ಮನೆಗೆ ಹಾವು ಬಂದರೆ ಕೊಲ್ಲಬಾರದು ಯಾಕೆ?Image Credit source: Pinterest
ಮನೆಗೆ ಹಾವು ಬಂದರೆ ಅದನ್ನು ಕೊಲ್ಲಬೇಕೇ ಅಥವಾ ಬೇಡವೇ ಎಂಬ ಪ್ರಶ್ನೆ ಅನೇಕರಲ್ಲಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಶಾಸ್ತ್ರ ಮತ್ತು ನಂಬಿಕೆಗಳ ಪ್ರಕಾರ, ಹಾವನ್ನು ಸಾಯಿಸುವುದು ಅಶುಭಕರ. ಹಾವು ದೈವಾಂಶ ಸಂಭೂತವಾಗಿದ್ದು, ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನವನ್ನು ಪಡೆದುಕೊಂಡಿದೆ.
ಗುರೂಜಿಯವರು ಹೇಳುವಂತೆ, ಹಾವು ಕೇವಲ ಒಂದು ಜೀವಿಯಲ್ಲ, ಅದು ಶಿವನ ಕುತ್ತಿಗೆಯಲ್ಲಿ, ವಿಷ್ಣುವಿನ ಶಯನವಾಗಿ, ಗಣಪತಿಯ ಹೊಟ್ಟೆಯ ಸುತ್ತ ಕಾಣಿಸಿಕೊಳ್ಳುತ್ತದೆ. ಇಡೀ ಭೂಮಿಯೇ ಹಾವಿನ ಮೇಲೆ ನಿಂತಿದೆ ಎಂದು ಪುರಾಣಗಳು ಹೇಳುತ್ತವೆ. ನಿಧಿಗಳನ್ನು ಕಾಯುವ ಕೆಲಸವನ್ನು ಕೂಡ ಹಾವುಗಳು ಮಾಡುತ್ತವೆ ಎಂದು ನಂಬಲಾಗುತ್ತದೆ. ನಾವು ನಾಗರಾಜ ಎಂದು ಪೂಜಿಸಿ, ನವನಾಗಗಳನ್ನು ಆರಾಧಿಸುತ್ತೇವೆ. ಮನುಷ್ಯನ ನಾಲಿಗೆ, ಬೆನ್ನುಮೂಳೆ ಮತ್ತು ಹಣೆಯಲ್ಲಿ ನಾಗನ ಅಂಶವಿರುತ್ತದೆ ಎಂಬ ನಂಬಿಕೆಯೂ ಇದೆ.
ಅರಣ್ಯ ನಾಶದಿಂದಾಗಿ ಹಾವುಗಳ ಸಂತತಿ ಕಡಿಮೆಯಾಗುತ್ತಿದ್ದು, ಆಹಾರ ಮತ್ತು ಆಶ್ರಯಕ್ಕಾಗಿ ಅವು ಮನುಷ್ಯ ವಾಸದ ಪ್ರದೇಶಗಳಿಗೆ ಬರಬಹುದು. ಇಂತಹ ಸಂದರ್ಭದಲ್ಲಿ ಭಯಪಡುವುದು ಸಹಜವಾದರೂ, ತಕ್ಷಣವೇ ಅದನ್ನು ಕೊಲ್ಲುವ ನಿರ್ಧಾರಕ್ಕೆ ಬರಬಾರದು. ಮನೆಯ ಅಂಗಳಕ್ಕೋ, ಕಾಂಪೌಂಡ್ಗೋ ಅಥವಾ ಪ್ರಿಮೈಸಸ್ನ ಒಳಗೋ ಹಾವು ಕಾಣಿಸಿಕೊಂಡಾಗ, ಸಾಧ್ಯವಾದಷ್ಟು ಬೇಗ ತಡಮಾಡದೆ ಹಾವಾಡಿಗರು ಅಥವಾ ಅರಣ್ಯ ಇಲಾಖೆಯವರಿಗೆ ತಿಳಿಸಿ, ಅವರ ಮೂಲಕ ಹಾವನ್ನು ಸುರಕ್ಷಿತವಾಗಿ ಹಿಡಿಸಿ, ಅರಣ್ಯ ಪ್ರದೇಶಕ್ಕೆ ಬಿಡುವುದು ಶುಭಕರ. ಇದು ನಮಗೂ ಹಾವಿಗೂ ಕ್ಷೇಮ.
ಇದನ್ನೂ ಓದಿ: ಫ್ಯಾಶನ್ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!
ಹಾವನ್ನು ಕೊಲ್ಲುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಶಾಸ್ತ್ರಗಳು ಎಚ್ಚರಿಕೆ ನೀಡಿವೆ. ಒಂದು ಮನೆಯಲ್ಲಿ ಹಾವನ್ನು ಸಾಯಿಸಿದರೆ, ಆ ಕುಟುಂಬದ ಮುಂದಿನ ಪೀಳಿಗೆಗೆ ವಂಶಾಭಿವೃದ್ಧಿ ಕಷ್ಟವಾಗಬಹುದು. ಮಕ್ಕಳಲ್ಲಿ ನೇತ್ರಬಾಧೆ ಕಾಡಬಹುದು, ಮಾನಸಿಕ ನೆಮ್ಮದಿ ಹಾಳಾಗಬಹುದು, ಸಣ್ಣಪುಟ್ಟ ಕಲಹಗಳು, ರೋಗರುಜಿನಗಳು ಹೆಚ್ಚಾಗಬಹುದು, ದೈವಾಂಶ ಕಡಿಮೆಯಾಗಬಹುದು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ‘ಹಾವಿನ ದ್ವೇಷ 12 ವರ್ಷ’ ಎಂಬ ಮಾತು ನಿಜ. ಹಾವನ್ನು ಸಾಯಿಸಿದ ಮನೆಯಲ್ಲಿ ವಂಶ ಪಾರಂಪರವಾಗಿ ಸರ್ಪ ಶಾಪ ಬರಬಹುದು ಎಂಬ ನಂಬಿಕೆಯೂ ಇದೆ.
ಯಾವುದೇ ಹಾವು ತಾನಾಗಿಯೇ ಯಾರನ್ನೂ ಕಚ್ಚಲು ಅಥವಾ ಸಾಯಿಸಲು ಬರುವುದಿಲ್ಲ. ಅದು ಕೇವಲ ತನ್ನ ಜೀವ ರಕ್ಷಣೆಗಾಗಿ ಮಾತ್ರ ಕಚ್ಚುತ್ತದೆ. ಅದು ಅಪ್ಪಿತಪ್ಪಿ ನಮ್ಮ ಮನೆಗೆ ಪ್ರವೇಶಿಸಿದಾಗ, ಅದನ್ನು ಸಾಯಿಸುವುದಕ್ಕಿಂತ, ಆದಷ್ಟು ಬೇಗ ಸುರಕ್ಷಿತವಾಗಿ ಹೊರಹಾಕುವುದು ಜಾಣತನ. ನಂಬಿಕೆ ಮತ್ತು ಶಾಸ್ತ್ರಗಳ ಪ್ರಕಾರ, ಹಾವನ್ನು ಮನೆಯಲ್ಲಿ ಅಥವಾ ಸುತ್ತಮುತ್ತ ಸಾಯಿಸುವುದು ಅಶುಭಕರ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
