Category Archives: Blog

Your blog category

TV9 Kannada News Live: ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ; ಮೋದಿ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ ಹಾಕಿದ್ಯಾರು? – Kannada News | TV9 Kannada News Live: Dearness Allowance Hike for State Government Employees; Bomb Threat to PM Modi Event Investigated

ಬೆಂಗಳೂರು, ಮೇ 11: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕಾರ್ಯಕ್ರಮದ ವೇಳೆ ಬಾಂಬ್ ಬೆದರಿಕೆ (Bomb Threat) ಹಾಕಿದ ಪ್ರಕರಣದ ತನಿಖೆಯನ್ನು ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಲೋಹಿತ್​​ ಎಂಬಾತ ಬಾಂಬ್ ಬೆದರಿಕೆ ಹಾಕಿದ್ದ. ಬಳಿಕ ಪರಿಶೀಲನೆ ನಡೆಸಿ ಆತನನ್ನು ಬಂಧಿಸಿದ್ದಾರೆ. ಬಂಧಿತ ಲೋಹಿತ್ ಮನೆಯಲ್ಲಿ ಇಂದು ಕೋರಮಂಗಲ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಜಂಟಿಯಾಗಿ ಶೋಧ ಮಾಡಿದ್ದಾರೆ. ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ,  ಲೋಹಿತ್ ಸದಾ ನಶೆಯಲ್ಲಿರುತ್ತಿದ್ದ ಮತ್ತು ಮನೆಯಲ್ಲಿ ಒಬ್ಬೊಬ್ಬನೇ ಕಿರುಚಾಡುತ್ತಿದ್ದ ಎಂದು ತಿಳಿದುಬಂದಿದೆ. ಸದ್ಯ ಆರೋಪಿಯ ಡೈರಿ ಹಾಗೂ ಮೊಬೈಲ್ ಫೋನ್‌ ಅನ್ನು ವಶಕ್ಕೆ ಪಡೆದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಮುಖ್ಯಾಂಶಗಳು

  • ಪ್ರಧಾನಿ ಮೋದಿ ಕಾರ್ಯಕ್ರಮದ ವೇಳೆ ಬಾಂಬ್ ಬೆದರಿಕೆ ಪ್ರಕರಣದ ತನಿಖೆ ಚುರುಕು​​
  • ಕರ್ನಾಟಕ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ 1.5ರಷ್ಟು ಹೆಚ್ಚಿದ ಸರ್ಕಾರ
  • ದಳಪತಿ ವಿಜಯ್ ಸಂಭಾವನೆ ಎಷ್ಟು ಗೊತ್ತಾ?

ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡಿದ ಸರ್ಕಾರ: ತುಟ್ಟಿಭತ್ಯೆ ಶೇ.1.5ರಷ್ಟು ಹೆಚ್ಚಳ

ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡಿದ್ದು, ತುಟ್ಟಿಭತ್ಯೆಯನ್ನು ಶೇ.1.5ರಷ್ಟು ಹೆಚ್ಚಿಸಿ ಸೋಮವಾರ ಆದೇಶ ಹೊರಡಿಸಿದೆ. ಪ್ರಸ್ತುತ ಶೇ.14.25ರಷ್ಟಿರುವ ತುಟ್ಟಿಭತ್ಯೆಯನ್ನು ಶೇ.15.75ಕ್ಕೆ ಹೆಚ್ಚಿಸಲಾಗಿದೆ. ಈ ಹೆಚ್ಚಳವು 2026ರ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. 2024ರ ಪರಿಷ್ಕೃತ ವೇತನ ಶ್ರೇಣಿಯನ್ನು ಪಡೆಯುತ್ತಿರುವ ಸರ್ಕಾರಿ ನೌಕರರಿಗೆ ಈ ಪರಿಷ್ಕೃತ ತುಟ್ಟಿಭತ್ಯೆ ಅನ್ವಯವಾಗಲಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಅಡುಗೆ ಎಣ್ಣೆ ದರ ಪ್ರತಿ ಲೀಟರ್‌ಗೆ 3 ರೂ ಏರಿಕೆ: ಕಡಿಮೆ ಬಳಕೆ ಮೋದಿ ಕರೆ

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ & ಜಾಗತಿಕ ತೈಲ ಮಾರ್ಗವಾದ ಹೊರ್ಮುಜ್ ಬಂದ್ ಆಗಿ ಜಗತ್ತೇ ಸಂಕಷ್ಟದ ಸುಳಿಗೆ ಸಿಲುಕಿದೆ.. ಭಾರತಕ್ಕೂ ಕೂಡ ತೈಲ ಅಭಾವದ ಹೊಡೆತ ಬಿದ್ದಿದೆ. ಈ ಮಧ್ಯೆ ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ದರವು ಪ್ರತಿ ಲೀಟರ್‌ಗೆ 3 ರೂಪಾಯಿಗಳಷ್ಟು ಏರಿಕೆಯಾಗಿದೆ. ಈ ಹಿಂದೆ ಲೀಟರ್‌ಗೆ 138 ರೂಪಾಯಿ ಇದ್ದ ಅಡುಗೆ ಎಣ್ಣೆಯ ಬೆಲೆ ಇದೀಗ 141 ರೂಪಾಯಿಗೆ ತಲುಪಿದೆ. ಇತ್ತ ಪ್ರಧಾನಿ ಮೋದಿ ಕೂಡ ಅಡುಗೆ ಎಣ್ಣೆ ಕಡಿಮೆ ಬಳಸುವಂತೆ ಸಲಹೆ ನೀಡಿದ್ದಾರೆ.

ಸಿಎಂ ಆದ ಬಳಿಕ ದಳಪತಿ ವಿಜಯ್ ಸಂಭಾವನೆ ಎಷ್ಟು ಗೊತ್ತಾ?

ನಟ ದಳಪತಿ ವಿಜಯ್ ಅವರು ತಮಿಳುನಾಡಿನ ಸಿಎಂ ಆಗಿ ಅಧಿಕಾರ ಸ್ವೀಕರಿಸುವ ಮೂಲಕ ಚಿತ್ರರಂಗದಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಪ್ರತಿ ಸಿನಿಮಾಗೆ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಿದ್ದ ಅವರು, ಇದೀಗ ಜನರ ಸೇವೆಗಾಗಿ ಬಣ್ಣದ ಪ್ರಪಂಚವನ್ನು ತೊರೆದಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಸಾಗೋ ದಾರಿಯಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ಕೇಸ್​ಗೆ ತಮಿಳುನಾಡು ಲಿಂಕ್​​? ಸ್ಫೋಟಕ ಸುಳಿವು ಪತ್ತೆ

ಸದ್ಯ ಸಿಎಂ ಆಗಿರುವ ವಿಜಯ್ ಅವರ ಮಾಸಿಕ ಮೂಲ ವೇತನ 2,05,000 ರೂ.ಗಳಾಗಿದ್ದು, ವಿವಿಧ ಭತ್ಯೆಗಳನ್ನು ಸೇರಿಸಿದರೆ ಒಟ್ಟು ವೇತನ ಸುಮಾರು 2,85,000 ರೂ. ಆಗಲಿದೆ. ಅಂದರೆ ವಾರ್ಷಿಕವಾಗಿ ಅವರು 34.20 ಲಕ್ಷ ರೂ. ಪಡೆಯಲಿದ್ದಾರೆ. ಇದರೊಂದಿಗೆ ಅವರಿಗೆ ಸರ್ಕಾರಿ ಬಂಗಲೆ, ಬುಲೆಟ್ ಪ್ರೂಫ್ ಎಸ್‌ಯುವಿ ಕಾರು, Z+ ದರ್ಜೆಯ ಭದ್ರತೆ ಮತ್ತು ಉಚಿತ ಪ್ರಯಾಣ ಸೌಲಭ್ಯಗಳು ದೊರೆಯಲಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:15 pm, Mon, 11 May 26

Source link

ಪ್ರಧಾನಿ ಮೋದಿ ಸಲಹೆ ಪಾಲಿಸದಿದ್ರೆ ದೇಶಕ್ಕೆ ಸಂಕಷ್ಟ ಎಂದ ರುದ್ರಮೂರ್ತಿ – Kannada News | Finance Expert Rudramurthy Talks about PM Narendra Modi advised save fuel

ಬೆಂಗಳೂರು, (ಮೇ 11): ಯುದ್ಧದಿಂದ ಮತ್ತೆ ಇಂಧನ (fuel) ಸರಬರಾಜು ಕೊರತೆ ಎದುರಾಗಿದೆ. ಹಣದುಬ್ಬರ, ವಿದೇಶಿ ವಿನಿಮಯ, ಆರ್ಥಿಕತೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಮೋದಿ ಮಹತ್ವದ ಕರೆ ನೀಡಿದ್ದಾರೆ. ಸಾರ್ವಜನಿಕ ಸಾರಿಗೆ ಬಳಕೆ, ಇವಿ ವಾಹನಗಳ ಬಳಕೆ, ಅನಗತ್ಯ ಪ್ರವಾಸ ಕಡಿತ, ಮನೆಯಿಂದ ಕೆಲಸಗಳಿಂದ ಇಂಧನ ಉಳಿತಾಯಕ್ಕೆ  ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸಾರ್ವಜನಿಕರಲ್ಲಿ ನಾನಾ ಚರ್ಚೆಗಳು ಆಗುತ್ತಿವೆ. ಪೆಟ್ರೋಲ್, ಡೀಸೆಲ್ ಏರಿಕೆಯಾಗುತ್ತಾ ಎನ್ನುವ ಪ್ರಶ್ನೆಗಳು ಉದ್ಭವಿಸಿದ್ದು, ಇನ್ನು ಮೋದಿ ಹೇಳೀಕೆ ಬಗ್ಗೆ ಆರ್ಥಿಕ ತಜ್ಞ ರುದ್ರಮೂರ್ತಿ ಮಾತನಾಡಿದ್ದು, ಇಂಧನ ದರ ಏರಿಕೆಯಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ: ಚಿನ್ನ ಕೊಳ್ಳಬೇಡಿ, ವರ್ಕ್ ಫ್ರಂ ಹೋಮ್ ಮಾಡಿ, ಎಣ್ಣೆ ಹೆಚ್ಚು ಬಳಸದಿರಿ ಎಂದೆಲ್ಲಾ ಮೋದಿ ಅಂದಿದ್ದು ಯಾಕೆ? ಇಲ್ಲಿದೆ ನಿಜ ಕಾರಣ

Source link

ಚಿನ್ನದ ಮೇಲೆ ಆಮದು ಸುಂಕ ಏರಿಕೆಯಾಗುತ್ತಾ? ಆಭರಣ ಪ್ರಿಯರಿಗೆ ನಿರಾಳ ತರುವ ಸುದ್ದಿ – Kannada News | No plans to increase import duties on gold and silver: Govt source

ನವದೆಹಲಿ, ಮೇ 11: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಗಗನಕ್ಕೇರುತ್ತಿರುವ ನಡುವೆಯೇ ಕೇಂದ್ರ ಸರ್ಕಾರದ ವತಿಯಿಂದ ಮಹತ್ವದ ಸ್ಪಷ್ಟನೆಯೊಂದು ಬಂದಿದೆ. ಸದ್ಯಕ್ಕೆ ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು (Import Duty on Gold) ಹೆಚ್ಚಿಸುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ ಎಂದು ಉನ್ನತ ಸರ್ಕಾರಿ ಮೂಲಗಳು ತಿಳಿಸಿದ್ದಾಗಿ ಮನಿಕಂಟ್ರೋಲ್ ವರದಿ ಮಾಡಿದೆ.

ಕಳೆದ ಬಜೆಟ್‌ನಲ್ಲಿ ಸರ್ಕಾರವು ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇ. 15ರಿಂದ ಶೇ. 6ಕ್ಕೆ ಗಣನೀಯವಾಗಿ ಇಳಿಸಿತ್ತು. ಇದರಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗಿ ಗ್ರಾಹಕರಿಗೆ ಅನುಕೂಲವಾಗಿತ್ತು. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಆಮದು ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಸರ್ಕಾರ ಮತ್ತೆ ಸುಂಕ ಏರಿಸಬಹುದು ಎಂಬ ಆತಂಕ ಮಾರುಕಟ್ಟೆಯಲ್ಲಿ ಮನೆಮಾಡಿದೆ.

ಇದನ್ನೂ ಓದಿ: ಚಿನ್ನ ಕೊಳ್ಳಬೇಡಿ, ವರ್ಕ್ ಫ್ರಂ ಹೋಮ್ ಮಾಡಿ, ಎಣ್ಣೆ ಹೆಚ್ಚು ಬಳಸದಿರಿ ಎಂದೆಲ್ಲಾ ಮೋದಿ ಅಂದಿದ್ದು ಯಾಕೆ? ಇಲ್ಲಿದೆ ನಿಜ ಕಾರಣ

ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ನಿನ್ನೆ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುವಾಗ, ಚಿನ್ನದ ಖರೀದಿ ಮಾಡಬೇಡಿ ಎಂದು ನೇರವಾಗಿಯೇ ಜನತೆಯಲ್ಲಿ ಕೇಳಿಕೊಂಡಿದ್ದರು. ಇದು ಚಿನ್ನದ ಮೇಲಿನ ಸುಂಕವನ್ನು ಸರ್ಕಾರ ಏರಿಸಬಹುದು ಎನ್ನುವ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿರುವುದು ಹೌದು.

ಅತಿಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವ ದೇಶಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಕಳೆದ ಹಣಕಾಸು ವರ್ಷದಲ್ಲಿ ಭಾರತ 72 ಬಿಲಿಯನ್ ಡಾಲರ್​ನಷ್ಟು ಮೌಲ್ಯದ ಚಿನ್ನದ ಆಮದು ಮಾಡಿಕೊಂಡಿದೆ. ಇದರಿಂದ ಫಾರೆಕ್ಸ್ ನಿಧಿ ಸಂಗ್ರಹದ ಮೇಲೆ ಒತ್ತಡ ಬೀರಬಹುದು. ಇದೇ ಹಿನ್ನೆಲೆಯಲ್ಲಿ ಮೋದಿ ಅವರು ಚಿನ್ನದ ಖರೀದಿ ಕಡಿಮೆ ಮಾಡಿ ಎಂದು ಜನರಿಗೆ ಕರೆ ಕೊಟ್ಟಿರುವುದು.

ಇದನ್ನೂ ಓದಿ: ಜಾಗತಿಕ ತೈಲ ಸಂಕಷ್ಟದ ನಡುವೆ ಇಂಧನ ಬಳಕೆ ಕಡಿತಕ್ಕೆ ಮೋದಿ ಕರೆ: ಚಿನ್ನ ಖರೀದಿ ತಪ್ಪಿಸುವಂತೆಯೂ ಮನವಿ

ಆದರೆ, ಚಿನ್ನದ ಮೇಲೆ ಆಮದು ಸುಂಕ ಏರಿಸುವ ಇರಾದೆ ಇಲ್ಲ ಎಂದು ಸರ್ಕಾರದ ಮೂಲಗಳು ಹೇಳಿರುವುದು ಗಮನಾರ್ಹ. ಆದರೆ, ಅಧಿಕೃತವಾಗಿ ಸರ್ಕಾರದಿಂದ ಹೇಳಿಕೆ ಬರುವವರೆಗೂ ಅಂದಾಜಿಸುವುದು ಕಷ್ಟ. ಸರ್ಕಾರ ಈ ಮುಂಚೆ ಇದ್ದ ಮಟ್ಟಕ್ಕೆ ಆಮದು ಸುಂಕ ಏರಿಸಿದರೆ ಅಶ್ಚರ್ಯ ಪಡುವಂಥದ್ದು ಇಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡಿನ ಎಐಎಡಿಎಂಕೆಯಲ್ಲಿ ಬಿಕ್ಕಟ್ಟು; ಷಣ್ಮುಗಂ ನೇತೃತ್ವದ ಬಣದಿಂದ ಇಪಿಎಸ್ ರಾಜೀನಾಮೆಗೆ ಒತ್ತಾಯ – Kannada News | Tamil Nadu AIADMK MLAs split into two groups after Tamil Nadu elections Edappadi K Palaniswami

ಚೆನ್ನೈ, ಮೇ 11: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಹೀನಾಯ ಸೋಲಿನಿಂದಾಗಿ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕುವ ಮತ್ತು ಹೊಸ ಪ್ರಧಾನ ಕಾರ್ಯದರ್ಶಿಯನ್ನು ಆಯ್ಕೆ ಮಾಡುವ ಬಗ್ಗೆ ಭಾರೀ ಚರ್ಚೆ ನಡೆದಿದೆ. ಈ ನಿಟ್ಟಿನಲ್ಲಿ ಎಡಪ್ಪಾಡಿ ಪಳನಿಸ್ವಾಮಿ ವಿರುದ್ಧದ ಎಲ್ಲ ಭಿನ್ನಮತೀಯರು ಒಟ್ಟಾಗಿ ಕೆಲಸ ಮಾಡಿ ಸಾಧ್ಯವಾದಷ್ಟು ಬೇಗ ಸಾಮಾನ್ಯ ಸಮಿತಿ ಸಭೆ ಕರೆಯಲು ನಿರ್ಧರಿಸಲಾಗಿದೆ.

ಎಐಎಡಿಎಂಕೆಯ ಉನ್ನತ ಮೂಲಗಳ ಪ್ರಕಾರ, ಪಕ್ಷದ ಹಿರಿಯ ನಾಯಕ ಸಿ.ವಿ ಷಣ್ಮುಗಂ ಅವರೊಂದಿಗೆ ಇರುವ ಶಾಸಕರು, ಹಲವಾರು ಮಾಜಿ ಸಚಿವರು, 4 ಸತತ ಚುನಾವಣಾ ಸೋಲುಗಳ ನಂತರ ಇಪಿಎಸ್ ಅವರ ನಾಯಕತ್ವವನ್ನು ಇನ್ನು ಮುಂದೆ ಒಪ್ಪಿಕೊಳ್ಳಲು ಸಿದ್ಧರಿಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ: ವಿಜಯ್​ಗೆ ಸಿಗಲಿದೆಯಾ ವಿಸಿಕೆ ಬೆಂಬಲ; ಸುಳಿವು ನೀಡಿದ ಎಐಎಡಿಎಂಕೆ ನಾಯಕ ಪಳನಿಸ್ವಾಮಿ

ಎಐಎಡಿಎಂಕೆ ಏಪ್ರಿಲ್ 23ರ ವಿಧಾನಸಭಾ ಚುನಾವಣೆಯಲ್ಲಿ 234 ಸ್ಥಾನಗಳಲ್ಲಿ 47 ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಯಿತು. 2021ರ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟವು ಒಂದು ದಶಕದ ನಂತರ ಪಕ್ಷವನ್ನು ಅಧಿಕಾರದಿಂದ ಹೊರಹಾಕಿ, ಕೇವಲ 75 ಸ್ಥಾನಗಳನ್ನು ಗಳಿಸಿತು. ಅದು 2019ರ ಲೋಕಸಭಾ ಚುನಾವಣೆಯಲ್ಲಿ 39 ಸ್ಥಾನಗಳಲ್ಲಿ ಒಂದನ್ನು ಮಾತ್ರ ಗೆದ್ದಿತು ಮತ್ತು 2024ರ ಸಂಸತ್ ಚುನಾವಣೆಯಲ್ಲಿ ಶೂನ್ಯ ಸ್ಥಾನ ಗಳಿಸಿತು. ಇಪಿಎಸ್ ಪಾಳಯ ಮತ್ತು ಷಣ್ಮುಗಂ ಜೊತೆಗಿನ ನಾಯಕರ ನಡುವೆ ಹೆಚ್ಚುತ್ತಿರುವ ಭಿನ್ನಾಭಿಪ್ರಾಯವು ಎಐಎಡಿಎಂಕೆಯೊಳಗೆ ವಿಭಜನೆಯ ಭಯವನ್ನು ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ, ಷಣ್ಮುಗಂ ನೇತೃತ್ವದ ಬಣವು ನಟ-ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಜೊತೆ ಮೈತ್ರಿ ಮಾಡಿಕೊಳ್ಳಬಹುದು ಎಂಬ ವದಂತಿ ಹೆಚ್ಚುತ್ತಿತ್ತು. ಆದರೆ, ಎಐಎಡಿಎಂಕೆ ಟಿವಿಕೆ ಜೊತೆ ಕೈಜೋಡಿಸಿರಲಿಲ್ಲ. ಆದರೂ ಬೇರೆ ಪಕ್ಷಗಳ ಬೆಂಬಲ ಪಡೆದು ಟಿವಿಕೆ ಸರ್ಕಾರ ರಚಿಸಿತು. ಎಐಎಡಿಎಂಕೆ ಟಿವಿಕೆ ಜೊತೆ ಮೈತ್ರಿ ಮಾಡಿಕೊಳ್ಳದಿದ್ದಕ್ಕೆ ಪಕ್ಷದೊಳಗೆ ಹಲವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ ನಾಯಕ ದಿನಕರನ್

ಇದರ ನಡುವೆ, ತಮಿಳುನಾಡು ವಿಧಾನಸಭೆಯಲ್ಲಿ ಶಾಸಕರ ಪ್ರಮಾಣವಚನ ಸಮಾರಂಭದಲ್ಲಿ ಎಐಎಡಿಎಂಕೆ ಶಾಸಕರು 2 ಗುಂಪುಗಳಲ್ಲಿ ಕುಳಿತಿದ್ದಾರೆ. ಅವರನ್ನು ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದ 1 ಗುಂಪು ಮತ್ತು ಮಾಜಿ ಸಚಿವ ಎಸ್.ಪಿ. ವೇಲುಮಣಿ ನೇತೃತ್ವದ ಇನ್ನೊಂದು ಗುಂಪು ಎಂದು ವಿಂಗಡಿಸಲಾಗಿದೆ.

ಇದಲ್ಲದೆ, ಎರಡೂ ಗುಂಪುಗಳ ಶಾಸಕರು ವಿಧಾನಸಭೆಯೊಳಗೆ ಪ್ರತ್ಯೇಕವಾಗಿ ಕುಳಿತಿದ್ದರು. ಎಐಎಡಿಎಂಕೆಯಲ್ಲಿ ನಾಯಕತ್ವ ಸ್ಥಾನಕ್ಕಾಗಿ ಪಕ್ಷದ ಸದಸ್ಯರ ನಡುವೆ ಸಂಘರ್ಷ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇಂದು ನಡೆದ ಶಾಸಕರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಅವರ 5 ಬೆಂಬಲಿತ ಶಾಸಕರು ಒಂದು ಗುಂಪಾಗಿ ಭಾಗವಹಿಸಿದ್ದರು. ಮಾಜಿ ಸಚಿವರಾದ ಎಸ್. ಪಿ. ವೇಲುಮಣಿ ಮತ್ತು ಸಿ. ವಿ. ಷಣ್ಮುಗಂ ಶಾಸಕರನ್ನು ಒಂದು ಗುಂಪಾಗಿ ಮುನ್ನಡೆಸಿದರು. ಅವರು ವಿಧಾನಸಭೆಯೊಳಗೆ ಎರಡು ಗುಂಪುಗಳಾಗಿ ಪ್ರತ್ಯೇಕವಾಗಿ ಕುಳಿತಿದ್ದರು.

ಎಐಎಡಿಎಂಕೆಯ ಹೊಸ ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಪಿ. ವೇಲುಮಣಿ ಮತ್ತು ಎಐಎಡಿಎಂಕೆ ಶಾಸಕಾಂಗ ಸಮಿತಿ ಅಧ್ಯಕ್ಷರಾಗಿ ಸಿ.ವಿ. ಷಣ್ಮುಗಂ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ವರದಿಗಳು ಸೂಚಿಸುತ್ತವೆ. ಜಯಲಲಿತಾ ಅವರ ಮರಣದ ನಂತರ, ಎಐಎಡಿಎಂಕೆಯಲ್ಲಿನ ಬಣ ಸಂಘರ್ಷವು ಪರಿಹರಿಸಲಾಗದ ಸಮಸ್ಯೆಯಾಗಿದೆ. ಒ. ಪನ್ನೀರ್‌ಸೆಲ್ವಂ, ಟಿಟಿವಿ ದಿನಕರನ್ ಮತ್ತು ಶಶಿಕಲಾ ಅವರಂತಹ ಅನೇಕರು ಪಕ್ಷವನ್ನು ತೊರೆದ ನಂತರವೂ ಈ ಸಮಸ್ಯೆ ಕೊನೆಗೊಂಡಿಲ್ಲ. ಮುಂದುವರಿದು, ಈಗ ನಾಯಕತ್ವದ ವಿರುದ್ಧದ ಆಂತರಿಕ ಸಂಘರ್ಷ ಮತ್ತೆ ತಲೆ ಎತ್ತುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 3:38 pm, Mon, 11 May 26

Source link

PM ಮೋದಿ 8 ಸಂದೇಶ ಯಾಕೆ? ಆರ್ಥಿಕ ತಜ್ಞ ರುದ್ರಮೂರ್ತಿ ಹೇಳಿದ್ದಿಷ್ಟು – Kannada News | Finance Expert Rudramurthy Reacts about PM Modi asked Indian families not to buy gold for a year

ಬೆಂಗಳೂರು, (ಮೇ 11): ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ನಿನ್ನೆ(ಮೇ 10) ಕಾರ್ಯಕ್ರಮವೊಂದರಲ್ಲಿ ಒಂದು ವರ್ಷದವರೆಗೆ ಚಿನ್ನವನ್ನು ಖರೀದಿಸದಂತೆ ನಾಗರಿಕರಲ್ಲಿ ಮನವಿ ಮಾಡಿದ್ದರು. ಅವರ ಈ ಮನವಿ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಪ್ರಧಾನಿ ಮೋದಿ ಮನವಿ ಹಿಂದಿನ ಕಾರಣವೇನು? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಇನ್ನು ಈ ಬಗ್ಗೆ ಆರ್ಥಿಕ ತಜ್ಞ ರುದ್ರಮೂರ್ತಿ ಪತ್ರಿಕ್ರಿಯಿಸಿದ್ದು, ಮೋದಿ ಮುಂದಾಲೋಚನೆ ಮಾಡಿ ಹೇಳಿದ್ದಾರೆ. ಅದರಲ್ಲೂ ತಪ್ಪು ಕಂಡು ಹಿಡಿಬೇಡಿ. ಎಲ್ಲರೂ ಎಚ್ಚತ್ತುಕೊಳ್ಳಬೇಕು, ಕೈ ಜೋಡಿಸಬೇಕು. ವಿರೋಧ ಪಕ್ಷ ಅಥವಾ ಜನ ಸಾಮಾನ್ಯರು ಇದಕ್ಕೆ ಟೀಕೆ ವ್ಯಕ್ತಪಡಿಸೋದನ್ನ ಬಿಟ್ಟು ಅವರ ಜೊತೆ ಕೈ ಜೋಡಿಸಿ ಎಂದಿದ್ದಾರೆ.

ಕಚ್ಚಾ ತೈಲ ಮತ್ತು ಗೋಲ್ಡ್ ವಿದೇಶದಿಂದ ಆಮದು ಆಗುತ್ತಿರುವುದು. ಹೀಗಾಗಿ ಇಲ್ಲಿನ ಆರ್ಥಿಕ ಪರಿಸ್ಥಿತಿಯನ್ನ ಸುಧಾರಿಸೋಕೆ ಗಮನದಲ್ಲಿ ಇಟ್ಟುಕೊಂಡು ಈ ರೀತಿ ಹೇಳಿದ್ದಾರೆ. ತೈಲ ಬೆಲೆ ಸದ್ಯದಲ್ಲೇ ಅಧಿಕವಾಗುತ್ತೆ . ಆಗ ಹೊರೆ ಆಗುತ್ತೆ. 7 ಸಾವಿರ ಕೋಟಿ ರೂಪಾಯಿಯ ಚಿನ್ನವನ್ನ ರಫ್ತು ಮಾಡ್ಕೊಂಡಿದ್ದೀವಿ . ಇದೆಲ್ಲವನ್ನ ಕಡಿತ ಗೊಳಿಸೋದ್ರಿಂದ ರೂಪಾಯಿ ಮೌಲ್ಯ ಕಡಿತವಾಗುತ್ತೆ ಎಂದು ಹೇಳಿದರು.

ಇದನ್ನೂ ಓದಿ: ಚಿನ್ನ ಕೊಳ್ಳಬೇಡಿ, ವರ್ಕ್ ಫ್ರಂ ಹೋಮ್ ಮಾಡಿ, ಎಣ್ಣೆ ಹೆಚ್ಚು ಬಳಸದಿರಿ ಎಂದೆಲ್ಲಾ ಮೋದಿ ಅಂದಿದ್ದು ಯಾಕೆ? ಇಲ್ಲಿದೆ ನಿಜ ಕಾರಣ

Source link

ಸಿಎಂ ಆಗಾಯ್ತು, ಚಿತ್ರರಂಗದ ಈ ಸಂಪ್ರದಾಯ ಬದಲಿಸ್ತಾರಾ ದಳಪತಿ ವಿಜಯ್? – Kannada News | CM Vijay: Will Thalapathy Revive Early Morning Shows for Tamil Cinema?

ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಮೇ 10ರಂದು ನಟ ದಳಪತಿ ವಿಜಯ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಬೆಳವಣಿಗೆಯಿಂದ ತಮಿಳು ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿದ್ದು, ವಿಶೇಷವಾಗಿ ಚಿತ್ರಮಂದಿರಗಳ ಮಾಲೀಕರಲ್ಲಿ ದೊಡ್ಡ ಆಸೆ ಚಿಗುರೊಡೆದಿದೆ. ವಿಜಯ್ ಕೂಡ ಸಿನಿಮಾ ರಂಗದ ಹಿನ್ನೆಲೆ ಹೊಂದಿರುವುದರಿಂದ, ಒಂದು ದೊಡ್ಡ ಬದಲಾವಣೆ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ.

ತಮಿಳುನಾಡಿನಲ್ಲಿ ದೊಡ್ಡ ನಟರ ಸಿನಿಮಾಗಳಿಗೆ ಮುಂಜಾನೆ 4 ಅಥವಾ 5 ಗಂಟೆಗೆ ಶೋ ನೀಡುವ ಸಂಪ್ರದಾಯವಿತ್ತು. ಆದರೆ, 2023ರ ಪೊಂಗಲ್ ಸಮಯದಲ್ಲಿ ಅಜಿತ್ ಕುಮಾರ್ ಅವರ ‘ತುನಿವು’ ಚಿತ್ರದ ಸಂಭ್ರಮಾಚರಣೆ ವೇಳೆ ಅಭಿಮಾನಿಯೊಬ್ಬರು ಮೃತಪಟ್ಟ ಕಾರಣ, ಸರ್ಕಾರವು ಮುಂಜಾನೆ ಪ್ರದರ್ಶನಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಿತ್ತು.

ಸದ್ಯ ತಮಿಳುನಾಡಿನಲ್ಲಿ ಮೊದಲ ಶೋ ಆರಂಭ ಆಗೋದು ಬೆಳಿಗ್ಗೆ 9 ಗಂಟೆಯಿಂದ. ಆದರೆ ಕರ್ನಾಟಕದಲ್ಲಿ ಮುಂಜಾನೆ 6.30 ಗಂಟೆಯಿಂದ ಸಿನಿಮಾ ಪ್ರದರ್ಶನ ಮಾಡಲು ಅವಕಾಶ ಇದೆ. ಕೆಲವು ರಾಜ್ಯಗಳಲ್ಲಿ ಮಧ್ಯರಾತ್ರಿಯೂ ಶೋ ನೀಡಬಹುದು. ಆದರೆ, ಈ ಅವಕಾಶ ತಮಿಳುನಾಡಿನವರಿಗೆ ಇಲ್ಲ.

ದೊಡ್ಡ ಸಿನಿಮಾಗಳಿಗೆ ಮುಂಜಾನೆ 4 ಅಥವಾ 5 ಗಂಟೆಗೆ ಶೋಗಳನ್ನು ಆಯೋಜನೆ ಮಾಡಿದರೆ ಅವುಗಳು ಹೌಸ್​ಫುಲ್ ಆಗೋದು ಪಕ್ಕಾ. ಹೀಗಾಗಿ, ಇದು ನಿರ್ಮಾಪಕರಿಗೆ ಲಾಭ. ಸಿನಿಮಾ ರಿಲೀಸ್ ದಿನ ಥಿಯೇಟರ್​ನಲ್ಲಿ ಐದು ಶೋಗಳು ಪ್ರದರ್ಶನ ಕಂಡರೆ, ಅದರಲ್ಲೂ ಹೌಸಫುಲ್ ಆದರೆ ಥಿಯೇಟರ್ ಮಾಲೀಕರು ಕೂಡ ಖುಷಿ ಪಡುತ್ತಾರೆ. ಈ ನಿಯಮ ಮತ್ತೆ ಜಾರಿಗೆ ತರಬೇಕು ಎಂಬ ಕೋರಿಕೆ ಅನೇಕರದ್ದು.

ತಮಿಳುನಾಡು ಥಿಯೇಟರ್ ಮಾಲೀಕರು ಈ ಬಗ್ಗೆ ನಿರೀಕ್ಷೆ ಹೊರಹಾಕಿದ್ದಾರೆ. ‘ವಿಜಯ್ ಅವರು ಚಿತ್ರರಂಗದಿಂದ ಬಂದವರಾದ್ದರಿಂದ ಚಿತ್ರಮಂದಿರಗಳ ಕಷ್ಟ ಅವರಿಗೆ ಗೊತ್ತು. ಮುಂಜಾನೆ ಪ್ರದರ್ಶನಗಳು ಕೇವಲ ವ್ಯಾಪಾರವಲ್ಲ, ಅದು ಚಿತ್ರಮಂದಿರದ ಜೀವನಾಡಿ. ಓಟಿಟಿ ಪೈಪೋಟಿಯ ನಡುವೆ ಚಿತ್ರಮಂದಿರಗಳನ್ನು ಉಳಿಸಿಕೊಳ್ಳಲು ಇದು ಸಹಕಾರಿ’ ಎಂದು ಚೆನ್ನೈನ ಜಿಕೆ ಸಿನಿಮಾಸ್‌ನ ರುಬನ್ ಮಥಿವಾನನ್ ಹೇಳಿದ್ದಾರೆ.

ಇದನ್ನೂ ಓದಿ: ಸಿನಿಮಾಗೆ 100 ಕೋಟಿ ರೂ. ಸಂಭಾವನೆ ಪಡೆಯೋ ದಳಪತಿ ವಿಜಯ್ ಈಗಿನ ಸ್ಯಾಲರಿ ಎಷ್ಟು?

ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾದ ‘ಜನ ನಾಯಗನ್’ ಮೇ 21 ಅಥವಾ 28ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ಸಿನಿಮಾ ಸೋರಿಕೆಯಾಗಿದ್ದರೂ, ಅವರ ಅಭಿಮಾನಿಗಳಲ್ಲಿ ಕ್ರೇಜ್ ಕಿಂಚಿತ್ತೂ ಕಡಿಮೆಯಾಗಿಲ್ಲ. ಈ ಸಿನಿಮಾ ರಿಲೀಸ್ ವೇಳೆ ಚೆನ್ನೈನಲ್ಲಿ ಮುಂಜಾಗೃತ ಕ್ರಮ ಕೈಗೊಂಡು ಮುಂಜಾನೆಯ ಶೋಗಳನ್ನು ಆಯೋಜನೆ ಮಾಡಲಾಗುತ್ತದೆಯೇ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಮನೆಯಂಗಳಕ್ಕೆ ಬಂದ ನವಿಲಿಗೆ ಕ್ಲಾಸ್ ತೆಗೆದುಕೊಂಡ ಪುಟಾಣಿ, ಮುಂದೇನಾಯ್ತು ನೋಡಿ – Kannada News | A little girl was scolded by a peacock that came into the house

ಪುಟ್ಟ ಮಕ್ಕಳು (little kids) ತಮ್ಮ ಮನೆಯಂಗಳಕ್ಕೆ ಬಂದ ಪ್ರಾಣಿ ಪಕ್ಷಿಗಳನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತವೆ. ಆದರೆ ಈ ಪುಟಾಣಿ ಮನೆಯಂಗಳಕ್ಕೆ ಬಂದ ನವಿಲಿಗೆ ಬೈಯಲು ಶುರು ಮಾಡಿದೆ. ಪುಟಾಣಿ ಹಾಗೂ ನವಿಲಿನ ನಡುವಿನ ಬಾಂಧವ್ಯ ಸಾರುವ ಈ ವಿಡಿಯೋ ವೈರಲ್ ಆಗಿದೆ. ಈ ನೆಟ್ಟಿಗರು ಈ ದೃಶ್ಯವನ್ನು ಕಣ್ತುಂಬಿಸಿಕೊಂಡಿದ್ದಾರೆ.

Lachutti and Kunjutti ಹೆಸರಿನ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಮನೆಯಂಗಳಕ್ಕೆ ನವಿಲೊಂದು ಬಂದಿದ್ದು, ಅಲ್ಲೇ ಇದ್ದ ಹೂವಿನ ಕುಂಡವನ್ನು ಕೆಳಗೆ ಬೀಳಿಸಿದೆ. ಇದನ್ನು ಗಮನಿಸಿದ ಪುಟ್ಟ ಹುಡುಗಿಯೂ ನವಿಲಿಗೆ ಕ್ಲಾಸ್ ತೆಗೆದುಕೊಂಡಿರುವುದನ್ನು ಕಾಣಬಹುದು. ಆ ಬಳಿಕ ಪುಟಾಣಿ ಹೂವಿನ ಕುಂಡವನ್ನು ಸರಿಪಡಿಸುತ್ತಿರುವುದನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮರಳಿ ಬಾಲ್ಯವನ್ನು ನೆನಪಿಸುವಂತಿದೆ ಈ ದೃಶ್ಯ; ಪಾಠದ ನಡುವೆ ತಿಂಡಿ ತಿಂದ ಪುಟಾಣಿ

ಈ ವಿಡಿಯೋ ಎಪ್ಪತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ನವಿಲಿನ ತಪ್ಪಾಗಿದೆ ಕ್ಷಮಿಸು ಬಿಡು ಪುಟಾಣಿ ಎಂದಿದ್ದಾರೆ. ಮತ್ತೊಬ್ಬರು, ಪುಟಾಣಿ ತುಂಬಾನೇ ಗರಂ ಆಗಿದೆ ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬರು, ಮುದ್ದಾಗಿದೆ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ಮೋದಿ ಸಾಗೋ ದಾರಿಯಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ಕೇಸ್​ಗೆ ತಮಿಳುನಾಡು ಲಿಂಕ್​​? ಸ್ಫೋಟಕ ಸುಳಿವು ಪತ್ತೆ

ಬೆಂಗಳೂರು, ಮೇ 11: ನಿನ್ನೆ ಪ್ರಧಾನಿ ನರೇಂದ್ರ ಮೋದಿ ಸಾಗುವ ದಾರಿಯಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ಪ್ರಕರಣ ಮತ್ತಷ್ಟು ಗಂಭೀರ ಪಡೆದುಕೊಂಡಿದೆ. ನಿರ್ಜನ ಪ್ರದೇಶವೊಂದರ ಕಾಂಪೌಂಡ್ ಹಿಂಭಾಗದಲ್ಲಿ ಈ ಪೆಟ್ಟಿಗೆ ಸಿಕ್ಕಿದ್ದು, ಸ್ಥಳದಲ್ಲಿ ಸಿಸಿ ಕ್ಯಾಮೆರಾಗಳಿಲ್ಲ. ಸದ್ಯ ಬೆಂಗಳೂರು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಿಂದ ಸ್ಫೋಟಕಗಳನ್ನು ತಂದು ಇಡಲಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ವಿಶೇಷ ಪೊಲೀಸ್ ತಂಡವೊಂದು ತಮಿಳುನಾಡಿಗೆ ತೆರಳಿದೆ. ಇನ್ನು ಸಿಸಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಟವರ್ ಲೊಕೇಶನ್‌ಗಳನ್ನು ಪರಿಶೀಲಿಸಲಾಗುತ್ತಿದ್ದು, ಓರ್ವ ವ್ಯಕ್ತಿ ಬಾಕ್ಸ್​ನ್ನು ಇಟ್ಟು ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೋರಮಂಗಲ ಪೊಲೀಸರು ಬಂಧಿಸಿರುವ ಲೋಹಿತ್ ಎಂಬಾತನಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎನ್ನಲಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಬಾಂಗ್ಲಾ ಗಡಿಗೆ ಫೆನ್ಸಿಂಗ್​ನಿಂದ ಹಿಡಿದು ಬಿಎನ್​ಎಸ್ ಜಾರಿವರೆಗೆ ಸುವೇಂದು ಕ್ಯಾಬಿನೆಟ್ ಕೈಗೊಂಡ ಪ್ರಮುಖ ನಿರ್ಧಾರಗಳಿವು – Kannada News | Bengal CM Suvendu Adhikari Announces Major Decisions After First Cabinet Meeting

ಕೋಲ್ಕತಾ, ಮೇ 11: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಮೊನ್ನೆ ಅಧಿಕಾರ ಸ್ವೀಕರಿಸಿದ ಸುವೇಂದು ಅಧಿಕಾರಿ (Suvendu Adhikari) ಅವರು, ಇಂದು ತಮ್ಮ ಮೊದಲ ಸಚಿವ ಸಂಪುಟ ಸಭೆ ನಡೆಸಿದರು. ಸಭೆಯಲ್ಲಿ ರಾಜ್ಯದ ಅಭಿವೃದ್ಧಿ ಮತ್ತು ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಎಲ್ಲರಿಗಾಗಿ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದ್ದು, ಬಂಗಾಳ ಚುನಾವಣೆಯಲ್ಲಿ (West Bengal Assembly Elections) ಇದೇ ಮೊದಲ ಬಾರಿಗೆ ಹಿಂಸಾಮುಕ್ತವಾಗಿ ನೆರವೇರಲು ನೆರವಾದ ಚುನಾವಣಾ ಆಯೋಗ, ಪೊಲೀಸ್, ಸಿಎಪಿಎಫ್ ಹಾಗೂ ಸಾರ್ವಜನಿಕರಿಗೆ ಧನ್ಯವಾದ ಕೂಡ ಅರ್ಪಿಸಿದ್ದಾರೆ.

ಬಾಂಗ್ಲಾ ಗಡಿಗೆ ಫೆನ್ಸಿಂಗ್ ಹಾಕುವ ಕಾರ್ಯ

ಸುವೇಂದು ಅಧಿಕಾರಿ ಅವರ ಕ್ಯಾಬಿನೆಟ್ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳಲ್ಲಿ ಬಿಎಸ್​ಎಫ್​ಗೆ 600 ಎಕರೆ ಜಾಗವನ್ನು ಹಸ್ತಾಂತರಿಸಲು ಸಮ್ಮತಿಯೂ ಒಂದು. ‘45 ದಿನದಲ್ಲಿ ಬಿಎಸ್​ಎಫ್​ಗೆ ಜಮೀನು ನೀಡುತ್ತೇವೆ’ ಎಂದು ಅಧಿಕಾರಿ ಹೇಳಿದ್ದಾರೆ. ಬಾಂಗ್ಲಾದೇಶ ಗಡಿಭಾಗದಲ್ಲಿ ಫೆನ್ಸಿಂಗ್ ಹಾಕುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ. ಈ ಕ್ರಮದಿಂದ ಅಕ್ರಮ ಬಾಂಗ್ಲಾದೇಶೀ ವಲಸೆಗಳನ್ನು ತಪ್ಪಿಸಬಹುದು.

ಇದನ್ನೂ ಓದಿ: ಚಿನ್ನ ಕೊಳ್ಳಬೇಡಿ, ವರ್ಕ್ ಫ್ರಂ ಹೋಮ್ ಮಾಡಿ, ಎಣ್ಣೆ ಹೆಚ್ಚು ಬಳಸದಿರಿ ಎಂದೆಲ್ಲಾ ಮೋದಿ ಅಂದಿದ್ದು ಯಾಕೆ? ಇಲ್ಲಿದೆ ನಿಜ ಕಾರಣ

ಸುವೇಂದು ಅಧಿಕಾರಿ ಕ್ಯಾಬಿನೆಟ್ ಕೈಗೊಂಡ ಪ್ರಮುಖ ನಿರ್ಧಾರಗಳಿವು

  1. ಆಯುಷ್ಮಾನ್ ಭಾರತ್ ಜಾರಿ: ಕೇಂದ್ರ ಸರ್ಕಾರದ ಪ್ರಮುಖ ಆರೋಗ್ಯ ಯೋಜನೆಯಾದ ‘ಆಯುಷ್ಮಾನ್ ಭಾರತ್’ ಅನ್ನು ಪಶ್ಚಿಮ ಬಂಗಾಳದಲ್ಲಿ ತಕ್ಷಣದಿಂದಲೇ ಜಾರಿಗೆ ತರಲು ನಿರ್ಧರಿಸಲಾಗಿದೆ. ಇದರಿಂದ ರಾಜ್ಯದ ಲಕ್ಷಾಂತರ ಬಡ ಕುಟುಂಬಗಳಿಗೆ ಉಚಿತ ಆರೋಗ್ಯ ಸೇವೆ ಲಭ್ಯವಾಗಲಿದೆ.
  2. ಪಿಎಂ ಕಿಸಾನ್ ಸಮ್ಮಾನ್ ನಿಧಿ: ಬಂಗಾಳದ ರೈತರಿಗೆ ತಲುಪಬೇಕಿದ್ದ ಪಿಎಂ ಕಿಸಾನ್ ಯೋಜನೆಯ ಬಾಕಿ ಹಣ ಮತ್ತು ಮುಂದಿನ ಕಂತುಗಳನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗುವುದು.
  3. ಅನ್ನಪೂರ್ಣ ಯೋಜನೆ: ರಾಜ್ಯದ ಬಡವರಿಗೆ ಪೌಷ್ಟಿಕ ಆಹಾರ ನೀಡುವ ನಿಟ್ಟಿನಲ್ಲಿ ಹೊಸ ಪಡಿತರ ಯೋಜನೆಯನ್ನು ಘೋಷಿಸಲಾಗಿದೆ.
  4. ಗಡಿ ಭದ್ರತೆ: ಬಾಂಗ್ಲಾದೇಶ ಗಡಿಯಲ್ಲಿ ಒಳನುಸುಳುವಿಕೆಯನ್ನು ತಡೆಯಲು ಫೆನ್ಸಿಂಗ್ ಸೇರಿದಂತೆ ಭದ್ರತೆ ಹೆಚ್ಚಿಸಲು ಕ್ರಮ.
  5. ಮಹಿಳಾ ಸುರಕ್ಷತೆ ಮತ್ತು ಸಬಲೀಕರಣ: ಮಹಿಳೆಯರ ರಕ್ಷಣೆಗಾಗಿ ಪ್ರತಿ ಜಿಲ್ಲೆಯಲ್ಲೂ ವಿಶೇಷ ಕಾರ್ಯಪಡೆ ರಚನೆ ಮತ್ತು ಉದ್ಯೋಗಾವಕಾಶಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಲಾಗಿದೆ.
  6. ಭ್ರಷ್ಟಾಚಾರ ಮುಕ್ತ ಆಡಳಿತ: ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ನೇಮಕಾತಿ ಹಗರಣಗಳ ಬಗ್ಗೆ ಸಮಗ್ರ ತನಿಖೆ ಮತ್ತು ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲು ಸಂಪುಟ ನಿರ್ಧರಿಸಿದೆ.
  7. ಕೈಗಾರಿಕಾ ಅಭಿವೃದ್ಧಿ: ರಾಜ್ಯಕ್ಕೆ ಹೊಸ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಉದ್ಯೋಗ ಸೃಷ್ಟಿಸಲು ಏಕಗವಾಕ್ಷಿ ಯೋಜನೆಯನ್ನು ಬಲಪಡಿಸುವುದು.
  8. ಸೆನ್ಸಸ್: ಪಶ್ಚಿಮ ಬಂಗಾಳದಲ್ಲಿ ಸೆನ್ಸಸ್ ಆಪರೇಶನ್ಸ್ ಅನ್ನು ಆರಂಭಿಸಲು ಆಡಳಿತಾತ್ಮಕ ಆದೇಶ ನೀಡಲಾಗಿದೆ.
  9. ಅಧಿಕಾರಿಗಳ ತರಬೇತಿ: ಐಎಎಸ್, ಐಪಿಎಸ್, ಡಬ್ಲ್ಯುಬಿಪಿಎಸ್ ಅದಿಕಾರಿಗಳನ್ನು ತರಬೇತಿಗಾಗಿ ಇತರ ರಾಜ್ಯಗಳಿಗೆ ಕಳುಹಿಸುವ ನೀತಿಯನ್ನು ಮರಳಿ ತರಲಾಗಿದೆ. ಹಿಂದಿನ ಸರ್ಕಾರವು ಅಧಿಕಾರಿಗಳನ್ನು ಹೊರರಾಜ್ಯಗಳಲ್ಲಿ ತರಬೇತಿ ನೀಡಲು ಅನುಮತಿಸಿರಲಿಲ್ಲ.
  10. ಉದ್ಯೋಗ ನೇಮಕಾತಿ: ಹಿಂದಿನ ಸರ್ಕಾರದ ಅವಧಿಯಲ್ಲಿ ನೇಮಕಾತಿ ಅವಕಾಶಗಳಿಂದ ವಂಚಿತರಾದ ಅಭ್ಯರ್ಥಿಗಳಿಗೆ ಐದು ವರ್ಷ ವಯಸ್ಸಿನ ವಿನಾಯಿತಿಯನ್ನು ಘೋಷಿಸಲಾಗಿದೆ.
  11. ಬಿಎನ್​ಎಸ್ ಜಾರಿ: ಕೇಂದ್ರ ರೂಪಿಸಿರುವ ಭಾರತೀಯ ನ್ಯಾಯ ಸಂಹಿತೆಯನ್ನು ಹಿಂದಿನ ಸರ್ಕಾರ ಅಳವಡಿಸಿರಲಿಲ್ಲ. ಈಗ ಸುವೇಂದು ಅವರ ಕ್ಯಾಬಿನೆಟ್ ಬಿಎನ್​ಎಸ್ ಜಾರಿಗೆ ನಿರ್ದೇಶನ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಯುವ ವಾಹನ ವಿನ್ಯಾಸಕರಿಗೆ ಭರ್ಜರಿ ಅವಕಾಶ: ‘ಡಿಸೈನ್‌-ಎಕ್ಸ್‌ಥಾನ್‌ 2026’ ಸ್ಪರ್ಧೆ ಘೋಷಿಸಿದ ಮಾರುತಿ ಸುಜುಕಿ – Kannada News | Maruti Suzuki Announces Design X Thon 2026: A Golden Opportunity for Budding Vehicle Designers

‘ಡಿಸೈನ್‌-ಎಕ್ಸ್‌ಥಾನ್‌ 2026’ ಸ್ಪರ್ಧೆ ಘೋಷಿಸಿದ ಮಾರುತಿ ಸುಜುಕಿ

Image Credit source: google Gemini

ಬೆಂಗಳೂರು, ಮೇ 11: ಭಾರತದಲ್ಲಿ ವಾಹನ ವಿನ್ಯಾಸ ಕ್ಷೇತ್ರದಲ್ಲಿರುವ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಜನಪ್ರಿಯ ವಾಹನ ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (Maruti Suzuki) ಮುಂದಾಗಿದೆ. ಈ ನಿಟ್ಟಿನಲ್ಲಿ ಕಂಪನಿಯು ತನ್ನ ಜನಪ್ರಿಯ ವಿನ್ಯಾಸ ಸ್ಪರ್ಧೆಯ 2ನೇ ಆವೃತ್ತಿಯಾದ ‘ಡಿಸೈನ್‌-ಎಕ್ಸ್‌ಥಾನ್‌ 2026’ ಅನ್ನು ಅಧಿಕೃತವಾಗಿ ಘೋಷಿಸಿದೆ. ಕಳೆದ ವರ್ಷ ನಡೆದ ಮೊದಲ ಆವೃತ್ತಿಯ ಅಭೂತಪೂರ್ವ ಯಶಸ್ಸಿನ ನಂತರ, ಭಾರತದಲ್ಲಿರುವ ವಿವಿಧ ಡಿಸೈನ್ ಇನ್‌ಸ್ಟಿಟ್ಯೂಟ್‌ಗಳ ವಿದ್ಯಾರ್ಥಿಗಳನ್ನು ಈ ಸ್ಪರ್ಧೆಗೆ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಭವಿಷ್ಯದ ವಾಹನಗಳ ವಿನ್ಯಾಸ ಹೇಗಿರಬೇಕು ಎಂಬ ತಮ್ಮ ಕಲ್ಪನೆಯನ್ನು ಸ್ಪರ್ಧೆಯಲ್ಲಿ ಮಂಡಿಸಬಹುದಾಗಿದೆ.

ಮುಖ್ಯಾಂಶಗಳು

  •  ಯುವ ಪ್ರತಿಭೆಗಳಿಗಾಗಿ ಮಾರುತಿ ಸುಜುಕಿ ‘ಡಿಸೈನ್-ಎಕ್ಸ್‌ಥಾನ್ 2026’ ವಿನ್ಯಾಸ ಸ್ಪರ್ಧೆ ಘೋಷಣೆ.
  •  ಭವಿಷ್ಯದ ವಾಹನ ವಿನ್ಯಾಸ ಮಾಡುವ ವಿಜೇತರಿಗೆ 4.5 ಲಕ್ಷ ನಗದು ಬಹುಮಾನ.
  •  ಅರ್ಜಿ ಸಲ್ಲಿಸಲು ಜುಲೈ 13 ಕೊನೆಯ ದಿನ; ಇಂಟರ್ನ್‌ಶಿಪ್ ಮಾಡುವ ಸುವರ್ಣ ಅವಕಾಶ.

ಏನಿದು ಸ್ಪರ್ಧೆಯ ಥೀಮ್?

ಈ ಬಾರಿಯ ಸ್ಪರ್ಧೆಗೆ ಅತ್ಯಂತ ಕುತೂಹಲಕಾರಿ ಥೀಮ್ ನೀಡಲಾಗಿದೆ. “2036ನೇ ಇಸವಿಯಲ್ಲಿ ‘ಜೆನ್ ಜೀ’ ಮತ್ತು ‘ಆಲ್ಫಾ’ ಪೀಳಿಗೆಯ ಯುವಜನರು ಹೊಂದಲು ಬಯಸುವ ಐಕಾನಿಕ್ ವಾಹನ ವಿನ್ಯಾ,” ಎಂಬುದು ಈ ಬಾರಿಯ ಸ್ಪರ್ಧೆಯ ವಿಷಯವಾಗಿದೆ.

2035 ರಿಂದ 2040ರ ಕಾಲಘಟ್ಟಕ್ಕೆ ತಕ್ಕಂತೆ ವಾಹನಗಳು ಹೇಗಿರಬೇಕು, ಇಂದಿನ ಯುವಜನರ ಜೀವನಶೈಲಿಗೆ ಅದು ಹೇಗೆ ಹೊಂದಿಕೊಳ್ಳುತ್ತದೆ, ಪರಿಸರ ಸ್ನೇಹಿ ಅಂಶಗಳನ್ನು ಹೇಗೆ ಅಳವಡಿಸಲಾಗಿದೆ ಹಾಗೂ ವಾಹನದ ವಿನ್ಯಾಸ ಮತ್ತು ಆಧುನಿಕ ತಂತ್ರಜ್ಞಾನದ ನಡುವೆ ಹೇಗೆ ಕೊಂಡಿ ಬೆಸೆಯಲಾಗಿದೆ ಎಂಬುದರ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

ಈ ಸ್ಪರ್ಧೆಯ ಕುರಿತು ಹೆಚ್ಚಿನ ವಿವರಗಳನ್ನು ನೀಡಿರುವ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಹಿಸಾಶಿ ಟೆಕ್ಯುಚಿ “ವಾಹನ ವಿನ್ಯಾಸ ಎಂಬುದು ಕೇವಲ ಸೌಂದರ್ಯಕ್ಕೆ ಸೀಮಿತವಲ್ಲ; ಅದು ಹೊಸ ಆಲೋಚನೆಗಳು, ಸೃಜನಶೀಲತೆ ಮತ್ತು ಗ್ರಾಹಕರ ಆಯ್ಕೆಯನ್ನು ಪ್ರಭಾವಿಸುವ ಒಂದು ಕಲೆಯಾಗಿದೆ. ಮೊದಲ ಆವೃತ್ತಿಯ ಸ್ಪರ್ಧೆಯಲ್ಲಿ ಭಾರತದ ಯುವ ವಿನ್ಯಾಸಕರ ಅದ್ಭುತ ಪ್ರತಿಭೆ ನಮಗೆ ಕಾಣಲು ಸಿಕ್ಕಿತು. ಯುವಕರಿಗೆ ತಮ್ಮ ಕಲ್ಪನೆಗಳನ್ನು ವಾಸ್ತವ ರೂಪಕ್ಕೆ ತರಲು ಹಾಗೂ ಮಾರುತಿ ಸುಜುಕಿಯೊಂದಿಗೆ ಕೆಲಸ ಮಾಡಿ ಪ್ರಾಯೋಗಿಕ ಅನುಭವ ಪಡೆಯಲು ಈ ಸ್ಪರ್ಧೆ ಉತ್ತಮ ವೇದಿಕೆಯಾಗಿದೆ,” ಎಂದರು.

“ಭವಿಷ್ಯದ ವಾಹನಗಳನ್ನು ರೂಪಿಸುವಲ್ಲಿ ಯುವಕರ ಪಾತ್ರ ಬಹಳ ದೊಡ್ಡದು. ಈ ಡಿಸೈನ್‌-ಎಕ್ಸ್-ಥಾನ್ ಸ್ಪರ್ಧೆಯ ಮೂಲಕ ಭಾರತದಲ್ಲಿ ಬಲಿಷ್ಠವಾದ ವಿನ್ಯಾಸ ವ್ಯವಸ್ಥೆಯನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ,” ಎಂದು ಅವರು ತಿಳಿಸಿದರು.

ಭಾರೀ ಯಶಸ್ಸು ಕಂಡಿತ್ತು ಮೊದಲ ಆವೃತ್ತಿ

2025ರಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ 70ಕ್ಕೂ ಹೆಚ್ಚು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎಂಐಟಿ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್, ವಿಐಟಿ ವೆಲ್ಲೂರು ಮತ್ತು ಸ್ಟ್ರೇಟ್ ಸ್ಕೂಲ್ ಆಫ್ ಡಿಸೈನ್ ವಿದ್ಯಾರ್ಥಿಗಳು ವಿಜೇತರಾಗಿ ಹೊರಹೊಮ್ಮಿದ್ದರು. ಅದರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 8 ವಿದ್ಯಾರ್ಥಿಗಳು ಪ್ರಸ್ತುತ ಮಾರುತಿ ಸುಜುಕಿ ವಿನ್ಯಾಸ ತಂಡದಲ್ಲಿ 6 ತಿಂಗಳ ಇಂಟರ್ನ್‌ಶಿಪ್ ಮಾಡುತ್ತಿದ್ದಾರೆ.

ವಿಜೇತರಿಗೆ ಇದೆ ಬಂಪರ್‌ ಬಹುಮಾನ

ವಿಜೇತರಿಗೆ 4.5 ಲಕ್ಷ ರೂ. ನಗದು ಬಹುಮಾನ ಸಿಗಲಿದೆ. ಅಲ್ಲದೆ, ಟಾಪ್ 3 ತಂಡಗಳಿಗೆ ಮಾರುತಿ ಸುಜುಕಿ ವಿನ್ಯಾಸ ತಂಡದೊಂದಿಗೆ 6 ತಿಂಗಳ ಕಾಲ ಕೆಲಸ ಮಾಡುವ (ಇಂಟರ್ನ್‌ಶಿಪ್) ಅವಕಾಶ ಸಿಗಲಿದೆ.

4 ರಿಂದ 10ನೇ ಸ್ಥಾನ ಪಡೆಯುವ ತಂಡಗಳಿಗೂ ಪ್ರಶಂಸನಾ ಪತ್ರ ಹಾಗೂ ಮುಂದೆ ಇಂಟರ್ನ್‌ಶಿಪ್‌ಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಲಾಗುತ್ತದೆ. ಇದು ಅವರ ಭವಿಷ್ಯದ ವೃತ್ತಿಜೀವನಕ್ಕೆ ದೊಡ್ಡ ಮೆಟ್ಟಿಲಾಗಲಿದೆ.

ಅರ್ಜಿ ಸಲ್ಲಿಕೆ ಹೇಗೆ?

ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಇರುವ ವಿದ್ಯಾರ್ಥಿಗಳು ಜುಲೈ 13, 2026 ರೊಳಗೆ ಮಾರುತಿ ಸುಜುಕಿ ಡಿಸೈನ್‌-ಎಕ್ಸ್-ಥಾನ್‌ನ ಅಧಿಕೃತ ಲಿಂಕ್ (https://marutisuzuki.ent.box.com/s/qq6wj8scuf2jbgjjvem3tcnogdlatvs5) ಮೂಲಕ ಅರ್ಜಿ ಸಲ್ಲಿಸಬಹುದು. ಬದಲಾಗುತ್ತಿರುವ ಗ್ರಾಹಕರ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಉದಯೋನ್ಮುಖ ಪ್ರತಿಭೆಗಳನ್ನು ಬೆಳೆಸಲು ಮಾರುತಿ ಸುಜುಕಿ ಪ್ರತಿವರ್ಷ ಈ ಸ್ಪರ್ಧೆಯನ್ನು ಆಯೋಜಿಸುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:36 pm, Mon, 11 May 26

Source link