Category Archives: Blog

Your blog category

ಭವಾನಿಪುರ ಕ್ಷೇತ್ರ ಉಳಿಸಿಕೊಂಡು ನಂದಿಗ್ರಾಮದ ಶಾಸಕ ಸ್ಥಾನಕ್ಕೆ ಬಂಗಾಳದ ಸಿಎಂ ಸುವೇಂದು ಅಧಿಕಾರಿ ರಾಜೀನಾಮೆ – Kannada News | West Bengal CM Suvendu Adhikari to retain Bhabanipur seat announces resignation For Nandigram

ಕೊಲ್ಕತ್ತಾ, ಮೇ 13: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಭವಾನಿಪುರ ವಿಧಾನಸಭಾ ಸ್ಥಾನದ ಶಾಸಕನಾಗಿ ಉಳಿಯುವುದಾಗಿ ಘೋಷಿಸಿದ್ದಾರೆ. ಅವರು ನಂದಿಗ್ರಾಮದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಬಂಗಾಳದ 9ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವು ದಿನಗಳ ನಂತರ ಅವರ ಈ ನಿರ್ಧಾರ ಹೊರಬಿದ್ದಿದೆ. ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಭವಾನಿಪುರ ಮತ್ತು ನಂದಿಗ್ರಾಮ ಎರಡೂ ಸ್ಥಾನಗಳನ್ನು ಗೆದ್ದ ಅವರು ಇಂದು ಭವಾನಿಪುರದಿಂದ ಶಾಸಕರಾಗಿ ರಾಜ್ಯ ವಿಧಾನಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.

“ಉಪಚುನಾವಣೆಯಲ್ಲಿ ನಂದಿಗ್ರಾಮದಿಂದ ಬೇರೆಯವರು ಶಾಸಕರಾಗಿ ಆಯ್ಕೆಯಾಗುತ್ತಾರೆ. ಆದರೆ ಅಲ್ಲಿನ ಜನರು ನನ್ನ ಅನುಪಸ್ಥಿತಿಯನ್ನು ಅನುಭವಿಸಲು ನಾನು ಬಿಡುವುದಿಲ್ಲ. ರಾಜ್ಯದ ಉಳಿದ ಭಾಗಗಳ ಜೊತೆಗೆ ನಂದಿಗ್ರಾಮದ ಜನರಿಗೆ ನಾನು ನೀಡಿದ ಎಲ್ಲಾ ಅಭಿವೃದ್ಧಿ ಭರವಸೆಗಳನ್ನು ಈಡೇರಿಸುತ್ತೇನೆ” ಎಂದು ಸಿಎಂ ಸುವೇಂದು ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: West Bengal CM: ಬಂಗಾಳದಲ್ಲಿ ಬಿಜೆಪಿ ಯುಗ ಆರಂಭ; ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕಾರ

ಮುಖ್ಯಮಂತ್ರಿಯಾಗಿ ವಿಧಾನಸಭೆಗೆ ಬಂದ ಮೊದಲ ದಿನದಂದು ಸುವೇಂದು ಅಧಿಕಾರಿ ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಅವರು ಸದನದ ಪ್ರವೇಶದ್ವಾರದಲ್ಲಿ ಮಂಡಿಯೂರಿ ವಿಧಾನಸಭೆ ಪ್ರವೇಶಿಸುವ ಮೊದಲು ತಮ್ಮ ಹಣೆಯನ್ನು ನೆಲಕ್ಕೆ ಮುಟ್ಟಿಸಿ ನಮಸ್ಕರಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Retail Inflation: ಏಪ್ರಿಲ್​ನಲ್ಲಿ ರೀಟೇಲ್ ಹಣದುಬ್ಬರ ಶೇ. 3.48ಕ್ಕೆ ಏರಿಕೆ; ಮಾರ್ಚ್​ಗಿಂತ ತುಸು ಹೆಚ್ಚಳ – Kannada News | Retail Inflation in 2026 April rises to 3.48pc from 3.40pc in March

ನವದೆಹಲಿ, ಮೇ 13: ಭಾರತದ ಚಿಲ್ಲರೆ ಹಣದುಬ್ಬರ (Retail Inflation) 2026ರ ಏಪ್ರಿಲ್​ನಲ್ಲಿ ಏರಿಕೆಯಾಗಿದ್ದು, ಜನಸಾಮಾನ್ಯರ ಜೇಬಿಗೆ ಸ್ವಲ್ಪ ಹೆಚ್ಚಿನ ಹೊರೆಯಾಗಿದೆ. ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ (Ministry of Statistics and Programme Implementation) ಸಚಿವಾಲಯ ನಿನ್ನೆ ಮಂಗಳವಾರ (ಮೇ 12) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಮಾರ್ಚ್‌ನಲ್ಲಿ ಶೇ. 3.40 ರಷ್ಟಿದ್ದ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇ. 3.48 ಕ್ಕೆ ತಲುಪಿದೆ.

ಆಹಾರ ಪದಾರ್ಥಗಳ ಬೆಲೆ ಏರಿಕೆ ದರವು ಶೇ. 3.87 ರಿಂದ ಶೇ. 4.20 ಕ್ಕೆ ಹೆಚ್ಚಿದೆ. ಟೊಮೆಟೊ ಹಣದುಬ್ಬರವು ಶೇ. 35.28 ರಷ್ಟು ದಾಖಲಾಗಿದ್ದು, ಅಡುಗೆ ಮನೆಯ ಬಜೆಟ್ ಮೇಲೆ ಪರಿಣಾಮ ಬೀರಿದೆ. ಬೆಳ್ಳಿ ಆಭರಣಗಳ ಬೆಲೆಯಲ್ಲಿ ಶೇ. 144.34 ರಷ್ಟು ಭಾರಿ ಏರಿಕೆಯಾಗಿದೆ. ಚಿನ್ನ, ವಜ್ರ ಮತ್ತು ಪ್ಲಾಟಿನಂ ಆಭರಣಗಳ ಬೆಲೆ ಕೂಡ ಶೇ. 40.72 ರಷ್ಟು ಹೆಚ್ಚಾಗಿದೆ. ಕೊಬ್ಬರಿ (ಶೇ. 44.55) ಮತ್ತು ಹೂಕೋಸು (ಶೇ. 25.58) ಬೆಲೆಗಳೂ ಗಣನೀಯವಾಗಿ ಏರಿವೆ.

ಇದನ್ನೂ ಓದಿ: ಈವರೆಗೆ ಇದ್ದದ್ದು ಕಷ್ಟ ಅಲ್ಲ, ಮುಂದೆ ಕಾದೈತಾ ದೊಡ್ಡ ಸಂಕಷ್ಟ? ಉದಯ್ ಕೋಟಕ್ ಕೊಟ್ಟಿದ್ದಾರೆ ದೊಡ್ಡ ಎಚ್ಚರಿಕೆ

ಬೆಲೆ ಇಳಿಕೆಯಾದ ವಸ್ತುಗಳು: ಆಲೂಗಡ್ಡೆ (-23.69%) ಮತ್ತು ಈರುಳ್ಳಿ (-17.67%) ಬೆಲೆಗಳಲ್ಲಿ ಇಳಿಕೆ ಕಂಡುಬಂದಿರುವುದು ಗ್ರಾಹಕರಿಗೆ ಸ್ವಲ್ಪ ಸಮಾಧಾನ ತಂದಿದೆ. ಅಲ್ಲದೆ ಮೋಟಾರ್ ಕಾರ್, ಜೀಪ್ ಮತ್ತು ಏರ್ ಕಂಡೀಷನರ್ ಬೆಲೆಗಳೂ ತುಸು ಕಡಿಮೆಯಾಗಿವೆ. ಇದರಿಂದ ಒಟ್ಟಾರೆ ಹಣದುಬ್ಬರ ತೀರಾ ಹೆಚ್ಚದಂತೆ ನಿಯಂತ್ರಣದಲ್ಲಿರಲು ಸಾಧ್ಯವಾಗಿದೆ.

ಗ್ರಾಮೀಣ vs ನಗರ: ಗ್ರಾಮೀಣ ಭಾಗದಲ್ಲಿ ಹಣದುಬ್ಬರ ಶೇ. 3.74 ರಷ್ಟಿದ್ದರೆ, ನಗರ ಪ್ರದೇಶಗಳಲ್ಲಿ ಇದು ಶೇ. 3.16 ರಷ್ಟಿದೆ.

ತರಕಾರಿಗಳಲ್ಲಿ ಟೊಮೆಟೊ ಮತ್ತು ಹೂಕೋಸು ಹಾಗೂ ಅಮೂಲ್ಯ ಲೋಹಗಳ ಬೆಲೆ ಏರಿಕೆಯು ಏಪ್ರಿಲ್ ತಿಂಗಳ ಹಣದುಬ್ಬರ ಹೆಚ್ಚಾಗಲು ಮುಖ್ಯ ಕಾರಣಗಳಾಗಿವೆ.

ಇದನ್ನೂ ಓದಿ: I4C ಮತ್ತು RBIH ಮಧ್ಯೆ ಒಪ್ಪಂದ; ಭಾರತೀಯರಿಗೆ ಅತ್ಯಾಧುನಿಕ ಸೈಬರ್ ರಕ್ಷಾ ಕವಚ: ಅಮಿತ್ ಶಾ ಘೋಷಣೆ

ಆರ್​ಬಿಐ ಗುರಿಯೊಳಗೆಯೇ ಇರುವ ಹಣದುಬ್ಬರ

ಹಣದುಬ್ಬರವು ಶೇ. 4ರಷ್ಟು ಇರಬೇಕೆಂದು ಸರ್ಕಾರವು ಆರ್ಬಿಐಗೆ ಗುರಿ ನೀಡಿದೆ. ಈ ಗುರಿ ಈಡೇರಿಸುವ ನಿಟ್ಟಿನಲ್ಲಿ ಆರ್​ಬಿಐ ಹಣದುಬ್ಬರ ತಾಳಿಕೆ ಮಿಡಿಯಾಗಿ ಶೇ. 2ರಿಂದ 4 ಅನ್ನು ನಿಗದಿ ಮಾಡಿದೆ. ಹಣದುಬ್ಬರವು ಈ ವ್ಯಾಪ್ತಿಯೊಳಗೆ ಇರಿಸುವ ಗುರಿ ಆರ್​ಬಿಐನದ್ದು. ಈಗ್ಗೆ ಹಲವು ತಿಂಗಳುಗಳಿಂದ ಹಣದುಬ್ಬರು ಆರ್​ಬಿಐನ ತಾಳಿಕೆ ವ್ಯಾಪ್ತಿಯೊಳಗೆಯೇ ಇರುವುದು ಗಮನಾರ್ಹ.

ಆದರೆ, ಮೇ ತಿಂಗಳಲ್ಲಿ ಚಿನ್ನ, ಇಂಧನ ಇತ್ಯಾದಿ ಬೆಲೆಗಳು ಅಧಿಕಗೊಳ್ಳುವುದರಿಂದ ಹಣದುಬ್ಬರ ಶೇ. 4 ಅನ್ನು ದಾಟಿ ಹೋಗುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ; ಕಾರ್ಮಿಕರ ಶೆಡ್‌ಗಳು ಭಸ್ಮ! ಸ್ಥಳಕ್ಕೆ ಸುಬುಧೇಂದ್ರ ತೀರ್ಥ ಶ್ರೀ ಭೇಟಿ – Kannada News | Mantralayam Srimath Fire: Worker Sheds Burned, Relief Promised After Cylinder Blast

ರಾಯಚೂರು, ಮೇ.13: ಮಂತ್ರಾಲಯದ ಶ್ರೀಮಠದ ಆವರಣದಲ್ಲಿರುವ ಕಾರ್ಮಿಕರ ಶೆಡ್‌ಗಳಲ್ಲಿ ಏಕಾಏಕಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಆಘಾತಕಾರಿ ಘಟನೆ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಂತ್ರಾಲಯದ ನರಹರಿ ತೀರ್ಥ ವಸತಿ ಗೃಹಗಳ ಸಮೀಪ ನಿರ್ಮಾಣ ಕಾಮಗಾರಿಗಾಗಿ ಬಂದಿದ್ದ ಕಾರ್ಮಿಕರಿಗೆ ಶೆಡ್‌ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಬುಧವಾರ ಮಧ್ಯಾಹ್ನ ಅತಿಯಾದ ಬಿಸಿಲಿನ ತಾಪಕ್ಕೆ ಶೆಡ್‌ನಲ್ಲಿದ್ದ ಎರಡು-ಮೂರು ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಇದರಿಂದಾಗಿ ಶೆಡ್‌ಗಳು ಹೊತ್ತಿ ಉರಿದಿದ್ದು, ಕಾರ್ಮಿಕರ ದವಸ-ಧಾನ್ಯ ಮತ್ತು ಇತರ ವಸ್ತುಗಳು ಸುಟ್ಟು ಕರಕಲಾಗಿವೆ. ಘಟನಾ ಸ್ಥಳಕ್ಕೆ ಮಂತ್ರಾಲಯ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ಭೇಟಿ ನೀಡಿ ಪರಿಶೀಲನೆ ನಡೆಸಿದರು. “ಘಟನೆಯ ಸಮಯದಲ್ಲಿ ಕಾರ್ಮಿಕರು ಕೆಲಸಕ್ಕೆ ತೆರಳಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ನಷ್ಟಕ್ಕೊಳಗಾದ ಕಾರ್ಮಿಕರಿಗೆ ಶ್ರೀಮಠದ ವತಿಯಿಂದ ಎಲ್ಲ ರೀತಿಯ ನೆರವು ನೀಡಲಾಗುವುದು,” ಎಂದು ಶ್ರೀಗಳು ಸಾಂತ್ವನ ನೀಡಿದರು. ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಬೆಂಕಿ ನಂದಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಇಂಧನ ಕಡಿಮೆ ಬಳಸಿ ಎನ್ನುತ್ತಿರೋದು ಮೋದಿ ಮಾತ್ರವಲ್ಲ, ವಿವಿಧ ದೇಶಗಳು ಜಾರಿಗೊಳಿಸಿರುವ ಸಂಗತಿಗಳೇ – Kannada News | Energy Saving Strategies: India & World’s Urgent Response to Global Fuel Crisis

ನವದೆಹಲಿ, ಮೇ 13: ಸದ್ಯದ ಜಾಗತಿಕ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂಧನ ಉಳಿತಾಯ ಮತ್ತು ಪ್ರಯಾಣದ ಮಿತಿಯ ಬಗ್ಗೆ ನೀಡಿದ ಕರೆ ವಿವಾದಾತ್ಮಕವಾಗಲಿ ಅಥವಾ ಅತಿಯಾದುದಾಗಲಿ ಅಲ್ಲ. ವಾಸ್ತವವಾಗಿ, ಇದು ವಿಶ್ವದಾದ್ಯಂತ ಅನೇಕ ರಾಷ್ಟ್ರಗಳು ಅನುಸರಿಸುತ್ತಿರುವ ಅನಿವಾರ್ಯ ಕ್ರಮಗಳ ಭಾಗವಾಗಿದೆ. 2026ರ ತೈಲ ಬಿಕ್ಕಟ್ಟನ್ನು ಎದುರಿಸಲು ಇಂದು ವಿಶ್ವದ 40ಕ್ಕೂ ಹೆಚ್ಚು ದೇಶಗಳು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿವೆ. ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (IEA) ನೀಡಿರುವ ಅಂಕಿ-ಅಂಶಗಳ ಪ್ರಕಾರ, ಭಾರತದಂತೆಯೇ ಅನೇಕ ಮುಂದುವರಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ಇಂಧನ ಸಂರಕ್ಷಣೆಗಾಗಿ ತುರ್ತು ಯೋಜನೆಗಳನ್ನು ರೂಪಿಸಿವೆ.

ವಿಶ್ವದಾದ್ಯಂತ ಜಾರಿಯಲ್ಲಿರುವ ಪ್ರಮುಖ ಕ್ರಮಗಳು

ಮನೆಯಿಂದಲೇ ಕೆಲಸ (WFH): ಇಂಧನ ಉಳಿಸಲು ಮತ್ತು ವಾಹನ ಸಂಚಾರ ಕಡಿಮೆ ಮಾಡಲು 13ಕ್ಕೂ ಹೆಚ್ಚು ದೇಶಗಳು ‘ವರ್ಕ್ ಫ್ರಮ್ ಹೋಮ್’ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿವೆ. ಉದಾಹರಣೆಗೆ, ಪಾಕಿಸ್ತಾನ ವಾರಕ್ಕೆ 4 ದಿನಗಳ ಕೆಲಸ ಮತ್ತು 50% ರಿಮೋಟ್ ಕೆಲಸವನ್ನು ಜಾರಿಗೆ ತಂದರೆ, ಶ್ರೀಲಂಕಾ ಬುಧವಾರದಂದು ಕಚೇರಿಗಳಿಗೆ ರಜೆ ಘೋಷಿಸಿದೆ.

ಎಸಿ ಬಳಕೆಯ ಮೇಲೆ ಮಿತಿ: ವಿದ್ಯುತ್ ಉಳಿಸಲು ಕಚೇರಿಗಳಲ್ಲಿ ಎಸಿ ತಾಪಮಾನವನ್ನು ಮಿತಿಗೊಳಿಸಲಾಗಿದೆ. ಸಿಂಗಾಪುರ ಮತ್ತು ಬಾಂಗ್ಲಾದೇಶದಂತಹ ದೇಶಗಳಲ್ಲಿ ಕನಿಷ್ಠ 25°C ತಾಪಮಾನ ಕಾಪಾಡುವುದು ಕಡ್ಡಾಯವಾಗಿದೆ.

ವಾಹನ ಸಂಚಾರಕ್ಕೆ ಕಡಿವಾಣ: ದಕ್ಷಿಣ ಕೊರಿಯಾ ಮತ್ತು ಶ್ರೀಲಂಕಾದಂತಹ ದೇಶಗಳಲ್ಲಿ ಸಮ-ಬೆಸ (Odd-Even) ಸಂಖ್ಯೆಯ ವಾಹನ ಚಾಲನೆ ಅಥವಾ ಕ್ಯೂಆರ್ ಕೋಡ್ ಆಧಾರಿತ ಇಂಧನ ಪಡಿತರ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: ಇಂಧನ ಬಿಕ್ಕಟ್ಟು; ವರ್ಕ್ ಫ್ರಂ ಹೋಂ, ಪೆಟ್ರೋಲ್ ಖರೀದಿಮಿತಿ ಇತ್ಯಾದಿ ಕ್ರಮ ಜಾರಿಯಲ್ಲಿರುವ ದೇಶಗಳು

ಸಾರ್ವಜನಿಕ ಅಭಿಯಾನಗಳು ಮತ್ತು ನಿರ್ಬಂಧಗಳು

ಕೇವಲ ಭಾರತ ಮಾತ್ರವಲ್ಲದೆ, ಆಸ್ಟ್ರೇಲಿಯಾ, ನೆದರ್ಲ್ಯಾಂಡ್ಸ್ ಮತ್ತು ಯುಕೆಯಂತಹ ದೇಶಗಳು ಕೂಡ “ಪ್ರತಿ ಹನಿ ಉಳಿಸಿ” ಎಂಬಂತಹ ಬೃಹತ್ ಅಭಿಯಾನಗಳನ್ನು ಆರಂಭಿಸಿವೆ. ಪಾಕಿಸ್ತಾನದಲ್ಲಿ ರಾತ್ರಿ 8 ಗಂಟೆಯ ನಂತರ ಮಾರುಕಟ್ಟೆಗಳನ್ನು ಮುಚ್ಚುವಂತೆ ಆದೇಶಿಸಲಾಗಿದ್ದರೆ, ಈಜಿಪ್ಟ್‌ನಲ್ಲಿ ಬೀದಿ ದೀಪಗಳು ಮತ್ತು ಜಾಹೀರಾತು ಫಲಕಗಳ ವಿದ್ಯುತ್ ಬಳಕೆಗೆ ಮಿತಿ ಹೇರಲಾಗಿದೆ.

ಮಾತ್ರವಲ್ಲದೆ, ಸ್ಪೇನ್ ಮತ್ತು ಯುಕೆಯಂತಹ ದೇಶಗಳು ಸೌರಶಕ್ತಿ ಮತ್ತು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಸಬ್ಸಿಡಿ ನೀಡುವ ಮೂಲಕ ಪಳೆಯುಳಿಕೆ ಇಂಧನಗಳ (Fossil Fuels) ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿವೆ. ಬಾಂಗ್ಲಾದೇಶದಿಂದ ಹಿಡಿದು ಥಾಯ್ಲೆಂಡ್​ವರೆಗೆ ಹತ್ತಕ್ಕೂ ಹೆಚ್ಚು ದೇಶಗಳು ಎಸಿ ಟೆಂಪರೇಚರ್ ಸೆಟ್ಟಿಂಗ್​ಗೆ ಮಿತಿ ಹಾಕಿವೆ. ಕೆಲ ದೇಶಗಳು ಸರ್ಕಾರಿ ಅಧಿಕಾರಿಗಳ ಪ್ರಯಾಣಕ್ಕೆ ನಿರ್ಬಂಧಗಳನ್ನು ಹಾಕಿವೆ. ಶಾಲಾ ಕಾಲೇಜುಗಳಲ್ಲಿ ಆನ್​ಲೈನ್ ಕ್ಲಾಸ್​ಗಳಿಗೆ ಉತ್ತೇಜನ ಮಾಡಲಾಗುತ್ತಿದೆ. ಭೌತಿಕ ತರಗತಿಗಳಿಗೆ ಮಿತಿ ಹಾಕಲಾಗಿದೆ.

ಇದನ್ನೂ ಓದಿ: ಮೋದಿ ಕರೆಗೆ ಓಗೊಟ್ಟ ವಿವಿಧ ರಾಜ್ಯಗಳ ನಾಯಕರು; ಯೋಗಿಯಿಂದ ಹಿಡಿದು ರೇಖಾವರೆಗೆ ಯಾರಿಂದೇನು ಕ್ರಮ?

ಜಾಗತಿಕವಾಗಿ ಅನಿಲ ಮತ್ತು ತೈಲ ಬೆಲೆಗಳು ಏರುತ್ತಿರುವ ಈ ಸಮಯದಲ್ಲಿ, ಪ್ರಧಾನಿ ಮೋದಿಯವರು ಸಂಯಮದಿಂದ ಇಂಧನ ಬಳಸುವಂತೆ ನೀಡಿರುವ ಕರೆ ಜಾಗತಿಕ ಪ್ರವೃತ್ತಿಗೆ ಅನುಗುಣವಾಗಿದೆ. ಶ್ರೀಲಂಕಾ ಮತ್ತು ಫಿಲಿಪೈನ್ಸ್‌ನಂತಹ ದೇಶಗಳು ಈಗಾಗಲೇ ‘ಇಂಧನ ತುರ್ತು ಪರಿಸ್ಥಿತಿ’ ಘೋಷಿಸಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ, ಇಂಧನ ಉಳಿತಾಯವು ಕೇವಲ ಒಂದು ಆಯ್ಕೆಯಾಗಿ ಉಳಿಯದೆ, ದೇಶದ ಆರ್ಥಿಕ ಹಿತದೃಷ್ಟಿಯಿಂದ ಅನಿವಾರ್ಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಟೀಮ್ ಇಂಡಿಯಾಗೆ ಅನುಭವಿ ವೇಗಿ ಕಂಬ್ಯಾಕ್ ಸಾಧ್ಯತೆ! – Kannada News | Bumrah to Rest, Shami to Return for Team India

ಐಪಿಎಲ್ 2026 ಮುಗಿದ ಬೆನ್ನಲ್ಲೇ ಜೂನ್ 6 ರಿಂದ ಆರಂಭವಾಗಲಿರುವ ಅಫ್ಘಾನಿಸ್ತಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಬೌಲಿಂಗ್ ವಿಭಾಗವನ್ನು ಅಂತಿಮಗೊಳಿಸಲು ಬಿಸಿಸಿಐ (BCCI) ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮುಂದಿನ ಕೆಲವು ದಿನಗಳಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ. ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಪಂದ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಮುಖ ವೇಗಿ ಜಸ್​ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲು ಮಂಡಳಿ ಯೋಚಿಸುತ್ತಿದ್ದು, ಗಾಯದಿಂದ ಚೇತರಿಸಿಕೊಂಡಿರುವ ಹಿರಿಯ ಬೌಲರ್ ಮೊಹಮ್ಮದ್ ಶಮಿ ಅವರ ಅಂತರರಾಷ್ಟ್ರೀಯ ಪುನರಾಗಮನದ ಬಗ್ಗೆ ಈ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.

  • ಜಸ್​ಪ್ರೀತ್ ಬುಮ್ರಾ: ಈ ಪಂದ್ಯವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ವ್ಯಾಪ್ತಿಗೆ ಬರುವುದಿಲ್ಲ. ಅಲ್ಲದೆ ಐಪಿಎಲ್ ಮುಗಿದ ಕೇವಲ 6 ದಿನಗಳಲ್ಲಿ ಆರಂಭವಾಗುವುದರಿಂದ, ಬುಮ್ರಾ ಅವರಿಗೆ ವಿಶ್ರಾಂತಿ ನೀಡಲು ಮಂಡಳಿ ನಿರ್ಧರಿಸಿದೆ. ವರ್ಷಾಂತ್ಯದ ಪ್ರಮುಖ 9 WTC ಟೆಸ್ಟ್ ಪಂದ್ಯಗಳಿಗಾಗಿ ಅವರನ್ನು ಕಾಯ್ದಿರಿಸಲಾಗುವುದು.
  • ಮೊಹಮ್ಮದ್ ಶಮಿ: ಗಾಯದಿಂದ ಚೇತರಿಸಿಕೊಂಡಿರುವ ಮೊಹಮ್ಮದ್ ಶಮಿ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿ ಕರೆತರುವ ಬಗ್ಗೆ ಬಿಸಿಸಿಐ ತೀವ್ರ ಚರ್ಚೆ ನಡೆಸುತ್ತಿದೆ. ಮೊಹಮ್ಮದ್ ಸಿರಾಜ್ ಜೊತೆ ಶಮಿ ಬೌಲಿಂಗ್ ಮುನ್ನಡೆಸುವ ಸಾಧ್ಯತೆ ದಟ್ಟವಾಗಿದೆ.
  • ಯುವ ವೇಗಿಗಳಿಗೆ ಸೂಚನೆ: ಆಯ್ಕೆಯ ರೇಸ್‌ನಲ್ಲಿರುವ ಯುವ ವೇಗಿಗಳು ತಮ್ಮ ಬೌಲಿಂಗ್ ವರ್ಕ್‌ಲೋಡ್ (ಕಾರ್ಯಭಾರ) ಅನ್ನು ಹೆಚ್ಚಿಸಿಕೊಳ್ಳುವಂತೆ ಬಿಸಿಸಿಐ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದೆ.
  • ಹೊಸ ಮುಖಗಳಿಗೆ ಅವಕಾಶ: ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದರೆ, ದೇಶಿ ಕ್ರಿಕೆಟ್‌ನಲ್ಲಿ ಮಿಂಚಿರುವ ಆಖಿಬ್ ನಬಿ, ಅನ್ಶುಲ್ ಕಂಬೋಜ್ ಮತ್ತು ಗುರ್ನೂರ್ ಬ್ರಾರ್ ಅವರಿಗೆ ಭಾರತ ತಂಡದ ಪರ ಆಡುವ ಅವಕಾಶ ಸಿಗಬಹುದು.

 ಭಾರತ vs ಅಫ್ಘಾನಿಸ್ತಾನ್ 2026 ಸರಣಿ ವೇಳಾಪಟ್ಟಿ:

  •  ಜೂನ್ 6: ಏಕೈಕ ಟೆಸ್ಟ್ ಪಂದ್ಯ | ಮುಲ್ಲನ್‌ಪುರ, ನ್ಯೂ ಚಂಡೀಗಢ್.
  •  ಜೂನ್ 14: ಮೊದಲ ಏಕದಿನ ಪಂದ್ಯ  | ಹೆಚ್​​ಪಿಸಿಎ ಮೈದಾನ, ಧರ್ಮಶಾಲಾ.
  •  ಜೂನ್ 17: ಎರಡನೇ ಏಕದಿನ ಪಂದ್ಯ | ಏಕಾನ ಸ್ಟೇಡಿಯಂ, ಲಕ್ನೋ.
  •  ಜೂನ್ 20: ಮೂರನೇ ಏಕದಿನ ಪಂದ್ಯ| ಚೆಪಾಕ್ ಸ್ಟೇಡಿಯಂ, ಚೆನ್ನೈ.

ಇದನ್ನೂ ಓದಿ: IPL 2026: ಈ 4 ತಂಡಗಳೇ ಪ್ಲೇಆಫ್ ಆಡಲಿದೆ: ಮೊಹಮ್ಮದ್ ಶಮಿ ಭವಿಷ್ಯ

ಒಟ್ಟಿನಲ್ಲಿ ಮುಂದಿನ ಪ್ರಮುಖ ವಿದೇಶಿ ಪ್ರವಾಸಗಳ ದೃಷ್ಟಿಯಿಂದ ಬಿಸಿಸಿಐ ಯುವ ಆಟಗಾರರ ಸಾಮರ್ಥ್ಯವನ್ನು ಪರೀಕ್ಷಿಸಲು ಅಫ್ಘಾನಿಸ್ತಾನ್ ವಿರುದ್ಧದ ಸರಣಿಯು ಅತ್ಯುತ್ತಮ ವೇದಿಕೆಯಾಗಿದೆ. ಅದರಲ್ಲೂ ಜಸ್​ಪ್ರೀತ್ ಬುಮ್ರಾ ಅವರ ಗೈರುಹಾಜರಿಯಲ್ಲಿ ಭಾರತದ ಬೌಲಿಂಗ್ ಪಡೆ ಅಫ್ಘಾನ್ ಬ್ಯಾಟರ್‌ಗಳನ್ನು ಹೇಗೆ ಕಟ್ಟಿಹಾಕುತ್ತದೆ ಎಂಬುದೇ ಈಗ ದೊಡ್ಡ ಕುತೂಹಲ. ಹೀಗಾಗಿ ಈ ಸರಣಿಯಲ್ಲಿ ಜಿದ್ದಾಜಿದ್ದಿನ ಪೈಪೋಟಿಯನ್ನು ನಿರೀಕ್ಷಿಸಬಹುದು.

Source link

ಬೆಳಗಾವಿ ಪಾಲಿಕೆಯಲ್ಲಿ ಗಡಿ ಸಮರ; ‘ಕರ್ನಾಟಕ ಪರ ಗೊತ್ತುವಳಿ’ ಮಂಡನೆ ವೇಳೆ ಎಂಇಎಸ್ ಸದಸ್ಯರ ಕಿರಿಕ್! – Kannada News | Belagavi City Corporation: Karnataka Resolution Sparks MES Clash and Border Row

ಬೆಳಗಾವಿ, ಮೇ.13: ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯು ಇಂದು (ಮೇ13) ಕನ್ನಡ ಮತ್ತು ಮರಾಠಿ ಸದಸ್ಯರ ನಡುವಿನ ತೀವ್ರ ವಾಗ್ವಾದಕ್ಕೆ ಸಾಕ್ಷಿಯಾಯಿತು. “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂಬ ಗೊತ್ತುವಳಿಯನ್ನು ಸ್ವೀಕರಿಸುವ ವಿಚಾರದಲ್ಲಿ ಎಂಇಎಸ್ (MES) ಮತ್ತು ಕನ್ನಡ ಪರ ಸದಸ್ಯರ ನಡುವೆ ಭಾರಿ ಗದ್ದಲ ಏರ್ಪಟ್ಟಿತು. ಇದೀಗ ಇದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಕನ್ನಡ ಪರ ಸದಸ್ಯ ರಮೇಶ್ ಸೊಂಟಕ್ಕಿ ಅವರು, “ಮಹಾಜನ್ ವರದಿ ಅಂತಿಮ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಗೊತ್ತುವಳಿಯನ್ನು ಪಾಲಿಕೆ ಅಧಿಕೃತವಾಗಿ ಸ್ವೀಕರಿಸಬೇಕು” ಎಂದು ವಿಷಯ ಮಂಡಿಸಿದರು. ಈ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಎಂಇಎಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, “ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದೆ, ಹೀಗಿರುವಾಗ ಗೊತ್ತುವಳಿ ಮಂಡಿಸಲು ಸಾಧ್ಯವಿಲ್ಲ” ಎಂದು ಉದ್ಧಟತನ ತೋರಿದರು. ಇದು ಕನ್ನಡ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.

ಸಭೆಯಲ್ಲಿ ಹಾಜರಿದ್ದ ಕಾನೂನು ತಜ್ಞರು, ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಈಗಲೇ ಗೊತ್ತುವಳಿ ಸ್ವೀಕರಿಸಲು ಅವಕಾಶವಿಲ್ಲ ಎಂದರು. ಇದಕ್ಕೆ ತಿರುಗೇಟು ನೀಡಿದ ರಮೇಶ್ ಸೊಂಟಕ್ಕಿ, ಕರ್ನಾಟಕ ವಿಧಾನಸಭೆಯಲ್ಲೇ ಆರು ಬಾರಿ ಇಂತಹ ಗೊತ್ತುವಳಿ ಅಂಗೀಕಾರವಾಗಿದೆ ಎಂದು ನೆನಪಿಸಿದರು. ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿದ ಮೇಯರ್ ಪ್ರೀತಿ ಕಾಮಕರ ಅವರು, “ವಿಷಯ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಈ ಕುರಿತು ಸರ್ಕಾರದ ಅಭಿಪ್ರಾಯ ಪಡೆಯಲಾಗುವುದು” ಎಂದು ರೂಲಿಂಗ್ ನೀಡಿದರು.

ಇದನ್ನೂ ಓದಿ: ಕೊರಗಜ್ಜ ಸರ್ಕಲ್​​ ವಿವಾದ: ಯು.ಟಿ. ಖಾದರ್​​ಗೆ ಘೇರಾವ್​ ಹಾಕಿದ್ದವರ ವಿರುದ್ಧ FIR

ಇದೇ ವೇಳೆ, ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಶ್ರೀನಿವಾಸ ತಾಳೂರ್ಕರ್ ನೇತೃತ್ವದಲ್ಲಿ ಪಾಲಿಕೆಗೆ ಮುತ್ತಿಗೆ ಹಾಕಲು ಯತ್ನಿಸಿದರು. “ಬೆಳಗಾವಿ ಕರ್ನಾಟಕದ್ದು” ಎಂದು ಘೋಷಣೆ ಕೂಗುತ್ತಾ ಸಭೆಗೆ ನುಗ್ಗಲು ಪ್ರಯತ್ನಿಸಿದ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು. ನಂತರ ಮೇಯರ್ ಮತ್ತು ಉಪಮೇಯರ್ ಸ್ಥಳಕ್ಕೆ ಬಂದು ಹೋರಾಟಗಾರರಿಂದ ಮನವಿ ಸ್ವೀಕರಿಸಿದರು. ಆಡಳಿತ ಪಕ್ಷದಲ್ಲಿರುವ ಬಿಜೆಪಿ ಮತ್ತು ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ ಸದಸ್ಯರ ನಡುವೆ ಈ ವಿಚಾರದಲ್ಲಿ ಒಮ್ಮತವಿದ್ದರೂ, ಎಂಇಎಸ್ ಸದಸ್ಯರ ನಡೆಯಿಂದಾಗಿ ಪಾಲಿಕೆ ಸಭೆ ರಣರಂಗವಾಗಿ ಪರಿಣಮಿಸಿತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Morning Ritual: ಬೆಳಗಿನ ಜಾವ ಹೊಸಿಲಿಗೆ ನೀರು ಚಿಮುಕಿಸುವುದು ಬರಿ ಸಂಪ್ರದಾಯವಲ್ಲ; ಇದರ ಹಿಂದಿದೆ ಅದ್ಭುತ ವೈಜ್ಞಾನಿಕ ರಹಸ್ಯ! – Kannada News | Morning Water Ritual: Benefits of Sprinkling Water at Home Entrance for Positivity

ಬೆಳಗಿನ ಜಾವ ಮನೆಯ ಮುಂದೆ ನೀರು ಚಿಮುಕಿಸುವುದುImage Credit source: gemini ai

ಪಂಚಭೂತಗಳಲ್ಲಿ ನೀರು ಅತ್ಯಂತ ಪ್ರಮುಖವಾದ ಅಂಶವಾಗಿದೆ. ಆದರೆ, ಮನೆಯ ಮುಂದೆ ಬೆಳಗಿನ ಜಾವ ನೀರು ಚಿಮುಕಿಸುವುದು, ತೊಳೆಯುವುದು ಅಥವಾ ಸುರಿಯುವುದರ ಹಿಂದಿನ ಮಹತ್ವವೇನು ಎಂಬ ಪ್ರಶ್ನೆ ಅನೇಕರಿಗೆ ಮೂಡಬಹುದು. ಇದು ಕೇವಲ ಸಂಪ್ರದಾಯ ಅಥವಾ ಆಚರಣೆಯಲ್ಲ, ಇದರ ಹಿಂದೆ ವೈಜ್ಞಾನಿಕ, ಧಾರ್ಮಿಕ ಮತ್ತು ಜ್ಯೋತಿಷ್ಯಶಾಸ್ತ್ರದ ಆಧಾರವಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಬೆಳಗಿನ ಜಾವ ಗೃಹಿಣಿಯು ಮನೆಯ ಮುಖ್ಯ ದ್ವಾರ ಅಥವಾ ಗೇಟಿನ ಮುಂದೆ ಶುದ್ಧ ನೀರನ್ನು ಚಿಮುಕಿಸುವುದು ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿರುವ ಅಭ್ಯಾಸ. ಬಾಡಿಗೆ ಮನೆ ಅಥವಾ ಸ್ವಂತ ಮನೆಯಾಗಲಿ, ಈ ಸರಳ ಕಾರ್ಯದಿಂದ ಹಲವಾರು ಪ್ರಯೋಜನಗಳಿವೆ ಎಂದು ನಂಬಲಾಗಿದೆ. ಯಾವುದೇ ಶುಭ ಕಾರ್ಯವನ್ನು ಆರಂಭಿಸುವ ಮುನ್ನ ಗಂಗೆ ಪೂಜೆ ಮಾಡುವುದು ಅಥವಾ “ಅಪವಿತ್ರೋ ಪವಿತ್ರೋವಾ ಸರ್ವಾವಸ್ಥಾಂಗತೋಪಿವಾ ಯಸ್ಮರೇತ್ ಪುಂಡರೀಕಾಕ್ಷಂ ಸಬಾಹ್ಯಾಭ್ಯಂತರಃ ಶುಚಿಹಿ” ಮಂತ್ರವನ್ನು ಪಠಿಸಿ ನೀರನ್ನು ಪ್ರೋಕ್ಷಿಸಿ ಪವಿತ್ರಗೊಳಿಸುವುದು ನಮ್ಮ ಸಂಸ್ಕೃತಿಯ ಭಾಗವಾಗಿದೆ.

ವೈಜ್ಞಾನಿಕವಾಗಿ ಹೇಳುವುದಾದರೆ, ಮನೆಯ ಮುಂದೆ ನೀರನ್ನು ಚಿಮುಕಿಸುವುದರಿಂದ ಧೂಳು ಮತ್ತು ಮಣ್ಣು ನಿವಾರಣೆಯಾಗಿ ಸ್ವಚ್ಛತೆ ಕಾಪಾಡಲಾಗುತ್ತದೆ. ಇದು ವಾತಾವರಣವನ್ನು ತಂಪಾಗಿರಿಸಿ, ಸೊಳ್ಳೆ, ನೊಣಗಳಂತಹ ಕ್ರಿಮಿಕೀಟಗಳನ್ನು ದೂರವಿಡುತ್ತದೆ. ಸ್ವಚ್ಛ ಮತ್ತು ತಂಪಾದ ಪರಿಸರವು ಉತ್ತಮ ಆರೋಗ್ಯಕ್ಕೆ ಪೂರಕವಾಗಿದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ

ಆಧ್ಯಾತ್ಮಿಕವಾಗಿ ಮತ್ತು ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಆಚರಣೆಯು ಹೆಚ್ಚು ಮಹತ್ವ ಪಡೆಯುತ್ತದೆ. ಮನುಷ್ಯನು ಸುಖ, ನೆಮ್ಮದಿ, ಅದೃಷ್ಟ ಮತ್ತು ಉತ್ತಮ ಕುಟುಂಬ ಜೀವನವನ್ನು ಬಯಸುತ್ತಾನೆ. ಆದರೆ ನಮ್ಮ ಸುತ್ತಲೂ ದುಷ್ಟ ಗ್ರಹಗಳ ಪ್ರಭಾವ ಮತ್ತು ನಕಾರಾತ್ಮಕ ಶಕ್ತಿಗಳು ಇರುತ್ತವೆ ಎಂದು ನಂಬಲಾಗಿದೆ. ಬೆಳಗಿನ ಜಾವ ನೀರನ್ನು ಪ್ರೋಕ್ಷಣೆ ಮಾಡುವುದರಿಂದ ಈ ನಕಾರಾತ್ಮಕ ಶಕ್ತಿಗಳು ಮತ್ತು ದುಷ್ಟ ಗ್ರಹಗಳ ಪ್ರಭಾವವನ್ನು ಹೋಗಲಾಡಿಸಬಹುದು. “ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತಿ ನರ್ಮದೆ ಸಿಂಧು ಕಾವೇರಿ ಜಲಸ್ಮಿನ್ ಸನ್ನಿಧಿಂ ಕುರುಂ” ಎಂಬ ಮಂತ್ರವನ್ನು ಪಠಿಸುತ್ತಾ ನೀರನ್ನು ಚಿಮುಕಿಸುವುದು ಗಂಗಾ ಸ್ನಾನ ಮಾಡಿದಷ್ಟು ಪುಣ್ಯ ನೀಡುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಪಾಪ ನಿವಾರಣೆಯಾಗಿ ಸಕಾರಾತ್ಮಕ ಶಕ್ತಿ ವೃದ್ಧಿಯಾಗುತ್ತದೆ.

ನಮ್ಮ ಪೂರ್ವಿಕರಿಗೆ ತರ್ಪಣ ನೀಡಲು ಮತ್ತು ದೇವರಿಗೆ ನೈವೇದ್ಯ ಅರ್ಪಿಸುವಾಗಲೂ ನೀರನ್ನು ಬಳಸುತ್ತೇವೆ. ಇದು ನೀರಿನ ಪವಿತ್ರತೆ ಮತ್ತು ಮಹತ್ವವನ್ನು ಎತ್ತಿ ತೋರಿಸುತ್ತದೆ. ಅಪಾರ್ಟ್ಮೆಂಟ್‌ನಲ್ಲಿ ವಾಸಿಸುವವರು ಅಥವಾ ಮನೆಯ ಮುಂದೆ ನೀರು ಹಾಕಲು ಅಸಾಧ್ಯವಾದವರು ತಮ್ಮ ಹೊಸಿಲಿನ ಮೇಲೆ ಮೂರು ಬೆರಳುಗಳಿಂದ ಮೂರು ಬಾರಿ ನೀರನ್ನು ಚಿಮುಕಿಸಬಹುದು. ಹೀಗೆ ಮಾಡುವುದರಿಂದ ಸಂಧ್ಯಾಕಾಲದವರೆಗೆ ಯಾವುದೇ ದುಷ್ಟ ಗ್ರಹಗಳು ಅಥವಾ ನಕಾರಾತ್ಮಕ ಶಕ್ತಿಗಳು ಮನೆ ಪ್ರವೇಶಿಸುವುದಿಲ್ಲ ಎಂದು ನಂಬಲಾಗಿದೆ. ರಾತ್ರಿ ಬಾಗಿಲ ಬಳಿ ಸುಳಿದಾಡುವ ದುಷ್ಟ ಶಕ್ತಿಗಳು ಬಾಗಿಲು ತೆಗೆದ ತಕ್ಷಣ ನೀರಿನ ಪ್ರೋಕ್ಷಣೆ ಕಂಡರೆ ದೂರವಾಗುತ್ತವೆ. ಇದು ಮನೆಯಲ್ಲಿ ದೃಷ್ಟಿ ದೋಷಗಳನ್ನು ತಡೆಯುತ್ತದೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:50 pm, Wed, 13 May 26

Source link

ಹುಬ್ಬಳ್ಳಿಯಲ್ಲಿ ಅರೆಬೆತ್ತಲೆ ಕಳ್ಳರ ಹಾವಳಿ, ಜೈನ ಮಂದಿರಗಳೇ ಟಾರ್ಗೆಟ್: ಚಡ್ಡಿ ಗ್ಯಾಂಗ್ ಕೃತ್ಯದ ಶಂಕೆ – Kannada News | Hubballi Jain Temple Theft: Chaddi Gang Suspected as 3kg Silver Ornaments Stolen in Hosur

ಹುಬ್ಬಳ್ಳಿಯಲ್ಲಿ ಕಳ್ಳರ ಹಾವಳಿImage Credit source: tv9

ಹುಬ್ಬಳ್ಳಿ, ಮೇ 13: ಹುಬ್ಬಳ್ಳಿ-ಧಾರವಾಡ (Hubballi Dharawad) ಅವಳಿ ನಗರದಲ್ಲಿ ಕಳೆದ ಕೆಲವು ತಿಂಗಳಿಂದ ಶಾಂತವಾಗಿದ್ದ ‘ಚಡ್ಡಿ ಗ್ಯಾಂಗ್ (Chaddi Gang)’ ಈಗ ಮತ್ತೆ ಸಕ್ರಿಯವಾಗಿರುವ ಆತಂಕ ಎದುರಾಗಿದೆ. ಅದರಲ್ಲೂ ವಿಶೇಷವಾಗಿ ಜೈನ ಮಂದಿರಗಳನ್ನೇ ಗುರಿಯಾಗಿಸಿಕೊಂಡು ಸರಣಿ ಕಳ್ಳತನಗಳು ನಡೆಯುತ್ತಿದ್ದು, ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ. ಮಂಗಳವಾರ ರಾತ್ರಿ ಹುಬ್ಬಳ್ಳಿಯ ಹೊಸರು ಬಡಾವಣೆಯಲ್ಲಿರುವ ಜೈನ ಮಂದಿರಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳನ್ನು ದೋಚಿದ್ದಾರೆ.

ಮುಖ್ಯಾಂಶಗಳು

  • ಹುಬ್ಬಳ್ಳಿಯ ಹೊಸರು ಜೈನ ಮಂದಿರದಲ್ಲಿ ಕಳ್ಳತನ
  • ಸುಮಾರು 3 ಕೆಜಿ ಬೆಳ್ಳಿ ಆಭರಣ ಹಾಗೂ ಹುಂಡಿ ಹಣ ಲೂಟಿ.
  • ಸಿಸಿಟಿವಿ ವೈರ್ ಕಟ್ ಮಾಡಿ ಚಾಣಾಕ್ಷತನ ಮೆರೆದ ಕಳ್ಳರು: ಚಡ್ಡಿ ಗ್ಯಾಂಗ್ ಕೃತ್ಯವಿರುವ ಬಗ್ಗೆ ಪೊಲೀಸರ ಶಂಕೆ.

ಜೈನ ಮಂದಿರಗಳೇ ಕಳ್ಳರ ಟಾರ್ಗೆಟ್

ಹುಬ್ಬಳ್ಳಿ-ಧಾರವಾಡದಲ್ಲಿ ಕಳೆದ ಕೆಲವು ದಿನಗಳಿಂದ ಜೈನ ಮಂದಿರಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಕಳೆದ ವಾರ ಧಾರವಾಡದ ಜೈನ ಮಂದಿರ ಹಾಗೂ ಈ ಹಿಂದೆ ಹುಬ್ಬಳ್ಳಿಯ ಗೊಬ್ಬೂರು ಬಳಿಯ ಮಂದಿರದಲ್ಲಿ ಕಳ್ಳತನವಾಗಿತ್ತು. ಈಗ ಹೊಸರು ಬಡಾವಣೆಯ ಮಂದಿರದಲ್ಲಿ ಅರೆಬೆತ್ತಲೆಯಾಗಿ ನುಗ್ಗಿದ ಮೂವರು ಕಳ್ಳರು ಗರ್ಭಗುಡಿಯಲ್ಲಿದ್ದ ಬೆಳ್ಳಿ ಆಭರಣಗಳನ್ನು ದೋಚಿದ್ದಾರೆ. ವಿಶೇಷವೆಂದರೆ, ಹುಂಡಿಯಲ್ಲಿದ್ದ ಕೇವಲ ನೋಟುಗಳನ್ನು ಮಾತ್ರ ತೆಗೆದುಕೊಂಡು ಹೋಗಿರುವ ಕಳ್ಳರು ಚಿಲ್ಲರೆ ಹಣವನ್ನು ಬಿಟ್ಟು ಹೋಗಿದ್ದಾರೆ.

ಚಡ್ಡಿ ಗ್ಯಾಂಗ್ ಸಕ್ರಿಯವಾಗಿರುವ ಶಂಕೆ

ಮಂದಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಚಲನವಲನಗಳು ಸೆರೆಯಾಗಿವೆ. ಮುಖಕ್ಕೆ ಬಟ್ಟೆ ಕಟ್ಟಿ, ಮೈಮೇಲೆ ಎಣ್ಣೆ ಸವರಿಕೊಂಡು ಅರೆಬೆತ್ತಲೆಯಾಗಿರುವ ಕಳ್ಳರ ಪೈಖರಿ ನೋಡಿದರೆ ಇದು ಕುಖ್ಯಾತ ‘ಚಡ್ಡಿ ಗ್ಯಾಂಗ್’ ಕೃತ್ಯವಿರಬಹುದು ಎಂದು ಶಂಕಿಸಲಾಗಿದೆ. ಸಿಸಿಟಿವಿ ಇರುವುದನ್ನು ಗಮನಿಸಿದ ಕಳ್ಳರು ಅದರ ವೈರ್ ಕಟ್ ಮಾಡಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ. ಈ ಗ್ಯಾಂಗ್ ಗುಜರಾತ್ ಮೂಲದವರದ್ದಾಗಿರಬಹುದು ಎಂಬ ಅನುಮಾನವೂ ಕಾಡುತ್ತಿದೆ.

ಪೊಲೀಸ್ ತನಿಖೆ ಚುರುಕು

ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ರೈಮ್ ವಿಭಾಗದ ಡಿಸಿಪಿ ರವೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅವಳಿ ನಗರದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದು, ಕಳ್ಳರ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:26 pm, Wed, 13 May 26

Source link

ವಯನಾಡು ‘ಕೈ’ ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ರಾರಾಜಿಸಿದ ಪೋಸ್ಟರ್​​!

ತಿರುವನಂತಪುರಂ, ಮೇ 13: ವಯನಾಡು ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿ ಹೊರಗೆ ಬುಧವಾರ ರಾಹುಲ್​​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧದ ಸಂದೇಶಗಳಿರುವ ಪೋಸ್ಟರ್‌ಗಳು ರಾರಾಜಿಸಿವೆ. ರಾಹುಲ್ ಮತ್ತು ಪ್ರಿಯಾಂಕಾ, ವಯನಾಡ್‌ನ್ನು ಮರೆತುಬಿಡಿ. ನೀವು ಮತ್ತೆ ಇಲ್ಲಿಂದ ಗೆಲ್ಲುವುದಿಲ್ಲ ಎಂದು ಬರೆದಿದೆ. ಮತ್ತೊಂದು ಪೋಸ್ಟರ್‌ನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಸಿ, ವೇಣುಗೋಪಾಲ್​​ ಅವರನ್ನು ಉಲ್ಲೇಖಿಸಿ, ರಾಹುಲ್, ಕೆಸಿ ನಿಮ್ಮ ಬ್ಯಾಗ್ ಹೊರುವವರಾಗಿರಬಹುದು. ಆದರೆ ಕೇರಳದ ಜನರು ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಬರೆಯಲಾಗಿದೆ. ಮೂರನೇ ಪೋಸ್ಟರ್‌ನಲ್ಲಿ ಇದು ಎಚ್ಚರಿಕೆ ಅಲ್ಲ. ಈ ತಪ್ಪಿಗಾಗಿ ಕೇರಳ ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಉಲ್ಲೇಖಿಸಲಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಯುನೈಟೆಡ್ ಡೆಮೋಕ್ರೆಟಿಕ್​​ ಫ್ರಂಟ್​​ (ಯುಡಿಎಫ್​​) ಭರ್ಜರಿ ಗೆಲುವು ಸಾಧಿಸಿದ್ದರೂ, ಕೇರಳ ಮುಖ್ಯಮಂತ್ರಿಯ ಹೆಸರನ್ನು ಘೋಷಿಸುವಲ್ಲಿ ವಿಳಂಬವಾಗಿರುವುದರಿಂದ ಅಸಮಾಧಾನ ಹೆಚ್ಚಾಗಿದೆ. ವರದಿಗಳ ಪ್ರಕಾರ, 140 ಸದಸ್ಯರ ವಿಧಾನಸಭೆಯಲ್ಲಿ UDF 102 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆದ ಎಂಟನೇ ದಿನ ಈ ಪೋಸ್ಟರ್‌ಗಳು ಕಾಣಿಸಿಕೊಂಡಿವೆ. ಈ ನಡುವೆ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಆಯ್ಕೆ ಕುರಿತ ಚರ್ಚೆಯನ್ನು ಮುಂದುವರಿಸಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ – Kannada News | Dileep Raj’s brother talks about actor’s final rituals

ಕನ್ನಡ ಕಿರುತೆರೆ (Serial) ಮತ್ತು ಸಿನಿಮಾಗಳಲ್ಲಿ ಎರಡು ದಶಕಗಳಿಗೂ ಹೆಚ್ಚು ಸಮಯದಿಂದ ಸೇವೆ ಸಲ್ಲಿಸಿಕೊಂಡು ಬಂದಿದ್ದ ಖ್ಯಾತ ನಟ ದಿಲೀಪ್ ರಾಜ್ ಇಂದು (ಮೇ 13) ನಿಧನ ಹೊಂದಿದ್ದಾರೆ. ಹೃದಯಾಘಾತದಿಂದ ಅವರು ನಿಧನ ಹೊಂದಿದ್ದು, ಸಿನಿಮಾ ಮತ್ತು ಕಿರುತೆರೆಯ ಅನೇಕ ಸೆಲೆಬ್ರಿಟಿಗಳು, ದಿಲೀಪ್ ಅವರ ಆಪ್ತ ಸ್ನೇಹಿತರು, ಕುಟುಂಬದವರು ಇಂದು ದಿಲೀಪ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆಗೆ ನೋವಿನಲ್ಲೇ ಮಾತನಾಡಿದ ದಿಲೀಪ್ ಅವರ ಅಣ್ಣ, ಈ ಸಂಕಷ್ಟದ ಕ್ಷಣದಲ್ಲಿ ಜೊತೆಗೆ ನಿಂತ ದಿಲೀಪ್ ಸ್ನೇಹಿತರಿಗೆ ಧನ್ಯವಾದ ಹೇಳಿದ ಜೊತೆಗೆ ದಿಲೀಪ್ ಅಂತ್ಯ ಸಂಸ್ಕಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link