ಆನೆ ಕೊಂಬಿನಿಂದ ತಿವಿದ ಪರಿಣಾಮ ಮತ್ತೊಂದು ಆನೆ ನೆಲಕ್ಕುರಿಳಿದೆ. ಈ ವೇಳೆ ಅಲ್ಲೇ ಇದ್ದ ಮಹಿಳೆ ಆನೆಯಡಿ ಸಿಲುಕಿದ್ದಾರೆ. ಗಂಭೀರ ಗಾಯಗೊಂಡಿದ್ದ ಆಕೆಯನ್ನು ಕುಶಾಲನಗರ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಮೃತರನ್ನು ಚೆನ್ನೈ ಮೂಲದ ಜಿನ್ಶು(33) ಎಂದು ಗುರುತಿಸಲಾಗಿದೆ.

ಮುಖ್ಯಾಂಶಗಳು

  • ಸಾಕಾನೆಗಳ ಕಾದಾಟದ ವೇಳೆ ಅವುಗಳ ನಡುವೆ ಸಿಲುಕಿ ಮಹಿಳೆ ಸಾವು
  • ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ದುಬಾರೆ ಶಿಬಿರದಲ್ಲಿ ಘಟನೆ
  • ಪ್ರವಾಸಕ್ಕೆಂದು ಬಂದು ಪ್ರಾಣ ಕಳೆದುಕೊಂಡ ಚೆನ್ನೈ ಮೂಲದ ಜಿನ್ಶು (33)

ಆಗಿದ್ದೇನು?

ಚೆನ್ನೈ ಮೂಲದ ಜಿನ್ಶು ಎಂಬ ಮಹಿಳೆ ಕುಟುಂಬ ಸಮೇತ ನಂಜರಾಯಪಟ್ಟಣದ ದುಬಾರೆ ಆನೆ ಶಿಬಿರಕ್ಕೆ ಪ್ರವಾಸಕ್ಕೆ ಬಂದಿದ್ದರು. ಅವರು ಕಾವೇರಿ ನೀರಲ್ಲಿ ಆಟವಾಡುತ್ತಿರುವ ಸಂದರ್ಭ ಮಾವುತರು ಆನೆಗಳನ್ನು ಸ್ನಾನಕ್ಕೆಂದು ಕರೆತಂದಿದ್ದರು. ಈ ವೇಳೆ ಆನೆಗಳ ನಡುವೆ ಕಾದಾಟ ಶುರುವಾಗಿದೆ. ದುರ್ದೈವ ಎಂಬಂತೆ ಅಲ್ಲೇ ಇದ್ದ ಪ್ರವಾಸಿ ಮಹಿಳೆಯ ಮೇಲೆ ಆನೆ ಬಿದ್ದಿದ್ದು, ನೆಲಕ್ಕೆ ಅಪ್ಪಳಿಸಿದ ಜಿನ್ಶು ಅವರ ತಲೆಗೆ ಗಂಭೀರ ಗಾಯವಾದ ಪರಿಣಾಮ ಅವರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಪ್ರವಾಸಿಗರೇ ಎಚ್ಚರ! 2000ಕ್ಕೂ ಹೆಚ್ಚು ಅಕ್ರಮ ಹೋಂಸ್ಟೇಗಳ ಕಪಿಮುಷ್ಠಿಯಲ್ಲಿ ಕೊಡಗು; ಕಠಿಣ ಕ್ರಮಕ್ಕೆ ಆಗ್ರಹ

ರಕ್ಷಣೆಗೆ ಹರಸಾಹಸ

ಆನೆಗಳ ಕಾದಾಟದ ವೇಳೆ ಅವುಗಳ ಕಾಲಿನ ಸಮೀಪ ಸಿಲುಕಿಕೊಂಡಿದ್ದ ಮಹಿಳೆ ಜಿನ್ಶು ರಕ್ಷಣೆಗೆ ಶಕ್ತಿಮೀರಿ ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಆನೆಗಳ ನಿಯಂತ್ರಣಕ್ಕೆ ಮಾವುತರು ಸತತ ಪ್ರಯತ್ನ ನಡೆಸಿರುವ ಹೊರತಾಗಿ, ಮಹಿಳೆಯ ರಕ್ಷಣೆಗೆ ಮಗುವನ್ನು ಕೈನಲ್ಲಿ ಹಿಡಿದ್ದ ವ್ಯಕ್ತಿ ಸೇರಿ ಕೆಲವರು ಯತ್ನಿಸಿದರಾದರೂ ಅದು ಫಲಪ್ರದವಾಗಿಲ್ಲ. ಅಲ್ಲೇ ಇದ್ದ ಇನ್ನು ಕೆಲ ಪ್ರವಾಸಿಗರು ಆನೆಗಳ ಕಾದಾಟಕ್ಕೆ ಬೆದರಿ ಕಾಲ್ಕಿತ್ತು ಓಡಿದ್ದು, ಅದೃಷ್ಟವಶಾತ್​​ ಎಂಬಂತೆ ಅವರೆಲ್ಲ ಬಚಾವ್​​ ಆಗಿದ್ದಾರೆ. ಆದರೆ ಪ್ರವಾಸಕ್ಕೆಂದು ಬಂದಿದ್ದ ಅಮಾಯಕ ಮಹಿಳೆಯ ಜೀವವನ್ನು ಸಾಕಾನೆಗಳು ಬಲಿ ಪಡೆದಿವೆ. ಘಟನೆ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಿಚ್ಛೇದನದ ಬಳಿಕ ಮೌನಿ ರಾಯ್​​​ಗೆ ಸಿಕ್ಕ ಜೀವನಾಂಶ ಎಷ್ಟು? ಮಾಜಿ ಪತಿ ಹೇಳಿದ್ದಿಷ್ಟು – Kannada News | Mouni Roy Divorce: Suraj Nambiar Denies Alimony, Third Party Rumors and Confirms Separation

ಭಾರತ ಮೂಲದ ದುಬೈ ಉದ್ಯಮಿ ಸೂರಜ್ ನಂಬಿಯಾರ್ ಹಾಗೂ ಬಾಲಿವುಡ್ ನಟಿ ಮೌನಿ ರಾಯ್ ಇಬ್ಬರೂ ಡಿವೋರ್ಸ್ ಪಡೆದಿದ್ದಾರೆ. ಇಬ್ಬರ ಮಧ್ಯೆ ಮೂರನೇ ವ್ಯಕ್ತಿ ಎಂಟ್ರಿ ಆಗಿರುವುದೇ ಡಿವೋರ್ಸ್​​ಗೆ ಕಾರಣ ಎಂಬ ವದಂತಿ ಸೃಷ್ಟಿ ಆಗಿತ್ತು. ಅಲ್ಲದೆ, ನಟಿಗೆ ಸಾಕಷ್ಟು ಜೀವನಾಂಶ ಸಿಕ್ಕಿದೆ ಎಂದು ಕೂಡ ಹೇಳಲಾಗಿತ್ತು. ಈ ಎಲ್ಲಾ ವದಂತಿಗೆ ಸೂರಜ್ ನಂಬಿಯಾರ್ ಸ್ಪಷ್ಟನೆ ನೀಡಿದ್ದಾರೆ. ತಮ್ಮಿಬ್ಬರ ವಿಚ್ಛೇದನದ ಕುರಿತು ವರದಿಯಾಗುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು, ಆಧಾರರಹಿತ ಮತ್ತು ದುರುದ್ದೇಶಪೂರಿತ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪರಸ್ಪರ ಗೌರವ ಮತ್ತು ಒಮ್ಮತದ ನಿರ್ಧಾರದಿಂದಲೇ ತಾವಿಬ್ಬರು ಬೇರೆಯಾಗುತ್ತಿರುವುದಾಗಿ ಸೂರಜ್ ತಿಳಿಸಿದ್ದಾರೆ. ಈ ನಿರ್ಧಾರದ ಹಿಂದೆ ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪವಿಲ್ಲ ಎಂದು ಹೇಳಿದ್ದಾರೆ. ಜೀವನಾಂಶ ಅಥವಾ ಇನ್ಯಾವುದೇ ವಿಷಯದ ಬಗ್ಗೆ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ಕಟ್ಟುಕಥೆಗಳು ಕೇವಲ ಇಬ್ಬರು ವ್ಯಕ್ತಿಗಳ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನವಷ್ಟೇ ಎಂದು ಅವರು ಬೇಸರ ಹೊರಹಾಕಿದ್ದಾರೆ. ಈ ಮೂಲಕ ಮೌನಿ ರಾಯ್ ಅವರು ಯಾವುದೇ ಜೀವನಾಂಶ ಕೇಳಿಲ್ಲ ಎಂಬುದು ಸ್ಪಷ್ಟವಾಗಿದೆ.

ಸಂಬಂಧವಿಲ್ಲದವರನ್ನು ಈ ವಿವಾದಕ್ಕೆ ಎಳೆದು ತರುತ್ತಿರುವುದರ ಬಗ್ಗೆ ಸೂರಜ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾವಿಬ್ಬರೂ ಈ ಕಠಿಣ ಸಮಯದಲ್ಲಿ ಗೌರವಯುತವಾಗಿ ನಡೆದುಕೊಂಡಿದ್ದು, ಮಾಧ್ಯಮಗಳು ಮತ್ತು ಸಾರ್ವಜನಿಕರು ಕೂಡ ಜವಾಬ್ದಾರಿಯಿಂದ ವರ್ತಿಸಿ ತಮ್ಮ ಖಾಸಗಿತನಕ್ಕೆ ಗೌರವ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:  ದಿಶಾ ಪಟಾನಿ-ಮೌನಿ ರಾಯ್​ ಈ ರೀತಿ ಸ್ನೇಹ; ಇದೇ ಕಾರಣಕ್ಕೆ ವಿಚ್ಛೇದನ ನೀಡಿದ್ರಾ ಸೂರಜ್?

ಈ ವದಂತಿಗಳಿಗೆ ನಟಿ ಮೌನಿ ರಾಯ್ ಕೂಡ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದ್ದು, ಪತಿ ಸೂರಜ್ ನಂಬಿಯಾರ್ ಅವರಿಂದ ದೂರವಾಗುತ್ತಿರುವುದನ್ನು ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಈ ಸೂಕ್ಷ್ಮ ವಿಷಯವನ್ನು ಅತ್ಯಂತ ಗೌರವಯುತವಾಗಿ ಮತ್ತು ಖಾಸಗಿಯಾಗಿ ನಿಭಾಯಿಸಲು ಇಬ್ಬರೂ ಒಟ್ಟಾಗಿ ನಿರ್ಧರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಾಲಾ-ಕಾಲೇಜು ಆರಂಭಕ್ಕೂ ಮುನ್ನ ಪೋಷಕರಿಗೆ ಡಬಲ್ ಶಾಕ್! – Kannada News | Karnataka Parents Face Double Shock: School Fees and Bus Fares Due to Fuel Prices

ಶಾಲಾ ವಾಹನಗಳ ದರ ಏರಿಕೆಗೆ ನಿರ್ಧಾರ (ಎಐ ಚಿತ್ರ)Image Credit source: tv9 kannada

ಬೆಂಗಳೂರು, ಮೇ 18: ಗಲ್ಫ್​ ಯುದ್ಧದ ಪರಿಣಾಮ ಇದೀಗ ರಾಜ್ಯದ (Karnataka) ಪೋಷಕರಿಗೂ (Parents) ತಟ್ಟಿದೆ. ಹೇಗೆ ಅಂದರೆ ಈ ವರ್ಷ ಖಾಸಗಿ ಶಾಲೆಗಳು ಈಗಾಗಲೇ ಶೇ.10ರಷ್ಟು ಶಾಲಾ ಶುಲ್ಕವನ್ನು ಹೆಚ್ಚಳ ಮಾಡಿವೆ. ಈ ಮಧ್ಯೆ ಇದೀಗ ಶಾಲಾ ಬಸ್ ಮತ್ತು ವ್ಯಾನ್ ದರ ಏರಿಕೆಗೆ (School van fare) ಮುಂದಾಗಿವೆ. ಹೀಗಾಗಿ ಶಾಲೆಗಳು ಆರಂಭಕ್ಕೂ ಮುನ್ನವೇ ಪೋಷಕರಿಗೆ ಡಬಲ್ ಡಬಲ್​ ಶಾಕ್ ಎದುರಾಗಿದೆ.

ಮುಖ್ಯಾಂಶಗಳು

  • ಸಾಲು ಸಾಲು ದರ ಏರಿಕೆ ಮಧ್ಯೆ ಮತ್ತೊಂದು ಶಾಕ್​​!
  • ದರ ಹೆಚ್ಚಳಕ್ಕೆ ಮುಂದಾದ ಶಾಲಾ ವಾಹನ ಮಾಲೀಕರು
  • ಶಾಲಾ ಆರಂಭಕ್ಕೆ ಮುನ್ನ ಪೋಷಕರಿಗೆ ಡಬಲ್ ಶಾಕ್!

ಎಷ್ಟು ಏರಿಕೆ?

ಪೆಟ್ರೋಲ್‌, ಡೀಸೆಲ್‌, ಸಿಎನ್‌ಜಿ ದರವೂ ಏರಿಕೆ ಕಂಡಿದೆ. ಇದು ವಾಹನ ಸವಾರರಿಗೆ ಮಾತ್ರವನ್ನ, ಜನ ಸಾಮಾನ್ಯರಿಗೂ ಸಂಕಷ್ಟ ತಂದಿದೆ. ಇಂಧನ ದರವೂ ಏರಿಕೆ ಆಗಿದೆ. ಇದೇ ಕಾರಣ ನೀಡಿ ಖಾಸಗಿ ಶಾಲಾ ವಾಹನ ಮಾಲೀಕರು ಶೇ.10ರಿಂದ 15ರಷ್ಟು ದರ ಏರಿಕೆಗೆ ಮುಂದಾಗಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ್ಯಂತ ಶಾಲೆಗಳು ಪುನರಾರಂಭಗೊಳ್ಳುತ್ತಿರುವ ಈ ಹಂತದಲ್ಲೇ ದರ ಹೆಚ್ಚಳದ ನಿರ್ಧಾರ ಮಾಡಿದ್ದಾರೆ.

ಇದನ್ನೂ ಓದಿ: ಮೇ 20ರಂದು ಸಾರಿಗೆ ನೌಕರರ ಮುಷ್ಕರ: ಸಿಬ್ಬಂದಿಗೆ ಖಡಕ್​​ ಎಚ್ಚರಿಕೆ ಕೊಟ್ಟ KSRTC

ಇನ್ನು ಕರ್ನಾಟಕದಲ್ಲಿ ಸುಮಾರು 20 ಸಾವಿರ ಖಾಸಗಿ ಶಾಲಾ ಬಸ್, ವ್ಯಾನ್‌ಗಳು ಕಾರ್ಯನಿರ್ವಹಿಸುತ್ತಿವೆ. ಗಲ್ಫ್​​ ಬಿಕ್ಕಟ್ಟಿನಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಏರಿಕೆಯಾಗಿದ್ದು, ಅದರ ನೇರ ಪರಿಣಾಮ ದೇಶೀಯ ಪೆಟ್ರೋಲ್-ಡೀಸೆಲ್ ದರದ ಮೇಲೆ ಬಿದ್ದಿದೆ. ಇದನ್ನೇ ಮುಂದಿಟ್ಟುಕೊಂಡು ವಾಹನ ಮಾಲೀಕರು ದರ ಏರಿಕೆಗೆ ಮುಂದಾಗಿದ್ದಾರೆ. ಇದರಿಂದಾಗಿ ಪೋಷಕರು ಮಾತ್ರ ಕಂಗಾಲಾಗಿದ್ದಾರೆ.

ಮಲ್ಲೇಶ್ವರಂ ಶಾಲೆಯ ಮುಖ್ಯ ಶಿಕ್ಷಕ ಚಂದ್ರಮೌಳಿ ಹೇಳಿದ್ದಿಷ್ಟು 

ಈ ಬಗ್ಗೆ ಮಲ್ಲೇಶ್ವರಂ ಶಾಲೆಯ ಮುಖ್ಯ ಶಿಕ್ಷಕ ಚಂದ್ರಮೌಳಿ ಪ್ರತಿಕ್ರಿಯಿಸಿದ್ದು, ಯುದ್ಧದ ಎಫೆಕ್ಟ್ ಪೋಷಕರಿಗೆ ಹೊರೆಯಾಗಿದೆ. ನಾವು ಈ ವರ್ಷ ಹಿಮಾಂಸು ಶಾಲೆಯ ಶುಲ್ಕವನ್ನ 7% ಮಾತ್ರ ಜಾಸಿ ಮಾಡಿದ್ದೇವೆ. ಶಾಲೆಯ ವ್ಯಾನ್, ಆಟೋ, ಮಿನಿ ಟಿಟಿ ಅಸೋಸಿಯೇಷನ್ ಜೊತೆ ಚರ್ಚೆ ಮಾಡಿದ್ದೇವೆ. ಗರಿಷ್ಠ 10% ಕ್ಕಿಂತ ಜಾಸ್ತಿ ವ್ಯಾನ್ ಶುಲ್ಕ ಏರಿಕೆ ಮಾಡಬೇಡಿ. ಪೋಷಕರಿಗೆ ಇದು ತುಂಬಾ ಹೊರೆಯಾಗುತ್ತದೆ. ಶಾಲೆಯ ದಾಖಲಾತಿ ಕಡಿಮೆ ಕೂಡ ಆಗುತ್ತದೆ. ಹೀಗಾಗಿ ಸಮಸ್ಯೆಗಳಿಗೆ ಅನುಗುಣವಾಗಿ 7-10% ಶುಲ್ಕ ಏರಿಕೆಗೆ ಸಲಹೆ ನೀಡಿದ್ದೇವೆ ಎಂದು ತಿಳಿಸಿದರು.

ಸರ್ಕಾರ ಕೊಂಚ ಇದಕ್ಕೆ ಕಡಿವಾಣ ಹಾಕಬೇಕು ಎಂದ ಪೋಷಕರು

ಇನ್ನು ಈ ಬಗ್ಗೆ ಪೋಷಕರೊಬ್ಬರು ಮಾತನಾಡಿದ್ದು, ಈ ವರ್ಷ ಶಾಲಾ ಶುಲ್ಕದ ಜೊತೆ ಶಾಲಾ ವಾಹನಗಳ ಬೆಲೆ ಏರಿಕೆ ಶಾಕ್ ನೀಡಿದೆ. ಇದು ಪೋಷಕರಿಗೆ ದೊಡ್ಡ ಹೊರೆಯಾಗಿದೆ. ದುಡ್ಡು ಇರುವವರು ಕಟ್ಟುತ್ತಾರೆ. ಮದ್ಯಮ ವರ್ಗದ ಪೋಷಕರಿಗೆ ಇದು ತುಂಬಾ ಹೊರೆ ಆಗಲಿದೆ. ಪ್ರತಿವರ್ಷ ಶುಲ್ಕ ಏರಿಕೆ ತುಂಬಾ ಕಷ್ಟ. ಬಸ್, ಆಟೋ ದರ ಏರಿಕೆಯಾಗುತ್ತಿದೆ. ಆದರೆ ನಮ್ಮ ಸಂಬಳ ಮಾತ್ರ ಅಷ್ಟೇ ಇದೆ. ನಾಳೆ ಯಾವುದು ಏರಿಕೆ ಆಗುತ್ತದೆ ಎಂಬ ಯೋಚನೆಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್-ಡೀಸೆಲ್ ದರ ಹೆಚ್ಚಳ ಬೆನ್ನಲ್ಲೇ ಬೆಂಗಳೂರಿಗರಿಗೆ ಮತ್ತೊಂದು ದರ ಏರಿಕೆ ಬಿಸಿ!

ಯುದ್ಧದಿಂದ ನಮ್ಮ ಕೆಲಸದ ಭದ್ರತೆಯೂ ಇಲ್ಲ. ಹೀಗಾಗಿ ಯಾವ ಶಾಲೆಗೆ ಸೇರಿಸಬೇಕು ಅಂತ ಚಿಂತೆಯಾಗಿದೆ. ಲಕ್ಷ ಸಂಬಳ ಇದ್ದರೂ ಸಾಕಾಗುತ್ತಿಲ್ಲ. ಶಾಲಾ ವಾಹನ ದರ ಏರಿಕೆಯಿಂದ ಏನು ಮಾಡಬೇಕು ಅಂತ ಗೊತ್ತಿಲ್ಲ. ಪೋಷಕರಿಗೆ ತುಂಬಾ ಸಮಸ್ಯೆಯಾಗಿದ್ದು, ಸರ್ಕಾರ ಕೊಂಚ ಇದಕ್ಕೆ ಕಡಿವಾಣ ಹಾಕಬೇಕು ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link