CSK vs SRH: ತವರಿನ ಕೊನೆಯ ಪಂದ್ಯದಲ್ಲೂ ಕಣಕ್ಕಿಳಿಯದ ಧೋನಿ; ನಾಯಕ ರುತುರಾಜ್ ಹೇಳಿದ್ದೇನು? – Kannada News | IPL 2026: MS Dhoni Misses CSK vs SRH; Gaikwad Confirms Injury, Hopes for Return

ಐಪಿಎಲ್ 2026 ರ 63 ನೇ ಪಂದ್ಯದಲ್ಲಿ ಸಿಎಸ್​ಕೆ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ತಂಡಗಳು ಪರಸ್ಪರ ಮುಖಾಮುಖಿಯಾಗಿವೆ. ಈ ಪಂದ್ಯ ಸಿಎಸ್​ಕೆಯ ತವರು ಮೈದಾನವಾದ ಎಂಎ ಚಿದಂಬರಂ ಮೈದಾನದಲ್ಲಿ ನಡೆಯುತ್ತಿದೆ. ಇದು ತವರಿನಲ್ಲಿ ಸಿಎಸ್​ಕೆ ತಂಡದ ಕೊನೆಯ ಪಂದ್ಯವಾಗಿದೆ. ಈ ಪಂದ್ಯದ ಬಳಿಕ ಈ ಆವೃತ್ತಿಯಲ್ಲಿ ಸಿಎಸ್​ಕೆ ಈ ಮೈದಾನದಲ್ಲಿ ಯಾವುದೇ ಪಂದ್ಯವನ್ನು ಆಡುವುದಿಲ್ಲ. ಹೀಗಾಗಿ ಸಿಎಸ್​ಕೆ ತಂಡದ ಜೀವಾಳ ಎನಿಸಿಕೊಂಡಿರುವ ಮಾಜಿ ನಾಯಕ ಎಂಎಸ್ ಧೋನಿ ಈ ಪಂದ್ಯದಲ್ಲಾದರೂ ಆಡುತ್ತಾರಾ ಎಂದು ಕಾದು ಕುಳಿತಿದ್ದರು. ಆದರೆ ಈ ಪಂದ್ಯದಲ್ಲೂ ಅಭಿಮಾನಿಗಳಿಗೆ ನಿರಾಶೆ ಎದುರಾಗಿದೆ. ಧೋನಿ ತಂಡದೊಂದಿಗೆ ಕ್ರೀಡಾಂಗಣಕ್ಕೆ ಬಂದಿದ್ದರೂ, ಈ ಪಂದ್ಯವನ್ನು ಆಡುತ್ತಿಲ್ಲ.

ವಾಸ್ತವವಾಗಿ ಧೋನಿಗೆ ಇದು ಕೊನೆಯ ಐಪಿಎಲ್ ಸೀಸನ್ ಎಂಬ ಮಾತು ಸೀಸನ್ ಆರಂಭದಿಂದಲೂ ಕೇಳಿಬರುತ್ತಿದೆ. ಹೀಗಾಗಿ ಧೋನಿಗೆ ಅದ್ಧೂರಿ ವಿದಾಯ ಹೇಳಲು ಅಭಿಮಾನಿಗಳು ಎದುರು ನೋಡುತ್ತಿದ್ದರು. ಆದರೆ ಸೀಸನ್ ಆರಂಭಕ್ಕೂ ಮುನ್ನವೇ ಗಾಯಕ್ಕೆ ತುತ್ತಾದ ಧೋನಿ ಇದುವರೆಗೂ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಹೀಗಾಗಿ ಸಿಎಸ್​ಕೆ ತನ್ನ ತವರಿನಲ್ಲಿ ಕೊನೆಯ ಲೀಗ್ ಪಂದ್ಯವನ್ನು ಇಂದು ಆಡುತ್ತಿದ್ದು, ಈ ಪಂದ್ಯದಲ್ಲಿ ಧೋನಿ ಆಡಬಹುದು ಎಂಬ ನಿರೀಕ್ಷೆಗಳಿದ್ದವು. ಆದರೆ ಆ ನಿರೀಕ್ಷೆಗಳೆಲ್ಲ ಹುಸಿಯಾಗಿವೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಬಳಿಕ ಮಾತನಾಡಿದ ಸಿಎಸ್​ಕೆ ನಾಯಕ ರುತುರಾಜ್ ಗಾಯಕ್ವಾಡ್, ಧೋನಿ ತಂಡದೊಂದಿಗೆ ಕ್ರೀಡಾಂಗಣಕ್ಕೆ ಬಂದಿದ್ದಾರೆ. ಆದರೆ ಅವರು ಪ್ಲೇಯಿಂಗ್ 11ನಲ್ಲಿ ಇಲ್ಲ. ಧೋನಿ ಗಾಯದಿಂದ ಇನ್ನು ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಈ ಪಂದ್ಯವನ್ನು ಆಡುತ್ತಿಲ್ಲ. ಆದಾಗ್ಯೂ ಅವರು ಈ ಆವೃತ್ತಿಯ ಕೊನೆಯ ಲೀಗ್ ಪಂದ್ಯದಲ್ಲಿ ಆಡುತ್ತಾರೆ. ನಾವು ಈ ಪಂದ್ಯವನ್ನು ಗೆಲ್ಲುತ್ತೇವೆ ಮತ್ತು ಧೋನಿ ಅಂತಿಮ ಪಂದ್ಯದಲ್ಲಿ ಆಡುತ್ತಾರೆ ಎಂದು ಆಶಿಸುತ್ತೇವೆ ಎಂದಿದ್ದಾರೆ.

ಉಭಯ ತಂಡಗಳು

ಸಿಎಸ್​ಕೆ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್ (ನಾಯಕ), ಉರ್ವಿಲ್ ಪಟೇಲ್, ಕಾರ್ತಿಕ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಪ್ರಶಾಂತ್ ವೀರ್, ಅಕೇಲ್ ಹೊಸೈನ್, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್, ಸ್ಪೆನ್ಸರ್ ಜಾನ್ಸನ್.

ಸನ್​ರೈಸರ್ಸ್ ಹೈದರಾಬಾದ್ ತಂಡ:​ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹೆನ್ರಿಚ್ ಕ್ಲಾಸೆನ್, ಸಲೀಲ್ ಅರೋರಾ, ಸ್ಮರಣ್ ರವಿಚಂದ್ರನ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್ (ನಾಯಕ), ಶಿವಂಗ್ ಕುಮಾರ್, ಇಶಾನ್ ಮಾಲಿಂಗ, ಸಾಕಿಬ್ ಹುಸೇನ್, ಪ್ರಫುಲ್ ಹಿಂಗೆ.

Source link

Leave a Reply

Your email address will not be published. Required fields are marked *