ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆImage Credit source: cwma cwc X account
ದೆಹಲಿ, ಜುಲೈ 15: ನೈರುತ್ಯ ಮುಂಗಾರು ಮಳೆಯ ಕೊರತೆಯಿಂದಾಗಿ ಕರ್ನಾಟಕ ನೀರಿಲ್ಲದೆ ಅಕ್ಷರಶಃ ತತ್ತರಿಸತೊಡಗಿದೆ. ಬರ ಅಧ್ಯಯನ ತಂಡವನ್ನು ರಾಜ್ಯಕ್ಕೆ ಕಳುಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಡಿಕೆಶಿ ಪತ್ರ ಕೂಡ ಬರೆದಿದ್ದಾರೆ. ಈ ನಡುವೆ ಇಂದು (ಜುಲೈ 15) ದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ಮಹತ್ವದ ಸಭೆ ನಡೆದಿದ್ದು, ಕಾವೇರಿ ಜಲಾನಯನ ಪ್ರದೇಶದ ವಾಸ್ತವ ಸ್ಥಿತಿಯನ್ನು ಅಧಿಕಾರಿಗಳು ವಿವರಿಸಿದ್ದಾರೆ. ಹೀಗಿದ್ದರೂ ತಮ್ಮ ಪಾಲಿನ ನೀರು ಬಿಡುವಂತೆ ತಮಿಳುನಾಡು ವಾದಿಸಿದೆ. ಆದರೆ ಇದಕ್ಕೆ ಕೌಂಟರ್ ನೀಡಿರುವ ಕರ್ನಾಟಕ ಅದು ಸಾಧ್ಯವೇ ಇಲ್ಲ ಎಂದು ತಿಳಿಸಿದೆ.
ಕರ್ನಾಟಕದ ವಾದವೇನು?
ಕೆಆರ್ಎಸ್ನಿಂದ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲವೆಂದು CWRC ಸಭೆಯಲ್ಲಿ ಕರ್ನಾಟಕ ವಾದಿಸಿದೆ. ಕಾವೇರಿ ಕೊಳ್ಳದಲ್ಲಿ ಮಳೆ ಅಭಾವ ಆಗಿದೆ. ಜೂನ್ ತಿಂಗಳಲ್ಲಿ ಜಲಾಶಯಗಳಿಗೆ ಶೂನ್ಯ ಒಳಹರಿವಿದ್ದು, ಜುಲೈ ತಿಂಗಳಲ್ಲಿ ಹಲವೆಡೆ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದ ಬರಿದಾದ ಡ್ಯಾಂಗಳಿಗೆ ಸ್ವಲ್ಪ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಈ ನಡುವೆ ಮಾನ್ಸೂನ್ ಮತ್ತೆ ಚುರುಕು ಪಡೆಯುವ ಯಾವ ಮುನ್ಸೂಚನೆ ಇಲ್ಲ. ಹೀಗಾಗಿ ಸದ್ಯ ಸಂಗ್ರಹವಿರುವ ನೀರನ್ನು ಮುಂದಿನ ಮಾನ್ಸೂನ್ವರೆಗೂ ಕುಡಿಯಲು ಬಳಸಿಕೊಳ್ಳಬೇಕು. ಕರ್ನಾಟಕದಲ್ಲಿ ರೈತರು ಕೃಷಿಗೆ ನೀರು ಕೇಳುತ್ತಿದ್ದಾರೆ, ಆದರೆ ನಾವು ಬಿಡುತ್ತಿಲ್ಲ. ರಾಜ್ಯದಲ್ಲಿ ಸಂಪೂರ್ಣ ಬರ ಆವರಿಸಿದೆ. ಹೀಗಾಗಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವೇ ಇಲ್ಲ. ತಮಿಳುನಾಡಲ್ಲಿ ಮಳೆ ಬೀಳಲಿದೆ, ಆದ್ರೂ ಕೃಷಿಗೆ ನೀರು ಕೇಳ್ತಿದ್ದಾರೆ. ನಮಗೆ ಇಲ್ಲಿ ಕುಡಿಯಲೂ ನೀರಿಲ್ಲ ಎಂದು ಕರ್ನಾಟಕ ತಿಳಿಸಿದೆ.
ಇದನ್ನೂ ಓದಿ: ಕಾವೇರಿ ಜಲ ವಿವಾದ; ತಮಿಳುನಾಡು ವಿಧಾನಸಭೆ ವಿಪಕ್ಷ ನಾಯಕ ಉದಯನಿಧಿ ಆರೋಪಕ್ಕೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು
ನೀರು ಬಿಡುವಂತೆ ಸ್ಪಷ್ಟ ಸೂಚನೆ ನೀಡದ CWRC
ತಮ್ಮ ಪಾಲಿನ ನೀರಿಗಾಗಿ ತಮಿಳುನಾಡು ವಾದ ಮಂಡಿಸಿದ್ದರೂ ನೀರು ಬಿಡುವಂತೆ ಕರ್ನಾಟಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ಸ್ಪಷ್ಟ ಸೂಚನೆ ನೀಡಿಲ್ಲ ಎನ್ನಲಾಗಿದೆ. CWRC ಸಭೆ ಮುಕ್ತಾಯದ ಬೆನ್ನಲ್ಲೇ ಸಚಿವ ರಾಮಲಿಂಗಾರೆಡ್ಡಿ ಅಧಿಕಾರಿಗಳ ಜೊತೆ ಸಭೆ ನಡಿಸಿದ್ದು, ಕಾವೇರಿ ನೀರು ನಿಯಂತ್ರಣ ಸಮಿತಿಯ ಮೀಟಿಂಗ್ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 3:04 pm, Wed, 15 July 26
